ಪುಟ:Kannadigara Karma Kathe.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಸ್ವಚ್ಚಂದವೃತ್ತಿಯು ೨೪೫

ಹೇಳುವ ಪ್ರಸಂಗವನ್ನು ನನ್ನ ಪಾಲಿಗೆ ಮಾತ್ರ ತರಬೇಡಿರಿ: ಎಂದು ಹೇಳಿದನು. ಅದಕ್ಕೆ ಮಾಸಾಹೇಬರು ಏನೂ ಮಾತಾಡಲಿಲ್ಲ; ಆದರೆ ಅದರ ಬಲವನ್ನು ನೋಡಿ ಲೈಲಿಯು, ಆ ಸೇವಕನನ್ನು ಕುರಿತು-ಅಪ್ಪಾ, ನೀನೇನು, ಹೇಳಿ ಕೇಳಿ ನೌಕರನು, ಕೈಯೊಳಗಿನ ಕಲ್ಲು ಇದ್ದ ಹಾಗೆ. ಅವರ ಮಾತನ್ನು ಇಲ್ಲಿ ಹೇಳಿದಂತೆ, ಇವರ ಮಾತನ್ನು ಅಲ್ಲಿ ಹೇಳಿಬಿಡೆಂದರಾಯಿತು. ಸುಮ್ಮನೆ ನಿನ್ನ ತಲೆ ಯಾಕೆ ಹಾರಿಸುವರು ? ಹೋಗು, ಈಗ ಹೇಳಿದಷ್ಟು ನಿಮ್ಮ ಮಹಾರಾಜರ ಮುಂದೆ ಹೇಳು ಹೋಗು, ಎಂದು ಹೇಳಿದಳು; ಆದರೂ ಆ ಸೇವಕನ ಕಾಲುಗಳು ಏಳುಲೊಲ್ಲವು. ಆತನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಕೊಂಡು–ಮಾಸಾಹೇಬ, ನಿಮ್ಮ ಈ ಮಾತುಗಳ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ ಎಂದನು. ಅದನ್ನು ಕೇಳಿ ಮಾಸಾಹೇಬರು ಸ್ವಲ್ಪ ಹೊತ್ತು ಸಂತಾಪದಿಂದ ಏನೂ ಮಾತನಾಡಲಿಲ್ಲ. ಆಮೇಲೆ ಅವರು ಆ ಸೇವಕನನ್ನು ಕುರಿತು ತಟ್ಟನೆ- “ನನ್ನನ್ನು ಛಲಿಸಬೇಕೆಂದು ನಿಮ್ಮ ಮಹಾರಾಜರು ನಿನ್ನನ್ನು ನನ್ನ ಬಳಿಗೆ ಕಳಿಸಿರುವರೋ ಏನು ? ನಾನು ಕೊಟ್ಟ ಉತ್ತರವನ್ನು ನಿನ್ನ ಒಡಯನಿಗೆ ಹೇಳು, ಮತ್ತು ಸ್ಪಷ್ಟವಾಗಿ ಹೀಗೆಯೂ ತಿಳಿಸುವೈರಿಗಳ ಕಡೆಯ ಹೆಣ್ಣುಮಕ್ಕಳನ್ನು ಹೀಗೆ ಪ್ರತಿಬಂಧದಲ್ಲಿಟ್ಟು, ಈವರೆಗೆ ಯಾವ ಹಿಂದೂ ಅರಸನೂ ಪೀಡಿಸಿರುವದಿಲ್ಲ; ಅಂಥ ನೀಚ ಕೆಲಸವನ್ನು ಈಗ ನೀವು ಮಾಡಿ ಕೀರ್ತಿಯನ್ನು ಸಂಪಾದಿಸುವಿರಿ. ಇದರಿಂದ ನಿಮ್ಮ ವಂಶದ ಹಾಗೂ ಇಡಿಯ ಕ್ಷತ್ರಿಯ ಕುಲದ ಉದ್ದಾರವು ಬಹಳ ಚೆನ್ನಾಗಿ ಆಗುವದು !”

ಮಾಸಾಹೇಬರ ಈ ಮಾತುಗಳನ್ನು ಕೇಳಿ, ಇನ್ನು ಈ ಹೆಣ್ಣು ಮಗಳ ಮುಂದೆ ನಿಂತುಕೊಳ್ಳುವುದರಲ್ಲಿ ಅರ್ಥವಿಲ್ಲೆಂದು ತಿಳಿದು, ಆ ಸೇವಕನು ರಾಮರಾಜನ ಬಳಿಗೆ ಹೋಗಿ ತನ್ನಿಂದಾದಷ್ಟು ಸೌಮ್ಯರೀತಿಯಿಂದ, ಎಡಚಡಚಾಡುತ್ತ ಮಾಸಾಹೇಬರು ಕೊಟ್ಟ ಉತ್ತರವನ್ನು ಹೇಳಿದನು, ಅದರಿಂದ ರಾಮರಾಜನ ಸಮಾಧಾನವಾಗಲಿಲ್ಲ. ಸೇವಕನು ಎನೋ ಮುಚ್ಚುತ್ತಾನೆಂದು ತಿಳಿದು ರಾಮರಾಜನು ಆವನನ್ನು ಕುರಿತು-"ನೀನು ಯಥಾಸ್ಥಿತವಾಗಿ ಇದ್ದದ್ದನ್ನೆಲ್ಲ ಹೇಳು. ಒಂದು ಮಾತನ್ನು ಸಹ ಮುಚ್ಚಬೇಡ” ಎಂದು ಗದರಿಸಿದನು, ಆಗ ಸೇವಕನು ನಿರುಪಾಯನಾಗಿ, ಮಾಸಾಹೇಬರು ಆಡಿದ ಎಲ್ಲ ಮಾತುಗಳನ್ನು ಇದ್ದಕ್ಕಿದ್ದ ಹಾಗೆ ಹೇಳಿದನು. ಅದನ್ನು ಕೇಳಿ ರಾಮರಾಜನು ಅರ್ಧತಾಸು ಸುಮ್ಮನೆ ನಿಂತುಕೊಂಡನು. ಆಮೇಲೆ ಆತನು ಸೇವಕನಿಗೆ ಆಕೆಯ ವೃದ್ದ ದಾಸಿಯಾದ ಲೈಲಿಯು ಇರುತ್ತಾಳಲ್ಲ, ಆಕೆಯನ್ನು ಇತ್ತ ಕಡೆಗೆ ಕರಕೊಂಡು ಬಾ ಎಂದು ಹೇಳಿದನು. ಅದರಂತೆ ಸೇವಕನು ಹೋಗಿ ಲೈಲಿಯನ್ನು ಕರೆದನು.