ಪುಟ:Mahakhshatriya.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂದ್ರನ ಅರಮನೆಯನ್ನು ನುಗ್ಗಿದ್ದಾನೆ. ಇಂದ್ರನು ಶಾಂತವೇಷದಿಂದ ಬಂದಿರುವುದನ್ನು ಕೇಳಿ ಅವನಿಗೂ ಆಶ್ಚರ್ಯವಾಯಿತು. ಬರಮಾಡಿಕೊಂಡನು.

ಇಂದ್ರನು ಬಹುದಿನದ ಮಿತ್ರನನ್ನು ಸಂಧಿಸುವಂತೆ ಸಂಧಿಸಿ, ಕೈಮುಗಿದು “ನಿನ್ನ ಪರಾಕ್ರಮವನ್ನು ಕೇಳಿದ್ದೆ. ಇಂದು ಅದರ ಪರಿಚಯವಾಯಿತು. ನಿನ್ನಂತಹ ಪರಾಕ್ರಮಿಯು ಇದುವರೆಗೆ ಇರಲಿಲ್ಲ. ಮುಂದಾಗುವುದಿಲ್ಲ. ಅದರಿಂದ ನಿನಗೆ ನಾನಾಗಿ ನನ್ನ ಇಂದ್ರತ್ವವನ್ನು ಕೊಡಲು ಬಂದಿದ್ದೇನೆ, ಸ್ವೀಕರಿಸಬೇಕು” ಎಂದು ವಿನಯದಿಂದ ಪ್ರಾರ್ಥಿಸಿದನು. ಆ ವಿನಯವು ಯಾರನ್ನೂ ಬೇಕಾದರೂ ಒಲಿಸಿಕೊಳ್ಳುವಂಥದಾಗಿತ್ತು.

“ನಿಯಮಗಳೇನು ?”

“ನಿಯಮವೇನೂ ಇಲ್ಲ. ಯುದ್ಧವು ಬೇಕಾಗಿಲ್ಲ, ಲೋಕಪಾಲಕರೆಲ್ಲರೂ ನಿನ್ನ ಆಜ್ಞಾನುವರ್ತಿಗಳಾಗುವರು. ತ್ರೈಲೋಕ್ಯಾಧಿಪತ್ಯವು ನಿನ್ನದಾಗುವುದು.”

“ನೀನೇನಾಗಿರುವೆ ?”

“ನಾನು ಶಚೀಪತಿಯಾಗಿ ಆಕೆಯ ಅರಮನೆಯಲ್ಲಿರುವೆನು. ನನ್ನನ್ನೂ ಪ್ರಧಾನ ದೇವತೆಗಳನ್ನೂ ಭೃತ್ಯರನ್ನಾಗಿ ಉಪಯೋಗಿಸಬೇಡ. ನಿನಗೆ ಸಮ್ಮತವಾಗಿದ್ದರೆ, ಇಂದ್ರನಾದ ನೀನು ಇಂದ್ರನಾಗಿದ್ದ ನನ್ನನ್ನು ಮಿತ್ರನಂತೆ ನಡೆಸಿಕೋ.”

“ನೀನು ಮಿತ್ರದ್ರೋಹವನ್ನು ಮಾಡುವುದಿಲ್ಲ ಎಂಬುದಕ್ಕೆ ಸಾಕ್ಷಿಯೇನು?”

“ಸಾಕ್ಷಿಯಾಗಿ ದೇವತಾರಹಸ್ಯವೊಂದನ್ನು ಹೇಳುವೆನು ಕೇಳು. ಇಂದ್ರ ಎಂಬುದು ಒಂದು ಅಧಿಕಾರದ ಹೆಸರು. ಅದು ಮೂರು ಲೋಕಗಳಲ್ಲಿ ಅವರವರು ತಮ್ಮ ತಮ್ಮ ಧರ್ಮದಲ್ಲಿರುವಂತೆ ನೋಡಿಕೊಳ್ಳಲು ಏರ್ಪಟ್ಟದ್ದು. ಇದನ್ನು ನೀನು ಪಾಲಿಸು. ಅವರವರ ಧರ್ಮದಿಂದ ಅವರವರಿಗೆ ಲಭಿಸುವ ಪುಣ್ಯದ ಭಾಗವನ್ನು ನೀನು ಸಂಗ್ರಹಿಸಿಕೊ. ಆಗ ಮರದಿಂದ ಹಣ್ಣನ್ನು ಮಾತ್ರ ತೆಗೆದುಕೊಂಡು ಸ್ವಾಮಿಯಂತೆ ನೀನು ಅಭಿವೃದ್ಧನಾಗುವೆ. ಅದಿಲ್ಲವೆ, ನಿನಗೆ ತೋರಿದ ಧರ್ಮವನ್ನು ಇತರರ ಮೇಲೆ ಹೇರಿದರೆ, ಮರಗಳನ್ನು ಕಡಿದು ಒಲೆಗೆ ಒಟ್ಟಿದವನಂತಾಗುವೆ.”

ಶಚೀಪತಿಯು ಹೇಳಿದುದು ವೃತ್ರನಿಗೆ ಹಿಡಿಯಿತು. “ಆಗಲಿ, ನಿನ್ನ ಕಾಲದಲ್ಲಿ ಪ್ರಧಾನರಾಗಿದ್ದವರನ್ನು ಯಾರನ್ನೂ ಭೃತ್ಯರನ್ನಾಗಿ ಉಪಯೋಗಿಸುವುದಿಲ್ಲ. ನಿನ್ನನ್ನು ಮಿತ್ರನಂತೆ ನಡೆಸಿಕೊಳ್ಳುವೆನು. ಮಿಕ್ಕದೇವತೆಗಳು ಎಲ್ಲಿರುವರು ?”

“ನಿನಗೆ ಸಮ್ಮತವಾದರೆ, ಅವರೆಲ್ಲ ಅಮರಾವತಿಯಲ್ಲಿರುವರು. ಇಲ್ಲದಿದ್ದರೆ, ಅವರು ತಮಗೆ ತೋರಿದೆಡೆ ಇರುವರು.”