ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಯತ್ರೀ

ವಿಕಿಸೋರ್ಸ್ದಿಂದ

ಗಾಯತ್ರೀ[ಸಂಪಾದಿಸಿ]

ಒಂದು ದಿವ್ಯ ಮಂತ್ರ. ಗಾಯಂತಂ ತ್ರಾಯತೇ ಯಸ್ಮಾತ್ ಗಾಯತ್ರೀ ತು ತತಃ ಸ್ಮೃತಾ

ಎಂದಿರುವಂತೆ ತನ್ನ ಉಪಾಸಕರನ್ನು ರಕ್ಷಿಸುವುದರಿಂದ ಈ ಮಂತ್ರಕ್ಕೆ ಗಾಯತ್ರೀ ಎಂಬ ಹೆಸರು ಬಂದಿದೆ. ಗಾಯತ್ರೀ ಛಂದಸ್ಸಿನಲ್ಲಿರುವುದ ರಿಂದಲೂ ಇದಕ್ಕೆ ಅದೇ ಹೆಸರು ಬರಲು ಕಾರಣವಾಗಿದೆ. ಛಂದಸ್ಸಿಗೆಲ್ಲ ಮಾತೃಸ್ವರೂಪವಾದದ್ದು ಈ ಗಾಯತ್ರೀ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಗಾಯತ್ರೀ ಛಂದಸಾಮಹಂ (ಛಂದಸ್ಸುಗಳಲ್ಲಿ ನಾನು ಗಾಯತ್ರೀ) ಎಂದಿರುವುದರಿಂದ ಈ ಛಂದಸ್ಸು ಅತ್ಯುತ್ತಮವಾದದ್ದು. ಗಾಯತ್ರೀ ಮಂತ್ರ ಉಪನಿಷತ್ತುಗಳಿಗಿಂತ ಶ್ರೇಷ್ಠವಾದುದು. ಈ ಮಂತ್ರದಲ್ಲಿ ಇಪ್ಪತ್ತನಾಲ್ಕು ಅಕ್ಷರಗಳಿವೆ. ಎಂಟು ಅಕ್ಷರಗಳಿಗೆ ಒಂದು ಪಾದ ವ್ಯವಸ್ಥೆಯಂತೆ ಈ ಮಂತ್ರ ಮೂರು ಪಾದಗಳಿಂದ ಕೂಡಿದೆ. ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸ್ಮೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪುರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ.

ವಹ್ನಿಪುರಾಣದಂತೆ ಈ ಮಂತ್ರ ಸವಿತೃದೇವತಾತ್ಮಕವಾದುದು; ಛಂದಸ್ಸು, ಗಾಯತ್ರೀ; ಋಷಿ, ವಿಶ್ವಾಮಿತ್ರ, ಕರ್ಮೇಂದ್ರಿಯಗಳು ಐದು, ಬುದ್ಧೀಂದ್ರಿಯಗಳು ಐದು, ಇಂದ್ರಿಯಾರ್ಥಗಳು ಐದು, ಪಂಚಭೂತಗಳು, ಮನಸ್ಸು ಬುದ್ಧಿ ಆತ್ಮ ಅವ್ಯಕ್ತ - ಈ ಇಪ್ಪತ್ತನಾಲ್ಕು ಗಾಯತ್ರಿಯ ಅಕ್ಷರಗಳು. ಸಪ್ತಲೋಕಗಳು ವ್ಯಾಹೃತಿಗಳು. ಇದಕ್ಕೆ ಶಿರಸ್ಸಾಗಿರುವವ ಪರಮೇಶ್ವರ. ಈ ವಿಧವಾದ ಗಾಯತ್ರಿಯನ್ನು ಜಪಿಸಬೇಕು. ಪ್ರಾತಃಕಾಲದಲ್ಲಿ ಗಾಯತ್ರೀ, ಮಧ್ಯಾಹ್ನದಲ್ಲಿ ಸಾವಿತ್ರಿ, ಸಾಯಂಕಾಲದಲ್ಲಿ ಸರಸ್ವತಿಯನ್ನು ಧ್ಯಾನಿಸಬೇಕು. ಗಾಯತ್ರೀ ಸಾವಿತ್ರೀ ಸರಸ್ವತಿಯರನ್ನು ಆವಾಹನೆ ಮಾಡಿಕೊಂಡು ಋಷಿ ಛಂದಸ್ಸು ದೇವತೆಗಳನ್ನು ಸ್ಮರಿಸಿ ಬಳಿಕ ಈ ಮಂತ್ರವನ್ನು ಜಪಿಸುವುದು ಕ್ರಮ.

ಗಾಯತ್ರೀಮಂತ್ರದೊಡನೆ ಒಂದು ಲಕ್ಷ ತಿಲಹೋಮ ಮಾಡಿದರೆ ಸರ್ವಪಾತಕಗಳೂ ನಶಿಸುತ್ತವೆ. ತುಪ್ಪದಿಂದ ಹೋಮ ಮಾಡಿದರೆ ಆಯಸ್ಸು ಹೆಚ್ಚುತ್ತದೆ. ದಧಿಯಿಂದ ಹೋಮ ಮಾಡಿದರೆ ಮಕ್ಕಳಾಗುತ್ತಾರೆ. ಸಮಿತ್ತಿನಿಂದ ಹೋಮ ಮಾಡಿದರೆ ಗ್ರಹಪೀಡೆ ನಿವಾರಣೆಯಾಗುತ್ತದೆ. ಇದು ಸರ್ವಾಭೀಷ್ಟ ಸಿದ್ಧಿಕರ ಮಂತ್ರ. ಇದನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದ ದಿವಸ ಮಿಥ್ಯಾಧೀತ (ದೋಷ) ಪ್ರಾಯಶ್ಚಿತ್ತಕ್ಕಾಗಿ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಜಪ ಅಥವಾ ಹೋಮವನ್ನು ಮಾಡುವುದು ರೂಢಿಯಲ್ಲಿದೆ. ಗಾಯತ್ರೀ ಬ್ರಹ್ಮನ ಪತ್ನಿ. ಯಾಗದೀಕ್ಷಾಕಾಲದಲ್ಲಿ ಬ್ರಹ್ಮ ತನ್ನ ಪತ್ನಿಯನ್ನು ಯಜ್ಞವಾಟಿಕೆಗೆ ಬರುವಂತೆ ಹೇಳಿಕಳುಹಿಸುತ್ತಾನೆ. ತನ್ನ ಒಡನಾಡಿಯರಿಗಾಗಿ ಕಾಯುತ್ತಿದ್ದ ಆಕೆ ಸಕಾಲಕ್ಕೆ ಬರದೆ ಮುಹೂರ್ತ ಮಿಂಚುತ್ತ ಬರಲು ಕುಪಿತನಾದ ಬ್ರಹ್ಮ ಬೇರೆ ಪತ್ನಿಯನ್ನು ಕರೆತರುವಂತೆ ಇಂದ್ರನಿಗೆ ಆಜ್ಞಾಪಿಸುತ್ತಾನೆ. ಇಂದ್ರ ಕೂಡಲೇ ಭೂಲೋಕಕ್ಕೆ ಹೋಗಿ ಒಬ್ಬ ಸುಂದರಿಯನ್ನು ಕರೆತರಲು ಆಕೆಗೆ ಗಾಯತ್ರೀ ಎಂದು ಹೆಸರಿಟ್ಟು ಗಾಂಧರ್ವ ವಿಧಿಯಿಂದ ಬ್ರಹ್ಮ ವಿವಾಹವಾಗುತ್ತಾನೆ. ಹೀಗೆಂದು ಒಂದು ಪೌರಾಣಿಕ ಕತೆ ಇದೆ.

ಕೆಂಪು ಬಿಳುಪು ಹಳದಿ ನೀಲ ಬಣ್ಣಗಳ ಕಾಂತಿಯಿಂದ ಕೂಡಿರುವವಳೂ ಉಜ್ವಲವಾದ ಮೂರು ಕಣ್ಣುಳ್ಳವಳೂ ಕೆಂಪು ವಸ್ತ್ರವನ್ನು ಧರಿಸಿರುವವಳೂ ವರದಾಭಯ ಹಸ್ತಗಳನ್ನುಳ್ಳವಳೂ ಶಂಖಚಕ್ರಧಾರಣಿಯೂ ಕೈಯಲ್ಲಿ ಕಪಾಲ ಅಂಕುಶ ಜಪಮಾಲೆ ಕಮಲಗಳನ್ನು ಹಿಡಿದಿರುವವಳೂ ಕುಮಾರಿಯೂ ಆಗಿರುವಂತೆ ಗಾಯತ್ರಿ ಸ್ವರೂಪವನ್ನು ಧ್ಯಾನಿಸಬೇಕು. ವೀರಶೈವ ಪಂಥದ ಕೆರೆಯ ಪದ್ಮರಸನ ದೀಕ್ಷಾಬೋಧೆ ಎಂಬ ಗ್ರಂಥದ ದ್ವಿತೀಯ ಸ್ಥಲದಲ್ಲಿ ಇನ್ನು ಕೇಳು ಗಾಯತ್ರಿಯ ನಿಜಮಂ ಸನ್ನುತ ಭೂತಿರುದ್ರಾಕ್ಷಿಗಳಿರಮಂ ನಿಟಿಲ ತ್ರಿಪುಂಡ್ರಾಂಕಿತಯುಕ್ತಾಂಗಿಯ ಜಟೆರುದ್ರಾಕ್ಷಭಸಿತ ಸರ್ವಾಂಗಿಯ ಅಕ್ಷಮಾಲೆ ಜಪಕರದ ಕಮಂಡಲ ನಿಕ್ಷೇಪಿನಿಸಿದಾಗಮಹೃನ್ಮಂಡಲ ಋಗ್ಯಜುಸ್ಸಾಮಂ ನಿಜಮೂರುತಿಯ ಭರ್ಗಭಕ್ತಿಯ ನಿಷ್ಠೆಯ ಮನದರ್ಥಿಯ ಇದು ಗಾಯತ್ರಿಯ ನಿಜದಾಕಾರಂ - ಎಂದು ಗಾಯತ್ರಿಯ ಸ್ವರೂಪದ ವಿವರಣೆ ಇದೆ. ಗಾಯತ್ರೀಯ ಅಕ್ಷರಗಳಲ್ಲಿ ಒಂದೊಂದು ಅಕ್ಷರವೂ ಒಂದೊಂದು ಶ್ಲೋಕದಲ್ಲಿ ರುವುದನ್ನು ಶ್ರೀಮದ್ವಾಲ್ಮೀಕಿ ರಾಮಾಯಣದಿಂದ ಉದ್ಧರಿಸಿ 24 ಶ್ಲೋಕಗಳುಳ್ಳ ಈ ಗ್ರಂಥ ಭಾಗಕ್ಕೆ ಗಾಯತ್ರೀರಾಮಾಯಣ ಎಂದು ಅಂಕಿತ ಮಾಡಿದ್ದಾರೆ. ಇದನ್ನು ಪ್ರತಿದಿನ ಪಠಿಸುವುದರಿಂದ ಸರ್ವಪಾಪಗಳೂ ನಶಿಸುತ್ತವೆ ಎಂದು ಫಲಶ್ರುತಿ.

ಗಾಯತ್ರೀ ಛಂದಸ್ಸು : ಮುಖ್ಯವಾದ ವೈದಿಕ ಛಂದಸ್ಸುಗಳಲ್ಲಿ ಒಂದು. ಋಗ್ವೇದದ 1/4ಭಾಗ ಋಕ್ಕುಗಳು ಈ ಛಂದಸ್ಸಿನಲ್ಲಿವೆ. ಇತರ ವೈದಿಕ ಛಂದಸ್ಸುಗಳಂತೆ ಗಾಯತ್ರಿಯೂ ಉದಾತ್ತಾನುದಾತ್ತಸ್ವರಿತಳೆಂಬ ಸ್ವರಗಳೊಡನೆ ಹೇಳಲ್ಪಡುತ್ತದೆ. ಇದರ ಸಾಮಾನ್ಯ ಲಕ್ಷಣ ಹೀಗೆ: 3 ಪಾದಗಳು: ಪಾದಕ್ಕೆ 8 ಅಕ್ಷರಗಳು: ಪ್ರತಿಯೊಂದು ಪಾದವನ್ನು 4 ಅಕ್ಷರಗಳ 2 ಗಣಗಳನ್ನಾಗಿ ವಿಭಜಿಸಬಹುದು. ಹೀಗೆ ವಿಭಜಿಸಿದಾಗ 2ನೆಯ ಗಣದಲ್ಲಿ 2 ಬಾರಿ ಹ್ರಸ್ವದೀರ್ಘಾಕ್ಷರಗಳ ಅನುಕ್ರಮವಾದ ವಿನ್ಯಾsಸ (ೃ-,ೃ-) ಸಾಮಾನ್ಯವಾಗಿ ಕಂಡಬರುತ್ತದೆ. ಉದಾಹರಣೆಗೆ ಋಗ್ವೇದದ ಮೊದಲ ಮಂತ್ರವನ್ನೇ ನೋಡಬಹುದು.

ಅಗ್ನಿಮೀಳೇ ಪುರೋಹಿತಂ
ಯಜ್ಞಸ್ಯ ದೇವಮೃತ್ವಿಜಂ
ಹೋತಾರಂ ರತ್ನಧಾತಮಂ (ಸೂಕ್ತ 1 ಮಂತ್ರ 1)

ಇದೇ ಮಂತ್ರವನ್ನು ಗಣ ವಿಭಜಿಸಿ 2ನೆಯ ಗಣದಲ್ಲಿ ಲಘುಗುರುಗಳ ವಿನ್ಯಾಸವನ್ನು ಪರಿಶೀಲಿಸಿದಾಗ ಹೀಗಿರುತ್ತದೆ:

   ಅಗ್ನಿಮೀಳೇ | ಪುರೋಹಿತಂ
             		    
   ಯಜ್ಞಸ್ಯ ದೇ | ವಮೃತ್ವಿಜಂ
       		      
   ಹೋತಾರಂ ರ | ತ್ನ ಧಾತಮಂ
 ಇನ್ನೂ ಒಂದು ಉದಾಹರಣೆಯನ್ನು ನೋಡಬಹುದು.
        		     
    ತದ್ವಿಷ್ಣೋಃ ಪ | ರಮಂ ಪದಂ
       		    
    ಸದಾ ಪಶ್ಯಂ | ತಿ ಸೂರಯಃ
    ದಿವೀವ ಚ | ಕ್ಷುರಾತತಂ

ಹೀಗೆಯೇ ಗಾಯತ್ರಿಯ ಇನ್ನೂ ಅನೇಕ ಉದಾಹರಣೆಗಳನ್ನು ನೋಡಿದರೂ ಪ್ರತಿ ಪಾದದ ಉತ್ತರಾರ್ಧದ 4 ಅಕ್ಷರಗಳಲ್ಲಿ ಎಂದರೆ 2ನೆಯ ಗಣದಲ್ಲಿ ಮೇಲೆ ತೋರಿಸಿರುವಂಥ ರೀತಿಯಲ್ಲಿ ದ್ವಿಲಗ ವಿನ್ಯಾಸ ಕಂಡುಬರುತ್ತದೆ. ಹೀಗೆ ಬರಲೇಬೇಕೆಂಬ ನಿರ್ಬಂಧವಿಲ್ಲದೆಯೂ ಆ ವಿನ್ಯಾಸ ಬಲುಮಟ್ಟಿಗೆ ಕ್ರಮ ತಪ್ಪದೆ ಬಂದಿರುವುದು ಗಮನಿಸತಕ್ಕದ್ದಾಗಿದೆ. ಒಮ್ಮೊಮ್ಮೆ ಈ ಕ್ರಮ ವಿಪರ್ಯಾಯಗೊಂಡು ದೀರ್ಘಹ್ರಸ್ವಲಯವೂ ದೀರ್ಘ ದೀರ್ಘಲಯವೂ ಬರುವುದುಂಟು. ಉದಾಹರಣೆಗೆ ಒಂದು ಅಂಥ ಗಾಯತ್ರಿಯನ್ನು ನೋಡಬಹುದು.

    ಸ ಘಾ ನಃ ಸೂ | ನುಃ ಶವಸಾ 
       		    
    ಪೃಥುಪ್ರಗಾ | ಮಾ ಸುಶೇವಃ
        		     
    ಮೀಢ್ವಾ ಅಸ್ಮಾ | ಕಂ ಬಭೂಯಾತ್		  

ಹೀಗಿದ್ದರೂ ಇಂಥ ವ್ಯತ್ಯಾಸಗಳಿಂದ ಉದಾತ್ತಾದಿಯಾದ ಸ್ವರಸಂಗೀತಕ್ಕೆ ಯಾವ ಆತಂಕವೂ ಉಂಟಾಗುವುದಿಲ್ಲ. ಅಲ್ಲದೆ ಅಕ್ಷರ ನಿಯಮ ಸರಿಹೋಗದ ಕಡೆಗಳಲ್ಲಿ, ಹೆಚ್ಚುಕಡಿಮೆಯ ಅಕ್ಷರ ಸಂಖ್ಯೆಯಿದ್ದಲ್ಲಿ, ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಪಾದಕ್ಕೆ 8 ಅಕ್ಷರಗಳ 3 ಪಾದಗಳನ್ನುಳ್ಳ ಉಕ್ತಪಾದ ಗಾಯತ್ರಿಯಲ್ಲದೆ ಅಕ್ಷರ ಸಂಖ್ಯೆಯಲ್ಲಿ ಪಾದಪಾದಕ್ಕೆ ಉಂಟಾಗುವ ವ್ಯತ್ಯಾಸಗಳಿಗೆ ಅನುಗುಣವಾಗಿ ನಾಗೀ ಗಾಯತ್ರಿ, ವಾರಾಹೀ ಗಾಯತ್ರಿ ಮುಂತಾದ ಭೇದಗಳನ್ನು ಮಾಡಿರುವುದು ಕೂಡ ಕಂಡುಬರುತ್ತದೆ:

  1. ಚತುಷ್ಟಾದ್ಗಾಯತ್ರಿ : 6´4
  2. ಪಾದನಿಚೃದ್ಗಾಯತ್ರಿ: 7´3
  3. ಅತಿಪಾದ ನಿಚೃದ್ಗಾಯತ್ರಿ : 6,8,7=21
  4. ನಾಗೀಗಾಯತ್ರಿ: 9,9,6=24
  5. ವಾರಾಹೀ ಗಾಯತ್ರಿ: 6,9,9=24
  6. ವರ್ಧಮಾನಾ ಗಾಯತ್ರಿ: 6,7,8=21
  7. ಪ್ರತಿಷ್ಠಾ ಗಾಯತ್ರಿ: 8,7,6=21
   ಮಾದರಿಗೆ ಪಾದನಿಚೃದ್ಗಾಯತ್ರಿ:
   ಪವಸ್ವ ವಿಶ್ವಚರ್ಷ
   ಣೇಭಿ ವಿಶ್ವಾನಿ ಕಾವ್ಯಾ
   ಸಖಾ ಸಖಿಭ್ಯಃ ಈಡ್ಯ || (ಋಗ್ವೇದ್ 9-3-66)

ಗಾಯತ್ರಿ ಸಂಬಂಧವಾದ ಇನ್ನೊಂದು ವೈಲಕ್ಷಣ್ಯವೆಂದರೆ, ಗಾಯತ್ರಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪಾದಗಳನ್ನು ತ್ರಿಷ್ಟುಪ್, ಜಗತಿ ಮುಂತಾದವುಗಳ ಪಾದಗಳೊಡನೆ ಕೂಡಿಸಿರುವುದು. ಉದಾಹರಣೆಗೆ

  1. ಕಕುಭೋಷ್ಣಿಕ್-ಗಾಯತ್ರಿ, ಜಗತಿ, ಗಾಯತ್ರಿ: ಪುರೋಷ್ಣಿಕ್-ಜಗತಿ, ಗಾಯತ್ರಿ, ಗಾಯತ್ರಿ; ಪರೋಷ್ಣಿಕ್-ಗಾಯತ್ರಿ, ಗಾಯತ್ರಿ, ಜಗತಿ
  2. 4 ಪಾದಗಳ ಬೃಹತಿ-1 ಜಗತಿ+3 ಗಾಯತ್ರಿ,
  3. 4 ಪಾದಗಳ ಪಂಕ್ತಿ-2 ಜಗತಿ + 2 ಗಾಯತ್ರಿ, ಇದೇ ರೀತಿಯಲ್ಲಿ ತ್ರಿಷ್ಟುಪ್ ಮತ್ತು ಗಾಯತ್ರಿಯ ಪಾದಗಳನ್ನೂ ಕೂಡಿಸಿ ಪುರಸ್ತಾಜ್ಜ್ಯೋತಿ (1 ತ್ರಿ + 4 ಗಾ), ಮಧ್ಯೇಜ್ಜ್ಯೋತಿ (2 ಗಾ + 1 ತ್ರಿ + 2 ಗಾ). ಉಪರಿಷ್ಟಾಜ್ಜ್ಯೋತಿ (4 ಗಾ + 1 ತ್ರಿ) ಎಂಬುದಾಗಿ ಭೇದಗಳನ್ನು ಕಲ್ಪಿಸಿರುವುದೂ ಉಂಟು.