ಪುಟ:Kedage.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

16/ ಕೇದಗೆ

ಜಾಗಟೆಗಳೂ ಕಥಕ್ಕಳಿಯವಲ್ಲ. ಈ ಜಿಲ್ಲೆಯ ದಕ್ಷಿಣಭಾಗದ ದೇವಸ್ಥಾನಗಳಲ್ಲಿ ಅಂತಹ ಚೆಂಡೆಗಳೇ ಬಳಕೆಗೊಳ್ಳುತ್ತ ಬಂದಿವೆ. ಯಕ್ಷಗಾನ, ಪಗಡಿ, ಕೇದಗೆ ಬಣ್ಣದ ವೇಷದ ಕೇಶಾವರಿ ತಟ್ಟಿ (ಅಥವಾ ಕುಟ್ಟಿ ಚಾಮರ)ಯ ಮೂಲವನ್ನು ಕೇರಳದ ತೈಯ್ಯಂ, ತುಳುನಾಡಿನ ಭೂತಾರಾಧನೆಗಳಲ್ಲಿ ಕಾಣಬೇಕು. ಕಥಕ್ಕಳಿ ಯಕ್ಷಗಾನಗಳಲ್ಲಿ ಕಾಣುವ ಸಾಮ್ಯವು ಅವೆರಡಕ್ಕು ಸಮಾನ ಮೂಲವೊಂದರಿಂದ ಬಂದ ಅಂಶಗಳಲ್ಲಿದೆ. ತೆಂಕುತಿಟ್ಟಿಗೂ ದೂರದ ತೆರುಕ್ಕೂತ್ತಿಗೂ ಇರುವ ಸಾಮ್ಯ ಬಡಗು - ತೆಂಕು ಕಥಕ್ಕಳಿಗಳಲ್ಲಿರುವ ಕೆಲವು ಸಮಾನ ಅಂಶಗಳೂ ಅಂತಹ ಸಮಾನ ಮೂಲದ ಕಡೆ ಬೆರಳು ತೋರಿಸುತ್ತವೆ. ಈ ಅಂಶವನ್ನು ಸ್ಮರಿಸದೆ, ಹೆಚ್ಚು ಪ್ರಸಿದ್ಧವಾದ ಕಥಕ್ಕಳಿಯನ್ನು ಮಾತ್ರ ಗಣಿಸಿದುದೇ ತೆಂಕುತಿಟ್ಟು ಕಥಕ್ಕಳಿಯ ಅನುಕರಣೆ ಎಂಬ ಅಭಿಪ್ರಾಯ ಬರಲು ಕಾರಣವಾಗಿದೆ. ಕೊಲ್ಲೂರು ಕ್ಷೇತ್ರಕ್ಕೂ ಕೇರಳೀಯರಿಗೂ ಇರುವ ಶತಮಾನಗಳ ಸಂಬಂಧದಿಂದ ಕಥಕ್ಕಳಿಯು ಯಕ್ಷಗಾನದಿಂದಲೇ ಸ್ಫೂರ್ತಿ, ಪ್ರಭಾವ ಪಡೆದಿರಲು ಸಾಧ್ಯ. ಏಕೆಂದರೆ ಹಿಂದೆ ಕಥಕ್ಕಳಿಯಲ್ಲಿಯೂ ಮಾತುಗಾರಿಕೆಯೂ, ಅದರದ್ದಾದ ಸಂಗೀತ ಶೈಲಿಯೂ ಇದ್ದುವೆಂದು ತಿಳಿದುಬರುತ್ತದೆ.

೧೦

ಯಕ್ಷಗಾನಪ್ರಸಂಗಗಳ ವಸ್ತುವಿನ್ಯಾಸದ ಹರಹು ಬಲು ದೊಡ್ಡದು. ಭಾರತ,ಭಾಗವತ, ಶಿವಪುರಾಣ, ರಾಮಾಯಣಗಳ ಜತೆ ಕ್ಷೇತ್ರ ಮಹಾತ್ಮೆ, ತುಳು ಜಾನಪದ, ಇತಿಹಾಸ, ಕಾಲ್ಪನಿಕ, ಅರ್ಧಪೌರಾಣಿಕ, ಹೀಗೆ ಹಲವು ಮೂಲಗಳಿಂದ ಬಂದ ಪ್ರಸಂಗಗಳಿವೆ. ಕಳೆದ ಎರಡು ದಶಕಗಳಲ್ಲಿ ಸುಮಾರು ಮುನ್ನೂರಕ್ಕೂ ಮಿಕ್ಕಿ ಹೊಸ ಪ್ರಸಂಗಗಳು ರಂಗಕ್ಕೆ ಬಂದಿರಬಹುದು. ಪೌರಾಣಿಕ ಕತೆಗಳಿಗೆ ಹೊಸ ಆಶಯ ಆಯಾಮಗಳನ್ನು ಕಲ್ಪಿಸಿ ಯಕ್ಷಗಾನ ಇಂದು ಮನಸ್ಸಿಗೆ ರೆಲವೆಂಟ್ ಆಗುವ ಹಾಗೆ ಯತ್ನಿಸಿದವರಿದ್ದಾರೆ. ಶ್ರೀ ಅಮೃತ ಸೋಮೇಶ್ವರ, ಶ್ರೀ ಕೆ. ಯಂ. ರಾಘವ ನಂಬಿಯಾರ್ ಇವರ ರಚನೆಗಳು ಇಲ್ಲಿ ಉಲ್ಲೇಖಾರ್ಹ. ಪ್ರಸಂಗರಚನೆಯನ್ನು ರಂಗಸ್ಥಳದ ದೃಷ್ಟಿಯಿಂದ ಬರೆಯುವ ಯತ್ನ ನಡೆದಿದೆ. ಸಂಸ್ಕೃತನಾಟಕಗಳ ಕತೆಗಳೂ, ಗುಣಸುಂದರಿಯಂತವ ಕತೆಗಳೂ, ಕೆಲವು ಪೌರಾಣಿಕರೂಪದ ಕಾಲ್ಪನಿಕ ಸಿನಿಮಾ ಕತೆಗಳೂ ಯಕ್ಷಗಾನಕ್ಕೆ ಬಂದಿವೆ. ಹಳೆಯ ಪ್ರಸಂಗಗಳನ್ನೇ ಜೋಡಿಸಿ, ಸಂಪಾದಿಸಿ ಅಳವಡಿಸುವ ಪ್ರಯೋಗಗಳೂ ಆಗಿವೆ. ವಸ್ತು ಮತ್ತು ಅದರ ಮಂಡನೆಯಲ್ಲಿ ಆಧುನಿಕ ಆಶಯಗಳನ್ನು ತರುವ ಯತ್ನಗಳೂ ನಡೆದಿವೆ.

೧೧

ಯಕ್ಷಗಾನ ಮೇಳವೆಂಬುದು ಕರಾವಳಿಯಲ್ಲಿ ಒಂದು ಪೂರ್ಣ ಪ್ರಮಾಣದ ವ್ಯವಸಾಯ ಸಂಘಟನೆ, ಮೇಳದ ಸಂಚಾರದ ಅವಧಿ ಏಳು ತಿಂಗಳು-