ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಸ್ತರ್, ಲೂಯಿ

ವಿಕಿಸೋರ್ಸ್ದಿಂದ

ಪಾಸ್ತರ್, ಲೂಯಿ 1822-1895. ಫ್ರಾನ್ಸಿನ ಸೂಕ್ಷ್ಮಾಣುಜೀವಿ ವಿಜ್ಞಾನಿ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಅದ್ಭುತ ಪ್ರಾಯೋಗಿಕ ವ್ಯಾಸಂಗಗಳನ್ನು ಇತಿಹಾಸ ಪ್ರವರ್ತಕ ಫಲಿತಾಂಶಗಳನ್ನು ಪಡೆದು ಸಾರ್ವಜನಿಕ ಆರೋಗ್ಯ ಪಾಲನೆಗೆ ಹಿರಿಯ ಕೊಡುಗೆಗಳನ್ನು ನೀಡಿದ ಮಹಾ ಪ್ರತಿಭಾಶಾಲಿ ಅನ್ವೇಷಕ. ಮೂಲತಃ ರಸಾಯನವಿಜ್ಞಾನ, ಮಾದಕ ಪಾನೀಯ ಬೀರಿನ ಕಂಪು ಮತ್ತು ರುಚಿ ರಕ್ಷಣೆ, ರೇಷ್ಮೆ ಹುಳುಗಳಿಗೆ ಅಂಟಿ ಮಾರಕವಾಗಿ ಪರಿಣಮಿಸುತ್ತಿದ್ದ ಸೋಂಕು ಮುಂತಾದವನ್ನು ಕುರಿತು ತೀವ್ರ ಸಂಶೋಧನೆ ಹಾಗೂ ಅಧ್ಯಯನ ಮಾಡಿದ ಪಾಸ್ತರ್ ಮುಂದೆ ಪ್ರೌಢ ವೈದ್ಯಕೀಯ ಆವಿಷ್ಕಾರಗಳನ್ನು ಮಾಡಲು ವಿಶೇಷ ಅರ್ಹತೆ ಗಳಿಸಿದ.

ಲೂಯಿ ಪಾಸ್ತರ್ 1822 ಡಿಸೆಂಬರ್ 27 ರಂದು ಫ್ರಾನ್ಸಿನ ಜ್ಯೂರ ಪ್ರದೇಶಕ್ಕೆ ಸೇರಿದ ಡೋಲಿ ಎಂಬಲ್ಲಿ ಜನಿಸಿದ. ಇವನ ತಂದೆ ಜೀನ್ ಜೋಸೆಫ್ ಪಾಸ್ತರ್, ನೆಪೋಲಿಯನ್ನನ ಸೈನ್ಯದಲ್ಲಿ ಸಾರ್ಜೆಂಟ್-ಮೇಜರ್ ಆಗಿದ್ದ. ನೆಪೋಲಿಯನ್ನನ ಪತನಾನಂತರ ವಂಶಪರಂಪರೆಯಾಗಿ ನಡೆದು ಬಂದಿದ್ದ ಚರ್ಮ ಹದ ಮಾಡುವ ಉದ್ಯಮಕ್ಕೆ ಇಳಿದ. ಲೂಯಿಯ ಜನನವಾದ ಸ್ವಲ್ಪ ಕಾಲದಲ್ಲಿ ಸಂಸಾರ ಹತ್ತಿರದ ಆರ್ಬಾಯ್ ಎಂಬಲ್ಲಿಗೆ ಹೋಗಿ ನೆಲೆಸಿತು. ಅಲ್ಲೆ ಲೂಯಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು. ಈತ ಪ್ರತಿಭಾನ್ವಿತ ವಿದ್ಯಾರ್ಥಿ ಎಂದು ಶಾಲೆಯ ಮುಖ್ಯೋಪಾಧ್ಯಾಯನಿಗೆ ಮನದಟ್ಟಾಗಿದ್ದುದರಿಂದ ಪ್ಯಾರಿಸ್ಸಿನ ಇಕೋಲಿ ನಾರ್ಮೇಲಿಗೆ ಸೇರಿಕೊಳ್ಳಲು ತಯಾರಾಗುವಂತೆ ಶಿಕ್ಷಣ ಪಡೆಯಬೇಕೆಂದೂ ಅದಕ್ಕಾಗಿ ಇವನನ್ನು ಪ್ಯಾರಿಸ್ಸಿಗೆ ಕಳುಹಿಸಬೇಕೆಂದೂ ಆತ ಆಗ್ರಹ ಮಾಡಿದ. ಅದರಂತೆ ಲೂಯಿಯನ್ನು ದೂರದ ಪ್ಯಾರಿಸ್ಸಿಗೆ ಕಳುಹಿಸಲಾಯಿತು (1838). ಆದರೆ ಮನೆ ಗೀಳು ಹಿಡಿದು ವ್ಯಾಸಂಗ ಮುಂದುವರಿಸಲಾಗದೆ ಅವನು ಶೀಘ್ರದಲ್ಲಿ ಆರ್ಬಾಯಿಗೆ ವಾಪಸಾದ. ಅನಂತರ ಹತ್ತಿರದ ಪರಿಚಿತ ಬೆಸಾನ್‍ಕಾನಿನ ರಾಯಲ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ 1840 ಮತ್ತು 1842 ರಲ್ಲಿ ಪದವಿಗಳನ್ನು ಪಡೆದ. ಇಕೋಲಿ ನಾರ್ಮೆಲೀಗೆ ಸೇರುವ ಉದ್ದೇಶದಿಂದ ಪುನಃ ಪ್ಯಾರಿಸ್ಸಿಗೆ ತೆರಳಿ (1843) ಆಯ್ಕೆಗಾಗಿ ನಡೆದ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ನಾಲ್ಕನೆಯ ಸ್ಥಾನ ಗಳಿಸಿದ. ಪ್ಯಾರಿಸ್ಸಿನಲ್ಲಿ ಆಗ ಪ್ರಸಿದ್ಧ ವಿಜ್ಞಾನಿಗಳಾಗಿದ್ದ ಡ್ಯೂಮಾಸ್, ಬಲಾರ್ಡ್ ಮುಂತಾದವರ ಸಂಪರ್ಕ ಹೊಂದಿ ವ್ಯಾಸಂಗ ಮುಂದುವರಿಸಿ ಡಾಕ್ಟರೇಟ್ ಪದವಿ ಪಡೆದ (1847).


ರೆಸಿಮಿಕ್ ಟಾರ್ಟಾರಿಕ್ ಆಮ್ಲವನ್ನು ಕುರಿತು ಸಂಶೋಧನೆಯಲ್ಲಿ ಪಾಸ್ತರ್ ಉದ್ಯುಕ್ತನಾದ (1848). ಟಾರ್ಟಾರಿಕ್ ಆಮ್ಲ ಸಾಮಾನ್ಯವಾದ ರೆಸಿಮಿಕ್ ಎಂಬ ವಿಶೇಷವಾದ ಎರಡು ರೂಪಗಳಲ್ಲಿ ಇರುವುದು ತಿಳಿದಿತ್ತು. ಟಾರ್ಟಾರಿಕ್ ಆಮ್ಲ ಮತ್ತು ಅದರ ಉತ್ಪನ್ನಗಳ ಜಲೀಯ ದ್ರಾವಣಗಳು ಧ್ರುವೀಕೃತ ಬೆಳಕಿನ ತಲವನ್ನು ಬಲಕ್ಕೆ ತಿರುಗಿಸುವುವೆಂದೂ (ದಕ್ಷಿಣಾವರ್ತಕಗಳು ಅಥವಾ ಬಲಮುರಿಗಳೆಂದೂ) ರೆಸಿಮಿಕ್ ಆಮ್ಲ ಮತ್ತು ಅದರ ಉತ್ಪನ್ನಗಳಿಗೆ ಈ ಗುಣ ಇಲ್ಲವೆಂದೂ 1844 ರಲ್ಲಿ ಮಿಟ್ಷರ್‍ಲಿಕ್ ಎಂಬಾತ ತಿಳಿಯಪಡಿಸಿದ. ರೆಸಿಮಿಕ್ ಆಮ್ಲಜನ್ಯ ಲವಣಗಳ ಸ್ಪಟಿಕಗಳು ಎರಡು ಬಗೆಯವಾಗಿರುವುವೆಂದು ಪಾಸ್ತರ್ ಮೊತ್ತಮೊದಲಿಗೆ ಕಂಡುಕೊಂಡು ಸೂಕ್ಷ್ಮದರ್ಶಕದ ಸಹಾಯದಿಂದ ಈ ಎರಡು ಬಗೆಯ ಸ್ಫಟಿಕಗಳನ್ನೂ ಬೇರ್ಪಡಿಸಿದ. ಅನಂತರ ಅವುಗಳಿಂದ ಟಾರ್ಟಾರಿಕ್ ಆಮ್ಲವನ್ನು ತಯಾರಿಸಿ ಒಂದೊಂದರಿಂದ ತಯಾರಿಸಿದ ಆಮ್ಲವೂ ಒಂದೊಂದು ಬಗೆಯದೆಂದು ತೋರಿಸಿದ. ಒಂದು ಬಗೆಯದು ಪೂರ್ವಪರಿಚಿತ ಟಾರ್ಟಾರಿಕ್ ಆಮ್ಲದ ಸಾಮಾನ್ಯ ರೂಪ. ಇನ್ನೊಂದು ಧ್ರುವೀಕೃತ ಬೆಳಕಿನ ತಲವನ್ನು ಬಲಗಡೆಗೆ ಬದಲಾಗಿ ಸಮಪ್ರಾಬಲ್ಯದಿಂದ ಎಡಗಡೆಗೆ ತಿರುಗಿಸಬಲ್ಲ ಲಕ್ಷಣವಿದ್ದ ಆದರೆ ಆತನಕ ತಿಳಿದಿರದಿದ್ದ ಹೊಸ ಆಮ್ಲ. ಇವೆರಡೂ ಸಮಪ್ರಮಾಣದಲ್ಲಿ ಮಿಲನವಾಗಿ ರೆಸಿಮಿಕ್ ಆಮ್ಲವಾಗುತ್ತದೆ ಎಂದು ಪಾಸ್ತರ್ ವಿಶದೀಕರಿಸಿದ. ಫ್ರಾನ್ಸಿನ ಅತ್ಯುನ್ನತ ರಸಾಯನ ವಿಜ್ಞಾನಿಗಳ ತನಿಖೆಗೆ ಈ ಆವಿಷ್ಕಾರ ಒಳಗಾಗಿ ಇದು ಸತ್ಯವೆಂದು ಸ್ಥಿರಪಟ್ಟಿತು ; ಪಾಸ್ತರ್ ಬಲು ಮೇಲ್ಮಟ್ಟದ ವಿಜ್ಞಾನಿಯೆಂದು ಪ್ರಸಿದ್ಧನಾದ. (ಮುಂದೆ ಟಾರ್ಟಾರಿಕ್ ಆಮ್ಲದ ನಾಲ್ಕನೆಯ ರೂಪ ಮಿಸೋಟಾರ್ಟಾರಿಕ್ ಆಮ್ಲವನ್ನೂ ಅವನೆ ಆವಿಷ್ಕರಿಸಿದ.) ಈ ವ್ಯಾಸಂಗಗಳನ್ನು ಆತ ಮುಂದೆ ವರ್ಗವಾಗಿ ಹೋದ ಡಿಜಾನ್ ಹಾಗೂ ಸ್ಯಾಸ್‍ಬರ್ಗಿನಲ್ಲಿಯೂ ಮುಂದುವರಿಸಿ ಮುಕ್ತಾಯ ಮಾಡಿದ್ದು ಆತನ ಸಾಧನೆಯ ಪ್ರತೀಕ.

1854 ರಲ್ಲಿ ಲಿಲ್ಲೆ ಎಂಬಲ್ಲಿ ಹೊಸದಾಗಿ ಪ್ರಾರಂಭವಾದ ಕಾಲೇಜಿನ ಮುಖ್ಯಸ್ಥನಾಗಿ ಪಾಸ್ತರ್ ವರ್ಗಮಾಡಲ್ಪಟ್ಟ. ಅಲ್ಲಿ ಅವನು ಬೀರನ್ನು ಕುರಿತು ಅಧ್ಯಯನ ಕೈಗೊಳ್ಳುವ ಅವಕಾಶ ಒದಗಿತು. ಬೀರ್ ನಿರ್ಮಾಪಕ ಸಂಸ್ಥೆಗಳು ಅಲ್ಲಿ ಹಲವಿದ್ದು ಫ್ರಾನ್ಸ್ ದೇಶದ ಬೀರಿನ ರುಚಿಗೆ ಹಾಗೂ ಪ್ರಸಿದ್ಧಿಗೆ ಕಾರಣವಾಗಿದ್ದುವು. ಆದರೆ ಈಚೆಗೆ ಶೀಶೆಗಳಲ್ಲಿ ಮೊಹರು ಮಾಡಿದಂತೆಯೇ ಅದರ ರುಚಿ ಹಾಗೂ ಕಂಪು ಕೆಟ್ಟು ಹೋಗುತ್ತಿದ್ದು ಗಿರಾಕಿಗಳು ತಪ್ಪಿ ಹೋಗುವ ಸಂಭವ ಬಂದಿತ್ತು. ಬೀರ್ ತಯಾರಿಕೆಯಲ್ಲಿ ಬಳಸುತ್ತಿದ್ದ ಯೀಸ್ಟ್ ಎಂಬ ಹುದುಗುಕಾರಕ ವಸ್ತುವನ್ನು ಪಾಸ್ತರ್ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಅದರಲ್ಲಿ ಸಾಮಾನ್ಯ ಹಾಗೂ ವಿಶೇಷ ರೂಪಗಳು ಇರುವುದನ್ನೂ ವಿಶೇಷ ರೂಪದ ಯೀಸ್ಟಿನಿಂದ ತಯಾರಾದ ಬೀರ್ ಕಾಲಕ್ರಮದಲ್ಲಿ ಕೆಟ್ಟುಹೋಗುವುದನ್ನೂ ಗಮನಿಸಿದ. 1857 ರಲ್ಲಿ ಪಾಸ್ತರ್ ಇಕೋಲಿ ನಾರ್ಮೆಲ್ಲಿನಲ್ಲಿ ಪ್ರಾಧ್ಯಾಪಕನಾಗಿ ವರ್ಗವಾದ ಮೇಲೂ ಈ ಬಗ್ಗೆ ಅನ್ವೇಷಣೆ ಮಾಡುತ್ತಿದ್ದು ಹುದುಗುಕಾರಕ ವಸ್ತು ಹಾಗೂ ಹುಳಿ ಬರಿಸುವ ವಸ್ತು ವಾಸ್ತವವಾಗಿ ಸೂಕ್ಷ್ಮ ಕ್ರಿಮಿಗಳೆಂದೂ ವಾತಾವರಣದಲ್ಲಿ ಅವು ಸಾಮಾನ್ಯವಾಗಿ ಇರುವುವೆಂದೂ ಜನ ವಾಸವಾಗಿರದ ಮತ್ತು ಸ್ವಚ್ಛ ವಾತಾವರಣವುಳ್ಳ ಪರ್ವತಾಗ್ರದ ಮೇಲಿನ ವಾಯುವಿನಲ್ಲಿ ಇರುವುದಿಲ್ಲವೆಂದೂ ಅಲ್ಲಿ ಪದಾರ್ಥ ತಾನಾಗಿಯೇ ಹುದುಗೇಳುವುದಾಗಲೀ ಹುಳಿ ಬಂದು ಕೆಟ್ಟು ಹೋಗುವುದಾಗಲೀ ಬೇಗ ಕಂಡುಬರುವುದಿಲ್ಲವೆಂದೂ ವಿಶದೀಕರಿಸಿದ. ಇಂಥ ಕ್ರಿಮಿಗಳು ನಾನಾ ಬಗೆಯವು ; ಹುದುಗೇಳುವಾಗ ಬಗೆಬಗೆಯ ಕ್ರಿಮಿಗಳಿಂದ ಅನುರೂಪ ರಾಸಾಯನಿಕ ಕ್ರಿಯೆಗಳು ಜರಗಿ ಅಂತ್ಯಪರಿಣಾಮಗಳು ಬದಲಾಗುತ್ತವೆ ಎಂದು ತೋರಿಸಿದ. ಅಪೇಕ್ಷಿತ ಪರಿಣಾಮ ಕಂಡುಬಂದ ಬಳಿಕ ವಸ್ತುವನ್ನು 550ಅ-700ಅ ಯಷ್ಟು ಉಷ್ಣತೆಗೆ ಒಡ್ಡಿದರೆ ಈ ಕ್ರಿಮಿಗಳು ಸತ್ತು ಹೋಗಿ ಮುಂದೆ ಯಾವ ರೀತಿಯ ಅನಪೇಕ್ಷಿತ ಪರಿಣಾಮ ಕಂಡುಬರುವುದಿಲ್ಲವೆಂದೂ ಬೀರ್ ತಯಾರಿಸಿ ಶೀಶೆಗೆ ಹಾಕಿ ಮೊಹರು ಮಾಡಿದ ಮೇಲೆ ಅದನ್ನು ಈ ರೀತಿ ಸಂಸ್ಕರಿಸುವುದರಿಂದ ಬೀರಿನ ರುಚಿ ಮತ್ತು ಕಂಪು ಕೆಡುವುದಿಲ್ಲವೆಂದೂ ತೋರಿಸಿ, ಹೆಚ್ಚು ಕಡಿಮೆ ನಾಶವಾಗಿಯೇ ಹೋಗಿದ್ದ ಫ್ರಾನ್ಸಿನ ಬೀರ್ ಕೈಗಾರಿಕೆಯ ಪುನರುತ್ಥಾನಕ್ಕೆ ಕಾರಣನಾದ.

ಇದೇ ವ್ಯಾಸಂಗದಿಂದ ವಿಶದವಾದ ಇನ್ನೊಂದು ಮುಖ್ಯ ವಿಷಯವೆಂದರೆ ಕ್ರಿಮಿಗಳು ತಾವಾಗಿಯೇ ನಿರ್ಜೀವ ವಸ್ತುಗಳಿಂದ ಉದ್ಭವಿಸಲಾರವು ಎಂಬುದು. ನಿರ್ಜೀವ ವಸ್ತುಗಳಿಂದ ಜೀವಿಗಳು ಉತ್ಪತ್ತಿಯಾಗಬಲ್ಲವು ಎಂದು ಆಗ ಒಂದು ಸಾಮಾನ್ಯ ನಂಬಿಕೆ ಇತ್ತು. ಮಾಂಸವನ್ನಾಗಲಿ ಮಾಂಸಸಾರವನ್ನಾಗಲಿ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ಜೀವಂತ ಸೂಕ್ಷ್ಮಾಣುಗಳು ಯಾವುವೂ ಕಾಣಬರದಿದ್ದರೂ ಕೆಲಕಾಲಾನಂತರ ಅವೇ ವಸ್ತುಗಳನ್ನು ಪುನಃ ಪರೀಕ್ಷಿಸಿದರೆ ಸೂಕ್ಷ್ಮಾಣುಗಳು ಅವುಗಳಲ್ಲಿ ಉದ್ಭವಿಸಿರುವುದು ತಿಳಿಯುತ್ತದೆ. ಮಾಂಸ ಅಥವಾ ಅದರ ಸಾರವಿರುವ ಪಾತ್ರೆಯ ಬಾಯಿಯನ್ನು ಬಿಗಿಯಾಗಿ ಮುಚ್ಚಿಟ್ಟಿದ್ದರೂ ಹೀಗಾಗುವುದು ನಿಶ್ಚಯ ಎಂಬುದನ್ನು ಕೆಲವರು ಪ್ರಾಯೋಗಿಕವಾಗಿ ಸಾಧಿಸಿಯೂ ಇದ್ದರು. ಅವರ ಪ್ರಯೋಗಗಳು ಹೇಗೆ ದೋಷಪೂರ್ಣವಾಗಿದ್ದುವು, ಆ ದೋಷಗಳನ್ನು ಸರಿಪಡಿಸಿದರೆ ಅವು ಹೇಗೆ ನಿಷ್ಫಲವಾಗುವುವು ಎಂಬುದನ್ನು ಪಾಸ್ತರ್ ತೋರಿಸಿ ವಸ್ತುಗಳ ವೃದ್ಧಿಗೆ ಮೂಲವಾಗಿ ಜೀವಂತ ವಸ್ತುಗಳು ಇದ್ದೇ ಇರಬೇಕು ಎಂದು ತೋರಿಸಿದ.

1865 ರಲ್ಲಿ ಸರ್ಕಾರದ ಮತ್ತು ಅವನ ಗುರು ಡ್ಯೂಮಾಸನ ಅಪೇಕ್ಷೆಯಂತೆ ಪಾಸ್ತರ್ ರೇಷ್ಮೆ ಹುಳುಗಳ ವಿಚಾರವಾಗಿ ವ್ಯಾಸಂಗ ಕೈಗೊಂಡ. ಹಲವು ವರ್ಷಗಳಿಂದ ಫ್ರಾನ್ಸಿನಲ್ಲಿ ರೇಷ್ಮೆ ಹುಳುಗಳಿಗೆ ಏನೋ ರೋಗ ಬಂದು ಅವು ಗೂಡು ಕಟ್ಟುವುದಕ್ಕೆ ಮೊದಲೇ ಸತ್ತುಹೋಗುತ್ತಿದ್ದುದು ರೇಷ್ಮೆ ತಯಾರಕರಿಗೆ ದಿಗ್ಭ್ರಮೆಯಾಗಿತ್ತು. ಕೆಲವೇ ವರ್ಷಗಳ ಹಿಂದೆ ಫ್ರಾನ್ಸಿನ ಬೀರ್ ಕೈಗಾರಿಕೆ ಸ್ಥಗಿತಗೊಂಡಿತೇನೋ ಎಂದು ಹೆದರಿದ್ದಂತೆಯೇ ಈಗ ಫ್ರಾನ್ಸಿನ ರೇಷ್ಮೆ ತಯಾರಿಕೆಗೆ ಕೊನೆಗಾಲ ಬಂತು ಎನ್ನುವಂತಾಗಿತ್ತು. ಪಾಸ್ತರ್ ರೇಷ್ಮೆಹುಳುಗಳನ್ನು ಅರೆದು ಸಾರವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ ರೇಷ್ಮೆ ಹುಳುಗಳ ರೋಗ ಹಾಗೂ ಮರಣಕ್ಕೆ ಕಾರಣವಾದ ಕ್ರಿಮಿಗಳು ಇರುವುದನ್ನು ತೋರಿಸಿದ. ಮೊಟ್ಟೆ ಇಟ್ಟ ಮೇಲೆ ಆ ಚಿಟ್ಟೆಗಳನ್ನು ಅರೆದು ಪರೀಕ್ಷಿಸಿ ಸೋಂಕು ಇದ್ದ ಚಿಟ್ಟೆಗಳ ಮೊಟ್ಟೆಗಳನ್ನು ನಾಶ ಮಾಡುತ್ತ ಸೋಂಕುಳ್ಳ ರೇಷ್ಮೆ ಹುಳುಗಳ ಸಂತತಿಯನ್ನು ನಿರ್ಮೂಲ ಮಾಡುವ ವಿಧಾನವನ್ನು ತೋರಿಸಿಕೊಟ್ಟ. ರೇಷ್ಮೆ ಹುಳುಗಳಿಗೆ ತಗಲುವುದು ಪೆಬ್ರೈನ್ ಎಂಬ ಸೋಂಕು ಒಂದೇ ಅಲ್ಲ. ಫ್ಲಾಚೆರಿ ಎಂಬ ಇನ್ನೊಂದು ಸೋಂಕಿನಿಂದಲೂ ಅವು ನಾಶವಾಗುವುವು ಎಂಬುದಾಗಿ ವಿಶದೀಕರಿಸಿ ಆ ಸೋಂಕಿನಿಂದಲೂ ಬಿಡುಗಡೆ ಆದ ಸಂತತಿಯನ್ನು ವೃದ್ಧಿ ಮಾಡುವುದೇ ತಕ್ಕ ಮಾರ್ಗ ಎಂದು ತೋರಿಸಿದ.

ನಿರಂತರವಾಗಿ ಪ್ರಯೋಗ ಮತ್ತು ತೀವ್ರ ಚಿಂತನೆಗಳಲ್ಲಿ ಉದ್ಯುಕ್ತನಾಗಿದ್ದ ಪಾಸ್ತರನ ಆರೋಗ್ಯ 1868 ರಲ್ಲಿ ಹದಗೆಟ್ಟಿತು. ಅವನು ಪಾಶ್ರ್ವವಾಯುಗ್ರಸ್ತನಾದ. ಆದರೆ ಶೀಘ್ರದಲ್ಲಿ ತಕ್ಕಷ್ಟು ಚೇತರಿಸಿಕೊಂಡು ಪುನಃ ವ್ಯಾಸಂಗಗಳನ್ನು ಮುಂದುವರಿಸಿದ. ಅಂದು ಅವನ ಆಸಕ್ತ ಕ್ಷೇತ್ರ ಕುರಿಗಳಿಗೆ ಮಾರಿಯಾಗಿ ಬರುತ್ತಿದ್ದ ನೆರಡಿ ರೋಗದ ಅಧ್ಯಯನ. ನೆರಡಿ ರೋಗ ಕುರಿಗಳಿಗೆ ವ್ಯಾಪಕ ಮಾರಕವಾಗಿದ್ದಂತೆಯೇ ಕೋಳಿಗಳಿಗೆ ಕೋಳಿಕಾಲರಾ ಎಂಬ ವ್ಯಾಧಿ ಮಾರಕವಾಗಿತ್ತು. ಇದರ ಕಾರಕ ಕ್ರಿಮಿಯನ್ನು ಪ್ರತ್ಯೇಕಿಸಿ ಅದನ್ನು ಪ್ರಯೋಗಾಲಯದಲ್ಲಿ ಮತ್ತೆ ಮತ್ತೆ ಕೃಷಿ ಮಾಡಿ ದುರ್ಬಲ ಕ್ರಿಮಿಯಾಗಿ ಮಾರ್ಪಡಿಸುವ ವಿಧಾನವನ್ನು ಪಾಸ್ತರ್ ಆವಿಷ್ಕರಿಸಿದ. ಈ ದುರ್ಬಲ ಕ್ರಿಮಿಯನ್ನು ಚುಚ್ಚುಮದ್ದಾಗಿ ಕೋಳಿಮರಿಗಳ ದೇಹದ ಒಳಹೊಗಿಸಿದರೆ ಮುಂದೆ ಇವು ಕಾಲರಾ ವ್ಯಾಧಿಯಿಂದ ಮೃತವಾಗುವುದಿಲ್ಲ ಎಂದೂ ತೋರಿಸಿದ. ಇದೇ ರೀತಿ ನೆರಡಿ ರೋಗಕಾರಕ ಸೂಕ್ಷ್ಮಾಣುವನ್ನು ದುರ್ಬಲೀಕರಿಸಿ ಇದನ್ನು ಆರೋಗ್ಯವಾಗಿದ್ದ ಕುರಿಗಳಿಗೆ ಚುಚ್ಚುಮದ್ದಾಗಿ ಕೊಟ್ಟು ಮುಂದೆ ಇವು ನೆರಡಿ ರೋಗಕ್ಕೆ ತುತ್ತಾಗದಂತೆ ರಕ್ಷಣೆ ಒದಗಿಸಬಹುದೆಂದೂ ತೋರಿಸಿದ. ವಿಜ್ಞಾನಿಗಳಿಗೂ ಜನಸಾಮಾನ್ಯರಿಗೂ ಈ ವಿಧಾನ ಮನದಟ್ಟಾಗುವಂತೆ ಈತ 1881 ರಲ್ಲಿ ಮೆಲುನ್ ನಗರದಲ್ಲಿ ನಡೆಸಿದ ಪ್ರಯೋಗ ಲೋಕವಿಖ್ಯಾತವಾಯಿತು.

ಕೊನೆಯದಾಗಿ ಮತ್ತು ವೈದ್ಯಕೀಯ ಗಣನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಪಾಸ್ತರನ ವ್ಯಾಸಂಗ ವಿಷಯವಾಗಿ ಇದ್ದುದು ಹುಚ್ಚುನಾಯಿಕಡಿತದಿಂದ ಉಂಟಾಗುವ ರೇಬೀಸ್ ಅಥವಾ ಹೈಡ್ರೊಫೋಬಿಯ ಎಂಬ ಮಾರಕರೋಗ. ಹುಚ್ಚುನಾಯಿ ಕಚ್ಚುವುದರಿಂದಲೇ ಈ ರೋಗ ಹರಡುವುದಾದ್ದರಿಂದ ರೋಗಾಣು ಇಂಥ ನಾಯಿಯ ಜೊಲ್ಲಿನಲ್ಲಿ ಇರಬೇಕೆಂದು ಪಾಸ್ತರ್ ತರ್ಕಿಸಿದ. ಪ್ರಾರಂಭದಲ್ಲಿ ಆತ ಈ ಕ್ರಿಮಿಯನ್ನು ಹುಚ್ಚುನಾಯಿಯ ಜೊಲ್ಲಿನಲ್ಲಿದ್ದ ಅನೇಕ ಬಗೆಯ ಸೂಕ್ಷ್ಮಾಣುಗಳಿಂದ ಪ್ರತ್ಯೇಕಿಸಬೇಕೆಂದು ಪ್ರಯತ್ನಿಸಿ ವಿಫಲನಾದ (ಈ ರೋಗಾಣು ಸೂಕ್ಷ್ಮದರ್ಶಕದಲ್ಲೂ ಕಾಣದಷ್ಟು ಸೂಕ್ಷ್ಮವಾದುದೆಂದು ಇಂದು ತಿಳಿದಿರುವುದರಿಂದ ಪಾಸ್ತರ್ ವಿಫಲನಾದುದು ಆಶ್ಚರ್ಯವಲ್ಲ). ಅನಂತರ ರೋಗ ಪ್ರಧಾನವಾಗಿ ನರಮಂಡಲಕ್ಕೆ ಸಂಬಂಧಪಟ್ಟಿರುವುದು ಮನದಟ್ಟಾಗಿ ನರಮಂಡಲದಿಂದ ರೋಗಾಣುಗಳನ್ನು ಪಡೆಯಲು ಪ್ರಯತ್ನಿಸಿದ. ರೋಗಾಣು ಪತ್ತೆ ಆಗದಿದ್ದರೂ ರೋಗಗ್ರಸ್ತ ನಾಯಿಯ ಮಿದುಳಿನ ಅಥವಾ ಮಿದುಳುಬಳ್ಳಿಯ ಸಾರವನ್ನು ಚುಚ್ಚು ಮದ್ದಾಗಿ ಕೊಟ್ಟು ಆರೋಗ್ಯವಂತ ಪ್ರಾಣಿಗಳಲ್ಲಿ ರೋಗವನ್ನು ಉಂಟುಮಾಡಬಹುದೆಂದು ತೋರಿಸಿದ. ರೋಗಾಣು ಇಂಥದೇ ಎಂದು ಪತ್ತೆ ಆಗದಿದ್ದುದರಿಂದ ಅದನ್ನು ಪ್ರಯೋಗಾಲಯದಲ್ಲಿ ಕೃಷಿ ಮಾಡಲು ಸಾಧ್ಯವಾಗದೆ, ದುರ್ಬಲೀಕರಿಸುವುದಕ್ಕೂ ಆಗದೇ ರೋಗರಕ್ಷಣೆಗಾಗಿ ಕೋಳಿಕಾಲರಾ, ನೆರಡಿ ಮುಂತಾದ ರೋಗಗಳಲ್ಲಿ ಅನುಸರಿಸಿದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗವನ್ನು ಅನುಸರಿಸಬೇಕಾಯಿತು. ಮೊಲದಲ್ಲಿ ರೋಗವನ್ನು ಉಂಟುಮಾಡಿ ಅದರ ಮಿದುಳುಬಳ್ಳಿಯನ್ನು ಕೆಲವು ದಿವಸಗಳ ಕಾಲ ಒಣಗಿಸಿದಾಗ ಅದರ ಸಾರದ ರೋಗಕಾರಕ ಸಾಮಥ್ರ್ಯ ಕ್ರಮೇಣ ಕುಂದುವುದೆಂದು ಹದಿನಾಲ್ಕು ದಿವಸಗಳ ಮೇಲ್ಪಟ್ಟು ಒಣಗಿಸಿದರೆ ಅದು ಪೂರ್ಣವಾಗಿ ನಾಶವಾಗುವುದೆಂದೂ ತಿಳಿಯಿತು. ಹದಿಮೂರು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರವನ್ನು ಚುಚ್ಚುಮದ್ದಾಗಿ ಕೊಟ್ಟರೆ ಅದು ರೋಗರಕ್ಷಣೆಯನ್ನು ಒದಗಿಸಲಾರದು. ಆದರೆ ಒಂದೆರಡು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರವನ್ನು ಕೊಟ್ಟರೆ ತೀವ್ರರೋಗವೇ ಕಂಡು ಬಂದು ಪ್ರಾಣಿ ಸತ್ತು ಹೋಗುವುದು ಎಂದು ತಿಳಿಯಿತು. ಇದರ ಬದಲು ಹದಿನಾಲ್ಕು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರದಿಂದ ಪ್ರಾರಂಭಿಸಿ ಹದಿಮೂರು ದಿವಸ, ಹನ್ನೆರಡು ದಿವಸ ಇತ್ಯಾದಿ ಕಾಲ ಒಣಗಿಸಿದ ಬಳ್ಳಿಯ ಸಾರವನ್ನು ದಿನದಿನವೂ ಕ್ರಮವಾಗಿ ಕೊಡುತ್ತಾ ಬಂದರೆ ಅನಂತರ ಒಣಗಿಸದ ಸಾಕ್ಷಾತ್ ರೋಗಗ್ರಸ್ತ ಪ್ರಾಣಿಯ ಮಿದುಳಿನ ಸಾರವನ್ನು ಕೊಟ್ಟರೂ ರೋಗ ಬರದು ಎಂದು ಮೊಲಗಳಲ್ಲಿ ಪದೇ ಪದೇ ಪ್ರಯೋಗ ಮಾಡಿ ಪಾಸ್ತರ್ ದೃಢಪಡಿಸಿಕೊಂಡ. ಆದರೆ ಇದು ಮನುಷ್ಯರಲ್ಲೂ ಉಪಯೋಗವಾಗಬಹುದಾದ ಕ್ರಮವೇ? ಗೊತ್ತುಮಾಡಿಕೊಳ್ಳುವುದು ಹೇಗೆ? ಎಂದು ತಿಳಿಯದೆ ಹಲವು ತಿಂಗಳುಗಳು ಕೈಕಟ್ಟಿ ಕುಳಿತುಕೊಳ್ಳಬೇಕಾಯಿತು. ಒಂದು ದಿನ (6 ಜುಲೈ 1885) ಜೋಸೆಫ್ ಮೀಸ್ಟರ್ ಎಂಬ ಹುಡುಗನಿಗೆ ಹುಚ್ಚುನಾಯಿ ಕಡಿದು ತೀವ್ರ ಗಾಯಗಳಾಗಿದ್ದು, ಆತನ ತಾಯಿ ಪಾಸ್ತರ್ ಹತ್ತಿರ ಬಂದು ಹೇಗಾದರೂ ಮಾಡಿ ಆತನನ್ನು ಬದುಕಿಸಿ ಕೊಡಬೇಕೆಂದು ಕೇಳಿಕೊಂಡಳು. ಹುಚ್ಚುನಾಯಿ ಕಡಿತಕ್ಕೆ ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಚಿಕಿತ್ಸಾ ಕ್ರಮವೆಂದರೆ ನಾಯಿ ಕಡಿದ ಅರ್ಧ ಗಂಟೆಯೊಳಗೆ ಕೆಂಪಗೆ ಕಾಯಿಸಿದ ಕಬ್ಬಿಣದಿಂದ ಕಡಿದ ಗಾಯದ ಮೇಲೆಯೇ ಬರೆ ಹಾಕುವುದು. ಇಂಥ ಭೀಕರ ಕ್ರಮಕ್ಕೆ ತಾಯಿಯ ಮನಸ್ಸು ಒಪ್ಪದೆ, ಪಾಸ್ತರನ ವ್ಯಾಸಂಗ ವಿಷಯವನ್ನು ಕೇಳಿ ಅವನಲ್ಲಿಗೆ ಬಂದಿದ್ದಳು. ಬಲುದಿನಗಳಿಂದ ನಿರೀಕ್ಷಿಸುತ್ತಿದ್ದ ಅವಕಾಶ ಒದಗಿಬಂದು ಪಾಸ್ತರ್ ಆ ಹುಡುಗನಿಗೆ ತಾನು ಸಿದ್ಧಪಡಿಸಿ ಇಟ್ಟುಕೊಂಡಿದ್ದ ಹದಿನಾಲ್ಕು ದಿವಸಗಳು ಒಣಗಿಸಿದ, ಹದಿಮೂರು ದಿವಸಗಳು ಒಣಗಿಸಿದ, ಇತ್ಯಾದಿ, ಮಿದುಳು ಬಳ್ಳಿ ಸಾರಗಳನ್ನು ಪ್ರತಿದಿನ ಚುಚ್ಚುಮದ್ದಾಗಿ ಕೊಡುತ್ತಾ ಬಂದ. ಹುಡುಗ ಸಾಯದೆ ಬದುಕಿಕೊಂಡದ್ದು ಪಾಸ್ತರನ ಆವಿಷ್ಕಾರಕ್ಕೆ ದೊರಕಿದ ಅತ್ಯದ್ಭುತ ವಿಜಯ. ಸ್ವಲ್ಪ ಕಾಲ ಮುಂದೆ ಇದೇ ರೀತಿ ಚಿಕಿತ್ಸೆಯಿಂದ ಪಾಸ್ತರ್ ಜ್ಯೂಪಿಲ್ಲೆ ಎಂಬ ಇನ್ನೊಬ್ಬ ಹುಡುಗನನ್ನು ಹುಚ್ಚುನಾಯಿ ಕಡಿತದ ಪರಿಣಾಮದಿಂದ ರಕ್ಷಿಸಿದ. ಈ ವ್ಯಕ್ತಿ ಮುಂದೆ ಜೀವನ ಪರ್ಯಂತ ಪಾಸ್ತರನನ್ನು ನೆರಳಿನಂತೆ ಅನುಸರಿಸುತ್ತಿದ್ದು ಅವನ ಸೇವಾನಿರತನಾಗಿದ್ದ.

ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗದ ವಿರುದ್ಧ ರಕ್ಷಣೆಯ ಈ ಕ್ರಮದಿಂದ ಮಾನವಕೋಟಿಗೆ ಅಪಾರ ಲಾಭವಾಯಿತು. ಪ್ರಪಂಚದಲ್ಲೆಲ್ಲಾ ಈ ಕ್ರಮದ ಉಪಯುಕ್ತತೆ ಮನದಟ್ಟಾಗಿ ಇದನ್ನು ಎಲ್ಲೆಲ್ಲೂ ಅನುಸರಿಸಲು ತಕ್ಕಷ್ಟು ಮಿದುಳುಬಳ್ಳಿ ಸಾರವನ್ನು ತಯಾರಿಸುವ ಅನುಕೂಲತೆ ಲಭಿಸುವಂತೆ ನಿಧಿಯನ್ನು ನಾನಾಕಡೆಗಳಿಂದ ಸಂಗ್ರಹಿಸಲಾಯಿತು. ಇಪ್ಪತ್ತೈದು ಲಕ್ಷ ಫ್ರಾಂಕುಗಳ ಮೌಲ್ಯದ ಈ ನಿಧಿಯಿಂದ ಪ್ಯಾರಿಸ್‍ನಲ್ಲಿ ಭವ್ಯಸೌಧವನ್ನು ಕಟ್ಟಿ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಪಾಸ್ತರ್ ಇನ್‍ಸ್ಟಿಟ್ಯೂಟ್ ಎಂದು ಹೆಸರಿಡಲಾಯಿತು. 1838 ರಲ್ಲಿ ಪೂರ್ಣಗೊಳಿಸಿದ ಈ ಸಂಸ್ಥೆಗೆ ಪಾಸ್ತರನನ್ನೇ ಮೊದಲ ನಿರ್ದೇಶಕನಾಗಿ ನೇಮಿಸಿ ಗೌರವಿಸಲಾಯಿತು. ಇಲ್ಲಿ ಪಾಸ್ತರ್ ಪ್ರಯೋಗಗಳನ್ನು ಮುಂದುವರಿಸುತ್ತಾ 1895 ಸೆಪ್ಟಂಬರ್ 28 ರಂದು ನಿಧನನಾದ.

ಒಂದೇ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಂಡುಬರದ ಅನೇಕ ರೀತಿಯ ಸಾಮಥ್ರ್ಯ ಸ್ವಭಾವಗಳು ಪಾಸ್ತರನಲ್ಲಿ ಕೇಂದ್ರೀಕೃತವಾಗಿದ್ದುದೇ ಆತನ ಘನ ಸಾಧನೆಗಳಿಗೆ ಕಾರಣ. ವೈಜ್ಞಾನಿಕ ಸಂಶೋಧನೆಗಳಲ್ಲಿ ಸಂಪೂರ್ಣ ಮಗ್ನನಾಗಿರುವಷ್ಟು ಆಸಕ್ತಿ ಇದ್ದುದರಿಂದಲೇ ಅವನಿಗೆ ಪಾಶ್ರ್ವವಾಯು ತಗುಲಿದ್ದೂ ಅಲ್ಲದೆ ವಾಸಿಯಾಗಿದ್ದು ಕೂಡ ಎಂದು ಭಾವಿಸಬಹುದು. ಪ್ರಯೋಗಗಳ ವಿಷಯವಾಗಿ ಮನಸ್ಸಿಗೆ ಅಪೂರ್ವ ಯೋಜನೆಗಳು ಹೊಳೆಯುತ್ತಿದ್ದುದೂ ಅವನ್ನು ಕಾರ್ಯಗತ ಮಾಡುವ ವಿಧಾನಗಳ ಆವಿಷ್ಕಾರಗಳನ್ನು ಮಾಡುತ್ತಿದ್ದುದೂ ಪಾಸ್ತರನ ಹಿರಿಮೆ. ಕೈಗಾರಿಕೆಗಳಿಗೆ ಅಥವಾ ವಿಶಿಷ್ಟವಾದ ರೋಗಗಳಿಗೆ ಸಂಬಂಧಪಟ್ಟಂತೆ ಪ್ರಯೋಗಗಳನ್ನು ಕೈಗೊಂಡರೂ ಅವೇ ಪ್ರಯೋಗಗಳು ಆಯಾ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರದೇ ವ್ಯಾಪಕ ತತ್ತ್ವವೊಂದನ್ನು ವಿಶದೀಕರಿಸುವಂಥವಾಗಿದ್ದವು. ಸಾಮಾನ್ಯವಾಗಿ ಒಂಟಿಯಾಗಿಯೇ ಪ್ರಯೋಗ ನಿರತನಾಗಿದ್ದರೂ ಅವಶ್ಯವಾದಾಗ ಜನರ ಜೊತೆ ಸಂಪರ್ಕ ಬೆಳೆಸುವುದಕ್ಕಾಗಲೀ ವಾದಮಾಡಿ ತನ್ನ ನಿಲವನ್ನು ದೃಢೀಕರಿಸುವುದಕ್ಕಾಗಲಿ ಇವನೆಂದೂ ಹಿಂದೇಟು ಹೊಡೆದವನಲ್ಲ. ತಂದೆಯಲ್ಲಿ ಪರಮ ಭಕ್ತಿ ವಿಶ್ವಾಸಗಳಿದ್ದವನು. ತಾನು ವಿಖ್ಯಾತ ವಿಜ್ಞಾನಿಯಾಗಿ ಯಶಸ್ಸಿನ ಪಾವಟಿಗೆಗಳನ್ನು ಏರುತ್ತಿದ್ದ ಒಂದೊಂದು ಹಂತದಲ್ಲೂ ತಂದೆಯ ಆಶೀರ್ವಾದ ಪಡೆಯುತ್ತಿದ್ದ. ತಂಗಿಯರ ವಿಷಯದಲ್ಲೂ ಅಷ್ಟೇ ವಿಶ್ವಾಸ. ತನ್ನ ಸಂಸಾರದಲ್ಲಿ ಹೆಂಡತಿ ಮಕ್ಕಳೊಡನೆ ಆನಂದದಿಂದ ಕಾಲ ಕಳೆದವ. ಪ್ರೀತಿಯ ಮಗಳು ಮೃತಳಾದಾಗ ದಿಕ್ಕು ತೋರದಂತಾಗಿದ್ದರೂ ಶೀಘ್ರದಲ್ಲಿ ಚೇತರಿಸಿಕೊಂಡು ತನ್ನ ತಂದೆಗೂ ತನ್ನ ಹೆಂಡತಿಗೂ ಸಮಾಧಾನ ಹೇಳುತ್ತ ಮಾಮೂಲಿನಂತೆ ವ್ಯಾಸಂಗಗಳಲ್ಲಿ ನಿರತನಾಗುವಷ್ಟು ಸ್ಥೈರ್ಯವಂತನಾಗಿದ್ದ. ವಿಜ್ಞಾನಿಯಾಗಿ ಪಾಸ್ತರ್ ಎಷ್ಟು ದೊಡ್ಡವನೊ ಕರುಣಾದ್ರ್ರ ಹೃದಯಿಯಾಗಿಯೂ ಅಷ್ಟೇ ದೊಡ್ಡವನು. (ಎಸ್.ಆರ್.ಆರ್.)