ಪುಟ:Kannadigara Karma Kathe.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಸ್ವಚ್ಚಂದವೃತ್ತಿಯು

೨೪೧

ಮನಮುಟ್ಟ ಸಹಾಯ ಮಾಡಬಹುದೆಂದು ಆ ರಾಯನು ತಿಳಕೊಂಡನು. ಆತನು ರಣಮಸ್ತನಿಗೆ- “ನಿನ್ನನ್ನು ವಿಜಾಪುರಕ್ಕೆ ಕಳಿಸದೆ ಇದ್ದದ್ದರಿಂದ ಎಲ್ಲ ಬಾದಶಹರು ಒಟ್ಟುಗೂಡಿ ನಮ್ಮ ಮೇಲೆ ಯುದ್ಧಕ್ಕೆ ಬರಬೇಕಾಯಿತು. ಆದರೆ ಪೃಥ್ವಿಯೊಳಗಿನ ಎಲ್ಲ ಬಾದಶಹರು ಒಟ್ಟುಗೂಡಿ ಬಂದರೂ ನಾವು ಹೆದರುವಹಾಗಿಲ್ಲ. ನಾವು ಸ್ವಸ್ಥ ಕುಳಿತುಕೊಳ್ಳುವದರಿಂದ ಯುದ್ಧವು ನಡೆಯದೆಂದು ತಿಳಿದು, ನಾವು ಈಗ ಮುಂದಕ್ಕೆ ಸಾಗಿಹೋಗಬೇಕಾಗಿರುವದು. ಮುಂದಕ್ಕೆ ಸಾಗಿಹೋದ ಕೂಡಲೆ ತುಂಗಭದ್ರೆಯ ಕಾಳಹೊಳೆಯ ಕಡೆಯಲ್ಲಿಯೇ ಶತ್ರುಗಳ ದೂಳಹಾರಿಸಬೇಕು; ಅಂದರೆ ಅವರು ಮುಂದಕ್ಕೆ ಸಾಗಿ ಬರಲಾರರು” ಅನ್ನಲು, ಅದಕ್ಕೆ ರಣಮಸ್ತಖಾನನು ತಲೆಯಲ್ಲಾಡಿಸಿ- ನನ್ನ ಮೇಲೆ ನಿಮ್ಮ ವಿಶ್ವಾಸವು ಕುಳಿತುಕೊಳ್ಳುವಂತೆ ನನ್ನ ಕೈಯಿಂದ ಏನಾದರೂ ಕೆಲಸವಾಗಬೇಕಾಗಿರುವದು; ಆದ್ದರಿಂದ ನನ್ನನ್ನು ಆ ತುಂಗಭದ್ರೆಯ ಕಾಳಹೊಳೆಯ ಕಡೆಗೆ ಕಳಿಸಿ ನನ್ನ ಪರಾಕ್ರಮವನ್ನು ನೋಡಿರಿ. ಶತ್ರುಗಳನ್ನು ಎಲ್ಲಿಯೋ ಒತ್ತಟ್ಟಿಗೆ, ಒಯ್ದು, ಅವರಲ್ಲಿ ಒಬ್ಬನೂ ಉಳಿಯದಂತೆ ವ್ಯವಸ್ಥೆ ಮಾಡುವೆನು ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ರಾಮರಾಜನಿಗೆ ಕೌತುಕವಾಯಿತು; ಆದರೆ ಆತನು ರಣಮಸ್ತಖಾನನನ್ನು ಕುರಿತು- “ನೀನು ಇನ್ನೂ ಹುಡುಗನು. ನಿನ್ನನ್ನು ಅಂಥ ಮಹತ್ವದ ಸ್ಥಳಕ್ಕೆ ಕಳಿಸಿದರೆ, ನಮ್ಮ ಸೈನಿಕರು ಹ್ಯಾಗೆ ಒಡಂಬಟ್ಟಾರು? ಆ ಕೆಲಸವನ್ನು ನನ್ನ ಬಂಧುವಾದ ತಿರುಮಲನು ಮಾಡುವನು. ಆತನೇ ಆ ಕೆಲಸ ಮಾಡಲಿಕ್ಕೆ ವಿರಾಧಿವೀರನು. ನೀನು ಮಧ್ಯಭಾಗದಲ್ಲಿಯೇ ಇರಬೇಕಾಗುವದು. ನಿಮ್ಮ ಪರಾಕ್ರಮವನ್ನು ನಾನು ಕಣ್ಣುಮುಟ್ಟಿ ನೋಡಬೇಕಾಗಿದೆ” ಎಂದು ಹೇಳಿದನು. ಆಗ ರಣಮಸ್ತಖಾನನು ನಿರ್ವಾಹವಿಲ್ಲದೆ- “ಹಾಗೇ ಆಗಲಿ, ನನ್ನ ಪರಾಕ್ರಮವನ್ನು ತಾವು ಕಣ್ಣಮುಟ್ಟಿ ನೋಡಬಹುದು, ಅದನ್ನು ತಮಗೆ ತೋರಿಸುವ ಇಚ್ಛೆಯು ನನಗೆ ವಿಶೇಷವಾಗಿರುತ್ತದೆ. ಶತ್ರುವು ಮೈಮೇಲೆ ಬಂದು ಬೀಳಲಂದರಾಯಿತು. ಆಗ ನನ್ನ ಹಾಗು ನನ್ನ ಸೈನ್ಯದ ಪರಾಕ್ರಮವು ಗೊತ್ತಾಗುವದು” ಎಂದು ಹೇಳಿದನು. ರಣಮಸ್ತಖಾನನು ಹೀಗೆ ಸಮಾಧಾನದಿಂದ, ಆದರೆ ಧಿಮಾಕಿನಿಂದ ಕೊಟ್ಟ ಉತ್ತರವನ್ನು ಕೇಳಿ, ರಾಮರಾಜನು ಬಹಳ ಸಂತೋಷಪಟ್ಟು- “ನೀನು ನಿಜವಾದ ಶೂರನ ಹೊಟ್ಟೆಯಲ್ಲಿ ಹುಟ್ಟಿರುವೆ” ಎಂದು ನುಡಿದನು. ಹೀಗೆ ನುಡಿಯುತ್ತಿರವಾಗ ರಣಮಸ್ತಖಾನನ್ನು ಆತನು ಅತ್ಯಂತ ವಾತ್ಸಲ್ಯದಿಂದ ಎವೆಯಿಕ್ಕದೆ ನೋಡಿದನು. ಈ ಸಂಭಾಷಣಗಳಾದ ಒಂದೆರಡು ದಿನಗಳ ಮೇಲೆ ಶತ್ರುಗಳ ಸೈನ್ಯಗಳು ವಿಜಾಪುರದಿಂದ ಹೊರಟು ಮುಂದಕ್ಕೆ ಸಾಗಿಬಂದವೆಂಬ ಸುದ್ದಿಯು