ಪುಟ:Mahakhshatriya.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಶ್ವರೂಪನು ನಕ್ಕನು : “ವಿರೂಪಾಕ್ಷ ಇಲ್ಲಿ ನೀನು ತಪ್ಪಿದೆ. ಎಷ್ಟಾಗಲಿ ನಮ್ಮ ತಾಯಿ ಅಸುರವರ್ಗದವಳು. ಅವರ ಮೇಲೆ ನನಗೆ ಅಭಿಮಾನವಿಲ್ಲವೆಂದು ಕೊಂಡೆಯಾ ? ಅದರಿಂದ, ಅಸುರ ಪ್ರತಿನಿಧಿಯಾದ ನೀನು ನನ್ನನ್ನು ಏನು ಬೇಕಾದರೂ ಕೇಳು. ಅಷ್ಟೇನು ? ನೀನಲ್ಲ, ಅಸುರಪಕ್ಷದವರು ಯಾರೇ ಆದರೂ ನನ್ನಲ್ಲಿಗೆ ಬಂದು ಏನು ಕೇಳಿದರೂ ಮುಚ್ಚುಮರೆಯಿಲ್ಲದೆ ಹೇಳುವೆನು. ಹಾಗೆಂದು ದೇವಲೋಕದ ಮೇಲೆ ಮಾತ್ರ ದಾಳಿಯಿಡಬಾರದು. ಅದಿರಲಿ. ಈಗ ನಾನು ಕೊಟ್ಟಿರುವ ರಕ್ಷೆಯೇನೆಂದು ಕೇಳಿದೆಯಲ್ಲ ? ಮಹಾತ್ಮನಾದ ದಧೀಚಿಯನ್ನು ಕೇಳಿ ಬಲ್ಲಿರಲ್ಲಾ ? ಆತನು ತನ್ನ ತಪೆÇೕಬಲದಿಂದ ಮೈಯಲ್ಲಿರುವ ರಕ್ತಮಾಂಸಗಳೂ ವಜ್ರಗಳಾಗುವಂತೆ ಮಾಡಿಕೊಂಡಿರುವನು. ಆತನು ಶ್ರೀಮನ್ನಾರಾಯಣನಿಂದ ನೇರವಾಗಿ ಪಡೆದುಕೊಂಡಿರುವ ನಾರಾಯಣಕವಚವೆಂಬ ಮಂತ್ರ ಕವಚವುಂಟು. ಅದನ್ನು ಆತನು ರಹಸ್ಯವಾಗಿ ನಮ್ಮ ತಂದೆಯಾದ ತ್ವಷ್ಟೃಬ್ರಹ್ಮನಿಗೆ ಅನುಗ್ರಹಿಸಿದನು. ಆತನು ಅದನ್ನು ಶಿಷ್ಯನೂ ಪುತ್ರನೂ ಆದ ನನಗೆ ಅನುಗ್ರಹಿಸಿದನು. ಅದನ್ನು ನಾನು ಲೋಕರಕ್ಷಣಾರ್ಥವಾಗಿ ಇಂದ್ರನಿಗೆ ಕೊಟ್ಟಿರುವೆನು. ಆತನು ನನ್ನಲ್ಲಿ ಗುರುಭಾವವನ್ನು ಇಟ್ಟಿರುವವರೆಗೂ ಅದು ಆತನನ್ನು ಕಾಪಾಡುವುದು. ಅದರಿಂದ ನೀವು ಯಾರೂ ಆತನ ಕಡೆಯವರ ಮೇಲೆ ಬಿದ್ದು ವ್ಯರ್ಥವಾಗಿ ವಿನಾಶವನ್ನು ಪಡೆಯಬೇಡಿ. ಇದನ್ನು ಅಸುರ ಪ್ರಪಂಚಕ್ಕೆಲ್ಲ ತಿಳುಹಿಸು.”

ವಿರೂಪಾಕ್ಷನು ತಲೆದೂಗಿದನು. “ಅಲ್ಲಿಗೆ ದೇವತೇಜಸ್ಸು ಹಾನಿಯಾಗಿದ್ದುದು ಕೂಡಿಕೊಂಡಿತು. ಇನ್ನು ನಮ್ಮ ಕೈ ನಡೆಯುವುದಿಲ್ಲ. ಆಯಿತು, ಆದರೆ ನಾನು ಬಂದು, ಅಸುರರಿಗಾಗಿ ಏನೂ ಸಾಧಿಸದೆ ಹಿಂತಿರುಗಿದೆನೆಂಬುದು ಕೂಡದು. ಅದಕ್ಕಾಗಿ ಏನನ್ನಾದರೂ ಸಾಧಿಸಬೇಕು” ಎಂದು ಯೋಚನಾಪರನಾಗಿ ಹಾಗೆಯೇ ಕುಳಿತುಕೊಂಡನು. ಅವನು ಹಾಗೆ ವಿಷಣ್ಣನಾಗಿ ಕುಳಿತುದನ್ನು ನೋಡುವುದು ವಿಶ್ವರೂಪಾಚಾರ್ಯನಿಂದ ಆಗಲಿಲ್ಲ. ಕೇಳಿದನು : “ಏಕೆ, ವಿರೂಪಾಕ್ಷ ಹಾಗೆ ಕುಳಿತುಬಿಟ್ಟೆ?”

ವಿರೂಪಾಕ್ಷ ಸಣ್ಣಗೆ ಎಳೆಯುವ ದನಿಯಲ್ಲಿ ಹೇಳಿದನು : ‘ಸರ್ವನಾಶವಾಯಿತು. ನಾವು ನಮ್ಮ ವಿಶ್ವರೂಪಾಚಾರ್ಯನು ಧರ್ಮಾಚಾರ್ಯನಾದನು, ಇನ್ನು ದೇವಲೋಕವು ನಮ್ಮದಾಯಿತು ! ದೇವತೆಗಳ ಐಶ್ವರ್ಯವೆಲ್ಲ ನಮ್ಮದಾಯಿತು! ಎಂದು ಆನಂದದಲ್ಲಿದ್ದೆವು. ಈಗ ನೀನು ಎಚ್ಚರಿಕೆ ಕೊಡುತ್ತಾ ಆ ಪ್ರಯತ್ನವನ್ನೇ ಬಿಟ್ಟುಬಿಡಿ ಎಂದು ಹೇಳುತ್ತಿರುವೆ. ಈ ಮಾತನ್ನು ಹೋಗಿ ನಾನು ಯಾವ ಮುಖದಿಂದ ಹೇಳಲಿ ಎಂದು ಯೋಚಿಸುತ್ತಿರುವೆನು.”