ಪುಟ:Duurada Nakshhatra.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಅಲ್ಲ ಸಾರ್. ನಾನು ಬೆಳೆದಿದ್ದು ಬೆಂಗಳೂರಲ್ಲಿ. ಹುಟ್ಟಿದ್ದು ಕಾನಕಾನಹಳ್ಳಿ-ಕನಕಪುರ.”

“ಹೊಸ ಹೆಸರು! ಗೊತ್ತು ಗೊತ್ತು-ಕೇಳಿದೀನಿ... ಇನ್ನೇನು ಇದ್ದೇ ಇದೆಯಲ್ಲ ಊರೂರು ಸುತ್ತೋ ಕೆಲಸ! ಉಪಾಧ್ಯಾಯ ವೃತ್ತಿ ಅಂದ್ಮೇಲೆ.”

ಆ ಮಾತಿನಲ್ಲಿ ಅಂತಹ ಸುತ್ತಾಟ ಒಳಿತು ಎಂಬ ಭಾವನೆ ಇತ್ತೋ ಅಥವಾ ಉಪಾಧ್ಯಾಯ ವೃತ್ತಿಯ ಹಣೇಬರಹವೇ ಇಷ್ಟು ಎಂಬ ಧ್ವನಿ ಇತ್ತೋ, ಜಯದೇವನಿಗೆ ಸ್ಪಷ್ಟವಾಗಲಿಲ್ಲ. ಆತ ಏನೂ ಪ್ರತ್ಯುತ್ತರ ಕೊಡದೆ ತುಟಿಗಳ ಮೇಲೊಂದು ನಗು ತೇಲಿಸುತ್ತ ಮೌನವಾಗಿ ಕುಳಿತ.

“ಈ ಮೊದಲು ಎಲ್ಲಾದರೂ ಉಪಾಧ್ಯಾಯರಾಗಿದ್ರಾ ಮಿ. ಜಯದೇವ್?"

“ಇಲ್ಲ ಸಾರ್. ಇದೇ ಮೊದಲನೆಯ ಅನುಭವ. ಹುಡುಗರಿಗೆ ಖಾಸಗಿ ಪಾಠ ಹೇಳಿದ್ದು ಎಷ್ಟೋ ಅಷ್ಟೇ.”

“ಅಷ್ಟಿದ್ದರೆ ಸಾಕು. ನಾನು ಉಪಾಧ್ಯಾಯನಾದಾಗ ಆ ಅನುಭವವೂ ನನಗಿರಲಿಲ್ಲ.”

ಧೈರ್ಯತುಂಬುವ ಆ ಸತ್ಯ ಸಂಗತಿ ಪರಿಣಾಮಕಾರಿಯಾಗಿತ್ತು.

ಬಿಳಿಯ ಟೋಪಿ ಧರಿಸಿದ್ದ, ಹದಿಮೂರು ಹದಿನಾಲ್ಕು ವರ್ಷ ಪ್ರಾಯದ, ಚುರುಕಾದ ಹುಡುಗನೊಬ್ಬ ಆಫೀಸು ರೂಮೀನೆದುರು ನಿಂತು ಮುಖ್ಯೋಪಾಧ್ಯಾಯರನ್ನು ಉದ್ದೇಶಿಸಿ, “ ಟೈಮು ಎಷ್ಟು ಸಾರ್? ಫಸ್ಟ್ ಬೆಲ್ ಹೊಡೀಲೆ ಸಾರ್?” ಎಂದು ಕೇಳಿದ. ಗೋಡೆಗಡಿಯಾರವನ್ನು ನೋಡಿ ಸಮಯ ತಿಳಿದುಕೊಳ್ಳಲು ಹುಡುಗರೂ ಸಿದ್ಧರಿರಲಿಲ್ಲ! ರಂಗರಾಯರು, ಎದೆಯತ್ತ ಕೈಒಯ್ದು. ಸರಪಳಿಯನ್ನು ಮುಟ್ಟಿ ಗಡಿಯಾರವನ್ನು ಹೊರಕ್ಕೆಳೆದರು.

“ಇನ್ನು ಐದು ನಿಮಿಷ. ಆ ಮೇಲೆ ಹೋಡೀಪ್ಪಾ.”

ಹುಡುಗ ಆಗ ಗೋಡೆ ಗಡಿಯಾರವನ್ನು ನೋಡಿದ. ಐದು ನಿಮಿಷಗಳ ಎಣಿಕೆಯ ಮಟ್ಟಿಗೆ ಅದನ್ನು ಆತ ನಂಬುವ ಹಾಗಿತ್ತು!

“ಹುಡುಗರು ಒಳ್ಳೆಯವರು. ನಿಮಗೆ ಈ ಜಾಗ ಊರು ಹಿಡಿಸುತ್ತೆ. ಯುವಕರಾದ ಮೇಷ್ಟ್ರನ್ನ ಕಂಡರೆ ಹುಡುಗರಿಗೂ ಇಷ್ಟ.”