ಪುಟ:Mahakhshatriya.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಂದು ಕೋರಿಕೆ ಮಾಡಿದನು. ಅರಸನು ನಕ್ಕು “ಮಂಗಳವು ತಾನೇತಾನಾಗಿದೆ. ಅಮಂಗಲವು ಸಂಭವಿಸಿದರೂ, ಈ ಮಂಗಳ ಸಮುದ್ರದಲ್ಲಿ ಅದು ನೀರಿನಲ್ಲಿ ಬಿದ್ದ ಉಪ್ಪಿನ ಬೊಂಬೆಯಾಗುವುದು ಅಲ್ಲವೇ?” ಎಂದು ಮತ್ತೆ ನಗುತ್ತಾನೆ.

ಆ ನಗುವು ಆ ಮಾತನ್ನೇ ಮರೆಸಿ ಬೇರೆ ಪ್ರಸಂಗಕ್ಕೆ ಹಾದಿಮಾಡಿಕೊಡುತ್ತದೆ.

ಶಚಿಯು ಪತಿಯ ಮುಖವನ್ನು ನೋಡಿದಳು. ಆತನು ಅರ್ಥಮಾಡಿಕೊಂಡು ಸುರಗುರುವಿನ ಮುಖವನ್ನು ನೋಡಿದನು. ಆತನು ಪ್ರಕಟವಾಗಿ “ಶಚೀಂದ್ರರು ಸನ್ನಿಧಾನದಲ್ಲಿ ಏನೋ ವಿಜ್ಞಾಪಿಸಬೇಕೆಂದಿರುವಂತೆ ಕಾಣುತ್ತದೆ.” ಎಂದನು. ಅರಸನು ನಗುತ್ತಾ “ಅಂದೇ ಹೇಳಿದ್ದೆನಲ್ಲ ; ಅವರು ನಿತ್ಯರು, ನಾವು ನೈಮಿತ್ತಿಕರು. ಅಲ್ಲದೆ, ನಿತ್ಯಕ್ಕೆ ನೈಮಿತ್ತಿಕ ಬಾಧೆ ತಪ್ಪಿ ಆಗಲೇ ಒಂದು ವಾರವಾಯಿತು. ಅವರು ಮಾಡಬೇಕಾದುದು ವಿಜ್ಞಾಪನೆಯಲ್ಲ. ಆಜ್ಞೆ’ ಎಂದನು.

ಶಚಿಯು ಇಂದ್ರನನ್ನು ನೋಡಿ ಆತನ ಅಭಿಮತವನ್ನು ಪಡೆದು ಕೈಮುಗಿದು ಹೇಳಿದಳು : “ದೇವ ತಾವು ಸಪತ್ನೀಕರಾಗಿ ತಪೆÇೕಲೋಕಕ್ಕೆ ಹೋಗಿ ವಾನಪ್ರಸ್ಥವನ್ನು ಅವಲಂಬಿಸಬೇಕೆಂದಿದ್ದರೆ ಅದು ತಮ್ಮ ಸ್ವೇಚ್ಛೆ. ಹಾಗೆಯೇ ಪರೇಚ್ಛೆಯನ್ನೂ ಗೌರವಿಸಿ, ತಾವಿಬ್ಬರು ದಿವ್ಯದೇಹವನ್ನು ಧರಿಸಿಕೊಂಡು, ಇಲ್ಲಿ ನಾವಿರುವವರೆಗು ಇಂದ್ರಸಖರಾಗಿ ಇರಬೇಕೆಂದು ನಮ್ಮ ಪ್ರಾರ್ಥನೆ. ಅದನ್ನು ಸ್ತ್ರೀಮುಖದಿಂದ ತಮ್ಮ ಸನ್ನಿಧಾನದಲ್ಲಿಟ್ಟರೆ ತಪ್ಪದೆ ವರವಾಗಿ ತಮ್ಮ ಅನುಗ್ರಹವು ಲಭಿಸಿಯೇ ಲಭಿಸುವುದೆಂದು ಹೀಗೆ ಮಾಡಿದೆ. ವರವು ನಮಗೆ ಲಭಿಸಬೇಕು.”

“ಏನು ವಿರಜಾದೇವಿಯವರೆ, ನಾವು ಬೇಡವೆಂದರೂ ಭೋಗಲಕ್ಷ್ಮಿಯು ನಮ್ಮನ್ನು ಬಿಡುವಂತಿಲ್ಲ. ಓಹೋ ! ತಮಗು ಸಮ್ಮತವಾದಂತಿದೆ. ಹುಂ ಆಗಲಿ, ದೇವರಾಜನ ಆಜ್ಞೆಯು ಸರ್ವರಿಗೂ ಶಿರೋಧಾರ್ಯವಾಗಿರಲು, ನಾವೇಕೆ ಅದನ್ನು ಅಗೌರವಿಸಬೇಕು ?”

ಶಚೀಂದ್ರರು ಆ ವರವನ್ನು ಅಂಗೀಕರಿಸಿ ಅಗ್ನಿಯ ಮುಖವನ್ನು ನೋಡಿದರು. ಆತನು ಎದ್ದುಹೋಗಿ ಹರಿವಾಣಗಳನ್ನು ತೆಗೆಸಿಕೊಂಡು ಬಂದನು. ಐದು ಹರಿವಾಣಗಳ ತುಂಬಾ ರತ್ನಭೂಷಣಗಳು, ವಸನಗಳು, ಗಂಧಮಾಲ್ಯಗಳು, ಅವೆಲ್ಲವನ್ನು ಶಚೀಂದ್ರರು ವಿರಜಾ-ನಹುಷರಿಗೆ ಕಾಣಿಕೆ ಮಾಡಿದರು. ಆತನು ನಗುತ್ತಾ, `ನಾಳೆ ನಮ್ಮ ಕಾಣಿಕೆ ಇಂದು ನಿಮ್ಮ ಕಾಣಿಕೆ’ ಎಂದು ಒಪ್ಪಿಕೊಂಡು ಅದೆಲ್ಲವನ್ನೂ ಮಗನಿಗೆ ಕೊಟ್ಟು “ಯಯಾತಿ, ಇದಿಷ್ಟೂ ನಿನಗೆ ಆಶೀರ್ವಾದಗಳು ಎಚ್ಚರವಿರಲಿ. ಇದಿಷ್ಟೂ ಧರ್ಮಾಚರಣೆ ಫಲ. ಮನುಷ್ಯರಿಗೆ ದಾನಕ್ಕಿಂತ