ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಆತ್ಮಕಥೆಗಳು

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಆತ್ಮಚರಿತ್ರೆಗಳು : ವ್ಯಕ್ತಿ ತನ್ನ ಜೀವನ ವಿಚಾರಗಳನ್ನು ತಾನೇ ಬರೆದಲ್ಲಿ ಆತ್ಮಕಥೆ ಎನಿಸಿಕೊಳ್ಳುತ್ತದೆ. ಅದನ್ನೇ ಇತರರು ಬರೆದಾಗ ಜೀವನ ಚರಿತ್ರೆಯಾಗುತ್ತದೆ. ಆತ್ಮಕಥೆ ಜೀವನ ಚರಿತ್ರೆಯೆಂಬ ಸಾಹಿತ್ಯ ಪ್ರಕಾರದ ಒಂದು ಭಾಗ. ಆತ್ಮಕಥೆ ವ್ಯಕ್ತಿಯೊಬ್ಬನ ಚರಿತ್ರೆಯಾಗಿರುವಂತೆ ಆತನ ಪರಿಸರದ ಚರಿತ್ರೆಯೂ ಆಗಿರುತ್ತದೆ. ಕಥಾನಾಯಕ ತನ್ನ ಮತ್ತು ತನ್ನ ಸುತ್ತುಮುತ್ತಿನ ಜೀವನವನ್ನು ತಾನು ಕಂಡಂತೆ ಇಲ್ಲಿ ವರ್ಣಿಸಿರುತ್ತಾನೆ. ಬರೆಯುವಷ್ಟು ಶಕ್ತಿ ಮತ್ತು ತಾಳ್ಮೆ ಇದ್ದಲ್ಲಿ ಪ್ರತಿಯೊಬ್ಬನೂ ತನ್ನ ಆತ್ಮಕಥೆಯನ್ನು ಬರೆಯಬಹುದು. ಒಂದೊಂದೊಂದಕ್ಕೂ ಪ್ರಾಮುಖ್ಯ ಇದ್ದೇ ಇದೆ. ಬರೆದಾತ ಸಮಾಜದಲ್ಲಿ ಗಣ್ಯವ್ಯಕ್ತಿಯಾದಾಗಲಂತೂ ಆತ ಬರೆದ ಆತ್ಮಕಥೆಗೆ ಹೆಚ್ಚಿನ ಪ್ರಾಧಾನ್ಯ ಒದಗುತ್ತದೆ.

ಕನ್ನಡದಲ್ಲಿ ಆತ್ಮಕಥಾಸಾಹಿತ್ಯ ಹೆಚ್ಚು ಬೆಳೆದಿಲ್ಲವೆನ್ನಬೇಕು. ಈಗ ಬಂದಿರುವ ಜೀವನಚರಿತ್ರೆಗಳಲ್ಲಿ ಅರ್ಧದಷ್ಟೂ ಆತ್ಮಕಥೆಗಳಿಲ್ಲ. ಬಂದಿರುವಂಥವು ಅರ್ಧ ಸ್ವತಂತ್ರ ಆತ್ಮಕಥೆಗಳಾದರೆ ಉಳಿದವು ಅನುವಾದಗಳು. ಅವು ರಾಷ್ಟ್ರನಾಯಕರು, ಅನ್ಯರಾಷ್ಟ್ರನಾಯಕರು, ಸಾಹಿತಿಗಳು ಮತ್ತು ವಿಜ್ಞಾನಿಗಳನ್ನು ಕುರಿತವಾಗಿವೆ. ಸ್ವತಂತ್ರ ಆತ್ಮಕಥೆಯಲ್ಲಿ 50ಕ್ಕೂ ಹೆಚ್ಚು ಜನ ಸಾಹಿತಿಗಳ ಮತ್ತು ಕಲಾವಿದರ ಆತ್ಮವೃತ್ತಾಂತಗಳನ್ನು ಕಾಣಬಹುದು. 1350 ಪುಟಗಳಷ್ಟು ವ್ಯಾಪ್ತಿವುಳ್ಳ ಕೆಲವು ಸಂಪುಟಗಳಲ್ಲಿ ಪ್ರಕಟವಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಭಾವ (1968-69) ಕನ್ನಡದ ಆತ್ಮಚರಿತ್ರೆಗಳಲ್ಲಿ ಒಂದು ದೊಡ್ಡ ಹೆಜ್ಜೆ. ಗಾತ್ರದಲ್ಲಿಯೂ ಪಾತ್ರದಲ್ಲಿಯೂ ಹಿರಿದಾದ ಸ್ಥಾನವನ್ನು ಪಡೆದಿರುವ ಈ ಗ್ರಂಥ ಅವರ ಸಾರ್ಥಕ ಬಾಳಿನ ಅರ್ಧಶತಮಾನವನ್ನು ಬಿಂಬಿಸಿದೆ. ಮೊದಲ ಭಾಗದಲ್ಲಿ ತಮ್ಮ ಊರಿಗೆ ಮಾಸ್ತಿ ಎಂದು ಹೆಸರು ಬರಲು ಕಾರಣ, ತಮ್ಮ ಬಾಲ್ಯ, ವಿದ್ಯಾಭ್ಯಾಸ, ಆಗಿನ ಕಾಲದ ಸಂಪ್ರದಾಯ ಮೊದಲಾದವುಗಳನ್ನು ವಿವರವಾಗಿ ಚಿತ್ರಿಸಿದ್ದಾರೆ. ಎರಡನೆಯ ಭಾಗದಲ್ಲಿ ಅವರ ಅದಿಕಾರಾವದಿಯ ಏಕಮುಖ ಚಿತ್ರವಿದೆ. ಮೂರನೆಯ ಭಾಗದಲ್ಲಿ ವಿಶ್ರಾಂತಿ ಕಾಲದ ಬದುಕಿದೆ. ಮಾಸ್ತಿಯವರ ಸಮಕಾಲೀನರಾಗಿ ಕನ್ನಡಕ್ಕಾಗಿ ಬಹುವಿಧವಾಗಿ ದುಡಿದ ಕೆಲವು ಹಿರಿಯ ಚೇತನಗಳ ವಿಷಯಗಳೂ ಹಾಸುಹೊಕ್ಕಾಗಿ ಈ ಗ್ರಂಥದಲ್ಲಿ ಬಂದಿವೆ. ಒಂದು ದೃಷ್ಟಿಯಿಂದ ಇದು ಸುಮಾರು ಆರು ದಶಕಗಳ ಕನ್ನಡನಾಡಿನ ಚಿತ್ರವನ್ನೂ ಕನ್ನಡ ನಿಧಾನವಾಗಿಯಾದರೂ ಸುಪುಷ್ಟವಾಗಿ ತಲೆಯೆತ್ತಿದ ಬಗೆಯನ್ನೂ ಪ್ರತಿಬಿಂಬಿಸುತ್ತದೆ.

ಹುಚ್ಚು ಮನಸ್ಸಿನ ಹತ್ತು ಮುಖಗಳು (1948) ಶಿವರಾಮ ಕಾರಂತರ ಕಾಲುಶತಮಾನದ ಬಾಳಿನ ಕಥೆ. ಈ ಕೃತಿ ಕಾರಂತರ ಸಮೃದ್ಧಾನುಭವಕ್ಕೂ ಬಹುಮುಖ ಪ್ರತಿಭೆಗೆ ಜ್ವಲಂತ ಸಾಕ್ಷಿಯಾಗಿದೆ. ಗುರುವಿಲ್ಲದೆ, ಗುರಿಯಿಲ್ಲದೆ ಹುಚ್ಚು ಮನಸ್ಸು ತೋರಿದ ದಿಕ್ಕಿನಲ್ಲಿ ನಡೆದು ಇವರ ಸಾಧನೆ ಅದ್ಭುತ. ವಿಷ್ಣುವಿಗೆ ಬರಿಯ ಹತ್ತು ಅವತಾರಗಳಾದರೆ, ತನ್ನ ಧ್ಯೇಯಗಳು ಹದಿನಾರು ಅವತಾರಗಳನ್ನು ತಳೆಯುವಂತಾಯಿತೆಂದು ಲೇಖಕರೇ ಹೇಳಿಕೊಂಡಿದ್ದಾರೆ. ರಾಷ್ಟ್ರಭಕ್ತಿ, ಸ್ವದೇಶಿಚಳವಳಿ, ವ್ಯಾಪಾರ, ಪತ್ರಿಕೋದ್ಯಮ, ಆಧ್ಯಾತ್ಮಸಾಧನೆ, ಕಲೆಯ ಬಿನ್ನ ಬಿನ್ನ ಮುಖಗಳು, ಪೋಟೋಗ್ರಪಿ, ನಾಟಕ, ನೃತ್ಯ, ಚಿತ್ರ, ವಾಸ್ತು, ಸಂಗೀತ, ಚಲನಚಿತ್ರ, ಸಮಾಜಸುಧಾರಣೆ, ಗ್ರಾಮೋದ್ಧಾರ, ಶಿಕ್ಷಣ ವಲಯದಲ್ಲಿ ಪ್ರಯೋಗಗಳು, ಉದ್ಯೋಗ ಇವೆಲ್ಲ ಅವತಾರಗಳೂ ಅವಾಂತರಗಳೂ ಕಾರಂತರ ಜೀವನದಲ್ಲಿ ಆಗಿಹೋಗಿವೆ. ಸ್ವತಂತ್ರ ಜೀವನದಿಂದ ಸನ್ಯಾಸಿ ಜೀವನದ ಮೂಲಕ ಹಾದು ಸಂಸಾರಿಯಾಗಿಯೂ ಸಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪ್ರಚಲಿತ ವಿಷಯಗಳ ಬಗ್ಗೆ ಆಳವಾಗಿ ಅಲೋಚನೆ ಮಾಡಿ, ಅಸಾಧ್ಯ ಸಾಹಸಗಳಿಗೆ ಕೈಹಾಕಿ ಜಯಿಸಿದ ಕೀರ್ತಿ ಕಾರಂತರದು. ಇಷ್ಟೊಂದು ವ್ಯಾಪಕ ಹವ್ಯಾಸಗಳನ್ನುಳ್ಳ ಬೇರೊಬ್ಬ ಕನ್ನಡ ಸಾಹಿತಿಯನ್ನು ಹೆಸರಿಸುವುದು ಕಷ್ಟ. ಸ್ಮೃತಿಪಟಲದಿಂದ (1977-78 ಮೂರು ಭಾಗಗಳು) ಎಂಬ ಕೃತಿ ಕಾರಂತರ ಆತ್ಮಕಥೆಯ ಮುಂದುವರಿದ ಭಾಗ.

ಹೋರಾಟದ ಬದುಕು (1968) ದೇ.ಜ.ಗೌ. ಅವರ ಆತ್ಮಕಥೆ. ಇದು ಅಚ್ಚಕನ್ನಡದ ದೀಮಂತ ಯೋಧನ ಹೋರಾಟದ ಬದುಕನ್ನು ಒಳಗೊಂಡಿದೆ. ಬಡಕುಟುಂಬದಲ್ಲಿ ಗುಡಿಸಲಿನಲ್ಲಿ ಜನಿಸಿ, ಅಡಿಗಡಿಗೆ ನಾನಾ ಎಡರುತೊಡರುಗಳನ್ನು ಎದುರಿಸಿ, ಗೊತ್ತುಗುರಿಯಿಲ್ಲದೆ ಬೆಳೆದು, ಗುರು ಕುವೆಂಪು ಅವರ ಕೃಪಾಕಟಾಕ್ಷಕ್ಕೆ ಪಾತ್ರವಾಗಿ, ಅವರ ಆಶೀರ್ವಾದದ ಮಹಾರಕ್ಷೆಯಲ್ಲಿ ಕನ್ನಡದ ದೀಕ್ಷೆಯನ್ನು ಪಡೆದು, ಕನ್ನಡಕ್ಕಾಗಿ ದುಡಿದು, ಕನ್ನಡದಿಂದ ಕೀರ್ತಿ, ಯಶಸ್ಸುಗಳನ್ನು ಪಡೆದು, ಕನ್ನಡಕ್ಕಾಗಿಯೇ ತನು, ಮನ, ಧನಗಳನ್ನು ಸಮರ್ಪಿಸಿಕೊಂಡ ಮಹಾಚೇತನವೊಂದರ ಆತ್ಮವೃತ್ತಾಂತವಿದು. ಗುಡಿಸಲಿನಿಂದ ಗಂಗೋತ್ರಿಯವರೆಗೆ ನಡೆದ ಜೀವನಾವದಿಯಲ್ಲಿ ನಾನಾ ಕಾರಣಗಳಿಂದ, ನಾನಾ ರೀತಿಯಲ್ಲಿ ಲೇಖಕರು ನಡೆಸಿದ ಹೋರಾಟಗಳ ವೃತ್ತಾಂತವನ್ನೊಳಗೊಂಡಿರುವ ಈ ಕೃತಿಗೆ ಹೋರಾಟದ ಬದುಕು ಎಂಬ ಹೆಸರು ಉಚಿತವಾಗಿದೆ. ಆರಂಭದಲ್ಲಿ ಬಡತನದೊಂದಿಗೆ, ಜಾತೀಯತೆಯೊಂದಿಗೆ ಹೋರಾಟ ನಡೆದಿರುವುದು ಕಂಡುಬಂದರೂ ಪ್ರಮುಖವಾದ ಹೋರಾಟ ಕನ್ನಡಕ್ಕೆ ಸಂಬಂದಿಸಿದುದಾಗಿದೆ. ಈ ಕೃತಿ ಆತ್ಮಕಥಾಸಾಹಿತ್ಯಕ್ಕೆ ಒಂದು ಮಹತ್ತರ ಕೊಡುಗೆಯಾಗಿದೆ. ಇಲ್ಲಿನ ಗದ್ಯದ ಗತ್ತು ಮತ್ತು ಗ್ರಾಮೀಣ ಭಾಷಾ ಬಳಕೆಯ ಸೊಗಡು ಹೆಚ್ಚು ಆಕರ್ಷಣೀಯವೂ ಮನೋಜ್ಞವೂ ಆಗಿದ್ದು ಶೈಲಿಯ ಹೊಸದೊಂದು ಮಾದರಿಗೆ ಬುನಾದಿಯಾಗಿದೆ. ಕನ್ನಡದ ಮುನ್ನಡೆಗೆ ಇರಬಹುದಾದ ತೊಡಕುಗಳು, ಅಡ್ಡಬಂದ ವ್ಯಕ್ತಿಗಳು, ಸನ್ನಿವೇಶಗಳು, ಕನ್ನಡ ಪ್ರಗತಿಯ ಹಲವಾರು ಮಾರ್ಗಗಳು, ಕನ್ನಡ ನಾಡಿನಲ್ಲಿ ನಡೆದ ಹೋರಾಟದ ವಿವರ ಇಲ್ಲಿ ಚಿತ್ರಿತವಾಗಿರುವುದರಿಂದ ಕನ್ನಡ ನುಡಿ ಮತ್ತು ಸಾಹಿತ್ಯದ ಬಗೆಗಿನ ಮೂಲ ವಸ್ತುವನ್ನೊದಗಿಸುವುದರಲ್ಲಿ ಈ ಕೃತಿಗೆ ಸಾರ್ಥಕತೆ ಲಬಿಸಿದೆ.

ಹತ್ತು ವರುಷ (1939) ಜಿ.ಪಿ.ರಾಜರತ್ನಂ ಅವರ ಆತ್ಮಕಥೆ. 152 ಪುಟಗಳ ಈ ಕೃತಿಯಲ್ಲಿ ಲೇಖಕರ ಹತ್ತು ವರ್ಷಗಳ ಜೀವನ ಕಥೆಯಿದೆ. ಇದರಲ್ಲಿ ರಾಜರತ್ನಂ ಅಯ್ಯಂಗಾರ್ ರಾಜರತ್ನಂ ಆದುದು, ನಮ್ಮ ನಮ್ಮವರು ಕೃತಿ ಅಚ್ಚಾದುದು ಈ ಎರಡು ಭಾಗಗಳು ತುಂಬ ಸ್ವಾರಸ್ಯವಾಗಿವೆ. ರತ್ನನ ತಂದೆ ತೀರಿಕೊಂಡಾಗ ನಂಟರಾರೂ ಸಹಕರಿಸದೆ ಶವವನ್ನು ಜಟಕಾ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಿದ್ದನ್ನು ಓದಿದಾಗ ಎಂಥವರ ಎದೆಯೂ ಕರಗುತ್ತದೆ. ಸತಿಯನ್ನು ಕ್ಷಯದ ಆಸ್ಪತ್ರೆಗೆ ಸೇರಿಸಿ ಹಿಂತಿರುಗಿ ಬರುವಾಗ ದಾರಿಯಲ್ಲಿ ಕಂಡ ಹೆಂಡದಂಗಡಿಯ ಅನುಭವವೇ ಅವರ ರತ್ನನ ಪದಗಳು ಸೃಷ್ಟಿಯಾಗಲು ಕಾರಣವಾಯಿತೆಂದು ಓದಿದಾಗ ಕುತೂಹಲವೂ ಆಶ್ಚರ್ಯ ಉಂಟಾಗುತ್ತದೆ. ಮಿಂಚಿನ ಬಳ್ಳಿ ಕಾರ್ಯಾಲಯದಿಂದ ಪ್ರಕಟವಾದ ಸಾಹಿತ್ಯಜ್ಞರ ಆತ್ಮಕಥನ (1946) ಇನ್ನೊಂದು ವಿಶಿಷ್ಟ ಕೃತಿ. ಈ ಕೃತಿಯಲ್ಲಿ ಹನ್ನೊಂದು ಪ್ರಸಿದ್ಧ ಸಾಹಿತಿಗಳ ಬಿನ್ನಾನುಭವಗಳ ವೈವಿಧ್ಯಮಯವ ಸ್ವಾರಸ್ಯಪುರ್ಣವೂ ಆದ ಪರಿಚಯವನ್ನು ಅವರವರ ಮಾತಿನಲ್ಲಿಯೇ ಕಾಣಬಹುದು. ಗೋವಿಂದ ಪೈ, ಆರ್.ವಿ.ಜಾಗೀರದಾರ್, ದೇವುಡು ನರಸಿಂಹಶಾಸ್ತ್ರೀ, ರಂ.ಶ್ರೀ.ಮುಗಳಿ, ಸಿ.ಕೆ.ವೆಂಕಟರಾಮಯ್ಯ, ವಿ.ಕೃ.ಗೋಕಾಕ, ಶಂ.ಬಾ.ಜೋಶಿ, ಚನಪ್ಪ ಉತ್ತಂಗಿ, ಬೆಟಗೇರಿ ಕೃಷ್ಣಶರ್ಮ, ಎ.ಆರ್.ಕೃಷ್ಣಶಾಸ್ತ್ರೀ, ದ.ರಾ.ಬೇಂದ್ರೆ, ಇವರುಗಳೇ ಅಲ್ಲಿನ ಸಾಹಿತಿಗಳು.

ನಾಟ್ಯನೆನಪುಗಳು ಎಂಬ ಕೃತಿಯಲ್ಲಿ ಶ್ರೀರಂಗರು ರಂಗಭೂಮಿಗೂ ತಮಗೂ ಇರುವ ನಂಟನ್ನು ಹೇಳಿಕೊಂಡಿದ್ದಾರೆ. ನಡೆದು ಬಂದ ದಾರಿಯ ಮೂರನೆಯ ಸಂಪುಟದಲ್ಲಿ (1961) ಬೇಂದ್ರೆ ಅವರು ಚತುರ್ಮುಖ ಎಂಬ ಶೀರ್ಷಿಕೆಯಲ್ಲಿ ತಮ್ಮ ಆತ್ಮವೃತ್ತಾಂತವನ್ನು ಬರೆದಿದ್ದಾರೆ. ಮನ್ವಂತರದ ಒಂದನೆಯ ಸಂಪುಟದಲ್ಲಿಯೂ ಅವರು ತಮ್ಮ ಕಾವ್ಯಜೀವನದ ಹಿನ್ನೆಲೆಯನ್ನು ವಿವರಿಸಿದ್ದಾರೆ. ಸಿಂ.ಪಿ.ಲಿಂಗಣ್ಣನವರು ಮೂವತ್ತೈದು ವರ್ಷಗಳು ಎಂಬ ಕೃತಿಯಲ್ಲಿ ತಾವು ಕಂಡುಂಡ ಸಿಹಿಕಹಿಗಳ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಆಲೂರು ವೆಂಕಟರಾಯರ ಜೀವನ ಸ್ಮರಣೆ ಎಂಬ ಗ್ರಂಥದಲ್ಲಿ ಕರ್ನಾಟಕದ ಹೊಸ ಪ್ರಜ್ಞೆಯ ಬೆಳೆವಣಿಗೆಯನ್ನು ಕಾಣಬಹುದು.

ನವರತ್ನ ರಾಮರಾಯರ ಕೆಲವು ನೆನಪುಗಳು, ವಾಸುದೇವಾಚಾರ್ಯರ ನೆನಪುಗಳು, ಡೂನು ಅವರ ಕಾಡಿನಲ್ಲಿ ಕಳೆದ ದಿನಗಳು, ದಿವಾಕರರ ಸೆರೆಮನೆ ಇವು ಅತ್ಯುತ್ತಮ ನೆನಪುಗಳಾಗಿವೆ. ಗುಬ್ಬಿ ವೀರಣ್ಣನವರ ಕಲೆಯೇ ಕಾಯಕ (1967) ಕಲಾವಿದನೊಬ್ಬನ ಹಲವು ಹನ್ನೆರಡು ಬವಣೆಗಳ, ನೂರಾರು ಸಮಸ್ಯೆಗಳ ಪ್ರಾತಿನಿದಿಕ ಗ್ರಂಥದಂತಿದೆ. ಕನ್ನಡ ರಂಗಭೂಮಿಗೆ ಗುಬ್ಬಿ ವೀರಣ್ಣನವರು ಸಲ್ಲಿಸಿದ ಬಹುಮುಖ ಸೇವೆಯನ್ನೂ ಅವರ ಸಾಧನೆ ಸಿದ್ಧಿಗಳನ್ನೂ ಇಲ್ಲಿ ಕಾಣಬಹುದು.

ಸುಧಾ, ಕರ್ಮವೀರ ಮೊದಲಾದ ವಾರಪತ್ರಿಕೆಗಳಲ್ಲಿಯೂ ಪ್ರಜಾವಾಣಿ ದಿನಪ್ರತಿಕೆಯಲ್ಲಿಯೂ ಅನೇಕರ ಆತ್ಮಕಥೆಗಳು ಪ್ರಕಟವಾಗಿವೆ. ಕರ್ನಾಟಕದಲ್ಲಿ ಕರ್ಣನ ಪಾತ್ರಕ್ಕೆ ಅತ್ಯಂತ ಹೆಸರುವಾಸಿಯಾದ ಕೊಟ್ಟೂರಪ್ಪ ಮತ್ತು ಬೀಮನ ಪಾತ್ರದ ಮೂಲಕ ಹೆಸರು ಪಡೆದ ಸ್ತ್ರೀ ನಾಟಕ ಮಂಡಳಿಯ ನಾಗರತ್ನಮ್ಮ ಇವರ ಆತ್ಮಚರಿತ್ರೆಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿವೆ. ಕನ್ನಡದ ಅತ್ಯಂತ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರ ಹೃದ್ಯವಾದ ಆತ್ಮಕಥೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು (1970). ಮಣ್ಣಿನ ಮಗನೊಬ್ಬ ತನಗೆ ರಕ್ತಗತವಾಗಿ ಬಂದ ಕಲೆಯನ್ನು ಭಯ ಭಕ್ತಿ ಶ್ರದ್ಧೆ ಗೌರವಗಳಿಂದ ಆರಾದಿಸಿ, ಸಾದಿಸಿ, ಅತ್ಯುನ್ನತ ಮಟ್ಟಕ್ಕೇರಿದ ಚಿತ್ರವನ್ನಿಲ್ಲಿ ಕಾಣಬಹುದು. ಸಾಧನೆಯ ಸಮಯದಲ್ಲಿ ಆತ ಪಟ್ಟ ಪಾಡು, ತೊಟ್ಟ ನಿಷ್ಠೆ, ಕನ್ನಡ ಪ್ರೇಮ ಎಂಥವರಿಗೂ ಮೆಚ್ಚಿಗೆ ತರುವಂಥವು.

ಆತ್ಮಕತೆ ನಿವೇದಿಸಿದವರಲ್ಲಿ ಹೆಸರಾಂತ ಲೇಖಕರು, ಕಲಾವಿದರು, ಕ್ರೀಡಾಪಟುಗಳು, ಚಲನಚಿತ್ರ ಮತ್ತು ರಂಗಭೂಮಿಯ ನಟನಟಿಯರು ಸೇರಿದ್ದಾರೆ. ವ್ಯಕ್ತಿಗಳಿಗೆ ಸಮರ್ಪಿಸಿದ ಅಬಿನಂದನ ಗ್ರಂಥಗಳಲ್ಲಿ ಅವುಗಳ ಪ್ರಾರಂಭದ ಪುಟಗಳಲ್ಲಿ ಆಯಾ ವ್ಯಕ್ತಿಗಳು ತಮ್ಮ ಜೀವನ ವೃತ್ತಾಂತವನ್ನು ನಿರೂಪಿಸಿದ್ದಾರೆ. ಕನ್ನಡದಲ್ಲಿ ಅಬಿನಂದನ ಗ್ರಂಥಗಳ ಒಂದು ಪರಂಪರೆಯೇ ಇರುವುದನ್ನು ನಾವು ಮರೆಯುವಂತಿಲ್ಲ. ಕನ್ನಡದ ಕೆಲವು ಮುಖ್ಯ ಆತ್ಮಕಥೆಗಳನ್ನು ಈ ಮುಂದೆ ಹೆಸರಿಸಲಾಗಿದೆ. ರಾವ್ ಬಹುದ್ದೂರರ ಮರೆಯದ ನೆನಪುಗಳು (1959), ಡಿವಿಜಿಯವರ ಜ್ಞಾಪಕ ಚಿತ್ರಶಾಲೆ (1967-74), ರಾಜಕುಮಾರ್ ಅವರ ನಟಸಾರ್ವಭೌಮ (1970), ವಿ.ಸೀತಾರಾಮಯ್ಯನವರ ಕಾಲೇಜು ದಿನಗಳು (1971) ಮತ್ತು ಮುಂಬಯಿ ವಾಸದ ನೆನಪುಗಳು (1976), ಅನಕೃ ಅವರ ಬರೆಹಗಾರನ ಬದುಕು (1972), ಅಲೂರು ವೆಂಕಟರಾಯರ ನನ್ನ ಜೀವನ ಸ್ಮೃತಿಗಳು (1973), ಕೋ.ಚೆನ್ನಬಸಪ್ಪನವರ ನನ್ನ ಮನಸ್ಸು ನನ್ನ ನಂಬುಗೆ (1973), ಎಚ್.ಕೆ.ವೀರಣ್ಣಗೌಡರ ಬದುಕು-ಮೆಲಕು (1974), ಆರ್.ನಾಗೇಂದ್ರರಾವ್ ಅವರ ಇದು ನನ್ನ ಕಥೆ (1974), ಮಳವಳ್ಳಿ ಸುಂದರಮ್ಮನವರ ಅಬಿನಯಶಾರದೆ (1975), ಬಸವರಾಜ ಕಟ್ಟೀಮನಿ ಅವರ ಕುಂದರನಾಡಿನ ಕಂದ (1976) ಮತ್ತು ಕಾದಂಬರಿಕಾರನ ಕಥೆ (1981), ಬೀಚಿಯವರ ನನ್ನ ಭಯಾಗ್ರಫಿ (1976), ಶಾರದ ವಿ.ಗೋಕಾಕ್ ಅವರ ಒಲವೆ ನನ್ನ ಬದುಕು (1977), ಶ್ರೀರಂಗರಾಜು ಅವರ ನಾನು ತುಳಿದ ಹಾದಿ (1978), ಇ.ಎ.ಎಸ್.ಪ್ರಸನ್ನರ ಪ್ರಸನ್ನ ಜೀವನ ಒಂದು ಆತ್ಮಕಥೆ (1978), ಕೆದಂಬಾಡಿ ಜತ್ತಪ್ಪ ರೈ ಅವರ ಬೇಟೆಯ ನೆನಪುಗಳು (1978-79), ಬಿ.ಜಿ.ಎಲ್.ಸ್ವಾಮಿ ಅವರ ಪ್ರಾಧ್ಯಾಪಕನ ಪೀಠದಲ್ಲಿ (1979), ಬಿ.ಜಯಮ್ಮನವರ ಅಭಿನೇತ್ರಿ (1979), ಡಿ.ಕೆಂಪರಾಜ ಅರಸ್ ಅವರ ಅರವತ್ತು ವರ್ಷಗಳು (1980), ಕುವೆಂಪು ಅವರ ನೆನಪಿನ ದೋಣಿಯಲ್ಲಿ (1980), ಶೇ.ಗೋ.ಕುಲಕರ್ಣಿ ಅವರ ನಾನು ಕಂಡ ಗೆಳೆಯರ ಗುಂಪು (1980), ರಂ.ಶ್ರೀ.ಮುಗಳಿಯವರ ಜೀವನ ರಸಿಕ (1982), ಮಲ್ಲಿಕಾರ್ಜುನ ಮನ್ಸೂರರ ನನ್ನ ರಸಯಾತ್ರೆ (1983), ಎನ್ಕೆ ಕುಲಕರ್ಣಿಯವರ ನಾನ್ನಯ ನೆನಪುಗಳು (1983), ಚಿ.ನ.ಮಂಗಳಾ ಅವರ ಅಧ್ಯಾಪಕಿಯಾಗಿ ಇಪ್ಪತ್ತೈದು ವರ್ಷ ಮತ್ತು ಸ್ನೇಹಸಿಂಧು (1985), ಅನುಪಮಾ ನಿರಂಜನರ ನೆನಪು ಸಿಹಿ ಕಹಿ (1985) ಮತ್ತು ಬರೆಹಗಾರ್ತಿಯ ಬದುಕು (1990), ಜಿ.ಎಸ್.ಶಿವರುದ್ರಪ್ಪ ಅವರ ಚದುರಂಗ (1986), ತ.ಸು.ಶಾಮರಾಯರ ಮೂರುತಲೆಮಾರು (1987), ಸ.ಸ.ಮಾಳವಾಡರ ದಾರಿ ಸಾಗಿದೆ (1989). ಅಂಬುಜಾ ತ.ರಾ.ಸು. ಅವರ ಹಿಂತಿರುಗಿ ನೋಡಿದಾಗ (1990), ಎ.ಎನ್.ಮೂರ್ತಿರಾವ್ ಅವರ ಸಂಜೆಗಣ್ಣಿನ ಹಿನ್ನೋಟ (1990), ಬಿ.ಡಿ.ಜತ್ತಿ ಅವರ ನನಗೆ ನಾನೇ ಮಾದರಿ (1990), ಸಮೇತನಹಳ್ಳಿ ರಾಮರಾಯರ ಕೋಟು ಕೊಟ್ಟಮನೆ (1991), ತ.ಸು.ಶಾಮರಾಯರ ನೆನಪಿನ ಅಲೆಗಳು (1991), ಉತ್ತಂಗಿ ಚನ್ನಪ್ಪನವರ ಆತ್ಮಚರಿತ್ರೆ (1991), ಕು.ಶಿ.ಹರಿದಾಸಭಟ್ಟರ ನಿವೇದನೆ (1992), ಎಸ್.ಆರ್.ಗುಂಜಾಳ ಅವರ ನಾನು (1992), ನಂಜುಂಡಸ್ವಾಮಿಯವರ ಅಜ್ಞಾತ ಅಧ್ಯಾಪಕನ ಆತ್ಮಚರಿತ್ರೆ (1994), ಪೆರ್ಲ ಕೃಷ್ಣಭಟ್ಟರ ಬದುಕಿ ಫಲವೇನು (1994), ಅರವಿಂದ ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ (1994), ಆರ್.ಸಿ.ಹಿರೇಮಠ ಅವರ ಉರಿ ಬರಲಿ ಸಿರಿ ಬರಲಿ (1995), ಎಚ್.ನರಸಿಂಹಯ್ಯನವರ ಹೋರಾಟದ ಹಾದಿ (1995), ಜಿ.ಎಂ.ಪಾಟೀಲರ ನೆನಪಿನಂಗಳದಲ್ಲಿ (1995), ಕೆರೆಮನೆ ಶಿವರಾಮ ಹೆಗಡೆಯವರ ನೆನಪಿನ ರಂಗಸ್ಥಳ (1996), ಕಯ್ಯಾರಕಿಞ್ಞಣ್ಣರೈ ಅವರ ದುಡಿಮೆಯೇ ನನ್ನ ದೇವರು (1996), ಸೇಡಿಯಾಪು ಕೃಷ್ಣಭಟ್ಟರ ಈಶ್ವರ ಸಂಕಲ್ಪ ಅಥವಾ ದೈವಲೀಲೆ (1996), ಸಿದ್ಧಲಿಂಗಯ್ಯನವರ ಊರು ಕೇರಿ (1996), ಎಸ್.ಎಲ್.ಭೈರಪ್ಪನವರ ಬಿತ್ತಿ (1996), ಎಚ್.ಎಲ್. ನಾಗೇಗೌಡರ ನಾಗಸಿರಿ (1996 ನಾಲ್ಕು ಸಂಪುಟಗಳು) ಪಿ.ಲಂಕೇಶರ ಹುಳಿಮಾವಿನ ಮರ (1998), ಕೆ.ಗೋವಿಂದರಾಜು ಅವರ ಮನವಿಲ್ಲದವರ ಮಧ್ಯೆ (2001), ಸಿ.ಜಿ.ಕೃಷ್ಣಸ್ವಾಮಿ ಅವರ ಕತ್ತಾಲೆ ಬೆಳದಿಂಗಳೊಳಗೆ (2002), ಹಿರಿಯಡಕ ಗೋಪಾಲರಾಯರ, ಮದ್ದಳೆಯ ಮಾಯಾಲೋಕ, ಬಿ.ವಿ.ಕಾರಂತರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (2003), ಎಚ್.ಎಸ್.ಶಿವಪ್ರಕಾಶ್ ಅವರ ಬತ್ತೀಸರಾಗ (2003), ಸ.ಜ.ನಾಗಲೋಟಿಮಠ ಅವರ ಬಿಚ್ಚಿದ ಜೋಳಿಗೆ (2003),ಯು.ಆರ್.ಅನಂತಮೂರ್ತಿ ಸುರಭಿ, ಇಂಥ ಸ್ವತಂತ್ರ ಕೃತಿಗಳಲ್ಲದೆ ಕನ್ನಡಕ್ಕೆ ಅನೇಕ ಆತ್ಮಕಥೆಗಳು ಅನುವಾದಗೊಂಡಿವೆ. ಇವುಗಳಲ್ಲಿ ಹೆಚ್ಚಿನವು ಭಾರತೀಯ ಮತ್ತು ವಿದೇಶೀಯ ರಾಷ್ಟ್ರನಾಯಕರ, ವಿಜ್ಞಾನಿ ಮತ್ತು ಸಾಹಿತಿಗಳ ಆತ್ಮಕಥೆಗಳಾಗಿವೆ. ಸತ್ಯಶೋಧನ ಪ್ರಕಟಣ ಮಂದಿರದವರ ಸತ್ಯಶೋಧನೆ ಅಥವಾ ಗಾಂದೀಜಿ ಅವರ ಆತ್ಮಕಥೆ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮರ ಗಾಂದೀಜಿ ಆತ್ಮಕಥೆ (ಸಂಕ್ಷಿಪ್ತ) ಪ್ರಕಟವಾಗಿವೆ. ಜವಾಹರಲಾಲ್ ನೆಹರೂ ಅವರ ಆತ್ಮಕಥೆಯನ್ನು ಗುರುನಾಥ ಜೋಶಿ ಅವರು ನನ್ನ ಕಥೆ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ (1958). ಗಾಂದಿ ಮತ್ತು ನೆಹರೂ ಅವರ ಆತ್ಮಕಥೆಗಳು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿರುವುದು ಮಾತ್ರವಲ್ಲದೆ ಅನೇಕರು ತಮ್ಮ ಆತ್ಮಕಥೆಯನ್ನು ಬರೆಯಲು ಪ್ರೇರಣೆಯನ್ನುಂಟುಮಾಡಿವೆ. ಕೃಷ್ಣ ಹತೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್‌ ಎಂಬ ಆತ್ಮಕಥೆಯನ್ನು ದೇ.ಜ.ಗೌ, ಅವರು ನೆನಪು ಕಹಿಯಲ್ಲ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದು ನೆಹರೂ ತಂಗಿಯ ಆತ್ಮಕಥೆಯಾದರೂ ಇಲ್ಲಿ ಸಮಸ್ತ ನೆಹರೂ ಮನೆತನದ ಅರ್ಧ ಶತಮಾನದ ತ್ಯಾಗಭೋಗಗಳ ಜೀವನದ ಕಥೆಯಿದೆ. ಸಿದ್ಧವನಹಳ್ಳಿ ಕೃಷ್ಣಶರ್ಮರು ಬಾಬು ರಾಜೇಂದ್ರ ಪ್ರಸಾದರ ಸ್ವವೃತ್ತಾಂತವನ್ನು ರಾಜೇಂದ್ರ ಪ್ರಸಾದ್ ಆತ್ಮಕಥೆ ಎಂಬ ನಾಮಾಂಕಿತದಲ್ಲಿ ಕನ್ನಡಕ್ಕೆ ತಂದಿದ್ದಾರೆ (1959). ಸ್ವಾತಂತ್ರ್ಯಯೋಧ ದೇಶಭಕ್ತನ ರೋಮಾಂಚಕಾರಿಯಾದ ಈ ಕಥೆ 866 ಪುಟಗಳಲ್ಲಿ ಹೊರಬಂದಿರುವ ಬೃಹತ್ ಗ್ರಂಥ. ಗೌರೀಶಂಕರದ ತುತ್ತತುದಿಗೇರಿ ಹೊಸ ದಾಖಲೆಯೊಂದನ್ನು ಸ್ಥಾಪಿಸಿದ ತೇನ್ಸಿಂಗನ ಆತ್ಮಕಥೆಯನ್ನು ಎವರೆಸ್ಟ್‌ ವೀರ ಎಂಬ ಹೆಸರಿನಲ್ಲಿ ಕೂಡಲಿ ಚಿದಂಬರಂ ಮತ್ತು ಜನಾರ್ದನ ಗುರ್ಕಾರ್ ಅವರು ಸುಂದರವಾಗಿ ಅನುವಾದಿಸಿದ್ದಾರೆ (1957). ಟಾಲ್ಸ್ಟಾಯ್ ಅವರ ಸುಪ್ರಸಿದ್ಧ ಆತ್ಮಚರಿತ್ರೆಯನ್ನು ಲಿಯೊ ಟಾಲ್ಸ್ಟಾಯ್ ಎಂಬ ಶೀರ್ಷಿಕೆಯಲ್ಲಿ ಆನಂದರು ಕನ್ನಡಕ್ಕೆ ತಂದಿದ್ದಾರೆ (1958). 388 ಪುಟಗಳ ಈ ಕೃತಿಯಲ್ಲಿ ಟಾಲ್ಸ್ಟಾಯ್ ಅವರ ಬಾಲ್ಯ ಮತ್ತು ಯೌವನಗಳ ಜೀವನಪರಿಚಯವಿದೆ. ಲೋಕವಿಖ್ಯಾತ ವಿಜ್ಞಾನಿ ಚಾರಲ್ಸ್‌ ಡಾರ್ವಿನ್ನರ ಆತ್ಮಕಥೆಯನ್ನು ಶ್ರೀಮತಿ ಜೀವಬಾಯಿ ಲಕ್ಷ್ಮಣರಾವ್ ಅವರು ಚಾರಲ್ಸ್‌ ಡಾರ್ವಿನ್ನನ ಆತ್ಮಕಥೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದರು (1969). ಸುಪ್ರಸಿದ್ಧ ರಾಜಕಾರಣಿ ಬೆಂಜಮಿನ್ ಫ್ರಾಂಕ್ಲಿನ್ ಆತ್ಮಕಥೆ ಅದೇ ಹೆಸರಿನಿಂದ ಜನಾರ್ದನ ಗುರ್ಕಾರ್ ಅವರಿಂದ ಕನ್ನಡಕ್ಕೆ ಬಂದಿದೆ (1958). ಪ್ರಖ್ಯಾತ ಮಹಿಳೆ ಹೆಲನ್ ಕೆಲ್ಲರಳ ಆತ್ಮಕಥೆಯನ್ನು ಚಿ.ನ. ಮಂಗಳ ಅನುವಾದಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್‌ ಅವರ ಪತ್ನಿ ಎಲೀನರ್ ರೂಸ್ವೆಲ್ಟ್‌ ಅವರ ಆತ್ಮಕಥೆ ಸವಿನೆನಪು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಬಂದಿದೆ. ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚ ಎಚ್.ಎಲ್. ನಾಗೇಗೌಡರಿಂದ ಅನುವಾದಿತವಾಗಿರುವ ಇನ್ನೊಂದು ಆತ್ಮಕಥಾಗ್ರಂಥ ಮರಾಠಿಯಿಂದ ಅನೇಕ ದಲಿತ ಆತ್ಮಕಥೆಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡ ದಲಿತ ಸಂವೇದನೆಗಳನ್ನು ಈ ನೆಲೆಯಲ್ಲಿ ಉನ್ಮೀಲನಗೊಳಿಸಿ ಹೊಸ ಬಗೆಯ ಬರೆವಣಿಗೆಗೆ ಹಾದಿ ಮಾಡಿಕೊಟ್ಟಿವೆ. ಅಕ್ರಮಸಂತಾನ, ಉಚಲ್ಯಾ (ಅನು: ದು.ನಿಂ. ಬೆಳಗಲಿ), ಇವು ದಲಿತ ಬದುಕಿನ ಭೀಕರವಾದ ಹಾಗೂ ಬೆರಗಿನ ಲೋಕವನ್ನು ತೆರೆದಿಟ್ಟಿವೆ. ಪಂಜಾಬಿ ಲೇಖಕಿ ಅಜಿತ್ ಕೌರ್ ಅವರ ಆತ್ಮಚರಿತ್ರೆ ಲವ್ಲೀನ್ ಜಾಲಿ (2003). ಅಲೆಮಾರಿ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. (ಅನು: ವಿಜಯಲಕ್ಷ್ಮೀಅರಸ್) ಕನ್ನಡ ಆತ್ಮಕಥಾ ಸಾಹಿತ್ಯ ಅನುವಾದಗಳೂ ಸೇರಿದಂತೆ ಶ್ರೀಮಂತವಾಗುತ್ತಿದೆ. *