ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಹಲ್ಯೆ

ವಿಕಿಸೋರ್ಸ್ದಿಂದ

ಅಹಲ್ಯೆ ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳು. ಗೌತಮನ ಸತಿ. ಮಹಾಪತಿವ್ರತೆಯೆಂದು ಪ್ರಸಿದ್ಧಳಾದವಳು. ತಂದೆ ಮುದ್ಗಲ ಮಹರ್ಷಿ. ಸೋದರ ದೀವೋದಾಸ. ಮಗ ಶತಾನಂದ. ತುಂಬ ರೂಪವತಿಯಾದ ಈಕೆಯನ್ನು ಇಂದ್ರ ಮೋಹಿಸಿ ಗಂಡ ಆಶ್ರಮದಲ್ಲಿಲ್ಲದ್ದಾಗ ಅವನ ವೇಷವನ್ನು ಧರಿಸಿ ಅವಳ ಸಂಗವನ್ನು ಬಯಸಿ ಬಂದ. ಈ ವೃತ್ತಾಂತ ಗೌತಮ ಋಷಿಗೆ ತಿಳಿದು ಆಕೆಯನ್ನು ಶಿಲೆಯಾಗೆಂದು ಶಪಿಸಿದ. ಶ್ರೀರಾಮನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾಗುವುದೆಂದು ತಿಳಿಸಿದ. ಅಲ್ಲಿನವರೆಗೂ ಯಾರ ಕಣ್ಣಿಗೂ ಬೀಳದೆ ಪರಿತಪಿಸುತ್ತಿರಬೇಕೆಂದು ಶಾಪವಿತ್ತಂತೆ ರಾಮಾಯಣದಲ್ಲಿ ಹೇಳಿದೆ. ರಾಮದರ್ಶನಾನಂತರ ಶಾಪಮುಕ್ತಳಾದ ಅಹಲ್ಯೆಯನ್ನು ಗೌತಮ ಸ್ವೀಕರಿಸಿದ. ಈ ಕಥೆ ಮಹಾಭಾರತದಲ್ಲೂ ರಾಮಾಯಣದಲ್ಲೂ ಬರುತ್ತದೆ. ಗೌತಮನ ಶಿಷ್ಯನಾದ ಉದಂಕ ಗುರುದಕ್ಷಿಣೆಗಾಗಿ ಅಹಲ್ಯೆಯ ಇಷ್ಟದಂತೆ ಸೌದಾಸರಾಜಪತ್ನಿಯ ಓಲೆಗಳನ್ನು ತಂದುಕೊಟ್ಟ ಕಥೆ ಪ್ರಸಿದ್ಧವಾಗಿದೆ.

ಕನ್ನಡದಲ್ಲಿ ಪು.ತಿ.ನ ಅವರ `ಅಹಲ್ಯೆ` ಎಂಬುದು ಬಹು ಸುಂದರವಾದ ನೀತಿನಾಟಕ. (ಎಸ್.ಕೆ.ಆರ್.)