ಪುಟ:Kedage.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಸಂಗರಚನೆ: ರಂಗದೃಷ್ಟಿ /33

ಭಾವಾನುಗುಣವಾದ ಬಂಧ ಮತ್ತು ತಾಳಗಳ ಆಯ್ಕೆಯಲ್ಲಿ ಹಟ್ಟಿಯಂಗಡಿ ರಾಮ ಭಟ್ಟರ ಸುಭದ್ರಾಕಲ್ಯಾಣ, ಪಾರ್ತಿಸುಬ್ಬನ ಪಂಚವಟಿ, ಅಗರಿ ಭಾಗವತರ ಲಲಿತೋಪಾಖ್ಯಾನ, ಗುಂಡೂ ಸೀತಾರಾಮರಾಯರ ದಾನಶೂರಕರ್ಣ, ಅಮೃತ ಸೋಮೇಶ್ವರರ ಸಹಸ್ರಕವಚಮೋಕ್ಷ, ರಾಘವ ನಂಬಿಯಾರರ ಉತ್ತಮ ಸೌದಾಮಿನಿ, ಕಡತೋಕ ಮಂಜುನಾಥರ ವಿಕ್ರಮೋರ್ವಶೀಯ ಮುಂತಾದ ಪ್ರಸಂಗಗಳು ಉತ್ತಮ ಮಾದರಿಗಳನ್ನು ಹೊಂದಿವೆ. ರಂಗಸಾಹಿತ್ಯದಲ್ಲಿ ಭಾಷಾಪ್ರಯೋಗ, ಕುಸುರಿ ಕೆಲಸ, ಭಾವಾನುಗುಣತೆಯಲ್ಲಿ ಕಾವ್ಯ—ಗಾನಗಳ ಸಮನ್ವಯದಲ್ಲಿ, ನೂತನ ಪ್ರಯೋಗದಲ್ಲಿ ಯಕ್ಷಗಾನ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ.

ಪ್ರಸಂಗಗಳಲ್ಲಿ ತಾಳಮದ್ದಳೆಯ ಮಾಧ್ಯಮಕ್ಕೆ ಅನುಕೂಲವಾದ ಪ್ರಸಂಗಗಳು ಮತ್ತು ಆಟಗಳಿಗೆ ಹೊಂದುವ ಪ್ರಸಂಗಗಳೆಂದು ಎರಡು ಬಗೆಯಾಗಿ ಗುರುತಿಸ ಬಹುದು. ಆಟಕೂಟಗಳೆರಡಕ್ಕೂ ಅನುಕೂಲಿಸುವ ಪ್ರಸಂಗಗಳು ಇವೆ. (ಕರ್ಣಪರ್ವ, ಕೃಷ್ಣಾರ್ಜುನ, ಅತಿಕಾಯ, ರಾವಣವಧೆ) ಕೃಷ್ಣ ಸಂಧಾನ, ಅಂಗದ ಸಂಧಾನ ಮುಂತಾದುವು ಆಟಗಳಲ್ಲಿ ಪ್ರಯೋಗಗೊಂಡಿದ್ದರೂ ಅವು ಮುಖ್ಯವಾಗಿ ತಾಳಮದ್ದಳೆಯ ಪ್ರಸಂಗಗಳು. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ 'ಭೀಷ್ಮಾರ್ಜುನಕಾಳಗ' ವಂತೂ, ತಾಳಮದ್ದಳೆಯ ರಂಗವನ್ನೇ ದೃಷ್ಟಿಯಲ್ಲಿರಿಸಿ ಬರೆದ ಪ್ರಸಂಗವಾಗಿ ತೋರುವುದು. ತಾಳಮದ್ದಳೆಗೆಂದಿರುವ ಪ್ರಸಂಗವು ರಂಗಸ್ಥಳದ ಆಟದಲ್ಲಿ ನಾವು ನಿರೀಕ್ಷಿಸುವ ಅಂಶಗಳನ್ನೆಲ್ಲ ಪೂರೈಸಬೇಕಾಗಿಲ್ಲ. ದೃಶ್ಯಗಳ ವ್ಯವಸ್ಥಿತ ಪರಂಪರೆ, ಪಾತ್ರವೈವಿಧ್ಯ, ನಾಟಕೀಯ ಘಟನಾವಳಿಗಳೂ ಆಟದಂತೆ ಕೂಟದಲ್ಲಿ ಬೇಕಿಲ್ಲ ಅನ್ನಬಹುದು. ಹೀಗಾಗಿ ತಾಳಮದ್ದಳೆಗಾಗಿಯೇ ಬರೆಯುವ ಪ್ರಸಂಗದ ರಚನೆ ಸುಲಭ ಆದರೂ ಅನಿಸಬಹುದು. ಮಾತುಗಾರಿಕೆಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸುವ ರೀತಿಯ ರಚನೆ ಅದಾಗಬೇಕು. ಆದರೂ ತಾಳಮದ್ದಳೆಯೂ ರಂಗಭೂಮಿಯ ಒಂದು ಪ್ರಕಾರವಾದುದರಿಂದ, ಕೆಲವು ಅಂಶಗಳಲ್ಲಿ ಆಟ, ತಾಳಮದ್ದಳೆಗಳಿಗೆ ಬಳಸುವ ಪ್ರಸಂಗಗಳಲ್ಲಿ ಸಮಾನತೆ ಇದ್ದೇ ಇರಬೇಕು.

ಈ ಸಂದರ್ಭದಲ್ಲಿ ತುಂಬ ಉದ್ಯೋಧಕವಾದ ಒಂದು ಉದಾಹರಣೆ ಯನ್ನು ಗಮನಿಸಬಹುದು. ದೇವಿದಾಸನ ಕೃಷ್ಣ ಸಂಧಾನ (ಭೀಷ್ಮಪರ್ವ ಸಹಿತ) ಪ್ರಸಂಗದಲ್ಲಿ ಕೃಷ್ಣ ಸಂಧಾನವು ತಾಳಮದ್ದಳೆಯಲ್ಲಿ ಅತ್ಯಂತ ಪ್ರಸಿದ್ಧವಾಗಿರುವಂತಹದು. ಭೀಷ್ಮಪರ್ವ ಆಟದ ರಂಗಸ್ಥಳದಲ್ಲಿ ಜನಪ್ರಿಯ ಕವಿಯು ಇಲ್ಲಿ ಒಂದೇ ಪ್ರಸಂಗದಲ್ಲಿ ಆಟಕ್ಕಾಗುವ ಭಾಗ ಮತ್ತು ಕೂಟಕ್ಕಾಗುವ ಭಾಗಗಳನ್ನು ಅಳವಡಿಸಿ ಎರಡು ಮಾದರಿಗಳನ್ನು ತೋರಿಸುವ ಮತ್ತು ಅವುಗಳೊಳಗಿನ