ಪುಟ:KELAVU SANNA KATHEGALU.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ನಿರಂಜನ:ಕೆಲವು ಸಣ್ಣ ಕಥೆಗಳು

ದಿನಹೋದಂತೆ ಜೀವನ ಕಷ್ಟವಾಗುತ್ತ ಬಂತು. ಯಾವುದರ ಬೆಲೆಯೂ
ತಗ್ಗುವ ಲಕ್ಷಣ ಕಾಣಿಸಲಿಲ್ಲ. ಸೋಮನ ಸಂಪಾದನೆಯೊ ಮೊದಲಿನಷ್ಟೇ.
ನೆಲಕಡಲೆಯ ಬೆಲೆಯನ್ನು ಸೇರಿಗೆ ಮೂರರಿಂದ ನಾಲ್ಕು ದುಡ್ಡಿಗೆ ಏರಿ
ಸಿದ. ಪ್ರಯೋಜನವಾಗಲಿಲ್ಲ.
ಮಗುವಿಗಷ್ಟು ಸರಿಯಾಗಿ ಉಣಬಡಿಸಿದರಾಯಿತು ಎಂದುಕೊಂಡು,
ತಾನು ಅರೆಹೊಟ್ಟೆ ಉಣ್ಣತೊಡಗಿದ.

****

ಆ ದಿನ ಸಂಜೆ ಸೋಮ ತನ್ನ ಅಂಗಡಿಯ ಬಾಗಿಲಿಕ್ಕಿ, ಅರ್ಧಸೇರು ಅಕ್ಕಿ
ಕೊಳ್ಳಲು ರಾಯರ ಭಂಡಸಾಲೆಗೆ ಹೋದ. ರಾಯರು ಕೂಗಾಡುತ್ತಿದ್ದರು.
ಸೋಮ ಕಿವಿಗೊಟ್ಟು ಕೇಳಿದ.
ಹೊಸ ಆಜ್ಞೆ. ಅಂಗಡಿಗಳಲ್ಲಿನ ಸಕ್ಕರೆ ದಾಸ್ತಾನನ್ನು ಸರಕಾರದ ಅಧಿಕಾರಿ
ಗಳು ಬಂದು ನೋಡುವರಂತೆ ಹೆಚ್ಚಿನ ಬೆಲೆಗೆ ಮಾರಿದರೆ ಶಿಕ್ಷಿಸಬಹುದಂತೆ.
ಸೋಮ ಯೋಚಿಸಿದ: ಹೀಗೂ ಉಂಟೆ? ಎಂತಹ ಅನ್ಯಾಯ! ಇಂತಿಷ್ಟು
ಬೆಲೆಗೆ ಮಾರುವುದಕ್ಕೂ ಸರಕಾರದ ಅಪ್ಪಣೆ ಬೇಕೆಂದರೆ ಬೇರೇನು ಉಳಿಯಿತು?
ಕಣ್ಣು ಬಾಯಿಗಳಲ್ಲಿ ಕೆಂಡಕಾರುತ್ತ ರಾಯರು ಗರ್ಜಿಸಿದರು:
“ಕಲೆಕ್ಟರರ ರಾಜ್ಯಭಾರ ಶುರುವಾಗಿದೆ! ಮೊಗಲ್ ದರ್ಬಾರ್!”
ಬಹಳ ಕೆಟ್ಟ ಕ್ರಮವಪ್ಪ ಇದು_ಎಂದುಕೊಂಡ ಸೋಮ.
ಭಂಡಸಾಲೆಯ ಮುಂದೆ ನಿಂತಿದ್ದ ಗಿರಾಕಿಗಳನ್ನು ಉದ್ದೇಶಿಸಿ ರಾಯರು
ಗರ್ಜಿಸಿದರು: “ಇವರಿಗೆಲ್ಲ ಯುದ್ಧನಿಧಿಗೆ ಚಂದಾಕೊಡಲಿಕ್ಕೆ ನಾವು ಬೇಕು. ಹಣ ರಾಶಿ
ರಾಶಿಯಾಗಿ ಸುರಿಯಬೇಕು. ಸಾಮಾನು ಮಾತ್ರ ಕಮ್ಮಿ ಬೆಲೆಗೆ_ನಷ್ಟಕ್ಕೆ-
ಮಾರಬೇಕು!”
ಸೋಮನಿಗೆ ಅನಿಸಿತು: ಅದು ಕೂಡದೇ ಕೂಡದು. ಸರಕಾರಕ್ಕೆ ಹಣ
ಕೊಡುವಾಗ ನಾವು ಹೇಳಿದಂತೆ ಅದು ಕೇಳಬೇಡವೆ? ಹೌದು. ಅವನು ಕೂಡಾ
ಯುದ್ಧನಿಧಿಗೆ ಹಣ ಕೊಟ್ಟಿದ್ದ. ಒಂದಾಣೆ, ಬಹಳ ಕಷ್ಟದಿಂದ. ಯಾರೋ
ಅಧಿಕಾರಿಗಳು ಬಂದು ಅಂಗಡಿಯ ಮುಂದೆ ಇಂಗ್ಲಿಷ್ ಮಾತನಾಡಿದ್ದರಿಂದ
ಅವರ ಡಬ್ಬಿಗೆ ಆ ಹಣ ಹೋಗಿತ್ತು.
ರಾಯರ ದೃಷ್ಟಿ ತನ್ನ ಮೇಲೆ ಬಿದ್ದಾಗ ಸೋಮ ಕೇಳಿದ:
ಅರ್ಧ ಸೇರು ಅಕ್ಕಿ.”

“ಐದು ದುಡ್ಡು” ಎಂದರು ರಾಯರು.