ಪುಟ:Hosa belaku.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ವಿಜ್ಞಾನದ ವಿಷ

ಹಾದಿ ಹಿಡಿಯುತ್ತವೆ, ಬಿರುಗಾಳಿಯಲ್ಲಿ ಬೆಳೆದ ಪರಿಚಯ ಬರೀ ಗಾಳಿಯ ಹಾಗೆ?

ಮುಂದೆ ಊರಲ್ಲಿ ದೊಡ್ಡ ಬರಗಾಲ ಬಿದ್ದಿತು. ಮೇವು ಇಲ್ಲದ್ದರಿಂದ ಜನ ಬ೦ದ ದರಕ್ಕೆ ದನಗಳನ್ನು ಮಾರಿ ಪಟ್ಟಣ ಸೇರತೊಡಗಿದರು. ತನ್ನ ಗಂಡ ಅದೇ ಕಾಲಕ್ಕೆ ಸಾಯಬೇಕೇ? ಆ ದುಃಖ ಬೇರೆ. ಆದರೆ ದುಃಖವೆಂದು ಅಳುತ್ತ ಕೂತರೆ ಎರಡು ಜೀವಗಳ ಹೊಟ್ಟೆ ತುಂಬಬೇಕಲ್ಲ! ತಾನೂ ತನ್ನ ಮಗನನ್ನು ಕರೆದುಕೊಂಡು ಧಾರವಾಡವನ್ನು ಸೇರಿದಳು. ಆದರೆ ತನ್ನ ಮಗನನ್ನು ಮೊದಲಿನಿಂದಲೂ ಹೊಲಗೆಲಸಕ್ಕೆ ಹಚ್ಚಿದ್ದರಿಂದ ಅವನನ್ನು ಸಾಲೆಗೇ ಕಳಿಸಿರಲಿಲ್ಲ. ಧಾರವಾಡದಲ್ಲಿ ಇಂಥವನಿಗೆ ಉದ್ಯೋಗ ಸಿಗಬೇಕೆಲ್ಲಿ? ಗಿರಣಿಯ ಹೊರತು ಗತಿ ಇರಲಿಲ್ಲ. ಆದರೆ ಧಾರವಾಡದಲ್ಲಿ ಗಿರಣಿಗಳೂ ಇರಲಿಲ್ಲ. ಹೀಗಾಗಿ ಕಡೆಗೆ ತನ್ನ ಜಾತಿಯವರು ಮಾಡದ ಉದ್ಯೋಗಕ್ಕೆ ಮಗ ಕೈ ಹಾಕಿದ. ಅದೇ, ಬೀಡಿ ಕಾರಖಾನೆಯಲ್ಲಿ ಬೀಡಿ ಕಟ್ಟುವ ನೌಕರಿಯನ್ನು ಸಂಪಾದಿಸಿದ. ಬೀಡಿ ಕಟ್ಟುವುದರಲ್ಲಿ ಆತ ನಿಪುಣನಾದ. ದಿನಕ್ಕೆ ೨ ಸಾವಿರ ಬೀಡಿ ಕಟ್ಟುವಷ್ಟು ಅವನು ತರಬೇತು ಹೊಂದಿದ. ಅವನ ಸಂಪಾದನೆಯಲ್ಲಿ ತಮ್ಮಿಬ್ಬರ ಹೊಟ್ಟೆ ತುಂಬುತ್ತಿತ್ತು. ಆದರೆ ಬೀಡಿ ಕಟ್ಟುವ ಯಂತ್ರ ಬಂದಂದಿನಿಂದ ಅವನು ನಿರುದ್ಯೋಗಿಯಾದ, ಎಲ್ಲಿಯೂ ಗತಿಗಾಣದವನಾದ. ತನ್ನೊಬ್ಬನದೇ ಅಲ್ಲ; ಅದರ ಜತೆಯಲ್ಲಿ ತನ್ನ ತಾಯಿಯ ಹಸಿದ ಹೊಟ್ಟೆಯೂ ಅವನಿಗೆ ಭೂತಾಕಾರವಾಗಿ ಕಂಡಿರಬೇಕು--ಕಡೆಗೆ ಬಳಲಿ ಬೆಂಡಾಗಿ ಬಾಂವಿಯಲ್ಲಿ ಬಿದ್ದ--ಅಯ್ಯೋ ಮಶಿನ್ನು; ಅದನ್ನು ಹುಡುಕಿದ ಪಶು, ರಾಕ್ಷಸ ಅವನಿಗೆ ಧಿಕ್ಕಾರ! ಹಾಲಿಗಾಗಿ ಮೊಲೆ ಕೊಟ್ಟರೆ ರಕ್ತ ಹೀರಬೇಕೇ?–

ಮುದುಕಿ ಸುಬ್ಬಮ್ಮ ಕಣ್ಣು ತೆರೆದಳು. ಅವಳ ಕಣ್ಣೆದುರಿನಲ್ಲಿ ರಾಜನಂಥ ಅಸಂಖ್ಯ ರಾಕ್ಷಸರು ಅವಳನ್ನು ಹಿಡಿಯಲು ಬಂದಂತೆ ಭಾಸವಾಯಿತು. ಒಮ್ಮೆಲೆ ಹೌಹಾರಿದವಳಂತೇ ಚೀರಿಬಿಟ್ಟಳು.

"ಪಶು-ರಾಕ್ಷಸ–ಧಿಕ್ಕಾರ!....

ಮದುಕಿಯ ಚೀತ್ಕಾರ ದೂರ ನಿಂತಿದ್ದ, ಕೂಲಿಕಾರರ ತಂಡವನ್ನು ಕೆರಳಿಸಿತು. ಮತ್ತೆ ಅದೇ ಘೋಷಣೆ ಕೇಳಿಸಿತು.