ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಿ ಆದಿಲ್ ಷಾ II

ವಿಕಿಸೋರ್ಸ್ದಿಂದ

ಬಿಜಾಪುರದ 8ನೆಯ ಸುಲ್ತಾನ (1656-72). ಮಹಮ್ಮದನ ಮಗ. ತಂದೆಯ ಮರಣಾನಂತರ ಈತ ಕೇವಲ 18 ವರ್ಷದವನಾಗಿದ್ದಾಗ ಪಟ್ಟಕ್ಕೆ ಬಂದ. ಈ ಸಂದರ್ಭದ ಲಾಭ ಪಡೆಯಲು ದಖನ್ನಿನಲ್ಲಿ ವೈಸ್ರಾಯಿಯಾಗಿದ್ದ ಔರಂಗ್‌ಜೇಬ್ ಬಿಜಾಪುರ ರಾಜ್ಯದ ಮೇಲೆ ದಂಡೆತ್ತಿ ಬಂದ. ಪೆರೆಂಡ ಕೋಟೆ ಮತ್ತು ಆದರ ಸುತ್ತಮುತ್ತಣ ಪ್ರದೇಶಗಳನ್ನೂ ಅನಂತರ ಕಲ್ಯಾಣಿ ಮತ್ತು ಬಿದರೆಯನ್ನೂ ಮುತ್ತಿ ಗೆದ್ದುಕೊಂಡ. ಬಿಜಾಪುರಕ್ಕೆ ನುಗ್ಗಿ ಅಲಿಯನ್ನು ಸೋಲಿಸಿದ. ಅಲಿ ಒಪ್ಪಂದಕ್ಕೆ ಒಡಂಬಟ್ಟು ಔರಂಗ್‌ಜೇಬ್ ಗೆದ್ದುಕೊಂಡಿದ್ದ ಬಿದರೆ, ಕಲ್ಯಾಣಿ ಮತ್ತು ಪೆರೆಂಡವನ್ನು ಮುಘಲರಿಗೆ ಬಿಟ್ಟುಕೊಟ್ಟ (1657).


ಈ ಮಧ್ಯದಲ್ಲಿ ಶಿವಾಜಿ ಬಿಜಾಪುರಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ಹಿಡಿದಿದ್ದರಿಂದ ಅಲಿ ಶಿವಾಜಿಯ ವಿರುದ್ಧ ಅಫಜಲಖಾನನನ್ನು ಕಳುಹಿಸಿದ. ಆದರೆ ಅಫಜಲಖಾನ್ ಹತನಾದ. ಶಿವಾಜಿ ಪಣ್ಹಾಳವನ್ನೂ ಗೆದ್ದುಕೊಂಡ. ಆಗ ಅಲಿಯಿಂದ ನಿಯೋಜಿತನಾದ ಸಿದ್ದಿ ಜೌಹಾರ್ ಶಿವಾಜಿಯ ಮೇಲೆ ಜಯ ಗಳಿಸುವ ಹಂತ ತಲುಪಿದ್ದಾಗ ಶಿವಾಜಿ ಪಣ್ಹಾಳದಿಂದ ತಪ್ಪಿಸಿ ಕೊಂಡು ಪಾರಾದ. ಅಲಿ ಆದಿಲ್ ಷಾ ಪಣ್ಹಾಳವನ್ನು ವಶಪಡಿಸಿಕೊಂಡ. ಶಿವಾಜಿ ದಾಳಿಗಳನ್ನು ಮುಂದುವರಿಸಿ ಕೊಂಕಣದ ಹಲವು ಪ್ರದೇಶಗಳನ್ನು ಅಲಿಯಿಂದ ಗೆದ್ದುಕೊಂಡ. ಅಲ್ಲಿಂದಲೂ ಶಿವಾಜಿ ಹಿಮ್ಮೆಟ್ಟುವಂತೆ ಅಲಿ ಆದಿಲ್ ಷಾ ಕ್ರಮ ಕೈಗೊಂಡ. ಔರಂಗಜೇಬ್ ದೆಹಲಿಯ ಸುಲ್ತಾನನಾದಮೇಲೆ ಬಿಜಾಪುರದ ವಿರುದ್ಧ ಯುದ್ಧವನ್ನು ಮುಂದುವರಿಸಲು ದಂಡನಾಯಕ ಜಯಸಿಂಗನನ್ನು ಕಳುಹಿಸಿ ಕೊಟ್ಟ (1665). ಜಯಸಿಂಗ್ ಶಿವಾಜಿಯ ಮೇಲೆ ಯುದ್ಧ ಮಾಡಿ ಪುರಂದರ ಒಪ್ಪಂದವನ್ನು ಮಾಡಿಕೊಂಡ. ಅನಂತರ ಜಯಸಿಂಗ್ ಶಿವಾಜಿಯ ಸಹಾಯ ಪಡೆದು ಬಿಜಾಪುರದ ಮೇಲೆ ದಂಡೆತ್ತಿಬಂದ. ಆದರೆ ಬಿಜಾಪುರವನ್ನು ಅಲಿ ಆದಿಲ್ ಷಾನಿಂದ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಅಲಿ ಆದಿಲ್ ಷಾ ಮುಘಲರ ಮತ್ತು ಮರಾಠರ ವಿರುದ್ಧ ಹೋರಾಡಿ ಬಿಜಾಪುರ ರಾಜ್ಯವನ್ನು ರಕ್ಷಿಸಿದ. ಆದರೆ ತನ್ನ ಆಳ್ವಿಕೆಯ ಕೊನೆಯ ಆರು ವರ್ಷಗಳನ್ನು ಸುಖಲೋಲುಪನಾಗಿ ಕಳೆದು 1672ರಲ್ಲಿ ಮೃತನಾದ.