ಪುಟ:Kannadigara Karma Kathe.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚು

೧೭೧

ಸಂಪೂರ್ಣವಾಗುತ್ತದೆಂದೇನು ನನಗೆ ತಿಳಿಯುವದಿಲ್ಲವೇ? ನಿಮ್ಮ ಮಾತಿಗೆ ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎತ್ತ ಕಡೆಯಿಂದೇ ಆಗಲಿ, ನಮ್ಮಿಬ್ಬರ ವಿಚಾರೈಕ್ಯವಾಗಬೇಕೆಂಬುದೇ ನನ್ನ ಮುಖ್ಯಹೇತುವು.

ರಾಮರಾಜನು ಹೀಗೆ ಒಪ್ಪಿಕೊಂಡದನ್ನು ನೋಡಿ ರಣಮಸ್ತಖಾನನು ಸರಿ ಸರಿ ! ನಿಮ್ಮ ಹೇತುವು ಸಾಧಿಸಿದ ಹಾಗಾಯಿತಷ್ಟೇ ? ಆದರೆ ಇನ್ನು ಮುಂದಿನ ಸಂಗತಿಗಳ ವಿಚಾರವನ್ನು ನೆಟ್ಟಗೆ ಮಾಡಲಿಕ್ಕೆ ಬೇಕು, ಆ ವಿಚಾರಗಳೇನೆಂಬುದನ್ನು ನಾನು ಹೇಳುತ್ತೇನೆ ಕೇಳಿರಿ-ಇನ್ನು ಮೇಲೆ ನೀವು ಇತ್ತಕಡೆಗೆ ಎಂದೂ ಬರಬಾರದು. ನೀವು ಮೇಲಿಂದ ಮೇಲೆ ಇತ್ತಕಡೆಗೆ ಬರಹತ್ತಿದಿರೆಂದರೆ, ನಮ್ಮ ಜನರು ಎನಾದರೂ ಕುತರ್ಕಗಳನ್ನು ಕಲ್ಪಿಸಿ ಅನರ್ಥವನ್ನು ಉಂಟು ಮಾಡುವರು. ಮಹಮೂದಖಾನನ ಕಡೆಯಿಂದಲೂ ಸ್ವತಃ ಬಾದಶಹರ ಕಡೆಯಿಂದಲೂ ನನ್ನ ಮೇಲೆ ಗುಪ್ತಚಾರರು ನಿಯಮಿಸಲ್ಪಟ್ಟಿರಬಹುದು, ಅಂಥ ಗುಪ್ತಚಾರರು ನನ್ನ ಸೇವಕರಲ್ಲಿಯೇ ಇರಲಿಕ್ಕಿಲ್ಲೆಂದು ಯಾರು ಹೇಳಬೇಕು? ಇನ್ನು ಮೇಲೆ ಕೆಲಸ ಬಿದ್ದಾಗ ನಾನೇ ನಿಮ್ಮ ಕಡೆಗೆ ಬರುತ್ತ ಹೋಗುವೆನು, ಇಲ್ಲವೇ ಪ್ರಸಿದ್ಧ ರೀತಿಯಿಂದ ನನ್ನನ್ನು ನೀವು ಕರಿಸಿಕೊಳ್ಳುತ್ತ ಹೋಗಿರಿ. ನಾನು ಮಹಮೂದಖಾನನ ಒಪ್ಪಿಗೆಯನ್ನು ಪಡೆದು ತಮ್ಮಕಡೆ ಬರುತ್ತ ಹೋಗುವೆನು. ನಿಮ್ಮ ಕಡೆಯ ಸುದ್ದಿಗಳನ್ನು ತಿಳಕೊಳ್ಳಲಿಕ್ಕೆ ಅನುಕೂಲವಾಗಬೇಕೆಂದು ಮಹಮೂದಖಾನನಿಗೆ ಹೇಳಿ, ಎರಡು ದಿನಕ್ಕೊಮ್ಮೆ ನಿಮ್ಮ ದರ್ಬಾರಕ್ಕೆ ಬರಲಿಕ್ಕೆ ಆತನಿಂದ ಅಪ್ಪಣೆಯನ್ನು ಒಮ್ಮೆಲೆ ತಕ್ಕೊಂಡು ಇಟ್ಟು ಬಿಡುವೆನು. ನನ್ನ ದರ್ಬಾರದಿಂದ ಇತ್ತಕಡೆಗೆ ಬಂದೆನೆಂದರೆ, ನನ್ನ ಮನಸ್ಸಿಗೆ ಯೋಗ್ಯ ತೋರಿದಂತೆ ಮಹಮೂದಖಾನನಿಗೆ ಏನಾದರೂ ಹೇಳಿಬಿಡುವೆನು. ನನ್ನ ಸಲುವಾಗಿ ನೀವು ಯಾವಾಗಲೂ ಸಂಶಯವನ್ನು ವ್ಯಕ್ತಮಾಡಿರಿ. ಕೂಡಿದ ದರ್ಬಾರದಲ್ಲಿ ಯಾದರೂ ನೀವು ನನ್ನ ವಿಷಯವಾಗಿ ಸಂಶಯವನ್ನು ಪ್ರಕಟಿಸತಕ್ಕದ್ದು. ನನ್ನೊಡನೆ ಒಳಗಿನ ಸಂಬಂಧವು ಬೇರೆಯಿರುತ್ತದೆಂಬುದರ ಗೊತ್ತನ್ನು ಯಾರಿಗೂ ಹತ್ತಗೊಡಬೇಡಿರಿ. ಈಗ ಸದ್ಯಕ್ಕೆ ನನಗೂ ನಿಮಗೂ ಲಗ್ಗೆ ಜಗಳವಾಯಿತೆನ್ನುವ ಹಾಗೆ ಜನರಿಗೆ ಇಲ್ಲಿಂದ ನೀವು ಸಂತಾಪಗೊಂಡು ಹೋಗುತ್ತೀರೆನ್ನುವ ಹಾಗೆ ಜನರಿಗೆ ತೋರಿಸಿರಿ. ತಿರುಗಿ ನೀವು ಇತ್ತ ಕಡೆಗೆ ಎಂದೂ ಬರಬೇಡಿರಿ, ಎಂದು ಹೇಳಿದನು. ಅದಕ್ಕೆ ರಾಮರಾಜನು-ಆಗಲಿ, ಹಾಗೆಯೇ ಆಗಲಿ, ಒಳ್ಳೆ ಯೋಗ್ಯ ವಿಚಾರವು! ರಣಮಸ್ತಖಾನ. ಚಿಕ್ಕ ವಯಸ್ಸಿನ ನಿಮ್ಮಲ್ಲಿ ಇಷ್ಟು ರಾಜಕಾರಣ ಕುಶಲತ್ವವು ಇದ್ದೀತೆಂದು ನನಗೆ ತೋರಿದ್ದಿಲ್ಲ. ಇಂದು ಅದು ನಿಮ್ಮಲ್ಲಿದ್ದದ್ದನ್ನು ನೋಡಿ