ಪುಟ:Kedage.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಸಂಗರಚನೆ : ರಂಗದೃಷ್ಟಿ /31

ನಾಟಕಕಾರನಾಗುವುದರ ಜತೆ, ವಾಗ್ಗೇಯಕಾರನೂ ಆಗಬೇಕು. ವಾಕ್ಯವನ್ನು ಗೇಯಕ್ಕೆ ಸರಿಯಾಗಿ ಪೋಣಿಸುವ ಕ್ರಮ ಅವನಿಗೆ ಕರಗತವಾಗಬೇಕು.

ಯಕ್ಷಗಾನಪ್ರಸಂಗದ ವಸ್ತು ರಚನಾವಿನ್ಯಾಸ ಇವೆರಡೂ ಯಕ್ಷಗಾನದ ರಂಗತಂತ್ರಕ್ಕೆ ಹೊಂದಿಕೆ ಆಗಬೇಕಲ್ಲದೆ, ಯಕ್ಷಗಾನದ ವೇಷವಿಧಾನಕ್ಕೆ ಅನುರೂಪವಾಗಿರಬೇಕು. ಒಳ್ಳೆಯ ರಚನಾಕೌಶಲ, ಬಲಿಷ್ಠವಾದ ವಸ್ತು ಇದ್ದಾಗಲೂ ಅವು ಯಕ್ಷಗಾನ ರಂಗಭೂಮಿಯ ಸ್ವರೂಪಕ್ಕೆ ಹೊಂದಿಕೆ ಆಗದಿರುವ ಸಂಭವವುಂಟು. ಅಂತಹ ಪ್ರಸಂಗಗಳು ರಚನೆಯಾದುದೂ ಇದೆ. ಈ ರಂಗಕ್ಕೆ ಹೊಸತೆನಿಸುವ ಕತೆ, ವಸ್ತುಗಳನ್ನು ತರುವಲ್ಲಿ ಈ ಪ್ರಜ್ಞೆ ಆವಶ್ಯಕ. ಹಾಗಾಗಿ ಸಂಪ್ರದಾಯದ ವ್ಯವಸ್ಥಿತವಾದ ಗ್ರಹಿಕೆ ಇದ್ದಾಗಲೇ ಹೊಸ ಜಾಡಿನ ರಚನೆಗಳು ಅರ್ಥಪೂರ್ಣವಾಗಿರಲು ಸಾಧ್ಯ.

ಪ್ರಸಂಗದಲ್ಲಿ ಪಾತ್ರಗಳ ಪ್ರವೇಶ, ಸಂವಾದ ಮುಂತಾದವುಗಳನ್ನು ನಿರ್ವಹಿಸುವಲ್ಲಿ ರಂಗದ ನಾಟಕಕ್ರಿಯೆಯ ಕಡೆಗೆ ಲಕ್ಷ್ಯವಹಿಸದೆ ಕತೆ ಹೇಳುವ ಕಲೆಯಲ್ಲಿ ಪ್ರಸಂಗಕರ್ತೃ ತಲ್ಲೀನನಾದರೆ ತೊಡಕಾಗುತ್ತದೆ. ಪಾತ್ರವು ಮುಖ್ಯವಾಗಿರಲು, ಗೌಣವಾಗಿರಲಿ ಪ್ರವೇಶಿಸುವ ಸಂದರ್ಭಕ್ಕೆ ಒಂದು ಪದ್ಯ ಇರಬೇಕು. ಅಂತಹದು ಇಲ್ಲದಾಗ, ಭಾಗವತರು ಒಂದು ಪದ್ಯವನ್ನು ರಚಿಸಿ ಹಾಡುವ ಪದ್ಧತಿ ಇದೆ. ಒಂದೇ ಪದ್ಯದಲ್ಲಿ ಮೂರು ನಾಲ್ಕು ಪಾತ್ರಗಳು ಯಾ ಘಟನೆಗಳನ್ನು ಸೇರಿಸಿ ಹೇಳಿದರೆ, ರಂಗಕ್ರಿಯೆಗೆ ತೊಂದರೆ ಆಗುತ್ತದೆ. ಉದಾಹರಣೆಗೆ 'ಕೃಷ್ಣ ಸಂಧಾನ' ಪ್ರಸಂಗದಲ್ಲಿ ದ್ರುಪದ ಪುರೋಹಿತನು ದುರ್ಯೋಧನನಲ್ಲಿ ಮಾತನ್ನಾಡಿದ ಬಳಿಕ, ದುರ್ಯೋಧನನು ದ್ವಾರಕೆಗೆ ಹೊರಡುತ್ತಾನೆ. ಅದನ್ನು ಕಂಡು ಪುರೋಹಿತನು ಅಲ್ಲಿಂದ ಹೊರಟು, ಧರ್ಮರಾಜನಲ್ಲಿಗೆ ಬಂದು, ವಿಷಯವನ್ನು ಸೂಚಿಸಿದಾಗ ಅದನ್ನು ಕೇಳಿದ ಧರ್ಮರಾಜನು ಅರ್ಜುನನನ್ನು ದ್ವಾರಕೆಗೆ ಕಳುಹಿಸಿ ಕೊಡುತ್ತಾನೆ - ಇಷ್ಟೆಲ್ಲ ಅರ್ಥ ವಾರ್ಧಕದಲ್ಲಿ ಸೂಚಿತವಾಗಿದೆ :

ಪೊರಮಡಲ್ಕಂಡೀತ | ಭರದಿ ಬಂದಾ ಯುಧಿಷ್ಠಿರಗೆ ಸೂಚಿಸಲಟ್ಟಿದಂ |
ನರನ ನಾ ಪಾರ್ಥ | ಬರುತ ಮಂಗಲ ಶಕುನಮಂ ಪಥದೊಳೀಕ್ಷಿಸುತ
ನಡೆದನಚ್ಯುತನ ಬಳಿಗೆ ||
ಇಲ್ಲಿ ಆಗಮನ, ನಿರ್ಗಮನ, ಸೂಚನೆ, ಹೊರಡುವಿಕೆ - ಇಷ್ಟಕ್ಕೂ ಪ್ರತ್ಯೇಕ ಪದ್ಯಗಳಿರಬೇಕಾದುದು ನ್ಯಾಯ.

ಪಾತ್ರವೊಂದು ರಂಗಕ್ಕೆ ಹೊಸತಾಗಿ ಬಂದೊಡನೆ, ಅದಕ್ಕೆ ಅಲ್ಲಿ ಒಂದು ಮಾತು, ಕುಣಿತ ಬೇಕು. ಬಂದೊಡನೆ ಸುಮ್ಮನಿರಬಾರದು. ಹಾಗೆಯೇ, ರಂಗದಲ್ಲಿ ಬೇರೆ ಪಾತ್ರಗಳೊಡನೆ ಇರುವ ಒಂದು ಪಾತ್ರ ಬಹಳ ಹೊತ್ತು ಸುಮ್ಮನಿರಬೇಕಾದ