ಪುಟ:Kedage.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರಾವಳಿಯ ಯಕ್ಷಗಾನ /15

ಅದ್ಭುತವಾದದ್ದು. ಇಲ್ಲಿ ಮಾತು ಮಾಣಿಕ್ಯ, ತಾಳಮದ್ದಳೆಯಲ್ಲಿ ಜರಗುವ ಮಾತಿನ ಚಕಮಕಿ,ಈ ಸನ್ನಿವೇಶಸೃಷ್ಟಿ, ಉತ್ಕಟರಸಾವಿಷ್ಕಾರ ಅನನ್ಯ. ಸಾವಿರಾರು ಪ್ರೇಕ್ಷಕರನ್ನು ಇಡಿಯ ರಾತ್ರಿ ಮಾತಿನಿಂದಲೇ ರಂಜಿಸುವ ಈ ಕಲೆಯ ಸಾಮರ್ಥ್ಯ ವಿಶೇಷವಾದದ್ದು. ಕರಾವಳಿ ಮಲೆನಾಡು ಸೇರಿ ನೂರಎಪ್ಪತ್ತೈದಕ್ಕೂ ಮಿಕ್ಕಿ ತಾಳಮದ್ದಲೆ ಸಂಘಗಳಿವೆ ಎಂದು ನನ್ನಅಂದಾಜು ಲೆಕ್ಕ.

ತಾಳಮದ್ದಲೆಯಲ್ಲಿ ವೃತ್ತಿ ವೇಷಧಾರಿಗಳೂ ಪಾಲ್ಗೊಳ್ಳುವರಾದರೂ,ಅದು ಇಂದಿಗೂ ಹವ್ಯಾಸಿ ಕಲೆ. ತಾಳಮದ್ದಳೆಗೆ ಟಿಕೇಟು ಇಟ್ಟು ಪ್ರದರ್ಶನಗಳೂ ಜರಗುತ್ತವೆ. ಈಚಿನ ವರ್ಷಗಳಲ್ಲಿ ತಾಳಮದ್ದಲೆಗೆ ಪ್ರೋತ್ಸಾಹ ಹೆಚ್ಚಿದೆ. ತಾಳಮದ್ದಲೆ ನೀಡುವ ಕಲಾನುಭವ, ಅದರ ಕಲಾವಿದನಿಗಿರಬೇಕಾದ ವಿದ್ವತ್ತು ಕಲಾಪ್ರಾವೀಣ್ಯ ಎರಡೂ ಬಹಳ ಎತ್ತರದವು. ಬಯಲಾಟ, ತಾಳಮದ್ದಳೆಗಳ ಅರ್ಥಗಾರಿಕೆಯ ಸಾಹಿತ್ಯಕ ಅಭ್ಯಾಸ ವ್ಯವಸ್ಥಿತವಾಗಿ ನಡೆಯಬೇಕು. ಆಗ ಸದ್ಯೋಜಾತ, ಸದ್ಯೋನಷ್ಟವಾದ ಈ ಕಲಾಕೃತಿಯನ್ನು ಉಚ್ಚಸಾಹಿತ್ಯ ಕೃತಿಗಳ ನೆಲೆಯಲ್ಲಿ ಕಾಣಲು ಸಾಧ್ಯ.

ತೆಂಕು - ಬಡಗು (ಉತ್ತರ ಕ. ಸೇರಿ) ತಿಟ್ಟುಗಳು ಕವಲಾಗಿ ಸಾಗಿ ಹೆಚ್ಚಿನ ಸಂಪರ್ಕವಿಲ್ಲದೆ ಬೆಳೆದು, ಇತ್ತೀಚಿನ ವರ್ಷಗಳಲ್ಲಿ ಪುನಃ ಕೆಲಮಟ್ಟಿನ ಪರಸ್ಪರ ಪ್ರಭಾವ ಕಾಣಿಸುತ್ತದೆ. ಬಡಗಣ ವೇಷಧಾರಿಗಳೂ, ಭಾಗವತರೂ ತೆಂಕಿನಲ್ಲಿ ವ್ಯವಸಾಯ ಮಾಡಿದ್ದೂ, ತೆಂಕು ಬಡಗು ತಿಟ್ಟುಗಳನ್ನು ಒಂದೇ ರಂಗದಲ್ಲಿ ತಂದು ಪ್ರದರ್ಶಿಸಿದ್ದೂ, ಹೆಚ್ಚಿನ ಸಂಚಾರ ಸೌಲಭ್ಯಗಳೂ ಇದಕ್ಕೆ ಕಾರಣ. ತೆಂಕುತಿಟ್ಟು ಮಾತುಗಾರಿಕೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದ್ದು, ಅದರ ಪ್ರಭಾವ ಬಡಗನ ಮೇಲೂ ಆಗಿದೆ. ತೆಂಕಿನ ಗಿರ್ಕಿಯಂತಹ ಕುಣಿತಗಳನ್ನು ಬಡಗಿನಲ್ಲೂ ಈಗ ಕಾಣಬಹುದು. ಉತ್ತರ ಕನ್ನಡದ ಕಲಾವಿದರು ತಂದ ಅಭಿನಯವಂತೂ ಬಡಗು ತೆಂಕು ಎರಡು ತಿಟ್ಟುಗಳ ಮೇಲೆ ಆಳವಾದ ಪ್ರಭಾವ ಬೀರಿದೆ. ತೆಂಕು - ಬಡಗು ಎರಡೂ ತಂಡಗಳುಳ್ಳ ಒಂದು ಮೇಳವೂ ಕೆಲಕಾಲ ನಡೆದಿತ್ತು. (ಪೊಳಲಿ ರಾಜರಾಜೇಶ್ವರಿ ಮೇಳ : ಸಂಚಾಲಕ ಕೆ. ವಿಠಲ ಶೆಟ್ಟಿ)

ಇಲ್ಲಿ ಒಂದು ಮುಖ್ಯ ವಿಷಯವನ್ನು ಪ್ರಸ್ತಾಪಿಸಬೇಕು. ತೆಂಕುತಿಟ್ಟಿನ ವೇಷ, ಹಿಮ್ಮೇಳಗಳು ಕಥಕ್ಕಳಿಯ ಅನುಕರಣೆ ಎಂಬ ಮಾತನ್ನು ಕೆಲವರು ಹೇಳಿದ್ದಾರೆ, ಹೇಳುತ್ತಿದ್ದಾರೆ. ಇದು ಸೂಕ್ಷ್ಮ ಅವಲೋಕನ ಇಲ್ಲದೆ ಬಂದ ತೀರ್ಮಾನ. ತೆಂಕಿನ ವೇಷ, ಮುಖವರ್ಣಿಕೆ ಇವು ಬಡಗಿನ ಪರಿವರ್ತಿತ ರೂಪಗಳು ಅಷ್ಟೆ. ಮುಖವರ್ಣಿಕೆಗಳಲ್ಲಿ ತೆಂಕಿಗೂ - ಕಥಕ್ಕಳಿಗೂ ಸಾಮ್ಯ ಇಲ್ಲ. ಚೆಂಡೆ