ಪುಟ:Kannadigara Karma Kathe.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ಕನ್ನಡಿಗರ ಕರ್ಮಕಥೆ

ತೀರಿಸಿಕೊಂಡು ತನ್ನ ಮಾಸಾಹೇಬರಿಗೆ ಭೆಟ್ಟಿಯಾದೇನು ಅನ್ನುವ ಹಾಗೆ ಆಗಿತ್ತು. ಕೆಲಹೊತ್ತಿನ ಮೇಲೆ ವಿಜಯನಗರದ ಅಗಸೆಯ ಬಾಗಿಲಗಳು ಕಾಣಹತ್ತಿದವು. ಆಗ ರಣಮಸ್ತಖಾನನು ತನ್ನ ಸೇವಕನಿಗೆ-ನೀನು ಇನ್ನು ಬೇಗನ ನಡೆ, ನಾನು ಸಾವಕಾಶ ಬರುವೆನು. ನೀನು ಬರುವವರೆಗೆ ನಾನು ಅಗಸೆಯ ಹೊರಗೆ ಇರುತ್ತೇನೆ, ಎಂದು ಹೇಳಿ, ತಾನು ಮೆಲ್ಲನೆ ಸಾಗಹತ್ತಿದನು. ಆತನ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಈಗ ಆ ಅಹ್ಮದನಗರದ ಜನರು ಇಲ್ಲಿ ನನಗೆ ಭೇಟಿಯಾದರೆ, ಅವರನ್ನು ಇಲ್ಲಿಂದಲೇ ನನ್ನಸಂಗಡ ಕರಕೊಂಡು ಕುಂಜವನಕ್ಕೆ ಹೋಗಿಬಿಡುತ್ತೇನೆ, ಆ ರಾಮರಾಜನು ಮಾಡುವುದು ಮಾಡಲಿ, ಎಂದು ಆಲೋಚಿಸುತ್ತ ಹಿಂದಕ್ಕೆ ತಿರುಗಿ ನೋಡುತ್ತಿರಲು, ದೂರ ಯಾರೋ ಜನರು ಗುಂಪುಮಾಡಿ ಬರುವಂತೆ ಅವನಿಗೆ ತೋರಿತು. ಆ ಜನರು ಸ್ವಲ್ಪ ಮುಂದಕ್ಕೆ ಬರಲು, ಅವರ ನಡುವೆ ಒಂದು ಮೇಣೆಯಿದ್ದದ್ದು ಖಾನನ ಕಣ್ಣಿಗೆ ಬಿದ್ದಿತು. ಅವರೇ ಅಹ್ಮದನಗರದವರಿರಬೇಕೆಂದು ಆತನು ತರ್ಕಿಸಿ, ತನ್ನ ಕುದುರೆಯನ್ನು ನಿಲ್ಲಿಸಿದನು. ಆ ಜನರು ಸಮೀಪಕ್ಕೆ ಬಂದಕೂಡಲೇ, ರಣಮಸ್ತಖಾನನು ಅವರನ್ನು ಕುರಿತು ದಪ್ಪಿಂದ-ಯಾರು ನೀವು ? ಈ ಮೇಣೆಯೊಳಗಿನ ಸ್ತ್ರೀಯನ್ನು ಎಲ್ಲಿಗೆ ಕರಕೊಂಡು ಹೋಗುತ್ತೀರಿ ? ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಹೊರತು ನಿಮಗೆ ಒಂದು ಹೆಜ್ಜೆಯನ್ನು ಕೂಡ ಮುಂದಕ್ಕೆ ಇಡಗೊಡಲಿಕ್ಕಿಲ್ಲ. ನನಗೆ ನಿಮ್ಮ ದುಷ್ಕೃತ್ಯವೆಲ್ಲ ಗೊತ್ತಾಗಿರುತ್ತದೆ. ನಾನು ವಿಜಾಪುರದ ಬಾದಶಹನ ವಕೀಲನಿರುತ್ತೇನೆ. ಈ ಜನರು ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುತ್ತಿದ್ದರು ; ಆದ್ದರಿಂದ ಈಗ ಅವರು ವಿಜಾಪುರದವರಿರುತ್ತಾರೆ. ಸುಮ್ಮನೆ ನನಗೆ ಅವರನ್ನು ಒಪ್ಪಿಸಿರಿ; ಇಲ್ಲದಿದ್ದರೆ............

ರಣಮಸ್ತಖಾನನ ಈ ಮಾತುಗಳನ್ನು ಕೇಳಿ ವಿಜಯನಗರದ ಜನರೊಳಗಿನವನೊಬ್ಬನು ಮುಂದಕ್ಕೆ ಬಂದು, ಅತ್ಯಂತ ಉಪಹಾಸಾಸ್ಪದವಾದ ಸ್ವರದಿಂದ ನಕ್ಕು- “ನಿನ್ನ ಪ್ರತ್ಯಕ್ಷ ಬಾದಶಹನು ಬಂದರೂ ವಿಜಯನಗರದಲ್ಲಿ ಈಗ ಆತನನ್ನು ಯಾರೂ ಕೇಳುವಹಾಗಿಲ್ಲ. ಅಂದ ಬಳಿಕ ನಿನ್ನಂಥ ವಕೀಲನನ್ನು ಯಾರು ಕೇಳಬೇಕು ? ನೀನು ನಿನ್ನ ಹಾದಿಯನ್ನು ಹಿಡಿದು ಹೋದರೆ ಮರ್ಯಾದೆಯುಳಿದೀತು. ಸಾಕು. ಬೇಟೆಯನ್ನು ಹಿಡಕೊಂಡು ಬಂದವರು, ತಮ್ಮ ಬೇಟೆಯನ್ನು ಹಾದಿಯಲ್ಲಿಯ ಕಳ್ಳನಿಗೆ ಎಂದಾದರೂ ಒಪ್ಪಿಸಬಹದೋ? ಎಂದು ನುಡಿಯುತ್ತಿರಲು, ರಣಮಸ್ತಖಾನನು ಸಂತಪ್ತನಾದನು. ಆತನು ತನ್ನ ಖಡ್ಗವನ್ನು ಒರೆಯಿಂದ ಹಿಡಿದು, ಆ ಹಿಂದುವಿಗೆ ಒಂದು ಏಟು ಕೊಟ್ಟನು. ಆಮೇಲೆ