ಪುಟ:Mahakhshatriya.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪.ಬೀಜವು ಅಂಕುರಿಸಿತು

ವಿಶ್ವರೂಪಾಚಾರ್ಯನು ದೇವತೆಗಳ ಧರ್ಮಾಚಾರ್ಯನಾದನೆಂದು ಅಸುರ ಗಣವು ಹರ್ಷ ಪಟ್ಟಿತು. ‘ಇದುವರೆಗೂ ಕಂಡು ಕಾಣದ ಹಾಗೆ ಅಮರಾವತಿಗೆ ಹೋಗಿಬರುತ್ತಿದ್ದ ಅವರಿಗೆ ಇನ್ನು ಧೈರ್ಯವಾಗಿ ಯಾವ ಅಡ್ಡಿಯೂ ಇಲ್ಲದೆ ಅಮರಾವತಿಗೆ ಹೋಗಿ ಬರುವಂತಾಯಿತು’ ಎಂದು ಸಂತೋಷ. ಎಷ್ಟಾಗಲಿ ವಿಶ್ವರೂಪನು ಅಸುರಸ್ತ್ರೀಯ ಗರ್ಭದಲ್ಲಿ ಹುಟ್ಟಿದವನು. ಅಸುರಗಣವೆಲ್ಲ ಆತನಿಗೆ ಮಾತಾಮಹವರ್ಗ.

ಒಂದು ದಿನ ರಾತ್ರಿ ಅಸುರಗಣದವರ ಕಡೆಯಿಂದ ವಿರೂಪಾಕ್ಷನು ವಿಶ್ವರೂಪಾಚಾರ್ಯನನ್ನು ನೋಡಲು ಬಂದನು. ವಿಶ್ವರೂಪನು ಮಾತಾಮಹರ ಕಡೆಯಿಂದ ಬಂದವನೆಂದು ಅವನಿಗೆ ಆದರವನ್ನು ತೋರಿಸಿ “ಏನು” ? ಎಂದು ವಿಚಾರಿಸಿದನು.

ವಿರೂಪಾಕ್ಷನು ಹೇಳಿದನು : “ಅಸುರೀಪುತ್ರನಾದ ವಿಶ್ವರೂಪಾಚಾರ್ಯ, ನಾನು ಈ ಧರ್ಮಾಚಾರ್ಯಸ್ಥಾನವನ್ನು ಅಂಗೀಕರಿಸಿದೆನು. ಧರ್ಮಾಚಾರ್ಯನಾದುದರಿಂದ ದೇವಕುಲಕ್ಕೆ ರಕ್ಷೆಯನ್ನು ಕೊಡಬೇಕಾಯಿತು, ಕೊಟ್ಟಿದ್ದೇನೆ. ಅದೂ ವಿಫಲವಾಗದ ರಕ್ಷೆಯನ್ನು ಕೊಟ್ಟಿದ್ದೇನೆ. ಮಾತಾಮಹರು ನಿನ್ನನ್ನು ಕಳುಹಿಸಿದುದು ಒಳ್ಳೆಯದಾಯಿತು. ಇನ್ನು ಮೇಲೆ ಅವರು ದೇವತೆಗಳ ಮೇಲೆ ಕೈ ಮಾಡಬಾರದು. ಶುಕ್ರಾಚಾರ್ಯರಿಂದ ಅವರು ಯಾವ ರಕ್ಷಣೆಯನ್ನು ಪಡೆಯುವರೋ ಅದಷ್ಟು ಸಾಧ್ಯವಾದರೆ ಅದರ ಜೊತೆಗೆ ಇನ್ನಷ್ಟು ರಕ್ಷಣೆಯು ದೆವಕುಲಕ್ಕೆ ಇನ್ನು ಮೇಲೆ ಉಂಟು ಎಂಬುದನ್ನು ನಮ್ಮ ಮಾತಾಮಹವರ್ಗವು ತಿಳಿದು, ಲೋಕರಕ್ಷಣವು ನಿಷ್ಕಂಟಕವಾಗುವಂತೆ ನಡೆದುಕೊಳ್ಳತಕ್ಕದ್ದೆಂದು ಹೇಳು.”

ವಿರೂಪಾಕ್ಷನು ಕೇಳಿದನು : “ಹಾಗಾದರೆ ನಮ್ಮ ಆಶೋತ್ತರಗಳೆಲ್ಲ ಮಣ್ಣುಗೂಡಿದವು ಎನ್ನಬೇಕು ?”

“ನಾನು ಧರ್ಮಾಚಾರ್ಯನಾಗಿರುವವರೆಗೂ ದೇವತೆಗಳ ತೇಜಸ್ಸು ಕಡಿಮೆಯಾಗದಂತೆ ಮಾಡಿರುವೆನು?”

“ಏನು ಮಾಡಿದೆಯೆಂದು ಕೇಳಬಹುದೆ?”