ಮುಕ್ತಿಯ ತೊಳಲಿ ಪಡೆವೆನೆಂದು

ವಿಕಿಸೋರ್ಸ್ದಿಂದ



Pages   (key to Page Status)   


ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು ಸಕಲ ತೀರ್ಥಕ್ಷೇತ್ರಂಗಳಿಗೆಡೆಯಾಡಿ ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೊ ? ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಬತ್ತೆಂಟುಕೋಟಿ ಕ್ಷೇತ್ರಂಗಳಿರ್ಪವು. ಆತನ ಬಚ್ಚಲಲ್ಲಿ ಅರವತ್ತಾರು ಕೋಟಿ ತೀರ್ಥಂಗಳಿರ್ಪವು. ಆತನ ಕಾಯವೇ ಕೈಲಾಸ. ಆತನಂಗದಮೇಲಿರ್ಪ ಲಿಂಗವೇ ಅನಾದಿಪರಶಿವನು. ಇದು ಕಾರಣ
ಅಂತಪ್ಪ ಸದ್‍ಭಕ್ತನ ಗೃಹಮಂ ಪೊಕ್ಕು
ಆತನ ದರ್ಶನ ಸ್ಪರ್ಶನವಾದಾತಂಗೆ ಅನಂತಕೋಟಿ ಭವಪಾತಕಂಗಳು ಪರಿಹಾರವಪ್ಪವು ನೋಡಾ ! ಆತನ ಒಕ್ಕುಮಿಕ್ಕುದ ಕೊಂಡಾತಂಗೆ ಮುಂದೆ ಮುಕ್ತಿಯಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.