ಪುಟ:Kannadigara Karma Kathe.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಕನ್ನಡಿಗರ ಕರ್ಮಕಥೆ

ಮಾಸಾಹೇಬ-ನೀನು ಬಾರದೆಯಿದ್ದದ್ದು ವಿಹಿತವೇ ಸರಿ; ಆದರೆ ದರ್ಬಾರದ ಸುದ್ದಿಯನ್ನು ಕೇಳದಿದ್ದರೆ ನನಗೆಲ್ಲಿ ಸಮಾಧಾನವಾಗಬೇಕು ? ನಾನು ಅನ್ಯರ ಮುಖದಿಂದ ಎಲ್ಲ ವೃತ್ತಾಂತವನ್ನು ಕೇಳಿದ್ದೇನೆ. ನೀವು ಬಹಳ ಒಳ್ಳೆಯ ಕೆಲಸ ಮಾಡಿದೆ. ಬಾದಶಹರ ಗೌರವಕ್ಕೆ ಒಪ್ಪುವಂತೆಯೇ ನೀನು ನಡೆಯಲಿಕ್ಕೆ ಬೇಕು; ಆದರೆ ನಾನು ನಿನ್ನನ್ನು ಈಗ ಕರೆಸಿದ ಕಾರಣವು ಬೇರೆಯಿರುತ್ತದೆ. ಅಹಮ್ಮದನಗರದಿಂದ ವಿಜಾಪುರಕ್ಕೆ ಹೋಗುವವನೊಬ್ಬನು ಸುರ್ಯೋದಯವಾಗುವದಕ್ಕೆ ಮುಂಚಿತವಾಗಿ ಬಂದು, ನನ್ನ ಮುಂದೆ ತನ್ನ ವೃತಾಂತವನ್ನೆಲ್ಲ ಹೇಳಿದನು. ನಾನು ಆತನಿಗೆ ಅಭಯವನ್ನಿತ್ತು ಕುಳ್ಳಿರಿಸಿರುತ್ತೇನೆ. ನೀನು ಆತನ ಬಾಯಿಂದ ಎಲ್ಲ ಸಂಗತಿಯನ್ನು ಕೇಳಿಕೊ. ಇಂಥವರಿಗೆ ಅಭಯಕೊಡುವದು ನಮ್ಮ ಕರ್ತವ್ಯವಾಗಿರುತ್ತದೆ. ಎಲ್ಲ ಸಂಗತಿಯನ್ನು ಕೇಳಿಕೊಂಡನಂತರ, ನಿನ್ನ ಯೋಗ್ಯತೆಗೆ ಅನುರೂಪವಾಗಿ ನಡೆದುಕೋ. ನೀನು ಹಾಗೆ ನಡೆದುಕೊಳ್ಳತ್ತೀಯೆಂಬದರಲ್ಲಿ ನನಗೆ ಸಂಶಯವಿಲ್ಲ. ನೀನು ಆ ವೃತ್ತಾಂತವನ್ನು ಕೇಳಿಕೊಂಡ ಮೇಲೆ ಸಂತಾಪಗೊಂಡು, ತನ್ನ ಕರ್ತವ್ಯವೆಂದು ತಿಳಿದು, ನೀನು ಅದನ್ನು ಮನಃರ್ಪೂವಕವಾಗಿ ಮಾಡೇ ಮಾಡುವೆ. ಮನುಷ್ಯರಿಗೆ ಎಚ್ಚರವಿಲ್ಲದ ಹಾಗೆ ಆಗಿದೆ, ತಾವು ಮಾಡಿದ್ದೇ ಪ್ರಮಾಣವೆಂದು ಅವರು ತಿಳಿದಿದ್ದಾರೆ! ಅವರಿಗೆ ನ್ಯಾಯವಿಲ್ಲ, ನೀತಿಯಿಲ್ಲ, ಅವರ ಉನ್ಮತ್ತತನವು ತಲೆಗೇರುತ್ತದೆ !

ರಣಮಸ್ತಖಾನ-ಮಾಸಾಹೇಬ, ತಾವು ಎಂದೂ ಸಿಟ್ಟಿನಿಂದ ಒಂದು ಶಬ್ದವನ್ನು ಕೂಡ ಉಚ್ಚರಿಸತಕ್ಕವರಲ್ಲ, ಹೀಗಿದ್ದು ಇಂದು ತಾವು ಇಷ್ಟು ಸಂತಾಪಗೊಳ್ಳಲಿಕ್ಕೆ ಕಾರಣವೇನು ? ಯಾರಾದರೂ ತಮ್ಮ ಉಪಮರ್ದ ಮಾಡಿದರೋ, ಅಥವಾ ಯಾರಾದರೂ......

ಮಾಸಾಹೇಬ-ಅಪ್ಪಾ, ನಿನ್ನಂಥ ಸಮರ್ಥ ಮಗನು ಮೂರ್ತಿ ಮತ್ತಾಗಿ ನನ್ನ ಹತ್ತರ ಇರುತ್ತಿರಲಿಕ್ಕೆ ಅದಾರು ನನ್ನ ಉಪಮರ್ದನ ಮಾಡುವರು ! ಆದರೆ ನನ್ನಂಥ ಬೇರೆ ಒಬ್ಬ ಸ್ತ್ರೀಯು ಅಥವಾ ನಿನ್ನ ಒಡಹುಟ್ಟಿದ ತಂಗಿಯಂತೆ ಇದ್ದ ಒಬ್ಬ ತರುಣಿಯ ಉಪಮರ್ದನವಾದರೆ, ನನ್ನ ಉಪಮರ್ದನವಾದ ಹಾಗಾಗಲಿಲ್ಲವೆ? ಅದರ ಪರಿಮಾರ್ಜನವನ್ನು ನಾವು ಮಾಡಿಕೊಳ್ಳಲಾಗದೆ ಅಹಮ್ಮದನಗರದ ಆ ಒಬ್ಬ ಮನುಷ್ಯನು ನೀನು ಬಾದಸಹನ ದೊಡ್ಡ ವಕೀಲನೆಂದು ತಿಳಿದು, ನಿನ್ನ ಮುಂದೆ ತನ್ನ ಸಂಕಟವನ್ನು ದೂರಿಕೊಳ್ಳಲಿಕ್ಕೆ ಬಂದಿದ್ದನು; ಆದರೆ ನೀನು ಇನ್ನೂ ಎದ್ದಿಲ್ಲೆಂದು ಹೇಳಲು, ಆತನು ನಿರಾಸೆಯಿಂದ-"ಹಾಗಾದರೆ ಇನ್ನು ನಮ್ಮ ದೂರು ಯಾರು ಕೇಳಬೇಕು ?” ಎಂದು ಗಟ್ಟಿಯಾಗಿ ಅನ್ನುತ್ತಿದ್ದನು.