ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಜ್, ವಿಲಿಯಮ್ ರಾಲ್ಫ್‌

ವಿಕಿಸೋರ್ಸ್ದಿಂದ

ಇಂಜ್, ವಿಲಿಯಮ್ ರಾಲ್ಫ್ (1860-1954), ಇಂಗ್ಲೆಂಡಿನ ಧರ್ಮಬೋಧಕ ಮತ್ತು ಉದಾತ್ತ ಗ್ರಂಥಕರ್ತ. ಯಾರ್ಕ್‍ಷೈರಿನಲ್ಲಿ ಜನ್ಮತಾಳಿದ. ಇಟನ್ನಿನಲ್ಲೂ ಕೇಂಬ್ರಿಜ್‍ನ ಕಿಂಗ್ಸ್ ಕಾಲೇಜಿನಲ್ಲೂ ಶಿಕ್ಷಣಪಡೆದ. ಅಲ್ಲಿಯೇ 1880 ರಿಂದ 1884ರ ವರೆವಿಗೆ ಶಿಕ್ಷಕನಾಗಿದ್ದು 1889ರಿಂದ 1904ರ ವರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೆಲೋ ಆಗಿದ್ದ. 1905ರಲ್ಲಿ ಲಂಡನ್ನಿನಲ್ಲಿ ಆಲ್ ಸೇಂಟ್ಸ್ ಚರ್ಚಿನ ಪಾದ್ರಿಯಾಗಿದ್ದು ಪುನಃ 1907ರಲ್ಲಿ ಕೇಂಬ್ರಿಜ್‍ನಲ್ಲಿ ಮತಧರ್ಮಶಾಸ್ತ್ರದ ಪ್ರಾಧ್ಯಾಪಕನಾದ. 1911ರಲ್ಲಿ ಸೇಂಟ್ ಪಾಲ್ ಕೆಥೆಡ್ರಲ್‍ನ ಡೀನ್ ಪದವಿಗೆ ಏರಿದ. ಅಲ್ಲಿರುವಾಗಲೆ ತನ್ನ ಉದ್ಗ್ರಂಥಗಳನ್ನು ರಚಿಸಿದ. ಈತನ ಗ್ರಂಥಗಳು ತತ್ತ್ವಶಾಸ್ತ್ರ ಪ್ರಪಂಚದಲ್ಲಿ ಅತ್ಯಂತ ಬೋಧಪ್ರದವಾಗಿವೆ. ಭಾಷೆ ಅತಿ ಸುಂದರವಾಗಿದೆ.

ಈತನ ಮುಖ್ಯ ಕೃತಿಗಳು : ಕ್ರಿಶ್ಚಿಯನ್ ಮಿಸ್ಟಿಸಿಸಂ (1899); ಫೇತ್ ಅಂಡ್ ನಾಲೆಜ್; ಸ್ಟಡೀಸ್ ಆಫ್ ಇಂಗ್ಲಿಷ್ ಮಿಸ್ಟಿಕ್ಸ್; ಟ್ರುತ್ ಅಂಡ್ ಫಾಲ್ಸ್ ಹುಡ್ ಇನ್ ರಿಲಿಜನ್ (1906); ಪರ್ಸನಲ್ ಐಡಿಯಲಿಸಂ ಅಂಡ್ ಮಿಸ್ಟಿಸಿಸಂ: ಫೇತ್ ಅಂಡ್ ಇಟ್ಸ್ ಸೈಕಾಲಜಿ; ದಿ ಫಿಲಾಸಫಿ ಆಫ್ ಪ್ಲಾಟೈನಸ್ (1918); ಔಟ್‍ಸ್ಟೋಕನ್ ಎಸ್ಸೇಸ್ (1919, 1922) ಸೊಸೈಟಿ ಇನ್ ರೋಮ್ ಅಂಡರ್ ದಿ ಸೀಸûರ್ಸ (1886); ದಿ ಚರ್ಚ್ ಇನ ದಿ ವಲ್ರ್ಡ್; ಗಾಡ್ ಅಂಡ್ ದಿ ಅಸ್ಟ್ರಾನಮರ್ಸ್; ಎ ರಸ್ಟಿಕ್ ಮಾರಲಿಸ್ಟ್; ದಿ ಫಾಲ್ ಆಫ್ ದಿ ಐಡಲ್ಸ್; ಮಿಸ್ಟಿಸಿಸಂ ಇನ್ ರಿಲಿಜನ್ (1947); ದಿ ಎಂಡ್ ಆಫ್ ದಿ ಏಜ್ (1948).

ಪ್ಲೇಟೋನ ಅನಂತರ ಬಂದ ಸುಪ್ರಸಿದ್ಧ ತತ್ತ್ವe್ಞÁನಿಯಾದ ಪ್ಲಾಟೈನಸ್‍ನ ಸಿದ್ಧಾಂತಗಳನ್ನು ಹೊಸರೀತಿಯಲ್ಲಿ ನಿರೂಪಿಸಿ ಎರಡು ಮಹತ್ವದ ಗ್ರಂಥಗಳನ್ನು ಈತ ಜಗತ್ತಿಗೆ ನೀಡಿದ್ದಾನೆ. ತಾನು ಅವನ ಶಿಷ್ಯನೆಂದೂ 30 ವರ್ಷಗಳ ಕಾಲ ಅವರ ತತ್ತ್ವಗಳನ್ನು ಅಧ್ಯಯನ ಮಾಡಿ ಅವುಗಳ ಶಾಶ್ವತ ಮೌಲ್ಯವನ್ನು ಕಂಡುಕೊಂಡವನೆಂದೂ ಹೇಳಿಕೊಂಡಿದ್ದಾನೆ. ಪ್ಲಾಟೈನಸ್‍ನನ್ನು ಪಾಶ್ಚಾತ್ಯರು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲವೆಂದು ಸ್ಪಷ್ಟಪಡಿಸಿ ಕ್ರೈಸ್ತಧರ್ಮದ ಮೂಲವನ್ನೇ ಅದರಲ್ಲಿ ತೋರಿಸಿಕೊಟ್ಟಿದ್ದಾನೆ. ಮಾನವನ ಅಧ್ಯಾತ್ಮಜೀವನ ಪ್ರತ್ಯಕ್ಷ ಜಗತ್ತಿಗಿಂತಲೂ ಸತ್ಯವಾದುದೆಂದೂ ಭಗವಂತ ಜಗತ್ತನ್ನು ಸೃಷ್ಟಿಸಿ ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆಂದೂ ಮಾನವ ತನ್ನ ವ್ಯಕ್ತಿತ್ವವನ್ನು ಭಗವಂತನ ಇಚ್ಛೆಗೆ ಒಪ್ಪಿಸಿ ಮುಕ್ತಿಪಡೆಯಬೇಕೆಂದೂ ಈತ ತನ್ನ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾನೆ. ದೈವಸಾಕ್ಷಾತ್ಕಾರದ ಆವಶ್ಯಕತೆಯನ್ನು, ಮಾನವನ ನಶ್ವರತೆಯನ್ನು ವಿಶದಪಡಿಸಿದ್ದಾನೆ. ಸಹಜವಾದ ಅಧ್ಯಾತ್ಮಜೀವನವನ್ನು ಬಿಟ್ಟು ಅರ್ಥವಿಲ್ಲದ ಬಾಳನ್ನು ಮಾನವ ನಡೆಸುತ್ತಾನೆಂದು ಶೋಕಿಸಿದ್ದಾನೆ. ಆಧುನಿಕ ಜಗತ್ತಿನ ವೈe್ಞÁನಿಕ ನಾಗರಿಕತೆಯ ಅಪಾಯವನ್ನು ಕುರಿತು ಎಚ್ಚರಿಕೆ ಕೊಟ್ಟಿದ್ದಾನೆ. ಸತ್ಯ, ಧರ್ಮ, ಸೌಂದರ್ಯಗಳೇ ಅಂತಿಮ ಮೌಲ್ಯಗಳು, ಅವುಗಳ ಅಂತಿಮ ಸಮರಸವೇ ಭಗವಂತ ಎಂದು ಹೇಳಿದ್ದಾನೆ. ಇವನನ್ನು ಬ್ರಿಟನ್ನಿನ ಅಧ್ಯಾತ್ಮ ಜೀವನದ ಪ್ರತಿನಿಧಿ ಎಂದೂ ಮಾರ್ಗದರ್ಶಕನೆಂದೂ ಹೇಳಬಹುದು.

ತತ್ತ್ವಶಾಸ್ತ್ರಕ್ಕೂ ಮತಧರ್ಮಶಾಸ್ತ್ರಕ್ಕೂ ವಿರೋಧವಿಲ್ಲವೆಂದೂ ಅವರೆಡೂ ಪರಸ್ಪರ ಪೋಷಕಗಳೆಂದೂ ಸಿದ್ಧಾಂತಪಡಿಸಿದವನೀತ. ಭಗವದನುಭವ ವಿಚಾರಶೀಲವಲ್ಲವೆಂದೂ ವಿಚಾರದ ಪರಮಾವಧಿಯೇ ದೈವಸಾಕ್ಷಾತ್ಕಾರವೆಂದೂ ಹೇಳಿದ್ದಾನೆ.

ಹೀಗೆ ಆಧುನಿಕ ತತ್ತ್ವಶಾಸ್ತ್ರದ ಸೀಮೆಯನ್ನು ಈತ ವಿಸ್ತರಿಸಿದ್ದಾನೆ. ಜೀವನ ದರ್ಶನತತ್ತ್ವ ದೇಶಕಾಲಾತೀತವಾದುದು ಎಂದು ಪ್ರಚುರಪಡಿಸಿದ್ದಾನೆ. ಐತಿಹಾಸಿಕ ಸಂಶೋಧನೆಯಿಂದ ಸಂಸ್ಕøತಿಯ ತಾತ್ತ್ವಿಕ ಹಿನ್ನೆಲೆಯನ್ನು ಪರಿಶೀಲಿಸಿದ್ದಾನೆ.

ಜರ್ಮನಿಯ ಕ್ಯಾಂಟ್ ಮತ್ತು ಹೆಗೆಲ್ಲರ ತತ್ತ್ವಗಳಿಗೆ ಈತ ಮನ್ನಣೆ ಕೊಟ್ಟಿಲ್ಲ. ಜರ್ಮನಿಯ ಅನ್ರ್ಸ್‍ಟ್ ಟ್ರಾಯೆಲ್ಚ್ ಎಂಬ ತಾತ್ತ್ವಿಕನೇ ಅತ್ಯುತ್ತಮ ದಾರ್ಶನಿಕನೆಂದು ಈತನ ಭಾವನೆ. (ನೋಡಿ- ಟ್ರಾಯಲ್‍ಟ್ಷ್,-ಅರ್ನ್‍ಸ್ಟ್)

(ಎಸ್.ಎಸ್.ಆರ್.)