ಪುಟ:Kedage.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

18 / ಕೇದಗೆ

ಮಾಡಿ ಬಂದಿವೆ. ಶಾಲೆ, ಕಾಲೇಜು, ಯುವಕಸಂಘಗಳ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಒಂದು ಯಕ್ಷಗಾನ ಪ್ರದರ್ಶನ ಬೇಕೇ ಬೇಕು ಎಂಬ ಸ್ಥಿತಿ ಇದೆ.

ಮೇಳದ ತಿರುಗಾಟ ಮುಗಿಸಿದ ಕಲಾವಿದರು ಈಗ ಕರಾವಳಿಯಲ್ಲೂ ಬೊಂಬಾಯಿ, ಹೈದ್ರಾಬಾದ್, ಮದ್ರಾಸು ಮುಂತಾದ ಕನ್ನಡಿಗರಿರುವ ಹೊರಗಿನ ಪ್ರದೇಶಗಳಿಗೂ, ಹಬ್ಬಗಳ ಸಮಯದ ಆಟಗಳಿಗೂ ಸಂಚಾರ ಹೋಗುತ್ತಾರೆ. ಇವು ತಾತ್ಕಾಲಿಕವಾಗಿ ಸಂಘಟಿಸುವ ಆಟದ ಮೇಳಗಳು.

೧೨

ಕಳೆದ ಕೆಲವರ್ಷಗಳಿಂದ ಯಕ್ಷಗಾನವು ವಾಣಿಜ್ಯಕರಣಗೊಂಡು ಒಂದು ಉದ್ಯಮವಾಗಿ ಬೆಳೆದ ಮೇಲೆ, ಗಾತ್ರದಿಂದ, ಸಂಖ್ಯೆಯಿಂದ ಈ ರಂಗ ಬೆಳೆದಿದೆ. ಈಗ ಇದರಲ್ಲಿ ಸುಮಾರು ನಾಲ್ಕುನೂರು ವ್ಯಕ್ತಿಕಲಾವಿದರೇ ಇದ್ದಾರೆ. ಮೇಳಗಳ ಆಡಳಿತ, ಸಂಚಾರ ಕ್ರಮ - ಇವೇ ಒಂದು ಅಧ್ಯಯನದ ವಿಷಯ. ಕಲಾವಿದರ ಸ್ಥಿತಿಯೂ ಸುಧಾರಿಸಿದೆ. ಆದರೆ ವಾಣಿಜ್ಯ ದೃಷ್ಟಿಯಿಂದಾಗಿ ಕಲಾದೃಷ್ಟಿಯ ಅಭಾವವುಂಟಾಗಿ ನಡೆದ ಸಿಕ್ಕಾಬಟ್ಟೆ ಪರಿಷ್ಕರಣೆಗಳಿಂದ, ಯಕ್ಷಗಾನ ವಿಶೇಷವಾಗಿ ಅದರ ವೇಷ, ಶೈಲಿ, ಸಂಗೀತ ಇವು ರೂಪಭಂಗಗೊಂಡಿವೆ. ನಾಟಕದ ಕ್ಯಾಲಂಡರಿನ ವೇಷಗಳು, ದಕ್ಷಿಣಾದಿ ಸಂಗೀತ ಇವು ರಂಗಕ್ಕೆ ನುಗ್ಗಿವೆ. ತುಳು ಪ್ರಸಂಗಗಳ ಬಳಕೆ ತೆಂಕಿನಲ್ಲಿ ಯಕ್ಷಗಾನದ ರೂಪ ವಿನಾಶಕ್ಕೆ ಕಾರಣವಾದುದು ದುರ್ದೈವ, ತುಳುಭಾಷೆಯನ್ನು ಬೆಳೆಸುವುದು ದೋಷವೇನಲ್ಲ. ಆದರೆ ಯಕ್ಷಗಾನದ ಸಾಂಪ್ರದಾಯಿಕ ರೂಪವನ್ನುಳಿಸಿ ಆಡಬೇಕಾದುದು ಬಹುಮುಖ್ಯ. ಇಂದಿನ ಸ್ಥಿತಿಯೇ ಮುಂದುವರಿದರೆ ಒಂದು ತಲೆಮಾರಿನ ಒಳಗೇ ಯಕ್ಷಗಾನದ ಸಿದ್ಧ ಸ್ವರೂಪ ನಾಶವಾಗುವ ಭಯವಿದೆ. ಈ ಬಗೆಗಿನ ಎಚ್ಚರ ಬೆಳೆಯುತ್ತಿರುವುದು ಆಶಾದಾಯಕ. ವೈಯಕ್ತಿಕವಾಗಿ ಸಂಪ್ರದಾಯವನ್ನು ಬಲ್ಲ ಹಲವು ಕಲಾವಿದರಿದ್ದಾರೆ. ಸಮರ್ಥರಾದ ನೂರಾರು ತರುಣ ಕಲಾಕಾರರಿದ್ದಾರೆ. ಕಟೀಲು ಧರ್ಮಸ್ಥಳ ಮೇಳಗಳೂ, ಬಡಗುತಿಟ್ಟಿನ ಎಲ್ಲ ಮೇಳಗಳೂ ಸಂಪ್ರದಾಯವನ್ನು ಉಳಿಸಿಕೊಂಡಿವೆ. ಬಡಗುತಿಟ್ಟು ಯಕ್ಷಗಾನ ಸಂಪ್ರದಾಯವನ್ನು ತೆಂಕುತಿಟ್ಟಿನಷ್ಟು ಬಿಟ್ಟು ಹೋಗಿಲ್ಲ. ಹಾಗಾಗಿ ಸಂಪ್ರದಾಯ - ಬದಲಾವಣೆಯ ಸಂದರ್ಭ ಎರಡು ತಿಟ್ಟುಗಳಲ್ಲಿ ಬೇರೆ ಬೇರೆ. ಪರಂಪರೆಯ ಚೌಕಟ್ಟನ್ನುಳಿಸಿ ಆಟ ಆಡುತ್ತಿರುವ ಬಡಗುತಿಟ್ಟಿನ ಯಶಸ್ಸೇ ತೆಂಕುತಿಟ್ಟಿಗೂ ಪರಂಪರೆಯ ಪುನರುಜೀವನಕ್ಕೆ ಮಾದರಿ.

ಇತ್ತೀಚಿನ ದಿನಗಳಲ್ಲಿ ಆದ ಬದಲಾವಣೆಗಳೆಲ್ಲವೂ ಆಕ್ಷೇಪಾರ್ಹ ಎನ್ನುವಂತಿಲ್ಲ. ಹಲವು ಒಳ್ಳೆಯ ಪ್ರಯೋಗಗಳೂ ಆಗಿವೆ. ಮಾತುಗಾರಿಕೆ ಬಹಳಷ್ಟು ಸುಧಾರಿಸಿದೆ. ಸಂವಾದತಂತ್ರದಲ್ಲಿ ಅದ್ಭುತ ಪರಿಷ್ಕಾರವಾಗಿದೆ. ಪ್ರಸಂಗರಚನೆಯಲ್ಲಿ