ಪುಟ:Kedage.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

24/ ಕೇದಗೆ

ಸಂಖ್ಯಾಮಾನದಿಂದ ಯಕ್ಷಗಾನ ಬೆಳೆದಿದೆ. ಮೇಳಗಳು ಹೆಚ್ಚಿವೆ, ಪ್ರದರ್ಶನಗಳು ವರ್ಷ ವರ್ಷ ಹೆಚ್ಚುತ್ತಿವೆ. ಪ್ರತಿಭೆಯ ಪ್ರಮಾಣದಲ್ಲಿ ಗಮನಾರ್ಹವಾದ ಬೆಳವಣಿಗೆಗಳು ಆಗಿವೆ, ಆಗುತ್ತವೆ. ನಮ್ಮ ಕರಾವಳಿ ಮಲೆನಾಡಿನ ಎರಡು ಮೂರು ಜಿಲ್ಲೆಗಳಲ್ಲಿ, ಸುಮಾರು ಮೂವತ್ತು ಪೂರ್ಣಾವಧಿ ಮೇಳಗಳು. ಇನ್ನೂರಕ್ಕೂ ಮಿಕ್ಕಿ ಯಕ್ಷಗಾನ ಹವ್ಯಾಸಿ ತಂಡಗಳು, ನಾಲ್ಕು ಯಕ್ಷಗಾನ ಬೊಂಬೆಯಾಟ ತಂಡಗಳು ಸಕ್ರಿಯವಾಗಿವೆ. ಒಂದು ಸೀಮಿತ ಪ್ರದೇಶದಲ್ಲಿ ಒಂದು ಕಲೆಗೆ ಸಿಗುತ್ತಿರುವ ಈ ಪ್ರೋತ್ಸಾಹದ ಪ್ರಮಾಣ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಒಂದು ಅದ್ಭುತ ವಿದ್ಯಮಾನವೆಂದು ನನಗೆ ತೋರುತ್ತದೆ. ಎಷ್ಟೊಂದು ಜನ, ಎಷ್ಟೊಂದು ಕಡೆ ರಾತ್ರಿಯಿಡೀ ನಿದ್ದೆಗೆಡುತ್ತಾರೆ. ಎಷ್ಟೊಂದು ಹಣದ ವಹಿವಾಟು, ಎಂತಹ ಒಂದು ವಿಶಿಷ್ಟ ಆಸಕ್ತಿ ಆಕರ್ಷಣೆ ಈ ಕಲೆಗೆ ! ಇಂತಹ ಸನ್ನಿವೇಶ ಕಲೆಯ ನಿಜವಾದ ಬೆಳವಣಿಗೆಗೆ ಅಗತ್ಯವಾದ ಭೂಮಿಕೆ ನಮ್ಮಲ್ಲಿದೆ, ಧಾರಾಳವಾಗಿ ಇದೆ ಎಂಬುದನ್ನು ಸೂಚಿಸುತ್ತದೆ. ಇದನ್ನುಪಯೋಗಿಸಿಕೊಂಡು ತುಷ್ಟಿ, ಪುಷ್ಟಿಗಳಿಂದ ಈ ಕಲೆ ಬೆಳೆಯುವ ಬದಲು, ಈ ಕಲೆ ಪ್ರೋತ್ಸಾಹವನ್ನು ದುರುಪಯೋಗಪಡಿಸಿಕೊಂಡು, ಅದರ ಸರ್ವನಾಶವನ್ನು ಆದಷ್ಟು ಬೇಗ ಸಾಧಿಸುವ ಹಟತೊಟ್ಟಿರುವರೋ ಎಂಬಂತಿರುವವರ ಕೈಯಲ್ಲಿ ಸಿಕ್ಕಿ ಪಾಡು ಪಡುತಿರುವುದನ್ನು ಕಂಡರೆ, ತುಂಬ ಖೇದವಾಗುತ್ತದೆ.

ಮನರಂಜನೆಯ ವಾದವನ್ನು ಮುಂದಿಟ್ಟು, 'ಜನ ಬಯಸಿದ್ದನ್ನು ನಾವು ಕೊಡುತ್ತಿದ್ದೇವೆ' ಎಂದು ಹೇಳಿ, ಯಕ್ಷಗಾನದ ವ್ಯವಸಾಯಮೇಳ ತನ್ನ ವಾದವನ್ನು ಸಮರ್ಥಿಸಬಹುದು. ಆದರೆ, ನಾಟಕ, ಸರ್ಕಸ್, ಯಕ್ಷಗಾನಗಳ ವ್ಯತ್ಯಾಸವರಿಯದ, ಸಾಂಪ್ರದಾಯಿಕ ಕಲೆಯನ್ನು ನೋಡುವ ದೃಷ್ಟಿ ಇಲ್ಲದ, ಜನರ ಅಭಿರುಚಿಯನ್ನು, ತಹತಹವನ್ನು ಬಳಸಿಕೊಂಡು, ಜನರ ಅಭಿರುಚಿಯನ್ನು ಇನ್ನಷ್ಟು ಕೆಡಿಸಿ, ನಿಜಸ್ವರೂಪದ ಯಕ್ಷಗಾನ ಅವರಿಗೆ ಹಿಡಿಸಲಾರದಷ್ಟಕ್ಕೆ ಅವನ್ನು ಕೊಂಡೊಯ್ದ ವ್ಯವಸಾಯಿ ವ್ಯವಸ್ಥಾಪಕನ ಕಾರ್ಯ ಸಾಂಸ್ಕೃತಿಕವಾಗಿ ಘೋರ ಅನ್ಯಾಯವೆನ್ನದೆ ವಿಧಿಯಿಲ್ಲವಾಗಿದೆ. ಈ ಮಾತು ಮುಖ್ಯವಾಗಿ ಯಕ್ಷಗಾನದ ತೆಂಕುತಿಟ್ಟಿನ ಮೇಳಗಳಿಗೆ ಅನ್ವಯಿಸುತ್ತದೆ.

ಜನಮನದಲ್ಲಿ ಉನ್ನತ ಸ್ಥಾನ ಪಡೆದಿರುವ ಒಂದು ಕಲಾಪ್ರಕಾರವನ್ನು, ನೂರಾರು ವರ್ಷಗಳ ಹಿನ್ನೆಲೆಯಿಂದ ಬೆಳೆದ ಒಂದು ಅಭಿರುಚಿಯನ್ನು ವ್ಯವಸಾಯಕ್ಕೆ ಬಳಸಿ ಬೆಳೆಸುವುದು ಅಪರಾಧವೇನೂ ಅಲ್ಲ. ಅದು ಅಪೇಕ್ಷಣೀಯವೇ ನಿಜ. ಆದರೆ, ಹಾಗೆ ಮಾಡುವಲ್ಲಿ ಅದನ್ನು ಹೊತ್ತುಕೊಳ್ಳುವ ಪ್ರಾಮಾಣಿಕತೆ, ವಿವೇಕ, ಕಲಾದೃಷ್ಟಿ ಇರುವವನಿಗೆ ಮಾತ್ರ ಅದನ್ನು ವ್ಯವಸಾಯವಾಗಿಸುವ ಹಕ್ಕು ಬರುತ್ತದೆ ಹೊರತು, ಅದನ್ನು ಕಲಾಪರಿಜ್ಞಾನವಿಲ್ಲದೆ, ಬದಲಿಸಿ ಮಾಡಿದ್ದು