ಪುಟ:Kannadigara Karma Kathe.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೬

ಕನ್ನಡಿಗರ ಕರ್ಮಕಥೆ

ಗುಜುಗುಟ್ಟಹತ್ತಿದರು. ಕುಂಜವನದಲ್ಲಿ ಓಡಾಡುತ್ತಿರುವಾಗ ರಾಮರಾಜನು ರಣಮಸ್ತಖಾನನಿಗೆ-ನಾನು ನಿಮಗೆ ಮತ್ತೆ ಮತ್ತೆ ಹೇಳುವ ಕಾರಣವಿಲ್ಲ. ಹಿಂದಕ್ಕೆ ಆದದ್ದನ್ನು ನೀವು ಮನಸ್ಸಿನಲ್ಲಿ ಹಿಡಯಬೇಡಿರಿ. ನಿಮ್ಮನ್ನು ನೋಡಿದಾಗಿನಿಂದ ನಿಮ್ಮ ವಿಷಯವಾಗಿ ನನ್ನಲ್ಲಿ ಆದರವು ಉತ್ಪನ್ನನವಾಗಿದೆ. ನಾನು ಬಾದಶಹರ ಕಡೆಗೆ ಕಳಿಸಿದ ಪತ್ರದಲ್ಲಿ ನಿಮಗೆ ಅನುಕೂಲವಾಗಿಯೇ ಬರೆದಿದ್ದೆನು. ಅವರು ಅದನ್ನು ನಿಮಗೆ ಹೇಳಿದರೋ ಇಲ್ಲವೋ ? ಅವರೇ ನಿಮ್ಮ ಲಗ್ನಮಾಡದೆ ಕಳಿಸಿದ್ದಕ್ಕಾಗಿಯೂ, ನಿಮ್ಮ ಮೇಲೆ ಒಬ್ಬ ವಕೀಲನನ್ನು ನಿಯಮಿಸಿ ಕಳಿಸಿದ್ದಕ್ಕಾಗಿಯೂ ನನಗೆ ಬಹಳ ವಿಷಾದವಾಗಿದೆ. ನಿಮ್ಮಂಥ ತರುಣ ಶೂರರು ವಕೀಲ ಕೆಲಸದಲ್ಲಿ ಕೊಳೆಯವದು ನನಗೆ ನೆಟ್ಟಗೆ ಕಾಣುವದಿಲ್ಲ. ನೀವು ಸೈನ್ಯದಲ್ಲಿ ಅಧಿಕಾರವನ್ನು ಪಡೆದು ಪರಾಕ್ರಮವನ್ನು ತೋರಿಸುತ್ತ ಸೇನಾಪತಿಯ ಪದವಿಯನ್ನು ಹೊಂದಲಿಕ್ಕೆ ತಕ್ಕವರಾಗಿರುತ್ತೀರಿ. ನಮ್ಮ ದಂಡಿನಲ್ಲಿ ಪಠಾಣರೂ, ಬೇರೆ ಮುಸಲ್ಮಾನರೂ ಬಹು ಜನರು ಇದ್ದಾರೆ. ವಿಜಾಪುರದ ದಂಡನಲ್ಲಿಯಾದರೂ ಹಿಂದೂ ದಂಡಾಳುಗಳು ಬಹು ಜನರು ಇರುವರು. ಅವರಲ್ಲಿ ಉತ್ತರ ಹಿಂದುಸ್ತಾನದ ರಜಪೂತರು ಸಹ ಇರುವರು. ಅವರು ತೀರ ಸ್ವಲ್ಪ ಜನರು ಇರಬಹುದು. ಆದರೆ ಇರುವದು ನಿಜ. ನಮ್ಮಲ್ಲಿರುವ ಮುಸಲ್ಮಾನ ಸೈನ್ಯದ ಮೇಲೆ ನಿಮ್ಮಂಥವರು ಅಧಿಕಾರಿಗಳಿದ್ದರೆ, ಬಹಳ ಒಪ್ಪುವದು. ಎಂದು ನುಡಿಯುತ್ತಿರಲು, ರಣಮಸ್ತಖಾನನು ರಾಮರಾಜನನ್ನು ಕೆಕ್ಕರಿಸಿ ನೋಡಹತ್ತಿದನು. ಆಗ ರಾಮರಾಜನು ತನ್ನ ಮಾತನ್ನು ಅಷ್ಟಕ್ಕೆ ಬಿಟ್ಟು ರಣಮಸ್ತಖಾನನಿಗೆ-ನಿಮಗೆ ನನ್ನ ಮಾತುಗಳು ಸೇರದಿದ್ದರೆ ನಾನು ಆಡುವದಿಲ್ಲ. ಸುಮ್ಮನೆ ಮಾತಿಗೆ ಮಾತು ಬಂದು ಆಡಿದೆನು. ಹೇಳಿರಿ, ನನ್ನ ಮಾತಿನಲ್ಲಿ ಯಾವ ಮಾತು ನಿಮಗೆ ಸೇರಲಿಲ್ಲ? ಎಂದು ಕೇಳಲು, ರಣಮಸ್ತಖಾನನು-ನಿಮ್ಮ ಮಾತು ಸೇರದಿರಲಿಕ್ಕೆ ನೀವು ಈಗ ಅಯೋಗ್ಯ ಮಾತು ಆಡಿದ್ದೇನು ? ನೀವು ಒಂದು ಪಕ್ಷದಲ್ಲಿ ಅಂಥ ಮಾತುಗಳನ್ನು ಆಡಿದರೂ ಯೋಗ್ಯವಾದವನ್ನಷ್ಟು ಮಾತ್ರ ನಾನು ಗ್ರಹಿಸುವನು. ಆಡಿರಿ, ನಿಮ್ಮ ಮಾತುಗಳನ್ನೆಲ್ಲ ನಾನು ಕೇಳುತ್ತೇನೆ, ಸಂಕೋಚವಿಲ್ಲದೆ ಮಾತಾಡಿರಿ, ಎನ್ನಲು, ರಾಮರಾಜನು-ಸುಮ್ಮನೆ ನಾನು ಉದ್ದಕ್ಕೆ ಮಾತಾಡುತ್ತ ಹೋಗುವರಿಂದ ಪ್ರಯೋಜನವೇನು ? ಹತ್ತು ಮಾತಿಗೆ ಒಂದಾದರೂ ನೀವು ಉತ್ತರ ಕೊಟ್ಟರೆ, ಮಾತಾಡಲಿಕ್ಕೆ ನೆಟ್ಟಗೆ. ನಿಮಗೆ ಮಾತಾಡಲಿಕ್ಕೇನು ಬಂದದ್ದು ? ಆಡಿರಿ. ನಿಮಗೆ ತಿಳಿದದ್ದನ್ನು ನೀವು ಸ್ಪಷ್ಟವಾಗಿ ಆಡಿರಿ. ಸುಮ್ಮನೆ ವಿನೋದಕ್ಕಾಗಿ ಆಡುವ ಮಾತುಗಳೆಂತಲೇ ನಾವು ತಿಳಿಯೋಣ. ಅನ್ನಲು ರಣಮಸ್ತಖಾನನು