ಪುಟ:Kedage.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರಾವಳಿಯ ಯಕ್ಷಗಾನ /17

ನವಂಬರದಿಂದ ಮೇ ತನಕ. ಹಿಂದೆ ಎಲ್ಲ ಮೇಳಗಳು ಉಚಿತ ಬಯಲಾಟ (ಹರಕೆ) ಆಡುತ್ತಿದ್ದುವು. ಈಗ ದೇವಸ್ಥಾನಗಳು ನಡೆಸುವ ಇಂತಹ ಮೇಳಗಳಿಗಿಂತ ಡೇರೆ ಹೂಡಿ ಟಿಕೇಟಿನ ಆಟ ಆಡುವ ಮೇಳಗಳು ಹೆಚ್ಚು ಇವೆ. ಕಳೆದ ಎರಡು ದಶಕಗಳಲ್ಲಿ ಯಕ್ಷಗಾನ ವ್ಯವಸಾಯ ಬಹುಮುಖಿಯಾಗಿ ಬೆಳೆದಿದೆ.

ಮೇಳದ ಒಳಗೆ ಕಲಾವಿದರಿಗೆ ಭಾಗವತನೇ ನಾಯಕ, ಹಿಂದಣ ಕ್ರಮದಂತೆ ಅತಿಕಾಯಕಾಳಗ - ಇಂದ್ರಜಿತು, ಮೈರಾವಣ (ಯಾ ಅಭಿಮನ್ಯು - ಕರ್ಣಪರ್ವ) ಈ ಪ್ರಸಂಗಕ್ಕೆ ತಕ್ಕಂತೆ ತಂಡವನ್ನು ಕಟ್ಟುವ ಕ್ರಮವಿತ್ತು. ವೇಷಧಾರಿಗಳಿಗೆ ನಿಶ್ಚಿತ ಸ್ಥಾನದಿಂದ ಗುರುತು. ಬಣ್ಣದ ವೇಷ, ಎಡಬಣ್ಣ, ಪೀಠಿಕೆ ವೇಷ, ಇದಿರುವ ವೇಷ, ಸ್ತ್ರೀ ವೇಷ, ಏಳನೇ ವೇಷ, ಎರಡನೇ ಸ್ತ್ರೀ ವೇಷ, ಪುಂಡು ವೇಷ, ಕಟ್ಟುವೇಷಗಳು, ಹಾಸ್ಯಗಾರ - ಇದು ತಂಡದ ಸಾಂಪ್ರದಾಯಿಕ ಸ್ವರೂಪ. ಈಗ ಕಲಾವಿದರ ಸಂಖ್ಯೆ ಹೆಚ್ಚಿದೆ, ಮಾತುಗಾರಿಕೆಗೆ ವಿಶೇಷ ಸ್ಥಾನವಿದೆ. ಬಣ್ಣದ ವೇಷಗಳ ಪ್ರಾಧಾನ್ಯ ಕಡಿಮೆ ಆಗಿದೆ. ಆಟದ ಮೊದಲಿನ ಸಭಾಲಕ್ಷಣ ಅಥವಾ ಪೂರ್ವರಂಗ ಹೃಸ್ವವಾಗಿದೆ. ಪ್ರದರ್ಶನ ಸ್ವರೂಪ ಬದಲಾಗಿದೆ. ಈಗ ಮೇಳಗಳಲ್ಲಿ ಇಬ್ಬರು ಭಾಗವತರು, ಮೂರು ನಾಲ್ಕು ಜನ ಚೆಂಡೆ ಮದ್ದಳೆಗಾರರೂ ಇರುವುದಿದೆ. ಹರಕೆ ಆಟಗಳ ಮೇಳಗಳಲ್ಲಿ ಹಿಂದಿನ ಸಂಘಟನಾಕ್ರಮ ಬಹು ಮಟ್ಟಿಗೆ ಉಳಿದಿದೆ. ಕರಾವಳಿಯಲ್ಲಿ ಸುಮಾರು ಇಪ್ಪತ್ತೈದು ಪೂರ್ಣಾವಧಿ ಮೇಳಗಳಿವೆ. ಇವುಗಳಲ್ಲಿ ಆರೆಂಟು ಮೇಳ ಹರಕೆ ಬಯಲಾಟದವು, ಉಳಿದವು ಟಿಕೇಟು ಮೇಳ ಗಳು. ಕಟೀಲು ಕ್ಷೇತ್ರದ ಹೆಸರಲ್ಲಿ ಮೂರು ಮೇಳಗಳಿದ್ದೂ, ಹರಕೆಯಾಗಿ ಬಂದ ಆಟಗಳು ಪ್ರತಿವರ್ಷವೂ ಆಡದೆ ಬಾಕಿ ಉಳಿಯುತ್ತವೆ. ಬರಿಯ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹತ್ತಿಪ್ಪತ್ತು ತಂಡಗಳು ಆರು ತಿಂಗಳ ಅವಿರತ ಪ್ರೋತ್ಸಾಹ ಪಡೆಯುತ್ತಿರುವುದು, ಅದೂ ಇಂದಿನ ಆರ್ಥಿಕ ಸನ್ನಿವೇಷ ಸಾಮಾಜಿಕ ಜೀವನದ ಸಂಕೀರ್ಣಸ್ವರೂಪದ ಮಧ್ಯೆ ನಿಜಕ್ಕೂ ಒಂದು ಪವಾಡ, ಜನಪದ ರಂಗಭೂಮಿಯೊಂದು ಇಷ್ಟು ಜೀವಂತವಾಗಿರುವ ಉದಾ ಹರಣೆ ವಿಶ್ವದಲ್ಲಿ ಅಪೂರ್ವವನ್ನುವರು. ವ್ಯವಸಾಯ ಮೇಳಗಳಲ್ಲದೆ ಸುಮಾರು ನೂರೈವತ್ತಕ್ಕೆ ಮಿಕ್ಕಿದ ಹವ್ಯಾಸಿ ತಂಡಗಳಲ್ಲಿ ನಾಲೈದು ಗೊಂಬೆಯಾಟದ ತಂಡಗಳೂ ನಾಲ್ಕಾರು ಮಕ್ಕಳ ಮೇಳಗಳೂ ಕರಾವಳಿಯಲ್ಲಿವೆ. ಉಪ್ಪಿನಕುದ್ರು ಕೊಗ್ಗ ಕಾಮತರ ಬೊಂಬೆಯಾಟ, ಸಾಲಿಗ್ರಾಮ ಮಕ್ಕಳ ಮೇಳ, ಉಡುಪಿಯ ಯಕ್ಷಗಾನ ಕೇಂದ್ರದ ತಂಡ, ಇಡಗುಂಜಿ ಮೇಳ ಇವು ವಿದೇಶಿ ಪ್ರವಾಸ