ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ಇತಿಹಾಸ

ವಿಕಿಸೋರ್ಸ್ದಿಂದ

ಕರ್ನಾಟಕ ಇತಿಹಾಸ

ಪೂರ್ವಶಿಲಾಯುಗ ಸಂಸ್ಕೃತಿ[ಸಂಪಾದಿಸಿ]

ಭಾರತದ ಪೂರ್ವಶಿಲಾಯುಗ ಸಂಸ್ಕೃತಿಯಲ್ಲಿ ದಕ್ಷಿಣ ಭಾರತ ಪ್ರಧಾನ ಪಾತ್ರ ವಹಿಸಿತ್ತು. ಇಲ್ಲಿ ವಿಶಿಷ್ಟವಾಗಿ ಕಂಡುಬಂದಿರುವುದೆಂದರೆ ಕೈಗೊಡಲಿ ಸಂಸ್ಕೃತಿ. ಕರ್ನಾಟಕದಲ್ಲಿ ಸಹ ಈ ಸಂಸ್ಕೃತಿಯ ಅವಶೇಷಗಳು ಹಲವೆಡೆಗಳಲ್ಲಿ ದೊರಕಿವೆ. ಹಳೆಯ ಮೈಸೂರು ಪ್ರದೇಶದ ಚಿತ್ರದುರ್ಗ ಜಿಲ್ಲೆಯ ತಾಳ್ಯ, ಜ್ಯಾಂಕಲ್, ಶಿವಮೊಗ್ಗ ಜಿಲ್ಲೆಯ ನ್ಯಾಮತಿ, ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಮುಂತಾದೆಡೆಗಳಲ್ಲಿ ರಾಬರ್ಟ್‌ ಬ್ರೂಸ್ಫುಟ್ ಕೆಲವು ಪೂರ್ವ ಶಿಲಾಯುಧಗಳನ್ನು ಶೇಖರಿಸಿದ್ದರು. ಶೇಷಾದ್ರಿಯವರು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯಲ್ಲಿ ಈ ಸಂಸ್ಕೃತಿಯ ನೆಲೆಯೊಂದನ್ನು ಗುರುತಿಸಿದ್ದಾರೆ. ಇದು ಬಾಣಸಂದ್ರ ಬೆಟ್ಟಗಳ ಶ್ರೇಣಿಯ ಬುಡದಲ್ಲಿದೆ. ಹಳೆಯ ಮೈಸೂರು ಪ್ರದೇಶದಲ್ಲಿ ಇದೇ ಅತಿಮುಖ್ಯವೂ ವಿಸ್ತಾರವೂ ಆದ ನೆಲೆ. ರೋಸ್ಟ್ರೋಕ್ಯಾರಿನೇಟ್ ಎಂಬ ಬಹಳ ಹಳೆಯ ರೀತಿಯ ಉಪಕರಣಗಳಿಂದ ಹಿಡಿದು ಅಬ್ಬೆವಿಲಿಯನ್ ಮತ್ತು ಮುಂದುವರಿದ ಅಷ್ಯೂಲಿಯನ್ ಹಂತದ ಕೈಗೊಡಲಿಗಳ ಹಾಗೂ ಕೊಕ್ಕಿನಂತೆ ಮೊನೆಯುಳ್ಳ ಕ್ಲಾಕ್ಟನ್ ರೀತಿಯ ಚಕ್ಕೆಕಲ್ಲಿನ ಉಪಕರಣಗಳವರೆಗೆ ಹಲವಾರು ಉಪಕರಣಗಳು ಇಲ್ಲಿ ದೊರಕಿವೆ. ಆ ಕಾಲದಲ್ಲಿ ಮರಗೆಲಸಕ್ಕೆ ಉಪಯೋಗಿಸುತ್ತಿದ್ದ ಡೊಂಕಾದ ಒರೆಯುವ ಆಯುಧಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಆದ್ದರಿಂದ ಆಗ ಮರದ ಉಪಕರಣಗಳು ಹೆಚ್ಚಾಗಿ ಬಳಕೆಯಲ್ಲಿದ್ದುವೆಂದು ಭಾವಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹಲಕುಂಡಿ, ಕುರಿಕುಪ್ಪ, ಗಾದಿಗನೂರು, ದಾರೋಜಿ ಮತ್ತು ಅಂಗೂರುಗಳಲ್ಲೂ ರಾಬರ್ಟ್ ಬ್ರೂಸ್ಫುಟ್ ಪೂರ್ವ ಶಿಲೋಪಕರಣಗಳನ್ನು ಸಂಗ್ರಹಿಸಿದ್ದ. ಜೋಷಿಯವರು ಉತ್ತರ ಕರ್ನಾಟಕದ ಮಲಪ್ರಭಾ ಘಟಪ್ರಭಾ ನದೀ ಕಣಿವೆಗಳಲ್ಲಿ ಈ ಸಂಸ್ಕೃತಿಯ ಹಲವಾರು ನೆಲೆಗಳನ್ನು ಬೆಳಕಿಗೆ ತಂದಿದ್ದಾರೆ. ಮಲಪ್ರಭಾ ದಂಡೆಯ ೨೧ ನೆಲೆಗಳಲ್ಲಿ ಮೆಣಸ್ಗಿ ಮತ್ತು ಖ್ಯಾಡ್ ಮುಖ್ಯವಾದವು. ಖ್ಯಾಡ್ ನೆಲೆಯಲ್ಲಿ ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲಕ್ಕೆ ಸೇರುವ, ಚಕ್ಕೆ ಕಲ್ಲಿನ ಉತ್ತಮ ಕೆಲಸಗಾರಿಕೆಯ ಕೈಗೊಡಲಿಗಳೂ ಕ್ಲೀವರ್ ರೀತಿಯ ಕೈಗೊಡಲಿಗಳೂ ಗಮನಾರ್ಹ. ಘಟಪ್ರಭಾ ನದೀ ದಂಡೆಯಲ್ಲಿ ನಿಕ್ಷಿಪ್ತವಾದ ಗುಂಡುಕಲ್ಲುಗಳ ಪದರದಲ್ಲಿ ಮರಳುಕಲ್ಲಿನಲ್ಲಿ ಮಾಡಿದ ಅಬ್ಜೆವಿಲಿಯನ್-ಅಷ್ಯೂಲಿಯನ್ ಹಂತದ ಉಪಕರಣಗಳು ಹೇರಳವಾಗಿ ದೊರಕಿವೆ. ಅಷ್ಯೂಲಿಯನ್ ಹಂತದ ಅಂತ್ಯಭಾಗಕ್ಕೆ ಸೇರುವ ಉಪಕರಣಗಳು ಸಹ ಅಲ್ಪಸಂಖ್ಯೆಯಲ್ಲಿ ಕಂಡುಬಂದಿವೆ. ಕರ್ನಾಟಕದಲ್ಲಿ ಆದಿಮಾನವ ಕಷ್ಟಜೀವಿಯಾಗಿದ್ದು, ಬೇಟೆ ಮತ್ತು ಮೀನುಗಾರಿಕೆಯಿಂದ ತನ್ನ ಮತ್ತು ತನ್ನವರ ಜೀವನ ನಿರ್ವಹಣೆ ಮಾಡುತ್ತಿದ್ದನೆಂಬುದು ಮೇಲಿನ ವಿವರಗಳಿಂದ ತಿಳಿದು ಬರುತ್ತದೆ.

ಮಧ್ಯಶಿಲಾಯುಗ[ಸಂಪಾದಿಸಿ]

ಆಹಾರ ಸಂಗ್ರಹಣೆಯ ಪೂರ್ವಶಿಲಾಯುಗ ಮತ್ತು ಆಹಾರೋತ್ಪಾದನೆಯ ನವಶಿಲಾಯುಗಗಳ ಮಧ್ಯೆ ಯುರೋಪ್ ಮತ್ತಿತರೆಡೆಗಳಲ್ಲಿ ಮಧ್ಯಶಿಲಾಯುಗಕ್ಕೆ ಸೇರಿದ ಸಂಸ್ಕೃತಿಯ ಅವಶೇಷಗಳು ಕಂಡುಬಂದಿವೆ. ಭಾರತದಲ್ಲಿ ಆ ಹಂತದ ಸಂಸ್ಕೃತಿ ಇರಲಿಲ್ಲವೆಂದು ಇದುವರೆಗೂ ಭಾವಿಸಲಾಗಿದ್ದರೂ ಇತ್ತೀಚೆಗೆ ಹಲವೆಡೆಗಳಲ್ಲಿ ಆ ಕಾಲಕ್ಕೆ ನಿಯೋಜಿಸಬಹುದಾದ ಅವಶೇಷಗಳು ದೊರಕಿರುವುದು ಗಮನಾರ್ಹ. ಬಿಜಾಪುರ ಜಿಲ್ಲೆಯ ಸಾಲ್ವಡಗಿಯಲ್ಲಿ ದೊರಕಿರುವ ಸೂಕ್ಷ್ಮ ಶಿಲಾಯುಧಗಳಲ್ಲಿ ಒರೆಯುವ ಮತ್ತು ಕೊರೆಯುವ ಉಪಕರಣಗಳೂ ಚಕ್ಕೆ ಕಲ್ಲಿನ ಚಾಕುಗಳೂ ಅಲ್ಲದೆ ಹರಪ್ಪ ಸಂಸ್ಕೃತಿಯ ವಿಶಿಷ್ಟ ಅಂಶವಾದ ಉದ್ದನೆಯ ಚಕ್ಕೆ ಕಲ್ಲಿನ ಪಟ್ಟಿಕೆಗಳೂ ಇರುವುದರಿಂದ ಇಲ್ಲಿಯ ಸಂಸ್ಕೃತಿಯೊಂದಿಗೆ ತಾಮ್ರಶಿಲಾಯುಗ ಸಂಸ್ಕೃತಿಯ ಸಂಪರ್ಕವಿದ್ದಿರಬಹುದೆಂದೂ ಊಹಿಸಿದ್ದಾರೆ.

ನವಶಿಲಾಯುಗ[ಸಂಪಾದಿಸಿ]

ನವಶಿಲಾಯುಗ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರತದ ಇತರ ಪ್ರದೇಶಗಳಿಗಿಂತ ಹೇರಳವಾಗಿ ದೊರಕಿರುವುದರಿಂದ ನವಶಿಲಾಯುಗ ಕಾಲದಲ್ಲಿ ಕರ್ನಾಟಕ ಮಾನವನ ಪ್ರಮುಖ ಕಾರ್ಯಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಈ ಸಂಸ್ಕೃತಿಗೆ ಸೇರಿದ ಕೊಡಲಿ, ಬಾಚಿ ಮತ್ತು ಇತರ ಆಯುಧಗಳನ್ನು ಮಾಡಲು ಪ್ರಮುಖವಾಗಿ ಉಪಯೋಗಿಸುತ್ತಿದ್ದ ಟ್ರಾಪ್ ಶಿಲೆಗಳು ಹೆಚ್ಚಾಗಿ ಸಿಕ್ಕುತ್ತಿದ್ದುದೂ ಪಶುಸಂಗೋಪನೆ, ಬೇಟೆ ಮತ್ತು ಪ್ರಾರಂಭದೆಶೆಯ ವ್ಯವಸಾಯ ವೃತ್ತಿಗಳಿಗೆ ಬೇಕಾದ ಸೌಲಭ್ಯಗಳು ಇಲ್ಲಿದ್ದುದರಿಂದಲೂ ನವಶಿಲಾಯುಗದ ಮಾನವ ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸಿದ್ದಿರಬಹುದು. ಉಪಕರಣಗಳ ಅಂಚುಗಳನ್ನು ಉಜ್ಜಿ ನಯಗೊಳಿಸಲು ಉಪಯೋಗಿಸಿದ ಹಳ್ಳಗಳು ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಹಲವೆಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಳ್ಳಾರಿಯ ಉತ್ತರ ಬೆಟ್ಟದಲ್ಲಿ, ಕಂಡುಬಂದಿವೆ. ಈ ಜನರು ಕೇವಲ ಅಂಚುಗಳನ್ನು ಅಥವಾ ಇಡೀ ಉಪಕರಣವನ್ನು ಬಂಡೆಗಳ ಮೇಲೆ ಉಜ್ಜಿ ನಯಗೊಳಿಸಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತಿದ್ದುದರಿಂದ ಈ ಸಂಸ್ಕೃತಿಗೆ ನಯಗೊಳಿಸಿದ ಶಿಲೋಪಕರಣ ಸಂಸ್ಕೃತಿಯೆಂದೂ ಹೆಸರಿದೆ. ಈ ಸಂಸ್ಕೃತಿಯಲ್ಲಿ ಕೊಡಲಿ, ಬಾಚಿ, ಉಳಿ, ಸುತ್ತಿಗೆಕಲ್ಲುಗಳು, ಮಧ್ಯದಲ್ಲಿ ರಂಧ್ರವಿದ್ದು ಅಗೆಯುವ ಮರದ ಕೋಲುಗಳಿಗೆ ಭಾರವನ್ನೊದಗಿಸುತ್ತಿದ್ದ ಚಕ್ರಾಕಾರದ ಕಲ್ಲುಗಳು ಮತ್ತು ಚಕ್ಕೆಕಲ್ಲುಗಳನ್ನು ಮುಖ್ಯ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು. ಪಶುಪಾಲನೆ, ಬೇಟೆ, ಮೀನು ಹಿಡಿಯುವಿಕೆ, ಮೂಲಭೂತ ಅಥವಾ ಹಿಂದುಳಿದ ವ್ಯವಸಾಯ- ಇವು ಈ ಜನರ ಮುಖ್ಯ ವೃತ್ತಿಗಳಾಗಿದ್ದುವು. ತಮ್ಮ ಆಹಾರಧಾನ್ಯಗಳನ್ನು ಹಿಟ್ಟು ಮಾಡಲು ಅವರು ಬೀಸುವ-ಅರೆಯುವ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಮೊತ್ತಮೊದಲಿಗೆ ಈ ಜನರು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಲಾರಂಭಿಸಿ, ನಯಗೊಳಿಸಿದ ಬೂದುಬಣ್ಣದ ಮಡಕೆ-ಕುಡಿಕೆಗಳನ್ನು ಕೈಯಿಂದಲೇ ರೂಪಿಸಿ ಅನಂತರ ಸುಡುತ್ತಿದ್ದರು. ಕ್ರಮೇಣ ಈ ಸಂಸ್ಕೃತಿಯ ಅಂತ್ಯಕಾಲದ ಹೊತ್ತಿಗೆ ನಿಧಾನವಾಗಿ ಸುತ್ತುವ ಮಣಿ ಅಥವಾ ಚಕ್ರಗಳನ್ನು ಮಣ್ಣಿನ ಪಾತ್ರೆಗಳನ್ನು ಮಾಡಲು ಉಪಯೋಗಿಸಿರಬಹುದಾದರೂ ಈಗ ಉಪಯೋಗದಲ್ಲಿರುವ ಕುಂಬಾರಚಕ್ರ ಬಳಕೆಗೆ ಬಂದಿದ್ದಂತೆ ಕಾಣುವುದಿಲ್ಲ. ಮೇಲೆ ಹೇಳಿದ ಬೂದು ಬಣ್ಣದ ಮಡಕೆಗಳಲ್ಲದೆ ಕ್ರಮೇಣ ಕಂದು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಉಪಯೋಗಕ್ಕೆ ಬಂದವು. ಈ ಸಂಸ್ಕೃತಿಯ ಕೊನೆಗಾಲದಲ್ಲಿ ದೊರಕುವ ಮಡಕೆಗಳ ಆಕಾರ ಮತ್ತು ಅಲಂಕಾರ ವಿಧಾನಗಳಿಂದ ಮಧ್ಯ ಭಾರತದ ತಾಮ್ರ-ಶಿಲಾಯುಗ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದುಬಂದಿತ್ತೆಂದೂ ತಿಳಿದುಬಂದಿದೆ. ಈ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಉತ್ಖನನದ್ವಾರಾ ಶೋಧಿಸಲಾಗಿರುವ ನೆಲೆಗಳಲ್ಲಿ ಬ್ರಹ್ಮಗಿರಿ, ಸಂಗನಕಲ್ಲು, ಪಿಕ್ಲಿಹಾಳ್, ಮಸ್ಕಿ, ತೆಕ್ಕಲಕೋಟೆ ಮತ್ತು ತಿರುಮಕೂಡಲ ನರಸೀಪುರ ಮುಖ್ಯವಾದವು. ತಾಮ್ರ-ಶಿಲಾಯುಗ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಇರಲಿಲ್ಲವೆಂಬ ವಾದ ನಿಜವಲ್ಲ. ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಅನಂತರದಲ್ಲಿ ಸಂಶೋಧಿಸಲಾದ ತೆಕ್ಕಲಕೋಟೆ, ಹಳ್ಳೂರು ಮುಂತಾದೆಡೆಗಳಲ್ಲಿ ನವಶಿಲಾಯುಗದ ಉತ್ತರಾರ್ಧದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ಪ್ರಭಾವ ತಾಮ್ರ ಮತ್ತು ಕಂಚು, ಕಪ್ಪು ಬಣ್ಣದಿಂದ ಚಿತ್ರಿತವಾದ ಕೆಂಪು ಮಡಕೆಗಳು ಮತ್ತು ಕಲ್ಲುಪಟ್ಟಿಕೆಗಳ ಬಳಕೆಯಿಂದ ಕಂಡುಬರುತ್ತದೆ. ಕರ್ನಾಟಕದಲ್ಲಿ ಈ ಸಂಸ್ಕೃತಿ ಮಧ್ಯ ಮತ್ತು ಪಶ್ಚಿಮ ಭಾರತ ಅಥವಾ ಸಿಂಧೂನದಿ ಪ್ರದೇಶಗಳಲ್ಲಿದ್ದಷ್ಟು ಪ್ರಬಲವಾಗಿಲ್ಲದಿದ್ದರೂ, ವಾಣಿಜ್ಯ ಸಂಪರ್ಕಗಳ ಪ್ರಭಾವದಿಂದ ಲೋಹದ ಬಳಕೆ, ಕುಂಬಾರಚಕ್ರದ ಉಪಯೋಗ, ಮುಂದುವರಿದ ವ್ಯವಸಾಯ ಪದ್ಧತಿ ಮತ್ತು ಗ್ರಾಮೀಣ ಜೀವನ ರೀತಿಗಳನ್ನು ಕ್ರಮೇಣ ಅಳವಡಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಕೇಂದ್ರಸರ್ಕಾರದ ಪ್ರಾಕ್ತನಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ನಡೆದ ಸಂಶೋಧನೆಗಳಿಂದ ಬಿಜಾಪುರ, ಧಾರವಾಡ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಈ ಸಂಸ್ಕೃತಿಯ ಹದಿಮೂರಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ. ತಾಮ್ರ-ಶಿಲಾಯುಗದ ಅನಂತರ ಕರ್ನಾಟಕದಲ್ಲಿ ಕಬ್ಬಿಣಯುಗದ ಸಂಸ್ಕೃತಿಗೆ ಸೇರುವ ಬೃಹತ್ ಶಿಲಾಸಮಾಧಿ ಸಂಸ್ಕೃತಿ ಪ್ರಾಮುಖ್ಯ ಪಡೆಯಿತು. ಮೆಡಿಟರೇನಿಯನ್ ಸಮುದ್ರ ಪ್ರದೇಶದಲ್ಲಿ ಪ್ರ.ಶ.ಪು. ಸು. ೪ನೆಯ ಸಹಸ್ರಮಾನದಲ್ಲಿ ಹುಟ್ಟಿ, ಕ್ರಮೇಣ ಯುರೋಪ್, ಆಫ್ರಿಕ ಮತ್ತು ಪಶ್ಚಿಮ ಏಷ್ಯಗಳಲ್ಲಿ ಹರಡಿ, ವಿವಿಧ ಸಂಸ್ಕೃತಿಗಳು ಮತ್ತು ಪ್ರಾದೇಶಿಕ ಹಿನ್ನೆಲೆಗಳಿಂದ ಪ್ರಭಾವಿತವಾಗಿ ದಕ್ಷಿಣ ಭಾರತವನ್ನು ತಲಪುವ ವೇಳೆಗೆ ಕಬ್ಬಿಣಯುಗೀನ ಸಂಸ್ಕೃತಿಯ ಹಂತವನ್ನು ಮುಟ್ಟದ್ದೇ ಅಲ್ಲದೆ, ಅನೇಕ ಆಂತರಿಕ ಬದಲಾವಣೆಗಳಿಗೂ ಒಳಗಾಗಿ ದಕ್ಷಿಣ ಭಾರತದ ಆದ್ಯ ಐತಿಹಾಸಿಕ ಸಂಸ್ಕೃತಿಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ನವಶಿಲಾ-ತಾಮ್ರಶಿಲಾಯುಗಗಳ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಈ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ, ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ ಸಮಾಧಿಗಳಲ್ಲಿ ಹೂಳುವುದು, ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು, ಮೇಲ್ಭಾಗದಲ್ಲಿ ಕೆಂಪು ಅಥವಾ ಕಂದಾಗಿಯೂ ತಳ ಮತ್ತು ಒಳಭಾಗಗಳಲ್ಲಿ ಕಪ್ಪಾಗಿಯೂ ಇರುವ (ಕಪ್ಪು ಮತ್ತು ಕೆಂಪು) ಮಡಕೆಗಳನ್ನು ಉಪಯೋಗಿಸುವುದು, ನೀರಾವರಿಯ ಸಹಾಯದಿಂದ ಪ್ರಗತಿಪರ ವ್ಯವಸಾಯ, ನಗರೀಕರಣಕ್ಕೆ ಪೂರ್ವಭಾವಿಯಾದ ವಿಶಾಲ ಗ್ರಾಮೀಣ ಜೀವನ ಮುಂತಾದವು. ಈ ಸಂಸ್ಕೃತಿಯ ಪ್ರಾರಂಭದಿಂದ ದಕ್ಷಿಣ ಭಾರತದಲ್ಲಿ ಚಾರಿತ್ರಿಕ ಯುಗದ ಆರಂಭವಾಯಿತೆಂದು ಹೇಳಬಹುದು. ಈ ಸಂಸ್ಕೃತಿಯ ನಿರ್ಮಾತೃಗಳಾದ, ದ್ರಾವಿಡ ಭಾಷೆಯನ್ನು ಬಳಸುತ್ತಿದ್ದ, ಜನ ಈ ಸಮಯದಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲಸಿದುದಾಗಿ ತಿಳಿದುಬರುತ್ತದೆ. ಚೇರ, ಪಾಂಡ್ಯ, ಚೋಳರಾಜ್ಯಗಳು ದಕ್ಷಿಣದಲ್ಲೂ ಸಾತವಾಹನ ಚಕ್ರಾಧಿಪತ್ಯ ದಖನ್ ಪ್ರಸ್ಥಭೂಮಿಪ್ರದೇಶದಲ್ಲೂ ಶೀಘ್ರದಲ್ಲಿಯೇ ಸ್ಥಾಪಿತವಾಗಿ ಚಾರಿತ್ರಿಕ ಯುಗ ನೆಲೆಗೊಂಡಿತು. ಈ ಸಂಸ್ಕೃತಿಯ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬಂದಿದ್ದರೂ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಜಡಿಗೇನಹಳ್ಳಿ ಮುಂತಾದೆಡೆಗಳಲ್ಲಿ ಮಾತ್ರ ನಡೆದಿವೆ.

ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕ[ಸಂಪಾದಿಸಿ]

ದಕ್ಷಿಣಭಾರತಕ್ಕೆ ಆರ್ಯರ ಪ್ರವೇಶವಾದ ಕಾಲದಿಂದ ಈ ಪ್ರದೇಶದ ಇತಿಹಾಸ ಆರಂಭವಾಗುತ್ತದೆ. ಅಗಸ್ತ್ಯ ದಕ್ಷಿಣದಲ್ಲಿ ಆರ್ಯ ಸಂಸ್ಕೃತಿ ಹರಡಿದನೆಂಬ ಸಂಗತಿ ಕಾವ್ಯ ಪುರಾಣಗಳಲ್ಲಿ ವಿಸ್ತೃತವಾಗಿದೆ. ಮಹಾಭಾರತದ ರೀತ್ಯಾ ಅಗಸ್ತ್ಯ ಕರ್ನಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ವಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ವಲನನ್ನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದ. ಚಾಳುಕ್ಯ ರಾಜಧಾನಿಯಾದ ವಾತಾಪಿ (ಈಗಿನ ಬಾದಾಮಿ) ಈ ದೈತ್ಯಸೋದರರ ಸ್ಥಳವಾಗಿತ್ತೆಂದು ಇತಿಹಾಸಕಾರರ ನಂಬಿಕೆ. ಜಮದಗ್ನಿಪುತ್ರ ಪರಶುರಾಮ ಕ್ಷತ್ರಿಯ ನಿಗ್ರಹದ ಅನಂತರ ಇಡೀ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿ ಅನಂತರ ತನ್ನ ವಾಸಕ್ಕಾಗಿ ವರುಣದೇವನ ಪ್ರಸಾದದ ಫಲವಾಗಿ ಸಮುದ್ರದವರೆಗಿನ ಪಶ್ಚಿಮ ಕರಾವಳಿ ಕ್ಷೇತ್ರವನ್ನು ಪಡೆದನಂತೆ. ಇದು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಐತಿಹ್ಯ. ೧೨ನೆಯ ಶತಮಾನದ ಈ ಪ್ರದೇಶದ ಶಾಸನಗಳಲ್ಲೂ ಇದು ಉಕ್ತವಾಗಿದೆ.

ರಾಮಾಯಣದ ದಂಡಕಾರಣ್ಯ ಪ್ರದೇಶವೇ ಅನಂತರದ ಕರ್ನಾಟಕದ ಭೂಭಾಗ. ವಾನರಪ್ರಭುಗಳಾದ ವಾಲಿಸುಗ್ರೀವರ ಕಿಷ್ಕಿಂಧಾರಾಜ್ಯ ತುಂಗಭದ್ರಾ ತೀರದ ಈಗಿನ ಹಂಪೆಯ ಬಳಿಯಿರುವ ಪಂಪಾಸರೋವರದ ಪ್ರದೇಶವೆಂದು ಹೇಳಲಾಗಿದೆ. ಅಭಿನವ ಪಂಪನೆಂದು ಹೆಸರಾದ ನಾಗಚಂದ್ರನಿಂದ (ಸು.೧೧೦೦) ರಚಿತವಾದ ರಾಮಚಂದ್ರಚರಿತ ಪುರಾಣದಲ್ಲಿ ಕಿಷ್ಕಿಂಧೆಯ ರಾಜನೂ ಪ್ರಜೆಗಳೂ ವಾನರರಲ್ಲವೆಂದೂ ಅವರ ಧ್ವಜದ ಲಾಂಛನ ವಾನರಸಂಕೇತ ಹೊಂದಿದ್ದುದರಿಂದ ಅವರನ್ನು ಹಾಗೆಂದು ವರ್ಣಿಸಲಾಗಿದೆಯೆಂದೂ ಹೇಳಿದೆ.

ಇತಿಹಾಸ ದೃಷ್ಟಿಯಿಂದ ಕರ್ಣಾಟಕದ ಪ್ರಸ್ತಾಪ ಮೊಟ್ಟಮೊದಲಿಗೆ ಮಹಾಭಾರತದಲ್ಲಿ ಬಂದಿದೆ. ಮಹಿಷಕ, ವನವಾಸಕ ಮತ್ತು ಕುಂತಳಗಳು ಉಕ್ತವಾಗಿವೆ. ಮಹಿಷಕವೆಂದರೆ ಅನಂತರ ಕಾಲದ ಮಹಿಷಮಂಡಲ (ಈಗಿನ ಮೈಸೂರು); ಈಗಿನ ಬನವಾಸಿ ಪ್ರಾಂತ್ಯವೇ ವನವಾಸಕವೆಂದೂ ಅನಂತರ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿದ್ದ ರಾಜ್ಯವೇ ಕುಂತಳವೆಂದೂ ಗುರುತಿಸಬಹುದಾಗಿದೆ. ರಾಮಾಯಣ ಮಹಾಭಾರತಗಳ ಘಟನಾವಳಿಗಳ ಕಾಲ ಚರ್ಚಾಸ್ಪದವಾಗಿದ್ದರೂ ಈಗಿನ ರೂಪದಲ್ಲಿ ಅವನ್ನು ಪ್ರ.ಶ.ಪು. ೨೦ ರಿಂದ ೧೦ನೆಯ ಶತಮಾನಗಳ ಕಾಲಕ್ಕೆ ವಿದ್ವಾಂಸರು ನಿರ್ದೇಶಿಸಿರುತ್ತಾರೆ. ಆದುದರಿಂದ ಕ್ರಿಸ್ತಶಕೆಗೂ ಮುನ್ನವೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿತ್ತು.

ಮೌರ್ಯರು[ಸಂಪಾದಿಸಿ]

ಪ್ರ.ಶ.ಪು. ನಾಲ್ಕನೆಯ ಶತಮಾನದಲ್ಲಿ ಮಗಧ ರಾಜ್ಯದ ನಂದ ಸಾರ್ವಭೌಮರ ಕಾಲದಲ್ಲಿ ಅವರ ಪ್ರಭಾವ ಕರ್ನಾಟಕದವರೆಗೂ ಹಬ್ಬಿತ್ತೆಂದು ತಿಳಿಸುವ ಐತಿಹಾಸಿಕ ಮಾಹಿತಿಗಳು ದೊರಕುತ್ತವೆ. ಮೌರ್ಯ ವಂಶದ ಸ್ಥಾಪಕನಾದ ಚಂದ್ರಗುಪ್ತ (ಪ್ರ.ಶ.ಪು.ಸು. ೩೨೪-೩೦೦) ಕರ್ನಾಟಕದ ಶ್ರವಣಬೆಳಗೊಳದಲ್ಲಿ ತನ್ನ ಗುರುವಿನೊಡನೆ ಬಂದು ನೆಲೆಸಿದುದಾಗಿ ಐತಿಹ್ಯಗಳೂ ಮಧ್ಯಕಾಲೀನ ಶಾಸನಗಳೂ ತಿಳಿಸುತ್ತವೆ. ಆತನ ಮೊಮ್ಮಗನಾದ ಅಶೋಕನ ಶಿಲಾಶಾಸನಗಳು ಈ ರಾಜ್ಯದ ಮಸ್ಕಿ, ಕೊಪ್ಪಳ, ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗ ರಾಮೇಶ್ವರಗಳಲ್ಲಿ ದೊರಕಿರುವುದಲ್ಲದೆ ಮಸ್ಕಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ ಇಸಿಲ ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ. ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತದೆ. ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಠಶಾಸ್ತ್ರಿಯವರ ಅಭಿಪ್ರಾಯ.

ಸಾತವಾಹನರು[ಸಂಪಾದಿಸಿ]

ಅನಂತರ ದಕ್ಷಿಣಾಪಥದ ಸಾರ್ವಭೌಮರಾಗಿದ್ದ ಸಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ. ಸಾತವಾಹನರ ಮೂಲಪುರುಷನಾದ ಸೀಮುಕ (ಪ್ರ.ಶ.ಪು. ಸು.೬೦) ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರದ ಅನೇಕ ಶಾಸನಗಳು ಸೂಚಿಸುತ್ತವೆ. ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಪುನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದುವು. ಈ ಕಾಲದಲ್ಲಿ ಸಾತವಾಹನರು ಮೆಡಿಟರೇನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು. ಇವರು ಪೂರ್ವದಿಕ್ಕಿನಲ್ಲಿ ಬಂಗಾಲ ಕೊಲ್ಲಿಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ. ಸಾತವಾಹನರ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು. ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ. ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದಾನೆ. ಗಾಥಾ ಸಪ್ತಶತಿಯ ಕರ್ತೃ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದಾರೆ. ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ ಎಂಬ ಗ್ರಂಥದಲ್ಲಿ (೧ನೆಯ ಶತಮಾನ) ಮತ್ತು ಪ್ಲಿನಿಯ (೭೭-೭೮), ಬರೆಹಗಳಲ್ಲಿ ಈ ಪ್ರಸ್ತಾಪಗಳಿವೆ. ಬಾದಾಮಿ (ಬಡಿಯಮಇಯೊಇ), ಮುದ್ಗಲ್ (ಮದೌಗೌಲ್ಯ), ಬನವಾಸಿ (ಬನಔಅಸೆಇ), ಹೂವಿನ ಹಿಪ್ಪರಗಿ (ಹಿಪ್ಪೊಕೌರ)ಗಳನ್ನೂ ಪುನ್ನಾಟದ (ಪೌನ್ನಾಟ) ವೈಡೂರ್ಯಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆಯನ್ನೂ (ಮಲಿಪ್ಪಲ) ಟಾಲೆಮಿ (ಸು. ೧೫೦) ಹೆಸರಿಸುತ್ತಾನೆ. ಸು. ೨೯೦ರಲ್ಲಿ ರಚಿತವಾದ ಗ್ರೀಕ್ ಪ್ರಹಸನವೊಂದರಲ್ಲಿ ಬರುವ ಕೆಲವು ಶಬ್ದಗಳು ಕನ್ನಡದವೆಂದು ವಿದ್ವಾಂಸರು ವಾದಿಸಿದ್ದಾರೆ. ಈ ಎಲ್ಲ ಆಧಾರಗಳಿಂದ ಆ ವೇಳೆಗಾಗಲೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದುದಲ್ಲದೆ ತನ್ನದೇ ಆದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದು ಪರಕೀಯರೊಂದಿಗೂ ಸಂಪರ್ಕ ಬೆಳೆಸಿಕೊಂಡಿತ್ತೆಂದು ಹೇಳಬಹುದು.


ಸಾತವಾಹನರ ಅನಂತರ ಚುಟುವಂಶದ ರಾಜರು ಬನವಾಸಿ ಪ್ರಾಂತ್ಯದಲ್ಲಿ ಪ್ರಬಲರಾದರು. ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ ಆಳುಪರೂ ಸೇಂದ್ರಕರೂ ನಳರೂ ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ. ಈಗಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ, ಆತನ ಪುತ್ರಿ ಶಿವಸ್ಕಂಧನಾಗಶ್ರೀ- ಇವರ ಹೆಸರುಗಳು ಉಕ್ತವಾಗಿವೆ. ವಿಣ್ಹುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು ಮಳವಳ್ಳಿ ಶಾಸನ ತಿಳಿಸುತ್ತದೆ. ಬಹುಶಃ ಮಳವಳ್ಳಿ ಶಾಸನದ ವಿಣ್ಹುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು. ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ- ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ. ಕದಂಬ ಸಂತತಿಯ ಸ್ಥಾಪಕ ಮಯೂರಶರ್ಮ ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ. ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು. ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು. ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು.

ಕದಂಬರು[ಸಂಪಾದಿಸಿ]

ಸಾತವಾಹನರ ಅನಂತರ ಪ್ರಾಮುಖ್ಯ ಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಬ್ರಾಹ್ಮಣ ಕುಲದ ಮಯೂರಶರ್ಮ. ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರಕಿವೆ. ಪಲ್ಲವರಿಗೆ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ಶರ್ಮ ಹೆಸರಿನ ಸ್ಥಳದಲ್ಲಿ ‘ವರ್ಮ’ ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ ಕಾಕುತ್ಸ್ಥವರ್ಮ, ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ ೨ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾಂವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು ಪ್ರಾಕೃತ ಭಾಷೆಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ ಸಂಸ್ಕೃತ ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗುಪ್ತ ಚಕ್ರವರ್ತಿ ವಿವಾಹವಾಗಿದ್ದನೆಂದರೆ ಇವರ ಪ್ರಾಮುಖ್ಯ ಅರಿವಾಗುತ್ತದೆ. ಆ ಚಕ್ರವರ್ತಿ ೧ನೆಯ ಕುಮಾರಗುಪ್ತನಾಗಿರಬಹುದು. ೫೪೦ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. ೧೪ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ-ಶೈವಧರ್ಮಗಳು ವೃದ್ಧಿಗೊಂಡುವು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪುಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛ್ರಾಯಸ್ಥಿತಿಯನ್ನು ಸೂಚಿಸುತ್ತವೆ. ಸು.೬೩೬ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು.

ಗಂಗವಂಶ[ಸಂಪಾದಿಸಿ]

ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು ೩೨೫ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಮೊದಲಿಗೆ ಇವನ ರಾಜಧಾನಿ ಕೋಲಾರದಲ್ಲಿತ್ತು. ಈ ವಂಶಜರು ೧೦ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರೀ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ ತಲಕಾಡು (ಮೈಸೂರು ಜಿಲ್ಲೆ) ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ ೧, ಶ್ರೀಪುರುಷ, ಪೃಥ್ವೀಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. ೨ನೆಯ ಪುಲಕೇಶಿ ೬೪೨ರಲ್ಲಿ ಯುದ್ಧದಲ್ಲಿ ಮಡಿದು ಆ ರಾಜ್ಯ ಪಲ್ಲವರ ಕೈಸೇರಿದಾಗ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದ ಈ ವಂಶದ ರಾಜರು ೧ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. ೨ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. ೨ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ-ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಢ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ - ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ ೨ನೆಯ ಮಾರಸಿಂಹ ಮತ್ತು ೪ನೆಯ ರಾಚಮಲ್ಲರ ಮಂತ್ರಿಯಾದ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. ೧೦೦೪ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ ೧೧೧೬ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧ್ಯೇಯವನ್ನು ಮುಂದುವರಿಸಿದರು.

ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ ಅನಂತಪುರ ಮತ್ತು ಕಡಪ ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ ತುಮಕೂರು, ಬೆಂಗಳೂರು, ಕೊಡಗು, ಮೈಸೂರು ಪ್ರದೇಶಗಳೂ ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳೂ ಅವರ ವಶವಾದುವು. ಕದಂಬರು ೪ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಳುಕ್ಯ ರಾಜ್ಯದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಹಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ ೧೬೦೦೦ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, ಚನ್ನಪಟ್ಟಣದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನ್ನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ. ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ದುರ್ವಿನೀತ ಸ್ವತಃ ವಿದ್ವಾಂಸನಾಗಿದ್ದುದಲ್ಲದೆ ವಿದ್ವಜ್ಜನಪಕ್ಷಪಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ. ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ಪೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ. ಈತ ಮನ್ಮಥನನ್ನು ನಾಚಿಸುವಷ್ಟು ಸುಂದರ; ಇವನ ಜ್ಞಾಪಕಶಕ್ತಿ ಅಸಾಧಾರಣ ; ಈತ ಕುಶಾಗ್ರಮತಿ, ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ. ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ. ಇಮ್ಮಡಿ ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ. ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸಿದ ಚಾವುಂಡರಾಯ ಅಪ್ರತಿಮ ಸೇನಾನಿ, ಅದ್ವಿತೀಯ ರಾಜಕಾರಣಿ, ವಿದ್ಯಾಪಕ್ಷಪಾತಿ; ತರ್ಕ, ವ್ಯಾಕರಣ, ಗಣಿತ, ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ. ಚಾವುಂಡರಾಯಪುರಾಣವನ್ನು ರಚಿಸಿದವನೀತನೇ. ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ.

ಬಾದಾಮಿ ಚಳುಕ್ಯರು[ಸಂಪಾದಿಸಿ]

ಕದಂಬ-ಗಂಗರ ಅನಂತರ ಕರ್ಣಾಟಕದ ಪ್ರಮುಖ ರಾಜಮನೆತನವೆಂದರೆ ಬಾದಾಮಿ ಚಳುಕ್ಯವಂಶ. ಇವರ ಮೂಲ ಸರಿಯಾಗಿ ಗೊತ್ತಿಲ್ಲ. ಒಂದನೆಯ ಪುಲಕೇಶಿಯ ಕಾಲದಿಂದ (ಸು. ೫೪೦) ಪ್ರಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿಯಿತು. ಕೀರ್ತಿವರ್ಮನಿಂದ ವಿಸ್ತೃತವಾದ ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖಿರ ತಲುಪಿತು. ದಕ್ಷಿಣ ಭಾರತದ ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರನೆನಿಸಿಕೊಂಡ ಈತ ಉತ್ತರಭಾರತದ ಸಾಮ್ರಾಟ ಹರ್ಷನನ್ನು ನರ್ಮದಾ ತೀರದಲ್ಲಿ ಸೋಲಿಸಿ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡ. ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ. ಆದರೆ ಈತ ೬೪೨ರಲ್ಲಿ ಪಲ್ಲವ ನರಸಿಂಹವರ್ಮನಿಂದ ಸೋತು ಮಡಿದ. ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಃ ಸ್ಥಾಪಿತವಾಯಿತು. ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ (ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪ) ವರೆಗಿನ ಪ್ರದೇಶವನ್ನೆಲ್ಲ ೬೭೪ರಲ್ಲಿ ಜಯಿಸಿದ. ನಾನಾ ವಿಜಯಗಳಿಂದಲೂ ಸುವ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ. ೨ನೆಯ ವಿಕ್ರಮಾದಿತ್ಯನೂ ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗುಜರಾತಿನಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದ. ಉದಾರಚರಿತನಾದ ಈತ ಶತ್ರು ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ದೆಸೆಯಲ್ಲಿದ್ದ ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು.

ಬಾದಾಮಿ ಚಳುಕ್ಯರ ಕಾಲದಿಂದಲೇ ಕರ್ನಾಟಕದ ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಆ ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಳುಕ್ಯರ ಕಾಲದಲ್ಲಿ. ಇವರು ಅದರ ಸಾಂಸ್ಕೃತಿಕ ಮೇರೆಗಳನ್ನು ವಿಸ್ತರಿಸಿದರು ; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು. ಬಾದಾಮಿ ಇವರ ರಾಜಧಾನಿ. ಎಲ್ಲ ದಿಕ್ಕುಗಳಿಗೂ ರಾಜ್ಯ ಹರಡಿತ್ತು. ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ ಕರ್ನೂಲು, ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು, ದಕ್ಷಿಣದಲ್ಲಿ ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ- ಇವು ಈ ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಎಲ್ಲೆಗಳಾಗಿದ್ದುವು. ಇದಲ್ಲದೆ ಈ ವಂಶಜರು ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು. ಕ್ರಮೇಣ ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ ಸಂಸ್ಕೃತಿಯ ಹೊರಕೇಂದ್ರಗಳಾದುವು. ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು. ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು. ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ, ಸಾಮಾಜಿಕ, ಭಾಷಾ, ಸಾಹಿತ್ಯ ಮತ್ತು ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು. ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು. ಯುವಾನ್ಚಾಂಗ್ ತಿಳಿಸಿರುವಂತೆ ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತ ನ್ಯಾಯಪರರಾಗಿದ್ದರು. ಅಭಿಮಾನಿಗಳು, ಉತ್ಸಾಹಿಗಳು, ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು, ಅನ್ಯಾಯದ ದ್ವೇಷಿಗಳು, ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ. ಸಾಧುಗೆ ಸಾಧು, ಮಾಧುರ್ಯಂಗೆ ಮಾಧರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ.

ಶೈವ, ವೈಷ್ಣವ, ಜೈನ ಮತ್ತು ಬೌದ್ಧಧರ್ಮಗಳಿಗೆ ಸಮಾನಾಶ್ರಯವಿತ್ತು. ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು. ಮಂಗಲೀಶನ ಕಾಲದಲ್ಲಿ ನಿರ್ಮಿತವಾದ ಮಹಾಕೂಟ ದೇವಾಲಯ ಶೈವ ಪುಣ್ಯಕ್ಷೇತ್ರವೆಂದು ೬೦೨ರ ಶಾಸನವೊಂದು ತಿಳಿಸುತ್ತದೆ. ೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ. ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ, ದುರ್ಗಾ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು ಈ ಮತದ ಜನಪ್ರಿಯತೆಗೆ ನಿದರ್ಶನವಾಗಿದೆ. ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ) ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ. ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ. ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗುಹಾಂತರ್ದೇವಾಲಯ ಇದಕ್ಕೆ ಮೊದಲ ನಿದರ್ಶನ. ಮಂಗಲೀಶ, ವಿಷ್ಣುವರ್ಧನ, ವಿಕ್ರಮಾದಿತ್ಯ, ವಿಜಯಾದಿತ್ಯ ಮುಂತಾದ ಈ ರಾಜರ ನಾಮಧೇಯಗಳೂ ಪರಮಭಾಗವತ, ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಭ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು. ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲೀನ ಗುಹಾಂತರ್ದೇವಾಲಯಗಳಿಂದಲೂ ಚಾಳುಕ್ಯರ ಪ್ರಮುಖ ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ. ಐಹೊಳೆ ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ. ಈತ ತನ್ನ ಪ್ರತಿಭೆ ವಿದ್ವತ್ತುಗಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ. ಆ ಕಾಲದ ಪ್ರಸಿದ್ಧ ಜೈನಾಚಾರ್ಯರಲ್ಲಿ ದಂಡಿಕವಿಯ ಸ್ತುತಿಗೆ ಪಾತ್ರರಾದ ತುಂಬಲೂರಿನ ಶ್ರೀವರ್ಧದೇವ (ತುಂಬಲೂರಾಚಾರ್ಯ) ಮತ್ತು ಪುಜ್ಯಪಾದರು ಹೆಸರಾದವರು. ಅವರಿಂದ ಸಾಹಿತ್ಯಸೇವೆ ಅಧಿಕ ಪ್ರಮಾಣದಲ್ಲಿ ನಡೆದಿತ್ತು. ಬೌದ್ಧಧರ್ಮವೂ ಆ ಕಾಲದಲ್ಲಿ ಪ್ರಭಾವಯುತವಾಗಿತ್ತೆಂಬುದಕ್ಕೆ ಆಧಾರಗಳಿವೆ. ಬೌದ್ಧಯಾತ್ರಿಕ ಯುವಾನ್ ಚಾಂಗನ ಬರೆವಣಿಗೆಗಳಿಂದ ಕರ್ನಾಟಕದಲ್ಲಿ ಆ ಧರ್ಮ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಚಳುಕ್ಯರಾಜ್ಯದ ಅಂಗವಾಗಿದ್ದ ಬನವಾಸಿ ಪ್ರದೇಶದಲ್ಲಿ ನೂರಾರು ಬೌದ್ಧವಿಹಾರಗಳು ಸ್ತೂಪಗಳೂ ಸಾವಿರಾರು ಭಿಕ್ಷುಭಿಕ್ಷುಣಿಯರೂ ಇದ್ದುದಾಗಿ ಈತ ವರ್ಣಿಸಿದ್ದಾನೆ. ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು. ಒಟ್ಟಿನಲ್ಲಿ ಎಲ್ಲ ಮತಧರ್ಮಗಳಿಗೂ ಸಮನಾದ ಪ್ರೋತ್ಸಾಹವಿದ್ದು ಕನ್ನಡಿಗರ ಮೂಲತತ್ತ್ವವಾದ ಸರ್ವಧರ್ಮ ಸಮನ್ವಯತೆ ರೂಢಿಯಲ್ಲಿತ್ತೆಂದು ಹೇಳಬಹುದು.

ಸಮಾಜ ಚಾತುರ್ವರ್ಣಯುಕ್ತವಾಗಿದ್ದು ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ೭ನೆಯ ಶತಮಾನದ ವಿಕ್ರಮಾದಿತ್ಯನ ಶಾಸನವೊಂದರಲ್ಲಿ ಒಟ್ಟು ಜನಸಮುದಾಯವನ್ನು ಹದಿನೆಂಟು ಪ್ರಕೃತಿಗಳಾಗಿ ವಿಭಾಗಿಸಲಾಗಿದೆ. ಆಯಾ ಪ್ರಕೃತಿಗಳಿಗೆ ಸಂಬಂಧಿಸಿದ ಶ್ರೇಣಿ ಅಥವಾ ಉದ್ಯೋಗ ಸಂಘಗಳ ಪ್ರಸ್ತಾಪವೂ ಇದೆ. ವರ್ಣಾಶ್ರಮದ ಹೊರಗಿದ್ದ ಅಗಸ, ಕಲ್ಕುಟಿಗ, ಉಪ್ಪಾರ ಮತ್ತು ಮಾಲೆಗಾರರ ಪ್ರಸ್ತಾಪವೂ ಕೆಲವು ಕಡೆ ಬರುತ್ತದೆ. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಂಘಿಕ ಚಟುವಟಿಕೆಗಳಿದ್ದುವು. ಬೌದ್ಧವಿಹಾರಗಳು, ಚತುರ್ವೇದಿ ಮಂಗಲಗಳು. ಅಯ್ಯಾವೊಳೆಯ (ಐಹೊಳೆ) ಐನೂರ್ವರು ಎಂಬ ವ್ಯಾಪಾರ ಸಂಘ, ಮಹಾಜನ ಹಾಗೂ ನಕರಗಳು ಮತ್ತು ವೃತ್ತಿವರ್ಗಗಳ ಶ್ರೇಣಿಗಳು ಇದಕ್ಕೆ ನಿದರ್ಶನಗಳು, ಸಮಾಜ ಪಿತೃಪ್ರಧಾನವಾಗಿದ್ದು ಆಸ್ತಿಯ ಹಕ್ಕು ಗಂಡುಮಕ್ಕಳ ಮುಖಾಂತರ ಬರುತ್ತಿದ್ದರೂ ಸ್ತ್ರೀಯರಿಗೆ ಹೆಚ್ಚಿನ ಸ್ಥಾನಮಾನಗಳಿದ್ದುವು. ಚಾಳುಕ್ಯವಂಶದ ಹಲವಾರು ರಾಜಸ್ತ್ರೀಯರು ವಿಖ್ಯಾತರಾಗಿದ್ದಾರೆ. ಇಮ್ಮಡಿ ಪುಲಕೇಶಿಯ ಸೊಸೆ ವಿಜಯ ಭಟ್ಟಾರಿಕೆ ಚಾಳುಕ್ಯವಂಶಭೂಷಣಳೆಂದು ವರ್ಣಿತಳಾಗಿದ್ದು, ವಿದ್ಯೆ ಮತ್ತು ಕಲೆಗಳಲ್ಲಿ ಪ್ರವೀಣೆಯೆಂದೂ ಕನ್ನಡ ಸಂಸ್ಕೃತಗಳೆರೆಡರಲ್ಲೂ ಸರಸ್ವತಿಯೆಂದೂ ಪ್ರಶಂಸಿತಳಾಗಿದ್ದಾಳೆ. ಈಕೆ ತನ್ನನ್ನು ಕರ್ಣಾಟೀ ಎಂದು ಕರೆದುಕೊಂಡಿದ್ದಾಳೆ. ವಿನಯಾದಿತ್ಯನ ರಾಣಿ ವಿನಯವತಿ ರಾಜಧಾನಿಯ ದೇವಾಲಯಗಳಿಗೆ ಕರತೆರಿಗೆಗಳ ಮೂಲಕ ಉತ್ಪನ್ನ ಬರುವ ಏರ್ಪಾಡು ಮಾಡಿದ್ದಳು. ಇಮ್ಮಡಿ ವಿಕ್ರಮಾದಿತ್ಯನ ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಎರಡು ಶಿವಾಲಯಗಳ (ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ) ನಿರ್ಮಾಪಕಿಯರಾಗಿದ್ದು ಕೆಲಶಾಸನಗಳನ್ನೂ ಹೊರಡಿಸಿದ್ದಾರೆ. ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆಯೇ ಕೌಮುದೀಮಹೋತ್ಸವವೆಂಬ ಸಂಸ್ಕೃತಕಾವ್ಯದ ಕರ್ತೃವಾದ ವಿಜ್ಜಿಕಾ ಎಂಬುದು ಕೆಲವರ ಅಭಿಪ್ರಾಯ. ಆಡಳಿತ, ಸಮಾಜ, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಸ್ತ್ರೀಯರು ಪ್ರಮುಖರಾಗಿದ್ದಂತೆ ನೃತ್ಯಸಂಗೀತ ಕಲಾವಿದರಾದ ವೇಶ್ಯಾ ಸ್ತ್ರೀಯರೂ ಸಮಾಜದ ಪ್ರಮುಖ ಅಂಗವಾಗಿದ್ದರು. ವಿಜಯಾದಿತ್ಯ ದೊರೆಯ ಪ್ರಿಯವಲ್ಲಭೆಯಾಗಿದ್ದವಳು ವಿನಾ ಪೋಟಿ ಎಂಬ ವೇಶ್ಯೆ. ಗೋವಿಂದ ಪೊಡ್ಡಿಯ ಪುತ್ರಿ ಬದಿ ಪೊಡ್ಡಿ ದೇವಾಲಯವೊಂದರ ದೇವದಾಸಿ. ಇವರಿಬ್ಬರೂ ಅನೇಕ ದಾನಕಾರ್ಯಗಳನ್ನು ಮಾಡಿದ್ದರು. ಚಾಲಬ್ಬೆಯೆಂಬ ಪಣ್ಯಾಂಗನೆ ವಿಜಯೇಶ್ವರ ದೇವಾಲಯದ ಕಂಬಗಳನ್ನು ಮಾಡಿಸಿಕೊಟ್ಟಿದ್ದಳು. ಈ ನಿದರ್ಶನಗಳಿಂದ ವೇಶ್ಯೆಯರಿಗೆ ಸಮಾಜದಲ್ಲಿದ್ದ ಸ್ಥಾನಮಾನಗಳ ಪರಿಚಯ ದೊರಕುತ್ತದೆ.

ಆರ್ಥಿಕವಾಗಿ ಜನ ಉತ್ತಮ ಸ್ಥಿತಿಯಲ್ಲಿದ್ದರು. ಅನೇಕ ರೀತಿಯ ಹಣ್ಣು ಹಂಪಲುಗಳೂ ಅಕ್ಕಿ, ಗೋಧಿ ಮುಂತಾದವೂ ಮುಖ್ಯ ಆಹಾರ ಪದಾರ್ಥಗಳಾಗಿದ್ದು ಈರುಳ್ಳಿ ಬೆಳ್ಳುಳ್ಳಿಗಳು ವಜರ್ಯ್‌ವಾಗಿದ್ದುವು. ಹಾಲು, ತುಪ್ಪ, ಬೆಲ್ಲ, ಸಕ್ಕರೆಗಳು ಸಾಮಾನ್ಯ ಆಹಾರವಾಗಿದ್ದರೆ ಮೀನು ಮಾಂಸಗಳು ಮೃಷ್ಟಾನ್ನಗಳೆಂದು ಪರಿಗಣಿತವಾಗಿದ್ದುವು. ರಾಗಿಯೂ ಬಳಕೆಯಲ್ಲಿತ್ತು. ಕುಡಿತ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ; ಯುದ್ಧದಾನೆಗಳಿಗೂ ಕುಡಿಸುತ್ತಿದ್ದರೆಂದು ಯುವಾನ್ ಚಾಂಗ್ ಹೇಳಿದ್ದಾನೆ. ಸುರೆಯಲ್ಲದೆ ಇನ್ನೂ ಹನ್ನೊಂದು ಬಗೆಯ ಪಾನೀಯಗಳು ಬಳಕೆಯಲ್ಲಿದ್ದುವು. ದ್ರಾಕ್ಷಿ ಕಬ್ಬುಗಳಿಂದ ತಯಾರಿಸಲಾದ ಪಾನೀಯಗಳಲ್ಲದೆ ಉಗ್ರವಾದ ಭಟ್ಟಿಸೆರೆಯೂ ಉಪಯೋಗದಲ್ಲಿತ್ತು.

ರಾಜಪುರುಷರು ಅಮೂಲ್ಯ ಉಡುಗೆಗಳನ್ನೂ ಅನಘರ್ಯ್‌ ಆಭರಣಗಳನ್ನೂ ಉಪಯೋಗಿಸುತ್ತಿದ್ದರೆ ಬ್ರಾಹ್ಮಣರ ಉಡುಗೆಗಳು ಸರಳವಾಗಿರುತ್ತಿದ್ದುವೆಂದು ಯುವಾನ್ ಚಾಂಗ್ ಹೇಳುತ್ತಾನೆ. ಶುಭ್ರವರ್ಣದ ಬಟ್ಟೆಗಳು ಪ್ರಿಯವಾಗಿದ್ದುವು. ಗಂಡಸರು ಸೊಂಟಕ್ಕೆ ಸುತ್ತಿದ ತುಂಡುವಸ್ತ್ರವನ್ನು ಎಡಭುಜದ ಮೇಲೆ ಹಾಕಿಕೊಳ್ಳುತ್ತಿದ್ದರೆ ಹೆಂಗಸರು ಉದ್ದವಾದ ವಸ್ತ್ರವನ್ನು ಸುತ್ತಿಕೊಂಡು ಎರಡು ಭುಜಗಳನ್ನೂ ಮುಚ್ಚಿಕೊಳ್ಳುತ್ತಿದ್ದರು. ಬಡವರು, ಕೆಳದರ್ಜೆಯವರು ನಾರುಬಟ್ಟೆಯ ಒಂದು ತುಂಡನ್ನು ಮಾತ್ರ ಬಳಸುತ್ತಿದ್ದರು. ಮೇಲಿನ ಹೇಳಿಕೆಗಳನ್ನು ಸಮಕಾಲೀನ ಶಿಲ್ಪಗಳಿಂದಲೂ ಸಮರ್ಥಿಸಬಹುದು. ಈ ಶಿಲ್ಪಗಳಿಂದ ಹೆಣ್ಣುಗಂಡುಗಳ ವಿವಿಧ ಆಭರಣಗಳ ವಿವರ ಮತ್ತು ಕಲೆ ಕೂದಲನ್ನು ಅಲಂಕರಿಸುತ್ತಿದ್ದ ವಿಧಾನಗಳು ತಿಳಿದುಬರುತ್ತವೆ. ಕರ್ಣಕುಂಡಲ, ಕಂಠಹಾರ, ತೋಳಬಂದಿ, ಕಂಕಣ, ಒಡ್ಯಾಣ, ಉಂಗುರಗಳು ಶ್ರೀಮಂತರ ಆಭರಣಗಳು, ನಡುಪಟ್ಟಿಗಳು ವಿಶೇಷವಾಗಿ ಬಳಕೆಯಲ್ಲಿದ್ದುವು.

ಪಾಶ್ಚಾತ್ಯ ಪೌರಸ್ತ್ಯ ದೇಶಗಳೊಂದಿಗೂ ಭಾರತದ ಇತರ ಪ್ರದೇಶಗಳೊಂದಿಗೂ ಕರ್ನಾಟಕದ ವ್ಯಾಪಾರ ನಡೆಯುತ್ತಿತ್ತು. ಪಶ್ಚಿಮತೀರದ ಕಲ್ಯಾಣ, ಮಾಂಗರೂರ್ (ಮಂಗಳೂರು), ಮಲ್ಪೆಗಳ ಮುಖಾಂತರ ಸರಕುಗಳನ್ನು ಸಾಗಿಸುತ್ತಿದ್ದರು. ರೋಮನ್ ಸಾಮ್ರಾಜ್ಯ ಕಾಲದಲ್ಲಿ ಕರ್ನಾಟಕದೊಡನೆಯ ಸಂಪರ್ಕದ ಬಗ್ಗೆ ಪ್ರವಾಸಿಗಳ ಕಥನಗಳು ತಿಳಿಸುತ್ತವೆ. ಇಮ್ಮಡಿ ಪುಲಕೇಶಿ ಈ ಸಂಬಂಧವಾಗಿ ಪರ್ಷಿಯದೊಡನೆ ಸಂಪರ್ಕ ಬೆಳೆಸಿದುದಕ್ಕೆ ಅಜಂತದ ೧ನೆಯ ಗುಹೆಯ ವರ್ಣಚಿತ್ರವೂ, ಪರ್ಷಿಯದ ಇತಿಹಾಸಕಾರ ಟಬರಿಯ ಬರವಣಿಗೆಯೂ ಆಧಾರಗಳಾಗಿವೆ. ಆ ದೇಶದ ಚಕ್ರವರ್ತಿ ಮೂರನೆಯ ಖುಸ್ರು ರಾಯಭಾರಿಯನ್ನು ಕಳಿಸಿದುದಾಗಿ ಈ ಆಧಾರಗಳಿಂದ ತಿಳಿದುಬರುತ್ತದೆ. ವ್ಯಾಪಾರದ ಸೌಕರ್ಯಕ್ಕಾಗಿ ತೂಕ ಮತ್ತು ಅಳತೆಯ ಸಾಧನಗಳೂ ಬಳಕೆಯಲ್ಲಿದ್ದುವು. ಮಣ, ಸೇರು, ವೀಶ, ಭಾಂಡಪೇರು, ಕುಳ, ಸೊಂಟಿಕೆ, ಸವುಟು ಮುಂತಾದ ಮಾಪಕಗಳ ಉಲ್ಲೇಖ ದೊರಕುತ್ತದೆ. ಮತ್ತರ ಅಥವಾ ಮತ್ತಲ ಮತ್ತು ನಿವರ್ತನಗಳು ಭೂಮಿಯನ್ನು ಅಳೆಯುವ ಸಾಧನಗಳು. ಖಜ್ಜನ ವಾಗುಲ ಕಚ್ಛಕ್ಷೇತ್ರ, ಗಱ್ದೆ__(ಗದ್ದೆ), ನೆಲ್ಲುಗೆ ಮುಂತಾದವು ಭೂಮಿಯ ವಿಂಗಡಣೆಯನ್ನು ಸೂಚಿಸುವ ಪದಗಳು.

ಕನ್ನಡ, ಸಂಸ್ಕೃತ ಭಾಷೆಗಳು ಬಳಕೆಯಲ್ಲಿದ್ದುವು. ಈ ಎರಡು ಭಾಷೆಗಳ ಶಾಸನಗಳೂ ದೊರಕಿವೆ. ಎರಡಕ್ಕೂ ಲಿಪಿ ಮಾತ್ರ ಕನ್ನಡದ್ದೇ ಆಗಿದ್ದಂತೆ ತಿಳಿದು ಬರುತ್ತದೆ. ಸಂಸ್ಕೃತ ಸಾಹಿತ್ಯ ಈ ಕಾಲದಲ್ಲಿ ಬಹುಶಃ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಮಹಾಕೂಟ ಸ್ತಂಭಶಾಸನದಲ್ಲಿ ವರ್ಣಿಸಲಾಗಿರುವ ಕೀರ್ತಿವರ್ಮನ ದಿಗ್ವಿಜಯವನ್ನು ಕಾಳಿದಾಸಕೃತ ರಘುವಿನ ದಿಗ್ವಿಜಯಕ್ಕೆ ಸಮವೆಂದು ಹೇಳಬಹುದು. ಶಾಸನಕಾವ್ಯದ ರವಿಕೀರ್ತಿ ಯಾರಿಗೂ ಕಡಿಮೆಯಲ್ಲ. ಈ ಮೊದಲೇ ಹೇಳಿದಂತೆ ವಿಜ್ಜಿಕಾನಿರ್ಮಿತ ಕೌಮುದೀಮಹೋತ್ಸವಕಾವ್ಯ ಪ್ರಸಿದ್ಧಕೃತಿ. ಕಾಳಿದಾಸನನ್ನು ಬಿಟ್ಟರೆ ವಿಜ್ಜಿಕೆಯಂತೆ ವೈದರ್ಭೀ ಶೈಲಿಯಲ್ಲಿ ಬರೆಯಬಲ್ಲವರಿಲ್ಲವೆಂದು ರಾಜಶೇಖರ ಈ ಕವಯಿತ್ರಿಯನ್ನು ಶ್ಲಾಘಿಸಿದ್ದಾನೆ. ಅಕಳಂಕ ಕವಿವಿರಚಿತ ತತ್ತ್ವಾರ್ಥ ರಾಜವಾರ್ತಿಕವೆಂಬ ಮೇರುಕೃತಿ ಈ ಕಾಲದ್ದು. ಇವಲ್ಲದೆ ಅನೇಕ ಉದ್ಗ್ರಂಥಗಳೂ ಚಾಳುಕ್ಯರ ಆಶ್ರಯದಲ್ಲಿ ರಚಿತವಾಗಿದ್ದುವು.

ರಾಷ್ಟ್ರಕೂಟರು[ಸಂಪಾದಿಸಿ]

ರಾಷ್ಟ್ರಕೂಟ ವಂಶದವರು ಮೊದಲಿಗೆ ಬಾದಾಮಿ ಚಳುಕ್ಯರ ಮಾಂಡಲಿಕರಾಗಿದ್ದರು. ಚಳುಕ್ಯ ೨ನೆಯ ವಿಕ್ರಮಾದಿತ್ಯ ಮತ್ತು ಕೀರ್ತಿವರ್ಮರ ಕಾಲದಲ್ಲಿ ಈ ವಂಶದ ದಂತಿದುರ್ಗ ಪ್ರಬಲನಾಗಿ ಚಾಳುಕ್ಯರಿಂದ ಸಾರ್ವಭೌಮಾಧಿಕಾರವನ್ನು ವಶಪಡಿಸಿಕೊಂಡ. ೧ನೆಯ ಕೃಷ್ಣ, ಧ್ರುವ, ೩ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ೨ನೆಯ ಕೃಷ್ಣ, ೩ನೆಯ ಕೃಷ್ಣ ಮುಂತಾದ ಪ್ರಮುಖ ರಾಷ್ಟ್ರಕೂಟ ದೊರೆಗಳ ಕಾಲದಲ್ಲಿ ಕರ್ನಾಟಕ ರಾಜ್ಯವೈಭವ ಅತ್ಯುಚ್ಚ ದೆಶೆ ತಲುಪಿತು. ಮಾನ್ಯಖೇಟ ಅಥವಾ ಈಗಿನ ಮಳಖೇಡ (ಗುಲ್ಬರ್ಗ ಜಿಲ್ಲೆ) ಇವರ ಪ್ರಧಾನ ರಾಜಧಾನಿಯಾಗಿತ್ತು. ೧ನೆಯ ಕೃಷ್ಣನ ಕಾಲದಲ್ಲಿ ಚಾಳುಕ್ಯರು ನಾಮಾವಶೇಷರಾದರು. ಆತ ಜೊತೆಗೆ ಕೊಂಕಣ, ಗಂಗ ಮತ್ತು ವೆಂಗಿ ರಾಜ್ಯಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಗೊಳಿಸಿದ. ಉತ್ತರಭಾರತದಲ್ಲಿ ಅವ್ಯವಸ್ಥಿತವಾಗಿದ್ದ ಕನೌಜ್ ರಾಜ್ಯದ ಮೇಲೆ ಕಣ್ಣುಹಾಕಿದ್ದ ಮಾಳ್ವದ ಪ್ರತೀಹಾರ ವತ್ಸರಾಜ ಮತ್ತು ಬಂಗಾಲದ ಧರ್ಮಪಾಲನನ್ನು ಧ್ರುವ ಸೋಲಿಸಿ ಕನೌಜಿನಿಂದ ಕಾಶಿಯವರೆಗೂ ಕರ್ನಾಟಕದ ಪ್ರಭಾವವನ್ನು ಹಬ್ಬಿಸಿದ. ದಕ್ಷಿಣದಲ್ಲಿ ಗಂಗ ಮತ್ತು ಪಲ್ಲವರನ್ನೂ ಪರಾಜಯಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೀಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತೀಹಾರ ನಾಗಭಟನನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೊಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳಗಳ ಒಕ್ಕೂಟವನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ. ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಾಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತನ್ನ ಜಯಸ್ತಂಭ ನೆಡಿಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯಗಳನ್ನು ಕೊಟ್ಟ. ಈ ವಿಜಯಗಳಿಂದ ಚೋಳರ ಕ್ಲೈಬ್ಯ ನೂರು ವರ್ಷಗಳವರೆಗೆ ಮುಂದುವರಿಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನು ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಾಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ರಾಷ್ಟ್ರಕೂಟರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ೩ನೆಯ ಕೃಷ್ಣನ (೯೩೯-೯೬೮) ಕಾಲದಲ್ಲಿ ಪರಮಾವಧಿ ತಲಪಿದ್ದ ಇವರ ರಾಜಕೀಯ ಪ್ರಭಾವ ಅನಂತರ ಇಳಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯ ಮನೆತನದ ಇಮ್ಮಡಿ ತೈಲಪನಿಂದ ರಾಷ್ಟ್ರಕೂಟ ಮನೆತನ ೯೭೩ರಲ್ಲಿ ಕೊನೆಗೊಂಡಿತು.

ರಾಷ್ಟ್ರಕೂಟರು ಕದಂಬ, ಚಳುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದುದರಿಂದ ಮತ್ತು ಆ ಪ್ರದೇಶ ಈಗ ಮಹಾರಾಷ್ಟ್ರಕ್ಕೆ ಸೇರಿರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಿಗೆ ದೊರಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ- ಈ ಆಧಾರಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನವಾದ ಗರುಡ ಅವರ ಲಾಂಛನ; ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀಪೃಥ್ವೀವಲ್ಲಭ ಮುಂತಾದ ಚಾಳುಕ್ಯ ಬಿರುದುಗಳನ್ನು ಧರಿಸಲು ಚಾಳುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು (ಈಗಿನ ಹೈದರಾಬಾದ್ ಬಳಿಯ ಲಾಟೂರು) ಇವರ ಮೂಲಸ್ಥಾನವೂ ಮೊದಲ ರಾಜಧಾನಿಯೂ ಆಗಿತ್ತು. ಅನಂತರ ಅಚಲಾಪುರಕ್ಕೆ (ಈಗಿನ ಎಲಿಚ್ಪುರ್, ವಿದರ್ಭ ಪ್ರದೇಶ) ಇವರು ಸ್ಥಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ (ಈಗಿನ ಮಾಲ್ಕೇಡ್) ರಾಷ್ಟ್ರಕೂಟರ ರಾಜಧಾನಿಯಾಯಿತು.

ಅನೇಕ ರೀತಿಗಳಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದದ್ದು. ಬಾದಾಮಿ ಚಳುಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಬಹಳವಾಗಿ ವಿಸ್ತರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ್, ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಶ್ಚಿಮ-ಮಧ್ಯಭಾರತಗಳಲ್ಲಿ ಘೂರ್ಜರ ಪ್ರತೀಹಾರರೂ ಪೂರ್ವದಲ್ಲಿ ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಸಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲೀನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು. ಅರಬ್ಬೀ ಇತಿಹಾಸಕಾರ ಸುಲೇಮಾನ ಆ ಕಾಲದ ವಿಶ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳಿರುವುದೇ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣತರೆಂದೂ, ಸೇನಾನಿರ್ವಹಣದಲ್ಲಿ ಚತುರರೆಂದು ಆ ಕಾಲದ ಲೇಖಕನಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧಗಳಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದುದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯವನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಬಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ, ಆಡಳಿತಗಳನ್ನು ನಿರ್ವಹಿಸುತ್ತಿದ್ದರು. ಅವಿರತ ಯುದ್ಧಭಾಗಿಗಳಾಗಿದ್ದರೂ ಸಾಹಿತ್ಯ ಕಲಾಪ್ರೋತ್ಸಾಹರಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಸಾಮಾಜಿಕ ಜೀವನದಲ್ಲಿ ಬಾದಾಮಿ ಚಳುಕ್ಯರ ಕಾಲದಲ್ಲಿದ್ದ ಆಚಾರವ್ಯವಹಾರಗಳೇ ಬಹುವಾಗಿ ಮುಂದುವರಿದುವು. ಚಳುಕ್ಯರ ಸಾಮಂತರಾಗಿದ್ದು, ಅನಂತರ ಅವರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ಟುವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಚಳುಕ್ಯರಾಶ್ರಯದಲ್ಲಿ ರೂಢಿಯಲ್ಲಿದ್ದ ಯಜ್ಞಯಾಗಾದಿಗಳು ಈ ಕಾಲದಲ್ಲಿ ಮುಂದುವರಿದುದಕ್ಕೆ ಸಾಕ್ಷ್ಯಗಳು ದೊರಕುವುದಿಲ್ಲ. ಅಹಿಂಸೆಯೇ ಮುಖ್ಯತತ್ತ್ವವಾಗುಳ್ಳ ಜೈನಧರ್ಮದ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ರಾಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವಾ ಶೈವಧರ್ಮದ ಅನುಯಾಯಿಗಳಾಗಿರುತ್ತಿದ್ದು ವೈಷ್ಣವಸಂಕೇತವಾದ ಗರುಡ ಮತ್ತು ಶೈವಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತ್ತಿದ್ದರು. ಇವರ ಶಾಸನಗಳ ಮಂಗಳಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ; ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು. ಇವರ ಪೈಕಿ ಬಂಕೇಶ ಮತ್ತು ಲೋಕಾದಿತ್ಯರು ಪ್ರಮುಖರು. ವಿದ್ಯಾನಂದ, ಜಿನಸೇನ, ಗುಣಚಂದ್ರ, ಪಂಪ ಮುಂತಾದ ಅನೇಕ ಜೈನಯತಿಗಳು ಜೈನಶಾಸ್ತ್ರವೇತ್ತರೂ ವಿದ್ಯಾಪಕ್ಷಪಾತಿಗಳೂ ಸಾಹಿತಿಗಳೂ ಆಗಿದ್ದು ಜೈನಧರ್ಮದ ಪ್ರಾಬಲ್ಯಕ್ಕೆ ಕಾರಣರಾಗಿದ್ದರು. ಬೌದ್ಧಧರ್ಮ ಕೆಲವು ಕೇಂದ್ರಗಳಲ್ಲಿ (ಕನ್ಹೇರಿ, ಕಂಪಿಲ, ಡಂಬಳ) ಅಸ್ತಿತ್ವದಲ್ಲಿದ್ದು ಅದಕ್ಕೂ ರಾಜಾಶ್ರಯವಿದ್ದರೂ ಅದು ಅಷ್ಟು ಪ್ರವರ್ಧಮಾನವಾಗಿರಲಿಲ್ಲ. ಸಾಮಾನ್ಯಜನ ತಮ್ಮ ಸಹಜಪ್ರವೃತ್ತಿಗನುಗುಣವಾಗಿ ಯಾವುದಾದರೊಂದು ಧರ್ಮವನ್ನು ಅಥವಾ ಎಲ್ಲ ಧರ್ಮಗಳನ್ನೂ ಅನುಸರಿಸುತ್ತಿದ್ದರು. ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ. ಒಮ್ಮೆ ಕ್ಷಾಮದ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ತನ್ನ ಕೈಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಪ್ರತೀತಿ. ಈ ರೀತಿ ವಿವಿಧ ಧರ್ಮಗಳ ಸಮಾಗಮದ ಫಲವಾಗಿ ಪರಸ್ಪರ ಗೌರವನಿಷ್ಠೆ ಸಾಮರಸ್ಯಗಳು ಬೆಳೆಯಲು ಸಾಧ್ಯವಾಯಿತು. ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳಾಗಿ, ಭಕ್ತಜನರ ದಾನದತ್ತಿಗಳನ್ನು ಪಡೆದು ಸಂಪದ್ಯುಕ್ತವಾಗಿದ್ದುವು. ದೇವಾಲಯಗಳ ಪ್ರಾಮುಖ್ಯ ಮತ್ತು ಜನರ ಧಾರ್ಮಿಕ ಪ್ರವೃತ್ತಿಗೆ ಉತ್ತಮ ನಿದರ್ಶನವೆಂದರೆ ಎಲ್ಲೋರ (ನೋಡಿ) ಕೈಲಾಸದೇವಾಲಯ. ಇದು ವಿಶ್ವದ ಅದ್ಭುತಗಳಲ್ಲೊಂದು. ಇದನ್ನು ನಿರ್ಮಿಸಲು ಆಶ್ರಯ ಕೊಟ್ಟ ದೊರೆಗೆ ಗೌರವ ತರುವಂತಿದೆ, ಯಾವ ದೇಶವೂ ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆಯಿದು- ಎಂದು ವಿನ್ಸೆಂಟ್ ಎ. ಸ್ಮಿತ್ ಈ ದೇವಾಲಯವನ್ನು ಹೊಗಳಿದ್ದಾನೆ.

ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಿಗೆ ಅದೊಂದು ಮಹತ್ತ್ವದ ಯುಗ. ಆ ಕಾಲದಲ್ಲಿದ್ದ ದುರ್ಗಸಿಂಹ ಕಾತಂತ್ರಸೂತ್ರಗಳ ಮೇಲೆ ತನ್ನ ವೃತ್ತಿಯನ್ನೂ ಅದರ ಮೇಲೊಂದು ವ್ಯಾಖ್ಯಾನವನ್ನೂ ರಚಿಸಿದ. ಶಾಕಟಾಯನ ವ್ಯಾಕರಣ ಪ್ರಸ್ಥಾನವೂ ಆ ಕಾಲಕ್ಕೆ ಸೇರಿದ್ದು, ಆತ ಶಬ್ದಾನುಶಾಸನವನ್ನೂ ಅದರ ಮೇಲಣ ವೃತ್ತಿಯನ್ನೂ ರಚಿಸಿ ಅದನ್ನು ಅಮೋಘವೃತ್ತಿಯೆಂದು ಕರೆದ. ಈ ಕಾಲದ ತಾಮ್ರ ಮತ್ತು ಶಿಲಾಶಾಸನಗಳು ಕೂಡ ಕಾವ್ಯಮಯವಾಗಿವೆ. ಇದುವರೆಗೆ ದೊರೆತಿರುವ ಚಂಪು ಕಾವ್ಯಗಳಲ್ಲಿ ಮೊದಲನೆಯದೆಂದು ಕಾಲನಿರ್ದಿಷ್ಟ ಮಾಡಬಹುದಾದ ನಳಚಂಪು ಕಾವ್ಯದ ನಿರ್ಮಾತೃವಾದ ತ್ರಿವಿಕ್ರಮನೇ ಬೇಗುಮ್ರಾ ತಾಮ್ರಶಾಸನವನ್ನೂ ಮದಾಲಸ ಚಂಪುವನ್ನೂ ರಚಿಸಿದ. ನೃಪತುಂಗ ಸಂಸ್ಕೃತದಲ್ಲಿ ಪ್ರಶ್ನೋತ್ತರಮಾಲಿಕ ಎಂಬ ಮಧುರ ವೈರಾಗ್ಯಗೀತೆಯ ಕರ್ತೃ. ಇವನ ಆಶ್ರಿತನಾಗಿದ್ದ ಮಹಾವೀರಾಚಾರ್ಯನ ಕೃತಿ ಗಣಿತಸಾರಸಂಗ್ರಹ. ಹಲಾಯುಧಕೋಳವೆಂಬ ನಿಘಂಟು, ಕವಿರಹಸ್ಯ ಮತ್ತು ಮೃತಸಂಜೀವಿನಿಗಳ ಲೇಖಕನಾದ ಹಲಾಯುಧ ೩ನೆಯ ಕೃಷ್ಣ ಸಮ್ರಾಟನ ಆಶ್ರಿತ. ಅದ್ವೈತಮತಸ್ಥಾಪಕರಾದ ಶಂಕರಾಚಾರ್ಯರೂ ಅವರ ಮುಖ್ಯ ಶಿಷ್ಯ ಸುರೇಶ್ವರಾಚಾರ್ಯರೂ ಈ ಕಾಲದವರಾಗಿದ್ದರು. ಇವರಿಬ್ಬರ ಅನೇಕ ಕೃತಿಗಳು ವಿದ್ವತ್ಪೂರ್ಣವಾಗಿಯೂ ಭಾರತೀಯ ದರ್ಶನದ ಅಮೂಲ್ಯ ಕೊಡುಗೆಗಳಾಗಿಯೂ ಇವೆ. ರಾಷ್ಟ್ರಕೂಟರ ಆಶ್ರಿತರಾದ ವೇಮುಲವಾಡ ಚಾಳುಕ್ಯರಾಜರ ಆಶ್ರಿತನಾದ ಜೈನ ಸೋಮದೇವಸೂರಿ, ಯಶಸ್ತಿಲಕವೆಂಬ ವಿಶ್ವಕೋಶಸದೃಶವಾದ ನೀತಿವಾಕ್ಯಾಮೃತವನ್ನೂ ರಚಿಸಿದ್ದಾನೆ. ವೀರಸೇನ ಜಿನಸೇನರ ಧವಳಾ ಮತ್ತು ಜಯಧವಳಾ ಎಂಬ ಬೃಹತ್ ಭಾಷ್ಯಾಗಳೂ ಆ ಕಾಲದವು. ಜಿನಸೇನ ಪ್ರಾರಂಭಿಸಿದ ಭರತ ಬಾಹುಬಲಿಗಳ ಚರಿತ್ರೆ ಆದಿಪುರಾಣವನ್ನು ಗುಣಭದ್ರ ತನ್ನ ಉತ್ತರ ಪುರಾಣದಲ್ಲಿ ಪೂರ್ಣಗೊಳಿಸಿದ. ಆದಿಪುರಾಣ ಕನ್ನಡ ಚಂಪುಕಾವ್ಯಗಳಿಗೆ ಪ್ರಚೋದನೆ ನೀಡಿದ ಗ್ರಂಥವೆಂದು ಪರಿಗಣಿತವಾಗಿದೆ. ಜಿನಸೇನನ ಮತ್ತೊಂದು ಕೃತಿ ಪಾಶಾರ್ವ್‌ಭ್ಯುದಯ (ಸಮಸ್ಯಾಪುರಣವೆಂಬ ಕಾವ್ಯತಂತ್ರದಲ್ಲಿ ಬರೆಯಲಾದ ಈ ಕೃತಿಯಲ್ಲಿ ಕಾಳಿದಾಸನ ಮೇಘದೂತದ ಪ್ರತಿ ಪಾದಕ್ಕೂ ಕವಿ ತನ್ನ ಮೂರು ಪಾದಗಳನ್ನು ಸೇರಿಸಿ ಪಾಶರ್ವ್‌ನಾಥನ ವರ್ಣನೆ ಬರುವಂತೆ ನಿರ್ಮಿಸಿದ್ದಾನೆ.) ಅಸಗನ ವರ್ಧಮಾನ ಪುರಾಣ ಈ ಕಾಲದ ಕೃತಿ. ಈತ ಕನ್ನಡದಲ್ಲೂ ಹೆಸರಾಂತ ಕವಿ. ವಿದ್ಯಾನಂದನೆಂಬ ಜೈನಯತಿ ಸಮಂತಭಧ್ರನ ಆಪ್ತಮೀಮಾಂಸಾ ಗ್ರಂಥದ ಮೇಲೆ ಅಷ್ಟಸಾಹಸ್ತ್ರೀ ಎಂದು ಪ್ರೌಢ ವ್ಯಾಖ್ಯಾನವನ್ನೂ ಆಪ್ತಪರೀಕ್ಷಾ ಎಂಬ ಕೃತಿಯನ್ನೂ ರಚಿಸಿದ್ದಾನೆ.

ರಾಷ್ಟ್ರಕೂಟರದು ಕನ್ನಡ ಸಾಹಿತ್ಯದ ಪರ್ವಕಾಲ. ಇದಕ್ಕೂ ಮೊದಲೇ ಕನ್ನಡ ನಾಡನುಡಿಯಾಗಿತ್ತು. ೫ನೆಯ ಶತಮಾನದಿಂದಲೇ ಶಾಸನ ಸಾಹಿತ್ಯವಾಗಿ ಕನ್ನಡ ಬಳಕೆಯಲ್ಲಿತ್ತು. ಆದರೆ ರಾಷ್ಟ್ರಕೂಟರ ಕಾಲಕ್ಕೆ ಮುಂಚಿನ ಯಾವುದೇ ಕನ್ನಡ ಕೃತಿಯೂ ಈವರೆಗೆ ದೊರೆತಿಲ್ಲ. ಆದರೂ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿತ್ತೆಂಬುದಕ್ಕೆ ಅನೇಕ ಆಧಾರಗಳಿವೆ. ನೃಪತುಂಗ ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಿರುವ ಕವಿಗಳಲ್ಲಿ ಕೆಲವರಾದರೂ ರಾಷ್ಟ್ರಕೂಟರ ಕಾಲಕ್ಕೂ ಹಿಂದಿನವರು. ಚಾಳುಕ್ಯಕುಲತಿಕೆ ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಕೆ ಕನ್ನಡ ಸರಸ್ವತಿಯೆಂದು ಹೆಸರಾದವಳು. ಕನ್ನಡ ಸಾಹಿತ್ಯದ ಅಗ್ರಮಾನ್ಯರಾದ ಪಂಪ, ಪೊನ್ನ, ಅಸಗ, ಚಾವುಂಡರಾಯರಂಥ ಶ್ರೇಷ್ಠ ಸಾಹಿತಿಗಳದೂ ವಡ್ಡಾರಾಧನೆಯಂಥ ಪ್ರೌಢಗದ್ಯದ ವಿಶಿಷ್ಟ ಕಥಾ ಸಾಹಿತ್ಯದ್ದೂ ರಾಷ್ಟ್ರಕೂಟರ ಕಾಲವೆಂಬುದರಿಂದ ಆ ಯುಗ ಎಷ್ಟೊಂದು ಮಹತ್ತ್ವದ್ದೆಂಬುದರ ಅರಿವುಂಟಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಈವರೆಗೆ ದೊರೆಕಿರುವುದರಲ್ಲಿ ಅತ್ಯಂತ ಪ್ರಾಚೀನವಾದ ಕವಿರಾಜಮಾರ್ಗದ ಕರ್ತೃ ರಾಷ್ಟ್ರಕೂಟ ಚಕ್ರವರ್ತಿಯಾದ ನೃಪತುಂಗ ಒಂದನೆಯ ಅಮೋಘವರ್ಷನೆಂದು ಹಲವು ವಿದ್ವಾಂಸರು ತರ್ಕಿಸಿದ್ದಾರೆ. ಅಥವಾ ಕವೀಶ್ವರ ಇದರ ಕರ್ತೃವಾಗಿದ್ದರೆ, ಅದಕ್ಕೆ ನೃಪತುಂಗನ ಅಭಿಮತವಿದೆ. ಕನ್ನಡಿಗರ ಜಾಣ್ಮೆಯ ಬಗೆಗೆ ಇಲ್ಲಿರುವ, ಪದನ¿Âದು ನುಡಿಯಲುಂ | ನುಡಿದುದನ¿Âದಾರಯಲು¿Â ಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ || ಎಂಬ ಪದ್ಯ ಉತ್ತಮನಿದರ್ಶನ. ಅಸಗ, ಗುಣನಂದಿ ಮತ್ತು ಗುಣವರ್ಮರು ಈ ಕಾಲದವರಾದರೂ ಅವರ ಕೃತಿಗಳು ದೊರಕಿಲ್ಲ. ಅನಂತರ ಕಾಲದ ಕವಿಗಳು ಇವರ ಕೃತಿಗಳಿಂದ ಉದ್ಧರಿಸುವ ಭಾಗಗಳು ಮಾತ್ರ ನಮಗೆ ಲಭ್ಯ. ವೇಮುಲವಾಡ ಚಾಳುಕ್ಯ ಅರಿಕೇಸರಿಯ ಬಾಲ್ಯದ ಗೆಳೆಯನೂ ಅನಂತರ ಆತನ ಮಂತ್ರಿ ಸೇನಾನಿಯೂ ಆಗಿದ್ದ ಪಂಪ ಕವಿಸಾರ್ವಭೌಮ, ಕನ್ನಡದ ಆದಿಕವಿ. ಈತ ಜೈನ. ಆತ್ಮೋದ್ಧಾರಕ್ಕಾಗಿ ಆದಿಪುರಾಣವೆಂಬ ಧರ್ಮಗ್ರಂಥವನ್ನೂ ಲೋಕವ್ಯವಹಾರ ಮತ್ತು ಆಶ್ರಯದಾತನ ಪ್ರೀತಿಗಾಗಿ ವಿಕ್ರಮಾರ್ಜುನ ವಿಜಯವೆಂಬ ಜನಪ್ರಿಯ ಭಾರತವನ್ನೂ ಬರೆದ. ೩ನೆಯ ಕೃಷ್ಣನ ಆಸ್ಥಾನದಲ್ಲಿ ವರಕವಿಯಾಗಿದ್ದ ಪಂಪನ ಸಮಕಾಲೀನ ಉಭಯಕವಿ ಚಕ್ರವರ್ತಿ ಪೊನ್ನ ಶಾಂತಿಪುರಾಣ, ಭುವನೈಕರಾಮಾಭ್ಯುದಯ ಎಂಬ ಗ್ರಂಥಗಳನ್ನೂ ಜಿನಾಕ್ಷರಮಾಲೆಯೆಂಬ ೩೯ ಕಂದಗಳ ಕಿರುಕೃತಿಯನ್ನೂ ರಚಿಸಿದ್ದಾನೆ. ೪ನೆಯ ರಾಚಮಲ್ಲ ಗಂಗರಾಜನ ಮಂತ್ರಿ, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ನಿರ್ಮಾಪಕ ಚಾವುಂಡರಾಯ ಚಾವುಂಡರಾಯಪುರಾಣದ ಕರ್ತೃ. ಆ ಕಾಲದ ಅತ್ಯಂತ ವೈಭವಪೂರ್ಣ ಗ್ರಂಥ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ. ಸುಕುಮಾರಸ್ವಾಮಿ, ನಾಗಶ್ರೀ ಕಥೆಗಳು, ವಿದ್ಯಚ್ಚೋರನ ಕಥೆ, ಕಾರ್ತಿಕ ಋಷಿಯ ಕಥೆ, ಮಲಯಸುಂದರನ ಕಥೆ ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪರೂಪ ಕೊಡುಗೆಗಳು. ಆ ಕಾಲದ ಶಾಸನಗಳ ಕನ್ನಡ ಸಹ ವ್ಯಾಕರಣಬದ್ಧವಾಗಿದ್ದುದಲ್ಲದೆ ಭಾಷಾ ಬೆಳೆವಣಿಗೆ, ಸಾಹಿತ್ಯ ಪ್ರಗತಿಗಳ ಅಭ್ಯಾಸಕ್ಕೆ ಪ್ರಯೋಜನಕಾರಿಯಾಗಿದೆ.

ಕಲ್ಯಾಣ ಚಾಳುಕ್ಯರು[ಸಂಪಾದಿಸಿ]

ರಾಷ್ಟ್ರಕೂಟರ ಅನಂತರ ಪ್ರವರ್ಧಮಾನಕ್ಕೆ ಬಂದ ಕಲ್ಯಾಣ ಚಾಳುಕ್ಯವಂಶ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದು ದಕ್ಷಿಣದಲ್ಲಿ ಅತಿ ಪ್ರಬಲರಾಗಿದ್ದ ಚೋಳರೊಡನೆ ಸತತ ಹೋರಾಟ ನಡೆಸಿದುದಲ್ಲದೆ ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ತನ್ನ ಬಲವನ್ನು ವಿಸ್ತರಿಸಿತು. ಸತ್ಯಾಶ್ರಯ ಇರಿವ ಬೆಡಂಗ, ಜಯಸಿಂಹ, ಸೋಮೇಶ್ವರ ಆಹವಮಲ್ಲ ಮತ್ತು ಇಮ್ಮಡಿ ಸೋಮೇಶ್ವರರಂಥ ಪ್ರಸಿದ್ಧ ದೊರೆಗಳ ಅನಂತರ ಸಿಂಹಾಸನವನ್ನೇರಿದ ಆರನೆಯ ವಿಕ್ರಮಾದಿತ್ಯ (೧೦೭೭-೧೧೨೭) ಕರ್ನಾಟಕದ ಅತ್ಯಂತ ಪ್ರಸಿದ್ಧ ದೊರೆ. ಚಾಳುಕ್ಯ ವಿಕ್ರಮಶಕೆಯ ಮೂಲಪುರಷನೀತನೇ. ಚೋಳ, ಲಾಟ ಮತ್ತು ಉಚ್ಚಂಗಿಯ ಪಾಂಡ್ಯರನ್ನು ಈತ ಸದೆಬಡಿದ. ತನ್ನಣ್ಣನಾದ ಎರಡನೆಯ ಸೋಮೇಶ್ವರನನ್ನು ಮೂಲೆಗೊತ್ತಿ ಸಿಂಹಾಸನವನ್ನಾಕ್ರಮಿಸಿದ ವಿಕ್ರಮಾದಿತ್ಯ ತನ್ನ ತಮ್ಮ ಜಯಸಿಂಹನ ದಂಗೆಯನ್ನೂ ಹತ್ತಿಕ್ಕಿದ. ಮಾಳ್ವವನ್ನು ಮೂರು ಭಾರಿ ಜಯಿಸಿ ನರ್ಮದೆಯ ದಕ್ಷಿಣಕ್ಕಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ. ಅನಂತರ ತನ್ನ ಸಾಮಂತರ ಪೈಕಿ, ಪುಂಡರೆನಿಸಿದ್ದವರನ್ನು ಸದೆಬಡಿದ. ತನ್ನ ಬದ್ಧ ವೈರಿಯಾದ ಒಂದನೆಯ ಕುಲೋತ್ತುಂಗ ಚೋಳನ ವಿರುದ್ಧ ಸಂಚುಹೂಡಿ ವೆಂಗಿಯಲ್ಲಿ ಚೋಳರ ಪ್ರಾಬಲ್ಯ ಮುರಿದ. ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಚಾಳುಕ್ಯ ರಾಜ್ಯ ವಿಸ್ತಾರಗೊಂಡಿತು. ಆದರೆ ಇವನ ಆಳ್ವಿಕೆಯ ಕಡೆಗಾಲದಲ್ಲೇ ಚಾಳುಕ್ಯ ರಾಜ್ಯದ ಅವನತಿಯೂ ಪ್ರಾರಂಭವಾಗಿ ಉತ್ತರಭಾಗದಲ್ಲಿ ಕಳಚುರ್ಯರೂ ದಕ್ಷಿಣದಲ್ಲಿ ಹೊಯ್ಸಳರೂ ಪ್ರಬಲರಾದರು. ಬಿಜ್ಜಳನಿಂದ ಪ್ರಾಮುಖ್ಯ ಪಡೆದ ಕಳಚುರ್ಯರು ೧೧೬೨ ರಿಂದ ೧೧೮೪ರವರೆಗೂ ಸಿಂಹಾಸನವನ್ನು ತಮ್ಮ ವಶಪಡಿಸಿಕೊಂಡಿದ್ದು ಪುನಃ ಚಾಳುಕ್ಯ ೪ನೆಯ ಸೋಮೇಶ್ವರನಿಂದ ಪರಾಭವಗೊಂಡರು. ಬಿಜ್ಜಳನ ಆಳ್ವಿಕೆಯ ಮಹತ್ತ್ವವೆಂದರೆ ಅವನ ಭಂಡಾರಿಯೂ ಅನಂತರ ಮಂತ್ರಿಯೂ ಆಗಿದ್ದರೆಂದು ಹೇಳಲಾದ ವೀರಶೈವ ಧರ್ಮ ಪ್ರವರ್ಧಕ ಬಸವೇಶ್ವರರು ಅವನ ಆಸ್ಥಾನದಲ್ಲಿದ್ದದು. ೪ನೆಯ ಸೋಮೇಶ್ವರ ೧೧೯೮ರವರೆಗೂ ಆಳುತ್ತಿದ್ದ.

ಹತ್ತನೆಯ ಶತಮಾನದ ಆದಿಭಾಗದಿಂದ ಹಲವು ಪ್ರದೇಶಗಳಲ್ಲಿ ಅಧಿಕಾರ ಪಡೆದಿದ್ದ ಸೇವುಣ ಅಥವಾ ದೇವಗಿರಿಯ ಯಾದವರು ಕಲ್ಯಾಣ ಚಾಳುಕ್ಯರ ಅನಂತರ ಉತ್ತರಭಾಗದಲ್ಲಿ ಪ್ರಬಲರಾದರು. ಆ ವಂಶದ ೪ನೆಯ ಸಿಂಘಣ, ೫ನೆಯ ಭಿಲ್ಲಮ, ೨ನೆಯ ಸಿಂಘಣ ಮುಂತಾದ ಶಕ್ತ ದೊರೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ, ದಕ್ಷಿಣದಲ್ಲಿ ಪ್ರಬಲರಾಗಿದ್ದ ಹೊಯ್ಸಳರೊಂದಿಗೆ ಕರ್ಣಾಟಕದ ಸ್ವಾಮ್ಯಕ್ಕಾಗಿ ಹೋರಾಡಿದರು. ಆ ವಂಶದ ಕೊನೆಯ ಪ್ರಸಿದ್ಧ ದೊರೆಯಾದ ರಾಮಚಂದ್ರ ಮಹಮ್ಮದೀಯ ಅಕ್ರಮಣಕಾರರ ವಿರುದ್ಧ ಹೋರಾಡಿದ. ಕೊನೆಗೆ ದಾಳಿಕೋರ ಅಲ್ಲಾವುದ್ದೀನನೊಂದಿಗೆ ಸಂಧಿ ಮಾಡಿಕೊಳ್ಳಬೇಕಾಯಿತು. ಪುನಃ ೧೩೦೭ರಲ್ಲಿ ಅಲ್ಲಾವುದ್ದೀನ ಸೇನಾನಿ ಮಲಿಕ್ ಕಾಫೂರನಿಂದ ದೇವಗಿರಿ ರಾಜ್ಯ ನಾಶ ಹೊಂದಿತು.

ಹೊಯ್ಸಳರು[ಸಂಪಾದಿಸಿ]

ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಾಜ್ಯ ಕಟ್ಟಿದರು. ಮುಂದೆ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಾಡಿಕೊಂಡರು. ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ೧೨-೧೩ನೆಯ ಶತಮಾನಗಳಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ (೧೧೦೮-೧೧೫೨) ತಲಕಾಡು ವಿಜಯದೊಂದಿಗೆ (೧೧೧೬) ಈ ರಾಜವಂಶದ ಉಚ್ಛ್ರಾಯ ಕಾಲ ಆರಂಭವಾಯಿತು. ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಾಮನಾಥ ಮತ್ತು ಮುಮ್ಮಡಿ ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನೂ ದಕ್ಷಿಣದಲ್ಲಿ ಚೋಳ ಪಾಂಡ್ಯರನ್ನೂ ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ಧಿ ಹೆಚ್ಚಿಸಿದರು. ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ ಕೊಂಗಾಳ್ವರನ್ನೂ ನಿಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನೂ ಕುಮ್ಮಟವನ್ನೂ ಗೆದ್ದ. ಬೆಳ್ವೊಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿನ ಕದಂಬರೂ ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರಿಗೆ ಮಾತ್ರ ಸಾಮಂತರಾಗಿದ್ದರೂ, ವಾಸ್ತವವಾಗಿ ಸ್ವತಂತ್ರರಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು.

ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. ಕೆಲಕಾಲನಂತರ ಬೆಳ್ವೊಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಾಡಿ ೧೧೯೦ ರಲ್ಲಿ ಸೊರಟೂರು ಕದನದಲ್ಲಿ ಅವರನ್ನು ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದುವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗೆಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳ ಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ಥಾಪಿಸಿ, ಕಣ್ಣಾನೂರನ್ನು (ತಿರುಚಿರಾಪಳ್ಳಿಯ ಬಳಿಯಿರುವ ಈಗಿನ ಸಮಯಪುರ) ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಇಮ್ಮಡಿ ಬಲ್ಲಾಳ ಈ ಕಾರ್ಯಗಳನ್ನು ಸಾಧಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದ. ಕರ್ನಾಟಕದ ರಾಜರಲ್ಲೆಲ್ಲ ಅತ್ಯಂತ ಪ್ರಮುಖರಲ್ಲೊಬ್ಬನೆಂದು ಕರೆಸಿಕೊಂಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಾಡುತ್ತಿದ್ದು ಕಡೆಗೆ ತನ್ನ ೮೦ನೆಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕೊಳಗಾಗಿ ಪ್ರಾಣ ತೆತ್ತ.

ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದು. ಈ ಯುಗದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ, ಮತೀಯ ಸಮನ್ವಯ, ವಿದ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ಧಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಭವನಾದ ಇಮ್ಮಡಿ ತೈಲ, ರಾಷ್ಟ್ರಕೂಟರನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರಾದ ಸತ್ಯಾಶ್ರಯ ಇರಿವಬೆಡಂಗ, ಜಯಸಿಂಹ ವಲ್ಲಭ, ೧ನೆಯ ಸೋಮೇಶ್ವರ ಆಹವಮಲ್ಲ ಮತ್ತು ೬ನೆಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆಯನ್ನು ವೃದ್ಧಿಗೊಳಿಸಿದರು. ಇವರ ಯುದ್ಧ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತವಾಗಿರಲಿಲ್ಲವೆಂಬುದೇನೋ ನಿಜ. ಭಾರತದ ಮಾರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಬಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ ಪ್ರಮುಖ ಆಡಚಣೆಗಳಾಗಿದ್ದರೂ ಇವರು ತಮ್ಮ ರಾಜ್ಯದ ಸಮಗ್ರತೆಯನ್ನು ರಕ್ಷಿಸಿಕೊಂಡುದಲ್ಲದೆ ಪೂರ್ವದಲ್ಲಿ ವೆಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು, ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರ ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಅಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು.

ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೀಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು. ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂತ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕತೀಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯ ತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು.

ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳು- ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿ ವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ) - ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಾಲಕನಾಗಿದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು. ಗ್ರಾಮಪ್ರತಿನಿಧಿಗಳಾದ ಹಿರಿಯರ ನೇತೃತ್ವದಲ್ಲಿ ಗ್ರಾಮಾಡಳಿತ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಕೆಳಗಿನ ಹಂತಗಳಲ್ಲಿ ವಿವಿಧ ಮಟ್ಟಗಳ ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಒಂಬತ್ತನೆಯ ಶತಮಾನದಲ್ಲಿ ಅದ್ವೈತ ಪ್ರತಿಪಾದಕ ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದು ಮತ್ತು ಹತ್ತನೆಯ ಶತಮಾನದಲ್ಲಿ ಗಂಗ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಸ್ಥಾಪಿಸಿದ್ದು ರಾಜ್ಯದ ಧಾರ್ಮಿಕ ವಿಕಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ೧೧, ೧೨, ೧೩ನೆಯ ಶತಮಾನಗಳ ಅವಧಿ ಬಹಳ ಮಹತ್ತ್ವದ ಕಾಲ. ಶೈವಧರ್ಮದ ವಿಭಾಗವಾದ ಕಾಳಾಮುಖ ಪಂಥದ ಸ್ಥಾಪಕ ಲಕುಲೀಶನ ಉಲ್ಲೇಖಗಳು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯರರಸ ೨ನೆಯ ಜಯಸಿಂಹ ಜೈನಧರ್ಮದಿಂದ ಶೈವಧರ್ಮಕ್ಕೆ ಪರಿವರ್ತಿತನಾದ. ಶೈವಗುರುಗಳು ತಪೋನಿಷ್ಠರೂ ವಿದ್ವಾಂಸರೂ ಆಗಿದ್ದು ಸಾರ್ವತ್ರಿಕವಾಗಿ ಗೌರವ ಪಡೆದಿದ್ದರು. ೧೨ನೆಯ ಶತಕದಲ್ಲಿ ಬಸವೇಶ್ವರರು ವೀರಶೈವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿಯನ್ನುಂಟುಮಾಡಿದರು. ಇವರ ಜೀವನ ಮತ್ತು ಭಕ್ತಿಮಾರ್ಗಗಳು ಸರಳವಾಗಿದ್ದು ಜನತೆಯನ್ನು ವೀರಶೈವ ಧರ್ಮದ ಕಡೆಗೆ ಆಕರ್ಷಿಸಿದುವು. ಜಾತಿ, ಮತ, ಲಿಂಗಭೇದಗಳನ್ನು ಲಕ್ಷಿಸಿದ, ಸಮಾಜದ ಸುಪ್ತ ಚೈತನ್ಯಗಳನ್ನು ಹೊರತರಬಲ್ಲ ಈ ಸಾಮಾಜಿಕ ಆಂದೋಳನದಿಂದ ಅದ್ಭುತ ಪರಿಣಾಮಗಳುಂಟಾದುವು. ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತತ್ತ್ವಪ್ರಚಾರಕ್ಕೆ ಬಳಸಿದುದಿಂದ ಸರಳವೂ ಸತ್ತ್ವಪೂರ್ಣವೂ ಆದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕಾನೇಕ ಶರಣರೂ ವೀರಶೈವ ಧರ್ಮಪ್ರಚಾರಕರೂ ದೇಶಾದ್ಯಂತ ಸಂಚರಿಸಿ, ಸರಳವೂ ಜನಪ್ರಿಯವೂ ಆದ ವಚನಗಳಿಂದ ಜನರನ್ನು ಆಕರ್ಷಿಸಿದರು. ಈ ರೀತಿಯ ಮತ ಪ್ರಸಾರ ನಡೆಯುತ್ತಿದ್ದರೂ ಧರ್ಮಾಂಧತೆಯಿಲ್ಲದಿದ್ದು ಜನಸಾಮಾನ್ಯರಲ್ಲಿ ಪರಧರ್ಮಸಹನೆ ಪ್ರಧಾನವಾಗಿತ್ತೆನ್ನಬಹುದು.

ಶೈವಧರ್ಮಾವಲಂಬಿಗಳಾದ ರಾಜರೂ ಜೈನಧರ್ಮಕ್ಕೆ ಉತ್ತೇಜನ ನೀಡುತ್ತಿದ್ದರು. ಕ್ಷೀಣಗತಿಯಲ್ಲಿದ್ದ ಬೌದ್ಧಧರ್ಮದ ಬಗೆಗೂ ಸಹನೆ ತೋರುತ್ತಿದ್ದರು. ಚಾಳುಕ್ಯ ವಂಶದ ಜಯಸಿಂಹರಾಜನ ಆಸ್ಥಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವಿದ್ದು, ಶೈವ, ಜೈನ ಆಚಾರ್ಯರು ಸಮೃದ್ಧ ಧಾರ್ಮಿಕಜೀವನಕ್ಕೂ ದಾರ್ಶನಿಕಸಾಹಿತ್ಯಕ್ಕೂ ಕಾರಣರಾಗಿದ್ದರು. ಅನ್ಯಮತಸಹಿಷ್ಣುತೆಯೊಂದಿಗೆ ವಿವಿಧ ಮತಧರ್ಮಗಳಲ್ಲಿ ಶ್ರದ್ಧೆಯಿದ್ದ ವ್ಯಕ್ತಿಗಳೂ ಹಲವಾರು ಜನರಿದ್ದು ಎಲ್ಲ ಮತದ ದೇವರುಗಳನ್ನೂ ಪುಜಿಸಿ ಗೌರವಿಸುತ್ತಿದ್ದ ನಿದರ್ಶನಗಳು ಹಲವಾರಿವೆ. ೧೧೨೯ರ ಶಾಸನದ ವಾಕ್ಯವೊಂದು ಇದಕ್ಕೆ ಉತ್ತಮ ನಿದರ್ಶನ: ಹರಿ-ಹರ-ಕಮಲಾಸನ-ವೀತರಾಗ-ಬೌದ್ಧಾಲಯಂಗಳಂದಿನ ವಸುಂಧರೆಗೆಸೆವ ಪಂಚಶರದಂತಿರೆ ಪಂಚಮಠಂಗಳೆಸೆವುವಾಪಟ್ಟಣದೊಳ್ ಎಂದು ಅದು ಬಳ್ಳಿಗಾವೆಯನ್ನು ವರ್ಣಿಸುತ್ತದೆ.

ಹೊಯ್ಸಳರ ಆಶ್ರಯದಲ್ಲಿ ಈ ನೀತಿಗೆ ಹೆಚ್ಚಿನ ಪ್ರಾಧಾನ್ಯವಿತ್ತೆಂದು ತಿಳಿದುಬರುತ್ತದೆ. ಅವರ ಶಾಸನಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಧ್ಯಾನ ಶ್ಲೋಕ ಇದಕ್ಕೆ ನಿದರ್ಶನ. ಶಿವನೆಂಬ ಹೆಸರಿನಿಂದ ಶೈವರೂ, ಬ್ರಹ್ಮವೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ನೈಯಾಯಿಕರೂ ಅರ್ಹನೆಂದು ಜೈನರೂ ಕರ್ಮವೆಂದು ಮೀಮಾಂಸಕರೂ ಯಾರನ್ನು ಪುಜಿಸುವರೋ ಆ ಕೇಶವೇಶ ನಮ್ಮನ್ನು ರಕ್ಷಿಸಿಲೆಂಬುದು ಆ ಶ್ಲೋಕಾರ್ಥ. ಈ ತತ್ತ್ವದ ಅನುಷ್ಠಾನ ಎಷ್ಟುಮಟ್ಟಿಗೆ ಬಳಕೆಯಲ್ಲಿತ್ತೆಂಬುದನ್ನು ಸಮಕಾಲೀನ ಶಾಸನಗಳೂ ಸಾಹಿತ್ಯವೂ ತೋರಿಸುತ್ತವೆ. ಎಲ್ಲ ಧರ್ಮಗಳ ದೇವತೆಗಳಿಗೂ ಆಲಯಗಳನ್ನು ಕಟ್ಟಿ ದಾನದತ್ತಿಗಳನ್ನು ನೀಡಲಾಗಿತ್ತು. ಶೈವರಲ್ಲಿ ವೈದಿಕರು, ಲಕುಲೀಶ ಪಾಶುಪತ ಸಂಪ್ರದಾಯದವರು ಮತ್ತು ವೀರಶೈವರೆಂಬ ತ್ರಿವರ್ಗಗಳವರಿದ್ದರು. ವೈಷ್ಣವರಲ್ಲಿ ವಾಸುದೇವನ ಆರಾಧಕರಾದ ಭಾಗವತರು, ದಕ್ಷಿಣದೇಶದ ಆಳ್ವಾರುಗಳ ಪಂಥ ಮತ್ತು ಅದರಿಂದ ವಿಕಾಸಗೊಂಡ ರಾಮಾನುಜೀಯ ಶ್ರೀವೈಷ್ಣವಪಂಥ ಮತ್ತು ಹೊಯ್ಸಳಯುಗದ ಕೊನೆಯ ಭಾಗದಲ್ಲಿ ಮಧ್ವಮುನಿ ಸಂಚಾಲಿತ ವೈಷ್ಣವಪಂಥಗಳು ಪ್ರಧಾನವಾಗಿದ್ದುವು. ವಿಷ್ಣುವಿನ ವಿವಿಧ ಅವತಾರಗಳೂ ಸೂರ್ಯ, ಶಕ್ತಿ, ಸರಸ್ವತಿ, ಕಾರ್ತಿಕೇಯ, ಗಣಪತಿಗಳನ್ನು ಪುಜಿಸುತ್ತಿದ್ದ ಮತಪ್ರಭೇದಗಳೂ ರೂಢಿಯಲ್ಲಿದ್ದುವು. ಈ ಕಾಲದಲ್ಲಿ ಹಿಂದೂ ಧರ್ಮದ ಇಬ್ಬರು ಮಹಾನ್ ಆಚಾರ್ಯಪುರುಷರು ದಕ್ಷಿಣ ಕರ್ನಾಟಕದಲ್ಲಿ ಬಾಳಿ ತಮ್ಮ ಉಪದೇಶಾಮೃತದಿಂದ ಧಾರ್ಮಿಕ ಪ್ರವೃತ್ತಿಯ ಬೆಳೆವಣಿಗೆಗೆ ಕಾರಣರಾದರು. ತಮಿಳು ದೇಶದಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳು ಪ್ರಸಾರಮಾಡಿದ ತತ್ತ್ವಗಳನ್ನು ೧೧ನೆಯ ಶತಕದಲ್ಲಿ ನಾಥಮುನಿಯೂ ಆತನ ಮೊಮ್ಮಗ ಯಾಮುನಾಚಾರ್ಯರು ಜನಪ್ರಿಯಗೊಳಿಸಿದ್ದರು. ಅದೇ ಸಂಪ್ರದಾಯಕ್ಕೆ ಸೇರಿದ ರಾಮಾನುಜಾಚಾರ್ಯರು (೧೦೭೧-೧೧೩೭) ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಜನಿಸಿದರಾದರೂ ತಮ್ಮ ಜೀವನದ ಸಂಧಿಕಾಲದಲ್ಲಿ ಇವರು ಕರ್ಣಾಟಕದಲ್ಲಿ ಆಶ್ರಯ ಪಡೆದರು. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಪಂಥವನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಶೈವನಾಗಿದ್ದ ಚೋಳರಾಜನ ಹಿಂಸೆಗೊಳಗಾಗಿ ತಮಿಳುನಾಡಿನಿಂದ ಕರ್ನಾಟಕದ ಸಾಲಿಗ್ರಾಮ, ತೊಂಡನೂರು, ಮೇಲುಕೋಟೆಗಳಲ್ಲಿ ಬಹುಕಾಲ ನೆಲೆಸಿದ್ದರು. ಇವರು ತೊಂಡನೂರಿನಲ್ಲಿದ್ದಾಗ ಹೊಯ್ಸಳ ವಿಷ್ಣುವರ್ಧನ ಇವರ ಪ್ರಭಾವಕ್ಕೊಳಗಾದ. ರಾಮಾನುಜರು ಕರ್ನಾಟಕದಲ್ಲಿ ತಮ್ಮ ತತ್ತ್ವಗಳನ್ನು ಬೋಧಿಸಿ ವಿಶಿಷ್ಟಾದ್ವೈತ ಮತವನ್ನು ಇಲ್ಲೂ ನೆಲೆಗೊಳಿಸಿದರು. ಜಾತಿ ವೈಷಮ್ಯಗಳನ್ನು ಎದುರಿಸಿ ಎಲ್ಲ ಜಾತಿಗಳವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರಲ್ಲದೆ ಅವುಗಳ ನಿರ್ಮೂಲಕ್ಕೂ ಶ್ರಮಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಭಕ್ತಿಮಾರ್ಗವನ್ನು ಉತ್ತೇಜಿಸಿದರು. ಪ್ರಪತ್ತಿಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯವೆಂಬುದು ಇವರ ಬೋಧನೆ. ತಲಕಾಡು, ಬೇಲೂರು, ತೊಂಡನೂರು, ಮೇಲುಕೋಟೆ ಮತ್ತು ಗದಗಗಳಲ್ಲಿ ನಾರಾಯಣ ದೇಗುಲಗಳ ಸ್ಥಾಪನೆಯೂ ಇವರು ಕರ್ನಾಟಕದಲ್ಲಿ ಸಾಧಿಸಿದ ಕಾರ್ಯಗಳಲ್ಲೊಂದೆಂದು ಹೇಳಲಾಗಿದೆ. ಮುಂದಿನ ಶತಮಾನದಲ್ಲಿದ್ದ ಮಧ್ವಾಚಾರ್ಯರು (ಆನಂದತೀರ್ಥ, ಪೂರ್ಣಪ್ರಜ್ಞ-ಸು. ೧೨೩೮-೧೩೧೭) ಉಡುಪಿಯ ಬಳಿ ಪಾಜಕವೆಂಬಲ್ಲಿ ಜನಿಸಿ ಬಾಲ್ಯದಲ್ಲೇ ವೇದಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ಗುರುಗಳಾದ ಅಚ್ಯುತಪ್ರೇಕ್ಷರಿಂದ ಸನ್ಯಾಸ ಪಡೆದು ಅನಂತರ ಕಾಲದಲ್ಲಿ ವೈಷ್ಣವ ಅಥವಾ ದ್ವೈತಮತಸ್ಥಾಪಕರಾದರು. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದುದಲ್ಲದೆ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ತಮ್ಮ ಮತಪ್ರಸಾರ ಮಾಡಿದರು. ಈ ಧರ್ಮದ ಪ್ರಭಾವ ಉತ್ತರದಲ್ಲಿ ಬಂಗಾಲ ಗುಜರಾತುಗಳಿಗೂ ವ್ಯಾಪಿಸಿತ್ತು. ಎಂಟನೆಯ ಶತಮಾನದ ಶಂಕರಾಚಾರ್ಯರು, ಅನಂತರದ ರಾಮಾನುಜಾಚಾರ್ಯರು, ಮಧ್ವಾಚಾರ್ಯ, ಬಸವೇಶ್ವರ ಮುಂತಾದ ಮಹಾಪುರುಷರ ಉಪದೇಶದ ಫಲವಾಗಿ ಕರ್ನಾಟಕದ ಜನತೆಯಲ್ಲಿ ಕ್ರಾಂತಿಕಾರಿ ಸುಧಾರಣಾ ಮನೋಭಾವಗಳು ಬೆಳೆದುವಲ್ಲದೆ, ನೈತಿಕ, ಧಾರ್ಮಿಕ ಮತ್ತು ಸದಾಚಾರಯುಕ್ತ ಭಾವನೆಗಳು ಬೆಳೆದುವು. ಶಂಕರರು ಜ್ಞಾನಮಾರ್ಗ ಪ್ರತಿಪಾದಕರಾಗಿದ್ದರೆ ಉಳಿದ ಮೂವರೂ ಭಕ್ತಿಪಂಥದ ಪ್ರಸಾರಕರಾಗಿದ್ದರು. ರಾಮಾನುಜ, ಮಧ್ವರು ಸಂಪ್ರದಾಯವಾದಿಗಳಾಗಿದ್ದು ವೇದಶಾಸ್ತ್ರ ಪುರಾಣಗಳ ಮೂಲಕವೇ ಮೋಕ್ಷಸಾಧನೆಯ ಮಾರ್ಗ ತೋರಿಸಿದರೆ ಬಸವೇಶ್ವರರು ಸಾಮಾನ್ಯರಿಗೂ ಅರ್ಥವಾಗುವ ಆಡುನುಡಿಯಲ್ಲಿ ಕಾಯಕ, ಸತ್ಯ, ಸದಾಚಾರಗಳ ಉತ್ಕೃಷ್ಟತೆಯನ್ನು ಬೋಧಿಸಿದರು. ಮಧ್ವಾಚಾರ್ಯರ ಮುಖ್ಯಶಿಷ್ಯರೂ ಒರಿಸ್ಸರಾಜ್ಯದ ರಾಜಪ್ರತಿನಿಧಿಯೂ ಆಗಿದ್ದ, ಅನಂತರ ಸನ್ಯಾಸದೀಕ್ಷೆ ವಹಿಸಿದ ನರಹರಿತೀರ್ಥರು ಅನಂತರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾಬಲ್ಯಪಡೆದ ಹರಿದಾಸ ಸಂಪ್ರದಾಯದ ಅಸ್ತಿಭಾರವನ್ನು ನಿರ್ಮಿಸಿದರು. ಈ ರೀತಿಯಲ್ಲಿ ಈ ಮೂರು ಶತಕಗಳ ಕಾಲ ಕರ್ನಾಟಕದ ಮತ ಧರ್ಮಗಳ ಇತಿಹಾಸದಲ್ಲಿ ಬಹಳ ಮಹತ್ತ್ವಪೂರ್ಣಯುಗವಾಗಿತ್ತು.

ಈ ಕಾಲದಲ್ಲಿ ಸಾಮಾಜಿಕ ಹಾಗೂ ಆರ್ಥಿಕರಂಗಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಕರ್ನಾಟಕದಾದ್ಯಂತ ಆರನೆಯ ಶತಮಾನದಿಂದ ರೂಢಿಯಲ್ಲಿದ್ದ ಆಚಾರ ವ್ಯವಹಾರಗಳು ಮುಂದುವರಿದುಕೊಂಡು ಬರುತ್ತಿದ್ದುವು. ಆದರೂ ರಾಜಕೀಯ ಮತ್ತು ಮತೀಯ ಕ್ಷೇತ್ರಗಳಲ್ಲುಂಟಾದ ಮಹತ್ತ್ವಪುರಿತ ಮಾರ್ಪಾಟುಗಳ ಪ್ರಭಾವ ಅಲ್ಲಲ್ಲಿ ಕಾಣಬರುತ್ತವೆ. ಕುಟುಂಬಜೀವನ ಸಾಮಾಜಿಕ ವ್ಯವಸ್ಥೆಯನ್ನನುಸರಿಸಿಕೊಂಡು ಹೋಗಬೇಕಾಗಿದ್ದುದರಿಂದ ಇಂಥ ಬದಲಾವಣೆಗಳು ಕಂಡುಬರುತ್ತವೆ. ಪಿತೃಪ್ರಧಾನ ಸಮಾಜಪದ್ಧತಿ ಬಳಕೆಯಲ್ಲಿದ್ದರೂ ಕುಟುಂಬದ ಇತರ ಸದಸ್ಯರು ತಮ್ಮ ಮತ ಮತ್ತು ವೃತ್ತಿಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದರು. ಒಂದೇ ಕುಟುಂಬದಲ್ಲಿ ಬೇರೆ ಬೇರೆ ಧರ್ಮಗಳ ಅನುಯಾಯಿಗಳಿದ್ದ ಪ್ರತ್ಯೇಕವೃತ್ತಿಗಳನ್ನನುಸರಿಸುತ್ತಿದ್ದ ವ್ಯಕ್ತಿಗಳಿದ್ದುದಕ್ಕೆ ಹಲವಾರು ನಿದರ್ಶನಗಳಿವೆ. ದೊರೆಗಳು ವರ್ಣಾಶ್ರಮ ಧರ್ಮಗಳ ರಕ್ಷಕರಾಗಿದ್ದರೆಂದು ಶಾಸನಗಳು ತಿಳಿಸುತ್ತವೆ. ಆದರೆ ಯುದ್ಧವಿದ್ಯಾಪರಿಣತರಾದ ಬ್ರಾಹ್ಮಣರ ಮತ್ತು ವೈಶ್ಯರ ಉಲ್ಲೇಖಗಳು ಕಂಡುಬರುತ್ತವೆ. ಮಧ್ಯಮವರ್ಗದವರಲ್ಲಿ ವ್ಯಾಪಾರಿಗಳಾದ ಶೆಟ್ಟಿ ಎಂಬ ವರ್ಗದವರು ಮುಖ್ಯರಾಗಿದ್ದರು. ಇವರಲ್ಲದೆ ವೀರಪಾಂಚಾಲರೆಂದು ಹೆಸರಾದ ಶಿಲ್ಪಕಾರರೂ ಅಕ್ಕಸಾಲಿಗ, ಬಡಗಿ, ಕಮ್ಮಾರ, ಕಂಚುಗಾರ, ಕುಂಬಾರ ಮುಂತಾದ ವೃತ್ತಿಗಾರರೂ ಸಮಾಜದ ಮುಖ್ಯ ವರ್ಗಗಳಲ್ಲಿದ್ದರು. ವೈವಾಹಿಕ ಪದ್ದತಿಗಳ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಮೇಲ್ಜಾತಿಗಳವರು ಹಿಂದೂ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಂತೆ ಕಂಡುಬರುತ್ತದೆ. ಶ್ರೀಮಂತ-ರಾಜಪುರುಷರಲ್ಲಿ ಬಹುಪತ್ನೀತ್ವ ರೂಢಿಯಲ್ಲಿದ್ದರೂ ಜನಸಾಮಾನ್ಯರಲ್ಲಿ ಏಕಪತ್ನೀತ್ವ ಆದರ್ಶವಾಗಿತ್ತು. ಮಹಿಳೆಯರಿಗೆ ಗೌರವಾದರಗಳು ಹಿಂದಿನಂತೆ ದೊರೆಯುತ್ತಿದ್ದು, ರಾಜಕಾರಣ, ವಿದ್ಯೆ ಮತ್ತು ಕಲೆಗಳಲ್ಲಿ ಅವರು ಪ್ರಾವಿಣ್ಯಗಳಿಸಿದ್ದರು. ವಿಷ್ಣುವರ್ಧನನ ರಾಣಿ ಶಾಂತಲೆ, ಸಾಮಂತ ಬರಮಯ್ಯನ ಪತ್ನಿ ಬಾಗನಬ್ಬೆ, ಕುಂಜೇಶ್ವರ ದೇವಾಲಯದ ನಿರ್ಮಾತೃ ಕುಂಜುನಂಬಿಶೆಟ್ಟಿಯ ಪುತ್ರಿಯೂ ಆ ದೇವಾಲಯದ ಮೇಲ್ವಿಚಾರಕಳೂ ಆದ ಘನಕುಮಾರಿ ಚಂದವ್ವೆ- ಇವರು ಇಂಥ ಕೆಲವರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅತ್ತಿಮಬ್ಬೆಯೊಬ್ಬ ಉಲ್ಲೇಖಾರ್ಹ ವ್ಯಕ್ತಿ. ಸಾಹಿತ್ಯಾಭಿರುಚಿಯಿಂದ ಆಕೆ ರನ್ನ ಕವಿಯ ಪೋಷಕಳೂ ಆಗಿದ್ದಳು. ಪೊನ್ನಕವಿಯ ಶಾಂತಿನಾಥಪುರಾಣದ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ವಿದ್ವಾಂಸರಿಗೆ ಹಂಚಿದ ಕೀರ್ತಿ ಆಕೆಯದು. ೧,೫೦೦ ಜೈನಬಸದಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸ್ಥಾಪಿಸಲು ವಿಗ್ರಹಗಳನ್ನೂ ಆಕೆ ದಾನ ಮಾಡಿದಳು. ದಾನಚಿಂತಾಮಣಿಯೆಂಬ ಬಿರುದು ಆಕೆಗೆ ಅನ್ವರ್ಥವಾದುದೇ. ಇಮ್ಮಡಿ ಜಯಸಿಂಹ ದೊರೆಯ ಅಕ್ಕ ಅಕ್ಕಾದೇವಿ ಪ್ರಾಂತ್ಯಾಧಿಕಾರಿಣಿಯಾಗಿದ್ದುದಲ್ಲದೆ ಯುದ್ಧರಂಗದಲ್ಲಿ ಶೌರ್ಯ ತೋರಿ ಅಮರಳಾದಳು. ಆಕೆಯ ಬಿರುದು ರಣಭೈರವೀ. ಬಸವೇಶ್ವರರ ಪ್ರಭಾವದಿಂದ ಸ್ತ್ರೀಯರಿಗೆ ಹೆಚ್ಚು ಅವಕಾಶ ದೊರಕಿತು. ಅವರ ಪತ್ನಿಯರಾದ ಗಂಗಾಂಬಿಕೆ ನೀಲಾಂಬಿಕೆಯೂ ಅಕ್ಕನಾದ ಅಕ್ಕನಾಗಮ್ಮನೂ ಶಿವಶರಣೆಯರಾದ ಅಕ್ಕಮಹಾದೇವಿ ಮುಕ್ತಾಯಕ್ಕರೂ ಕರ್ನಾಟಕದ ನಾರೀಮಣಿಗಳಾಗಿ ಶೋಭಿಸಿದರು. ೩ನೆಯ ಭಿಲ್ಲಮನ ಬಾಲ್ಯದಲ್ಲಿ ಯಾದವವಂಶದ ರಾಣಿ ಲಚ್ಚಿಯವ್ವ ರಾಜಪ್ರತಿನಿಧಿಯಾಗಿದ್ದು ಉತ್ತಮ ಆಡಳಿತ ನಡೆಸಿದಳು.

ಆ ಕಾಲದ ಸಾಹಿತ್ಯದ ಬೆಳೆವಣಿಗೆ ಗಮನಾರ್ಹವಾದದ್ದು. ಸಂಸ್ಕೃತ ಕನ್ನಡ ಸಾಹಿತ್ಯಗಳು ಏಕಮುಖವಾಗಿ ಬೆಳೆದರೂ ಜನಸಾಮಾನ್ಯರ ಭಾಷೆಯಾಗಿ ಬಹುಮುಖವಾಗಿ ವಿಕಸಿಸುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದುದು ನ್ಯಾಯವೇ. ಕಲ್ಯಾಣ ಚಾಳುಕ್ಯರ ಆಶ್ರಯದಲ್ಲಿ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕೀರ್ತಿವೆತ್ತ ವಾದಿರಾಜ, ಬಿಲ್ಹಣ, ವಿಜ್ಞಾನೇಶ್ವರರಂಥ ಪ್ರಭೃತಿಗಳಿದ್ದರು. ಈ ವಂಶದ ಜಗದೇಕಮಲ್ಲನ ಆಸ್ಥಾನದಲ್ಲಿ ವಾದಿರಾಜನಿದ್ದ. ಆತ ಸತ್ತರ್ಕ ಷಣ್ಮುಖ, ಸ್ಯಾದ್ವಾದ ವಿದ್ಯಾಪತಿ, ಜಗದೇಕಮಲ್ಲವಾದಿ ಎಂಬ ಬಿರುದುಗಳನ್ನು ಪಡೆದಿದ್ದುದಲ್ಲದೆ ಸಮಕಾಲೀನ ಮತ್ತು ಅನಂತರಕಾಲದ ಶಾಸನಗಳಲ್ಲೂ ವಿಶೇಷವಾಗಿ ಕೀರ್ತಿತನಾಗಿದ್ದಾನೆ. ಆತನ ಹಲವಾರು ಕೃತಿಗಳ ಪೈಕಿ ಯಶೋಧರಚರಿತ, ಪಾಶರ್ವ್‌ನಾಥಚರಿತ, ನ್ಯಾಯವಿನಿಶ್ಚಯ ಟೀಕಾ, ಪ್ರಮಾಣ ನಿರ್ಣಯ- ಇವು ಮುಖ್ಯವಾದವು. ಇವುಗಳಲ್ಲಿ ನ್ಯಾಯ ವಿನಿಶ್ಚಯ ಟೀಕಾ ಆತನ ಆಳವಾದ ಪಾಂಡಿತ್ಯಕ್ಕೆ ಸಾಕ್ಷಿ ಮತ್ತು ಭಾರತೀಯ ದಾರ್ಶನಿಕ ಸಾಹಿತ್ಯದಲ್ಲೊಂದು ಅಪೂರ್ವಗ್ರಂಥ. ಬಳ್ಳಿಗಾವೆಯ ಲಕುಲೀಶ ಪಂಡಿತನೆಂಬ ಶೈವಗುರು ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದು ೧೦೩೬ರ ಶಾಸನವೊಂದರಲ್ಲಿ ಹೇಳಲಾಗಿದೆ. ಜಗದೇಕಮಲ್ಲನ ಆಸ್ಥಾನದಲ್ಲಿದ್ದ ಎರಡನೆಯ ನಾಗವರ್ಮ ಸುಪ್ರಸಿದ್ಧ; ಕನ್ನಡ ಮತ್ತು ಸಂಸ್ಕೃತ ಕವಿ. ಆತ ರಚಿಸಿದ ಕೋಶಗ್ರಂಥವೀಗ ಉಪಲಬ್ಧವಿಲ್ಲದಿದ್ದರೂ ಇತರ ಕೃತಿಗಳಲ್ಲಿ ಉದ್ಧೃತವಾದ ಕೆಲವು ಭಾಗಗಳು ದೊರಕಿವೆ. ಶಾಕಟಾಯನ ವ್ಯಾಕರಣವನ್ನೊಳಗೊಂಡ ರೂಪಸಿದ್ಧಿ ಗ್ರಂಥಕಾರ ದಯಾಪಾಲ ಈ ಕಾಲದ ಮತ್ತೊಬ್ಬ ಕವಿ. ೬ನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದು ಐತಿಹಾಸಿಕ ಕಾವ್ಯಗಳನ್ನು ರಚಿಸಿದವರಲ್ಲಿ ಪ್ರಮುಖ ಬಿಲ್ಹಣ. ಆತ ತನ್ನ ಆಶ್ರಯದಾತನ ಜೀವನ ಚರಿತ್ರೆಯನ್ನು ತಿಳಿಸುವ ವಿಕ್ರಮಾಂಕದೇವಚರಿತ ಮತ್ತು ಶೃಂಗಾರರಸಭರಿತವಾದ ಚಾರಪಂಚಾಶಿಕಾ ಅಥವಾ ಬಿಲ್ಹಣ ಕಾವ್ಯ- ಇವುಗಳ ಕರ್ತೃ. ಅದೇ ಕಾಲದ ವಿಜ್ಞಾನೇಶ್ವರನ ಮಿತಾಕ್ಷರ ಗ್ರಂಥ ಧರ್ಮಶಾಸ್ತ್ರಗಳ ಮತ್ತು ಯಾಜ್ಞವಲ್ಕ್ಯ ಸ್ಮೃತಿಯ ಸಾರಸಂಗ್ರಹವಾಗಿದ್ದು, ಅನಂತರ ಕಾಲದ ಅನೇಕ ವ್ಯಾಖ್ಯಾನ ವಿವರಗಳಿಗೆ ಮೂಲವಾಗಿತ್ತಲ್ಲದೆ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಮುಖ ಪರಾಮರ್ಶನ ಗ್ರಂಥವಾಗಿತ್ತು. ೩ನೆಯ ಸೋಮೇಶ್ವರನ ಕೃತಿಯೆಂದು ಹೇಳಲಾದ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ವಿಶ್ವಕೋಶ ಸದೃಶ ಮಹದ್ಗ್ರಂಥ. ಇದು ಆತನ ಆಸ್ಥಾನದಲ್ಲಿದ್ದ ವಿದ್ವಾಂಸರೆಲ್ಲ ಸೇರಿ ಆತನ ನೇತೃತ್ವದಲ್ಲಿ ಸೃಷ್ಟಿಸಿದ್ದಿರಬಹುದು. ಇವಲ್ಲದೆ ಇನ್ನೂ ಹಲವಾರು ಕೃತಿಗಳು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದುವು.

ಹೊಯ್ಸಳ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯದ ಕೆಲವು ಗಮನಾರ್ಹ ಕೃತಿಗಳು ರಚಿತವಾದುವು. ರಾಮಾನುಜ, ಮಧ್ವ ಮತ್ತು ಅವರ ಶಿಷ್ಯಸಮುದಾಯದ ಅನೇಕ ಕೃತಿಗಳು ಶ್ರೀವೈಷ್ಣವ ಮತ್ತು ವೈಷ್ಣವ ತತ್ತ್ವಗಳನ್ನು ನಿರೂಪಿಸುತ್ತವೆ. ರಾಮಾನುಜರು ಭಗವದಾರಾಧನ ಕ್ರಮ, ಗದ್ಯತ್ರಯವೆಂಬ ಆಚಾರ ನಿತ್ಯಕರ್ಮಗಳಿಗೆ ಸಂಬಂಧಿಸಿದ ಕೃತಿಗಳನ್ನೂ ಬ್ರಹ್ಮ ಸೂತ್ರವನ್ನೂ ಪವಿತ್ರ ಶ್ರೀ ಭಾಷ್ಯವನ್ನೂ ಗೀತಾಭಾಷ್ಯವನ್ನೂ ವೇದಾಂತಸಂಗ್ರಹವೆಂಬ ಉಪನಿಷದ್ವಾಖ್ಯಾನವನ್ನೂ ವೇದಾಂತ ಸಾರ ಮತ್ತು ವೇದಾಂತ ದೀಪಿಕಾ ಎಂಬ ಗ್ರಂಥಗಳನ್ನೂ ರಚಿಸಿದರು. ಇವಲ್ಲದೆ ವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಹಲವಾರು ಕೃತಿಗಳು ಅವರ ಶಿಷ್ಯರಿಂದ ನಿರ್ಮಿತವಾದುವು. ಈ ಪರಂಪರೆಯ ಕೊನೆಯಲ್ಲಿ, ವಿಜಯನಗರ ಕಾಲದಲ್ಲಿ, ವೇದಾಂತದೇಶಿಕರ ಗ್ರಂಥಗಳು ಬಂದುವು. ಮಧ್ವಾಚಾರ್ಯರ ಋಗ್ಭಾಷ್ಯ, ಸದಾಚಾರಸ್ಮೃತಿ, ತಂತ್ರಸಾರ, ಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳು ವೇದಸಾಹಿತ್ಯ ಮತ್ತು ಆಚಾರಗಳಿಗೆ ಸಂಬಂಧಿಸಿದ್ದರೆ, ಬ್ರಹ್ಮ ಸೂತ್ರಗಳ ಮೇಲಣ ನಾಲ್ಕು ಗ್ರಂಥಗಳು, ಗೀತೆಯ ಮೇಲಣ ಎರಡು, ಉಪನಿಷತ್ತುಗಳ ವ್ಯಾಖ್ಯಾನ- ಇವು ದಾರ್ಶನಿಕ ಸಾಹಿತ್ಯಕ್ಕೆ ಸೇರುತ್ತವೆ. ಅವರ ಭಾರತ ಮತ್ತು ಭಾಗವತ ಸಂಗ್ರಹಗಳು ಉತ್ತಮ ಪೌರಾಣಿಕ ಸಾಹಿತ್ಯ. ಕರ್ಮನಿರ್ಣಯ ಮತ್ತು ಖಂಡನತ್ರಯಗಳು ಸ್ವಮತ ಸಮರ್ಥನೆ ಮತ್ತು ಇತರ ಮತಾಚಾರ್ಯರ ಸಿದ್ಧಾಂತಗಳ ಖಂಡನೆಗೆ ಮೀಸಲಾಗಿವೆ. ಇವರ ಶಿಷ್ಯವರ್ಗಕ್ಕೆ ಸೇರಿದ ತ್ರಿವಿಕ್ರಮಪಂಡಿತ, ನಾರಾಯಣಪಂಡಿತ, ಪದ್ಮನಾಭತೀರ್ಥ ಮತ್ತು ನರಹರಿತೀರ್ಥರ ಅನೇಕ ಕೃತಿಗಳು ತತ್ತ್ವಶಾಸ್ತ್ರ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳು. ಈ ಇಬ್ಬರು ಮಹಾನ್ ಆಚಾರ್ಯರ ಮತ್ತು ಅವರ ಶಿಷ್ಯಸಮೂಹದ ಅವಿರತ ಚಟುವಟಿಕೆಗಳಿಂದ ಜಾಗೃತರಾದ ಅನೇಕ ಪ್ರಸಿದ್ಧ ಅದ್ವೈತ ಗ್ರಂಥಕಾರರು ಕಾಣಬರುತ್ತಾರೆ. ಆನಂದಬೋಧಭಟ್ಟಾಚಾರ್ಯ, ವಾದೀಂದ್ರ, ಭುವನಸುಂದರಸೂರಿ ಮತ್ತು ಅಮಲಾನಂದ ವ್ಯಾಸಾಶ್ರಯರು ಇವರಲ್ಲಿ ಮುಖ್ಯರು. ಹೊಯ್ಸಳಯುಗದ ಅಂತ್ಯದಲ್ಲಿ ಬಾಳಿದ, ಅನಂತರ ವಿಜಯನಗರದ ಸ್ಥಾಪಕರೆಂದು ಹೆಸರಾದ, ವಿದ್ಯಾರಣ್ಯ-ಮಾಧವರು ಅದ್ವೈತ ಸಿದ್ಧಾಂತದ ಮಹಾಪುರುಷರಲ್ಲೊಬ್ಬರು. ಸಂಸ್ಕೃತಸಾಹಿತ್ಯಕ್ಕೆ ಸೇವೆ ಮಾಡಿದ ಜೈನ ವಿದ್ವಾಂಸರಲ್ಲಿ ಸಾರಚತುಷ್ಟಯದ ವ್ಯಾಖ್ಯಾನಕಾರ ಬಾಲಚಂದ್ರ, ಗುರುಪಂಚ ಸ್ಮೃತಿಯ ಕರ್ತೃ ರಾಮಚಂದ್ರ ಮಾಲಾಧಾರಿ ಮುಖ್ಯರು. ಹೊಯ್ಸಳ ರಾಜ್ಯ ಭಾಗಗಳಲ್ಲಿದ್ದ ಪಾಲ್ಕುರಿಕೆ ಸೂರಣ್ಣ, ಗುರು ಲಿಂಗಾರ್ಯ, ಬೊಬ್ಬೂರು ಸಂಗಣ, ಮಲ್ಲಿನಾಥ, ಚೆನ್ನರಾಮ ಮುಂತಾದವರು ಪ್ರಮುಖ ಶೈವಲೇಖಕರು. ಈ ಲೌಕಿಕ ಸಾಹಿತ್ಯರಂಗದಲ್ಲಿ ಗಮನಾರ್ಹವಾದುದು ಹೊಯ್ಸಳರ ಆಶ್ರಿತರಾಗಿದ್ದ ವಿದ್ಯಾಚಕ್ರವರ್ತಿಗಳೆಂಬ ಬಿರುದಿದ್ದ ಕವಿಗಳ ಮನೆತನ. ೧ನೆಯ ವಿದ್ಯಾ ಚಕ್ರವರ್ತಿ ಎರಡನೆಯ ಬಲ್ಲಾಳನ ಆಸ್ಥಾನದಲ್ಲಿದ್ದ. ಅವನ ಮೊಮ್ಮಗ ೨ನೆಯ ವಿದ್ಯಾಚಕ್ರವರ್ತಿ, ಗದ್ಯಕರ್ಣಾಮೃತದ ಕರ್ತೃ, ೨ನೆಯ ನರಸಿಂಹನ ಆಸ್ಥಾನಿಕ. ಅವನ ಮೊಮ್ಮಗ ಮೂರನೆಯ ವಿದ್ಯಾ ಚಕ್ರವರ್ತಿ ರುಕ್ಮಿಣೀ ಕಲ್ಯಾಣವೆಂಬ ಮಹಾಕಾವ್ಯದ ಕರ್ತೃ; ಕಾವ್ಯಪ್ರಕಾಶಕ್ಕೂ ಅಲಂಕಾರಸರ್ವಸ್ವಕ್ಕೂ ವ್ಯಾಖ್ಯಾನಕಾರ. ಈ ರೀತಿ ಈ ಯುಗದಲ್ಲಿ ಸಂಸ್ಕೃತಸಾಹಿತ್ಯ ಸಂಪದ್ಯುಕ್ತವಾಗಿಯೂ ಚೈತನ್ಯಪೂರ್ಣವಾಗಿಯೂ ಬೆಳೆಯಿತು.

ಕಲ್ಯಾಣ ಚಾಳುಕ್ಯ ಸಾಮ್ರಾಜ್ಯಕಾಲದ ವೇಳೆಗೆ ಕನ್ನಡಸಾಹಿತ್ಯ ಪ್ರಗತಿ ಸಾಧಿಸಿತ್ತು. ಕನ್ನಡದ ಆದಿಕವಿ ಪಂಪನ ಪ್ರಭಾವ ಈ ಕಾಲದ ಸಾಹಿತಿಗಳ ಮೇಲೆ ಅಮಿತವಾಗಿತ್ತು. ಚಾಳುಕ್ಯರ ಆಶ್ರಿತರಾಗಿದ್ದ ಕನ್ನಡ ಕವಿಗಳಲ್ಲಿ ಮೊದಲಿಗನೆಂದರೆ ಕವಿಚಕ್ರವರ್ತಿ, ಕವಿರತ್ನ ಎಂದು ಪ್ರಸಿದ್ಧನಾದ ರನ್ನ. ಮುಧೋಳದಲ್ಲಿ ಜನಿಸಿ ಅಜಿತಸೇನರ ಬಳಿ ಶಿಕ್ಷಣ ಪಡೆದ ರನ್ನ ಚಾವುಂಡರಾಯ ಮತ್ತು ಅತ್ತಿಮಬ್ಬೆ ಇವರ ಕೃಪಾಪೋಷಿತನಾಗಿ ಕೊನೆಗೆ ಸತ್ಯಾಶ್ರಯದ ಬೆಡಂಗನ ಆಶ್ರಯ ಪಡೆದ. ರನ್ನನ ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ ಮತ್ತು ರನ್ನ ಕಂದ- ಈ ಮೂರು ಕೃತಿಗಳು ಲಭ್ಯವಾಗಿವೆ. ರನ್ನನ ಸಮಕಾಲೀನನಾದ ಒಂದನೆಯ ನಾಗವರ್ಮ ಛಂದೋಂಬುಧಿ ಮತ್ತು ಕರ್ಣಾಟಕ ಕಾದಂಬರಿಗಳ ಕರ್ತೃ. ಅನಂತರಕಾಲದ ಎರಡನೆಯ ಜಯಸಿಂಹನ ಆಸ್ಥಾನದಲ್ಲಿದ್ದ ೨ನೆಯ ಚಾವುಂಡರಾಯ ಲೋಕೋಪಕಾರವೆಂಬ ಕೋಶಗ್ರಂಥ ರಚಿಸಿದ. ಆ ಕಾಲದ ಚಂದ್ರರಾಜ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಮದನತಿಲಕವೆಂಬ ಕೃತಿಯ ನಿರ್ಮಾಪಕ. ಜೈನಕವಿ ಶ್ರೀಧರಾಚಾರ್ಯ ಸೋಮೇಶ್ವರ ಒಂದನೆಯ ಆಹವಮಲ್ಲನ ಪೋಷಣೆಯಲ್ಲಿ ಜಾತಕತಿಲಕವೆಂಬ ಜ್ಯೋತಿಷಕಾವ್ಯ ರಚಿಸಿದ. ಚಾಳುಕ್ಯ ಯುವರಾಜ ಕೀರ್ತಿವರ್ಮನ (ವಿಕ್ರಮಾದಿತ್ಯನ ಸೋದರ) ಗೋವೈದ್ಯವೆಂಬ ಪಶುವೈದ್ಯಗ್ರಂಥ ಉಪಯುಕ್ತ ಕೃತಿ. ದುರ್ಗಸಿಂಹನ ಪಂಚತಂತ್ರ ಸಂಸ್ಕೃತ ಪಂಚತಂತ್ರದ ಆಧಾರದ ಮೇಲೆ ರಚಿಸಿದ ನೀತಿಗ್ರಂಥ. ಬನವಾಸಿಯ ಅಧಿಕಾರಿ ಲಕ್ಷ್ಮಣರಾಜನ ಆಶ್ರಿತನಾದ ಶಾಂತಿನಾಥನ ಚಂಪುಕಾವ್ಯ ಸುಕುಮಾರಚರಿತೆ ಪಂಪನ ಪ್ರಭಾವವನ್ನು ಪ್ರದರ್ಶಿಸಿದರೂ ಶಕ್ತಿಯುತವಾದ ಉತ್ತಮ ಕೃತಿ.

ಕಲ್ಯಾಣ ಚಾಳುಕ್ಯರ ಕೊನೆಗಾಲ ಮತ್ತು ಕಳಚುರಿಗಳ ಕಾಲವನ್ನು ಕರ್ನಾಟಕದ ವಚನ ಸಾಹಿತ್ಯಯುಗವೆಂದು ಹೇಳಬಹುದು. ವಚನಕಾರರಲ್ಲಿ ಮೊದಲಿಗನಾದ ದೇವರದಾಸಿಮಯ್ಯ (ಸು.೧೦೪೦) ನೇಕಾರ. ರಾಣಿ ಸುಗ್ಗಲೆಯನ್ನು ಶಿಷ್ಯಳಾಗಿ ಹೊಂದಿದ್ದ ಇವನ ವಚನಗಳು ಸರಳವೂ ಕಾವ್ಯಮಯವೂ ಆಗಿವೆ. ಬಸವೇಶ್ವರರು ವಚನಕಾರರಲ್ಲಿ ಅತ್ಯುನ್ನತಸ್ಥಾನ ಗಳಿಸಿದ್ದಾರೆ. ದೈಹಿಕಶ್ರಮ, ಸತ್ಯ, ಜಾತ್ಯಂಧತೆಯ ಖಂಡನೆ, ಪ್ರಾಣಿದಯೆ, ಸರ್ವಸಮತೆಗಳನ್ನು ಬೋಧಿಸಿದ ಇವರ ವಚನಸಾಹಿತ್ಯ ಭಾರತೀಯ ಸಾಹಿತ್ಯಕ್ಕೆ, ಧಾರ್ಮಿಕ ಸಿರಿಗೆ ಕರ್ನಾಟಕದ ಅನುಪಮ ಕೊಡುಗೆ. ಅನಂತರದ ವಚನಕಾರರಲ್ಲಿ ಅಲ್ಲಮಪ್ರಭು, ಚೆನ್ನಬಸವ, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗ ಚೌಡಯ್ಯ, ಉರಿಲಿಂಗದೇವ, ಗಜೇಶ ಮಸಣಯ್ಯ ಮೊದಲಾದವರು ಸ್ಮರಣೀಯರು. ವಚನಗಳನ್ನು ರಚಿಸಿದ ಸ್ತ್ರೀಯರಲ್ಲಿ ಅಗ್ರಸ್ಥಾನ ಅಕ್ಕಮಹಾದೇವಿಗೆ ಸಲ್ಲತಕ್ಕದ್ದು. ಈಕೆಯ ವಚನಗಳು ಭಾವಗೀತೆಗಳಂತಿವೆ. ಮುಕ್ತಾಯಕ್ಕ, ನೀಲಮ್ಮ ಮುಂತಾದವರೂ ಈ ಕ್ಷೇತ್ರದಲ್ಲಿ ಉನ್ನತವರ್ಗದ ವ್ಯಕ್ತಿಗಳು. ವಚನ ಸಾಹಿತ್ಯ ಕನ್ನಡ ಭಾಷಾಸಿರಿಯನ್ನು ಸುವ್ಯಕ್ತಪಡಿಸಿ ಹೊಸಜೀವನದ ಹೆದ್ದಾರಿ ನಿರ್ಮಿಸಿತು. ಕಲ್ಯಾಣ ಚಾಳುಕ್ಯಯುಗದ ಇತರ ಕೃತಿಗಳಲ್ಲಿ ನಯಸೇನನ ಧರ್ಮಾಮೃತ ಗಮನಾರ್ಹ. ೨ನೆಯ ನಾಗವರ್ಮ ಕವಿ ಜನ್ನನ ಗುರು. ಅಭಿನವ ಶರ್ವವರ್ಮನೆಂಬ ಬಿರುದಿದ್ದ ಈತನ ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಅಭಿಧಾನ ವಸ್ತುಕೋಶ- ಈ ಮೂರು ಕೃತಿಗಳು ದೊರಕಿವೆ. ಬ್ರಹ್ಮಶಿವನ ಕೃತಿಯಾದ ಸಮಯ ಪರೀಕ್ಷೆ ವಿವಿಧ ಮತ ತತ್ತ್ವಗಳನ್ನು ಪರಿಶೀಲಿಸುತ್ತದೆ.

ಹೊಯ್ಸಳರ ಕಾಲದಲ್ಲಿ ಒಂದನೆಯ ಬಲ್ಲಾಳನ ಆಸ್ಥಾನ ಕವಿಯಾದ ನಾಗಚಂದ್ರ ಪಂಪನಿಂದ ಪ್ರಭಾವಿತನಾಗಿ, ಅಭಿನವ ಪಂಪನೆಂದು ಹೇಳಿಕೊಂಡಿದ್ದಾನೆ. ಪಂಪರಾಮಾಯಣವೆಂಬ ಕೀರ್ತಿ ಪಡೆದಿರುವ ರಾಮಚಂದ್ರ ಚರಿತಪುರಾಣ ಮತ್ತು ಮಲ್ಲಿನಾಥಪುರಾಣ ಇವನ ಕೃತಿಗಳು. ಇವನ ಮತ್ತು ಸಮಕಾಲೀನಳಾದ ಕಂತಿಯ ನಡುವೆ ನಡೆದ ಸಮಸ್ಯಾಪುರಾಣ ಪರೀಕ್ಷೆ ಕಂತಿಹಂಪನ ಸಮಸ್ಯೆಗಳೆಂದು ಹೆಸರಾಗಿದೆ. ವಿಷ್ಣುವರ್ಧನನ ಆಸ್ಥಾನಕವಿ ರಾಜಾದಿತ್ಯ ಗಣಿತದಲ್ಲಿ ಪಾರಂಗತನಾಗಿದ್ದು, ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿಗಳೆಂಬ ಕೃತಿಗಳನ್ನು ಕಾವ್ಯರೂಪದಲ್ಲಿ ನಿರ್ಮಿಸಿದ. ಜನ್ನನ ತಂದೆ ಸುಮನೋಬಾಣ ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದು ಕೆಲವು ಕೃತಿಗಳನ್ನು ನಿರ್ಮಿಸಿದ. ಕೀತಿವರ್ಮನ ಗೋವೈದ್ಯದ ಅನಂತರ ರಚಿತವಾದ, ಜಗದ್ದಳ ಸೋಮನಾಥನ ಕರ್ಣಾಟಕ ಕಲ್ಯಾಣಕಾರಕವೆಂಬ ವೈದ್ಯಗ್ರಂಥದ ಪರಿಷ್ಕರಣವನ್ನು ಸುಮನೋಬಾಣ ಮಾಡಿದನೆಂದು ಹೇಳಲಾಗಿದೆ. ಆ ಕಾಲದ ಹರಿಹರನ ಗಿರಿಜಾಕಲ್ಯಾಣ ಕನ್ನಡ ಮಹಾಕಾವ್ಯಗಳಲ್ಲೊಂದಾಗಿದೆ. ರಗಳೆಯೆಂಬ ಪದ್ಯಜಾತಿ ಕನ್ನಡ ಸಾಹಿತ್ಯದ ಸುಪ್ರಸಿದ್ಧ ರೀತಿಯಾಗಿದ್ದು, ಈ ರೀತಿಗೆ ಈತನ ಕೊಡುಗೆ ಅಮೋಘವಾಗಿದೆ. ಭಕ್ತಿಪ್ರಚೋದಕವಾದ ನೂರಕ್ಕೂ ಹೆಚ್ಚಿನ ಹರಿಹರನ ರಗಳೆಗಳು ಶಿವಭಕ್ತರ ಕಥಾನಕಗಳು. ಅವನ ಸೋದರಳಿಯ ರಾಘವಾಂಕ. ಈತ ಕನ್ನಡದಲ್ಲಿ ಷಟ್ಪದೀಕಾವ್ಯ ಪ್ರವರ್ತಕ. ಹರಿಹರನ ಪ್ರಭಾವಕ್ಕೊಳಗಾದ ಈತನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ, ವೀರೇಶ ಚರಿತೆ, ಶರಭಸಾಹಿತ್ಯ ಈ ಕೃತಿಗಳು ಲಭ್ಯವಾಗಿವೆ. ಸಮಕಾಲೀನನೂ ಬೇಲೂರು ಕೆರೆಯ ನಿರ್ಮಾತನೂ ಆದ ಕೆರೆಯ ಪದ್ಮರಸ ಹರಿಹರನ ಅನುಸರಣೆ ಮಾಡಿ ರಗಳೆಯಲ್ಲಿ ದೀಕ್ಷಾಬೋಧೆಯನ್ನು ರಚಿಸಿದ. ಎರಡನೆಯ ಬಲ್ಲಾಳನ ಮಂತ್ರಿ ಬೂಚಿರಾಜ ಸಾಹಿತ್ಯಪ್ರಿಯ ಮತ್ತು ಸ್ವತಃ ಸಾಹಸಿ. ಈ ಕಾಲದ ಶಾಸನ ಕವಿಗಳಲ್ಲಿ ದೇವಪ್ರಿಯ, ವಿರೂಪಾಕ್ಷಪಂಡಿತ, ಕಲ್ಲಯ್ಯ, ಮಲೆಯ ಮುಂತಾದವರು ಮುಖ್ಯರು. ಮೊತ್ತಮೊದಲಿಗೆ ಬ್ರಾಹ್ಮಣ ಕವಿಗಳು ಕನ್ನಡ ಕೃತಿ ರಚನೆಗಿಳಿದಿದ್ದ ಕಾಲದಲ್ಲಿ ರುದ್ರಭಟ್ಟನ ಜಗನ್ನಾಥವಿಜಯ ರಚಿತವಾಯಿತು. ಇದೇ ಕಾಲದ ನೇಮಿಚಂದ್ರನ ನೇಮಿನಾಥಪುರಾಣ ಅಪೂರ್ಣಕೃತಿ. ಲೀಲಾವತಿ ಈತನ ಇನ್ನೊಂದು ಕೃತಿ. ವರ್ಧಮಾನಪುರಾಣವನ್ನು ಆಚಣ್ಣ ಕವಿ ಬರೆದ. ಈ ಕಾಲದ ಪ್ರಸಿದ್ಧ ಕವಿಯಾದ, ಕವಿಚಕ್ರವರ್ತಿಯೆನಿಸಿಕೊಂಡ ಜನ್ನನ ಅಮರಕೃತಿ ಯಶೋಧರ ಚರಿತೆ. ಅನಂತನಾಥಪುರಾಣ ಈತನ ಇನ್ನೊಂದು ಕೊಡುಗೆ. ಈತ ಅನೇಕ ಕಾವ್ಯಮಯ ಶಾಸನಗಳ ರಚಕ. ೨ನೆಯ ನರಸಿಂಹನ ಸೇನಾನಿ ಪೋಲಾಳ್ವ ದಂಡನಾಥ ಹರಿಹರದಲ್ಲಿ ಹರಿಹರೇಶ್ವರ ದೇವಾಲಯದ ನಿರ್ಮಾತೃವೂ ಹೌದು; ಹರಚಾರಿತ್ರದ ಕರ್ತೃವೂ ಹೌದು. ಸೋಮೇಶ್ವರನ ಆಶ್ರಯದಲ್ಲಿ ಜನ್ನನ ತಂಗಿಯ ಗಂಡ ಮಲ್ಲಿಕಾರ್ಜುನ ಹೊಯ್ಸಳವಂಶದ ಚಾರಿತ್ರಿಕ ಸಂಗತಿಗಳನ್ನರುಹುವ ಸೂಕ್ತಿಸುಧಾರ್ಣವವನ್ನು ರಚಿಸಿದ. ಈ ಕವಿಯ ಮಗನೂ ಕನ್ನಡದ ಉಚ್ಚ ವೈಯಾಕರಣೆಯೂ ಆದ ಕೇಶಿರಾಜನ ವಿದ್ವತ್ಪೂರ್ಣ ಶಬ್ದಮಣಿದರ್ಪಣದ ಅಧ್ಯಯನ ಮಾಡದವರ ಜ್ಞಾನ ಅಪೂರ್ಣವೆಂದು ಭಾವಿಸಲಾಗಿದೆ. ಸಂಸ್ಕೃತದ ಹಿಡಿತದಿಂದ ಕನ್ನಡವನ್ನು ತಪ್ಪಿಸುವ ಹೊಸಹಾದಿಯ ತೀವ್ರವಾದಿ ಆಂಡಯ್ಯನ ಕಬ್ಬಿಗರ ಕಾವ್ಯ ಈ ಕಾಲದ್ದು. ಈ ಕಾಲದ ಅನೇಕ ಶಾಸನಗಳು ಪ್ರೌಢಕಾವ್ಯ ಶೈಲಿಯಲ್ಲಿ ರಚಿಸಲ್ಪಟ್ಟಿವೆ. ಒಟ್ಟಿನಲ್ಲಿ ಈ ಕಾಲದ ಕನ್ನಡ ಸಾಹಿತ್ಯದಲ್ಲಿ ಸರ್ವತೋಮುಖ ಬೆಳೆವಣಿಗೆ ಕಂಡುಬರುತ್ತದೆ.

ಸಾಮಂತ ಮನೆತನಗಳು[ಸಂಪಾದಿಸಿ]

ಬಾದಾಮಿಯ ಚಳುಕ್ಯರ ಕಾಲದಿಂದ ಹೊಯ್ಸಳ ವಂಶದ ಅಂತ್ಯವಾಗುವವರೆಗೂ ಕರ್ನಾಟಕದ ಇತಿಹಾಸ ಒಂದು ಸಮತಂತ್ರದ ಹಾದಿಯಲ್ಲಿ, ಸಾಮಾನ್ಯ ತಳಹದಿಯ ಮೇಲೆ ನಿಂತಿತ್ತು. ಈ ದೀರ್ಘ ಕಾಲದುದ್ದಕ್ಕೂ ಕೆಲವು ಸಮಾನ ಮೌಲ್ಯಗಳನ್ನು ಜನಜೀವನ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಕಾಣಬಹುದಾಗಿತ್ತು. ಆದರೆ ಅನಂತರ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಹೊಸ ಧ್ಯೇಯ ಧೋರಣೆಗಳು ಕಾಣಬರುತ್ತವೆ. ಆದುದರಿಂದ ಒಂದು ಹೊಸ ಅಧ್ಯಾಯವೇರ್ಪಟ್ಟಿತೆಂದರೆ ತಪ್ಪಾಗಲಾರದು. ಈ ಕಾಲದ ಸಾಮಂತ ಮನೆತನಗಳ ಸ್ಥೂಲ ಪರಿಚಯವನ್ನು ಮುಂದೆ ಕೊಡಲಾಗಿದೆ. ಶಿಲಾಹಾರರು ಆದಿಯಿಂದಲೂ ಕರ್ನಾಟಕದಲ್ಲಿ ಸಾಮಂತರಾಜರಾಗಿದ್ದರು. ಕೊಂಕಣದಲ್ಲಿ ಪ್ರಬಲರಾಗಿದ್ದ ಇವರಲ್ಲಿ ನಾಲ್ಕು ಶಾಖೆಗಳಿದ್ದುವು. ಇವರಲ್ಲಿ ೧೧೮೭ರ ಸುಮಾರಿನಲ್ಲಿದ್ದ ಅಪರಾದಿತ್ಯ ಪ್ರಸಿದ್ಧ. ಸೌಂದತ್ತಿಯ ರಟ್ಟರು ಬೆಳಗಾಂವಿ ಜಿಲ್ಲೆಯಲ್ಲಿ ರಾಷ್ಟ್ರಕೂಟ-ಕಲ್ಯಾಣ ಚಾಳುಕ್ಯರ ಸಾಮಂತರಾಗಿದ್ದರು. ಹಾನುಗಲ್ಲಿನ ಮತ್ತು ಗೋವಾದ ಎರಡು ಕದಂಬ ಮನೆತನಗಳವರೂ ಬನವಾಸಿ ಕದಂಬರ ವಂಶಕ್ಕೆ ಸೇರಿದ್ದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಪ್ರಮುಖ ಸಾಮಂತರಾಗಿದ್ದರು. ಬಾದಾಮಿ ಧಾರವಾಡ ಪ್ರದೇಶಗಳಲ್ಲಿದ್ದ ಸಿಂದವಾಡಿಯ ಸಿಂದರು ಕಲ್ಯಾಣ ಚಾಳುಕ್ಯರ ಸಾಮಂತರಾಗಿದ್ದರು. ಇವರಲ್ಲಿ ಇಮ್ಮಡಿ ಅಚ್ಚ ಮತ್ತು ಪೆರ್ಮಾಡಿ ಪ್ರಮುಖರು. ಧಾರವಾಡ ಪ್ರದೇಶದಲ್ಲಿಯ ಗುತ್ತವೊಳಲಿನ ಗುತ್ತರದು ಇನ್ನೊಂದು ಪ್ರಮುಖ ಸಾಮಂತ ಮನೆತನ, ಕಲ್ಯಾಣಿ ಚಾಳುಕ್ಯ-ಸೇವುಣರ ಅಧೀನರಾದ ಇವರಲ್ಲಿ ಮಲ್ಲಿದೇವ, ಇಮ್ಮಡಿ ಜೋಯಿದೇವ ಮುಖ್ಯರು. ಸಾಂತರರು ಪ್ರಬಲರಾಗಿದ್ದು ಬಾದಾಮಿಯ ಚಳುಕ್ಯ-ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳರ ಬೆಂಬಲಿಗರಾಗಿದ್ದರು. ೧೪೩೨ರಲ್ಲಿ ಕಾರ್ಕಳದ ಗೊಮ್ಮಟನ ಪ್ರತಿಷ್ಠೆ ಮಾಡಿಸಿದ ವೀರಪಾಂಡ್ಯನೂ ಈ ವಂಶದವ. ಉತ್ತರ ಕನ್ನಡ ಜಿಲ್ಲೆಯ ಸಾಳುವರು ಯಾದವರ ಬಲಗೈಯಾಗಿದ್ದು ಅನಂತರ ವಿಜಯನಗರದ ಸಾಳುವ ವಂಶದ ಮೂಲಪುರುಷರಾದರು. ಮೈಸೂರು ಜಿಲ್ಲೆಯ ಕೆಲಭಾಗಗಳಲ್ಲಿ ಆಳುತ್ತಿದ್ದ ಚೆಂಗಾಳ್ವರು ಚೋಳರೊಂದಿಗೂ ಹೊಯ್ಸಳರೊಂದಿಗೂ ಹೋರಾಡುತ್ತ ಅವರ ಅಧೀನರಾಗಿದ್ದರು. ವಿಜಯನಗರದ ಸಾಮಂತರೂ ಆಗಿದ್ದ ಇವರು ಕೊನೆಗೆ ಮೈಸೂರಿನ ರಾಜಒಡೆಯರಿಂದ ೧೬೧೪ರಲ್ಲಿ ನಾಶಹೊಂದಿದರು. ಹಾಸನ-ಕೊಡಗು ಪ್ರದೇಶಗಳಲ್ಲಿ ಆಳುತ್ತಿದ್ದ ಕೊಂಗಾಳ್ವರು ಚೋಳರ ಸಾಮಂತರಾಗಿದ್ದು ಹೊಯ್ಸಳರ ಕಾಲದಲ್ಲಿ ಕ್ಷೀಣರಾದರು. ಉಚ್ಚಂಗಿಯ ಪಾಂಡ್ಯರು ಕಲ್ಯಾಣಿ ಚಾಳುಕ್ಯರ ಮಾಂಡಲಿಕರಾಗಿದ್ದರು. ಅನಂತರ ಹೊಯ್ಸಳರಿಂದ ಸೋತು ಕಣ್ಮರೆಯಾದರು. ಇವರಲ್ಲದೆ ನೊಳಂಬರು, ಸೇಂದ್ರಕ, ಆಳುಪ ಮುಂತಾದ ಸಣ್ಣಪುಟ್ಟ ಮನೆತನಗಳೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಧಿಕಾರ ಪಡೆದಿದ್ದು ಸಮಕಾಲೀನ ಪ್ರಬಲರಾಜರಿಗೆ ಅಧೀನರಾಗಿದ್ದರೆಂದು ತಿಳಿದುಬರುತ್ತದೆ.

ಹೊರನಾಡುಗಳಲ್ಲಿ ಕನ್ನಡ ವಂಶಗಳು[ಸಂಪಾದಿಸಿ]

ಕರ್ನಾಟಕದಲ್ಲಿ ಪ್ರಬಲವಾಗಿದ್ದ ಚಾಳುಕ್ಯ ಮತ್ತು ರಾಷ್ಟ್ರಕೂಟ ವಂಶಗಳು ಭಾರತದ ಇತರ ಭಾಗಗಳಿಗೂ ತಮ್ಮ ಪ್ರಭಾವ ಬೀರಿ ಹಲವೆಡೆಗಳಲ್ಲಿ ತಮ್ಮ ರಾಜ್ಯಗಳನ್ನು ಸ್ಥಾಪಿಸಿದ್ದುವು. ಬಾದಾಮಿ ಚಾಳುಕ್ಯರ ಇಮ್ಮಡಿ ಪುಲಕೇಶಿ ತನ್ನ ತಮ್ಮ ಕುಬ್ಜವಿಷ್ಣುವರ್ಧನನ ನೇತೃತ್ವದಲ್ಲಿ ಆಂಧ್ರದ ವೆಂಗಿಚಾಳುಕ್ಯ ಮನೆತನ ಸ್ಥಾಪಿಸಿದ. ಈ ಮನೆತನ ಆರೇಳು ಶತಮಾನಗಳ ಕಾಲ ಅಧಿಕಾರ ನಡೆಸುತ್ತಿತ್ತು. ಇದೇ ಕಾಲದಲ್ಲಿ ಪುಲಕೇಶಿಯಿಂದ ಗುಜರಾತಿನ ಲಾಟದಲ್ಲಿ ಧರಾಶ್ರಯ ಜಯಸಿಂಹನ ನೇತೃತ್ವದಲ್ಲಿ ಸ್ಥಾಪಿತವಾದ ಚಾಳುಕ್ಯ ಮನೆತನವೂ ದೀರ್ಘಕಾಲ ಆಳುತ್ತಿತ್ತು. ಒರಿಸ್ಸದಲ್ಲಿ ಆಳುತ್ತಿದ್ದ ಪೂರ್ವಗಂಗ ಮತ್ತು ಕದಂಬ ಕುಲಗಳೂ ಕರ್ನಾಟಕದ ಮೂಲದವರೆಂದು ಹಲವು ವಿದ್ವಾಂಸರ ಅಭಿಪ್ರಾಯ. ಅನಂತರಕಾಲದಲ್ಲಿ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಳುಕ್ಯ ದೊರೆಗಳ ಕಾಲದಲ್ಲೂ ಕರ್ನಾಟಕದ ಯೋಧರು ಇತರ ಪ್ರದೇಶಗಳಿಗೆ ಹೋಗಿ ತಮ್ಮ ಬಾಹುಬಲವನ್ನು ಪ್ರದರ್ಶಿಸುತ್ತಿದ್ದರು. ಇವರಲ್ಲಿ ಮಧ್ಯಪ್ರದೇಶದ ಬಸ್ತಾರ್ ಪ್ರಾಂತ್ಯದಲ್ಲಿ ಆಳುತ್ತಿದ್ದ ಛಿಂದಕ ನಾಗರು, ಒರಿಸ್ಸದ ರಾಷ್ಟ್ರಕೂಟರು, ಶ್ರೀಕಾಕುಳಂ ಜಿಲ್ಲೆಯ ತೈಲಪವಂಶಿಗಳು, ಬಂಗಾಳದ ಸೇನರು, ಮಿಥಿಲೆಯ ಕರ್ಣಾಟರು ಮುಖ್ಯರಾಗಿದ್ದು ಇಲ್ಲಿ ಸ್ಮರಿಸಲರ್ಹರು. (ನೋಡಿ- ಕನ್ನಡ ಅರಸು ಮನೆತನಗಳು, ಹೊರನಾಡಿನಲ್ಲಿ)

ವಿಜಯನಗರ ಸಾಮ್ರಾಜ್ಯ[ಸಂಪಾದಿಸಿ]

೧೪ನೆಯ ಶತಮಾನದ ದ್ವಿತೀಯ ಪಾದದಿಂದ ಮೂರು ಶತಮಾನಗಳ ಕಾಲ ಕರ್ನಾಟಕ ರಾಜ್ಯಶ್ರೀಯ ಉತ್ತುಂಗ ಸ್ಥಿತಿಗೆ ಕಾರಣವಾದ ವಿಜಯನಗರ ಸಾಮ್ರಾಜ್ಯ ೧೩೩೬ರಲ್ಲಿ ಸಂಗಮವಂಶಜರಾದ ಹರಿಹರ ಬುಕ್ಕ ಮೊದಲಾದ ಐವರು ಸೋದರರಿಂದ ಸ್ಥಾಪಿತವಾಯಿತು. ಮಹಮ್ಮದೀಯರ ದಬ್ಬಾಳಿಕೆಗೆ ಸಿಕ್ಕಿ ತತ್ತರಿಸುತ್ತಿದ್ದ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿಂದೂ ಧರ್ಮರಕ್ಷಣೆಗೆ ಟೊಂಕಕಟ್ಟಿ ನಿಂತ ಈ ಸಾಮ್ರಾಜ್ಯವನ್ನು ಸಂಗಮ, ಸಾಳುವ, ಮತ್ತು ತುಳುವ ಮನೆತನದ ಅರಸರು ರಕ್ಷಿಸಿದರು. ಇಮ್ಮಡಿ ದೇವರಾಯ, ನರಸರಾಯ, ವೀರನರಸಿಂಹ, ಕೃಷ್ಣದೇವರಾಯ ಮುಂತಾದವರು ಈ ರಾಜ್ಯದ ವೈಭವವನ್ನು ಹೆಚ್ಚಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪಕನಾದ ೧ನೆಯ ಹರಿಹರ ಮಹಾಯೋಧ. ಇವನ ನಾಲ್ವರು ಸೋದರರು ಈತನಿಗೆ ಹೆಚ್ಚಿನ ಸಹಾಯ ಮಾಡಿದರು. ಈ ಕಾಲದ ಮತ್ತೊಂದು ಮುಖ್ಯ ಘಟನೆಯೆಂದರೆ ೧೩೪೭ರಲ್ಲಿ ಬಹಮನಿ ರಾಜ್ಯ ಸ್ಥಾಪನೆ. ಅಲ್ಲಾವುದ್ದೀನ್ ಹಸನ್ ಬಹಮನ್ ಷಾನಿಂದ ಸ್ಥಾಪಿತವಾದ ಈ ರಾಜ್ಯಕ್ಕೂ ವಿಜಯನಗರ ಸಾಮ್ರಾಜ್ಯಕ್ಕೂ ಅನೇಕ ತಲೆಮಾರುಗಳವರೆಗೂ ಹೋರಾಟ ನಡೆಯಿತು. ಅನಂತರ ಅಧಿಕಾರಕ್ಕೆ ಬಂದ ೧ನೆಯ ಬುಕ್ಕ ದೊರೆಯ ಕಾಲದಲ್ಲಿ (೧೩೫೬-೭೯) ಸಾಮ್ರಾಜ್ಯ ವಿಸ್ತರಣೆ ನಡೆದುದಲ್ಲದೆ ಆಡಳಿತ ವ್ಯವಸ್ಥೆಗೊಂಡಿತು. ವೀರಕಂಪಣ ಕಂಚಿ ಮಧುರೆಗಳನ್ನು ಗೆದ್ದು ತನ್ನ ಅಧಿಕಾರವನ್ನು ಈ ಭಾಗದಲ್ಲಿ ನೆಲೆಗೊಳಿಸಿದ. ಇಮ್ಮಡಿ ದೇವರಾಯ (೧೪೨೪-೪೬) ಬಹಮನಿ ಸುಲ್ತಾನನನ್ನೂ ಒರಿಸ್ಸದ ಗಜಪತಿಯನ್ನೂ ಸಿಂಹಳದ ರಾಜರನ್ನೂ ಹಲವು ಬಾರಿ ಸೋಲಿಸಿ ತನ್ನ ಸಾಮ್ರಾಜ್ಯದ ಮೇರೆಗಳನ್ನು ಹೆಚ್ಚಿಸಿದ. ಉತ್ತಮ ಆಡಳಿತಗಾರನೂ ಧೀರ ಯೋಧನೂ ಆದರ್ಶ ರಾಜಕಾರಣಿಯೂ ಆದ ಈತನ ಕಾಲದಲ್ಲಿ ಸಾಮ್ರಾಜ್ಯದ ವೈಭವ ಉನ್ನತ ಸ್ಥಿತಿ ಮುಟ್ಟಿತು. ಎಲ್ಲ ಧರ್ಮೀಯರಿಗೂ, ಮುಸ್ಲಿಮರಿಗೆ ಕೂಡ, ಈತ ಸಮಾನಾವಕಾಶಗಳನ್ನು ಕೊಟ್ಟಿದ್ದ. ಕೃಷ್ಣದೇವರಾಯನ ಕಾಲದಲ್ಲಿ ಕರ್ನಾಟಕದ ಕೀರ್ತಿ ಬೆಳೆಯಿತು. ವ್ಯಾಪಾರೋದ್ದೇಶದಿಂದ ಈತನ ಆಸ್ಥಾನಕ್ಕೆ ಬರುತ್ತಿದ್ದ ಪೋರ್ಚುಗೀಸರು ಅದರ ವೈಭವವನ್ನು ಅಮೋಘವೆಂದು ಹೊಗಳಿದ್ದಾರೆ. ೧೩೩೭ರಲ್ಲಿ ಸ್ಥಾಪನೆಯಾದಾಗಿನಿಂದ ಈ ಹಿಂದೂ ಸಾಮ್ರಾಜ್ಯದ ಬದ್ಧವೈರಿಗಳಾಗಿದ್ದ ಬಹಮನಿ ಸುಲ್ತಾನರನ್ನೂ ಇತರ ಶತ್ರುರಾಜರನ್ನೂ ಈತ ಸೋಲಿಸಿದ. ದೇಶದ ಸರ್ವತೋಮುಖ ಏಳಿಗೆ ಸಾಧಿಸಿದ. ಈತನ ಆಶ್ರಯದಲ್ಲಿ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯಗಳು ಬೆಳೆದುವು. ಸ್ವತಃ ಕವಿಯಾದ ಈತ ಅಮುಕ್ತಮಾಲ್ಯದವೆಂಬ ತೆಲುಗು ಕಾವ್ಯವನ್ನೂ ಜಾಂಬವತಿಕಲ್ಯಾಣವೆಂಬ ಸಂಸ್ಕೃತನಾಟಕವನ್ನೂ ರಚಿಸಿದನೆಂದು ನಂಬಲಾಗಿದೆ. ಸುಪ್ರಸಿದ್ಧ ಮಾಧ್ವಯತಿ ವ್ಯಾಸತೀರ್ಥರೂ ಕನಕದಾಸ ಪುರಂದರದಾಸರೂ ಈ ಕಾಲಕ್ಕೆ ಸೇರಿದವರು. ವಾಸ್ತುಶಿಲ್ಪಕಲೆಗೆ ಈತನ ಕಾಣಿಕೆ ಅಪೂರ್ವ, ದಕ್ಷಿಣ ಭಾರತದ ಎಲ್ಲ ಪ್ರಮುಖ ದೇವಾಲಯಗಳಿಗೂ ಈತ ಗೋಪುರ ಮಂಟಪಗಳನ್ನು ಸೇರಿಸಿದನೆಂದು ತಿಳಿದುಬರುತ್ತದೆ. ರಾಜಧಾನಿಯ ಕೃಷ್ಣಸ್ವಾಮಿಗುಡಿ ಈತನ ನಿರ್ಮಾಣ. ಭಾರತದ ಹಿರಿಯ ಸಮ್ರಾಟರಲ್ಲಿ ಈತನೂ ಒಬ್ಬ. ಅನಂತರ ಅಧಿಕಾರಕ್ಕೆ ಬಂದ ಅಳಿಯ ರಾಮರಾಯನ ಕಾಲದಲ್ಲಿ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ಇವನ ವಿರುದ್ಧ ಒಂದುಗೂಡಿದ ಮುಸ್ಲಿಂ ಸೈನ್ಯಗಳು ವಿಜಯನಗರ ಸಾಮ್ರಾಜ್ಯದ ಸೈನ್ಯಗಳನ್ನು ೧೫೬೫ರಲ್ಲಿ ಸೋಲಿಸಿ ರಾಜಧಾನಿಯಾದ ವಿಜಯನಗರವನ್ನು ಸೂರೆಮಾಡಿದುವು. ಇಲ್ಲಿಗೆ ಈ ಸಾಮ್ರಾಜ್ಯದ ದಿಕ್ಕು ಬದಲಾಯಿತು. ಅನಂತರದ ಅರವೀಡು ವಂಶದ ರಾಜರು ರಾಜಧಾನಿಯನ್ನು ಪೆನುಗೊಂಡೆಗೂ ಚಂದ್ರಗಿರಿಗೂ ವೆಲ್ಲೂರಿಗೂ ಬದಲಾಯಿಸುತ್ತ ೮೦ ವರ್ಷಕಾಲ ಹೋರಾಡಿದರು. ಇವರಲ್ಲಿ ೨ನೆಯ ವೆಂಕಟಪತಿಯರಸ ಮುಖ್ಯ. ಮಹಮ್ಮದೀಯರನ್ನು ಅನೇಕ ಬಾರಿ ಸೋಲಿಸಿದ. ಕಡೆಯ ದೊರೆಯಾದ ೬ನೆಯ ಶ್ರೀರಂಗರಾಯ ಗೋಲ್ಕೊಂಡದ ಸುಲ್ತಾನನಿಗೆ ತನ್ನ ರಾಜಧಾನಿಯನ್ನೊಪ್ಪಿಸಿ ೧೭೪೬ರಲ್ಲಿ ಇಕ್ಕೇರಿಯ ಶಿವಪ್ಪನಾಯಕನ ರಕ್ಷಣೆಗೊಳಗಾದ. ಇದರೊಂದಿಗೆ ಕೊನೆಯಾದ ವಿಜಯನಗರ ಸಾಮ್ರಾಜ್ಯದ ಅನಂತರ, ಆ ಅರಸರ ಆಶ್ರಿತರಾಗಿದ್ದ ಮೈಸೂರು, ಇಕ್ಕೇರಿ, ಗೇರುಸೊಪ್ಪೆ ಮತ್ತು ಭಟ್ಕಳದ ಅರಸರೂ ಸಣ್ಣ ಮನೆತನಗಳಿಗೆ ಸೇರಿದ ಪಾಳೆಯಗಾರರೂ ಕರ್ಣಾಟಕದ ವಿವಿಧ ಭಾಗಗಳಲ್ಲಿ ಆಳಲಾರಂಭಿಸಿದರು.

ವಿಜಯನಗರ ಸಾಮ್ರಾಜ್ಯದ ಸಾಧನೆ ನ್ಯೂನತೆಗಳ ಸಿಂಹಾವಲೋಕನ ಮಾಡಿದಾಗ ಅದು ಪ್ರತಿಯೊಬ್ಬರ ಮೆಚ್ಚಿಗೆ ಗೌರವಾದಾರಗಳನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ಬಾದಾಮಿ ಚಾಳುಕ್ಯರಿಂದ ದಕ್ಷಿಣಭಾರತದಲ್ಲಿ-ಅದರಲ್ಲೂ ಕರ್ನಾಟಕದಲ್ಲಿ-ಉದಯವಾಗಿ ಅನೂಚಾನವಾಗಿ ನಡೆದುಬಂದ ಹಿಂದೂಸಾಮ್ರಾಜ್ಯಗಳಲ್ಲಿ ಅತ್ಯಂತ ವೈಭವೋಪೇತವಾದ, ಕರ್ನಾಟಕ ಸಂಸ್ಕೃತಿಯನ್ನು ಪರಾಕಾಷ್ಠೆಗೊಯ್ದ ಕೊನೆಯ ಐತಿಹಾಸಿಕ ಸಾಮ್ರಾಜ್ಯವಿದು. ಈ ಸಾಮ್ರಾಜ್ಯದ ಸ್ಥಾಪಕರು ಹಿಂದೂ ಧರ್ಮರಕ್ಷಣೆ ಮತ್ತು ಪರಕೀಯರ ದಬ್ಬಾಳಿಕೆಯಿಂದ ಸ್ವಾತಂತ್ರ ರಕ್ಷಣೆಗಳನ್ನು ತಮ್ಮ ಧ್ಯೇಯವನ್ನಾಗಿಟ್ಟುಕೊಂಡು ಸು. ಮೂರು ಶತಮಾನಗಳ ಕಾಲ ಕರ್ನಾಟಕ ಮಾತ್ರವಲ್ಲ. ಇಡೀ ದಕ್ಷಿಣಭಾರತದ ನಾಗರಿಕತೆಯನ್ನು ಸರ್ವತೋಮುಖವಾಗಿ ಬೆಳೆಸಿದರು. ಕರ್ನಾಟಕದ ಭವ್ಯ ಇತಿಹಾಸದಲ್ಲಿ ಅತ್ಯುಜ್ವಲ ಕಾಲವಿದು. ಈ ಸಾಮ್ರಾಜ್ಯದ ಸ್ಥಾಪನೆಗೆ ರಾಜರ ವೈಯಕ್ತಿಕ ಆಶೆ, ವೈಭವ ಲಾಲಸೆ, ಸ್ವಂತ ಹಿರಿಮೆಗಳಿಗಿಂತ ರಾಷ್ಟ್ರೀಯತೆಯೇ ಪ್ರಚೋದಕವಾಗಿತ್ತು. ಸ್ವಧರ್ಮ ಸ್ವಕೀಯ ಸಂಸ್ಕೃತಿಗಳ ರಕ್ಷಣಾ ಚಳವಳಿಯಲ್ಲಿ ಸಾಮ್ರಾಜ್ಯದ ಜನತೆ ಸ್ವೇಚ್ಫೆಯಿಂದ ಪಾಲ್ಗೊಂಡು ಭಾರತೀಯ ಧರ್ಮ ಸಂಸ್ಕೃತಿಗಳಿಗಾಗಿ ಹೋರಾಡಿದರು. ಇಂಥ ಉದ್ದೇಶಗಳಿಂದ ಅಸ್ತಿತ್ವಕ್ಕೆ ಬಂದಿದ್ದರೂ ಸುಸಂಸ್ಕೃತ ಪ್ರಭುಗಳ ನೇತೃತ್ವದಲ್ಲಿ ಅಲ್ಪಸಂಖ್ಯಾತರಾಗಿದ್ದ ಜೈನ ಮುಸ್ಲಿಂ ಇನ್ನಿತರ ಮತೀಯರನ್ನೂ ಪರಕೀಯರನ್ನೂ ಪ್ರೀತ್ಯಾದರಗಳಿಂದ ಸ್ವಾಗತಿಸುತ್ತಿದ್ದು ವಿಶ್ವದ ಎಲ್ಲ ಮೂಲೆಗಳಲ್ಲೂ ಅರ್ಹವಾದ ಗೌರವ ಹೊಂದಿತ್ತು. ದಕ್ಷರೂ ಶಕ್ತರೂ ಧರ್ಮಭೀರುಗಳೂ ಆದ ಈ ರಾಯರುಗಳ ನಡುವೆ ಒಬ್ಬಿಬ್ಬ ಅಪ್ರಯೋಜಕ ದೊರೆಗಳೂ ಕಾಣಸಿಗುತ್ತಾರೆ. ಈ ಕಾಲದಲ್ಲಿ ಆಗಾಗ್ಗೆ ಕಾಣಿಸಿಕೊಂಡ ದೊರೆಗಳ ಅಶಕ್ತತೆ, ಆಂತರಿಕ ಕಲಹ, ತತ್ಫಲವಾಗಿ ಉಂಟಾದ ವಂಶಪಲ್ಲಟಗಳಂಥ ಪರಿಸ್ಥಿತಿಯಲ್ಲೂ ಇದು ತನ್ನ ಶಕ್ತಿ ಧ್ಯೇಯ ಹಿರಿಮೆಗಳ ನಿರಂತರತೆಯನ್ನುಳಿಸಿಕೊಂಡು ಹೊರಗಿನ ವಿಪತ್ತುಗಳನ್ನು ಧೈರ್ಯದಿಂದ ಎದುರಿಸಿ ಗುರಿಮುಟ್ಟಿತು. ವಿಜಯನಗರ ಸಾಮ್ರಾಜ್ಯ ಸುಸಂಸ್ಕೃತ ರಾಷ್ಟ್ರವಾಗಿದ್ದುದಲ್ಲದೆ ಸಮಕಾಲೀನ ಸಾಮ್ರಾಜ್ಯಗಳಲ್ಲಿ ಅತ್ಯುನ್ನತ ಸ್ಥಾನ ಪಡೆದಿತ್ತೆಂಬುದಕ್ಕೆ ಹೊರದೇಶದ ಪ್ರವಾಸಿ- ಇತಿಹಾಸಕಾರರ ಲೇಖನಗಳೇ ಸಾಕ್ಷ್ಯಗಳಾಗಿವೆ. ಸುವ್ಯವಸ್ಥಿತ ಆಡಳಿತ, ಸುಭದ್ರಸರ್ಕಾರ, ಆಂತರಿಕ ಶಾಂತಿ ಮತ್ತು ಪ್ರಜಾಹಿತ ಸಂಪನ್ನತೆಗಳಿಗಾಗಿ ಶ್ರಮಿಸುವ ಪ್ರಭುತ್ವ, ಮತೀಯ ಮತ್ತು ಬೌದ್ಧಿಕ ಜೀವನದಲ್ಲಿ ಸ್ವಾತಂತ್ರ್ಯ- ಈ ಲಕ್ಷಣಗಳಿಂದ ಕೂಡಿದ್ದ ವಿಜಯನಗರ ಸಾಮ್ರಾಜ್ಯ ಪೂರ್ವಪಶ್ಚಿಮ ದಿಕ್ಕುಗಳ ಕೆಲವು ರಾಜ್ಯಗಳೊಡನೆ ರಾಯಭಾರ ಸಂಪರ್ಕಗಳನ್ನೂ ಹೊಂದಿತ್ತು. ವಿವಿಧ ದೇಶಗಳ ರಾಯಭಾರಿಗಳೂ ವರ್ತಕರೂ ವಿಜಯನಗರಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಅಂಥವರ ಬರಹಗಳಲ್ಲಿ ಕಂಡುಬರುವ ವಿಜಯನಗರದ ವರ್ಣನೆಗಳು ನಂಬಲಸಾಧ್ಯವೆನಿಸುವಂಥ ವೈಭವ, ಮಹತ್ತ್ವಗಳನ್ನು ಸೂಚಿಸುತ್ತವೆ. ಅನಾಸಕ್ತರಾದ ಈ ವಿದೇಶೀ ಬರೆಹಗಾರರ ವರ್ಣನೆಯಿಲ್ಲದಿದ್ದರೆ, ಈ ವೈಭವ ಮಹತ್ತ್ವಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿತ್ತು. ಹಿಂದಿನಿಂದಲೂ ನಡೆದುಬಂದ ಆಡಳಿತ ಪದ್ಧತಿಯನ್ನೇ ವಿಜಯನಗರದ ದೊರೆಗಳೂ ಮುಂದುವರಿಸಿಕೊಂಡು ಬಂದರು. ಸಾಮ್ರಾಜ್ಯದಲ್ಲಿ ರೂಢಿಯಲ್ಲಿದ್ದ ಆಡಳಿತ ವ್ಯವಸ್ಥೆಯ ವರ್ಣನೆಯೇ ಕೃಷ್ಣದೇವರಾಯನ ಅಮುಕ್ತಮಾಲ್ಯದದಲ್ಲಿ ಉಕ್ತವಾಗಿದೆ. ಅಧಿಕ ಕರ ತೆರಿಗೆಗಳನ್ನು ವಿಧಿಸದೆ, ರಾಜನೀತಿ ವಿಶಾರದರ ಸಲಹೆಯ ಮೇರೆಗೆ, ಪ್ರಜಾಹಿತಕ್ಕಾಗಿ ಆಡಳಿತ ನಡೆಸುವುದಲ್ಲದೆ, ಶತ್ರುನಿಗ್ರಹದಿಂದ ಪ್ರಜೆಗಳನ್ನು ರಕ್ಷಿಸುವುದೇ ಅವರ ನೀತಿಯಾಗಿತ್ತು. ವರ್ಣಸಂಕರ, ಜಾತ್ಯಂಧತೆಗಳನ್ನು ತಡೆಯುವುದರ ಸಹಿತ ಎಲ್ಲ ಧರ್ಮಗಳಿಗೂ ಸಮಾನಾವಕಾಶ ಮತ್ತು ಪ್ರೋತ್ಸಾಹಗಳನ್ನು ನೀಡುವುದು ಅವರ ಕರ್ತವ್ಯವಾಗಿತ್ತು. ನಗರ ನೈರ್ಮಲ್ಯಕ್ಕೆ ಅವರು ಪ್ರಾಶಸ್ತ್ಯ ಕೊಟ್ಟಿದ್ದರು. ಭವ್ಯಮಂದಿರಗಳಿಂದ, ಅಪಾರ ಧನಸಂಪತ್ತಿನಿಂದ ಕೂಡಿದ್ದ ಜನನಿಬಿಡವಾದ ರಾಜಧಾನಿ ಅವರ ದಕ್ಷ ಉದಾರ ಆಡಳಿತಕ್ಕೆ ಸಾಕ್ಷಿಯಾಗಿತ್ತು. ರಾಜ್ಯವನ್ನು ಮಂಡಲ, ಮಹಾರಾಜ್ಯಗಳಾಗಿ ವಿಂಗಡಿಸಲಾಗಿತ್ತು. ಸೀಮೆ, ನಾಡು, ಕಾರು ಮತ್ತು ಗ್ರಾಮ - ಇವು ಉಪ ವಿಭಾಗಗಳಾಗಿದ್ದುವು. ಒಟ್ಟು ಆರು ಪ್ರಾಂತ್ಯಗಳಿದ್ದು, ಅವುಗಳಲ್ಲಿ ಒಂದೊಂದೂ ಒಬ್ಬೊಬ್ಬ ನಾಯಕನ ಆಳ್ವಿಕೆಯಲ್ಲಿತ್ತು. ಚಕ್ರವರ್ತಿ ಒಟ್ಟು ಆಡಳಿತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಕೇಂದ್ರದ ಅಮಾತ್ಯವರ್ಗ ಮತ್ತು ಹಿರಿಯ ಅಧಿಕಾರಿಗಳಲ್ಲದೆ ಪ್ರಾಂತ್ಯಗಳಲ್ಲಿ ಕರಸಂಗ್ರಹಣಾಧಿಕಾರಿ ದಂಡನಾಯಕರೂ ಇದ್ದರು. ಗ್ರಾಮಾಡಳಿತ ಪಂಚಾಯಿತಿಗಳ ಕರ್ತವ್ಯವಾಗಿತ್ತು. ಸೇನಬೋವ, ತಳವಾರ ಮುಂತಾದ ಗ್ರಾಮಾಧಿಕಾರಿಗಳಿದ್ದರು. ಭೂಕಂದಾಯವೇ ಮುಖ್ಯ ರಾಜ್ಯಾದಾಯ. ೧/೬__ಭಾಗ ಪ್ರಭುತ್ವಕ್ಕೆ ಸೇರಬೇಕಾಗಿತ್ತು. ಅನೇಕ ರೀತಿಯ ತೆರಿಗೆ ಸುಂಕಗಳೂ ರೂಢಿಯಲ್ಲಿದ್ದುವು. ದೇಶರಕ್ಷಣೆಗೆ ಸುವ್ಯವಸ್ಥಿತ ಅಶ್ವ, ಗಜ, ಫಿರಂಗಿ ಮತ್ತು ಕಾಲಾಳು ಪಡೆಗಳಿದ್ದು ದಂಡನಾಯಕರು ಅವುಗಳ ಹೊಣೆಹೊತ್ತಿದ್ದರು. ನ್ಯಾಯಪಾಲನೆ ಮುಖ್ಯಕರ್ತವ್ಯವೆಂದು ಪರಿಗಣಿತವಾಗಿದ್ದು ಹಲವು ಮಟ್ಟದ ನ್ಯಾಯಾಲಯಗಳಿದ್ದುವು. ಕೊನೆಯ ತೀರ್ಪು ಸಮ್ರಾಟನಿಗೆ ಸೇರಿದ್ದು. ಪ್ರಾಡ್ವಿವಾಕ ಮತ್ತು ಸಭ್ಯರೆಂಬ ನ್ಯಾಯಾಧಿಕಾರಿಗಳಲ್ಲದೆ, ಮಾಂಡಲಿಕರೂ ಅಮಾತ್ಯರೂ ನ್ಯಾಯವಿಚಾರಣೆ ಮಾಡುತ್ತಿದ್ದರು. ಪ್ರಾಚೀನ ಸಂಪ್ರದಾಯ ಮತ್ತು ಧರ್ಮಶಾಸ್ತ್ರಗಳು ನ್ಯಾಯವಿಮರ್ಶನಕ್ಕೆ ಮಾರ್ಗದರ್ಶಿಗಳಾಗಿದ್ದುವು. ಉಗ್ರದಂಡನೆಗಳು ಬಳಕೆಯಲ್ಲಿದ್ದುವು. ಮರಣದಂಡನೆ, ಅಂಗಛೇದಗಳು ಸಾಮಾನ್ಯ.

ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಪರಿಶೀಲನೆ ಮಾಡುವಾಗ ಇವರ ರಾಜಧಾನಿಯ ಸ್ಥಿತಿಗಳಿಗೆ ಪ್ರಾಧಾನ್ಯ ನೀಡಬೇಕಾಗುತ್ತದೆ. ಪ್ರಪಂಚದ ಸಮಕಾಲೀನ ಮಹಾನಗರಗಳಲ್ಲೊಂದಾದ ಈ ನಗರಕ್ಕೆ ಅನೇಕ ದೇಶಗಳ ಪ್ರವಾಸಿಗಳು ಬರುತ್ತಿದ್ದರು. ಯೂರೋಪಿನಲ್ಲೇ ದೊಡ್ಡದಾದ ರೋಂ ನಗರದಿಂದ ಇಲ್ಲಿಗೆ ಬಂದ ಡೊಮಿಂಗೊ ಪೆಯಿಸ್ ಎಂಬ ಪ್ರವಾಸಿ ವಿಜಯನಗರ ರೋಮಿಗಿಂತಲೂ ಹಿರಿದೆಂದು ವರ್ಣಿಸಿದ್ದರೆ, ನಿಕೊಲೊ ಕಾಂಟಿ ಎಂಬ ಇಟಲಿಯ ಪ್ರವಾಸಿ ಅದರ ಸುತ್ತಳತೆ ೬೦ ಮೈಲಿಗಳೆಂದು ಹೇಳಿದ್ದಾನೆ. ಪರ್ಷಿಯದ ಅಬ್ದುರ್ ರeóÁಕ್, ತಾನು ಹಿಂದೆಂದೂ ನೋಡಿಲ್ಲದಂಥ ಕೇಳಿಲ್ಲದಂಥ ಅದ್ಭುತ ನಗರವಿದೆಂದು ಕೊಂಡಾಡಿದ್ದಾನೆ. ಇದರ ಜನಸಂಖ್ಯೆ ೫ ಲಕ್ಷವಿದ್ದಿರಬಹುದೆಂದು ಪೆಯಿಸ್ನ ಊಹೆ. ಗಂಗಾದೇವಿ ತನ್ನ ಮಧುರಾ ವಿಜಯದಲ್ಲಿ ಈ ನಗರವನ್ನು ಇಂದ್ರನ ಅಮರಾವತಿಗೆ ಹೋಲಿಸಿ ಇದೊಂದು ಸಮಸ್ತ ಸಂಪತ್ತಿನ ನೆಲೆಯೆಂದು ವರ್ಣಿಸುತ್ತಾಳೆ. ಅನೇಕ ಉಪನಗರಗಳಿಂದಲೂ ಭವ್ಯವಾದ ದೇವಾಲಯ, ವಿಶಾಲ ಭವನ, ಬeóÁರ ಮತ್ತು ಉಪನಗರಗಳಿಂದಲೂ ಕೂಡಿದ್ದ ಈ ನಗರದಲ್ಲಿ ವಜ್ರ ಮತ್ತಿತರ ಬೆಲೆಬಾಳುವ ರತ್ನಗಳಿಂದ ಹಿಡಿದು ಎಲ್ಲ ರೀತಿಯ ಸರಕುಗಳ ಮಾರುಕಟ್ಟೆಯಿದ್ದು ಇದು ವಿಶ್ವದ ವಾಣಿಜ್ಯಕೇಂದ್ರವಾಗಿತ್ತು. ಈ ನಗರದ ಸುಭದ್ರಕೋಟೆಗೆ ದಕ್ಷಿಣದಲ್ಲಿ ಮುಖ್ಯದ್ವಾರವೂ ಕಂಪಿಲಿಯ ಕಡೆಯಿಂದ ಪೂರ್ವದ್ವಾರವೂ ಇದ್ದುವು. ತುಂಗಭದ್ರೆಯ ನೀರು ನಾಲೆಗಳ ಮೂಲಕ ರಾಜಧಾನಿಗೆ ಸರಬರಾಜಾಗುತ್ತಿತ್ತು. ಕನಕದಾಸನ ಮೋಹನತರಂಗಿಣಿಯಲ್ಲಿ ಕಾಣುವ ದ್ವಾರಕೆಯ ವರ್ಣನೆ ಇದರ ವರ್ಣನೆಯೇ. ಕುಬೇರನಿಗೂ ಸಾಲ ಕೊಡುವ ಶಕ್ತಿಯಿದ್ದ ವರ್ತಕರು ಅಂಗಡಿ ಬೀದಿಗಳಲ್ಲಿ ತಮ್ಮ ಐಶ್ವರ್ಯದ ಮಧ್ಯದಲ್ಲಿ ರಾರಾಜಿಸುತ್ತಿದ್ದರೆಂದು ಆತ ಹೇಳಿದ್ದಾನೆ. ಪಟ್ಟಣಸೆಟ್ಟಿಗಳೆಂಬ ಹೆಸರಿನ ಅನೇಕ ಅಧ್ಯಕ್ಷರ ವಶದಲ್ಲಿ ನಗರಾಡಳಿತವಿತ್ತು. ಬಂಕಾಪುರ, ರಾಯಚೂರು, ಆದವಾನಿ, ಭಟ್ಕಳ, ಹೊನ್ನಾವರ, ಅಂಕೋಲ, ಮಂಗಳೂರು, ಪೆನುಗೊಂಡೆ, ಇಕ್ಕೇರಿ, ದೋರಸಮುದ್ರ, ಶ್ರೀರಂಗಪಟ್ಟಣ - ಇವು ಈ ಸಾಮ್ರಾಜ್ಯದ ಇತರ ಮುಖ್ಯ ಪಟ್ಟಣಗಳು.

ರಾಜ್ಯದಲ್ಲಿ ಹಿಂದೂಗಳು ಅಧಿಕಸಂಖ್ಯಾತರಾಗಿದ್ದರೂ ಮುಸ್ಲಿಮರೂ ಜೈನರೂ ಧರ್ಮಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯಗಳನ್ನು ಅನುಭವಿಸುತ್ತ ಬಾಳುತ್ತಿದ್ದರು. ಹಿಂದೂ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೀರಶೈವ, ವೈಶ್ಯರು ಪ್ರಮುಖರಾಗಿದ್ದು ಅಸ್ಪೃಶ್ಯರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಬ್ರಾಹ್ಮಣರು ಸಸ್ಯಾಹಾರಿಗಳೂ ಏಕಪತ್ನೀಕರೂ ಆಗಿದ್ದು ಮತೀಯ ವಿಷಯ ಮತ್ತು ವಿದ್ಯಾಭ್ಯಾಸಕ್ಕೆ ಮಹತ್ತ್ವ ಕೊಡುತ್ತಿದ್ದರು. ರಾಜ್ಯಪಾಲನೆಯ ವೃತ್ತಿ ಕೈಗೊಂಡಿದ್ದ ಕ್ಷತ್ರಿಯರು ಬಹುಪತ್ನೀಕರೂ ಯೋಧರೂ ಆಗಿರುತ್ತಿದ್ದರು. ಇವರಲ್ಲಿ ಸತಿ ಪದ್ಧತಿ ರೂಢಿಯಲ್ಲಿತ್ತು. ಲಿಂಗಧಾರಿಗಳಾದ ವೀರಶೈವರು ಸಸ್ಯಾಹಾರಿಗಳೂ ಏಕಪತ್ನೀವ್ರತಸ್ಥರೂ ಆಗಿದ್ದು ಬಹುವಾಗಿ ವ್ಯಾಪಾರ ವಾಣಿಜ್ಯಗಳಲ್ಲಿ ನಿರತರಾಗಿರುತ್ತಿದ್ದರು. ಸಮಾಜದಲ್ಲಿ ಸ್ತ್ರೀಯರಿಗೆ ಗೌರವ ಸ್ಥಾನವಿದ್ದರೂ ಬಹುಮಂದಿ ಕುಟುಂಬ ಜೀವನದಲ್ಲಿ ತೃಪ್ತರಾಗಿರುತ್ತಿದ್ದರು. ಸಂಗೀತ ನೃತ್ಯ ಇವರ ವಿಶೇಷ ಕ್ಷೇತ್ರ. ಕತ್ತಿಗುರಾಣಿಗಳನ್ನು ಹಿಡಿದು ಹೋರಾಡುವ, ಮಲ್ಲಯುದ್ಧವಿಶಾರದೆಯಾದ, ವ್ಯವಹಾರ ಕುಶಲೆಯರಾದ ಮತ್ತು ಸಾಹಿತಿಗಳಾದ ಸ್ತ್ರೀಯರು ಕಾಣಬರುತ್ತಿದ್ದರೆಂದು ಶಾಸನಗಳಿಂದ ಮತ್ತು ವಿದೇಶೀ ಪ್ರವಾಸಿಗಳಿಂದ ತಿಳಿದುಬರುತ್ತದೆ. ವೇಶ್ಯಾವೃತ್ತಿ, ದೇವದಾಸಿಪದ್ಧತಿ, ಸತಿಪದ್ಧತಿಗಳು, ಸ್ತ್ರೀಸಮಾಜದಲ್ಲಿದ್ದ ಕೆಲವು ನ್ಯೂನತೆಗಳು. ಜನಸಾಮಾನ್ಯರ ಊಟ ರೊಟ್ಟಿಸಾರುಗಳಿಂದ ಕೂಡಿರುತ್ತಿತ್ತು. ವರ್ತಕರು ಧೋತಿ, ಅಂಗಿ, ಪೇಟ, ಛಾದರಗಳನ್ನೂ ಕಾಲಿಗೆ ಚಪ್ಪಲಿಯನ್ನೂ ಧರಿಸುತ್ತಿದ್ದರೆಂದು ಪುರಂದರದಾಸರು ಒಂದು ಕಡೆ ಹಾಡಿದ್ದಾರೆ. ಸ್ತ್ರೀಯರು ಸೀರೆಯನ್ನುಡುತ್ತಿದ್ದರು. ರಾಜಪುರುಷರೂ ಶ್ರೀಮಂತರೂ ಭವ್ಯಗೃಹಗಳಲ್ಲಿ ವಾಸಿಸುತ್ತಿದ್ದರೆ ಬಡವರ ವಾಸಗೃಹಗಳು ಇಂದಿನ ನಗರಗಳ ಕೊಳಚೆಪ್ರದೇಶಗಳಂತೆ (ಸ್ಲಮ್ಸ್‌) ಇದ್ದುವೆಂದು ಉತ್ಖನಗಳಿಂದ ತಿಳಿದುಬಂದಿದೆ. ಬಡವರ ವಸತಿಗಳು ಹುಲ್ಲು ಗುಡಿಸಲುಗಳಾಗಿದ್ದರೂ ಚೊಕ್ಕವಾಗಿದ್ದುವೆಂದು ವಿದೇಶೀ ಪ್ರವಾಸಿಗಳು ತಿಳಿಸಿದ್ದಾರೆ. ಜನಪದ ಸಂಸ್ಕೃತಿಯ ಆಚಾರ ವಿಚಾರಗಳೇ ಸಾಮಾನ್ಯರ ಜೀವನವನ್ನು ನಿಯಂತ್ರಿಸುತ್ತಿದ್ದ ಸೂತ್ರಗಳು. ಜನಪದೀಯರು ಸ್ಥಳೀಯ ಅಥವಾ ನಾಡು ಕಲೆಗಳನ್ನು ಪೋಷಿಸುತ್ತಿದ್ದರು. ವೈಜ್ಞಾನಿಕ ಅರಿವಿನ ಕೊರತೆಯಿಂದ ಮೂಢನಂಬಿಕೆಗಳು ಹಾಸುಹೊಕ್ಕಾಗಿದ್ದವು.

ವ್ಯವಸಾಯ ಜನರ ಮುಖ್ಯವೃತ್ತಿ. ಫಲವತ್ತಾದ ಭೂಮಿ, ಒಳ್ಳೆಯ ಬೆಳೆ ಮತ್ತು ಪುಷ್ಟವಾದ ದನಕರುಗಳ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಬತ್ತ, ಗೋಧಿ, ದ್ವಿದಳ ಧಾನ್ಯಗಳು, ಹತ್ತಿ ಮತ್ತು ಎಣ್ಣೆಬೀಜಗಳು ಮುಖ್ಯಬೆಳೆಗಳು. ಪಶುಸಂಗೋಪನೆಯ ಕ್ಷೇತ್ರಗಳು ಸಮೃದ್ಧವಾಗಿದ್ದುವು. ನೀರಾವರಿ ಪದ್ಧತಿ ಬಳಕೆಯಲ್ಲಿದ್ದು, ಕೆರೆ, ಕಾಲುವೆಗಳನ್ನು ಅರಸರು ನಿರ್ಮಿಸುತ್ತಲೂ ದುರಸ್ತಿ ಮಾಡಿಸುತ್ತಲೂ ಇದ್ದರು. ಅಂತರ್ದೇಶೀಯ ಮತ್ತು ವಿದೇಶೀ ವ್ಯಾಪಾರ ಉತ್ತಮಸ್ಥಿತಿಯಲ್ಲಿದ್ದು ಐಶ್ವರ್ಯವೃದ್ಧಿಗೆ ಕಾರಣವಾಗಿತ್ತು. ಅಬ್ದುರ್ ರeóÁಕನ ಹೇಳಿಕೆಯ ಮೇರೆಗೆ ವಿಜಯನಗರಕ್ಕೆ ಸೇರಿದಂತೆ ೩೦೦ ಬಂದರುಗಳಿದ್ದುವು. ಹಿಂದೂಸಾಗರದ ದ್ವೀಪಗಳು, ಮಲಯ, ಬರ್ಮ, ಚೀನ, ಅರೇಬಿಯ, ಪರ್ಷಿಯ, ಆಫ್ರಿಕ ಮತ್ತು ಪೋರ್ಚುಗಲ್ಲುಗಳೊಂದಿಗೆ ಆನೆ, ಕುದುರೆ, ಮುತ್ತು, ಹವಳ, ತಾಮ್ರ, ರೇಷ್ಮೆ ಮತ್ತಿತರ ಬಟ್ಟೆಗಳು ಮುಂತಾದ ವಸ್ತುಗಳಲ್ಲಿ ವ್ಯಾಪಾರ ನಡೆಯುತ್ತಿತ್ತು. ಇವರು ಹಡುಗುಗಳನ್ನು ಸ್ವತಃ ನಿರ್ಮಿಸುತ್ತಿದ್ದರು. ಗಣಿ ಕೈಗಾರಿಕೆ ಉತ್ತಮ ಸ್ಥಿತಿಯಲ್ಲಿತ್ತು. ಕೊಯಮತ್ತೂರು ಮತ್ತು ಗೋವೆ ಬಟ್ಟೆಗಳ ವ್ಯಾಪಾರಕ್ಕೂ ವಿಜಯನಗರ ರತ್ನವ್ಯಾಪಾರಕ್ಕೂ ಭಟ್ಕಳ ಕಬ್ಬಿಣದ ವ್ಯಾಪಾರಕ್ಕೂ ಕೇಂದ್ರಗಳಾಗಿದ್ದುವು. ಆಯಾತಗಳ ಪೈಕಿ ಮುಖ್ಯವಾಗಿದ್ದವೆಂದರೆ ಕುದುರೆಗಳು. ರಾಜ್ಯದುದ್ದಕ್ಕೂ ಉತ್ತಮಸಾರಿಗೆ ವ್ಯವಸ್ಥೆಯಿದ್ದು, ಎಲ್ಲ ಮಾರ್ಗಗಳೂ ವಿಜಯನಗರವನ್ನು ಮುಟ್ಟುತ್ತಿದ್ದುವು. ವಿಜಯನಗರದ ನಾಣ್ಯಪದ್ಧತಿಯಿಂದ ಅದರ ಸಂಪತ್ತಿನ ಪರಿಚಯವಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ತಾಮ್ರಗಳ ಅನೇಕ ರೀತಿಯ ನಾಣ್ಯಗಳು ಹನುಮಾನ್, ಗರುಡ, ಆನೆ, ಶಿವ-ಪಾರ್ವತಿ, ಲಕ್ಷ್ಮೀನಾರಾಯಣ, ಸರಸ್ವತಿ-ಬ್ರಹ್ಮ, ಲಕ್ಷ್ಮೀ-ನರಸಿಂಹ, ನಂದಿ-ಶೂಲ, ಸೂರ್ಯ, ಚಂದ್ರ, ದುರ್ಗಾ, ವರಾಹ, ಶಂಖ, ಚಕ್ರಗಳ ಚಿಹ್ನೆಗಳನ್ನು ಒಂದು ಕಡೆಯೂ ಸಂಬಂಧಿಸಿದ ಚಕ್ರವರ್ತಿಯ ಅಂಕಿತವನ್ನು ಮತ್ತೊಂದು ಕಡೆಯೂ ಹೊಂದಿರುತ್ತಿದ್ದುವು. ಅಧಿಕ ಸಂಖ್ಯೆಯಲ್ಲಿ ಕಂಡುಬರುವ ಈ ನಾಣ್ಯಗಳು ಸಾಮ್ರಾಜ್ಯದ ಸಮೃದ್ಧ ಪರಿಸ್ಥಿತಿಯನ್ನೂ ವ್ಯಾಪಾರೋದ್ಯಮಗಳಿಗಿದ್ದ ಪ್ರಾಮುಖ್ಯವನ್ನೂ ಸೂಚಿಸುತ್ತವೆ. ಆರವೀಡು ವಂಶದ ನಾಣ್ಯಗಳ ಮೇಲೆ ಶ್ರೀವೆಂಕಟೇಶ್ವರನ ಚಿತ್ರ ಮತ್ತು ಶ್ರೀವೆಂಕಟಪತಿರಾಯನೆಂಬ ಅಂಕಿತಗಳಿವೆ. ಮುಸಲ್ಮಾನರ ದಾಳಿಗಳಿಂದ ೧೩ನೆಯ ಶತಮಾನದ ಆದಿಭಾಗದಲ್ಲಿ ದಿಗ್ಭ್ರಾಂತವಾಗಿದ್ದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಪರಂಪರಾಗತ ಸತ್ತ್ವ ಸ್ಫೂರ್ತಿಗಳನ್ನೊದಗಿಸಿ ಧಾರ್ಮಿಕ ಜಾಗೃತಿಯನ್ನು ಉತ್ತೇಜಿಸಿದ ಕೀರ್ತಿ ಈ ಸಾಮ್ರಾಜ್ಯದ ಸ್ಥಾಪಕರಿಗೆ ಸಲ್ಲುತ್ತದೆ. ಹಿಂದುರಾಯಸುರತ್ರಾಣರೆಂಬ ಬಿರುದು ಧರಿಸಿ, ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿಬಿದ್ದು ತೊಳಲುತ್ತಿದ್ದ ಹಿಂದೂ ಧರ್ಮವನ್ನು, ದೈತ್ಯಬಾಧೆಯಿಂದ ಸಮುದ್ರದಲ್ಲಿ ಮುಳುಗಿ ಹೋಗುತ್ತಿದ್ದ ಭೂಮಿಯನ್ನು ಮೇಲೆತ್ತಿದ ವರಾಹನಂತೆ ರಕ್ಷಿಸುವ ಧ್ಯೇಯದ ಸೂಚಕವಾಗಿ ವರಾಹವನ್ನೇ ಲಾಂಛನವಾಗಿಟ್ಟುಕೊಂಡ ಈ ಅರಸರು ಜೈನ, ಮುಸಲ್ಮಾನ, ಕ್ರೈಸ್ತ ಮುಂತಾದ ಇತರ ಧರ್ಮಗಳಿಗೂ ಆಶ್ರಯ ನೀಡಿದ್ದುದು ಇವರ ಹಿರಿಮೆಯ ದ್ಯೋತಕವಾಗಿದೆ. ಈ ಯುಗದಲ್ಲಿ ಮತೀಯ ರಂಗದಲ್ಲಿ ಕೆಲವು ಸೀಮಾಪುರುಷರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಸಾಮ್ರಾಜ್ಯಸ್ಥಾಪನೆಗೆ ಕಾರಣರೆಂದು ಪರಿಗಣಿತರಾಗಿರುವ ವಿದ್ಯಾರಣ್ಯರು ಮೊದಲಿಗರು. ವಿಜಯನಗರದ ಸ್ಥಾಪನೆಗೆ ಸ್ಫೂರ್ತಿ ನೀಡಿದವರು ಇವರು ಹೌದೇ ಅಲ್ಲವೇ, ಪ್ರಖ್ಯಾತ ವೇದಭಾಷ್ಯಕಾರ ಮಾಧವಾಚಾರ್ಯರೂ ವಿದ್ಯಾರಣ್ಯರೂ ಒಬ್ಬರೇ, ಭಿನ್ನರೇ, ಇವರ ನಿರ್ದಿಷ್ಟ ಕಾಲ ಯಾವುದು- ಎಂಬ ಸಮಸ್ಯೆಗಳು ಉಳಿದುಬಂದಿದ್ದರೂ ಹರಿಹರಸೋದರರ ಮಾರ್ಗದರ್ಶಿಗಳಾದ ವಿದ್ಯಾರಣ್ಯರು ವೇದಭಾಷ್ಯಕಾರರಾದ ಸಾಯಣಾಚಾರ್ಯರ ಸೋದರರೆಂದೂ ಅನಂತರಕಾಲದ ಶೃಂಗೇರಿ ಪೀಠದ ಜಗದ್ಗುರುಗಳೆಂದೂ ಅನೇಕ ವಿದ್ವಾಂಸರು ಒಪ್ಪಿದ್ದಾರೆ. ಇವರು ಅದ್ವೈತಸಿದ್ಧಾಂತದ ಮಹತ್ತ್ವ ಪ್ರತಿಪಾದನೆಯಲ್ಲಿ ಪ್ರಮುಖರು. ವಾಚಸ್ಪತಿ, ಅಮಲಾನಂದ, ಅಪ್ಪಯ್ಯದೀಕ್ಷಿತ ಮತ್ತು ಲಕ್ಷ್ಮೀನರಸಿಂಹ- ಇವರು ೧೩ ರಿಂದ ೧೭ನೆಯ ಶತಕಗಳಲ್ಲಿದ್ದರು. ವಾಚಸ್ಪತಿಗಳು ಶಂಕರಾಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ ಭಾಮತಿಯೆಂಬ ವ್ಯಾಖ್ಯೆಯನ್ನೂ ಅಮಲಾನಂದರು ಭಾಮತಿಗೆ ವೇದಾಂತಕಲ್ಪತರುವೆಂಬ ವಿವೃತಿಯನ್ನೂ ಅಪ್ಪಯ್ಯದೀಕ್ಷಿತರು ಪರಿಮಳದಲ್ಲಿ ವೇದಾಂತ ಕಲ್ಪತರುವಿಗೆ ವಾರ್ತಿಕವನ್ನೂ ಲಕ್ಷ್ಮೀನರಸಿಂಹ ವೇದಾಂತಕಲ್ಪಪತರುವಿಗೆ ಅಭೋಗವೆಂಬ ಟೀಕೆಯನ್ನೂ ರಚಿಸಿ ಭಾಮಿತಿಕಾರ ಪರಂಪರೆಯವರೆಂದು ಹೆಸರಾಗಿದ್ದಾರೆ. ವಿವರಣಾ ಸಂಪ್ರದಾಯ ಪದ್ಧತಿಯಲ್ಲಿ ಪದ್ಮಪಾದರು ಶಂಕರಾಭಾಷ್ಯಕ್ಕೆ ಪಂಚಪಾದಿಕಾ ಎಂಬ ಟೀಕೆ ಬರೆದರೆ, ಪ್ರಕಾಶಾತ್ಮನ್ ತಮ್ಮ ಪಂಚಪಾದಿಕಾ ವಿವರಣಾ ರಚಿಸಿದರು. ಈ ಗ್ರಂಥದ ಮೇಲೆ ವಿದ್ಯಾರಣ್ಯರು ವಿವರಣಾ ಪ್ರಮೇಯ ಸಂಗ್ರಹ ನಿರ್ಮಿಸಿದರು. ವಿದ್ಯಾರಣ್ಯರ ಇತರ ಕೃತಿಗಳು ಪಂಚದಳಿ ಮತ್ತು ಜೀವನ್ಮುಕ್ತಿ ವಿವೇಕ.

ವಿಜಯನಗರ ಕಾಲದಲ್ಲಿ ಶ್ರೀವೈಷ್ಣವಧರ್ಮ ಹೊಸ ಚೈತನ್ಯದಿಂದ ಕೂಡಿ ಜನಪ್ರಿಯತೆ ಗಳಿಸಿತು. ಒಂದು ಕಡೆ ವೇದಸಂಪ್ರದಾಯಕ್ಕೂ ಮತ್ತೊಂದು ಕಡೆ ತಮಿಳು ಆಳ್ವಾರುಗಳಿಂದ ನಿರ್ಮಿತವಾದ ದಿವ್ಯ ಪ್ರಬಂಧಗಳಿಗೂ ಏಕರೀತಿಯಾಗಿ ಮನ್ನಣೆ ನೀಡುವ ಉಭಯವೇದಾಂತ ಸಂಪ್ರದಾಯ ರೂಢಿಗೆ ಬಂತು. ಕೃಷ್ಣದೇವರಾಯನಿಗೆ ಈ ಧರ್ಮದಲ್ಲೂ ತಮಿಳು ಆಳ್ವಾರುಗಳಲ್ಲೂ ವಿಶೇಷ ಶ್ರದ್ಧೆಯಿತ್ತು. ಇದೇ ಕಾಲದಲ್ಲಿದ್ದ, ಕವಿ ತಾರ್ಕಿಕಸಿಂಹರೆಂದು ಬಿರುದು ಗಳಿಸಿದ್ದ, ವೇದಾಂತದೇಶಿಕರು ಶ್ರೀವೈಷ್ಣವ ಸಂಪ್ರದಾಯದ ಪ್ರತಿಪಾದಕರಾದರೂ ದ್ವೈತ ಅದ್ವೈತ ಆಚಾರ್ಯರುಗಳೊಂದಿಗೆ ಮೈತ್ರೀಭಾವದಿಂದ ಇದ್ದರು. ಇವರು ವಿದ್ಯಾರಣ್ಯರ ಪರಮಮಿತ್ರರು. ಶ್ರೀವೈಷ್ಣವರಲ್ಲಿ ವಡಗಲೈ (ಉತ್ತರದ ಶಾಖೆ) ಮತ್ತು ತೆಂಗಲೈ (ದಕ್ಷಿಣದ ಶಾಖೆ) ಎಂಬೆರಡು ಪ್ರಭೇದಗಳು ತಲೆದೋರಿದುವು. ವಡಗಲೈಗಳು ಸಂಸ್ಕೃತ ಅರ್ಥಾತ್ ವೈದಿಕ ಸಂಪ್ರದಾಯಕ್ಕೂ ತೆಂಗಲೈಗಳು ದ್ರಾವಿಡ ಅಥವಾ ತಮಿಳು ಸಂಪ್ರದಾಯಕ್ಕೂ ಪ್ರಾಧಾನ್ಯ ನೀಡುತ್ತಿದ್ದರು. ವೇದಾಂತ ದೇಶಿಕರು ಮತ್ತು ಪಿಳ್ಳೈ ಲೋಕಾಚಾರ್ಯರು ಅನುಕ್ರಮವಾಗಿ ಈ ಸಂಪ್ರದಾಯಗಳ ಪ್ರವರ್ತಕರು. ವಡಗಲೈ ಸಂಪ್ರದಾಯದವರಾಗಿದ್ದ ದೇಶಿಕರು ತಮಗಿಂತ ಹಿರಿಯರಾಗಿದ್ದ ತೆಂಗಲೈ ಸಂಪ್ರದಾಯದ ಪಿಳ್ಳೈ ಲೋಕಾಚಾರ್ಯರೊಡನೆ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಭಗವದ್ದಯಾಸಂಪಾದನೆಗೆ ಪುರುಷ ಪ್ರಯತ್ನ ಬೇಕೆಂದು ವಡಗಲೈಯವರು ನಂಬಿದರೆ ತೆಂಗಲೈಯವರು ನಿರ್ಹೇತುಕ ದೈವಕೃಪೆಯಲ್ಲಿ ನಂಬಿಕೆ ಇಟ್ಟವರು. ಅನುಕ್ರಮವಾಗಿ ಇವನ್ನು ಮರ್ಕಟ ಕಿಶೋರ ಮತ್ತು ಮಾರ್ಜಾಲಕಿಶೋರ ನ್ಯಾಯಗಳೆಂದು ಹೇಳುತ್ತಾರೆ. ಕಪಿಯ ಮರಿ ಸ್ವಪ್ರಯತ್ನದಿಂದ ತಾಯಿಯನ್ನು ಅಪ್ಪಿಹಿಡಿಯಬೇಕು. ಅದರಂತೆ ಭಗವತ್ಕೃಪೆಯೂ ಪ್ರಯತ್ನಲಭ್ಯವೆಂಬುದು ವಡಗಲೈ ವಾದ. ಆದರೆ ಬೆಕ್ಕಿನಮರಿ ಅಪ್ರಯತ್ನಕವಾಗಿ ತಾಯಿಯ ಹಿಡಿತದಿಂದ ಸ್ಥಳ ಬದಲಾವಣೆ ಪಡೆಯುತ್ತದೆ. ಅಂತೆಯೇ ಅಪ್ರಾರ್ಥಿತವಾಗಿ ಭಕ್ತನ ಉದ್ಧಾರ ಮಾಡುವುದು ಭಗವಂತನಿಗೆ ಸೇರಿದ್ದೆಂಬುದಾಗಿ ತೆಂಗಲೈ ನಂಬಿಕೆ. ಅಳಿಯ ರಾಮರಾಯ ಶ್ರೀವೈಷ್ಣವ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ. ಈತನ ಆಶ್ರಿತರಾದ ತಾಳ್ಲಪಾಕಂ ತಿರುವೇಂಗಡನಾಥರೂ ಅದೇ ವಂಶದಲ್ಲಿ ಅನಂತರ ಕಾಲದಲ್ಲಿ ಉದಿಸಿದ ಪ್ರಸಿದ್ಧ ವಾಗ್ಗೇಯಕಾರ ಅಣ್ಣಮಾಚಾರ್ಯರೂ ಸದಾಶಿವರಾಯನ ಆಶ್ರಯದಲ್ಲಿದ್ದ ಆಚಾರಯ್ಯನವರೂ ಆವಂಶದ ಅನಂತರ ಕಾಲದ ಲಕ್ಷ್ಮೀಕುಮಾರ ತಾತಾಚಾರ್ಯ ಮತ್ತು ಕೋಟಿ ಕನ್ಯಾದಾನಂ ತಾತಾಚಾರ್ಯರೂ ಶ್ರೀವೈಷ್ಣವಚಾರ್ಯರಲ್ಲಿ ಸ್ಮರಣೀಯರು.

ದ್ವೈತಮತದ ಇತಿಹಾಸದಲ್ಲಿ ಈ ಕಾಲ ಬಹಳ ಮುಖ್ಯವಾದದ್ದು. ಮಧ್ವಾಚಾರ್ಯರ ನೇರಶಿಷ್ಯರಾದ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭ್ಯತೀರ್ಥರು ದ್ವೈತ ತತ್ತ್ವಗಳನ್ನು ಪ್ರಚಾರಮಾಡಿದರು. ಅನಂತರ ಅಕ್ಷೋಭ್ಯರ ಶಿಷ್ಯಶ್ರೇಷ್ಠರಾದ ಜಯತೀರ್ಥರು ಆ ಮತ ಪ್ರಸಾರದಲ್ಲಿ ಪ್ರಬಲಪಾತ್ರ ವಹಿಸಿದರು. ವಿದ್ಯಾರಣ್ಯರ ಸಮಕಾಲೀನರಾದ ಜಯತೀರ್ಥರು ಅವರ ಗೌರವಾದಾರಗಳಿಗೆ ಪಾತ್ರರಾದರು. ಮಧ್ವರ ಎಲ್ಲ ಗ್ರಂಥಗಳಿಗೂ ವ್ಯಾಖ್ಯಾನ ರಚಿಸಿದ ಜಯತೀರ್ಥರು ಟೀಕಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೆ. ಅವರ ನ್ಯಾಯಸುಧಾ ಗ್ರಂಥದಲ್ಲಿ ಷಡ್ದರ್ಶನಗಳ ಸಮಾಲೋಚನೆ ನಡೆಸಿ ದ್ವೈತಮತದ ಹಿರಿಮೆಯನ್ನು ಪ್ರತಿಪಾದಿಸಲಾಗಿದೆ. ಅನಂತರ ಕಾಲದಲ್ಲಿ ಪ್ರಖ್ಯಾತರಾದವರು ವ್ಯಾಸರಾಯರು. ಸಾಳುವ ಮತ್ತು ತುಳುವ ವಂಶದ ನರಸಿಂಹ, ವೀರನರಸಿಂಹ ಕೃಷ್ಣದೇವ ಮತ್ತು ಅಚ್ಯುತರಾಯರಿಗೆ ರಾಜಗುರುಗಳಾಗಿ ೧೪೮೦ ರಿಂದ ೧೫೩೯ರ ವರೆಗೆ ತಮ್ಮ ವಿದ್ವತ್ಪೂರ್ಣವಾದ ವೈಖರಿ, ಗ್ರಂಥರಚನೆ ಮತ್ತು ಶಾಸ್ತ್ರಬೋಧನೆಗಳ ಮೂಲಕ ಅಮರರಾಗಿದ್ದಾರೆ. ದೇಶದ ಎಲ್ಲ ಪ್ರದೇಶಗಳಿಂದಲೂ ಇವರ ಬಳಿಗೆ ಶಿಷ್ಯಕೋಟಿ ಬರುತ್ತಿದ್ದು, ಅವರೊಂದು ಜೀವಂತ ವಿಶ್ವವಿದ್ಯಾನಿಲಯದಂತಿದ್ದರು. ಅವರ ಶಿಷ್ಯರಲ್ಲಿ ಪ್ರಖ್ಯಾತರಾದ ಕೆಲವರು ವಿಜಯೀಂದ್ರತೀರ್ಥ, ವಾದಿರಾಜ, ಪುರಂದರದಾಸ ಮತ್ತು ಕನಕದಾಸರು. ವ್ಯಾಸತೀರ್ಥರ ಕೃತಿಗಳಾದ ನ್ಯಾಯಾಮೃತ, ತರ್ಕತಾಂಡವ ಮತ್ತು ತಾತ್ಪರ್ಯಚಂದ್ರಿಕಾ ಎಂಬ ಮೂರು ಗ್ರಂಥಗಳಲ್ಲಿ ಸಮಸ್ತ ತಾತ್ತ್ವಿಕ ವಿಷಯಗಳೂ ಅಡಕವಾಗಿದ್ದು ಅವರ ಪಾಂಡಿತ್ಯದ ಸ್ಮಾರಕಗಳಾಗಿವೆ. ಮೇಲೆ ಹೇಳಿದ ಎಲ್ಲ ದ್ವೈತಾಚಾರ್ಯರ ಪ್ರಯತ್ನದಿಂದ ಆ ಮತ ಕರ್ನಾಟಕಾದ್ಯಂತವೇ ಅಲ್ಲದೆ ಒರಿಸ್ಸ, ಬಂಗಾಳ, ಗಯಾ, ವಾರಣಾಸಿಗಳಿಗೂ ಹಬ್ಬಿತು. ಬಂಗಾಳದ ಚೈತನ್ಯಪಂಥಕ್ಕೆ ಮಧ್ವಮತವೇ ಮೂಲ. ಚೈತನ್ಯದೇವನಿಗೆ ದೀಕ್ಷೆ ನೀಡಿದ ಕೇಶವಭಾರತೀ, ಮುಖ್ಯಸಹಾಯಕ ನಿತ್ಯಾನಂದ, ಭಕ್ತಿಮಾರ್ಗವನ್ನುಪದೇಶಿಸಿದ ಈಶ್ವರಪುರಿ- ಇವರೆಲ್ಲರೂ ಮಾಧ್ವ ಸಂತರು. ಅನಂತರ ಕಾಲದಲ್ಲಿ ಈ ಮತಪ್ರಸಾರ ಕಾರ್ಯದಲ್ಲಿ ಪ್ರಮುಖವೆಂದರೆ ವಾದಿರಾಜರು (೧೪೮೦-೧೬೦೦). ಅವರ ತೀರ್ಥಪ್ರಬಂಧ ಭಾರತದ ವಿವಿಧ ಪುಣ್ಯಕ್ಷೇತ್ರಗಳ ವರ್ಣನೆಯಿಂದ ಕೂಡಿದೆ. ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದ ಅಧಿಪತಿಗಳಿವರು. ಅಲ್ಲಿಯ ಕೃಷ್ಣದೇವಾಲಯದಲ್ಲಿ ಒಂದೊಂದು ಮಠದ ಸ್ವಾಮಿಗಳು ಎರಡೆರಡು ವರ್ಷಗಳ ಕಾಲ ಸರದಿಯ ಪ್ರಕಾರ ಪೂಜೆ ನಡೆಸಬೇಕೆಂಬ ನಿಯಮವನ್ನು ರೂಢಿಗೆ ತಂದವರು ಇವರೇ. ಆ ಪದ್ಧತಿ ಪರ್ಯಾಯವೆಂಬ ಹೆಸರಿನಿಂದ ಇನ್ನೂ ನಡೆದುಬರುತ್ತಿದೆ. ವಿಜಯನಗರ ಸಾಮ್ರಾಜ್ಯಕಾಲ ದ್ವೈತ ಮತದ ಉಚ್ಛೃಂಗ ಯುಗವೆಂದರೆ ತಪ್ಪಾಗಲಾರದು. ವೀರಶೈವಧರ್ಮ ಈ ಕಾಲದಲ್ಲಿ ನೆರೆಹೊರೆಯ ಪ್ರಾಂತ್ಯಗಳಾದ ಆಂಧ್ರ ಮತ್ತು ತಮಿಳು ದೇಶಗಳಿಗೂ ಹಬ್ಬಿತು. ವಿಜಯನಗರ ಕಾಲದ ಧರ್ಮಪ್ರಚಾರಶ್ರದ್ಧೆಯ ಫಲವಿದು. ವೀರಶೈವ ಮತದ ಜನ್ಮಪ್ರದೇಶವಾದ ಕಲ್ಯಾಣಪ್ರಾಂತ್ಯ ಮುಸ್ಲಿಮರ ವಶವಾದುದೂ ಇದಕ್ಕೆ ದ್ಯೋತಕವಾಯಿತು. ಆಂಧ್ರದಲ್ಲಿ ಕ್ರಮೇಣ ಈ ಧರ್ಮ ಪ್ರವರ್ಧಮಾನಕ್ಕೆ ಬಂತು. ವೀರಶೈವತತ್ತ್ವವೇತ್ತರು ಈ ಮತದ ತತ್ತ್ವಗಳನ್ನು ಸಮನ್ವಯಗೊಳಿಸಿದರು. ಇಮ್ಮಡಿ ದೇವರಾಯ ಈ ಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ವೀರಶೈವ ಜ್ಞಾನಿಗಳಲ್ಲಿ ಶ್ರೀಪತಿ ಪಂಡಿತ (ಸು.೧೪೦೦) ಆಂಧ್ರದ ವಿಜಯವಾಡ ಪ್ರಾಂತ್ಯದವನು. ಈತ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿ ವೀರಶೈವತತ್ತ್ವಗಳಿಗೆ ಅವನ್ನು ಅಳವಡಿಸಿಕೊಂಡಿದ್ದಾನೆ. ಕಣ್ಣಿಗೆ ಕಾಣುವ ಜಗತ್ತು ಸತ್ಯ, ಶಾಶ್ವತ ; ಎಲ್ಲವೂ ಪರಮಾತ್ಮನ ಶಕ್ತಿಯಲ್ಲಿ ಅಡಕವಾಗಿವೆ ; ಏಕತ್ವ, ಅನೇಕತ್ವಗಳು ಆತನ ಎರಡು ಮುಖಗಳು- ಎಂದು ಈತ ತನ್ನ ಶ್ರೀಕರ ಭಾಷ್ಯದಲ್ಲಿ ಪ್ರತಿಪಾದಿಸಿದ್ದಾನೆ. ಶಿವ-ಜೀವರದು ಪುಜ್ಯಪುಜಕ ಸಂಬಂಧ ; ಶಿವ ಸರ್ವವ್ಯಾಪಕ, ಸರ್ವಜ್ಞ ; ಜೀವ ಮಿತಜ್ಞಾನಿ ; ಶಿವಶಕ್ತಿಯರ ನಿರಂತರ ಮಿಲನದಿಂದ ವೀರಶೈವ ಮತಕ್ಕೆ ಶಕ್ತಿವಿಶಿಷ್ಟಾದ್ವೈತವೆಂದು ಹೆಸರು ಬಂದಿದೆ. ಲಿಂಗವೆಂಬುದು ಶಿವಶಕ್ತಿಯರ ಸತ್ ಸ್ವರೂಪ; ಪರಶಿವನೇ ಸೃಷ್ಟಿಗೆ ಮೂಲ- ಇವು ಈತ ನಿರೂಪಿಸಿದ ತತ್ತ್ವಗಳಲ್ಲಿ ಮುಖ್ಯವಾದವು. ಜೈನಧರ್ಮೀಯರಿಗೂ ಆ ಕಾಲದಲ್ಲಿ ರಾಜಾಶ್ರಯ ದೊರಕಿತ್ತೆಂಬುದಕ್ಕೆ ಬುಕ್ಕರಾಯನ ೧೩೬೮ರ ಶಾಸನ ಸಾಕ್ಷ್ಯವೀಯುತ್ತದೆ. ಜೈನ-ಶ್ರೀವೈಷ್ಣವ ನಡುವಣ ವಿವಾದವನ್ನು ಬಗೆಹರಿಸಿ ಪರಸ್ಪರ ಮೈತ್ರಿಯನ್ನು ಏರ್ಪಡಿಸಿದ ಪ್ರಸಂಗವನ್ನು ಈ ಶಾಸನದಲ್ಲಿ ಹೇಳಲಾಗಿದೆ. ರಾಜಾಶ್ರಯದಲ್ಲಿದ್ದ ಇರುಗಪ್ಪ ದಂಡನಾಥ, ಮಧುರ, ನೇಮಿಚಂದ್ರ ಮತ್ತು ವಿದ್ಯಾನಂದರು ಕವಿಗಳು; ಕಳಸ-ಕಾರ್ಕಳದ ಭೈರರಸರು, ಅಜಿಲರು, ಚೌಟರು ಜೈನಧರ್ಮೀಯರು. ೧ನೆಯ ದೇವರಾಯನ ರಾಣಿ ಭೀಮಾದೇವಿ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯರ ಶಿಷ್ಯಳಾಗಿದ್ದು ಶ್ರವಣಬೆಳಗೊಳದ ಮಾಂಗಾಯಿ ಬಸದಿಯಲ್ಲಿ ಶಾಂತಿನಾಥನ ವಿಗ್ರಹ ಸ್ಥಾಪಿಸಿದಳು; ಇಮ್ಮಡಿ ದೇವರಾಯನ ಕಾಲದಲ್ಲಿ ರಾಜಕುಲದವರೂ ಸಾಮಂತರೂ ಜೈನಧರ್ಮಕ್ಕೆ ಆಶ್ರಯ ನೀಡಿದ್ದರು.

ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ಉಜ್ವಲಕಾಲ. ದೇಶದ ಇತರ ಭಾಗಗಳಲ್ಲಿ ಅಶಾಂತಿಯಿದ್ದುದರಿಂದ ಕವಿಗಳೂ ಪಂಡಿತರೂ ವಿಜಯನಗರದ ಆಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ರಾಜರೂ ಸಾಮಂತರೂ ಶ್ರೀಮಂತರೂ ವಿದ್ವಜ್ಜನರಿಗೆ ಪ್ರೋತ್ಸಾಹ ನೀಡುತ್ತಿದ್ದರು. ವಿಪುಲವಾದ ಸಾಹಿತ್ಯ ನಿರ್ಮಾಣ ಅವಿಚ್ಛಿನ್ನವಾಗಿ ನಡೆಯುತ್ತಿತ್ತು. ಆದರೂ ಸೃಷ್ಪ್ಯಾತ್ಮಕ ಸಾಹಿತ್ಯ ದೃಷ್ಟಿಯಿಂದ ಈ ಕಾಲದ ಕೊಡುಗೆ ಹೆಚ್ಚಿಲ್ಲ. ವಿದ್ವಾಂಸರಿಗೆ ಮಾತ್ರ ರುಚಿಸುವ ಮತಸಂಬಂಧವಾದ ಗ್ರಂಥಗಳೂ ಪ್ರಮಾಣ ಗ್ರಂಥಗಳೂ ಬಹುವಾಗಿ ರಚಿತವಾದುವು. ವ್ಯಾಖ್ಯಾನಗಳೂ ಗೌಣಗ್ರಂಥಗಳೂ ಹೆಚ್ಚು. ಸ್ವತಂತ್ರ ಕೃತಿಗಳು ವಿರಳ. ಇವುಗಳಲ್ಲಿ ಅನೇಕ ಗ್ರಂಥಗಳು ಮಾಧವೀಯ ಎಂದು ಹೆಸರಾಗಿವೆ. ವಿಜಯನಗರದ ಪ್ರಾರಂಭಕಾಲದಲ್ಲಿ ಮಾಧವ ಸಾಯಣರೆಂಬ ಸೋದರರಾದ ಉತ್ತಮ ವಿದ್ವಾಂಸರಿದ್ದುದು ತಿಳಿದ ಸಂಗತಿ. ಇವರಲ್ಲಿ ಹಿರಿಯರಾದ ಮಾಧವಾಚಾರ್ಯರಿಂದ ನಿರ್ಮಿತವಾದ ಅನೇಕ ಕೃತಿಗಳು ಕಂಡುಬರುತ್ತವೆ. ಇವರೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ನೆರವು ನೀಡಿದ, ಅನಂತರ ರಾಜಗುರುಗಳಾದ, ವಿದ್ಯಾರಣ್ಯರೆಂದು ಇತ್ತೀಚಿನವರೆಗೂ ಬಹುತೇಕ ವಿದ್ವಾಂಸರ ಅಭಿಪ್ರಾಯವಾಗಿತ್ತು. ವಿದ್ಯಾರಣ್ಯರು ಅನಂತರಕಾಲದವರೆಂದೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಹಾಯಮಾಡಿ ರಾಜಗುರುಗಳಾದವರು ಕ್ರಿಯಾಶಕ್ತಿಯೆಂಬ ಶೈವ ಗುರುಗಳೆಂದೂ ಈಚೆಗೆ ಒಂದು ವಾದವಿದೆ. ಇದು ಹೇಗಾದರೂ ಇರಲಿ. ಮಾಧವೀಯವೆಂದು ಕರೆಯಲಾಗುವ ಗ್ರಂಥಗಳು ಅನೇಕವಿದ್ದು ಅವೆಲ್ಲವನ್ನೂ ಒಬ್ಬರೇ ರಚಿಸಿರುವುದು ಅಸಾಧ್ಯ. ವಿದ್ವಜ್ಜನರಿಗೆ ಆಶ್ರಯದಾತರಾಗಿದ್ದ ವಿದ್ಯಾರಣ್ಯ ಅಥವಾ ಮಾಧವರ ಹೆಸರಿನಲ್ಲಿ ಆಶ್ರಿತವಿದ್ವಾಂಸರು ಕೃತಿರಚನೆ ಮಾಡಿರಬಹುದು. ಸಮಕಾಲೀನ ಸಂಸ್ಕೃತ ಸಾಹಿತ್ಯದ ಬೃಹತ್ಕೃತಿ ವೇದಾರ್ಥಪ್ರಕಾಶ. ಸಾಯಣರು ಮಾಧವರ ನೇತೃತ್ವದಲ್ಲಿ ಎಲ್ಲ ವಿದ್ವಾಂಸರ ನೆರವಿನಿಂದ ಇದನ್ನು ರಚಿಸಿರಬೇಕು. ಈ ವಿದ್ವಾಂಸರಲ್ಲಿ ಪಂಚಾಗ್ನಿ ಮಾಧವ, ನಾರಾಯಣ ವಾಜಪೇಯಿ, ವಾಮನಭಟ್ಟ, ನರಹರಿಸೋಮಯಾಜಿ, ಫಂಡರಿ ದೀಕ್ಷಿತ ಮತ್ತು ನಾಗಾಭರಣ- ಇವರ ಹೆಸರುಗಳು ತಿಳಿದುಬಂದಿವೆ. ಸಾಮಾನ್ಯರಿಗೂ ತಿಳಿಯುವಂತೆ ಸಮಸ್ತ ವೇದಗಳಿಗೂ ಮೊದಲಬಾರಿಗೆ ವ್ಯಾಖ್ಯಾನ ನಿರ್ಮಿಸಿ, ಆ ಸಂಸ್ಕೃತಿಯನ್ನು ಅಚ್ಚಳಿಯದಂತೆ ನಿಲ್ಲಿಸಿದ ಕೀರ್ತಿ ಇವರಿಗೆ ಸೇರಿದ್ದು.

ಕೃಷ್ಣದೇವರಾಯ ಪ್ರೌಢಪಂಡಿತನಾಗಿದ್ದು ಸಕಲ ಕಲಾಭೋಜರಾಜನೆಂದು ಕರೆಸಿಕೊಳ್ಳುತ್ತಿದ್ದ. ಈತ ಸಂಸ್ಕೃತದಲ್ಲಿ ಮದಾಲಸಚರಿತ ಸತ್ಯವಧೂಸಾಂತ್ವನ, ಸಕಲಕಥಾಸಾರಸಂಗ್ರಹ, ರಸಮಂಜರಿ ಮತ್ತು ಜ್ಞಾನಚಿಂತಾಮಣಿ ಎಂಬ ಗ್ರಂಥಗಳನ್ನು ತೆಲುಗಿನಲ್ಲಿ ಅಮುಕ್ತಮಾಲ್ಯದವೆಂಬ ಕೃತಿಯನ್ನು ರಚಿಸಿದ. ಈತನ ಆಸ್ಥಾನದ ಡಿಂಡಿಮ ಸಭಾಪತಿ, ತೆಲುಗು ಕವಿ ಪೆದ್ದನ, ಲೊಲ್ಲಲಕ್ಷ್ಮೀಧರ ಮತ್ತು ದಿವಾಕರ ಇವರು ಹೆಸರಾಂತ ಸಾಹಿತಿಗಳು. ದಿವಾಕರನ ಭಾರತಾಮೃತ ಉತ್ತಮ ಕಾವ್ಯ. ಕವಿಯಿತ್ರಿಯರಲ್ಲಿ ಅಭಿರಾಮ ಕಾಮಾಕ್ಷಿ ಮತ್ತು ತಿರುಮಲಾಂಬಾ-ಇವರು ಪ್ರಸಿದ್ದರು. ಕನ್ನಡ ಸಾಹಿತ್ಯರಂಗದಲ್ಲಿ ಈ ಮುನ್ನ ಬಳಕೆಗೆ ಬಂದಿದ್ದ ದೇಸಿಶೈಲಿ ಈ ಕಾಲದಲ್ಲಿ ಬೆಳೆಯಿತು. ಹಳಗನ್ನಡ ಮರೆಯಾಗಿ, ಆಗಿನ ಆಡುನುಡಿಯಲ್ಲಿ ಸಾಹಿತ್ಯ ರಚನೆ ಸಾಮಾನ್ಯವಾಯಿತು. ಶಿವ ಮತ್ತು ವಿಷ್ಣುಪರವಾದ ಇಬ್ಬಗೆಯ ಭಕ್ತಿಪಂಥಗಳು ಪ್ರಬಲವಾಗಿ, ಭಕ್ತಿ ಸಾಹಿತ್ಯ ಸೃಷ್ಟಿ ಅಪಾರವಾಗಿ ನಡೆಯಿತು. ಭಕ್ತಿಗೀತೆಗಳು ಎಲ್ಲ ಮತದವರಿಂದಲೂ ರಚಿತವಾಗಿ ಜನಸಾಮಾನ್ಯರಲ್ಲಿ ಪ್ರಚಾರಕ್ಕೆ ಬಂದುವು. ಈ ಕಾಲದ ವಿಪುಲವಾದ ಸಾಹಿತ್ಯಸಂಪತ್ತನ್ನು ಪ್ರಮುಖವಾಗಿ ಜೈನ ಮಹಾಕಾವ್ಯಗಳು ಮತ್ತು ಕಥೆಗಳು ; ಶೈವಸಂತರಾದ ಅರವತ್ತುಮೂವರ ಇತಿಹಾಸ ಮತ್ತು ಶಿವಪುರಾಣಗಳು ; ಬ್ರಾಹ್ಮಣ ಮಹಾಪುರಾಣಗಳು; ಇತರ ಐತಿಹ್ಯಗಳು - ಎಂದು ವಿಭಾಗಿಸಬಹುದಾಗಿ ವಿದ್ವಾಂಸರೊಬ್ಬರು ಸೂಚಿಸಿದ್ದಾರೆ.

ಈ ಕಾಲದಲ್ಲಿ ವೀರಶೈವಸಾಹಿತ್ಯದ ಹೊಸಮಾರ್ಗವೊಂದು ಕಂಡುಬರುತ್ತದೆ. ವೀರಶೈವರಿಗೆ ನೇರ ರಾಜಾಶ್ರಯ ತಪ್ಪಿತ್ತು. ಹಿಂದೂ ಸಂಸ್ಕೃತಿಯ ಪುನರುಜ್ಜೀವನದ ಕಾಲದಲ್ಲಿ ಪ್ರಾಬಲ್ಯಗಳಿಸಿದ ವೈದಿಕ ಸಂಪ್ರದಾಯದ ಪ್ರಾಬಲ್ಯದೆದುರಿನಲ್ಲಿ ಜನಪ್ರಿಯತೆ ಗಳಿಸಲು ಇವರು ದೇಶದಾದ್ಯಂತ ಹರಡಿ, ಮಠಗಳನ್ನೂ ದೇವಾಲಯಗಳನ್ನೂ ನಿರ್ಮಿಸಲಾರಂಭಿಸಿ, ಧರ್ಮತತ್ತ್ವಗಳ ಸಂಗ್ರಹ ಮತ್ತು ಕ್ರೋಡೀಕರಣ ರೂಪದ ಸಾಹಿತ್ಯ ನಿರ್ಮಾಣ ಮಾಡಿದರು.

ಕೆಳದಿ, ಮೈಸೂರು[ಸಂಪಾದಿಸಿ]

ವಿಜಯನಗರದ ಸಾಮ್ರಾಜ್ಯಾನಂತರದ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅನೇಕ ಸಣ್ಣಪುಟ್ಟ ಮನೆತನಗಳು ಅಧಿಕಾರ ನಡೆಸಿದರೂ, ಅವುಗಳಲ್ಲಿ ಮುಖ್ಯವಾದವು ಕೆಳದಿ ಮತ್ತು ಮೈಸೂರು ರಾಜ್ಯಗಳು. ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಬಹುಭಾಗ, ಗುತ್ತಿ ಮತ್ತು ಆರಗ ಪ್ರದೇಶಗಳನ್ನೊಳಗೊಂಡಿದ್ದ, ಇಕ್ಕೇರಿ ಮತ್ತು ಬಿದನೂರು ಎಂಬ ಹೆಸರುಗಳನ್ನೂ ಪಡೆದಿದ್ದ, ಕೆಳದಿಯ ರಾಜ್ಯ ೧೫ನೆಯ ಶತಮಾನದ ಅಂತ್ಯದಲ್ಲಿ ಚೌಡಪ್ಪನಿಂದ ಪ್ರಾರಂಭವಾಯಿತು. ಈ ರಾಜ್ಯದ ಸದಾಶಿವನಾಯಕ ಕೃಷ್ಣದೇವರಾಯನ ಪ್ರಮುಖ ದಳವಾಯಿಗಳಲ್ಲೊಬ್ಬನಾಗಿದ್ದ. ವೆಂಕಟಪ್ಪನಾಯಕ (೧೫೮೨-೧೬೨೯) ವಿಜಯನಗರದ ಪತನಾನಂತರ ಸ್ವತಂತ್ರವಾಗಿ ಬಿಜಾಪುರದ ದಳಪತಿ ರಣದುಲ್ಲಾಖಾನನನ್ನೂ ಗೇರುಸೊಪ್ಪೆಯ ರಾಣಿಯನ್ನೂ ಬಗ್ಗುಬಡಿದ. ಕೆಳದಿ ರಾಜ್ಯ ಇವನ ಕಾಲದಲ್ಲಿ ಪ್ರಭಾವಯುತವಾಗಿದ್ದು ಮಲಬಾರಿನವರೆಗೂ ಹಬ್ಬಿತ್ತು. ಶಿವಪ್ಪನಾಯಕನ ಕಾಲದಲ್ಲಿ (೧೬೪೫-೧೬೬೦) ರಾಜ್ಯಾಡಳಿತವನ್ನು ಉತ್ತಮಗೊಳಿಸಲಾಗಿದ್ದು ಶಿಸ್ತು ಎಂಬ ಭೂಗಂದಾಯಪದ್ಧತಿ ಜಾರಿಗೆ ಬಂತು. ಈತ ವಿಜಯನಗರದರಸು ಶ್ರೀರಂಗರಾಯನಿಗೆ ಆಶ್ರಯವಿತ್ತು, ಬೇಲೂರು ಮತ್ತು ಸಕ್ಕರೆಪಟ್ಟಣಗಳ ಆಡಳಿತ ವಹಿಸಿಕೊಟ್ಟ. ಕ್ರಮೇಣ ಶಿಥಿಲವಾಗುತ್ತಿದ್ದ ರಾಜ್ಯದಲ್ಲಿ ಸೋಮಶೇಖರನಾಯಕನ ವಿಧವೆ ಚೆನ್ನಮ್ಮಾಜಿ (೧೬೭೧-೧೬೯೭) ವೀರರಾಣಿಯಾಗಿದ್ದು ಮೊಗಲರಿಂದ ತಪ್ಪಿಸಿಕೊಂಡು ಓಡಿಬಂದ ಮರಾಠರ ದೊರೆ ರಾಜಾರಾಮನಿಗೆ ಆಶ್ರಯ ನೀಡಿ ಮರಾಠರ ಅಧಿಕಾರ ಉಳಿಯಲು ಕಾರಣಳಾದಳು. ಅನಂತರ ೨ನೆಯ ಸೋಮಶೇಖರನಾಯಕ ಮುಸ್ಲಿಮರನ್ನು ಸೋಲಸಿದನಾದರೂ ಅವನತಿಮುಖವಾಗಿದ್ದ ಈ ರಾಜ್ಯವನ್ನು ೧೭೬೩ರಲ್ಲಿ ಮೈಸೂರಿನ ಹೈದರ್ ಅಲಿ ವೀರಮ್ಮಾಜಿಯಿಂದ ವಶಪಡಿಸಿಕೊಂಡ. ೧೪೯೯ರಿಂದ ೧೭೬೩ರವರೆಗೂ ಕರ್ನಾಟಕದ ಕೇಂದ್ರಸ್ಥಾನವೆಂಬಂತೆ ಕೆಳದಿ ಮೆರೆಯಿತಾದರೂ ಆ ಗೌರವಕ್ಕೆ ನಿಜವಾಗಿ ಅರ್ಹತೆ ಪಡೆದ ಮೈಸೂರು ರಾಜ್ಯದ ತಳಹದಿಯನ್ನು ೧೬೧೦ರಲ್ಲಿ ರಾಜ ಒಡೆಯರು ಹಾಕಿದ್ದರು. ೧೫೭೮ರಿಂದ ೧೬೧೭ರವರೆಗೆ ಮೈಸೂರಿನ ರಾಜರಾಗಿದ್ದ ಇವರು ಶ್ರೀ ಕೃಷ್ಣನ ವಂಶವೆಂದು ಹೆಸರಾದ ಯಾದವ ಕುಲಕ್ಕೆ ಸೇರಿದವರು. ಇವರ ಮೂಲಪುರುಷರಾದ ಯದುರಾಜರು ದ್ವಾರಕೆಯಿಂದ ಕರ್ನಾಟಕಕ್ಕೆ ೧೩೯೯ರಲ್ಲಿ ಬಂದು ರಾಜ್ಯಸ್ಥಾಪನೆ ಮಾಡಿದರೆಂದೂ ಈ ವಂಶದ ಬೆಟ್ಟದ ಚಾಮರಾಜ ಒಡೆಯರು ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿದರೆಂದೂ ಹೇಳಲಾಗಿದೆ. ರಾಜ ಒಡೆಯರು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶ್ರೀರಂಗಪಟ್ಟಣದ ಪ್ರತಿನಿಧಿಯಾದ ತಿರುಮಲರಾಯನ ಅಧೀನರಾಗಿದ್ದರು. ಆದರೆ ಚಕ್ರವರ್ತಿಯ ತಿರಸ್ಕಾರಕ್ಕೆ ಪಾತ್ರನಾಗಿದ್ದ ತಿರುಮಲನನ್ನು ಶ್ರೀರಂಗಪಟ್ಟಣದಿಂದ ಓಡಿಸಿ ೧೬೧೦ರಲ್ಲಿ ಚಕ್ರವರ್ತಿಯ ಒಪ್ಪಿಗೆ ಪಡೆದು ತಾವೇ ಶ್ರೀರಂಗಪಟ್ಟಣದ ಗದ್ದುಗೆಯನ್ನೇರಿ ಆಧುನಿಕ ಮೈಸೂರಿನ ಸ್ಥಾಪಕರಾದರು. ಮೈಸೂರರಸರು ಕೆಲಕಾಲ ವಿಜಯನಗರ ಸಾಮಂತರೆಂಬ ಅಭಿಧಾನ ಪಡೆದಿದ್ದು ಕ್ರಮೇಣ ಸ್ವತಂತ್ರರಾದರು. ಮೈಸೂರಿನಲ್ಲಿ ವೈಶಿಷ್ಟ್ಯಪೂರ್ಣ ನವರಾತ್ರಿ ಉತ್ಸವ ಪ್ರಾರಂಭಿಸಿದವರು ಇವರೇ. ಅನಂತರದ ಪ್ರಮುಖ ದೊರೆ ಕಂಠೀರವ ನರಸರಾಜ ಒಡೆಯರು (೧೬೩೮-೫೯) ಸುಪ್ರಸಿದ್ಧ ಮಲ್ಲರಾಗಿದ್ದು ಬಿಜಾಪುರದ ದಳಪತಿ ರಣದುಲ್ಲಾಖಾನನನ್ನು ಸೋಲಿಸಿದುದಲ್ಲದೆ ರಾಜ್ಯದ ಆರ್ಥಿಕ ಪ್ರಗತಿಯನ್ನು ಸಾಧಿಸಿದರು. ತರುವಾಯ ಚಿಕ್ಕದೇವರಾಜ ಒಡೆಯರು (೧೬೭೩-೧೭೦೪) ದಕ್ಷರಾಗಿದ್ದು ರಾಜ್ಯ ವಿಸ್ತರಿಸಿದರು. ಇವರು ಶಿವಾಜಿಯನ್ನು ಕೂಡ ಸೋಲಿಸಿದ್ದರು. ಇವರು ಮರಾಠರನ್ನು ಹಲವು ಬಾರಿ ಸೋಲಿಸಿ ಅಪ್ರತಿಮ ವೀರನೆಂಬ ಬಿರುದು ಪಡೆದರು. ರಾಜ್ಯಾಡಳಿತ ಪದ್ಧತಿಯನ್ನು ಸುಧಾರಿಸಿ ಅಂಚೆ ವ್ಯವಸ್ಥೆ ಏರ್ಪಡಿಸಿದರು. ಔರಂಗಜೇಬನೂ ಇವರ ಅಧಿಕಾರಕ್ಕೆ ಮನ್ನಣೆ ನೀಡಬೇಕಾಯಿತು. ಸ್ವತಃ ವಿದ್ವಾಂಸರಾದ ಇವರು ಅನೇಕ ಕವಿ ವಿದ್ವಾಂಸರಿಗೆ ಆಶ್ರಯ ನೀಡಿದ್ದರು. ಅನಂತರದ ದೊರೆಗಳಾದ ದೊಡ್ಡ ಕೃಷ್ಣರಾಜ ಮತ್ತು ಚಾಮರಾಜ ಮತ್ತು ಚಿಕ್ಕ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ದುರ್ದೆಶೆ ಪ್ರಾರಂಭವಾಗಿ ಇದನ್ನು ತಡೆಗಟ್ಟಲು ಮುಸ್ಲಿಂ ಸರದಾರ ಹೈದರನ ಪ್ರವೇಶವಾಗಬೇಕಾಯಿತು. ಹೈದರ್ ಅಲಿ (೧೭೬೧-೧೭೮೨) ಮತ್ತು ಅವನ ಮಗ ಟಿಪ್ಪು ಸುಲ್ತಾನರ (೧೭೮೨-೧೭೯೯) ಕಾಲದಲ್ಲಿ ಮೈಸೂರು ರಾಜ್ಯದ ಗಡಿ ವಿಸ್ತರಣೆ ಹೊಂದಿ ಕರ್ನಾಟಕದ ಚೈತನ್ಯಕ್ಕೆ ಹೊಸ ಮೆರುಗು ದೊರೆಯಿತು. ತನ್ನ ಸಾಹಸ ಯುಕ್ತಿಗಳಿಂದ ಹೈದರ್ ರಾಜವಂಶಕ್ಕೆ ಸೇರಿದ ಅರಸರನ್ನು ಹೆಸರಿಗೆ ಸಿಂಹಾಸನದಲ್ಲಿ ಕೂರಿಸಿದ್ದು ಸರ್ವಾಧಿಕಾರಿಯಾಗಿದ್ದರೂ ರಾಜ್ಯ ವಿಸ್ತಾರಮಾಡಿ ಹಿಂದೂ ಮುಸ್ಲಿಂ ಧರ್ಮಗಳೆರಡನ್ನೂ ಪ್ರೋತ್ಸಾಹಿಸುತ್ತ ಬಂದ. ಅವನ ಮಗ ಟಿಪ್ಪು ತಾನೇ ಗದ್ದುಗೆಯನ್ನೇರಿದರೂ ರಾಜ್ಯದ ಹಿತಸಾಧನೆಗೆ ಅಮೋಘವಾಗಿ ಶ್ರಮಿಸಿದ. ಬ್ರಿಟಿಷರನ್ನು ಸೋಲಿಸಿದಲ್ಲದೆ ದೇಶದ ಹಿತಸಾಧನೆಯಾಗಲಾರದೆಂದು ತಿಳಿದು, ಈ ಉದ್ದೇಶ ಸಾಧನೆಗಾಗಿ ಈತ ದಕ್ಷಿಣ ಭಾರತದ ಹಲವು ಅರಸರ ಮತ್ತು ಫ್ರೆಂಚ್ ಚಕ್ರವರ್ತಿ ನೆಪೋಲಿಯನನ ಸ್ನೇಹ ಗಳಿಸಿದರೂ ಅಂತಿಮವಾಗಿ ೧೭೯೯ರಲ್ಲಿ ಬ್ರಿಟಿಷರಿಂದ ಸೋತು ಮಡಿಯಬೇಕಾಯಿತು. ಈತ ಮೈಸೂರಿನ ಹುಲಿ ಎಂದು ಪ್ರಸಿದ್ಧನಾಗಿದ್ದ. ವಿಜಯಿಗಳಾದ ಬ್ರಿಟಿಷರು ಟಿಪ್ಪುವಿನ ಆಡಳಿತಕ್ಕೊಳಪಟ್ಟಿದ್ದ ರಾಜ್ಯವನ್ನು ತುಂಡರಿಸಿ, ಅದರಲ್ಲೊಂದು ಭಾಗದ ಅಧಿಕಾರವನ್ನು ಮೈಸೂರು ಅರಸುಮನೆತನಕ್ಕೆ ಮತ್ತೆ ವಹಿಸಿಕೊಟ್ಟು ಮುಮ್ಮಡಿ ಕೃಷ್ಣರಾಜರಿಗೆ ಪಟ್ಟ ಕಟ್ಟಿದರು. ಆ ಕಾಲದಲ್ಲಿ ರಾಜ್ಯ ಆರ್ಥಿಕ ದುಸ್ಥಿತಿಗೀಡಾಯಿತೆಂಬ ಕಾರಣದಿಂದ ೧೮೩೧ ರಿಂದ ೧೮೮೧ರವರೆಗೆ ಅಧಿಕಾರ ಬ್ರಿಟಿಷ್ ಪ್ರತಿನಿಧಿಯ ಆಡಳಿತಕ್ಕೆ ಒಳಪಟ್ಟಿತ್ತು. ೧೮೮೧ರಲ್ಲಿ ಮೈಸೂರು ರಾಜವಂಶದ ಚಾಮರಾಜೇಂದ್ರ ಒಡೆಯರಿಗೆ ವಹಿಸಿಕೊಡಲಾಯಿತು. ಈ ಕಾಲದಲ್ಲಿ ದಿವಾನರುಗಳು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರ ಅನಂತರ ೧೯೦೨ರಲ್ಲಿ ಸಿಂಹಾಸನವನ್ನೇರಿದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಮೈಸೂರಿನ ಸರ್ವತೋಮುಖ ಪ್ರಗತಿಗೆ ಶ್ರಮಿಸಿ ಅದಕ್ಕೆ ಮಾದರಿ ಮೈಸೂರೆಂಬ ಅಭಿಧಾನ ದೊರಕಿಸಿಕೊಟ್ಟರು. ಅವರ ಮರಣಾನಂತರ ೧೯೪೦ರಲ್ಲಿ ಸಿಂಹಾಸನಸ್ಥರಾದ ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ, ಭಾರತದ ಸ್ವಾತಂತ್ರ್ಯಾನಂತರ, ೧೯೪೭ರಲ್ಲಿ, ಮೈಸೂರು ಸಂಸ್ಥಾನದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿತವಾಯಿತು. ಅನಂತರ ಭಾರತದ ರಾಜ್ಯಪುನರ್ವಿಂಗಡಣೆಯಾದಾಗ, ೧೯೫೬ರ ನವೆಂಬರ್ ಒಂದರಂದು. ಮೈಸೂರು ರಾಜ್ಯವೆಂಬ ಅಭಿಧಾನದಲ್ಲಿ ಏಕೀಕೃತ ಕರ್ನಾಟಕ ರಾಜ್ಯ ಸ್ಥಾಪನೆಯಾಯಿತು. (ನೋಡಿ- ಕರ್ನಾಟಕ ಏಕೀಕರಣ)

ಮೈಸೂರು ಒಡೆಯರ ಕಾಲದಲ್ಲಿ ರಾಜ್ಯಭಾರವನ್ನು ಪುರಾತನ ರಾಜನೀತಿ ಮತ್ತು ಧರ್ಮಶಾಸ್ತ್ರ ಗ್ರಂಥಗಳಿಗನುಸಾರವಾಗಿ ನಡೆಸುತ್ತಿದ್ದರು. ರಾಜ್ಯಾಧಿಕಾರ ಸಾಮಾನ್ಯವಾಗಿ ಹಿರಿಯ ರಾಜಕುಮಾರನಿಗೆ ದೊರೆಯುತ್ತಿದ್ದರೂ ಸಂಕಟಕಾಲದಲ್ಲಿ ಶಕ್ತರಾದ ಇತರ ರಾಜಕುಮಾರರಲ್ಲೊಬ್ಬನಿಗಾಗಲಿ ರಾಜವಂಶಕ್ಕೆ ಸೇರಿದ ಬೇರೆಯವರಿಗಾಗಲಿ ಸಂದ ನಿದರ್ಶನಗಳೂ ಇವೆ. ಬೆಟ್ಟದ ಚಾಮರಾಜರಿಗೆ ಸಲ್ಲಬೇಕಾದ ಪದವಿ, ಪರಿಸ್ಥಿತಿಯ ದೃಷ್ಟಿಯಿಂದ ಶಕ್ತರಾದ ಅವರ ತಮ್ಮನಾದ ರಾಜ ಒಡೆಯರಿಗೆ ದೊರಕಿತು. ಮಂತ್ರಿವರ್ಗದವರೂ ಅಧಿಕಾರಿಗಳೂ ನೆರೆದಿದ್ದ ವಿಶೇಷ ದರ್ಬಾರಿನಲ್ಲಿ ಕಿರೀಟಧಾರಣೆ ನಡೆಯುತ್ತಿತ್ತು. ದಳವಾಯಿ ಹೊಸ ರಾಜನನ್ನು ಸಿಂಹಾಸನದ ಮೇಲೆ ಕೂಡಿಸುತ್ತಿದ್ದ. ಯುವರಾಜ ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಾಂತ್ಯವೊಂದರ ಆಡಳಿತ ನೋಡಿಕೊಳ್ಳುತ್ತಿದ್ದ. ಅರಸನ ಅನುಪಸ್ಥಿತಿಯಲ್ಲಿ ಯುವರಾಜ ರಾಜ್ಯಭಾರವನ್ನು ನೋಡಿಕೊಳ್ಳಬೇಕಾಗುತ್ತಿತ್ತು. ಪ್ರಜೆಗಳ ಹಿತರಕ್ಷಣೆಯೇ ಅರಸರ ಪ್ರಥಮ ಕರ್ತವ್ಯವೆಂಬ ನೀತಿಯನ್ನು ಈ ಅರಸರು ಪಾಲಿಸಿಕೊಂಡು ಬಂದರು. ನ್ಯಾಯ ಪರಿಪಾಲನೆ, ವರ್ಣಾಶ್ರಮ ಧರ್ಮರಕ್ಷಣೆ ಮತ್ತು ಸರ್ವಧರ್ಮ ಸಮಾನತೆಗಳನ್ನು ಆದರ್ಶವಾಗಿರಿಸಿಕೊಂಡಿದ್ದರು. ಆಗಾಗ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದು ಪ್ರಜೆಗಳ ಕುಂದು ಕೊರತೆಗಳನ್ನು ತಿಳಿದು, ಅವನ್ನು ಪರಿಹರಿಸುತ್ತಿದ್ದರು. ಮತೀಯ ಧಾರ್ಮಿಕ ವಿಚಾರಗಳಲ್ಲಿ ಅವ್ಯವಸ್ಥೆಯೇರ್ಪಟ್ಟ ಹೊರತು ರಾಜ ಪ್ರವೇಶಮಾಡಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ.

ಆಡಳಿತ ಕಾರ್ಯದಲ್ಲಿ ಸಚಿವ ಪರಿಷತ್ತು ನೆರವು ನೀಡುತ್ತಿತ್ತು. ಪ್ರಧಾನ, ದಳವಾಯಿ, ರಾಜಮನೆತನದವರು ಮತ್ತು ಹಿರಿಯ ಅಧಿಕಾರಿಗಳು ಮಂತ್ರಾಲೋಚನ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಮೂರರಿಂದ ಐದು ಮಂತ್ರಿಗಳಿರುತ್ತಿದ್ದು ವಿವಿಧ ಆಡಳಿತ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಇದಲ್ಲದೆ ಅರಮನೆಯ ಹಿರಿಯರ ಸಭೆಯೊಂದು ಇರುತ್ತಿತ್ತು; ಮಂತ್ರಿಗಳು ವಿಶೇಷ ಅರ್ಹತೆ ಪಡೆದಿದ್ದು ರಾಜನಿಷ್ಠರಾಗಿರಬೇಕಿತ್ತು. ಪೂರ್ವ ಸಂಪ್ರದಾಯವನ್ನು ಬಿಟ್ಟು, ಯೋಗ್ಯರಾದ ಯಾವ ಜಾತಿಯವರನ್ನಾದರೂ ಮಂತ್ರಿಗಳಾಗಿ ನೇಮಿಸಬಹುದಾಗಿತ್ತು. ಪ್ರಧಾನ ಉಚ್ಚಸ್ಥಾನ ಪಡೆದಿದ್ದು, ಕೆಲಬಾರಿ ಸರ್ವಾಧಿಕಾರಿಯೂ ಆಗಿರುತ್ತಿದ್ದ. ದಳವಾಯಿ ರಕ್ಷಣಾ ಮಂತ್ರಿಯೂ ಕೋಶಾಧಿಕಾರಿ ಅರ್ಥಸಚಿವನೂ ಇನ್ನೊಬ್ಬ ಲೆಕ್ಕಪತ್ರಗಳ ಸಚಿವನೂ ಆಗಿರುತ್ತಿದ್ದರು. ಆಡಳಿತವನ್ನು ಮೊದಲಿಗೆ ಅಠವಣ (ಕಂದಾಯ ವಿಭಾಗ), ಕಂದಾಚಾರ (ಸೇನಾವಿಭಾಗ), ಬೊಕ್ಕಸ ಮತ್ತು ಅರಮನೆಯ ವಿಭಾಗಗಳೆಂದು ವಿಭಾಗಿಸಿದ್ದರೆ, ಅನಂತರ ಕಾಲದಲ್ಲಿ (ಚಿಕ್ಕದೇವರಾಜರ ಸಮಯದಲ್ಲಿ) ೧೮ ಚಾವಡಿ ಅಥವಾ ಇಲಾಖೆಗಳಾಗಿ ವಿಭಾಗಿಸಿದರು. ಈ ೧೮ ಇಲಾಖೆಗಳ ಆಡಳಿತ ವ್ಯವಸ್ಥೆಯೇ ಅಠಾರಾ ಕಚೇರಿ ಎಂಬ ಪದದ ಮೂಲ. ಇವುಗಳಲ್ಲ್ಲೊಂದೊಂದಕ್ಕೂ ಗೊತ್ತುಗಾರ ಅಥವಾ ಮುಖ್ಯಾಧಿಕಾರಿ ಮತ್ತು ಇತರರ ಅಧಿಕಾರವರ್ಗವಿರುತ್ತಿತ್ತು. ಅಧಿಕಾರಿಗಳಿಗೆ ಸಂಬಳ ಅರ್ಧ ಧಾನ್ಯರೂಪದಲ್ಲೂ ಅರ್ಧ ನಗದಾಗಿಯೂ ಸಿಕ್ಕುತ್ತಿತ್ತು. ಅಧಿಕಾರಿಗಳ ಕರ್ತವ್ಯ ಪಾಲನೆಯ ಬಗೆಗೆ ಆಡಳಿತಕ್ಕೆ ಗುಪ್ತಚಾರರಿಂದ ವರದಿಗಳು ಬರುತ್ತಿದ್ದುವು. ಅಧಿಕಾರಿಗಳ ಲಂಚಗುಳಿತನ ಮತ್ತು ಕರ್ತವ್ಯಲೋಪಗಳಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು. ರಾಜಾದಾಯದ ಮುಖ್ಯಾಧಾರಗಳೆಂದರೆ ಭೂಕಂದಾಯವಲ್ಲದೆ ಇತರ ಹಲವಿಧವಾದ ತೆರಿಗೆಗಳು, ಸುಂಕಗಳು. ಉತ್ಪನ್ನದ ೧/೩ ರಿಂದ ಅರ್ಧ ಭಾಗ ರಾಜ್ಯಕ್ಕೆ ಸಲ್ಲುತ್ತಿತ್ತು. ತೆರಿಗೆ, ಸುಂಕಗಳನ್ನು ಧನ ಮತ್ತು ಧಾನ್ಯ ರೂಪಗಳಲ್ಲಿ ಕೊಡಬಹುದಿತ್ತು. ವೃತ್ತಿ ತೆರಿಗೆಗಳೂ ವಿಧಿಸಲ್ಪಡುತ್ತಿದ್ದುವು. ಬೊಕ್ಕಸದಲ್ಲಿ ಶೇಖರವಾದ ಐಶ್ವರ್ಯವನ್ನು ವೇತನ, ದೇಶರಕ್ಷಣೆ, ಕಾಮಗಾರಿ, ಸಾಹಿತ್ಯ, ಕಲಾಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿತ್ತು. ನ್ಯಾಯ ವಿತರಣೆಗೆ ಹೆಚ್ಚಿನ ಪ್ರಾಮುಖ್ಯ ದೊರಕಿತ್ತು. ರಾಜ ಸರ್ವೋನ್ನತ ನ್ಯಾಯಾಧಿಕಾರಿ. ಮಂತ್ರಿವರ್ಗ, ಜಿಲ್ಲಾಧಿಕಾರಿಗಳು ಮತ್ತು ಪ್ರತ್ಯೇಕ ನ್ಯಾಯಾಧಿಕಾರಿಗಳೂ ನ್ಯಾಯ ಪುರೈಸುವ ಹೊಣೆ ಇತ್ತು. ಗ್ರಾಮ ಪಂಚಾಯತರು ಮತ್ತು ಊರಗೌಡ- ಇವರು ಸ್ಥಳೀಯ ನ್ಯಾಯಮೂರ್ತಿಗಳೆನಿಸಿದ್ದರು. ವಿಧ್ಯುಕ್ತವಾಗಿ ವಿಚಾರಣೆ ನಡೆಸಿ, ತೀರ್ಮಾನ ಕೊಡಲಾಗುತ್ತಿತ್ತು. ಕಣ್ಣು ಕೀಳಿಸುವುದು, ಸರ್ವಸ್ವಾಪಾಹಾರ, ಮರಣದಂಡನೆ, ಜುಲ್ಮಾನೆ ಮುಂತಾದ ಕ್ರೂರಶಿಕ್ಷೆಗಳು ರೂಢಿಯಲ್ಲಿದ್ದುವು. ದೇಶದಲ್ಲಿ ಆರಕ್ಷಕ (ಪೊಲೀಸ್) ವ್ಯವಸ್ಥೆಯಿತ್ತು. ಸೈನಿಕರೂ ನಗರ ಮತ್ತು ಗ್ರಾಮ ರಕ್ಷಣಾಧಿಕಾರಿಗಳೂ ಆಂತರಿಕ ಶಾಂತಿಪಾಲನೆ ಮಾಡುತ್ತಿದ್ದರು. ಒಟ್ಟಿನಲ್ಲಿ ಶಾಂತಿ ಶಿಸ್ತುಗಳ ಪಾಲನೆ ಸಮರ್ಪಕವಾಗಿತ್ತು. ರಾಜಕೀಯ ವಿಚಾರಗಳಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಆಸಕ್ತಿಯಿರಲಿಲ್ಲ. ಪಾಳೆಯಗಾರರೂ ಅವರ ಪರಿವಾರದವರೂ ಮಾತ್ರ ಆಸಕ್ತಿವಹಿಸುತ್ತಿದ್ದರು. ಈ ಕಾಲದ ಜನಜೀವನದಲ್ಲಿ ಹಲವಾರು ಮಾರ್ಪಾಡುಗಳು ಕಾಣಬರುತ್ತವೆ. ವರ್ಣಾಶ್ರಮಗಳನ್ನು ರಾಜರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಡೆಯರ ಬಿರುದುಗಳೂ ಕಂಠೀರವ ನರಸರಾಜ, ದೊಡ್ಡದೇವರಾಜ ಮತ್ತು ಚಿಕ್ಕದೇವರಾಜರ ಕಾಲದ ಕೃತಿಗಳೂ ಈ ವಿಷಯದಲ್ಲಿ ವಿವರಗಳನ್ನು ನೀಡುತ್ತವೆ. ಮುಮ್ಮಡಿ ಕೃಷ್ಣರಾಜರು ಜಾತಿ ಸಂಪ್ರದಾಯಗಳನ್ನು ಮೀರಿದವರಿಗೆ ಕಠಿಣಶಿಕ್ಷೆ ವಿಧಿಸುತ್ತಿದ್ದರು. ಬೌದ್ಧಧರ್ಮ ಕಣ್ಮರೆಯಾಗಿದ್ದು ಜೈನಮತ ಕ್ಷೀಣಾವಸ್ಥೆಯಲ್ಲಿತ್ತು. ವೈಷ್ಣವ, ಶೈವ ಮತ್ತು ವೀರಶೈವ ಧರ್ಮಗಳು ಪ್ರಬಲವಾಗಿದ್ದುವು. ರಾಜಾಶ್ರಯ ಎಲ್ಲರಿಗೂ ಸಮನಾಗಿದ್ದು ಸರ್ವಧರ್ಮಸಮನ್ವಯ ಮತ್ತು ಸಮಾನತೆಗಳೇ ಆಡಳಿತದ ಗುರಿಗಳಾಗಿದ್ದುವು. ಕ್ರೈಸ್ತ ಮತ್ತು ಮುಸ್ಲಿಂ ಧರ್ಮಗಳು ಪ್ರಬಲವಾಗಿರಲಿಲ್ಲ. ರಾಜರ ನೀತಿ ಎಷ್ಟೇ ಉದಾರವಾಗಿದ್ದರೂ ಕೆಳವರ್ಗದ-ಅದರಲ್ಲೂ ಅಸ್ಪೃಶ್ಯರ-ಪರಿಸ್ಥಿತಿ ಶೋಚನೀಯವಾಗಿತ್ತು. ಕೃಷಿ ಕಾರ್ಮಿಕರಲ್ಲಿ ಅವರೇ ಹೆಚ್ಚಿನವರಾಗಿದ್ದರೂ ಊರ ಹೊರಗಡೆ ಕೇರಿಗಳಲ್ಲಿ ವಾಸಿಸುತ್ತಿದ್ದರು. ಹೊರರಾಜ್ಯಗಳಿಂದ ವಲಸೆ ಬಂದ ಜನ ಏಳಿಗೆ ಹೊಂದುತ್ತಿದ್ದರು. ಕ್ರಮೇಣ ಹೊಸ ಸಾಮಾಜಿಕ ವರ್ಗಗಳು ತಲೆಯೆತ್ತಿದುವಲ್ಲದೆ, ಪರಂಪರಾಗತ ವೃತ್ತಿಗಳನ್ನು ತ್ಯಜಿಸಿ ಹೊಸವೃತ್ತಿಗಳನ್ನು ಆಯ್ದುಕೊಳ್ಳುವುದು ಸಾಮಾನ್ಯವಾಯಿತು. ಈ ರೀತಿಯ ಸಾಮಾಜಿಕ ಅಂದೋಲನ ಅಷ್ಟೇನೂ ಪ್ರಬಲವಾಗಿರಲಿಲ್ಲ. ಭಕ್ತಿಪಂಥ ಮತ್ತು ವೀರಶೈವ ಮತ್ತು ಜೈನ ಚಳವಳಿಗಳಿಂದ ಕ್ರಮೇಣ ಬ್ರಾಹ್ಮಣರ ಪ್ರಭಾವ ಕ್ಷೀಣಮುಖವಾಯಿತು. ಆದರೂ ಸಂಪ್ರದಾಯಬದ್ಧ ಜೀವನವನ್ನೇ ಸಾಮಾನ್ಯ ಜನರು ಇತ್ತೀಚಿನವರೆಗೂ ಮುಂದುವರಿಸಿಕೊಂಡು ಬಂದರು. ಪಾಶ್ಚಾತ್ಯ ವಿದ್ಯಾಭ್ಯಾಸ ಮತ್ತು ಸಂಸ್ಕೃತಿಗಳ ಪ್ರಭಾವ ಹಬ್ಬಿದ ಅನಂತರವೇ ಈ ಸಮಾಜವ್ಯವಸ್ಥೆ ಬದಲಾಯಿಸಿತು.

ಸಮಾಜದಲ್ಲಿದ್ದ ಹಲವಾರು ವರ್ಗಗಳು ತಮ್ಮ ಉದ್ದೇಶ ಸಾಧನೆಗಾಗಿ ಸಂಘಸಂಸ್ಥೆಗಳನ್ನು ಏರ್ಪಡಿಸಿಕೊಳ್ಳಲಾರಂಭಿಸಿದುವು. ಇವುಗಳ ಉಲ್ಲೇಖಗಳು ಹಲವಾರು ಎಡೆಗಳಲ್ಲಿ ದೊರೆಯುತ್ತವೆ. ಅನೇಕ ಸಂದರ್ಭಗಳಲ್ಲಿ ಈ ಸಂಸ್ಥೆಗಳು ಒಂದುಗೂಡಿ ದಾನದತ್ತಿಗಳನ್ನೂ ಲೋಕೋಪಯೋಗಿ ಕಾರ್ಯಗಳನ್ನೂ ಮಾಡಿರುವುದಕ್ಕೆ ಆಧಾರಗಳಿವೆ. ಈ ಕಾಲದಲ್ಲಿ ಸ್ತ್ರೀಯರಿಗೆ ಗೌರವದ ಸ್ಥಾನಮಾನಗಳಿದ್ದುದೇನೋ ನಿಜ. ಸಂಚಿಯ ಹೊನ್ನಮ್ಮ, ಕಿತ್ತೂರ ಚನ್ನಮ್ಮ, ವೀರಮ್ಮಾಜಿ, ರಾಣೀ ಲಕ್ಷ್ಮಮ್ಮಣ್ಣಿ ಮುಂತಾದ ಸಾಹಿತಿಗಳೂ ಆಡಳಿತ ಪಟುಗಳೂ ಇದ್ದರು. ಆದರೆ ಸಂಪ್ರದಾಯ ಶರಣರಾದ ಈ ಜನರಲ್ಲಿ ಬದಲಾಗುತ್ತಿದ್ದ ಸಾಮಾಜಿಕ ಪರಿಸ್ಥಿತಿಗಳ ಪ್ರಭಾವ ಅಷ್ಟೇನೂ ಬಿದ್ದಿರಲಿಲ್ಲವಾದ್ದರಿಂದ ಸ್ತ್ರೀಸಾಮಾನ್ಯರ ಸ್ಥಿತಿಗತಿಗಳು ಉತ್ತಮವಾಗಿರಲಿಲ್ಲ. ಬಾಲ್ಯವಿವಾಹ ರೂಢಿಯಲ್ಲಿತ್ತು. ವರದಕ್ಷಿಣೆ ಮತ್ತು ಕನ್ಯಾಶುಲ್ಕ ಪದ್ಧತಿಗಳು ಕ್ರಮೇಣ ಪ್ರಬಲವಾದುವು. ವೃದ್ಧರು ಬಾಲಿಕೆಯರನ್ನು ವಿವಾಹವಾಗುವುದೂ ಸಾಮಾನ್ಯವಾಗಿತ್ತು. ವಿವಾಹವಿಚ್ಛೇದ, ವಿಧವಾವಿವಾಹ ಮುಂತಾದವು ಜನಪ್ರಿಯವಾಗಿರಲಿಲ್ಲ. ವಿಧವೆಯರು ಕೇಶಮುಂಡನ ಮಾಡಿಸಿಕೊಳ್ಳಬೇಕಾಗುತ್ತಿತ್ತು. ಹಲವಾರು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗಿತ್ತು. ಏಕಪತ್ನೀತ್ವ ಹೆಚ್ಚು ಬಳಕೆಯಲ್ಲಿದ್ದರೂ ಬಹುಪತ್ನೀತ್ವ ನಿಷಿದ್ಧವಾಗಿರಲಿಲ್ಲ. ವ್ಯಭಿಚಾರ ವಿರಳವಾಗಿತ್ತು. ಆದರೆ ಗಣಿಕ ಜೀವನ ತಿರಸ್ಕೃತವಾಗಿರಲಿಲ್ಲ. ಅವರು ಸಂಪ್ರದಾಯದಂತೆ ಸಂಗೀತನೃತ್ಯಗಳಲ್ಲಿ, ಪ್ರಾಶಸ್ತ್ಯ ಪಡೆದಿರುತ್ತಿದ್ದರು. ಅವರಿಗೆ ಪ್ರತ್ಯೇಕ ಸ್ಥಳಗಳಿದ್ದುವಲ್ಲದೆ ವಿಶಿಷ್ಟ ಹಕ್ಕುಬಾಧ್ಯತೆಗಳೂ ಇದ್ದುವು.

ಆ ಕಾಲದ ನಗರ ಮತ್ತು ಗ್ರಾಮಜೀವನಗಳ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ. ಅಗ್ರಹಾರಗಳಲ್ಲಿ ಬ್ರಾಹ್ಮಣರೂ ಪೇಟೆ ಪ್ರದೇಶದಲ್ಲಿ ಅನ್ಯವರ್ಣೀಯರೂ ವಾಸಿಸುತ್ತಿದ್ದರು. ವಿವಿಧ ವೃತ್ತಿಗಳವರಿಗೆ ಕೆಲಬಾರಿ ಪ್ರತ್ಯೇಕ ಸ್ಥಾನಗಳಿರುತ್ತಿದ್ದುದುಂಟು. ಜನನಿಬಿಡವಾದ ನಗರಗಳಲ್ಲಿ ಕಲ್ಲೋಲವಿದ್ದರೆ ಗ್ರಾಮಗಳ ಜೀವನ ಶಾಂತವಾಗಿರುತ್ತಿತ್ತು. ವ್ಯವಸಾಯ ಮತ್ತಿತರ ಕಸಬುಗಳಲ್ಲಿ ತೊಡಗಿದ್ದ ಜನ ಧರ್ಮಭೀರುಗಳಾಗಿಯೂ ಜಾತಿವೈಷಮ್ಯರಹಿತರಾಗಿಯೂ ಸಾಂಪ್ರದಾಯಿಕ ಜೀವನ ನಡೆಸುತ್ತಿದ್ದರು. ವೇದಶಾಸ್ತ್ರಪಾರಂಗತರಾದ, ನೈಷ್ಠಿಕ ಕರ್ಮಾನುಯಾಯಿಗಳಾದ ಪಂಡಿತರ ಬಗೆಗೆ ಸಾಕಷ್ಟು ವರ್ಣನೆಗಳು ದೊರಕುತ್ತವೆ. ಇವು ಜನರ ಸದಾಚಾರ ಜೀವನದ ವಿಷಯವನ್ನು ತಿಳಿಸುತ್ತವೆ. ರಾಜರೂ ರಾಜವರ್ಗದವರೂ ಉತ್ತಮ ವಸ್ತ್ರಾಭರಣಗಳನ್ನು ಧರಿಸುತ್ತ ಮೋದದ ಜೀವನ ನಡೆಸುತ್ತಿದ್ದು, ಅಪರಿಮಿತವಾದ ಪರಿವಾರದಿಂದೊಡಗೂಡಿದ್ದರು. ರಾಜಾಸ್ಥಾನ ಸಾಂಸ್ಕೃತಿಕ ಜೀವನದ ಕೇಂದ್ರವಾಗಿತ್ತು. ವಿದ್ವಾಂಸರೂ ಸಂಗೀತ ಮೊದಲಾದ ಕಲೆಗಳಲ್ಲಿ ಪರಿಣತರೂ ಅಲ್ಲಿ ಆಶ್ರಯ ಪಡೆದಿರುತ್ತಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹವಿತ್ತು. ವಿಜಯನಗರದ ಅರಸರ ಕಾಲದಲ್ಲಿ ಆಚರಿಸಲಾಗುತ್ತಿದ್ದು, ರಾಜ ಒಡೆಯರ ಕಾಲದಲ್ಲಿ ಹೊಸಕಳೆಯಿಂದ ಮೈಸೂರಿನಲ್ಲಿ ಮುಂದುವರಿದ ದಸರಾಮಹೋತ್ಸವ ಕ್ರಮೇಣ ಜಗತ್ಪ್ರಸಿದ್ಧವಾಯಿತು. ಒಡೆಯರ ನಿತ್ಯದೋಲಗವೇ ವೈಭವಪೂರ್ಣವಾಗಿತ್ತೆಂದು ಹಲವರು ವರ್ಣಿಸಿದ್ದಾರೆ.

ಜನರ ಆಹಾರ ಪಾನೀಯಗಳ ವಿಚಾರವಾಗಿಯೂ ಮಾಹಿತಿಗಳು ದೊರಕುತ್ತವೆ. ಅಕ್ಕಿ, ರಾಗಿ, ಜೋಳ ಮತ್ತು ದ್ವಿದಳಧಾನ್ಯಗಳು ಬೆಳೆಯುತ್ತಿದ್ದುವು. ಕೋಳಿ, ಕುರಿ, ಆಡು ಮತ್ತು ಹಂದಿಗಳ ಮಾಂಸ ಸೇವಿಸುವವರೂ ಇದ್ದರು. ಬಡವರು ರಾಗಿಯನ್ನೂ ಧನಿಕರು ಅಕ್ಕಿ ಮತ್ತು ಗೋಧಿಗಳನ್ನೂ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ತರಕಾರಿ ಹಣ್ಣುಹೂಗಳು ಯಥೇಚ್ಛವಾಗಿ ಬೆಳೆಯುತ್ತಿದ್ದುವು. ಮಂಗರಸನ ಸೂಪಶಾಸ್ತ್ರದಲ್ಲಿ ಸಮಕಾಲೀನ ಭಕ್ಷ್ಯಭೋಜ್ಯಗಳ ವರ್ಣನೆಯಿದೆ. ಗೋವಿಂದ ವೈದ್ಯನ ಕಂಠೀರವ ನರಸರಾಜ ವಿಜಯದಲ್ಲಿ ಅರಮನೆಯ ಭೋಜನದ ವೈಶಿಷ್ಟ್ಯವನ್ನು ತಿಳಿಸಲಾಗಿದೆ. ಮಾದಕವಸ್ತುಗಳು ಅಧಿಕತರವಾಗಿ ನಿಷಿದ್ಧವಸ್ತುಗಳಾಗಿದ್ದುವು. ಕೆಳವರ್ಗದವರಲ್ಲಿ ಮಾತ್ರ ಅವು ರೂಢಿಯಲ್ಲಿದ್ದುವು. ಮಲ್ಲಯುದ್ಧ, ಹುಲಿ ಚಿರತೆಗಳೇ ಮುಂತಾದ ದುಷ್ಟಪ್ರಾಣಿಗಳೊಂದಿಗೆ ಕಾಳಗ, ಬೇಟೆ ಮುಂತಾದವು ರಾಜರ ಮತ್ತು ಶ್ರೀಮಂತರ ವಿಹಾರಸಾಧನಗಳಾಗಿದ್ದುವು. ಚದುರಂಗ ಮತ್ತು ಪಗಡೆಯಾಟಗಳು ಜನಪ್ರಿಯವಾಗಿದ್ದುವು. ಜೂಜು ಸಾಮಾನ್ಯವಾಗಿತ್ತು. ವನವಿಹಾರ, ಜಲಕ್ರೀಡೆ, ಉಯ್ಯಾಲೆ- ಇವು ಶ್ರೀಮಂತ ತರುಣಿಯರ ಕ್ರೀಡೆಗಳಾಗಿದ್ದುವೆಂದು ಗೋವಿಂದ ವೈದ್ಯ ತನ್ನ ಕೃತಿಯಲ್ಲಿ ತಿಳಿಸುತ್ತಾನೆ. ನೃತ್ಯ, ಕೋಲಾಟ ಮತ್ತು ಸಂಗೀತಗಳು ಸರ್ವಜನರಿಗೂ ಪ್ರಿಯವಾಗಿದ್ದುವು. ಡೊಂಬರೂ ಗಾರುಡಿಗರೂ ಹಾವಾಡಿಗರೂ ಜನರಿಗೆ ವಿನೋದವನ್ನೊಗಿಸುತ್ತಿದ್ದರು. ಮಂತ್ರಮಾಟಗಳು ರೂಢಿಯಲ್ಲಿದ್ದುವು.

ಸಮಾಜದಲ್ಲಿ ಅವಿಭಕ್ತ ಕುಟುಂಬಪದ್ಧತಿ ವಿಶೇಷವಾಗಿ ರೂಢಿಯಲ್ಲಿತ್ತು. ಜೀವನಾವಶ್ಯಕತೆಗಳನ್ನು ಪುರೈಸುವುದು ಗಂಡಸಿನ ಕರ್ತವ್ಯ. ಆದರೆ ಕೆಳವರ್ಗದವರಲ್ಲಿ ಸ್ತ್ರೀ ಪುರುಷರಿಬ್ಬರೂ ದುಡಿಯುತ್ತಿದ್ದರು. ವಿಜಯನಗರೋತ್ತರ ಕಾಲದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಮತೀಯ ಧಾರ್ಮಿಕ ಬದಲಾವಣೆಗಳೇನೂ ಆಗಲಿಲ್ಲ. ವೈಷ್ಣವಪಂಥದ ಹರಿದಾಸರು ರಾಯಚೂರು ಮತ್ತು ಅದರ ಪರಿಸರದಲ್ಲಿ ಭಕ್ತಿಪೂರ್ಣ ಭಾವಗೀತೆಗಳನ್ನು ರಚಿಸಿ ತಮ್ಮ ತತ್ತ್ವಪ್ರಚಾರಕಾರ್ಯ ಮುಂದುವರಿಸಿದರು. ಇವರಲ್ಲಿ ಪ್ರಸಿದ್ಧರಾದವರು ವಿಜಯದಾಸರು, ಗೋಪಾಲದಾಸರು, ಪ್ರಸನ್ನವೆಂಕಟದಾಸರು, ಪ್ರಾಣೇಶದಾಸರು ಮತ್ತು ಮೋಹನದಾಸರು. ಸುಪ್ರಸಿದ್ಧ ದಾಸಸಾಹಿತಿ ಪುರಂದರರ ಮೇಲ್ಪಂಕ್ತಿಯಲ್ಲಿ ಇವರು ನೀತಿ ತತ್ತ್ವ ಬೋಧನೆಗಳನ್ನೊಳಗೊಂಡ, ದೇವರನಾಮಗಳೆಂದು ಹೆಸರಾದ, ಭಕ್ತಿಗೀತೆಗಳನ್ನು ರಚಿಸಿ ಹಾಡಿದ್ದಾರೆ. ಮಾಧ್ವತತ್ತ್ವ ಪ್ರತಿಪಾದಕವಾದ, ಜಗನ್ನಾಥದಾಸ ಕೃತವಾದ ಹರಿಕಥಾಮೃತಸಾರದಲ್ಲಿ ಈ ಕಾರ್ಯ ಮುಂದುವರಿಯಿತು. ಶ್ರೀ ಮಧ್ವಾಚಾರ್ಯರ ಪ್ರೌಢವೂ ಕಠಿಣವೂ ಆದ ತಾತ್ತ್ವಿಕ ಬೋಧೆಯನ್ನು ಸರಳ ಶುದ್ಧ ಕನ್ನಡದಲ್ಲಿ ಹೇಳಿ ಧರ್ಮ ಪ್ರಸಾರಮಾಡಿದ ಕೀರ್ತಿ ಹರಿದಾಸರದು. ಬಾಹ್ಯಾಡಂಬರದ ಮತಾಚಾರಗಳನ್ನು ತಿರಸ್ಕರಿಸಿ ಭಗವದ್ಭಕ್ತಿ ಮತ್ತು ಉದಾತ್ತ ಜೀವನ ರೀತಿಗಳನ್ನು ಇವರು ಪ್ರಶಂಸಿಸಿದರು. ಕರ್ನಾಟಕದ ಹರಿದಾಸರ ನುಡಿಮುತ್ತುಗಳು ನಿಜವಾಗಿ ಉಪನಿಷತ್ ತತ್ತ್ವಗಳಂತೆಯೇ ಇವೆ ಎಂದು ಫಾದರ್ ಹೆರಾಸ್ ಹೇಳಿದ್ದಾನೆ. ವೇದೋಪನಿಷತ್ತುಗಳ ಸಾರಪೂರ್ಣವಾದ ಅವರ ಬೋಧೆಗಳು ಮಾನವನಲ್ಲಿದ್ದ ಸಾತ್ತ್ವಿಕಾಂಶಗಳನ್ನು ಪ್ರಚೋದಿಸಿ ಪರಮಾರ್ಥದೆಡೆಗೆ ಕೊಂಡೊಯ್ಯುತ್ತವೆ. ಉಡುಪಿಯ ಅಷ್ಟಮಠಗಳೂ ಇತರ ದ್ವೈತಮಠಗಳೂ ಧರ್ಮಪ್ರಸಾರಕೇಂದ್ರಗಳಾಗಿವೆ. ಇವು ಪಾಠಶಾಲೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತ ಧರ್ಮಪೀಠಗಳ ಆದರ್ಶವನ್ನು ಎತ್ತಿ ಹಿಡಿಯುತ್ತಿವೆ. ಅದ್ವೈತ ವೇದಾಂತದ ನೆಲೆಯಾದ ಶೃಂಗೇರಿ ಪೀಠದ ಕೆಲವು ಆಚಾರ್ಯರು ತಾತ್ತ್ವಿಕ ಪರಂಪರೆಯಲ್ಲಿ ಅಗಾಧ ಶ್ರದ್ಧೆಯುಳ್ಳವರಾಗಿದ್ದು ತಮ್ಮ ಘನಪಾಂಡಿತ್ಯದಿಂದ ಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಮೂಡಿಸುತ್ತಿದ್ದಾರೆ. ಇವರ ಉಪಪೀಠಗಳಾದ ಶಿವಗಂಗೆ, ಆವನಿ ಮತ್ತು ಕೂಡ್ಲಿ ಮಠಗಳು ಅದ್ವೈತ ತತ್ತ್ವಗಳ ಅಭ್ಯಾಸ ಮತ್ತು ಪ್ರಚಾರ ಕೇಂದ್ರಗಳಾಗಿವೆ. ಕರ್ನಾಟಕವೂ ಶ್ರೀವೈಷ್ಣವ ಧರ್ಮದ ಮುಖ್ಯ ಕೇಂದ್ರಗಳಲ್ಲೊಂದು. ತಮಿಳುದೇಶದ ಶ್ರೀರಂಗಂ ಮತ್ತು ಆಂಧ್ರದ ಅಹೋಬಿಲಗಳಂತೆ ಕರ್ನಾಟಕದ ಮೇಲುಕೋಟೆ ಮತ್ತು ಮೈಸೂರಿನ ಪರಕಾಲ ಮಠಗಳು ರಾಮಾನುಜರ ತತ್ತ್ವಗಳನ್ನು ಪ್ರಸರಿಸುವ ಕೇಂದ್ರಗಳಾಗಿದ್ದು ಜನರ ಧರ್ಮಭಾವನೆಗಳ ಪ್ರತೀಕಗಳಾಗಿವೆ.

ವಿಜಯನಗರ ಪತನಾನಂತರ ಹರಿದು ಹಂಚಿ ಹೋಗಿದ್ದ ವೀರಶೈವ ಧರ್ಮ ಕೇಂದ್ರಗಳು ಕ್ರಮೇಣ ಕೆಳದಿ ಮುಂತಾದ ರಾಜ್ಯಗಳಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿಕೊಂಡುವು. ಈ ಕಾಲದಲ್ಲಿ ವೀರಶೈವ ಧಾರ್ಮಿಕ ಆಚಾರ ಸಂಪ್ರದಾಯಗಳು ರಾಜಕೀಯದಿಂದ ಪ್ರಭಾವಿತವಾದುವು. ಕೆಳದಿಯ ರಾಜರ ಧರ್ಮವಾಗಿದ್ದು ಪ್ರಭಾವಶಾಲಿಯಾಗಿದ್ದ ಈ ಧರ್ಮ ಸಾಮಾಜಿಕ ಜೀವನದ ಮೇಲೂ ತನ್ನ ಮುದ್ರೆಯನ್ನೊತ್ತಿತ್ತು. ಮೈಸೂರರಸರಲ್ಲಿ ಕೆಲವರು ಈ ಧರ್ಮದ ಪಕ್ಷಪಾತಿಗಳಾಗಿದ್ದರು. ಎಲ್ಲರೂ ಇದಕ್ಕೆ ಪ್ರೋತ್ಸಾಹಕರಂತೂ ಆಗಿದ್ದರು. ಮೈಸೂರರಸರನ್ನು ವೀರಶೈವ ಧರ್ಮದ ಪೋಷಕರೆಂದು ಹೇಳಬಹುದು. ಸುಮಾರು ೨೦ನೆಯ ಶತಮಾನದವರೆಗೆ ಕೇವಲ ಪದ್ಯರೂಪದಲ್ಲೂ ಅನಂತರ ಗದ್ಯರೂಪದಲ್ಲೂ ಇವರ ಧಾರ್ಮಿಕ ಸಾಹಿತ್ಯ ಬೆಳೆದು ಜನತೆಯ ಮೇಲೆ ಪ್ರಭಾವ ಬೀರಿತು. ಅಲ್ಲಮ, ಬಸವಣ್ಣ ಮುಂತಾದವರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರಿಯುತ್ತಿರುವ ವೀರಶೈವ ಮಠಗಳಿಂದಲೂ ತತ್ತ್ವಜ್ಞಾನಿಗಳಿಂದಲೂ ಈ ಪರಂಪರೆ ಬೆಳೆದುಕೊಂಡು ಬಂದಿದೆ. ಬಸವಕಲ್ಯಾಣ, ಕೂಡಲಸಂಗಮ ಮುಂತಾದ ಕೇಂದ್ರಗಳು ಬಸವೇಶ್ವರರ ತತ್ತ್ವಗಳಲ್ಲಿ ಹೊಸ ನಿಷ್ಠೆಯನ್ನು ಮೂಡಿಸುತ್ತಿವೆ. ಅನೇಕ ಮಠಗಳು ವಿದ್ಯಾಶಾಲೆಗಳನ್ನೂ ವಿದ್ಯಾರ್ಥಿನಿಲಯಗಳನ್ನೂ ನಡೆಸುತ್ತ ಜನತೆಯ ನೈತಿಕ ಮತ್ತು ಬೌದ್ಧಿಕ ಪ್ರಗತಿಗೆ ಶ್ರಮಿಸುತ್ತಿವೆ. ಆಧುನಿಕ ವಿದ್ಯಾಪ್ರಸಾರದಲ್ಲಿ ಅವುಗಳ ಪಾತ್ರ ಗಣನೀಯವಾಗಿದೆ.

ಜೈನಧರ್ಮ ರಾಜಾಶ್ರಯವಿಲ್ಲದೆ ಕ್ರಮೇಣ ಕ್ಷೀಣಸ್ಥಿತಿಯಲ್ಲಿದ್ದರೂ ವಿಜಯನಗರೋತ್ತರ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲಗೊಂಡಿತು. ಅಲ್ಲಿದ್ದ ವಿಜಯನಗರ ರಾಜ್ಯದ ಸಾಮಂತರು ಕೊಡುತ್ತಿದ್ದ ಪ್ರೋತ್ಸಾಹದಿಂದ ಅನಂತರವೂ ತನ್ನ ಪ್ರಭಾವ ಉಳಿಸಿಕೊಂಡಿತು. ಚಾವುಂಡರಾಯನ ವಂಶಜನೆಂದು ಹೇಳಲಾದ ತಿಮ್ಮರಾಜ ೧೬೦೪ರಲ್ಲಿ ಇಲ್ಲಿಯ ವೇಣೂರಿನಲ್ಲಿ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ. ಹಾಸನಜಿಲ್ಲೆಯ ಶ್ರವಣಬೆಳಗೊಳ ಭಾರತಾದ್ಯಂತದ ಜೈನರಿಗೆ ಪರಮೋನ್ನತ ಯಾತ್ರಾ ಸ್ಥಳ. ಈಗಲೂ ೧೨ ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾಲದಲ್ಲಿ ಇದು ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಅಲ್ಲಿಯ ಜೈನಮಠ ಆ ಧರ್ಮದ ಪ್ರಮುಖ ಕೇಂದ್ರಗಳಲ್ಲೊಂದು. ಶ್ರವಣಬೆಳಗೊಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯ ಕುರುಹುಗಳನ್ನು ನೋಡಿದರೆ ಈ ಧರ್ಮದ ದೀರ್ಘಪರಂಪರೆಯ ಚಿತ್ರ ದೊರಕುತ್ತದೆ. ಧರ್ಮಸ್ಥಳದಲ್ಲಿ ಜಿನಮೂರ್ತಿಯ ಬೃಹತ್ ಶಿಲಾ ಪ್ರತಿಮೆ ಸ್ಥಾಪಿತವಾಗಿದೆ. ಧರ್ಮಸ್ಥಳದ ಹೆಗ್ಗಡೆ ಪರಂಪರೆಯಿಂದಲೂ ಅನೇಕ ಪ್ರಾಚೀನ ಜೈನ ಕೇಂದ್ರಗಳಿಂದಲೂ ಕರ್ನಾಟಕದಲ್ಲಿ ಜೈನಧರ್ಮದ ಸೆಲೆಗಳು ಉಳಿದ ಬಂದಿವೆ. ಭಾರತಾದ್ಯಂತ ಪ್ರಚಲಿತವಾಗಿರುವ ಜೈನಧರ್ಮ ಸಮಾಜ, ಮಹಾವೀರ ಸಂಸ್ಥೆ, ಜೈನಧರ್ಮ ಪ್ರಚಾರ ಪರಿಷತ್ ಮತ್ತು ಅಣುವ್ರತ ಸಮಿತಿಗಳ ಪ್ರಯತ್ನಗಳಿಂದಲೂ ಅದರ ಪ್ರಭಾವ ಪುನರುಜ್ಜೀವನಗೊಳ್ಳುವ ಸೂಚನೆ ಕಂಡುಬರುತ್ತಿದೆ. ಬೌದ್ಧಧರ್ಮ ಅತ್ಯಲ್ಪಸಂಖ್ಯೆಯ ಅನುಯಾಯಿಗಳನ್ನೊಳ ಗೊಂಡಿದ್ದು ಪ್ರಭಾವಹೀನವಾಗಿದ್ದರೂ ಮಹಾಬೋಧಿಸಂಸ್ಥೆಯ ಚಟುವಟಿಕೆಗಳಿಂದ ಇನ್ನೂ ಜೀವಂತವಾಗಿದೆ.

ಕರ್ನಾಟಕ ಜನಜೀವನದ ಮೇಲೆ ಆರು ಶತಮಾನಗಳಿಂದ ಇಸ್ಲಾಂ ಮತವೂ ೧೯ನೆಯ ಶತಮಾನದಿಂದೇಚೆಗೆ ಕ್ರೈಸ್ತಧರ್ಮವೂ ತಕ್ಕಮಟ್ಟಿನ ಪ್ರಭಾವ ಬೀರಿವೆ. ೮ನೆಯ ಶತಮಾನದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯಕಾಲದಲ್ಲಿ ಕರ್ನಾಟಕ ಇಸ್ಲಾಂ ಧರ್ಮದೊಂದಿಗೆ ಸಂಪರ್ಕ ಪಡೆದರೂ ೧೩೪೭ರಲ್ಲಿ ಗುಲ್ಬರ್ಗ ರಾಜಧಾನಿಯಾಗಿ ಉಳ್ಳ ಬಹುಮನೀ ರಾಜ್ಯಸ್ಥಾಪನೆಯಾಗುವವರೆಗೂ ಇದರ ಪ್ರಭಾವ ಗಣನೀಯವಾಗಿರಲಿಲ್ಲ. ಸು.೨೦೦ ವರ್ಷ ಬಾಳಿದ ಈ ರಾಜ್ಯದ ಸುಲ್ತಾನರು ಪರ್ಷಿಯ ಮತ್ತು ತುರ್ಕಿ ದೇಶಗಳ ಜನರನ್ನು ಸ್ವಾಗತಿಸಿದರು. ಅನಂತರ ಉತ್ತರ ಭಾರತದ ಮುಸ್ಲಿಮರೂ ಆಫ್ರಿಕದ ಸಿದ್ದಿಗಳೂ ಇಲ್ಲಿ ನೆಲಸಿದರು. ಈ ಮಧ್ಯೆ ಸ್ಥಳೀಯವಾಗಿ ಮತಾಂತರ ಹೊಂದಿದವರ ಸಂಖ್ಯೆಯೂ ಹೆಚ್ಚುತ್ತಿತ್ತು. ಹಲಭಾಷೆಗಳ ಮಿಶ್ರವಾದ ದಖನೀ ಇವರ ಭಾಷೆಯಾಯಿತು. ಈ ರಾಜ್ಯದ ಪತನಾನಂತರ ೧೫ನೆಯ ಶತಮಾನದ ಅಂತ್ಯ ಮತ್ತು ೧೬ನೆಯ ಶತಮಾನದ ಪ್ರಾರಂಭಕಾಲದಲ್ಲಿ ಬಿಜಾಪುರದ ಆದಿಲ್ಷಾಹಿ ಮತ್ತು ಗೋಲ್ಕೊಂಡದ ಕುತುಬ್ಷಾಹಿ ಮನೆತನಗಳ ಆಶ್ರಯದಲ್ಲಿ ಖುಷ್ನುದ್, ರುಸ್ತುಮಿನುಸ್ಸಾತಿ, ಮೀರಾನ್ ಹಾಕ್ಷಿಮಿ, ವಝಿ, ಗವ್ವಾಸಿ ಮುಂತಾದ ಲೇಖಕರು ದಖನಿ ಸಾಹಿತ್ಯವನ್ನು ಬೆಳೆಸಿದರು. ೧೬೮೬ರಲ್ಲಿ ಔರಂಗಜೇಬನ ನೀತಿಯಿಂದ ಈ ರಾಜ್ಯಗಳು ನಾಶವಾಗಿ ಹೈದರಾಬಾದಿನ ನಿeóÁಂ ರಾಜ್ಯಸ್ಥಾಪನೆಯಾದ ಅನಂತರ ಉರ್ದುವಿಗೆ ಪ್ರಾಮುಖ್ಯ ದೊರೆತು ಅದು ಸಾಹಿತ್ಯಭಾಷೆಯಾಯಿತು. ದಕ್ಷಿಣ ಕರ್ನಾಟಕದ ಮೇಲೆ ಮುಸ್ಲಿಮರ ಪ್ರಭಾವ ಗಣನೀಯವಾಗಿ ಬಿದ್ದುದು ೧೮ನೆಯ ಶತಮಾನದ ಉತ್ತರಾರ್ಧದಲ್ಲಿ, ಹೈದರ್ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಆಡಳಿತವರ್ಗದವರ ಕೃಪೆ ಸಂಪಾದಿಸಲು ಹಲವಾರು ಮಂದಿ ಇಸ್ಲಾಮಿಗೆ ಮತಾಂತರ ಹೊಂದಿದ ನಿದರ್ಶನಗಳು ವಿಪುಲವಾಗಿವೆ. ಟಿಪ್ಪುವಿನ ಕಾಲದಲ್ಲಿ ಬಲತ್ಕಾರ ಮತಾಂತರವೂ ನಡೆದದ್ದುಂಟು. ಇಷ್ಟಾದರೂ ಕರ್ನಾಟಕದ ಮೇಲೆ ಧಾರ್ಮಿಕವಾಗಿ ಇಸ್ಲಾಮಿನ ಪ್ರಭಾವ ಬಹಳ ಸೀಮಿತವಾಗಿತ್ತು. ಬಹುಮಟ್ಟಿಗೆ ಇವರು ಪ್ರತ್ಯೇಕವಾಗಿಯೇ ಉಳಿದರು. ಹಿಂದು ಮುಸ್ಲಿಮರು ಪರಸ್ಪರವಾಗಿ ಸುಪ್ತವಾಗಿ ಪ್ರಭಾವ ಬೀರಿದರು. ಭಾಷೆ, ಜನಜೀವನ, ವಾಸ್ತುಶಿಲ್ಪ ಮತ್ತು ಕಲೆ- ಈ ಕ್ಷೇತ್ರಗಳಲ್ಲಿ ಇಸ್ಲಾಮೀ ಪ್ರಭಾವ ಸಾಕಷ್ಟು ಮಟ್ಟಿಗೆ ಪ್ರಭಾವ ಬೀರಿದೆ. ಆಡಳಿತ, ಉಡಿಗೆ ತೊಡಿಗೆ, ವ್ಯವಹಾರ, ಊಟ ತಿಂಡಿ ಮುಂತಾದವಕ್ಕೆ ಸಂಬಂಧಿಸಿದಂತೆ ಅನೇಕ ಶಬ್ದಗಳು ಪರ್ಷಿಯನ್ ಮೂಲದಿಂದ ಕನ್ನಡಕ್ಕೆ ಬಂದುವು. ಜಾಗಿರ್, ಕಾನೂನು, ಅರ್ಜಿ, ಮಹಜರ್, ರುಮಾಲು, ಇಜಾರ, ಪಲಾವ್, ಬಿರಿಯಾನಿ, ಹಲ್ವ, ಬರ್ಫಿ- ಇವು ಕೆಲವು ಉದಾಹರಣೆಗಳು. ಹೈದರಾಬಾದ್ ಕರ್ನಾಟಕವೆಂದು ಹೆಸರಾಗಿರುವ ಬಿದರೆ ಗುಲ್ಬರ್ಗ ಪ್ರದೇಶಗಳಲ್ಲಿ ಉರ್ದುವಿನ ಪ್ರಭಾವವಿತ್ತು. ಇತ್ತೀಚಿನವರೆಗೂ ಅಲ್ಲಿ ವಿದ್ಯಾಭ್ಯಾಸ ಆ ಭಾಷೆಯಲ್ಲೇ ನಡೆಯುತ್ತಿತ್ತು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಹಲವಾರು ಪ್ರದೇಶಗಳ ಜನತೆ ಮುಸ್ಲಿಂ ಸಂತರಿಗೆ, ಅವರ ದರ್ಗಾ ಅಥವಾ ಸಮಾಧಿಗಳಿಗೆ ಗೌರವ ತೋರುವುದು ಮತ್ತು ಮೊಹರಂ ಹಬ್ಬದಲ್ಲಿ ಭಾಗವಹಿಸುವುದು ಇಂದಿಗೂ ಬಳಕೆಯಲ್ಲಿರುವ ಸಂಪ್ರದಾಯ. ಬಿಜಾಪುರ ಮತ್ತು ಗುಲ್ಬರ್ಗ ಪ್ರದೇಶಗಳಲ್ಲಿ, ಬೆಂಗಳೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ ಇವರ ವಾಸ್ತುಶೈಲಿಯ ಉತ್ತಮ ಪ್ರತೀಕಗಳು ಉಳಿದುಬಂದಿವೆ (ನೋಡಿ- ಕರ್ನಾಟಕದ-ವಾಸ್ತುಶಿಲ್ಪ). ಚಿತ್ರಕಲೆಯಲ್ಲಿ ಪರ್ಷಿಯನ್ ಶೈಲಿಯನ್ನು ಇವರು ಕರ್ನಾಟಕಕ್ಕೆ ತಂದರು. ಮಹಮ್ಮದ್ ಖಲೀಲನ ನೌರಸ್ ನಾಮಾ ಮತ್ತು ಶ್ರೀರಂಗಪಟ್ಟಣದ ಅರಮನೆಯ ವರ್ಣಚಿತ್ರಗಳು ಇದಕ್ಕೆ ನಿದರ್ಶನಗಳು. ಶ್ರೀಗಂಧ ಮತ್ತು ಬೀಟೆ ಮರದ ವಸ್ತುಗಳ ಮೇಲೆ ದಂತದ ತುಣುಕುಗಳನ್ನು ಹುದುಗಿಸಿ ಅಲಂಕರಿಸುವ ಕೆತ್ತಿಕೂಡಣೆ (ಇನ್-ಲೇ) ಕಲೆ ಇವರ ಕೊಡುಗೆ. ಈಗಲೂ ಇದು ಮೈಸೂರಿನಲ್ಲಿ ಪ್ರಚಲಿತವಾಗಿದೆ. ಒಂದು ಲೋಹದ ತಗಡಿನ ಮೇಲೆ ಮತ್ತೊಂದು ಲೋಹದ ಕಂಬಿಗಳನ್ನು ಹೊದ್ದಿಸಿ ಅಲಂಕರಿಸುವ ಡಮಾಸ್ಕನಿಂಗ್ ಕಲೆ ಇವರ ಕೊಡುಗೆ. ಈಗಲೂ ಸುಪ್ರಸಿದ್ಧವಾದ ಬೀದರಿ ಪಾತ್ರೆಗಳು (ಬಿದ್ರಿವೇರ್) ಬೀದರ್ ಪ್ರದೇಶದಲ್ಲಿ ತಯಾರಾಗುತ್ತವೆ. ಅರೇಬಿಯ ಮತ್ತು ಪರ್ಷಿಯಗಳಿಂದ ಮುಸ್ಲಿಮರು ಭಾರತಕ್ಕೆ ಮತ್ತು ಕರ್ನಾಟಕಕ್ಕೆ ತಂದ ಸಸ್ಯಗಳಲ್ಲಿ ಸೂಫಿ ಸಂತ ಬಾಬಾಬಡನ್ ತಂದ ಕಾಫಿ ಮುಖ್ಯವಾದ್ದು. ಇದು ಈಗ ಕರ್ನಾಟಕದ ವಿಶಿಷ್ಟ ಬೆಳೆಯಾಗಿದೆ.

ಭಾರತಕ್ಕೆ ಕ್ರೈಸ್ತಧರ್ಮ ಕ್ರಿಸ್ತಶಕೆಯ ಆದಿಯಲ್ಲೇ ಬಂದಿತ್ತಾದರೂ ಅದರ ಪ್ರಭಾವ ಬೆಳೆದುದು ಮತ್ತು ಕರ್ನಾಟಕಕ್ಕೆ ಪ್ರವೇಶಿಸಿದುದು ೧೪ನೆಯ ಶತಮಾನದಲ್ಲಿ. ಡೊಮಿನಿಕನ್ ಪಂಥದವರು ತಮ್ಮ ಸುವಾರ್ತೆಗಳನ್ನು ೧೩೩೫ರಲ್ಲಿ ಮೈಸೂರು ರಾಜ್ಯದೊಳಗೆ ಪ್ರಚಾರ ಮಾಡಿದರು. ಬೆಂಗಳೂರಿನ ಬಳಿಯ ಆನೇಕಲ್ಲಿನಲ್ಲಿ ೧೪೦೦ರ ಕ್ರೈಸ್ತ ಸಮಾಧಿಶಿಲೆಯೊಂದು ಸಿಕ್ಕಿದೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಪೋರ್ಚುಗೀಸರ ಮೂಲಕ ಈ ಧರ್ಮ ಕರ್ನಾಟಕದಲ್ಲಿ ಹರಡಿತು. ಕೆಳದಿಯ ಶಿವಪ್ಪನಾಯಕನ ಸಣ್ಣ ರಾಜ್ಯದಲ್ಲಿ ೩೦,೦೦೦ ಕ್ರೈಸ್ತರಿದ್ದುದಾಗಿ ತಿಳಿದುಬರುತ್ತದೆ. ೧೬-೧೭ನೆಯ ಶತಮಾನಗಳಲ್ಲಿ ಯುರೋಪಿನ ವರ್ತಕರೊಂದಿಗೆ ಈ ಧರ್ಮ ಭಾರತ ಮತ್ತು ಕರ್ನಾಟಕಗಳಲ್ಲಿ ಪ್ರಭಾವ ಗಳಿಸಲಾರಂಭಿಸಿತು. ಉತ್ತರ ಕರ್ನಾಟಕದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೊದಲು ಪ್ರಬಲವಾಗಿ ಅನಂತರ ಎಲ್ಲ ಭಾಗಗಳಿಗೂ ಕ್ರೈಸ್ತರ ಚಟುವಟಿಕೆ ಹರಡಿತು. ಬ್ರಿಟಿಷರ ಅಧಿಕಾರ ಸ್ಥಾಪಿತವಾದ ಅನಂತರ ಕ್ರೈಸ್ತ ಪಾದ್ರಿಗಳ ಪ್ರಭಾವ ಬೆಳೆಯಿತು. ಶಾಲೆ, ಆಸ್ಪತ್ರೆ ಮುಂತಾದವನ್ನು ತೆರೆದು ಜನಸೇವಾ ನಿರತರಾಗಿ ಇವರು ಲಕ್ಷಾಂತರ ಮಂದಿಯನ್ನು ಆಕರ್ಷಿಸಿ ಮತಾಂತರಿಸಿದರು. ಇದರಲ್ಲಿ ಅನೇಕ ಸಂತರೂ ಪಾದ್ರಿಗಳೂ ನಿಸ್ಪೃಹಸೇವೆಯಿಂದಲೂ ಕರುಣಾಪುರಿತ ನಡೆವಳಿಕೆಯಿಂದಲೂ ಜನರ ಪ್ರೀತಿ ಗಳಿಸಿದ್ದಾರೆ. ರಾಜಾಶ್ರಯ, ಮಿಷನರಿಗಳ ಚಟುವಟಿಕೆ ಮುಂತಾದ ಕಾರಣಗಳಿಂದಲೂ ಇಂಗ್ಲಿಷ್ ವಿದ್ಯಾಭ್ಯಾಸ ಪದ್ಧತಿ ಮತ್ತು ಆಡಳಿತ ನೀತಿಗಳಿಂದಲೂ ಕ್ರೈಸ್ತರ ಪ್ರಭಾವ ಬೆಳೆಯಿತು. ಜನಜೀವನದ ಎಲ್ಲ ರಂಗಗಳಲ್ಲೂ ಇದರ ಪ್ರಭಾವವನ್ನು ಕಾಣಬಹುದು.

ಸಂಸ್ಕೃತ ಸಾಹಿತ್ಯಕ್ಕೆ ವಿಜಯನಗರೋತ್ತರ ಕಾಲದಲ್ಲಿ ಕೆಳದಿ ಮತ್ತು ಮೈಸೂರು ರಾಜ ಮನೆತನಗಳೂ ಕರ್ನಾಟಕದ ವಿವಿಧ ಧಾರ್ಮಿಕ ಮಠಗಳೂ ಪ್ರೋತ್ಸಾಹ ನೀಡಿದುವು. ಈ ಕಾಲದ ಹೆಚ್ಚಿನ ಗ್ರಂಥಗಳು ಆಯಾ ಧರ್ಮ ಮತ್ತು ತತ್ತ್ವಶಾಸ್ತ್ರಗಳಿಗೆ ಸಂಬಂಧಿಸಿದವು. ಶುದ್ಧ ಸಾಹಿತ್ಯಕೃತಿಗಳು ವಿರಳ. ಮತಗುರುಗಳ ಜೀವನಚರಿತ್ರೆ ಮತ್ತು ಭಕ್ತಿಸ್ತೋತ್ರಗಳು ಈ ಕಾಲದ ವಿಶಿಷ್ಟ ರಚನೆಗಳು. ೧೮ನೆಯ ಶತಮಾನದ ಉತ್ತರಾರ್ಧದಿಂದ ಈಚೆಗೆ ಸಂಸ್ಕೃತ ಸಾಹಿತ್ಯರಂಗದಲ್ಲಿ ಕೆಲವು ಗಮನಾರ್ಹ ಕಾರ್ಯಗಳು ಜರುಗಿವೆ. ಅನೇಕ ಸಂಸ್ಕೃತ ಶಾಸ್ತ್ರ ಮತ್ತು ಕಾವ್ಯಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ; ಅಥವಾ ಸಂಸ್ಕೃತ ಮೂಲವನ್ನನುಸರಿಸಿದ ಕನ್ನಡ ಕೃತಿಗಳು ಬಂದಿವೆ.

ಉತ್ತರ ಕರ್ನಾಟಕ ಪ್ರದೇಶಗಳಲ್ಲಿಯೂ ಹಲವಾರು ಶಾಸ್ತ್ರ ಮತ್ತು ಸಾಹಿತ್ಯ ಕೃತಿಗಳು ರಚಿತವಾದುವು. ಧಾರವಾಡದ ದಂಡವತಿ ಮಹಾದೇವಶಾಸ್ತ್ರಿ, ಉಪ್ಪಿನ ಬೆಟಿಗೇರಿ ನಾಗೇಶಶಾಸ್ತ್ರಿ, ಮಳಗಿ ವೇದವ್ಯಾಸಾಚಾರ್ಯ, ವೈದ್ಯನಾಥಶಾಸ್ತ್ರಿ, ರೆಡ್ಡಿ ರಂಗಾಚಾರ್ಯ, ಗೋಕರ್ಣದ ದೇವರಾತ ಮಹರ್ಷಿ, ಶಿರಸಿಯ ಕಪಾಲೀಶಾಸ್ತ್ರಿ, ಪಾಂಘ್ರಿ ತಾತಾಚಾರ್ಯ, ಚಿಕ್ಕೋಡಿ ಭಗವಂತರಾಯರು ಮೊದಲಾದವರು ವೇದ ಮತ್ತು ಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಕೃತಿಗಳನ್ನೂ ವ್ಯಾಖ್ಯಾನಗಳನ್ನೂ ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಮಕಾಲೀನ ಸಾಹಿತ್ಯ ಕೊಡುಗೆ ಬಹುವಾಗಿ ದ್ವೈತ ಮತ್ತು ಜೈನಧರ್ಮಗಳ ಸಮರ್ಥನೆಗೆ ಮೀಸಲಾಗಿದೆ. ಉಡುಪಿ ಮತ್ತು ಮೂಡಬಿದರಿಗಳು ಈ ಮತಗಳ ಕೇಂದ್ರಗಳು. ಈ ಕಾಲದ ಕನ್ನಡಸಾಹಿತ್ಯದಲ್ಲಿ ವೈಯಕ್ತಿಕ ಸಾಧನೆಗಳು ಪ್ರಧಾನವಾಗಿದ್ದು, ಸಾಮೂಹಿಕ ಚಟುವಟಿಕೆ ಕಾಣಬರುವುದಿಲ್ಲ. ವಿಜಯನಗರ ಸಾಮ್ರಾಜ್ಯದ ಪತನಾ ನಂತರ ಸಾಹಿತಿಗಳಿಗೆ ರಾಜಾಶ್ರಯ ತಪ್ಪಿತು. ಹಲಕೆಲವು ಸಣ್ಣ ರಾಜರೂ ಅನಂತರ ಮೈಸೂರರಸರೂ ಮುಖ್ಯವಾಗಿ ಚಿಕ್ಕದೇವರಾಜ ಒಡೆಯರ ಅನಂತರದ ಅರಸರೂ ಸಾಹಿತ್ಯಾಭಿಮಾನಿಗಳಾಗಿದ್ದು ಸಾಹಿತಿಗಳಿಗೆ ಪೋಷಣೆ ನೀಡುತ್ತಿದ್ದುದೇನೋ ನಿಜ. ಆದರೂ ನಾಡಿನ ವಿವಿಧ ಭಾಗಗಳಲ್ಲಿದ್ದ ಸ್ವತಂತ್ರ ಲೇಖಕರ ಕಾಣಿಕೆಯೂ ಗಮನಾರ್ಹವಾಗಿದೆ. ಚಿಕ್ಕದೇವರಾಜ ಒಡೆಯರ ಮುಂಚಿನ ಕಾಲದ ಸಾಹಿತ್ಯ ಕೃತಿಗಳಲ್ಲಿ ಎದ್ದುನಿಲ್ಲುವ ಎರಡು ವಾರ್ಧಕಷಟ್ಪದೀ ಕಾವ್ಯಗಳಲ್ಲಿ ಒಂದು ಲಕ್ಷ್ಮೀಶನ ಜೈಮಿನಿ ಭಾರತ ; ಮತ್ತೊಂದು ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ.

ಬ್ರಾಹ್ಮಣ-ವೀರಶೈವ ಕವಿಗಳಿಗೆ ಷಟ್ಪದಿ ಪ್ರಿಯವಾದ ಸಾಹಿತ್ಯ ಪ್ರಕಾರವಾಗಿದ್ದರೆ, ಜೈನರಲ್ಲಿ ಸಾಂಗತ್ಯಕ್ಕೆ ಪ್ರಾಧಾನ್ಯವಿತ್ತು. ಬ್ರಾಹ್ಮಣ, ವೀರಶೈವರಿಂದಲೂ ಸಾಂಗತ್ಯದ ಕೃತಿ ರಚನೆ ನಡೆದಿತ್ತು. ೧೭ನೆಯ ಶತಕದ ಕೊನೆಯ ಭಾಗ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ. ೧೬೭೨ರಲ್ಲಿ ಸಿಂಹಾಸನವನ್ನೇರಿದ ಚಿಕ್ಕದೇವರಾಜರು ಸ್ವತಃ ಸಾಹಿತಿ ಮತ್ತು ಸಾಹಿತಿಗಳ ಪೋಷಕ. ಅವರ ಕೃತಿಗಳಲ್ಲಿ ಮುಖ್ಯವಾದವು ಗೀತಗೋಪಾಲ ಮತ್ತು ಚಿಕ್ಕದೇವರಾಜ ಬಿನ್ನಪ. ಇವೆರಡನ್ನೂ ಅವರ ಆಶ್ರಿತ ತಿರುಮಲಾರ್ಯ ರಚಿಸಿರಬಹುದೆಂಬ ಊಹೆ ಇದೆ. ತಿರುಮಲಾರ್ಯ (೧೬೪೬-೧೭೦೬) ಚಿಕ್ಕದೇವರಾಜ ವಿಜಯ ಮತ್ತು ಚಿಕ್ಕದೇವರಾಜ ವಂಶಾವಳಿ ಎಂಬೆರಡು ಐತಿಹಾಸಿಕ ಗ್ರಂಥಗಳನ್ನೂ ಅಪ್ರತಿಮವೀರ ಚರಿತವೆಂಬ ಅಲಂಕಾರಗ್ರಂಥವನ್ನೂ ರಚಿಸಿದ್ದಾನೆ. ಒಡೆಯರ ಇನ್ನೊಬ್ಬ ಮಂತ್ರಿ ಚಿಕುಪಾಧ್ಯಾಯ ಸುಮಾರು ೩೦ ಗ್ರಂಥಗಳನ್ನು ಗದ್ಯ, ಸಾಂಗತ್ಯ ಮತ್ತು ಚಂಪುರೀತಿಗಳಲ್ಲಿ ರಚಿಸಿದ್ದಾನೆ. ತನ್ನ ಹೆಚ್ಚಿನ ಕೃತಿಗಳಲ್ಲಿ ಅರಸರ ವಂಶಾವಳಿ ವಿಜಯಗಳನ್ನೂ ಶ್ರೀವೈಷ್ಣವ ತತ್ತ್ವಗಳನ್ನೂ ಪ್ರತಿಪಾದಿಸುತ್ತಾನೆ. ವಿಷ್ಣುಪುರಾಣ, ದಿವ್ಯಸೂರಿಚರಿತೆ, ಅರ್ಥಪಂಚಕ, ತಿರುವಾಯ್ಮೊ__ ಮತ್ತು ಅನೇಕ ಸ್ಥಳ ಮಾಹಾತ್ಮಗಳು ಈತನ ರಚನೆಗಳು. ತಿರುಮಲಾರ್ಯನ ಸೋದರನಾದ ಸಿಂಗರಾರ್ಯ (೧೬೮೦) ಮಿತ್ರವಿಂದಾ ಗೋವಿಂದ ಎಂಬ ಹೆಸರಿನಲ್ಲಿ ಶ್ರೀಹರ್ಷನ ಸಂಸ್ಕೃತನಾಟಕ ರತ್ನಾವಳಿಯನ್ನು ರೂಪಾಂತರಿಸಿದ್ದಾನೆ. ಹೊನ್ನಮ್ಮನ ಹದಿಬದೆಯ ಧರ್ಮ (೧೬೮೦), ಶೃಂಗಾರಮ್ಮನ ಪದ್ಮಿನೀಕಲ್ಯಾಣ (೧೬೮೫) ಮತ್ತು ಹೆಳವಕಟ್ಟೆ ಗಿರಿಯಮ್ಮನ ಚಂದ್ರಹಾಸನ ಕಥೆ, ಉದ್ದಾಳಿಕನ ಕಥೆ ಮತ್ತು ಸೀತಾಕಲ್ಯಾಣ (೧೭೫೦) ಈ ಕಾಲದ ಸ್ತ್ರೀಯರ ಕೃತಿಗಳಲ್ಲಿ ಮುಖ್ಯವಾದವು.

ಇದೇ ಸುಮಾರಿನಲ್ಲಿ ಸರ್ವಜ್ಞಕವಿ ತನ್ನ ಸರಳ ಭಾಷೆಯಲ್ಲಿ ಜನಪ್ರಿಯ ವಚನಗಳನ್ನು ರಚಿಸಿದ.

ಅನಂತರ ೧೯ನೆಯ ಶತಮಾನದ ಪ್ರಾರಂಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹದಿಂದ ಪುನಃ ಸಾಹಿತ್ಯಾಭಿವೃದ್ಧಿಯಾದುದು ಕಂಡುಬರುತ್ತದೆ. ಯಕ್ಷಗಾನ ಸಾಹಿತ್ಯಕ್ಕೆ ಉತ್ತೇಜನ ದೊರಕಿತು. ದಕ್ಷಿಣ ಕನ್ನಡ ಜಿಲ್ಲೆಯ ಪಾರ್ತಿಸುಬ್ಬ ಈ ರಂಗದಲ್ಲಿ ಶ್ರಮಿಸಿದ್ದು ಈ ಕಾಲದಲ್ಲಿ. ಸಂಸ್ಕೃತ ಗ್ರಂಥಗಳ ಭಾಷಾಂತರದಿಂದ ಕನ್ನಡ ಸಾಹಿತ್ಯ ಸಂಪದ್ಭರಿತವಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ರಾಮಾಯಣ ಮತ್ತು ಮಹಾಭಾರತದ ಅನುವಾದಗಳು, ಬಸವಪ್ಪಶಾಸ್ತ್ರಿಗಳ ಶಾಕುಂತಲ- ಇವು ಉತ್ತಮ ಕೃತಿಗಳು. ಆಧುನಿಕ ಕನ್ನಡ ಗದ್ಯಸಾಹಿತ್ಯದಲ್ಲಿ ಇದೊಂದು ಪರ್ವಕಾಲ. ದೇವಚಂದ್ರನ ರಾಜಾವಳೀ ಕಥೆ ಐತಿಹಾಸಿಕವಾಗಿ ಗಮನಾರ್ಹ ಕೃತಿ. ಆತನ ಇನ್ನೊಂದು ಕೃತಿ ರಾಮಕಥಾವತಾರ ಚಂಪು. ಕೆಂಪುನಾರಾಯಣನ (೧೮೨೩) ಮುದ್ರಾಮಂಜೂಷವೊಂದು ವಿಶಿಷ್ಟ ಶೈಲಿಯ ಕೃತಿ.

ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕಾವ್ಯನಾಮ ಮುದ್ದಣ. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ ಮತ್ತು ರಾಮಾಶ್ವಮೇಧಗಳು ಈತನ ಕೃತಿಗಳು. ರೆವರೆಂಡ್ ಕಿಟ್ಟೆಲ್, ಬಿ.ಎಲ್.ರೈಸ್, ಇ.ಪಿ.ರೈಸ್, ಕಾಲ್ಡ್‌ವೆಲ್- ಇವರ ಹೆಸರುಗಳನ್ನು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮರೆಯುವಂತಿಲ್ಲ. ಸಾಹಿತ್ಯ ಮತ್ತು ಭಾಷೆಯ ಬೆಳೆವಣಿಗೆಗೆ ಇವರು ಕೊಡುಗೆಯನ್ನು ಮುಂದುವರಿಸಿದವರು ಎಸ್.ಜಿ.ನರಸಿಂಹಾಚಾರ್ ಮತ್ತು ರಾಮಾನುಜಯ್ಯಂಗಾರ್. ಆರ್.ನರಸಿಂಹಾಚಾರ್ಯರ ಕರ್ಣಾಟಕ ಕವಿಚರಿತೆ ಅಮೂಲ್ಯವಾದ ಗ್ರಂಥ. ಕನ್ನಡ ಸಾಹಿತ್ಯ ಸಂಪತ್ತಿನ ಪ್ರಗತಿಗೆ ಇವೆಲ್ಲವೂ ಕಾರಣವಾದುವು.

ಈ ರೀತಿ ಕರ್ನಾಟಕದ ೨,೦೦೦ ವರ್ಷಗಳಿಗೂ ದೀರ್ಘವಾದ ಇತಿಹಾಸ ಮಹತ್ತ್ವ ಪೂರ್ಣವೂ ವೈಭವೋಪೇತವೂ ಆಗಿದೆ. ಭಾರತೀಯ ಸಂಸ್ಕೃತಿಗೆ ಕರ್ನಾಟಕದ ಕೊಡುಗೆ ಅಪಾರ. ಅದರ ಪಕ್ಷಿನೋಟವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಆಧುನಿಕ ಕರ್ನಾಟಕವು ಭಾಷಾವಾರು ಆಧಾರಿತವಾಗಿ ರಚನೆಯಾಗಿದ್ದು ಕನ್ನಡ ಮಾತನಾಡುವ ಅಧಿಕ ಜನರನ್ನು ಒಳಗೊಂಡ ಪ್ರದೇಶವಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಮತ್ತು ಹೋರಾಟಗಾರರ ಪ್ರಯತ್ನದ ಫಲವಾಗಿ ಹಾಗೂ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಕಾರಣದಿಂದ ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂತು. ಇಂದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಿಕಾಸದಲ್ಲಿ ಕರ್ನಾಟಕ ಉನ್ನತ ಸಾಧನೆಗಳನ್ನು ಮಾಡಿದೆ. ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ರಾಜಕೀಯವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಬೆಂಗಳೂರು ಭಾರತದ ಸಿಲಿಕಾನ್ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. (ಬಿ.ಕೆ.ಜಿ.)