ಪುಟ:Kedage.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

32 / ಕೇದಗೆ

ಸ್ಥಿತಿ ಬಹಳ ತೊಡಕಿನದು, ರಾಜಸೂಯ ಪ್ರಸಂಗದ ಪೂರ್ವಾರ್ಧದಲ್ಲಿ ಭೀಮ, ಅರ್ಜುನ ಈ ಎರಡು ಪಾತ್ರಗಳು ಬಲು ಹೊತ್ತು ರಂಗದಲ್ಲಿ ಮೂಕವಾಗಿ ಇರಬೇಕಾದ ಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಆ ಪಾತ್ರಗಳು ಪ್ರಾರಂಭದಲ್ಲಿ ರಂಗಕ್ಕೆ ಬಂದು, ನಿರ್ಗಮಿಸಿ, ಅನಂತರ ಆ ಪಾತ್ರದ ಸಂದರ್ಭಕ್ಕೆ ಪುನಃ ಬರುವ ಬಳಕೆ ಇತ್ತೀಚೆಗೆ ರೂಢಿಗೊಂಡಿದೆ.

ಪದ್ಯಗಳ ಬುಧ ಮತ್ತು ತಾಳಗಳ ಆಯ್ಕೆಯಲ್ಲಿ ಭಾವಾನುಗುಣವಾದ ಆಯ್ಕೆ ಬಹಳ ಮುಖ್ಯವಾದುದು. ಹಲವು ಪ್ರಸಂಗಗಳಲ್ಲಿ ಚಾರಕನ ಪದ್ಯಗಳನ್ನು ಮುಖಾರಿ - ಏಕತಾಳವೆಂಬ ಬಂಧದಲ್ಲಿ ಬರೆದಿರುವುದನ್ನು ಕಾಣುತ್ತೇವೆ. ಇದು ಹಾಸ್ಯ ಪಾತ್ರಗಳಿಗೆ ಒಪ್ಪುವ ಬಂಧ. ಹಾಗೆಂದು ಸರ್ವದಾ ಹಾಗೆಯೇ ಮಾಡಬೇಕಾಗಿಲ್ಲ. ಈ ಎಚ್ಚರವನ್ನು “ರಾವಣವಧೆ” ಪ್ರಸಂಗದಲ್ಲಿ ನಾವು ಗಮನಿಸಬಹುದು. ಯುದ್ಧದಲ್ಲಿ ಎಲ್ಲ ಸೈನ್ಯವೂ ನಾಶವಾಗಿ ರಾಕ್ಷಸಭಟರು ಅಳಿದು ಹೋದ ವಾರ್ತೆಯನ್ನು ತಿಳಿಸಲು ಚಾರಕನ ಪಾತ್ರಕ್ಕೆ :

ಚಿತ್ರವಿಸು ಖಳಕುಲೋತ್ತಮ ಸಾರ್ವಭೌಮ | ಒರೆವೆ ರಣ
ವೃತ್ತಾಂತವನು ಶೀಘ್ರದಲಿ ||

ಎಂದು ಆರಂಭವಾಗುವ ಝಂಪೆತಾಳದ ಪದ್ಯ ಅಲ್ಲದೆ ಇದು ತುಂಬ ಉಚಿತವಾದ ಆಯ್ಕೆ. ಪಾರ್ತಿಸುಬ್ಬನು ತನ್ನ ವಾಲಿಸಂಹಾರ ಪ್ರಸಂಗದಲ್ಲಿ ವಾಲಿಸುಗ್ರೀವರ ಮೊದಲ ಯುದ್ಧಕ್ಕೆ ಮಟ್ಟೆ ತಾಳವನ್ನೂ, ಎರಡನೆ ಯುದ್ಧಕ್ಕೆ ಝಂಪೆತಾಳವನ್ನೂ ಆಯ್ಕೆ ಮಾಡಿದುದೂ ತುಂಬ ಸ್ವಾರಸ್ಯವಾಗಿದೆ. ಮೊದಲ ಯುದ್ಧದಲ್ಲಿ ವಾಲಿಯ ಪಾತ್ರದ ಪ್ರಥಮ ಪ್ರವೇಶ. ದೊಡ್ಡ ಹೆಜ್ಜೆಗಳ ಕುಣಿತಕ್ಕೆ ಮಟ್ಟಿ ತಾಳ. ಎರಡನೇ ಯುದ್ಧ ಇರುವುದು ವಾಲಿವಧೆಗೆ ಪೂರ್ವಭಾವಿಯಾಗಿ. ಅದು ತೀವ್ರವಾಗಿ ಸಾಗಬೇಕಾದುದು. ಅಲ್ಲಿ ಝಂಪೆತಾಳದ ಪದ್ಯಗಳಿವೆ.

ಸುಧನ್ವ ಕಾಳಗದಲ್ಲಿ :
ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ | ರತಿಯು ಸೋಲಿಪ
ರೂಪನತಿ ಚೆಲುವಿನಲಿ | ಪ್ರತಿಮದಗಜದಂತೆ ಗತಿಯನಿಡುತಲಿ | ಶೋಭಿತದ
ಚೆಲ್ವಾನನೆ | ಕಸ್ತೂರಿತಿಲಕ ಭೂಲತೆಯ ಮಾನಿನಿ...
ಈ ಪದ್ಯಗಳು ಸ್ತ್ರೀಪಾತ್ರದ ಪ್ರವೇಶವೊಂದಕ್ಕೆ ತುಂಬ ಹೊಂದಿಕೆಯಾದ ಪದಬಂಧ. ಗತಿಗಳನ್ನು ಅಚ್ಚುಕಟ್ಟಾಗಿ ಅನ್ವಯಗೊಳಿಸಿವೆ.

ಒಂದು ಸಂದರ್ಭದಲ್ಲಿ ನಿರಂತರವಾಗಿ ಒಂದೇ ಬಂಧದ ಪದ್ಯಗಳು ಬಂದರೆ ಏಕತಾನತೆ ಬರುತ್ತದೆ. ಅದರಲ್ಲೂ ಝಂಪೆತಾಳದ ಪದ್ಯಗಳು ಇದ್ದರೆ ಅವನ್ನು ಬೇರೆ ತಾಳಗಳಲ್ಲಿ ಹಾಡುವ ರೂಢಿಯಿಲ್ಲ. ಹಾಡುವುದು ಸುಲಭವೂ ಅಲ್ಲ.