ಪುಟ:Mahakhshatriya.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಹುಷನೇ ಎದ್ದು ಕೈಮುಗಿದು ಕೇಳಿದನು ; “ಭಗವಾನ್, ಪುರೂರವನು ನಮ್ಮ ಪಿತಾಮಹನು. ಧರ್ಮಕಥಾಸಂದರ್ಭದಲ್ಲಿ ಬಂದಿರುವ ಚರಿತ್ರೆಯನ್ನು ಕೃಪೆಮಾಡಿ ನಿರೂಪಿಸಬೇಕು.”

ಆಗಲಿ, ನಿಮಗೆಲ್ಲಾ ತಿಳಿದ ಕಥೆಯೆಂದು ನಾವು ಸಂಕ್ಷೇಪವಾಗಿ ಹೇಳುವೆವು. ಪುರೂರವ ಚಕ್ರವರ್ತಿಯು ಒಬ್ಬರ ಕರ್ಮಾಚರಣದಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಲೋಕವ್ಯವಸ್ಥೆಯನ್ನು ಕಾಪಾಡಿದ ಮಹಾನುಭಾವನು. ಬಲಿಷ್ಠನಾದ ರಾಜನಿಲ್ಲದಿದ್ದರೆ ಮತ್ಸ್ಯಗಳಂತೆ ಮನುಷ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವರು. ಹಾಗಾಗದೆ ಎಲ್ಲರೂ ತಮ್ಮ ತಮ್ಮ ಇತಿಮಿತಿಗಳನ್ನು ಅರಿತು ನಡೆಯುವಂತೆ ಮಾಡುವುದಕ್ಕೇ ರಾಜನಿರುವುದು. ಅದೇ ರಾಜಧರ್ಮವು. ಅಂತಹ ರಾಜಧರ್ಮವನ್ನು ಚೆನ್ನಾಗಿ ಪಾಲಿಸಿದನೆಂದು ಆತನಿಗೆ ಲೋಕಾಂತರಾಗಮನ ಸಾಮಥರ್ಯ್‌ವು ಲಭಿಸಿತು.

ಒಂದು ದಿನ ಆತನು ಇಂದ್ರಲೋಕಕ್ಕೆ ಹೋದನು. ಅಲ್ಲಿ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮಗಳು ದರ್ಶನ ಕೊಟ್ಟವು. ಧರ್ಮಪರನಾದ ರಾಜನು ಅಣ್ಣನಾದ ಧರ್ಮನಿಗೆ ಸಲ್ಲಿಸಿದ ಪೂಜೆಯಿಂದ ಕಿರಿಯರು ತೃಪ್ತರಾಗುವರೆಂದು ಧರ್ಮವನ್ನು ಮಾತ್ರ ಆರಾಧಿಸಿದನು. ಅದರಿಂದ ಕಾಮಾರ್ಥಗಳು ‘ಮೂವರಿಗೂ ಪೂಜೆಯು ಸಲ್ಲಬೇಕು. ಅಥವಾ ಉಳಿದವರ ಅನುಮತಿಯಿಂದ ಜ್ಯೇಷ್ಠನಿಗೆ ಪೂಜೆಯಾಗಬೇಕು’ ಎನ್ನುವ ಮರ್ಯಾದೆಯನ್ನು ಆತನು ಗಮನಿಸಲಿಲ್ಲವೆಂದು ಕೋಪಗೊಂಡು ಶಾಪವನ್ನು ಕೊಟ್ಟರು. ಆತನು ಕಾಮಶಾಪದಿಂದ ವಿರಹದಿಂದ ಕಂದಿ, ಅರ್ಥಶಾಪದಿಂದ ಲೋಭದಿಂದ ಕಂಗೆಟ್ಟು ಒದ್ದಾಡಿದ ಕಥೆಯನ್ನು ನೀವೆಲ್ಲ ಬಲ್ಲಿರಿ.

ಅದರಂತೆ ಮರ್ಯಾದೆಯನ್ನು ಮೀರದೆ, ಪ್ರೇಯಸ್ಸಿಗೆ ಲೋಪ ಬರದಂತೆ ಶ್ರೇಯಸ್ಸನ್ನು ಆರಾಧಿಸುತ್ತ ವ್ಯವಹಾರದಲ್ಲಿ ತನ್ನ ಮತ್ತು ಇತರರ ಯೋಗಕ್ಷೇಮಗಳನ್ನು ನಿರ್ವಹಿಸುವುದೇ ಧರ್ಮವು ; ಅದೆ ಸತ್ಯದರ್ಶನದ ಸಾಧನವು.”

ಭಗವಾನರ ವಚನವನ್ನು ಕೇಳಿ ಎಲ್ಲರೂ ಸಂತುಷ್ಟರಾದರು. ಸಭೆಯು ಅವರಿಗೆ ಸಲ್ಲಬೇಕಾದ ಸಮರ್ಚನೆಯನ್ನು ಸಾಂಗವಾಗಿ ಸಲ್ಲಿಸಿ ಕೃತಾರ್ಥವಾಯಿತು.

* * * *