ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತುರುಗಾಹಿ ರಾಮಣ್ಣ

ವಿಕಿಸೋರ್ಸ್ದಿಂದ

ತುರುಗಾಹಿ ರಾಮಣ್ಣ  : - ಶಿವಶರಣ, ವಚನಕಾರ, ಶ್ರೇಷ್ಠ ಜ್ಞಾನಿ, ಆಧ್ಯಾತ್ಮದಲ್ಲಿ ಅತುಳವಾದ ಆಸಕ್ತಿಯನ್ನು ಹೊಂದಿದ್ದವ, ಇವನ ಊರು, ಜಾತಿ, ತಂದೆ ತಾಯಿ-ಈ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಈತನ ಕಾಲ ಸು. 1160 ಅಂದರೆ ಈತ ಬಸವಣ್ಣ, ಅಲ್ಲಮಪ್ರಭು ಮುಂತಾದವರ ಸಮಕಾಲೀನ, ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ-ಇವರು ಲಿಂಗೈಕ್ಯರಾದ ಸಮಯದಲ್ಲಿ ಜೀವಿಸಿದ್ದನೆಂದೂ ಅನಂತರ ಇವನೂ ಲಿಂಗೈಕ್ಯನಾದನೆಂದೂ ತಿಳಿದುಬರುತ್ತದೆ. ಬಸವಣ್ಣನವರ ಭಕ್ತಿಪಂಥಕ್ಕೆ ಸೇರಿದ ಈತನಿಗೆ ಶಿವಶರಣರ ದನಗಳನ್ನು ಕಾಯುವುದೇ ಕಾಯಕವಾಗಿದ್ದಿತು. ಸರಳವಾದ ನಿರಾಡಂಬರವಾದ, ಬಹು ಸುಂದರವಾದ ಜೀವನ ಇವನದಾಗಿದ್ದಿತು. ನಿತ್ಯವೂ ನೇಮದಂತೆ ಶರಣರ ಮನೆಯ ಬಾಗಿಲಿಗೆ ಹೋಗಿ ಕಟ್ಟಿದ ಹಸು ಕೂಡಿದ ಹಸು ಬಿಡಿರೆ-ಎಂದು ಕೂಗುತ್ತಿದ್ದ. ಶರಣರ ಸತಿಯರು ಬಿಟ್ಟ ದನಗಳನ್ನು ದಿನವಿಡೀ ಕಾಯ್ದು ಸಂಜೆಗೆ ದೊಡ್ಡಿಗಳಿಗೆ ತಂದು ಕೂಡುತ್ತಿದ್ದ. ದಿನವೂ ಬಣ್ಣಬಣ್ಣದ ದನಗಳನ್ನು ನೋಡುತ್ತ ಅವನ್ನು ಮುದ್ದಾಡುತ್ತ ವಿವಿಧ ಹೆಸರುಗಳಿಂದ ಅವನ್ನು ಕರೆಯುತ್ತ ಕಾಲವನ್ನು ಬಹು ಸಂತಸದಿಂದ ಕಳೆಯುತ್ತಿದ್ದ. ಹಸುವಿಗೆ ಹಾಗ, ಎತ್ತಿಂಗೆ ಹಣವಡ್ಡ, ಕರುವಿಗೆ ಮೂರು ಹಣ ಹೀಗೆ ಕೂಲಿಯನ್ನು ತೆಗೆದುಕೊಂಡು `ಅವಕಾವಲ್ಲಿಯಾದರೂ ಭಾವಶುದ್ಧವಾಗಿರಬೇಕು ಎಂಬ ಜೀವನಸೂತ್ರವನ್ನು ಹಿಡಿದು, ಊರಿನ ದನಕಾಯುವ ಕೆಲಸದಲ್ಲಿಯೇ ಮಹತ್ತನ್ನು ಕಂಡುಕೊಂಡು ಈತ ಮುಕ್ತಿಯನ್ನು ಹೊಂದಿದ.

ಇಲ್ಲಿಯ ವರೆಗೆ ಈತನ 45 ವಚನಗಳು ಮಾತ್ರ ದೊರೆತಿವೆ. ಗೋಪತಿನಾಥ ವಿಶ್ವೇಶ್ವರಲಿಂಗ ಎಂಬುದು ಇವನ ಅಂಕಿತ. ಇವನ ವಚನಗಳು ಸಂಖ್ಯೆಯಲ್ಲಿ ಅಲ್ಪವಾದರೂ ಸತ್ತ್ವಯುತಾಗಿವೆ. ಇವುಗಳಲ್ಲಿ ಮೊದಲ ಹದಿನೇಳು ಇವನ ಕಾಯಕಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಈತ ದನಕಾಯ್ದು ಪಡೆದ ದಿವ್ಯಾನುಭವ ಸಾಂಕೇತಿಕವಾಗಿ ವ್ಯಕ್ತವಾಗಿದೆ. ಅತ್ತಿತ್ತ ಚಲಿಸುವ ನೂರಾರು ಕುಲಗಳ, ನೂರಾರು ಹಸುಗಳನ್ನು ಒಂದೇ ಒಂದು ಕೋಲು ನಿಲ್ಲಿಸುವಂತೆ ನಾವು ಏಕಚಿತ್ತವನ್ನು ಗಳಿಸಿಕೊಂಡು ಲಿಂಗವನ್ನರಿಯಬೇಕು ಎಂಬುದಾಗಿ ಸಾಂಕೇತಿಕವಾಗಿ ಈತ ಹೇಳಿದ್ದಾನೆ. ಉಳಿದ ವಚನಗಳಲ್ಲಿ ನಿಷ್ಠೆ, ತ್ರಿವಿದಭಕ್ತಿ, ಷಟ್‍ಸ್ಥಲ, ಕ್ರೀಶುದ್ಧಿ, ಭಾವಶುದ್ಧಿ, ಚಿತ್ತಶುದ್ಧಿಗಳು ಭೇದಾಭೇದ ಭಾವ-ಮುಂತಾದ ತತ್ತ್ವದ ವಿಷಯಗಳು ಪ್ರತಿಪಾದಿತವಾಗಿವೆ. (ಎಂ.ಪಿ.ಎಂ.)