ಪುಟ:Mahakhshatriya.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦.ಹಾಗಾದರೆ ಸ್ವತಂತ್ರರು ಯಾರು?

`ಶಚಿದೇವಿಯು ತನ್ನ ಅರಮನೆಗೆ ಹಿಂತಿರುಗುವ ವೇಳೆಗೆ ಬೃಹಸ್ಪತಿಯು ಬಂದು ಕಾದಿದ್ದನು. ಶಚಿಯು ಆತನು ಬಂದಿರುವನೆಂದು ಅರಿತು ಆತನನ್ನು ಕಾಣಲು ಅವಸರವಸರವಾಗಿ ಹೋದಳು. ಆಕೆಯ ಪ್ರಸನ್ನವಾದ ಮುಖ, ಆಕೆಯ ನಡೆ, ಆಕೆಯ ಸಂತೋಷಗಳೇ ಆಕೆಯು ಗೆದ್ದು ಬಂದಿರುವಳು ಎಂಬುದನ್ನು ಹೇಳುತ್ತಿರಲು, ಗುರುವು ಆಕೆಯನ್ನು ಕೇಳಿದನು : “ಹೋದ ಕೆಲಸವೇನಾಯಿತು?”

`ಆಕೆಯು ಗುರುವಿಗೆ ವಂದನೆ ಮಾಡಿ ಹೇಳಿದಳು : “ನಾನು ಗೆಲುವು ಇಷ್ಟು ಸುಲಭವಾಗಿ ದೊರೆಯುವುದೆಂದುಕೊಂಡಿರಲಿಲ್ಲ. ಅಂತೂ ಸದ್ಯದಲ್ಲಿ ಬದುಕಿದೆ ಎಂದು ಸ್ತ್ರೀಸಹಜವಾದ ಮಾನಾಭಿಮಾನದಿಂದ ಹೇಳಿದಳು.

`ಆಚಾರ್ಯನಿಗೂ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ “ಏನೇನು ನಡೆಯಿತು, ಹೇಳು” ಎಂದನು. ಆಕೆಗೂ ವಿವರಗಳನ್ನೆಲ್ಲ ಯಾರೊಡನೆಯಾದರೂ ಹೇಳಿಕೊಳ್ಳಬೇಕೆಂಬ ಆತುರವಿತ್ತು. ಹೇಳಿದಳು : “ನಾನೂ ಸಾಮಾನ್ಯಳಂತೆ ಪಲ್ಲಕ್ಕಿಯಲ್ಲಿ ಹೋದೆ. ದರ್ಶನಮಂದಿರದಲ್ಲಿ ರಾಜದಂಪತಿಗಳಿಬ್ಬರೂ ಇದ್ದರು. ನಾನು ವಿರಜಾದೇವಿಯೆಂದು ಕೇಳಿದ್ದೇ ಅಷ್ಟೇ, ನೋಡಿರಲಿಲ್ಲ. ಆಕೆ ನಿಜವಾಗಿಯೂ ಪುಣ್ಯವಂತೆ. ನನಗೆ ಆ ‘ರಾಜಪುಂಗವನೆಂಬ ಆ ಮದ್ದಾನೆಯನ್ನು ಹಿಡಿಯುವುದೆಂತು? ಎಂದು ಮನಸ್ಸು ಬಹಳ ಕಾತರಗೊಂಡಿತ್ತು. ಆದರೆ, ಮಗ್ಗುಲಲ್ಲಿದ್ದ ವಿರಜಾದೇವಿಯನ್ನು ಕಂಡು ‘ಚಿಂತೆಯಿಲ್ಲ. ಮದ್ದಾನೆಯನ್ನು ಬಗ್ಗಿಸುವ ಅಂಕುಶವಿದೆ” ಎಂದುಕೊಂಡೆ. ಹೋಗುತ್ತಿದ್ದ ಹಾಗೆಯೇ, ವಿರಜಾದೇವಿಯು ಆಲಿಂಗನದಿಂದ ಗೌರವಿಸಿ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡಳು. ನಾನು ‘ದೇವೇಂದ್ರನಿಗೆ ಜಯವಾಗಲಿ !’ ಎಂದು ಗಂಡನಿಗೆ ಹರಕೆ ಹೊತ್ತೆ. ಆ ಹರಕೆಯು ಎಲ್ಲವನ್ನೂ ಸುಲಭ ಮಾಡಿತು.”

`“ಹಾಗಾದರೆ, ನೀನು ಆತನಲ್ಲಿಯೂ ಇಂದ್ರಪತ್ನಿಯೆಂದೇ ಸಾಧಿಸಿ ಬಂದೆ?”

`“ಇರುವುದನ್ನು ಹೇಳಿಕೊಳ್ಳುವುದಕ್ಕೆ ನಾಚಿಕೆಯೇನು? ಹಾಗೆಂದು ನಾನು ದೇವಸಭೆಗೂ ಅವಮರ್ಯಾದೆ ಮಾಡಲಿಲ್ಲ. ದೇವಸಭೆಯು ಶಚಿಯು ಇಂದ್ರನನ್ನು