ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೀನ

ವಿಕಿಸೋರ್ಸ್ದಿಂದ



ಚೀನ ಪೂರ್ವ ಏಷ್ಯದ ಒಂದು ಸ್ವತಂತ್ರ ದೇಶ. ಪ್ರಪಂಚದ ದೊಡ್ಡ ರಾಷ್ಟ್ರಗಳಲ್ಲಿ ಒಂದು. ಉ.ಅ.180-540 ಮತ್ತು ಪೂ.ರೇ. 730-1350 ನಡುವೆ ಹಬ್ಬಿರುವ ಈ ದೇಶ ಪೂರ್ವ ಪಶ್ಚಿಮವಾಗಿ 4828ಕಿ.ಮೀ. ಉತ್ತರದಕ್ಷಿಣವಾಗಿ 4023ಕಿ.ಮೀ. ಇದ್ದು ಒಟ್ಟು 9596,961 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. 6468ಕಿ.ಮೀ. ಸಮುದ್ರ ತೀರವಿರುವ ಈ ದೇಶದ ಜನಸಂಖ್ಯೆ 1284597000 (2000). ಇದರಲ್ಲಿ ಶೇ.70 ಗ್ರಾಮವಾಸಿಗಳು ಶೇ.30 ನಗರವಾಸಿಗಳಿದ್ದಾರೆ. ಈ ದೇಶದ ಪಶ್ಚಿಮದಲ್ಲಿ ಕಜûಕಿಸ್ತಾನ್, ತಜಕಿಸ್ತಾನ್, ಭಾರತ, ಉತ್ತರದಲ್ಲಿ ರಷ್ಯ, ಮಂಗೋಲಿಯ, ಈಶಾನ್ಯದಲ್ಲಿ ರಷ್ಯ, ದಕ್ಷಿಣದಲ್ಲಿ ವಿಯತ್ನಾಮ್, ಲಾವೋಸ್ ಮತ್ತು ಮೈನ್‍ಮಾರ್, ಭಾರತ, ನೇಪಾಳ, ಭೂತನ ದೇಶಗಳು ಸುತ್ತುವರೆದಿವೆ. ಪೂರ್ವದಲ್ಲಿ ಉತ್ತರ ಮತ್ತು ದಕ್ಷಿಣಕೊರಿಯ, ತೈವಾನ್, ಚೀನಸಮುದ್ರವಿದ್ದು ದಕ್ಷಿಣದಲ್ಲಿ ಭಾರತದ ಕಾರಕೋರಮ್ ಮತ್ತು ಹಿಮಾಲಯ ಪರ್ವತಗಳು ಇದರ ಗಡಿಯಾಗಿವೆ. (ವಿ.ಜಿ.ಕೆ.)

ಪ್ರಕೃತ ಲೇಖನದಲ್ಲಿ ಈ ವಿಭಾಗಗಳಿವೆ :
 I ಪ್ರಕೃತಿಕ ಭೂಗೋಳ ವೃತ್ತಾಂತ 
  I ಭೂವಿಜ್ಞಾನ
  ii ಭೌತಲಕ್ಷಣ 
  iii ವಾಯುಗುಣ
  iv ಸಸ್ಯಗಳು
  v ಪ್ರಾಣಿಜೀವನ 
 II ಜನ ಸಂವಿಧಾನ, ಆಡಳಿತ 
  I ಜನಜೀವನ 
  ii ಪ್ರಾಂತ್ಯಗಳು
  iii ಸಂವಿಧಾನ ಮತ್ತು ಆಡಳಿತ
   iv ರಕ್ಷಣೆ
III ಆರ್ಥಿಕತೆ
   I ವ್ಯವಸಾಯ
   ii ಅರಣ್ಯ
  iii ಗಣಿಗಳು
  iv ಕೈಗಾರಿಕೆ
  v ವಿದ್ಯುಚ್ಛಕ್ತಿ
   vi ವ್ಯಾಪಾರ, ಸಾರಿಗೆ
   vii ನಗರಗಳು
Iಗಿ ಇತಿಹಾಸ
   i ಪ್ರಾಗಿತಿಹಾಸ
   ii ಇತಿಹಾಸ
ಗಿ ಆರ್ಥಿಕ ಅಭಿವೃದ್ಧಿ

(ನೋಡಿ- ಚೀನ---ಜಪಾನ್-ಯುದ್ಧಗಳು) (ನೋಡಿ- ಚೀನದ-ಮಹಾಗೋಡೆ) (ನೋಡಿ- ಚೀನ-ಸಮುದ್ರ) (ನೋಡಿ- ಚೀನೀ-ಕಲೆ) (ನೋಡಿ- ಚೀನೀ-ಕುಂಭಕಲೆ) (ನೋಡಿ- ಚೀನೀ-ತತ್ತ್ವ) (ನೋಡಿ- ಚೀನೀ-ನಾಟಕ) (ನೋಡಿ- ಚೀನೀ-ನ್ಯಾಯ) (ನೋಡಿ- ಚೀನೀ-ಪುರಾಣ) (ನೋಡಿ- ಚೀನೀ-ಭಾಷೆ) (ನೋಡಿ- ಚೀನೀ-ಯಾತ್ರಿಕರು-(ಭಾರತದಲ್ಲಿ)) (ನೋಡಿ- ಚೀನೀ-ವಾಸ್ತು) (ನೋಡಿ- ಚೀನೀ-ಶಿಲ್ಪ) (ನೋಡಿ- ಚೀನೀ-ಸಂಗೀತ) (ನೋಡಿ- ಚೀನೀ-ಸಾಹಿತ್ಯ)


i ಭೂವಿಜ್ಞಾನ : ಬಹು ಪುರಾತನ ಕಾಲದಿಂದಲೂ ಭೂಚಟುವಟಿಕೆಗಳ ಪ್ರಭಾವಕ್ಕೆ ಚೀನ ಒಳಗಾಗಿರುವುದಕ್ಕೆ ದಾಖಲೆಗಳಿವೆ. ಇವು ನಾನಾ ಹಂತಗಳಲ್ಲಿ ತಲೆದೋರಿ ವಿವಿಧ ಭೂಭಾಗಗಳು ಹಾಗೂ ಶಿಲಾಪ್ರಸ್ತರಗಳಲ್ಲಿ ಕಾಣಬರುವ ಮಡಿಕೆಗಳು, ಸ್ತರಭಂಗಗಳು ಮುಂತಾದ ರಚನೆಗಳಿಗೆ ಕಾರಣವೆನಿಸಿವೆ. ಹೀಗಾಗಿ ಭೂ ಇತಿಹಾಸದ ವಿವಿಧ ಯುಗಗಳ ಶಿಲೆಗಳು ಇಡೀ ದೇಶದುದ್ದಕ್ಕೂ ಹರಿದು ಹಂಚಿಹೋಗಿವೆ. ಭೂಚಟುವಟಿಕೆಗಳು ಪೂರ್ವ ಕೇಂಬ್ರಿಯನ್ (ಪ್ರೀಕೇಂಬ್ರಿಯನ್), ಉತ್ತರಸೈಲೂರಿಯನ್ (ಪೋಸ್ಟ್ ಸೈಲೂರಿಯನ್), ಉತ್ತರಡಿವೋನಿಯನ್ (ಪೂಸ್ಟ್ ಡೀವೋನಿಯನ್), ಮೇಲಿನ ಕಾರ್ಬಾನಿಫೆರಸ್, ಮಧ್ಯಪರ್ಮಿಯನ್, ಉತ್ತರಟ್ರಯಾಸಿಕ್, ಉತ್ತರಜ್ಯುರಾಸಿಕ್, ಉತ್ತರಕ್ರಿಟೇಷಸ್, ಅಂತ್ಯಟರ್ಷಿಯರಿ ಮತ್ತು ನವೀನ ಹೀಗೆ ಹತ್ತು ಪ್ರಮುಖ ಹಂತಗಳಲ್ಲಿ ತಲೆದೋರಿದವು. ಅವುಗಳಲ್ಲೆಲ್ಲ ಪೂರ್ವ ಕೇಂಬ್ರಿಯನ್ ಜುರಾಸಿಕ್ ಹಾಗೂ ಉತ್ತರಕ್ರಿಟೇಷಸ್ ಕಾಲಗಳ ಭೂಚಟುವಟಿಕೆಗಳು ಬಹು ಪ್ರಭಾವಶಾಲಿಯಾದಂಥವು. ಇವುಗಳ ಪ್ರಭಾವವೆ ದೇಶದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ಭೂಇತಿಹಾಸದಲ್ಲಿ ಅತ್ಯಂತ ಪುರಾತನವಾದ ಪೂರ್ವಕೇಂಬ್ರಿಯನ್ ಯುಗದ (600 ದಶಲಕ್ಷ ವರ್ಷಗಳ ಹಿಂದೆ) ನಿಕ್ಷೇಪಗಳು ಟೈಷಾನ್ (ಆರ್ಕೆಯನ್), ವುಟಾಯ್ ಮತ್ತು ಸಿನಿಯನ್ ಎಂದು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ಅತ್ಯಂತ ಪುರಾತನವಾದ ಟೈಷಾನ್ ವರ್ಗದಲ್ಲಿ ನೈಸ್ (ಗೀರುಶಿಲೆ) ಗ್ರಾನೈಟ್ ಷಿಸ್ಟ್ (ಪದರುಶಿಲೆ), ಕಣಸುಣ್ಣಶಿಲೆ ಮತ್ತು ಅಮೃತಶಿಲೆಗಳು ಇವೆ. ಇವನ್ನು ಹಲವಾರು ಕಡೆ ಅಂತಸ್ಸರಣಗಳು ಭೇದಿಸಿರುವುದನ್ನು ಕಾಣಬಹುದು. ವುಟಾಯ್ ಹಂತದ ಶಿಲೆಗಳು ಉತ್ತರ ಚೀನದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿವಿಧ ಜಲಜಶಿಲೆಗಳಿಂದಾದ ಈ ಸ್ತರಗಳು ಭೂಸವೆತಕ್ಕೊಳಗಾಗಿರುವ ಟೈಷಾನ್ ಶಿಲೆಗಳ ಮೇಲೆ ವ್ಯಾಪಿಸಿರುವುದನ್ನು ಕಾಣಬಹುದು. ಇವನ್ನು ಸಹ ಗ್ರಾನೈಟ್ ಹಾಗೂ ಬೇಸಿಕ್ ಶಿಲೆಯ ಅಂತಸ್ಸರಣಗಳು ಭೇದಿಸಿವೆ. ಈ ಸ್ತರಗಳು ವಿವಿಧ ದರ್ಜೆಯ ರೂಪಾಂತರಕ್ಕೊಳಗಾಗಿ ಪದರುಶಿಲೆ, ಗೀರುಶಿಲೆ, ಫಿಲ್ಲೈಟ್, ಕ್ವಾಟ್ರ್ಸೈಟ್ ಮತ್ತು ಅಮೃತಶಿಲೆಗಳಾಗಿ ಮಾರ್ಪಟ್ಟಿವೆ. ಉತ್ತರ ಹೋಪೇ ಮತ್ತು ದಕ್ಷಿಣ ಮಂಚೂರಿಯಲ್ಲಿರುವ ಈ ಶಿಲಾಶ್ರೇಣಿಗಳಲ್ಲಿ ವಿಸ್ತಾರವಾದ ಕಬ್ಬಿಣ ಅದುರಿನ ಸ್ತರಗಳನ್ನು ಕಾಣಬಹುದು. ಸಿನಿಯನ್ ಹಂತದ ಸ್ತರಗಳು ಉತ್ರ ಚೀನದಲ್ಲಿ ಕಾಣಬರುತ್ತವೆ. ಇವು ಬಹುಮಟ್ಟಿಗೆ ಕ್ವಾಟ್ರ್ಸೈಟ್ ಸ್ಲೆಟ್ ಮತ್ತು ಸಿಲಿಕಾಂಶಯುಕ್ತ

	 ಸುಣ್ಣಶಿಲೆಗಳಿಂದಾಗಿವೆ. ಸುಣ್ಣಶಿಲಾಸ್ತರಗಳಲ್ಲಿ ಆಲ್ಗಿಯನ್ನೇ ಹೋಲುವ ಹಲಕೆಲವು ರಚನೆಗಳನ್ನು ಭೂವಿಜ್ಞಾನಿಗಳು ಗುರುತಿಸಿದ್ದಾರೆ.

ಕೆಳಕೇಂಬ್ರಿಯನ್ ಯುಗದ ಜೇಡುಶಿಲೆ, ಸುಣ್ಣಶಿಲೆ, ಪೆಂಟೆಶಿಲೆ ಮತ್ತು ಮರಳು ಶಿಲಾಸ್ತರಗಳನ್ನು ಚೀನದ ವಾಯವ್ಯ, ಕೇಂದ್ರ ಮತ್ತು ಪಶ್ಚಿಮಭಾಗಗಳಲ್ಲಿ ಕಾಣಬಹುದು. ಇವುಗಳ ಬಣ್ಣ ಬಹುತೇಕ ಕೆಂಪು. ಇವುಗಳಲ್ಲಿ ಆ ಯುಗದ ಹಲವಾರು ಜೀವ್ಯವಶೇಷಗಳಿವೆ. ಮುಖ್ಯವಾಗಿ ರೆಡ್‍ಲಿಕಿಯ ಎಂಬ ತ್ರಿಖಂಡಿಯ (ಟ್ರೈಲೊಬೈಟ್) ಅವಶೇಷಗಳು ವಿಶೇಷವಾಗಿ ಕಂಡುಬಂದಿವೆ. ಮಧ್ಯಕೇಂಬ್ರಿಯನ್ ಯುಗದ ನಿಕ್ಷೇಪಗಳು ಉತ್ತರ ಪ್ರಾಂತ್ಯಗಳಲ್ಲಿ ಮಾತ್ರ ಸೀಮಿತವಾಗಿವೆ. ಇವು ಬಹುಮಟ್ಟಿಗೆ ಊಲಿಟಿಕ್ ಸುಣ್ಣಶಿಲೆ ಮತ್ತು ಜೇಡುಶಿಲಾಸ್ತರಗಳಿಂದ ಆದಂಥವು. ಈ ನಿಕ್ಷೇಪಗಳಲ್ಲಿ ಪ್ರಾಚೀನ ಜೀವ್ಯವಶೇಷಗಳು ಅಸಂಖ್ಯಾತ. ದಕ್ಷಿಣಕ್ಕೆ ಸರಿದಂತೆಲ್ಲ ಮೇಲಿನ ಕೇಂಬ್ರಿಯನ್ ಯುಗದ ಸ್ತರಗಳು ಕಾಣಬರುತ್ತವೆ. ಇವು ಮುಖ್ಯವಾಗಿ ಸುಣ್ಣಶಿಲಾಸ್ತರಗಳು. ಇವುಗಳ ನಡುವೆ ಅಲ್ಲಲ್ಲೆ ಪೆಂಟಶಿಲೆ ಮತ್ತು ಜೇಡುಶಿಲಾಸ್ತರಗಳನ್ನು ಗುರುತಿಸಬಹುದು. ಹಲವಾರು ಕಡೆ ಕೇಂಬ್ರಿಯನ್ ಶಿಲಾಸ್ತರಗಳ ಮೇಲೆ ಕೆಳ ಆರ್ಡೊವಿಶಿಯನ್ ಸ್ತರಗಳು ನಿಕ್ಷೇಪಗೊಂಡಿವೆ. ಇವುಗಳಲ್ಲಿ ಸುಣ್ಣ ಹಾಗೂ ಡಾಲೊಮಿಟಿಕ್ ಸುಣ್ಣಶಿಲಾಸ್ತರಗಳು ಹೆಚ್ಚಾಗಿ ವ್ಯಾಪಿಸಿವೆ. ನಡುವೆ ಅಲ್ಲಲ್ಲೆ ಜೇಡುಶಿಲಾಸ್ತರಗಳು ಉಂಟು. ಇವುಗಳಲ್ಲಿ ಗ್ರಾಪ್ಟೊಲೈಟ್ ಅವಶೇಷಗಳಿವೆ. ಅಷ್ಟು ಆಳವಿರದ ಜಲಭಾಗಗಳ ಜನ್ಯಲಕ್ಷಣಗಳನ್ನು ಈ ಜೇಡುಶಿಲಾಸ್ತರಗಳು ಮತ್ತು ಜೇಡುಸುಣ್ಣ ಶಿಲಾಸ್ತರಗಳು ಸೂಸುತ್ತವೆ. ಮಧ್ಯ ಆರ್ಡೊವಿಶಿಯನ್ ಯುಗದ ಶಿಲಾಶ್ರೇಣಿಗಳು ಆ ಕಾಲದ ಎರಡು ಪ್ರಮುಖ ಮಹಾಭಿನತಿಗಳಲ್ಲಿ (ಜಿಯೊಸಿನ್‍ಕ್ಲೈನ್ಸ್) ನಿಕ್ಷೇಪಗೊಂಡಿವೆ. ಇವೇ ಇಂದಿನ ಸಿನ್‍ಲಿಂಗ್ ಮತ್ತು ನ್ಯಾನ್‍ಕಿಂಗ್ ಬೆಟ್ಟ ಪ್ರದೇಶಗಳು. ಇವು ಬಹುಮಟ್ಟಿಗೆ ಸುಣ್ಣಶಿಲಾಸ್ತರಗಳು. ಉತ್ತರ ಮತ್ತು ದಕ್ಷಿಣ ಅಭಿನತೀಯ ಸ್ತರಗಳಲ್ಲಿ ಅನುಕ್ರಮವಾಗಿ ಆಕ್ಟಿನೊಸಿರಾಸ್ ಮತ್ತು ಆರ್ಥೋಸಿರಾನ್ ಎಂಬ ಜೀವ್ಯವಶೇಷಗಳಿವೆ ಅಲ್ಲಲ್ಲೆ ಗ್ರಾಪ್ಟೊಲೈಟ್ ಅವಶೇಷಗಳು ಹುದುಗಿರುವ ಜೇಡುಶಿಲಾಸ್ತರಗಳನ್ನು ಕಾಣಬಹುದು. ಮೇಲಿನ ಆರ್ಡೊವಿಶಿಯನ್ ಶಿಲಾಸ್ತರಗಳು ಪಶ್ಚಿಮ ಹೂಪೇ ಮತ್ತು ದಕ್ಷಿಣ ಆನ್‍ಹ್ವೆ ಪ್ರಾಂತ್ಯಗಳಲ್ಲಿ ಚದುರಿಹೋಗಿವೆ.

ಸಿನ್‍ಲಿಂಗ್ ಶ್ರೇಣಿ ಹಾಗೂ ಅದರ ದಕ್ಷಿಣದತ್ತ ಆರ್ಡೊವಿಶಿಯನ್ ಸ್ತರಗಳ ಮೇಲೆ ಕೆಳಸೈಲೂರಿಯನ್ ಯುಗದ (440 ದಶಲಕ್ಷ ವರ್ಷಗಳ ಹಿಂದೆ) ಶಿಲೆಗಳು ಹರಡಿವೆ. ಇವುಗಳಲ್ಲಿ ಗ್ರಾಪ್ಟೊಲೈಟ್ ಜೇಡುಶಿಲಾಸ್ತರಗಳೇ ಬಲು ಪ್ರಧಾನವಾದವು. ಶ್ರೇಣಿಯ ನಡುವೆ ಅಲಲ್ಲಿ ಮರಳುಶಿಲೆ ಮತ್ತು ಪೆಂಟಿಶಿಲೆಯ ಸಣ್ಣಪುಟ್ಟ ಸ್ತರಗಳನ್ನು ಕಾಣಬಹುದು. ಕೆಲವೆಡೆ ಕಾರಲ್ ಮತ್ತು ಬ್ರೇಕಿಯೊಪಾಡ್ ಜೀವ್ಯವಶೇಷಗಳಿಂದ ಕೂಡಿರುವ ಸುಣ್ಣ ಶಿಲಾಸ್ತರಗಳೂ ಇವೆ. ಮಧ್ಯ ಸೈಲೂರಿಯನ್ ಸ್ತರಗಳು ಎಲ್ಲೂ ಕಂಡುಬಂದಿಲ್ಲ. ಆದರೆ ಅತ್ಯಂತ ಕಿರಿಯ ಸೈಲೂರಿಯನ್ ಶಿಲಾಸ್ರಗಳನ್ನು ಸಿನ್ಲಿಂಗ್ ಶ್ರೇಣಿಯ ನೈಋತ್ಯಭಾಗಗಳಲ್ಲಿ ಗುರುತಿಸಲಾಗಿದೆ. ಈ ಸ್ತರಗಳಲ್ಲಿ ಅವುಗಳಲ್ಲಿ ಪ್ರಾಚೀನ ಮೀನಿನ ಅವಶೇಷಗಳಿರುವುದು ಕಂಡುಬಂದಿದೆ. ಸೈಲೂರಿಯನ್ ಯುಗದ ಅಂತ್ಯದಲ್ಲಿ ತಲೆದೋರಿದ ಭೂಚಟುವಟಿಕೆಗಳು ಚೀನದ ಇಡೀ ಭೂಭಾಗವನ್ನು ಮೇಲಕ್ಕೆತ್ತಿ ಖಂಡಪ್ರದೇಶವನ್ನಾಗಿಸಿದುವು. ಹೀಗಾಗಿ ಡಿವೋನಿಯನ್ ಯುಗದ (350-400 ದಶಲಕ್ಷ ವರ್ಷಗಳ ಹಿಂದೆ) ನಿಕ್ಷೇಪಗಳೂ ಬಲು ವಿರಳ. ಮಧ್ಯಡಿವೋನಿಯನ್ ಯುಗದ ಮರಳುಶಿಲೆ ಮತ್ತು ಸುಣ್ಣಶಿಲಾಸ್ತರಗಳು ಪಶ್ಚಿಮ ಸಿನ್‍ಲಿಂಗ್ ಪ್ರದೆಶದಲ್ಲೂ ಮೇಲಿನ ಡಿವೋನಿಯನ್ ಯುಗದ ಮರಳುಶಿಲೆ, ಜೇಡುಶಿಲೆ ಹಾಗೂ ಸುಣ್ಣಶಿಲಾಸ್ತರಗಳು ನೈಋತ್ಯ ಭಾಗಗಳಲ್ಲೂ ಹರಡಿವೆ.

ಕೇಳ ಕಾರ್ಬಾನಿಫೆರಸ್ ಯುಗದ (350 ದಶಲಕ್ಷ ವರ್ಷಗಳ ಹಿಂದೆ) ಶಿಲಾಸ್ತರಗಳು ಹೂನಾನ್, ಗ್ವೆಜೋ, ನ್ಯಾನ್‍ಕಿಂಗ್ ಬೆಟ್ಟಗಳು ಹಾಗೂ ಷಿನ್‍ಜಿಯಾಂಗ್ ಪ್ರದೇಶಗಳಲ್ಲಿವೆ. ಈ ನಿಕ್ಷೇಪಗಳಲ್ಲಿ ಮರಳುಶಿಲೆಯ ಮಂದವಾದ ಸ್ತರಗಳಿವೆ. ಇವುಗಳಲ್ಲಿ ಸಸ್ಯಾವಶೇಷಗಳನ್ನು ಕಾಣಲಾಗಿದೆ. ಸುಣ್ಣ ಶಿಲೆ ಮತ್ತು ಜೀಡುಶಿಲಾಸ್ತರಗಳನ್ನು ಅಲ್ಲಲ್ಲಿ ಕಾಣಬಹುದು. ಹೂನಾನ್ ಮತ್ತು ಗ್ವಾಂಗ್‍ಸೀ ಪ್ರಾಂತ್ಯದ ನಿಕ್ಷೇಪಗಳಲ್ಲಿ ಕಲ್ಲಿದ್ದಲೂ ದೊರೆಯುತ್ತದೆ. ಆರ್ಡೊವಿಶಿಯನ್ ಶಿಲಾಶ್ರೆಣಿಯ ಮೇಲೆ ಸಸ್ಯಾವಶೇಷಗಳಿಂದ ಕೂಡಿರುವ ಜೇಡುಶಿಲಾಸ್ತರಗಳೂ ಕಲ್ಲಿದ್ದಲಿಂದ ಕೂಡಿರುವ ಮರಳುಶಿಲಾಸ್ತರಗಳೂ ನಿಕ್ಷೇಪಗೊಂಡಿವೆ. ಇವುಗಳ ಜೊತೆಗೆ ಫ್ಯೂಸಿಲೈನ ಅವಶೇಷಗಳಿಂದಾದ ಸುಣ್ಣ ಶಿಲಾಸ್ತರಗಳನ್ನೂ ಕಾಣಬಹುದು. ಮೇಲಿನ ಕಾರ್ಬಾನಿಫೆರಸ್ ಯುಗದ (280 ದಶಲಕ್ಷ ವರ್ಷಗಳ ಹಿಂದೆ) ನಿಕ್ಷೇಪಗಳಲ್ಲಿ ಫ್ಯೂಸಲೈನ ಸುಣ್ಣ ಶಿಲಾಸ್ತರಗಳು, ಟೈಯುವಾನ್ ಶ್ರೇಣಿಯ ಮರಳುಶಿಲಾಸ್ತರಗಳು ಹಾಗೂ ಕಲ್ಲಿದ್ದಲಿರುವ ಜೇಡುಶಿಲಾಸ್ತರಗಳು ಇವೆ. ಇವುಗಳ ನಡುವೆ ಅಲ್ಲಲ್ಲೆ ಸಮುದ್ರೀಯ ಲಕ್ಷಣಗಳನ್ನು ತೋರುವ ಸುಣ್ಣಶಿಲೆಯ ಸಣ್ಣಪುಟ್ಟಸ್ತರಗಳನ್ನು ಕಾಣಲು ಸಾಧ್ಯ.

ದಕ್ಷಿಣ ಚೀನದಲ್ಲಿ ಕೆಳ ಪರ್ಮಿಯನ್ ಯುಗದ ಫ್ಯೂಸಲೈನ ಸುಣ್ಣಶಿಲಾಸ್ತರಗಳಿವೆ. ಉತ್ತರ ಪ್ರಾಂತ್ಯಗಳಲ್ಲಿ ಉತ್ತಮ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ಷಾನ್‍ಸಿಸ್ತರಗಳು, ಮರಳುಶಿಲೆ ಮತ್ತು ಜೇಡುಶಿಲಾಸ್ತರಗಳಿವೆ. ಇದೇ ಕಾಲದಲ್ಲಿ ಸಿನ್‍ಲಿಂಗ್ ಮಹಾಭಿನತಿಯಲ್ಲಿ ಪರ್ವತಜನ್ಯ ಚಟುವಟಿಕೆಗಳು ಉದ್ಭವಿಸಿದವು. ವಿಶಾಲಪ್ರದೇಶದಲ್ಲಿ ಹರಡಿದ್ದ ಶಿಲಾಸ್ತರಗಳು ಮಡಿಕೆ ಬಿದ್ದು ಅವುಗಳ ನಡುವೆ ಅಲ್ಲಲ್ಲೆ ಸ್ತರಭಂಗಗಳೂ ಏರ್ಪಟ್ಟುವು. ಕಾದ ಶಿಲಾರಸ ನೆಲದ ಮೇಲೆಲ್ಲ ಹರಿದು ಹೆಪ್ಪುಗಟ್ಟಿತು. ಮಧ್ಯ ಮತ್ತು ಮೇಲಿನ ಪರ್ಮಿಯನ್ ಯುಗದ ನಿಕ್ಷೇಪಗಳನ್ನು ಉತ್ತರ ಹಾಗೂ ದಕ್ಷಿಣ ಚೀನಗಳಲ್ಲಿ ಕಾಣಬಹುದು. ಬಹುಮಟ್ಟಿಗೆ ಇವು ಉತ್ತಮ ಕಲ್ಲಿದ್ದಲು ನಿಕ್ಷೇಪಗಳನ್ನೊಳಗೊಂಡ ಮರಳುಶಿಲೆ ಹಾಗೂ ಜೇಡುಶಿಲಾಸ್ತರಗಳೇ ಆಗಿವೆ. ಇವುಗಳಲ್ಲಿ ಜೈಗ್ಯಾಂಟಾಪ್ಟಂಸ್ ಎಂಬ ಸಸ್ಯಾವಶೇಷ ಉಂಟು. ಇದೇ ಭೂಯುಗಕ್ಕೆ ಸೇರಿದ ಜಿóಷ್ಟನ್ ಕೆಂಪು ತಗ್ಗು ಪ್ರದೇಶದಲ್ಲಿ ಡಾಲೊಮಿಟಿಕ್ ಸುಣ್ಣಶಿಲೆಯ ನಿಕ್ಷೇಪಗಳಿವೆ. ಈ ನಿಕ್ಷೇಪಗಳ ನಡುವೆ ಹಲವಾರು ಕಡೆ ಲವಣಸ್ತರಗಳು ಕಂಡುಬಂದಿವೆ. ದಕ್ಷಿಣಪ್ರಾಂತ್ಯದ ಗ್ವೇಜೋ ಪ್ರದೇಶದ ಸಮುದ್ರೀಯ ಸುಣ್ಣಶಿಲೆಯ ಮಂದಸ್ತರಗಳಲ್ಲಿ ಪೆಟ್ರೋಲಿಯಮ್ ದೊರೆಯುವ ಭೂಲಕ್ಷಣಗಳು ಕಾಣಿಸಿಕೊಂಡಿವೆ. ಟ್ರಯಾಸಿಕ್ ಯುಗದ (190-225 ದಶಲಕ್ಷ ವರ್ಷಗಳ ಹಿಂದೆ) ನಿಕ್ಷೇಪಗಳಲ್ಲಿ ಬಹುಮಟ್ಟಿಗೆ ನೆಲಭಾಗದ ಲಕ್ಷಣಗಳು ಕಾಣಿಸಿವೆ. ಈ ನಿಕ್ಷೇಪಗಳು ಕೆಂಪು ಹಾಗೂ ಹಸಿರುಬಣ್ಣದ ಮರಳುಶಿಲೆ ಮತ್ತು ಜೇಡುಶಿಲಾಸ್ತರಗಳಿಂದಾಗಿವೆ. ಕೆಲವು ಸಸ್ಯಾವಶೇಷಗಳು ಮತ್ತು ಥಿರೊಮಾರ್ಫ್ ಎಂಬ ಸರೀಸೃಪದ ಅವಸೇಷಗಳು ಇವುಗಳಲ್ಲಿ ಕಂಡುಬಂದಿವೆ. ಜೂರಾಸಿಕ್ ಯುಗದ (135-190 ದಶಲಕ್ಷ ವರ್ಷಗಳ ಹಿಂದೆ) ನಿಕ್ಷೇಪಗಳು ದೇಶದ ಅನೇಕ ಕಡೆ ವಿಸ್ತಾರವಾಗಿ ಹರಡಿವೆ. ಇವು ನೆಲಭಾಗ ಆಥವಾ ಸಿಹಿನೀರು ಪ್ರದೇಶದ ಲಕ್ಷಣಗಳನ್ನು ತಳೆದಿರುವ ಜೇಡುಶಿಲೆ, ಮರಳುಶಿಲೆ ಮತ್ತು ಪೆಂಟೆಶಿಲಾಸ್ತರಗಳಿಂದಾದವು. ಈ ಸ್ತರಗಳಲ್ಲಿ ಉತ್ತಮ ಕಲ್ಲಿದ್ದಲಿನ ನಿಕ್ಷೇಪಗಳೂ ಉಂಟು. ಕಿಟೇಷಸ್ ಯುಗದ (55-135 ದಶಲಕ್ಷ ವರ್ಷಗಳ ಹಿಂದೆ) ಕೆಂಪು ಹಾಗೂ ಹಸಿರು ಮರಳುಶಿಲೆ ಮತ್ತು ಜೇಡುಶಿಲಾಸ್ತರಗಳನ್ನು ಮಂಗೋಲಿಯ, ಷೆನ್‍ಸೀ ಹಾಗೂ ಜೆಕ್ವಾನ್ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಜಿಪ್ಸಮ್ ನಿಕ್ಷೇಪಗಳು ಮತ್ತು ಸರೀಸೃಪಗಳ ಅವಶೇಷಗಳಿವೆ. ಡೈನೊಸಾರ್ ಎಂಬ ಪೆಡಂಭೂತದ ಮೊಟ್ಟೆಗಳನ್ನು ಈ ನಿಕ್ಷೇಪಗಳಲ್ಲಿ ಪ್ರಾಚೀನ ಜೀವ್ಯವಶೇಷಗಳ ರೂಪದಲ್ಲಿ ಪತ್ತೆಹಚ್ಚಲಾಗಿದೆ. ಕ್ರಿಟೇಷಸ್ ಯುಗದ ಹಂತಗಳಲ್ಲಿ ಚೀನದ ಆಗ್ನೇಯ ಭಾಗಗಳು ಭೂಚಟುವಟಿಕೆಗಳಿಗೊಳಗಾಗಿ ಲಾವಾಸ್ತರಗಳು ಹಾಗೂ ಗ್ರ್ಯಾನೈಟ್ ಅಂತಸ್ತರಣಗಳು ತಲೆದೋರಿದುವು. ಇವುಗಳೊಡನೆ ಕಬ್ಬಿಣ ಅದುರು ನಿಕ್ಷೇಪಗಳೂ ಕಾಣಿಸಿಕೊಂಡುವು.

ದೇಶದ ಹಲವಾರು ಕಡೆ, ಅದರಲ್ಲೂ ಆಗ್ನೇಯ, ಭಾಗಗಳಲ್ಲಿ, ಇಯೊಸೀನ್ ಯುಗದ (60 ದಶಲಕ್ಷ ವರ್ಷ ಪ್ರಾಚೀನದಿಂದ 40 ದಶಲಕ್ಷ ವರ್ಷ ಪ್ರಾಚೀನದವರೆಗಿನ ಅವಧಿ) ಶಿಲಾಸ್ತರಗಳಿವೆ. ಬಹುವಾಗಿ ಇವು ಕೆಂಬಣ್ಣದ ಪೆಂಟೆಶಿಲೆ, ಮರಳುಶಿಲೆ ಮತ್ತು ಸುಣ್ಣ ಜೇಡುಶಿಲಾಸ್ತರಗಳು. ಇವುಗಳ ನಡುವೆ ಅಲ್ಲಲ್ಲೆ ಜಿಪ್ಸಮ್ ನಿಕ್ಷೇಪಗಳು ಮತ್ತು ಸಸ್ತನಿಗಳ ಅವಶೇಷಗಳಿವೆ. ಮಂಚೂರಿಯದ ಆಲಿಗೊಸೀನ್ ಶಿಲಾಶ್ರೇಣಿಗಳಲ್ಲಿ ಉತ್ತಮ ಬಿಟ್ಯುಮಿನಸ್ ಕಲ್ಲಿದ್ದಲ ನಿಕ್ಷೇಪಗಳಿವೆ. ಪ್ಲಿಯೊಸೀನ್ ಕಾಲದ (1-11 ದಶಲಕ್ಷ ವರ್ಷಗಳ ಹಿಂದೆ) ಕೆಂಪುಜೇಡು ಹಾಗೂ ಜೇಡುಮರಳಿನ ನಿಕ್ಷೇಪಗಳನ್ನು ದೇಶದ ಉತ್ತರ ಪ್ರದೇಶಗಳಲ್ಲೂ ಮಯೋಸೀನ್ ಕಾಲದ (11-25 ದಶಲಕ್ಷ ವರ್ಷಗಳ ಹಿಂದೆ) ನುರುಜುಶಿಲೆ ಮತ್ತು ಕೆಂಪುಜೇಡು ಶಿಲಾಸ್ತರಗಳನ್ನು ದಕ್ಷಿಣ ಭಾಗಗಳಲ್ಲೂ ಗುರುತಿಸಲಾಗಿದೆ. ಚೌಕಟೀನ್ ಎಂಬ ನಿಕ್ಷೇಪಗಳು ಬಹು ವಿಶಿಷ್ಟವಾದವು. ಇವು ಪ್ಲೀಸ್ಟೋಸೀನ್ ಕಾಲಕ್ಕೆ (1 ದಶಲಕ್ಷ ವರ್ಷಗಳ ಹಿಂದೆ) ಸೇರಿದ್ದು. ಇವುಗಳಲ್ಲಿ ಸೈನಾನ್ ಥ್ರೋಪಸ್ ಪೆಕಿನೆನಿಸ್ ಎಂಬ ಆದಿಮಾನವನ ಅವಶೇಷಗಳನ್ನು ಪತ್ತೆಹಚ್ಚಲಾಯಿತು. ಉತ್ತರ ಚೀನದ ವಿಸ್ತಾರ ಪ್ರದೇಶಗಳಲ್ಲಿ ಹರಡಿರುವ ಮೆಕ್ಕಲು ಧೂಳು ನಿಕ್ಷೇಪಗಳು (ಲೋಯಸ್), ಯಾಂಗ್‍ಟ್ಸೀ ಮತ್ತು ಇತರ ನದೀ ಕಣಿವೆಗಳಲ್ಲಿರುವ ಹಳದಿ ಮೆಕ್ಕಲು ನಿಕ್ಷೇಪಗಳು ಪ್ಲೀಸ್ಟೋಸೀನ್ ಹಾಗೂ ಇತ್ತೀಚಿನ ಕಾಲದವು. ii ಭೌತಲಕ್ಷಣ : ಚೀನವನ್ನು ದಕ್ಷಿಣದ ಪರ್ವತಭಾಗ ಮತ್ತು ಉತ್ತರದ ಬಯಲು ಪ್ರದೇಶ ಎಂದು ವಿಭಜಿಸಬಹುದು. ಪಶ್ಚಿಮ ಪುರ್ವಭಾಗಗಳಲ್ಲಿ ಪ್ರಾದೇಶಿಕ ಭಿನ್ನತೆಗಳು ಎದ್ದುಕಾಣುತ್ತವೆ. ಉತ್ತರಚೀನದ ಬಯಲು ನಾಡು ಸಮುದ್ರತೀರದಿಂದ 400 ಮೈ. ವರೆಗೆ ವ್ಯಾಪಿಸಿದೆ. ಅಲ್ಲಿಂದ ಮುಂದಕ್ಕೆ ಷಾನ್‍ಸೀ, ಷೆನ್‍ಸೀ ಮತ್ತು ಕ್ಯಾನ್ಸೂ ಪ್ರಾಂತ್ಯಗಳ ಮೇಲ್ನಾಡು. ವಾಯವ್ಯ ಪ್ರದೇಶದ ಬಹುಭಾಗ ಮೆಕ್ಕಲುಭೂಮಿ. ಬಿರುಗಾಳಿಗಳಿಂದ ತೂರಿಬಂದ ಮೆಕ್ಕಲು ಮಣ್ಣಿನ ಪದರ 50' ಗಳಿಂದ 250' ವರೆಗೆ ದಪ್ಪವಾಗಿ ಹರಡಿ ನೆಲ ಫಲವತ್ತಾಗಿದೆ. ನೀರಿನ ಅನುಕೂಲ ಇರುವ ಕಡೆ ವ್ಯವಸಾಯ ಚೆನ್ನಾಗಿ ನಡೆಯುತ್ತದೆ. ಆದರೆ ಈ ಭಾಗಗಳಲ್ಲಿ ಮಳೆ ಕಡಿಮೆ; ನೀರಿನ ಆಸರೆ ಹೆಚ್ಚಾಗಿ ಇಲ್ಲ.

ಪೂರ್ವಭಾಗದಲ್ಲಿ, ಉತ್ತರಚೀನ ಬಯಲುನಾಡು ಫಲವತ್ತಾದ್ದು; ವ್ಯವಸಾಯಕ್ಕೆ ಪ್ರಶಸ್ತ. ಇಲ್ಲಿ ಜನಸಾಂದ್ರತೆ ಹೆಚ್ಚು. ಉತ್ತರಚೀನ ಮತ್ತು ದಕ್ಷಿಣ ಮಂಚೂರಿಯ ಬಯಲಿನ ನಡುವೆ ಸಂಪಕ್ ಕಲ್ಪಿಸುವ ಇಕ್ಕಟ್ಟಾದ ತೀರಮಾರ್ಗ ಸಮುದ್ರಕ್ಕೂ ಜೆಹೊಲ್ ಪರ್ವತಗಳಿಗೂ ನಡುವೆ ಇದೆ.

ಮಧ್ಯ ಮತ್ತು ದಕ್ಷಿಣ ಚೀನಗಳಲ್ಲಿ ಪೂರ್ವ-ಪಶ್ಚಿಮ ಪ್ರಾದೇಶಿಕ ವ್ಯತ್ಯಾಸಗಳು ಅಷ್ಟಿಲ್ಲ. ಪಶ್ಚಿಮ ಭಾಗದ ಪರ್ವತಗಳಲ್ಲಿ ಕಣಿವೆ ದಾರಿಗಳು ಕಡಿಮೆ. ಪೂರ್ವ ಭಾಗದಲ್ಲಿ ಯಾಂಗ್ಟ್ಸೀ ನದಿ ಸಮುದ್ರದಿಂದ ಪಶ್ಚಿಮಕ್ಕೆ 700 ಮೈ. ದೂರ ಡೂಂಗ್‍ಟಿಂಗ್ ಸರೋವರದ ವರೆಗೆ ಇಳುಕಲು ನೆಲವನ್ನು ಸೃಷ್ಟಿಸಿದೆ. ದಕ್ಷಿಣದಲ್ಲಿ ಷೀ ಕ್ಯಾಂಗ್ ನದಿ ಪ್ರದೇಶವೂ ಇದೆ ರೀತಿ ತಗ್ಗಾದ್ದು.

	ಸ್ವಾಭಾವಿಕ ವಿಭಾಗಗಳು : ಚೀನವನ್ನು ಭೌಗೋಳಿಕವಾಗಿ 10 ಪ್ರದೇಶಗಳನ್ನಾಗಿ ವಿಂಗಡಿಸಬಹುದು. : 1. ಟಿಬೆಟ್ ಪ್ರಸ್ಥಭೂಮಿ: ಸಮುದ್ರಮಟ್ಟದಿಂದ ಇದರ ಎತ್ತರ 12,000'. ರಾಜ್ಯದ ಸು. ಕಾಲುಭಾಗ ಇದರ ವಿಸ್ತೀರ್ಣ. 2. ಇಡೀ ಷಿನ್‍ಜಿಯಾಂಗ್ ವೀಗುರ್ ಸ್ವಯಮಾಡಳಿತ ಪ್ರದೇಶಗಳನ್ನೊಳಗೊಂಡ ಷಿನ್‍ಜಿಯಾಂಗ್ ತಗ್ಗು ಭೂಮಿ : ಟಿಯೆನ್ಷಾನ್ ಪರ್ವತಶ್ರೇಣಿಯಿಂದಾಗಿ ಈ ಪ್ರದೇಶ ಎರಡು ಭಾಗಗಳಾಗಿದೆ. ಅವುಗಳಲ್ಲಿ ಉತ್ತರಕ್ಕಿರುವುದು ಜುಂಗಾರಿಯ ; ದಕ್ಷಿಣದಲ್ಲಿ ಡಾರೀಮ್ ನದೀ ಬಯಲು. 3. ಮಂಗೋಲಿಯ ಪ್ರಸ್ಥಭೂಮಿ : ಈ ಪ್ರದೇಶ ಈಶಾನ್ಯದ ಷಿಂಗಾನ್ ಪರ್ವತಗಳಿಂದ ಷಿನ್‍ಜಿಯಾಂಗ್ ನದಿಯವರೆಗೆ ಹರಡಿದೆ. 4. ಮೆಕ್ಕಲು ಭೂಮಿ : ಇದು ಮಂಗೋಲಿಯ ಬಯಲುನಾಡಿನ ದಕ್ಷಿಣದಲ್ಲಿದೆ : ಷಾನ್‍ಸೀ ಮತ್ತು ಕ್ಯಾನ್ಸೂ ಪ್ರಾಂತ್ಯಗಳ ಸ್ವಲ್ಪಭಾಗ ಇದಕ್ಕೆ ಸೇರಿದೆ. ಭೂಸವೆತದಿಂದಾಗಿ ಈ ಪ್ರದೇಶದಲ್ಲಿ 600' ಗಳಷ್ಟು ಆಳದ ಅನೇಕ ದರಿ ಮತ್ತು ಕಮರಿಗಳುಂಟು. 5. ಸಚ್ವಾನ್ ತಗ್ಗು ಪ್ರದೇಶ : ಇದು ಬಹುಮಟ್ಟಿಗೆ ಸಚ್ವಾನ್ ಪ್ರಾಂತ್ಯಗಳನ್ನೊಳಗೊಂಡಿದೆ. ಇಲ್ಲಿಯ ಫಲವತ್ತಾದ ಕಣಿವೆಗಳು ನೆರೆಮಣ್ಣಿನಿಂದ ಕೂಡಿದವು. 6. ಯುನ್ಯಾನ್ ಗ್ವೇಜೋ ಮಲೆನಾಡು : ಇಲ್ಲಿ ಕಮರಿ ಹಾಗೂ ದರಿಗಳು ಹೆಚ್ಚಾದ ಪ್ರಯುಕ್ತ ಭೂಮಿಯ ಬಹುಭಾಗ ವ್ಯವಸಾಯಕ್ಕೆ ಅನುಕೂಲವಾಗಿಲ್ಲ. 7. ಈಶಾನ್ಯ ಬಯಲುನಾಡು : ಸುಂಗಾರೀ ಮತ್ತು ಲಿಯೌ ನದಿಗಳ ನಡುವಣ ಜಲಾನಯನ ಭೂಮಿಯನ್ನೊಳಗೊಂಡಿದೆ. ಇದರ ವಿಸ್ತಾರ ಉತ್ತರದಿಂದ ದಕ್ಷಿಣಕ್ಕೆ 600 ಮೈ. ; ಪೂರ್ವದಿಂದ ಪಶ್ಚಿಮಕ್ಕೆ 250 ಮೈ. 8 ಉತ್ತರ ಚೀನ ಬಯಲುನಾಡು : ಚೀನದ ದೊಡ್ಡ ಬಯಲುಗಳಲ್ಲಿ ಇದು ಎರಡನೆಯದು ; ಷಾನ್‍ಸೀ ಪ್ರಾಂತ್ಯವನ್ನು ಬಿಟ್ಟು ಉತ್ತರ ಚೀನ ಭಾಗವನ್ನು ಆವರಿಸಿದೆ. 

9

ಯಾಂಗ್ಟ್ಸೀನದಿಯ ಹರಿವಿನ ನಡುವುನ ಮತ್ತು ಅಂತ್ಯದ ಭಾಗ : ಈ ಪ್ರದೇಶದಲ್ಲಿ ನದಿಯ ಇಬ್ಬದಿಯಲ್ಲೂ ಸಮುದ್ರದವರೆಗೆ ಫಲವತ್ತಾದ ಭೂಮಿ ಇದೆ. 10 ಆಗ್ನೇಯ ಬೆಟ್ಟಗುಡ್ಡ ಪ್ರದೇಶ : ಇದು ಯಾಂಗ್ಟ್ಸೀ ನದಿಯ ಮಧ್ಯ ಹರಿವಿನ ದಕ್ಷಿಣ ಭಾಗದಲ್ಲಿದೆ.

ಪರ್ವತಗಳು : ಟಿಬೆಟ್ ಪ್ರಾಂತ್ಯದ ಪರ್ವತಗಳನ್ನು ಬಿಟ್ಟರೆ ಚೀನದಲ್ಲಿ ದಟ್ಟವಾಗಿ ಸಾಗುವ ಮತ್ತು ಎತ್ತರ ಶಿಖರಗಳಿಂದ ಕೂಡಿದ ಪರ್ವತಗಳು ಕಡಿಮೆ. ಪರ್ವತಗಳು ಅವಿಚ್ಛಿನ್ನವಾಗಿ ಸಾಗುವ ಕಡೆ ಹವಾಗುಣದ ನಿರ್ಧಾರದಲ್ಲಿ ಅವುಗಳ ಪಾತ್ರ ವಿಶಿಷ್ಟವಾದ್ದು. ಚೀನದ ಈಶಾನ್ಯಭಾಗದಲ್ಲಿ ಮಹಾ ಷಿಂಗಾನ್ ಪರ್ವತ ಶ್ರೇಣಿ ವ್ಯಾಪಿಸಿದೆ. ಅದರ ಪೂರ್ವಪ್ರದೇಶ ಸಮತಲವಾಗಿದ್ದು ಅಲ್ಲಲ್ಲಿ ಬೆಟ್ಟಗಳಿವೆ. ಈ ಭಾಗ ವ್ಯವಸಾಯಕ್ಕೆ ಅನುಕೂಲ ; ಈ ಪರ್ವತದ ಕಡೆ ಕಿರುಬೆಟ್ಟಗಳ ಸಾಲು, ಇಳಕಲು ಭೂಮಿ, ಬಯಲಿಗಳು ಇವೆ. ಷಿಂಗಾನ್ ಪರ್ವತಸಾಲು ಬೇಸಗೆ ಮಳಿಯನ್ನು ತಡೆಯುವುದರಿಂದ ಅಲ್ಲಿ ಮಳೆ ಕಡಿಮೆ. ಈ ಭಾಗದಲ್ಲಿ ಬೇಸಾಯಕ್ಕಿಂತ ಪಶುಪಾಲನೆ ಮುಖ್ಯ ಕಸುಬು. ಇನ್‍ಷಾನ್ ಪರ್ವತ ಶ್ರೇಣಿ ಮಂಗೋಲಿಯವನ್ನು ಉತ್ತರ ಚೀನದಿಂದ ಪ್ರತ್ಯೇಕಿಸಿದೆ. ಟೈಹಾಂಗ್ ಪರ್ವತಗಳು ಉತ್ತರ ಚೀನ ಬಯಲು ನಾಡಿಗೂ ಲೂಯೆಸ್ ಪ್ರಸ್ಥಭೂಮಿಗೂ ನಡುವೆ ಇವೆ. ಉತ್ತರಚೀನ ಬಯಲು ಮಂಚೂರುಯ ಬಯಲಿನಿಂದ ಪ್ರತ್ಯೇಕಗೊಂಡಿರುವುದು ಒಳಮಂಗೋಲಿಯದ ಮಲೆನಾಡಿನಿಂದಾಗಿ, ಚಿನ್‍ಲಿಂಗ್ ಪರ್ವತ ಚೀನವನ್ನು ಎರಡು ಪ್ರತ್ಯೇಕ ಹವಾಗುಣ ಪ್ರದೇಶಗಳನ್ನಾಗಿ ವಿಭಜಿಸಿದೆ. ಈ ಪರ್ವತದ ಉತ್ತರಭಾಗದಲ್ಲಿ ಚಳಿ ಹೆಚ್ಚು. ನೆಲ ಬಹುತೇಕ ಬಂಜರು. ಪರ್ವತದ ದಕ್ಷಿಣಭಾಗ ಸಮತಲವಾಗಿಲ್ಲ ; ಅಲ್ಲಿ ಬಿಸಿಲು ಮತ್ತು ಮಳೆ ಹೆಚ್ಚು. ಪಶ್ಚಿಮದಲ್ಲಿ ಕ್ಯಾನ್ಸೂ ಪ್ರಾಂತ್ಯದಲ್ಲಿ ಪ್ರಾರಂಭವಾಗುವ ಈ ಪರ್ವತಶ್ರೇಣಿ ಪೂರ್ವಕ್ಕೆ ಸಾಗಿ ಆನ್‍ಹ್ವೇ ಪ್ರಾಂತ್ಯದ ಮಧ್ಯಭಾಗದಲ್ಲಿ ಇಳಿಯುತ್ತ ಬಂದು ಅದೃಶ್ಯವಾಗುತ್ತದೆ. ಇಲ್ಲಿಯ ಬೆಳೆ ಚಹ ಮತ್ತು ಬತ್ತ. ಮಧ್ಯ ಚೀನದ ವೂಷಾನ್ ಪರ್ವತ ಪೂವ್ ಚೀನವನ್ನು ಪಶ್ಚಿಮ ಚೀನದಿಂದ ಪ್ರತ್ಯೇಕಿಸಿದೆ. ನಾನ್‍ಲಿಂಗ್ ಪರ್ವತಸಾಲೂ ವಾಯುಗುಣನಿರ್ಧಾರಕವಾದ್ದು ; ಮಧ್ಯ ಚೀನ ದಕ್ಷಿನ ಚೀನದಿಂದ ಪ್ರತ್ಯೇಕಗೊಳ್ಳಲು ಅದು ಕಾರಣ, ಅದರ ಉತ್ತರದಲ್ಲಿ ವಿಶಾಲವಾದ ಹಾಗು ಫಲವತ್ತಾದ ಯಾಂಗ್‍ಟ್ಸೀ ನದಿ ಜಲಾನಯನಭೂಮಿಯೂ ದಕ್ಷಿಣದಲ್ಲಿ ದಕ್ಷಿಣ ಚೀನದ ಪ್ರಸಿದ್ಧ ಜಲಮಾರ್ಗಗಳೂ ಉಂಟು. ಈ ಪರ್ವತದಿಂದ ಪಶ್ಚಿಮಭಾಗದಲ್ಲಿ ಬೇಸಗೆಯ ಮಳೆಗಳಿಗೆ ಅಡಚಣೆ. ಕುನ್‍ಲುನ್ ಮತ್ತು ಸಚ್ವಾನ್ ಪರ್ವತ ಶ್ರೇಣಿಗಳು ಚಿಂಗ್‍ಹೈ-ಷೀ ಕ್ಯಾಂಗ್-ಟಿಬೆಟ್ ಪ್ರಸ್ಥಭೂಮಿಗೆ ಉತ್ತರ ಹಾಗೂ ಪೂರ್ವ ಅಂಚುಗಳು, ಅದು ಪಶ್ಚಿಮದಲ್ಲಿ ಪಾಮೀರ್ ಪ್ರಸ್ಥಭೂಮಿಯಲ್ಲಿ ಪ್ರಾರಂಭವಾಗಿ ಕುನ್‍ಲುನ್, ಅಲ್ಟನ್‍ತಾಗ್, ನಾನ್‍ಷಾನ್, ಮಿನ್ಹಾನ್ ಮೊದಲಾದ ಹೆಸರುಗಳನ್ನು ತಾಳಿ ಯುನ್ಯಾನ್ ಪ್ರಾಂತ್ಯದ ಪಶ್ಚಿಮ ಅಂಚಿನ ಬಳಿ ಇಳಿದು ಸಾಗಿ ಸಾದೃಶ್ಯವಾಗುತ್ತದೆ. ಇಲ್ಲಿಯ ಜನರ ವೃತ್ತಿ ಪಶುಪಾಲನೆ. ಹುಲ್ಲು ಬಯಲುಗಳು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಚೀನದ ಪರ್ವತಶಿಖರಗಳಲ್ಲಿ ಟಯೆನ್ ಷಾನ್ ಪರ್ವದ ಟಡಂಗ್ರಿಕಾನ್‍ನ ಎತ್ತರ 23,620'. ಚಿನ್‍ಲಿಂಗ್ ಪರ್ವತದ ಅತ್ಯಂತ ಎತ್ತರದ ಶಿಖರದ ಎತ್ತರ 12,000'; ಕುನ್‍ಲುನ್ ಪರ್ವತದ ಅತ್ಯಂತ ಎತ್ತರ ಶಿಖರ 25,000'. ಚೀನದ ಪರ್ವತಗಳು ರಾಜ್ಯವನ್ನು ಪ್ರತ್ಯೇಕ ಭೌಗೋಳಿಕ ಪ್ರದೇಶಗಳನ್ನಾಗಿ ವಿಂಗಡಿಸುವಂತಿದ್ದರೂ ಅವುಗಳ ಕಣಿವೆಗಳಲ್ಲಿ ಹರಿಯುವ ನದಿಗಳು ಜಲಮಾರ್ಗಗಳಾಗಿ ಚೀನದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಿವೆ. ಚೀನದ 5 ಜಲಮಾರ್ಗಗಳೂ 2 ಭೂಮಾರ್ಗಗಳು ಪ್ರಸಿದ್ಧವಾಗಿವೆ. 1. ತುಂಗ್ ಕ್ಯಾಂಗ್ : ಹ್ವಾಂಗ್ ಹೋ ನದಿಯ ಉತ್ತರ ದಂಡೆಯ ಮೇಲೆ ಇರುವ ಇದು ಉತ್ತರ ಚೀನ ಬಯಲು ನಾಡಿಗೆ ಪಶ್ಚಿಮ ದ್ವಾರ. 2. ಯಾಂಗ್‍ಟ್ಸೀಕಣಿವೆ ದಾರಿ : ವೂಷಾನ್ ಪರ್ವತಗಳಲ್ಲಿದೆ. ಸಚ್ವಾನ್ ಜಲಾನಯನ ಭೂಮಿಗೂ ಪೂರ್ವಭಾಗದ ಯಾಂಗ್‍ಟ್ಸೀ ಮೈದಾನ ಪ್ರದೇಶಕ್ಕೂ ಸಂಬಂಧ ಕಲ್ಪಿಸಿದೆ. 3. ನನ್‍ಲಿಂಗ್ ತೆರಪು : ಜಿಯಾಂಗ್‍ಸೀ ಮತ್ತು ಗ್ವಾಂಗ್‍ಡುಂಗ್ ಪ್ರಾಂತ್ಯಗಳಲ್ಲಿ ಸಂಪರ್ಕ ಕಲ್ಪಿಸಿರುವ ಕಣಿವೆಯಿದು. ನಗರದಿಂದ ಕ್ಯಾಂಟನ್‍ಹ್ಯಾಂಕೌ ವರೆಗಿನ ರೈಲು ಮಾರ್ಗ ಈ ಕಣಿವೆಯಲ್ಲಿ ಸಾಗಿದೆ. 4. ಚಿನ್‍ಲಿಂಗ್ ಕಣಿವೆ ಮಾರ್ಗಗಳು : ಚಿನ್‍ಲಿಂಗ್ ಪರ್ವತದ ಎಂಟು ಕಣಿವೆ ಮಾರ್ಗಗಳಿಂದ ಉತ್ತರ ಮತ್ತು ದಕ್ಷಿಣ ಚೀನಗಳ ನಡುವೆ ಸಂಪರ್ಕ ಏರ್ಪಟ್ಟಿದೆ. 5 ಮಂಗೋಲಿಯ ಪ್ರಸ್ಥಭೂಮಿಗೂ ಉತ್ತರ ಚೀನ ಬಯಲುನಾಡಿಗೂ ಸಂಚಾರವನ್ನು ಸಾಧ್ಯಗೊಳಿಸಿರುವ ಕಲ್ಗನ್ ಕಣಿವೆ ಮಾರ್ಗ. 6 ಕ್ಯಾನ್ಸೂ ಮುಖ್ಯಮಾರ್ಗ : ದಕ್ಷಿಣದ ಚಿಲನ್, ಉತ್ತರದ ಹೋಲಿ ಪರ್ವತಗಳ (ಟಿಬೆಟ್-ಮಂಗೋಲಿಯ) ನಡುವಣ 1610ಕಿ.ಮೀ.ಗಳ ಹಿರಿಯ ಮಾಗ್. 7 ಲಿಯೌಸಿ ಮಾರ್ಗ : ಕಡಲ ತೀರದಲ್ಲಿ ಬೋ-ಹೈ ಕೊಲ್ಲಿಯ ಅಂಚಿನಲ್ಲಿ ಉತ್ತರ ಚೀನ ಮತ್ತು ಮಂಗೋಲಿಯ ಬಯಲು ನಾಡುಗಳಿಗೆ ಸಂಪರ್ಕ ಕಲ್ಪಿಸುವ ದಾರಿ.

ನದಿಗಳು : ಚೀನದ ನದಿಗಳಲ್ಲಿ ಹ್ವಾಂಗ್ ಹೋ, ಯಾಂಗ್‍ಟ್ಸೀ ಮತ್ತು ಷೀ ಕ್ಯಾಮಗ್ ಬಹು ಮುಖ್ಯ ನದಿಗಳು. ಈ ಮೂರು ನದಿಗಳು ಪಶ್ಚಿಮದ ಇಳುಕಲು ಬೆಟ್ಟಗಳಲ್ಲಿ ಹುಟ್ಟಿ ಪೂರ್ವಕ್ಕೆ ಹರಿದು ಸಮುದ್ರವನ್ನು ಸೇರುತ್ತವೆ. ಉತ್ತರದ ಕಾಲುಭಾಗದಷ್ಟು ಪ್ರದೇಶದಲ್ಲಿ ಹ್ವಾಂಗ್ ಹೋ (ಹಳದಿ ನದಿ), ದೇಶದ ಮಧ್ಯಭಾಗದಲ್ಲಿ ಯಾಂಗ್‍ಟ್ಸೀ ನದಿ ಮತ್ತು ದಕ್ಷಿಣದ ಕಾಲುಭಾಗ ಪ್ರದೇಶದಲ್ಲಿ ಷೀ ಕ್ಯಾಂಗ್ ನದಿ ಹರಿಯುತ್ತವೆ.

ಹ್ವಾಂಗ್ ಹೋ (ಉದ್ದ 4843ಕಿ.ಮೀ.) ಶುಷ್ಕ ವಾಯುಗುಣ ಪ್ರದೇಶದಲ್ಲಿ ಹರಿಯುವ ನದಿ. ಚೀನದ ವಾಯವ್ಯ ಭಾಗದ ಬೆಂಗಾಡಿನಲ್ಲಿ ಹರಿದು ಒಳ ಮಂಗೋಲಿಯದ ಆರ್ಡಸ್ ಮರಳುಗಾಡಿನಲ್ಲಿ ಬೃಹತ್ ಕುಣಿಕೆಯ ಆಕಾರ ತಾಳಿ ಕೊನೆಗೆ ಅರೆಬೆಂಗಾಡುಪ್ರದೇಶವಾದ ಚೀನಾ ಬಯಲಿಗೆ ಅಡ್ಡಲಾಗಿ ಯಿನ್‍ಷಾನ್ ಮತ್ತು ಚಿನ್‍ಲಿಂಗ್ ಪರ್ವತಗಳ ನಡುವೆ ಸಾಗಿ ಸಮುದ್ರ ಸೇರುತ್ತದೆ. ನದಿ ತನ್ನ ಪ್ರವಾಹದೊಂದಿಗೆ ಮೆಕ್ಕಲು ಮಣ್ಣನ್ನು ಹೊತ್ತು ತಂದು ಆಗಾಗ್ಗೆ ಪಾತ್ರವನ್ನು ಬದಲಾಯಿಸುವುದರಿಂದ ಇದು ಭಾರಿ ಹಡಗುಗಳ ಸಂಚಾರಕ್ಕೆ ಅನುಕೂಲವಾಗಿಲ್ಲ. ಕಿರಿಯ ಹಡಗುಗಳು ಹೋನ್ಯಾನ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ, ಪಾವ್‍ಟೌ ಹಾಗೂ ಪಶ್ಚಿಮದ ಲಾಂಜೋ-ಫು ನಗರಗಳ ನಡುವೆ ಸಂಚರಿಸುತ್ತವೆ. ಹ್ವಾಂಗ್ ಹೋಗೆ ಚೀನದ ದುಃಖದ ನದಿ ಎಂಬ ಹೆಸರಿದೆ. ಕಳೆದ 3,000 ವರ್ಷಗಳಲ್ಲಿ ನದಿಯ ಅಣೆಕಟ್ಟುಗಳು 15,000 ಬಾರಿ ಒಡೆದಿವೆ ; 26 ಸಲ ಅದರ ಹರಿವು ಬದಲಾಗಿದೆ. ಚೀನ ಸರ್ಕಾರ ಕಾಲುವೆ, ಅಣೆ ಮತ್ತು ವ್ಯವಸಾಯ ಯೋಜನೆಗಳಿಂದ ನದಿಗಳನ್ನು ಹತೋಟಿಗೆ ತರಲು ಯತ್ನಿಸಿದೆ. ಹ್ವಾಂಗ್ ಹೋ ನದಿಯ ಪ್ರವಾಹನಿಯಂತ್ರಣ ಚೀನದ ಪಂಚವಾರ್ಷಿಕ ಯೋಜನೆಯ (1953-57) ಮುಖ್ಯ ಕಾರ್ಯಕ್ರಮವಾಗಿತ್ತು. ಯಾಂಗ್‍ಟ್ಸೀ ನದಿಯ ನೀರನ್ನು ಹ್ವಾಂಗ್ ಹೋ ನದಿಗೆ ತಿರುಗಿಸುವ ಯೋಜನೆಯೂ ಉಂಟು. ಹ್ವಾಂಗ್ ಹೋ ನದಿಯ ಜಲಾನಯನ ಭೂಮಿಯ ವಿಸ್ತೀರ್ಣ 12,45,131 ಚಕಿ.ಮೀ. ಯಾಂಗ್‍ಟ್ಸೀ ನದಿ (5120ಕಿ.ಮೀ.) ಚಿನ್‍ಲಿಂಗ್ ಮತ್ತು ನ್ಯಾನ್‍ಲಿಂಗ್ ಪರ್ವತಗಳ ನಡುವೆ ಮಧ್ಯಚೀನದಲ್ಲಿ ಹರಿದು ಸಮುದ್ರ ಸೇರುತ್ತದೆ. ಇದರ ಜಲಾನಯನಭೂಮಿ 1314794.82 ಚ.ಕಿ.ಮೀ. ಇದು ಪಶ್ಚಿಮ ಏಷ್ಯದ ಅತ್ಯಂತ ಹಿರಿಯ ನದಿ. ಅದಕ್ಕೆ ದಕ್ಷಿಣದಿಂದ ಬಂದು ಸೇರುವ ನದಿಗಳ ಪೈಕಿ ಷೀಯಾಂಗ್, ವೂ ಮುಖ್ಯವಾದವು. ಉತ್ತರದಿಮದ ಬಂದು ಕೂಡುವ ನದಿಗಳು ಹಾನ್, ಜಿಯಲಿಂಗ್ ಮತ್ತು ಮಿನ್. ಈ ಉಪನದಿಗಳ ಮೇಲೂ ಚೀನೀ ಸರಕುಗಳು ಸಾಗುತ್ತವೆ. ಯಾಂಗ್‍ಟ್ಸೀ ನದಿಯ ಮೇಲೆ ಸಮುದ್ರತೀರದಿಂದ 1008ಕಿ.ಮೀ. ದೂರ ಹ್ಯಾನ್‍ಕೌ ವರೆಗೆ ಕಡಲನೌಕೆಗಳು ಸಂಚರಿಸಬಹುದು. ಅವರ ಉಳಿದ 32,000ಕಿ.ಮೀ.ಗಳ ವಿವಿಧ ಜಲಮಾರ್ಗ ಹಾಗೂ ಕಾಲುವೆಗಳಲ್ಲಿ ಕಿರಿಯ ಜಹಜುಗಳು ಮತ್ತು ನಾವೆಗಳು ಸಂಚರಿಸುತ್ತವೆ.

ಷೀ ಕ್ಯಾಂಗ್ ಅಥವಾ ಪಶ್ಚಿಮದ ನದಿ (2115ಕಿ.ಮೀ.) ಯಾಂಗ್ಸ್‍ಟ್ಸೀ ಮತ್ತು ಹ್ವಾಂಗ್ ಹೋ ನದಿಗಳಿಗಿಂತ ಚಿಕ್ಕದು. ಇದರ ಜಲಾನಯನ ಭೂಮಿ (10,062,00ಚ.ಕಿ.ಮೀ.). ಇದು ದಕ್ಷಿಣ ಚೀನದ ಬೆಟ್ಟಗುಡ್ಡಗಳಿಂದ ಸೀಮಿತವಾಗಿದೆ. ಅದರ ಮುಖಭಾಗದಲ್ಲಿರುವ ಕ್ಯಾಂಟನ್ ನಗರದಿಂದ ಒಳನಾಡಲ್ಲಿ 250 ಮೈ. ದೂರ ಜಹಜುಗಳ ಸಂಚಾರವುಂಟು. ಆದರೆ ಯಾಂಗ್‍ಟ್ಸೀಯ ಉಪನದಿಗಳಂತೆ ಈ ನದಿಯ ಉಪನದಿಗಳ ಮೇಲೆ ನೌಕಾಸಂಚಾರ ಸಾಧ್ಯವಿಲ್ಲ. ಉತ್ತರ ಮಂಚೂರಿಯ ಭಾಗದಲ್ಲಿ ಅಮೂರ್ ನದಿಯನ್ನು ಸೇರುವ ಸುಂಗಾರೀ ಮತ್ತು ಅದರ ಉಪನದಿಗಳು ಎತ್ತರ ಪ್ರದೇಶಗಳಲ್ಲಿ ಹರಿಯುತ್ತವೆ. ಇವುಗಳ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ವಸಂತಕಾಲದಲ್ಲಿ ಇವುಗಳಲ್ಲಿ ಪ್ರವಾಹ ಬರುತ್ತದೆ. ಲಿಯೌ (ಉದ್ದ 1420ಕಿ.ಮೀ.) ಒಣ ನೆಲದಲ್ಲಿ ಹರಿಯುವ ನದಿ. ಶೀತ ಕಾಲದಲ್ಲಿ ಹಿಮಗಟ್ಟುತ್ತದೆ. ಹ್ವೈಹೋ (993ಕಿ.ಮೀ.) ಬೇಸಿಗೆಯಲ್ಲಿ ಪ್ರವಾಹದಿಂದ ತುಂಬಿ ಹರಿಯುವ ನದಿ.

ಚೀನದ ಬೆಟ್ಟಗುಡ್ಡಗಳು ವ್ಯವಸಾಯವನ್ನು ಸೀಮಿತಗೊಳಿಸಿದ್ದರೂ, ನದೀ ಕಣಿವೆಗಳು ಫಲವತ್ತಾಗಿವೆ. ನದಿಗಳು ನೀರಾವರಿಗೆ ಹಾಗೂ ಸರಕು ಸಾರಿಗೆಗೆ ಅನುಕೂಲವಾದವು. ಚೀನದ ಪಟ್ಟಣಗಳು ನದೀದಂಡೆಗಳ ಮೇಲೇ ಹೆಚ್ಚು. ಅಲ್ಲಿ ಜನಸಾಂದ್ರತೆಯೂ ಅಧಿಕ. ಕಡಲತೀರ : ಚೀನದ ಕಡಲತೀರ ಚೀನ-ಕೊರಿಯ ಗಡಿ ಬಳಿಯ ಯಾಲೂ ನದಿಯ ಮುಖಭಾಗದಿಂದ ಪ್ರಾರಂಭವಾಗಿ ಚೀನ-ವಿಯೆಟ್‍ನಾಂ ಗಡಿಯ ಪೈಲನ್ ನದಿಯ ಮುಖದವರೆಗೆ ಹಬ್ಬಿದೆ. ಹ್ವಾಂಗ್‍ಚೌ ಕೊಲ್ಲಿಗೆ ಉತ್ತರದಲ್ಲಿ ಕಡಲಂಚು ಹೆಚ್ಚು ಡೊಂಕಿಲ್ಲ ; ಇದು ಮರಳಿನಿಂದ ಕೂಡಿದೆ. ಈ ತೀರದಲ್ಲಿ ಚೀನದ ಪ್ರಸಿದ್ಧ ಉಪ್ಪು ತಯಾರಿಕೆ ಪ್ರದೇಶಗಳಿವೆ. ಇದು ಮೀನುಗಾರಿಕೆಗೂ ಪ್ರಸಿದ್ಧಿ. ಷ್ಯಾನ್‍ಟಂಗ್, ಲಿಯೌಡಂಗ್ ಪರ್ಯಾಯದ್ವೀಪಗಳಲ್ಲಿ ಹಲವು ಬಂದರುಗಳುಂಟು. ಹ್ಯಾಂಗ್‍ಚೌ ಕೊಲ್ಲಿಯ ದಕ್ಷಿಣಕ್ಕಿರುವ ಕಡಲ ತೀರ ಉದ್ದಕ್ಕೂ ಖಾರಿಗಳಿಂದ ಕೂಡಿದ್ದು, ಡೊಂಕಾದ್ದು. ಇಲ್ಲಿ ಬಂಡೆಗಳು ಹೆಚ್ಚು. ಈ ಭಾಗದಲ್ಲಿ ಹಲವು ದ್ವೀಪಗಳುಂಟು. ಇಲ್ಲಿ ಸ್ವಾಭಾವಿಕ ಬಂದರುಗಳೂ ಮೀನುಗಾರಿಕೆ ಕೇಂದ್ರಗಳೂ ಇವೆ. ಚೀನದ ಅತ್ಯಂತ ಮುಖ್ಯ ರೇವುಪಟ್ಟಣ ಷಾಂಗ್‍ಹೈ.

iii ವಾಯುಗುಣ : ಚೀನದ ವಾಯುಗುಣ ವೈವಿಧ್ಯಪೂರ್ಣ. ರಾಜ್ಯದ 90% ಭಾಗ ಸಮಶೀತೋಷ್ಣ ವಲಯದಲ್ಲಿದೆ. ದಕ್ಷಿಣಭಾಗದಲ್ಲಿ ಉಷ್ಣವಲಯದ ವಾಯುಗುಣ. ದೂರದ ಈಶಾನ್ಯ ಮೂಲೆಯಲ್ಲಿ ಸೈಬೀರಿಯ ವಾಯುಗುಣವಿದೆ. ಮಂಚೂರಿಯದ ಹೇಲುಂಗ್‍ಜಿಯಾಂಗ್ ಪ್ರಾಂತ್ಯದಲ್ಲಿ ಉಷ್ಣತೆ-47ಲಿ ಫ್ಯಾ. ವರೆಗೆ ಇಳಿಯುತ್ತದೆ ; ಆದರೆ ದಕ್ಷಿಣದಲ್ಲಿ ಶೀತಗಾಲವೆ ಇಲ್ಲ. ಯುನ್ಯಾನ್-ಗ್ವೇಜೋ ಮೇಲ್ನಾಡಿನ ಮಧ್ಯಭಾಗದಲ್ಲಿ ಜನವರಿ ಉಷ್ಣತೆ 40ಲಿ ಫ್ಯಾ. ಗಿಂತ ಕಡಿಮೆ ಇರುವುದಿಲ್ಲ. ಟಿಬೆಟ್‍ನಲ್ಲಿ ಸರಾಸರಿ ಉಷ್ಣತೆ 32 ಫ್ಯಾ.

ಉತ್ತರದಿಂದ ದಕ್ಷಿಣಕ್ಕೆ, ತರುವಾಯ ದಕ್ಷಿಣದಿಂದ ಉತ್ತರಕ್ಕೆ ಬೀಸುವ ಗಾಳಿಯಿಂದ ಚೀನದ ವಾಯುಗುಣ ಋತುವಿಗನುಗುಣವಾಗಿ ನಿಯಂತ್ರಿತ. ವಾಯುವಿನ ಈ ಚಲನೆ ಉಷ್ಣತೆಯಲ್ಲಿ ವ್ಯತ್ಯಾಸಗಳನ್ನು ತಂದು ಕ್ಲುಪ್ತಕಾಲಿಕ ಮಳೆಗಳನ್ನುಂಟು ಮಾಡುತ್ತದೆ. ವಾರ್ಷಿಕ ಮಳೆಯಲ್ಲಿ 50% ಬೇಸಗೆಯಲ್ಲಿ ಬೀಳುತ್ತದೆ. ಚೀನ ಸಮುದ್ರದಲ್ಲಿ ಜುಲೈಯಿಂದ ಅಕ್ಟೋಬರ್‍ವರೆಗೆ ತಲೆದೋರುವ ತುಫಾನೂ ವಾಯುಗುಣ ವ್ಯತ್ಯಾಸಗಳಿಗೆ ಕಾರಣ.

ಕ್ಯಾಂಟನ್ ಮತ್ತು ಹೈನಾನ್‍ಗಳ ಸರಾಸರಿ ವಾರ್ಷಿಕ ಮಳೆ 203ಸೆಂ.ಮೀ. ಮಂಗೋಲಿಯದ ಮಧ್ಯ ಭಾಗ ಮತ್ತು ಸಿಂಜಿಯಾಂಗ್ ಪ್ರದೇಶದ ವಾರ್ಷಿಕ ಮಳೆ

ಚೀನದಲ್ಲಿ 8 ಪ್ರಮುಖ ವಾಯುಗುಣ ಪ್ರದೇಶಗಳಿವೆ : 1. ಉತ್ತರ ಮಂಚೂರಿಯ : ಈ ಭಾಗ ಕಣಿವೆ ಮತ್ತು ಬೆಟ್ಟಗಳಿಂದ ಕೂಡಿದ ಅತಿ ಶೀತ ಪ್ರದೇಶ. ಬೇಸಗೆ ಕಡಿಮೆ. ವ್ಯವಸಾಯಕ್ಕೆ ಅನುಕೂಲವಾಗಿಲ್ಲ. ಹಿಮಗಾಲ ಹೆಚ್ಚು. ಬೇಸಗೆ ವಾಯುಗುಣ ಹಿತಕರ. ವಾರ್ಷಿಕ ಮಳೆ 50.6ಸೆಂ.ಮೀ. 2. ವಾಯುವ್ಯ ಚೀನ : ಹುಲ್ಲುಗಾವಲು, ಮರುಭೂಮಿ ಪ್ರದೇಶ. ಇದು ಕ್ಯಾನ್ಸೂ, ಉತ್ತರ ಷೆನ್‍ಸೀ ಮತ್ತು ಒಳಮಂಗೋಲಿಯ ಭಾಗಗಳನ್ನೊಳಗೊಂಡಿದೆ. ಶುಷ್ಕ ವಾಯುಗುಣ. ವಾರ್ಷಿಕ ಮಳೆ ಸು. 50.6ಸೆಂ.ಮೀ. ಕೆಲವು ಕಡೆ 25.3ಸೆಂ.ಮೀ. ಬೇಸಗೆಯಲ್ಲಿ ಮಳೆ. 3. ಉತ್ತರ ಚೀನ : ಈ ಪ್ರದೇಶಕ್ಕೆ ಮಂಚೂರಿಯ ಬಯಲುನಾಡಿನ ದಕ್ಷಿಣ ಭಾಗ, ಜಿಹೋಲ್ ಮತ್ತು ಟೈಹಾಂಗ್ ಪರ್ವತಗಳು, ಲೊಯೆಸ್ ಮೇಲ್ನಾಡಿನ ಬಹುಭಾಗ ಸೇರಿವೆ. ವ್ಯವಸಾಯಕ್ಕೆ ಅನುಕೂಲವಾದ ಕಾಲ 150-225 ದಿನಗಳು. ಮಧ್ಯ ಮಂಚೂರಿಯ ಮತ್ತು ಜೆಹೋಲ್ ಪರ್ವತ ಭಾಗಗಳಲ್ಲಿ ವಾರ್ಷಿಕ ಮಳೆ 75.9ಸೆಂ.ಮೀ. ದಕ್ಷಿಣ ಮತ್ತು ವಾಯುವ್ಯದಲ್ಲಿ 36ಸೆಂ.ಮೀ. ಕೆಲವು ಕಡೆ ಅತಿವೃಷ್ಟಿ. ವಾಯುಗುಣ ಹಿತಕರವಾಗಿದ್ದರೆ ಬೆಳೆ ಉತ್ತಮ ; ಇಲ್ಲವಾದರೆ ನಷ್ಟ. 4. ಯಾಂಗ್‍ಟ್ಸೀ ಕಣಿವೆ : ಮಧ್ಯಚೀನದ ಈ ಭಾಗ ದಕ್ಷಿಣಕ್ಕೆ ಹ್ಯಾಂಗ್‍ಚೌ ಕೊಲ್ಲಿಯವರೆಗೆ ಹಬ್ಬಿದೆ. ವ್ಯವಸಾಯಕ್ಕೆ 225-240 ದಿನಗಳು ಅನುಕೂಲ. ಚಳಿಗಾಲದಲ್ಲಿ ಕೊರೆಯುವ ಚಳಿ, ಹಿಮ; ಬೆಸಗೆಯಲ್ಲಿ ಬಿಸಿಲ ತಾಪ. ಜೂನ್-ಜುಲೈಗಳಲ್ಲಿ ಮುಂಗಾರುಮಳೆ. ವಾರ್ಷಿಕಮಳೆ 114-203ಸೆಂ.ಮೀ. 5. ದಕ್ಷಿಣ ಚೀನ : ಈ ವಲಯದ ಆಗ್ನೇಯ ತೀರ ಮತ್ತು ದಕ್ಷಿಣದ ಬೆಟ್ಟ ಪ್ರದೇಶಗಳಲ್ಲಿ ಚಳಿಗಾಲ ಯಾಂಗ್‍ಟ್ಸೀ ಕಣಿವೆಯಲ್ಲಿರುವುದಕ್ಕಿಂತ ಹಿತಕರವಾಗಿರುತ್ತದೆ. ಪರ್ವತ ಪ್ರದೇಶ ಹಿಮದಿಂದ ಕೂಡಿರುತ್ತದೆ. ತಗ್ಗುನಾಡಿನಲ್ಲಿ ವ್ಯವಸಾಯಕ್ಕೆ ಇಡೀ ವರ್ಷ ಅನುಕೂಲ ಬೇಸಗೆ ಕಾಲ ದೀರ್ಘ : ಬಿಸಿಲು ಹೆಚ್ಚು. ಮೇಲ್ನಾಡಿನಲ್ಲಿ ಮತ್ತು ತೀರಪ್ರದೇಶಗಳಲ್ಲಿ ಆಗ ತಂಪು ಹವೆ ಇರುತ್ತದೆ. ಮೇ, ಜೂನ್, ಜುಲೈಗಳಲ್ಲಿ 126-203ಸೆಂ.ಮೀ. ಮಳೆಯಾಗುತ್ತದೆ. ಕಡಲ ತೀರದಲ್ಲಿ ಬೇಸಗೆ ಮತ್ತು ವಸಂತ ಕಾಲಗಳಲ್ಲಿ ಬೀಸುವ ತುಫಾನು ವಿನಾಶಕಾರಿ. 6. ಸಚ್ವಾನ್ ಮತ್ತು ಉತ್ತರ ಗ್ವೇಜೋ ಪ್ರದೇಶ : ಇಲ್ಲಿ ವರ್ಷಪೂರ್ತಿ ಬೇಸಾಯ. ಎತ್ತರ ಪ್ರದೇಶಗಳಲ್ಲಿ ಹಿಮ ಬೀಳುತ್ತದೆ. ಚಿನ್‍ಲಿಂಗ್ ಪರ್ವತ ಉತ್ತರದ ಶೀತಮಾರುತಗಳನ್ನು ಹಾಗೂ ಟಿಬೆಟ್ ಪ್ರಸ್ಥಭೂಮಿಯಿಂದ ಬಂದ ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿಯನ್ನು ತಡೆದು ರಕ್ಷಣೆ ನೀಡುತ್ತದೆ. ಚಳಿಗಾಲ ತೀವ್ರ, ಉಷ್ಣತೆ ; ಸೂರ್ಯ ಕಾಣಿಸಿದಷ್ಟು ಮೋಡ. ಬೇಸಗೆ ಹಿತಕರವಾಗಿರುತ್ತದೆ. ವಾರ್ಷಿಕ ಮಳೆ ಉತ್ತರದಲ್ಲಿ 75ಸೆಂ.ಮೀ. ದಕ್ಷಿಣದಲ್ಲಿ 132ಸೆಂ.ಮೀ.

7. ನೈಋತ್ಯ ಚೀನ : ಗ್ವೇಜೋ ಪ್ರಾಂತ್ಯದ ಪಶ್ಚಿಮ ಮತ್ತು ದಕ್ಷಿಣಭಾಗ ಹಾಗೂ ಯುನ್ಯಾನ್ ಪ್ರಸ್ಥಭೂಮಿಗಳಲ್ಲಿ ಚೀನದ ಇತರ ಭಾಗಗಳಲ್ಲಿ ಇಲ್ಲದ ಅತ್ಯಂತ ಹಿತಕರವಾದ ಹವಾಗುಣವಿದೆ. ಈ ಪ್ರದೇಶ ಸಮುದ್ರಮಟ್ಟಕ್ಕೆ ಹೆಚ್ಚು ಎತ್ತರದಲ್ಲಿರುವುದರಿಂದ ಉಷ್ಣತೆ ಕಡಿಮೆ. ಇಡೀ ವರ್ಷದಲ್ಲಿ ವ್ಯವಸಾಯ ಸಾಧ್ಯ. ಚಳಿಗಾಲ ಹಿತಕರ ; ಬೇಸಗೆ ತಂಪು. ಜುಲೈ ತಿಂಗಳಲ್ಲಿ ಮಳೆ ಹೆಚ್ಚು. ವಾರ್ಷಿಕ ಮಳೇ ಉತ್ತರದಲ್ಲಿ 100ಸೆಂ.ಮೀ. ; ದಕ್ಷಿಣದಲ್ಲಿ 132ಸೆಂ.ಮೀ. ಮೇಘಸಾಲು ಮತ್ತು ನೀಲಾಕಾಶಕ್ಕೆ ಯುನ್ನಾನ್ ಪ್ರಾಂತ್ಯ ಪ್ರಸಿದ್ಧ. ಅದನ್ನು ದಕ್ಷಿಣದ ಮೇಘನಾಡು ಎಂದು ಕರೆಯುತ್ತಾರೆ. 8 ಉಷ್ಣೀಯ ದಕ್ಷಿಣ ತೀರ : ಹೈನಾನ್ ದ್ವೀಪ ಮತ್ತು ಚೀನದ ದಕ್ಷಿಣ ತೀರ ಪ್ರದೇಶ ಈ ವಲಯಕ್ಕೆ ಸೇರಿವೆ. ಇಲ್ಲಿಯದು ಉಷ್ಣವಲಯದ ವಾಯುಗುಣ. ಇಡೀ ವರ್ಷ ವ್ಯವಸಾಯ ನಡೆಯುತ್ತದೆ. ಇಡೀ ವರ್ಷ ಉಷ್ಣತೆ ಹೆಚ್ಚು. ಎಲ್ಲ ತಿಂಗಳೂ ಮಳೆಯಾಗುತ್ತದೆ. ಮೇ-ಆಗಸ್ಟ್ ನಡುವೆ ಹೆಚ್ಚು ಮಳೆ. ವಾರ್ಷಿಕ ಮಳೆ 114-215ಸೆಂ.ಮೀ. ಇಡೀ ವರ್ಷ ಬತ್ತ ಬೆಳೆಯಬಹುದು.

ಸಸ್ಯಗಳು : ಚೀನದಲ್ಲಿ ಉತ್ತರದ ಶಂಕುಪರ್ಣಿ ನಿತ್ಯಹಸಿರು ಗಿಡಗಳಿಂದ ಹಿಡಿದು ದಕ್ಷಿಣದ ಮಳೆಗಾಡುಗಳವರೆಗೆ, ಬಂಜರುನಾಡ ಕುರುಚಲು ಗಿಡಗಳಿಂದ ಹಿಡಿದು ಮರುಭೂಮಿಯ ಮತ್ತು ಉಷ್ಣವಲಯದ ಹವಳ ದ್ವೀಪೀಯ ಸಸ್ಯಗಳವರೆಗೆ ಅನೇಕ ಸ್ವಾಭಾವಿಕ ಗಿಡಮರಗಳಿವೆ. ಇಡೀ ಚೀನವನ್ನು ಎರಡು ಸಸ್ಯಗಾವಲುಗಳನ್ನಾಗಿ ವಿಂಗಡಿಸಬಹುದು. ವಾಯವ್ಯದಿಂದ ದೇಶದ ಅರ್ಧಭಾಗ ಹುಲ್ಲುಗಾವಲು ಹಾಗೂ ಮರಳ್ಗಾಡ ಸಸ್ಯಗಳಿಂದ ಕೂಡಿದೆ. ದೇಶದ ಮಧ್ಯಭಾಗದಿಂದ ಆಗ್ನೇಯ ಅಂಚಿನವರೆಗೆ ಅರಣ್ಯಗಳಿವೆ. ಚೀನದ ಅರಣ್ಯಗಳಲ್ಲಿ ಆರು ಬಗೆ : 1. ಗಟ್ಟಿ ಮರಗಳ ಅರಣ್ಯಗಳು ಈಶಾನ್ಯ ಮತ್ತು ಉತ್ತರ ಪ್ರಾಂತ್ಯಗಳಲ್ಲಿವೆ. ಅಲ್ಲಿಯ ಮುಖ್ಯ ಮರಗಳು ಲಿನ್‍ಡನ್ ಮತ್ತು ಬೆರ್ಚ್. ಅವುಗಳೊಂದಿಗೆ ಅಲ್ಲಲ್ಲಿ ಬಿಳಿ ಪೈನ್, ಓಕ್ ಮತ್ತು ಅಕ್ಷೋಟ (ವಾಲ್‍ನಟ್) ಮರಗಳಿವೆ. 2. ಉತ್ತರ ಪ್ರಾಂತ್ಯಗಳ ಪರ್ಣಪಾತಿ ಸಸ್ಯಗಳ ಅರಣ್ಯಗಳು : ಇಲ್ಲಿಯ ಮರಗಳು ಆಷ್, ಹಾರ್ನ್‍ಬೀಮ್, ಎಲ್ಮ್, ಅಕ್ಷೋಟ ಮತ್ತು ಹ್ಯಾಕ್‍ಬೆರಿ. ಪರ್ವತಶಿಖರಗಳಲ್ಲಿ ಪೈನ್ ಗಿಡಗಳು ಹೇರಳ ; ಇಳಿಭೂಮಿಗಳಲ್ಲಿ ಹುಲ್ಲುಗಾವಲು, ಪೊದರುಗಳು, ಕಾಡುಗುಲಾಬಿ ಮತ್ತು ಲಿಲಾಕ್ 3. ಯಾಂಗ್‍ಟ್ಸೀ ಕಣಿವೆಯ ಅರಣ್ಯಗಳಲ್ಲಿ ಅನೇಕ ಬಗೆಯ ನಿತ್ಯಹಸಿರು ಗಿಡಗಳಿವೆ. 4. ದಕ್ಷಿಣ ಮತ್ತು ನೈಋತ್ಯ ಪ್ರಾಂತ್ಯಗಳಲ್ಲಿ ಹಾಗೂ ಟೈವಾನ್ ಮತ್ತು ಹೈನಾನ್ ದ್ವೀಪಗಳಲ್ಲಿ ನಿತ್ಯ ಹಸಿರಿನ ಓಕ್ ಮರಗಳ ಅರಣ್ಯಗಳಿವೆ. ಯಾಂಗ್‍ಟ್ಸೀ ನದಿಯ ದಕ್ಷಿಣ ಪ್ರದೇಶಗಳಲ್ಲಿ ಬಿದಿರು ಮೆಳೆಗಳು ಹೆಚ್ಚು. 5. ಯುನ್ಯಾನ್ ಭಾಗದಿಂದ ಹೈನಾನ್ ಮತ್ತು ಟೈವಾನ್ ದ್ವೀಪಗಳವರೆಗೆ ಮಳೆಗಾಡುಗಳಿವೆ. 6. ಷಿಂಗಾನ್ ಪರ್ವತಶ್ರೇಣಿಗಳಲ್ಲಿ ಶಂಕುಪರ್ಣಿ ಮರಗಳು ಹೆಚ್ಚು. ಕೊರಿಯ ಗಡಿಯ ಪ್ರದೇಶದಲ್ಲಿ ಸ್ಪ್ರೂಸ್ ಮತ್ತು ಫರ್ ಮರಗಳ ದಟ್ಟ ಅರಣ್ಯಗಳಿವೆ. ಈಶಾನ್ಯ ಪ್ರಾಂತ್ಯಗಳ ಪಶ್ಚಿಮದಿಂದ ಟಿಯೆನ್ ಷಾನ್ ಪರ್ವತಗಳವರೆಗೆ ವಿಶಾಲ ಹುಲ್ಲುಗಾವಲು ; ಅವುಗಳ ಮಧ್ಯ ಉಪ್ಪುನೀರಿನ ಸರೋವರಗಳು, ಕಲ್ಲು ಭೂಮಿ, ಮರಳುಗುಡ್ಡೆಗಳು, ಮರಳ್ಗಾಡ ಊಟೆಗಳಿರುವ ಕಡೆ ಎಲ್ಮ್ ಗಿಡಗಳು ಮತ್ತು ಹಣ್ಣಿನ ತೋಟಗಳು ಇವೆ.

v ಪ್ರಾಣಿಜೀವನ : ಪರ್ವತಶ್ರೇಣಿ ಮತ್ತು ದಟ್ಟ ಅರಣ್ಯಗಳ ವೈವಿಧ್ಯದಿಂದ ಇತರ ಕಡೆಗಳಲ್ಲಿ ಕಾಣದಂಥ ಅನೆಕ ಪ್ರಾಣಿಗಳು ಚೀನದಲ್ಲಿ ಉಳಿದುಬಂದಿವೆ. ಯಾಂಗ್‍ಟ್ಸೀ ನದಿಯ ಹಿರಿಯ ರೆಕ್ಕೆ ಮೀನು, ಮಧ್ಯಚೀನದ ಪೂರ್ವಭಾಗದ ಕಿರು ಜಾತಿಯ ಮೊಸಳೆ ಮತ್ತು ಪಶ್ಚಿಮ ಚೀನದ ಅಗ್ನಿ ಮಕರ ಕೆಲವು ಉದಾಹರಣೆಗಳು. ಟಿಬೆಟ್ ಅಂಚಿನ ಕಣಿವೆಗಳಲ್ಲಿ ದೊಡ್ಡ ಗಾತ್ರದ ಪಂಡ ಇದೆ. ದೇಶದ ಎಲ್ಲ ಪರ್ವತ ಪ್ರದೇಶಗಳಲ್ಲಿ ಮೇಕೆ-ಜಿಂಕೆ, ಬಣ್ಣ ಬಣ್ಣದ ಹಕ್ಕಿಗಳು ಇವೆ. ಕಾರ್ಪ್ ಮತ್ತು ಕ್ಯಾಟ್‍ಫಿಷ್ ಜಾತಿಯ ಮೀನುಗಳಿಗೆ ಚೀನ ತವರೆಂಬ ಅಭಿಪ್ರಾಯವಿದೆ.

ಚೀನದ ವಿವಿಧ ಪ್ರದೇಶಗಳಲ್ಲಿ ಒಂದೇ ಜಾತಿಯ ಪ್ರಾಣಿಗಳ ಲಕ್ಷಣಗಳಲ್ಲಿ ವ್ಯತ್ಯಾಸವುಂಟು. ಮಂಗೋಲಿಯ ಮರಳ್ಗಾಡಿನ ಮೂಲಕ ಮಧ್ಯ ಏಷ್ಯದಿಂದ ಬಂದ ಪ್ರಾಣಿಗಳು ಉತ್ತರಚೀನದ ಹುಲ್ಲುಗಾವಲುಗಳಲ್ಲಿವೆ. ಪರ್ವತಶ್ರೇಣಿಗಳಲ್ಲಿಯ ಪ್ರಾಣಿಗಳಲ್ಲಿ ಹಳೆಯ ಪ್ರಪಂಚದ (ಉತ್ತರಾರ್ಧಗೋಳದ ಉತ್ತರಭಾಗದ) ಪ್ರಾಚೀನ ಪ್ರಾಣಿಗಳ ಕುರುಹುಗಳುಂಟು. ಚೀನದ ದಕ್ಷಿಣದಲ್ಲಿ ಉಷ್ಣವಲಯದ ಉರಗಗಳು, ಉಭಯಚರ ಜೀವಿ ಕಶೇರುಕಗಳು, ಬಗೆಬಗೆಯ ಡೇಗೆ ಮತ್ತು ಇತರ ಪಕ್ಷಿಗಳು ಮತ್ತು ಸಸ್ತನಿಗಳಿವೆ. ಒಳ ಮಂಗೋಲಿಯ, ಕ್ಯಾನ್ಸೂ, ಷಿನ್‍ಜಿಯಾಂಗ್, ಜಿಂಗ್‍ಹೈ ಪ್ರಾಂತ್ಯದಲ್ಲಿ ಚೌರಿಮೃಗ ಮತ್ತು ಒಂಟೆ ಹೆಚ್ಚು. ಚೀನದಲ್ಲಿ ಸು. ಹತ್ತು ಲಕ್ಷ ಒಂಟೆಗಳಿವೆ. ಒಂಟೆ ತುಪ್ಪಟ ಸರಬರಾಜು ಮಾಡುವ ರಾಷ್ಟ್ರಗಳಲ್ಲಿ ಚೀನ ಮುಖ್ಯ.

ಜನಜೀವನ : ಪ್ರಪಂಚದ ಜನಸಂಖ್ಯೆಯಲ್ಲಿ ಕಾಲುಭಾಗದಷ್ಟು ಜನ ಚೀನದಲ್ಲಿ ವಾಸಿಸುತ್ತಾರೆ. ಜನಸಂಖ್ಯೆಯಲ್ಲಿ ಇದು ಪ್ರಪಂಚದ ರಾಷ್ಟ್ರಗಳಲ್ಲಿ ಪ್ರಥಮ. ಚೀನದಲ್ಲಿ ವಿವಿಧ ಮಾನವ ಬುಡಕಟ್ಟುಗಳಿವೆ. ಅವುಗಳಲ್ಲಿ ಪ್ರಧಾನವಾದ್ದು ಹನ್ (ಹೂಣ) ಮೂಲಚೀನಿ ಬುಡಕಟ್ಟು. ಇದಲ್ಲದೆ ಚೀನದಲ್ಲಿ 45 ಅಲ್ಪಸಂಖ್ಯಾತ ಬುಡಕಟ್ಟುಗಳುಂಟು. ಆದರೆ ಮೂಲಚೀನೀಯರೊಂದಿಗೆ ಹೋಲಿಸಿದರೆ ಈ ಅಲ್ಪಸಂಖ್ಯಾತುಡಕಟ್ಟುಗಳ ಜನರ ಸಂಖ್ಯೆ ತೀರ ಕಡಿಮೆ, ಚೀನದ ಒಟ್ಟು ಪ್ರದೇಶದ 2/3 ಭಾಗದಲ್ಲಿ ಚೀನೀಯರು ಮತ್ತು ಉಳಿದ 1/3 ಭಾಗದಲ್ಲಿ ಅಲ್ಪಸಂಖ್ಯಾತ ಬುಡಕಟ್ಟುಗಳ ಜನರು ಹರಡಿದ್ದಾರೆ. ರಷ್ಯದಂತೆ ಸಮತಾವಾದಿ ಚೀನವೂ ಅಲ್ಪಸಂಖ್ಯಾತ ಬುಡಕಟ್ಟುಗಳಿಗೆ ಸ್ವಯಮಾಡಳಿತ ಪ್ರದೇಶಗಳನ್ನು ಕಲ್ಪಿಸಿದೆ.

ಚೀನೀ ಜನರ ಮೂಲ ನೆಲೆ ಹ್ವಾಂಗ್ ಹೋ ಕಣಿವೆ ; ಅದರಲ್ಲೂ ಕ್ಯಾನ್ಸೂ, ಷೆನ್‍ಸೀ ಮತ್ತು ಚೀನೀ ಮಹಾಬಯಲು. ಯಾಂಗ್‍ಟ್ಸೀ, ಚೂ ಮತ್ತು ಮಿಂಗ್ ನದಿಗಳ ಕಣಿವೆUಳಲ್ಲಿ ಮಿಯೌ ಜನರಿದ್ದರು. ಕೌಷಾನ್‍ಗಳು ಟೈಟಾನ್ ದ್ವೀಪದಲ್ಲೂ ಲೀಗಳು ಹೈನಾನ್ ದ್ವೀಪದಲ್ಲೂ ಇದ್ದರು. ವಾಯುವ್ಯ ಮತ್ತು ಈಶಾನ್ಯ ಭಾಗದ ಅಲೆಮಾರಿ ಜನರ ದಾಳಿಗಳಿಗೆ ಚೀನ ಪದೇಪದೇ ತುತ್ತಾಗಿದೆ. 13 ಮತ್ತು 14ಶತಮಾನಗಳಲ್ಲಿ ನಾಗರಿಕತೆಯ ಪರಾಕಾಷ್ಠೆ ಮುಟ್ಟಿದ್ದ ಚೀನ ರಾಜ್ಯವನ್ನು ಮಂಗೋಲರು ಗೆದ್ದರು. ತರುವಾಯ 1664 ರಲ್ಲಿ ಮಂಚು ಜನ ಆಕ್ರಮಿಸಿಕೊಂಡರು. ಅಷ್ಟು ನಾಗರಿಕರಲ್ಲದ ಆಕ್ರಮಣಕಾರರು ಚೀನೀಯರೊಂದಿಗೆ ಬೆರೆತರೂ ಮೂಲಚೀನೀಯರು ತಮ್ಮ ವಿಶಿಷ್ಟ ನಾಗರಿಕತೆಯನ್ನು ಕಳೆದುಕೊಳ್ಳಲಿಲ್ಲ. ತಮ್ಮ ಹಿಂದಿನ ನೆಲೆಗಳ ಅಂಚಿನಲ್ಲೆ ಚೀನೀಯರು ಅಪ್ಪಟ ಚೀನೀ ರಾಜ್ಯವನ್ನು ಸ್ಥಾಪಿಸಿಕೊಂಡರು. ರಾಷ್ಟ್ರದ ಅಲ್ಪ ಸಂಖ್ಯಾತ ಬುಡಕಟ್ಟುಗಳ ಜನ ದೇಶದ ಪರಿಧಿಗಳಲ್ಲಿ ನೆಲೆಸಿದರು. ಇವರಲ್ಲಿ ಕೆಲವು ಸಂಘಟಿತ ಸಮುದಾಯಗಳಿವೆ ; ಇನ್ನು ಕೆಲವರು ಸಣ್ಣ ತಂಡಗಳಾಗಿ ಹರಡಿಕೊಂಡಿದ್ದಾರೆ.

ದೇಶದ ಪರಿಧಿಗಳಲ್ಲಿಯ ಅಲ್ಪ ಸಂಖ್ಯಾತ ಬುಡಕಟ್ಟುಗಳು ಹೊರಗಿನ ಸಂಸ್ಕøತಿಯನ್ನು ಚೀನಕ್ಕೆ ತರಲು ನೆರವಾಗಿದೆ. ಉದಾಹರಣೆಗೆ : ಮೀಗರ್ ಜನ ಭಾರತದಿಂದ ಬಂದ ಬೌದ್ಧಮತವನ್ನು ಹರಡಲು ಪ್ರಮುಖ ಪಾತ್ರವಹಿಸಿದರು ; ಕಲ್ಲುಂಗಡಿ, ಕರಬೂಜ, ದ್ರಾಕ್ಷಿ, ಸೌತೆ, ಕ್ಯಾರೆಟ್, ಬೆಳ್ಳುಳ್ಳಿ ವ್ಯವಸಾಯವನ್ನು ರೂಢಿಸಿದರು. ಇವರ ನೆಲೆ ಚೀನದ ಪಶ್ಚಿಮ ಅಂಚು. ಕ್ರಿ. ಪೂ. 1ನೆಯ ಶತಮಾನದಲ್ಲಿ ರೇಷ್ಮೆ ರಸ್ತೆಯ ಮೂಲಕ ಸಂಸ್ಕøತಿಗಳು ಬೆಸೆದವು. ಭಾಗಶಃ ಅರಬ್ಬಿ ಬುಡಕಟ್ಟಿಗೆ ಸೇರಿದ ಹುಯೀ ಜನರು ಚೀನದ ವಿಜ್ಞಾನಿಗಳು ಮತ್ತು ತಂತ್ರಜ್ಞರು. ಇವರು ಪೀಕಿಂಗ್ ನಗರದಲ್ಲಿ ಖಗೋಳ ಸಮೀಕ್ಷಾ ಮಂದಿರವನ್ನು ಕಟ್ಟಿ ಖಗೋಳಶಾಸ್ತ್ರಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ವೀಗರ್ ಜನರ ಮೂಲಪುರಷರಾದ ಷಿಯುಂಗ್‍ನು ಜನ ಕಿ. ಪೂ. 2ನೆಯ ಶತಮಾನದಲ್ಲಿ ವ್ಯವಸಾಯಕ್ಕೆ ಪ್ರಾಣಿಗಳನ್ನು ಬಳಕೆಗೆ ತಂದರು.

ಚೀನದಲ್ಲಿ ಚೀನೀ-ಟಿಬೆಟ್ ಮತ್ತು ಅಲ್ಟಾಯಿಕ್ ಎಂಬ ಎರಡು ಪ್ರಮುಖ ಭಾಷಾ ಕುಲಗಳಿವೆ. ಚೀನೀ-ಟಿಬೆಟ್ ಕುಲವೇ ದೊಡ್ಡದು.

ಚೀನದ ಜನ ಪಶ್ಚಿಮ ಕರಾವಳಿ, ಪೂರ್ವ ಹಾಗೂ ಆಗ್ನೇಯ ನದಿ ಬಯಲು ಮತ್ತು ತಗ್ಗುನಾಡಿನಲ್ಲಿ ಒತ್ತಾಗಿ ಜೀವಿಸುತ್ತಾರೆ. ದೇಶದ ಸರಾಸರಿ ಜನಸಾಂದ್ರತೆ 2.5ಚ.ಕಿ.ಮೀ.ಗೆ 180. ಪಶ್ಚಿಮ ಬೆಂಗಾಡಿನಲ್ಲಿ ಜನ ಕಡಿಮೆ. ಅಲ್ಲಿ ಜನಸಾಂದ್ರತೆ 2.5ಚ.ಕಿ.ಮೀ.ಗೆ 91. ಜಿಂಗ್‍ಹೈ ಮತ್ತು ಷಿನ್‍ಜಿಯಾಂಗ್‍ಗಳಲ್ಲಿ 2.5ಚ.ಕಿ.ಮೀ.ಗೆ 4.7-6.3 ರಷ್ಟು ಕಡಿಮೆ. ಯಾಂಗ್‍ಟ್ಸೀ ನದಿಯ ದಕ್ಷಿಣಭಾಗ ಅತ್ಯಂತ ಹೆಚ್ಚು ಜನಸಾಂದ್ರತೆಯಿಂದ ಕೂಡಿದ್ದು. ಅಲ್ಲಿ ಜಿಯಾಂಗ್‍ಸೀ ಪ್ರಾಂತ್ಯದಲ್ಲಿ 2.5ಚ.ಕಿ.ಮೀ.ಗೆ 1,560 ಮಂದಿ ಇದ್ದಾರೆ. ಪೂರ್ವಕರ ನೆಲೆಯನ್ನು ಬಿಟ್ಟು ಹೋಗಬಾರದೆಂಬ ಹಳೆಯ ನಂಬಿಕೆ ಜನಸಾಂದ್ರತೆಗೆ ಒಂದು ಕಾರಣ. ಈಗ ಜನ ಇತರ ಪ್ರದೇಶಗಳಲ್ಲಿ ಹರಡುತ್ತಿದ್ದಾರೆ. ಈಶಾನ್ಯ, ವಾಯವ್ಯ ಹಾಗೂ ಒಳಮಂಗೋಲಿಯ ನಗರಗಳಲ್ಲಿ ಜನ ಹೆಚ್ಚುತ್ತಿರುವುದು ಕಂಡುಬಂದಿದೆ.

ಚೀನೀಯರು ಮಲಯ, ಫಿಲಿಪೀನ್ಸ್, ಜಾವ, ಇಂಡೋನೇಷ್ಯ, ವಿಯೆಟ್ನಾಮ್, ಬರ್ಮ, ಯೂರೋಪ್, ಅಮೆರಿಕ ಮೊದಲಾದ ಭಾಗಗಳಲ್ಲಿ ವಲಸೆಹೋಗಿದ್ದಾರೆ. 1963ರಲ್ಲಿ ಹೊರದೇಶಗಳಲ್ಲಿದ್ದ ಚೀನೀಯರ ಸಂಖ್ಯೆ ಯೂರೋಪ್ 20,586, ಆಫ್ರಿಕ 42,924, ಓಷಿಯಾನಿಯ 49,492 ಅಮೆರಿಕ ಖಂಡಗಳು 4,44,198 ಮತ್ತು ಏಷ್ಯ 1,58,59,820. ಇದ್ದು ಈಗ ಮತ್ತಷ್ಟು ಹೆಚ್ಚಿದೆ.

ii ಪ್ರಾಂತ್ಯಗಳು : ಚೀನದ ಪ್ರಾಂತ್ಯಗಳು, ಅವುಗಳ ವಿಸ್ತೀರ್ಣ ಮತ್ತು ಆಡಳಿತಕೇಂದ್ರಗಳನ್ನು ಕುರಿತ ವಿವರಗಳನ್ನು ಮುಂದೆ ಕೊಟ್ಟಿದೆ.

         ವಿಸ್ತೀರ್ಣ

ಪ್ರಾಂತ್ಯಗಳು (ಸಾವಿರ ಕಿಮೀ ಗಳಲ್ಲಿ) ಆಡಳಿತ ಕೇಂದ್ರ

   1           2          3

ಸಚ್‍ವಾನ್ 569.0 ಚಂಗ್‍ಡೂ ಷಚಯಾನ್‍ಟಂಗ್ 153.3 ಚಿಂಗ್‍ಡೌ ಹೋನ್ಯಾನ್ 167.0 ಜಂಗ್‍ಜೋ ಜಿಯಾಂಗ್‍ಸೂ 102.6 ನ್ಯಾನ್‍ಕಿಂಗ್ ಹೋಪೇ 202.7 ಟಿನ್‍ಟ್ಸಿನ್ ಗ್ವಾಂಗ್‍ಡುಂಗ್ 231.4 ಕ್ಯಾಟನ್ ಹ್ಯೂನಾನ್ 210.5 ಚಾಂಗ್‍ಷಾ ಅನ್‍ಹ್ವೇ 139.9 ಹೋಫೀ ಜಜಿಯಾಂಗ್ 101.8 ಹ್ಯಾಂಗ್‍ಚೌ ಲಿಯೌನಿಂಗ್ 151.0 ಷನ್‍ಯಾಂಗ್ ಯುನ್ಯಾನ್ 436.2 ಕುನ್‍ಮಿಂಗ್ ಜಿಯಾಂಗ್‍ಸೀ 164.8 ನಾನ್‍ಚಾಂಗ್ ಷೆನ್‍ಸೀ 195.8 ಷೀಯಾನ್ ಹೇಲುಂಗ್‍ಜಿಯಾಂಗ್ 563.6 ಹಾರ್ಬಿನ್ ಗ್ವೇಜೋ 174.0 ಗ್ವೇಯಾಂಗ್ ಷಾನ್‍ಸೀ 157.1 ಟೈಯುವಾನ್ ಫೂಕೈನ್ 123.1 ಫೂಚೌ ಕೀರಿನ್ 187.1 ಚಾಂಗ್‍ಚುನ್ ಕ್ಯಾನ್ಸೂ 366.5 ಲಾಂಜೋ ಜಿಂಗ್‍ಹೈ 721.0 ಷೀನಿಂಗ್

ಸ್ವಯಮಾಡಳಿತ ಪ್ರದೇಶಗಳು ಗ್ವಾಂಗ್‍ಸೀ 220.4 ನ್ಯಾನಿಂಗ್ ಒಳಮಂಗೋಲಿಯ 1,177.5 ಹೂಹೆಹಾಟ್ ಷಿನ್‍ಜಿಯಾಂಗ್ 1,646,9 ಊರೂಮ್‍ಜಿ ನಿಂಗ್‍ಷಿಯಾ 66.4 ಯಿಂಚ್ವಾನ್ ಟಿಬೆಟ್ 1,221.6 ಲಾಸಾ

ವಿಶೇಷ ಪೌರಾಡಳಿತ ಪ್ರದೇಶಗಳು ಪೀಕಿಂಗ್ 7.1 - - - ಷಾಂಗ್‍ಹೈ 5.8 - - - ಸಂಪ್ರದಾಯಬದ್ಧ ಚೀನ 20ನೆಯ ಶತಮಾನದಲ್ಲಿ ತೀವ್ರ ಸಾಂಸ್ಕøತಿಕ ಕ್ರಾಂತಿಗೆ ಒಳಗಾಯಿತು. ಅನ್ಯ ಸಂಸ್ಕøತಿ ಮತ್ತು ವಿದೇಶಿ ಸರಕುಗಳ ಬಹಿಷ್ಕಾರ, ರಾಷ್ಟ್ರೀಯ ಸರ್ಕಾರ ಮತ್ತು ಸಮತಾವಾದಿ ಸರ್ಕಾರಗಳ ನಿಯಂತ್ರಣದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಇವುಗಳಿಂದ ಜನಜೀವನ ಮಾರ್ಪಟ್ಟಿದೆ. ಅನೂಚಾನವಾಗಿ ಬಂದ ಪದ್ಧತಿಗಳು ಮತ್ತು ನೈತಿಕ ನಿಯಮಗಳು ಬದಲಿಸಿವೆ. ಕಾನ್‍ಫ್ಯೂಷನ್ ದರ್ಶನಕ್ಕೆ ಅನುಗುಣವಾದ ಕುಟುಂಬ ವ್ಯವಸ್ಥೆ, ಕುಟುಂಬದ ಹಿರಿಯರಲ್ಲಿ ವಿಧೇಯತೆ, ವಿವಾಹ ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಹಳೆಯ ಆಚರಣೆಗಳು, ಪಿತೃಪೂಜೆ, ನಿಯತಕಾಲಗಳಲ್ಲಿ ಕುಟುಂಬ ಸದಸ್ಯರ ಮಿಲನ-ಇವೆಲ್ಲ ಅದೃಶ್ಯವಾಗಿವೆ; ಕೈಗಾರಿಕೆಗಳ ಸ್ಥಾಪನೆ ಹಾಗೂ ಸಮುದಾಯ ವ್ಯವಸ್ಥೆಗಳು ಸಮಾಜವನ್ನು ರಾಜಕೀಯ ಮತ್ತು ಮಾನಸಿಕ ನಿಯಂತ್ರಣಕ್ಕೊಳಪಡಿಸಿವೆ. ಹಿಂದುಳಿದಿದ್ದ ಚೀನೀ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರೊಡನೆ ಸಮಾನ ಹಕ್ಕು ಹೊಂದಿದ್ದಾರೆ. ರಾಜಕೀಯ ಪರಿವರ್ತನೆಯಿಂದಾಗಿ ಜನತೆಯಲ್ಲಿ ಹೊಸ ವ್ಯಕ್ತಿತ್ವ ಮತ್ತು ಸಮಾಜಪ್ರಜ್ಞೆ ಮೂಡಿವೆ. ಸಾಮ್ಯವಾದದ ಪ್ರಸಾರ ಮತ್ತು ರಾಷ್ಟ್ರಸೇವೆ ಶಿಕ್ಷಣದ ಮುಖ್ಯ ಗುರಿ. ರಾಷ್ಟ್ರದ ಜನರನ್ನು ಸರ್ಕಾರ ಆರ್ಥಿಕಾಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ವ್ಯವಸಾಯಪ್ರಮುಖ ಚೀನ ವಿಶ್ವದ ಮುಖ್ಯ ಕೈಗಾರಿಕೆ ರಾಷ್ಟ್ರವಾಗುವ ಗುರಿ ಹೊಂದಿದೆ. (ವಿ.ಜಿ.ಕೆ.)

iii ಸಂವಿಧಾನ ಮತ್ತು ಆಡಳಿತ : ಚೀನದಲ್ಲಿ 1949ರಲ್ಲಿ ಕಮ್ಯೂನಿಸ್ಟ್ ಪ್ರಭುತ್ವ ಸ್ಥಾಪಿತವಾಯಿತು. ಇದು ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯ. ಸಮಾಜವಾದವನ್ನು ಆಧರಿಸಿದ ಸಂವಿಧಾನವನ್ನು ಚೀನದ ಸಂವಿಧಾನ ಸಭೆಯಾದ ರಾಷ್ಟ್ರೀಯ ಜನತಾ ಕಾಂಗ್ರೆಸ್ 1954ರ ಸೆಪ್ಟೆಂಬರ್ 20ರಂದು ಅಂಗೀಕರಿಸಿತು. ಈ ಲಿಖಿತ ಸಂವಿಧಾನದಲ್ಲಿ ಪೀಠಿಕೆಯಲ್ಲದೆ ನಾಲ್ಕು ಅಧ್ಯಾಯಗಳು ಹಾಗೂ 106 ವಿಧಿಗಳು ಇವೆ. 1 ರಿಂದ 20 ವಿಧಿಗಳಿರುವ ಮೊದಲನೆಯ ಅಧ್ಯಾಯದಲ್ಲಿ ಸಾಮಾನ್ಯ ಸೂತ್ರಗಳು ಎಂಬ ಶೀರ್ಷಿಕೆಯಲ್ಲಿ ಚೀನೀ ಗಣರಾಜ್ಯದ ಮೂಲ ಸ್ವರೂಪವನ್ನೂ ಆಧಾರತತ್ತ್ವಗಳನ್ನೂ ನೀತಿಗಳನ್ನೂ ಕೊಡಲಾಗಿದೆ. ರಾಜ್ಯದ ಅಂಗರಚನೆಯನ್ನು ಕುರಿತಿದ್ದು ಎರಡನೆಯ ಅಧ್ಯಾಯ. ಇದರಲ್ಲಿ 21 ರಿಂದ 84ರವರೆಗಿನ ವಿಧಿಗಳಿವೆ. ಇಲ್ಲಿ ರಾಜ್ಯದ ಮುಖ್ಯ ಆಡಳಿತ ಸಂಸ್ಥೆಗಳ ಅಂಗರಚನೆಯನ್ನು ವಿವರಿಸಿದೆ. ಪೌರರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕುರಿತದ್ದು ಮೂರನೆಯ ಅಧ್ಯಾಯ (ವಿಧಿಗಳು 85-103). ನಾಲ್ಕನೆಯ ಅಧ್ಯಾಯದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಚಿಹ್ನೆ, ರಾಜಧಾನಿ ಇವನ್ನು ಕುರಿತ ವಿಧಿಗಳಿವೆ (104-106).

ಮೂಲಸೂತ್ರಗಳು : ಚೀನೀ ಸಂವಿಧಾನದ ಮೂಲ ಸೂತ್ರಗಳೆಂದರೆ 1 ಸಮಾಜವಾದ, 2 ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ತಿರಸ್ಕರಿಸಿದ ಜನತಾಪ್ರಜಾಪ್ರಭುತ್ವ, 3 ರಾಷ್ಟ್ರೀಯ ಜನಾಂಗಗಳ ಸಮಾನತೆ ಮತ್ತು 4 ಪ್ರಜಾಸತ್ತಾತ್ಮಕ ಕೇಂದ್ರೀಕರಣ. ಈ ಸೂತ್ರಗಳ ಆಧಾರದ ಮೇಲೆ ಚೀನದ ವಾಸ್ತವಿಕವಾದ ಏಕಪಕ್ಷೀಯ ನಿರಂಕುಶಪ್ರಭುತ್ವವನ್ನು ಪ್ರಜಾಪ್ರಭುತ್ವವಾದಿ ನಿರಂಕುಶ ಪ್ರಭುತ್ವವೆಂದೂ ಕಾರ್ಮಿಕ ಮತ್ತು ರೈತಜನರ ಒಕ್ಕೂಟವನ್ನಾಧರಿಸಿದ ಮತ್ತು ಕಾರ್ಮಿಕ ವರ್ಗದ ನಾಯಕತ್ವ ಹೊಂದಿದ ಜನತಾ ಪ್ರಜಾಪ್ರಭುತ್ವವೆಂದೂ ಕರೆಯಲಾಗುತ್ತದೆ. ಅದು ಏಕಾತ್ಮಕ ರಾಜ್ಯ. ಇಡೀ ಚೀನಕ್ಕೆ ಒಂದೇ ಸರ್ಕಾರವಿದೆ. ರಾಷ್ಟ್ರೀಯ ಸರ್ಕಾರದ ಹತೋಟಿಯಲ್ಲೇ ಎಲ್ಲ ಆಡಳಿತವೂ ಕೇಂದ್ರೀಕೃತವಾಗಿದೆ. ಕಾನೂನು ಮಾಡುವ ಹಕ್ಕು ರಾಷ್ಟ್ರೀಯ ಜನತಾ ಕಾಂಗ್ರೆಸಿಗೆ ಏರಿದ್ದು. ಅಧಿಕಾರಪ್ರತ್ಯೇಕತಾಸಿದ್ಧಾಂತವನ್ನು ಚೀನದ ಸಂವಿಧಾನ ತಿರಸ್ಕರಿಸಿದೆ. ಚೀನದ ರಾಷ್ಟ್ರೀಯ ಜನತಾ ಕಾಂಗ್ರೆಸ್‍ನಲ್ಲಿ ಶಾಸಕಾಂಗದ ಅಧಿಕಾರವಲ್ಲದೆ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಅಧಿಕಾರವೂ ಕೇಂದ್ರೀಕೃತವಾಗಿದ್ದು, ಈ ಸಂಸ್ಥೆಯಿಂದಲೇ ಕಾಯಾಂಗಕ್ಕೆ-ರಾಷ್ಟ್ರಧ್ಯಕ್ಷನಿಗೆ ಮತ್ತು ಮಂತ್ರಿಮಂಡಲಕ್ಕೆ-ಹಾಗೂ ನ್ಯಾಯಾಂಗವಾದ ಜನತಾ ನ್ಯಾಯಾಲಯಕ್ಕೆ ಅಧಿಕಾರ ಪ್ರಾಪ್ತವಾಗುತ್ತದೆ. ಅಲ್ಲದೆ ಚೀನದ ಶ್ರೇಷ್ಠ ಜನತಾ ನ್ಯಾಯಲಯಕ್ಕೆ ಸಂವಿಧಾನವನ್ನು ವ್ಯಾಖ್ಯಾನಿಸುವ ಅತವಾ ಉದ್ಧರಿಸುವ ಹಕ್ಕು ಇಲ್ಲ. ಸಂವಿಧಾನವನ್ನು ಉದ್ಧರಿಸುವ ಹಕ್ಕನ್ನು ರಾಷ್ಟ್ರೀಯ ಜನತಾ ಕಾಂಗ್ರೆಸ್ ತನ್ನ ಸ್ಥಾಯೀ ಸಮಿತಿಗೆ ಕೊಟ್ಟಿದೆ ; ಮತ್ತು ಸಂವಿಧಾನವನ್ನು ಅದು 2/3 ರಷ್ಟು ಸದಸ್ಯರ ಬಹುಮತದಿಂದ ತಿದ್ದುಪಡಿ ಮಾಡುವ ಹಕ್ಕು ಹೊಂದಿದೆ. ಈ ಕಾರಣ ರಾಷ್ಟ್ರೀಯ ಜನತಾ ಕಾಂಗ್ರೆಸ್ಸನ್ನು ಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡಿರುವ ಚೀನೀ ಕಮ್ಯೂನಿಸ್ಟ್ ಪಕ್ಷವೇ ಚೀನೀ ಸಂವಿಧಾನವನ್ನು ಉದ್ಧರಿಸುವ, ತಿದ್ದುಪಡಿ ಮಾಡುವ ಹಕ್ಕು ಪಡೆದಿದೆ. ಆಡಳಿತದ ಅಂಗಗಳು : ಸಂವಿಧಾನದನ್ವಯ ಚೀನೀ ಆಡಳಿತ ಸಂಸ್ಥೆಗಳಲ್ಲಿ ಮುಖ್ಯವಾದವು ಇವು : 1. ರಾಷ್ಟ್ರೀಯ ಜನತಾ ಕಾಂಗ್ರೆಸ್, 2. ರಾಷ್ಟ್ರಾಧ್ಯಕ್ಷ, 3. ರಾಜ್ಯ ಸಮಿತಿ, 4. ಸ್ಥಳೀಯ ಜನತಾ ಕಾಂಗ್ರೆಸ್ ಮತ್ತು ಸ್ಥಳಿಯ ಜನತಾ ಸಮಿತಿಗಳು, 5. ಸ್ವಾಯತ್ತತಾ ರಾಷ್ಟ್ರೀಯ ಪ್ರದೇಶಗಳ ವಿಶೇಷ ಸಂಸ್ಥೆಗಳು ಮತ್ತು 6. ಜನತಾ ನ್ಯಾಯಾಲಯಗಳು ಮತ್ತು ಜನತಾ ಕಾನೂನು ಸಂಸ್ಥೆಗಳು.

ರಾಷ್ಟ್ರೀಯ ಜನತಾ ಕಾಂಗ್ರೆಸ್ಸೇ ಚೀನದ ಏಕ-ಸದನ ಸಂಸತ್ತು. ಕೆಳಗಿನ ಪ್ರಾಂತೀಯ ಕಾಂಗ್ರೆಸ್‍ಗಳಿಂದಲೂ ಹಲವು ಪ್ರಮುಖ ನಗರ ಕಾಂಗ್ರೆಸ್‍ಗಳಿಂದಲೂ ಪರೋಕ್ಷವಾಗಿ ಆರಿಸಿ ಬರುವ ಈ ಸಂಸತ್ತು ಇಡೀ ರಾಷ್ಟ್ರದ ಪ್ರತಿನಿಧಿ ಸಭೆಯಲ್ಲದೆ ತಾತ್ತ್ವಿಕವಾಗಿ ರಾಜ್ಯದ ಅತ್ಯಂತ ಶಕ್ತ ಸಂಸ್ಥೆ. ಚೀನದ ಚುನಾವಣಾ ಪದ್ಧತಿಯಲ್ಲಿ 18 ಅಥವಾ ಹೆಚ್ಚಿನ ವಯಸ್ಕರಾದ ಮತದಾರರು ನೇರವಾಗಿ ತಮ್ಮ ಸ್ಥಳೀಯ ಮೊಹಲ್ಲದ ಅಥವಾ ಗ್ರಾಮದ ಕಾಂಗ್ರೆಸಿನ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ. ಆಮೇಲೆ ಹಂತಹಂತವಾಗಿ ಕಾಂಗ್ರೆಸ್‍ಗಳನ್ನು ಚುನಾಯಿಸುತ್ತವೆ. ಯೋಜನೆ, ಆಯವ್ಯಯ, ಯುದ್ಧ, ಶಾಂತಿ ಮುಂತಾದ, ರಾಷ್ಟ್ರಜೀವನದ ಎಲ್ಲ ಪ್ರಮುಖ ವಿಷಯಗಳ ಮೆಲೆ ಅಧಿಕಾರ ವ್ಯಾಪ್ತಿಯುಳ್ಳ ರಾಷ್ಟ್ರೀಯ ಕಾಂಗ್ರೆಸ್ ತಾತ್ತ್ವಿಕವಾಗಿ ಸರ್ವಶಕ್ತ ಸಭೆ. ಸಾಮಾನ್ಯವಾಗಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಸದಸ್ಯರುಳ್ಳ ಈ ಸಭೆ ವಿರಳವಾಗಿ-ವರ್ಷಕ್ಕೆ ಒಂದು ಬಾರಿ-ಸೇರುವುದರಿಂದ ಇದು ಅಧಿವೇಶನದಲ್ಲಿಲ್ಲದಾಗ ಇದರ ಸ್ಥಾಯೀ ಸಮಿತಿ ಕಾಂಗ್ರೆಸ್ಸಿನ ಎಲ್ಲ ಅಧಿಕಾರಗಳನ್ನೂ ಚಲಾಯಿಸುತ್ತದೆ. ರಾಷ್ಟ್ರೀಯ ಜನತಾ ಕಾಂಗ್ರೆಸ್ಸಿನಿಂದ ಪರೋಕ್ಷವಾಗಿ ನಾಲ್ಕು ವರ್ಷಗಳ ಅವಧಿಗಾಗಿ ಆರಿಸಿಬರುವ ಚೀನೀ ರಾಷ್ಟ್ರಧ್ಯಕ್ಷ ತಾತ್ತ್ವಿಕವಾಗಿ ಭಾರತದ ರಾಷ್ಟ್ರಧ್ಯಕ್ಷನಂತೆ ನಾಮಮಾತ್ರ ಅಧಿಕಾರಿಯಂತೆ ಕಂಡುಬಂದರೂ ವಾಸ್ತವವಾಗಿ ಶ್ರೇಷ್ಠ ರಾಜ್ಯ ಸಮ್ಮೇಳನ ಮತ್ತು ರಾಷ್ಟ್ರೀಯ ರಕ್ಷಣಾ ಸಮಿತಿಗಳ ಮೇಲಿನ ತನ್ನ ಹತೋಟಿಗಳ ಮೂಲಕ ವಿಶಿಷ್ಟ ಅಧಿಕಾರ ಪಡೆದಿರುತ್ತಾನೆ. ಚೀನದಲ್ಲಿ ಇಬ್ಬರು ಉಪರಾಷ್ಟ್ರಧ್ಯಕ್ಷರೂ ಇದ್ದಾರೆ.

ಭಾರತದ ಮಂತ್ರಿಮಂಡಲಕ್ಕೆ ಸಮಾನವಾದ ಚೀನೀ ರಾಜ್ಯಸಮಿತಿ ರಾಷ್ಟ್ರಧ್ಯಕ್ಷನ ಸಲಹೆಯ ಮೇಲೆ ರಾಷ್ಟ್ರೀಯ ಜನತಾ ಕಾಂಗ್ರೆಸ್‍ನಿಂದ ಆರಿಸಲ್ಪಡುತ್ತದೆ. ಇದರಲ್ಲಿ ಪ್ರಧಾನಿಯೂ ಉಪಪ್ರಧಾನಿಗಳೂ ಆಡಳಿತ ಆಯೋಗಗಳ ಅಧ್ಯಕ್ಷರೂ ಇರುತ್ತಾರೆ. ಈ ಸಮಿತಿಯೇ ಪ್ರಮುಖ ಆಡಳಿತ ಕಾರ್ಯಾಂಗವಾದರು ಇದನ್ನು ಭಾರತದ ಸಂಸದೀಯ ಕಾರ್ಯಾಂಗಕ್ಕೆ ತಾತ್ತ್ವಿಕವಾಗಿ ಮಾತ್ರ ಹೋಲಿಸಬಹುದು. ರಾಜ್ಯಸಮಿತಿ ತಾತ್ತ್ವಿಕವಾಗಿ ರಾಷ್ಟ್ರೀಯ ಜನತಾ ಕಾಂಗ್ರೆಸ್ಸಿಗೆ ಅಥವಾ ಸ್ಥಾಯೀ ಸಮಿತಿಗೆ ಉತ್ತರ ನೀಡಬೇಕಾಗುತ್ತದೆ. ರಾಜ್ಯಸಮಿತಿ ಅನೇಕ ಆಡಳಿತ ಆಯೋಗಗಳ ಮೂಲಕ ಕೇಂದ್ರ ಸರ್ಕಾರದ ಆಡಳಿತವನ್ನು ನಡೆಸುತ್ತದೆ. ಸ್ಥಳೀಯ ಆಡಳಿತಕ್ಕಾಗಿ ಚೀನವನ್ನು 21 ಪ್ರಾಂತ್ಯಗಳಾಗಿ, 5 ಸ್ವಾಯತ್ತತಾ ಪ್ರದೇಶಗಳಾಗಿ, ಅಲ್ಲದೆ ಕೇಂದ್ರಾಡಳಿತ ನಗರ ಪ್ರದೇಶಗಳಾಗಿ ವಿಭಜಿಸಲಾಗಿದೆ. ಅಲ್ಲದೆ ಪ್ರತಿ ಪ್ರಾಂತ್ಯವನ್ನೂ ಅನೇಕ ನಗರ ಪ್ರದೇಶಗಳನ್ನಾಗಿಯೂ ಗ್ರಾಮಾಂತರ ಜಿಲ್ಲೆಗಳನ್ನಾಗಿಯೂ ವಿಭಜಿಸಲಾಗಿದೆ. ಹಾಗೆಯೇ ಪ್ರತಿ ನಗರ ಪ್ರದೇಶವನ್ನೂ ಮೊಹಲ್ಲಗಳಾಗಿಯೂ ಗ್ರಾಮಾಂತರ ಜಿಲ್ಲೆಗಳನ್ನು ಅನೇಕ ಆಡಳಿತ ಗ್ರಾಮ ಅಥವಾ ಹಳ್ಳಿಗಳಾಗಿಯೂ ವಿಭಜಿಸಲಾಗಿದೆ. ಈ ಎಲ್ಲ ಮಟ್ಟಗಳಲ್ಲೂ ಶಾಸನಸಭೆಯನ್ನು ಪ್ರತಿಬಿಂಬಿಸುವ ಕಾಂಗ್ರೆಸ್‍ಗಳನ್ನೂ ಕಾರ್ಯಾಂಗಗಳನ್ನು ಹೋಲುವ ಸಮಿತಿಗಳನ್ನೂ ರಚಿಸಲಾಗಿದೆ. ಬಹುರಾಷ್ಟ್ರೀಯ ಜನಾಂಗಗಳ ರಾಜ್ಯವೆಂದು ಸಾರಲ್ಪಟ್ಟಿರುವ ಚೀನದಲ್ಲಿರುವ ಮಂಗೋಲಿಯನರು, ಟಿಬೆಟನರು, ಕಜûಕರು ಮುಂತಾದ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ, ಚೀನೀ ಸಂವಿಧಾನದ ಸೂತ್ರಗಳ ಪ್ರಕಾರ, ಆಯಾ ಜನಾಂಗದ ಪ್ರದೇಶದಲ್ಲಿ ಅವರವರ ಇಚ್ಛಾನುಸಾರ ಅಗತ್ಯವಾದ ಸ್ವಯಂ ಆಡಳಿತ ಸಂಸ್ಥೆಗಳನ್ನು ರಚಿಸಲು ಅವಕಾಶವಿದೆ. ಆದರೆ ಈ ಸ್ವಾಯತ್ತತೆಯ ಪ್ರದೇಶಗಳ ಆಡಳಿತ ಸಂಸ್ಥೆಗಳ ನಿರ್ಧಾರಗಳೆಲ್ಲವೂ ಚೀನ ಸರ್ಕಾರದ ನೀತಿಗೆ ಅನುಸಾರವಾಗಿ ಮತ್ತು ಅದರ ಒಪ್ಪಿಗೆಯಂತೆ ಇರಬೇಕು.

ಚೀನದ ನ್ಯಾಯಾಂಗ ಜನತಾ ನ್ಯಾಯಾಲಯಗಳಿಂದ ಕೂಡಿದೆ. ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಜನತಾ ನ್ಯಾಯಾಲಯ ಇದೆ. ಪ್ರಾಂತೀಯ ಮತ್ತು ಸ್ಥಳೀಯ ಮಟ್ಟಗಳಲ್ಲಿ ಸೂಕ್ತ ಜನತಾ ನ್ಯಾಯಾಲಯಗಳಲ್ಲದೆ ಹಲವು ವಿಶೇಷ ಜನತಾ ನ್ಯಾಯಾಲಯಗಳೂ ಇವೆ. ಸಂಬಂಧಪಟ್ಟ ಕಾಂಗ್ರೆಸ್‍ಗಳಿಂದ ಆರಿಸಲ್ಪಡುವ ಮತ್ತು ನಿಯಂತ್ರಿಸಲ್ಪಡುವ ಈ ನ್ಯಾಯಾಲಯಗಳು ಕಮ್ಯುನಿಸ್ಟ್ ಪಕ್ಷದ ನೀತಿಗೆ ಬದ್ಧವಾಗಿ ಕೆಲಸ ಮಾಡುತ್ತವೆ. ಕಾನೂನುಗಳನ್ನು ಜನರೂ ಸರ್ಕಾರಿ ಸಂಸ್ಥೆಗಳೂ ಅನುಸರಿಸುವಂತೆ ಜನತಾ ಕಾನೂನು ಸಂಸ್ಥೆಗಳು (ಪೀಪಲ್ಸ್ ಪ್ರೊಕ್ಯುರೇಟೊರೇಟ್ಸ್) ನೋಡಿಕೊಳ್ಳುತ್ತವೆ. ಕಾನೂನು ವಿರೋಧಿಗಳನ್ನು ಶೋಧಿಸಿ ನ್ಯಾಯಲಯದ ಮುಂದೆ ತರುವುದು ಇವುಗಳ ಕೆಲಸ.

ಚೀನದಲ್ಲಿ ಕಮ್ಯುನಿಸ್ಟ್ ಪಕ್ಷ ಪ್ರಮುಖವಾದ್ದು. ನಾಮಮಾತ್ರಕ್ಕೆ ಹಲವು ಇತರ ಪಕ್ಷಗಳಿದ್ದರೂ ವಾಸ್ತವವಾಗಿ ಅವು ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮಕ್ಕೆ ಒಪ್ಪಿ ಅದರ ನಾಯಕತ್ವದಲ್ಲಿ ಕೆಲಸ ಮಾಡುತ್ತವೆ. ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಚೀನೀ ಕಮ್ಯುನಿಸ್ಟ್ ಪಕ್ಷ ರಾಷ್ಟ್ರದ ಏಕೈಕ ಪ್ರಬಲ ರಾಜಕೀಯ ಶಕ್ತಿ. ಸ್ಥಾನಗಳ, ಸಂಸ್ಥೆಗಳ, ನೀತಿಗಳ ನಿಯಂತ್ರಣದ ಮೂಲಕ ಇಡೀ ಚೀನದ ಆಡಳಿತವನ್ನು ಎಲ್ಲ ಮಟ್ಟಗಳಲ್ಲೂ ಈ ಪಕ್ಷ ನಿರ್ಧರಿಸುತ್ತದೆ. ಕಮ್ಯುನಿಸ್ಟ್ ಪಕ್ಷವೇ ಚೀನೀ ಆಡಳಿತದ ಬೆನ್ನೆಲುಬು. ಎಲ್ಲ ವಿಷಯಗಳಲ್ಲಿ ಅದರ ನಿರ್ಧಾರವೇ ಅಂತಿಮ ನಿರ್ಧಾರ. ಆದ್ದರಿಂದ ವಾಸ್ತವವಾಗಿ ಚೀನೀ ಪ್ರಭುತ್ವ ಸೋವಿಯತ್ ಪ್ರಭುತ್ವದಂತೆ ಏಕಪಕ್ಷೀಯ ಪ್ರಭುತ್ವವಾಗಿದೆ.

iv ರಕ್ಷಣೆ : ಚೀನವನ್ನು 13 ಸೈನಿಕ ಪ್ರದೇಶಗಳಾಗಿ ವಿಭಾಗಿಸಲಾಗಿದೆ. ಪ್ರತಿ ಪ್ರದೇಶಕ್ಕೂ 23 ಸೈನಿಕ ಜಿಲ್ಲೆಗಳಿವೆ. ಭೂನೌಕಾ ವಾಯುಸೇನೆಗಳ ಮುಖ್ಯಾಧಿಕಾರಿ ದಂಡನಾಯಕ. 1955ರಲ್ಲಿ ಕಡ್ಡಾಯ ಸೈನ್ಯ ಸೇವೆ ರೂಢಿಗೆ ಬಂತು. 18ನೆಯ ವಯಸಿನಲ್ಲಿ ಸೇವೆ ಪ್ರಾರಂಭವಾಗುತ್ತದೆ. ಸೇವೆಯ ಕಾಲ ಭೂಸೇನೆಯಲ್ಲಿ 4 ವರ್ಷ, ನೌಕಾಸೇನೆಯಲ್ಲಿ 6 ವರ್ಷ, ವಾಯುಸೇನೆಯಲ್ಲಿ 5ವರ್ಷ. ಸೈನ್ಯದಲ್ಲಿ ಯೋಧರ ವರ್ಗೀಕರಣ ಮತ್ತು ದರ್ಜೆಗಳು 1965ರಲ್ಲಿ ರದ್ದಾಗಿ, ಕಾರ್ಯಕ್ಕನುಗುಣವಾಗಿ ಅವರ ದರ್ಜೆಗಳು ಏರ್ಪಟ್ಟಿವೆ. ಚೀನದಲ್ಲಿ 138 ಡಿವಿಜನ್ ಸೈನ್ಯ ಬಲವಿದೆ. ಇದಲ್ಲದೆ ಜನತಾ ಸೈನ್ಯಬಲ 1 ಕೋಟಿ. ಇದರಲ್ಲಿ ನಿವೃತ್ತ ಸೈನಿಕರೇ ಹೆಚ್ಚು. ನಾಗರಿಕ ರಕ್ಷಣೆಗಾಗಿ 3,00,000 ಮಂದಿಯ ಪೊಲೀಸ್ ದಳವಿದೆ.

III ಆರ್ಥಿಕತೆ I ವ್ಯವಸಾಯ : ಚೀನ ಹಿಂದಿನಿಂದ ವ್ಯವಸಾಯಾಲಂಬಿ ದೇಶವಾಗಿದೆ ಆಹಾರಧಾನ್ಯ, ವಾಣಿಜ್ಯಫಸಲು ಮತ್ತು ಎಣ್ಣೆಬೀಜಗಳ ಬೆಳೆ ಪ್ರಧಾನ. ಹಂದಿಗಳನ್ನು ವಿಶೇಷವಾಗಿ ಸಾಕುತ್ತಾರೆ.

1950ರಲ್ಲಿ ಊಳಿಗಮಾನ್ಯ ಪದ್ಧತಿ ರದ್ದಾಗಿ ಭೂಮಿ ಸರ್ಕಾರದ ವಶವಾಯಿತು. ಕೃಷಿ ಸಾಮಾಜೀಕರಣ 1958ರಲ್ಲಿ ಪೂರ್ತಿಗೊಂಡಿತು. ಸುಮಾರು 50 ಕೋಟಿ ರೈತಪ್ರಜೆಗಳನ್ನೊಳಗೊಂಡ ಗ್ರಾಮಾಂತರ ಪ್ರದೇಶಗಳು 74,000 ಕಮ್ಯೂನ್‍ಗಳಾಗಿ ವಿಂಗಡಣೆಯಾದವು. ಪ್ರತಿ ಕಮ್ಯೂನ್‍ನಲ್ಲೂ ಅನೇಕ ಗ್ರಾಮಗಳು ಸೇರಿವೆ ; ಅದರಲ್ಲಿ 6,000ಕ್ಕೂ ಹೆಚ್ಚಿನ ಕುಟುಂಬಗಳಿರುತ್ತವೆ.

ಚೀನವನ್ನು ನಾಲ್ಕು ಕೃಷಿ ವಲಯಗಳನ್ನಾಗಿ ವಿಭಾಗಿಸಬಹುದು : 1. ಒಂದೇ ಬೆಳೆಯಾಗುವ ವಲಯ. ಇದು ತೀರ ಚಳಿ ಪ್ರದೇಶ. ಇದು ಚೀನದ ಮಹಾಗೋಡೆಯ ಉತ್ತರದಲ್ಲಿದೆ. ಇಲ್ಲಿ ವಸಂತ ಗೋಧಿ ಮತ್ತು ಇತರ ಧಾನ್ಯಗಳನ್ನು ಬೆಳೆಯುತ್ತಾರೆ. 2. ಎರಡು ವರ್ಷಗಳಲ್ಲಿ ಮೂರು ಬೆಳೆಯಾಗುವ ವಲಯ. ಚೀನದ ಮಹಾಗೋಡೆಯ ದಕ್ಷಿಣಭಾಗ ಮತ್ತು ಚಿನ್‍ಲಿಂಗ್ ಪರ್ವತಶ್ರೇಣಿಗಳ ದಕ್ಷಿಣದಲ್ಲಿದೆ. 3. ವರ್ಷದಲ್ಲಿ ಎರಡು ಬೆಳೆ ಆಗುವ ವಲಯ. ಹ್ವೈ ನದಿಯ ಜಲಾನಯನ ಭೂಮಿ, ಚಿನ್‍ಲಿಂಗ್ ಪರ್ವತಗಳ ದಕ್ಷಿಣ ಭಾಗ, ಟಯುಲಿಂಗ್, ಚಿಯುಲಿಂಗ್‍ಷನ್ ಮತ್ತು ಟಂಗ್‍ಅನ್‍ಲಿಂಗ್ ಪರ್ವತಗಳ ಉತ್ತರದ ಭಾಗಗಳನ್ನೊಳಗೊಂಡಿದೆ. 4. ವರ್ಷದಲ್ಲಿ ಮೂರು ಬೆಳೆ ಆಗುವ ವಲಯ. ಗ್ವಾಂಗ್‍ಡುಂಗ್ ಪ್ರಾಂತ್ಯದ ಚುಕ್ಯಾಂಗ್ ಮತ್ತು ಮಿನ್‍ಕ್ಯಾಂಗ್ ನದಿಗಳ ಜಲಾನಯನ ಭೂಮಿ, ಫೂಕೈನ್ ಕಡಲ ತೀರ ಭಾಗ ಮತ್ತು ಗ್ವಾಂಗ್‍ಸೀ-ಚ್ವಾಂಗ್ ಸ್ವಯಮಾಡಳಿತ ಪ್ರದೇಶಗಳನ್ನೊಳಗೊಂಡಿದೆ.

ಅಕ್ಕಿ ಮತ್ತು ಗೋಧಿ ಜನರ ಮುಖ್ಯ ಆಹಾರ. ಇವು ದೇಶದ ಅನೇಕ ಭಾಗಗಳಲ್ಲಿ ಬೆಳೆಯುತ್ತವೆ. ಬತ್ತದ ಗದ್ದೆಗಳ ವಿಸ್ತೀರ್ಣ 32,60,00000 ಹೆಕ್ಟೇರುಗಳು ಯಾಂಗ್‍ಟ್ಸೀ ನದಿಯ ಉತ್ತರ ಭಾಗ, ಉತ್ತರ ಚೀನ ಬಯಲು, ಈಶಾನ್ಯ ಭಾಗ (ಮಂಚೂರಿಯ) ಮತ್ತು ಸಚ್ವಾನ್ ಜಲಾನಯನ ಭೂಮಿಯಲ್ಲಿ ಗೋಧಿ ಬೆಳೆ ಹೆಚ್ಚು. ಚೀನದಲ್ಲಿ ಬೆಳೆಯುವ ಇತರ ಧಾನ್ಯಗಳು ಕವೊಲಿಂಗ್ ಎಂಬ ಒರಟು ಧಾನ್ಯ, ಬಾರ್ಲಿ, ಮೆಕ್ಕೆಜೋಳ, ಸೋಯಾಬೀನ್ಸ್, ಕವೊಲಿಂಗ್ ಧಾನ್ಯ ಈಶಾನ್ಯ ಚೀನದ ಮುಖ್ಯ ಬೆಳೆ, ಜನರ ಆಹಾರ, ಪ್ರಾಣಿಗಳ ಮೇವು. ಇದರ ಬೆಳೆಗೆ ಸ್ವಲ್ಪ ಮಳೆ ಸಾಕು. ಉತ್ತರ ಚೀನ ಬಯಲಲ್ಲಿ ಸಹ ಈ ಧಾನ್ಯ ಬೆಳೆಯುತ್ತದೆ. ಮೆಕ್ಕೆಜೋಳ ಬೆಳೆಯುವ ಪ್ರದೇಶ ಹೋಪೇ, ಹೋನ್ಯಾನ್, ಷಾನ್‍ಟುಂಗ್, ಷೇನ್ಸೀ, ಸಚ್ವಾನ್ ಮತ್ತು ಯುನ್ಯಾನ್ ಪ್ರಾಂತ್ಯಗಳು. ಮೆಕ್ಕೆಜೋಳ ಬೆಳೆಯುವ ರಾಷ್ಟ್ರಗಳಲ್ಲಿ ಚೀನ ಎರಡನೆಯದು. ಮಿಲೆಟ್ ಧಾನ್ಯ ಹೆಚ್ಚಾಗಿ ಉತ್ತರ ಚೀನ ಬಯಲು, ಈಶಾನ್ಯ ಚೀನ ಮತ್ತು ಲೊಯೆಸ್ ಪ್ರಸ್ಥಭೂಮಿಯಲ್ಲಿ ಬೆಳೆಯುತ್ತದೆ. ದೇಶದ ಕೆಲವು ಕಡೆ ಬಾರ್ಲಿ ಬೆಳೆಯುತ್ತದೆ. ಇದನ್ನು ಪ್ರಾಣಿಗಳ ಮೇವಾಗೂ ಬಳಸಲಾಗುತ್ತಿದೆ. ದೇಶದಲ್ಲಿ ಬೆಳೆಯುವ ಸೋಯಾ ಬೀನ್ಸ್‍ನಲ್ಲಿ ಅರ್ಧಭಾಗ ಆಹಾರವಾಗಿ ಬಳಕೆಯಾಗುತ್ತದೆ. ಉಳಿದ ಅರ್ಧಭಾಗದಿಂದ ಎಣ್ಣೆ ತಯಾರಿಸುತ್ತಾರೆ. ಪ್ರಪಂಚದ ಸೋಯಾಬೀನ್ಸ್‍ನಲ್ಲಿ 80%ರಷ್ಟು ಚೀನದಲ್ಲಿ ಬೆಳೆಯುತ್ತದೆ. ನೆಲಗಡಲೆ, ಷ್ಯಾನ್‍ಟಂಗ್, ಹೋಪೇ, ಹೋನ್ಯಾನ್, ಜಿಯಾಂಗ್‍ಸೂ, ಸಚ್ವಾನ್, ಫೂಕೈನ್, ಗ್ವಾಂಗ್‍ಡುಂಗ್, ಜಿಯಾಂಗ್‍ಸೀ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ರೇಪ್ ಬೀಜ, ಸಾಸುವೆ, ಗಸಗಸೆ ಇವು ಮುಖ್ಯವಾಗಿ ಯಾಂಗ್‍ಟ್ಸೀ ನದಿ ಬಯಲಿನಲ್ಲಿ ಬೆಳೆಯುತ್ತವೆ. ಹತ್ತಿ, ಸಣಬು, ರ್ಯಾಮಿ ನಾರು, ಅಗಸೆ ಇವು ಇಲ್ಲಿಯ ವಾಣಿಜ್ಯ ಬೆಳೆಗಳು ಚೀನದ ಇನ್ನೊಂದು ಮುಖ್ಯ ಬೆಳೆ ಚಹ. ಚೀನದ 15 ಪ್ರಾಂತ್ಯಗಳಲ್ಲಿ ಚಹ ತೋಟಗಳಿವೆ. ಜಜಿಯಾಂಗ್, ಫೂಕೈನ್, ಗ್ವಾಂಗ್‍ಡುಂಗ್ ಪ್ರಾಂತ್ಯಗಳಲ್ಲಿ ವಿಶೇಷ. ಹೊಗೆಸೊಪ್ಪು ಬೆಳೆ ಹೇಲುಂಗ್‍ಜಿಯಾಂಗ್ ಮತ್ತು ಯುನ್ಯಾನ್ ಪ್ರಾಂತ್ಯಗಳಲ್ಲಿ ಹೆಚ್ಚು. ಪ್ರಪಂಚದ ಹೊಗೆಸೊಪ್ಪು ಬೆಳೆಯುವ ರಾಷ್ಟ್ರಗಳಲ್ಲಿ ಚೀನ ಎರಡನೆಯದು. 2,76,000 ಹೆಕ್ಟೇರ್‍ಗಳಲ್ಲಿ ಹೊಗೆಸೊಪ್ಪು ಬೆಳೆಯುತ್ತದೆ. ನಿಂಬೆಜಾತಿಯ ಹಣ್ಣುಗಳು, ಸೇಬು, ಮರಸೇಬು, ದ್ರಾಕ್ಷಿ, ಬಾಳೆ, ಪೈನ್‍ಆಪಲ್ ಚೀನದ ಮುಖ್ಯ ಫಲಗಳು. ಚೀನದ ದಕ್ಷಿಣದ ಭಾಗದಲ್ಲಿ ರೇಷ್ಮೆ ವ್ಯವಸಾಯ ನಡೆಯುತ್ತದೆ. ಅಲ್ಲಿ ಉಪ್ಪುನೇರಳೆ ವಿಶೇಷವಾಗಿ ಬೆಳೆಯುತ್ತದೆ. ಚೀನಕ್ಕೆ ಉದ್ದವಾದ ಕಡಲ ಕರೆ ಇರುವುದರಿಂದ ಪ್ರಪಂಚದ ಮೀನು ಹಿಡಿಯುವ ಒಟ್ಟು ಪ್ರದೇಶದಲ್ಲಿ 24%ರಷ್ಟು ಭಾಗ ಚೀನದಲ್ಲಿದೆ. ನದಿ ಸರೋವರಗಳಲ್ಲೂ ಮೀನು ವಿಶೇಷವಾಗಿ ದೊರೆಯುತ್ತದೆ. ಚೀನದ ಮೀನಿನ ವಾರ್ಷಿಕ ಸರಾಸರಿ ಹಿಡಿತ 28 ಲಕ್ಷ ಮೆಟ್ರಿಕ್ ಟನ್. ಮೀನುಗಾರಿಕೆಯಲ್ಲಿ 70 ಲಕ್ಷ ಜನ ನಿರತರಾಗಿದ್ದಾರೆ. ii ಅರಣ್ಯ : ಚೀನದ ಮೂಲನಾಡು ಮತ್ತು ಮಂಚೂರಿಯದಲ್ಲಿ ಹಿಂದೆ ಅರಣ್ಯಗಳಿದ್ದವು. ನಗರಗಳ ನಿರ್ಮಾಣ ಹಾಗೂ ಚೌಬೀನೆಗಾಗಿ ಬಹುಭಾಗ ಅರಣ್ಯನಾಶವಾಯಿತು. ಈಗ ಅರಣ್ಯ ಬೆಳೆಸುವ ಯೋಜನೆ ಇದೆ. ಚೀನದ ಮುಖ್ಯ ಅರಣ್ಯಗಳಿರುವ ಭಾಗ ಹೇಲುಂಗ್, ಜಿಯಾಂಗ್ ಸಚ್ವಾನ್ ಮತ್ತು ಯುನ್ಯಾನ್ ಪ್ರಾಂತ್ಯಗಳು. ಟಂಗ್ ಮರ ಅರಣ್ಯಗಳಲ್ಲಿ ಅಧಿಕ; ಅದರಿಂದ ಎಣ್ಣೆ ತೆಗೆಯುತ್ತಾರೆ. ತೇಗದ ಮರ ಹೇರಳ. ಯಾಂಗ್‍ಟ್ಸೀ ನದಿಯ ದಕ್ಷಿಣ ಭಾಗಗಳಲ್ಲಿ ಬಿದಿರು ಅರಣ್ಯಗಳಿವೆ.

iii ಗಣಿಗಳು : ಚೀನದ ಪ್ರಾಂತ್ಯಗಳಲ್ಲೂ ಕಲ್ಲಿದ್ದಲು ನಿಕ್ಷೇಪಗಳಿವೆ. ಕೈಲುವಾನ್, ಫೂಷಿನ್, ಹೈನ್ಯಾನ್, ಟಾಟುಂಗ್ ಗಣಿಗಳಲ್ಲಿ ಹೆಚ್ಚು ಕಲ್ಲಿದ್ದಲು ಉತ್ಪಾದನೆಯಾಗುತ್ತದೆ. ಕಬ್ಬಿಣ ಅದುರು ಷಾನ್‍ಸೀ, ಹೂಪೇ, ಷ್ಯಾನ್‍ಟಂಗ್ ಪ್ರಾಂತ್ಯಗಳಲ್ಲಿ ಹೇರಳ. ಮಂಚೂರಿಯಲ್ಲಿ ಕಬ್ಬಿಣದ ಕಾರ್ಖಾನೆಗಳಿವೆ. ಉಕ್ಕಿನ ಕಾರ್ಖಾನೆಗಳು ಮಂಚೂರಿಯದ ಆನ್‍ಷ್ಯನ್, ಹೋಪೇ ಪ್ರಾಂತ್ಯದ ವೂಹಾನ್, ಒಳಮಂಗೋಲಿಯದ ಪವೋಟಾ ನಗರಗಳಲ್ಲಿವೆ. ಎಣ್ಣೆ ಗಣಿಗಳು ಕ್ಯಾನ್ಸು ಮತ್ತು ಷೆನ್‍ಸೀ ಪ್ರಾಂತ್ಯಗಳಲ್ಲಿವೆ. ಯುನ್ಯಾನ್ ಪ್ರಾಂತ್ಯದಲ್ಲಿ ತವರದ ಗಣಿಗಳಿವೆ. ಯೂನಾನ್, ಗ್ವಾಂಗ್‍ಡುಂಗ್, ಯುನ್ಯಾನ್ ಪ್ರಾಂತ್ಯಗಳಲ್ಲಿ ಟಂಗ್‍ಸ್ಟನ್ ದೊರಕುತ್ತದೆ.

iv ಕೈಗಾರಿಕೆ : ಚೀನದ ಗೃಹಕೈಗಾರಿಕೆ ಪುರಾತನವಾದ್ದು. ಆಧುನಿಕ ಕೈಗಾರಿಕೆಗಳಲ್ಲಿ ಮುಖ್ಯವಾದವು ಹತ್ತಿ ಜವಳಿ, ರೇಷ್ಮೆ ಫಿಲೇಚರ್, ಉಕ್ಕು ಮತ್ತು ಬೆಂಕಿಕಡ್ಡಿ ತಯಾರಿಕೆ. ಭಾರಿ ಕೈಗಾರಿಕೆಗಳಿಗೆ ಮೊದಲ ಪಂಚವಾರ್ಷಿಕ ಯೋಜನೆಯ ಕಾಲದಿಂದ ಉತ್ತೇಜನ ದೊರಕುತ್ತಿದೆ. ಉಕ್ಕು, ರಾಸಾಯನಿಕ ವಸ್ತುಗಳು, ಸಿಮೆಂಟ್, ವ್ಯವಸಾಯ ಉಪಕರಣ, ಪ್ಲಾಸ್ಟಿಕ್ ಸರಕು, ಲಾರಿ, ಟ್ರಾಕ್ಟರು ಮೊದಲಾದವು ಅಧಿಕವಾಗಿ ಉತ್ಪಾದನೆಯಾಗುತ್ತಿವೆ.

1970ರಲ್ಲಿ ಉತ್ಪಾದನೆಯಾದ ಕೆಲವು ಮುಖ್ಯ ವಸ್ತುಗಳ ವಿವರ ಹೀಗಿದೆ. ಕಲ್ಲಿದ್ದಲು 25.5 ಕೋಟಿ ಟನ್ ಕಬ್ಬಿಣದ ಅದುರು 4.5 ,, ,, ಬೀಡು ಕಬ್ಬಿಣ 2.0 ,, ,, ಕ್ರೂಡ್ ಆಯಿಲ್ 1.5 ,, ,, ಸಿಮೆಂಟ್ 1.5 ,, ,, ರಾಸಾಯನಿಕ ಗೊಬ್ಬರ 0.75 ,, ,, ಉಪ್ಪು 1.5 ,, ,, ಸಕ್ಕರೆ 0.17 ,, ,, ವನಸ್ಪತಿ ಎಣ್ಣೆ 0.24 ,, ,, ಕಾಗದ 2.5 ,, ,, ವಿದ್ಯುಚ್ಛಕ್ತಿ 6.5 ,, ಕಿವಾ ಹತ್ತಿ ಬಟ್ಟೆ 0.14 ,, ಮೀಟರ್

  V   ವಿದ್ಯುಚ್ಛಕ್ತಿ : ಜಲವಿದ್ಯುಚ್ಛಕ್ತಿಗಿಂತ ಉಷ್ಣ ವಿದ್ಯುತ್ ಉತ್ಪಾದನೆಯ ಕೇಂದ್ರಗಳು ಹೆಚ್ಚು. ಅವುಗಳಲ್ಲಿ ಮುಖ್ಯವಾದವು ಷಾಂಗ್‍ಹೈ, ಫೂಷಿನ್, ಫೂಷುನ್ ಮತ್ತು ಪೀಕಿಂಗ್ ನಗರಗಳಲ್ಲಿವೆ. ಷಾಂಗ್‍ಹೈ ನಗರದ ಯಂತ್ರ 2,60,000 ಕಿವಾ ಉತ್ಪಾದಿಸುತ್ತದೆ.

ಚೀನದ ಪಂಚವಾರ್ಷಿಕ ಯೋಜನೆಗಳಲ್ಲಿ ನದಿಗಳಿಗೆ ಕಟ್ಟೆ ಕಟ್ಟಿ ವಿದ್ಯುಚ್ಛಕ್ತಿ ಉತ್ಪಾದಿಸುವ ಕಾರ್ಯಕ್ರಮಗಳಿವೆ. ಅವುಗಳಲ್ಲಿ ಯಾಂಗ್‍ಟ್ಸೀ, ಸುಂಗಾರಿ, ಹಾನ್, ಆರ್ಗುನ್ ನದಿಗಳ ಯೋಜನೆ ಪ್ರಧಾನವಾದವು. ಸಮುದ್ರದ ಅಲೆಗಳನ್ನು ಬಳಸಿ ವಿದ್ಯುಚ್ಛಕ್ತಿ ಉತ್ಪಾದಿಸುವ ಯೋಜನೆ ಸಹ ಇದೆ. ಈ ದಿಶೆಯಲ್ಲಿ 1958ರಲ್ಲಿ ಸ್ಥಾಪಿತವಾದ ಗ್ವಾಂಗ್‍ಡುಂಗ್ ಪ್ರಾಂತ್ಯದ ಟಾಲಿನ್ ವಿದ್ಯುತ್ ಉತ್ಪಾದನಾ ಕೇಂದ್ರ ಒಂದು.

vi ವ್ಯಾಪಾರ, ಸಾರಿಗೆ : ಚೀನದ ವಿದೇಶಿ ವ್ಯಾಪಾರ ಮುಖ್ಯವಾಗಿ ಜಪಾನ್, ಬ್ರಿಟನ್, ಹಾಂಗ್‍ಕಾಂಗ್, ಪಶ್ಚಿಮ ಜರ್ಮನಿಗಳೊಡನೆ ನಡೆಯುತ್ತದೆ. ರಫ್ತಾಗುವ ಸರಕು ಕಚ್ಚಾ ರೇಷ್ಮೆ, ರೇಷ್ಮೆ ಗೂಡು. ಹತ್ತಿ ಬಟ್ಟೆ, ಚಹ, ಲೋಹಗಳ ಅದುರು, ಮರದ ಎಣ್ಣೆ, ಹತ್ತಿ, ನೆಲಗಡಲೆ, ಎಣ್ಣೆ ಬೀಜ, ಇದ್ದಿಲು, ಸೋಯಾಬೀನ್ಸ್, ಚೀನ ಆಮದು ಮಾಡಿಕೊಳ್ಳುವ ಸರಕು ಸೀಮೆ ಎಣ್ಣೆ, ರಾಸಾಯನಿಕ ವಸ್ತುಗಳು, ಯಂತ್ರಗಳು, ಉಣ್ಣೆ, ರಬ್ಬರ್.

ಚೀನದ ಪ್ರಥಮ ರೈಲುಮಾರ್ಗ ವೂಸುಂಗ್ (ಷ್ಯಾಂಗ್‍ಹೈ) ಮಾರ್ಗ 32,000 ಕಿಮೀ. ರೈಲುಮಾರ್ಗಗಳಿವೆ. ಟಿಬೆಟ್ ವಿನಾ ಉಳಿದೆಲ್ಲ ಭಾಗಗಳಿಗೆ ರೈಲ್ವೆ ಸಂಪರ್ಕ ಏರ್ಪಟ್ಟಿದೆ. ಉತ್ತರ-ದಕ್ಷಿಣ ರೈಲ್ವೆ, ಪೂರ್ವ-ಪಶ್ಚಿಮ ರೈಲ್ವೆ ಮತ್ತು ಮಂಚೂರಿಯ ರೈಲ್ವೆ-ಇವು ಚೀನದ 3 ಬೃಹತ್ ರೈಲ್ವೆ ವಲಯಗಳು. ಮುಖ್ಯ ರೈಲ್ವೆಮಾರ್ಗಗಳಿವು ; 1. ಪೀಕಿಂಗ್-ಷೆನ್‍ಯಂಗ್ ಮಾರ್ಗ; 2. ಟಿನ್‍ಟ್ಸಿನ್-ಪೂಕೋ ಮಾರ್ಗ; 3. ಪೀಕಿಂಗ್-ವೂಹಾನ್ ಮಾರ್ಗ; 4. ಗ್ವಾಂಗ್‍ಜೋ-ವೂಹಾನ್ ಮಾರ್ಗ (680 ಮೈ.); 5 ಹಾರ್ಬಿನ್ ಮಾರ್ಗ; ಇದು ಮಂಚೂರಿಯದ ಮುಖ್ಯ ಮಾರ್ಗ ; 6. ಲುಂಗ್ ಹೆ ಮಾರ್ಗ ಮೈ. ಮತ್ತು 7. ಷ್ಯಾಂಗ್‍ಹೈ-ಚೂಚೌ ಮಾರ್ಗ ಇತ್ತೀಚೆಗೆ ನಿರ್ಮಿತವಾದ ಮಾರ್ಗಗಳಿವು : ಲಾಂಜೋ. ಊರೂಮ್‍ಚಿ, ಟ್ಯಾನ್ ಕಿಯಾಂಗ್-ಹೌ, ವೂಹಾನ್, ಗ್ವೇಯಾಂಗ್ ರೈಲುಮಾರ್ಗಗಳು; ಮತ್ತು ಆನ್‍ಹ್ವೆ ಪ್ರಾಂತ್ಯದ ಮೂಲಕ ಸಾಗುವ ಹ್ವಾ-ಫೂ ರೈಲುಮಾರ್ಗ. 1968ರಲ್ಲಿ ಯಾಂಗ್‍ಟ್ಸೀ ನದಿಗೆ ಅಡ್ಡಲಾಗಿ ಭಾರಿ ರೈಲ್ವೆ ಸೇತುವೆ ಕಟ್ಟಲಾಯಿತು.

ಚೀನದಲ್ಲಿರುವ ನದಿ ಸರೋವರ, ಕಾಲುವೆಗಳ ಒಟ್ಟು ಮಾರ್ಗ 101168 ಕಿ.ಮೀ. ಅದರಲ್ಲಿ 37892 ಕಿ.ಮೀ. ಮತ. ಜಹಜುಗಳ ಯಾನಕ್ಕೆ ಅನುಕೂಲ ಉಳಿದ ಮಾರ್ಗಗಳಲ್ಲಿ ಜಿóಂಕ್ ಹಡಗುಗಳ ಮತ್ತು ಸಣ್ಣ ನೌಕೆಗಳ ಸಂಚಾರ ಸಾಧ್ಯ. ನೌಕಯಾನಕ್ಕೆ ಅನುಕೂಲವಾದ ನದಿಗಳು ಯಾಂಗ್‍ಟ್ಸೀ, ಷೀ ಕ್ಯಾಂಗ್, ಹ್ವಾಂಗ್ ಹೋ (ಹಳದಿ ನದಿ) ಮತ್ತು ಸುಂಗಾರಿ. ಯಾಂಗ್‍ಟ್ಸೀ (5760ಕಿ.ಮೀ.) 2670ಕಿ.ಮೀ. ನೌಕಯಾನಕ್ಕೆ ಯೋಗ್ಯವಾಗಿದೆ. ಚೀನದ ಸರಕುಗಳು ಹೆಚ್ಚಾಗಿ ಜಲಮಾರ್ಗಗಳ ಮೂಲಕ ಸಾಗುತ್ತವೆ. ಕಾಲುವೆಗಳ ಪೈಕಿ ಚೀನ ಮಹಾಕಾಲುವೆ ದೊಡ್ಡದು (1768ಕಿ.ಮೀ.). ಅದು ಪೀಕಿಂಗ್ ನಗರದಿಂದ ಹಾಂಗ್‍ಕಾಂಗ್ ನಗರದವರೆಗೆ ಸಾಗುತ್ತದೆ. ಕ್ಯಾನ್ಸೂ ಮಹಾಕಾಲುವೆ ಇನ್ನೊಂದು ಮುಖ್ಯ ಮಾರ್ಗ. ಕರಾವಳಿ ಹಾಗೂ ವಿದೇಶಿ ಸಂಚಾರ ಹಡಗುಗಳ ನಿಯಂತ್ರಣಕ್ಕೆ ಟಿನ್‍ಟ್ಸಿನ್, ಷ್ಯಾಂಗ್‍ಹೈ, ಚಿಂಗ್‍ಡೌ, ಲೂಟ ಮತ್ತು ಕ್ಯಾಂಟನ್‍ಗಳಲ್ಲಿ ಸಮುದ್ರಯಾನ ಕಚೇರಿಗಳಿವೆ.

ಚೀನದಲ್ಲಿರುವ ರಸ್ತೆಗಳ ಉದ್ದ 3968ಕಿ.ಮೀ. ಆಧುನಿಕ ಹೆದ್ದಾರಿಗಳು ಹಲವಿದೆ. ಜನಸಂಖ್ಯೆಗೆ ತಕ್ಕಷ್ಟು ಮೋಟಾರು ವಾಹನಗಳಿಲ್ಲ.

1964ರಿಂದ ಪೀಕಿಂಗ್, ಕ್ಯಾಂಟನ್ ಮತ್ತು ಷ್ಯಾಂಗ್‍ಹೈ ಮುಖ್ಯ ವಿಮಾನ ಕೇಂದ್ರಗಳು. ಪೀಕಿಂಗ್ ನಗರದಿಂದ ಒಳನಾಡಿಗೆ 20 ವಿಮಾನ ಮಾರ್ಗಗಳಿವೆ. ಕೆಲವು ಸಮತಾವಾದಿ ರಾಜ್ಯಗಳು, ಮೈನ್‍ಮಾರ್, ಫ್ರಾನ್ಸ್, ಕಾಬೋಡಿಯ, ಇಂಡೋನೇಷ್ಯ ಮತ್ತು ಪಾಕಿಸ್ತಾನ-ಇವುಗಳಿಗೆ ವಿಮಾನ ಸಂಚಾರವಿದೆ. ಮಾಸ್ಕೋ-ಪೀಕಿಂಗ್ ನಡುವೆ ವಾರಕ್ಕೊಮ್ಮೆ ರಷ್ಯನ್ ವಿಮಾನ ಹಾರಾಟವುಂಟು.

vii ನಗರಗಳು : 23 ಶತಮಾನಗಳ ಇತಿಹಾಸದಲ್ಲಿ ಚೀನಕ್ಕೆ ರಾಜಧಾನಿಗಳಾಗಿದ್ದ ನಗರಗಳು ಆರು, ಅವು ಹ್ವಾಂಗ್‍ಹೋ (ಹಳದಿ ನದಿ) ದಂಡೆಯ ಮೇಲಣ ಲೋಯಾಂಗ್, ಷೀಯಾನ್, ಕೈಫಂಗ್, ಪೀಕಿಂಗ್ ; ಯಾಂಗ್‍ಟ್ಸೀ ನದಿಯ ದಡದ ಮೇಲಣ ನ್ಯಾನ್‍ಕಿಂಗ್, ಹ್ಯಾಂಗ್‍ಚೌ, ಈಗಿನ ರಾಜಧಾನಿ ಪೀಕಿಂಗ್. ದಕ್ಷಿಣ ಮತ್ತು ಪೂರ್ವ ಭಾಗದ ನದೀತೀರಗಳಲ್ಲಿ ಹಾಗೂ ಕಡಲಂಚಿನಲ್ಲಿ ಜನಸಾಂದ್ರತೆ ಹೆಚ್ಚು. ಅಲ್ಲಿ ದೊಡ್ಡ ಪಟ್ಟಣಗಳು ಬೆಳೆದುವು. ಇಟಲಿಯ ಪ್ರವಾಸಿ ಮಾರ್ಕೋಪೋಲೋ, ಕುಬ್ಲೈಖಾನನ ಆಸ್ಥಾನಕ್ಕೆ ಬಂದಾಗ ಪೀಕಿಂಗ್ ನಗರಕ್ಕೆ ಚುಂಗ್-ಟು ಎಂಬ ಹೆಸರಿತ್ತು. ಮಿಂಗ್ ರಾಜಸಂತತಿಯ ಕಾಲದಲ್ಲಿ (1421) ಅದಕ್ಕೆ ಪೀಕಿಂಗ್ ಎಂಬ ಹೆಸರು ಬಂತು. 1968ರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದ ನಗರಗಳು ಷ್ಯಾಂಗ್‍ಹೈ, ಪೀಕಿಂಗ್, ಷೆನ್‍ಯಾಂಗ್, ಟಿನ್‍ಟ್ಸಿನ್, ವೂಹಾನ್, ಕ್ಯಾಂಟನ್, ಚಂಗ್‍ಕಿಂಗ್, ಹಾರ್ಬಿನ್, ಲೂಟ, ನ್ಯಾನ್‍ಕಿಂಗ್, ಷೀಯಾನ್, ಚಿಂಗ್-ಡೌ, ಚಂಗ್‍ಡೂ, ಟೈಯೂಯಾಮ್ ಮತ್ತು ಫೂಷುನ್.

iv ಇತಿಹಾಸ ಪ್ರಾಗಿತಿಹಾಸ : ಪ್ರಾಚೀನ ಶಿಲಾಯುಗ ಸಂಸ್ಕøತಿ : 1929ರಲ್ಲಿ ಪೀಕಿಂಗಿನ ನೈಋತ್ಯಕ್ಕೆ ಸು. 45 ಕಿಮೀ. ದೂರದಲ್ಲಿರುವ ಜೋಕೋಟೈನ್ ಗುಡ್ಡ ಪ್ರದೇಶದಲ್ಲಿ ಅಲ್ಲಿಯ ಸುಣ್ಣಕಲ್ಲಿನ ಗುಡ್ಡದ ಬಿರುಕುಗಳಲ್ಲಿದ್ದ ಕೆಂಪುಮಣ್ಣು ಮತ್ತು ಕಲ್ಲುಚೂರುಗಳ ಪದರುಗಳಲ್ಲಿ ಚೀನದ ಅತ್ಯಂತ ಪ್ರಾಚೀನ ಮಾನವ ತಲೆಬುರುಡೆಯ ಪಳಿಯುಳಿಕೆಗಳು ದೊರೆತವು. ಈ ಸ್ಥಳದಲ್ಲಿ ದೊರೆತ 45 ವ್ಯಕ್ತಿಗಳ ಅಸ್ಥಿ ಅವಶೇಷಗಳಲ್ಲಿ 15 ಮಕ್ಕಳುಗಳಾಗಿದ್ದುವು. ಮಾನವನ ದೈಹಿಕ ಹಾಗೂ ಸಾಂಸ್ಕøತಿಕ ಉತ್ಕ್ರಾಂತಿಯನ್ನು ತಿಳಿಯುವುದಕ್ಕೆ ಆಧಾರವಾಗಿರುವ ಕೆಲವೇ ಪುರಾತತ್ತ್ವ ಶೋಧನೆಗಳಲ್ಲಿ ಇವೂ ಒಂದಾಗಿದ್ದು ಅತಿ ಮುಖ್ಯವೂ ಆದುದರಿಂದ, ಈ ಆವಿಷ್ಕಾರ ಈಗ ಜಗತ್ ಪ್ರಸಿದ್ಧವಾಗಿದೆ. ಈ ಅವಶೇಷಗಳು ಮಧ್ಯ ಪ್ಲೀಸ್ಟೊಸಿನ್ ಯುಗಕ್ಕೆ ಸೇರಿದವೆಂದು, ಎಂದರೆ ಸುಮಾರು 5 ಲಕ್ಷ ವರ್ಷಗಳಷ್ಟು ಹಿಂದಿನವೆಂದು, ತರ್ಕಿಸಲಾಗಿದೆ. ಈ ಕಾಲದ ಮಾನವನನ್ನು ಪ್ರಾಕ್ತನ ಶಾಸ್ತ್ರಜ್ಞರು ಸಿನಾಂಥ್ರೋಪಸ್ (ಪಥಕಾಂತ್ರೋಪಸ್ ಪೇಕಿನೆಸಿಸ್) ಅಥವಾ ಪೀಕಿಂಗ್ ಮಾನವ ಎಂದು ಕರೆದಿದ್ದಾರೆ. ಇವನು ಸುಮಾರು 1,56 ಮೀ. ಎತ್ತರವಾಗಿದ್ದು ನೆಟ್ಟಗೆ ನಿಲ್ಲುವಂಥವನಾಗಿದ್ದ. ಇವನಿಗೆ ತಗ್ಗಿದ ಹಣೆ, ಉಬ್ಬಿದ ಹುಬ್ಬು, ಬಲವಾದ ದವಡೆ ಇದ್ದುವು. ಇವನು ಪ್ರಾಯಶಃ ತನಗೆ ಅನುಕೂಲವಾಗುವ ರೀತಿಯಲ್ಲಿ ಶಬ್ದಗಳನ್ನು ಉಚ್ಚರಿಸುವ ಸಾಮಥ್ರ್ಯ ಪಡೆದಿದ್ದ. ಈ ಪಳೆಯುಳಿಕೆಗಳೊಡನೆ ಪ್ರಾಣಿಗಳ ಅಸ್ಥಿ ಅವಶೇಷಗಳು. ಒರಟು ಕಲ್ಲಿನ ಉಪಕರಣಗಳು, ಸುಟ್ಟ ಎಲುಬುಗಳು, ಅಗ್ನಿಕುಂಡಗಳ ಕುರುಹುಗಳು ಕೂಡ ದೊರೆತಿವೆ. ಕಲ್ಲಿನ ಆಯುಧಗಳು ಹೆಚ್ಚಾಗಿ ಹಸುರು ಮರಳುಗಲ್ಲು, ಸುಣ್ಣಕಲ್ಲು, ಬೆಣಚು ಕಲ್ಲುಗಳಲ್ಲಿ ಮಾಡಿದವು. ಅವು ಸಾಮಾನ್ಯವಾಗಿ ಮಚ್ಚುಗತ್ತಿಯ ರೀತಿಯಲ್ಲಿರುತ್ತಿದ್ದವು. ಅಥವಾ ಮೊನೆಯುಳ್ಳ ಆಯುಧಗಳಾಗಿದ್ದವು. ಮಚ್ಚುಗತ್ತಿಯಂಥ ಆಯುಧಗಳು ದುಂಡಾಗಿಯೋ ಕೋಳಿಮೊಟ್ಟೆಯ ಆಕೃತಿಯ ಆಕಾರದಲ್ಲೋ ಇರುತ್ತಿದ್ದವು. ಚಪ್ಪಟೆಯಾದ ಗಟ್ಟಿ ಕಲ್ಲಿನಿಂದ ಮಾಡಿದವಾಗಿದ್ದವು. ಮೊನೆಯುಳ್ಳ ಆಯುಧಗಳು ಚಕ್ಕೆಕಲ್ಲಿನವು ; ಮತ್ತು ಹೆರೆಯಲನುಕೂಲವಾದಂಥವು.

ಈ ಮಾನವ ಇದ್ದ ಪ್ರದೇಶದಲ್ಲಿ ಹುಲಿ, ನೀರೆಮ್ಮೆ, ಎಮ್ಮೆ, ಜಿಂಕೆ, ಕುರಿ, ಕಾಡು ಹಂದಿ, ಘೇಂಡಾಮೃಗ, ಒಂಟೆ ಮುಂತಾದ ಪ್ರಾಣಿಗಳಿದ್ದವು. ಈತ ಬೇಟೆಗಾರನಾಗಿದ್ದ. ಜಿಂಕೆಯ ಮಾಂಸವೇ ಹೆಚ್ಚಾಗಿ ಇವನ ಆಹಾರ ಅಸ್ಥಿಯೊಳಗಿನ ಮಜ್ಜೆಯನ್ನೂ ತಿನ್ನುತ್ತಿದ್ದ. ಪ್ರಾಯಶಃ ಇವನು ನರಭಕ್ಷಕನೂ ಆಗಿದ್ದಿರಬೇಕು.

ಈ ಪ್ರಾಚೀನ ನೆಲೆಯ ಒಂದು ಭಾಗವಾದ ಟಿಂಗ್-ಟ್ಸುನ್ ಪ್ರದೇಶದಲ್ಲಿ ದೊರೆತ ಕಲ್ಲಿನ ಆಯುಧಗಳು ಮತ್ತು ಮನುಷ್ಯನ ಅಸ್ಥಿ ಅವಶೇಷಗಳು ಅಲ್ಲಿಯ ಪ್ರಾಚೀನ ಶಿಲಾಯುಗ ಸಂಸ್ಕøತಿಯ ಸುಧಾರಿಸಿದ ಮತ್ತು ಕೊನೆಯ ಹಂತಕ್ಕೆ ಸೇರಿದಂಥವು. ಇವು ಸಿನಾಂತ್ರೋಪಸ್ ಮಾನವನಿಗೂ ಆ ಬುಡಕಟ್ಟಿನ ಈಗಿನ ಮಾನವನಿಗೂ ನಡುವಣ ಸ್ಥಿತಿಯಲ್ಲಿದ್ದ ಮಾನವನವು.

ಪ್ರಾಚೀನ ಶಿಲಾಯುಗ ಸಂಸ್ಕøತಿಯ ಹಂತದಿಂದ ಮುಂದಿನ, ನೂತನ ಶಿಲಾಯುಗದವರೆಗಿನ, ಚೀನೀ ಪ್ರದೇಶದಲ್ಲಿಯ ಮಾನವ ಸಂಸ್ಕøತಿಯ ಬಗ್ಗೆ ಅಷ್ಟಾಗಿ ಏನೂ ತಿಳಿದುಬಂದಿಲ್ಲ. ಷುಯಿ-ತುಂಗ್-ಕಾವ್‍ನಲ್ಲಿ ಮೆಕ್ಕಲು ಪ್ರದೆಶದಲ್ಲಿಯ ಉತ್ಖನನಗಳಲ್ಲಿ 12ಮೀ. ಕೆಳಗೆ ಫ್ಲಿಂಟ್ ಕಲ್ಲಿನ ಉಪಕರಣಗಳು ಪ್ರಾಣಿಗಳ ಅಸ್ಥಿ ಅವಶೇಷಗಳೂ ರಾತ್ರಿ ಬಿಡಾರದ ಅಗ್ಗಿಷ್ಟಿಕೆಯ ಕುರುಹೂಗಳೂ ದೊರೆತಿವೆ. ಇವು ಕಾಡುಕತ್ತೆ, ಚಿಗರಿ, ಆಸ್ಟ್ರಿಚ್ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಜನರವೆಂದು ಕಾಣುತ್ತದೆ. ಜಾರು-ಆಸೊ-ಗೋಲ್‍ನಲ್ಲಿಯ ಹುಲ್ಲುಗಾವಲಿನಲ್ಲಿ 50 ಮೀ. ಆಳದಲ್ಲಿ ಇಂಥ ಜನರ ವಸತಿ ನೆಲೆಗಳಿದ್ದ ಗುರುತುಗಳು ದೊರೆತಿವೆ. ಜೊತೆಗೆ, ಅಲ್ಲಿ ಕಲ್ಲಿನ ಮೊನೆಗಳು, ಗಟ್ಟಿಗಳು ಮತ್ತು ಆನೆ, ಕುದುರೆ, ಮೇಕೆ, ಘೇಂಡಾಮೃಗ, ಆಸ್ಟ್ರಿಚ್ ಮುಂತಾದ ಪ್ರಾಣಿಗಳ ಅಸ್ಥಿಗಳು ಇದ್ದುವು. ಗಟ್ಟಿಗಳ ಮೇಲೆ ನೀಳವಾದ ಚಕ್ಕೆಗಳನ್ನು ತೆಗೆದುದರಿಂದುಂಟಾದ ಪಟ್ಟೆಗಳಿವೆ. ಈ ಸಂಸ್ಕøತಿ ಪಶ್ಚಿಮ ಯೂರೋಪಿನ ಸೂಕ್ಷ್ಮಶಿಲಾಯುಗದ ಸಂಸ್ಕøತಿಯ ಮ್ಯಾಗ್ಡಲೀನಿಯನ್ ಸಂಸ್ಕøತಿಯನ್ನು ಸ್ವಲ್ಪಮಟ್ಟಿಗೆ ಹೋಲಬಹುದು.

ಚೌಕೊ-ಟೀಯೆನ್ ಗುಡ್ಡದ ಮೇಲ್ಭಾಗದಲ್ಲೇ ಒಂದು ಗುಹೆಯಲ್ಲಿ ಇದೇ ಬಗೆಯ ಶಿಲಾಯುಗ ಸಂಸ್ಕøತಿಯ ಅವಶೇಷಗಳು ದೊರೆತಿವೆ. ಇಲ್ಲಿ ನೀಳ ಚಕ್ಕೆಗಳಿಲ್ಲ. ಈಗಿನ ಬುಡಕಟ್ಟಿನ ಜನರನ್ನು ದೈಹಿಕವಾಗಿ ಹೋಲುವಂಥ ಸುಮಾರು 20 ವ್ಯಕ್ತಿಗಳ ಅಸ್ಥಿಪಂಜರಗಳು, ಎಲುಬು ಕೋಡುಗಳಿಂದ ಮಾಡಿದ ಉಪಕರಣಗಳು, ಕೆಮ್ಮಣ್ಣು ಸವರಲಾದ, ಉಜ್ಜಿದ ತೂತುಳ್ಳ ಮಣಿಗಳು, ಅಸ್ಥಿಪದಕಗಳು ತೂತುಳ್ಳ ಹೊಳಪು ಮಾಡಿದ ಶಂಖಾಭರಣಗಳು ಮುಂತಾದವು ಇದ್ದುವು. ಇಲ್ಲಿಯ ಹಳೆಯ ಶಿಲಾಯುಗದ ಜನರಿಗಿಂತ ಬಹುವಿಧದಲ್ಲಿ ಇವರು ಸುಧಾರಿತರಿದ್ದರೆಂಬುದು ಖಚಿತವಾಯಿತು.

ಒಂದು ಅಸ್ಥಿಪಂಜರದ ಮೇಲೆ ಹಾಗೂ ಸುತ್ತಲೂ ಕೆಮ್ಮಣ್ಣಿನ ಬಣ್ಣ ಹಾಕಲಾಗಿತ್ತು. ಚೀನದಲ್ಲಿ ಇದೇ ಅತ್ಯಂತ ಪ್ರಾಚೀನ ಶವಸಂಸ್ಕಾರದ ಗುರುತು. ಮುಂದೆ ನೂತನ ಶಿಲಾಯುಗ ಸಂಸ್ಕøತಿಯ ಜನರ ಶವಸಂಸ್ಕಾರದ ಪದ್ಧತಿಯಲ್ಲಿ ಕೆಮ್ಮಣ್ಣಿನ ಬಳಕೆ ಸಾಮಾನ್ಯವಾಗಿತ್ತು. ಆದರೆ ಕೆಮ್ಮಣ್ಣು ಆ ಸ್ಥಳದಲ್ಲಿ ಸಿಗುವುದಿಲ್ಲ. ಅದರ ಉತ್ತರಕ್ಕೆ ಸುಮಾರು 170 ಕಿಮೀ. ದೂರದಲ್ಲಿ ಲಂಗ್ ಕುವಾನ್ ಎಂಬಲ್ಲಿ ದೊರೆಯುತ್ತದೆ. ಆಭರಣಗಳಿಗೆ ಉಪಯೋಗಿಸಲಾಗುತ್ತಿದ್ದ ಶಂಖದ ವಸ್ತು ಸು. 185 ಕಿಮೀ. ದೂರದಲ್ಲಿಯ ಸಮುದ್ರತೀರದಿಂದ ಬಂದಿರಬೇಕು. ಆದ್ದರಿಂದ ದೂರ ಪ್ರದೇಶಗಳೊಡನೆ ಈ ಜನ ವ್ಯಾಪಾರ ಸಂಬಂಧ ಹೊಂದಿದ್ದಿರಬೇಕು. ಇವರು ಮಾಂಗೊಲಾಯ್ಡ್ ಹಾಗೂ ಈಗಿನ ಎಸ್ಕಿಮೊ ಮತ್ತು ಮಲನೇಷಿಯನ್ ಬುಡಕಟ್ಟಿನ ಜನರ ಲಕ್ಷಣಗಳುಳ್ಳವರಾಗಿದ್ದರು. ಈ ಸಂಸ್ಕøತಿಯ ಕಾಲ ಕ್ರಿ.ಪೂ.ಸು. 30000-20000 ಎಂದು ಅಂದಾಜು ಮಾಡಲಾಗಿದೆ.

ಸೂಕ್ಷ್ಮ ಶಿಲಾಯುಗ ಸಂಸ್ಕøತಿ : ಕ್ರಿ. ಪೂ. ಸು. 2ನೆಯ ಸಹಸ್ರಮಾನದ, ಭಿನ್ನ ರೀತಿಯ ಸಾಂಸ್ಕøತಿಕ ಅವಶೇಷಗಳು ಮಧ್ಯಚೀನದಲ್ಲಿಯ ಮಂಗೋಲಿಯ, ಮಂಚೂರಿಯ ಮತ್ತು ಓರ್ಡೋನ್‍ಗಳಲ್ಲಿ ದೊರೆತಿವೆ. ಆದರೆ ಈ ಸಂಸ್ಕøತಿ ಹಳದಿ ನದಿ ಬಯಲಿನಲ್ಲಿ ತೋರಿಬಂದ ಪಶುಸಂಗೋಪನೆಯ ಮತ್ತು ಕೃಷಿ ಆಧಾರಿತವಾದ ಕಂಚಿನ ಯುಗದ ಸಂಸ್ಕøತಿಯದಕ್ಕಿಂತ ಹಿಂದಿನದೇ ಎಂಬುದು ಖಚಿತವಾಗಿಲ್ಲ. ಪ್ರಾಯಶಃ ಇದು ಹಿಂದಿನ ಕಾಲದಿಂದಲೂ ಬಂದಿದ್ದು, ಕಂಚಿನ ಯುಗದ ಸಂಸ್ಕøತಿಯ ಪ್ರಭಾವಕ್ಕೆ ಒಳಪಟ್ಟಿರಬಹುದು; ಅಥವಾ ಇವೆರಡು ಸಂಸ್ಕøತಿಗಳೂ ಸಮಕಾಲೀನವಾಗಿದ್ದಿರಬಹುದು. ಈ ಸಂಸ್ಕøತಿಯ ಕಾಲಾವಧಿ ನಿರ್ದಿಷ್ಟವಾಗಿ ತಿಳಿದಿಲ್ಲ. ಇದಕ್ಕೆ ಸಂಬಂಧಿಸಿದ ಸುಮಾರು 327 ನೆಲೆಗಳನ್ನು ಮಂಚೂರಿಯ ಮತ್ತು ಷಿನ್‍ಜಿಯಾಂಗ್ ನಡುವಿನ ಪ್ರದೇಶದಲ್ಲಿ ಚೀನೀ-ಸ್ವೀಡಿಷ್ ತಂಡದ ಅನ್ವೇಷಕರು ಶೋಧಿಸಿದರು. ಇವುಗಳಲ್ಲಿ ಫ್ಲಿಂಟ್ ಕಲ್ಲಿನಸೂಕ್ಷ್ಮ ಶಿಲಾಯುಧಗಳು, ಉಜ್ಜಿ ನಯಮಾಡಿದ ಕಲ್ಲಿ ಕೊಡಲಿಗಳು, ಮಣ್ಣಿನ ಪಾತ್ರೆಗಳ ಚೂರುಗಳು ಮುಂತಾದವು ಇವೆ. ಇವುಗಳಲ್ಲಿ ಸೂಕ್ಷ್ಮ ಶಿಲಾಯುಗದ ಮತ್ತು ನೂತನ ಶಿಲಾಯುಗದ ಸಂಸ್ಕøತಿಗಳ ಲಕ್ಷಣಗಳುಂಟು. 1922-30ರಲ್ಲಿ ಅಮೆರಿಕನ್-ಮಧ್ಯ ಏಷ್ಯನ್ ತಂಡದ ಅನ್ವೇಷಕರು ಶೋಧಿಸಿದ 180 ನೆಲೆಗಳಲ್ಲಿ ಒಂದಾದ ಷಬರಖ್ ಉಸು ಎಂಬಲ್ಲಿ ಮಾತ್ರ ನೂತನ ಶಿಲಾಯುಗ ಸಂಸ್ಕøತಿಯ ಅವಶೇಷಗಳು ಸೂಕ್ಷ್ಮಶಿಲಾಯುಗ ಸಂಸ್ಕøತಿಯದಕ್ಕಿಂತ ಮೇಲಿನ ಮಣ್ಣಿನ ಪದರಗಳಲ್ಲಿದ್ದುವು. ಈ ನೆಲೆಗಳ ಪೈಕಿ ಗೋಬಿ ಮರುಭೂಮಿಯವು ಉತ್ತಮ ನಿದರ್ಶನಗಳು.

ಇಲ್ಲಿಯ ಕಲ್ಲಿನ ಕೊಡಲಿಗಳು ಹೆಚ್ಚಾಗಿ ದುಂಡಾಗಿವೆ. ಅಪರೂಪವಾಗಿ ಚೌಕೋನವಾಗಿಯೂ ಉಂಟು. ಜೊತೆಗೆ ಉಜ್ಜಿದ, ಉದ್ದನೆಯ, ಚೌಕೋನ ಅಥವಾ ಅರ್ಧಚಂದ್ರಾಕೃತಿಯ ಕಲ್ಲಿನ ಚಾಕುಗಳು ದೊರೆತಿವೆ. ಗಡಿಗೆ ಮಡಕೆಗಳೆಲ್ಲವೂ ಕೈಯಿಂದ ಮಾಡಿದಂಥವು. ಈ ಅವಶೇಷಗಳಲ್ಲಿ ಮೂರು ಕಾಲುಗಳುಳ್ಳ ಬಟ್ಟಲುಗಳು, ಹಲ್ಲುಗಳುಳ್ಳ ಗಾಳ, ಹೆಣೆದ ಕಡ್ಡಿಗಳ ಬಲೆ, ಪ್ರಾಯಶಃ ಕೊಡಲಿಗಳಿಗೆ ಕಾವುಗಳಾಗಿ ಉಪಯೋಗಿಸಿದ್ದಿರಬಹುದಾದ ಎರಡು ಜಿಂಕೆ ಕೊಂಬುಗಳು ಗಮನಾರ್ಹ, ಪೂರ್ವ ಮಂಗೋಲಿಯ, ಮಂಚೂರಿಯ ಮತ್ತು ಗೋಬಿ ಪ್ರದೇಶಗಳಲ್ಲಿಯ ಸಂಸ್ಕøತಿಗಳು ಸಾಮಾನ್ಯವಾಗಿ ಒಂದೇ ವಿಧವಾಗಿದ್ದರೂ ಆಯಾ ಪ್ರದೇಶಗಳಲ್ಲಿಯ ಕೆಲವೊಂದು ವೈಶಿಷ್ಟಗಳಿಂದ ಭಿನ್ನವಾಗಿಯೂ ಇವೆ.

ಈ ಜನರು ಸತ್ತವರನ್ನು ತಮ್ಮ ವಸತಿನೆಲೆಗಳ ಸಮೀಪದಲ್ಲಿ ಉಗಿಯುತ್ತಿದ್ದರು. ಶವಗಳ ಜೊತೆಗೆ ಗಡಿಗೆಗಳನ್ನು, ಅಸ್ಥಿ ಮತ್ತು ಕಲ್ಲಿನ ಉಪಕರಣಗಳನ್ನು ಮತ್ತು ಅಪರೂಪವಾಗಿ ನಾಯಿಯನ್ನು ಇಡುತ್ತಿದ್ದರು.

ಲಿನ್-ಹ್ಸಿಯಲ್ಲಿ ಈ ನೂತನ ಶಿಲಾಯುಗ ಸಂಸ್ಕøತಿ ಇನ್ನೂ ಸುಧಾರಿಸಿತ್ತೆಂದು ತೋರುತ್ತದೆ. ಇಲ್ಲಿಯ ಗಡಿಗೆಗಳು ಚಕ್ರದ ತಿಗರಿಯ ಮೇಲೆ ಮಾಡಿದವಾಗಿದೆ. ಕಲ್ಲಿ ಕುಳಗಳು, ಕೊಯ್ಲು ಮಾಡುವ ಕತ್ತಿಗಳ ಅವಶೇಷಗಳು ದೊರೆತಿವೆ.

ನೂತನ ಶಿಲಾಯುಗ ಸಂಸ್ಕøತಿ : 1922ರಲ್ಲಿ ಪ್ರಥಮವಾಗಿ ಯಾಂಗ್‍ಶಾವೊ ಬಳಿ ನೂತನ ಶಿಲಾಯುಗ ಸಂಸ್ಕøತಿಯ ನೆಲೆಯನ್ನು ಗುರುತಿಸಲಾಯಿತು. ಬೂದು ಹಾಗೂ ಕೆಂಪು ಬಣ್ಣದ ಮಣ್ಣಿನ ಪಾತ್ರಗಳು ದಪ್ಪನೆಯ ದುಂಡನೆಯ ಅಥವಾ ಚೌಕೋನದ ಉಜ್ಜಿದ ಕಲ್ಲಿನ ಕೊಡಲಿಗಳು, ಕುಯ್ಲು ಮಾಡುವ, ತೆಳ್ಳನೆಯ ಚಕ್ಕೆಯಲ್ಲಿ ಮಾಡಿದ, ಉದ್ದನೆಯ ಕುಡುಗೋಲುಗಳು, ತಕಲಿಗಳು ಬಾಣದ ಮೊನೆಗಳು ಮುಂತಾದವು ಇಲ್ಲಿ ಸಿಕ್ಕಿವೆ. ಇಂಥ ಸಾಂಸ್ಕøತಿಕ ಅವಶೇಷಗಳುಳ್ಳ ನೆಲಗಳು ಹಳದಿ ನದಿ ಬಯಲಿನ ಮಧ್ಯದಿಂದ ಉದ್ದಕ್ಕೂ , ಇದರ ಉಪನದಿಗಳಾದ ಕ್ಯಾನ್ಸೂ ಮತ್ತು ವೈ ನದಿಗಳ ಫಲವತ್ತಾದ ಬಯಲುಗಳಲ್ಲೂ ಇವೆ. ಈ ನೆಲೆಗಳಲ್ಲಿ ಪನ್-ಪೊ-ಟ್ಸುನ್ ಎಂಬಲ್ಲಿ ಮಾತ್ರ ವ್ಯಾಪಕವಾಗಿ ಮಾಡಲಾದ ಉತ್ಖನನದಿಂದ ಈ ಸಂಸ್ಕøತಿಯ ಸ್ಥೂಲ ಸ್ವರೂಪ ತಿಳಿದಿದೆ.

ಈ ಜನ ವಾಸಕ್ಕಾಗಿ ಚೌಕೋನದ ಅಥವಾ ದುಂಡಾದ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತಿದ್ದರು. ಇವುಗಳಿಗೆ ತಡಿಕೆಗೋಡೆಗಳಿರುತ್ತದ್ದುವು. ಒಳಗಡೆ ಧಾನ್ಯಗಳ ಸಂಗ್ರಹಕ್ಕೂ ಒಲೆಗಳಿಗೂ ನೆಲದಲ್ಲಿ ಗುಂಡಿಗಳನ್ನು ಅಗೆದು ಬದಿಗಳಿಗೆ ನುಣುಪು ಮಣ್ಣು ಬಳಿಯುತ್ತಿದ್ದರು. ಧಾನ್ಯಸಂಗ್ರಹದ ಗುಂಡಿಗಳು ಮನೆಯ ಹೊರಗಡೆಯೂ ಇರುತ್ತಿದ್ದವು. ಇವು ಸುಮಾರು 6 ಮೀ. ಆಳವಿರುತ್ತಿದ್ದುವು. ಹಳ್ಳಿಯ ಒಂದು ಬದಿಯಲ್ಲಿ ಗಡಿಗೆಗಳನ್ನು ಸುಡುವ ಭಟ್ಟಿಗಳಿರುತ್ತಿದ್ದವು. ಎತ್ತರವಾದ ಗುಡಾಣುಗಳು, ಬುಡ ದುಂಡಾದ ಅಥವಾ ಚಪ್ಪಟೆಯಾದ ಬಟ್ಟಲುಗಳು (ಮರಿಗೆಗಳು), ಮೂರು ಕಾಲುಗಳುಳ್ಳ ಬಟ್ಟಲುಗಳು, ಚೂಪಾದ ಬುಡವೈ ಸಣ್ಣ ಬಾಯೂ ಉಳ್ಳ ಹೂಜಿಗಳು-ಇವು ಗಡಿಗೆ ಮಡಿಕೆಗಳಲ್ಲಿ ಮುಖ್ಯವಾದವು. ಇವುಗಳ ಬಣ್ಣ ಕೆಂಪು ಅಥವಾ ಬೂದು. ಕೆಂಪು ಗಡಿಗೆಗಳ ಮೇಲೆ ಕಪ್ಪು ಬಣ್ಣದ ರೇಖಾಚಿತ್ರಗಳಿರುತ್ತಿದ್ದವು. ಮನುಷ್ಯಮುಖದ ಮತ್ತು ಮೀನಿನ ಚಿತ್ರಗಳು ಈ ನೆಲೆಯಲ್ಲಿಯ ಗಡಿಗೆಯ ಮೇಲೆ ಮಾತ್ರ ಕಂಡುಬಂದಿವೆ. ಒರಟು ಮಡಿಕೆಗಳ ಮೇಲೆ ಕೊರೆದ ಗೆರೆ ಚಿತ್ರಗಳ ಅಚ್ಚೊತ್ತಿದ, ಹೆಣೆದ ಹಗ್ಗಗಳ, ಚಿತ್ರಗಳಿವೆ. ವರ್ಣ ಚಿತ್ರಿತ ಅಸ್ಥಿಪಾತ್ರೆಗಳು ವಿಶೇಷರೀತಿಯವಾಗಿರುತ್ತಿದ್ದವು.

ಶವಸಂಸ್ಕಾರ ಪದ್ಧತಿಗಳಲ್ಲಿ ಕ್ಯಾನ್ಸೂ ಮತ್ತು ಯಾಂಗ್‍ಷಾವೊ ಪ್ರದೇಶಗಳಲ್ಲಿ ವ್ಯತ್ಯಾಸಗಳಿವೆ. ಮೊದಲನೆಯದರಲ್ಲಿ, ದೇಹವನ್ನು ಬಲ ಮಗ್ಗುಲಲ್ಲಿ ಮಲಗಿಸಿ, ಕಾಲುಗಳನ್ನು ಮೇಲಕ್ಕೆಳೆದು ಮಡಿಸಲಾಗುತ್ತಿತ್ತು. ಅದರ ಮುಂಭಾಗದಲ್ಲಿ ವಿವಿಧ ಮಡಿಕೆಗಳನ್ನು ಸಾಲಾಗಿ ಇಡುತ್ತಿದ್ದರು. ಶವವನ್ನು ಹೊರಗೆ ಇಟ್ಟಿದ್ದು ಕೆಲವು ಸಮಯದ ಅನಂತರ ಅದರ ಅಳಿದುಳಿದ ಅಸ್ಥಿಗಳನ್ನು ಒಟ್ಟುಮಾಡಿ ಹುಗಿಯುತ್ತಿದ್ದದ್ದೂ ಉಂಟು. ಚೌಕೋನದ ಗುಂಡಿಯಲ್ಲಿ ಶವವನ್ನು ಅಂಗಾತ ಮಲಗಿರುವುದು ಯಾಂಗ್‍ಷಾವೊ ಪ್ರದೇಶದ ಪದ್ಧತಿ. ಕೆಲವು ಗುಂಡಿಗಳಲ್ಲಿ ಅವುಗಳ ಬದಿಗಳಿಗೆ ಮರದ ಹಲಗೆಗಳನ್ನು ಜೋಡಿಸಲಾಗಿತ್ತು.

ಈ ನೂತನ ಶಿಲಾಯುಗದ ಕಾಲ ಯಾವುದೆಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಯಾಂಗ್‍ಷಾವೊ ಸಂಸ್ಕøತಿಯ ಕಾಲ ಬಹುಶಃ ಕ್ರಿ.ಪೂ. 2ನೆಯ ಸಹಸ್ರ ಮಾನದ ಆದಿಭಾಗವೆಂದೂ ಶಾನ್ಸು ಸಂಸ್ಕøತಿ ಇದಕ್ಕಿಂತ ಪೂರ್ವದಲ್ಲಿ ಆರಂಭವಾಗಿದ್ದಿರಬೇಕೆಂದೂ ತರ್ಕಿಸಲಾಗಿದೆ.

ಈ ಪ್ರದೇಶಗಳ ಪೂರ್ವದಲ್ಲಿಯ, ಹೋನ್ಯಾನ್‍ಗೆ ಈಶಾನ್ಯದ ಭಾಗಗಳಲ್ಲಿ ಬೇರೆ ಬಗೆಯ, ಲಂಗ್‍ಷಾನ್ ಎಂದು ಕರೆಯಲಾದ, ನೂತನ ಶಿಲಾಯುಗದ ಸಂಸ್ಕøತಿಯಿತ್ತು. ಇದು ಯಾಂಗ್‍ಷಾವೊ ಸಂಸ್ಕøತಿಯ ಅನಂತರದ್ದು. ಇದರ ಮಣ್ಣು ಪಾತ್ರೆಗಳು ಕಪ್ಪು ಬಣ್ಣದವು. ಕೆಳಭಾಗದಲ್ಲಿ ಮೂರು ಭಾಗವಾಗಿದ್ದ ಉದ್ದನೆ ಹೂಜಿ ಒಂದು ವಿಶೇಷ. ಚೀನದ ಆಗ್ನೇಯ ಭಾಗದಲ್ಲಿ ಈ ಸಂಸ್ಕøತಿಗಳಿಗಿಂತ ಕಾಡು ಸ್ಥಿತಿಯಲ್ಲಿದ್ದ ನೂತನ ಶಿಲಾಯುಗ ಸಂಸ್ಕøತಿಯಿತ್ತು. ಮಣ್ಣಿನ ಪಾತ್ರೆಗಳು ಸಾಮಾನ್ಯವಾಗಿ ಕಂದು ಬಣ್ಣದವಾಗಿದ್ದು, ಬಿರುಸಾಗಿರುತ್ತಿದ್ದುವು. ಇವುಗಳ ಮೇಲೆ ಸಮಬಾಹು ಚತುರ್ಭುಜದ ಸುತ್ತುಗಳಂಥ, ಹೆಣೆದ ಹಗ್ಗದ, ಚಾಪೆಯ, ಅಚ್ಚೊತ್ತಿದ ಚಿತ್ರಗಳಿರುತ್ತಿದ್ದವು. ಅಪರೂಪವಾಗಿ ಕಪ್ಪು ಬಣ್ಣದ ರೇಖಾಚಿತ್ರಗಳಿರುತ್ತಿದ್ದುದುಂಟು. (ಒಂದು ಗಮನಾರ್ಹ ಅಂಶವೆಂದರೆ, ಮೇಲ್ತುದಿಯಲ್ಲಿ ರಂಧ್ರವಿದ್ದ ಅರ್ಧಚಂದ್ರಾಕೃತಿಯ ಅಥವಾ ಚೌಕೋನಾಕೃತಿಯ, ಉಜ್ಜಿದ ಕಲ್ಲಿನ ಕುಡುಗೋಲು ಎಲ್ಲ ಪ್ರಾದೇಶಿಕ ಸಂಸ್ಕøತಿಗಳಲ್ಲೂ ಬಳಕೆಯಲ್ಲಿತ್ತು. ಇದು ಚೀನದ ಒಂದು ವೈಶಿಷ್ಟ). ಈ ಸಂಸ್ಕøತಿ ಕ್ರಿ. ಪೂ. 8ನೆಯ ಶತಮಾನದವರೆಗೂ ಅಸ್ತಿತ್ವದಲ್ಲಿತ್ತೆಂದು ತಿಳಿದುಬಂದಿದೆ.

ಕಂಚಿನ ಯುಗ ಸಂಸ್ಕøತಿ : ಅನ್ಯಾಂಗ್‍ನಲ್ಲಿ ಉತ್ಖನನದಲ್ಲಿ ಕೆಳಗಿನ ಪದರಗಳಲ್ಲಿ ಯಾಂಗ್‍ಷಾವೊ ಸಂಸ್ಕøತಿಯ ಮಧ್ಯದ ಪದರುಗಳಲ್ಲಿ ಲುಂಗ್‍ಷಾನ್ ಸಂಸ್ಕøತಿಯ ಮತ್ತು ಮೇಲಿನ ಪದರಗಳಲ್ಲಿ ಕಂಚಿನ ಯುಗದ ನಗರ ಸಂಸ್ಕøತಿಯ ಅವಶೇಷಗಳು ದೊರೆತಿವೆ. ಆದರೆ ಇಲ್ಲಿಯ ಮತ್ತು ಇತರ ಕಡೆಗಳ ಉತ್ಖನನಗಳಿಂದ ನೂತನ ಶಿಲಾಯುಗ ಸಂಸ್ಕøತಿ ಹೇಗೆ ಕ್ರಮೇಣ ಕಂಚಿನ ಯುಗದ ನಾಗರಿಕ ಸಂಸ್ಕøತಿಯಾಗಿ ಬೆಳೆಯಿತೆಂದು ಸ್ಪಷ್ಟವಾಗಿಲ್ಲ.

ಕಂಚಿನ ಯುಗ ಸಂಸ್ಕøತಿಯ ಪೂರ್ವ ಭಾಗ : ಷಾಂಗ್ ವಂಶ. 1929-37ರಲ್ಲಿ ಅನ್ಯಾಂಗ್ ಹತ್ತಿರದ ಹ್ಲಿಯ ತುನ್‍ನಲ್ಲಿ ಮಾಡಿದ ಉತ್ಖನನಗಳಿಂದ ಆ ನೆಲೆ ಷಾಂಗ್ ರಾಜವಂಶದ ರಾಜಧಾನಿಯಾಗಿತ್ತೆಂದು ತಿಳಿದುಬಂತು. ಕೊರೆದ ಅಕ್ಷರಗಳುಳ್ಳ ಅಸ್ಥಿ ತುಂಡುಗಳು ಇಲ್ಲಿ 1902ರಿಂದಲೂ ಸಿಗುತ್ತಿದ್ದವು. ಎಲುಬಿನ ಮೇಲೆ ಭವಿಷ್ಯವಾಣಿ ಬರೆಯುವುದು ಷಾಂಗ್ ವಂಶದ ಧಾರ್ಮಿಕ ಪದ್ಧತಿಯ ಒಂದು ವೈಶಿಷ್ಟವಾಗಿತ್ತು ಎಂಬುದು ಈ ವಂಶಕ್ಕೆ ಸಂಬಂಧಿಸಿದ ಗ್ರಂಥಗಳ ಆಧಾರದಿಂದ ಹೇಳಬಹುದು. ಈ ಎಲುಬುಗಳ ಮೇಲಿನ ಬರವಣಿಗೆ ಆ ಭವಿಷ್ಯ ವಾಣಿಗಳೆಂದು ತಿಳಿದುಬಂತು. ಉತ್ಖನನಗಳಲ್ಲಿ ಈ ನಾಗರಿಕ ಷಾಂಗ್ ಮನೆತನದ ಅವಶೇಷಗಳ ಜೊತೆಗೆ ವಿಶಿಷ್ಟವಾದ ಬೂದುಬಣ್ಣದ ಮಣ್ಣಿನ ಪಾತ್ರೆಗಳು ಇದ್ದುವು. ಹೊನ್ಯಾನ್ ಪ್ರಾಂತ್ಯದ ಇತರೆಡೆಗಳಲ್ಲಿಯ ಉತ್ಖನನಗಳಲ್ಲಿ ಲಂಗ್‍ಷಾನ್ ಸಂಸ್ಕøತಿಯ ಅವಶೇಷಗಳುಳ್ಳ ಹಾಳುಮಣ್ಣಿನ ಪದರಗಳ ಮೇಲೆಯೇ ಷಾಂಗ್ ನಾಗರಿಕ ಸಂಸ್ಕøತಿಯ ಅವಶೇಷಗಳುಳ್ಳ ಮಣ್ಣಿನ ಪದರಗಳಿದ್ದವು. 1953ರಿಂದ ಜೆಂಗ್‍ಚೌ ನಗರದ ಸಮೀಪದ ಕೆಲವು ಷಾಂಗ್ ನೆಲೆಗಲಲ್ಲಿ ನಡೆದ ಉತ್ಖನನಗಳಿಂದ ಹ್ಲಿಯೊತುತ್ ಎಂಬಲ್ಲಿ ರಾಜಧಾನಿಯನ್ನು ಸ್ಥಾಪಿಸುವುದಕ್ಕೆ ಮುಂಚೆಯೇ ಅಸ್ತಿತ್ವದಲ್ಲಿದ್ದ ಈ ಸಂಸ್ಕøತಿಯ ಸ್ವರೂಪ ಹೇಗಿತ್ತೆಂದು ತಿಳಿದಿದೆ. ಈ ಸಂಸ್ಕøತಿಯ ಕಾಲ ಕ್ರಿ.ಪೂ. ಸು. 1500-1026 ಎಂಬುದೂ ಇದರ ಬೆಳವಣಿಗೆಯ ಐದು ಹಂತಗಳಿರುವುದೂ ಈ ಉತ್ಖನನಗಳಿಂದ ವೇದ್ಯವಾಗಿವೆ. ರಾಜಧಾನಿಯನ್ನು ಕಟ್ಟುವುದಕ್ಕೆ ಪೂರ್ವದ ಸಂಸ್ಕøತಿಯ ಕಾಲ ಕ್ರಿ.ಪೂ. 1300 ವರೆಗೆ ಎಂದು ತಿಳಿದಿದೆ. ಷಾಂಗ್ ಸಂಸ್ಕøತಿಯ ನಗರದ ಸುತ್ತಲೂ ಇದ್ದ 19-20 ಮೀ. ಅಗಲದ ಬೃಹತ್ ಪೌಳಿ ಗೋಡೆಗಳೂ ಮುದ್ದೆಮಣ್ಣಿನಿಂದ ಕಟ್ಟಿದ ಕಟ್ಟಡಗಳೂ ಅವನ್ನು ಕಟ್ಟುವಾಗ ಧಾರ್ಮಿಕ ವಿಧಿಗಳಿಗನುಸಾರವಾಗಿ ಬಲಿಕೊಟ್ಟ ಮಾನವರ ಮತ್ತು ಪ್ರಾಣಿಗಳ ಶವಕುಣಿಗಳೂ ಸಿಕ್ಕಿವೆ. ಕಮಾನುಗಳನ್ನಾಗಲಿ, ಕಮಾನು ಚಾವಣಿಗಳನ್ನಾಗಲಿ ಕಟ್ಟಿದೆ, ಕೇವಲ ಜಂತಿಗಳನ್ನು ಮತ್ತು ದೂಲಗಳನ್ನು ಉಪಯೋಗಿಸಿ ಮರದ ಕಟ್ಟಡಗಳನ್ನು ಕಟ್ಟುವ ಪದ್ದತಿ ಚೀನದಲ್ಲಿ ಆರಂಭವಾದ್ದು ಈ ಸಂಸ್ಕøತಿಯ ಕಾಲದಲ್ಲೇ. ಅಲ್ಲದ ಸಾಧಾರಣ ರೀತಿಯ ಸಾಲುಮನೆಗಳನ್ನು, ನೆಲದಲ್ಲಿಯ ಸುಮಾರು 2 ಮೀ. ಆಳದ ಮತ್ತು 3-5 ಮೀ. ವ್ಯಾಸದ ಗುಂಡಿಗಳನ್ನು ತೋಡಿ ಮಾಡಲಾದ ಗುಂಡಿ ವಸತಿಗಳು, ಅಗಲವಾದ ಬೀದಿಗಳು ಧಾನ್ಯಗಳನ್ನು ಸಂಗ್ರಹಿಸಲು ಮಾಡಿದ ಆಳದ ಹಗೇವುಗಳು, ರಾಜಮನೆತನದ ಹಾಗೂ ಸಾಮಾನ್ಯ ಜನರ ಗೋರಿಗಳು, ವಿವಿಧ ರೀತಿಯ ಚಿತ್ರಿತ ಕಂಚಿನ ಪಾತ್ರಗಳು ಬಾಣದ ಮತ್ತು ಈಟಿಯ ಮೊನೆಗಳು, ಚಾಕುಗಳು, ಕತ್ತಿಗಳು, ಕೊಡಲಿಗಳು, ಪ್ರಾಣಿಗಳ ಚಿತ್ರಗಳುಳ್ಳ ತಾಯಿತಗಳು ವರ್ಣಚಿತ್ರರಹಿತ ಮಣ್ಣುಪಾತ್ರೆಗಳ, ಎಲುಬಿನ ಕಡ್ಡಿಮೊನೆಗಳು, ಭವಿಷ್ಯವಾಣಿಯನ್ನು ಬರೆದ ಎಲುಬುಗಳು- ಇವು ಮುಖ್ಯವಾಗಿ ಗಮನಾರ್ಹ. ಹ್ಸಿ-ಪಿ-ತಾಂಗ್‍ನಲ್ಲಿದ್ದ ರಾಜರುಗಳ ಗೋರಿಗಳಿಗೆ ಮರದ ಚಾವಣಿಗಳುಂಟು. ಇವುಗಳ ಸಮೀಪದಲ್ಲಿ ಶವಸಂಸ್ಕಾರ ಸಂಬಂಧವಾಗಿ ಬಲಿಕೊಟ್ಟ ನಾಯಿ, ಮಂಗ, ಜಿಂಕೆ, ಆನೆ ಮುಂತಾದ ಪ್ರಾಣಿಗಳ ಮತ್ತು ಮನುಷ್ಯರ, ಚಾಲಕಸಹಿತವಾದ ರಥಗಳ ಅವಶೇಷಗಳು, ಕಲ್ಲಿನ ಕೊಡಲಿಗಳು, ಕಂಚಿನ ಚಾಕುಗಳು, ಬೇರೆ ಬೇರೆ ಗುಂಡಿಗಳಲ್ಲಿ ಕಂಡುಬಂದಿವೆ. ಯಾವನ ಶವಸಂಸ್ಕಾರವೆಂಬುದನ್ನು ಕಂಚಿನ ಪಾತ್ರೆಗಳ ಮೇಲೆ ಬರೆಯಲಾಗಿದೆ.

ಬೇರೆ ಬೇರೆ ಶೌರ್ಯಗಳಿಗೆ ನಿಯಮಿತವಾದ ನಾನಾ ವಿಧವಾದ ಕಂಚಿನ ಪಾತ್ರೆಗಳ ಮೇಲೆ ಸಶಸ್ತ್ರ ಮಾನವರ, ಬಿಲ್ಲುಗಳ, ಪ್ರಾಣಿಗಳ ಚಿತ್ರಗಳನ್ನು ಗೆರೆಗಳಲ್ಲಿ ಸಾಂಕೇತಿಕವಾಗಿ ಮೂಡಿಸಲಾಗಿದೆ. ಜೇಡ್ ಕಲ್ಲಿನಲ್ಲಿ ಮಾಡಿದ ವಿವಿಧ ಪ್ರಾಣಿಗಳು, ಮಾಂತ್ರಿಕ ತಾಯತಗಳು, ಎತ್ತಿನ ಅಸ್ಥಿಗಳು ಗಮನಾರ್ಹ. ಈ ಅಸ್ಥಿಗಳ ಮೇಲಣ ಭವಿಷ್ಯ ವಾಣಿಯಲ್ಲಿ ಚೀನದ ಅತ್ಯಂತ ಪ್ರಾಚೀನ ಲಿಪಿಗಳಿವೆ. ಷಾಂಗ್ ವಂಶದ ರಾಜರಲ್ಲಿ 22ನೆಯವನಿಂದ 29ನೆಯವನ ವರೆಗಿನ ಆಳ್ವಿಕೆಯ ಕಾಲವನ್ನು ಐದು ಭಾಗಗಳನ್ನಾಗಿ ವಿಂಗಡಿಸುವುದು ಈ ಭವಿಷ್ಯವಾಣಿಗಳಿಂದ ಸಾಧ್ಯವಾಗಿದೆ. ಅವರ ಯುದ್ಧಸನ್ನಾಹಗಳು ಅವರಿಗೆ ಶತ್ರುಗಳಾಗಿದ್ದ ಕಾಡುಜನರು ಗುಲಾಮಗಿರಿ, ದೇವರಾಜ ಪ್ರಭುತ್ವ, ಅಧಿಕಾರಿಗಳ ಸ್ಥಾನಗಳು ಮುಂತಾದವು ತಿಳಿದಿವೆ.

ಕಂಚಿನ ಯುಗ ಸಂಸ್ಕøತಿ-ಉತ್ತರ ಭಾಗ : ಕ್ರಿ.ಪೂ. ಸು. 1027ರಲ್ಲಿ ಷಾಂಗ್ ರಾಜರ ಅಧೀನರಾಗಿದ್ದ ಚೌ ಮನೆತನದವರು ಷಾಂಗ್ ಮನೆತನವನ್ನು ಸೋಲಿಸಿ ತಮ್ಮ ಆಳ್ವಿಕೆ ಸ್ಥಾಪಿಸಿದರು. ಇವರ ಚರಿತ್ರೆಗೆ ಸಂಬಂಧಿಸಿದ ಹಾಗೆ ಕಂಚಿನಲ್ಲಿ ಎರಕ ಹೊಯ್ದ ಕೆಲವು ಮಹತ್ವದ ಶಾಸನಗಳು ಸಿಕ್ಕಿವೆ. ಷಾಣಗ್ ರಾಜ ಜನರ ಸುಖವನ್ನು ಕಡೆಗಣಿಸಿ ನಿರಂಕುಶನಾಗಿ ಆಳುತ್ತಿದ್ದದ್ದರಿಂದ ಚೌ ಮನೆತನದವರು ಅವನನ್ನು ಬದಿಗೊತ್ತಿ ತಮ್ಮ ಆಳ್ವಿಕೆಯನ್ನು ಆರಂಭಿಸಿದರೆಂಬುದು ಕಂಚಿನ ಪಾತ್ರೆಗಳ ಮೇಲೆ ಕೊರೆದ ಶಾಸನಗಳಿಂದ ತಿಳಿದುಬರುತ್ತದೆ. ಷಾಂಗ್ ದೊರೆಗಳ ಭವಿಷ್ಯವಾಣಿಯ ಬರವಣಿಗೆಗಳಲ್ಲಿ ಚೌ ಮನೆತನದ ವಿಷಯ ಸ್ವಲ್ಪ ತಿಳಿದಿದೆ. ಈ ಮನೆತನದ ಮೂರನೆಯ ರಾಜನ ಕಾಲದ (ಕ್ರಿ.ಪೂ. 10ನೆಯ ಶತಮಾನದ ಆದಿಭಾಗ) ಶಾಸನ ಬಹು ಮುಖ್ಯವಾದ್ದು. ಅದರಲ್ಲಿ ಚೌ ಮನೆತನದವರ ನೈತಿಕ ಗೆಲುವು, ರಾಜ ನೀಡಿದ ದತ್ತಿ, ಅಧಿಕಾರಿಗಳ ನೇಮಕ, ಕೊಡಲಾದ ದೇಣಿಗೆಗಳು-ಈ ವಿಷಯಗಳಿವೆ. ಯೆನ್-ತುನ್-ಷಾನ್ ಎಂಬ ಎರಡನೆಯ ಚೌ ರಾಜನದು ಇನ್ನೊಂದು ಮುಖ್ಯ ಶಾಸನ. ಇವನು ತನ್ನ ತಂದೆಗಾಗಿ ಮಾಡಿದ ಬಲಿಕರ್ಮ, ಷಾಂಗ್ ಮನೆತನದವರ ಮೇಲೆ ಸಾಧಿಸಿದ ವಿಜಯ, ಪೂರ್ವ ಪ್ರದೇಶಗಳಲ್ಲಿ ಈ ರಾಜ ನೀಡಿದ ಸಂದರ್ಶನ-ಮುಂತಾದ ವಿಷಯಗಳು ಈ ಶಾಸನದಲ್ಲಿವೆ. ಇವಲ್ಲದೆ ಸಾಮಂತ ಅಧಿಕಾರಿಗಳ ಕೆಲವು ಶಾಸನಗಳೂ ಇವೆ. ಇವು ಕ್ರಿ.ಪೂ. 950ಕ್ಕಿಂತ ಮುಂಚಿನ, ಕ್ರಿ.ಪೂ. 671ರ ಅನಂತರದ ಶಾಸನಗಳು. ಕ್ರಿ.ಪೂ. 6-5ನೆಯ ಶತಮಾನಗಳ ಕಂಚಿನ ಪಾತ್ರೆಗಳ ಮೇಲೆ ಸಾಮಂತರ ಹೆಸರುಗಳನ್ನು ತಿಳಿಸುವ ಶಾಸನಗಳೂ ದೊರಕಿವೆ.

ಜಪಾನೀಯರು ನಡೆಸಿದ ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಹ್ಲಿಯನ್‍ನಲ್ಲಿ ಸು. 7ಕಿಮೀ. ಸುತ್ತಳತೆಯ 7ಮೀ. ಎತ್ತರದ ತಳಹದಿಯ ಮೇಲೆ 10 ಮೀ. ವರೆಗೆ ಎತ್ತರವಾದ ಕೋಟೆಗೋಡೆ ಮತ್ತು ಅದರೊಳಗಿನ ಕಟ್ಟಡದ ಅವಶೇಷಗಳೂ ಹಾನ್-ತಾನ್‍ನಲ್ಲಿ ಚೌಕೋನದ ಪೌಳಿಗಳ ಅವಶೇಷಗಳೂ ದೊರಕಿವೆ. ಹ್ಯೂ ಹ್ಸಿಯದ ಚೌ ಗೋರಿಯಲ್ಲಿ ಸಿಕ್ಕ ಕಂಚಿನ ಬಟ್ಟಲಿನ ಮೇಲೆ ಕೊರೆದ ಚಿತ್ರಗಳಿಂದ ಇವರ ಕಾಲದ ಕಟ್ಟಡಗಳ ತಕ್ಕಮಟ್ಟಿಗೆ ಗೊತ್ತಾಗಿದೆ. ಮೊದ ಮೊದಲು ಚೌ ರಾಜವಂಶದ ಗೋರಿಗಳು ಹಿಂದಿನ ಷಾಂಗ್ ವಂಶದವರ ಗೋರಿಗಳ ಹಾಗೆ ಇರುತ್ತಿದ್ದವು. ಕ್ರಮೇಣ, ಕ್ರಿ.ಪೂ. ಸು. 6. 5ನೆಯ ಶತಮಾನಗಳಿಗಿಂತ ಸ್ವಲ್ಪ ಮುಂಚಿನ ವೇಳೆಗೆ, ಶವಕುಣಿಗಳ ಬದಿಗಳನ್ನು ಮೆಟ್ಟಲು ಮೆಟ್ಟಿಲಾಗಿ ರಚಿಸತೊಡಗಲಾಯಿತು. ಮರದ ಬದಲು ಕಲ್ಲಿನ ಹಲಗೆಗಳಿಂದ ಶವಪೆಟ್ಟಿಗೆಯನ್ನು ಮಾಡುವ ಪದ್ಧತಿ ಬೆಳೆಯಿತು. ಷಾಂಗ್ ಮನೆತನದವರಂತೆ ಶವಸಂಸ್ಕಾರ ಸಂದರ್ಭದಲ್ಲಿ ಪ್ರಾಣಿ ಮತ್ತು ಮನುಷ್ಯರ ಬಲಿ ಕೊಡುತ್ತಿರಲಿಲ್ಲ. ಚಾಂಗ್‍ಷಾದಲ್ಲಿ ಕ್ರಿ.ಪೂ. 4-3ನೆಯ ಶತಮಾನದ ಗೋರಿಯೊಂದು ಸಿಕ್ಕಿದೆ. ಇದನ್ನು ಮರದ ಹಲಗೆಗಳಿಂದ ಕಟ್ಟಲಾಗಿದೆ. ಎರಡು ಶವಪೆಟ್ಟಿಗೆಗಳು ಒಂದರೊಳಗೊಂದು ಇವೆ. ಈ ಗೋರಿ ಅಪೂರ್ವವಾದ್ದು. ಈ ಪೆಟ್ಟಿಗೆಗಳ ಗೋಡೆಗಳ ಮಧ್ಯದಲ್ಲಿ ಕಂಚಿನ ಪಾತ್ರೆಗಳನ್ನು, ಕತ್ತಿಗಳು ಮತ್ತು ಇತರ ಆಯುಧಗಳನ್ನು, ಗಡಿಗೆ ಮಡಕೆಗಳನ್ನು ಇಡಲಾಗಿತ್ತು. ಒಂದು ಗೋರಿಯಲ್ಲಿ ಒಂದು ಬಿಲ್ಲು ಕೂಡ ಇತ್ತು.

ಆ ಕಾಲದ ಜನರ ಒಂದು ಮಹತ್ತ್ವದ ಶೋಧನೆಯೆಂದರೆ ಒಳ್ಳೆಯ ಪರಿಣಾಮಕಾರಿಯಾದ ನಿಯೋಜಕ ಯಾಂತ್ರಿಕ ಬಿಲ್ಲು ಸುಧಾರಿಸಿದ ರಥಗಳು, ಹಿಡಿಯುಳ್ಳ ಕಂಚಿನ ಕತ್ತಿಗಳು, ಈಟಿ ಮೊನೆಗಳು ಮುಂತಾದ ಆಯುಧಗಳು ಗಮನಾರ್ಹ. ಹ್ಯೂ ಹ್ಲಿಯನ್ ಗೋರಿಗಳಲ್ಲಿ ಕಬ್ಬಿಣದ ಉಪಕರಣಗಳೂ ಸಿಕ್ಕಿವೆ. ಸಲಿಕೆ, ಕೊಡಲಿ ಬಾಯಿ ಹಾಗೂ ಕುಳ, ಚೌಕೋನದ ಮತ್ತು ಚಂದ್ರಾಕಾರದ ಕುಡುಗೋಲುಗಳು ಮುಂತಾದ ವಿವಿಧ ಮಾದರಿಗಳ ವ್ಯವಸಾಯದ ಮುಟ್ಟುಗಳು ಹೇರಳವಾಗಿ ದೊರಕಿವೆ. ಕ್ರಿ.ಪೂ. ಸು. 5ನೆಯ ಶತಮಾನಕ್ಕೆ ಸ್ವಲ್ಪ ಮುಂಚೆ ಕಬ್ಬಿಣದ ಬಳಕೆ ಆರಂಭವಾಗಿರಬಹುದೆಂದು ಇದರಿಂದ ಊಹಿಸಬಹುದಾಗಿದೆ. ಆದರೂ ಕ್ರಿ.ಪೂ. 3ನೆಯ ಶತಮಾನದ ವರೆಗೆ ಕಂಚಿನ ಉಪಯೋಗವೇ ಹೆಚ್ಚಾಗಿತ್ತು.

ಕಂಚಿನ ಯುಗದ ಕಲೆ ನಿಜಕ್ಕೂ ಪ್ರಶಂಸಾರ್ಹ. ಹೆಚ್ಚಾಗಿ ಕಂಚಿನ ಪಾತ್ರಗಳ ವೈವಿಧ್ಯ ಮತ್ತು ಅವುಗಳ ಮೇಲಿನ ಚಿತ್ರಗಳು, ಜೇಡ್ ಕಲ್ಲಿನಲ್ಲಿ ಕೊರೆದ ಪಕ್ಷಿಗಳ ಮತ್ತು ಪ್ರಾಣಿಗಳ ಮತ್ತು ಕಾಲ್ಪನಿಕವಾದ ಭಯಂಕರ ಪ್ರಾಣಿಗಳ ಚಿತ್ರಗಳನ್ನು, ರೇಖಾಚಿತ್ರಗಳು, ಕಂಚಿನ ಮುಖವಾಡಗಳು, ಹೆಣೆದ ವಜ್ರಾಕೃತಿಯ ಚೌಕುಳಿ ಆಭರಣಗಳು, ಸೊಂಟಪಟ್ಟಿ, ಕೊಕ್ಕೆಗಳು, ಅರಗಿನ ಮೆರುಗುಳ್ಳ ಅಲಂಕಾರ ಪಟ್ಟಿಗಳು, ಗಡಿಗೆಗಳ ಮೇಲೆ ಬಿಡಿಸಿದ ಚಿತ್ರಗಳು ಮುಂತಾದವು ಉತ್ತಮ ನಿದರ್ಶನ. (ಎ.ಎಸ್.ಯು.)

ii ಇತಿಹಾಸ : ಚೀನದ ಪೂರ್ವ ಚರಿತ್ರೆ ನಾಲ್ಕೈದು ಸಾವಿರ ವರ್ಷಗಳಷ್ಟು ಹಿಂದಿನದಾದರೂ ಅದನ್ನು ನಿರ್ಧರಿಸಲು ಸೂಕ್ತ ಆಧಾರಗಳು ಸಿಗುವಂತಿಲ್ಲ. ಸಿಕ್ಕಿರುವ ಆಧಾರಗಳು ಸಮರ್ಪಕವಾಗಿಲ್ಲ. ಅಲ್ಲಲ್ಲಿ ಸಿಗುವ ಪುರಾವೆಗಳಿಂದ, ಚೀನದ ಪ್ರಸಿದ್ಧ ತತ್ತ್ವಜ್ಞಾನಿ ಕಾನ್ಫ್ಯೂಷಸನ ಬರವಣಿಗೆಗಳಿಂದ ಇದರ ಇತಿಹಾಸದ ಆರಂಭಕಾಲದ ಕೆಲವು ಅಂಶಗಳನ್ನು ಅರಿಯುವುದು ಸಾಧ್ಯವಿದೆ.

ಕ್ರಿ.ಪೂ. ಸು. 5000ದ ವೇಳೆಗೆ ಚೀನದ ಪಶ್ಚಿಮಕ್ಕಿರುವ ಮಧ್ಯ ಏಷ್ಯ ಪ್ರದೇಶ ಫಲವತ್ತಾಗಿದ್ದು ಜನಸಾಂದ್ರತೆಯಿಂದ ಕೂಡಿತ್ತು. ಆದರೆ ಬರಬರುತ್ತ ಮಳೆಯ ಕೊರತೆಯಿಂದ ನೀರಿಗೆ ಅಭಾವ ಉಂಟಾಯಿತು. ವ್ಯವಸಾಯದಿಂದ ಜೀವಿಸುತ್ತಿದ್ದ ಅಲ್ಲಿಯ ಜನ ಬೇರೆ ಪ್ರದೇಶಗಳಿಗೆ ಹೋಗಬೇಕಾಯಿತು. ಇವರ ಪೈಕಿ ಕೆಲವರು ಪಶ್ಚಿಮದ ಪರ್ವತಗಳನ್ನು ದಾಟಿ ಹ್ವಾಂಗ್ ಹೋ ನದಿಯ ಬಯಲಲ್ಲಿ ನೆಲೆಸಿದರು. ಇವರೇ ಚೀನೀಯರ ಮೂಲಪುರುಷರೆಂದು ಪ್ರತೀತಿ. ಇವರು ತಮ್ಮ ಪೈಕಿ ಹಿರಿಯನೊಬ್ಬನನ್ನು ಆರಿಸಿಕೊಂಡು ಅವನ ಆಜ್ಞೆಯಂತೆ ಪಾಲಿಸುತ್ತಿದ್ದರು. ಆಗ ರಾಜರಿರಲಿಲ್ಲ. ಕ್ರಮೇಣ ರಾಜ್ಯಸ್ಥಾಪನೆಯಾಯಿತು. ಯಾವೋ ಎಂಬೊಬ್ಬ ಮುಂಖಡನನ್ನು ಅವರು ತಮ್ಮ ಅಧಿಪತಿಯನ್ನಾಗಿ ಗೊತ್ತು ಪಡಿಸಿಕೊಂಡರು. ಮುಂದೆ ಇವನ ಉತ್ತರಾಧಿಕಾರಿಗಳಿಗೆ ವಂಶಾನುಗತವಾಗಿ ಆಳುವ ಅಧಿಕಾರ ಲಭಿಸಿತು. ಅರಸುತನ ಆರಂಭವಾದ್ದು ಕ್ರಿ.ಪೂ. 2356ರಲ್ಲಿ. ಆಮೇಲೆ ಅನೇಕ ವಂಶಗಳು ಚೀನವನ್ನಾಳಿದವು.

ಅರಸಾಳ್ವಿಕೆಯನ್ನಾರಂಭಿಸಿದ ಯಾವೋಗಳು ಎಲ್ಲ ವಿಧದಲ್ಲೂ ಯೋಗ್ಯರೆನಿಸಿದ್ದರು; ಉತ್ಸಾಹಿಗಳೂ ಶ್ರದ್ಧಾವಂತರೂ ಆಗಿದ್ದರು. ಇವರು ದೇಶವನ್ನು ವಿಸ್ತರಿಸಿ ನ್ಯಾಯವಾಗಿಯೂ ಚೆನ್ನಾಗಿಯೂ ಆಳಿ ಮುಂದಿನವರಿಗೆ ಮಾರ್ಗದರ್ಶಕರಾದರೆಂದು ಗೊತ್ತಾಗುತ್ತದೆ.

ಷಾಂಗ್ ವಂಶ : ಮುಂದೆ ಆಳಿದ ಮುಖ್ಯ ವಂಶಗಳಲ್ಲಿ ಮೊದಲನೆಯದು ಷಾಂಗ್ (ಕ್ರಿ.ಪೂ. ಸು. 1766-ಕ್ರಿ.ಪೂ. ಸು. 1123). ಆದರೆ ಆ ವಂಶದವರಾರೂ ಅರ್ಹರೆನಿಸಲಿಲ್ಲ. ಅವರ ಕಾಲದಲ್ಲಿ ದೇಶ ಪ್ರಗತಿ ಹೊಂದಲಿಲ್ಲ. ಆ ವಂಶ ಕೊನೆಗೊಂಡದ್ದು ದೊಡ್ಡದೊಂದು ಕ್ರಾಂತಿಯಿಂದ. ಕೊನೆಯ ಅರಸ ತುಂಬ ಕ್ರೂರಿಯಾಗಿದ್ದ. ಶತ್ರುವಿಗೆ ಸೋತು, ತನ್ನ ಅರಮನೆಯಲ್ಲೇ ಬೆಂಕಿಹೊತ್ತಿಸಿಕೊಂಡು ಸಾವನ್ನಪ್ಪಿದ. ಈ ದುರಂತದಿಂದ ಆ ವಂಶ ಅಳಿಸಿಹೋಯಿತು.

ಆ ವಂಶದ ಆಳ್ವಿಕೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಕಿತ್ಸೆ ಎಂಬುವನು ತನ್ನ ಅರಸನಿಲ್ಲದ ನಾಡಿನಲ್ಲಿರಲು ಇಷ್ಟಪಡದೆ ಸಾವಿರಾರು ಹಿಂಬಾಲಕರೊಡನೆ ಕೊರಿಯಕ್ಕೆ ಹೋದ. ಆ ಪ್ರದೇಶವನ್ನು ಚೋಸನ್ ಎಂದು ಕರೆದ. ಕ್ರಮೇಣ ಅಲ್ಲಿಗೆ ಚೀನೀಯರು ಹೆಚ್ಚು ಹೆಚ್ಚಾಗಿ ಹೋಗಿ ನೆಲೆಸಲಾರಂಭಿಸಿದರು. ಆ ಪ್ರದೇಶಕ್ಕೆ ಕಿತ್ಸೆ ಅರಸನಾದ. ಅವನ ವಂಶದವರು ಸುಮಾರು ಒಂಬತ್ತು ಶತಮಾನಗಳ ಕಾಲ ಅಲ್ಲಿ ಆಳಿದರು. ಚೀನದ ನಾಗರಿಕತೆ ಕೊರಿಯಾಕ್ಕೂ ಹರಡಿತು.

ಜೋ : ಕ್ರಿ.ಪೂ. ಸು. 1122-ಕ್ರಿ.ಪೂ. 256. ಈ ವಂಶದ ಅರಸರು ದೇಶವನ್ನು ಅಭಿವೃದ್ಧಿಗೆ ತಂದರು. ನಾಗರಿಕತೆ ಬೆಳೆಯಿತು. ವ್ಯವಸಾಯ ವ್ಯಾಪಕವಾಯಿತು. ವ್ಯಾಪಾರ, ಕೈಗಾರಿಕೆಗಳೂ ಬೆಳೆದವು. ಹತ್ತಿ, ರೇಷ್ಮೆ ಬಟ್ಟೆಗಳೂ ಚರ್ಮಗೆಲಸ, ದಂತದ ಕೆತ್ತನೆ, ಒಡವೆ ಮುಂತಾದ ಕುಶಲ ಕಲೆಗಳೂ ಬೆಳೆದವು. ಸಾಹಿತ್ಯ, ವಿಜ್ಞಾನ ಪ್ರಗತಿ ಹೊಂದಿದವು. ಆದರೆ ಈ ಪ್ರಗತಿ ಶಾಶ್ವತವಾಗಿ ಉಳಿಯಲಿಲ್ಲ. ಒಳಜಗಳಗಳು ಮೊದಲಾದವು. ದೇಶದ ಸುರಕ್ಷತೆಗೆ ಅಪಾಯ ಒದಗಿತು. ಕ್ರಿ.ಪೂ. 256ರಲ್ಲಿ ಜೋ ವಂಶ ಕೊನೆಗೊಂಡಿತು.

ಚೀನದ ಸುಪ್ರಸಿದ್ಧ ತತ್ತ್ವಜ್ಞಾನಿಗಳಾದ ಕಾನ್‍ಫ್ಯೂಷನ್ ಮತ್ತು ಲಾವೊ ಟ್ಸೆ ಈ ವಂಶದ ಆಳ್ವಿಕೆಯ ಕಾಲದಲ್ಲಿ ಜನ್ಮವೆತ್ತಿದರು. ಇದು ಚೀನದ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದೇ ಹೇಳಬೇಕು. ಈ ಇಬ್ಬರು ವ್ಯಕ್ತಿಗಳೂ ಚೀನದ ಸಮಾಜದ ಮೇಲೆ ಅಚ್ಚಳಿಯದಂಥ ಪರಿಣಾಮ ಉಂಟು ಮಾಡಿದರು.

ಚಿನ್ ವಂಶ : ಕ್ರಿ.ಪೂ. 221-207. ಇದು ಅನಂತರ ಬಂದ ವಂಶ. ಈ ವಂಶದ ಹೆಸರಿನಿಂದಲೇ ಚೀನಕ್ಕೆ ಆ ಹೆಸರು ಬಂತೆಂದು ಹೇಳಲಾಗಿದೆ. ಕ್ರಿ.ಪೂ. 221ರಲ್ಲಿ ಪರಮಾಧಿಕಾರ ಗಳಿಸಿದ ದೊರೆ ತನ್ನನ್ನು ಪ್ರಥಮ ಚಕ್ರಾಧಿಪತಿಯೆಂದು (ಷಿರ್ ಹ್ವಾಂಗ್ ಟೀ) ಕರೆದುಕೊಂಡ ಇವನು ಸ್ವಾರ್ಥಿ, ಮಹತ್ತ್ವಾಕಾಂಕ್ಷಿ. ತನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ತನ್ನ ಆಳ್ವಿಕೆಯೇ ಆದಿ ಎನಿಸಬೇಕು- ಎಂಬುದು ಇವನ ಬಯಕೆ. ಹೀಗಾಗಬೇಕಾದರೆ ಹಿಂದಿನವರ ನೆನಪೇ ಸಿಗಬಾರದು ; ದಾಖಲೆಗಳಿರಬಾರದು; ಹಿಂದಿನ ಸಂಸ್ಕøತಿ ಉಳಿದಿರಬಾರದು-ಎಂದು ಇವನು ಯೋಚಿಸಿದ. ಹಿಂದಿನ ದಾಖಲೆಗಳನ್ನೆಲ್ಲ ನಾಶಪಡಿಸಲು ಆಜ್ಞೆ ಮಾಡಿದ. ಹಿಂದಿನವರ ಹಿರಿಮೆಯನ್ನು ಸೂಚಿಸುವ ಯಾವುದೂ ಇರಬಾರದೆಂದು ನಿರೋಪ ಹೊರಡಿಸಿದ. ಅಂತೆಯೇ ಎಷ್ಟೋ ಪ್ರಾಚೀನ ಗ್ರಂಥಗಳು ನಾಶಗೊಂಡವು. ಇವನ್ನು ಒಪ್ಪಿಸಲು ಹಿಂಜರಿದವರು ಮರಣದಂಡನೆಗೆ ಗುರಿಯಾದರು. ನಾನೂರು ವಿದ್ವಾಂಸರು ಜೀವಸಹಿತ ಸಮಾಧಿಯಾದರು. ಇಷ್ಟಾದರೂ ಕಾನ್‍ಫ್ಯೂಷಸನ ಸಾಹಿತ್ಯ ಮಾತ್ರ ಹೇಗೋ ಉಳಿಯಿತು. ಆದರೂ ಈ ದೊರೆ ಪ್ರತಿಭಾವಂತ, ಸಮರ್ಥ, ಉತ್ತರದಿಂದ ಆಗಾಗ್ಗೆ ದಂಡೆತ್ತಿ ಬರುತ್ತಿದ್ದ ಹೂಣರನ್ನು ಹೊಡೆದಟ್ಟುತ್ತಿದ್ದ. ಹೊರಗಿನ ಶತ್ರುಗಳ ದಾಳಿಯನ್ನ ತಡೆಯುವ ಉದ್ದೇಶದಿಂದ ಸುಮಾರು 1,500 ಮೈ. ಉದ್ದದ ಮಹಾಗೋಡೆಯನ್ನು ಜೀತದ ಆಳುಗಳಿಂದ ನಿರ್ಮಿಸಿದವನು ಇವನೇ (ನೋಡಿ- ಚೀನದ-ಮಹಾಗೋಡೆ) ಚೀನದ ಮಹಾಗೋಡೆ ಎಂದು ಇದು ಪ್ರಸಿದ್ಧವಾಗಿದೆ. ಇವನು ವಿರೋಧಿಗಳನ್ನಡಗಿಸಿ ಎಲ್ಲ ಪ್ರಾಂತ್ಯಗಳನ್ನೂ ತನ್ನ ಅಧೀನಕ್ಕೊಳಪಡಿಸಿಕೊಂಡ. ಇವನ ದಕ್ಷತೆ ಮತ್ತು ಒಳ್ಳೆಯ ಆಡಳಿತವ್ಯವಸ್ಥೆಯಿಂದ ದೇಶದಲ್ಲಿ ಏಕತೆ ಬೆಳೆಯಿತು. ಇವನು ದೇಶವನ್ನು 36 ಆಡಳಿತವಿಭಾಗಗಳನ್ನಾಗಿ ವಿಂಗಡಿಸಿ, ಆಡಳಿತ ಸುಗಮವಾಗಿ ನಡೆಯುವಂತೆ ಮಾಡಿದ. ಢಕರೀತಿಯ ತೂಕ ಮತ್ತು ಅಳತೆಗಳು ಜಾರಿಗೆ ಬಂದವು. ಚೀನದಲ್ಲಿ ಹಲವು ಹೆದ್ದಾರಿಗಳು ನಿರ್ಮಾಣವಾದವು. ಈತ ಕ್ರಿ. ಪೂ. 210ರಲ್ಲಿ ಮರಣ ಹೊಂದಿದ. ಕೂಡಲೇ ದೇಶದಲ್ಲಿ ಅನಾಯಕತೆ ತಲೆದೋರಿತು.

ಹಾನ್ : ಕ್ರಿ. ಪೂ. 202 ಕ್ರಿ.ಶ. 221 ಎಂಟು ವರ್ಷಗಳ ತರುವಾಯ ಹಾನ್ ಎಂಬ ವಂಶದ ಆಳ್ವಿಕೆ ಆರಂಭವಾಯಿತು. ಚಕ್ರವರ್ತಿ ಷಿಯಾವೋ ವೂ ಟೀ ಕ್ರಿ.ಪೂ. 141 ರಿಂದ ಕ್ರಿ. ಪೂ. 87ರ ವರೆಗೆ ಆಳಿದ ಇವನ ಅಧಿಕಾರ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೂ ವ್ಯಾಪಿಸಿತ್ತು. ಈ ಕಾಲದಲ್ಲೇ ಪೂರ್ವ ಪಶ್ಚಿಮಗಳ ನಡುವೆ ವ್ಯಾಪಾರ ಆರಂಭವಾದ್ದು. ಉತ್ತರದಿಂದ ಬಂದು ಪದೇ ಪದೇ ಪೀಡಿಸುತ್ತಿದ್ದ ಟಾರ್ಟರರನ್ನು ಇವನು ಸೋಲಿಸಿ ಓಡಿಸಿದ. ಪ್ರಬಲರಾಗಿದ್ದ ಸಾಮಂತ ರಾಜರನ್ನೂ ಪ್ರಾಂತ್ಯಾಧಿಕಾರಿಗಳನ್ನೂ ದಂಡಿಸಿ ತನ್ನ ಅಧಿಕಾರಕ್ಕೊಳ ಪಡುವಂತೆ ಮಾಡಿದ. ದೇಶದ ಎಲ್ಲ ಭಾಗಗಳಲ್ಲೂ ಸುವ್ಯವಸ್ಥಿತ ಆಡಳಿತ ಏರ್ಪಡಿಸಿದ. ಲಂಚ, ಸ್ವಜನಪಕ್ಷಪಾತ, ಮುಂತಾದ ದುವ್ರ್ಯಾಪಾರಗಳನ್ನು ನಿಲ್ಲಿಸಿ, ಯೋಗ್ಯರನ್ನು ಪುರಸ್ಕರಿಸಿ, ಅವರಿಗೆ ಅಧಿಕಾರ ವಹಿಸಿದ್ದು ಇವನ ಕೆಲವು ಒಳ್ಳೆಯ ಕ್ರಮಗಳು. ಹಾನ್ : ಕ್ರಿ. ಪೂ. 202 ಕ್ರಿ.ಶ. 221 ಎಂಟು ವರ್ಷಗಳ ತರುವಾಯ ಹಾನ್ ಎಂಬ ವಂಶದ ಆಳ್ವಿಕೆ ಆರಂಭವಾಯಿತು. ಚಕ್ರವರ್ತಿ ಷಿಯಾವೋ ವೂ ಟೀ ಕ್ರಿ.ಪೂ. 141 ರಿಂದ ಕ್ರಿ.ಪೂ. 87ರ ವರೆಗೆ ಆಳಿದ ಇವನ ಅಧಿಕಾರ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೂ ವ್ಯಾಪಿಸಿತ್ತು. ಈ ಕಾಲದಲ್ಲೇ ಪೂರ್ವ ಪಶ್ಚಿಮಗಳ ನಡುವೆ ವ್ಯಾಪಾರ ಆರಂಭವಾದ್ದು. ಉತ್ತರದಿಂದ ಬಂದು ಪದೇ ಪದೇ ಪೀಡಿಸುತ್ತಿದ್ದ ಟಾರ್ಟರರನ್ನು ಇವನು ಸೋಲಿಸಿ ಓಡಿಸಿದ. ಪ್ರಬಲರಾಗಿದ್ದ ಸಾಮಂತ ರಾಜರನ್ನೂ ಪ್ರಾಂತ್ಯಾಧಿಕಾರಿಗಳನ್ನೂ ದಂಡಿಸಿ ತನ್ನ ಅಧಿಕಾರಕ್ಕೊಳ ಪಡುವಂತೆ ಮಾಡಿದ. ದೇಶದ ಎಲ್ಲ ಭಾಗಗಳಲ್ಲೂ ಸುವ್ಯವಸ್ಥಿತ ಆಡಳಿತ ಏರ್ಪಡಿಸಿದ. ಲಂಚ, ಸ್ವಜನಪಕ್ಷಪಾತ, ಮುಂತಾದ ದುವ್ರ್ಯಾಪಾರಗಳನ್ನು ನಿಲ್ಲಿಸಿ, ಯೋಗ್ಯರನ್ನು ಪುರಸ್ಕರಿಸಿ, ಅವರಿಗೆ ಅಧಿಕಾರ ವಹಿಸಿದ್ದು ಇವನ ಕೆಲವು ಒಳ್ಳೆಯ ಕ್ರಮಗಳು. ವ್ಯವಸಾಯ, ಕೈಗಾರಿಕೆ, ವ್ಯಾಪಾರ ಇವು ಬೆಳೆದುವು. ಹಿಂದೆಂದೂ ಇಲ್ಲದಿದ್ದಂಥ ಒಗ್ಗಟ್ಟು ಇವನ ಕಾಲದಲ್ಲಿ ಉಂಟಾಯಿತು. ರೋಮ್ ಒಂದಿಗೆ ವ್ಯಾಪಾರ ಸಂಪರ್ಕ ಬೆಳೆದದ್ದು. ಇವನ ಆಳ್ವಿಕೆಯಲ್ಲೇ. ಒಟ್ಟಿನಲ್ಲಿ ಇವನ ಆಳ್ವಿಕೆಯಲ್ಲಿ ಜನರು ನೆಮ್ಮದಿಯಿಂದಿದ್ದರು. ಹಾನ್ ವಂಶದಲ್ಲಿ ಚೀನೀ ಪ್ರಭಾವ ಪರ್ಷಿಯ ಮತ್ತು ಹಿಂದೂಸ್ತಾನದವರೆಗೆ ಹಬ್ಬಿತೆಂದು ತಿಳಿದು ಬರುತ್ತದೆ. ಷಿಯಾವೋ ವೂ ಟೀ ತರವಾಯ ಪಟ್ಟಕ್ಕೇರಿದ ವಾಂಗ್ ಮಾಂಗ್ ಇತ್ತಯಾದಿ ಅರಸರು ಅವನ ಆಡಳಿತದ ಮಾದರಿಯನ್ನೇ ಮುಂದುವರಿಸಿಕೊಂಡು ಬಂದರಲ್ಲದೆ, ಅದನ್ನ ಇನ್ನೂ ಉತ್ತಮಗೊಳಿಸಲು ಯತ್ನಿಸಿದರು, ದೇಶದ ಸಂಪತ್ತಿಗೆ ಎಲ್ಲರೂ ಸಮುಭಾಗಿಗಳಾದ್ದರಿಂದ ಬಡತನವಿರುವುದು ಅನ್ಯಾಯ ಎಂಬ ನೀತಿಯ ಅನುಸಾರ ರಾಜ್ಯವ್ಯವಸ್ಥೆಯನ್ನು ರೂಪಿಸಿದರು. ಪ್ರಾಚೀನ ಕಾಲದಲ್ಲಿ ಹೀಗೆ ಸಮತಾವಾದ ತತ್ತ್ವವನ್ನ ಗ್ರಹಿಸಿ ಸುವ್ಯವಸ್ಥಿತ ರೀತಿಯಲ್ಲಿ ಆಚರಣೆಗೆ ತಂದು ಇಡೀ ಜಗತ್ತಿಗೆ ಮಾರ್ಗದರ್ಶಿಯಾದ ದೇಶ ಚೀನ. ಈ ಕಾಲದಲ್ಲಿ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ರೋಮ್ ಚಕ್ರಾಧಿಪತ್ಯಕ್ಕಿಂತ ಚೀನದ ಸ್ಥಿತಿ ಉತ್ತಮವಾಗಿತ್ತೆಂದು ಗೊತ್ತಾಗುತ್ತದೆ. ರೋಮ್ ಮುಂತಾದ ದೇಶಗಳೊಂದಿಗೆ ನಡೆಯುತ್ತಿದ್ದ ರೇಷ್ಮೆ ವ್ಯಾಪಾರದಿಂದ ಹೊರಗಿನ ದೇಶಗಳೊಂದಿಗೆ ಸಂಪರ್ಕ ಅಧಿಕಗೊಂಡಿತು.

ಭಾರತದ ವಾಯವ್ಯದಲ್ಲಿ ರಾಜ್ಯವಾಳುತ್ತಿದ್ದ ಕುಶಾನ್ ಚಕ್ರಾಧಿಪತ್ಯದೊಂದಿಗೆ ಹಾನ್ ವಂಶ ಮೈತ್ರಿಯಿಂದಿತ್ತು. ಬೌದ್ಧಮತ ಚೀನದಲ್ಲಿ ಹರಡಲು ಅವಕಾಶವಾದ್ದು ಈ ಮೈತ್ರಿಯಿಂದಾಗಿ. ಅನೇಕ ದೊರೆಗಳು ಬೌದ್ಧಮತವನ್ನಪ್ಪಿದರು. ಚೀನೀ ಯಾಂತ್ರಿಕರು ಭಾರತಕ್ಕೆ ಹೋಗಿ ಬಂದರು. ಇವರಲ್ಲಿ ಪ್ರಸಿದ್ಧನಾದವನು ಫಾ ಷಿಯೆನ್. ಕ್ರಿ.ಶ. ಒಂದನೆಯ ಶತಮಾನದಲ್ಲಿ ಕಾಗದದ ಉಪಜ್ಞೆಯಾಯಿತು. ಗ್ರಂಥ ಪ್ರಕಟನೆಗೆ ಇದರಿಂದ ಅನುಕೂಲವಾಯಿತು. ಕ್ರಿ.ಶ. 100ರಲ್ಲಿ ಷೂ ಯೋ ವೆನ್ ಎಂಬ ನಿಘಂಟು ಪ್ರಕಟವಾಯಿತು. ಜಗತ್ತಿನಲ್ಲಿ ಇದೇ ಅತ್ಯಂತ ಪ್ರಾಚೀನ ನಿಘಂಟು. ಚೀನದ ಇತಿಹಾಸ ರಚನೆಯ ಪ್ರಥಮ ಪ್ರಯತ್ನ ನಡೆದದ್ದು ಈ ಕಾಲದಲ್ಲಿ, ಇದನ್ನು ರಚಿಸಿದವನು ನುಸ್ಸುಮ ಚಿನ್. ಇದರಲ್ಲಿ ಪುರಾತನ ಚೀನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳಿವೆ. ವಿಜ್ಞಾನ ಕೂಡ ಬೆಳೆದದ್ದು ಈ ಕಾಲದಲ್ಲೇ, ಗ್ರಹಣಗಳನ್ನು ಕುರಿತಂತೆ ಜನರಲ್ಲಿ ನೆಲೆಸಿದ್ದ ತಪ್ಪು ಭಾವನೆಗಳನ್ನು ದೂರಮಾಡಿ, ಸರಿಯಾದ ಪರಿಕಲ್ಪನೆಯನ್ನುಂಟುಮಾಡಲಾಯಿತು. ಸರಾಸರಿ 180 ದಿನಗಳಿಗೊಮ್ಮೆ ಒಂದು ಚಂದ್ರಗ್ರಹಣವಾಗುತ್ತದೆ. 41-42 ತಿಂಗಳಿಗೊಮ್ಮೆ ಸೂರ್ಯಗ್ರಹಣವಾಗುತ್ತದೆ. ಇವು ಕ್ರಮವಾಗಿ ಜರುಗುವ ಘಟನೆಗಳು. ರಾಜಕೀಯ ಕರ್ಮ ಸಂಯೋಗದಿಂದ ಸಂಭವಿಸತಕ್ಕವಲ್ಲ-ಎಂದು ವಾಂಗ್ ಚುಂಗ್(27-100) ಹೇಳಿದ.

ಹೀಗೆ ಸಕಲಕ್ಷೇತ್ರಗಳಲ್ಲೂ ಖ್ಯಾತಿ ಗಳಿಸಿದ್ದ ಹಾನ್ ವಂಶದ ಆಳ್ವಿಕೆಯೂ ಖಿಲವಾಯಿತು. ಈ ವಂಶದ ಕೊನೆಯ ಅರಸ 221ರಲ್ಲಿ ಮೂಲೆಗೊತ್ತಲ್ಪಟ್ಟ. ಇಲ್ಲಿಯ ಮುಂದೆ ಪರಿಸ್ಥಿತಿ ಪೂರ್ಣವಾಗಿ ಮಾರ್ಪಟ್ಟಿತು. ಒಳಯುದ್ಧಗಳು ನಡೆದುವು. ದೇಶ ಛಿದ್ರವಾಯಿತು. ಬೇರೆ ಬೇರೆ ರಾಜ್ಯಗಳು ಹುಟ್ಟಿಕೊಂಡು ಆಳಿ ಅಳಿದವು. ಹೂಣರೂ ತುರ್ಖರೂ ಪದೇಪದೇ ದಾಳಿ ನಡೆಸುತ್ತಿದ್ದರು. ಚೀನದ ಜನಸಂಖ್ಯೆಯೂ ಉತ್ಪಾದನೆಯೂ ಹೆಚ್ಚಿದುವು. ದೇಶ ಹೆಚ್ಚು ಸುಸಂಸ್ಕøತವಾಯಿತು. ಚೀನೀ ಬೌದ್ಧಮತ ವಿಶೇಷವಾಗಿ ಬಳಕೆಗೆ ಬಂತು. ಭಾರತದೊಡನೆ ಸಂಪರ್ಕ ಬೆಳೆಯುತ್ತಿತ್ತು. ಚೀನದ ಗಣಿತ, ಔಷದಿ, ಸಂಗೀತ, ಶಿಲ್ಪ, ಕಲೆ ಮುಂತಾದವು ಬೆಳೆದುವು.

ಟಾಂಗ್ ವಂಶ : 618-906. ಅಂತಃಕಲಹಗಳು ದೀರ್ಘಕಾಲ ಮುಂದುವರಿಯಲಿಲ್ಲ. ಟಾಂಗ್ ವಂಶ ಪ್ರಬಲವಾಯಿತು. ಇದು ಚೀನದ ಮಧ್ಯಕಾಲದ ಸುವರ್ಣದಶೆಯ ಅವಧಿಯೆನ್ನಬಹುದು. ಇಂದಿಗೂ ಈ ಅವಧಿಯ ಬಗ್ಗೆ ಚೀನೀಯರಲ್ಲಿ ಅಭಿಮಾನವಿದೆ. ತಾವು ಟಾಂಗ್ ಜನಾಂಗದವರು ಎಂದು ಅನೇಕ ಚೀನೀಯರು ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು.

ಟಾಂಗ್ ವಂಶದ ಮೊದಲನೆಯ ಅರಸ ಟೈ ಡ್ಜೂಂಗ್. ಇವನು ಚೀನದ ಒಬ್ಬ ಘನವಂತ ಅರಸ. ಶತ್ರುಗಳನ್ನು ಓಡಿಸಿ ಮಧ್ಯ ಏಷ್ಯದ ತರಿಮ್ ಪ್ರಸ್ಥಭೂಮಿಯಲ್ಲಿ ಚೀನದ ಸ್ಥಾನಮಾನಗಳನ್ನು ಬಲಪಡಿಸಿದ. ಅನೇಕ ಆಡಳಿತ ಸುಧಾರಣೆಗಳಾದುವು. ದೊಡ್ಡದೊಡ್ಡ ಭೂಸ್ವಾಮ್ಯಗಳು ಏರ್ಪಡದಂತೆ ತಡೆಗಟ್ಟಲು ಇವನು ಶಾಸನ ಮಾಡಿದ. ರೈತರು ನಾಡಿನ ಪ್ರಗತಿಗಾಗಿ ಕಂದಾಯವನ್ನೂ ದೇಹಶ್ರಮವನ್ನೂ ಸಲ್ಲಿಸುವಂತೆ ಆಜ್ಞೆ ಹೊರಡಿಸಿದ. ಜನ ನೆಮ್ಮದಿಯಿಂದ ಬಾಳ್ವೆ ನಡೆಸುವಂತಾಯಿತು. ಸಾರಿಗೆ ಸಂಪರ್ಕಕ್ಕಾಗಿ ನಾಲೆಗಳನ್ನು ನಿರ್ಮಿಸಿದುದರಿಂದ ಹೊರದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೆಚ್ಚಿತು. ಜಪಾನಿನೊಡನೆ ವ್ಯಾಪಾರ ಅಭಿವೃದ್ಧಿ ಹೊಂದಿತು. ಎಂಟನೆಯ ಶತಮಾನದ ಕೊನೆಯಲ್ಲಿ ಯಹೂದಿ, ಅರಬ್ಬೀ, ಕ್ರೈಸ್ತ ಮುಂತಾದ ಎಂಟು ಸಾವಿರ ಕುಟುಂಬಗಳು ರಾಜಧಾನಿಯೊಂದರಲ್ಲೇ ನೆಲೆಸಿದ್ದವು. ರಾಜಧಾನಿಯ ಜನಸಂಖ್ಯೆ ಅಂದು ಹತ್ತು ಲಕ್ಷದಷ್ಟಿತ್ತು.

ಎಂಟನೆಯ ಶತಮಾನ ಚೀನದ ಇತಿಹಾಸದಲ್ಲಿ ಕಾವ್ಯಯುಗವಾಗಿತ್ತೆಂದು ಹೇಳಲಾಗಿದೆ. ಅರಸರ ಆಸ್ಥಾದಲ್ಲಿ ಲೀ ಬಾ ಮತ್ತು ಡೂ ಫೂ ಎಂಬ ಇಬ್ಬರು ಅಸಾಧಾರಣ ಕವಿಗಳಿದ್ದರು. ಲೀ ಬಾ ಜನತಾಕವಿಯಾಗಿದ್ದ. ಆ ಕಾಲದಲ್ಲಿ ವಿದ್ವನ್ಮಣಿಗಳಿಗೂ ಕಲೆಗಳಿಗೂ ಪ್ರೋತ್ಸಾಹ ಅಪಾರವಾಗಿ ದೊರೆಯಿತು. ಹಿಂದಿನ ಕಾಲದ ಇತಿಹಾಸವನ್ನು ರಚಿಸಲಿಕ್ಕೆ ಅನೇಕ ಪಂಡಿತರು ನೇಮಕವಾಗಿದ್ದರು. ಮುದ್ರಣಕಲೆ ಕಂಡುಹಿಡಿಯಲ್ಲಟ್ಟಿದ್ದು ಆಗಲೇ. ಟಾಂಗ್ ವಂಶದ ಆಳ್ವಿಕೆಯಲ್ಲಿ ನೂತನ ಚೀನದ ಉದಯವಾಯಿತು. ಆದರೆ ಪರಕೀಯರ ದಾಳಿ, ದೇಶದೊಳಗಿನ ಭ್ರಷ್ಟಾಚಾರ, ಜನರ ಅತೃಪ್ತಿ, ಅಸಂತುಷ್ಟಿ, ಪ್ರಾಂತ್ಯಾಧಿಪತಿಗಳ ಪ್ರಾಬಲ್ಯ-ಇವುಗಳಿಂದ ಟಾಂಗ್ ವಂಶದ ವರ್ಚಸ್ಸು ಕುಂದಿತು. 906ರಲ್ಲಿ ಅದು ಕೊನೆಗೊಂಡಿತು.

ಸುಂಗ್ ವಂಶ : 960-1279. ಟಾಂಗ್ ವಂಶ ಕೊನೆಗೊಂಡಾಗ ದೇಶಕ್ಕೆ ಮತ್ತೆ ಅನಾಯಕಸ್ಥಿತಿ ಪ್ರಾಪ್ತವಾಯಿತು. 907ರಿಂದ 960ವರೆಗೆ ಅನೇಕ ರಾಜವಂಶಗಳು ಆಳಿದುವು. ಕ್ರಮೇಣ ಪ್ರಬಲವಾದ್ದು ಸುಂಗ್ ವಂಶ. ವಿವಿಧ ನೀತಿಗಳುಳ್ಳ ರಾಜಕೀಯ ಪಕ್ಷಗಳನ್ನುಳ್ಳ ಆಧುನಿಕ ಸರ್ಕಾರ ಇದರದು. ಆದರೆ ಇದೂ ಹಲವಾರು ಎಡರು ತೊಡರುಗಳನ್ನು ಎದುರಿಸಬೇಕಾಯಿತು. ಉತ್ತರದ ಗಡಿಯಲ್ಲಿ ಆಗಾಗ್ಗೆ ದಾಳಿ ನಡೆಸುತ್ತಿದ್ದ ಟಾರ್ಟರುಗಳ ಉಪದ್ರವವನ್ನು ನಿವಾರಿಸಿಕೊಳ್ಳಲು ಈ ವಂಶದ ಅರಸರು ಅವರಿಗೆ ವರ್ಷೇವರ್ಷೇ ಕಪ್ಪ ಕೊಡಲು ಒಪ್ಪಿಕೊಂಡಿದ್ದು ಅಹಿತವಾಯಿತು. ಇಷ್ಟರಲ್ಲಿ ಮಂಚೂರಿಯದ ಈಶಾನ್ಯ ಗಡಿಯಿಂದ ಇನ್ನೊಂದು ಶತ್ರು ಗುಂಪು ತಲೆಯೆತ್ತಿತು. ಟಾರ್ಟರುಗಳನ್ನು ಅಡಗಿಸಲು ಈ ಗುಂಪು ಅರಸನಿಗೆ ಸಹಾಯ ಮಾಡಿ ಕಟ್ಟಕಡೆಗೆ 1126ರಲ್ಲಿ ಸುಂಗ್ ರಾಜಧಾನಿಯನ್ನೇ ಆಕ್ರಮಿಸಲು ಯತ್ನಿಸಿತು. ಸುಂಗರಿಗ್ ಯಾಂಗ್‍ಟ್ಸೀ ಕಣಿವೆಯ ಉತ್ತರ ಪ್ರದೇಶದ ಮೇಲೆ ಹತೋಟಿ ತಪ್ಪಿತು. ಇದೆಲ್ಲದರ ಪರಿಣಾಮವಾಗಿ ಮುಂದಿನ ಒಂದು ಶತಮಾನ ಕಾಲ ಚೀನದಲ್ಲಿ ಎರಡು ಚಕ್ರಾಧಿಪತ್ಯಗಳು ಏರ್ಪಟ್ಟವು. ರಾಜಕೀಯ ದೃಷ್ಟಿಯಿಂದ ಸುಂಗ್ ಕಾಲ ದುರಂತದ ಕಾಲ. ಆದರೆ ಇತರ ವಿಚಾರಗಳಲ್ಲಿ ಅದು ತನ್ನ ವೈಶಿಷ್ಟ್ಯ ಉಳಿಸಿಕೊಂಡಿತ್ತು. ಕಲೆ ಬೆಳೆಯಿತು. ಈ ಕಾಲದ ಪಿಂಗಾಣಿ ಕಲೆಯಂತೂ ಇಂದಿಗೂ ಶ್ರೇಷ್ಠವೆನಿಸಿದೆ.

ಸುಂಗ್ ವಂಶ ಕೊನೆಗೊಂಡ ಮೇಲೆ ಮಂಗೋಲರು ಪ್ರಬಲರಾದರು. ಹನ್ನೆರಡನೆಯ ಶತಮಾನದಲ್ಲಿ ಜೆಂಫಿಸ್‍ಖಾನ್ ಎಂಬುವನು ಮಂಗೋಲರನ್ನೆಲ್ಲ ಒಟ್ಟುಗೂಡಿಸಿ ಇಡೀ ಮಂಗೋಲಿಯದ ಮೇಲೆ ತನ್ನ ಪ್ರಭಾವವನ್ನು ಗಳಿಸಿಕೊಂಡ. ಕ್ರಮೇಣ ಇವನ ದೃಷ್ಟಿ ದಕ್ಷಿಣದತ್ತ ಹೊರಳಿತು. ಮೊದಲು ಉತ್ತರದಲ್ಲಿ ಜುರ್‍ಚೆನ್ನರು ಸ್ಥಾಪಿಸಿದ್ದ ರಾಜ್ಯದ ಮೇಲೆ ತನ್ನ ಸೈನಿಕರನ್ನು ನುಗ್ಗಿಸಿದ. 1215ರಲ್ಲಿ ರಾಜಧಾನಿ ಪೀಕಿಂಗಿಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡು ಅಲ್ಲಿಯ ಜನರನ್ನು ಕೊಲೆಮಾಡಿದ. 1234ರ ವೇಳೆಗೆ ಈ ರಾಜ್ಯದ ಹೆಸರೇ ಇಲ್ಲವಾಯಿತು. 1279ರಲ್ಲಿ ಸುಂಗ್ ರಾಜ್ಯದ ಕೊನೆಯ ಅಧಿಪತಿಯನ್ನು ನಾಮಾವಶೇಷಮಾಡಿದ. ಯುಆನ್ ಎಂಬ ಮಂಗೋಲ್ ವಂಶದ ಅರಸರು ಚೀನದಲ್ಲಿ ಸಂಪೂರ್ಣ ಅಧಿಪತಿಗಳಾದರು. ಮಂಗೋಲ್ ಆಳ್ವಿಕೆ ಆರಂಭವಾಯಿತು. ಚೀನ ಈ ತೆರನಾಗಿ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದು ಇದೇ ಪ್ರಥಮ.

ಯುಆನ್ ವಂಶ : 1280-1368. ಯುಆನ್ ವಂಶದ ಆಳ್ವಿಕೆ ಚೀನದಲ್ಲಿ ಮಂಗೋಲ್ ದೊರೆ ಜೆಂಘಿಸ್‍ಖಾನ್‍ನಿಂದ ಆರಂಭವಾಯಿತು. ಈ ವಂಶದ ಅರಸರ ಪೈಕಿ ಕುಬ್ಲೈಕಾನ್ ಅತ್ಯಂತ ಪ್ರಸಿದ್ಧ. ಜೆಂಘಿಸ್‍ಖಾನ್ ಉತ್ತರ ಚೀನವನ್ನು ವಶಪಡಿಸಿಕೊಂಡು ಪೀಕಿಂಗಿನಿಂದ ಆಳತೊಡಗಿದ. ಅಂದು ದೆಶದ ಜನರಲ್ಲಿ ಮಂಗೋಲರು ಅಲ್ಪಸಂಖ್ಯಾತರಾಗಿದ್ದರು. ಆದ್ದರಿಂದ ಅವರ ಸ್ಥಾನಮಾನಗಳು ಪ್ರಮುಖವಾಗಿರುವಂತೆ ಇವನು ಕಾನೂನುಗಳನ್ನು ಜಾರಿಗೆ ತಂದ. ಆದರೂ ಚೀನೀಯರು ತಲೆ ಎತ್ತುವುದನ್ನು ತಡೆಗಟ್ಟಲು ಸಾಧ್ಯವಿಲ್ಲವಾಯಿತು. ಬುದ್ಧಿವಂತನಾದ ಖಾನ್ ದೂರದರ್ಶಿತ್ವ ತೋರಿ, ಚೀನೀಯರ ಶ್ರೇಷ್ಠ ಸಂಸ್ಕøತಿಯನ್ನು ಅರ್ಥಮಾಡಿಕೊಂಡು ಸಹನೆ ವಿವೇಕಗಳಿಂದ ಆಳ್ವಿಕೆ ನಡೆಸುತ್ತಿದ್ದ. ಆದ್ದರಿಂದ ಅನುಕೂಲಸ್ಥಿತಿ ನೆಲೆಸಿತು. ದೇಶದಲ್ಲಿ ಅನೇಕ ಪ್ರಜೋಪಯುಕ್ತ ಕಾರ್ಯಗಳು ಆದುವು. ಹೆದ್ದಾರಿಗಳೂ ಕಾಲುವೆಗಳೂ ನಿರ್ಮಾಣವಾದುವು. ದೇಶ ಅಭಾವಕ್ಕೆ ತುತ್ತಾಗದಂತೆ ಹೆಚ್ಚಿನ ಆಹಾರಧಾನ್ಯಗಳನ್ನು ಶೇಖರಿಸಿ ಇಡಲು ಅಲ್ಲಲ್ಲಿ ಕಣಜಗಳನ್ನು ಕಟ್ಟಿಸಿದನಲ್ಲದೆ ದೇಶದ ಪಂಚಾಂಗವನ್ನು ಬದಲಾಯಿಸಿದ ರಾಜಧಾನಿ ಪೀಕಿಂಗನ್ನು ಅಭಿವೃದ್ಧಿಗೊಳಿಸಿದ ಖಾನನ ಆಳ್ವಿಕೆಯ ಕಾಲದಲ್ಲೇ ಮಾರ್ಕೋಪೋಲೋ ಎಂಬ ಪ್ರವಾಸಿ ಚೀನಕ್ಕೆ ಭೇಟಿಕೊಟ್ಟು, ಅಲ್ಲಿ ತಾನು ಕಂಡ ಒಳ್ಳೆಯ ಮಟ್ಟದ ನಾಗರಿಕತೆಯನ್ನು ಜಗತ್ತಿಗೆ ಪರಿಚಯಮಾಡಿಕೊಟ್ಟ. ಅವನು 1275ರಲ್ಲಿ ಬಂದು ತಂದೆ ಮತ್ತು ಚಿಕ್ಕಪ್ಪನೊಡನೆ 17 ವರ್ಷಗಳ ವರೆಗೆ ಅಲ್ಲಿದ್ದ. ಕುಬ್ಲೈ ಖಾನನ ತರುವಾಯ ಏಳು ಯುಆನ್ ಅರಸರು ರಾಜ್ಯವಾಳಿದರೂ ಯಾರೂ ಅವನ ಮಟ್ಟಕ್ಕೇರಲಿಲ್ಲ. ಈ ಅರಸರು ಸ್ವಕಾರ್ಯಸಾಧಕರಾದರೇ ವನಾ ತಾವು ಆಡಿದಂತೆ ಮಾಡಿ ತೋರಿಸಲಿಲ್ಲ.

ಕುಬ್ಲೈಖಾನನ ಅನಂತರ ಮಿಂಗ್ ವಂಶ 1368-1644 : ಚೀನೀಯರಲ್ಲಿ ಅಸಮಾಧಾನ ಉಂಟಾಯಿತು. ಜನಸಾಮಾನ್ಯರ ಕಷ್ಟ ಹೆಚ್ಚಿತು. ರೈತರ ಬಡತನ ಮಿಗಿಲಾಯಿತು. ಕಡೆಗೆ ದೇಶದಲ್ಲಿ ದಂಗೆಯೆದ್ದು ಒಬ್ಬ ಮಾಜಿ ಬೌದ್ಧ ಸಂನ್ಯಾಸಿ ನಾಯಕನಾದ. ಇವನ ಹೆಸರು ಹಂಗ್‍ವು. ಇವನ ಸೇವೆ 1368ರಲ್ಲಿ ಪೀಕಿಂಗನ್ನು ಮುತ್ತಿ ವಶಪಡಿಸಿಕೊಂಡು ಮಂಗೋಲರ ಆಡಳಿತವನ್ನು ಅಂತ್ಯಗೊಳಿಸಿತು.

ಮಂಗೋಲರ ಆಳ್ವಿಕೆಯ ಗುರುತೇ ಇರಬಾರದೆಂದು ಈತ ಯೋಚಿಸಿ ಅದೆಲ್ಲವನ್ನೂ ಅಳಿಸಿ ಮತ್ತೆ ಚೀನೀ ಸಂಪ್ರದಾಯವನ್ನು ಅಸ್ಥಿತ್ವಕ್ಕೆ ತಂದ. ಆದರೆ ಈ ಸಂಪ್ರದಾಯಗಳು ಕೇವಲ ಕಂದಾಚಾರದವಾಗಿದ್ದರಿಂದ ಕಡೆಗೆ ಇವನ್ನು ಕೈಬಿಡಲಾಯಿತು. ಶಿಕ್ಷಣ ಪದ್ಧತಿಯನ್ನೂ ನ್ಯಾಯಪದ್ಧತಿಯನ್ನೂ ಮಾರ್ಪಡಿಸಲಾಯಿತು. ಇವನ ಆಳ್ವಿಕೆಯಲ್ಲಿ ಸುಖ, ಸಮೃದ್ಧಿ ಉಂಟಾದುವು. ಇವನ ತರುವಾಯ ಬಂದವರು ಅಷ್ಟಾಗಿ ಸಮರ್ಥರಲ್ಲ. ಆದ್ದರಿಂದ ಪ್ರಗತಿಯಾಗಲಿಲ್ಲ. ಕಲೆಗಳನ್ನೂ ಸಾರ್ವಜನಿಕ ಪ್ರಯೋಜನಕಾರ್ಯಗಳನ್ನೂ ಇವರು ಪ್ರೋತ್ಸಾಹಿಸಿದರು.

ಮಿಂಗ್ ವಂಶದ ಆಳ್ವಿಕೆಯ ಕಾಲದಲ್ಲಿ ವಿದೇಶಗಳೊಡನೆ ಸಂಪರ್ಕ ಬೆಳೆಯಿತು. ಪೂರ್ಚುಗಲ್ ಚೀನದೊಡನೆ ವ್ಯಾಪಾರ ಸಂಬಂಧ ಆರಂಭಿಸಿತು. ಮುಂದೆ ಯೂರೋಪಿನ ರಾಷ್ಟ್ರಗಳು ಒಂದೊಂದಾಗಿ ಚೀನಕ್ಕೆ ಬಂದು ವ್ಯಾಪಾರ ಸಂಬಂಧ ಬೆಳೆಸಿದುವು. ಆದರೆ ಅವು ನಡೆದುಕೊಂಡ ಬಗೆ ಸಮರ್ಪಕವಾಗಿರಲಿಲ್ಲ. ಸ್ಥಳೀಯ ಆಚಾರ ವಿಚಾರಗಳನ್ನು ಅವು ಉಪೇಕ್ಷಿಸಿದುವು. ದುರಹಂಕಾರದಿಂದಲೂ ಕ್ರೂರತನದಿಂದಲೂ ವರ್ತಿಸಿದುವು. ಪೋರ್ಚುಗಲ್ ಅಂತೂ ತುಂಬ ಧೂರ್ತತನದಿಂದ ನಡೆದುಕೊಂಡಿತು. ಕ್ರೈಸ್ತರಲ್ಲದವರ ಬಗ್ಗೆ ದುಷ್ಟತನ ತೋರಿತು. ಅವರ ಆಸ್ತಿಪಾಸ್ತಿಗಳ ಕಡೆ ವಕ್ರ ಕಣ್ಣಿಟ್ಟಿತು. ಇದರಿಂದ ಚೀನೀಯರು ಕೋಪಗೊಂಡರು. ಪರಿಣಾಮವಾಗಿ ವಿದೇಶಿಯರು ಚೀನದಲ್ಲಿ ಕಾಲಿಡದಂತೆ ಮಾಡಿದರು. ವ್ಯಾಪಾರ ದೃಷ್ಟಿಯಿಂದ ಮಾತ್ರವೇ ಪೋರ್ಚುಗೀಸರಿಗೆ ಮಾಕಾವ್‍ನಲ್ಲಿ ಇರಲು 1557ರಲ್ಲಿ ಅನುಮತಿ ಕೊಡಲಾಯಿತು. ಆದರೆ ಅದಕ್ಕೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಪೋರ್ಚುಗೀಸರ ತರುವಾಯ ಚೀನದಲ್ಲಿ ಕಾಲಿಟ್ಟವರು ಕ್ರೈಸ್ತ ಪಾದ್ರಿಗಳು. ಇವರಲ್ಲಿ ಪ್ರಮುಖನಾದವನು ಫ್ರಾನ್ಸಿಸ್ eóÉೀವಿಯರ್. ಇವನು ತೀರಿಕೊಂಡ ಮೇಲೆ ಇವನ ಶಿಷ್ಯರು ರಾಜಮನೆತನದವರನ್ನೂ ಪ್ರಾಂತ್ಯಗಳಲ್ಲಿನ ಮುಖ್ಯಸ್ಥರನ್ನೂ ಮತಾಂತರಗೊಳಿಸಿದರು. ಚೀನದಲ್ಲಿ ಪ್ರಾಬಲ್ಯ ಗಳಿಸಲು ಅನಂತರ ಹೆಣಗಿದ ರಾಷ್ಟ್ರಗಳಲ್ಲಿ ಜಪಾನ್ ಕೂಡ ಮುಖ್ಯವಾಯಿತು. ಚೀನ, ಕೊರಿಯಗಳ ಆಕ್ರಮಣವೇ ಅದರ ಗುರಿ. ಮುಂದೆ ಇದಕ್ಕಾಗಿ ಜಪಾನ್ ಸನ್ನಾಹ ನಡೆಸಿತು. 16ನೆಯ ಆತಮಾನದ ಕೊನೆಯಲ್ಲಿ ಜಪಾನ್ ತನ್ನ ಸೇನೆಯನ್ನು ಕೊರಿಯದಲ್ಲಿ ತಂದಿಳಿಸಿತು. ಈ ಸಂಬಂಧವಾಗಿ ನಡೆದ ಅನೇಕ ಕದನಗಳಲ್ಲಿ ಕೊರಿಯನರಿಗೂ ಚೀನೀಯರಿಗೂ ಪರಾಭವವಾಯಿತು. ಆದರೆ ಸಮುದ್ರದ ಓಣಿಗಳ ಮೇಲೆ ಅವರು ಹತೋಟಿಯನ್ನಿಟ್ಟುಕೊಳ್ಳದ್ದರಿಂದ ಕೊರಿಯದ ನಾವಿಕರು ಅವರ ನೌಕೆಗಳನ್ನೆಲ್ಲ ಧ್ವಂಸ ಮಾಡಿದರು. ಈ ನಿಮಿತ್ತ ಜಪಾನರು ಹಿಮ್ಮೆಟ್ಟಬೇಕಾಯಿತು.

ಆ ವೇಳೆಗೆ ಮತ್ತೊಂದು ದಾಳಿ ಸಿದ್ಧವಾಗಿತ್ತು. ಉತ್ತರದಲ್ಲಿ ಚೀನದ ಮಹಾಗೋಡೆಯನ್ನು ಭೇದಿಸಿಕೊಂಡು ಬಂದ ಮ್ಯಾಂಚುಗಳಿಗೆ ಚೀನ ಮಣಿಯಬೇಕಾಯಿತು. ಮಿಂಗರಿಗೆ ಆಪತ್ಕಾಲ ಸನ್ನಿಹಿತವಾಯಿತು. ಅದೇ ಸಮಯದಲ್ಲೇ ದೇಶದೊಳಗೆ ಕ್ರಾಂತಿ ಸಂಭವಿಸಿತು. 1644ರಲ್ಲಿ ಈ ಕ್ರಾಂತಿಯ ನಾಯಕ ಅರಸನ ಸೈನಿಕರನ್ನು ಪರಾಜಯಗೊಳಿಸಿ ಪೀಕಿಂಗನ್ನು ಸ್ವಾಧೀನಪಡಿಸಿಕೊಂಡ. ಆದರೆ ಬಲಾಢ್ಯರಾಗಿದ್ದ ಮ್ಯಾಂಚೂಗಳ ಕೈಗೆ ಈ ನಾಯಕ ಹತನಾದ. ಆ ವರ್ಷವೇ ಮ್ಯಾಂಚೂ ವಂಶದ ಸ್ಥಾಪನೆಯಾಯಿತು.

ಮಿಂಗ್ ವಂಶದ ಆಳ್ವಿಕೆ ಅನೇಕ ವಿಧಗಳಲ್ಲಿ ವೈಶಿಷ್ಟ್ಯಪೂರ್ಣವಾದ್ದು. ಕಲಾಕೌಶಲ ಉಚ್ಛ್ರಾಯಸ್ಥಿತಿ ಮುಟ್ಟಿತು. ಪಿಂಗಾಣಿ ಸಾಮಾನುಗಳ ವೈಖರಿ, ಅದರ ವರ್ಣವಿನ್ಯಾಸ, ಸೊಬಗು, ಹೊಳಪು ಅನಪಮವಾದ್ದು. ದುರ್ಭೇದ್ಯವಾಗುವಂತೆ ಪೀಕಿಂಗ್ ನಗರದ ನಿರ್ಮಾಣವಾದ್ದು ಮಿಂಗ್ ವಂಶದ ಆಳ್ವಿಕೆಯ ಆದಿಭಾಗದಲ್ಲಿ.

ಮ್ಯಾಂಚೂ : 1644-1912 ಮ್ಯಾಂಚೂಗಳು ತಮ್ಮ ಆಳ್ವಿಕೆಯಲ್ಲಿ ಚೀನೀಯರ ಮೇಲೆ ಬಗೆಬಗೆಯ ಪ್ರಭಾವ ಉಂಟು ಮಾಡಿದರು. ಉಡಗೆ ತೊಡಿಗೆಯಲ್ಲಿ ಹೊಸ ಪದ್ಧತಿಯನ್ನು ಹಾಕಿಕೊಟ್ಟರು. ಈ ವಂಶದ ಅರಸರಲ್ಲಿ ಪ್ರಖ್ಯಾತನಾದವನೆಂದರೆ ಕಾಂಗ್‍ಷೀ. (1661-1722) ಈತ ವಿದ್ಯಾಪರಿಣತನೂ ದಕ್ಷ ಸೇನಾನಿಯೂ ಆಗಿದ್ದ. ಇವನ ನೇತೃತ್ವದಲ್ಲಿ ಚೀನೀ ಭಾಷೆಯ ನಿಘಂಟು ಸಿದ್ಧವಾಯಿತು. ಟಿಬೆಟ್ ಚೀನಕ್ಕೆ ಸೇರುವಂತೆ ಅದ್ದೂ ಇವನ ಕಾಲದಲ್ಲೇ, ದೇಶ ಸುಭಿಕ್ಷವಾಗಿತ್ತು. ಭಾರಿ ಭೂಕಂಪವೊಂದು ಪೀಕಿಂಗಿನಲ್ಲಿ ಸಂಭವಿಸಿ, ನಾಲ್ಕು ಜನ ಸತ್ತರೆಂದು ಹಾಳಲಾಗಿದೆ.

ವಿದೇಶಿ ಪ್ರಭಾವ : ವಿದೇಶಗಳೊದನೆ ಚೀನ ಸಂಪರ್ಕವನ್ನಿಟ್ಟುಕೊಂಡು ಬಂದದ್ದರಿಂದಾಗಿ ಅದು ಮುಂದೆ ಬಹಳ ಕಷ್ಟಕ್ಕೆ ಸಿಲುಕಿತೆಂದು ಇತಿಹಾಸ ಹೇಳುತ್ತದೆ. ಇಷ್ಟವಿಲ್ಲದಿದ್ದರೂ ದೇಶದ ಸ್ಥಿತಿಗತಿಗನುಸಾರವಾಗಿ ಅದು ಸಂಪರ್ಕ ಹೊಂದಬೇಕಾಯಿತು. 16ನೆಯ ಶತಮಾನದಲ್ಲಿ ರಷ್ಯದೊಡನೆ ಚೀನ ಒಂದು ಒಪ್ಪಂದಕ್ಕೆ ಬಂದಿತ್ತು. ಅದಕ್ಕೆ ವ್ಯಾಪಾರದ ರಿಯಾಯಿತಿಯನ್ನು ತೋರಿಸಿತ್ತು. ವ್ಯಾಪಾರ ದೃಷ್ಟಿಯಿಂದ ಹಲವಾರು ವಿದೇಶೀ ರಾಷ್ಟ್ರಗಳು ಚೀನವನ್ನು ಬಯಸಿದ್ದೂ ಆಗಲೇ. ಈ ರಾಷ್ಟ್ರಗಳ ಪೈಕಿ ಮುಖ್ಯವಾದ್ದು ಬ್ರಿಟನ್, ಈಸ್ಟ್ ಇಂಡಿಯ ಕಂಪನಿ ರಂಗಕ್ಕಿಳಿಯಿತು. ವ್ಯಾಪಾರ ಸಂಪರ್ಕ ಬೆಳೆಸಿಕೊಂಡಿತು. ಆದರೂ ಚೀನ ಅದರ ಮೇಲೆ ನಿರ್ಬಂಧಗಳನ್ನು ಹೇರಿತ್ತು. ವ್ಯಾಪಾರ ಹೆಚ್ಚುತ್ತ ಬಂದಂತೆಲ್ಲ ನಿರ್ಬಂಧಗಳನ್ನು ಸಡಿಲಿಸಬೇಕೆಂದು ಚೀನದ ಮೇಲೆ ಆ ಕಂಪನಿ ಒತ್ತಾಯ ತರುತ್ತಿತ್ತು. ಅದರ ಹಿಂದಿದ್ದ ರಾಜಕೀಯ ಚೀನಕ್ಕೆ ಅರ್ಥವಾಗದಿರಲಿಲ್ಲ. ಕಂಪನಿಯೂ ಸಾಮಾನ್ಯ ವರ್ತಕರಂತೆ ಎಂಬುದು ಅದರ ನಿಲುವು. ಈಸ್ಟ್ ಇಂಡಿಯ ಕಂಪನಿಯ ವ್ಯಾಪಾರದ ಏಕಸ್ವಾಮ್ಯವನ್ನು ಬ್ರಿಟಿಷ್ ಸರ್ಕಾರ ತಪ್ಪಿಸಿ ತನ್ನ ಪ್ರತಿನಿಧಿಯೊಬ್ಬನನ್ನು ಅದಕ್ಕಾಗಿ ನೇಮಕ ಮಾಡಿತು. ಈ ಪ್ರಸಂಗ ನಡೆದದ್ದು 1834ರಲ್ಲಿ. ಈ ಪ್ರಕರಣದಿಂದ ಪರಸ್ಪರ ವಿರಸವುಂಟಾಯಿತು. ಬ್ರಿಟಿಷ್ ಸರ್ಕಾರದ ಬೇಡಿಕೆಯನ್ನು ಚೀನೀ ಅರಸ ಪುರಸ್ಕರಿಸಲಿಲ್ಲ. ಅದರ ಪ್ರತಿನಿಧಿಯ ಒತ್ತಾಯಗಳಿಗೂ ಮಣಿಯಲಿಲ್ಲ. ಕಡೆಗೆ ವ್ಯಾಪಾರ ನಿಲ್ಲುವಂತಾಯಿತು.

ಸ್ಥಿತಿ ಉತ್ಕಟವಾಯಿತು. ಇದಕ್ಕೆ ಮೂಲವಾದ್ದು ಅಫೀಮಿನ ಪ್ರಶ್ನೆ. ಪೋರ್ಚುಗೀಸರು ಅಲ್ಲಿ ಕಾಲಿಡುವುದಕ್ಕೆ ಮೊದಲೇ ಚೀನೀಯರಿಗೆ ಅಫೀಮು ಸೇವನೆಯ ಚಟ ಚೀನಿಯರಲ್ಲಿ ಹೆಚ್ಚಾಗಿತ್ತು. ಇಂಗ್ಲಿಷರು ಅಫೀಮನ್ನು ಚೀನಕ್ಕೆ ಭಾರತದಿಂದ ಆಮದು ಮಾಡುತ್ತಿದ್ದರು. ಇದಕ್ಕೆ ಅಲ್ಲಿದ್ದ ಬೇಡಿಕೆ ಬಹಳ. ಹದಿನೈದು ವರ್ಷಗಳಲ್ಲಿ ಇದರ ಆಮದು ನಾಲ್ಕು ಪಟ್ಟು ಹೆಚ್ಚಿತು. ಇದರ ಆಮದನ್ನೂ ಉಪಯೋಗವನ್ನೂ ನಿಷೇಧಿಸಿ ಅರಸ ಆಜ್ಞೆ ಮಾಡಿದರೂ ಪ್ರಯೋಜನವಾಗಲಿಲ್ಲ. 1800ರಲ್ಲಿ ಆಫೀಮಿನ ವ್ಯಾಪಾರವನ್ನು ಕಠಿಣವಾಗಿ ನಿರೋಧಿಸಲಾಯಿತು. ಆದರೂ ವ್ಯಾಪಾರ ಚೆನ್ನಾಗಿಯೇ ಸಾಗುತ್ತಿತ್ತು. ಚೀನೀ ಅಧಿಕಾರಿಗಳೇ ಇದಕ್ಕೆ ಬೆಂಬಲವಾಗಿದ್ದರು. 1833ರಲ್ಲಿ ಅರಸ ತನ್ನ ಅಧಿಕಾರಿಯೊಬ್ಬನನ್ನು ಕ್ಯಾಂಟನ್ನಿಗೆ ಕಳುಹಿಸಿ ಅಫೀಮು ನಿರೋಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಜ್ಞೆ ಮಾಡಿದ. ಈ ಅಧಿಕಾರಿಯ ಪ್ರಯತ್ನ ನಿರರ್ಥಕವಾಯಿತು. ಸ್ಥಳದ ಜನರಿಂದಲೂ ವಿದೇಶೀಯರಿಂದಲೂ ಪ್ರತಿಭಟನೆಗಳು ಬಂದುವು. ವ್ಯವಹಾರವನ್ನು ತಡೆಗಟ್ಟಲು ನೇಮಕಗೊಂಡ ದೋಣಿಗಳೇ ಕಳ್ಳತನದಲ್ಲಿ ಅದನ್ನು ತಂದು ಹಂಚುವುದರಲ್ಲಿ ಉದ್ಯುಕ್ತವಾಗಿದ್ದುವು. 1839ರಲ್ಲಿ ಬೇರೊಬ್ಬ ಅಧಿಕಾರಿ ನೇಮಕನಾದ. ಈ ಅಧಿಕಾರಿ ಕಠಿಣಕ್ರಮವನ್ನೇ ಅನುಸರಿಸಿದ. ಬ್ರಿಟಿಷರ ವಶದಲ್ಲಿದ್ದ ಅಫೀಮನ್ನೆಲ್ಲ ಒಪ್ಪಿಸಬೇಕೆಂದು ಅಧಿಕಾರಿ ನಿರೂಪ ಹೊರಡಿಸಿ, ಬ್ರಿಟಿಷ್ ಪ್ರಜೆಗಳ ಮೇಲೆ ನಿರ್ಬಂಧ ಹಾಕಿದ. ಇದರಿಂದ ಅವರಿಗೆ ಕಷ್ಟವಾಯಿತು. ಬ್ರಿಟನ್ನಿನ ಪ್ರತಿನಿಧಿ ಬ್ರಿಟಿಷ್ ವರ್ತಕರ ಬಳಿ ಇದ್ದ ಅಫೀಮುನ್ನೆಲ್ಲ. ಇದು ಇಪ್ಪತ್ತು ಸಾವಿರ ಪೆಟ್ಟಿಗೆಗಳಷ್ಟತ್ತು. ಚೀನೀ ಅಧಿಕಾರಿಯ ಆಜ್ಞೆಯಂತೆ ಇದನ್ನೆಲ್ಲ ಸುಡಲಾಯಿತು. ಚೀನೀ ಅಧಿಕಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬ್ರಿಟಿಷ್ ವರ್ತಕರು ಮುಂದೆ ಅಫೀಮು ವ್ಯಾಪಾರ ನಡೆಸುವುದಿಲ್ಲವೆಂಬ ಭರವಸೆ ನೀಡಬೇಕೆಂದು ಕೇಳಿದ. ಇದನ್ನು ಉಲ್ಲಂಘಿಸಿದವರಿಗೆ ಮರಣದಂಡನೆ ವಿಧಿಸುವುದು ಅವನ ಉದ್ದೇಶ. ಎರಡೂ ಪಕ್ಷಗಳಲ್ಲಿ ಯಾವುದೂ ಮಣಿಯಲಿಲ್ಲ. ಸ್ಥಿತಿ ಕೆಡುತ್ತ ಬಂತು. ಯುದ್ಧ ಅನಿವಾರ್ಯವಾಯಿತು. ಬ್ರಿಟಿಷ್ ಹಾಗೂ ಚೀನೀ ಹಡಗುಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಚೀನೀ ನೌಕೆಗಳು ಹಿಮ್ಮೆಟ್ಟಿದುವು. ಆದರೂ ಕದನ ನಿಲ್ಲಲಿಲ್ಲ. ಮೂರು ವರ್ಷಗಳ ಕಾಲ ಯುದ್ಧ ನಡೆಯಿತು. ಕೊನೆಗೆ ಜಯ ಲಭಿಸಿದ್ದು ಬ್ರಿಟಿಷರಿಗೆ. ಕೆಲವು ದ್ವೀಪಗಳೂ ಪಟ್ಟಣಗಳೂ ಷಾಂಗ್‍ಹೈ ರೇವೂ ಬ್ರಿಟಿಷರ ವಶವಾದುವು. ಪೀಕಿಂಗ್, ನ್ಯಾನ್‍ಕಿಂಗ್ ನಗರಗಳಿಗೆ ಅಪಾಯ ಉಂಟಾಯಿತು. ಆಗ ಅರಸ ರಾಜಿಗೆ ಬಂದ.

1842ರಲ್ಲಿ ನ್ಯಾನ್ಕಿಂಗ್ ಕೌಲಿಗೆ ಸಹಿಯಾಯಿತು. ಬ್ರಿಟಿಷರ ಈ ವಿಜಯದಿಂದ ವಿದೆಶೀಯರಿಗೆ ಅನುಕೂಲವಾಯಿತು. ಪಾಶ್ಚಾತ್ಯ ರಾಷ್ಟ್ರವೊಂದರೊಡನೆ ಕೌಲಿನ ಹೆಸರಿನಲ್ಲಿ ಚೀನ ಬಂಧಿಸಲ್ಪಟ್ಟಿದ್ದು ಇದೇ ಪ್ರಥಮ. ಈ ಕೌಲಿನಂತೆ ಬ್ರಿಟನ್ನಿಗೆ ಚೀನ ಹಾಂಗ್‍ಕಾಂಗನ್ನು ಒಪ್ಪಿಸಬೇಕಾಯಿತು. ಅಲ್ಲದೆ ಇನ್ನು ಕೆಲವು ಪ್ರಮುಖ ರೇವುಗಳೂ ಯೂರೋಪಿನ ವ್ಯಾಪಾರಕ್ಕಾಗಿ ತೆರೆದವು. ಜೊತೆಗೆ ಚೀನ ಬ್ರಿಟನ್ನಿಗೆ ಎರಡು ಕೋಟಿ ಹತ್ತು ಲಕ್ಷ ಡಾಲರುಗಳಷ್ಟು ತಪ್ಪು ಕಾಣಿಕೆ ತೆರಬೇಕಾಯಿತು. ಎರಡು ವರ್ಷಗಳ ತರುವಾಯ ಅಮೆರಿಕ, ಫ್ರಾನ್ಸುಗಳೂ ಮೂರು ವರ್ಷಗಳ ಮೇಲೆ ನಾರ್ವೇ, ಸ್ವೀಡನ್‍ಗಳೂ ಬ್ರಿಟನ್ ಮಾಡಿಕೊಂಡಿದ್ದ ಮಾದರಿಯಲ್ಲಿ ವ್ಯಾಪಾರದ ಒಡಂಬಡಿಕೆ ಮಾಡಿಕೊಂಡುವು.

ಇಷ್ಟಾದರೂ ಸ್ಥಿತಿ ಸುಧಾರಿಸಲಿಲ್ಲ. 1856ರಲ್ಲಿ ಚೀನ ಮತ್ತೆ ಬ್ರಿಟನ್ನಿನೊಡನೆ ಕಾದಾಡುವ ಪ್ರಸಂಗ ಒದಗಿತು. ಈ ಬಾರಿ ಬ್ರಿಟನ್ನನ್ನು ಫ್ರಾನ್ಸ್ ಕೂಡಿಕೊಂಡಿತು. ಗ್ವಾಂಗ್‍ಸೀಯ ಚೀನೀ ಅಧಿಕಾರಿಗಳು ಫ್ರೆಂಚ್ ಕ್ಯಾತೊಲಿಕ್ ಪಾದ್ರಿಯನ್ನ ಗಲ್ಲಿಗೇರಿಸಿದ್ದು ಇದಕ್ಕೆ ಕಾರಣ. ಈ ಪಾದ್ರಿ ದೊಂಬಿ ಎಬ್ಬಿಸಲು ಸಂಚು ಹೂಡಲು ಯತ್ನಿಸಿದನೆಂಬುದು ಆಪಾದನೆ. ಇದರಿಂದ ಫ್ರೆಂಚ್ ಪ್ರಜೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತೆಂದು ಫ್ರೆಂಚ್ ಪ್ರತಿನಿಧಿ ಪ್ರತಿಭಟನೆ ಸಲ್ಲಿಸಿದ. 1860ರ ತನಕ ಯುದ್ಧ ನಿಲ್ಲಲಿಲ್ಲ. ಕೊನೆಗೆ ಬ್ರಿಟನ್ ಫ್ರಾನ್ಸ್‍ಗಳು ಒಟ್ಟುಗೂಡಿ ಪೀಕಿಂಗ್ ನಗರವನ್ನು ಹಿಡಿದುವು. ಈ ಯುದ್ಧ ಸ್ವಾಭಾವಿಕವಾಗಿಯೇ ಚೀನದಲ್ಲಿ ಅಸಮಾಧಾನವನ್ನುಂಟುಮಾಡಿತು. ಅಲ್ಲಲ್ಲಿ ಗಲಭೆ ಎದ್ದಿತು. ಇದಕ್ಕೆ ನಾಯಕನಾಗಿದ್ದವನು ಹುಂಗ್ ಷಿಯೂ ಚ್ಯೂಆನ್. ಇವನ ನೇತೃತ್ವದಲ್ಲಿ ಬಂಡಾಯಗಾರರು ನ್ಯಾನ್ಕಿಂಗ್ ಪಟ್ಟಣವನ್ನು ಹಿಡಿದರು. ಇದನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಆದರೂ ವಿದೇಶಿಯರ ಸಹಾಯದಿಂದ ಈ ಬಂಡಾಯವನ್ನು ಅಡಗಿಸಲಾಯಿತು. ಇದು ಟೈಪಿಂಗ್ ಬಂಡಾಯವೆಂದು ಹೆಸರಾಗಿದೆ.

ಹತ್ತು ವರ್ಷಗಳ ಅನಂತರ ಚೀನ ಪುನರುಜ್ಜೀವನಗೊಂಡಿತು. ಆದರೆ 1894ರಲ್ಲಿ ಪುನಃ ಜಪಾನಿನೊಡನೆ ಅದು ಯುದ್ಧ ಮಾಡಬೇಕಾಯಿತು. ಕೊರಿಯದ ಮೇಲೆ ಚೀನ ಸಾರ್ವಭೌಮಾಧಿಕಾರ ಸ್ಥಾಪಿಸಿದ್ದು ಈ ಎರಡೂ ದೇಶಗಳ ಮಧ್ಯೆ ಮನಸ್ತಾಪಕ್ಕೆ ಕಾರಣ. ಈ ಯುದ್ಧದಲ್ಲಿ ಚೀನ ಸಂಪೂರ್ಣ ಪರಾಭವ ಹೊಂದಿತು. 1895ರಲ್ಲಿ ಆದ ಒಪ್ಪಂದದ ಪ್ರಕಾರ ಚೀನ ಜಪಾನಿಗೆ ಫಾರ್ಮೋಸ ದ್ವೀಪವನ್ನೂ ಲಿಯೌಡುಂಗ್ ಪುರ್ಯಾಯ ದ್ವೀಪವನ್ನೂ ಪರಿಹಾರ ದ್ರವ್ಯವನ್ನು ಕೊಡಬೇಕಾಯಿತು. ಆದರೆ ಲಿಯೌಡುಂಗನ್ನು ಜಪಾನಿಗೆ ಒಪ್ಪಿಸಲು ಯೂರೋಪಿನ ರಾಷ್ಟ್ರಗಳು ಸಮ್ಮತಿಸಲಿಲ್ಲ. ರಷ್ಯಕ್ಕೆ ಅದರ ಮೇಲೆ ಕಣ್ಣಿತ್ತು. ಅದು ಫ್ರಾನ್ಸ್ ಮತ್ತು ಜರ್ಮನಿಯ ಸಹಾಯದಿಂದ ಜಪಾನಿನ ಮೇಲೆ ಭಾರಿ ಒತ್ತಡ ತಂದಿತು. ಪರಿಣಾಮವಾಗಿ ಜಪಾನು ಲಿಯೌಡುಂಗ್ ಬಿಟ್ಟುಕೊಟ್ಟು ಫರ್ಮೋಸವನ್ನು ಮಾತ್ರ ಉಳಿಸಿಕೊಂಡಿತು. ಲಿಯೌಡುಂಗನ್ನು ಮುಂದೆ ಚೀನದಿಂದ ರಷ್ಯ ಗುತ್ತಿಗೆಗೆ ಪಡೆಯಿತು. ಈ ಮಧ್ಯೆ ಹಲವಾರು ಘರ್ಷಣೆಗಳು ವಿದೇಶೀಯರ ದುರಾಶೆಯ ಫಲವಾಗಿ ಕುಟಿಲತನಗಳೂ ಇವನ್ನೆಲ್ಲ ಮೆಟ್ಟಿನಿಂತು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಚೀನದ ಹೆಣಗಾಟವೂ ಮುಂದುವರಿದುವು. ಆದರೆ ಚೀನ ಯಶಸ್ಸುಗಳಿಸಲಿಲ್ಲ. ವಿದೇಶೀಯರಲ್ಲಿ ಉಂಟಾದ ಪರಸ್ಪರ ಅಸೂಯೆಯ ಪರಿಣಾಮದ ಕುಟಿಲೋಪಾಯಗಳಿಗೆ ಅದು ಮಣಿಯಬೇಕಾಯಿತು. ಇತರ ದೇಶಗಳೊಡನೆ ಸಂಧಿ ಮಾಡಿಕೊಂಡು ಹಲವು ರಿಯಾಯಿತಿಗಳಿಗೆ ಸಮ್ಮತಿ ನೀಡಿತು. ಒಂದೊಂದು ವಿದೇಶೀ ರಾಷ್ಟ್ರದ ಉದ್ದಿಶ್ಯವೂ ಒಂದೊಂದು ಬಗೆ. ರಷ್ಯಕ್ಕೆ ಮಂಚೂರಿಯವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬ ಆಸೆ. ಜರ್ಮನಿಗೆ ಕಯೋಚೌವನ್ನು ಪಡೆಂiÀiಬೇಕೆಂದು ಇಷ್ಟ. ಜೊತೆಗೆ ಷಾಂಟಂಗ್ ಪ್ರದೇಶದಲ್ಲಿದ್ದ ಖನಿಜ ನಿಕ್ಷೇಪಗಳ ಮೇಲೆ ಹತೋಟಿ ಪಡೆಯಬೇಕೆಂಬುದೂ ಅದರ ಉದ್ದೇಶವಾಗಿತ್ತು. ಇಬ್ಬರು ಜರ್ಮನ್ ಪಾದ್ರಿಗಳ ಕೊಲೆಯಾದ್ದನ್ನು ನೆಪ ಮಾಡಿಕೊಂಡು ಜರ್ಮನಿ ಧಾಳಿಯನ್ನಾರಂಭಿಸಿತು. ಕೊನೆಗೆ ಕಯೋಚೌ ಕೊಲ್ಲಿಯನ್ನು 90 ವರ್ಷಗಳ ಗುತ್ತಿಗೆಯ ಮೇಲೆ ಅದು ಪಡೆದುಕೊಂಡಿತಲ್ಲದೆ ಅದರ ಪಕ್ಕದಲ್ಲಿದ್ದ 200 ಚ. ಮೈ ವಿಸ್ತೀರ್ಣದ ಪ್ರದೇಶವನ್ನೂ ಪಡೆಯಿತು. ಷಾಂಟಂಗ್ ಪ್ರಾಂತ್ಯದಲ್ಲಿ ಖನಿಜ ಮತ್ತು ರೈಲ್ವೆ ರಸ್ತೆಯ ಮೇಲೆ ಸಂಪೂರ್ಣ ಅಧಿಕಾರವನ್ನೂ ಹೊಂದಿತು. ಇದೇ ಸಮಯದಲ್ಲಿ ರಷ್ಯ, ಬ್ರಿಟನ್ ಮತ್ತು ಫ್ರಾನ್ಸ್ ತಂತಮ್ಮ ಬೇಡಿಕೆಗಳನ್ನು ಮಂಡಿಸಿದುವು. ರಷ್ಯಕ್ಕೆ ಮಂಚೂರಿಯದ ಮೇಲೆ ಪೂರ್ಣ ಹತೋಟಿ ಲಭಿಸಿತು. ಬ್ರಿಟನ್ನಿಗೆ ನೌಕಾ ನೆಲೆಯೊಂದು ಸಿಕ್ಕಿತು. ಹೀಗೇ ವಿದೇಶೀ ರಾಷ್ಟ್ರಗಳು ತಂತಮ್ಮಲ್ಲಿ ಪೈಪೋಟಿ ನಡೆಸುತ್ತ ಚೀನವನ್ನು ದುರ್ಗತಿಗೆ ತಂದುವು. ಮಂಚೂರಿಯ ಮತ್ತು ಮಂಗೋಲಿಯಗಳು ರಷ್ಯದ ಅಧೀನದಲ್ಲೂ ಷಾಂಟಂಗ್ ಪ್ರಾಂತ್ಯ ಜರ್ಮನಿಯ ಸ್ವಾಧೀನದಲ್ಲೂ ದಕ್ಷಿಣ ಚೀನದ ಬಹುಭಾಗ ಫ್ರಾನ್ಸಿನ ಅಧಿಪತ್ಯದಲ್ಲೂ ಹಾಂಗ್‍ಕಾಂಗ್ ಮತ್ತು ಯಾಂಗ್‍ಟ್ಸೀ ಕಣಿವೆಯ ಭಾಗವೆಲ್ಲ ಬ್ರಿಟನ್ನಿನ ಪ್ರಯೋಜನಕ್ಕಾಗಿಯೂ ಇದ್ದುವು.

1899ರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜಾನ್ ಹೇ ಎಂಬವನು ಚೀನಕ್ಕೆ ಸಂಬಂಧಿಸಿದಂತೆ ತೆರೆದ ಬಾಗಿಲ ನೀತಿಯನ್ನು ಪ್ರತಿಪಾದಿಸಿ, ಈ ಸೂತ್ರವನ್ನು ಚೀನದಲ್ಲಿ ಆಸಕ್ತಿಯುಳ್ಳ ಎಲ್ಲ ರಾಷ್ಟ್ರಗಳೂ ಅನುಮೋದಿಸಬೇಕೆಂದು ಕೇಳಿಕೊಂಡ. ಈ ಸೂತ್ರಕ್ಕೆ ಇಂಗ್ಲೆಂಡ್, ಜರ್ಮನಿ, ರಷ್ಯ ಮತ್ತು ಜಪಾನ್ ಒಪ್ಪಿಕೊಂಡುವು. ಇದರ ಪ್ರಕಾರ ಎಲ್ಲ ರಾಷ್ಟ್ರಗಳೂ ಚೀನ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕೆಂದು ಮತ್ತು ಚೀನದಲ್ಲಿ ಎಲ್ಲ ರಾಷ್ಟ್ರಗಳಿಗೂ ಸಮವಾದ ಅವಕಾಶಗಳಿರಬೇಕೆಂದು ಎಲ್ಲ ರಾಷ್ಟ್ರಗಳೂ ಒಪ್ಪಿಕೊಂಡುವು. ಈ ನೀತಿಯನ್ನೇ ಚೀನದಲ್ಲಿ ಅಮೆರಿಕ 1941ರ ವರೆಗೆ ಎತ್ತಿಹಿಡಿಯಿತು. ಜಪಾನ್ ಈ ನೀತಿಯನ್ನು ಅತಿಕ್ರಮಿಸಿದ್ದಾಗಲೆಲ್ಲ ಅಮೆರಿಕ ಅದನ್ನು ವಿರೋಧಿಸಿತು. ಈ ನೀತಿಯಿಂದ ಒಂದು ರೀತಿಯಲ್ಲಿ ಚೀನ ಪರರಾಷ್ಟ್ರಗಳ ವಸಾಹತಾಗುವುದನ್ನು ತಪ್ಪಿಸಿತೆಂದೇ ಹೇಳಬಹುದಾದರೂ ಆರ್ಥಿಕವಾಗಿ ಅದು ರಾಷ್ಟ್ರಗಳಿಗೆ ಅಧೀನವಾಯಿತು. ಬಗೆಬಗೆಯ ಪ್ರಬಾವಗಳಿಗೆ ತುತ್ತಾಯಿತು.

ಆಗ ಚೀನ ಎಚ್ಚೆತ್ತುಕೊಂಡು ತನ್ನ ಮುಂದಿದ್ದ ಅಪಾಯಗಳನ್ನು ಗ್ರಹಿಸಿತು. ಜಪಾನಿನಿಂದ ಚೀನ ಪರಾಭವಗೊಂಡದ್ದು ಅಲ್ಲಿ ಯುವಕ ಜನಾಂಗದಲ್ಲಿ ರೋಷ ಹುಟ್ಟಿಸಿತು. ಸುಧಾರಣೆಗಾಗಿ ಅವರು ಹಾತೊರೆದರು. ಅರಸನೂ ಇದನ್ನು ಸಹಾನುಭೂತಿಯಿಂದ ಕಂಡು ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ. ನೂರು ದಿನಗಳ ಸುಧಾರಣೆಗಳು ಎಂದು ಇದು ಪ್ರಸಿದ್ಧವಾಗಿದೆ. ಆಧುನಿಕಯುಗಕ್ಕೆ ತಕ್ಕಂತೆ ಪಾಶ್ಚಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆ, ರೈಲ್ವೆ ಮತ್ತು ಕೈಗಾರಿಕೆಗಳ ಸ್ಥಾಪನೆ-ಇವು ಅವನು ಕೈಗೊಂಡ ಕ್ರಮಗಳು. ಆದರೆ ಸುಧಾರಣೆಗಳನ್ನು ಅರಸನ ಗುಂಪಿನವರೇ ವಿರೋಧಿಸಿದರು. ಬಲಾಡ್ಯವಾದ ಗುಂಪೊಂದು ರಾಜಮಾತೆಯ ನೇತೃತ್ವದಲ್ಲಿ ಹಿಟ್ಟಿಕೊಂಡಿತು. ಅವಳು ಅರಸನನ್ನು ಮೂಲೆಗೆ ಕೂಡಿಸಿ ತಾನೇ ಅಧಿಕಾರ ಸ್ವೀಕಾರ ಮಾಡಿದಳು. ಪ್ರಮುಖ ಸುಧಾರಣಾವಾದಿಗಳನ್ನು ಕೊಲ್ಲಿಸಿದಳು.

ಬಾಕ್ಸರ್ ದಂಗೆ : ಚೀನದಲ್ಲಿ ಅನೇಕ ಶತಮಾನಗಳಿಂದ ಧಾರ್ಮಿಕ ಅಥವಾ ರಾಜಕೀಯ ಸಂಬಂಧದ ಗುಪ್ತ ಸಂಘಗಳಿದ್ದುವು. ಸುಧಾರಣಾ ಚಳವಳಿಯನ್ನು ಹತ್ತಿಕ್ಕಿದ ಮೇಲೆ ದೇಶದಲ್ಲಿ ಅಶಾಂತಿಯುಂಟಾಯಿತು. ಆಗ ಗುಪ್ತ ಸಂಘಗಳು ಪ್ರಬಲವಾಗಿ ಒಂದುಗೂಡಿದುವು. ಬಾಕ್ಸರ್‍ಗಳೆಂಬುದು ಪಾಶ್ಚಾತ್ಯರು ಈ ಸಂಘದವರಿಗೆ ಕೊಟ್ಟ ಹೆಸರು. ರಾಜಮಾತೆಯ ಪ್ರತಿಗಾಮಿತವನ್ನು ವಿರೋಧಿಸುತ್ತಿದ್ದ ಈ ಗುಂಪು ಮೊದಮೊದಲು ಮ್ಯಾಂಚೂ ವಂಶಕ್ಕೆ ವಿರುದ್ಧವಾಗಿ ವರ್ತಿಸಿತು. 1899ರಲ್ಲಿ ಇದು ವಿದೇಶೀ ರಾಷ್ಟ್ರಗಳ ಮೇಲಿನ ಹಗೆತನದಲ್ಲಿ ಪರ್ಯವಸಾನವಾಯಿತು. ಈ ಗುಂಪಿನವರು ನೇರವಾಗಿಯೇ ಚಳವಳಿಯನ್ನೆಬ್ಬಿಸಿದರು. ಚೀನದಿಂದ ಎಲ್ಲ ಕೈಸ್ತರನ್ನೂ ವಿದೇಶೀ ಭೂತಗಳನ್ನೂ ಹೊರಡಿಸಬೇಕೆಂಬುದು ಇವರ ಘೋಷಣೆ. ಅನೇಕ ವಿಧೇಶೀಯರು ಹತರಾದರು. ಜರ್ಮನ್ ಅಧಿಕಾರಿಯೊಬ್ಬ ಸತ್ತ. ಪೀಕಿಂಗಿನಲ್ಲಿ ರಾಯಭಾರ ವಸತಿಗಳು ಮುತ್ತಿಗೆಗೆ ಒಳಗಾದುವು. ಇಲ್ಲೂ ಬೇರೆ ಸ್ಥಳಗಳಲ್ಲೂ ಇದ್ದ ವಿದೇಶೀಯರು ತಿಂಗಳುಗಟ್ಟಲೆ ಅಪಾಯ ಸ್ಥಿತಿಯಲ್ಲಿದ್ದರು. ಕೈಸ್ತ ಹಳ್ಳಿಗಳು ನಾಶವಾದುವು. ಕೈಸ್ತರು ರಾಜಧಾನಿಯ ಸಮೀಪದಲ್ಲೇ ಕೊಲೆಗೆ ಒಳಗಾದರು. ಪರಿಸ್ಥಿತಿ ಹದಗೆಟ್ಟಿತು. ಚೀನೀ ಸೈನಿಕರೂ ಬಂಡಾಯ ಎದ್ದರು. ಈ ಘಟನೆಗಳು ಜರುಗಿದ್ದು 1900ರ ಮಧ್ಯಭಾಗದಲ್ಲಿ. ತಮ್ಮ ಅಸ್ತಿತ್ವಕ್ಕೆ ಸಂಚಾಕಾರವುಂಟಾಯಿತೆಂದು ಪಾಶ್ಚಾತ್ಯ ದೇಶಗಳು ಗಾಬರಿಗೊಂಡು ಸೇನಾಕಾರ್ಯಚರಣೆ ನಡೆಸಿದುವು. ರಾಂiÀiಭಾರ ವಸತಿಗಳಿದ್ದವರೆಲ್ಲ ಪಾರಾದರು. ವಿದೇಶೀ ರಾಜ್ಯಗಳ ಸೇನೆ ಪೀಕಿಂಗನ್ನು ವಶಪಡಿಸಿಕೊಂಡು ನಗರದೊಳಕ್ಕೆ ನುಗ್ಗಿತು. ರಾಜಪರಿವಾರವೆಲ್ಲ ಪರಾರಿಯಾಯಿತು. ಕೆಲವು ಕಾಲದ ವರೆಗೆ ಲಿ ಹಂಗ್ ಚಂಗ್ ಮತ್ತು ರಾಜಕುಮಾರ ಚಿಂಗ್‍ನೊಡನೆ ಸಂಧಾನ ಜರುಗು ಕಡೆಗೊಂದು ಶಾಂತಿ ಒಪ್ಪಂದವಾಯಿತು. (1901). ಅರಸ ಇದಕ್ಕೆ ಒಪ್ಪಿಗೆ ಕೊಡಲೇಬೇಕಾಯಿತು. ಜರ್ಮನ್ ಅಧಿಕಾರಿ ಮತ್ತು ಇತರ ರಾಷ್ಟ್ರಗಳ ನೌಕರರ ಕೊಲೆಗಾಗಿ ಚೀನ ಕ್ಷಮಾಪಣೆ ಬೇಡತಕ್ಕದ್ದು ; ಪೀಕಿಂಗಿನ ಸುತ್ತಲೂ ದೊಡ್ಡ ಪ್ರದೇಶದಲ್ಲಿ ವಿದೇಶೀ ರಾಷ್ಟ್ರಗಳು ಪಹರೆ ನಡೆಸತಕ್ಕದ್ದು ; ವಿದೇಶಿಗಳಿಗೆ 33 ಕೋಟಿ ಡಾಲರುಗಳಷ್ಟು ನಷ್ಟ ಕಟ್ಟಿಕೊಡತಕ್ಕದ್ದು ; ಚೀನ ಅಸ್ತ್ರಶಸ್ತ್ರ್ರಗಳನ್ನು ಹೊರಗಿನಿಂದ ತರಿಸುವುದಾಗಲಿ ತಯಾರಿಸುವುದಾಗಲಿ ಕೂಡದು ; ವಿದೇಶೀಯರ ವಿರುದ್ಧ ಬಂಡಾಯ ಏಳುವವರಿಗೆ ಮರಣದಂಡನೆ ವಿಧಿಸತಕ್ಕದ್ದು. ಇವು ಕೌಲಿನ ಕೆಲವು ಷರತ್ತುಗಳು. ಹೀಗೆ ಅಪಮಾನಕರವಾದ ರೀತಿಯಲ್ಲಿ ಚೀನದ ಮೇಲೆ ಒಪ್ಪಂದವನ್ನು ಹೊರಿಸಲಾಯಿತು. ಈ ಸಂದರ್ಭದಲ್ಲಿ ಅಮೆರಿಕ ತನಗೆ ಸಂದಾಯವಾಗಬೆಕಿದ್ದ ನಷ್ಟದ ಹಣವನ್ನು ಚೀನಕ್ಕೆ ಬಿಟ್ಟುಕೊಟ್ಟಿತು. ಮುಂದೆ ಚೀನೀ ಯುವಕರು ಅಮೆರಿಕನ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸಲು ಈ ಹಣವನ್ನು ಚೀನ ಮೀಸಲಾಗಿಸಿತು.

ಅದೇ ವರ್ಷ ವ್ಯಚಂಗ ಎಂಬಲ್ಲಿ ಮತ್ತೊಂದು ಗಲಭೆ ಉಂಟಾಯಿತು. ಇದನ್ನಡಗಿಸಲು ದೇಶದ ಸೇನೆ ಹೊರಟಿತು. ಮ್ಯಾಂಚೂಗಳ ಮೇಲೆ ದಂಗೆ ಏಳಲು ಸಮಯ ಕಾಯುತ್ತಿದ್ದ ಕ್ರಾಂತಿಕಾರರಿಗೆ ಇಂದೊಂದು ಅವಕಾಶ. ರಾಜವಂಶವನ್ನುಳಿಸಲು ಗೊತ್ತುಮಾಡಲಾಗಿದ್ದ ಪ್ರಧಾನಿ ಯುಯಾನ್ ಷಿರ್‍ಕೈ ಕ್ರಾಂತಿಕಾರರೊಡನೆ ಸಂಧಾನಕ್ಕಾಗಿ ಕೈ ಹಾಕಿ ವಿಫಲನಾದ. ರಾಜವಂಶದವರೂ ಮ್ಯಾಂಚೂ ಪ್ರಮುಖರು ಪೀಕಿಂಗಿನಿಂದ ಓಡಿಹೋದರು. ಕಡೆಗೆ 1912ರಲ್ಲಿ ಮ್ಯಾಂಚೂ ವಂಶದವರು ತಮ್ಮ ಹಕ್ಕುಗಳನ್ನೆಲ್ಲ ಬಿಟ್ಟುಕೊಟ್ಟರು. ಮ್ಯಾಂಚೂ ವಂಶದ ಆಡಳಿತ ಕೊನೆಗೊಂಡಿತು.

ಇದಕ್ಕೆ ಮುನ್ನ ಚೀನದಲ್ಲಿ ಸುಧಾರಣೆಗಳಿಗಾಗಿ ಒಂದು ಗುಂಪು ಪ್ರಯತ್ನ ನಡೆಸುತ್ತಿತ್ತು. ಪಾಶ್ಚಾತ್ಯ ಮಾದರಿಯ ನಡವಳಿಕೆಗಳೇ ಚೀನದ ಮುಕ್ತಿಗೆ ಸಾಧನ ಎಂಬುದು ಅದರ ಅಭಿಪ್ರಾಯ. ಬರುಬರುತ್ತ ಈ ಅಭಿಪ್ರಾಯ ಬಲಗೊಂಡು ಹಳೆಯ ಭಾವನೆಗಳು ಮಾಯವಾಗುತ್ತ ಬಂದುವು. ಚೀನೀ ತರುಣಜನಾಂಗ ಸಂಪೂರ್ಣ ಪರಿವರ್ತನೆಗಾಗಿ ಹಾತೊರೆಯುತ್ತಿತ್ತು. ಪ್ರತಿಗಾಮಿ ಅಧಿಕಾರಿಗಳೂ ಚೀನೀಯರೂ ಮ್ಯಾಚೂಗಳೂ ಉಳಿದಿರುವ ತನಕ ದೇಶ ಪ್ರಗತಿಗೊಳ್ಳುವುದು ಸಾಧ್ಯವಿಲ್ಲವೆಂಬುದು ಅವರ ನಂಬಿಕೆ. ಈ ಮಧ್ಯೆ ಮ್ಯಂಚೂ ಅರಸರು ಹಲವಾರು ಸುಧಾರಣೆಗಳನ್ನು ತರಲು ಯತ್ನಿಸಿದರು. ಸಂವಿಧಾನದ ರಚನೆಗಾಗಿ ಪ್ರಯತ್ನಿಸುವ ಭರವಸೆ ಇತ್ತರು. ಪ್ರಾಂತೀಯ ಸಭೆಗಳನ್ನು ಏರ್ಪಡಿಸಿದರು. ರಾಷ್ಟ್ರೀಯ ಸಭೆಯನ್ನೂ ಸೇರಿಸಿದರು. ಆದರೂ ಇವೆಲ್ಲ ಸತ್ಪರಿಣಾಮವನ್ನುಂಟು ಮಾಡಲಿಲ್ಲ. ಸುಧಾರಣಾವಾದಿಗಳ ತಂಡ ಬೆಳೆಯಿತು. ಯುವಕ ಚೀನ ಪಕ್ಷದ ಕ್ರಾಂತಿಶಕ್ತಿ ಬಲಗೊಂಡಿತು. ಇದಕ್ಕೆ ಬುದ್ಧಿಜೀವಿ ಸಮಾಜದ ಒತ್ತಾಸೆ ದೊರಕಿತು. ಚೀನದ ಭವಿಷ್ಯ ಉತ್ತಮಗೊಳ್ಳುವ ಸೂಚನೆಗಳು ಕಾಣಬಂದುವು.

ಗಣರಾಜ್ಯ ಸ್ಥಾಪನೆ : ಇಲ್ಲಿಗೆ ಚೀನದ ಇತಿಹಾಸ ಮಾರ್ಪಟ್ಟು ಹೊಸ ಅಧ್ಯಾಯ ಆರಂಭವಾಯಿತು. ರಾಜಪ್ರಭುತ್ವ ಹೇಳಹೆಸರಿಲ್ಲದಂತಾಗಿ ಪ್ರಜಾಪ್ರಭುತ್ವಕ್ಕೆ ನಾಂದಿಯಾದ್ದು ಈ ಸಮಯದಲ್ಲೆ. ನವ ಚೀನದ ನಾಯಕ ಸುನ್‍ಯಾಟ್‍ಸೆನ್. ಮ್ಯಾಂಚೂ ವಂಶ ನಾಮಾವಶೇಷವಾದ ಸಮಯದಲ್ಲಿ ಈತ ತನ್ನ ಗುರಿ ಸಾಧಿಸುವ ಅವಕಾಶ ಪಡೆದ. 1911ರಲ್ಲಿ ರೈಲ್ವೆಗಳ ನಿರ್ಮಾಣಕ್ಕಾಗಿ ವ್ಯವಸ್ಥೆಯಾಗಿದ್ದ ವಿದೇಶೀ ಸಾಲದ ಸಂಬಂಧದಲ್ಲಿ ಒಂದು ಕ್ರಾಂತಿ ಸಂಭವಿಸಿತು. ಎಲ್ಲ ಪ್ರಾಂತ್ಯಗಳಲ್ಲೂ ಈ ಕ್ರಾಂತಿ ಕಾಡ್ಗಿಚ್ಚಿನಂತೆ ಹರಡಿತು. ಕೆಲವೇ ವಾರಗಳೊಳಗಾಗಿ ಕ್ರಾಂತಿಕಾರರೆಲ್ಲ ನ್ಯಾನ್ಕಿಂಗ್‍ನಲ್ಲಿ ಕಲೆತು ಗಣರಾಜ್ಯ ಸ್ಥಾಪಿಸಿ, ಸುನ್ ಯಾಟ್‍ಸೇನನನ್ನೇ ಅದಕ್ಕೆ ಪ್ರಥಮ ಅಧ್ಯಕ್ಷನನ್ನಾಗಿ ಮಾಡಿದರು. 1911ರ ಡಿಸೆಂಬರ್ 28ರಂದು ಕ್ರಾಂತಿ ಸಂಭವಿಸಿದಾಗ ಈತ ಹೊರಗಿದ್ದ. ಇವನು ಸ್ವದೇಶಕ್ಕೆ ಹಿಂದಿರುಗುವುದಕ್ಕೆ ಮುನ್ನವೇ ಕ್ರಾಂತಿಕಾರರು ಅಂದಿನ ಪ್ರಬಲ ವ್ಯಕ್ತಿಯೂ ಸೈನಿಕ ಮುಖಂಡನೂ ಆಗಿದ್ದ ಯೂವಾನ್ ಷಿರ್‍ಕೈನೊಡನೆ ಸಂಧಾನ ನಡೆಸಿದ್ದರು. ಮ್ಯಂಚೂ ವಂಶದ ಅಂತಿಮ ಕಾಲ ಸನ್ನಿಹಿತವಾಯಿತೆಂದು ಇನ್ನೂ ಚಿಕ್ಕವಯಸ್ಸಿನವನಾಗಿದ್ದ ಅರಸನಿಗೆ ತಿಳಿದೊಡನೆಯೇ ರಾಜಿಗೆ ಬರಲು ಸಿದ್ಧನಾದ. ಅರಸ ಸಿಂಹಾಸನವನ್ನು ತ್ಯಜಿಸಿ ಗಣರಾಜ್ಯ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದು 1912ರ ಫಿಬ್ರವರಿ 12ರಂದು. ಷಿರ್‍ಕೈ ಗಣರಾಜ್ಯ ಸ್ಥಾಪಿಸುವಂತೆ ಅವನಿಗೆ ನಿರೂಪ ಹೋಯಿತು. ಸುನ್ ಯಾಟ್‍ಸೇನ್ ಅಧ್ಯಕ್ಷನಾಗಿರಲು ಒಪ್ಪಲಿಲ್ಲ. ಗುಂಪೊನೊಳಗೇ ಒಡಕುಂಟಾಗದಂತೆ ನೋಡುವುದೇ ಅವನ ಉದ್ದಿಶ್ಯವಾಗಿತ್ತು.

ಯೂವಾನ್ ಷಿರ್‍ಕೈ ಬಲಾಢ್ಯ. ಅವನ ಬಳಿ ದೊಡ್ಡ ಸೇನೆ ಇತ್ತು. ಗಣರಾಜ್ಯವಾದಿಗಳ ಬೆಂಬಲವೂ ಇತ್ತು. ಆದರೆ ಅವನಿಗೆ ಉದಾತ್ತ ಧ್ಯೇಯವಿರಲಿಲ್ಲ. ತಾನೇ ಸಮ್ರಾಟನಾಗಬೇಕೆಂಬುದು ಅವನ ಬಯಕೆ. 1912ರ ಮಾರ್ಚಿಯಲ್ಲಿ ಒಪ್ಪಲಾದ ಸಂವಿಧಾನದಲ್ಲಿ ಪಾರ್ಲಿಮೆಂಟಿನ ವ್ಯಾಪ್ತಿಯೊಳಗೆ ಅಧ್ಯಕ್ಷನಿರಬೇಕೆಂದು ವಿಧಿಸಲಾಗಿತ್ತು. ಮೊದಲಿನ ಪಾರ್ಲಿಮೆಂಟಿನಲ್ಲಿ ತೀವ್ರ ಪಂತದವರೇ ಹೆಚ್ಚಾಗಿದ್ದರು. ಆಡಳಿತ ಸುಸೂತ್ರವಾಗಿ ಸಾಗಲಿಲ್ಲ. ಭಿನ್ನಭಿಪ್ರಾಯಗಳು ತಲೆದೋರಿ ತೊಡಕುಗಳುಂಟಾದುವು. 1913ರಲ್ಲಿ ಯೂವಾನ್ ಬ್ರಿಟನ್, ಫ್ರಾನ್ಸ, ಜರ್ಮನಿ ಮತ್ತು ರಷ್ಯದ ಬ್ಯಾಂಕುಗಳೊಡನೆ ಸಾಲದ ಒಪ್ಪಂದ ಮಾಡಿಕೊಂಡು ತನ್ಮೂಲಕ ಸರ್ಕಾರವನ್ನು ಆ ದೇಶದ ಪ್ರಭಾವಕ್ಕೊಳಪಡಿಸಿದಾಗ ಗಡಿಬಿಡಿಯೇ ಆಯಿತು. ದಕ್ಷಿಣದಲ್ಲಿ ತನ್ನವರನ್ನೇ ಅವನು ಸೈನಿಕ ಮುಖಂಡರನ್ನಾಗಿ ನೇಮಕ ಮಾಡಿದ್ದೂ ಅತೃಪ್ತಿಗೆ ಒಂದು ಕಾರಣ. ಮತ್ತೊಂದು ಬಂಡಾಯ ಬಲಿಯುತ್ತಿತ್ತು. ಇದಕ್ಕೆ ಸುನ್‍ಯಾಟ್‍ಸೇನ್ ಒಪ್ಪಿಗೆಯೂ ಇತ್ತು. ಯೂವಾನ್ ಷಿರ್‍ಕೈ ಈ ಬಂಡಾಯವನ್ನು ಯಶಸ್ವಿಯಾಗಿ ಎದುರಿಸಿದ. ಸುನ್ ಯಾಟ್‍ಸೆನ್ ಜಪಾನಿಗೆ ಓಡಿಹೋದ. ಯೂವಾನ್ ಷಿರ್‍ಕೈ ಮತ್ತೆ ಪ್ರಬಲನಾದ. ಪಾರ್ಲಿಮೆಂಟಿನಲ್ಲಿದ್ದ ಗ್ವೋಮಿನ್‍ಟಾಂಗ್ ಪಕ್ಷದ ಸದಸ್ಯರನ್ನು ಬರ್ತಫ್‍ಮಾಡಿದ. ಕಡೆಗೆ 1914ರಲ್ಲಿ ಪಾರ್ಲಿಮೆಂಟೇ ವಿಸರ್ಜನೆಗೊಂಡಿತು. 1915ರಲ್ಲಿ ಮ್ಯಂಚೂ ವಂಶವನ್ನು ಪುನರುಜ್ಜೀವನಗೊಳಿಸಿ ತಾನೇ ಅರಸನೆಂದು ಘೋಷಿಸುವುದರಲ್ಲಿದ್ದ. ಆದರೆ ಬಂಡಾಯ ವ್ಯಾಪಕವಾಗಿ ಹಬ್ಬಿತು. ಯೂವಾನ್ ಷಿರ್‍ಕೈ ಪ್ರಭಾವ ಅಳಿಯಿತು. ಅವನು 1916ರಲ್ಲಿ ಮೃತಪಟ್ಟ.

ಈ ಘಟನೆಯಾದ ಮೇಲೆ ಸುಮಾರು ಹತ್ತು ವರ್ಷಗಳ ಕಾಲ ಸರ್ಕಾರದಲ್ಲಿ ಸ್ಥಿರತೆ ಇರಲಿಲ್ಲ. ದೇಶದೊಳಗಿನ ತಿಕ್ಕಾಟ ಮತ್ತು ಹೊರಗೆ ಸಂಭವಿಸುತ್ತಿದ್ದ ಘಟನೆಗಳಿಂದ ಗಣರಾಜ್ಯ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಯೂವಾನ್ ಷಿರ್‍ಕೈ ಅಧ್ಯಕ್ಷತೆಯ ಕಾಲದಲ್ಲಿ ರಷ್ಯ ಮಂಗೋಲಿಯದಲ್ಲಿ, ಬ್ರಿಟನ್ ಟಿಬೆಟ್ಟಿನಲ್ಲಿ ತಮ್ಮ ಹಿತಾಸಕ್ತಿಗಳನ್ನು ಗೌರವಿಸಬೇಕೆಂದು ಒತ್ತಾಯಪಡಿಸುತ್ತಿದ್ದುವು. ಇದರಿಂದ ಮಂಗೋಲಿಯದಲ್ಲಾಗಲಿ ಟಿಬೆಟ್ಟಿನಲ್ಲಾಗಲಿ ಚೀನ ಅಲ್ಪ ಸ್ವಲ್ಪ ಬಿಟ್ಟು ಮಿಕ್ಕ ಸಾರ್ವಭೌಮಾಧಿಕಾರವನ್ನಲ್ಲ ಕಳೆದುಕೊಂಡಿತು. ಈ ಮಧ್ಯೆ ಒಂದನೆಯ ಮಹಾಯುದ್ಧ (1914-18) ಸಂಭವಿಸಿತು. ಚೀನ ತಟಸ್ಥ ದೇಶವೆಂದು ಘೋಷಿಸಿದ್ದರೂ ಅದರ ಪ್ರದೇಶಗಳು ಆಕ್ರಮಣಕ್ಕೆ ತುತ್ತಾದುವು. ಯೂವಾನ್ ಷಿರ್‍ಕೈ ಗಣರಾಜ್ಯದ ಅಧ್ಯಕ್ಷನಾಗಿಸದ್ದರೂ ಅವನು ಸರ್ವಾಧಿಕಾರಿಯಾಗಿದ್ದ. ಅವನ ಅನಂತರ ಲುಯಯಾನ್ ಹಂಗ್ ಮತ್ತು ಫಂಗ್‍ಕ್ವೊ ಚಂಗ್ ಎಂಬುವರು ಒಬ್ಬರಾಗುತ್ತಲೊಬ್ಬರು ಅಧ್ಯಕ್ಷಸ್ಥಾನಕ್ಕೆ ಬಂದರು. 1918ರಲ್ಲಿ ಹುಸ್ಯು ಷಿ ಚಂಗ್ ಚುನಾಯಿತನಾದ. ಚೀನ ಮಹಾಯುದ್ಧ ಸಮಯದಲ್ಲಿ ತಟಸ್ಥನೀತಿ ತಾಳಿದರೂ ಕೊನೆಗೆ ಮಿತ್ರ ಪಕ್ಷದವರೊಡನೆ ಸೇರಿಕೊಳ್ಳಬೇಕಾಯಿತು. ಯುದ್ಧಾನಂತರ ಷಾಂಟಂಗನ್ನು ಜಪಾನ್ ಸ್ವಾಧೀನ ಪಡಿಸಿಕೊಂಡದ್ದರಿಂದ ಚೀನದಲ್ಲಿ ಅಸಂತುಷ್ಟಿಯುಂಟಾಯಿತು. ಜಪಾನು ವಿಶ್ವದ ಅಭಿಪ್ರಾಯಕ್ಕೆ ತಲೆಬಾಗಿ ಅದನ್ನು ಚೀನಕ್ಕೆ ಒಪ್ಪಿಸಿತು.

ಚೀನದ ವಿಚಾರದಲ್ಲಿ ಜಪಾನು ಮೊದಲಿಂದಲೂ ಸ್ನೇಹದಿಂದಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಚೀನದ ಮೇಲೆ ತನ್ನ ವಕ್ರದೃಷ್ಟಿ ಬೀರಲು ಯತ್ನಿಸುತ್ತಿತ್ತು. ಅಷ್ಟೇ ಅಲ್ಲ ಅದರ ಪ್ರದೇಶಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳಲು ಸಂಚು ನಡೆಸುತ್ತಿತ್ತು. ಕೊರಿಯ ಅದರ ವಶವಾದ್ದು 1910ರಲ್ಲಿ. ಇನ್ನೂ ಅನೇಕ ಸಣ್ಣ ಪುಟ್ಟ ಗಳಿಕೆಗಳಾದವು. ಎಲ್ಲಕ್ಕಿಂತ ಆಶ್ಚರ್ಯಕರವಾದ್ದೆಂದರೆ ಅದು 1915ರ ಜನವರಿಯಲ್ಲಿ ಚೀನೀ ಅಧ್ಯಕ್ಷನಲ್ಲಿ 21 ಬೇಡಿಕೆಗಳನ್ನು ಮಂಡಿಸಿದ್ದು. ಚೀನದಲ್ಲಿ ಇದಕ್ಕೆ ಪ್ರತಿಭಟನೆ ಇತ್ತಾದರೂ ಜಪಾನನ್ನು ಎದುರಿಸಿ ನಿಲ್ಲುವಷ್ಟು ಶಕ್ತಿ ಅದಕ್ಕೆ ಇರಲಿಲ್ಲ. ಅದು 16 ಬೇಡಿಕೆಗಳಿಗೆ ಒಪ್ಪಿಗೆ ಕೊಟ್ಟತು. ಜಪಾನಿನ ಈ ಬೇಡಿಕೆಗಳಿಗೆ ಯೂರೋಪಿನ ರಾಷ್ಟ್ರಗಳೂ ಸಮ್ಮತಿ ನೀಡಿದುವು. ಅಮೆರಿಕ ಮಾತ್ರ ಇವನ್ನು ಬೆಂಬಲಿಸದಿದ್ದರೂ ಚೀನದಲ್ಲಿ ಜಪಾನಿಗೆ ಹಿತಾಸಕ್ತಿ ಇರುವುದನ್ನು ಅಂಗೀಕರಿಸಲೇ ಬೇಕು ಎಂಬುದು ಅದರ ವಾದ ಚೀನ ಮಿತ್ರಪಕ್ಷದವರೊಡನೆ ಯುದ್ಧಭಾಗಿಯಾಗಿತ್ತೆಂಬ ಅಂಶವನ್ನು ಅವು ಈ ಸಂದರ್ಭದಲ್ಲಿ ಗಮನಿಸಲೇ ಇಲ್ಲ ಬರುಬರುತ್ತ ಜಪಾನಿನ ಸಾಮ್ರಾಜ್ಯಕಾಂಕ್ಷೆ ಹೆಚಿತು. ಚೀನದಲ್ಲಿ ಅದರ ಹಿತಾಸಕ್ತಿಗಳು ಹೆಚ್ಚಿದುವು. ಈ ಪ್ರವೃತ್ತಿಗಳು ಪಾಶ್ಚಾತ್ಯ ರಾಷ್ಟ್ರಗಳ ಗಮನ ಸೆಳೆಯದಿರಲಿಲ್ಲ. ಜಪಾನಿನ ಪ್ರಾಬಲ್ಯವನ್ನು ತಡೆಗಟ್ಟಬೇಕೆಂದು ಅಮೆರಿಕ ಮತ್ತು ಬ್ರಿಟನ್ ನಿರ್ಧರಿಸಿ ಸೂಕ್ತ ಕ್ರಮ ಕೈಗೊಂಡುವು. ಚೀನದ ಸ್ವಾತಂತ್ರ್ಯ, ಸಾರ್ವಭೌಮಾಧಿಕಾರ ಇವನ್ನು ಗೌರವಿಸಬೇಕೆಂದು 1922ರಲ್ಲಿ ಒಂಬತ್ತು ರಾಷ್ಟ್ರಗಳ ಒಂದು ಒಪ್ಪಂದವಾಯಿತು. ಆದರೂ ಅದರ ನೀತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಯೂವಾನ್ ಷಿರ್‍ಕೈ ಅಧಿಕಾರಚ್ಯುತಿಯ ಅನಂತರ ಸ್ವಲ್ಪ ಕಾಲ ದೇಶ ಇಬ್ಭಾಗವಾಯಿತು. ಎರಡು ಆಡಳಿತಗಳೇರ್ಪಟ್ಟವು. ಪೀಕಿಂಗಿನಲ್ಲಿ ಒಂದು ಆಡಳಿತವೂ ಕ್ಯಾಂಟನ್ನಿನಲ್ಲಿ ಇನ್ನೊಂದು ಇದ್ದುವು. 1921ರಲ್ಲಿ ಸುನ್ ಯಾಟ್‍ಸೆನ್‍ನನ್ನು ಅಧ್ಯಕ್ಷನನ್ನಾಗಿ ಚುನಾಯಿಸಲಾಯಿತು. ಆದರೆ ಶಾಂತಿ ನೆಲೆಸಲಿಲ್ಲ. ಸರ್ಕಾರ ದುರ್ಬಲವಾಯಿತು. ಗುಂಪುಗುಳಿತನ ಹೆಚ್ಚಿತು. ರಾಜ್ಯದ ಆಡಳಿತಕ್ಕಾಗಿ ಪ್ರಮುಖರೇ ಕಚ್ಚಾಡುವಂತಾಯಿತು.

ಸುನ್ ಯಾಟ್‍ಸೆನ್ ಸಮರ್ಥ ಪ್ರಚಾರಕ ಹಾಗೂ ಕ್ರಾಂತಿಕಾರನಾಗಿದ್ದ. ಆದರೆ ದಕ್ಷ ಆಡಳಿತಗಾರನಾಗಿರಲಿಲ್ಲ. ಅವನು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನೀತಿಗಳು ಮಾತ್ರ ಮುಂದಿನ ದಿನಗಳಲ್ಲಿ ಫಲಕಾರಿಯಾದುವು. ಪೀಕಿಂಗ್ ಆಡಳಿತವನ್ನು ಉರುಳಿಸಲು ಸುನ್ ಯಾಟ್‍ಸೆನ್ 1923ರಲ್ಲಿ ಅನ್ಯ ರಾಷ್ಟ್ರಗಳನ್ನು ಕೇಳಿ ವಿಫಲಗೊಂಡ. ಆಗ್ಗೆ ಅವನು ರಷ್ಯದ ಕೆಲವು ನಾಯಕರ ಸಲಹೆಯನ್ನು ಕೇಳಬೇಕಾದ ಪ್ರಸಂಗ ಒದಗಿತು. ರಷ್ಯದ ಈ ನಾಯಕರ ಸಲಹೆ ಮತ್ತು ಬೋಧನೆಗಳ ದೆಸೆಯಿಂದ ಗ್ವೋಮಿನ್‍ಟಾಂಗ್ ಸರ್ಕಾರ ರಷ್ಯದ ಕಮ್ಯುನಿಸ್ಟ್ ಪಕ್ಷದ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತು. ಅಂದಿನಿಂದ ಅದರ ನಿಲವೇ ಮಾರ್ಪಾಟಾಯಿತು. ಸುನ್‍ಯಾಟ್‍ಸೆನ್ 1925ರಲ್ಲಿ ಮೃತಪಟ್ಟ. ಅವನು ಬಿಟ್ಟುಹೋದ ಉಯಿಲು ಮತ್ತು ಕೆಲವು ಗ್ರಂಥಗಳು ದೇಶಕ್ಕೆ ಮಾರ್ಗದರ್ಶಕವಾದುವು. ಈ ಪೈಕಿಯ ಗ್ರಂಥವೊಂದು ಆಡಳಿತದ ಗೀತೆಯಂತಾಯಿತು. ಅದರಲ್ಲಿ ಸೂಚಿತವಾದ ಮೂರು ತತ್ತ್ವಗಳು ಹೀಗಿವೆ ; 1. ರಾಷ್ಟ್ರೀಯತೆ-ವಿದೇಶೀಯರ ಆಧಿಪತ್ಯವನ್ನು ಚೀನದಿಂದ ಹೊರಕ್ಕೆ ಅಟ್ಟುವುದು.; 2. ಪ್ರಜಾಸತ್ತೆ-ಸರ್ಕಾರ ಜನರಿಂದ, ಜನರಿಗಾಗಿ ; 3. ಜೀವನ-ಎಲ್ಲ ಜನರಿಗೂ ಆರ್ಥಿಕ ಸುರಕ್ಷತೆ.

1926ರಲ್ಲಿ ಸರ್ಕಾರದ ಸೇನೆಗಳು ಉತ್ತರಾಭಿಮುಖವಾಗಿ ನುಗ್ಗಿ ಕಾರ್ಯಾಚರಣೆ ನಡೆಸಿದುವು. ಇದರ ನಾಯಕರು ಚಿಯಾಂಗ್ ಕೈ-ಷೇಕ್. ಇವರ ಸೇನೆಗೆ ಸರಿಯಾದ ಪ್ರತಿಭಟನೆ ಬರಲಿಲ್ಲ. 1927ರ ಆದಿಭಾಗದಲ್ಲಿ ಇದು ಯಾಂಗ್‍ಟ್ಸೀ ಕಣಿವೆಯನ್ನು ಪ್ರವೇಶಿಸಿತು. ಷಾಂಗ್‍ಹೈನಂಥ ಮುಖ್ಯ ನಗರಗಳು ಇದರ ವಶವಾದುವು. ಆದರೆ ಈ ಸರ್ಕಾರದ ಗುಂಪಿನಲ್ಲಿ ಒಳಜಗಳಗಳು ಕಾಣಿಸಿಕೊಂಡುವು. ಮಂದಗಾಮಿಗಳು, ತೀವ್ರಗಾಮಿಗಳೂ ಎಂಬ ಎರಡು ಪಂಗಡಗಳಾದುವು. ಚಿಯಾಂಗರ ನಾಯಕತ್ವದಲ್ಲಿ ಮಂದಗಾಮಿಗಳು ನ್ಯಾನ್ಕಿಂಗಿನಲ್ಲಿ ಸರ್ಕಾರವನ್ನು ಸ್ಥಾಪಿಸಿದರು. ವಾಮಪಕ್ಷದ ಮೇಲೆ ಚಿಯಾಂಗ್ ಬಲಪ್ರಯೋಗ ಮಾಡಿದರು. ಕಮ್ಯುನಿಸ್ಟ್ ಸಂಬಂಧ ತೊಡೆದುಹಾಕಲು ಉಗ್ರಕ್ರಮಗಳನ್ನು ಅನುಸರಿಸಿದರು. ಕ್ಯಾಂಟನ್‍ನಲ್ಲಿ ಒಂದು ಬಂಡಾಯವೆದ್ದಿತು. ಇದನ್ನು ಅಡಗಿಸಲಾಯಿತು. ಇದರಲ್ಲಿ ಐದು ಸಾವಿರ ಜನ ಬಲಿಯಾದರು. ಕಮ್ಯುನಿಸ್ಟ್ ಸಲಹೆಗಾರರು ರಷ್ಯಕ್ಕೆ ವಾಪಸಾಗಬೇಕಾಯಿತು. ತೀವ್ರಗಾಮಿಗಳನೇಕರು, ಸುನ್ ಯಾಟ್‍ಸೆನ್‍ನ ಹೆಂಡತಿ ಕೂಡ, ದೇಶದಿಂದ ಉಚ್ಚಾಟನೆಗೊಂಡರು. ಆದರೆ ನ್ಯಾನ್ಕಿಂಗ್ ಸರ್ಕಾರಕ್ಕೆ ಹಣದ ಕೊರತೆಯುಂಟಾಯಿತು. ಕೊನೆಗೆ ಷಾಂಗ್‍ಹೈನ ವಿದೇಶೀ ಬ್ಯಾಂಕುಗಳ ನೆರವನ್ನು ಅವಲಂಬಿಸಬೇಕಾಯಿತು.

1927ರಲ್ಲಿ ಪ್ರಾಪ್ತವಾದ ಒಡಕು ಚೀನದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಮುಖ್ಯ ಘಟನೆ. ಕ್ರಾಂತಿಕಾರಿ ಚಳವಳಿ ತ್ವರಿತವಾಗಿ ಮಾಕ್ರ್ಸ್ ತತ್ತ್ವಪ್ರತಿಪಾದನೆಯಲ್ಲಿ ತಲ್ಲೀನವಾಯಿತು. ಚಿಯಾಂಗ್ ಸರ್ಕಾರ ವಾಮ ಪಕ್ಷದವರ ಮೇಲೆ ನಡೆಸಿದ ಕಾರ್ಯಾಚರಣೆಗೆ ಪ್ರತಿಯಾಗಿ ತೆತ್ತ ಬೆಲೆ ಅಲ್ಪವಲ್ಲ. ಕೇವಲ ತೀವ್ರಪಂಥದವರು ಮಾತ್ರವಲ್ಲ. ನ್ಯಾಯವಾದ ಸುಧಾರಣೆಗಳು ಬೇಕೆನ್ನುತ್ತಿದ್ದ ಮಂದಗಾಮಿಗಳೂ ವಿರೋಧಿಗಳಾದರು. 1227ರ ತರುವಾಯ ರಾಷ್ಟ್ರೀಯ ಆಡಳಿತ ಕಂದಚಾರದ ನೀತಿಗಳಿಗೆ ಒಳಗಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥವಾಯಿತು. ಅದರ ಸ್ವರೂಪವೇ ಮಾರ್ಪಟ್ಟಿತು. ಕ್ರಮೇಣ ಅದು ಪಟ್ಟಣಿಗರ, ಉದ್ಯಮಿಗಳ, ವ್ಯಾಪಾರಗಾರರ ಮತ್ತು ಬ್ಯಾಂಕಿಂಗ್ ಗುಂಪಿನ ಕೈಗೊಂಬೆಯಾಯಿತು.

1927ರಲ್ಲಿ ಚಿಯಾಂಗ್ ಕೈ-ಷೆಕ್ ಸುನ್ ಯಾಟ್‍ಸೆನ್‍ನ ಹೆಂಡತಿಯ ತಂಗಿಯನ್ನು ಮದುವೆಯಾದರು. ಮುಂದಿನ ವರ್ಷ ಪಕ್ಷದ ಸೇನೆಗಳು ಪುನಃ ಉತ್ತರಕ್ಕೆ ಸಾಗಿ ಪೀಕಿಂಗನ್ನು ಪ್ರವೇಶಿಸಿದುವು. ಶಾಂತಿ ಒಪ್ಪಂದವಾಗಿ ಮತ್ತೊಮ್ಮೆ ರಾಷ್ಟ್ರೈಕ್ಯದ ಸಾಧ್ಯತೆ ತೋರಿತು. ರಾಷ್ಟ್ರೀಯ ಜೀವನದಲ್ಲಿ ಹೊಂದಾಣಿಕೆ ಇರಲಿಲ್ಲ. ಅನೇಕ ಕಡೆಗಳಲ್ಲಿ ದರೋಡೆಗಳಾಗುತ್ತಿದ್ದುವು. ವಾಯುವ್ಯದಲ್ಲಿ ಕ್ಷಾಮವುಂಟಾಗಿ ಲಕ್ಷಗಟ್ಟಲೆ ಜನ ಸತ್ತರು. 1929ರಲ್ಲಿ ಕೆಲವು ಸೇನಾಧಿಕಾರಿಗಳು ಸರ್ಕಾರದ ಆಡಳಿತ ನೀತಿ ಕುರಿತು ಅಸಮಾಧಾನಗೊಂಡು ಹೊರಬಿದ್ದು ದಿಷ್ಕøತ್ಯಗಳಲ್ಲಿ ನಿರತರಾದರು. ಚಿಯಾಂಗ್ ಸರ್ಕಾರ ಈ ವಿರೋಧವನ್ನೂ ಜಯಿಸಿ ಭದ್ರವಾಯಿತು;

1927ರ ಕಾರ್ಯಾಚರಣೆಯ ಫಲವಾಗಿ ದೇಶಭ್ರಷ್ಟಬಾಗಿದ್ದ ಚೀನೀ ಕಮ್ಯೂನಿಸ್ಟರ ಗುಂಪು ಮತ್ತೆ ತಲೆ ಎತ್ತತೊಡಗಿತು. ಅವರು ದಕ್ಷಿಣ ಚೀನದ ಗುಡ್ಡಗಾಡುಗಳಲ್ಲಿ ಅವಿತುಕೊಂಡು ಸರ್ಕಾರವನ್ನು ಸ್ಥಾಪಿಸಿಕೊಂಡರು. ಜಿಯಾಂಗ್‍ಸೀ ಎಂಬಲ್ಲಿ ಇದು ಪ್ರಬಲವಾಯಿತು. 1931ರ ನವೆಂಬರ್ ತಿಂಗಳಲ್ಲಿ ಚೀನೀ ಸೋವಿಯೆತ್ ಗಣರಾಜ್ಯದ ಸ್ಥಾಪನೆಯಾಯಿತು.

ಕಮ್ಯೂನಿಸ್ಟ್ ಪಕ್ಷ ಹೀಗೆ ವ್ಯಾಪಕ ಕ್ರಾಂತಿಗಾಗಿ ಸನ್ನಾಹ ನಡೆಸುತ್ತಿತ್ತು. ಹಲವು ನಾಯಕರು ಸೋವಿಯೆತ್ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು. ಅಂದಿನ ಸರ್ಕಾರದ ಉಪೇಕ್ಷೆಯಿಂದ ಗ್ರಾಮಪ್ರದೇಶಗಳಲ್ಲಿ ಜನಿಸಿದ್ದ ಅಸಂತುಷ್ಟಿಯನ್ನು ಈ ನಾಯಕರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಯತ್ನಿಸಿದರು. ಮಾಕ್ರ್ಸ್ ತತ್ತ್ವಗಳನ್ನು ಹಬ್ಬಿಸಲು ಅನುವಾದರು. ಚೀನದ ರಾಷ್ಟ್ರೀಯ ಪಕ್ಷದವರು ಚೀನವನ್ನು ಆಧುನಿಕಗೊಳಿಸಲು ಯತ್ನಿಸಿದರಾದರೂ ಅವರ ಗಮನವೆಲ್ಲ ಪಟ್ಟಣಗಳ ಕಡೆಗೇ ಇದ್ದದ್ದು ಬಾಧಕವೆನಿಸಿತು. ಇದನ್ನೆಲ್ಲ ಮಾವೊ ತ್ಸೆ-ಡುಂಗ್ ಚೆನ್ನಾಗಿ ಅರ್ಥಮಾಡಿಕೊಂಡು ಸಮಯ ಕಾಯುತ್ತಿದ್ದರು. ಒಟ್ಟಿನಲ್ಲಿ ರೈತರ ಕಷ್ಟಗಳೇನು, ಕಾರ್ಪಣ್ಯಗಳೇನು ಎಂಬುದನ್ನು ಮನನಮಾಡಿದರು. ಸುಧಾರಣೆಗೆ ಕೈ ಹಾಕಿದರು. ಇದರಿಂದ ರೈತರಲ್ಲಿ ನವಚೇತನವುಂಟಾಯಿತು. ಆಶೆ ಅಂಕುರಿಸಿತು. ಈ ಕಾರ್ಯದಲ್ಲಿ ಮಾವೊ ಯಶಸ್ವಿಯಾದಾಗ ಚಿಯಾಂಗ್ ಸರ್ಕಾರ ಕಣ್ತೆರೆಯಿತು. 1931ರ ಆರಂಭದಿಂದ ನಾಲ್ಕು ವರ್ಷಗಳ ವರೆಗೆ ಐದು ಸಾರಿ ಕಮ್ಯೂನಿಸ್ಟರ ಮೇಲೆ ಕಾರ್ಯಾಚರಣೆ ನಡೆಯಿತು. ಜರ್ಮನ್ ಸೈನ್ಯಾಧಿಕಾರಿಗಳ ನೇತೃತ್ವದಲ್ಲಿ ಹತ್ತು ಲಕ್ಷ ಸೈನಿಕರು ನುಗ್ಗಿದರು. ಕಮ್ಯೂನಿಸ್ಟರು ಸೋತು ದಿಕ್ಕಾಪಾಲಾಗಿ ಚದುರಿದರು. ಮಾವೊ ಮತ್ತು ಅವರ ಅನುಯಾಯಿಗಳು, ಸಾವಿರಾರು ಮೈಲಿಗಳ ದೂರ ನಡೆದು ಆಗಾಗ್ಗೆ ಸೈನಿಕ ಪ್ರಹಾರಗಳನ್ನು ಎದುರಿಸುತ್ತ, ಬಹಳ ಕಷ್ಟ ನಷ್ಟ ಅನುಭವಿಸಿದರು. ಕಡೆಗೆ ಕಳೆದುಳಿದಿದ್ದವರು 1935ರ ಅಕ್ಟೋಬರಿನಲ್ಲಿ ಷೆನ್ಸೀ ಪ್ರಾಂತ್ಯದಲ್ಲಿ ತಂಗಿ ಯನ್ನಾನ್ ನಗರದಲ್ಲಿ ಕಮ್ಯೂನಿಸ್ಟ್ ಸರ್ಕಾರ ಸ್ಥಾಪಿಸಲು ಉದ್ಯುಕ್ತರಾದರು. ಈ ಘಟನೆಗಳು ನಡೆಯುತ್ತಿದ್ದಾಗಲೇ ಜಪಾನ್ ಮತ್ತೊಮ್ಮೆ ಚೀನದ ಮೇಲೆ ದಾಳಿ ನಡೆಸಿತು. ಚೀನದ ನೈಸರ್ಗಿಕ ಸಂಪತ್ತು ಅಪಾರವಾಗಿದ್ದದ್ದು ಮಾತ್ರವಲ್ಲ. ಅದು ಜಪಾನೀ ಪದಾರ್ಥಗಳಿಗೆ ಒಳ್ಳೆಯ ಮಾರುಕಟ್ಟೆಯೂ ಆಗಿದ್ದುದು ಜಪಾನಿನ ಆಕ್ರಮಣಾಕಾಂಕ್ಷೆಗೆ ಮುಖ್ಯ ಕಾರಣ.

1931ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಪಾನು ಎಚ್ಚರಿಕೆ ನೀಡದೆ ಮಂಚೂರಿಯಲ್ಲಿದ್ದ ಚೀನೀ ಸೈನಿಕರ ಮೇಲೆ ಬಿತ್ತು. ಜಪಾನಿನ ದಾಳಿಯನ್ನು ತಡೆಯಲಾರದೆ ರಾಷ್ಟ್ರಗಳ ಕೂಟಕ್ಕೆ (ಲೀಗ್ ಆಫ್ ನೇಷನ್ಸ್) ಚೀನ ವಿನಂತಿ ಮಾಡಿಕೊಂಡಿತು. ಆ ಸಂಸ್ಥೆ ಜಪಾನನ್ನು ಖಂಡಿಸಿತಾದರೂ ಇದಕ್ಕಿಂತ ಹೆಚ್ಚಿನದೇನನ್ನೂ ಮಾಡಲಿಲ್ಲ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದು ಚೀನಕ್ಕೆ ಹೊಳೆಯಲಿಲ್ಲ. ಮಿತ್ರರಿಲ್ಲದ ಸ್ಥಿತಿಗೆ ಬಂದಿತ್ತು. ಜಪಾನೀ ಸರಕುಗಳನ್ನು ಬಹಿಷ್ಕರಿಸಬೇಕೆಮದು ಅದು ದೇಶಕ್ಕೆ ಕರೆಕೊಟ್ಟಿತು (1932). ಇದರ ಪರಿಣಾಮವಾಗಿ ಷಾಂಗ್‍ಹೈ ನಗರಕ್ಕೆ ಅಪಾರ ನಷ್ಟ ಸಂಭವಿಸಿತು. ಮಂಚೂರಿಯವನ್ನು ಅದೇ ವರ್ಷದಲ್ಲಿ ಜಪಾನ್ ಆಕ್ರಮಿಸಿ ಅದಕ್ಕೆ ಮಂಚುಕೋ ಎಂದು ನಾಮಕರಣಮಾಡಿತು. ಸಿಂಹಾಸನತ್ಯಾಗ ಮಾಡಿದ್ದ ಮ್ಯಾಂಚೂ ಅರಸ ಹೊಸ ಆಡಳಿತದ ಪ್ರಥಮ ದೊರೆಯಾದ. ಜಪಾನ್ ತನ್ನ ದಂಡಯಾತ್ರೆಯನ್ನು ಮುಂದುವರಿಸಿ ತೀರ ದಕ್ಷಿಣಕ್ಕೆ ನುಗ್ಗಿತು. ಚೀನ ಜಪಾನಿನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಮಂಚೂರಿಯ ಮತ್ತು ಉತ್ತರ ಚೀನಗಳ ಮೇಲೆ ಜಪಾನು ನಡೆಸಿದ ಆಕ್ರಮಣವನ್ನು ಅದು ಅಂಗೀಕರಿಸಲೇಬೇಕಾಗಿ ಬಂತು.

1933-1936ರಲ್ಲಿ ಜಪಾನ್ ಮತ್ತು ಚೀನಗಳ ನಡುವೆ ಶಾಂತಿ ನೆಲೆಸಿತ್ತು. ಉತ್ತರದಲ್ಲಿ ಜಪಾನ್ ತನ್ನ ಸ್ಥಾನಗಳನ್ನು ಭದ್ರಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾಗಲೇ ಚೀನದ ರಾಷ್ಟ್ರೀಯ ಸರ್ಕಾರ ಚಿಯಾಂಗರ ನಾಯಕತ್ವದಲ್ಲಿ ಒಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿತ್ತು. ಈ ಸಮಯದಲ್ಲೇ ಚೀನದ ಎರಡು ಪ್ರಬಲ ಗುಂಪುಗಳಿಗೂ ಘರ್ಷಣೆಯುಂಟಾಯಿತು. ಕಮ್ಯೂನಿಸ್ಟರನ್ನು ನಾಶಗೊಳಿಸಲು ಚಿಯಾಂಗ್ ಯತ್ನಿಸಿತು. ಇದು ಸಾಧ್ಯವಾಗಲಿಲ್ಲ. ಕಮ್ಯೂನಿಸ್ಟರು ನ್ಯಾನ್ಕಿಂಗ್ ಪ್ರದೇಶದಿಂದ ವಾಯುವ್ಯಕ್ಕೆ ಓಡಿಹೋಗಲು ಮಾತ್ರ ಸಾಧ್ಯವಾಯಿತು. ಚಿಯಾಂಗ್ ಕೈ-ಷೆಕ್‍ರಿಗೂ ಕಮ್ಯೂನಿಸ್ಟರಿಗೂ ಧ್ಯೇಯಧೋರಣೆಗಳ ಸಂಬಂಧವಾದ ಘರ್ಷಣೆ ಅವ್ಯಾಹತವಾಗಿ ನಡೆಯಿತು. ಕಮ್ಯೂನಿಸ್ಟರ ಆರ್ಥಿಕ ತತ್ತ್ವಗಳನ್ನು ಚಿಯಾಂಗ್ ವಿರೋಧಿಸಿದರು. ಚಿಯಾಂಗರು ದೇಶೀಯರ ವಿರುದ್ಧ ಕಾದಾಡಲು ನಿಂತಿರುವರೇ ವಿನಾ ಜಪಾನೀ ದಾಳಕೋರರ ವಿರುದ್ಧ ಸೆಣಸಲು ಸಿದ್ಧರಿಲ್ಲವೆಂದು ಕಮ್ಯೂನಿಸ್ಟರು ಹೇಳುತ್ತಿದ್ದರು.

1935ರಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷದ ಪ್ರಮುಖರು ಜಪಾನರನ್ನು ಎದುರಿಸಲು ಐಕ್ಯರಂಗವಾಗಬೇಕೆಂದು ಒತ್ತಾಯಪಡಿಸಿದರು. 1936ರ ಡಿಸೆಂಬರ್ 12ರಂದು ಚಿಯಾಂಗ್ ಕೈ-ಷೆಕರನ್ನು ಕಮ್ಯೂನಿಸ್ಟರು ಎರಡು ವಾರಗಳ ಕಾಲ ದಿಗ್ಭಂಧನದಲ್ಲಿಟ್ಟಿದ್ದು, ಶತ್ರುವನ್ನೆದುರಿಸುವ ಸಲುವಾಗಿ ಐಕ್ಯರಂಗವೇರ್ಪಡಬೇಕೆಂದೂ ಅವರು ಅದರ ನಾಯಕರಾಗಬೇಕೆಂದೂ ಹೇಳೆದರು. ಚಿಯಾಂಗ್ ನ್ಯಾನ್ಕಿಂಗಿಗೆ ಹಿಂದಿರುಗಿದರು. ರಾಷ್ಟ್ರೀಯ ಸರ್ಕಾರದವರು ಮತ್ತು ಕಮ್ಯೂನಿಸ್ಟರು ಸಹವರ್ತಿಸಿ ಜಪಾನಿನ ಮುಂದಿನ ದಾಳಿಯನ್ನು ಎದುರಿಸಲು ತಯಾರಾದರು.

ಹೊರಗಿನ ದಾಳಿಕಾರರನ್ನು ಹಿಮ್ಮೆಟ್ಟಿಸುವುದೇ ಪ್ರಥಮ ಕರ್ತವ್ಯವೆಂದು ಮಾವೊ ಬಗೆದು, ಒಗ್ಗಟ್ಟು ಸಾಧಿಸಲು ಕೆಲವು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಕೈಹಾಕಿದರು. ಇದರಲ್ಲಿ ಯಾವ ಸಂಶಯಕ್ಕೂ ಆಸ್ಪದವಿರಬಾರದೆಂಬುದು ಅವರ ಆಶಯ. ಮುಖ್ಯವಾಗಿ ನ್ಯಾನ್ಕಿಂಗ್ ಸರ್ಕಾರದ ವಿರುದ್ಧ ಹೋರಾಡುವುದಿಲ್ಲವೆಂದೂ ಜಪಾನಿನ ವಿರುದ್ಧ ಕಾದಾಡಲು ತಮ್ಮ ಸೇನೆಯನ್ನು ರಾಷ್ಟ್ರೀಯ ಸೇನೆಯೊಡನೆ ಮಿಲನಗೊಳಿಸುವುದಾಗಿಯೂ ಸಾರಿದರು.

ಜಪಾನ್ ಪುನಃ ಜುಲೈ 7ರಂದು ಚೀನದ ಮೇಲೆ ಬಿತ್ತು. ಮೊದಲು ಕದನ ಆರಂಭವಾದ್ದು ಉತ್ತರದಲ್ಲಿ. ಈ ಮಧ್ಯೆ ದಕ್ಷಿಣದಲ್ಲಿ ಜಪಾನಿಗಳು ಷಾಂಗ್ ಹೈಯನ್ನು ವಶಪಡಿಸಿಕೊಂಡು ನ್ಯಾನ್ಕಿಂಗ್ ಹಿಡಿಯಲು ಯಾಂಗ್ಟ್ಸೀ ಕಣಿವೆಯವರೆಗೆ ರಭಸದಿಂದ ನುಗ್ಗಿದರು. ಚೀನೀಯರು ಶರಣಾಗತರಾಗದೆ ಹಿಮ್ಮೆಟ್ಟಿ ಯಾಂಗ್ಟ್ಸೀ ಮೇಲ್ಭಾಗದ ಚುಂಗ್‍ಕಿಂಗ್ ಎಂಬಲ್ಲಿ ತಮ್ಮ ರಾಜಧಾನಿಯನ್ನು ಸ್ಥಾಪಿಸಿ ಅಲ್ಲಿಂದ ಯುದ್ಧ ಮುಂದುವರಿಸಿದರು. ಉತ್ತರದಲ್ಲಿ ಚೀನೀ ಸೈನಿಕರು ಹೆಮ್ಮೆಟ್ಟಿದರು. ಕಡೆಗೆ ಜಪಾನೀಯರ ಸರ್ಕಾರ ಪೈಪಿಂಗ್‍ನಲ್ಲಿ ಸ್ಥಾಪಿತವಾಯಿತು. ಯುದ್ದ ಮುಂದುವರಿಯಿತು. 1941ರ ವೇಳೆಗೆ ಚೀನದ ಟಿನ್‍ಟ್ಸಿನ್ ಮತ್ತು ಪೀಕಿಂಗ್ ಪ್ರಾಂತ್ಯವೆಲ್ಲ ಜಪಾನಿನ ವಶವಾಯಿತು. ಅಲ್ಲದೆ ಷಾಂಗ್‍ಹೈ, ಹ್ಯಾಂಗ್‍ಚೌ, ನ್ಯಾನ್ಕಿಂಗ್ ಮುಂತಾದ ಪಟ್ಟಣಗಳೂ ರೇವುಗಳೂ ರೈಲ್ವೆಸಾರಿಗೆ ಸಂಪರ್ಕಗಳೂ ಅದರ ವಶವಾದುವು. ಗಣರಾಜ್ಯ ಸಕಾರ ಪಲಾಯನ ಮಾಡಿತು. ಜಪಾನು ನ್ಯಾನ್ಕಿಂಗ್‍ನಲ್ಲಿ ವಾಂಗ್ ಚಿಂಗ್ ಎಂಬವನ ನೇತೃತ್ವದಲ್ಲಿ ಕೈಗೊಂಬೆ ಸರ್ಕಾರ ಸ್ಥಾಪಿಸಿತು.

ಇಷ್ಟಾದರೂ ಚೀನ ಧೃತಿಗೆಡಲಿಲ್ಲ. ಮತ್ತೊಮ್ಮೆ ಎಲ್ಲ ಭೇದ ಭಾವಗಳನ್ನು ಮರೆತು ಕಮ್ಯೂನಿಸ್ಟರೂ ರಾಷ್ಟ್ರೀಯ ಸರ್ಕಾರದವರೂ ಕಲೆತು ಜಪಾನನ್ನು ಎದುರಿಸಬೇಕೆಂದು ಸಂಕಲ್ಪಿಸಿದರು. ಆಗ ಚೀನಕ್ಕಿದ್ದದ್ದು ಜನಬಲ ಮತ್ತು ಆತ್ಮಬಲ ಮಾತ್ರ. ಈ ಬಲದಿಂದ ಬಲಾಢ್ಯವಾದ ಜಪಾನಿನೊಡನೆ ಬಲವಾಗಿ ಕಾದಾಡಿತು. ಚುಂಗ್‍ಕಿಂಗ್ ರಾಜಧಾನಿಯ ಸುತ್ತ ಹೊಸ ಪ್ರಾಂತ್ಯವನ್ನು ನಿರ್ಮಾಣ ಮಾಡಿ, ರಕ್ಷಣೆ, ಸಾರಿಗೆ ಸಂಪರ್ಕ, ಕೈಗಾರಿಕೆಗಳು, ಶಾಲೆಗಳೂ, ವಿಶ್ವವಿದ್ಯಾನಿಲಯಗಳು ಇವನ್ನೆಲ್ಲ ವ್ಯವಸ್ಥೆ ಮಾಡಿತು. ವಾಂಗ್ ಚೆಂಗ್ ಆಡಳಿತಕ್ಕೆ ಅಮೆರಿಕ ಅಂಗೀಕಾರ ಕೊಡಲಿಲ್ಲ. ಚೀನದಿಂದ ಕಾಲ್ತೆಗೆಯಬೇಕೆಂದು ಜಪಾನಿಗೆ ಅದು ಎಚ್ಚರಿಕೆ ನೀಡಿತು. ಎರಡನೆಯ ಮಹಾಯುದ್ಧದಲ್ಲಿ ಜಪಾನು ಸೋಲುತ್ತ ನಡೆದು ಕೊನೆಗೆ ಸಂಪೂರ್ಣವಾಗಿ ಶರಣಾಗತವಾಯಿತು.

ಜಪಾನಿನ ಪರಾಜಯದಿಂದ ಚೀನಕ್ಕೆ ಅನುಕೂಲವಾಯಿತು. 50 ವರ್ಷಗಳಲ್ಲಿ ಚೀನದಿಂದ ಜಪಾನು ಗಳಿಸಿದ್ದನ್ನೆಲ್ಲ ಚೀನಕ್ಕೆ ಬಿಟ್ಟುಕೊಡಬೇಕಾಗಿ ಬಂತು. ಕಮ್ಯೂನಿಸ್ಟ್ ಮತ್ತು ರಾಷ್ಟ್ರೀಯ ಚೀನ ಸರ್ಕಾರಗಳ ನಡುವೆ ಒಗ್ಗಟ್ಟು ಸಾಧಿಸಲು ನಡೆಸಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಇವೆರಡೂ ಮತ್ತೆ ಆಡಳಿತಕ್ಕಾಗಿ ಪರಸ್ಪರ ಸ್ಪರ್ಧಿಸಿದುವು. ಕಮ್ಯೂನಿಸ್ಟ್ ಆಡಳಿತ ದಕ್ಷವೂ ಸುವ್ಯವಸ್ಥಿತವೂ ಶಕ್ತಿಯುತವೂ ಆಗಿತ್ತು. ಕಮ್ಯೂನಿಸ್ಟರ ಕೈ ಮೇಲಾಗಿ 1849ರಲ್ಲಿ ಚಿಯಾಂಗ್ ಕೈ-ಷೆಕ್ ಫಾರ್ಮೋಸಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಅಮೆರಿಕನ್ನರ ರಕ್ಷಣೆಯಲ್ಲಿ ರಾಷ್ಟ್ರೀಯ ಸರ್ಕಾರವನ್ನು ಮುಂದುವರಿಸಿದರು. ಆ ವರ್ಷ ಕಮ್ಯೂನಿಸ್ಟರು ಚೀನೀ ಮೂಲ ನಾಡಿನಲ್ಲಿ ಜನತಾ ಗಣರಾಜ್ಯವನ್ನು ಘೋಷಿಸಿ ಅಧಿಕಾರ ಸ್ಥಾಪಿಸಿದರು.

ಅನೇಕ ರಾಷ್ಟ್ರಗಳು ಕಮ್ಯೂನಿಸ್ಟ್ ಚೀನಕ್ಕೆ ಮನ್ನಣೆ ನೀಡಿದುವು. 1950ರಲ್ಲಿ ಕೊರಿಯ ಯುದ್ಧದಲ್ಲಿ ಚೀನ ಭಾಗವಹಿಸಿ, ಉತ್ತರ ಕೊರಿಯಕ್ಕೆ ಬೆಂಬಲ ನೀಡಿತು. ಅದೇ ವರ್ಷ ಚೀನೀ ಸೇನೆ ಟಿಬೆಟನ್ನು ವಶಪಡಿಸಿಕೊಂಡಿತು. 1956ರಲ್ಲಿ ಇಂಡೋನೇಷ್ಯದ ಬಾಂಡುಂಗ್‍ನಲ್ಲಿ ನಡೆದ ಏಷ್ಯ-ಆಫ್ರಿಕ ಸಮ್ಮೇಳನದಲ್ಲಿ ಭಾಗವಹಿಸಿತು. 1956ರಲ್ಲಿ ಟಿಬೆಟಿನಲ್ಲಿ ದಲೈ ಲಾಮಾರನ್ನು ಸಕಾರದ ಮುಖ್ಯಸ್ಥನನ್ನಾಗಿ ಮಾಡಲಾಯಿತು. ನಿಜವಾದ ಅಧಿಕಾರವೆಲ್ಲ ಕಮ್ಯೂನಿಸ್ಟ್ ಸರ್ಕಾರದ ಕೈಯಲ್ಲೇ ಇತ್ತು. 1959ರಲ್ಲಿ ಚೀನೀಯರ ವಿರುದ್ಧ ಟಿಬೆಟಿನಲ್ಲಿ ದಂಗೆ ನಡೆಯಿತು. ಚೀನೀಯರು ಅದನ್ನು ಹತ್ತಿಕ್ಕಿದರು. ದಲೈ ಲಾಮಾ ಭಾರತಕ್ಕೆ ಓಡಿಹೋದರು. ಪಂಚೆನ್ ಲಾಮಾ ಚೀನೀಯರ ನೆರವಿನಿಂದ ಅಧಿಕಾರಕ್ಕೆ ಬಂದರು. 1965ರಲ್ಲಿ ಮತ್ತೊಬ್ಬನನ್ನು ಅಧಿಕಾರಕ್ಕೆ ತರಲಾಯಿತು. 1962ರಲ್ಲಿ ಚೀನಕ್ಕೂ ಭಾರತಕ್ಕೂ ನಡುವೆ ಗಡಿ ಘರ್ಷಣೆ ನಡೆಯಿತು. ಇದರಿಂದ ಈ ಎರಡೂ ದೇಶಗಳ ಪರಸ್ಪರ ಸಂಬಂಧಗಳು ಹದಗೆಟ್ಟುವು. 1954ರಿಂದ 1972ರ ವರೆಗೆ ನಡೆದ ವಿಯೆಟ್ನಾಮ್ ಕಾಳಗದಲ್ಲಿ ಕಮ್ಯೂನಿಸ್ಟ್ ಚೀನ ಉತ್ತರ ವಿಯೆಟ್ನಾಮ್‍ಗೆ ನೆರವು ನೀಡುತ್ತಿತ್ತು. ದಕ್ಷಿಣ ವಿಯೆಟ್ನಾಂ ಸರ್ಕಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಕಮ್ಯೂನಿಸ್ಟ್ ಪಡೆಗಳಿಗೂ ಚೀನೀಯರ ನೆರವು ದೊರಕಿತು. 1949ರಿಂದ 1971ರ ವರೆಗೆ ಚೀನೀ ಜನತಾ ಗಣರಾಜ್ಯಕ್ಕೆ ವಿಶ್ವಸಂಸ್ಥೆಯಲ್ಲಿ ಸ್ಥಾನವಿರಲಿಲ್ಲ. ಅಮೆರಿಕ ಅದಕ್ಕೆ ಅಡ್ಡಿ ತರುತ್ತಿತ್ತು. ಭಾರತ, ಸೋವಿಯಡತ್ ದೇಶ ಮೊದಲಾದ ಹಲವು ರಾಷ್ಟ್ರಗಳು ಕಮ್ಯೂನಿಸ್ಟ್ ಚೀನಕ್ಕೆ ಸದಸ್ಯತ್ವ ಕೊಡಬೇಕೆಂದು ವಾದಿಸಿ, ಬೆಂಬಲ ನೀಡಿದವು. ಕಮ್ಯೂನಿಸ್ಟ್ ಚೀನೀ ಸರ್ಕಾರದ ಬದಲಾಗಿ ಫಾರ್ಮೋಸ (ಟೈವಾನ್) ಸರ್ಕಾರಕ್ಕೆ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯತ್ವವಿತ್ತು. ಈ ಬಗ್ಗೆ ಅಮೆರಿಕದ ಧೋರಣೆಯಲ್ಲಿ ಬದಲಾವಣೆಯಾದ್ದು 1971ರಲ್ಲಿ. ವಿಶ್ವಸಂಸ್ಥೆಯಲ್ಲಿ ಕಮ್ಯೂನಿಸ್ಟ್ ಚೀನದ ಸದಸ್ಯತ್ವಕ್ಕೆ ಅದು ಬೆಂಬಲ ನೀಡಿತು. 1971ರಲ್ಲಿ ಕಮ್ಯೂನಿಸ್ಟ್ ಚೀನ ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಖಾಯಂ ಸ್ಥಾನ ಪಡೆಯಿತು.

1950-1960ರಲ್ಲಿ ಕಮ್ಯುನಿಸ್ಟ್ ಚೀನ-ಸೊವಿಯೆತ್ ಸಂಬಂಧಗಳೂ ಸೌಹಾರ್ದ ಪೂರ್ಣವಾಗಿದ್ದುವು. ಸೋವಿಯೆತ್ ದೆಶ ಚೀನಕ್ಕೆ ಎಲ್ಲ ರೀತಿಯ ಆರ್ಥಿಕ ನೆರವನ್ನೂ ನೀಡಿತು. ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಚೀನಕ್ಕೆ ಬೆಂಬಲ ತೋರಿಸಿತು. ಕ್ರಮೇಣ ಇವುಗಳ ನಡುವಣ ಬಾಂಧವ್ಯಗಳಲ್ಲಿ ವಿರಸವುಂಟಾಯಿತು. ಸೋವಿಯೆತ್ ನೀತಿಯನ್ನು ಚೀನ ವಿರೋಧಿಸಲು ಪ್ರಾರಂಭಿಸಿತು. ಏಷ್ಯ ಭೂಭಾಗದಲ್ಲಿ ತನ್ನ ಮಹತ್ವಾತ್ರವನ್ನು ಸ್ಥಾಪಿಸುವುದು ಚೀನದ ಹವಣಿಕೆ. ಈ ಕಾರಣಗಳಿಂದ ಈಚೆಗೆ ಈ ರಾಷ್ಟ್ರಗಳ ನಡುವಣ ಸಂಬಂಧಗಳು ಹಿತಕರವಾಗಿಲ್ಲ. 1950-1971ರ ಅವಧಿಯಲ್ಲಿ ಪರಸ್ಪರ ದ್ವೇಷ ಸಾಧಿಸುತ್ತಿದ್ದ ಚೀನ ಅಮೆರಿಕಗಳು ಪರಸ್ಪರ ಸ್ನೇಹಸಂಬಂಧ ಸ್ಥಾಪಿಸಿಕೊಂಡುವು. ಅಮೆರಿಕದ ಅಧ್ಯಕ್ಷ ನಿಕ್ಸನರು ಪೀಕಿಂಗಿಗೆ ಭೇಟಿ ನೀಡಿದರು. ಎರಡೂ ರಾಷ್ಟ್ರಗಳ ಬಾಂಧವ್ಯ ಇನ್ನೂ ಉತ್ತಮಗೊಳ್ಳುವ ಸೂಚನೆಗಳು ಕಂಡುಬಂದಿವೆ. ಇತ್ತಿಚೆಗೆ ಚೀನ ಪರಮಾಣು ಬಾಂಬ್ ಸ್ಪೋಟಿಸಿ ತಾನೂ ಪರಮಾಣು ಶಕ್ತಿ ರಾಷ್ಟ್ರಗಳ ಗುಂಪಿಗೆ ಸೇರಿತು.

ಕಮ್ಯೂನಿಸ್ಟ್ ಸರ್ಕಾರದ ನೇತೃತ್ವದಲ್ಲಿ ಅಂತರಿಕವಾಗಿ ಚೀನದಲ್ಲಿ ಬದಲಾವಣೆಗಳಾಗಿವೆ. ಮಾವೋ ತ್ಸೆ ಡುಂಗ್ ಚೀನದ ಮಹಾನಾಯಕ. ಅವರವಿಚಾರ ಧಾರೆಯಲ್ಲಿ ಚೀನೀಯರಿಗೆ ವಿಶ್ವಾಸವಿದೆ. ಆರ್ಥಿಕ ಪ್ರಗತಿ ಸಾಕಷ್ಟಾಗಿದೆ. ಆರ್ಥಿಕ ಯೋಜನೆಗಳು ಕಾರ್ಯಗತವಾಗಿವೆ.ಮಾವೋ ಅಧಿಕಾರದ ವಿರುದ್ಧ ತಲೆಯೆತ್ತಿದ್ದ ವ್ಯಕ್ತಿಗಳನ್ನು, ಭಾವನೆಗಳನ್ನು ಹತ್ತಿಕ್ಕಲು 1966ರಲ್ಲಿ ಸಾಂಸ್ಕøತಿಕ ಕ್ರಾಂತಿ ನಡೆಯಿತು. ಮಾವೋ ಪರವಾಗಿ ವಿದ್ಯಾರ್ಥಿಗಳು ರೆಡ್ ಗಾರ್ಡ್‍ಗಳೆಂಬ ಸಂಘ ರಚಿಸಿಕೊಂಡು ಮಾವೋ ವಿರುದ್ಧವಾಗಿದ್ದ ವ್ಯಕ್ತಿಗಳನ್ನು ನಾಶಮಾಡಿದರು. ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಬದಲಾವಣೆಗಳಾಗಿವೆ. (ಎಂ.ವಿ.ಕೆ.; ಜಿ.ಆರ್.ಆರ್.)

ಗಿ ಆರ್ಥಿಕ ಅಭಿವೃದ್ಧಿ ಚೀನದ ಆಧುನಿಕ ಆರ್ಥಿಕ ಇತಿಹಾಸ 1842ರಲ್ಲಿ ಪ್ರಾರಂಭವಾಯಿತು ಎನ್ನಬಹುದು. ಆ ವರ್ಷ ಬ್ರಿಟಿಷರು ಭಾರತದ ಅಫೀಮನ್ನು ಚೀನದೊಳಕ್ಕೆ ತಂದರು. ಇದರಿಂದ ಚೀನ ಹೊರಜಗತ್ತಿಗೆ ಹೆಚ್ಚು ಪರಿಚಯವಾದಂತಾಯಿತು. ಆದರೆ ಈ ಅಫೀಮಿನ ವ್ಯವಹಾರ ಮತ್ತು ಅಭ್ಯಾಸದಿಂದ ಚೀನದ ಆರ್ಥಿಕ ಸ್ವಾವಲಂಬನೆ ಮತ್ತು ಆಂತರಿಕ ಭದ್ರತೆಯ ಬುಡವೆ ಅಲುಗಾಡುವಂತಾಯಿತು. ದೇಶ ಸ್ವತಂತ್ರ ಸಾರ್ವಭೌಮಾಧಿಕಾರವನ್ನು ಪಡೆದಿದ್ದರೂ ವಾಸ್ತವವಾಗಿ ಅದು ಅರೆವಸಾಹತಿನ ಮಟ್ಟಕ್ಕಿಳಿದಿತ್ತು. ಇದು ಆರ್ಥಿಕ ಸಾಮಾಜಿಕ ಬೆಸುಗೆಯನ್ನು ಸಡಿಲಿಸುವುದರ ಜೊತೆಗೆ ಸಮಾಜದಲ್ಲಿ ವರ್ಗಭೇದವನ್ನು ಹೆಚ್ಚಿಸಿತು. ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕಾಕರಣದಿಂದ ಕೃಷಿಯ ಪ್ರಾಬಲ್ಯ ಕುಗ್ಗಿತು. ಕೈಗಾರಿಕೋದ್ಯಮ ಮತ್ತು ಬಂಡವಾಳ ಹೂಡಿಕೆಗಳಲ್ಲಿ ವಿದೇಶಿ ಸ್ವಾಮ್ಯ ಹೆಚ್ಚಿತು. ಪಾಶ್ಚಾತ್ಯ ದೇಶಗಳ ಪ್ರಭಾವ ಮತ್ತು ಸವಾಲುಚೀನದ ನಾಗರಿಕತೆ ಮತ್ತು ಜೀವನಕ್ರಮಗಳನ್ನು ಬದಲಾಯಿಸಿದುವು. ಚೀನೀಯರು ಆಧುನೀಕರಣದೆಡೆಗೆ ತಮ್ಮ ಒಲವು ತೋರಿಸಿದರು. ಹೀಗೆ 19ನೆಯ ಶತಮಾನದಲ್ಲಿ ಚೀನದ ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಂಡುವು. ನಿಧಾನವಾಗಿಯಾದರೂ ಪ್ರಗತಿ ನಡೆದಿತ್ತು ಎಂಬುದು ಗಮನಾರ್ಹ.

ಚೀನದ ಆರ್ಥಿಕತೆಯ ಸ್ವರೂಪವನ್ನು 1911ರಲ್ಲಿ ಬದಲಾಯಿಸಿದ ಕೀರ್ತಿ, ಪ್ರಗತಿಪರ ವಿಚಾರ ದೃಷ್ಟಿಯನ್ನಿಟ್ಟುಕೊಂಡಿದ್ದ ಸುನ್ ಯಾಟ್‍ಸೆನ್‍ಗೆ ಸಲ್ಲುತ್ತದೆ. ಆ ವರ್ಷ ಮಂಚೂ ಮನೆತನದ ಆಡಳಿತವನ್ನು ಕಿತ್ತೊಗೆದು ಹೊಸ ಶಕೆಯೊಂದನ್ನು ಚೀನದ ಇತಿಹಾಸದಲ್ಲಿ ಪ್ರಾರಂಭಿಸಲಾಯಿತು. ಅನಂತರ ಪ್ರಾರಂಭವಾದ ಒಂದನೆಯ ಮಹಾಯುದ್ಧ ಚೀನದ ಆರ್ಥಿಕಾಭಿವೃದ್ಧಿಗೆ ಹೊಸ ಸ್ಪೂರ್ತಿಯನ್ನು ನೀಡಿತು. ಆದರೆ ವಿದೇಶೀಯರ ಹಸ್ತಕ್ಷೇಪ ದೇಶದ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿತು. ಸನ್ ಯಾಟ್‍ಸೆನ್ ಕಟ್ಟಿದ ಗ್ವೋಮಿನ್ ಟಾಂಗ್ ಪಕ್ಷದಲ್ಲಿ 1929ರ ವೇಳೆಗೆ ಒಡಕುಂಟಾಯಿತು. ಪಕ್ಷದಲ್ಲಿ ಪ್ರಬಲರೆನಿಸಿಕೊಂಡಿದ್ದ ಕೆಲವರಿಗೆ ರಷ್ಯದ ಸಂಪರ್ಕವಾಗಲಿ ಸಮಾಜವಾದದ ಪ್ರಚಾರವಾಗಲಿ ಹಿಡಿಸಲಿಲ್ಲ. ಸಾಮ್ಯವಾದಿಗಳು ಪ್ರಬಲರಾಗುವರೆಂದು ತಿಳಿದ ಇವರು ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಯೋಜನೆಯನ್ನು ಹಾಕಿಕೊಂಡರು. ಹೀಗೆ ಗ್ವೋಮಿನ್ ಟಾಂಗ್ ಸಾಮ್ಯವಾದ ವಿರೋಧಿ ಪಕ್ಷವೆನಿಸಿಕೊಂಡಿತು. ಈ ಭಿನ್ನಭಿಪ್ರಾಯದ ಫಲವಾಗಿ ರಾಷ್ಟ್ರೀಯ ಪಕ್ಷ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಉದಯಿಸಿದುವು. ಅಂತರ್ಯುದ್ಧದಲ್ಲಿ ಕಮ್ಯೂನಿಸ್ಟ್ ಪಕ್ಷ ರಾಷ್ಟ್ರೀಯ ಪಕ್ಷದ ಮೇಲೆ ಜಯ ಗಳಿಸಿ ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಈ ಮಧ್ಯೆ 1931ರಲ್ಲಿ ಜಪಾನೀ ಸೈನ್ಯ ಮಂಚೂರಿಯವನ್ನಾಕ್ರಮಿಸಿಕೊಂಡಿತು. 1937ರಲ್ಲಿ ಜಪಾನು ಇಡೀ ಚೀನವನ್ನು ಕಬಳಿಸುವ ಹವಣಿಕೆಯಲ್ಲಿತ್ತು. ಇದನ್ನರಿತ ಚೀನೀಯರು ಪಕ್ಷವಿಪಕ್ಷ ವೈಷಮ್ಯವನ್ನು ಮರೆತು ಒಟ್ಟುಗೂಡಿದರು. ಆದರೆ ಚಿಯಾಂಗ್ ಕೈ-ಷೇಕರ ಅಲಕ್ಷ್ಯ ಮನೋಭಾವದಿಂದಾಗಿ, ಜಪಾನೀಯರನ್ನು ಎದುರಿಸುವ ವೇಳೆಗಾಗಲೇ ಚೀನದ ವಿಸ್ತಾರ ಪ್ರದೇಶ ಜಪಾನೀಯರ ಹಸ್ತಗತವಾಗಿತ್ತು. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು.

ಚೀನ-ಜಪಾನ್ ಯುದ್ಧ 1939ರಲ್ಲಿ ಪ್ರಾರಂಭವಾದ ಎರಡನೆಯ ಮಹಾಯುದ್ಧದ ಒಂದು ಭಾಗವಾಗಿ ಪರಿಣಮಿಸಿತು. ಇದರ ಪರಿಣಾಮವಾಗಿ ಇತರ ದೇಶಗಳಂತೆ ಚೀನದಲ್ಲೂ ಆಶೆಬಡಕತನ, ಲಂಚ, ಸ್ವಜನಪಕ್ಷಪಾತ, ಅಧಿಕ ತೆರಿಗೆ, ಅಗಾಧ ಪ್ರಾಣನಷ್ಟ, ಮಾನವ ಹಕ್ಕುಗಳ ಬಗ್ಗೆ ಅಗೌರವ ಹಾಗೂ ತಿರಸ್ಕಾರ-ಇವು ಹೆಚ್ಚಿದುವು. 1945ರಲ್ಲಿ ಜಪಾನು ಸೋತು ಶರಣಾಯಿತು. ಆದರೆ ಚೀನದಲ್ಲಿ ರಾಜಕೀಯ ಐಕಮತ್ಯ ಮಾತ್ರ ಬಹುದೂರದ ಮಾತಾಗಿಯೇ ಉಳಿಯಿತು. ಜನರು ಪ್ರಸ್ತುತ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರು. ಕಮ್ಯೂನಿಸ್ಟ್‍ರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಇಡೀ ದೇಶದ ಮೇಲೆ ಸ್ವಾಮ್ಯ ಪಡೆದು ಹೊಸ ಸರ್ಕಾರವೊಂದನ್ನು ಸ್ಥಾಪಿಸಿದರು. ಇದರ ಫಲವಾಗಿ ಚೀನದಲ್ಲಿ ಸಮತಾವಾದ ಸ್ವರೂಪದ ಹೊಸ ಅರ್ಥವ್ಯವಸ್ಥೆಯ ರೂಪುಗೊಂಡಿತು.

ಚೀನ-ಜಪಾನ್ ಯುದ್ದ, ಎರಡನೆಯ ಮಹಾಯುದ್ಧ ಮತ್ತು ಅಂತರ್ಯುದ್ಧಗಳಿಂದಾಗಿ ಆರ್ಥಿಕತೆ ಛಿದ್ರಗೊಂಡಿತ್ತು. ಇದನ್ನು ನಿವಾರಿಸಿ ಆರ್ಥಿಕ ಸ್ಥರತೆಯ ಭರವಸೆ ಹೊಂದಲು ಒಂದು ಮಹಾ ಪ್ರಯತ್ನವೇ ಅಗತ್ಯವೆನಿಸಿತು. ಕಮ್ಯೂನಿಸ್ಟರ ಶಕ್ತಿಸಾಹಸಕ್ಕೆ ಆಗ ಇದೊಂದು ಸವಾಲು.

ಚೀನ-ಜಪಾನ್ ಯುದ್ಧಾರಂಭದಿಂದ ಜನತಾ ಗಣರಾಜ್ಯ ಸ್ಥಾಪನೆಯ ವರೆಗಿನ (1937-1949) ಹನ್ನೆರಡು ವರ್ಷಗಲಲ್ಲಿ ಚೀನದ ಆರ್ಥಿಕತೆಯಲ್ಲಿ ಹಲವು ಬದಲಾವಣೆಗಳಾದುವು. ಆ ಸಮಯದಲ್ಲಿ ಚೀನದ ಆರ್ಥಿಕ ಪರಿಸ್ಥಿತಿ ತುಂಬ ಅಸಮರ್ಪಕವಾಗಿತ್ತು. ಚೀನ ಕೃಷಿಪ್ರಧಾನ ನಾಡಾಗಿತ್ತು. ಆದರೆ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಮತ್ತು ಕೃಷಿ ಉತ್ಪನ್ನಶಕ್ತಿಗಳ ದೃಷ್ಟಿಯಿಂದ ಪ್ರಾದೇಶಿಕ ಸಮತೆ ಇರಲಿಲ್ಲ. ಉದಾಹರಣೆಗೆ ದೇಶದ ಈಶಾನ್ಯ ಭಾಗದ ಪ್ರದೇಶದಲ್ಲಿ ಗೋದಿ, ಸೊಯಾ ಬೀನ್ಸ್ ಬೆಳೆದರೆ ಮಧ್ಯ ಮತ್ತು ಉತ್ತರ ಭಾಗಗಳಲ್ಲಿ ಚಹ, ರೇಷ್ಮೆ, ಹತ್ತಿ ಮತ್ತು ಹೊಗೆಸೊಪ್ಪು ಬೆಳೆಯುತ್ತಿದ್ದುವು. ಷಿನ್‍ಜಿಯಾಂಗ್, ಜಜಿಯಾಂಗ್, ಷಾಂಗ್‍ಹೈ, ಟಿಬೆಟ್ ಪ್ರದೇಶಗಳಲ್ಲಿ ಗೋದಿ, ಮುಸುಕಿನಜೋಳ. ದಕ್ಷಿಣ ಭಾಗದ ಪ್ರದೆಶಗಳಲ್ಲಿ ಬತ್ತ ಮತ್ತು ಆಲೂಗೆಡ್ಡೆ ಬೆಳೆಯುತ್ತಿದ್ದುವು. ಈ ಉತ್ಪನ್ನಗಳ ಪೈಕಿ ಚಹ ಮತ್ತು ರೇಷ್ಮೆ ರಫ್ತಾಗುತ್ತಿದ್ದುವು. ಆದರೆ ವಿದೇಶಿ ಪೈಪೋಟಿಯಿಂದ ವಿಶ್ವ ಮಾರುಕಟ್ಟೆಯಲ್ಲಿ ಚೀನದ ಚಹ ಮತ್ತು ರೇಷ್ಮೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಯಿತು. ಇದು ಚೀನದ ವಿದೇಶಿ ವಿನಿಮಯ ಸಮಸ್ಯೆಗಳನ್ನು ಉಲ್ಬಣಗೊಳಿಸಿತು. ಚೀನದ ರೈತ ಇತರ ಕೃಷಿಪ್ರಧಾನ ದೇಶಗಳ ರೈತರಿಗಿಂತ ಹೆಚ್ಚು ಉತ್ಪಾದಿಸಿದರೂ ಸರಾಸರಿ ಹಂಚಿಕೆಯ ದೃಷ್ಟಿಯಿಂದ ಅದು ತೀರ ಕಡಿಮೆ ಎನಿಸಿತ್ತು. ಇದರ ಪರಿಣಾಮವಾಗಿ ರೈತ ಕುಟುಂಬಗಳು ಅರೆಹೊಟ್ಟೆ ಊಟ ಮಾಡಬೇಕಾದ ಪರಿಸ್ಥಿತಿ ಒದಗಿತ್ತು. ಅಧಿಕ ದರದ ತೆರಿಗೆ, ಗೆಣಿ ಮತ್ತು ಬಡ್ಡಿ ತೆತ್ತು ಬದುಕುವುದೇ ಒಂದು ಸಮಸ್ಯೆಯಾಗಿತ್ತು. ದೊಡ್ಡ ಜಮೀನುಗಳು ಐಶ್ವರ್ಯವಂತರ ಮತ್ತು ವರ್ತಕವರ್ಗದವರ ಆಸ್ತಿಯಾಗಿದ್ದುವು. ಇದರಿಂದ ಗೇಣಿದಾರರು ವಾಸ್ತವವಾಗಿ ಗುಲಾಮರಂತೆಯೇ ಬಾಳಬೇಕಾದ ಪರಿಸ್ಥತಿಯಿತ್ತು. ಭೂ ಸಮಸ್ಯೆಯನ್ನು ನಿವಾರಿಸಿ ಕೃಷಿಕ ಮತ್ತು ಗೇಣಿದಾರರಿಗೆ ನ್ಯಾಯ ದೊರಕಿಸಿ ಕೊಡುವುದು ಕೇವಲ ಕಾಗದದ ಮೇಲಿನ ಯೋಜನೆಯಾಗಿಯೇ ಉಳಿದುಕೊಂಡಿತ್ತು. ಹೀಗೆ ರೈತವರ್ಗದ ಸ್ಥಿತಿಗತಿಗಳು ತುಂಬ ಅಸಮರ್ಪಕವಾಗಿದ್ದುವು.

ಈ ಅವಧಿಯಲ್ಲಿ ಸಾರಿಗೆ ಸಂಕರ್ಕ ಸಾಧನಗಳು ಅಷ್ಟು ತೃಪ್ತಿಕರವಾಗಿರಲಿಲ್ಲ ಪಾಶ್ಚಾತ್ಯ ದೇಶಗಳು ಚೀನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಸಕ್ತ ಪ್ರದೇಶಗಳಲ್ಲಿ ಮಾತ್ರ ರೈಲು ಮಾರ್ಗಗಳನ್ನು ನಿರ್ಮಿಸಿಕೊಂಡಿದ್ದುವು. ಇದರ ಫಲವಾಗಿ 1936ರ ವೇಳೆಗೆ ದೇಶಾದ್ಯಂತ ಒಟ್ಟು ಕೇವಲ 10,000 ಮೈ. ರೈಲು ಮಾರ್ಗಗಳಿದ್ದುವು. ಚೀನ-ಜಪಾನ್ ಯುದ್ಧದಿಂದ ಇದು ಅಪಾರನಷ್ಟಕ್ಕೆ ಒಳಗಾಗಿತ್ತು. ರಸ್ತೆ ಸಾರಿಗೆ, ಒಳನಾಡಿನ ಜಲಮಾರ್ಗ ಮತ್ತು ಸಮುದ್ರಯಾನ ಸೌಲಭ್ಯಗಳೂ ಅಗತ್ಯಕ್ಕನುಗುಣವಾಗಿರಲಿಲ್ಲ. ವಿದೇಶಿ ವ್ಯಾಪಾರ ಚೀನವನ್ನು ಆರ್ಥಿಕ ಶೋಷಣೆಗೆ ಒಳಪಡಿಸಿತ್ತು. ಬ್ರಿಟನ್ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಏಕಪಕ್ಷೀಯ ವ್ಯಾಪಾರನೀತಿಯನ್ನು ಅನುಸರಿಸಿದ್ದುವು. ಇದರಿಂದ ಚೀನದ ಆರ್ಥಿಕಾಭಿವೃದ್ಧಿಗೆ ಸಾಕಷ್ಟು ಅವಕಾಶ ಇರಲಿಲ್ಲ.

ದೇಶದಲ್ಲಿ ಕೈಗಾರಿಕಾರಣ ತೃಪ್ತಿಕರವಾಗಿ ನಡೆಯುತ್ತಿರಲಿಲ್ಲ. ಏಕೆಂದರೆ, ಸಾಮಾನ್ಯವಾಗಿ ಎಲ್ಲ ಕೈಗಾರಿಕೋದ್ಯಮಗಳೂ ಇದ್ದದ್ದು ವಿದೇಶಿ ಒಡೆತನ ಮತ್ತು ಆಡಳಿತಗಳಲ್ಲಿ. 1931ರಲ್ಲಿ ಒಟ್ಟು ಬಂಡವಾಳ ಹೂಡಿಕೆಯಲ್ಲಿ ಬ್ರಿಟನ್, ಜಪಾನ್, ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಅನುಕ್ರಮವಾಗಿ ಸೇಕಡ 49, 24, 19 ಮತ್ತು 8ರಷ್ಟು ಪಾಲು ಹೊಂದಿದ್ದವು. ಕೈಗಾರಿಕೋದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸ್ಥಿತಿಗತಿಗಳು ಸಹ ತೀರ ಅತೃಪ್ತಿಕರವಾಗಿದ್ದುವು. ಕಾರ್ಮಿಕ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದುವು. ಕುಶಲ ಕೆಲಸಗಾರರ ಸ್ಥಿತಿಯಂತೂ ತುಂಬ ಅಸಮರ್ಪಕವಾಗಿತ್ತು.

ಆರ್ಥಿಕ ಕ್ಷೇತ್ರದಲ್ಲಿ ಹಣಕಾಸು ಮತ್ತು ಬ್ಯಾಂಕುಗಳ ಪಾತ್ರ ಮಹತ್ತ್ವಪೂರ್ಣವೆಂದು ಪರಿಗಣಿಸಲಾಗಿತ್ತು. ಚೀನ ರಜತ ಪ್ರಮಿತಿ ಹಣ ಪದ್ಧತಿಯನ್ನು ಜಾರಿಗೆ ತಂದಿದ್ದರೂ ವಾಸ್ತವವಾಗಿ ಆಗ ಒಂದು ಖಚಿತ ಹಣಪದ್ಧತಿ ಇರಲಿಲ್ಲವೆಂಬುದು ಅಂದಿನ ಆರ್ಥಿಕ ಅವ್ಯವಸ್ಥೆಯಿಂದ ಗೊತ್ತಾಗುತ್ತದೆ. ಚಲಾವಣೆಯಲ್ಲಿದ್ದ ನಾಣ್ಯಗಳು ಒಂದೇ ತೂಕ ಮತ್ತು ವಿನ್ಯಾಸದಿಂದ ಕೂಡಿರಲಿಲ್ಲ. ಕೇಂದ್ರೀಯ ನೋಟು ಮುದ್ರಣ ಪದ್ಧತಿಯೇನೂ ಇರಲಿಲ್ಲ. ವಿದೇಶಿ ಬ್ಯಾಂಕುಗಳು ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತಿದ್ದುವು. 1935ರ ವೇಳೆಗೆ ರಜತ ಪ್ರಮಿತಿಯನ್ನು ರದ್ದುಪಡಿಸಿ ವಿದೇಶಿ ವಿನಿಮಯ ಪ್ರಮಿತಿಯನ್ನು ಜಾರಿಗೆ ತರುವುದರ ಮೂಲಕ ಹಣವ್ಯವಸ್ಥೆಯನ್ನು ಸರಿಪಡಿಸಲಾಯಿತು. ಆದರೆ ಚೀನ-ಜಪಾನ್ ಯುದ್ಧ ಇದನ್ನು ಮತ್ತೆ ಅಸ್ತವ್ಯಸ್ತಗೊಳಿಸಿತು. ಈ ಸಮಸ್ಯೆಗಳ ಸ್ವರೂಪವನ್ನು ತಿಳಿದು ಇವುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ಗುರುತರ ಜವಾಬ್ದಾರಿ ಜನತಾ ಗಣರಾಜ್ಯ ಸರ್ಕಾರದ ಹೊಣೆಯಾಯಿತು.

ಆ ಹನ್ನೆರಡು ವರ್ಷಗಳ ಅವಧಿಯಲ್ಲಿ ಚೀನದ ಜನ ನಾನಾ ತೊಂದರೆಗಳನ್ನು ಅನುಭವಿಸಿದರು. ಎಲ್ಲ ಸಮಸ್ಯೆಗಳಿಗಿಂತ ಉತ್ವಾದನೆ ಬಂಡವಾಳಗಳ ಸಮಸ್ಯೆಗಳು ಪ್ರಮುಖವೆನಿಸಿಕೊಂಡಿದ್ದುವು. ಜೊತೆಗೆ ಹಣದುಬ್ಬರ ತೀವ್ರವಾಗಿ ಆರ್ಥಿಕ ವಿಷಮತೆಯನ್ನು ಉಲ್ಬಣಾವಸ್ಥೆಗೇರಿಸಿತ್ತು. ಆದರೂ ಆ ವೇಳೆಗಾಗಲೇ ಚೀನದ ಆರ್ಥಿಕತೆಯ ಸ್ವರೂಪವನ್ನು ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೈಗಾರಿಕಾ ಸಹಕಾರೋದ್ಯಮಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದುವು. ಈ ಸಹಕಾರ ಸಂಸ್ಥೆಗಳು ಕೆಲಕಾಲ ಗ್ವೋಮಿನ್ ಟಾಂಗ್ ಕೋಪಕ್ಕೆ ತುತ್ತಾದರೂ ನವ ಚೀನವನ್ನು ನಿರ್ಮಿಸುವ ಜನಾಂಗಕ್ಕೆ ತರಬೇತು ಕೇಂದ್ರಗಳೆನಿಸಿಕೊಂಡುವು. ಕಮ್ಯೂನಿಸ್ಟರು ಜನತಾ ಗಣರಾಜ್ಯ ಸ್ಥಾಪಿಸಿಕೊಂಡು ಹೋರಾಟ ಮುಂದುವರಿಸಿದರು. ವಿಮೋಚಿತ ಪ್ರದೇಶಗಳಲ್ಲಿ ರೈತವರ್ಗದ ಹಾಗೂ ಇತರ ವೃತ್ತಿನಿರತ ಜನರ ಆಶಾಕಾಂಕ್ಷೆಗಳನ್ನು ಈಡೇರಿಸುವುದರಲ್ಲಿ ಯಶಸ್ವಿಯಾದರು. ರೈತರಿಗೆ ಗ್ರಾಮದೇವತೆಗಳ ಒಡೆತನ ನೀಡಿದರು. ಇದು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿತು. ಊಳಿಗಮಾನ್ಯ ಪದ್ಧತಿಯನ್ನು ತೊಡೆದು ಹಾಕಲಾಯಿತು. ಇದು ಪ್ರಜಾಸತ್ತೆಗೆ ದಾರಿ ಮಾಡಿಕೊಟ್ಟತು. ಇದರ ಫಲವಾಗಿ ಕಮ್ಯೂನಿಸ್ಟರು ಯುದ್ಧವನ್ನು ಗೆಲ್ಲುವುದರ ಜೊತೆಗೆ ಇಡೀ ಚೀನದ ಜನತೆಯ ಮನಸ್ಸನ್ನು ಗೆದ್ದುಕೊಂಡರು.

ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಸಂಘ ಸಂಸ್ಥೆಗಳಿಗೆ ವಿಶಿಷ್ಟ ಸ್ಥಾನ ಕೊಡಲಾಯಿತು. ಸಹಕಾರ ಸಾಧನದ ಮೂಲಕ ಆರ್ಥಿಕ ಶಕ್ತಿಯನ್ನು ಒಟ್ಟು ಗೂಡಿಸುವ ಪ್ರಯತ್ನ ಯಶಸ್ವಿಯಾಯಿತು. ಸಹಕಾರ ತತ್ತ್ವಗಳು ಕೃಷಿ, ಕೈಗಾರಿಕೆ, ವ್ಯಾಪಾರ, ಸಾರಿಗೆ ಇವೇ ಮೊದಲಾದ ಕ್ಷೇತ್ರಗಳಲ್ಲಿ ಅನುಷ್ಠಾನಕ್ಕೆ ಬಂದವು. ಹೀಗೆ ರಾಷ್ಟ್ರ ಪುನರ್ನಿರ್ಮಾಣಕಾರ್ಯದಲ್ಲಿ ಸಹಕಾರ ನಿಯಮ ಪಾಲನೆಯ ಮೂಲಕ ಸರ್ಕಾರ, ಅಧಿಕಾರಿ, ನೌಕರ, ಕಾರ್ಮಿಕ, ರೈತ-ಇವರೆಲ್ಲರೂ ಮನಃಪೂರ್ವಕವಾಗಿ ದುಡಿಯಲಾರಂಭಿಸಿದರು. ಅಧ್ಯಕ್ಷ ಮಾವೋ ತ್ಸೆ ಡುಂಗ್ ಆದಿಯಾಗಿ ಎಲ್ಲರೂ ತಮ್ಮ ಶಕ್ತಿಯನ್ನು ಉತ್ಪಾದನಕ್ಷೇತ್ರದಲ್ಲಿ ವಿನಿಯೋಗಿಸಿದರು. ಇದರ ಫಲವಾಗಿ ಚೀನದ ಆರ್ಥಿಕತೆಗೆ ಒಂದು ಹೊಸ ರೂಪ ಬಂದಂತಾಯಿತು. ಹೀಗೆ ಕಮ್ಯೂನಿಸ್ಟ್ ಸರ್ಕಾರ ಆರ್ಥಿಕ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ 1949ರಿಂದ 1952ರ ವರೆಗೆ ಆರ್ಥಿಕ ಪುನರ್‍ವ್ಯವಸ್ಥೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿತು. ಯುದ್ಧದ ಹಿಂದಿನ ಆರ್ಥಿಕ ಮಟ್ಟವನ್ನು ಮುಟ್ಟುವುದು ಸಾಧ್ಯವಾಯಿತು. ಈ ಮಧ್ಯೆ ಭೂ ಸುಧಾರಣೆ ಜಾರಿಗೆ ಬಂದದ್ದು ಒಂದು ಮುಖ್ಯ ಘಟನೆ. ಸರ್ಕಾರ ಕೈಗಾರಿಕೋದ್ಯಮ ಮತ್ತು ವಾಣಿಜ್ಯಗಳ ಮೇಲೆ ತನ್ನ ಹಿಡಿತ ವಿಸ್ತರಿಸಿತು. ಮೊದಲನೆಯ ಪಂಚವಾರ್ಷಿಕ ಯೋಜನೆಯ (1953-57) ಕೇಂದ್ರೀಕರಣಕಾರ್ಯಕ್ರಮಕ್ಕೆ ರಷ್ಯದ ಬಂಡವಾಳ ಹೂಡಲಾಯಿತು. ಕೈಗಾರಿಕ ಕ್ಷೇತ್ರವನ್ನು ಗಣನೀಯವಾಗಿ ವಿಸ್ತರಿಸಲು ಸಾಧ್ಯವಾದ್ದು ಇದರಿಂದ ಕೃಷಿ ಮತ್ತು ಅನುಭೋಗ ವಸ್ತುಗಳ ಉತ್ಪಾದನೆಗೆ ಸಾಕಷ್ಟು ಗಮನ ನೀಡದಿದ್ದರೂ ಸಾಮುದಾಯಿಕ ಹಿಡುವಳಿಗಳ ವಿಂಗಡಣೆ, ಪರಸ್ಪರ ಸಹಾಯ, ಸಹಕಾರ ಸಂಘಗಳ ಸ್ಥಾಪನೆ ಇವು ಈ ಅವಧಿಯಲ್ಲಿ ಆದ ಕೆಲವು ಸಾಧನೆಗಳು.

ಮೊದಲನೆಯ ಪಂಚವಾರ್ಷಿಕ ಯೋಜನೆ ಮುಗಿಯುವ ವೇಳೆಗೆ ಕೇಂದ್ರೀಕೃತ ಆರ್ಥಿಕಾಧಿಕಾರವನ್ನು ವರ್ಗಾಯಿಸಿ ವಿಕೇಂದ್ರಿಕರಣ ವಿಧಾನವನ್ನು ಜಾರಿಗೆ ತರಲಾಯಿತು. ಆದರೆ ಎರಡನೆಯ ಪಂಚವಾರ್ಷಿಕ ಯೋಜನೆಯ ಪ್ರಾರಂಭದ ವರ್ಷದಲ್ಲಿಯೇ ಕಮ್ಯೂನಿಸ್ಟ್ ಪಕ್ಷ ಶಕ್ತಿಸಮತೋಲವನ್ನು ಕಾಪಾಡಿಕೊಳ್ಳಲು ಆರ್ಥಿಕಾಧಿಕಾರದ ಕೇಂದ್ರೀಕರಣ ನೀತಿಯನ್ನು ಪುನಃ ಜಾರಿಗೆ ತಂದಿತು. ಆಥಿಕ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿದ್ದ ರಷ್ಯನ್ ಮಾದರಿಯನ್ನು ಕೈಬಿಡಲಾದ್ದು ಆಗ ಹಳೆ ಮತ್ತು ಹೊಸ ವಿಧಾನಗಳನ್ನು ಬಳಸಿಕೊಂಡು ಆರ್ಥಿಕಾಭಿವೃದ್ಧಿಯನ್ನು ತೀವ್ರಗೊಳಿಸುವ ಪದ್ದತಿ ಜಾರಿಗೆ ಬಂತು. ಇದರ ಫಲವಾಗಿ ಕೃಷಿ ಉತ್ಪಾದನೆ ಅಧಿಕವಾಯಿತು. ಸಹಕಾರ ಸಂಘಗಳು ಸಂಘಟಿಸಲ್ಪಟ್ಟುವು. ವಿವಿಧೋದ್ದೇಶ ಘಟಕ ಮತ್ತು ಜನತಾ ಕಮ್ಯೂನ್‍ಗಳು ರೂಪುಗೊಳ್ಳುವುದಕ್ಕೆ ದಾರಿಯಾದ್ದು ಇವುಗಳಿಂದ. ಇದರ ಪರಿಣಾಮವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ನರೀಕ್ಷೆಗೆ ಮೀರಿದ ಪ್ರಗತಿ ಫಲಗಳು ಗೋಚರಿಸಿದುವು. ಇದು ಚೀನದ ಆರ್ಥಿಕ ಇತಿಹಾಸದಲ್ಲಿ ಮಹಾ ಜಿಗಿತ ಎಂದು ಪ್ರಸಿದ್ಧವಾಗಿದೆ. ಆದರೆ ಮಹಾ ಜಿಗಿತದ ಮುಖ್ಯ ದೋಷವೆಂದರೆ ತೀವ್ರ ಕೇಂದ್ರೀಕರಣ ಪ್ರವೃತ್ತಿ. ಇದು ಸರ್ಕಾರಕ್ಕೆ ಮನವರಿಕೆಯಾದ್ದು 1959ರ ವೇಳೆಗೆ ಇದನ್ನು ಸರಿಪಡಿಸುವ ವೇಳೆಗೆ ಉತ್ಪಾದನೆ ಹೆಚ್ಚಿತ್ತು. 1962ನೆಯ ವರ್ಷ ಶುಭ ಸೂಚಕವೆಂದೆನಿಸಿಕೊಂಡಿತು. ಮೂರನೆಯ ಪಂಚವಾರ್ಷಿಕ ಯೋಜನೆ 1966ಕ್ಕೆ ಮೊದಲು ಪ್ರಾರಂಭವಾಗಲಿಲ್ಲ. ಮಹಾ ಜಿಗಿತದ ಕಹಿ ಸನುಭವದ ಫಲವಾಗಿ ಕೈಗಾರಿಕಾಕರಣ ನಿಧಾನವಾಗಿತ್ತು. ಆದ್ದರಿಂದ ಈ ಅವದಿಯಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ಕ್ರಾಂತಿಯನ್ನು ಪ್ರಾರಂಭಿಸಲಾಯಿತು. ಕಮ್ಯೂನಿಸ್ಟ್ ಪಕ್ಷ ಮತ್ತು ಸೇನಾ ವಿಭಾಗಗಳಿಗೆ ನಿಕಟ ಸಂಬಂಧವೇರ್ಪಟ್ಟಿದ್ದು ಇದರ ಫಲ. ಸಕಾರದ ಎಲ್ಲ ಮಟ್ಟದ ಅಧಿಕಾರವೂ ಪಕ್ಷದಲ್ಲಿ ಕೇಂದ್ರೀಕೃತವಾಯಿತು. ಆದರೆ 1966ರ ವೇಳೆಗೆ ಭಿನ್ನಾಭಿಪ್ರಾಯಗಳು ತಲೆದೋರಿದುವು. ಇವನ್ನು ಪರಿಹರಿಸುವುದು ಚೀನೀ ಸರ್ಕಾರಕ್ಕೆ ಒಂದು ದೊಡ್ಡ ಸಮಸ್ಯೆಯಾಗಿಯೇ ಪರಿಣಮಿಸಿತು.

ಇಂದು ಕಮ್ಯೂನಿಸ್ಟ್ ಪಕ್ಷ ಮತ್ತು ಸರ್ಕಾರಗಳು ಆಡಳಿತ ಮತ್ತು ಆರ್ಥಿಕಾಧಿಕಾರಗಳನ್ನು ಒಟ್ಟಿಗೆ ನಡೆಸಿದರೂ ಪಕ್ಷದ ತೀಮಾನವೇ ಕೊನೆಯದು. ಆರ್ಥಿಕ ವ್ಯವಹಾರ, ನೀತಿನಿರ್ಣಯ ಎಲ್ಲ ಹೊಣೆಯೂ ಅಂತಿಮವಾಗಿ ಪಕ್ಷದ್ದೆ. ಚೀನದ ಸಂವಿಧಾನದಲ್ಲಿ ಆರ್ಥಿಕತೆಯ ಬಗ್ಗೆ ಸ್ಪಷ್ಟ ವಿವರನೆಯಿದೆ. ಅದರ ಪ್ರಕಾರ ಮುಖ್ಯವಾಗಿ ನಾಲ್ಕು ಬಗೆಯ ಉತ್ಪಾದನೋದ್ಯಮ ಒಡೆತನವನ್ನು ವ್ಯವಸ್ಥೆಗೊಳಿಸಲು ಅವಕಾಶವಿದೆ : 1. ಸರ್ಕಾರಿ ಒಡೆತನ, 2. ಸಹಕಾರಿ ಅಥವಾ ಸಾಮೂಹಿಕ ಒಡೆತನ, 3. ವೈಯಕ್ತಿಕ ಒಡೆತನ, 4. ಬಂಡವಾಳ ಒಡೆತನ.

1. ಸರ್ಕಾರಿ ಒಡೆತನ ಕೆಲಸ ಮಾಡುವ ವಿಧಾನ ಹೀಗೆದೆ : ಚಿಯೆಹ್ ಎಂಬ ಸಂಸ್ಥೆಗಳು ವಿವಿಧ ಕೈಗಾರಿಕೆ ಮತ್ತು ಉದ್ಯಮಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತವೆ. ಈ ಸಂಸ್ಥೆಗಳು ಕುಂಗ್ಸ್‍ಜೆ ಎಂಬ ಮಹಾ ಸಂಸ್ಥೆಯ ಆಡಳಿತದಲ್ಲಿರುತ್ತವೆ. ಇದರಿಂದ ಸರ್ಕಾರ ಕೈಗಾರಿಕೋದ್ಯಮಿಗಳ ಮೇಲೆ ನೇರ ಹತಫಟಿ ಇಟ್ಟುಕೊಂಡಿರಲು ಸಾಧ್ಯವಾಗುತ್ತದೆ. ಕೆಲಸ ಮಾಡುವ ಕಾರ್ಮಿಕರಿಗೆ ವೇತನ ದೊರೆಯುತ್ತದೆ. ಲಾಭ ಖಜಾನೆಗೆ ಸೇರುತ್ತದೆ. ಕೈಗಾರಿಕೋದ್ಯಮಗಳು ಸ್ವಲ್ಪ ಮಟ್ಟಿಗೆ ಸ್ವಂತ ಆಸ್ತಿ ಪಡೆದುಕೊಳ್ಳಲು ಅವಕಾಶವುಂಟು. ತನ್ನ ಬಂಡವಾಳವನ್ನು ರಕ್ಷಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಪ್ರತಿಯೊಂದು ಕೈಗಾರಿಕೋದ್ಯಮಕ್ಕೂ ಇದೆ. ಇದು ಆರ್ಥಿಕ ಗಣನೆಗೆ ಅನುಸಾರವಾಗಿ ನಡೆಯುತ್ತಿರುತ್ತದೆ.

2. ಸಹಕಾರ ಅಥವಾ ಸಾಮಾಜಿಕ ಒಡೆತನ ಮುಖ್ಯವಾಗಿ ಸಾಮೂಹಿಕ ಬೇಸಾಯ ಘಟಕ. ಇದು ಕರಕೌಶಲ, ಸರಬರಾಯಿ, ಮಾರುಕಟ್ಟೆ ಮತ್ತು ಲೇವಾದೇವಿ ಸಹಕಾರ ಸಂಘ ಹಾಗೂ ಘಟಕಗಳನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆ. ಈ ಸಂಸ್ಥೆಗಳೂ ಸರ್ಕಾರಿ ಸ್ವಾಮ್ಯದ ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಎಲ್ಲ ಖರ್ಚನ್ನು ಕಳೆದು ಉಳಿದ ಆದಾಯದ ಒಂದು ಭಾಗವನ್ನು ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಮತ್ತು ನೌಕರರಿಗೆ ವೇತನ ರೂಪದಲ್ಲಿ ಕೊಡಲಾಗುತ್ತದೆ.

3. ಶ್ರಮಜೀವಿಗಳು ವಾಸಿಸುವ ಮನೆ, ರೈತರ ಖಾಸಗಿ ಗೃಹ, ಕುಶಲ ಕೆಲಸ, ಸಣ್ಣ ಗಾತ್ರದ ಕಾರ್ಯಾಗಾರ ಇವುಗಳಿಗೆ ಸಂಬಂಧಿಸಿದ್ದು ವೈಯಕ್ತಿಕ ಒಡೆತನ. ಕಾರ್ಯಾಗಾರಗಳಲ್ಲಿ ಪ್ರತ್ಯೇಕವಾಗಿ ಮೂರು ಜನ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳಬಹುದು. ಇದಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದಾದರೆ ಅಂಥ ಉದ್ಯಮವನ್ನು ಸರ್ಕಾರಿ-ಖಾಸಗಿ ಜಂಟಿ ಉದ್ಯಮಘಟಕ ಅಥವಾ ತಯಾರಿಕಾ ಸಂಸ್ಥೆಯನ್ನಾಗಿ ಪರಿವರ್ತಿಸಲಾಗುತ್ತದೆ. ವೈಯಕ್ತಿಕ ಒಡೆತನ ಮತ್ತು ಆಸ್ತಿಪಾಸ್ತಿ ಊರ್ಜಿತಪಡಿಸುವುದನ್ನು 1966ರಲ್ಲಿ ರೆಡ್ ಗಾರ್ಡ್‍ಗಳು ಪ್ರತಿಭಟಿಸಿದ್ದರು. ಇದರ ಪರಿಣಾಮವೇನಾಯಿತು ಎಂಬುದು ಇನ್ನೂ ತಿಳಿದಿಲ್ಲ.

4. ಬಂಡವಾಳ ಒಡೆತನದ ಪ್ರಸ್ತಾಪ 1954ರ ಸಂವಿಧಾನದಲ್ಲಿದ್ದರೂ ಅನಂತರದ ವರ್ಷಗಳಲ್ಲಿ ಇದನ್ನು ಸರ್ಕಾರಿ-ಖಾಸಗಿ ಒಡೆತನವನ್ನಾಗಿ ಪರಿವರ್ತಿಸಲಾಯಿತು. ಇದರಲ್ಲಿ ಸರ್ಕಾರ ಹೆಚ್ಚು ಅಧಿಕಾರವನ್ನೂ ಹೊಂದಿವೆ. (ಕೆ.ಆರ್.ಎನ್.)

ಚೀನ-ಜಪಾನ್ ಯುದ್ಧಗಳು : 1894-95ರಲ್ಲೂ 1937-45ರಲ್ಲೂ ಚೀನಕ್ಕೂ ಜಪಾನಿಗೂ ನಡುವೆ ನಡೆದ ಯುದ್ಧಗಳು. ಕೊರಿಯದ ಮೇಲಣ ಸ್ವಾಮ್ಯಕ್ಕಾಗಿ ಈ ರಾಷ್ಟ್ರಗಳ ನಡುವೆ ಹುಟ್ಟಿದ ವ್ಯಾಜ್ಯದಿಂದಾಗಿ 1894-95ರ ಯುದ್ಧ ಸಂಭವಿಸಿತು. ಕೊರಿಯ ಬಹುಕಾಲದಿಂದ ಚೀನದ ಅಧೀನದಲ್ಲಿತ್ತು. ಆದರೆ ಈ ಅಧೀನತೆಯ ಸ್ವರೂಪ ಅಸ್ಪಷ್ಟವಾಗಿತ್ತು. 1880ರಿಂದ ಚೀನ ಅದರ ಮೇಲೆ ತನ್ನ ಹತೋಟಿ ಹೆಚ್ಚಿಸಿಕೊಳ್ಳಲು ಆರಂಭಿಸಿತು. ಎರಡು ಶತಮಾನಗಳ ಪ್ರತ್ಯೇಕತೆಯ ಸ್ಥಿತಿಯಿಂದ ಹೊರಬಂದು ಬಲಿಷ್ಠವಾಗಿ ಬೆಳೆಯತೊಡಗಿದ್ದ ಜಪಾನ್ ಕೊರಿಯದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕೊರಿಯದಲ್ಲಿದ್ದ ಕಲ್ಲಿದ್ದಲು ಮತ್ತು ಕಬ್ಬಿಣ ಅದಿರುಗಳ ನಿಕ್ಷೇಪಕ್ಕಾಗಿಯೂ ಅದರ ಆಯಕಟ್ಟಿನ ಸ್ಥಾನದಿಂದಾಗಿಯೂ ಜಪಾನಿಗೆ ಕೊರಿಯದಲ್ಲಿ ಆಸಕ್ತಿ ಬೆಳೆಯಿತು. ಅದೊಂದು ಸ್ವತಂತ್ರ ರಾಷ್ಟ್ರವೆಂಬಂತೆ ಅದರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತು. ಕೊರಿಯ ತನಗೆ ಪೊಗದಿ ಕೊಡುವ ದೇಶವೆಂದು ಹೇಳಿಕೊಳ್ಳತ್ತಿದ್ದ ಚೀನ ಇದನ್ನು ಸಹಿಸಲಿಲ್ಲ. ಕೊರಿಯದಲ್ಲಿ ಆಗ ಎರಡು ಗುಂಪುಗಳಿದ್ದುವು. ಒಂದು ಗುಂಪು ಚೀನೀ ಪರ, ಇನ್ನೊಂದು ಜಪಾನೀ ಪರ. ಇವೆರಡರ ನಡುವೆ ಘರ್ಷಣೆ ಏರ್ಪಟ್ಟಾಗ ಚೀನ-ಜಪಾನ್‍ಗಳೆರಡೂ ಕೊರಿಯಕ್ಕೆ ತಂತಮ್ಮ ಸಯನ್ಯ ಕಳಿಸಿದುವು. ಚೀನೀಪರವಾದ ಗುಂಪಿನದು ಮೇಲುಗೈ ಆಗಿತ್ತು. ಆ ಸಮಯದಲ್ಲಿ ಜಪಾನು ಯುದ್ಧಮಾಡಲು ಇಚ್ಛಿಸಲಿಲ್ಲ (1887). ಇವುಗಳ ನಡುವೆ ಶಾಂತಿ ಕೌಲು ಏರ್ಪಟ್ಟಿತು.

1894ರಲ್ಲಿ ಇನ್ನೊಂದು ಬಿಕ್ಕಟ್ಟು ಒದಗಿತು. ಕೊರಿಯದಲ್ಲಿ ಎದ್ದಿದ್ದ ಭಾರಿ ಬಂಡಾಯವನ್ನು ಹತ್ತಿಕ್ಕಲು ಕೊರಿಯದ ದೊರೆಯ ಅಪೇಕ್ಷೆಯ ಮೇರೆಗೆ ಚೀನ ಅಲ್ಲಿಗೆ ಸೈನ್ಯ ಕಳಿಸಿತು. ಅದಕ್ಕೆ ಪ್ರತಿಯಾಗಿ ಜಪಾನೂ ಅಲ್ಲಿಗೆ ಸೈನ್ಯ ಕಳಿಸಿತು. ದಂಗೆಯನ್ನಡಗಿಸಿದ ಮೇಲೆ ಎರಡು ದೇಶಗಳ ಸೈನ್ಯಗಳು ವಾಪಸಾಗಬೇಕೆಂಬ ಚೀನೀ ಸಲಹೆಯನ್ನು ಜಪಾನ್ ಒಪ್ಪಲಿಲ್ಲ. ಇನ್ನೂ ಸಂಪೂರ್ಣವಾಗಿ ನೆಮ್ಮದಿ ನೆಲೆಸಿಲ್ಲವಾದ್ದರಿಂದ ಎರಡೂ ದೇಶಗಳು ಸಂಯುಕ್ತವಾಗಿ ಕೊರಿಯ ಸರ್ಕಾರದ ಸುಧಾರಣೆಗೆ ಶ್ರಮಿಸಬೇಕೆಂಬುದು ಅದರ ಅಭಿಪ್ರಾಯ. ಇದರಿಂದಾಗಿ ವಿರಸ ಬೆಳೆಯಿತು. 1894ರ ಆಗಸ್ಟಿನಲ್ಲಿ ಜಪಾನೀ ಹಡಗುಗಳ ಮೇಲೆ ಚೀನೀ ನೌಕೆಗಳು ಗುಂಡುಹಾರಿಸಿದುವು. ಯುದ್ಧ ಆರಂಭವಾಯಿತು.

ಈ ಯುದ್ಧದಲ್ಲಿ ಜಯ ಗಳಿಸುವ ಬಗ್ಗೆ ಚೀನಕ್ಕೆ ಆರಂಭದಿಂದಲೂ ಸಂದೇಹವಿತ್ತು. ಚಿಕ್ಕದಾದರೂ ದಕ್ಷವಾದ ಜಪಾನೀ ಸೈನ್ಯವನ್ನು ಅದು ಎದುರಿಸಲಾಗಲಿಲ್ಲ. ಆರೇ ತಿಂಗಳು ಕಳೆಯುವ ವೆಳೆಗೆ ಜಪಾನಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಚೀನ ಪ್ರಯತ್ನಿಸಿತು. 1895ರ ಮಾರ್ಚ್ ವೇಳೆಗೆ ವೈ-ಹೈ ಮತ್ತು ದಕ್ಷಿಣ ಮಂಚೂರಿಯಗಳು ಜಪಾನಿನ ವಶವಾದುವು. ಪೀಕಿಂಗಿಗೆ ವಿಪತ್ತು ಹತ್ತಿರವಾಗಿತ್ತು. ಚೀನದ ಪ್ರಮುಖ ರಾಜಕಾರಣ ಲಿ ಹ ಗ್-ಚಾಂಗ್ ಜಪಾನಿಗೆ ದಾವಿಸಿ ಶಾಂತಿ ಭಿಕ್ಷೆ ಬೇಡಿದ. 1895ರ ಏಪ್ರಿಲ್ 17ರಂದು ಚೀನ-ಜಪಾನುಗಳ ನಡುವೆ ಷಿಮೊನೊಸೆಕಿ ಕೌಲು ಏರ್ಪಟ್ಟಿತು. ಚೀನ ಜಪಾನಿಗೆ 20,00,000,000 ಟೇಲುಗಳನ್ನು (ಚೀನೀ ನಾಣ್ಯ) ಪರಿಹಾರದ್ರವ್ಯವಾಗಿ ಕೊಡಬೇಕಾಯಿತಲ್ಲದೆ ಕೊರಿಯವನ್ನು ಸ್ವತಂತ್ರ ದೇಶವೆಂದು ಒಪ್ಪಿಕೊಳ್ಳಬೇಕಾಯಿತು. ಫಾರ್ಮೋಸ ಮತ್ತು ಇತರ ದ್ವೀಪಗಳನ್ನೂ ಮಂಚೂರಿಯದ ಲಿಯೌಡುಂಗ್ ಪರ್ಯಾಯ ದ್ವೀಪವನ್ನೂ ಜಪಾನಿಗೆ ಕೊಡಬೇಕೆಂದೂ ಚೀನದ ನಾಲ್ಕು ರೇವುಗಳಲ್ಲಿ ಜಪಾನಿಗೆ ಹೊಸದಾಗಿ ವ್ಯಾಪಾರಕ್ಕಾಗಿ ಪ್ರವೇಶ ದೊರಕಿಸಿಕೊಡಬೇಕೆಮಬುದೂ ಕೌಲಿನ ಇನ್ನೆರಡು ಷರತ್ತುಗಳು. ಈ ಕೌಲು ತುಂಬ ಕಠಿಣವೆಂದು ಜರ್ಮನಿ, ರಷ್ಯ, ಫ್ರಾನ್ಸ್‍ಗಳು ಭಾವಿಸಿ, ಇದನ್ನು ಬದಲಾಯಿಸಲು ಜಪಾನಿನ ಮೇಲೆ ಇತ್ತಾಯ ಹಾಕಿದುವು. ಜಪಾನು ವಿಧಿಯಿಲ್ಲದೆ ಇದರ ಷರತ್ತುಗಳನ್ನು ಸ್ವಲ್ಪ ಬದಲಾಯಿಸಬೇಕಾಯಿತು.

ಚೀನ ಈ ಯುದ್ಧದಲ್ಲಿ ಜಯ ಗಳಿಸುವುದೆಂಬ ಪಶ್ಚಿಮದ ರಾಷ್ಟ್ರಗಳ ನರೀಕ್ಷೆ ಸುಳಳಾಯಿತು. ಚೀನದ ದೌರ್ಬಲ್ಯ ಅವಕ್ಕೆ ಅರಿವಾಗಿ, ಅವು ಅಬಾಧಿತವಾಗಿ ಚೀನದ ಶೋಷಣೆಯನ್ನು ಮುಂದುವರಿಸಿದುವು. ಆಂತರಿಕವಾಗಿ ಕ್ರಾಂತಯ ಚಳವಳಿ ಬಿರುಸಾಗಿ, ಮ್ಯಾನ್‍ಚೂ ಪ್ರಭುತ್ವದ ಪತನದ ದಿನಗಳು ಹತ್ತಿರವಾದುವು. ಜಪಾನೂ ಕ್ರಮಕ್ರಮವಾಗಿ ಆಕ್ರಮಣ ಮುಂದುವರಿಸಿತು.

ಚೀನದ ಸ್ವಾತಂತ್ರ್ಯ ಹಾಗೂ ಸಮಗ್ರತೆಗೆ ಜಪಾನ್ ಒಂದು ಸವಾಲಾಗಿತ್ತು. ಮಂಚೂರಿಯದಲ್ಲಿ ಜಪಾನೀಯರು ಪಡೆದಿದ್ದ ಸೌಲಭ್ಯಗಳಿಂದ ಅಲ್ಲಿಯ ಚೀನೀ ಜನ ಅಸಂತುಷ್ಟರಾಗಿದ್ದರು. ತಮ್ಮ ರೈಲುಮಾರ್ಗಗಳ ಮೂಲಕ ಜಪಾನೀಯರು ದಕ್ಷಿಣ ಮಂಚೂರಿಯದ ಬಹುಭಾಗದ ಮೇಲೆ ಹತೋಟಿ ಹೊಂದಿದ್ದರು. ಜಪಾನೀ ರೈಲ್ವೆಯನ್ನು ಸುತ್ತುಗಟ್ಟಿ, ಜಪಾನೀಯರ ಹತೋಟಿಯಿಂದ ವಿಮುಕ್ತರಾಗುವ ಉದ್ದೇಶದಿಂದ ಚೀನೀಯರೂ ಅಲ್ಲಿ ರೈಲುಮಾರ್ಗಗಳನ್ನು ನಿರ್ಮಿಸಿದರು. ಮಂಚೂರಿಯದ ದೊರೆ ಚಾಂಗ್ ಷುಯೆಲ್ಯಾಂಗ್ ಚೀನದೊಂದಿಗೆ ಹೆಚ್ಚು ಹೆಚ್ಚಾಗಿ ಸ್ನೇಹ ಬೆಳೆಸಿದ.

1931ರಲ್ಲಿ ದಕ್ಷಿಣಮಂಚೂರಿಯದಲ್ಲಿ ಸಂಭವಿಸಿದ ಒಂದು ಆಸ್ಪೋಟನೆಯ ನೆವದಿಂದ ಜಪಾನೀಯರು ಮ್ಯೂಕ್‍ಡೆನ್ ನಗರವನ್ನು ಆಕ್ರಮಿಸಿಕೊಂಡರು. ಕ್ರಮೇಣ ಇವರು ಮಂಚೂರಿಯದ ಇತರ ನಗರಗಳನ್ನೂ ಹಿಡಿದುಕೊಂಡು, ಜಾಂಗ್ ಷುಯೆಲ್ಯಾಂಗ್‍ನ ಅಧಿಕಾರವನ್ನು ದುರ್ಬಲಗೊಳಿಸಿ, ಸ್ಥಳೀಯ ನಾಯಕರು ಅಲ್ಲಲ್ಲಿ ಸರ್ಕಾರ ಸ್ತಾಪಿಸಲು ಪ್ರೋತ್ಸಾಹಿಸಿದರು. 1932ರಲ್ಲಿ ಇವನ್ನೆಲ್ಲ ಸಂಘಟಿಸಿ ಮ್ಯಾನ್ ಚೂಕೌ ಎಂಬ ರಾಜ್ಯ ಸ್ಥಾಪಿಸಿ ಚೀನದ ಕೊನೆಯ ಮ್ಯಾನ್‍ಚೂ ಚಕ್ರವರ್ತಿಯಾಗಿದ್ದ ಪ್ಯು-ಇ ಯನ್ನು ಅದರ ದೊರೆಯಾಗಿ ಮಾಡಿದರು.

ನ್ಯಾನ್‍ಕಿಂಗ್ ಸರ್ಕಾರ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಮರೆಹೊಕ್ಕಿತು. ಜಪಾನ್ ತನ್ನ ಸೇನೆಯನ್ನು ದಕ್ಕಿಣ ಮಂಚೂರಿಯ ರೈಲು ಮಾಗ್ ಪ್ರದೇಶಕ್ಕೆ ಹಿಂದೆಗೆದುಕೊಳ್ಳುವಂತೆ ರಾಷ್ಟ್ರಗಳ ಕೂಟ ಅದನ್ನು ಒಪ್ಪಿಸಿ, ವಿಚಾರಣಾ ಆಯೋಗವೊಂದನ್ನು ನೇಮಿಸಿತು. ಜಪಾನಿನದೇ ತಪ್ಪೆಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿತು. 1933ರಲ್ಲಿ ರಾಷ್ಟ್ರಗಳ ಕೂಟ ಜಪಾನಿನ ಮೇಲೆ ಕ್ರಮ ಕೈಗೊಂಡಿತು. ಜಪಾನು ಕೂಟವನ್ನೇ ತ್ಯಜಿಸಿತು.

ನ್ಯಾನ್‍ಕಿಂಗ್ ಸರ್ಕಾರ ಜಪಾನನ್ನು ಎದುರಿಸಿ ಹೋರಾಡುವಂತಿರಲಿಲ್ಲ. ಅದು ಜಪಾನಿನೊಡನೆ ವ್ಯಾಪಾರವನ್ನು ನಿಷೇಧಿಸಿತು. ಇದರ ಫಲವಾಗಿ ಘರ್ಷಣೆ ಉದ್ಭವಿಸಿತು. ಷಾಂಗ್‍ಹೈ ನಗರದ ಬಹುಭಾಗವನ್ನು ಜಪಾನ್ ನಾಶಪಡಿಸಿ, ಚೀನೀ ಸೇನೆಯನ್ನು ಹಿಮ್ಮೆಟ್ಟಿಸಿತು. ರಾಷ್ಟ್ರಗಳ ಕೂಟದ ಮಧ್ಯಪ್ರವೇಶದಿಂದಾಗಿ ಮೂರು ತಿಂಗಳುಗಳ ಅನಂತರ ಹೋರಾಟ ನಿಂತಿತು. ಮಂಚೂರಿಯದಲ್ಲಿ ಜಪಾನ್ ವಿರುದ್ಧ ಚಟುವಟಿಕೆಗಳು ಮುಂದುವರಿದುವು. ಮ್ಯಾನ್‍ಚೂಕೌಗೆ ಜೆಹೋಲ್ ಪ್ರಾಂತ್ಯವನ್ನು ಸೇರಿಸಲು ಜಪಾನ್ ಇಚ್ಛಿಸಿತು. 1933ರ ಏಪ್ರಿಲ್‍ನಲ್ಲಿ ಜಪಾನು ನಹಾ ಗೋಡೆಯವರೆಗೆ ಮುನ್ನುಗ್ಗಿತು. ಚೀನೀಯರು ಹೆಮ್ಮೆಟ್ಟಿದರು. ಮೇ ತಿಂಗಳಲ್ಲಿ ನ್ಯಾನ್‍ಕಿಂಗ್ ಸರ್ಕಾರ ಶಾಂತಿ ಮಾಡಿಕೊಂಡು ಮಹಾ ಗೋಡೆಯ ಉತ್ತರದಲ್ಲಿ ನಿಸ್ಸೇನೀಕೃತ ವಲಯವನ್ನು ನಿರ್ಮಿಸಿತು. ಇಷ್ಟೆಲ್ಲ ಘರ್ಷಣೆಗಳು ನಡೆದರೂ ಅಧಿಕೃತವಾಗಿ ಈ ದೇಶಗಳ ನಡುವೆ ಯುದ್ಧ ಘೋಷಿತವಾಗಿರಲಿಲ್ಲ. ರಾಜತಾಂತ್ರಿಕ ಸಂಬಂಧಕ್ಕೆ ಚ್ಯುತಿ ಬಂದಿರಲಿಲ್ಲ.

ಮ್ಯಾನ್‍ಚೂಕೌ ವಿಚಾರದಲ್ಲಿ ಚೀನೀಯರು ಅಸಂತುಷ್ಟರಾಗಿದ್ದರು. ಆ ರಾಜ್ಯವನ್ನು ಜಪಾನ್, ಇಟಲಿ ಮತ್ತು ಎಲ್ ಸಾಲ್ವಡಾರ್ ಮಾತ್ರ ಮಾನ್ಯ ಮಾಡಿದ್ದುವು. ಜಪಾನು ಹೆಚ್ಚು ರೈಲುಮಾರ್ಗಗಳನ್ನು ನಿರ್ಮಿಸಿ ಅಲ್ಲಿಯ ಅನೇಕ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಸಿದ್ದಲ್ಲದೆ ಕೊರಿಯಾಕ್ಕೂ ಅದಕ್ಕೂ ಸಂಬಂಧ ಏರ್ಪಡಿಸಿ, ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 1934ರಲ್ಲಿ ಪ್ಯು-ಇ ಕಿರೀಟಧಾರಣೆ ಮಾಡಿಕೊಂಡ.

ಚೀನದ ಮಹಾ ಗೋಡೆಯ ಉತ್ತರದಲ್ಲಿದ್ದ ಪ್ರದೇಶವಷ್ಟರಿಂದಲೇ ಜಪಾನು ತೃಪ್ತಿ ಹೊಂದಿದ್ದಂತೆ ಕಾಣಲಿಲ್ಲ. ಇಡೀ ಚೀನ ತನಗೆ ಮೀಸಲೆಂದೂ ತನ್ನ ಒಪ್ಪಿಗೆಯಿಲ್ಲದೆ ಅಲ್ಲಿ ಯಾವ ದೇಶವೂ ಯಾವುದೇ ಬಗೆಯ ಆಚರಣೆಯಲ್ಲೂ ತೊಡಗಕೂಡದೆಂದೂ ಜಪಾನ್ 1934ರಲ್ಲಿ ಒಂದು ಪ್ರಕಟನೆ ಹೊರಡಿಸಿತು. ಚೀನದ ಹಲವು ಪ್ರದೇಶಗಳ ಮೇಲೆ ಜಪಾನು ಹತೋಟಿ ಹೊಂದಿತು. ಚಿಯಾಂಗ್ ಕೈ-ಷೇಕ್ ಇದನ್ನು ವಿರೋಧಿಸುವ ಧೈರ್ಯ ಇರಲಿಲ್ಲ. 1937ರ ಜುಲೈ ತಿಂಗಳಲ್ಲಿ ಪರಿಸ್ಥಿತಿ ವಿಷಮಿಸಿತು. ಚಿಯಾಂಗ್ ಕೈ-ಷೆಕ್ ಸರ್ಕಾರ ತಮಗೆ ಮಣಿಯುವುದಿಲ್ಲವೆಂದು ತಿಳಿದ ಜಪಾನೀಯರು ಅದನ್ನು ಕೊನೆಗಾಣಿಸಲು ತೀರ್ಮಾನಿಸಿದರು. ಚೀನದಲ್ಲಿ ಉದಯಿಸಿದ ರಾಷ್ಟ್ರೀಯತೆ ತಮ್ಮ ವಿರುದ್ಧವಾಗಿದ್ದುದನ್ನು ಅವರು ಸಹಿಸಲಿಲ್ಲ.

1937ರ ಜುಲೈ 7ರಂದು ಚೀನೀ-ಜಪಾನೀ ಸೈನ್ಯಗಳ ನಡುವೆ ನಡೆದ ಘರ್ಷಣೆ ವ್ಯಾಪಕವಾದ ಯುದ್ಧಕ್ಕೆ ನಾಂದಿಯಾಯಿತು. ಆದರೆ ಎರಡು ಪಕ್ಷಗಳಲ್ಲಿ ಯಾವುದೂ 1941ರ ವರೆಗೆ ಯುದ್ಧ ಘೋಷಿಸಲಿಲ್ಲ. 1937ರ ಶರತ್ಕಾಲದಲ್ಲಿ ಜಪಾನೀಯರು ಉತ್ತರ ಚೀನದ ಮೇಲೆ ಆಕ್ರಮಣ ನಡೆಸಿದರು. ಷಾಂಗ್‍ಹೈ ನಗರ ಅವರ ವಶವಾಯಿತು. ಆ ವರ್ಷದ ನವೆಂಬರ್ ವೇಳೆಗೆ ಯಾಂಗ್‍ಟ್ಸೀ ನದಿಯ ಮೇಲೆ ಜಪಾನೀ ಸೇನೆ ಮುನ್ನುಗ್ಗಿತು. ರೈಲುದಾರಿಗಳ ಉದ್ದಕ್ಕೂ ಇದ್ದ ನಗರಗಳು ಅದರ ಕೈಸೇರಿದುವು. 1937ರ ನವೆಂಬರಿನಲ್ಲಿ ನ್ಯಾನ್‍ಕಿಂಗ್ ಪತನವಾಯಿತು. ಮರುವರ್ಷ ಅಕ್ಟೋಬರ್ ವೇಳೆಗ್ ಕ್ಯಾಂಟನ್, ಹ್ಯಾಂಗ್‍ಕೌ ಅದರ ವಶವಾದುವು. ಆಗ ಜಪಾನೀಯರನ್ನು ಎದುರಿಸುತ್ತಿದ್ದ ಬಲಗಳು ಎರಡು-ಚಿಯಾಂಗ್ ಸರ್ಕಾರದ ಸೇನೆ ಮತ್ತು ಕಮ್ಯೂನಿಸ್ಟ್ ಸೇನೆ. ಜಪಾನನ್ನು ಸಂಯುಕ್ತವಾಗಿ ಎದುರಿಸಬೇಕೆಂಬ ಉದ್ದೇಶದಿಂದ ಕಮ್ಯೂನಿಸ್ಟರು ಚಿಯಾಂಗ್ ಸರ್ಕಾರದ ನಾಯಕತ್ವವನ್ನು ಒಪ್ಪಿಕೊಂಡರು.

ಎಷ್ಟೇ ಕಷ್ಟನಷ್ಟಗಳನ್ನು ಅನುಭವಿಸಿದರೂ ಚೀನೀಯರು ಶರಣಾಗತರಾಗಲಿಲ್ಲ. ಯುದ್ಧ ಮುಂದುವರಿಯಿತು. ನ್ಯಾನ್‍ಕಿಂಗ್ ಪತನದ ಅನಂತರ ಹ್ಯಾಂಗ್‍ಕೌಗೆ ವರ್ಗವಾಗಿದ್ದ ಚಿಯಾಂಗ್ ಸರ್ಕಾರ ಆ ನಗರವೂ ಪತನವಾದಾಗ ಚುಂಗಕಿಂಗ್‍ನ್ನು ರಾಜಧಾನಿಯಾಗಿ ಮಾಡಿಕೊಂಡಿತು. ಚೀನೀ ನಾಯಕರು ಸಸ್‍ವಾನ್ ಮತ್ತು ಯುನ್ಯಾನ್ ಪ್ರದೇಶಗಳಲ್ಲಿ ವಲಸೆಹೋದರು. ಆಕ್ರಮಿತ ಪ್ರದೇಶದಲ್ಲಿ ಸರ್ಕಾರ ಸ್ಥಾಪಿಸುವ ಜಪಾನೀ ಯೋಜನೆಗೆ ಅಲ್ಲಿಯ ಗಣ್ಯರ ನೆರವು ದೊರೆಯದಾಯಿತು. ಕೆಲವು ಪಟ್ಟಣಗಳು ಮತ್ತು ರೈಲುಮಾರ್ಗಗಳಿಗೆ ಮಾತ್ರ ಜಪಾನಿನ ಹತೋಟಿ ಸೀಮಿತವಾಗಿತ್ತು. ಉಳಿದೆಡೆಗಳಲ್ಲಿ ಜಪಾನ್ ವಿರೋಧಿ ಚಟುವಟಿಕೆಗಳು ಮುಂದುವರಿದುವು. ಕಮ್ಯೂನಿಸ್ಟರು ಗ್ರಾಮೀಣ ಪ್ರದೇಶಗಳಲ್ಲಿ, ಜಪಾನೀ ಸೈನ್ಯದ ಹಿಂದೆ, ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲದೆ ಅವರು ಗ್ರಾಮರಕ್ಷಣಾ ತಂಡಗಳನ್ನು ಸಂಘಟಿಸಿ, ಸ್ಥಳೀಯ ಸರ್ಕಾರಗಳನ್ನು ಸ್ಥಾಪಿಸಿ, ತಮ್ಮ ಸೈನ್ಯವನ್ನು ವಿಸ್ತರಿಸಿದರು. ಎರಡನೆಯ ಮಹಾಯುದ್ಧ ಆರಂಭವಾದ ಮೇಲೆ ಜಪಾನೀಯರು ರೇವುಗಳನ್ನೆಲ್ಲ ವಶಪಡಿಸಿಕೊಂಡು ಹೊರಗಿನಿಂದ ಸಮುದ್ರದ ಮೂಲಕ ಚೀನಕ್ಕೆ ಸಹಾಯ ಒದಗದಂತೆ ಮಾಡಿದರು. ಬರ್ಮದಿಂದ ಯುನ್ಯಾನಿನ ಕುನ್‍ಮಿಂಗಿಗೆ ಹೋಗುವ ಮಾರ್ಗವನ್ನು ಮುಚ್ಚುವಂತೆ ಜಪಾನು ಬ್ರಿಟನ್ನನ್ನು ಪ್ರೇರೇಪಿಸಿತು. ಬ್ರಿಟನ್ ಇದಕ್ಕೆ ಒಪ್ಪಿ ಆ ಮಾರ್ಗವನ್ನು ಸ್ವಲ್ಪಕಾಲ ಮುಚ್ಚಿತ್ತು. ಜಪಾನು ಪರ್ಲ್ ಹಾರ್ಬರ್ ಮೇಲೆ ಹಠಾತ್ತನೆ ದಾಳಿ ನಡೆಸಿದಾಗ ಅಮೆರಿಕ, ಬ್ರಿಟನ್‍ಗಳಿಗೂ ಜಪಾನಿಗೂ ನಡುವೆ ಯುದ್ಧ ಆರಂಭವಾಯಿತು. ಜಪಾನು ಚೀನದ ಪೂರ್ವ ತೀರದಲ್ಲಿ ಪ್ರಬಲವಾಯಿತಲ್ಲದೆ ಬರ್ಮವನ್ನು ಆಕ್ರಮಿಸಿಕೊಂಡಿತು. ಆದರೂ ಚೀನದಲ್ಲಿ ಜಪಾನು ಹೆಚ್ಚು ಪ್ರಭಾವ ಗಳಿಸಿರಲಿಲ್ಲ.

1944 ರ ವೇಳೆಗೆ ಯುದ್ಧ ನಿರ್ಣಾಯಕ ಘಟ್ಟ ಮುಟ್ಟಿತ್ತು. ಅಮೆರಿಕನ್ನರು ಚೀನ ಸರ್ಕಾರಕ್ಕೆ ನೆರವು ನೀಡುತ್ತಿದ್ದುದಲ್ಲವೇ ಜಪಾನೀ ನೆಲೆಗಳನ್ನು ದಾಳಿ ಮಾಡುತ್ತಿದ್ದರು. ಆದರೆ ಚಿಯಾಂಗ್ ಸರ್ಕಾರ ಏಳು ವರ್ಷಗಳ ಯುದ್ಧದಿಂದ ದುರ್ಬಲವಾಗಿತ್ತು. ಚೀನೀ ಕಮ್ಯೂನಿಸ್ಟರು ಪ್ರಬಲರೂ ಪ್ರಭಾವಶಾಲಿಗಳೂ ಆಗಿದ್ದರು. ಪೆಸಿಫಿಕ್ ದ್ವೀಪಗಳಲ್ಲಿ ತೀವ್ರವಾಗಿದ್ದ ಕದನಗಳಲ್ಲಿ ಭಾಗವಹಿಸಲು ಜಪಾನು ತನ್ನ ಸೇನೆಗಳನ್ನು ಚೀನದಿಂದ ಹಿಂದಕ್ಕೆ ಕರೆಸಿಕೊಳ್ಳಲಾರಂಭಿಸಿತು. ಕೊನೆಗೆ ಜಪಾನು ಯುದ್ಧದಲ್ಲಿ ಸೋಲೊಪ್ಪಿ ಶರಣಾಗತವಾದಾಗ ಚೀನದಲ್ಲಿ ಅದರ ಆಕ್ರಮಣದ ತೆರವಾಯಿತು. ಚೀನ-ಜಪಾನ್ ಯುದ್ಧ ಕೊನೆಗೊಂಡಿತು. ಆದರೆ ಕಮ್ಯೂನಿಸ್ಟ್ಸ ಸೇನೆಗಳಿಗೂ ಚಿಯಾಂಗ್ ಸರ್ಕಾರದ ಸೇನೆಗಳಿಗೂ ಹೋರಾಟ ಮುಂದುವರಿದು, 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟರಿಂದ ಜನತಾ ಗಣರಾಜ್ಯ ಸ್ಥಾಪಿತವಾಯಿತು. (ಎಚ್.ವಿ.ಎಸ್.ಎಂ.)