ಪುಟ:Mahakhshatriya.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭.ರೇವು ಸಿಕ್ಕಿತು

ಇಂದ್ರಾಣಿಯು ತನ್ನ ದೇವಮಂದಿರದಲ್ಲಿ ಕುಳಿತು ದೇವದೂತನಾದ ಯಜ್ಞೇಶ್ವರನನ್ನು ನಿರೀಕ್ಷಿಸುತ್ತಿದ್ದಾಳೆ. ಸುವರ್ಣಮಯವಾದ ಆಸನದಲ್ಲಿ ಕುಳಿತು ತಾನೂ ಒಂದು ಅರಿಶಿನ ಮುದ್ದೆಯೋ ಎಂಬಂತೆ, ಪೀತಾಂಬರವನ್ನುಟ್ಟು ಹೇಮಮಯವಾದ ವಿಭೂಷಣಗಳನ್ನಿಟ್ಟು ತನ್ನ ಇಂದ್ರಾಣಿ ಪದ-ಸೂಚಕವಾದ ಪದಕವನ್ನೂ ಕಿರೀಟವನ್ನೂ ಮಾತ್ರ ಧರಿಸಿ, ಅಲ್ಪಾಭರಣ ಸುಂದರಿ ಯಾಗಿದ್ದಾಳೆ. ಪ್ರಹರಿಯು ಬಂದು ಯಜ್ಞೇಶ್ವರನ ಆಗಮನವನ್ನೂ ಸೂಚಿಸಿದಳು. ಇಂದ್ರಾಣಿಯು ಯಜ್ಞೇಶ್ವರನನ್ನು ಬರಮಾಡಿಕೊಂಡಳು. ಸಮಯೋಚಿತವಾಗಿ ಎರಡು ಮಾತನಾಡಿ ಬೃಹಸ್ಪತ್ಯಾಚಾರ್ಯನ ವಿಷಯವನ್ನು ಕೇಳಿದಳು. ಯಜ್ಞೇಶ್ವರನು “ಆತನು ಈಗ ಬ್ರಹ್ಮಲೋಕದಲ್ಲಿರುವನು. ಬೇಕೆಂದರೆ ಅಲ್ಲಿಗೆ ಹೋಗಿ ಆತನನ್ನು ನೋಡಿಕೊಂಡು ಬರಬಹುದು” ಎಂದನು.

ಇಂದ್ರಾಣಿಗೆ ಏನೋ ಭಾರವಿಳಿದಂತಾಯಿತು. ಯಜ್ಞೇಶ್ವರನನ್ನು ಕೇಳಿದಳು- “ನಾನು ಆತನನ್ನು ನೋಡಬೇಕಲ್ಲ.”

“ದೇವರಾಜ್ಞಿ, ನೀನಲ್ಲದೆ ಇನ್ನು ಯಾರು ಬೇಕಾದರೂ ಆತನನ್ನು ನೋಡಬಹುದು.”

“ಹಾಗೆಂದರೆ ?”

“ಹೌದು. ನಿಜ ದೇವರಾಜ್ಞಿಯು ದೇವರಾಜನ ಅಪ್ಪಣೆಯಿಲ್ಲದೆ ಈ ಲೋಕವನ್ನು ಬಿಟ್ಟುಹೋಗುವಂತಿಲ್ಲ. ಆತನು ತಾನಾಗಿ ಈ ದೇವಲೋಕವನ್ನು ಬಿಟ್ಟು ಹೋಗಿರುವನಾಗಿ ಮತ್ತೆ ದೇವೇಂದ್ರನ ಅಪ್ಪಣೆಯಿಲ್ಲದೆ ಈ ಲೋಕಕ್ಕೆ ಬರುವಂತಿಲ್ಲ. ಅದರಿಂದ ನೀವಿಬ್ಬರೂ ಒಬ್ಬರನ್ನೊಬ್ಬರು ನೋಡುವುದು ಅಸಾಧ್ಯ.”

“ನೋಡಲೇ ಬೇಕಾಗಿದ್ದರೆ ಏನು ಮಾಡಬೇಕು ಅದನ್ನು ಹೇಳು.”

“ದೇವರಾಜನ ಅಪ್ಪಣೆಯನ್ನು ಪಡೆದರೆ, ನೀನಾದರೂ ಅಲ್ಲಿಗೆ ಹೋಗಬಹುದು. ಅಥವಾ ಆತನಾದರೂ ಇಲ್ಲಿಗೆ ಬರಬಹುದು. ಆದರೆ ಎರಡೂ ಅನರ್ಥಕಾರಿಗಳು.”

“ಅದೇನು ಹಾಗೆನ್ನುವೆ ಯಜ್ಞೇಶ್ವರ ?”