ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲೂರು

ವಿಕಿಸೋರ್ಸ್ದಿಂದ

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಪೂರ್ವ ಭಾಗದಲ್ಲಿರುವ ಒಂದು ತಾಲ್ಲೂಕು ಮತ್ತು ಮುಖ್ಯ ಪಟ್ಟಣ. ೧೮೭೬-೭೮ ರಲ್ಲಿ ಕ್ಷಾಮ ಪರಿಸ್ಥಿತಿ ಉಂಟಾಗಿದ್ದಾಗ ಇತರ ತಾಲ್ಲೂಕುಗಳಿಗಿಂತಲೂ ಹೆಚ್ಚಿನ ತೊಂದರೆಯನ್ನು ಅನುಭವಿಸಿತು. ಈ ತಾಲ್ಲೂಕಿನ ಜನಸಂಖ್ಯೆ ೮೬,೧೩೧ (೨೦೦೧). ಪಟ್ಟಣದ ಜನಸಂಖ್ಯೆ ೬,೧೧೩(೨೦೦೧). ತಾಲ್ಲೂಕಿನಲ್ಲಿ ಸಾಕಷ್ಟು ವ್ಯವಸಾಯ ಯೋಗ್ಯವಾದ ಪ್ರದೇಶಗಳಿದ್ದು ಶೇ.೨೭ ಕರಿಮಣ್ಣಿನ ಭೂಮಿಯಿದೆ. ಜೋಳ, ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಬೇಸಾಯಕ್ಕೆ ಮಳೆಯ ನೀರೇ ಆಧಾರ. ಕಾಡುಭಾಗ ಬಹಳ ಕಡಿಮೆ. ಮಳೆ ಸರಿಯಾಗಿ ಬೀಳದ ವರ್ಷಗಳಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೋರುವುದು ಸಾಮಾನ್ಯ.