ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಯಾಂಕಿಂಗ್ ವ್ಯವಸ್ಥೆ

ವಿಕಿಸೋರ್ಸ್ದಿಂದ

ಬ್ಯಾಂಕಿಂಗ್ ವ್ಯವಸ್ಥೆ - ಒಂದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕುಗಳು ನಿರ್ವಹಿಸುವ ಪಾತ್ರ ಮಹತ್ತ್ವಪೂರ್ಣವಾದ್ದು. ಉದ್ದರಿಯ ಮೂಲವಾಗಿ ಸುವ್ಯವಸ್ಥಿತ ಬ್ಯಾಂಕಿಂಗ್ ವ್ಯವಸ್ಥೆಯಿರದಿದ್ದ ಪಕ್ಷದಲ್ಲಿ ವಿಳಂಬಿತ ಪಾವತಿಯ ಸಾಧನವಾಗಿ ಹಣ ನಿರ್ವಹಿಸುವ ಕಾರ್ಯ ಮೊಟಕಾಗುತ್ತಿತ್ತು. ಆಧುನಿಕ ಬೃಹತ್ ಉತ್ಪಾದನಾ ವಿಧಾನಗಳು ಅನುಷ್ಠಾನಕ್ಕೆ ಬರುತ್ತಿರಲಿಲ್ಲ. ವ್ಯಾಪಾರ ವ್ಯವಹಾರಗಳು ವೃದ್ಧಿಯಾಗುತ್ತಿರಲಿಲ್ಲ. 18 ಮತ್ತು 19ನೆಯ ಶತಮಾನಗಳಲ್ಲಿ ಐರೋಪ್ಯ ರಾಷ್ಟ್ರಗಳು ಕಂಡ ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಯಶಸ್ಸಿಗೆ ಆ ದೇಶಗಳಲ್ಲಿದ್ದ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಮಟ್ಟಿಗೆ ಕಾರಣವಾಯಿತು. ಇಂದು ಮುಂದುವರಿದಿರುವ ರಾಷ್ಟ್ರಗಳ ಸಾಲಿಗೆ ಸೇರಬೇಕೆಂದು ಹವಣಿಸುತ್ತಿರುವ ಪ್ರತಿಯೊಂದು ದೇಶವೂ ಸುವ್ಯವಸ್ಥಿತ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವುದು ಅತ್ಯಾವಶ್ಯಕವೆನಿಸಿದೆ.

ಬ್ಯಾಂಕಿಂಗ್ ವ್ಯವಸ್ಥೆ ಪ್ರಪಂಚಾದ್ಯಂತ ಒಂದೇ ರೀತಿಯಾಗಿಲ್ಲ. ಇದು ಸ್ಥಳೀಯ ಆಥಿರ್üಕ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಬೆಳೆದಿದೆ. ಇದರಲ್ಲಿ ದೇಶದಿಂದ ದೇಶಕ್ಕೆ ಹಲವಾರು ವ್ಯತ್ಯಾಸಗಳಿವೆ. ಆದರೆ ಪ್ರಸ್ತುತ ಶತಮಾನದಲ್ಲಿ ಪ್ರತಿಯೊಂದು ರಾಷ್ಟ್ರವೂ ತನ್ನ ಪ್ರಮುಖ ವಾಣಿಜ್ಯ ಕೇಂದ್ರದ ಸುತ್ತ ಬ್ಯಾಂಕುಗಳ ಒಂದು ಸುವಿಸ್ತಾರವಾದ ಜಾಲ ನಿರ್ಮಿಸಿಕೊಳ್ಳುವ ಪ್ರವೃತ್ತಿ ತಳೆದಿದೆ. ದೇಶದ ದೊಡ್ಡ ಬ್ಯಾಂಕುಗಳೆಲ್ಲ ಆ ಕೇಂದ್ರದಲ್ಲಿ ತೀರ ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಸಂಸ್ಥೆಯಾಗಿ ನೆಲೆಗೊಂಡಿರುವ ಕೇಂದ್ರೀಯ ಬ್ಯಾಂಕಿನ ಸುತ್ತ, ಅದರ ಕಟ್ಟುಪಾಡುಗಳಿಗೆ ತಕ್ಕಂತೆ ಮತ್ತು ನೀತಿ ನಿಯಮಗಳಿಗೆ ಅನುಸಾರವಾಗಿ, ಅಭಿವೃದ್ಧಿ ಹೊಂದಿವೆ. ಇಂಗ್ಲೆಂಡ್ ಒಂದು ಶತಮಾನಕ್ಕೂ ಹಿಂದೆಯೇ ಇಂದಿಗಿಂತ ಅತ್ಯಧಿಕ ಸಂಖ್ಯೆಯ ಚಿಕ್ಕ ಚಿಕ್ಕ ಬ್ಯಾಂಕುಗಳನ್ನು ಹೊಂದಿತ್ತು. ಹಾಗೆಯೆ ಆಧುನಿಕ ಬ್ಯಾಂಕಿಂಗ್ ವ್ಯೂಹ ಅಲ್ಲಿ ಸ್ವರೂಪ ತಳೆಯಿತು. ಅಭಿವೃದ್ಧಿ ಹೊಂದದ ರಾಷ್ಟ್ರಗಳನ್ನು ಒಳಗೊಂಡಂತೆ ಅನೇಕ ರಾಷ್ಟ್ರಗಳು ಇಂಗ್ಲೆಂಡಿನ ಪದ್ಧತಿಯಿಂದ ಆಕರ್ಷಿತವಾದುವು.

ಪ್ರಾಯೋಗಿಕವಾಗಿ ಇಂದು ಪ್ರತಿಯೊಂದು ದೇಶವೂ ಬ್ಯಾಂಕುಗಳ ಮತ್ತು ಇತರ ಹಣ ಸಂಸ್ಥೆಗಳ ತನ್ನದೇ ಆದ ರಚನೆ ಹೊಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಬ್ಯಾಂಕಿಂಗ್ ವ್ಯವಸ್ಥೆಯಂತೂ ಇನ್ನೂ ವಿಶಿಷ್ಟ ರೀತಿಯದಾಗಿದೆ. ಸದ್ಯದ ಸ್ಥಿತಿಯಲ್ಲಿ ಇದನ್ನು ಹೊಸ ರೀತಿಯ ಬೆಳವಣಿಗೆ ಎಂದರೂ ಇತ್ತೀಚಿನ ತನಕ ಪ್ರಪಂಚದ ಬಹುತೇಕ ಪ್ರದೇಶಗಳು ಲಂಡನ್ ವ್ಯವಸ್ಥೆಯ ಹೊರಚಾಚುಗಳನ್ನು ಅವಲಂಬಿಸುತ್ತಿದ್ದುವು. ಅವಕ್ಕೆ ತಮ್ಮದೇ ಆದ ಕೇಂದ್ರೀಯ ಬ್ಯಾಂಕುಗಳು ಇರಲಿಲ್ಲ. ಕ್ರಮೇಣ ಸ್ಥಳೀಯ ಬ್ಯಾಂಕುಗಳ ಬೆಳವಣಿಗೆಯಾದಂತೆ ಲಂಡನ್ನಿನ ಹೊರಚಾಚುಗಳ ಮಹತ್ವ ಕ್ಷೀಣಿಸತೊಡಗಿತು. ಒಂದಾದ ಮೇಲೊಂದರಂತೆ ಎಲ್ಲ ದೇಶಗಳಲ್ಲೂ ಕೇಂದ್ರೀಯ ಬ್ಯಾಂಕುಗಳು ಸ್ಥಾಪನೆಯಾದುವು. ಇಂದು ಪ್ರತಿಯೊಂದು ರಾಷ್ಟ್ರದ ಸರಹದ್ದುಗಳೊಳಗೆ ವಿವಿಧ ರೀತಿಯ ಬ್ಯಾಂಕುಗಳು ಮತ್ತು ಇತರ ಹಣಕಾಸಿನ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ ಮತ್ತು ತಂತಮ್ಮ ಕೇಂದ್ರಬಿಂದುವಾಗಿ ನೆಲೆಗೊಂಡಿರುವ ಕೇಂದ್ರೀಯ ಬ್ಯಾಂಕಿನ ದೃಢಾವಲಂಬಿಗಳಾಗಿ ಮುಂದುವರಿಯುತ್ತಿವೆ. ಪ್ರಸ್ತುತ ಶತಮಾನದಲ್ಲಿ ಈ ಬ್ಯಾಂಕಿಂಗ್ ವ್ಯೂಹ ಪದ್ಧತಿ ಪ್ರಪಂಚವ್ಯಾಪಿಯಾಗಿದೆ.

ರಚನಾತ್ಮಕ ವೈವಿಧ್ಯಗಳನ್ನು ಬಿಟ್ಟರೆ ಇಂದಿನ ಪ್ರಪಂಚ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಮಟ್ಟಿಗೆ ಇಂಗ್ಲಿಷ್ ಬ್ಯಾಂಕಿಂಗ್ ಪದ್ಧತಿಯನ್ನು ಹೋಲುತ್ತವೆ. ಬ್ಯಾಂಕರುಗಳ ಚಿಂತಾನಲಹರಿ ಪ್ರಪಂಚಾದ್ಯಂತ ಒಂದೇ ರೀತಿಂiÀiದಾಗಿದೆ. ಅವರ ಸ್ವಭಾವ ಒಂದೇ ಗ್ರಾಹಕರ ಬಗ್ಗೆ ಅವರು ತಳೆಯುವ ಮನೋಭಾವ ಒಂದೇ ಮತ್ತು ಆರ್ಥಿಕ ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳಿಗೆ ಅವರು ತೋರುವ ಪ್ರತಿಕ್ರಿಯೆಯೂ ಒಂದೇ. ಆದ್ದರಿಂದ ಬ್ಯಾಂಕಿಂಗ್ ತತ್ತ್ವಗಳು ಪ್ರಪಂಚವ್ಯಾಪಿಯಾಗಿವೆ. ಇತರ ವಿಚಾರಗಳಲ್ಲಿ ರಾಷ್ಟ್ರೀಯ ವೈಲಕ್ಷಣ್ಯಗಳು ಬೆಳೆದಿವೆ.

ಕಾರ್ಯಭಾರದ ಆಧಾರದ ಮೇಲೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು: 1 ಕೇಂದ್ರೀಯ ಬ್ಯಾಂಕು, 2 ವಾಣಿಜ್ಯ ಬ್ಯಾಂಕುಗಳು, 3 ಇತರ ಬ್ಯಾಂಕುಗಳು.

ಕೇಂದ್ರೀಯ ಬ್ಯಾಂಕು : ಆಧುನಿಕ ಆರ್ಥಿಕ ಪ್ರಪಂಚದ ಯಾವುದೇ ದೇಶದ ಹಣ ವ್ಯವಸ್ಥೆಯ ವಿಧಾಯಕ ಶಕ್ತಿ ಕೇಂದ್ರೀಯ ಬ್ಯಾಂಕು. ಇಂದು ಸಾಮಾನ್ಯವಾಗಿ ಪ್ರತಿಯೊಂದು ದೇಶದಲ್ಲೂ ಒಂದೊಂದು ಕೇಂದ್ರೀಯ ಬ್ಯಾಂಕು ಇದೆ. ದೇಶದ ಹಣ ವ್ಯವಸ್ಥೆಯಲ್ಲೂ ಹಣದ ವಹಿವಾಟುಗಳಲ್ಲೂ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳುವುದೇ ಇದರ ಮುಖ್ಯ ಕರ್ತವ್ಯ. ಈ ಕರ್ತವ್ಯ ಪರಿಪಾಲನೆಗಾಗಿ ಇಡೀ ಬ್ಯಾಂಕಿಂಗ್ ವ್ಯವಸ್ಥೆಯ ಮುಂದಾಳಾಗಿ ಮತ್ತು ಸಂಯೋಜಕವಾಗಿ ಕಾರ್ಯ ನಿರ್ವಹಿಸುವ ಕೇಂದ್ರೀಯ ಬ್ಯಾಂಕು ಸರ್ಕಾರದ ಆರ್ಥಿಕ ಹಾಗೂ ಹಣಕಾಸಿನ ನೀತಿಗಳ ಪರಸ್ಪರ ಹೊಂದಾಣಿಕೆಗೆ ಸಹಕಾರಿಯಾಗಿದೆ. ದೇಶದ ಒಳಗೂ ಹೊರಗೂ ಬೆಳೆದು ಬಲವಾಗುತ್ತಿರುವ ಆರ್ಥಿಕ ಪರಾವಲಂಬನೆ ನೋಟು ಚಲಾವಣೆಯ ಹತೋಟಿ, ಒಂದನೆಯ ಮಹಾಯುದ್ದದ ಅನಂತರ ವಿದೇಶಿ ವಿನಿಮಯ ಪದ್ಧತಿಯಲ್ಲಿ ಉಂಟಾದ ಅವ್ಯವಸ್ಥೆ, ಆರ್ಥಿಕ ಮುಗ್ಗಟ್ಟು, ಹಣದ ಪೂರೈಕೆಯ ಜವಾಬ್ದಾರಿ ಹೊತ್ತು ಆರ್ಥಿಕ ವಲಯದ ಏರುಪೇರುಗಳ ನಿವಾರಣೆ, ಆರ್ಥಿಕ ಯೋಜನೆಗಳ ಯಶಸ್ಸು ಇವೇ ಮೊದಲಾದ ಕಾರಣಗಳಿಂದ ಕೇಂದ್ರೀಯ ಬ್ಯಾಂಕಿನ ಪ್ರಾಮುಖ್ಯ ದಿನೇದಿನೇ ಹೆಚ್ಚಾಗುತ್ತದೆ.

ಕೇಂದ್ರೀಯ ಬ್ಯಾಂಕಿಗೆ ಇನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಆದರೆ ಅದರ ನಿಜವಾದ ಬೆಳವಣಿಗೆ ಪ್ರಾರಂಭವಾದ್ದು 19ನೆಯ ಶತಮಾನದಲ್ಲಿ. 1656ರಲ್ಲಿ ಸ್ಥಾಪಿತವಾದ ಸ್ವೀಡನ್ನಿನ ರಿಕ್ಸ್ ಬ್ಯಾಂಕು ಈಗಿರುವ ಕೇಂದ್ರೀಯ ಬ್ಯಾಂಕುಗಳಲ್ಲೆಲ್ಲ ಹಳೆಯದು. ಆದರೆ ಕೇಂದ್ರೀಯ ಬ್ಯಾಂಕಿಂಗ್ ಪದ್ಧತಿಯ ಪ್ರಪಂಚ ಸ್ವೀಕೃತ ತತ್ತ್ವಗಳನ್ನೆಲ್ಲ ಅಳವಡಿಸಿಕೊಂಡು ಕೇಂದ್ರೀಯ ಬ್ಯಾಂಕಿಂಗ್ ಸ್ಥಾನಮಾನಗಳನ್ನು ಗಳಿಸಿಕೊಂಡ ಮೊತ್ತ ಮೊದಲನೆಯ ಬ್ಯಾಂಕ್ ಎಂದರೆ `ಬ್ಯಾಂಕ್ ಆಫ್ ಇಂಗ್ಲೆಂಡ್. ಇದು 1694 ರಲ್ಲಿ ಸ್ಥಾಪಿತವಾಯಿತಾದರೂ ಸಹಜ ಸ್ವರೂಪದ ಕೇಂದ್ರೀಯ ಬ್ಯಾಂಕಾಗಿ ಕೆಲಸ ಮಾಡಲಾರಂಭಿಸಿದ್ದು 1844ರಿಂದ. ಇದಕ್ಕೆ ಮೊದಲು ಬ್ಯಾಂಕ್ ಆಫ್ ಇಂಗ್ಲೆಂಡಿನ ಜೊತೆಗೆ ಮತ್ತೆ ಕೆಲವು ಕೂಡುಬಂಡವಾಳದ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನ ಕಾರ್ಯಭಾರಗಳನ್ನು ನಿರ್ವಹಿಸುತ್ತಿದ್ದುವು. ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಅಧಿಕಾರವನ್ನೂ ಹೊಂದಿದ್ದುವು. ಕಾಲಕ್ರಮದಲ್ಲಿ ಇತರ ಬ್ಯಾಂಕುಗಳು ತಮ್ಮ ಪರಸ್ಪರ ಋಣಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡಿನ ಮೇಲೆ ಚೆಕ್ಕುಗಳನ್ನು ನೀಡುವುದರ ಮೂಲಕ ತೀರಿಸಿಕೊಳ್ಳವುದು ಕ್ಷೇಮವೆಂದರಿತುವು. ಅಲ್ಲದೆ ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿ ಠೇವಣಿಗಳನ್ನು ಇಡುವುದು ರೂಢಿಗೆ ಬಂದು ಅವನ್ನು ತಮ್ಮ ಸ್ವಂತ ವಶದಲ್ಲಿದ್ದ ನಗದು ಹಣದಂತೆಯೇ ಪರಿಗಣಿಸಲಾರಂಭಿಸಿದುವು. 1844ರ ಬ್ಯಾಂಕು ಸನ್ನದು ಅಧಿನಿಯಮ ಇಂಗ್ಲಿಷ್ ಬ್ಯಾಂಕಿಗೆ ಪದ್ಧತಿಯ ಕಾನೂನುಬದ್ಧ ರಚನೆ ರೂಪಿಸುವ ಮೊದಲೇ ಬ್ಯಾಂಕ್ ಆಫ್ ಇಂಗ್ಲೆಂಡಿನ ನಿರ್ದೇಶಕರು ಬ್ಯಾಂಕು ದರ ಏರಿಸುವುದರ ಮತ್ತು ಇಳಿಸುವುದರ ಪರಿಣಾಮಗಳನ್ನು ಒಂದು ಅಸ್ಪಷ್ಟ ರೀತಿಯಲ್ಲಿ ಅರಿತುಕೊಂಡಿದ್ದರು. ಆದರೆ 1873ರಲ್ಲಿ ವಾಲ್ಟರ್ ಬೇಜ್‍ಹಟ್ಟಿನ ಲೋಂಬಾರ್ಡ್ ಸ್ಟ್ರೀಟ್ ಎಂಬ ಗ್ರಂಥ ಪ್ರಕಟವಾಗುವ ತನಕ ಉದ್ದರಿ ನಿಯಂತ್ರಣ ತತ್ತ್ವಗಳು ಪ್ರತಿಪಾದಿತವಾಗಿರಲಿಲ್ಲ. ಬ್ಯಾಂಕು ತನ್ನ ಕಾರ್ಯಾಚರಣೆಯಲ್ಲಿ ಗಮನಿಸುತ್ತಿದ್ದ ಅಂಶಗಳು ಕೇವಲ ರೂಢಿಯಿಂದ ಬಂದಿದ್ದ ನಿಯಮಗಳಾಗಿದ್ದುವು. ವ್ಯವಹಾರವೆಲ್ಲ ಒಂದು ಅಪಕ್ವ ರೀತಿಯಲ್ಲಿ ನಡೆಯುತ್ತಿತ್ತು. ಒಟ್ಟಿನಲ್ಲಿ ಒಂದನೆಯ ಮಹಾಯುದ್ದಕ್ಕೆ ಮುಂಚೆ ಒಂದು ನಿಶ್ಚಿತ ನೀತಿಗೆ ಅನುಗುಣವಾಗಿ ವಿವೇಚಿಸಿ ವ್ಯವಹರಿಸುವ ಪ್ರಯತ್ನ ನಡೆದಿರಲಿಲ್ಲ. ಆದಾಗ್ಯೂ ಬ್ಯಾಂಕ್ ಆಫ್ ಇಂಗ್ಲೆಂಡಿನ ಬೆಳವಣಿಗೆ ಕೇಂದ್ರೀಯ ಬ್ಯಾಂಕಿಂಗ್ ಪದ್ದತಿಯ ಬೆಳವಣಿಗೆ ಮಾದರಿಯಾಯಿತು.

19ನೆಯ ಶತಮಾನ ಮುಗಿಯುವ ವೇಳೆಗೆ ಇಂಗ್ಲೆಂಡಿನ ಜಾಡನ್ನು ಅನುಸರಿಸಿ ಅನೇಕ ಐರೋಪ್ಯ ರಾಷ್ಟ್ರಗಳು ಕೇಂದ್ರೀಯ ಬ್ಯಾಂಕುಗಳನ್ನು ಸ್ಥಾಪಿಸಿಕೊಂಡವು. ಫ್ರಾನ್ಸ್, ಜರ್ಮನಿ ಮತ್ತು ಸ್ವೀಡನ್‍ಗಳಿಗೆ 19ನೆಯ ಶತಮಾನದ ಉದ್ದಕ್ಕೂ ಅಥವಾ ಬಹಳ ಕಾಲದಿಂದಲೂ ಅವುಗಳದೇ ಆದ ಕೇಂದ್ರಿಯ ಬ್ಯಾಂಕುಗಳಿದ್ದುವು. ಆದರೆ ಲಂಡನ್ನಿನಲ್ಲಿದ್ದಂಥ ದೊಡ್ಡ ಹಾಗೂ ಹೊಂದಿಕೊಳ್ಳಬಲ್ಲ ಹಣದ ಮಾರು ಕಟ್ಟೆಗಳು ಈ ದೇಶಗಳಲ್ಲಿರಲಿಲ್ಲ. ಬ್ರಿಟಿಷ್ ಜನತೆಯ ಹಾಗೆ ಅಲ್ಲಿಯ ಜನಗಳು ಚೆಕ್ಕು ಬಳಸುವ ಪದ್ಧತಿ ಅನುಸರಿಸುತ್ತಿರಲಿಲ್ಲ. ಬ್ಯಾಂಕ್ ಆಫ್ ಫ್ರಾನ್ಸ್ ಮತ್ತು ರಿಕ್ಸ್ ಬ್ಯಾಂಕುಗಳು ಬ್ಯಾಂಕ್ ಆಫ್ ಇಂಗ್ಲೆಂಡಿನಂತೆ ತಮ್ಮ ವ್ಯವಹಾರಗಳಲ್ಲಿ ಸರ್ಕಾರ ಹಾಗೂ ಸದಸ್ಯ ಬ್ಯಾಂಕುಗಳಿಗೆ ಮಿತಿ ನಿಬಂಧಿಸಿಕೊಳ್ಳದೆ ದೇಶದ ಇತರ ಬ್ಯಾಂಕುಗಳೊಡನೆ ಪೈಪೋಟಿ ನಡೆಸುತ್ತಿದ್ದುವು. ಈ ಕಾರಣಗಳಿಂದಾಗಿ ಇಂಗ್ಲಿಷ್ ಉದರಿ ವ್ಯವಸ್ಥೆಯಂಥ ಸೂಕ್ಷ್ಮ ವ್ಯವಸ್ಥೆ ಅಲ್ಲಿ ವಿಕಾಸ ಹೊಂದಲಿಲ್ಲ.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಳೆದ ಶತಮಾನದ 3ನೆಯ ದಶಕದಲ್ಲಿ ಸಂಭವಿಸಿದ ಬ್ಯಾಂಕು ಕುಸಿತದ ಅನಂತರ ಕೇಂದ್ರೀಯ ಬ್ಯಾಂಕಿನ ಸ್ವರೂಪದ ಯಾವ ಸಂಸ್ಥೆಯೂ ಇರಲಿಲ್ಲ. 1907ರಲ್ಲಿ ಸಂಭವಿಸಿದ ಉದ್ದರಿ ಬಿಕ್ಕಟ್ಟಿನ ಕಾಲದಲ್ಲಿ ಬ್ಯಾಂಕುಗಳು ತಮ್ಮ ಋಣಗಳನ್ನು ನಗದು ರೂಪದಲ್ಲಿ ತೀರಿಸಲಾಗದೆ, ತೀರುವೆ ಪತ್ರಗಳನ್ನು ನೀಡಬೇಕಾಗಿ ಬಂತು. ಇವು ತುರ್ತು ಪರಿಸ್ಥಿತಿಯ ಕಾಲದ ಕಾನೂನುಬದ್ಧವಲ್ಲದ ಕರನ್ಸಿಯಾಗಿ ಚÀÀಲಾವಣೆಗೆ ಬಂದುವು. ಒಳ್ಳೆಯ ಹಾಗೂ ಕೆಟ್ಟ, ಪರಸ್ಪರ ಸಂಬದ್ಧವಾಗಿಲ್ಲದ ಸಾವಿರಾರು ಬ್ಯಾಂಕುಗಳಿಂದ ಕೂಡಿದ ಬ್ಯಾಂಕಿಂಗ್ ವ್ಯವಸ್ಥೆಯ ಅಪಾಯ ಹಾಗೂ ಅನಾನುಕೂಲಗಳ ಪರಿಸ್ಥಿತಿ ಎದ್ದು ಕಂಡಿತು. ಸಣ್ಣ ಬ್ಯಾಂಕುಗಳು ದೊಡ್ಡ ಬ್ಯಾಂಕುಗಳ ಸಹಾಯ ಕೋರಬಹುದಾಗಿತ್ತು. ಆದರೆ ದೊಡ್ಡ ಬ್ಯಾಂಕುಗಳು ಕಷ್ಟಕ್ಕೆ ಸಿಲುಕಿದಾಗ ಅವುಗಳ ನೆರವಿಗೆ ಬರಬಲ್ಲ ಮತ್ತು ತಾತ್ಕಾಲಿಕವಾಗಿ ಹೆಚ್ಚು ನಗದನ್ನು ಒದಗಿಸಬಲ್ಲ ಯಾವ ಸಂಸ್ಥೆಯೂ ಇರಲಿಲ್ಲ. ಅನೇಕ ವರ್ಷಗಳ ಪರಿಶೀಲನೆಯ ಅನಂತರ 1913ರಲ್ಲಿ ಫೆಡರಲ್ ರಿಸರ್ವ್ ಅಧಿನಿಯಮವನ್ನು ಅಂಗೀಕರಿಸಲಾಯಿತು. ಇದರ ಮೇರೆಗೆ ರಚಿಸಲಾದ ವ್ಯವಸ್ಥೆ ಇಂಗ್ಲಿಷ್ ಬ್ಯಾಂಕಿಂಗ್ ವ್ಯವಸ್ಥೆಯ ಮುಖ್ಯ ತತ್ತ್ವಗಳನ್ನು ಒಳಗೊಂಡಿದೆ. ಅಂದರೆ ಸದಸ್ಯ ಬ್ಯಾಂಕುಗಳು ಅವುಗಳ ಠೇವಣಿಗಳ ಒಟ್ಟು ಮೊತ್ತದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ನಗದು ಸಂಚಿತಿಯನ್ನು ಫೆಡರಲ್ ರಿಸರ್ವ್ ಬ್ಯಾಂಕುಗಳಲ್ಲಿ ಇಟ್ಟಿರಬೇಕು. ಬ್ಯಾಂಕು ದರದ ಬದಲಾವಣೆಗಳ ಮೂಲಕವೂ ತೆರೆದ ಮಾರುಕಟ್ಟೆಯ ವ್ಯವಹಾರಗಳ ಮೂಲಕವೂ ಫೆಡರಲ್ ರಿಸರ್ವ್ ಬ್ಯಾಂಕುಗಳು ಸದಸ್ಯ ಬ್ಯಾಂಕುಗಳ ನಗದು ಸಂಚಿತಿಯ ಮೇಲೆ ಪ್ರಭಾವ ಬೀರುವುವು. ಇವುಗಳ ಜೊತೆಗೆ ಅಧಿನಿಯಮದಲ್ಲಿ ವಿಶಿಷ್ಟವಾದ ಕೆಲವು ಹೊಸ ಕ್ರಮಗಳಿದ್ದುವು. ನ್ಯೂಯಾರ್ಕಿನಲ್ಲಿ ಒಂದು ಕೇಂದ್ರೀಯ ಬ್ಯಾಂಕನ್ನು ಸ್ಥಾಪಿಸುವುದಕ್ಕೆ ಬದಲಾಗಿ, ಅಮೆರಿಕದ ಸಾರ್ವಜನಿಕ ಜೀವನದಲ್ಲಿ ಪ್ರಬಲವಾಗಿರುವ ಸಂಘೀಯ (ಫೆಡರಲ್) ಪ್ರವೃತ್ತಿಗೆ ಅನುಸಾರವಾಗಿ ಈ ಅಧಿನಿಯಮ ಹನ್ನೆರಡು ಫೆಡರಲ್ ರಿಸರ್ವ್ ಬ್ಯಾಂಕುಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟು, ವಾಷಿಂಗ್‍ಟನ್ನಿನಲ್ಲಿರುವ ಫೆಡರಲ್ ರಿಸರ್ವ್ ಬೋರ್ಡಿನ ಮೂಲಕ ಈ ಹನ್ನೆರಡು ಬ್ಯಾಂಕುಗಳೊಳಗೆ ನಿಕಟ ಹೊಂದಾವಣೆಗೂ ಇವುಗಳ ನಿಯಂತ್ರಣಕ್ಕೂ ಏರ್ಪಾಡು ಮಾಡಿತು. ಈ ವ್ಯವಸ್ಥೆ ಹೆಚ್ಚಾಗಿ ಏಕ ಘಟಕವಾಗಿ ವರ್ತಿಸುವ ಪ್ರವೃತ್ತಿಯದಾಗಿದೆ. ಮತ್ತು ಪ್ರತ್ಯೇಕವಾಗಿ ಒಂದೊಂದು ಫೆಡರಲ್ ರಿಸರ್ವ್ ಬ್ಯಾಂಕೂ ಹೊಂದಿರಬಹುದಾದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿದೆ. ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ತೆರೆದ ಮಾರುಕಟ್ಟೆಯ ವ್ಯವಹಾರಗಳು ದೇಶದ ಅತ್ಯಂತ ದೊಡ್ಡ ಹಣದ ಮಾರುಕಟ್ಟೆ ಇರುವ ನ್ಯೂ ಯಾರ್ಕ್ ನಗರದಲ್ಲಿ ನಡೆಯಬೇಕಾಗಿದೆ. ಅಲ್ಲದೆ ನೀತಿಗಳನ್ನು ರೂಪಿಸುವ ಕಾರ್ಯವನ್ನು ಫೆಡರಲ್ ರಿಸರ್ವ್ ಬೋರ್ಡು ಆದಷ್ಟು ಮಟ್ಟಿಗೆ ತನ್ನ ಕೈಯಲ್ಲೇ ಇರುವಂತೆ ನೋಡಿಕೊಳ್ಳುತ್ತ ಬಂದಿದೆ. ಈ ನೀತಿಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮಾತ್ರ ರಿಸರ್ವ್ ಬ್ಯಾಂಕುಗಳಿಗೆ ಬಿಡಲಾಗಿದೆ. ಸುಂಕಗಳ ಪ್ರತಿಬಂಧಕಗಳಿಂದ ಮತ್ತು ಒಂದೇ ಕರೆನ್ಸಿ ಇರುವ ಒಂದು ದೇಶದಲ್ಲಿ ವಿವಿಧ ಪ್ರದೇಶಗಳೊಳಗೆ ಹೆಚ್ಚು ಪರಸ್ಪರಾವಲಂಬನೆಯಿರುತ್ತದೆ. ಅಂಥ ಒಂದೇ ದೇಶದಲ್ಲಿ ಎರಡು ಪ್ರತ್ಯೇಕ ಉದ್ದರಿ ನೀತಿ ಇರುವುದು ಕಷ್ಟವಾಗುತ್ತದೆ. ಫೆಡರಲ್ ರಿಸರ್ವ್ ಪದ್ಧತಿಯ ಪ್ರಯೋಗ ಏನೇ ಇರಲಿ, ಒಂದು ಕರೆನ್ಸಿ ಒಂದೇ ಕೇಂದ್ರೀಯ ಬ್ಯಾಂಕು ಎಂಬ ತತ್ತ್ವಕ್ಕೆ ಹೆಚ್ಚಿನ ಪುಷ್ಟಿ ದೊರಕಿದೆ.

ಒಂದನೆಯ ಮಹಾಯುದ್ಧದ ತರುವಾಯ ಒಂದೊಂದು ಕರೆನ್ಸಿ ವಲಯಕ್ಕೆ ಒಂದೊಂದು ಕೇಂದ್ರಿಯ ಬ್ಯಾಂಕು ಎಂಬ ತತ್ತ್ವ ಜಾರಿಗೆ ಬಂತು. ಐರೋಪ್ಯ ರಾಷ್ಟ್ರಗಳ ವಿವಿಧ ಕರೆನ್ಸಿಗಳ ನಡುವೆ ಪರಸ್ಪರ ಸಂಬಂಧಗಳನ್ನು ಬೆಳೆಸಿದ್ಧ ಅನೇಕ ಕೊಂಡಿಗಳು ಯುದ್ಧಕಾಲದಲ್ಲಿ ಜಾರಿಗೆ ಬಂದ ಕೆಲವು ಅಗತ್ಯ ಕಾರ್ಯಕ್ರಮಗಳಿಂದಾಗಿ ಮುರಿದುಹೋಗಿದ್ದುವು. ಬೆಲೆಗಳ ಉಬ್ಬರ ಹಾಗೂ ಏರಿಳಿಯುತ್ತಿದ್ದ ವಿದೇಶಿ ವಿನಿಮಯ ದರಗಳು ಬ್ಯಾಂಕು ವ್ಯವಹಾರಗಳನ್ನು ಗೊಂದಲಕ್ಕೀಡುಮಾಡಿದ್ದುವು ಅಲ್ಲದೆ ಅನೇಕ ಹೊಸ ತೀವ್ರ ರಾಷ್ಟ್ರೀಯತಾವಾದಿ ದೇಶಗಳು ಉದಿಸಿದುವು. ಇವುಗಳಲ್ಲಿ ಒಂದೊಂದಕ್ಕೂ ಪ್ರತ್ಯೇಕ ಕರೆನ್ಸಿ ಇತ್ತು. ಹೊಸ ಕರೆನ್ಸಿ ನೀತಿಯನ್ನು ಅನುಸರಿಸುವ ಅಪೇಕ್ಷೆ ಇವಕ್ಕಿತ್ತು. ಗೊಂದಲಮಯ ಪರಿಸ್ಥಿತಿ ಸುಧಾರಿಸಿ ಒಪ್ಪವಾದ ಪರಿಸ್ಥತಿ ಉಂಟಗಬೇಕಾದರೆ ಒಂದೊಂದು ದೇಶವೂ ಒಂದೊಂದು ಕೇಂದ್ರಿಯ ಬ್ಯಾಂಕನ್ನು ಸ್ಥಾಪಿಸಿ ದೇಶದ ಬ್ಯಾಂಕು ಮತ್ತು ಕರೆನ್ಸಿ ಏರ್ಪಾಡುಗಳನ್ನು ಅದಕ್ಕೆ ಒಪ್ಪಿಸಬೇಕಾಗುವುದು ಎಂದು 1920 ಹಾಗೂ 1922ರ ಬ್ರಸೆಲ್ಸ್ ಮತ್ತು ಜಿನೀವ ಸಮ್ಮೇಳನಗಳು ಘೋಷಿಸಿದವು. ಬ್ಯಾಂಕ್ ಅಫ್ ಇಂಗ್ಲೆಂಡಿನ ಮತ್ತು ರಾಷ್ಟ್ರಗಳ ಕೂಟದ ಹಣಕಾಸಿನ ತಜ್ಞರ ನೇತೃತ್ವದಲ್ಲಿ ಯುದ್ಧೋತ್ತರ ದಶಕಗಳಲ್ಲಿ ಈ ಭಾವನೆಯನ್ನು ಕ್ರಮಕ್ರಮವಾಗಿ ಕಾರ್ಯಗತ ಮಾಡಲಾಯಿತು. ಅನೇಕ ಚಿಕ್ಕ ದೊಡ್ಡ ರಾಷ್ಟ್ರಗಳಲ್ಲೂ ಕೇಂದ್ರೀಯ ಬ್ಯಾಂಕುಗಳು ಸ್ಥಾಪಿತವಾದುವು. ಅಮೆರಿಕದಿಂದ ಸ್ಫೂರ್ತಿ ಪಡೆದ ದಕ್ಷಿಣ ಅಮೆರಿಕರ ರಾಜ್ಯಗಳಿಗೂ ಈ ಭಾವನೆ ಹರಡಿತು. ಹೀಗಾಗಿ ದ್ವಿತೀಯ ಮಹಾ ಯುದ್ಧ ಪ್ರಾರಂಭವಾಗು ವೇಳಗೆ ಕೇಂದ್ರೀಯ ಬ್ಯಾಂಕಿಲ್ಲದ ಅಥವಾ ಅದರ ಸ್ಥಾಪನೆಯ ಪ್ರಯತ್ನದಲ್ಲಿಲ್ಲದ ಯಾವ ರಾಷ್ಟ್ರವೂ ಪ್ರಪಂಚದಲ್ಲಿರಲಿಲ್ಲ. ಈ ಪ್ರಪಂಚದಲ್ಲಿರುವ ಕೇಂದ್ರೀಯ ಬ್ಯಾಂಕುಗಳ ಸಂಖ್ಯೆ ನೂರಕ್ಕಿಂತಲೂ ಹೆಚ್ಚಾಗಿದೆ. ಇತ್ತೀಚಿಗೆ ಸ್ಥಾಪಿತವಾಗಿರುವ ಆಫ್ರಿಕನ್ ದೇಶಗಳ ಕೇಂದ್ರೀಯ ಬ್ಯಾಂಕುಗಳು ಸಾಮಾನ್ಯುವಾಗಿ ಸರ್ಕಾರಿ ಬ್ಯಾಂಕುಗಳಾಗಿಯೇ ಕೆಲಸ ಮಾಡುತ್ತಿವೆ.

ಪ್ರತಿಯೊಂದು ದೇಶದಲ್ಲೂ ಅದರ ಆರ್ಥಿಕ ಬೆಳವಣಿಗೆಯ ಮಟ್ಟ ಏನೇ ಆಗಿರಲಿ, ಕೇಂದ್ರೀಕೃತ ಹಣ ವ್ಯವಸ್ಥೆ ಇರಬೇಕೆಂಬ, ಸರ್ಕಾರದ ಸ್ವಾಧೀನದಲ್ಲಿದ್ದು ಸಂವಿಧಾನ ಬೆಂಬಲ ಪಡೆದಿರುವ ಏಕೈಕ ಬ್ಯಾಂಕಿಗೆ ದೇಶದ ನೋಟು ಮುದ್ರಣ ಹಾಗೂ ಉದ್ದರಿ ನಿಯಂತ್ರಣದ ಜವಾಬ್ದಾರಿಗಳನ್ನು ವಹಿಸಿಕೊಡುವುದು ಅತ್ಯಾವಶ್ಯಕ ಎಂಬ ಅರಿವು ವಿಕಾಸಗೊಂಡಿದೆ. ಇದರ ಫಲವಾಗಿ ಕೇಂದ್ರೀಯ ಬ್ಯಾಂಕುಗಳು ಪ್ರಪಂಚವ್ಯಾಪಿಯಾಗಿವೆ. ಅಲ್ಲದೆ ಇವು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯ ಸಂಪರ್ಕ ಹಾಗೂ ಸಹಕಾರ ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆ.

ಕೇಂದ್ರೀಯ ಬ್ಯಾಂಕುಗಳ ಕ್ರಮಬದ್ದ ಮತ್ತು ಕಾನೂನುಬದ್ದ ಅಧಿಕಾರಗಳಲ್ಲಿ ವ್ಯತ್ಯಾಸಗಳಿರುವುದು ದಿಟ. ಆದರೆ ಕಾರ್ಯಾಚರಣೆಯಲ್ಲಿ ಅವುಗಳ ಪ್ರವೃತ್ತಿ ಒಂದೇ ರೀತಿಯದು. ಆಯಾ ದೇಶಗಳ ಆರ್ಥಿಕ ಬೆಳವಣಿಗೆಯ ಮಟ್ಟಕ್ಕೆ ಎಂಧರೆ ಲಭ್ಯವಿರುವ ಸಂಪನ್ಮೂಲಗಳ ಗುಣ ಮತ್ತು ಪ್ರಮಾಣ, ಬ್ಯಾಂಕುಗಳ ವಿಧಾನಗಳಲ್ಲೂ ವ್ಯತ್ಯಾಸಗಳನ್ನು ಗುರುತಿಸಬಹುದು. ಅಲ್ಲದೆ ಆರ್ಥಿಕ ಸ್ಥಿತಿಗತಿಗಳ ಮೂಲಭೂತ ಬದಲಾವಣೆಗಳು ಮತ್ತು ರಾಜಕೀಯ ಒಲವಿಗೆ ಹೊಂದಿಕೊಳ್ಳಬೇಕಾಗಿರುವ ಅವಶ್ಯಕತೆಗೆ ಅನುಗುಣವಾಗಿ ಕೇಂದ್ರೀಯ ಬ್ಯಾಂಕಿಂಗ್ ವಿಧಾನಗಳು ವ್ಯಾಪ್ತಿ ಹಾಗೂ ಸ್ವರೂಪದಲ್ಲಿ ಕಾಲದಿಂದ ಕಾಲಕ್ಕೆ ವ್ಯತ್ಯಾಸÀಗೊಳ್ಳುತ್ತವೆ. ಇಂಥ ವ್ಯತ್ಯಾಸಗಳು ಎಷ್ಟೇ ಇರಲಿ, ಕಾರ್ಯಾಚರಣೆಯಲ್ಲಿ ಮತ್ತು ಬ್ಯಾಂಕಿಂಗ್ ಹಾಗೂ ಹಣದ ವಿಚಾರಗಳಲ್ಲಿ ಪ್ರಪಂಚದಲ್ಲಿ ಒಮ್ಮತ ಏರ್ಪಟ್ಟಿರುವುದು ಗಮನಿಸಬೇಕಾದ ಅಂಶ.

ಕಾರ್ಯಭಾರಗಳ ದೃಷ್ಟಿಯಿಂದ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆಗೂ ಇತರ ಬ್ಯಾಂಕುಗಳಿಗೂ ವ್ಯತ್ಯಾಸವುಂಟು. ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಪ್ರತ್ಯೇಕ ಭಾಗವಾದ ಇದು ತನ್ನದೇ ಆದ ಕಾನೂನುಬದ್ದ ರೀತಿನೀತಿಗಳನ್ನು ರೂಪಿಸಿಕೊಂಡಿದ್ದರೂ ಬದಲಾಗುತ್ತಿರುವ ಪ್ರಪಂಚದಲ್ಲಿಇದರ ಕಲೆ ಇನ್ನೂ ವಿಕಾಸಗತಿಯಲ್ಲಿದೆ; ಆಗಿಂದಾಗ್ಗೆ ಹೊಂದಾಣಿಕೆಗಳು ಆಗುತ್ತಲೇ ಇವೆ. ಇದು ದೇಶದ ಬ್ಯಾಂಕಿಂಗ್ ಹಾಗೂ ವ್ಯವಸ್ಥೆಯ ಶೃಂಗ ಸಂಸ್ಥೆಯಾಗಿದ್ದ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತದೆ.

ಕೇಂದ್ರೀಯ ಬ್ಯಾಂಕಿನ ವ್ಯಾಖ್ಯೆ: ಕೇಂದ್ರೀಯ ಬ್ಯಾಂಕಿನ ವ್ಯಾಖ್ಯೆ ಕಷ್ಟದ ಕೆಲಸ. ಕಾರ್ಯಭಾರಗಳ ಆಧಾರದ ಮೇಲೆ ಅದನ್ನು ವ್ಯಾಖ್ಯಿಸಬಹುದಾದರೂ ವಿಶೇಷವಾಗಿ ಯಾವ ಕಾರ್ಯಭಾರದಿಂದ ಅದು ಕಏಂದ್ರೀಯ ಬ್ಯಾಂಕು ಎನ್ನಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ಬ್ಯಾಂಕಿಂಗ್ ತಜ್ಞರಲ್ಲಿ ಒಮ್ಮತವಿಲ್ಲ. ಬ್ಯಾಂಕುಗಳು ಅಪತ್ಕಾಲದಲ್ಲಿ ನಗದಿಗಾಗಿ ಅವುಗಳ ಬೇರೆ ಪ್ರಯತ್ನಗಳೆಲ್ಲ ವಿಫಲಗೊಂಡಾಗ ಅಂತಿಮವಾಗಿ ಸಾಲದ ಸಹಾಯ ನೀಡುವುದೇ ಕೇಂದ್ರೀಯ ಬ್ಯಾಂಕಿನ ಮುಖ್ಯ ಕರ್ತವ್ಯ ಎಂದು ಹಾಟ್ರೆ ಹೇಳಿದರೆ, ನೋಟು ಮುದ್ರಣ ಸ್ವಾಮ್ಯ ಮುಖ್ಯವೆಂದು ವೇರಾ ಸ್ಮಿತ್ ಅಭಿಪ್ರಾಯ. ಷಾನ ದೃಷ್ಟಿಯಲ್ಲಿ ಉದ್ದರಿ ನಿಯಂತ್ರಣವೇ ಮುಖ್ಯ ಕರ್ತವ್ಯ ಎಂದು ಹಾಟ್ರೆ ಹೇಳಿದರೆ, ನೋಟು ಮುದ್ರಣ ಸ್ವಾಮ್ಯ ಮುಖ್ಯವೆಂದು ವೇರಾ ಸ್ಮಿತ್ ಅಭಿಪ್ರಾಯ. ಷಾನ ದೃಷ್ಟಿಯಲ್ಲಿ ಉದ್ದರಿ ನಿಯಂತ್ರಣವೇ ಮುಖ್ಯ ಕಾರ್ಯಭಾರ. ಕಿಷ್ ಮತ್ತು ಎಲ್ಕಿನ್ ಇವರು ನಾಣ್ಯಪದ್ಧತಿಯ ಸ್ಧಿರತೆಯನ್ನು ಕಾಪಾಡುವುದು ಮುಖ್ಯವೆಂದು ಪರಿಗಣಿಸುತ್ತಾರೆ. ಇವೆಲ್ಲಕ್ಕಿಂತ ಮಿಗಿಲಾಗಿ ಅಚಿತಾರಾಷ್ಟ್ರೀಯ ತೀರುವೆ ಬ್ಯಾಂಕಿನ ನಿಬಂಧನೆಗಳಲ್ಲಿ ರಾಷ್ಟ್ರದ ಹಣ ಮತ್ತು ಉದ್ದರಿಯ ಪರಿಮಾಣವನ್ನು ವ್ಯವಸ್ಧೆಗೊಳಿಸುವ ಹ್ರೆಣೆ ಹೊತ್ತಿರುವ ಬ್ಯಾಂಕೇ ಕೇಂದ್ರೀಯ ಬ್ಯಾಂಕು ಎಂದು ವ್ಯಾಖ್ಯಿಸಲಾಗಿದೆ. ಇತರ ಬ್ಯಾಂಕುಗಳ ನಗದು ಸಂಚಿತಿಗಳ ಪಾಲನೆಯೇ ಕೇಂದ್ರೀಯ ಬ್ಯಾಂಕಿನ ಲಕ್ಷಣೀಭೂತ ನಗದು ಸಚಿಚಿತಿಗಳ ಪಾಲನೆಯೇ ಕೇಂದ್ರೀಯ ಬ್ಯಾಂಕಿನ ಲಕ್ಷಣೀಭೂತ ಕಾರ್ಯಭಾರ ಎಂದು ಮತ್ತೆ ಕೆಲವು ತಜ್ಞರು ವಾದಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಧಾನಗಳು, ದಕ್ಷಿಣ ಆಫ್ರಿಕನ್ ದೇಶಗಳು, ಪೆರು, ಆಸ್ಟ್ರೇಲಿಯ, ನ್ಯೂಜೀಲೆಂಡ್ ಮತ್ತು ಭಾರತಗಳ ಕೇಂದ್ರೀಯ ಬ್ಯಾಂಕಗಳನ್ನು ರಿಸರ್ವ್ ಬ್ಯಾಂಕುಗಳೆಂದು ಕರೆದಿರುವುದು ಈ ದೃಷ್ಟಿಯಿಂದ ಅರ್ಥರ್ಪೂವಾಗಿದೆ.

ಕೇಂದ್ರೀಯ ಬ್ಯಾಂಕಿನ ಕಾರ್ಯಭಾರಗಳು ಪರಸ್ಪರ ಪೂರಕವಾದಂಥವು. ಒಂದರ ಯಶಸ್ಸಿಗೆ ಮತ್ತೊಂದರ ನೆರವು ಅಗತ್ಯ. ಈ ದೃಷ್ಟಿಯಿಂದ ಡಿ ಕಾಕ್ ಎಂಬ ಬ್ಯಾಂಕಿಂಗ್ ತಜ್ಞ ನೀಡಿರುವ ವ್ಯಾಖ್ಯೆ ಇತರರ ವ್ಯಾಖ್ಯೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾದುದು. ಇವನ ಪ್ರಕಾರ ಒಂದು ದೇಶದ ಹಣಕಾಸು ಹಾಗೂ ಬ್ಯಾಂಕಿಂಗ್ ಮಂಡಲದಲ್ಲಿ ಅಗ್ರಸ್ಥಾನ ಪಡೆದಿರುವ ಮತ್ತು ರಾಷ್ಟ್ರದ ಅರ್ಥಿಕ ಉನ್ನತಿಗಾಗಿ ಕೆಲಸ ಮಾಡುವ ಸಂಸ್ಥೆಯೇ ಕೇಂದ್ರೀಯ ಬ್ಯಾಂಕು.

ಕೇಂದ್ರೀಯ ಬ್ಯಾಂಕಿನ ತತ್ತ್ವಗಳು : ಕೇಂದ್ರೀಯ ಬ್ಯಾಂಕಿನ ತತ್ವಗಳು ವಾಣಿಜ್ಯ ಬ್ಯಾಂಕುಗಳ ತತ್ತ್ವಗಳಂತಲ್ಲ. ವಾಣಿಜ್ಯ ಬ್ಯಾಂಕುಗಳ ಗುರಿ ಲಾಭ ಸಂಪಾಧನೆ. ಕೇಂದ್ರೀಯ ಬ್ಯಾಂಕಿನದು ರಾಷ್ಟ್ರ ಕಲ್ಯಾಣ. ಇದು ಸಾರ್ವಜನಿಕರ ಹಿತಕ್ಕಾಗಿಯೂ ರಾಷ್ಟ್ರದ ಏಳಿಗೆಗಾಗಿಯೂ ದುಡಿಯುತ್ತದೆ. ನಷ್ಟ ಸಂಭವಿಸುವ ಕಾರ್ಯಗಳಲ್ಲಿ ಬಂಡವಾಳ ಹೂಡುವುದಕ್ಕೆ ಇದರಲ್ಲಿ ಅವಕಾಶವಿಲ್ಲ. ಲಾಭ ಸಂಪಾದನೆ ಇದರ ಗುರಿಯಲ್ಲವಾದ್ದರಿಂದ ಇದಕ್ಕೂ ಇತರ ಬ್ಯಾಂಕುಗಳಿಗೂ ಪೈಪೋಟಿ ಇರುವುದಿಲ್ಲ. ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನಲ್ಲಿ ಇಡುವ ಠೇವಣಿ ಅಥವಾ ನಗದು ಸಂಚಿತಿಯ ಮೇಲೆ ಇದು ಬಡ್ಡಿ ಕೊಡುವುದಿಲ್ಲ. ಆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೀಗೆ ಹೇಳಲಾರವು. ಕೇಂದ್ರೀಯ ಬ್ಯಾಂಕು ಸ್ಥಿರಸ್ವತ್ತುಗಳ ಮೇಲೆ ಒಂಡವಾಳ ವಿನಿಯೋಜಿಸುವುದಿಲ್ಲ. ಇತರ ಬ್ಯಾಂಕುಗಳು ದಿವಾಳಿಯಾಗದಂತೆ ನೋಡಿಕೊಳ್ಳಬೇಕು. ಸದಸ್ಯ ಬ್ಯಾಂಕುಗಳಿಗೆ ಈ ಹೊಣೆಗಾರಿಕೆ ಇರುವುದಿಲ್ಲ. ಕೇಂದ್ರೀಯ ಬ್ಯಾಂಕು ಮಾವ ರಾಜಕೀಯ ಪಕ್ಷಕ್ಕೂ ಸೇರದೆ ಸ್ವತಂತ್ರವಾಗಿರಬೇಕು. ಹೀಗಿದ್ದರೆ ಮಾತ್ರ ಅದು ಯಾರ, ಯಾವುದರ ಹಂಗಿಗೂ ಒಳಗಾಗದೆ ದೇಶಹಿತಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕೇಂದ್ರೀಯ ಬ್ಯಾಂಕು ಯಾವಾಗಲೂ ಚಟುವಟಿಕೆಯಿಂದ ಕೆಲಸ ಮಾಡಬೇಕು. ಉದ್ದರಿ ವ್ಯವಸ್ಥೆಯಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ಈ ಪರಿಸ್ಥಿತಿಯ ಸುಧಾರಣೆಗೆ ತಕ್ಕ ಕ್ರಮ ತೆಗೆದುಕೊಳ್ಳಬೇಕು. ಈ ಎಲ್ಲ ತತ್ತ್ವಗಳಿಗೂ ಮೂಲವಾಗಿ ಕೇಂದ್ತೀಯ ಬ್ಯಾಂಕು ಸಾಮಾನ್ಯವಾಗಿ ಸರ್ಕಾರದ ಬ್ಯಾಂಕಾಗಿರುತ್ತದೆ.

ಸರ್ಕಾರದ ವಿಷಯವನ್ನು ಪ್ರಸ್ತಾವಿಸಿದಾಗ ಕೇಂದ್ರೀಯ ಬ್ಯಾಂಕು ಎಷ್ಟರ ಮಟ್ಟಿಗೆ ಸರ್ಕಾರದ ಅಧೀನದಲ್ಲಿದೆ ಮತ್ತು ಎಷ್ಟರಮಟ್ಟಿಗೆ ಸ್ವತಂತ್ರವಾಗಿರಬಲ್ಲದು, ಸ್ವತಂತ್ರವಾಗಿರಬೇಕು ಎಂಬ ಪ್ರಶ್ನೆ ಏಳುತ್ತದೆ. ಇಪ್ಪತ್ತನೆಯ ಶತಮಾನದ ಅದಿಯಲ್ಲಿ ಕೇಂದ್ರೀಯ ಬ್ಯಾಂಕುಗಳು ಖಾಸಗಿ ಸಂಸ್ಥೆಗಳಾಗಿಯೇ ಸ್ಥಾಪಿತವಾದುವು. ಸರ್ಕಾರದ ಹತೋಟಿ ಒಳಪಡದೆ ಸ್ವತಂತ್ರವಾಗಿಯೇ ಅವು ಕೆಲಸ ಮಾಡುತ್ತಿದ್ದುವು. ಅಂದರೆ ಸರ್ಕಾರದ ಹತೋಟಿ ಇರಲೇ ಇಲ್ಲ ಎನ್ನಲಾಗುವುದಿಲ್ಲ. ಅವುಗಳ ಷೇರುಗಳನ್ನು ಕೊಳ್ಳುವುದರ ಮೂಲಕ, ಲಾಭಾಂಶವನ್ನು ನಿಗದಿಮಾಡುವುದರ ಮೂಲಕ ಕೇಂದ್ರೀಯ ಬ್ಯಾಂಕಿನ ಮೇಲೆ ಹತೋಟಿ ಹೊಂದಿರುತ್ತಿತ್ತು. ಕ್ರಮೇಣ ಈ ಹತೋಟಿ ಹೆಚ್ಚಾಗುತ್ತ ಬಂತು.

ಕೇಂದ್ರೀಯ ಬ್ಯಾಂಕನ್ನು ರಾಜಕೀಯ ಅಭಿಪ್ರಾಯದ ಒತ್ತಡದಿಂದ ಹೊರಗಿಡುವುದಕ್ಕೆ ಸಮರ್ಥನೆಯಾಗಿ ಬಲವಾದ ಕಾರಣಗಳಿವೆ. ಒಂದನೆಯ ಮಹಾಯುದ್ದದ ಅನಂತರದ ವರ್ಷಗಳಲ್ಲಿ ಸರ್ಹಾರಗಳ ವಿನಾಶಕಾರಿ ಹಣಕಾಸು ನೀತಿಗಳಿಂದ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟಿನ ಬಿಸಿಯನ್ನು ಕೇಂದ್ರೀಯ ಬ್ಯಾಂಕುಗಳು ಅನುಭವಿಸಿದ ನಿದರ್ಶನಗಳು ಹಲವಾರಿವೆ. ಈ ವಿಷಯವನ್ನು ಚರ್ಚಿಸಿದ ಅಂತಾರಾಷ್ಟ್ರೀಯ ಸಮ್ಮೇಳನಗಳು ಕೇಂದ್ರೀಯ ಬ್ಯಾಂಕಿನ ಸ್ವಾತಂತ್ರವನ್ನು ಮೂಲ ತತ್ತ್ವವಾಗಿ ಎತ್ತಿಹಿಡಿದುವು. ಕೇಂದ್ರಿಯ ಬ್ಯಾಂಕು ಖಾಸಗಿ ಒಡೆತನದಲ್ಲಿ ಇರಬೇಕೆಂದೂ ಅವು ಪ್ರತಿಪಾದಿಸಿದುವು. ತರುವಾಯ ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ಉಂಟಾಯಿತು. ಕೇಂದ್ರಿಯ ಬ್ಯಾಂಕು ಖಾಸಗಿ ಒಡೆತನದ ಫಲವಾಗಿ ಕೇವಲ ಧನಿಕ ಬ್ಯಾಂಕುಗಳು ಮತ್ತು ಕೈಗಾರಿಕೋದ್ಯಮಿಗಳು ಸಮಾಜದ ಒಟ್ಟು ಹಿತಾಸಕ್ತಿಗಳನ್ನು ಕಡೆಗಣಿಸಿ ಸ್ವಹಿತ ಸಾದನೆಗೋಸ್ಕರ ತಾವೇ ಅಧಿಕಾರ ಹೊಂದಿರುತ್ತಾರೆ. ಇದನ್ನು ಅರಿತಿದ್ದ ಲೇಬರ್ ಪಕ್ಷ ಬ್ರಿಟನ್ನಿನಲ್ಲಿ 1945ರಲ್ಲಿ ಅಧಿಕಾರ ವಹಿಸಿಕೊಂಡ ಅನಂತರ ಅಲ್ಲಿಯ ಕೇಂದ್ರೀಯ ಬ್ಯಾಂಕಾದ ಬ್ಯಾಂಕ್ ಆಫ್ ಇಂಗ್ಲೆಂಡನ್ನು ರಾಷ್ಟ್ರೀಕರಣ ಮಾಡಿತು. ಈ ಕ್ರಮಕ್ಕೆ ಯಾವ ವಿರೋಧವೂ ಇರಲ್ಲಿಲ್ಲ. ಆದರೆ ಅನೇಕ ರಾಷ್ಟ್ರಗಳಲ್ಲಿ ಕೇಂದ್ರೀಯ ಬ್ಯಾಂಕ್ ಹತೋಟಿ ಹೊಂದಿರಬೇಕಾದುದು ಆವಶ್ಯಕವಾಗಿದೆ. ಕೇಂದ್ರೀಯ ಬ್ಯಾಂಕಿಗೆ ಉನ್ನತ ಅಧಿಕಾರ ಇರುವುದರಿಂದ ಇದರ ಮೇಲೆ ಸರ್ಕಾರ ನಿಯಂತ್ರಣ ಅಗತ್ಯ. ಕೇಂದ್ರೀಯ ಬ್ಯಾಂಕು ಸರ್ಕಾರದ ಒಡೆತನಕ್ಕೆ ಸೇರಿರುವುದು, ಆದರೆ ಕೆಲವು ವರ್ಷಗಳ ಅವಧಿಗೆಂದು ನೇಮಿಸಲಾಗುವ ಗವರ್ನರ್‍ಗಳ ಬೋರ್ಡು ಅದರ ಮೇಲೆ ವಾಸ್ತವ ಹತೋಟಿ ಹೊಂದಿರುವುದೂ ಕೇಂದ್ರಿಯ ಬ್ಯಾಂಕು ನೇರವಾದ ರಾಜಕೀಯ ಪ್ರಭುತ್ವದಿಂದ ಪ್ರತ್ಯೇಕವಾಗಿರುವುದೂ ಆಧುನಿಕ ಪ್ರವೃತ್ತಿಯಾಗಿದೆ. ಒಟ್ಟಿನಲ್ಲಿ ಬ್ಯಾಂಕು ಅನುಸರಿಸುವ ನೀತಿ ಜನಾಂಗದ ದೃಷ್ಟಿಯಿಂದ ಮಹತ್ತ್ವದ್ದು ಎಂಬುದು ಸಾರ್ವತ್ರಿಕವಾಗಿ ಒಪ್ಪಲಾದ ವಿಷಯವಾಗಿದೆ. ಯಾವ ಹೊಣೆಗಾರ ಸರ್ಕಾರವೂ ಪ್ರಭುತ್ವದ ಅಷ್ಪೊಂದು ಹೊಣೆಗಳನ್ನು ಒಂದು ಸ್ವತಂತ್ರ ಸಂಸ್ಥೆಗೆ ಬಿಟ್ಟುಕೊಡಲು ಆಗುವುದಿಲ್ಲ. ಅಂತಿಮ ಹತೋಟಿಯನ್ನು ಸರ್ಕಾರ ಹೊಂದಿರಲೇಬೇಕಾಗುತ್ತದೆ. ಸರ್ಕಾರದ ಈ ಅಂತಿಮ ಹತೋಟಿಯಿಂದ ಹಿಡಿದು ದೈನಂದಿನ ಕಾರ್ಯಾಚರಣೆಗಳಲ್ಲಿ ಮಧ್ಯಪ್ರವೇಶದವರೆಗೆ ವಿವಿಧ ಪ್ರಕಾರಗಳ ಸರ್ಕಾರದ ಪ್ರಭಾವ ಇರುತ್ತದೆ. ಈ ಪ್ರಭಾವದ ಮೆಟ್ಟಲುಗಳಲ್ಲಿ ಯಾವ ನಿರ್ದಿಷ್ಟ ಮೆಟ್ಟಲಿನಿಂದ ಕೇಂದ್ರೀಯ ಬ್ಯಾಂಕಿನ ಸ್ವಾತಂತ್ರ್ಯ ಆರಂಭವಾಗುವುದು ಎಂಬುದರ ನಿರ್ಣಯ ತಾತ್ತ್ವಿಕ ಪ್ರಶ್ನೆಯಾಗಿಲ್ಲ; ಬದಲಾಗಿ ಅದು ಸಂದರ್ಭೋಚಿತ ಪ್ರಶ್ನೆಯಾಗಿದೆ.

ಬಂಡವಾಳದ ಒಡೆತನದ ಆಧಾರದ ಮೇಲೆ ಕೇಂದ್ರೀಯ ಬ್ಯಾಂಕುಗಳನ್ನು ಏಳು ವಿಧವಾಗಿ ವಿಂಗಡಿಸಬಹುದು. 1 ಸರ್ಕಾರಿ ಬಂಡವಾಳದ ಬ್ಯಾಂಕುಗಳು, 2 ಖಾಸಗಿ ಬಂಡವಾಳದ ಬ್ಯಾಂಕುಗಳು, 3 ವಾಣಿಜ್ಯ ಬ್ಯಾಂಕುಗಳ ಬಂಡವಾಳದ ಬ್ಯಾಂಕುಗಳು, 4 ಖಾಸಗಿ ಮತ್ತು ಸರ್ಕಾರದ ಜಂಟಿ ಬಂಡವಾಳದ ಬ್ಯಾಂಕುಗಳದ, 5 ಖಾಸಗಿ, ಸರ್ಕಾರ ಮತ್ತು ವಾಣಿಜ್ಯ ಬ್ಯಾಂಕುಗಳ ಜಂಟಿ ಬಂಡವಾಳದ ಬ್ಯಾಂಕುಗಳು, 6 ಸರ್ಕಾರ ಮತ್ತು ವಾಣಿಜ್ಯ ಬ್ಯಾಂಕುಗಳ ಜಂಟಿ ಬಂಡವಾಳದ ಬ್ಯಂಕುಗಳು, 7 ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳ ಜಂಟಿ ಬಂಡವಾಳದ ಬ್ಯಾಂಕುಗಳು

ಕೇಂದ್ರೀಯ ಬ್ಯಾಂಕಿನ ಕಾರ್ಯಭಾರಗಳು : ರಾಷ್ಟ್ರದ ಹಣಕಾಸಿನ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ವಿಧಾಯಕ ಶಕ್ತಿಯಾಗಿ ಕೇಂದ್ರೀಯ ಬ್ಯಾಂಕು ಕೈಗೊಳ್ಳುವ ಕಾರ್ಯಭಾರಗಳು ಹಲವಾರು. ಅವನ್ನು ಮುಂದೆ ವಿವೇಚಿಸಲಾಗಿದೆ.

1ನೇಟು ನೀಡಿಕೆಯ ಏಕಸ್ವಾಮ್ಯ : ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಕೊಡುವ ಕಾರ್ಯ ಕೇಂದ್ರೀಯ ಬ್ಯಾಂಕಿನ ಮುಖ್ಯ ಕಾರ್ಯಭಾರಗಳಲ್ಲಿ ಒಂದು. ಇಂದು ಈ ಆಧಿಕಾರವನ್ನು ಪಡೆದಿರುವ ಏಕೈಕ ಸಂಸ್ಥೆ ಕೇಂದ್ರೀಯ ಬ್ಯಾಂಕು. ಪ್ರಾರಂಭದಲ್ಲಿ ಸರ್ಕಾರಕ್ಕೆ ಈ ಅಧಿಕಾರವಿತ್ತು. ಇದರಿಂದ ಅನೇಕ ವೇಳೆ ನೋಟಿನ ಪರಿಮಾಣ ಅಧಿಕವಾಗಿ ಹಣ ಬಾಹುಳ್ಯ ಪರಿಸ್ಥಿತಿ ಉಂಟಾಗುತ್ತಿತ್ತು. ವಾಣಿಜ್ಯ ಬ್ಯಾಂಕುಗಳು ಬೆಳೆದ ಮೇಲೆ ನೋಟು ಹೊರಡಿಸುವ ಅಧಿಕಾರವನ್ನು ಅವಕ್ಕೆ ನೀಡಲಾಯಿತು. ಆದರೂ ಹಿಂದೆ ಇದ್ದ ನ್ಯೂನತೆಗಳನ್ನು ನಿವಾರಿಸಲು ಸಾಧ್ಯವಾಗಲಿಲ್ಲ. ಲಾಭ ಸಮಪಾದನೆಯೇ ಮುಖ್ಯ ಗುರಿಯಾಗಿದ್ದ ವಾಣಿಜ್ಯ ಬ್ಯಾಂಕುಗಳು ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗಲಿಲ್ಲ. ಅಲ್ಲದೆ ವಿವಿಧ ರೀತಿಯ ನೋಟುಗಳು ಚಲಾವಣೆಯಲ್ಲಿರುತ್ತಿದುದ್ದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದರು. ವಿಶೇಷ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದು ಸರ್ಕಾರದ ಹತೋಟಿಗೆ ಒಳಪಟ್ಟ ಕೇಂದ್ರೀಯ ಬ್ಯಾಂಕಿಗೆ ನೋಟು ಮುದ್ರಣ ಸ್ವಾಮ್ಯವನ್ನು ಅನಂತರ ವಹಿಸಿಕೊಳ್ಳಲಾಯಿತು.

ಕೇಂದ್ರೀಯ ಬ್ಯಾಂಕು ನೋಟು ಹೊರಡಿಸುವುದರಿಂದ ನೋಟುಗಳ ಚಲಾವಣೆಗಳು ಏಕತೆ ಉಂಟಾಗುತ್ತದೆ. ಬ್ಯಾಂಕು ಸರ್ಕಾರದ ಒಡೆತನ ಅಥವಾ ಹತೋಟಿಯಲ್ಲಿರುವುದರಿಂದ ಅದು ಹೊರಡಿಸಿದ ನೋಟುಗಳಿಗೆ ಹೆಚ್ಚಿನÀ ಗೌರವವಿರುತ್ತದೆ. ಹಣದ ಪೊರೈಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಚಲಾವಣೆಯಲ್ಲಿರುವುದರಿಂದ ನೋಟು ಹೊರಡಿಸುವ ಅಧಿಕಾರ ಕೇಂದ್ರೀಯ ಬ್ಯಾಂಕಿಗಿದ್ದರೆ ಆರ್ಥಿಕತೆಯಲ್ಲಿರುವ ಉದರಿ ರೂಪದ ಹಣದ ಪರಿಮಾಣವನ್ನು ಹತೋಟಿಯಲ್ಲಿಡಲು ಸಾದ್ಯವಾಗುತ್ತದೆ. ನೋಟು ಹೊರಡಿಸುವುದರಿಂದ ಬರುವ ಲಾಭ ಸರ್ಕಾರದ ಖಜಾನೆಯನ್ನು ಸೇರುತ್ತಿರುತ್ತವೆ. ನೋಟುಗಳನ್ನು ನೀಡುವ ವಿಷಯದಲ್ಲಿ ಎರಡು ಮುಖ್ಯವಾದ ಅಂಶಗಳನ್ನು ಗಮನದಲ್ಲಿಡಬೇಕು :

1 ನೋಟಿನ ಪರಿಮಾಣವನ್ನು ದೇಶದ ಆವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡುವುದಕ್ಕೆ ಆಸ್ಪದವಿರಬೇಕ. 2 ನೋಟುಗಳಲ್ಲಿ ಸಾರ್ವಜನಿಕರಿಗೆ ವಿಶ್ವಾಸ ಉಳಿಯುವಂತೆ ನೋಡಿಕೊಳ್ಳಬೇಕು. ವಿಶ್ವಾಸ ಉಳಿಯಬೇಕಾದರೆ ಅವನ್ನು ಪ್ರಾಧಾನ ನಾಣ್ಯಕ್ಕೆ ಪರಿವರ್ತಿಸಿಕೊಳ್ಳಲು ಅವಕಾಶ ಇರಬೇಕು. ಸಂಕ್ಷೇಪವಾಗಿ ಹೇಳುವುದಾದರೆ ನೋಟು ನೀಡಿಕೆಯಲ್ಲಿ ಪುಟಿತತೆ ಮತ್ತು ದ್ರವತ್ವ ಇವೆರಡೂ ಗುಣಗಳು ಆವಶ್ಯಕವಾಗಿ ಇರಬೇಕು

2. ಸರ್ಕಾರದ ಬ್ಯಾಂಕು: ಪ್ರತಿಯೊಂದು ದೇಶದಲ್ಲೂ ಕೇಂದ್ರೀಯ ಬ್ಯಾಂಕು ಸರ್ಕಾರದ ಬ್ಯಾಂಕಾಗಿ, ಆಭಿಕರ್ತೃವಾಗಿ ಸಲಹೆಗಾರನಾಗಿ ದೇಶದ ಹಣಕಾಸಿನ ನಧಿಯ ಹಾಗೂ ವಿದೇಶಿ ವಿನಿಮಯ ಸಂಚಿತಿಯ ಪಾಲಕನಾಗಿ ಕೆಲಸ ಮಾಡುತ್ತದೆ. ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ಸಾಮಾನ್ಯವಾಗಿ ಒದಗಿಸುವ ಎಲ್ಲ ಸೌಲಭ್ಯಗಳನ್ನೂ ಕೇಂದ್ರೀಯ ಬ್ಯಾಂಕು ಸರ್ಕಾರಕ್ಕೆ ಒದಗಿಸುತ್ತದೆ. ಸರ್ಕಾರದಿಂದ ಮತ್ತು ಅದರ ಅಂಗಸಂಸ್ಥೆಗಳಿಂದ ಅದು ಠೇವಣಿಗಳನ್ನು ಸ್ವೀಕರಿಸುತ್ತದೆ. ಈ ಠೇವಣಿಗಳ ಮೇಲೆ ಬಡ್ಡಿ ಕೊಡುವುದಿಲ್ಲ. ಬದಲಾಗಿ ಅದು ಸರ್ಕಾರದ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಸರ್ಕಾರದ ನಿಧಿಗಳನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿ ಕೊಡುತ್ತದೆ. ಸರ್ಕಾರಕ್ಕೆ ಬರಬೇಕಾದ ತೆರಿಗೆಗಳನ್ನು ವಸೂಲು ಮಾಡಿಕೊಡುತ್ತದೆ.

ವಾಣಿಜ್ಯ ಬ್ಯಾಂಕುಗಳು ಸಾರ್ವಜಕರಿಗೆ ಸಾಲ ಕೊಡುವಂತೆ ಕೇಂದ್ರೀಯ ಬ್ಯಾಂಕು ಖಜಾನೆ ಹುಂಡಿಗಳ ಆಧಾರದ ಮೇಲೆ ಸರ್ಕಾರಕ್ಕೆ ಅಲ್ಪಾವಧಿ ಸಾಲ ಒದಗಿಸುತ್ತದೆ, ಓವರ್‍ಡ್ರಾಫ್ಟ್ ಸೌಲಭ್ಯ ನೀಡುವುವಲ್ಲದೆ ದೀರ್ಘಾವದಿ ಸಾಲವನ್ನು ಜರೂರು ಸಂದರ್ಭಗಳಲ್ಲಿ ವಿಶೇಷ ಮುಂಗಡಗಳನ್ನೂ ಒದಗಿಸುವುದುಂಟು.

ಕೇಂದ್ರೀಯ ಬ್ಯಾಂಕು ಸರ್ಕಾರದ ಅಭಿಕರ್ತೃವಾಗಿ ವಿದೇಶಿ ವಿನಿಮಯ ವಹಿವಾಟುಗಳ ನಿರ್ವಹಣೆ, ವಿದೇಶಿ ಸಾಲದ ಮರುಪಾವತಿ ಮತ್ತು ಇತರ ವಹಿವಾಟುಗಳಿಗೆ ವಿವಿಧರೀತಿಯ ವಿದೇಶಿ ವಿನಿಮಯ ಪೂರೈಕೆ, ರಾಷ್ಟ್ರೀಯ ಋಣದ ಮೇಲ್ವಿಚಾರಣೆ, ಸರ್ಕಾರಕ್ಕೆ ಸಾಲ ಎತ್ತಿ ಕೊಡುವುದು, ಸಾಲಗಳ ಪರಿವರ್ತನೆ ಹಾಗೂ ಮೋಚನೆ ಮತ್ತು ಮುಂದೂಡುವಿಕೆಗೆ ಏರ್ಪಾಡು ಮಾಡುವುದು, ಸರ್ಕಾರಿ ದಾಸ್ತಾನುಗಳ ದಾಖಲಾತಿ ಪುಸ್ತಕ ಇಡುವುದು, ವಿನಿಮಯ ಸ್ಥಾಯೀಕರಣ ನಿಧಿಯ ಮೇಲ್ವಿಚಾರಣೆ, ವಿನಿಮಯ ನಿಯಂತ್ರಣ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಣಕಾಸಿನ ಸ್ಥಿತಿಗಳಿಗಳು, ಬಂಡವಾಳ ಪೇಟೆಯ ಪರಿಸ್ಥಿತಿ ಮತ್ತು ಬೆಲೆಗಳ ಮಟ್ಟ-ಇವುಗಳ ಮೇಲೆ ಗಮನವಿಟ್ಟು ಕೊಂಡಿರುವುದಲ್ಲದೆ, ಈ ಬಗ್ಗೆ ಸರ್ಕಾರಕ್ಕೆ ಯುಕ್ತ ತಿಳಿವಳಿಕೆ ನೀಡುತ್ತದೆ.

ದೇಶದ ಹಣದ ನಿಧಿಯ ಮತ್ತು ವಿದೇಶಿ ವಿನಿಮಯ ಸಂಚಿತಿಯ ಪಾಲಕನಾಗಿ ಕೇಂದ್ತೀಯ ಬ್ಯಾಂಕು ಕೈಗೊಳ್ಳುವ ಕಾರ್ಯಗಳು ಬಹಳ ಮುಖ್ಯವಾದವು. ಇದಕ್ಕೆ ನೋಟುನೀಡಿಕೆಯ ಏಕಸ್ವಾಮ್ಯ ಇರುವುದರಿಂದ ಸಹಜವಾಗಿ ದೇಶದ ಹಣದ ನಿಧಿಯ ಮೇಲ್ವಿಚಾರಣೆ ಮತ್ತು ವಿದೇಶಿ ವಿನಿಮಯ ಸಂಚಿತಿಯ ರಕ್ಷಣೆ ಕೇಂದ್ರೀಯ ಬ್ಯಾಂಕಿನ ಗುರುತರ ಜವಾಬ್ದಾರಿಯಾಗಿರುತ್ತದೆ.

3ಬ್ಯಾಂಕುಗಳ ಬ್ಯಾಂಕು: ಕೇಂಧ್ರೀಯ ಬ್ಯಾಂಕು ಹಣದ ಪೇಟೆಯ ಮುಖಂಡತ್ವ ಪಡೆದಿದೆ. ಅದು ವಾಣಿಜ್ಯ ಬ್ಯಾಂಕುಗಳ ಬ್ಯಾಂಕು. ಇದಕ್ಕೂ ವಾಣಿಜ್ಯ ಬ್ಯಾಂಕುಗಳಿಗೂ ಇರುವ ಸಂಬಂಧ ಬ್ಯಾಂಕು-ಗ್ರಾಹಕ ಸಂಬಂಧ. ಬ್ಯಾಂಕುಗಳ ಬ್ಯಾಂಕಾಗಿ ಕೇಂದ್ರೀಯ ಬ್ಯಾಂಕು ಈ ಮುಂದಿನ ಮೂರು ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.

(1) ವಾಣಿಜ್ಯ ಬ್ಯಾಂಕುಗಳ ನಗದು ಸಂಚಿತಿಗಳ ಪಾಲನೆ : ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣಿಗಳ ಒಂದು ನಿರ್ದಿಷ್ಟಭಾಗವನ್ನು ಕೇಂದ್ರೀಯ ಬ್ಯಾಂಕಿನಲ್ಲಿ ನಗದು ರೂಪದಲ್ಲಿ ಇಡುವುದು ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ. ಪ್ರಾರಂಭದಲ್ಲಿ ಇದು ಐಚ್ಛಿಕವಾಗಿತ್ತು. ಕಾಲಕ್ರಮದಲ್ಲಿ ಇದು ವಿಧಿಬದ್ಧವಾಯಿತು. ಇಂದು ವಾಣಿಜ್ಯ ಬ್ಯಾಂಕುಗಳು ಸಾಂಪ್ರದಾಯಿಕವಾಗಿಯೇ ಅಗಲಿ ವಿಧಿಬದ್ದವಾಗಿಯೇ ಆಗಲಿ ಕೇಂದ್ರೀಯ ಬ್ಯಾಂಕಿನಲ್ಲಿ ನಿರ್ದಿಷ್ಟ ವ್ರಮಾಣದ ನಗದು ಸಂಚಿತಿಯನ್ನಿಡುವುದು ರೂಢಿಯಲ್ಲಿದೆ. ಉದಾಹರಣೆಗೆ ಇಂಗ್ಲೆಂಡಿನ ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿ ಹಣದ ಶೇಕಡಾ ಮೂರು ನಾಲ್ಕರಷ್ಟು ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿ ಇಡಬೇಕಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸದಸ್ಯ ಬ್ಯಾಂಕುಗಳು ಫೆಡರಲ್ ಕಾನೂನಿನ ಪ್ರಕಾರ ತಮ್ಮ ಸ್ಥಿರ ಠೇವಣಿ ಹಣದ ಶೇಕಡಾ 5 ಎಷ್ಟನ್ನೂ ಚಾಲ್ತಿ ಠೇವಣಿ ಹಣದ ಶೇಕಡ 13ರಷ್ಟು ಫೆಡರಲ್ ರಿಸರ್ವ್ ಬ್ಯಾಂಕುಗಳಲ್ಲಿ ಇಡಬೇಕೆಂಬ ನಿಯಮವಿದೆ. ಭಾರತದ ವಾಣಿಜ್ಯ ಬ್ಯಾಂಕುಗಳು ತಮ್ಮ ವಾಯಿದೆ ಠೇವಣಿ ಹಣದ ಶೇಕಡಾ 2ರಷ್ಟುನ್ನು ಮತ್ತು ಚಾಲ್ತಿ ಠೇವಣಿ ಹಣದ ಶೇಕಡಾ 5ರಷ್ಟುರನ್ನು ರಿಸರ್ವ್ ಬ್ಯಾಂಕುಗಳಲ್ಲಿ ಇಡಬೇಕೆಂಬ ನಿಯಮವಿದೆ. ಈ ಹಣದ ಮೇಲೆ ಕೇಂದ್ರೀಯ ಬ್ಯಾಂಕು ಬಡ್ಡಿ ಕೊಡುವುದಿಲ್ಲ. ಹೀಗೆ ಕೇಂದ್ರೀಯ ಬ್ಯಾಂಕಿನಲ್ಲಿ ಎಲ್ಲ ವಾಣಿಜ್ಯ ಬ್ಯಾಂಕುಗಳ ನಗದು ಕೇಂದ್ರೀಕೃತವಾಗಿರುತ್ತದೆ ಈ ಕೇಂದ್ರೀಕೃತ ನಗದು ಸಂಚಿತ ವ್ಯವಸ್ಥೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯ ಶಕ್ತಿ ಮತ್ತು ಪುಟಿತತೆ ವರ್ಧಿಸುತ್ತವೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಜನರಿಗೆ ನಂಬಿಕೆ ಬೆಳೆಯುತ್ತದೆ. ನಗದು ಸಂಚಿತಿಯಲ್ಲಿ ಮಿತವ್ಯಯ ಸಾಧಿಸುತ್ತದೆ. ಆಪತ್ಕಾಲದಲ್ಲಿ ಸಾಲ ನೀಡಲು ಕೇಂದ್ರೀಯ ಬ್ಯಾಂಕಿನ ಶಕ್ತಿ ವೃದ್ಧಿಯಾಗುವುದರಿಂದ, ನಗದು ಕೇಂದ್ರೀಕೃತವಾಗಿರುವುದರಿಂದ ಇಡೀ ಬ್ಯಾಂಕಿಂಗ್ ವ್ಯವಸ್ಧೆಯ ದ್ರವತ್ವ ವರ್ಧಿಸುತ್ತದೆ. ಈ ವ್ಯವಸ್ಥೆ ಇಲ್ಲದಿದ್ದಲ್ಲಿ ವಾಣಿಜ್ಯ ಬ್ಯಾಂಕುಗಳು ಹೆಚ್ಚು ನಗದನ್ನು ಕಾಯ್ದಿಟ್ಟುಕೊಂಡಿರಬೇಕಾಗುತ್ತಿತ್ತು. ಇದರಿಂದ ಲಾಭ ಗಳಿಕೆ ಕಡಿಮೆಯಾಗುತ್ತದೆ. ಉದ್ದರಿ ನಿಯಂತ್ರಣಕ್ಕೂ ನಗದು ಸಂಚಿತಿಯ ನಿಬಂಧನೆ ಸಹಕಾರಿಯಾಗಿದೆ.

(2) ಆಪತ್ಕಾಲದಲ್ಲಿ ಸಾಲ ನೀಡಿಕೆ ಮತ್ತು ಪುನರ್‍ವಟಾವಣೆ: ಸಾರ್ವಜನಿಕರು ತಪ್ಪು ಅಭಿಪ್ರಾಯದಿಂದ ಬ್ಯಾಂಕುಗಳ ತಮ್ಮ ಠೇವಣಿಗಳನ್ನು ವಾಪಸ್ಸು ಪಡೆಯಲು ಕಾತರರಾದ ಕೆಲವು ಸಂದರ್ಭಗಳು ಪ್ರತಿಯೊಂದು ಬ್ಯಾಂಕಿಂಗ್ ವ್ಯವಸ್ಥೆಯ ಅನುಭವ. ತಮ್ಮ ಹಣ ವಿನಿಯೋಜನೆಗಳು ಬೆಲೆಯಿಲ್ಲದಂತಾದೀತೆಂಬ ಅಥವಾ ಬ್ಯಾಂಕುಗಳು ದಿವಾಳಿಯಾದಾವೆಂಬ ಭಯ ಅವರಲ್ಲಿ ಉಂಟಾಗಬಹುದು. ಅಥವಾ ಯಾವುದಾದರೊಂದು ಕಾರಣದಿಂದ ತಮ್ಮ ಠೇವಣಿಗಳನ್ನು ನಗದಾಗಿಟ್ಟುಕೊಳ್ಳಲು ಅವರು ಅಪೇಕ್ಷಿಸಬಹುದು. ತನ್ನ ಉದ್ದರಿ ಹೊಣೆಗಳನ್ನು ಸರಿದೂಗಿಸುವಷ್ಟು ನಗದನ್ನು ಹೊಂದಿರುವ ಬ್ಯಾಂಕಿಂಗ್ ವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ. ಉದ್ದರಿ ವ್ಯವಸ್ಧ ಕುಸಿದು ಬೀಳುವುದನ್ನು ಅದರಿಂದ ಸಾರ್ವಜನಿಕ ವಿಶ್ವಾಸಕ್ಕೆ ಬೀಳುವ ಭಾರಿ ಪೆಟ್ಟನ್ನೂ ತಪ್ಪಿಸಬೇಕಾದರೆ ವಾಣಿಜ್ಯ ಬ್ಯಾಂಕುಗಳಿಗೆ ತಾತ್ಕಾಲಿಕವಾಗಿ ನಗದು ಹಣವನ್ನು ಒದಗಿಸುವ ಯಾವುದಾದರೂ ಒಂದು ಸಂಸ್ಧೆ ಇರಬೇಕು. ಕೇಂದ್ರೀಯ ಬ್ಯಾಂಕು ಈ ಕಾರ್ಯ ನಿರ್ವಹಿಸಬಲ್ಲದು. ಆದು ತನ್ನಲ್ಲಿರುವ ಸದಸ್ಯ ಬ್ಯಾಂಕುಗಳ ನಗದು ಸಂಚಿತಿಯ ಪ್ರಮಾಣ ಹೆಚ್ಚಿಸಬಲ್ಲದು ಅಥವಾ ಸಾರ್ವಜನಿಕರು ನಗದು ಪಡೆಯಲು ಕಾತರರಾಗಿದ್ದರೆ ಹೆಚ್ಚು ನೋಟುಗಳನ್ನು ಮುದ್ರಿಸಿ ವಾಣಿಜ್ಯ ಬ್ಯಾಂಕುಗಳಿಗೆ ಸಾಲವಾಗಿ ಕೊಡಬಹುದು. ಸಾಮಾನ್ಯವಾಗಿ ಅನೇಕ ರಾಷ್ಟ್ರಗಳ ಶಾಸನಗಳು ಕೇಂದ್ರೀಯ ಬ್ಯಾಂಕು ಮುದ್ರಿಸಬಹುದಾದ ನೋಟುಗಳ ಮೊತ್ತದ ಬಗ್ಗೆ ಒಂದು ಮಿತಿಯನ್ನು ವಿಧಿಸಿವೆಚಿiÀiÁದರೂ ತಾತ್ಕಾಲಿಕವಾಗಿ ಹೆಚ್ಚು ನೋಟುಗಳನ್ನು ಮುದ್ರಿಸಲು ಅವಕಾಶ ಕಲ್ಪಿಸಿವೆ. ಬ್ಯಾಂಕಿಂಗ್ ವ್ಯವಸ್ಧೆ ಪುಟಿತತೆಯ ರಕ್ಷಣೆಗೆ ಇಂಥ ಮಾರ್ಗ ಅತ್ಯಾವಶ್ಯಕ. ಹೀಗಿಲ್ಲದಿದ್ದರೆ ವಿನಾಕಾರಣ ದಿವಾಳಿತನ ಹರಡುವುದು. ವಸ್ತುತಃ ದಿವಾಳಿತನ ಇರುವುದಿಲ್ಲ, ಸಾಲದ ಹೊಣೆಗೆ ಸಮವಾದ ಆಸ್ತಿಗಳು ಇದ್ದೇ ಇರುತ್ತವೆ. ಹಠಾತ್ತಾಗಿ ಉಂಟಾಗುವ ನಗದು ಹಣದ ಬೇಡಿಕೆಯ ಹೆಚ್ಚುವರಿಯನ್ನು ಸರಿದೂಗಿಸುವಷ್ಟು ವಿಧಿಮಾನ್ಯ ಹಣದ ಬೇಡಿಕೆಯ ಹೆಚ್ಚುವರಿಯನ್ನುಸರಿದೂಗಿಸುವಷ್ಟು ವಿಧಿಮಾನ್ಯ ಹಣದ ತಾತ್ಕಾಲಿಕ ಆಭಾವವೇ ಈ ಪರಿಸ್ಥಿತಿಗೆ ಕಾರಣ. 1907ರಲ್ಲಿ ಅಮೆರಿಕದಲ್ಲಿ ಸಂಭವಿಸಿದ ಗಾಬರಿಯ ಘಟನೆ ಇದಕ್ಕೆ ಉತ್ತಮ ನಿದರ್ಶನ. ನ್ಯೂಯಾರ್ಕಿನ ಬ್ಯಾಂಕುಗಳು ನೋಟಿನ ಪ್ರಮಾಣ ಹೆಚ್ಚಿಸಿಕೊಳ್ಳಲಾಗದೆ ತೀರುವೆ ಪತ್ರಗಳನ್ನು ಅನಿವಾರ್ಯವಾಗಿ ಮುದ್ರಿಸಬೇಕಾಯಿತು. ಆದರೆ ಇಂಥಯುಕ್ತಿಗಳನ್ನು ಅನುಸರಿಸುವ ಸ್ಥಿತಿಗೆ ಇಳಿಯುವುದಕ್ಕಿಂತ ಗಾಬರಿ ಪರಿಸ್ಥಿತಿ ಎದುರಿಸುವ ಏಕೈಕ ಉತ್ತಮ ಮಾರ್ಗವೆಂದರೆ ಯೋಗ್ಯ ಋಣಿಗಳೆಲ್ಲರಿಗೂ (ವಾಣಿಜ್ಯ ಬ್ಯಾಂಕುಗಳಿಗೆ) ನಗದು ಹಣ ಒದಗಿಸುವ ಅಧಿಕಾರವನ್ನು ಕೇಂದ್ರೀಯ ಬ್ಯಾಂಕಿಂಗೆ ನೀಡಿ ಅದನ್ನು ಆಪತ್ಕಾಲದ ಸಾಲ ನೀಡಿಕೆ ಸಂಸ್ಥೆಯಾಗಿ ಪರಿಗಣಿಸುವುದು.

ಅಂತೆಯೇ ಇಂದು ಕೇಂದ್ರೀಯ ಬ್ಯಾಂಕು ಆಪತ್ಕಾಲದ ಸಾಲನೀಡಿಕೆ ಸಂಸ್ಧೆ ಹುಂಡಿಗಳನ್ನು ಪುನರ್‍ವಟಾಯಿಸಿ ಆಪತ್ಕಾಲದಲ್ಲಿ ಸಾಲ ನೀಡುವಶಕ್ತಿ ಅದಕ್ಕದೆ. ಇದಲ್ಲದೆ ಬೇರೆ ರೀತಿಯಲ್ಲೂ ಕೇಂದ್ರೀಯ ಬ್ಯಾಂಕು ಆಪತ್ಕಾಲದಲ್ಲಿ ಸಾಲಗಳಗೂ ಮಾರ್ಗೋಪಾಯ ಮುಂಗಡಗಳ ಮೂಲಕವೂ ಸಾಲಪತ್ರಗಳನ್ನು ಕೊಳ್ಳುವುದರ ಮೂಲಕವೂ ಆಪತ್ಕಾಲದಲ್ಲಿ ಸಾಲ ಕೊಡುವುದುಂಟು. ಕೇಂದ್ರೀಯ ಬ್ಯಾಂಕಿನ ಉದ್ದರಿಯಾಗಿ ಪರಿವರ್ತಿಸುವುದು ಎಂದು ಅರ್ಥ.

ಕೇಂದ್ರೀಯ ಬ್ಯಾಂಕಿನ ಉದ್ದರಿ ನೀತಿಯಿಂದ ಅನೇಕ ಅನುಕೂಲಗಳಿವೆ. ವಾಣಿಜ್ಯ ಬ್ಯಾಂಕುಗಳು ತಮ್ಮ ದೈನಂದಿನ ವ್ಯವಹಾರ ನಿರ್ವಹಣೆಗಾಗಿ ಅಧಿಕವಾಗಿ ನಗದನ್ನು ಹೊಂದಿರಬೇಕಾಗುವುದಿಲ್ಲ. ಅಂಥ ಆಪತ್ತು ಬಂದರೆ ಕೇಂದ್ರೀಯ ಬ್ಯಾಂಕಿನ ನೆರವು ಪಡೆಯಬಹುದು. ಇದರಿಂದ ವಾಣಿಜ್ಯ ಬ್ಯಾಂಕುಗಳ ಬ್ಯಾಂಕಿನ ನೆರವು ಪಡೆಯಬಹುದು. ಇದರಿಂದ ವಾಣಿಜ್ಯ ಬ್ಯಾಂಕುಗಳ ಸಂಪನ್ನೂಲಗಳಿಗೆ ಪುಟಿತತೆ, ದ್ರವತ್ವ ಎರಡೂ ಪ್ರಾಪ್ತವಾಗುತ್ತವೆ. ಈ ಸೌಲಭ್ಯವಿಲ್ಲದಿದ್ದರೆ ಅವು ಅಧಿಕ ಪರಿಮಾಣದಲ್ಲಿ ನಗದನ್ನು ಇಟ್ಟು ಕೊಂಡಿರಬೇಕಾಗುತ್ತಿದ್ದುದರಿಂದ ವಾಣಿಜ್ಯ ಬ್ಯಾಂಕುಗಳ ವ್ಯವಹಾರಗಳಿಗೆ ಮಿತಿಯುಂಟಾಗುತ್ತಿತ್ತು.

ಕೇಂದ್ರೀಯ ಬ್ಯಾಂಕಿನ ಆಪತ್ಕಾಲದ ಸಾಲ ನೀಡಿಕೆ ನೀತಿ ಒಂದೊಂದು ದೇಶದಲ್ಲಿ ಒಂದೊಂದು ವಿಧವಾಗಿದೆ. ಇಂಗ್ಲೆಂಡಿನಲ್ಲಿ ಈ ಕಾರ್ಯ ಪರೋಕ್ಷವಾಗಿ ಜರಗುತ್ತದೆ. ಇಂಗ್ಲೆಂಡಿನ ವಾಣಿಜ್ಯ ಬ್ಯಾಂಕುಗಳು ಹುಂಡಿಗಳ ಪುನರ್ ವಟಾವಣೆಗಾಗಿ ನೇರವಾಗಿ ಬ್ಯಾಂಕ್ ಆಫ್ ಇಂಗ್ಲೆಂಡಿಗೆ ಬರುವುದಿಲ್ಲ. ಬದಲಾಗಿ ಹುಂಡಿಯ ದಳ್ಳಾಳಿಗಳಿಗೆ ಮತ್ತು ವಟ್ಟದ ಅಂಗಡಿಗಳಿಗೆ ಹುಂಡಿಗಳನ್ನು ಅಡವಿಟ್ಟುಕೊಳ್ಳಲು ಸಾಲ ಕೊಡುತ್ತವೆ. ಅಗತ್ಯ ಬಿದ್ದಾಗ ವಟ್ಟದ ಪೇಟೆಯಿಂದ ಹಣವನ್ನು ವಾಪಸು ಪಡೆಯುತ್ತವೆ. ವಟ್ಟದ ಪೇಟೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದಾಗ ವಟ್ಟದ ಅಂಗಡಿಗಳು ಕೇಂದ್ರೀಯ ಬ್ಯಾಂಕಿನಲ್ಲಿ ವ್ಯಾಪಾರದ ಹುಂಡಿಗಳನ್ನು ಪುನರ್‍ವಟಾವಣೆಗೆ ಇಟ್ಟು ಹಣ ಪಡೆಯುತ್ತವೆ. ಹೀಗೆ ಕೇಂದ್ರೀಯ ಬ್ಯಾಂಕು ಮತ್ತು ಬ್ಯಾಂಕುಗಳ ಮಧ್ಯಸ್ಥದಾರನಂತೆ ಲಂಡನ್ನಿನ ವಟ್ಟದ ಪೇಟೆ ವರ್ತಿಸುತ್ತದೆ ಆದರೆ ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರಕ್ಕಿಂತ ಕೇಂದ್ರೀಯ ಬ್ಯಾಂಕಿನ ಬಡ್ಡಿ ದರ ಹೆಚ್ಚಾಗಿರುವುದರಿಂದ ವಟ್ಟದ ಅಂಗಡಿಗಳು ಮತ್ತು ಹುಂಡಿಯ ದಳ್ಳಾಳಿಗಳು ತುರ್ತು ಪರಿಸ್ಥಿತಿಯಲ್ಲಿ ಹೊರತು ಬೇರೆ ಯಾವ ಕಾಲದಲ್ಲೂ ಕೇಂದ್ರೀಯ ಬ್ಯಾಂಕಿನ ಮರೆ ಹೋಗುವುದಿಲ್ಲ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ವಾಣಿಜ್ಯ ಬ್ಯಾಂಕುಗಳು ನೇರವಾಗಿ ವ್ಯಾಪಾರದ ಹುಂಡಿಗಳನ್ನು ಕೇಂದ್ರೀಯ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆಯಲು ಅವಕಾಶವಿದೆ. ಆದ್ದರಿಂದ ಕೇಂದ್ರೀಯ ಬ್ಯಾಂಕಿಗೆ ವಾಣಿಜ್ಯ ಬ್ಯಾಂಕುಗಳ ಮೇಲೆ ಸರಿಯಾದ ಹತೋಟಿ ಇಟ್ಟುಕೊಳ್ಳಲಾಗುವುದಿಲ್ಲ. ವ್ಯಾಪಾರದ ಹುಂಡಿಗಳ ಮೇಲೆ ಸಾಲ ಕೊಡುವುದರಿಂದ ದೇಶದಲ್ಲಿ ಹಣದ ಸರಬರಾಯಿ ಹೆಚ್ಚಾಗುತ್ತದೆ.

ಅಮೆರಿಕ ಸಂಯುಕ್ತ ಸಂಸ್ಧಾನಗಳ ಸಂಯುಕ್ತ ಹಣಕಾಸು ವ್ಯವಸ್ಧೆ ಯೂರೋಪ್ ಮತ್ತು ಇಂಗ್ಲೆಂಡಿನ ಪದ್ಧತಿಗಳೆರಡನ್ನೂ ಒಳಗೊಂಡಿದೆ. ಇಂಗ್ಲೆಂಡಿನಲ್ಲಿ ಇರುವಂತೆ ಸದಸ್ಯ ಬ್ಯಾಂಕುಗಳು ಫೆಡರಲ್ ರಿಸರ್ವ್ ಬ್ಯಾಂಕುಗಳಲ್ಲಿ ನಿರ್ದಿಷ್ಟ ಪ್ರಮಾಣದ ನಗದು ಸಂಚಿತಿ ಇಟ್ಟಿರುತ್ತವೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿರುವಂತೆ ವ್ಯಾಪರದ ಹುಂಡಿಗಳನ್ನು ಮರುವಟಾವಣೆಗೆ ಇಟ್ಟು ಹಣ ಪಡೆಯುತ್ತವೆ.

ಕೇಂದ್ರೀಯ ಬ್ಯಾಂಕು ಆಪತ್ಕಾಲದ ಸಾಲಿಗ ಸಂಸ್ಥೆಯಾಗಿರುವುದರಿಂದ ಸದಸ್ಯ ಬ್ಯಾಂಕುಗಳ ನಗದು ಸಂಚಿತಿಯ ಮೇಲೆ ಅದಕ್ಕೆ ಇರುವ ಅಧಿಕಾರ ಮಾಯವಾಗುತ್ತದೆ ಎಂದು ಸೇಯರ್ಸ್ ಎಂಬ ಬ್ಯಾಂಕಿಂಗ್ ತಜ್ಞ ಅಭಿಪ್ರಾಯ ಪಟ್ಟಿದ್ದಾನೆ. ಸದಸ್ಯ ಬ್ಯಾಂಕುಗಳು ಸರ್ಕಾರಿ ನಾಮಪತ್ರಗಳನ್ನು ಕೇಂದ್ರೀಯ ಬ್ಯಾಂಕಿಗೆ ಮಾರಿ ತಮ್ಮ ನಗದು ಸಂಚಿತಿಯನ್ನು ಬಲಪಡಿಸಿಕೊಳ್ಳಲು ಅವಕಾಶ ವಿರುವುದರಿಂದ ಕೇಂದ್ರೀಯ ಬ್ಯಾಂಕಿನ ಅಧಿಕಾರಕ್ಕೆ ಚ್ಯುತಿ ಬಂದಂತಾಗುತ್ತದೆ, ದಿಟ. ಆದರೆ ಸದಸ್ಯ ಬ್ಯಾಂಕುಗಳು ಸಾಲ ಬೇಡಿ ಬರುವುದನ್ನು ನಿರುತ್ತೇಜಿಸಲು ಕೇಂದ್ರೀಯ ಬ್ಯಾಂಕು ತನ್ನ ವಟ್ಟದ ದರ ಏರಿಸಬಹುದಾಗಿದೆ.

ಕೇಂದ್ರೀಯ ಬ್ಯಾಂಕು ವ್ಯಾಪಾರದ ಹುಂಡಿಗಳ ಮೇಲೆ ಕೊಡುವ ಸಾಲದ ಸೌಲಭ್ಯವನ್ನು ಸದಸ್ಯ ಬ್ಯಾಂಕುಗಳು ದುರುಪಯೋಗಿಸಿಕೊಳ್ಳಬಾರದು. ಈ ರೀತಿಯಲ್ಲಿ ಸಾಲ ಪಡೆಯುವುದು ಅವುಗಳ ಹಕ್ಕಾಗಿದ್ದರೂ ಸದಾ ಅದರ ಕಡೆಗೇ ಕೈತೋರಿಸುವುದು ನ್ಯಾಯವಲ್ಲ. ಡಿ ಕಾಕ್ ಹೇಳಿರುವಂತೆ ಈ ಸೌಲಭ್ಯದಿಂದ ಉದ್ದರಿ ವ್ಯವಸ್ಧೆಯ ಪುಟಿತತೆ ಮತ್ತು ದ್ರವತ್ವಗಳನ್ನು ಹಾಳುಮಾಡಬಾರದು. ಸದಸ್ಯ ಬ್ಯಾಂಕುಗಳು ಈ ಸೌಲಭ್ಯವನ್ನು ತಮ್ಮ ಶಾಶ್ವತ ಬಂಡವಾಳವೆಂದು ಪರಿಗಣಿಸದಿದ್ದರೆ ಕೇಂದ್ರೀಯ ಬ್ಯಾಂಕಿಂಗ್ ಸಾಧಾರಣವಾದ ಕಾಲದಲ್ಲಿ ತನ್ನ ಪರಿಸ್ಧಿತಿಯನ್ನು ಉತ್ತಮಪಡಿಸಿಕೊಂಡು ಆಪತ್ಕಾಲದಲ್ಲಿ ತಮ್ಮ ನೆರವಿಗೆ ಬರಲು ಶಕ್ತಿ ನೀಡಿದಂತಾಗುತ್ತದೆ.

4 ಕೇಂದ್ರೀಯ ತೀರುವೆ : ಕೇಂದ್ರೀಯ ಬ್ಯಾಂಕಿನ ಈ ಕಾರ್ಯ ಕೆಲವು ದೇಶಗಳಲ್ಲಿ ಸ್ರಾಂಪದಾಯಿಕವಾಗಿಯೂ ಮತ್ತೆ ಕೆಲವು ದೇಶಗಳಲ್ಲಿ ಶಾಸನಬದ್ದವಾಗಿಯೂ ಬೆಳೆದು ಬಂದಿದೆ. ಎಲ್ಲ ಸದಸ್ಯ ಬ್ಯಾಂಕುಗಳೂ ಕೇಂದ್ರೀಯ ಬ್ಯಾಂಕಿನಲ್ಲಿ ತಮ್ಮ ನಗದು ಸಂಚಿತಿಗಳನ್ನು ಇಡುವುದರಿಂದ, ಒಂದು ಬ್ಯಾಂಕಿಗೂ ಮತ್ತೊಂದು ಬ್ಯಾಂಕಿಗೂ ನಡುವಣ ಹಣದ ವಹಿವಾಟಿನ ಫಲವಾಗಿ ಅಂತಿಮವಾಗಿ ಒಂದು ಬ್ಯಾಂಕು ತನ್ನ ಪುಸ್ತಕಗಳ ಲೆಕ್ಕಗಳಲ್ಲಿ ಸುಲಭವಾಗಿ ಪರಿಹರಿಸಬಹುದು. ನಗದನ್ನು ಬಳಸದೆ ಒಂದು ಬ್ಯಾಂಕಿಗೂ ಮತ್ತೊಂದು ಬ್ಯಾಂಕಿಗೂ ನಡುವೆ ಉದ್ಭವಿಸುವ ಸಾಲದ ಶಿಲ್ಕುಗಳನ್ನು ಚುಕ್ತಾ ಮಾಡಬಹುದು. ಇದರಿಂದ ಸದಸ್ಯ ಬ್ಯಾಂಕುಗಳು ಪರಸ್ಪರ ಋಣ ತೀರುವೆಗೆ ಹೆಚ್ಚು ನಗದು ಹಣವನ್ನು ಉಪಯೋಗಿಸಬೇಕಾಗುವುದಿಲ್ಲ. ಇದಲ್ಲದೆ ಕೇಂದ್ರೀಯ ಬ್ಯಾಂಕು ಸದಸ್ಯ ಬ್ಯಾಂಕುಗಳ ಮೇಲೆ ಹೆಚ್ಚು ಹತೋಟಿ ಇಟ್ಟುಕೊಳ್ಳಲು ಅವಕಾಶವಾಗುತ್ತದೆ.

5 ಉದ್ದರಿ ನಿಯಂತ್ರಣ: ಕೇಂದ್ರೀಯ ಬ್ಯಾಂಕಿನ ಅತ್ಯಂತ ಮುಖ್ಯ ಕಾರ್ಯಭಾರವೆಂದರೆ ವಾಣಿಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಯ ಚಟುವಟಿಕೆಗಳನ್ನು ನಿರ್ದೇಶಿಸಿ ನಿಯಂತ್ರಿಸುವುದರ ಮೂಲಕ ಆರ್ಥಿಕತೆಯಲ್ಲಿ ಉದ್ದರಿ ಹಣದ ಮೇಲೆ ಹತೋಟಿ ಇಟ್ಟುಕೊಳ್ಳುವುದು. ಕೇಂದ್ರೀಯ ಬ್ಯಾಂಕಿನ ಇತರ ಕಾರ್ಯಭಾರಗಳು ಈ ಕಾರ್ಯಭಾರಕ್ಕೆ ಸಹಾಯಕವಾಗಿರುತ್ತವೆ. ಆಧುನಿಕ ರಾಷ್ಟ್ರಗಳಲ್ಲಿ ವಿಧಿಮಾನ್ಯ ಹಣದ ಪರಿಮಾಣಕ್ಕಿಂತ ಉದ್ದರಿ ಹಣದ ಪರಿಮಾಣವೇ ಅಧಿಕವಾಗಿರುವುದರಿಂದ ಕೇಂದ್ರೀಯ ಬ್ಯಾಂಕು ಇದರ ಮೇಲೆ ಹತೋಟಿ ಇಟ್ಟುಕೊಳ್ಳುವುದು ಆವಶ್ಯಕ.

ಕೇಂದ್ರೀಯ ಬ್ಯಾಂಕು ಉದ್ದರಿಯ ಮೇಲೆ ಹತೋಟಿ ಇಟ್ಟುಕೊಳ್ಳುವುದರಲ್ಲಿ ಅನೇಕ ಉದ್ದೇಶಗಳಿವೆ. ಸುವರ್ಣ ಪ್ರಮಿತಿ ಆಚರಣೆಯಲ್ಲಿರುವ ದೇಶಗಳಲ್ಲಿ ಸ್ವರ್ಣ ಸಂಚಿತಿಯನ್ನು ಕಾಪಾಡುವುದು ಕೇಂದ್ರೀಯ ಬ್ಯಾಂಕಿನ ಹೊಣೆ, ಸುವರ್ಣ ಪ್ರಮಿತಿಯ ದೇಶದಲ್ಲಿ ಚಿನ್ನವನ್ನು ರಪ್ತು ಮಾಡುವುದಕ್ಕೂ ಅಮದು ಮಾಡಿ ಕೊಳ್ಳುವುದಕ್ಕೂ ಜನರಿಗೆ ಸ್ವಾತಂತ್ರ್ಯವಿರತ್ತದೆ. ನೋಟುಗಳನ್ನು ಚಿನ್ನದ ನಾಣ್ಯಕ್ಕಾಗಲಿ ಚಿನ್ನದ ಗಟ್ಟಿಗಾಗಲಿ ಪರಿವರ್ತಿಸಿಕೊಳ್ಳಲು ಅವಕಾಶವಿರುತ್ತದೆ. ಇಂಥ ಸನ್ನಿವೇಶದಲ್ಲಿ ಉದ್ದರಿಯ ಗಾತ್ರ ಅನಾವಶ್ಯಕವಾಗಿ ಹೆಚ್ಚಾದರೆ ಪದಾರ್ಥಗಳ ಬೆಲೆ ಏರಿ ಆಮದು ವ್ಯಾಪಾರಕ್ಕೆ ಪ್ರೋತ್ಸಾಹ ಸಿಕ್ಕುತ್ತದೆ. ಆಗ ವಿದೇಶಿ ವ್ಯಾಪಾರದಿಂದ ಭಾರಿ ನಷ್ಟವುಂಟಾಗುತ್ತದೆ. ಹೊರ ದೇಶದವರಿಗೆ ಕೊಡಬೇಕಾಗುವ ಸಾಲ ತೀರಿಸಲು ಚಿನ್ನ ರಪ್ತು ಮಾಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕು ಉದರ್ದಿಯ ಗಾತ್ರ ತಗ್ಗಿಸಿ ಧಾರಣೆ ವಾಸಿಯನ್ನು ತಡೆಗಟ್ಟಿ ಚಿನ್ನ ರಫ್ತಾಗುವುದನ್ನು ನಿಲ್ಲಿಸಬೇಕು.

ದೇಶದ ಆಂತರಿಕ ಧಾರಣೆವಾಸಿಯ ಸ್ಧಾಯಿತ್ವ ರಕ್ಷಣೆ ಮತ್ತೊಂದು ಉದ್ದೇಶ. ಧಾರಣೆವಾಸಿಯ ಏರಿಳಿತಗಳಿಂದ ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕಷ್ಟ ನಷ್ಟಗಳು ಸಂಭವಿಸುತ್ತವೆ. ಕೇಂದ್ರೀಯ ಬ್ಯಾಂಕು ಹಣದ ಸಾಧಾರಣ ಬೆಲೆಯನ್ನು ಹತೋಟಿಗೆ ತರುವುದರ ಮೂಲಕ ಧಾರಣೆವಾಸಿಯ ಏರಿಳಿತಗಳನ್ನು ಸ್ದಿಮಿತದಲ್ಲಿಟ್ಟುಕೊಳ್ಳಬಹುದು. ವಿದೇಶಿ ವಿನಿಮಯ ದರದ ಸ್ಥಾಯಿತ್ವ ರಕ್ಷಣೆ ಇನ್ನೊಂದು ಉದ್ದೇಶ. ವಿದೇಶಿ ವಿನಿಮಯ ದರದಲ್ಲಿ ಸ್ಥಿರತೆ ಇಲ್ಲದಿದ್ದರೆ ವಿದೇಶಿ ವ್ಯಪಾರಕ್ಕೆ ಧಕ್ಕೆ ತಟ್ಟುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಅನಿಶ್ಚತತೆ ತಲೆದೋರುತ್ತದೆ.

ಉದ್ದರಿಯ ಹರಿವನ್ನು ಹತೋಟಿಗೆ ತರಬೇಕಾದುದರ ಆವಶ್ಯಕತೆಯನ್ನು ಎಲ್ಲರೂ ಒಪ್ಪಿಕೊಂಡರೂ ಅದರ ಉದ್ದೇಶದ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಹಾಗೆಯೇ ಹಣದ ಹೊರಗಿನ ಮೌಲ್ಯವನ್ನು ಸ್ತಿಮಿತದಲ್ಲಿಟ್ಟುಕೊಳ್ಳಬೇಕೋ ಅಥವಾ ಒಳಗಿನ ಮೌಲ್ಯವನ್ನು ಸ್ತಿಮಿತದಲ್ಲಿಟ್ಟುಕೊಳ್ಳಬೇಕೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಸುವರ್ಣ ಪ್ರಮಿತಿ ಆಚರಣೆಯಲ್ಲಿರುವ ದೇಶಗಳಲ್ಲಿ ಹಣದ ಆಂತರಿಕ ಮೌಲ್ಯವನ್ನು ಸ್ಥಾಯಿಗೊಳಿಸಿದರೆ ಬಾಹ್ಯ ಮೌಲ್ಯ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದೆ. ನೋಟು ಪದ್ದತಿ ಬಳಕೆಯಲ್ಲಿರುವ ಆಂತರಿಕ ಮೌಲ್ಯದಲ್ಲಿ ಉಂಟಾಗುವ ಏರುಪೇರುಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಕೇಂದ್ರೀಯ ಬ್ಯಾಂಕುಗಳು ಹಣದ ಆಂತರಿಕ ಮೌಲ್ಯವನ್ನು ಸ್ಥಿರವಾಗಿಟ್ಟುಕೊಂಡು ಬಾಹ್ಯ ಮೌಲ್ಯ ಚಲಿಸಿ ಹೊಂದಿಕೊಳ್ಳಲು ಬಿಡುವುದುಂಟು.

ಆಧುನಿಕ ದೃಷ್ಟಿಯಲ್ಲಿ ನೋಡುವುದಾದರೆ ಒಂದು ದೇಶದ ಹಣದ ಆಂತರಿಕ ಮೌಲ್ಯವಾಗಲಿ ಬಾಹ್ಯ ಮೌಲ್ಯವಾಗಲಿ ಬಾಹ್ಯ ಮೌಲ್ಯವಾಗಲಿ ಅಷ್ಟು ಮುಖ್ಯವಾಗಿ ಕಾಣುವುದಿಲ್ಲ. ಆರ್ಥಿಕ ವಲಯದಲ್ಲಿ ಉಂಟಾಗುವ ಉಬ್ಬರವಿಳಿತಗಳನ್ನು ತಪ್ಪಿಸಿ ಆರ್ಥಿಕ ಸುವ್ಯವಸ್ಧೆಯನ್ನು ಸಾಧಿಸುವುದು. ಸರ್ಕಾರದ ಪೂರ್ಣೋದ್ಯೋಗೆ ಸ್ಧಾಪನೆಯ ಪ್ರಯತ್ನಕ್ಕೆ ನೆರವು ನೀಡುವುದು ಕೇಂದ್ರ ಬ್ಯಾಂಕುಗಳ ಈಗಿನ ಉದ್ದೇಶಗಳಾಗಿವೆ.

ಉದ್ದರಿ ನಿಯಂತ್ರಣಕ್ಕೆ ತೊಡಕುಗಳು : ಕೇಂದ್ರೀಯ ಬ್ಯಾಂಕು ಉದ್ದರಿ ನಿಯಂತ್ರಣ ಕಾರ್ಯ ನಿರ್ವಹಿಸುವಲ್ಲಿ ಅನೇಕ ತೊಡಕುಗಳನ್ನು ಎದುರುಸ ಬೇಕಾಗುತ್ತದೆ. ಬ್ಯಾಂಕ್ ಉದ್ದರಿಯೇ ಅಲ್ಲದೆ ವಾಣಿಜ್ಯ ಉದ್ದರಿ ವಾಗ್ದಾನ ಪತ್ರಗಳ ಮೂಲಕ ಕೊಡುವ ಸಾಲ ಹೀಗೆ ಇನ್ನೂ ಎಷ್ಟೋ ಬಗೆಯ ಉದ್ದರಿಗಳು ದೇಶದಲ್ಲಿರುತ್ತವೆ. ಬ್ಯಾಂಕ್ ಉದ್ದರಿಯ ಮೇಲೆ ಕೇಂದ್ರೀಯ ಬ್ಯಾಂಕು ಹತೋಟಿ ಇಟ್ಟುಕೊಳ್ಳಬಲ್ಲದೇ ಹೊರತು ಇತರ ರೂಪದ ಉದ್ದರಿಗಳ ಮೇಲೆ ಅದು ಸಾಧ್ಯವಿಲ್ಲ.

ಬ್ಯಾಂಕಿನ ಉದ್ದರಿಯ ವಿಚಾರದಲ್ಲೂ ಕೆಲವು ತೊಂದರೆಗಳಿವೆ. ದೇಶದಲ್ಲಿರುವ ಎಲ್ಲ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನ ಸದಸ್ಯ ಬ್ಯಾಂಕುಗಳಾಗಿರಲಿಲ್ಲ. ಉದಾಹರಣೆಗೆ, ಅಮೆರಿಕ ಸಂಯುಕ್ತ ಸಂಸ್ಧಾನಗಳಲ್ಲಿ ಐದನೆಯ ಒಂದು ಭಾಗದಷ್ಟು ಐಶ್ವರ್ಯವುಳ್ಳ ಬ್ಯಾಂಕುಗಳ ಪ್ಥಕಿ ಅರ್ಥದಷ್ಟು ಫೆಡರಲ್ ರಿಸರ್ವ್ ವ್ಯವಸ್ಧೆಯಿಂದ ಹಒರಗಿವೆ; ಭಾರತದಲ್ಲೂ ಅಸಂಘಟಿತ ವಲಯವಿದೆ. ಈ ಬ್ಯಾಂಕುಗಳು ಸೃಷ್ಟಿಸುವ ಸಾಲದ ಹಣದ ಮೇಲೆ ಕೇಂದ್ರೀಯ ಬ್ಯಾಂಕಿಗೆ ಯಾವ ಹತೋಟಿಯೂ ಇರುವುದಿಲ್ಲ.

ದೇಶದ ಎಲ್ಲ ಬ್ಯಾಂಕುಗಳೂ ಕೇಂದ್ರೀಯ ಬ್ಯಾಂಕಿನ ಸದಸ್ಯತ್ವ ಪಡೆದಿದ್ದರೂ ಕೇಂದ್ರೀಯ ಬ್ಯಾಂಕಿನ ಅಧಿಕಾರ ಪೂರ್ಣವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಸದಸ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನೊಡನೆ ಸಹಕರಿಸದಿದ್ದರೆ, ಅದರ ಮುಂದಾಳುತನ ಒಪ್ಪಿಕೊಳ್ಳದಿದ್ದರೆ ಕೇಂದ್ರೀಯ ಬ್ಯಾಂಕು ತನ್ನ ಕರ್ತವ್ಯವನ್ನು ಯಶಸ್ವಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಉದ್ದರಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಎಲ್ಲ ಬ್ಯಾಂಕುಗಳ ಸಹಕಾರ ಮತ್ತು ಬೆಂಬಲ ಬೇಕಾಗುತ್ತದೆ.

ಒಂದು ದೇಶದ ಹಣಮಂಡಲದಲ್ಲಿ ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಪಡದ ಕೆಲವು ಅಂಶಗಳಿರುತ್ತವೆ. ಇವುಗಳಲ್ಲಿ ಸಾರ್ವಜನಿಕರ ಮಾನಸಿಕ ಪ್ರವೃತ್ತಿ. ವ್ಯಾಪಾರಿಗಳ ನಡವಳಿಕೆಗಳು ಮುಖ್ಯವಾದವು. ಇಂಥ ಅಂಶಗಳ ಮೇಲೆ ಕೇಂದ್ರೀಯ ಬ್ಯಾಂಕಿಗೆ ಯಾವ ಅಧಿಕಾರವೂ ಇರುವುದಿಲ್ಲ.

ಉದ್ದರಿಯ ಹಣ ಕೊನೆಯಲ್ಲಿ ಯಾವ ಕೆಲಸಕ್ಕೆ ಉಪಯೋಗಿಸಲ್ಪಡುತ್ತದೆ ಎಂದು ತಿಳಿಯುವುದು ಕೇಂದ್ರೀಯ ಬ್ಯಾಂಕಿಗೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ವ್ಯಾಪಾರಕ್ಕೆಂದು ಬ್ಯಾಂಕಿನಿಂದ ಪಡೆದ ಉದ್ದರಿಯ ಹಣವನ್ನು ಬೇರೆ ಯಾವುದೋ ಉದ್ದೇಶಕ್ಕೆ ಉಪಯೋಗಿಸಬಹುದು. ಇದನ್ನು ತಡೆಗಟ್ಟಲು ಕೇಂದ್ರೀಯ ಬ್ಯಾಂಕಿಗೆ ಸಾಧ್ಯವಾಗದು. ಹೀಗೆಂದ ಮಾತ್ರಕ್ಕೆ ಕೇಂದ್ರೀಯ ಬ್ಯಾಂಕಿನ ಅಧಿಕಾರದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಅರ್ಥವಲ್ಲ. ಇಂಥ ತೊಡಕುಗಳನ್ನು ಅದು ಎದುರಿಸಬೇಕಾಗುತ್ತದೆ. ಅದರ ಅಧಿಕಾರ ಯಶಸ್ವಿಯಾಗುವುದು ಬಿಡುವುದು ಆಯಾ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅವಲಂಬಿಸಿದೆ. ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಲ್ಲಿ ಸುಸಜ್ಜಿತವಾದ ಹಣದ ಮಾರುಕಟ್ಟೆ ಇರುವುದರಿಂದ, ಆ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕಿನ ಅಧಿಕಾರ ಸಮರ್ಪಕವಾಗಿ ನಡೆಯುತ್ತದೆ. ಯಾವ ದೇಶದಲ್ಲಿ ಸುಸಜ್ಜಿತವಾದ ಹಣದ ಮಾರುಕಟ್ಟೆ ಇರುವುದುಲ್ಲಮೋ ಆ ದೇಶದಲ್ಲಿ ಕೇಂದ್ರೀಯ ಬ್ಯಾಂಕಿನ ಅಧಿಕಾರ ಅಷ್ಟು ಸಮರ್ಪಕವಾಗಿರುವುದಿಲ್ಲ.

ಉದ್ದರಿಯ ಗಾತ್ರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕು ಎರಡು ರೀತಿಯ ಉಪಾಯಗಳನ್ನು ಬಳಸುತ್ತದೆ : 1 ಪರಿಮಾಣಾತ್ಮಕ ಉದ್ದರಿ ನಿಯಂತ್ರಣ ಉಪಾಯಗಳು, 2 ಗುಣಾತ್ಮಕ ಉದ್ದರಿ ನಿಯಂತ್ರಾಣ ಉಪಾಯಗಳು. ಬ್ಯಾಂಕುದರ, ತೆರೆದ ಮಾರುಕಟ್ಟೆಯ ವ್ಯವಹಾರಗಳು, ವಾಣಿಜ್ಯ ಬ್ಯಾಂಕುಗಳ ನಗದು ಸಂಚಿತಿಯನ್ನು ಹೆಚ್ಚು ಕಡಿಮೆ ಮಾಡುವುದು-ಇವು ಪರಿಣಾತ್ಮಕ ಉಪಾಯಗಳು. ಉದ್ದರಿಯ ಪಡಿತರ, ನೇರ ಕ್ರಮ, ಅನುಭೋಗಿ ಉದ್ದರಿ ನಿಯಂತ್ರಣ ನೈತಿಕ ಪ್ರೇರಣೆ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಉದ್ದರಿ ಹತೋಟಿ-ಇವು ಗುಣಾತ್ಮಕ ಉಪಾಯಗಳು.

ಮೇಲೆ ತಿಳಿಸುವ ಕೇಂದ್ರೀಯ ಬ್ಯಾಂಕಿನ ಕಾರ್ಯಗಳು ಸಾಂಪ್ರದಾಯಿಕವಾದವು ಈಚಿನ ದಿನಗಳಲ್ಲಿ ಇವುಗಳ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುವ ಕಾರ್ಯಗಳನ್ನೂ ಅದು ಕೈಗೊಳ್ಳುತ್ತಿದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದು ಕೇಂದ್ರೀಯ ಬ್ಯಾಂಕಿನ ಕಾರ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕೃಷಿ ಮತ್ತು ಕೈಗಾರಿಕಾಭಿವೃದ್ದಿಗೆ ನೆರವಾಗುವಂತೆ ಸುಲಭದರದಲ್ಲಿ ಉದ್ದರಿ ಅವಕಾಶಗಳನ್ನು ಕಲ್ಪಿಸುವುದು ಕೇಂದ್ರೀಯ ಬ್ಯಾಂಕಿನ ಮುಖ್ಯ ಕರ್ತವ್ಯ. ಕೃಷಿ ಮತ್ತು ಕೈಗಾರಿಕಾ ಸಾಲಗಳನ್ನು ಒದಗಿಸುವ ಪ್ರತ್ಯೇಕ ಸಂಸ್ಧೆಗಳ ಸ್ಧಾಪನೆ, ಅವಕ್ಕೆ ಬಂಡವಾಳ ಪೂರೈಕೆ ಮುಂತಾದವುಗಳ ಜೊತೆಗೆ ಅಭಿವೃದ್ಧಿಗೆ ಉತ್ತೇಜಕವಾದ ಚಟುವಟಿಕೆಗಳನ್ನು ಕೇಂದ್ರೀಯ ಬ್ಯಾಂಕುಗಳು ಕೈಗೊಳ್ಳುತ್ತಿವೆ. ಇದು ಕೇಂದ್ರೀಯ ಬ್ಯಾಂಕಿಂಗ್ ವಿಕಾಸದಲ್ಲಿ ಒಂದು ಪ್ರಮುಖ ಬೆಳವಣಿಗೆ.

ವಾಣಿಜ್ಯ ಬ್ಯಾಂಕು : ಆಧುನಿಕ ಆರ್ಥಿಕ ಪ್ರಪಂಚದಲ್ಲಿ ವಾಣಿಜ್ಯ ಬ್ಯಾಂಕುಗಳ ಪಾತ್ರ ಮಹತ್ದ್ವ ಪೂರ್ಣವಾದ್ದು. ಉದ್ದರಿಯ ರೂಪದ ಹಣದಲ್ಲಿ ವ್ಯವಹರಿಸುವ ಸಂಸ್ಥೆಗಳಿವು. ದಿನಸಿಯ ಅಂಗಡಿಯೋ ಬಟ್ಟೆಯ ಅಂಗಡಿಯೋ ಇರುವಂತೆ ಇವು ಹಣದ ಅಂಗಡಿಗಳು. ಇವು ಸಾಲಪತ್ರಗಳ ಮೂಲಕ ವ್ಯವಹಾರ ನಡೆಸುತ್ತವೆ. ಕ್ರೌಡರ್ ಹೇಳಿರುವಂತೆ, ವಾಣಿಜ್ಯ ಬ್ಯಾಂಕುಗಳು ತಮ್ಮ ಮತ್ತು ಇತರ ಜನರ ಋಣಗಳಲ್ಲಿ ವ್ಯವಹರಿಸುವ ಸಂಸ್ಧೆಗಳು. ಇವು ಉದ್ದರಿ ರೂಪದ ಹಣ ಸೃಷ್ಟಿಸುವ ಕಾರ್ಖಾನೆಗಳು. ಸಾರ್ವಜನಿಕ ಉಳಿತಾಯದ ಹಣವನ್ನು ಠೇವಣಿಗಳ ರೂಪದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಉದ್ದರಿಯ ರೂಪದಲ್ಲಿ ಕೊಡುವ ಹಣಕಾಸಿನ ದಳ್ಳಾಳಿಗಳು. ಪ್ರಾರಂಭದಲ್ಲಿ ಇವು ವಾಣಿಜ್ಯೋದ್ಯಮಿಗಳಿಗೆ ಅಲ್ಪಾವಧಿ ಸಾಲ ಒದಗಿಸುವ ಸಂಸ್ಥೆಗಳಾಗಿದ್ದುರಿಂದ ಇವಕ್ಕೆ ವಾಣಿಜ್ಯ ಬ್ಯಾಂಕುಗಳೆಂಬ ಹೆಸರು ಬಂತು. ಆಧುನಿಕ ಯುಗದಲ್ಲಿ ಇವುಗಳ ಕಾರ್ಯ ಚಟುವಟಿಕೆಗಳು ವಿಸ್ತøತಗೊಂಡಿರುವುದರಿಂದ ಹಳೆಯ ಹೆಸರು ಸಮಂಜಸವಾಗಿ ತೋರುವುದಿಲ್ಲ. ಆದರೂ ಇದೇ ಹೆಸರು ಬಳಕೆಯಲ್ಲಿದೆ. ಇಂಗ್ಲೆಂಡಿನಲ್ಲಿ ಇವನ್ನು ಕೂಡುಬಂಡವಾಳ ಬ್ಯಾಂಕುಗಳೆಂದು ಕರೆಯುವುದುಂಟು.

ವಾಣಿಜ್ಯ ಬ್ಯಾಂಕುಗಳ ಕಾರ್ಯಭಾರಗಳು : ವಾಣಿಜ್ಯ ಬ್ಯಾಂಕುಗಳ ಮುಖ್ಯ ಉದ್ದೇಶ ಲಾಭಸಂಪಾದನೆ. ಇದಕ್ಕಾಗಿ ಅವು ನಿರ್ವಹಿಸುವ ಕಾರ್ಯಭಾರಗಳನ್ನು ಪ್ರಧಾನ ಕಾರ್ಯಭಾರಗಳು, ದ್ವಿತೀಯಕ ಅಥವಾ ಅನುಬಂಧಿ ಕಾರ್ಯಭಾರಗಳು ಎಂದು ವಿಂಗಡಿಸಲಾಗಿದೆ.

ಪ್ರಾಥಮಿಕ ಕಾರ್ಯಭಾರಗಳು : ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವುದು ವಾಣಿಜ್ಯ ಬ್ಯಾಂಕುಗಳ ಪ್ರಾಥಮಿಕ ಕಾರ್ಯಭಾರಗಳಲ್ಲಿ ಒಂದು. ಠೇವಣಿದಾರರು ಕೇಳಿದ ಅಥವಾ ವಾಯಿದೆ ಮುಗಿದ ಕೂಡಲೇ ವಾಪಸು ಕೊಡುವ ಭರವಸೆಯ ಮೇಲೆ ಈ ಠೇವಣಿಗಳನ್ನು ಬ್ಯಾಂಕುಗಳು ಸ್ವೀಕರಿಸುತ್ತದೆ. ವಾಪಸು ಪಡೆಯಲು ಇರುವ ನಿಬಂಧನೆಗಳ ಆಧಾರದ ಮೇಲೆ ಠೇವÀಣಿಗಳನ್ನು ಮೂರು ವಿಧಗಳಾಗಿ ವಿಂಗಡಿಸ ಬಹುದು : 1 ಚಾಲ್ತಿಠೇವಣಿ : ವ್ಯಾಪಾರಿಗಳು ಸಾಮಾನ್ಯವಾಗಿ ದೈನಂದಿನ ವಹಿವಾಟುಗಳ ನಿರ್ವಹಣೆಗಾಗಿ ಚಾಲ್ತಿಠೇವಣಿಗಳಲ್ಲಿ ಹಣ ಇಡುವುದು ಹೆಚ್ಚು. ಈ ಹಣವನ್ನು ಯಾವಾಗ ಬೇಕಾದರೂ ಹಿಂತೆಗೆದುಕೊಳ್ಳಬಹುದು. ಇದರ ನಿರ್ವಹಣೆಯಲ್ಲಿ ಬ್ಯಾಂಕಿನ ಹೊಣೆಗಾರಿಕೆ ಹೆಚ್ಚಾಗಿರುವುದರಿಂದ ಇದರ ಮೇಲೆ ಸಾಮಾನ್ಯವಾಗಿ ಬಡ್ಡಿ ಕೊಡುವುದಿಲ್ಲ ; ಕೊಟ್ಟರೂ ಅಲ್ಪಸ್ವಲ್ಪ ಕೊಡಬಹುದು. ಹಿಂತೆಗೆದುಕೊಳ್ಳುವುದಕ್ಕೆ ಕಾಲದ ನಿಬಂಧನೆ ಇಲ್ಲದಿರುವುದೇ ಈ ಠೇವಣಿಯ ವೈಶಿಷ್ಟ್ಯ. 2 ವಾಯಿದೆ ಠೇವಣಿ ಅಥವಾ ಸಾವಧಿ ಠೇವಣಿ ; ಇದನ್ನು ಒಂದು ಗೊತ್ತಾದ ಅವಧಿಗೆಂದು ಇಡಲಾಗುತ್ತದೆ. ವಾಯಿದೆ ಮುಗಿದ ಕೂಡಲೇ ಇದನ್ನು ವಾಪಸು ಪಡೆಯಬಹುದು. ಅದಕ್ಕೆ ಮೊದಲೆ ಹಣ ಬೇಕಾದಲ್ಲಿ ಬ್ಯಾಂಕಿಗೆ ಮುನ್ಸೂಚನೆ ಕೊಟ್ಟು ಪಡೆಯುವ ಅವಕಾಶವಿದೆ. ಈ ಠೇವಣಿಯಲ್ಲಿ ವಾಯಿದೆ ಮುಗಿಯುವವರೆಗೂ ಇದನ್ನೂ ಸಾಮಾನ್ಯವಾಗಿ ವಾಪಸು ಕೊಡಬೇಕಾಗಿ ಬರುವುದಿಲ್ಲವಾದ್ದರಿಂದ ಬ್ಯಾಂಕು ಆ ಅವಧಿಗೆ ಹಣವನ್ನು ಯುಕ್ತ ಕಂಡಂತೆ ವಿನಿಯೋಗಿಸಬಹುದು. ಮುದ್ದತಿ ಠೇವಣಿಯ ಮೇಲೆ ಬ್ಯಾಂಕು ನಿಗದಿಯಾದ ಬಡ್ಡಿ ನೀಡುತ್ತದೆ. 3 ಉಳಿತಾಯ ಠೇವಣಿ : ಸ್ಥಿರವರಮಾನ ಪಡೆಯುವ ವ್ಯಕ್ತಿಗಳಿಗಾಗಿ ಸಾಮಾನ್ಯವಾಗಿ ಉಳಿತಾಯ ಠೇವಣಿಯ ಸೌಲಭ್ಯ ಒದಗಿಸಲಾಗಿದೆ. ಅವರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದು ಉದ್ದೇಶ. ಮುಂಬರುವ ಆಪತ್ತುಗಳೆಂದು ಸಾಮಾನ್ಯವಾಗಿ ಇಡುವ ಈ ಠೇವಣಿಗಳನ್ನು ಪದೇ ಪದೇ ಹಿಂತೆಗೆದುಕೊಳ್ಳುವುದಕ್ಕೆ ನಿರ್ಬಂಧಗಳಿರುತ್ತವೆ. ಸಾಧಾರಣ ಬ್ಯಾಂಕಿಂಗ್ ಹೊಣೆಗಾರಿಕೆಯನ್ನು ಹೊಂದಿರುವ ಈ ಠೇವಣಿಗಳ ಮೇಲೆ ಕೊಡುವ ಬಡ್ಡಿಯ ದರ ಚಾಲ್ತಿ ಠೇವಣಿಯ ಮೇಲಿನದಕ್ಕಿಂತ ಅಧಿಕ ಮತ್ತು ಸಾವಧಿ ಠೇವಣಿಯ ಮೇಲಿನದಕ್ಕಿಂತ ಕಡಿಮೆ ಆಗಿರುತ್ತದೆ.

ಸಾರ್ವಜನಿಕರಿಗೆ ಸಾಲ ಕೊಡುವುದು ವಾಣಿಜ್ಯ ಬ್ಯಾಂಕುಗಳ ಎರಡನೆಯ ಪ್ರಧಾನ ಕಾರ್ಯಭಾರ. ವಾಣಿಜ್ಯ ಬ್ಯಾಂಕುಗಳಲ್ಲಿ ಸಾರ್ವಜನಿಕರು ಇಟ್ಟಿರುವ ಠೇವಣಿಯ ಹಣದ ಜೊತೆ ಅವುಗಳ ಷೇರುದಾರರು ಹಾಕಿರುವ ಷೇರು ಬಂಡವಾಳವಿರುತ್ತದೆ. ತಮ್ಮಲ್ಲಿರುವ ಹಣವನ್ನು ವರ್ತಕರಿಗೂ ಉತ್ಪಾದಕರಿಗೂ ಇತರ ಗ್ರಾಹಕರಿಗೂ ವಾಣಿಜ್ಯ ಬ್ಯಾಂಕುಗಳು ಸಾಲ ನೀಡುತ್ತವೆ. ಯಾವ ಸಮಾಜದಲ್ಲೇ ಆಗಲಿ, ಆರ್ಥಿಕ ಮುನ್ನಡೆಯ ದೃಷ್ಟಿಯಿಂದ ಉಳಿತಾಯದ ಸಂಗ್ರಹಣೆ, ಉತ್ಪಾದನೆ ಕಾರ್ಯಗಳಿಗೆ ಅದರ ವಿತರಣೆ ಇವು ಅಗತ್ಯವಾಗಿರುತ್ತದೆ. ವಾಣಿಜ್ಯ ಬ್ಯಾಂಕುಗಳು ಇದೇ ಪ್ರಧಾನವಾದ ಕಾರ್ಯ. ಇದೇ ಮುಖ್ಯ ಲಾಭ ಸಂಪಾದನೆಯ ವಿಧಾನ. ವಾಣಿಜ್ಯ ಬ್ಯಾಂಕುಗಳು ಅನೇಕ ರೀತಿಯಲ್ಲಿ ಸಾಲ ಒದಗಿಸುತ್ತವೆ. ಮೀರೆಳೆತ (ಓವರ್ ಡ್ರಾಫ್ಟ್) ಸೌಲಭ್ಯ ಒದಗಿಸುವುದರ ಮೂಲಕ, ವ್ಯಾಪಾರದ ಹುಂಡಿಗಳನ್ನು ವಟ್ಟಕ್ಕೆ ಮುರಿದುಕೊಳ್ಳುವುದರ ಮೂಲಕ ಮತ್ತು ವೈಯಕ್ತಿಕ ಪ್ರತ್ಯಯದ ಮೇಲೆ ಸಾಲಕೊಡುವುದುಂಟು. ಕೊಡುವ ಸಾಲ ಅಲ್ಪಾವಧಿಯದು. ದೀರ್ಘಾವಧಿ ಸಾಲ ಕೊಡುವುದು ವಾಣಿಜ್ಯ ಬ್ಯಾಂಕುಗಳ ಕೆಲಸವಲ್ಲ. ಸುಲಭವಾಗಿ ಬಿಕರಿ ಮಾಡಿ ನಗದು ಪಡೆಯಬಹುದಾದ ಚಿನ್ನ, ಪ್ರತಿಭೂತಿಗಳು (ಸೆಕ್ಯೂರಿಟೀಸ್), ವ್ಯಾಪಾರದ ಹುಂಡಿಗಳು, ಖಜಾನೆ ಹುಂಡಿಗಳು, ವಿಮಾ ಪಾಲಿಸಿ ಮೊದಲಾದವನ್ನು ಅವು ಆಧಾರವಾಗಿಟ್ಟುಕೊಳ್ಳುತ್ತವೆ. ಬ್ಯಾಂಕಿಂಗ್ ಸಂಸ್ಥೆ ತಾನು ನೀಡುವ ಸಾಲಗಳಿಗೆ ವಿಧಿಸುವ ಬಡ್ಡಿಯ ದರ ಸಾಮಾನ್ಯವಾಗಿ ಅದು ಗ್ರಾಹಕರ ಠೇವಣಿಗಳಿಗೆ ಕೊಡುವ ಬಡ್ಡಿಯ ದರಕ್ಕಿಂತ ಹೆಚ್ಚಾಗಿರುತ್ತದೆ. ಈ ಮೂಲಕ ಬರುವ ಲಾಭದ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಪ್ರತಿಭೂತಿಗಳಲ್ಲಿ ಹಣ ವಿನಿಯೋಜಿಸಿಯೂ ಅವು ಲಾಭ ಸಂಪಾದಿಸುತ್ತವೆ.

ವಾಣಿಜ್ಯ ಬ್ಯಾಂಕುಗಳ ವಿಶಿಷ್ಟ ರೀತಿಯ ಕಾರ್ಯಭಾರವೆಂದರೆ ಉದ್ದರಿ ಸೃಷ್ಟಿ ಅಥವಾ ಠೇವಣಿ ವಿಸ್ತರಣೆ. ಹಿಂದೆ ಖಾಸಗಿ ಬ್ಯಾಂಕುಗಳಿಗೆ ನೋಟು ಹೊರಡಿಸುವುದು ಅಧಿಕಾರವಿತ್ತು. ಈಗ ಅದು ಕೇಂದ್ರೀಯ ಬ್ಯಾಂಕಿಗೆ ಸೇರಿದೆ. ಆದರೆ ಗ್ರಾಹಕರಿಗೆ ಪ್ರತಿಭೂತಿಗಳ ಆಧಾರದ ಮೇಲೆ ಸಾಲನೀಡುವುದರ ಮೂಲಕ ಮತ್ತು ವರಮಾನದಾಯಕ ಆಸ್ತಿಗಳನ್ನು ಕೊಳ್ಳುವುದರ ಮೂಲಕ ವಾಣಿಜ್ಯ ಬ್ಯಾಂಕುಗಳು ಠೇವಣಿಗಳನ್ನು ಸೃಷ್ಟಿಸುತ್ತದೆ. ಈ ಠೇವಣಿ ಸೃಷ್ಟಿ ಕಾರ್ಯಕ್ಕೆ ಉದ್ದರಿ ಸೃಷ್ಟಿ ಅಥವಾ ಠೇವಣಿ ವಿಸûರಣೆ ಎಂದು ಹೆಸರು. ವಿಧಿಮಾನ್ಯ ಹಣ ಸೃಷ್ಟಿಯ ಸ್ವಾಮ್ಯ ಕೇಂದ್ರೀಯ ಬ್ಯಾಂಕಿಗಿರುವಂತೆ ವಾಣಿಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಸುವ ಕಾರ್ಖಾನೆಗಳಾಗಿವೆ.

ದ್ವಿತೀಯಕ್ಕೆ ಅಥವಾ ಅನುಬಂಧಿ ಕಾರ್ಯಭಾರಗಳು: ವಾಣಿಜ್ಯ ಬ್ಯಾಂಕುಗಳು ಇನ್ನು ಅನೇಕ ಕಾರ್ಯಭಾರಗಳನ್ನು ಕೈಗೊಳ್ಳುತ್ತವೆ. ಇವು ಪ್ರಾಥಮಿಕ ಕಾರ್ಯಭಾರಗಳಿಗೆ ಅನುಬಂಧಿಯಾಗಿರುತ್ತವೆ. ಈ ಕಾರ್ಯಭಾರಗಳನ್ನು ಅಭಿಕರ್ತೃತ್ವದ ಅಥವಾ ಮುಂತಾಲಿಕೆಯ ಸೇವೆಗಳು ಮತ್ತು ಸರ್ವೋಪಯೋಗಿ ಸೇವೆಗಳು ಎಂದು ವಿಂಗಡಿಸಬಹುದು. ಗ್ರಾಹಕರಿಗೆ ಬರಬೇಕಾದ ಬಡ್ಡಿ, ಲಾಭಾಂಶ ಮುಂತಾದವನ್ನು ವಸೂಲು ಮಾಡಿ ಅವರ ಖಾತೆಗಳಿಗೆ ಜಮಾ ಮಾಡುವುದು, ಗ್ರಾಹಕರು ಪ್ರತಿಭೂತಿಗಳನ್ನು (ಸೆಕ್ಯೂರಿಟೀಸ್) ಕೊಳ್ಳುವಲ್ಲಿ ಹಾಗೂ ಮಾರುವಲ್ಲಿ ಅವರಿಗೆ ಅಗತ್ಯವಾದ ಸಲಹೆ ಸಹಕಾರಗಳನ್ನು ನೀಡುವುದು, ವಿನಿಯೋಜನೆಯ ವಿಷಯದಲ್ಲಿ ಸರಿಯಾದ ತಿಳಿವಳಿಕೆ ಕೊಡುವುದು, ಗ್ರಾಹಕರ ಅಪೇಕ್ಷೆಯಂತೆ ಅವರ ವಿಮಾಕಂತುಗಳನ್ನು ಕಟ್ಟುವುದು ಮತ್ತು ಪಾವತಿ ಮಾಡುವುದು ಮೊದಲಾದ ಕಾರ್ಯಗಳು ವಾಣಿಜ್ಯ ಬ್ಯಾಂಕುಗಳ ಮಧ್ಯವರ್ತಿ (ಏಜೆನ್ಸಿ) ಸೇವೆಗಳಾಗಿವೆ, ಗ್ರಾಹಕರು ವಸ್ತುಗಳನ್ನೂ ಕಾಗದಪತ್ರಗಳನ್ನೂ ಭದ್ರವಾಗಿಡಲು ಸಂದೂಕಗಳನ್ನು ಒದಗಿಸುವುದು, ವ್ಯಾಪಾರ ಸ್ಧಿತಿಗತಿಗಳಬಗ್ಗೆ ಗ್ರಾಹಕರಿಗೆ ಮಾಹಿತಿ ಸಂಗ್ರಹಿಸಿಕೊಡುವುದು, ಉದ್ದರಿ ಪತ್ರ ಹಾಗೂ ಪ್ರವಾಸಿ ಚೆಕ್ಕುಗಳ ಮೂಲಕ ಪ್ರಯಾಣಿಕರಿಗೆ ಹಾಗೂ ವ್ಯಾಪಾರಿಗಳಿಗೆ ಹಣ ಸೌಲಭ್ಯ ನೀಡುವುದು, ಮುಂತಾದವು ಕೆಲವು ಅನುಬಂಧಿ ಕಾರ್ಯಭಾರಗಳು.

ವಾಣಿಜ್ಯ ಬ್ಯಾಂಕುಗಳ ಆಸ್ತಿ ಹೊಣೆ ಪಟ್ಟೆ: ವಾಣಿಜ್ಯ ಬ್ಯಾಂಕುಗಳು ಹೇಗೆ ಸಾಲ ಪಡೆಯುತ್ತವೆ ಮತ್ತು ಲಾಭಗಳಿಕೆಗಾಗಿ ಆಸ್ತಿಗಳನ್ನು ಹೇಗೆ ವಿವಿಧ ರೀತಿಯಲ್ಲಿ ವಿನಿಯೋಗಿಸುತ್ತವೆ ಎಂಬುದು ಅವು ಪ್ರತಿ ವರ್ಷಾಂತ್ಯದಲ್ಲಿ ಪ್ರಕಟಿಸುವ ಆಸ್ತಿ-ಹೊಣೆ ಪಟ್ಟಿಯಿಂದ ಗೊತ್ತಾಗುತ್ತದೆ. ಅವುಗಳ ಪ್ರಮುಖ ಆಸ್ತಿ ಹಾಗೂ ಹೊಣೆಗಳು ಈ ರೀತಿ ಇರುತ್ತವೆ:

ಆಸ್ತಿ-ಹೊಣೆ ಪಟ್ಟಿ ಬಂಡವಾಳ ಮತ್ತು ಹೊಣೆಗಳು ಆಸ್ತಿಗಳು 1 ಷೇರು ಬಂಡವಾಳ ಮತ್ತು ಸಂಚಿತಿಗಳು (ಮೀಸಲು ಮೊದಲಾದ ನಿಧಿಗಳು) 1 ನಗದು (ಇತರ ಬ್ಯಾಂಕುಗಳಲ್ಲಿರುವ ನಗದೂ ಸೇರಿ) 2 ಠೇವಣಿಗಳು 2 ಅಲ್ಪಾವಧಿಯಲ್ಲಿ ಪಡೆಯಬಹುದಾದ ಹಣ (1) ಚಾಲ್ತಿ ಠೇವಣಿಗಳು 3 ವಟಾಯಿತ ಹುಂಡಿಗಳು (3) ಸಾವಧಿ ಠೇವಣಿಗಳು 4 ವಿನಿಯೋಜನೆಗಳು (3) ಉಳಿತಾಯ ಠೇವಣೆಗಳು 3 ಇತರ ಬ್ಯಾಂಕುಗಳಿಂದ ಪಡೆದ ಸಾಲ 5 ಗ್ರಾಹಕರಿಗೆ ನೀಡಿದ ಸಾಲಗಳು ಮತ್ತು ಮುಂಗಡಗಳು 6 ಸ್ಥಿರ ಆಸ್ತಿಗಳು

ಒಪ್ಪಿಗೆಗಳು ಮತ್ತು ಸಹಿಗಳು —ಈ ಅಂಶವು ಮುಖ್ಯ ಪಟ್ಟಿಯಿಂದ ಹೊರಗಡೆ ಇರಬೇಕು. ಏಕೆಂದರೆ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಯನ್ನು ಆಧರಿಸಿ ಈ ವಿವರವನ್ನು ಕೊಡಬೇಕು. ಯಾವುದಾದರೂ ಘಟನೆಯಿಂದ ಬ್ಯಾಂಕಿನ ವಿರುದ್ಧ ಹಣದ ಬೇಡಿಕೆ ಬಂದನಂತರ ಅಷ್ಟುಭಾಗವನ್ನು ಮುಖ್ಯ ವಿಭಾಗದಲ್ಲಿ ತೋರಿಸಬೇಕು.

ವಾಣಿಜ್ಯ ಬ್ಯಾಂಕುಗಳ ಒಂದು ವೈಶಿಷ್ಟ್ಯವೆಂದರೆ ಅವುಗಳ ಪ್ರತಿಯೊಂದು ಹೊಣೆಯೊಂದಿಗೆ ಆಸ್ತಿಯೂ ಸೃಷ್ಟಿಯಾಗುತ್ತದೆ. ಪ್ರತಿಯೊಂದು ಠೇವಣಿಯೂ ಆಸ್ತಿಯನ್ನು ನಿರ್ಮಿಸುತ್ತದೆ. ವಿವಿಧ ಆಸ್ತಿಗಳ ಮೇಲೆ ಬ್ಯಾಂಕು ಯಾವ ರೀತಿ ತನ್ನ ಸಂಪನ್ಮೂಲಗಳನ್ನು ಪಸರಿಸುತ್ತದೆ ಎಂಬುದರ ಮೇಲಿಂದ ಅದರ ಯಶಸ್ಸನ್ನು ಗಣಿಸಬಹುದು. ವಾಣಿಜ್ಯ ಬ್ಯಾಂಕುಗಳ ವಿವಿಧ ಹೊಣೆಗಳು ಮತ್ತು ಆಸ್ತಿಗಳನ್ನು ಮುಂದೆ ಪರಿಶೀಲಿಸಲಾಗಿದೆ.

ಬಂಡವಾಳ ಮತ್ತು ಜವಾಬ್ದಾರಿಗಳು: ಆಸ್ತಿ- ಜವಾಬ್ದಾರಿ ಪಟ್ಟಿಯ ಈ ಪಾಶ್ರ್ವದಲ್ಲಿ ಷೇರು ಬಂಡವಾಳ ಮತ್ತು ಸಂಚಿತಿಗಳು ಮೊದಲನೆಯ ಬಾಬುಗಳು. ಬ್ಯಾಂಕಿನ ಕಾರ್ಯಾರಂಭಕ್ಕೆ ಬೇಕಾದ ಹಣ ದೊರಕುವುದು ಷೇರು ಬಂಡವಾಳದಿಂದ. ವರ್ಷೇ ವರ್ಷೇ ಲಾಭದಿಂದ ತೆಗೆದಿಟ್ಟು ಬೆಳೆಸಿದ್ದು ಸಂಚಿತಿ. ಇವೆರಡೂ ಸೇರಿ ಬ್ಯಾಂಕಿನ ಸ್ವಂತ ಬಂಡವಾಳವಾಗಿರುತ್ತದೆ. ತಕ್ಕಷ್ಟು ಬಂಡವಾಳವಿದ್ದರೆ ಬ್ಯಾಂಕುಗಳ ಪರಿಸ್ಥಿತಿ ಉತ್ತಮವಾಗಿರುತ್ತದೆ. ಬಂಡವಾಳ ಮತ್ತು ಸಂಚಿತಿಗಳ ಮೊತ್ತ ಒಟ್ಟು ಠೇವಣಿಗಳ ಮೊಬಲಗಿನ ಒಂದು ನಿರ್ದಿಷ್ಟ ಪ್ರಮಾಣದಲ್ಲಿರುವಂತೆ ಕಾನೂನುಮಾಡಿರುವುದರಿಂದ ಠೇವಣಿದಾದರಿಗೆ ತಕ್ಕ ಮಟ್ಟಿಗೆ ಭದ್ರತೆ ಒದಗುತ್ತದೆ. ಸ್ವಂತ ಬಂಡವಾಳದ ಪ್ರಮಾಣ ಠೇವಣಿಗಳ ಹಣದ ಶೇಕಡಾ 10ರಷ್ಟಿರುವುದು ಆರೋಗ್ಯಕರ ಪರಿಸ್ಥಿತಿ ಎಂದು ಹೇಳಲಾಗಿದೆ. ಆದರೆ ಬಂಡವಾಳದ ಮೊಬಲಗಿಗೂ ಬ್ಯಾಂಕಿನ ಸಮಗ್ರ ಆಸ್ತಿಯ ಮೌಲ್ಯಕ್ಕೂ ಒಂದು ನಿರ್ದಿಷ್ಟ ಸಂಬಂಧ ರೂಪಿಸುವುದು ಉತ್ತಮವೆಂದು ಕೆಲವರು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಬ್ಯಾಂಕಿನ ಜವಾಬ್ದಾರಿಗಳಲ್ಲಿ ಬಹುಭಾಗ ಠೇವಣೆಗಳ ರೂಪದಲ್ಲಿರುತ್ತದೆ. ಠೇವಣಿದಾರರು ಬ್ಯಾಂಕಿನಲ್ಲಿ ಹೂಡಿದ ಹಣದ ಜವಾಬ್ದಾರಿ ಬ್ಯಾಂಕಿನ ಪ್ರಧಾನ ಜವಾಬ್ದಾರಿ.

ಬ್ಯಾಂಕು ಇತರ ಬ್ಯಾಂಕುಗಳಿಂದ ಪಡೆಯುವ ಸಾಲ ಮತ್ತು ಸಾಮಾನ್ಯವಾಗಿ ಅಲ್ಪ ಪ್ರಮಾಣದಲ್ಲಿರುವ ಇತರ ಸಣ್ಣ ಪುಟ್ಟ ಸಾಲಗಳು ಗ್ರಾಹಕರು ಪರವಾಗಿ ಹಣ ನೀಡುವುದಾಗಿ ಒಪ್ಪಿಗೆ ಕೊಟ್ಟು ಸಹಿ ಹಾಕಿರುವ ವ್ಯಾಪಾರದ ಹುಂಡಿಗಳದ್ದು ಅನಂತರ ಬರುವ ಹೊಣೆಗಳು. ಗ್ರಾಹಕರು ಆ ಹುಂಡಿಗಳ ಮೇಲೆ ಹಣ ಕೊಡಲು ತಪ್ಪಿದರೆ ಬ್ಯಾಂಕು ಅದನ್ನು ಪಾವತಿ ಮಾಡಬೇಕಾಗುತ್ತದೆ. ಈ ಹೊಣೆ ನಿರ್ವಹಣೆಗಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಂದ ಶುಲ್ಕ ಪಡೆಯುತ್ತವೆ.

ಆಸ್ತಿಗಳು: ಬ್ಯಾಂಕುಗಳು ಠೇವಣಿಗಳ ರೂಪದಲ್ಲಿ ಪಡೆದ ಹಣವನ್ನು ವಿವಿಧ ರೀತಿಯ ಸಾಲಗಳನ್ನು ನೀಡಿ ಮತ್ತು ಪ್ರತಿಭೂತಿಗಳಲ್ಲಿ ವಿನಿಯೋಜಿಸಿ ಲಾಭ ಸಂಪಾದಿಸುತ್ತವೆ. ವಾಣಿಜ್ಯ ಬ್ಯಾಂಕಿನ ಆಸ್ತಿಗಳ ವಿತರಣೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಮೂರು: ಅವನ್ನು ನಗದಾಗಿ ಪರಿವರ್ತಿಸುವ ಸೌಲಭ್ಯ (ದ್ರವ್ಯತ್ವ). ಸುಭದ್ರತೆ ಮತ್ತು ಲಾಭಪ್ರದತೆ.

ಆಸ್ತಿಯ ಬಾಬುಗಳಲ್ಲಿ ಮೊದಲನೆಯದು ನಗದು. ಠೇವಣಿದಾರರಿಂದ, ಬೇಡಿಕೆ ಬಂದಕೂಡಲೆ ಕೊಡಲು ಬ್ಯಾಂಕು ಸಾಕಷ್ಟು ಪರಿಮಾಣದಲ್ಲಿ ನಗದನ್ನಾಗಲಿ ಸುಲಭವಾಗಿ ನಗದಿಗೆ ಪರಿವರ್ತಿಸಬಹುದಾದ ಆಸ್ತಿಗಳನ್ನಾಗಲಿ ಕಾಯ್ದಿಟ್ಟುಕೊಂಡಿರಬೇಕಾಗುತ್ತದೆ. ನಗದಿನಿಂದ ಬ್ಯಾಂಕುಗಳಿಗೆ ಯಾವ ಸಂಪಾದನೆಯೂ ಆಗುವುದಿಲ್ಲ. ಅದರ ದ್ರವತ್ವ ಶೇಕಡಾ ನೂರು; ಲಾಭಪ್ರದತೆ ಸೊನ್ನೆ. ಆದರೂ ಬ್ಯಾಂಕಿನ ವ್ಯವಹಾರಕ್ಕೆ ಅದು ಉಸಿರು ಇದ್ದ ಹಾಗೆ. ಆಸ್ತಿಗಳೂ ಬೆಳೆದಂತೆ ಬ್ಯಾಂಕಿನ ಉದ್ದರಿ ಸೃಷ್ಟಿ ಸಾಮಥ್ರ್ಯ ಹೆಚ್ಚಾಗುತ್ತದೆ. ಬ್ಯಾಂಕುಗಳು ತಮ್ಮ ಅಸ್ತಿಗಳನ್ನು ನಿರ್ದಿಷ್ಟವಾಗಿ ಒಂದು ತಪ್ಪಿದರೆ ಮತ್ತೊಂದು ಸುಲಭವಾಗಿ ನಗದು ತರುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತವೆ. ಬ್ಯಾಂಕಿನ ಖಜಾನೆಯಲ್ಲಿರುವ ನೋಟುಗಳು ಮತ್ತು ನಾಣ್ಯಗಳು, ಕೇಂದ್ರೀಯ ಬ್ಯಾಂಕಿನಲ್ಲಿರುವ ನಗದು ಸಂಚಿತಿ, ಚೆಕ್ಕುಗಳ ಮೂಲಕ ಇತರ ಬ್ಯಾಂಕುಗಳಿಂದ ಬರುವ ಹಣ-ಇವು ಬ್ಯಾಂಕಿಗೆ ಯಾವಾಗ ಬೇಕೆಂದರೆ ಆಗ ನಗದು ತರುವ ಆಸ್ತಿಗಳು. ಇವು ಬ್ಯಾಂಕಿಗೆ ಪ್ರಥಮ ರಕ್ಷಣೆಯನ್ನು ಒದಗಿಸುತ್ತವೆ.

ಕೇಳಿದಾಗ ಅಥವಾ ಅಲ್ಪಕಾಲಿಕ ತಿಳಿವಳಿಕೆ ನೀಡಿ ಪಡೆಯಬಹುದಾದ ಹಣ ವಾಣಿಜ್ಯ ಬ್ಯಾಂಕುಗಳ ಆಸ್ತಿಯ ಎರಡನೆಯ ಬಾಬು. ಹೆಚ್ಚು ನಗದನ್ನು ಇಡುವುದರಿಂದ ಲಾಭ ಸಂಪಾದನೆ ಕಡಿಮೆಯಾಗುತ್ತದೆ. ಸಂಪಾದನೆಯ ದೃಷ್ಟಿಯಿಂದ ದೀರ್ಘಾವಧಿಯ ಸಾಲ ಕೊಟ್ಟರೆ ಠೇವಣಿದಾರರು ಬೇಡಿದಾಗ ಹಣ ಕೊಡುವ ವಾಗ್ದಾನವನ್ನು ಬ್ಯಾಂಕುಗಳು ಪೂರೈಸಲಾಗುವುದಿಲ್ಲ. ಆದ್ದರಿಂದ ಬ್ಯಾಂಕುಗಳು ಕೇಳಿದಾಗ ಅಥವಾ ಅಲ್ಪಕಾಲಿಕ ತಿಳಿವಳಿಕೆ ನೀಡಿ ಪಡೆಯಬಹುದೆಂಬ ಷರತ್ತಿನಮೇಲೆ ಸಾಲವನ್ನು ಕೊಡುತ್ತವೆ. ಹುಂಡಿಯ ದಳ್ಳಾಳಿಗಳಿಗೆ ಮತ್ತು ವಟ್ಟದ ಅಂಗಡಿಗಳಿಗೆ ಕೊಡುವ ಸಾಲ ಈ ರೀತಿಯದು. ಇದರಿಂದ ಅಲ್ಪವಾದರೂ ವರಮಾನ ದೊರಕುತ್ತದೆ. ಈ ಬಾಬನ್ನು ಬ್ಯಾಂಕುಗಳ ದ್ವಿತೀಯ ರಕ್ಷಣಾಂಗ ಎಂದು ಕರೆಯಲಾಗಿದೆ.

ವಾಣಿಜ್ಯ ಬ್ಯಾಂಕುಗಳ ಆಸ್ತಿಯ ಮೂರನೆಯ ಬಾಬು ವಟಾಯಿಸಲಾದ ಹುಂಡಿಗಳು. ವ್ಯಾಪಾರದಲ್ಲಿ ಹುಂಡಿಗಳ ಬಳಕೆ ಸಾಮಾನ್ಯ. ವಸ್ತುಗಳನ್ನು ಕೊಂಡವನು ಕೂಡಲೆ ಹಣ ಕೊಡಲಾಗದಿದ್ದಾಗ ಬಿಕರಿದಾರನ ಹುಂಡಿಗೆ ಅವನು ಒಪ್ಪಿಗೆ ನೀಡಿ ನಿಗದಿಯಾದ ದಿನದಂದು ಹಣ ಕೊಡುವುದಾಗಿ ವಾಗ್ದಾನ ಮಾಡುತ್ತಾನೆ. ಹುಂಡಿಯ ಹಣವನ್ನು ಪಡೆಯಲು ನಿಗದಿಯಾದ ಅವಧಿ ಮುಗಿಯುವವರೆಗೆ ಕಾಯುವ ಬದಲು ಬಿಕರಿದಾರ ತತ್ ಕ್ಷಣವೇ ಅಥವಾ ಬೇಕೆಂದಾಗ ಬ್ಯಾಂಕಿನಿಂದ ಹಣ ಪಡೆಯಬಹುದು. ಹುಂಡಿಯ ವಾಯಿದೆ ತೀರುವ ತನಕವೂ ಕಾಯುವುದಕ್ಕೆ ಪ್ರತಿಯಾಗಿ ಬ್ಯಾಂಕು ಹುಂಡಿಯ ಮುಖ ಮೌಲ್ಯದಲ್ಲಿ ಒಂದು ಭಾಗವನ್ನು ವಟ್ಟವಾಗಿ ಮುರಿದುಕೊಳ್ಳುತ್ತದೆ. ವಟಾಯಿಸಲಾದ ಹುಂಡಿಗಳು ಬ್ಯಾಂಕುಗಳ ತೃತೀಯ ರಕ್ಷಣಾಂಗ.

ವಾಣಿಜ್ಯ ಬ್ಯಾಂಕುಗಳ ಆಸ್ತಿಗಳಲ್ಲಿ ವಿನಿಯೋಜನೆಗಳು ಮುಖ್ಯವಾದವು. ಬ್ಯಾಂಕುಗಳು ತಮ್ಮಲ್ಲಿರುವ ಹಣದಲ್ಲಿ ಒಂದು ಭಾಗದಿಂದ ಬಂಡವಾಳಗಳನ್ನು ಕೊಂಡಿಟ್ಟುಕೊಳ್ಳುತ್ತವೆ. ಹಣ ಬೇಕಾದಾಗ ಇವನ್ನು ಪೇಟೆಯಲ್ಲಿ ಬಿಕರಿಮಾಡಿ ಹಣ ಪಡೆಯಬಹುದು. ಪ್ರತಿಭೂತಿಗಳ ಮಾರುಕಟ್ಟೆ ಬೆಲೆಗಳು ಸಾಮಾನ್ಯವಾಗಿ ಬದಲಾಗುತ್ತ ಇರುತ್ತವೆ. ಹೆಚ್ಚು ಏರಿಳಿತಗಳಿಗೆ ಒಳಗಾಗದ ಪತ್ರಗಳಲ್ಲಿ ಹಣ ವಿನಿಯೋಜಿಸುವುದು ಬ್ಯಾಂಕುಗಳ ವಾಡಿಕೆ. ಇವು ಲಾಭಪ್ರದ ಹಾಗೂ ಸುರಕ್ಷಿತ.

ಗ್ರಾಹಕರಿಗೆ ಕೊಡುವ ಸಾಲ ಮತ್ತು ಮುಂಗಡಗಳು ವಾಣಿಜ್ಯ ಬ್ಯಾಂಕುಗಳ ಐದನೆಯ ಆಸ್ತಿಯ ಬಾಬು. ಅವು ಬೆಲೆಬಾಳುವ ವಸ್ತುಗಳ ಅಥವಾ ಸ್ವತ್ತಿನ ಆಧಾರದ ಮೇಲೆ ಸಾಲ ಕೊಡಬಹುದು. ಯಾವ ಆಧಾರವೂ ಇಲ್ಲದೆ ಕೇವಲ ವ್ಯಕ್ತಿಯ ನಂಬಿಕೆಯ ಮೇಲೆ ಸಾಲ ಕೊಡಬಹುದು. ಮೀರೆಳೆತ (ಓವರ್ ಡ್ರಾಫ್ಟ್) ಸೌಲಭ್ಯ ಒದಗಿಸಬಹುದು. ಯಾವುದೇ ರೂಪದಲ್ಲಿ ಸಾಲ ನೀಡಲಿ, ವಾಣಿಜ್ಯ ಬ್ಯಾಂಕುಗಳು ಒದಗಿಸುವುದು ಅಲ್ಪಾವಧಿಯ ಸಾಲ.

ಕಡೆಯದಾಗಿ, ಬ್ಯಾಂಕಿಗೆ ಸೇರಿದ ನಿವೇಶನಗಳು, ಕಟ್ಟಡಗಳು ಮತ್ತು ಪೀಠೋಪರಕರಣಗಳು, ಯಂತ್ರೋಪಕರಣಗಳು ಮುಂತಾದವು ಬ್ಯಾಂಕಿನ ಆಸ್ತಿಗಳು.

ನಗದನ್ನು ಬಿಟ್ಟು ಉಳಿದ ಎಲ್ಲ ಆಸ್ತಿಗಳು ವರಮಾನಗಳಿಸುವುದರಿಂದ ಅವು ಲಾಭಪ್ರದ ಆಸ್ತಿಗಳು. ಜೊತೆಗೆ ಇವುಗಳ ಭದ್ರತೆ ಹಾಗೂ ದ್ರವ್ಯತ್ವದ ಮೇಲೂ ಬ್ಯಾಂಕುಗಳು ಕಣ್ಣಿಟ್ಟಿರಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳ ವಿವಿಧ ಅಸ್ತಿಗಳ ಪೈಕಿ ಯಾವ ಆಸ್ತಿಯ ಪ್ರಮಾಣ ಎಷ್ಟಿರಬೇಕೆಂಬುದು ಎಚ್ಚರಿಕೆಯಿಂದ ನಿರ್ಧರಿಸಬೇಕಾದ ವಿಚಾರ. ದ್ರವ್ಯತ್ವ, ಲಾಭಪ್ರದತೆ ಮತ್ತು ಭದ್ರತೆ ಈ ಮೂರು ನಿರ್ಣಾಯಕಗಳ ಆಧಾರದ ಮೇಲೆ ವಾಣಿಜ್ಯ ಬ್ಯಾಂಕುಗಳು ವಿವಿಧ ರೀತಿಯ ಆಸ್ತಿಗಳನ್ನು ಆಯ್ದುಕೊಳ್ಳುತ್ತವೆ.

ಉದ್ದರಿಯ ಸೃಷ್ಟಿ: ವಾಣಿಜ್ಯ ಬ್ಯಾಂಕುಗಳ ಆಶ್ಚರ್ಯಕರ ಕಾರ್ಯವೆಂದರೆ ಉದ್ದರಿ ಹಣದ ಸೃಷ್ಟಿ. ವಿನಿಮಯ ಮಾಧ್ಯಮವಾಗಿರುವ ಹಣ ವಿಶಾಲವಾದ ಅರ್ಥದಲ್ಲಿ ವಿಧಿಮಾನ್ಯ ನೋಟು ಮತ್ತು ನಾಣ್ಯಗಳನ್ನೇ ಅಲ್ಲದೆ ಚೆಕ್ಕು, ಡ್ರಾಫ್ಟು ಮುಂತಾದವುಗಳ ಮೂಲಕ ಒಬ್ಬರಿಂದೊಬ್ಬರಿಗೆ ಚಲಿಸುವ ಬ್ಯಾಂಕು ಹಣ ಅಥವಾ ಉದ್ದರಿ ಹಣ ಅಥವಾ ಬ್ಯಾಂಕು ಠೇವಣೆಗಳನ್ನೂ ಒಳಗೊಂಡಿರುತ್ತದೆ.

ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಯಿರುವ ಆಧುನಿಕ ಆರ್ಥಿಕತೆಯಲ್ಲಿ ಚಲಾವಣೆಯ ಮಾಧ್ಯಮದ ಬಹು ಭಾಗವನ್ನು ಉದ್ದರಿ ಹಣ ಆಕ್ರಮಿಸಿಕೊಂಡಿದೆ. ಜನರು ತಮ್ಮ ಬಹಳಷ್ಟು ವಹಿವಾಟುಗಳನ್ನು ಉದ್ದರಿ ಹಣದ ಮೂಲಕವೇ ನಿರ್ವಹಿಸುತ್ತಾರೆ. ಉದ್ದರಿ ವಹಿವಾಟಿಗೆ ನಂಬಿಕೆ ಮುಖ್ಯವಾದ್ದು. ನಂಬಿಕೆಯ ತಳಹದಿಯ ಮೇಲೆ ಉದ್ದರಿಯ ಸೃಷ್ಟಿಯಾಗುತ್ತದೆ.

ವಾಣಿಜ್ಯ ಬ್ಯಾಂಕುಗಳು ಹಣದ ಸಂಗ್ರಹಣೆ ಹಾಗೂ ವಿತರಣೆ ಮಾಡುವುದೇ ಅಲ್ಲದೆ ಹಣದ ಸೃಷ್ಟಿ ಕಾರ್ಯವನ್ನೂ ಮಾಡುತ್ತವೆ. ಅವಕ್ಕೆ ಹಣ ಸೃಷ್ಟಿಸುವ ಸಾಮಥ್ರ್ಯವಿದೆ. ಉದ್ದರಿಯ ಗಾತ್ರ ಅದು ಸೃಷ್ಟಿಯಾಗುವ ದರ, ಚಲಾವಣೆಯ ವೇಗ ಇವು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ-ವರಮಾನ, ಉದ್ಯೋಗ ಮತ್ತು ಬೆಲೆಗಳ ಮಟ್ಟದ ಮೇಲೆ-ಅಗಾಧ ಪ್ರಭಾವ ಬೀರುತ್ತವೆ.

ಬ್ಯಾಂಕುಗಳು ಕೊಡುವ ಸಾಲದಿಂದ ದೇಶದಲ್ಲಿ ಹಣದ ಒಟ್ಟು ಸರಬರಾಯಿ ಅಥವಾ ಕೊಳ್ಳುವ ಶಕ್ತಿ ಹೆಚ್ಚಾದಾಗ ಹಣ ಸೃಷ್ಟಿಯಾದಂತೆ ಋಣಿಗಳು ಸಾಲವನ್ನು ಹಿಂತಿರುಗಿಸಿದಾಗ ಹಣದ ಒಟ್ಟು ಸರಬರಾಯಿ ಅಷ್ಟರಮಟ್ಟಿಗೆ ಕುಗ್ಗುತ್ತದೆ.

ವಾಣಿಜ್ಯ ಬ್ಯಾಂಕುಗಳ ಉದ್ದರಿ ಹಣ ಸೃಷ್ಟಿಸುವ ಅಥವಾ ಠೇವಣಿ ಸೃಷ್ಟಿಸುವ ಕ್ರಿಯೆಯ ಹಿಂದೆ ಒಂದು ಮುಖ್ಯ ಸಂಗತಿಯಿದೆ. ಅವು ಕೊಡುವ ಪ್ರತಿಯೊಂದು ಸಾಲವೂ ಒಂದೊಂದು ಠೇವಣಿಯನ್ನು ಸೃಷ್ಟಿಸುತ್ತದೆ. ಬ್ಯಾಂಕು ಠೇವಣಿಗಳನ್ನು ಪ್ರಾಥಮಿಕ ಅಥವಾ ಮೂಲ ಠೇವಣಿಗಳು, ನಿಷ್ಪನ್ನ ಅಥವಾ ದ್ವಿತೀಯಕ ಠೇವಣೆಗಳು ಎಂದು ವಿಂಗಡಿಸಬಹುದು. ಒಬ್ಬ ಗ್ರಾಹಕ ನಗದು ಹಣ ತಂದು ಠೇವಣಿ ಇಟ್ಟರೆ ಇದು ಪ್ರಾಥಮಿಕ ಠೇವಣಿ. ಕೇಳಿದಾಗ ಆ ಹಣವನ್ನು ಕೊಡುವುದಾಗಿ ಅದು ವಾಗ್ದಾನ ನೀಡುತ್ತದೆ. ಆದರೆ ಇಂಥ ಠೇವಣಿಗಳ ಪೂರ್ಣ ಹಣವನ್ನು ಬ್ಯಾಂಕು ಜಡವಾಗಿ ಇಟ್ಟುಕೊಳ್ಳುವುದಿಲ್ಲ. ಠೇವಣಿದಾರರು ಬೇಡಿದಾಗ ಕೊಡಲು ಸಾಧ್ಯವಾಗುವಂತೆ ಒಂದು ಭಾಗವನ್ನು ನಗದು ರೂಪದಲ್ಲಿ ಇಟ್ಟುಕೊಂಡು ಉಳಿದದ್ದನ್ನು ಸಾಲ ಕೊಡಲು ಉಪಯೋಗಿಸುತ್ತದೆ. ಬ್ಯಾಂಕು ನೀಡುವ ಸಾಲದ ಹಣ ಸಾಮಾನ್ಯವಾಗಿ ಬ್ಯಾಂಕಿನಿಂದ ನಗದಾಗಿ ಹೊರಗೆ ಹೋಗುವುದಲ್ಲ. ಸಾಮಾನ್ಯವಾಗಿ ಆ ಗ್ರಾಹಕನ ಖಾತೆಯಲ್ಲಿ ಠೇವಣೆಯಾಗಿ ಅದನ್ನು ಜಮಾಮಾಡಲಾಗುತ್ತದೆ. ಈ ಹಣವನ್ನು ಚೆಕ್ಕಿನ ಮೂಲಕ ಬೇಕಾದಾಗ ಪಡೆಯುವ ಸೌಲಭ್ಯ ಆ ಗ್ರಾಹಕನಿಗೆ ಇರುತ್ತದೆ. ಈ ರೀತಿ ಸೃಷ್ಟಿಯಾಗುವ ಠೇವಣೆಗಳು ನಿಷ್ಪನ್ನ ಠೇವಣೆಗಳು ವಾಣಿಜ್ಯ ಬ್ಯಾಂಕುಗಳ ಮೂಲ ಠೇವಣಿಗಳಿಗಿಂತ ನಿಷ್ಪನ್ನ ಠೇವಣಿಗಳು ಹಲವು ಪಟ್ಟು ಹೆಚ್ಚಾಗಿರುತ್ತದೆ. ಇವು ವಾಸ್ತವವಾಗಿ ಬ್ಯಾಂಕು ಮಾಡಿದ ಸೃಷ್ಟಿ. ಪ್ರತಿ ಸಾಲವೂ ಒಂದೊಂದು ಠೇವಣೆಯನ್ನು ಸೃಷ್ಟಿಸುತ್ತದೆ. ಈ ಠೇವಣೆಯಿಂದ ಹಣದ ಒಟ್ಟು ಹರಿವು ಅಥವಾ ಕೊಳ್ಳುವ ಶಕ್ತಿ ಹೆಚ್ಚಾಗುವುದರಿಂದ ಹೊಸದಾಗಿ ಹೆಚ್ಚಿನ ಹಣವನ್ನು ಸೃಷ್ಟಿಸಿದ ಪರಿಣಾಮವೇ ಇದರಿಂದಲೂ ಆಗುತ್ತದೆ. ವಾಣಿಜ್ಯ ಬ್ಯಾಂಕುಗಳು ಹಣ ಸೃಷ್ಟಿಸವುವೆಂದು ಹೇಳುವುದು ಇದರಿಂದಾಗಿ. ಬ್ಯಾಂಕು ವ್ಯಾಪಾರದ ಹುಂಡಿಗಳನ್ನು ವಟಾಯಿಸಿದಾಗಲೂ ಪ್ರತಿಭೂತಿಗಳನ್ನು ಕೊಂಡಾಗಲೂ ಅವುಗಳ ಮೊಬಲಗನ್ನು ಆ ಗ್ರಾಹಕರ ಖಾತೆಗೆ ಜಮಾಮಾಡಲಾಗುತ್ತದೆ. ಆಗಲೂ ಠೇವಣಿ ಸೃಷ್ಟಿಯಾದಂತೆ.

ವಾಣೆಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಸುವ ವಿಧಾನವನ್ನು ಪರಿಶೀಲಿಸಿದರೆ ಅವು ಬೀಜ ಬಿತ್ತದೆ ಬೆಳೆಯನ್ನು ಕೊಯ್ದಹಾಗೆ ತೋರುತ್ತದೆ. ಆದರೆ ಉದ್ದರಿ ಸೃಷ್ಟಿಸುವ ಶಕ್ತಿಗೆ ಮಿತಿ ಇಲ್ಲದಿಲ್ಲ. ವಾಣೆಜ್ಯ ಬ್ಯಾಂಕುಗಳು ಒಂದೇ ಸಮನೆ ಉದ್ದರಿ ಸೃಷ್ಟಿಸುತ್ತ ಹೋಗಲಾಗುವುದಿಲ್ಲ. ಇದಕ್ಕೆ ತಡೆಯೊಡ್ಡುವ ಹಲವಾರು ಆಂಶಗಳಿರುತ್ತವೆ. ಮೊದಲನೆಯದಾಗಿ ಬ್ಯಾಂಕುಗಳು ತಮ್ಮ ಠೇವಣೆಗಳ ಒಂದು ನಿರ್ದಿಷ್ಟ ಭಾಗವನ್ನು ನಗದು ರೂಪದಲ್ಲಿ ಇಡಬೇಕಾಗಿರುವುದು. ಠೇವಣಿದಾರರಿಂದ ನಗದು ಹಣಕ್ಕಾಗಿ ಬೇಡಿಕೆ ಬಂದಕೂಡಲೆ ನಗದನ್ನು ಒದಗಿಸಲು ಸಾಧ್ಯವಾಗಬೇಕಾದರೆ ಬ್ಯಾಂಕು ನಗದು ಸಂಚಿತಿಯನ್ನು ಹೊಂದಿರಲೇಬೇಕಾಗುತ್ತದೆ. ಠೇವಣೆಗಳ ಸ್ವಲ್ಪ ಭಾಗವನ್ನು ಮಾತ್ರ ನಗದು ಸಂಚಿತಿಯಾಗಿಟ್ಟುಕೊಂಡರೆ ಸಾಕು. ಏಕೆಂದರೆ ಮೊದಲನೆಯದಾಗಿ. ಠೇವಣೆಯ ಹಣವನ್ನೆಲ್ಲ ಒಂದೇ ಬಾರಿಗೆ ಹಿಂದಕ್ಕೆ ಪಡೆಯಲು ಬೇಡಿಕೆ ಸಾಮಾನ್ಯವಾಗಿ ಬರವುದಿಲ್ಲ. ಎರಡನೆಯದಾಗಿ ಚೆಕ್ಕುಗಳ ಮೂಲಕ ಪಡೆದ ಹಣ ಬಹುಮಟ್ಟಿಗೆ ಕೂಡಲೇ ಬೇರೆಯವರ ಲೆಕ್ಕದಲ್ಲಿ ಬ್ಯಾಂಕಿಗೆ ಜಮಾ ಆಗುತ್ತದೆ. ಆದ್ದರಿಂದ ಹಣ ನಿಜವಾಗಿ ಬ್ಯಾಂಕಿನಿಂದ ಹೊರಗೆ ಹೋದಂತಾಗುವುದಿಲ್ಲ. ಮೂರನೆಯದಾಗಿ. ಕೆಲವು ಠೇವಣೆಗಳನ್ನು ಗ್ರಾಹಕರು ಹಿಂತೆಗೆದುಕೊಂಡರೂ ಪ್ರತಿಯಾಗಿ ಹೊಸ ಠೇವಣೆಗಳು ಬ್ಯಾಂಕನ್ನು ಪ್ರವೇಶಿಸುತ್ತಿರುತ್ತವೆ. ನಾಲ್ಕನೆಯದಾಗಿ. ಸಾಲ ಮತ್ತು ವಿನಿಯೋಜನೆಗಳಿಂದ ಒಂದೇಸಮನೆ ಬ್ಯಾಂಕಿಗೆ ಹಣ ಜಮಾ ಆಗುತ್ತಿರುವಂತೆ ಏರ್ಪಾಡು ಮಾಡಿಕೊಳ್ಳಬಹುದು. ಈ ಕಾರಣಗಳಿಂದ ಠೇವಣಿ ಹಣದ ಒಂದು ನಿರ್ದಿಷ್ಟ ಭಾಗವನ್ನು ಮಾತ್ರ ನಗದು ಸಂಚಿತಿಯಾಗಿ ಬ್ಯಾಂಕುಗಳು ಉಳಿಸಿಕೊಳ್ಳುವುದು ರೂಢಿಯಲ್ಲಿದೆ. ಒಟ್ಟು ಠೇವಣಿಗಳ ಯಾವ ನಿರ್ದಿಷ್ಟ ಪ್ರಮಾಣವನ್ನು ನಗದು ಸಂಚಿತಿಯಾಗಿ ಇಡಬೇಕೆಂಬುದು ರೂಢಿಯಿಂದ ಬಂದಿರಬಹುದು ಅಥವಾ ಅದಕ್ಕೆ ಕಾನೂನಿನ ನಿಬಂಧನೆಯಿರಬಹುದು. ಠೇವಣಿಗಳಿಗೆ ಇದಿರಾಗಿ ಇಡಬೇಕಾದ ನಗದು ಸಂಚಿತಿಯ ಪ್ರಮಾಣ ಹೆಚ್ಚಿಸಿದಂತೆ ಅದಕ್ಕೆ ವಿಲೋಮವಾಗಿ ಉದ್ದರಿಯ ಸೃಷ್ಟಿ ಕಡಿಮೆಯಾಗಬೇಕಾಗುತ್ತದೆ; ನಗದು ಸಂಚಿತಿಯ ಪ್ರಮಾಣ ಕಡಿಮೆ ಮಾಡಿದರೆ ಉದ್ದರಿ ಸೃಷ್ಟಿ ಹೆಚ್ಚಾಗುತ್ತದೆ. ನೂರಕ್ಕೆ ನೂರರಷ್ಟು ನಗದು ಸಂಚಿತಿ ಇಡಬೇಕೆಂದರೆ ಆಗ ಬ್ಯಾಂಕುಗಳ ಉದರಿ ಸೃಷ್ಟಿಯ ಸಾಮಥ್ರ್ಯ ಸೊನ್ನೆಗೆ ಇಳಿಯುತ್ತದೆ.

ಉದ್ದರಿ ಸೃಷ್ಟಿಗೆ ಇರುವ ಎರಡನೆಯ ಮಿತಿಯೆಂದರೆ ನಗದಿನ ನಿರ್ಗಮನ. ಇದರಲ್ಲಿ ಎರಡು ವಿಧಗಳುಂಟು. ಒಂದು ಆಂತರಿಕ ನಿರ್ಗಮನ, ಅಂದರೆ ನಗದು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ಹರಿಯುವುದು. ಎರಡನೆಯದು ಬಾಹ್ಯ ನಿರ್ಗಮನ-ಅಂದರೆ ನಗದು ಬ್ಯಾಂಕಿಂಗ್ ಮಂಡಲವನ್ನೇ ಬಿಟ್ಟು ಹೊರಗೆ ಹೋಗುವುದು. ಇಡೀ ಬ್ಯಾಂಕಿಂಗ್ ಮಂಡಲವನ್ನು ಗಣನೆಗೆ ತೆಗೆದುಕೊಂಡರೆ ಆಂತರಿಕ ನಿರ್ಗಮನದಿಂದ ಹೆಚ್ಚಿನ ಪರಿಣಾಮವಾಗುವುದಿಲ್ಲ. ಬ್ಯಾಂಕುಗಳ ನಡುವೆ ಪರಸ್ಪರವಾಗಿ ಇಂಥ ಹರಿವು ಇದ್ದೇ ಇರುತ್ತದೆ. ಒಟ್ಟು ಬ್ಯಾಂಕಿಂಗ್ ಮಂಡಲದ ನಗದಿನ ಪ್ರಮಾಣ ಹಾಗೆಯೇ ಇರುತ್ತದೆ. ಬಾಹ್ಯ ನಿರ್ಗಮನದಿಂದ ಉದ್ದರಿಸೃಷ್ಟಿಗೆ ಮಿತಿಯುಂಟಾಗುತ್ತದೆ. ಉದ್ದರಿ ಸೃಷ್ಟಿಗೆ ಇರುವ ಮೂರನೆಯ ಮಿತಿ ಎಂದರೆ ಸಾಲ ಪಡೆಯಲು ಗ್ರಾಹಕರು ಸರಿಯಾದ ಆಧಾರ ಒದಗಿಸದೆ ಇರುವುದು. ಸರಿಯಾದ ಆಧಾರವಿಲ್ಲದೆ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಆಧಾರದ ಕೊರತೆಯೂ ಉದ್ದರಿ ಸೃಷ್ಟಿಗೆ ಅಡ್ಡಿಯಾಗುತ್ತದೆ. ನಾಲ್ಕನೆಯದಾಗಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿಯೂ ಉದ್ದರಿಸೃಷ್ಟಿಗೆ ಮಿತಿಯನ್ನು ವಿಧಿಸುತ್ತದೆ. ಬ್ಯಾಂಕುಗಳು ಜನರನ್ನು ಸಾಲ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಲಾರವು. ರಾಷ್ಟ್ರದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಉತ್ಪಾದನೆಯಿಂದ ಲಾಭ ಬರುವ ನಿರೀಕ್ಷೆಯಿದ್ದಾಗ ಜನರು ಉದ್ಯಮಗಳಲ್ಲಿ ಹಣ ಹೂಡುವುದಕ್ಕಾಗಿ ಸಾಲ ಪಡೆಯಲು ಮುಂದೆ ಬರುತ್ತಾರೆ. ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಸಾಲ ಕೊಡಲು ಸಿದ್ಧವಿದ್ದರೂ ಲಾಭಗಳಿಸುವ ಅವಕಾಶಗಳು ಇಲ್ಲದ್ದರಿಂದ ಜನರು ಸಾಲ ಪಡೆಯಲು ಇಚ್ಛಿಸುವುದಿಲ್ಲ. ಕೊನೆಯದಾಗಿ, ದೇಶದಲ್ಲಿ ಚಲಾವಣೆಯಲ್ಲಿರುವ ಹಣದ ಗಾತ್ರ ಅಧಿಕವಾಗಿದ್ದರೆ ಬ್ಯಾಂಕುಗಳ ಉದ್ದರಿಸೃಷ್ಟಿಯ ಸಾಮಥ್ರ್ಯವೂ ಹೆಚ್ಚಾಗಿರುತ್ತದೆ. ಚಲಾವಣೆಯಲ್ಲಿರುವ ಹಣದ ಗಾತ್ರ ಸರ್ಕಾರದ ಹಾಗೂ ಕೇಂದ್ರೀಯ ಬ್ಯಾಂಕಿನ ಹಣಕಾಸಿನ ನೀತಿಯನ್ನು ಅವಲಂಬಿಸುತ್ತವೆ.

ಶಾಖಾ ಬ್ಯಾಂಕಿಂಗ್: ಇಂದು ಬಹುತೇಕ ದೇಶಗಳಲ್ಲಿ ಕಂಡುಬರುವ ಪ್ರವೃತ್ತಿಯೆಂದರೆ, ಒಂದೊಂದು ಬ್ಯಾಂಕಿಂಗ್ ಸಂಸ್ಥೆಯೂ ದೇಶಾದ್ಯಂತ ಅನೇಕ ಶಾಖೆಗಳನ್ನು ಹೊಂದಿರುವುದು. ಇಂಗ್ಲೆಂಡಿನಲ್ಲಿ ಈ ಪದ್ಧತಿ ವಿಶೇಷವಾಗಿ ಬೆಳೆದಿದೆ. 19ನೆಯ ಶತಮಾನದ ಮಧ್ಯಭಾಗದ ತನಕವೂ ಇಂಗ್ಲಿಷ್ ಬ್ಯಾಂಕುಗಳು ಒಂದೊಂದೇ ಕಚೇರಿಗಳಿಂದ ಕೂಡಿದ್ದುವು. ಅನಂತರದ ವರ್ಷಗಳಲ್ಲಿ ಜರಗಿದ ಬ್ಯಾಂಕುಗಳ ಏಕರೂಪತಾ ಸಂಯೋಜನೆಗಳ ಫಲವಾಗಿ ಅನೇಕ ಸಣ್ಣ ಬ್ಯಾಂಕುಗಳು ಕೂಡಿಕೊಂಡು ಕೆಲವೇ ಬೃಹತ್ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದುವು. ಇಂದು ಇಂಗ್ಲೆಂಡಿನಲ್ಲಿ ಐದು ದೊಡ್ಡ ಬ್ಯಾಂಕುಗಳ (ಮಿಡ್ ಲೆಂಡ್, ಬಾರ್ ಕ್ಲೇಸ್, ಲಾಯ್ ಡ್ಸ್, ವೆಸ್ಟ್ ಮಿನ್ ಸ್ಟರ್, ನ್ಯಾಷನಲ್ ಪ್ರೊವೆನ್ಷಿಯಲ್) ಅಧೀನದಲ್ಲಿ ದೇಶದ ಒಟ್ಟು ಸುಮಾರು 11,000 ಬ್ಯಾಂಕಿಂಗ್ ಕಚೇರಿಗಳ ಪೈಕಿ ಸುಮಾರು 10,000 ಕಚೇರಿಗಳು ಇವೆ. ಐರೋಪ್ಯ ದೇಶಗಳಲ್ಲೂ ಅಮೆರಿಕ, ಕೆನಡ, ಆಸ್ಟ್ರೇಲಿಯ ಮತ್ತು ಭಾರತದಲ್ಲೂ ಈ ಪದ್ಧತಿ ಜನಪ್ರಿಯವಾಗುತ್ತಿದೆ. ಭಾರತದಲ್ಲಿ ಇತ್ತೀಚೆಗೆ ಜರಗಿದ ಬ್ಯಾಂಕುಗಳ ಏಕರೂಪತಾ ಸಂಯೋಜನೆಗಳ ಪರಿಣಾಮವಾಗಿ ಬ್ಯಾಂಕಿಂಗ್ ವ್ಯವಹಾರಗಳು ಕೆಲವೇ ಬ್ಯಾಂಕು ಕಚೇರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉದಾಹರಣೆಗಾಗಿ 1939ರಲ್ಲಿ ಭಾರತದ ಅನುಸೂಚಿತ (ಷೆಡ್ಯೂಲ್ಡ್) ಬ್ಯಾಂಕುಗಳ ಸಂಖ್ಯೆ 39 ಮತ್ತು ಅನುನುಸೂಚಿತ ಬ್ಯಾಂಕುಗಳ ಸಂಖ್ಯೆ 643 ಆಗಿದ್ದವು. 1946ರಲ್ಲಿ ಅವು ಅನುಕ್ರಮವಾಗಿ 77 ಮತ್ತು 542 ಆದುವು. ಹೀಗೆ ಬೃಹತ್ ಬ್ಯಾಂಕುಗಳ ಸಂಖ್ಯೆ ಹೆಚ್ಚಾಗಿ ಚಿಕ್ಕ ಬ್ಯಾಂಕುಗಳ ಸಂಖ್ಯೆ ಕಡಿಮೆಯಾಗುತ್ತ ಬಂದು 1972ರ ಮಾರ್ಚ್ ವೇಳೆಗೆ ಅನುಸೂಚಿತ ಬ್ಯಾಂಕುಗಳ ಸಂಖ್ಯೆ 73ಕ್ಕೆ ಏರಿತ್ತು. ಅವುಗಳ ಶಾಖೆಗಳ ಸಂಖ್ಯೆ 11,541. ಅನುಸೂಚಿತ ಬ್ಯಾಂಕುಗಳ ಸಂಖ್ಯೆ 12ಕ್ಕೆ ಇಳಿದಿತ್ತು. ಅವುಗಳ ಒಟ್ಟು ಶಾಖೆಗಳು 149.

ಇಪ್ಪತ್ತನೆಯ ಶತಮಾನದಲ್ಲಿ ಶಾಖಾ ಬ್ಯಾಂಕಿಂಗ್ ಪದ್ಧತಿಯ ಬೆಳವಣಿಗೆಗೆ ಕಾರಣಗಳು ಹಲವು: ಬೃಹದ್ಗಾತ್ರ ವ್ಯವಸ್ಥೆಯಿಂದ ಸಾಧಿಸುವ ಮಿತವ್ಯಯಗಳು ಉದ್ಧರಿಸೃಷ್ಟಿಗೆ ಇಡಬೇಕಾದ ನಗದು ಸಂಚಿತಿಯಲ್ಲಿ ಉಳಿತಾಯ, ಸ್ಥಳದಿಂದ ಸ್ಥಳಕ್ಕೆ ಅಲ್ಪ ವೆಚ್ಚದಲ್ಲಿ ಹಣದ ರವಾನೆ, ವ್ಯಾಪಕವಾದ ಕ್ಷೇತ್ರದಿಂದಾಗಿ ಒಂದು ಪ್ರದೇಶದಲ್ಲಿ ಸಂಭವಿಸಿದ ನಷ್ಟವನ್ನು ಇನ್ನೊಂದು ಪ್ರದೇಶದ ಲಾಭದಿಂದ ಸರಿಯಾಗಿರುವ ಸಾಧ್ಯತೆ, ಆಡಳಿತದಲ್ಲಿ ದಕ್ಷತೆ, ದೇಶದ ಮೂಲೆಮೂಲೆಗಳಿಗೆ ಬ್ಯಾಂಕಿಂಗ್ ಸೌಲಭಗಳ ವಿಸ್ತರಣೆ, ಬ್ಯಾಂಕುಗಳ ಮೇಲೆ ಸರ್ಕಾರ ಯುಕ್ತ ಹತೋಟಿ ಹೊಂದುವ ಸೌಲಭ್ಯ-ಇವು ಅನುಕೂಲತೆಗಳು; ಆದರೆ ಶಾಖಾ ಬ್ಯಾಂಕಿಂಗ್‍ನಲ್ಲಿ ದೋಷಗಳೂ ಇಲ್ಲದಿಲ್ಲ. ಇದು ಸ್ಥಳೀಯ ಆವಶ್ಯಕತೆಗಳಿಗೆ ಗಮನ ಕೊಡುವ ಲಾಭವನ್ನೇ ಮುಖ್ಯ ಗುರಿಯಾಗಿರುವ ಗೈರುಹಾಜರಿ ಬ್ಯಾಂಕಿಂಗ್ ಪದ್ಧತಿಯ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಬ್ಯಾಂಕುಗಳ ಅಭಿವೃದ್ಧಿಗೆ ಆವಶ್ಯಕವಾಗಿರುವ ವೈಯಕ್ತಿಕ ಸ್ವಾತಂತ್ರ್ಯ ಈ ಪದ್ಧತಿಯಲ್ಲಿ ಇರುವುದಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಾಗುತ್ತದೆ. ಬ್ಯಾಂಕಿನ ಶಾಖೆಗಳು ಸ್ವೀಕರಿಸಿದ ಠೇವಣಿ ಹಣವನ್ನು ಕೇಂದ್ರ ಕಚೇರಿಗೆ ರವಾನಿಸಬೇಕಾಗಿರುವುದರಿಂದ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಆ ಹಣ ಒದಗಿ ಬರುವುದು ಕಷ್ಟವಾಗುತ್ತದೆ. ದೇಶಾದ್ಯಂತ ಶಾಖೆಗಳು ಚದರಿಹೋಗುವುದರಿಂದ ಅವುಗಳ ಮೇಲ್ವಿಚಾರಣೆ ದುಸ್ತರವಾಗುತ್ತದೆ. ಮೇಲ್ವಿಚಾರಣೆ ಸರಿಯಾಗಿಲ್ಲದೆ. ಸಾಕಷ್ಟು ಅನುಭವ ಮತ್ತು ಅರ್ಹತೆಯಿಲ್ಲದ ನೌಕರರಿಂದ ನಿರ್ವಹಿಸಲ್ಪಡುವ ದೊಡ್ಡ ಬ್ಯಾಂಕುಗಳು ದಿವಾಳಿಯಾದರೆ ಇಡೀ ರಾಷ್ಟ್ರದ ಬ್ಯಾಂಕಿಂಗ್ ವ್ಯವಸ್ಥೆಗೆ ಹಾನಿ ಸಂಭವಿಸುತ್ತದೆ, ಶಾಖಾ ಬ್ಯಾಂಕಿಂಗ್ ನಲ್ಲಿ ಶಾಖಾರಹಿತವಾದ ಸಣ್ಣ ಬ್ಯಾಂಕುಗಳ ಬೆಳೆವಣೆಗೆಗೆ ಅಡ್ಡಿ ಉಂಟಾಗುತ್ತದೆ.

ಏಕಾತ್ಮಕ ಬ್ಯಾಂಕಿಂಗ್: ಒಂದೊಂದು ಬ್ಯಾಂಕಿಂಗ್ ಸಂಸ್ಥೆಗೂ ಒಂದೊಂದೇ ಕಚೇರಿ ಅಥವಾ ಕೆಲವೇ ಶಾಖೆಗಳು ಇರುವುದು ಏಕಾತ್ಮಕ ಬ್ಯಾಂಕಿಂಗ್ ವ್ಯವಸ್ಥೆಯ ಲಕ್ಷಣ. ಕೆಲವು ಗೊತ್ತಾದ ಪ್ರದೇಶಗಳಲ್ಲಿ ಮಾತ್ರ ಶಾಖೆಗಳನ್ನು ತೆರೆಯಲು ಬ್ಯಾಂಕುಗಳಿಗೆ ಅವಕಾಶವಿರುತ್ತದೆ. ಹೆಸರೇ ಸೂಚಿಸುವಂತೆ ಏಕಾತ್ಮಕ ಬ್ಯಾಂಕಿಗ್‍ನ ಕಾರ್ಯಕ್ಷೇತ್ರ ಮತ್ತು ಗಾತ್ರ ಶಾಖಾಬ್ಯಾಂಕಿಂಗಿನ ಕಾರ್ಯಕ್ಷೇತ್ರ ಮತ್ತು ಗಾತ್ರಕ್ಕಿಂತ ಕಿರುದಾಗಿರುತ್ತವೆ. ಈ ಪದ್ಧತಿ ಅಮೆರಿಕನ್ನರ ಕೈಗಾರಿಕೆಗಳು ಮತ್ತು ವ್ಯಕ್ತಿ ಸ್ವಾತಂತ್ರ್ಯ ನೀತಿಗೆ ಅನುಗುಣವಾಗಿ ಆಚರಣೆಯಲ್ಲಿತ್ತು. ಆಯಾ ಸ್ಥಳಗಳ ಸ್ಥಳೀಯ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಇಂಥ ಸಾವಿರಾರು ಬ್ಯಾಂಕುಗಳು ಸ್ಥಾಪಿತವಾಗಿದ್ದುವು. ಈಚೆಗೆ ಅಮೆರಿಕನ್ ಬ್ಯಾಂಕಿಂಗು ಶಾಖಾ ಬ್ಯಾಂಕಿಂಗ್ ಕಡೆಗೆ ವಾಲುವ ಪ್ರವೃತ್ತಿ ತೋರುತ್ತಿದೆ. ಆದರೂ ಅದರ ಮೂಲ ಸ್ವರೂಪ ಉಳಿದುಕೊಂಡು ಬಂದಿದೆ. ಅಮೆರಿಕದ ಬ್ಯಾಂಕಿಂಗ್ ನಲ್ಲಿ ಎರಡು ವರ್ಗದ ಬ್ಯಾಂಕುಗಳಿವೆ. (1) ಫೆಡರಲ್ ಕಾನೂನುಗಳ ಅನ್ವಯ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಬ್ಯಾಂಕುಗಳು; (2) ರಾಜ್ಯ ಕಾನೂನುಗಳ ಅನ್ವಯ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಬ್ಯಾಂಕುಗಳು. ಬ್ಯಾಂಕುಗಳು ಶಾಖೆಗಳನ್ನು ತೆರೆಯಲು ಕೆಲವು ರಾಜ್ಯಗಳು ಅವಕಾಶ ಕೊಡುವುದಿಲ್ಲ. ಮತ್ತೆ ಕೆಲವು ರಾಜ್ಯಗಳಲ್ಲಿ ಅವುಗಳ ಸರಹದ್ದುಗಳೊಳಗೆ ಶಾಖೆಗಳನ್ನು ತೆರೆಯುವ ಅವಕಾಶವಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಒಂದು ನಿಗದಿಯಾದ ನಗರಗಳಲ್ಲಿ ಮಾತ್ರ ಶಾಖೆಗಳನ್ನು ತೆರೆಯುವ ಅವಕಾಶವಿರುತ್ತದೆ.

ಏಕಾತ್ಮಕ ಬ್ಯಾಂಕುಗಳು ನಿರ್ದಿಷ್ಟ ಕ್ಷೇತ್ರಕ್ಕೆ ಮೀಸಲಾಗಿರುವುದರಿಂದ ಸ್ಥಳೀಯ ಅವಶ್ಯಕತೆಗಳನ್ನು ಉತ್ತಮ ರೀತಿಯಲ್ಲಿ ಪೂರೈಸಬಹುದು. ಅಕ್ರಮ ವ್ಯವಹಾರಗಳಿಗೆ ಹೆಚ್ಚು ಅವಕಾಶವಿರುವುದಿಲ್ಲ. ಬ್ಯಾಂಕುಗಳ ಗಾತ್ರ ಕಿರಿದಾಗಿರುವುದರಿಂದ ಬೃಹದ್ಗಾತ್ರ ವ್ಯವಸ್ಥೆಯಲ್ಲಿ ಉದ್ಭವಿಸಬಹುದಾದ ದುರ್ವೆಚ್ಚಗಳಿಗೆ ಆಸ್ಪದವಿರುವುದಿಲ್ಲ. ಆದರೆ ಏಕಾತ್ಮಕ ಬ್ಯಾಂಕಿಂಗಿನಲ್ಲೂ ಕೆಲವು ನ್ಯೂನತೆಗಳಿವೆ. ಏಕಾತ್ಮಕ ಬ್ಯಾಂಕುಗಳು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ತಕ್ಕ ಸಾಮಥ್ರ್ಯ ಪಡೆಯದೇ ಇದ್ದುದೇ ಅಮೆರಿಕದಲ್ಲಿ ಅನೇಕ ಬ್ಯಾಂಕುಗಳು ದಿವಾಳಿಯಾಗಲು ಕಾರಣವೆಂದು ಹೇಳಲಾಗಿದೆ. ಬ್ಯಾಂಕುಗಳ ವಹಿವಾಟುಗಳಲ್ಲಿ ವೈವಿಧ್ಯವಿರುವುದಿಲ್ಲ. ಒಂದೊಂದು ಬ್ಯಾಂಕೂ ಆಯಾ ಸ್ಥಳದ ಆರ್ಥಿಕ ಏಳುಬೀಳುಗಳನ್ನು ಅವಲಂಬಿಸಿರುತ್ತದೆ. ಆ ಸ್ಥಳದಲ್ಲಿ ವಿಶಿಷ್ಟ ಉದ್ಯಮಗಳಿಗೆ ಸಾಲ ನೀಡಿರುತ್ತದೆ. ಆ ಉದ್ಯಮಗಳು ಯಶಸ್ವಿಯಾಗದಿದ್ದರೆ ಬ್ಯಾಂಕಿಗೈ ನಷ್ಟ ಸಂಭವಿಸಬಹುದು. ಅದರ ಆಸ್ತಿಗಳು ನಾನಾ ಕ್ಷೇತ್ರಗಳಲ್ಲಿ ಹರಡದೆ ಇರುವುದೇ ಇದಕ್ಕೆ ಕಾರಣ. ಬ್ಯಾಂಕುಗಳಿಗೆ ಸಾಕಷ್ಟು ಹಣಕಾಸಿನ ಬಲವಿರುವುದಿಲ್ಲ. ಆಡಳಿತದಕ್ಷತೆ, ಸಮರ್ಪಕವಾಗಿರುವುದಿಲ್ಲ. ಬ್ಯಾಂಕುಗಳ ನಡುವೆ ಅನಾವಶ್ಯಕವಾದ ಪೈಪೋಟಿ ಇರುತ್ತದೆ.

ಇಂದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಏಕಾತ್ಮಕ ಬ್ಯಾಂಕಿಂಗ್ ಪದ್ಧತಿ ಹಲವಾರು ರೀತಿಯ ಮಾರ್ಪಾಡುಗಳಿಗೆ ಒಳಗಾಗಿದೆ. ಅಲ್ಲಿಯ ಬ್ಯಾಂಕುಗಳು ಪರಸ್ಪರ ಅಭಿಕರಣ ವ್ಯವಹಾರ ನಡೆಸುತ್ತವೆ. ಅನೇಕ ಬ್ಯಾಂಕುಗಳು ಒಬ್ಬ ಅಥವಾ ಕೆಲವು ವ್ಯಕ್ತಿಗಳ ಆಡಳಿತಕ್ಕೆ ಒಳಪಟ್ಟಿವೆ. ಅನೇಕ ಬ್ಯಾಂಕುಗಳು ಒಂದು ನಿಯಂತ್ರಕ ಕಂಪನಿಯ ಆಡಳಿತಕ್ಕೆ ಒಳಪಟ್ಟಿರುವುದುಂಟು. ಈ ಎರಡು ವ್ಯವಸ್ಥೆಗಳಲ್ಲಿ ಪ್ರತಿಯೊಂದು ಬ್ಯಾಂಕಿಗೂ ಅದರದೇ ಆದ ಸಿಬ್ಬಂದಿ. ಬಂಡವಾಳ ಮತ್ತು ಆಡಳಿತ ವಿನ್ಯಾಸ ಇದ್ದು ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ.

ಶುದ್ಧ ಮತ್ತು ಮಿಶ್ರ ಬ್ಯಾಂಕಿಂಗ್: ವಾಣಿಜ್ಯ ಬ್ಯಾಂಕುಗಳ ವಹಿವಾಟುಗಳು ಒಂದೇ ರೀತಿಯಾಗಿದ್ದರೂ ಉದ್ಧರಿಯ ವಿಚಾರದಲ್ಲಿ ಆಚರಣೆಯಲ್ಲಿರುವ ಪದ್ಧತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಈ ಭಿನ್ನತೆಗಳ ಅಧಾರದ ಮೆಲೆ ವಾಣಿಜ್ಯ ಬ್ಯಾಂಕಿಂಗನ್ನು ಶುದ್ಧ ಮತ್ತು ಮಿಶ್ರ ಎಂದು ವಿಂಗಡಿಸಬಹುದು.

ಶುದ್ಧ ಬ್ಯಾಂಕಿಂಗಿನಲ್ಲಿ ವಾಣಿಜ್ಯ ಬ್ಯಾಂಕುಗಳು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಅಲ್ಪಾವಧಿ ಹಣದ ಆವಶ್ಯಕತೆಗಳನ್ನು ಮಾತ್ರ ಪೂರೈಸುತ್ತವೆ. ಅವು ಸಾಮಾನ್ಯವಾಗಿ ದೀರ್ಘಾವಧಿ ಸಾಲವನ್ನು ಒದಗಿಸುವುದಿಲ್ಲ. ಇಂಗ್ಲೆಂಡಿನ ವಾಣಿಜ್ಯ ಬ್ಯಾಂಕುಗಳು ಉತ್ತಮ ಉದಾಹರಣೆಗಳು. ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಕಾರ್ಯಶೀಲ ಬಂಡವಾಳವನ್ನು ಒದಗಿಸುವುದರಲ್ಲಿ ಪರಿಣತಿ ಪಡೆದಿರುವ ಇಂಗ್ಲಿಷ್ ಬ್ಯಾಂಕುಗಳು ದೀರ್ಘ ಅವಧಿಗಳ ಸಾಲ ಕೊಡುವುದಿಲ್ಲ. ಇಂಗ್ಲಿಷ್ ಬ್ಯಾಂಕುಗಳು ಕಚ್ಚಾ ಸಾಮಗ್ರಿ ಕೊಳ್ಳುವುದಕ್ಕೆ ಕೂಲಿ ಕೊಡುವುದಕ್ಕೆ ಇತ್ಯಾದಿ ತಾತ್ಕಾಲಿಕ ಬಟವಾಡೆಗಳಿಗೆ ಬೇಕಾಗುವ ಅಲ್ಪಾವಧಿ ಬಂಡವಾಳವನ್ನು ಒದಗಿಸುತ್ತ ಯಂತ್ರೋಪಕರಣಗಳು ಮತ್ತು ಇತರ ಬಂಡವಾಳ ಸರಕುಗಳನ್ನು ಕೊಳ್ಳುವುದಕ್ಕೆ ಬೇಕಾಗುವ ದೀರ್ಘಾವಧಿ ಬಂಡವಾಳವನ್ನು ಒದಗಿಸಲು ಹಿಂಜರಿಯುವುದಕ್ಕೆ ಅನೇಕ ಕಾರಣಗಳಿವೆ. ಇಂಗ್ಲಿಷ್ ಬ್ಯಾಂಕುಗಳ ಕಾರ್ಯ ಶೀಲ ಬಂಡವಾಳಕ್ಕೆ ಮುಖ್ಯ ಮೂಲವೆಂದರೆ ಗ್ರಾಹಕರಿಂದ ಬರುವ ಅಲ್ಪಾವಧಿ ಠೇವಣಿಗಳು. ಈ ಠೇವಣಿಗಳನ್ನು ಯಾವಾಗ ಎಂದರೆ ಆಗ ಅಥವಾ ಅಲ್ಪಕಾಲದ ತಿಳಿವಳಿಕೆಯ ಅನಂತರ ಹಿಂತಿರುಗಿಸಬೇಕಾಗುತ್ತದೆ. ಆದ್ದರಿಂದ ಬ್ಯಾಂಕುಗಳು ತಮ್ಮ ಸಂಪನ್ಮೂಲಗಳನ್ನು ದೀರ್ಘಾವಧಿ ಸಾಲದ ರೂಪದಲ್ಲಿ ಬಂಧಿಸ ಬಯಸುವುದಿಲ್ಲ. ಇದರಿಂದ ಅವುಗಳ ದ್ರವ್ಯತ್ವಕ್ಕೆ ಧಕ್ಕೆ ಒದಗುತ್ತದೆ. ಇಂಗ್ಲಿಷ್ ಬ್ಯಾಂಕುಗಳು ದೀರ್ಘಾವಧಿ ಸಾಲ ಕೊಡದಿರುವುದಕ್ಕೆ ಇರುವ ಮತ್ತೊಂದು ಕಾರಣ ಐತಿಹಾಸಿಕ ಸ್ವರೂಪದ್ದು. ಇಂಗ್ಲೆಂಡಿನಲ್ಲಿ ಕೈಗಾರಿಕಾಭಿವೃದ್ಧಿ ಆರಂಭವಾಗುವುದಕ್ಕಿಂತ ಮೊದಲೆ ಅದರ ಅಂತಾರಾಷ್ಟ್ರೀಯ ವ್ಯಾಪಾರ ಉಚ್ಛ್ರಾಯಸ್ಥಿತಿಯಲ್ಲಿದ್ದು ಕೈಗಾರಿಕಾಭಿವೃದ್ಧಿಗೆ ಉತ್ತಮ ನೆಲೆಗಟ್ಟನ್ನು ನಿರ್ಮಿಸಿತ್ತು. ಇಂಗ್ಲೆಂಡು ಹೆಸರಾಂತ ವ್ಯಾಪಾರಿ ರಾಷ್ಟ್ರವಾಗಿದ್ದು, ಅದರ ಬಹುಪಾಲು ವ್ಯಾಪಕರ ಖಾಸಗಿ ವ್ಯಾಪಾರೋದ್ಯಮಿಗಳ ಮೂಲಕ ಸಾಗುತ್ತಿತ್ತು. ಹಣಕಾಸಿನ ಮಂಡಳಿಗಳು, ನೀಡಿಕೆ ಮನೆಗಳು, ವಿನಿಯೋಜನ ಮಂಡಳಿಗಳು ಮೊದಲಾದ ಅನೇಕ ಹಣಕಾಸು ಸಂಸ್ಥೆಗಳು ಉತ್ಪಾದಕ ಕಾರ್ಯಗಳ ಹಣದ ಆವಶ್ಯಕತೆಗಳನ್ನು ಪೂರೈಸುವಷ್ಟು ಅಭಿವೃದ್ಧಿ ಹೊಂದಿದ್ದುವು. ಆಧುನಿಕ ರೀತಿಯ ವಾಣಿಜ್ಯ ಬ್ಯಾಂಕುಗಳು ಅಸ್ತಿತ್ವದಲ್ಲಿರಲಿಲ್ಲ. ಆದ ಕಾರಣ ಇಂಗ್ಲಿಷ್ ಕೈಗಾರಿಕೊದ್ಯಮಿಗಳು ಬಂಡವಾಳ ಪೂರೈಕೆಗಾಗಿ ವಾಣಿಜ್ಯ ಬ್ಯಾಂಕುಗಳನ್ನು ನೆಚ್ಚಿಕೊಳ್ಳುವ ಅಗತ್ಯ ಬೀಳಲಿಲ್ಲ.

1930ರ ದಶಕದ ಮಹಾ ಆರ್ಥಿಕ ಮುಗ್ಗಟ್ಟಿನ ತರುವಾಯ ಕೈಗಾರಿಕೆಗಳಿಗೆ ಧನಸಹಾಯ ನೀಡುವ ವಿಚಾರವಾಗಿ ಇಂಗ್ಲಿಷ್ ಬ್ಯಾಂಕುಗಳ ಭಾವನೆ ಬದಲಾಗಲಾರಂಭಿಸಿತು. ಸ್ಥಗಿತ ವ್ಯಾಪಾರ ಸ್ಥಿತಿಗತಿಗಳಿಂದಾಗಿ ಅನೇಕ ಸಣ್ಣ ಕೈಗಾರಿಕಾ ಸಂಸ್ಥೆಗಳು ತಮ್ಮ ಅಲ್ಪಾವಧಿಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕುಗಳಾದರೂ ತತ್ ಕ್ಷಣದ ಮರುಪಾವತಿಗೆ ಕ್ರಮ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಬದಲಾಗಿ ಸಾಲಗಳನ್ನು ಸಂಬಂಧಪಟ್ಟ ಸಂಸ್ಥೆಗಳ ಷೇರು ಮತ್ತು ಡಿಬೆಂಚರುಗಳಾಗಿ ಪರಿವರ್ತಿಸಬೇಕಾಯಿತು. ಪರಿಣಾಮವಾಗಿ ಇಂದು ಬೃಹದ್ ಬ್ಯಾಂಕುಗಳ ಸಂಪನ್ಮೂಲಗಳ ಗಮನಾರ್ಹ ಭಾಗ ಕೈಗಾರಿಕೋದ್ಯಮಗಳು ಷೇರು ಮತ್ತು ಡಿಬೆಂಚರುಗಳ ರೂಪದಲ್ಲಿವೆ. ಹೀಗಾಗಿ ಇವು ವಿನಿಯೋಜನೆಗಾಗಿ ದೀರ್ಘಾವಧಿ ಸಾಲ ಕೊಟ್ಟಾಂತಾಗಿದೆ.

ಈಚಿನ ವರ್ಷಗಳಲ್ಲಿ ಕೈಗಾರಿಕೋದ್ಯಮಗಳ ದೀರ್ಘಾವಧಿ ಹಣಕಾಸು ಆವಶ್ಯಕತೆಗಳನ್ನು ಪೂರೈಸುವ ಬಗ್ಗೆ ಇಂಗ್ಲಿಷ್ ಬ್ಯಾಂಕುಗಳ ಆಸಕ್ತಿ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಲಾಭದಾಯಕ ವಿನಿಯೋಜನೆ ಮಾರ್ಗಗಳ ಮಹತ್ತ್ವ ಕ್ಷೀಣಿಸುತ್ತಿರುವುದು. ಉದ್ಯಮಕೂಟ ಮತ್ತು ಸಂಯೋಜನೆಗಳ ಅಧಿಕ ಸಂಪನ್ಮೂಲಗಳನ್ನು ಹೊಂದಿರುವ ಬೃಹತ್ ಕೈಗಾರಿಕೋದ್ಯಮಗಳ ಸ್ಥಾಪನೆ, ಸ್ವಂತ ಬಂಡವಾಳ ಹರಡುವ ಪ್ರವೃತ್ತಿಯ ಬೆಳವಣಿಗೆ ಇವುಗಳಿಂದಾಗಿ ಹಣಕಾಸಿಗಾಗಿ ಬ್ಯಾಂಕುಗಳನ್ನು ನೆಚ್ಚಿಕೊಂಡಿರುತ್ತಿದ್ದ ಸಣ್ಣ ಕೈಗಾರಿಕೋದ್ಯಮಗಳ ಸಂಖ್ಯೆ ಕ್ಷೀಣಿಸುತ್ತಿದೆ. ವಾಣಿಜ್ಯ ಬ್ಯಾಂಕುಗಳು ಸಂಪನ್ಮೂಲಗಳ ವಿನಿಯೋಜನೆಗೆ ಹೊಸ ಮಾರ್ಗಗಳನ್ನು ಅರಸುವುದು ಅನಿವಾರ್ಯವಾಗಿದೆ. ಅಲ್ಲದೆ ದೀರ್ಘಾವಧಿ ಸಾಲಗಳ ಮತ್ತು ಷೇರುಗಳ ಸುಲಭ ವಿಕ್ರಯ ಹಾಗೂ ವಿನಿಮಯಕ್ಕೆ ಅವಕಾಶವಿರುವ ವಿನಿಮಯ ವ್ಯವಸ್ಥೆಯ ಪ್ರಗತಿಯಿಂದ ಈ ದೀರ್ಘಾವಧಿ ಪ್ರತಿ ಭೂತಿಗಳು ಮತ್ತು ಷೇರುಗಳು ಹಿಂದಿಗಿಂತ ಹೆಚ್ಚಾಗಿ ಬ್ಯಾಂಕುಗಳನ್ನು ಆಕರ್ಷಿಸಿವೆ. ಬ್ಯಾಂಕಿಗೆ ನಗದಿನ ಆವಶ್ಯಕತೆ ಉಂಟಾದಾಗ ಈ ಪ್ರತಿಭೂತಿಗಳನ್ನು ಮತ್ತು ಷೇರುಗಳನ್ನು ಇತರ ಸಂಸ್ಥೆಗಳಿಗೆ ವರ್ಗಾಯಿಸಿ ಹಣ ಪಡೆಯುವ ಅನುಕೂಲವಿದೆ. ದೀರ್ಘಾವಧಿ ವಿನಿಯೋಜನೆಗಳಿಗೆ ಧನಸಹಾಯ ನೀಡುವ ವಿಚಾರವಾಗಿ ಇಂಗ್ಲಿಷ್ ಬ್ಯಾಂಕುಗಳ ಭಾವನೆಯಲ್ಲಿ ಇಷ್ಟೆಲ್ಲ ಮಾರ್ಪಾಟುಗಳಾಗಿದ್ದರೂ ದೀರ್ಘಾವಧಿ ಸಾಲ ಕೊಡಲು ಹಿಂಜರಿಯುವ ಪ್ರವೃತ್ತಿ ಅವುಗಳಲ್ಲಿ ಇದೆ.

ಮಿಶ್ರ ಬ್ಯಾಂಕಿಂಗ್: ವಾಣಿಜ್ಯ ಬ್ಯಾಂಕುಗಳು ಅಲ್ಪಾವಧಿ ಸಾಲ ನೀಡುವುದರ ಜೊತೆಗೆ ದೀರ್ಘಾವಧಿ ಸಾಲವನ್ನೂ ಒದಗಿಸುವುದು ಮಿಶ್ರಬ್ಯಾಂಕಿಂಗ್ ಎನಿಸುತ್ತದೆ. ಮಿಶ್ರಬ್ಯಾಂಕಿಂಗ್ ಪದ್ದತಿಯನ್ನು ಅನುಸರಿಸುವ ಬ್ಯಾಂಕುಗಳು ಕಾರ್ಯಶೀಲ ಮತ್ತು ವಿನಿಯೋಜನ ಎರಡಕ್ಕೊ ಬಂಡವಾಳ ಒದಗಿಸುತ್ತವೆ. ಜರ್ಮನ್ ಬ್ಯಾಂಕುಗಳು ಈ ಬಗ್ಗೆ ವ್ಯವಹಾರಕ್ಕೆ ಉತ್ತಮ ಉದಾಹರಣೆ. ವಾಸ್ತವಿಕ ಬ್ಯಾಂಕಿಂಗ್ ವ್ಯವಹಾರಗಳ ಜೊತೆಗೆ ಹುಂಡಿಗಳನ್ನು ಬರೆದುಕೊಡುವುದು, ಸ್ವೀಕರಿಸುವುದು ಹಾಗೂ ಮುರಿದುಕೊಳ್ಳುವುದು, ಸಾಲಪತ್ರಗಳನ್ನು ಹೊರಡಿಸುವುದು, ಕೈಗಾರಿಕೋದ್ಯಮಗಳ ಷೇರು ಮತ್ತು ಡಿಬೆಂಚರುಗಳನ್ನು ಕೊಳ್ಳುವುದು ಇತ್ಯಾದಿ ವ್ಯಾಪಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದರಿಂದ ಜರ್ಮನಿಯ ಬ್ಯಾಂಕುಗಳನ್ನು ಸಾರ್ವತ್ರಿಕ ಬ್ಯಾಂಕುಗಳು ಎಂದು ಕರೆಯುವುದುಂಟು.

ಇಂಗ್ಲೆಂಡಿನ ಶುದ್ಧ ಬ್ಯಾಂಕಿಂಗಿನಂತೆಯೆ ಜರ್ಮನಿಯ ಮಿಶ್ರ ಬ್ಯಾಂಕಿಂಗಿನ ಬೆಳವಣಿಗೆಗೂ ಐತಿಹಾಸಿಕ ಹಿನ್ನೆಲೆಯುಂಟು ಇಂಗ್ಲೆಂಡಿನ ಬೆಳವಣಿಗೆಗಿಂತ ಭಿನ್ನವಾದದ್ದು ಜರ್ಮನಿಯ ಬೆಳವಣಿಗೆ. ಅಲ್ಲಿ ವಾಣಿಜ್ಯಾಭಿವೃದ್ಧಿಗೆ ಕೈಗಾರಿಕಾಭಿವೃದ್ಧಿ ಉತ್ತಮ ನೆಲಗಟ್ಟನ್ನು ನಿರ್ಮಿಸಿತು. ಪ್ರಾರಂಭದಲ್ಲಿ ಕೈಗಾರಿಕೆಗಳಿಗೆ ಧನಸಹಾಯ ನೀಡುವ ಹಣಕಾಸಿನ ಸಂಸ್ಥೆಗಳಾಗಲಿ ಬಂಡವಾಳಗಾರರಾಗಲಿ ಜರ್ಮನಿಯಲ್ಲಿ ಇರಲಿಲ್ಲ. ಆದ ಕಾರಣ ಕೈಗಾರಿಕೋದ್ಯಮಿಗಳು ಬಂಡವಾಳಕ್ಕಾಗಿ ಬ್ಯಾಂಕುಗಳನ್ನು ಆಶ್ರಯಿಸಬೇಕಾಯಿತು. ಹೀಗೆ ಜರ್ಮನಿಯಲ್ಲಿ ಪ್ರಾರಂಭದಿಂದಲೂ ಬ್ಯಾಂಕುಗಳು ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತ ಬಂದಿವೆ. ಬ್ಯಾಂಕುಗಳ ಪ್ರಗತಿಪರ ಉತ್ತೇಜನವಿರದಿದ್ದ ಪಕ್ಷದಲ್ಲಿ 19ನೆಯ ಶತಮಾನದ ಉತ್ತರಾರ್ಧದಲ್ಲಿ ಜರ್ಮನಿ ಸಾಧಿಸಿದ ತ್ವರಿತ ಕೈಗಾರಿಕಾ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ.

ಜರ್ಮನಿಯ ಮಿಶ್ರ ಬ್ಯಂಕಿಂಗ್ ಬೆಳವಣಿಗೆಯನ್ನು ಮೂರು ಹಂತಗಳಾಗಿ ವಿಭಾಗಿಸಬಹುದು. 1848ರಿಂದ 1870ರ ತನಕದ ಮೊದಲನೆಯ ಹಂತದಲ್ಲಿ ಬ್ಯಾಂಕುಗಳು ಕೈಗಾರಿಕೋದ್ಯಮಿಗಳಿಗೆ ವಿನಿಯೋಜನ ಬಂಡವಾಳವನ್ನು ಒದಗಿಸುವ ಟ್ರಸ್ಟುಗಳಾಗಿದ್ದುವು. ಅವಕ್ಕೆ ಅಪಾರ ಸಂಪನ್ಮೂಲಗಳಿದ್ದುವು. ಅವು ವಿನಿಯೋಜನ ಬಂಡವಾಳದ ಅವಶ್ಯಕತೆಗಳನ್ನು ಪೂರೈಸುವ ಸಾಮಥ್ರ್ಯ ಪಡೆದಿದ್ದುವು. ಪಾವತಿಯಾದ ಬಂಡವಾಳದ ಸ್ವಂತ ನಿಧಿಗಳಿಂದ ಅವು ವ್ಯವಹಾರ ನಡೆಸುತ್ತಿದ್ದುವು. 1870ರಿಂದ 1914ರ ತನಕದ ದ್ವಿತೀಯ ಹಂತದಲ್ಲಿ ವಿನಿಯೋಜನ ಬಂಡವಾಳ ಟ್ರಸ್ಟುಗಳು ಬ್ಯಾಂಕಿಂಗ್ ವ್ಯವಹಾರಗಳನ್ನೂ ಕೈಗೊಳ್ಳಲಾರಂಭಿಸಿ ವಿನಿಯೋಜನ ಬ್ಯಾಂಕುಗಳಾದುವು. 1914ರ ಅನಂತರದ, ತೃತೀಯ ಹಂತದಲ್ಲಿ ಅವು ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರ ನಿರ್ವಹಣೆಯಲ್ಲಿ ನಿಪುಣತೆ ಪಡೆದರೂ ಪ್ರಾರಂಭದ ಕಾರ್ಯವನ್ನು ಕೈಬಿಡಲಿಲ್ಲ. ಒಟ್ಟಿನಲ್ಲಿ ಪಾವತಿಯಾದ ಬಂಡವಾಳ ಮತ್ತು ನಗದು ಸಂಚಿತಿಯನ್ನು ಅಧಿಕವಾಗಿ ಹೊಂದಿರುವ ಜರ್ಮನ್ ಬ್ಯಾಂಕುಗಳು ಕೈಗಾರಿಕೋದ್ಯಮಗಳ ಅಲ್ಪಾವಧಿ ಹಾಗೂ ದೀರ್ಘಾವಧಿ ಬಂಡವಾಳದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಶಕ್ತವಾಗಿವೆ.

ವಾಣಿಜ್ಯ ಬ್ಯಾಂಕುಗಳು ದೀರ್ಘಾವಧಿ ಬಂಡವಾಳವನ್ನು ಒದಗಿಸುವುದರಿಂದ ಕೆಲವು ಅನುಕೂಲಗಳಿವೆ. ಬಂಡವಾಳ ಪಡೆದ ಕೈಗಾರಿಕಾ ಘಟಕಗಳು ಅದರ ಸದ್ವಿನಿಯೋಗದ ವಿಚಾರವಾಗಿ ಯುಕ್ತ ಮಾರ್ಗದರ್ಶನ ಪಡೆಯಬಹುದು. ಉದ್ಯಮ ವ್ಯವಹಾರಗಳಲ್ಲಿ ದೊಡ್ಡ ದೊಡ್ಡ ಬ್ಯಾಂಕುಗಳು ಭಾಗವಹಿಸುವುದರಿಂದ ಉದ್ಯಮದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚುತ್ತದೆ. ಷೇರು ಮತ್ತು ಡಿಬೆಂಚರುಗಳ ಮಾರಾಟದಿಂದ ಉದ್ಯಮಗಳು ಅಧಿಕ ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತವೆ. ಅಲ್ಲದೆ ಬ್ಯಾಂಕುಗಳಿಗೆ ದೇಶದ ಕೈಗಾರಿಕಾ ಕ್ಷೇತ್ರದ ಪೂರ್ಣ ಪರಿಚಯವಾಗಿ ಬದಲಾಗುವ ವಾಣಿಜ್ಯ ಹಾಗೂ ಕೈಗಾರಿಕಾ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವು ತಮ್ಮ ಸಾಲದ ವ್ಯವಹಾರಗಳನ್ನು ಯೋಚಿಸಿಕೊಳ್ಳಲು ಅನುಕೂಲವಾಗುತ್ತದೆ.

ದೀರ್ಘಾವಧಿ ಬಂಡವಾಳ ಪೂರೈಕೆಯಿಂದ ಈ ಅನುಕೂಲಗಳಿರುವುದು ದಿಟವಾದರೂ ಬ್ಯಾಂಕುಗಳ ಹಣಕಾಸಿನ ಸ್ಧಿತಿ ಮತ್ತು ಲಾಭಗಳಿಕೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ಯಾವುದೇ ಬ್ಯಾಂಕಿನ ಹಣಕಾಸಿನ ಸ್ಥಿತಿ ಮತ್ತು ಲಾಭಗಳಿಕೆ ಅದು ಬಂಡವಾಳ ಒದಗಿಸಿರುವ ಕೈಗಾರಿಕೆಯ ಕಾರ್ಯಾಚರಣೆ ಮತ್ತು ಲಾಭಗಳಿಕೆಯನ್ನು ಅವಲಂಬಿಸಿರುತ್ತದೆ. ಸ್ಥಗಿತ ವ್ಯಾಪಾರ ಸ್ಥಿತಿಗತಿಗಳಿಂದ ಆ ಕೈಗಾರಿಕೆ ನಷ್ಟಕ್ಕೆ ಒಳಗಾದರೆ ಸಕಾಲದಲ್ಲಿನ ಸಾಲ ಮರುಪಾವತಿಯಾಗದೆ ಬ್ಯಾಂಕಿನ ಲಾಭಗಳಿಕೆ ಕಡಿಮೆಯಾಗುತ್ತದೆ. 1930ರ ದಶಕದ ಮಹಾ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಜರ್ಮನಿಯಲ್ಲಿ ಅನೇಕ ಬ್ಯಾಂಕುಗಳು ದಿವಾಳಿಯಾದದು ಈ ಕಾರಣದಿಂದಲೇ. ಆದ್ದರಿಂದ ಅಲ್ಪಾವಧಿ ಠೇವಣೆಗಳ ರೂಪದಲ್ಲಿ ಸಂಗ್ರಹವಾದ ನಿಧಿಗಳಿಂದ ವ್ಯವಹಾರ ನಡೆಸುವ ವಾಣಿಜ್ಯ ಬ್ಯಾಂಕುಗಳು ತಮ್ಮ ಆಸ್ತಿಗಳನ್ನು ಬೇಗ ನಗದುರೂಪಕ್ಕೆ ತರಲು ಸಾಧ್ಯವಿರುವಂಥ ರೀತಿಯಲ್ಲಿ ಇರಿಸಿಕೊಂಡಿರಬೇಕು. ಎಂದರೆ ದೀರ್ಘಾವಧಿ ಸಾಲದ ವ್ಯವಹಾರಗಳನ್ನು ಅದಕ್ಕಾಗಿಯೇ ಸ್ಥಾಪಿತವಾಗಿರುವ ಸಂಸ್ಥೆಗಳಿಗೆ ಬಿಟ್ಟು ಅಲ್ಪಾವಧಿ ಸಾಲದ ವ್ಯವಹಾರಗಳಲ್ಲಿ ವೈಶಿಷ್ಟ್ಯ ಸಾಧಿಸಿಕೊಳ್ಳುವುದು ಒಳ್ಳೆಯದು, ಎಂದು ವಾದಿಸಲಾಗಿದೆ.

ಕೈಗಾರಿಕಾ ಬ್ಯಾಂಕುಗಳು: ಕೈಗಾರಿಕೆಗಳಿಗೆ ದೀರ್ಘಾವಧಿ ಬಂಡವಾಳವನ್ನು ಒದಗಿಸುವುದು ಕೈಗಾರಿಕಾ ಬ್ಯಾಂಕುಗಳ ಕಾರ್ಯಭಾರ. ಆದ್ದರಿಂದ ಇವನ್ನು ವಿನಿಯೋಜನ ಬಂಡವಾಳ ಬ್ಯಾಂಕುಗಳೆಂದು ಕರೆಯುವುದುಂಟು. ಹೊಸದಾಗಿ ಪ್ರಾರಂಭವಾಗುವ ಕೈಗಾರಿಕಾ ಕಂಪನಿಗಳ ಷೇರುಗಳನ್ನು ಮತ್ತು ಡಿಬೆಂಚರುಗಳನ್ನು ಮಾರಿ ಬಂಡವಾಳ ಸಂಗ್ರಹಿಸಿಕೊಡುವ ಕಾರ್ಯವನ್ನು ಈ ಬ್ಯಾಂಕುಗಳ ನಿರ್ವಹಿಸುತ್ತವೆ. ಹೀಗೆ ಕೈಗಾರಿಕಾ ಬ್ಯಾಂಕುಗಳು ಉಳಿತಾಯದಾರರಿಗೂ ಬಂಡವಾಳ ಹೂಡುವವರಿಗೂ ಮಧ್ಯವರ್ತಿಗಳಾಗಿರುತ್ತವೆ.

ಜಪಾನಿನಂಥ ಕೆಲವು ರಾಷ್ಟ್ರಗಳಲ್ಲಿ ಕೈಗಾರಿಕಾ ಬ್ಯಾಂಕುಗಳು ಅಸಾಧಾರಣ ಕೈಗಾರಿಕಾ ಪ್ರಗತಿಗೆ ಕಾರಣವಾಗಿವೆ. ಕೆಲವು ರಾಷ್ಟ್ರಗಳಲ್ಲಿ ಸ್ಟಾಕ್ ಮಾರುಕಟ್ಟೆ, ನೀಡಿಕೆ ಗೃಹಗಳು ಮತ್ತು ಹಣಕಾಸು ಕಂಪನಿಗಳಂಥ ವಿಶಿಷ್ಟ ಸಂಸ್ಥೆಗಳು ಕೈಗಾರಿಕಾ ಬ್ಯಾಂಕುಗಳ ಕಾರ್ಯಗಳನ್ನು ನಿರ್ವಹಿಸುತ್ತವೆ. ಜರ್ಮನಿ, ಆಸ್ಟ್ರೇಲಿಯ, ಸ್ವಿಟ್ ಜûರ್ಲೆಂಡ್, ಇಟಲಿ ಮುಂತಾದ ಕೆಲವು ದೇಶಗಳಲ್ಲಿ ಮಿಶ್ರ ಬ್ಯಾಂಕಿಂಗ್ ಅಸ್ತಿತ್ವದಲ್ಲಿದೆ. ಅಲ್ಲಿ ವಾಣಿಜ್ಯ ಬ್ಯಾಂಕುಗಳೇ ಕೈಗಾರಿಕಾ ಬ್ಯಾಂಕುಗಳಾಗಿ ಕೆಲಸ ಮಾಡುತ್ತವೆ. ಜೊತೆಗೆ ಸರ್ಕಾರ ಸ್ಥಾಪಿಸಿರುವ ವಿಶೇಷ ಸಂಸ್ಥೆಗಳಿರುತ್ತವೆ. ಇಂಗ್ಲೆಂಡಿನಲ್ಲಿ ಕೈಗಾರಿಕಾ ಹಣಕಾಸು ಮಂಡಳಿ ಮುಂತಾದವು ಮತ್ತು ಭಾರತದಲ್ಲಿ ಕೈಗಾರಿಕಾ ಹಣಕಾಸು ಕಾರ್ಪೊರೇಷನ್, ರಾಜ್ಯ ಹಣಕಾಸು ಕಾರ್ಪೊರೇಷನ್, ಕೈಗಾರಿಕಾ ಹಣಕಾಸು ಮತ್ತು ವಿನಿಯೋಜನ ಕಾರ್ಪೊರೇಷನ್ ಇವು ಇಂಥ ವಿಶೇಷ ಸಂಸ್ಥೆಗಳು.

ವ್ಯವಸಾಯ ಬ್ಯಾಂಕುಗಳು: ವ್ಯವಸಾಯ ಕ್ಷೇತ್ರದ ಸಮಸ್ಯೆಗಳು ವಿಶಿಷ್ಟವಾದವು. ಅವುಗಳ ಹಣಕಾಸು ಆವಶ್ಯಕತೆಗಳನ್ನು ಪೂರೈಸಲು ಪ್ರತ್ಯೇಕ ಬ್ಯಾಂಕುಗಳಿವೆ. ಇವುಗಳಲ್ಲಿ ಎರಡು ವಿಧಗಳುಂಟು. ಒಂದು ಅಲ್ಪಾವಧಿ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವ ಸಹಕಾರಿ ಬ್ಯಾಂಕುಗಳು; ಎರಡು ದೀರ್ಘಾವಧಿ ಹಣಕಾಸಿನ ಆವಶ್ಯಕತೆಗಳನ್ನು ಪೂರೈಸುವ ಜಮೀನು ಅಡಮಾನ ಬ್ಯಾಂಕುಗಳು.

ಸಹಕಾರಿ ಬ್ಯಾಂಕುಗಳು: ಬಿತ್ತನೆ ಬೀಜ, ಕೃತಕ ಗೊಬ್ಬರ, ಸಣ್ಣ ಪುಟ್ಟ ಉಪಕರಣ ಇತ್ಯಾದಿಗಳ ಕೊಳ್ಳುವಿಕೆ, ಕೂಲಿ ಪಾವತಿ, ತಾತ್ಕಾಲಿಕ ಅಭಿವೃದ್ಧಿ ಕಾರ್ಯಗಳ ನಿರ್ವಹಣೆ-ಮುಂತಾದ ದೈನಂದಿನ ವ್ಯವಹಾರಗಳ ನಿರ್ವಹಣೆಗೆ ರೈತರಿಗೆ ಅಲ್ಪಾವಧಿ ಹಣಕಾಸಿನ ಆವಶ್ಯಕತೆ ಇರುತ್ತದೆ. ನಷ್ಟ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇತರ ಬ್ಯಾಂಕುಗಳು ಅಲ್ಪಾವಧಿ ಸಾಲ ಒದಗಿಸಲು ಸಾಮಾನ್ಯವಾಗಿ ಮುಂದೆ ಬರುವುದಿಲ್ಲ. ಸ್ಥಳೀಯ ಜಮೀನ್ದಾರರು ಅಥವಾ ಸಾಹುಕಾರರಿಂದ ಸುಲಭವಾಗಿ ಸಾಲ ಪಡೆಯಬಹುದಾದರೂ ಅವರ ಉದ್ದೇಶ ಸಹಾಯವಾಗಿರದೆ ಲಾಭ ಸಂಪಾದನೆ ಮಾಡುವುದಾಗಿರುತ್ತದೆ. ಅಲ್ಲದೆ ದೀರ್ಘಾವಧಿ ಸಾಲಗಳಿಗೆ ಅಡವಿಡಲು ರೈತರ ಬಳಿ ಭೂಮಿಕಾಣಿಗಳಿರುತ್ತವೆ-ಅಲ್ಪಾವಧಿ ಸಾಲಕ್ಕೆ ಅವರ ನೇಗಿಲು ನೊಗಗಳನ್ನು ಬಿಟ್ಟರೆ ಮತ್ತೇನೂ ಇರುವುದಿಲ್ಲ. ಇಂಥ ಸನ್ನಿವೇಶದಲ್ಲಿ ರೈತರ ಆಶ್ರಯಕ್ಕೆ ಬರುವುದು ಸಹಕಾರಿ ಬ್ಯಾಂಕುಗಳ ಉದ್ದೇಶ. ಕಳೆದ ಶತಮಾನದ ಮಧ್ಯಭಾಗದಲ್ಲಿ ಜರ್ಮನಿಯಲ್ಲಿ ಈ ಭಾವನೆ ಹೊಳೆಯಿತು. ಜರ್ಮನ್ ರೈತರ ಸಂಕಷ್ಟಗಳನ್ನು ಕಂಡು ನೊಂದ ರೈಫೇಸನ್ ಸಹಕಾರ ಸಂಘಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಸುಧಾರಿಸಲೆತ್ನಿಸಿದ. ಈ ಪ್ರಯತ್ನದ ಫಲವಾಗಿ ಸಹಕಾರಿ ಬ್ಯಾಂಕುಗಳು ಆಸ್ತಿತ್ವಕ್ಕೆ ಬಂದುವು. ಸಹಕಾರಿಬ್ಯಾಂಕುಗಳ ಮುಖ್ಯ ಉದ್ದೇಶವೆಂದರೆ ಏಕಾಂಗಿಗಳಾದ ಹಾಗೂ ಅಶಕ್ತರಾದ ವ್ಯಕ್ತಿಗಳನ್ನು ಒಂದುಗೂಡಿಸಿ ಪರಸ್ಪರ ಸಹಕಾರ ಮತ್ತು ಸಹಬಾಳ್ವೆಗೆ ಅವಕಾಶ ಮಾಡಿಕೊಡುವುದು. ಸಹಕಾರಿ ಬ್ಯಾಂಕು ಮೊದಲನೆಯದಾಗಿ ಸ್ವಯಂಪ್ರೇರಿತವಾದುದು. ಎರಡನೆಯದಾಗಿ ಇದು ಪ್ರಜಾಪ್ರಭುತ್ವದ ನಿಯಮಗಳಿಂದ ಕೂಡಿದ ಸಮಾನಭಾವ ಸಂಸ್ಥೆ. ಒಬ್ಬನಿಗಾಗಿ ಎಲ್ಲರು ಮತ್ತು ಎಲ್ಲರಿಗಾಗಿ ಒಬ್ಬ ಎಂಬುದು ಸಹಕಾರಿ ಸಂಸ್ಥೆಯ ಮೂಲತತ್ತ್ವ.

ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ರಚನೆಯಲ್ಲಿ ಮೂರು ಹಂತಗಳಿರುತ್ತವೆ. ಮೇಲಿನ ಹಂತದಲ್ಲಿ ರಾಜ್ಯ ಸಹಕಾರ ಬ್ಯಾಂಕು ಸ್ಥಾಪಿತವಾಗಿದೆ. ಮಧ್ಯದ ಹಂತದಲ್ಲಿ, ಎಂದರೆ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಅಥವಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳಿವೆ. ಕೆಳಗಿನ ಹಂತದಲ್ಲಿ, ಎಂದರೆ ಗ್ರಾಮೀಣ ಮಟ್ಟದಲ್ಲಿ, ಪ್ರಾಥಮಿಕ ಸಹಕಾರ ಸಂಘಗಳಿರುತ್ತವೆ. ಇಡೀ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಪ್ರಾಥಮಿಕ ಸಹಕಾರ ಸಂಘಗಳ ತಳಹದಿಯ ಮೇಲೆ ನಿಂತಿದೆ.

ರೈತರು ತಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಿಧಿ ಸಂಗ್ರಹಣೆಯ ಉದ್ದೇಶದಿಂದ ಒಂದಾಗಿ ರಚಿಸಿಕೊಂಡ ಸಂಸ್ಥೆಗಳು ಪ್ರಾಥಮಿಕ ಸಹಕಾರ ಸಂಘಗಳು. ಇವು ತಮ್ಮ ಸದಸ್ಯರ ಸಂಯುಕ್ತ ಸಂಪನ್ಮೂಲಗಳ ಜೊತೆಗೆ ಸದಸ್ಯರ ಮಿತ ಹೊಣೆಗಾರಿಕೆಯ ಮೇಲೆ ಕೇಂದ್ರೀಯ ಸಹಕಾರಿ ಬ್ಯಾಂಕುಗಳಿಂದ ಸಾಲಪಡೆದು ಪ್ರಮಾಣ ಪತ್ರಗಳ ಆಧಾರದ ಮೇಲೆ ಸದಸ್ಯರಿಗೆ ನ್ಯಾಯವಾದ ಬಡ್ಡಿಯ ದರದಲ್ಲಿ ಅಲ್ಪಾವಧಿ ಸಾಲ ಒದಗಿಸುತ್ತವೆ. ಸಾಲ ಪಡೆದವರು ಇದನ್ನು ಸುಲಭ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು.

ಪ್ರಾಥಮಿಕ ಸಹಕಾರ ಸಂಘಗಳ ಒಕ್ಕೂಟವಾಗಿ ಸ್ಥಾಪನೆಯಾಗುವ ಕೇಂದ್ರೀಯ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯಭಾರಗಳೆಂದರೆ ಪ್ರಾಥಮಿಕ ಸಹಕಾರ ಸಂಘಗಳಿಗೆ ಸಾಲ ಒದಗಿಸುವುದು ಮತ್ತು ಅವುಗಳ ವ್ಯವಹಾರ ಪರಿಶೀಲನೆಗೆ ಏರ್ಪಾಟು ಮಾಡುವುದು. ಸಹಕಾರ ಸಂಘಗಳು ಮತ್ತು ಸಾರ್ವಜನಿಕರಿಂದ ಸ್ವೀಕರಿಸುವ ಠೇವಣಿಗಳು ಕೇಂದ್ರೀಯ ಸಹಕಾರಿ ಬ್ಯಾಂಕುಗಳ ಬಂಡವಾಳದ ಮೂಲವಾಗಿರುತ್ತದೆ. ಜೊತೆಗೆ ರಾಜ್ಯ ಸಹಕಾರಿ ಬ್ಯಾಂಕಿನಿಂದ ಅವು ಸಾಲ ಪಡೆಯುತ್ತವೆ.

ರಾಜ್ಯ ಸಹಕಾರಿ ಬ್ಯಾಂಕಿನ ಕಾರ್ಯಭಾರವೆಂದರೆ ಕೇಂದ್ರೀಯ ಸಹಕಾರಿ ಬ್ಯಾಂಕುಗಳಿಗೆ ಬಂಡವಾಳ ಒದಗಿಸುವುದು. ಆ ಮೂಲಕ ಅದು ಪ್ರಾಥಮಿಕ ಸಹಕಾರ ಸಂಘಗಳಿಗೂ ಸಾಲ ಮಂಜೂರು ಮಾಡುವುದುಂಟು. ಸದಸ್ಯ ಸಂಘಗಳಿಂದ ಬರುವ óಷೇರು ಹಣ ರಾಜ್ಯ ಸಹಕಾರಿ ಬ್ಯಾಂಕಿನ ಬಂಡವಾಳದ ಮೂಲ. ಸಾರ್ವಜನಿಕರಿಂದಲೂ ಅದು ಠೇವಣಿ ಸ್ವೀಕರಿಸುತ್ತದೆ. ಅಗತ್ಯವಾದಾಗ ಕೇಂದ್ರೀಯ ಬ್ಯಾಂಕೂ ನೆರವು ನೀಡುತ್ತದೆ.

ಸಹಕಾರಿ ಬ್ಯಾಂಕುಗಳು ಸಣ್ಣ ಕೈಗಾರಿಕೋದ್ಯಮಿಗಳಿಗೂ ಧನಸಹಾಯ ನೀಡುತ್ತವೆ. ಒಟ್ಟಿನಲ್ಲಿ ಕೇವಲ ಪ್ರಾಮಾಣಿಕತೆಯ ಆಧಾರದ ಮೇಲೆ ಬಂಡವಾಳ ಒದಗಿಸುವುದರ ಮೂಲಕ ರೈತರಿಗೆ ಮತ್ತು ಸಣ್ಣ ಕೈಗಾರಿಕೋದ್ಯಮಿಗಳಿಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗಿರುವ ಸಹಕಾರಿ ಬ್ಯಾಂಕುಗಳು ಭಾರತದಂಥ ಕೃಷಿಪ್ರಧಾನ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತ್ವಪೂರ್ಣಪಾತ್ರ ನಿರ್ವಹಿಸುತ್ತವೆ.

ಜಮೀನು ಅಡಮಾನ ಬ್ಯಾಂಕುಗಳು: ಜಮೀನಿನಲ್ಲಿ ಶಾಶ್ವತ ಅಭಿವೃದ್ಧಿಕಾರ್ಯ ಕೈಗೊಳ್ಳುವುದು, ಹೆಚ್ಚು ಭೂಮಿ ಕೊಳ್ಳುವುದು, ಆಧುನಿಕ ಬೇಸಾಯ ವಿಧಾನ ಅಳವಡಿಸಿಕೊಳ್ಳುವುದು; ಹೆಚ್ಚು ಬೆಲೆಯ ಯಂತ್ರೋಪಕರಣ ಕೊಳ್ಳುವುದು ಮುಂತಾದ ದುಬಾರಿ ಕಾರ್ಯಗಳ ನಿರ್ವಹಣೆಗೆ ರೈತರಿಗೆ ದೀರ್ಘಾವಧಿ ಸಾಲದ ಆವಶ್ಯಕತೆ ಇರುತ್ತದೆ. ಸಹಕಾರ ತತ್ತ್ವದ ಪ್ರಕಾರ ದೀರ್ಘಾವಧಿ ಸಾಲ ಒದಗಿಸುವುದು ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಏಕೆಂದರೆ ಸದಸ್ಯರ ವೈಯಕ್ತಿಕ ಆಧಾರದ ಮೇಲೆ ಅಷ್ಟೊಂದು ಮೊತ್ತದ ಹಣವನ್ನು ಕೊಡುವುದು ಮತ್ತು ಬಹಳ ಕಾಲ ಕಾಯ್ದು ಅದನ್ನು ವಸೂಲು ಮಾಡುವುದು ತುಂಬ ತೊಡಕಿನ ಕೆಲಸ ಅಲ್ಲದೆ ಸಾಲ ಪಡೆಯಲು ಬೇಸಾಯಗಾರರು ಅಡವಿಡುವ ಅಸ್ತಿಗಳ ಸ್ವರೂಪ, ಮರುಪಾವತಿಗೆ ಕೇಳುವ ಅವಧಿ ಇವುಗಳಿಂದಾಗಿ ವಾಣಿಜ್ಯ ಬ್ಯಾಂಕುಗಳು ಮೊದಲುಗೊಂಡು ಬೇರೆ ಯಾವ ಬ್ಯಾಂಕುಗಳೂ ಬೇಸಾಯಗಾರರಿಗೆ ದೀರ್ಘಾವಧಿ ಸಾಲ ಒದಗಿಸಬಯಸುವುದಿಲ್ಲ. ಆದ್ದರಿಂದ ಈ ರಿತಿಯ ಸಾಲಗಳನ್ನು ಒದಗಿಸಲು ಪ್ರತ್ಯೇಕ ಬ್ಯಾಂಕು ಇರಬೇಕೆಂಬುದನ್ನು ಮನಗಂಡ ಫ್ರಾನ್ಸ್ ಸರ್ಕಾರ 1852ರಲ್ಲಿ ಇದಕ್ಕೆ ಪ್ರತ್ಯೇಕ ಬ್ಯಾಂಕನ್ನು ಸ್ಥಾಪಿಸಿ ಜಮಿÁ ಅಡಮಾನ ಬ್ಯಾಂಕುಗಳ ಬೆಳವಣಿಗೆಗೆ ಪ್ರವರ್ತನೆ ನೀಡಿತು. ತರುವಾಯ ಜರ್ಮನಿ, ಸ್ಪೇನ್, ಆಸ್ಪ್ರಿಯ, ಹಂಗರಿ, ಜಪಾನ್‍ಗಳಲ್ಲಿ ಅಡಮಾನ ಬ್ಯಾಂಕುಗಳು ಸ್ಥಾಪಿತವಾದುವು. ಇಂಗ್ಲೆಂಡಿನಲ್ಲಿ ಜಮಿÁನು ಅಡಮಾನ ಮಂಡಳಿ ಗಣನೀಯವಾದ ಸೇವೆ ಸಲ್ಲಿಸುತ್ತಿದೆ. ಭಾರತದಲ್ಲಿ 1929ಕ್ಕೆ ಮೊದಲೇ ಈ ಬಗ್ಗೆ ಪ್ರಯತ್ನಗಳು ನಡೆದಿದ್ದುವು. ಮೊತ್ತಮೊದಲನೆಯ ಜಮಿÁನು ಅಡಮಾನ ಬ್ಯಾಂಕನ್ನು ಸ್ಥಾಪಿಸಿದ ಕೀರ್ತಿ ಮದರಾಸ್ ಪ್ರಾಂತ್ಯಕ್ಕೇ ಸಲ್ಲುತ್ತದೆ. 1935ರಲ್ಲಿ ಮುಂಬಯಿ ಪ್ರಾಂತ್ಯ ಮದರಾಸನ್ನು ಅನುಸರಿಸಿತು. ಕ್ರಮೇಣ ದೇಶದ ಇತರ ಭಾಗಿಗಳಲ್ಲಿ ಅಡಮಾನ ಬ್ಯಾಂಕುಗಳು ಸ್ಥಾಪಿತವಾದುವು.

ಜಮೀನು ಅಡಮಾನ ಬ್ಯಾಂಕುಗಳಲ್ಲಿ ಎರಡು ವಿಧ: ನಗರ ಜಮೀನು ಅಡಮಾನ ಬ್ಯಾಂಕುಗಳು, ಗ್ರಾಮೀಣ ಜಮೀನು ಅಡಮಾನ ಬ್ಯಾಂಕುಗಳು. ನಗರ ಜಮೀನು ಅಡಮಾನ ಬ್ಯಾಂಕುಗಳು ಗೃಹನಿರ್ಮಾಣ ಕಾರ್ಯಗಳಿಗೆ ಧನಸಹಾಯ ನೀಡುತ್ತವೆ. ಗ್ರಾಮೀಣ ಜಮೀನು ಅಡಮಾನ ಬ್ಯಾಂಕುಗಳು ಬೇಸಾಯಗಾರರಿಗೆ ಋಣಪರಿಹಾರ ಮತ್ತು ಶಾಶ್ವತ ಅಭಿವೃದ್ಧಿ ಕಾರ್ಯಗಳಿಗಾಗಿ ಜಮಿÁನು ಅಥವಾ ಫಸಲಿನ ಆಧಾರದ ಮೇಲೆ ನ್ಯಾಯವಾದ ಬಡ್ಡಿಯ ದರದಲ್ಲಿ ದೀರ್ಘಾವಧಿ ಸಾಲ ಒದಗಿಸುತ್ತವೆ. ಈ ಬ್ಯಾಂಕುಗಳು ಮುಖ್ಯವಾಗಿ ಷೇರು ಮತ್ತು ಡಿಬೆಂಚರುಗಳನ್ನು ವಿಕ್ರಯ ಮಾಡುವುದರ ಮೂಲಕ ಬಂಡವಾಳ ಸಂಗ್ರಹಿಸುತ್ತವೆ. ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕುಗಳಿಂದಲೂ ಸಹಾಯ ದೊರಕುತ್ತವೆ: ಜೊತೆಗೆ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುತ್ತವೆ.

ಉಳಿತಾಯ ಬ್ಯಾಂಕುಗಳು: ನಿಜವಾದ ಅರ್ಥದಲ್ಲಿ ಉಳಿತಾಯ ಬ್ಯಾಂಕುಗಳು ಎನ್ನುವುದಕ್ಕಿಂತ ಅಲ್ಪ ಹಾಗೂ ಸ್ಥಿರವರಮಾನಗಳವರ ಉಳಿತಾಯದ ಹಣವ್ನನು ಸಂಗ್ರಹಿಸಿ ಜೋಪಾನಪಡಿಸುವುದರ ಮೂಲಕ ಅವರಲ್ಲಿ ಮಿತವ್ಯಯದ ಭಾವನೆಯನ್ನು ಮೂಡಿಸುವ ಸಂಸ್ಥೆಗಳು ಎನ್ನಬಹುದು. ಉಳಿತಾಯ ಬ್ಯಾಂಕುಗಳ ಕಾನೂನು ಮತ್ತು ಕಾರ್ಯಾಚರಣೆಗಳು ದೇಶದಿಂದ ದೇಶಕ್ತಿ ಬೇರೆಬೇರೆಯಾಗಿದ್ದರೂ ಆಸ್ತಿ ಸಂಗ್ರಹಣೆಯ ವಿಧಾನಗಳು ಎಲ್ಲೆಲ್ಲಿಯೂ ಒಂದೆ. ಗ್ರಾಹಕರಿಂದ ಅವು ಪಡೆಯುವ ಠೇವಣಿ ಹಣ ಸಮಾನ್ಯವಾಗಿ ಅವು ಹಿಂತಿರುಗಿಸುವ ಮೊತ್ತಕ್ಕಿಂತ ಅಧಿಕವಾಗಿರುತ್ತದೆ. ಆದ್ದರಿಂದ ಈ ಬ್ಯಾಂಕುಗಳು ತಮ್ಮ ಆಸ್ತಿಯನ್ನೆಲ್ಲ ನಗದಾಗಿ ಇರಿಸಿಕೊಳ್ಳಬೇಕಾದ ಅವಶ್ಯಕತೆಯಿರುವುದಿಲ್ಲ. ಠೇವಣಿಗಳ ಮೇಲೆ ಸಾಧಾರಣವಾದ ಬಡ್ಡಿಯನ್ನು ಕೊಡಲಾಗುತ್ತದೆ. ಹಣದಲ್ಲಿ ಒಂದು ಭಾಗವನ್ನು ಮಾತ್ರ, ವಾರಕ್ಕೆ ಒಂದೆರಡು ಸಾರಿ ಮಾತ್ರ, ಠೇವಣಿದಾರರು ಪಡೆಯುವ ಅವಕಾಶವಿರುತ್ತದೆ. ಉಳಿತಾಯ ಬ್ಯಾಂಕುಗಳು ಸಾರ್ವಜನಿಕರಿಗೆ ಸಾಲ ಕೊಡುವುದಿಲ್ಲ. ಬದಲಾಗಿ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಒದಗಿಸುತ್ತವೆ. ಅವು ಓವರ್ ಡ್ರಾಫ್ಟ್ ಸೌಲಭ್ಯ ನೀಡುವುದಿಲ್ಲ. ಅಮೆರಿಕದಲ್ಲಿ ವಿವಿಧ ರೀತಿಯ ಉಳಿತಾಯ ಬ್ಯಾಂಕುಗಳಿವೆ. ಇಂಗ್ಲೆಂಡಿನಲ್ಲಿ ಅಂಚೆ ಕಛೇರಿಗಳು ಉಳಿತಾಯ ಬ್ಯಾಂಕುಗಳಾಗಿ ಕೆಲಸ ಮಾಡುತ್ತವೆ. ಭಾರತದಲ್ಲೂ ಅಂಚೆ ಕಛೇರಿಗಳು ಈ ಕೆಲಸ ಮಾಡುತ್ತಿವೆ. ವಾಣಿಜ್ಯ ಬ್ಯಾಂಕುಗಳೂ ಈ ಸೌಲಭ್ಯ ನೀಡುತ್ತವೆ. ಭಾರತದಲ್ಲಿ ಪ್ರಸ್ತುತದಲ್ಲಿ ಪ್ರತ್ಯೇಕವಾಗಿ ಉಳಿತಾಯ ಬ್ಯಾಂಕ್ ಎಂಬುದಿಲ್ಲ. ಉಳಿತಾಯ ಖಾತೆಗಳು ಬ್ಯಾಂಕಿಂಗ್ ಸಂಸ್ಥೆಯಲ್ಲಿ ಇವೆ.

ವಿನಿಮಯ ಬ್ಯಾಂಕುಗಳು: ದೇಶ ವಿದೇಶಗಳ ನಡುವಣ ವಿನಿಮಯ ವ್ಯವಹಾರಗಳು ಬಹಳ ತೊಡಕಿನವು. ಬಹಳ ಜಾಣ್ಮೆಯಿಂದ ಇವನ್ನು ನಿರ್ವಹಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ವಿನಿಮಯ ಪದ್ಧತಿ ಅನುಷ್ಠಾನಕ್ಕೆ ಬಂದ ಮೇಲೆ ನಷ್ಟ ಸಾಧ್ಯತೆಗಳು ಬಹಳಮಟ್ಟಿಗೆ ಕಡಿಮೆಯಾಗಿದ್ದರೂ ನಷ್ಟಸಾಧ್ಯತೆಯೂ ಇರುವುದುಂಟು. ಈ ಪದ್ಧಿತಿ ಅನುಷ್ಠಾನಕ್ಕೆ ಬರುವ ಮುಂಚೆ ಸುವರ್ಣ ಪ್ರಮಿತಿ ಮತ್ತು ರಜತ ಪ್ರಮಿತಿಯನ್ನು ಅನುಸರಿಸುತ್ತಿದ್ದ ದೇಶಗಳ ನಡುವಣ ವಿನಿಮಯ ದರಗಳು ಬಹಳ ಏರಿಳಿತಗಳಿಗೆ ಒಳಗಾಗುತ್ತಿದ್ದುವು. ವಿನಿಮಯ ಸಂಬಂಧ ಸಟ್ಟಾವ್ಯಾಪಾರ ಸ್ವರೂಪವಾಗಿರುತ್ತಿತ್ತು. ಈ ಎಲ್ಲ ಕಾರಣಗಳಿಂದ ಸಾಮಾನ್ಯ ವಾಣಿಜ್ಯ ಬ್ಯಾಂಕುಗಳು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವುದು ಕಷ್ಟವಾಗಿತ್ತು. ಪರಿಣಾಮವಾಗಿ ಈ ವಿಶಿಷ್ಟ ಕಾರ್ಯಭಾರ ನಿರ್ವಹಿಸುವ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದುವು. ವಿನಿಮಯ ಬ್ಯಾಂಕುಗಳ ಮುಖ್ಯ ಉದ್ದೇಶ ವಿದೇಶಿ ವ್ಯಾಪಾರಕ್ಕೆ ಧನಸಹಾಯ ನೀಡುವುದು ಮತ್ತು ವಿದೇಶಿ ಸಾಲದ ವ್ಯವಹಾರಗಳನ್ನು ಬಗೆಹರಿಸುವುದು. ಪ್ರಪಂಚಾದ್ಯಂತ ಮುಖ್ಯವಾಗಿ ಪ್ರಮುಖ ವ್ಯಾಪಾರಕೇಂದ್ರಗಳಲ್ಲೆಲ್ಲ ಇವುಗಳ ಶಾಖೆಗಳಿರುತ್ತವೆ. ಅದ್ದರಿಂದ ಇವು ಬೃಹತ್ ಬಂಡವಾಳ ಹೊಂದಿರಬೇಕಾಗುತ್ತದೆ. ವಿನಿಮಯ ಬ್ಯಾಂಕುಗಳು ರಫ್ತು ವ್ಯಾಪಾರಿಗಳಿಂದ ವ್ಯಾಪಾರ ಪತ್ರಗಳನ್ನು ಕೊಂಡು ತಮ್ಮ ಹುಟ್ಟುವಳಿಯನ್ನು ಆಮದು ವ್ಯಾಪಾರಿಗಳಿಗೆ ಮಾರುತ್ತವೆ. ಸಾಮಾನ್ಯವಾಗಿ ರಫ್ತುವ್ಯಾಪಾರಿಗಳು ತಮ್ಮ ಬಹಳಷ್ಟು ರಫ್ತುಗಳಿಗೆ ಆಮದು ವ್ಯಾಪಾರಿಗಳ ಮೇಲೆ ಹುಂಡಿ ಬರೆದುಕೊಡುವುದು ರೂಢಿಯಲ್ಲಿದೆ. ಹುಂಡಿಯ ವಾಯಿದೆಗೆ ಮೊದಲೇ ಹಣ ಬೇಕಾದರೆ ರಫ್ತು ವ್ಯಾಪಾರಿಗಳು ವಿನಿಮಯ ಬ್ಯಾಂಕುಗಳಲ್ಲಿ ಮುರಿದು ಅಥವಾ ಮಾರಿ ಹಣ ಪಡೆಯುತ್ತಾರೆ. ವಿನಿಮಯ ಬ್ಯಾಂಕುಗಳು ರಫ್ತುವ್ಯಾಪಾರಿಗಳಿಂದ ಬಂದ ಹುಂಡಿಗಳನ್ನು ವಾಯಿದೆಯ ದಿನದವರೆಗೆ ಇಟ್ಟುಕೊಳ್ಳಬಹುದು ಅಥವಾ ಅದಕ್ಕೆ ಮೊದಲೆ ವಿದೇಶಗಳಲ್ಲಿ, ವಿಶೇಷವಾಗಿ ಲಂಡನ್ ಮತ್ತು ನ್ಯೂಯಾರ್ಕ್ ಹಣದ ಪೇಟೆಯಲ್ಲಿ ಮಾರಬಹುದು. ತಮ್ಮ ಶಾಖೆಗಳಿಲ್ಲದ ದೇಶಗಳಲ್ಲಿ ತಾವು ನೇಮಿಸಿಕೊಂಡಿರುವ ಅಭಿಕರ್ತೃಗಳ ಮೂಲಕ ಅವು ವ್ಯವಹಾರ ನಡೆಸುತ್ತವೆ. ಶಾಖೆಗಳ ಮತ್ತು ಅಭಿಕರ್ತೃಗಳ ಮೇಲೆ ಅವು ಢ್ರಾಫ್ಟುಗಳನ್ನು ಬರೆದುಕೊಡುತ್ತವೆ. ವಿದೇಶಗಳಿಗೆ ಹಣ ಕಳುಹಿಸಬೇಕಾದಾಗ ಸಂಬಂಧಪಟ್ಟ ಕಕ್ಷಿಗಳಿಗೆ ಡ್ರಾಫ್ಟು ನೀಡಲು ತಮ್ಮ ಶಾಖೆ ಅಥವಾ ಬಾತ್ಮಿದಾರರಿಗೆ ಆದೇಶ ನೀಡುತ್ತವೆ. ಅಮೂಲ್ಯ ಲೋಹಗಳನ್ನು ಮತ್ತು ವಿದೇಶಿ ಸಾಲಪತ್ರಗಳನ್ನು ರಫ್ತು ಅಥವಾ ಅಮದು ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಸಾಲಸೋಲಗಳನ್ನು ಬಗೆಹರಿಸುತ್ತವೆ, ವಾಯಿದೆ ವಿನಿಮಯವನ್ನು ಕೊಂಡು ಮಾರುವುದರ ಮೂಲಕ ಕಾಲಕ್ರಮದಲ್ಲಿ ಉಂಟಾಗುವ ವಿನಿಮಯ ದರಗಳ ಏರುಪೆರುಗಳನ್ನು ಸರಿದೂಗಿಸಿ ವ್ಯಾಪಾರಿಗಳ ನಷ್ಟ ಹೊಣೆಗಾರಿಕೆಯನ್ನು ಹೊರುತ್ತವೆ. ಅನೇಕ ದೇಶಗಳಲ್ಲಿ ವಾಣಿಜ್ಯ ಬ್ಯಾಂಕುಗಳು ಈ ವ್ಯವಹಾರಗಳನ್ನು ನಿರ್ವಹಿಸುತ್ತವೆ.

ಇತರ ಬ್ಯಾಂಕುಗಳು: ಭಾರತದಂಥ ದೇಶದ ಹಣದ ಪೇಟೆಯಲ್ಲಿ ಮೇಲೆ ಚರ್ಚಿಸಿದ ಆಧುನಿಕ ಬ್ಯಾಂಕಿಂಗು ವಲಯದ ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೈಯಕ್ತಿಕ ಬ್ಯಾಂಕರುಗಳಿಂದ ಕೂಡಿದ ಅಸಂಘಟಿತ ಬ್ಯಾಂಕಿಂಗ್ ವಲಯವಿರುತ್ತದೆ. ಲೇವಾದೇವಿ ವ್ಯವಹಾರ ನಡೆಸುವ ಸಾಹುಕಾರರು, ಷರಾಫರು, ಮುಲ್ತಾನಿಗಳು, ಮಾರ್ವಾಡಿಗಳು ಮೊದಲಾದವರು ಇಂಥವರು. ಲಾಭಸಂಪಾದನೆಯೇ ಮುಖ್ಯ ಗುರಿಯಾಗಿರುವ ಇವರ ವ್ಯವಹಾರಗಳು ಅವ್ಯವಸ್ಥಿತ ರೀತಿಯಲ್ಲಿ ಸಾಗುತ್ತವೆ. ಕೃಷಿಪ್ರಧಾನವಾದ ಭಾರತದಲ್ಲಿ ಇಂದಿಗೂ ಆಂತರಿಕ ವಹಿವಾಟುಗಳು ಈ ದೇಶೀಯ ಬ್ಯಾಂಕಗಳ ನೆರವಿನಿಂದ ಸಾಗುತ್ತದೆ. ಈಚೆಗೆ ಇವರ ವ್ಯವಹಾರಗಳಲ್ಲಿ ಸುಧಾರಣೆ ಕಂಡು ಬಂದಿದ್ದರೂ ಇವರು ಸಂಪೂರ್ಣವಾಗಿ ಸಂಘಟಿತರಾಗಿ ಕೇಂದ್ರೀಯ ಬ್ಯಾಂಕಿಂಗಿನ ನಿಯಂತ್ರಣಕ್ಕೆ ಒಳಪಟ್ಟಿಲ್ಲ.

ಕಾಲಕ್ರಮದಲ್ಲಿ ಜನತೆಯ ವಿಶಿಷ್ಟ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಮತ್ತೆ ಕೆಲವು ರೀತಿಯ ಬ್ಯಾಂಕುಗಳು ಸ್ಥಾಪಿತವಾಗಿವೆ. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ವಿವಿಧ ಉಪಯೋಗಗಳ ಬಂಡವಾಳ ವಿತರಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿನಿಯೋಜನ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. ಅಮೆರಿಕದ ಕಾರ್ಮಿಕ ಸಂಘಗಳು ಕಾರ್ಮೀಕ ಉಳಿತಾಯವನ್ನು ಸಂಗ್ರಹಿಸಲು ಕಾರ್ಮಿಕ ಬ್ಯಾಂಕುಗಳನ್ನು ಸಂಘಟಿಸಿವೆ. ಕೆಲವು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಠೇವಣಿ ಸ್ವೀಕರಿಸಿ ಅವರ ಸಣ್ಣ ಪುಟ್ಟ ಅವಶ್ಯಕತೆಗಳನ್ನು ಪೂರೂಸಲು ವಿದ್ಯಾರ್ಥಿ ಬ್ಯಾಂಕುಗಳುಂಟು. ಲಂಡನ್ನಿನ ವ್ಯಾಪಾರಿ ಬ್ಯಾಂಕರುಗಳು ಮತ್ತು ಒಪ್ಪಿಗೆ ಸಂಸ್ಥೆಗಳು ಅಲ್ಲಿಯ ಹಣಕಾಸು ಒಂದು ವಿಶಿಷ್ಟ ರೀತಿಯ ಬೆಳವಣಿಗೆಗಳಾಗಿವೆ. ಭಾರತದಲ್ಲಿ ಗ್ರಾಮಾಂತರ ಪ್ರದೇಶಗಳ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಪ್ರಗತಿಯನ್ನು ಸಾಧಿಸಲು ಗ್ರಾಮೀಣ ಬ್ಯಾಂಕುಗಳನ್ನು ತೆರೆಯಲಾಗಿದೆ. ನಗರಗಳಲ್ಲಿ ಲಾಭಸಂಪಾದನೆಯೇ ಗುರಿಯಾಗುಳ್ಳ ಅನೇಕ ಹಣಕಾಸು ಸಂಸ್ಥೆಗಳು (ಫೈನಾನ್ಸ್ ಕಾರ್ಪೊರೇಷನ್ಸ್) ಇತ್ತೀಚೆಗೆ ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ. (ಕೆ.ಜಿ.ಒ.)

ಬ್ಯಾಂಕ್ : ಹಣಕಾಸಿನಲ್ಲಿ ವ್ಯವಹಾರ ನಡೆಸುವ ಒಂದು ಸಂಸ್ಥೆ. ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಹಣ ಸಾಲಕೊಡುವುದು ಇದರ ಎರಡು ಮುಖ್ಯ ಕಾರ್ಯಭಾರಗಳು. ಈ ವ್ಯವಹಾರದಿಂದಾಗಿ ಬ್ಯಾಂಕು ಉದ್ದರಿ (ಕ್ರೆಡಿಟ್) ನಿರ್ಮಿಸುವ ಶಕ್ತಿ ಪಡೆದುಕೊಳ್ಳುತ್ತದೆ. ಎಂದೇ ಬ್ಯಾಂಕುಗಳನ್ನು ಹಣವಿತರಕ ಸಂಸ್ಥೆಯೆಂದು ಕರೆಯಲಾಗಿದೆ.

ವಾಣಿಜ್ಯ ಪ್ರಪಂಚದಲ್ಲಿ ಬ್ಯಾಂಕುಗಳು ಮಹತ್ತ್ವದ ಪಾತ್ರ ವಹಿಸುತ್ತವೆ. ಅವುಗಳ ಚಟುವಟಿಕೆಗಳ ವ್ಯಾಪ್ತಿ ಮತ್ತು ಪ್ರಯೋಜನ ದಿನೇದಿನೇ ಹೆಚ್ಚುತ್ತಿವೆ. ವ್ಯಾಪಾರ ಮತ್ತು ಅದರ ಸಂಬಂಧಿ ಚಟುವಟಿಕೆಗಳ ಮೇಲೆ ಬ್ಯಾಂಕಿನ ಪ್ರಭಾವ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ಅದು ತನ್ನ ಗ್ರಾಹಕರ ಮಿತ್ರ, ತತ್ತ್ವಜ್ಞಾನಿ ಮತ್ತು ಮಾರ್ಗದರ್ಶನ ಎನಿಸಿದೆ.

ಬ್ಯಾಂಕಿನಲ್ಲಿ ಖಾತೆಯೊಂದನ್ನು ತೆರೆಯುವುದರ ಮೂಲಕ ಯಾರಾದರೂ ಅದರ ಗ್ರಾಹಕರಾಗಬಹುದು. ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಹಣ ಸಾಲ ಕೊಡುವುದು ಈ ಮುಖ್ಯ ಕಾರ್ಯಭಾರಗಳ ಜೊತೆಗೆ ನೋಟುಗಳನ್ನು ಹೊರಡಿಸುವುದೂ ಬ್ಯಾಂಕಿನ ವ್ಯವಹಾರದಲ್ಲಿ ಸೇರಿದೆ. ಆದರೆ ಎಲ್ಲ ಬ್ಯಾಂಕುಗಳೂ ನೋಟುಗಳನ್ನು ಹೊರಡಿಸಲಾರವು. ಒಂದು ದೇಶದ ಕೇಂದ್ರೀಯ ಬ್ಯಾಂಕಿಗೆ ಸಾಮಾನ್ಯವಾಗಿ ಈ ಅಧಿಕಾರ ಕೊಡಲಾಗಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಮಾತ್ರ ನೋಟುಗಳನ್ನು ಹೊರಡಿಸುವ ಅಧಿಕಾರ ಪಡೆದಿದೆ. ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಠೇವಣಿಗಳನ್ನು ಪಡೆದುಕೊಂಡು ಸ್ವಲ್ಪ ಹೆಚ್ಚಿನ ದರದಲ್ಲಿ ಹಣ ಸಾಲ ಕೊಡುತ್ತದೆ. ಬ್ಯಾಂಕುಗಳು ಜಡವಾಗಿ ಬಿದ್ದ ಹಣವನ್ನು ಸಂಗ್ರಹಿಸುತ್ತ ಬೇರೆ ಬೇರೆ ಉದ್ಯಮಗಳಲ್ಲಿ ಹಣತೊಡಗಿಸಬಯಸುವವರಿಗೆ ಸಾಲ ನೀಡುತ್ತವೆ. ಹೀಗೆ ಬ್ಯಾಂಕುಗಳು ಹಣವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುತ್ತದೆ.

ಸುರಕ್ಷಿತವಾಗಿ ಇಡಬೇಕಾದ ಹಣ ಇರುವ ವ್ಯಕ್ತಿಗಳು ಅದನ್ನು ಬ್ಯಾಂಕಿನಲ್ಲಿ ಠೇವಣಿ ಇಡಬಹುದು ಅವರ ಹಣ ಭದ್ರವಾಗಿ ಇರುವುದು ಮಾತ್ರವಲ್ಲದೆ ಅದು ಅವರಿಗೆ ಬಡ್ಡಿಯ ರೂಪದಲ್ಲಿ ವರಮಾನವನ್ನು ಸಹ ತಂದುಕೊಡುತ್ತದೆ. ಆಭರಣ, ಚಿನ್ನ, ಬೆಳ್ಳಿ, ಮಹತ್ತ್ವದ ಕಾಗದ ಪತ್ರಗಳು ಮುಂತಾದುವನ್ನು ಬ್ಯಾಂಕುಗಳ ಭದ್ರಸುಪರ್ದಿನಲ್ಲಿಡಬಹುದು. ಹೀಗೆ ಬ್ಯಾಂಕು ಹಣ ಮತ್ತು ಇತರ ಅಮೂಲ್ಯ ವಸ್ತುಗಳ ರಕ್ಷಣೆಯ ಕೆಲಸ ಮಾಡುತ್ತದೆ.

ಇತರ ಸಾಧನಗಳಿಂದ ಹಣ ರವಾನಿಸುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹಣದ ರವಾನೆ ಮಾಡುವ ಕೆಲಸವನ್ನು ಬ್ಯಾಂಕು ನಿರ್ವಹಿಸುತ್ತದೆ. ಪದೇಪದೇ ಹಣ ರವಾನಿಸಬೇಕಾದ ವರ್ತಕರೇ ಮುಂತಾದವರಿಗೆ ಇದು ಬಹಳ ಉಪಯುಕ್ತವಾಗಿದೆ.

ವ್ಯವಹಾರೋದ್ದೇಶದಿಂದ ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ಮಾಡುವ ವರ್ತಕರು ತಮ್ಮೊಂದಿಗೆ ಹಣ ಕೊಂಡೊಯ್ಯುವುದು ಸುರಕ್ಷಿತವಲ್ಲ. ಅವರು ಬ್ಯಾಂಕಿಗೆ ತಮ್ಮ ಹಣ ಒಪ್ಪಿಸಿ ಉದ್ದರಿ ಪತ್ರವನ್ನೋ ಪ್ರಯಾಣಿಕರ ಚೆಕ್ಕನ್ನೋ ಪಡೆಯಬಹುದು. ಈ ಪತ್ರವನ್ನು ಅಥವಾ ಚೆಕ್ಕನ್ನು ಬೇಕಾದ ಸ್ಥಳದಲ್ಲಿ ಆ ಬ್ಯಾಂಕಿನ ಅಭಿಕರ್ತೃ ಅಥವಾ ಶಾಖೆಗೆ ಅಥವಾ ಇನ್ನೊಂದು ಬ್ಯಾಂಕಿಗೆ ಸಾದರಪಡಿಸಿ ಅದರಿಂದ ಹಣ ಪಡೆಯಬಹುದು.

ಕೆಲವು ವ್ಯವಹಾರಗಳಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಜಾಮೀನಾಗಿ ಅವರ ಪ್ರತ್ಯಯವನ್ನು ಹೆಚ್ಚಿಸುತ್ತವೆ.

ವರ್ತಕರು ಸರಕು ವಿಕ್ರಯಮಾಡಿದಾಗ ಖರೀದಿದಾರನ ಸ್ಥಳಕ್ಕೆ ಅದನ್ನು ರವಾನೆ ಮಾಡಲು ರೈಲ್ವೆಗೆ ಅದನ್ನು ಒಪ್ಪಿಸಿ ಪಡೆದ ರೈಲ್ವೆ ರಸೀದಿಯನ್ನು ಖರೀದಿದಾರನಿಗೆ ಬ್ಯಾಂಕಿನ ಮುಖಾಂತರ ಕಳುಹಿಸುವುದುಂಟು. ಬ್ಯಾಂಕು ಖರೀದಿದಾರನಿಂದ ಸರಕಿನ ಹಣ ಪಡೆದುಕೊಂಡು ಅವನಿಗೆ ಆ ರಸೀದಿ ತಲುಪಿಸುವ ಏರ್ಪಾಡು ಮಾಡುತ್ತವೆ. ಹೀಗೆ ಸರಕಿನ ಹಣ ತನ್ನ ಕೈಸೇರುವ ಭರವಸೆ ವಿಕ್ರಯದಾರನಿಗೆ ಇರುತ್ತದೆ.

ಬ್ಯಾಂಕು ತನ್ನ ಗ್ರಾಹಕರ ಅಭಿಕರ್ತೃವಿನಂತೆ ಕೆಲಸ ಮಾಡುತ್ತದೆ. ಗ್ರಾಹಕ ನೀಡಿದ ಚೆಕ್ಕಿನ ಮೇಲೆ ಬ್ಯಾಂಕು ಅದರಲ್ಲಿಯ ಆದೇಶದಂತೆ ಹಣ ಸಂದಾಯ ಮಾಡುತ್ತದೆ. ಗ್ರಾಹಕರು ಬೇರೆಯವರಿಂದ ಪಡೆದ ಚೆಕ್ಕುಗಳ ಮೊಬಲಗನ್ನು ಗ್ರಾಹಕರ ಪರವಾಗಿ ಆಯಾ ಬ್ಯಾಂಕುಗಳಿಂದ ವಸೂಲು ಮಾಡುತ್ತದೆ, ಬ್ಯಾಂಕು ತನ್ನ ಗ್ರಾಹಕರ ಸೂಚನೆಗಳಿಗೆ ಅನುಸಾರವಾಗಿ ತೆರಿಗೆಗಳನ್ನೂ ವಿಮಾಕಂತುಗಳನ್ನೂ ಇತರ ನಿಯತಕಾಲಿಕ ಪಾವತಿಗಳನ್ನೂ ಮಾಡುತ್ತದೆ. ಗ್ರಾಹಕರಿಗೆ ಬರಬೇಕಾದ ಬಡ್ಡಿ ಲಾಭಾಂಶ (ಡಿವಿಡೆಂಡ್) ಮುಂತಾದವನ್ನು ಪ್ರಾಪ್ತಕಾಲದಲ್ಲಿ ವಸೂಲು ಮಾಡಿ ಅವರ ಲೆಕ್ಕಗಳಿಗೆ ಧನಿಸುತ್ತದೆ.

ವರ್ತಕರು ಸರಕುಗಳನ್ನು ಸಾಲದ ಮೇಲೆ ಬಿಕರಿಮಾಡಿ ಹಣವನ್ನು ಪಾವತಿ ಮಾಡಲು ಖರೀದಿದಾರರಿಗೆ ಸ್ವಲ್ಪ ಕಾಲಾವಕಾಶ ನೀಡುವುದುಂಟು. ಇಂಥ ಸಂದರ್ಭದಲ್ಲಿ ಬಿಕರಿದಾರ ಖರೀದಿದಾರನಿಗೆ ಪತ್ರ ಬರೆದು, ಒಂದು ನಿಶ್ಚಿತ ಅವಧಿಯ ಅನಂತರ ಒಂದು ನಿಶ್ಚಿತ ಮೊಬಲಗಳನ್ನು ತನಗೆ ತನ್ನ ಆದೇಶದಂತೆ ಅಥವಾ ಆ ಪತ್ರ ವಾಹಕನಿಗೆ ಪಾವತಿ ಮಾಡಬೇಕೆಂದು ಆದೇಶ ನೀಡಬಹುದು. ಆ ಪತ್ರÀಕ್ಕೆ ಹುಂಡಿ ಎಂದು ಹೆಸರು. ಖರೀದಿದಾರ ಅದಕ್ಕೆ ಒಪ್ಪಿ ಸಹಿ ಮಾಡಿ ಪತ್ರ ಹಿಂದಿರುಗಿಸುತ್ತಾನೆ. ಸರಕಿನ ಬಿಕರಿದಾರನಿಗೆ ಆ ಪತ್ರದಲ್ಲಿ ನಮೂದಿಸಲಾದ ಅವಧಿ ಪೂರೈಸುವುದಕ್ಕೆ ಮುಂಚೆಯೇ ಹಣ ಬೇಕಾಗಿದ್ದರೆ ಅದನ್ನು ಬ್ಯಾಂಕಿಗೆ ಒಪ್ಪಿಸಬಹುದು. ಬ್ಯಾಂಕು ಅದರ ಮೊಬಲಗಿನ ಅಲ್ಪಾಂಶ ಕಳೆದು ಉಳಿದ ಮೊಬಲಗನ್ನು ವರ್ತಕನಿಗೆ ಪಾವತಿ ಮಾಡುತ್ತದೆ. ಇದು ಹುಂಡಿಯ ವಟಾವಣೆ ಎನಿಸುತ್ತದೆ. ಹೀಗೆ ಹುಂಡಿ ವ್ಯವಸ್ಥೆಯ ಮೂಲಕ ಖರೀದಿದಾರನಿಗೆ ಸಾಕಷ್ಟು ಕಾಲಾವಕಾಶವೂ ಬಿಕರಿದಾರನಿಗೆ ಕೂಡಲೇ ಹಣದ ಪ್ರಾಪ್ತಿಯೂ ಒದಗುತ್ತವೆ. ಇದನ್ನು ಆಗಮಾಡಿಸುವುದು ಬ್ಯಾಂಕು.

ವರ್ತಕರು ದಾಸ್ತಾನು ಮಾಡಿದ ಸರಕುಗಳ ಆಧಾರದ ಮೇಲೆ ಬ್ಯಾಂಕುಗಳು ಅವರಿಗೆ ಹಣ ಸಾಲ ನೀಡುತ್ತವೆ. ವಿದೇಶಿ ವ್ಯಾಪಾರಗಳಲ್ಲಿ ಅನ್ಯ ದೇಶೀಯರಿಗೆ ನೀಡಬೇಕಾಗುವ ವಿದೇಶಿ ಹಣವನ್ನು ಒದಗಿಸುವ ಕೆಲಸವನ್ನೂ ಬ್ಯಾಂಕುಗಳು ಮಾಡುತ್ತವೆ. ಈ ವ್ಯವಹಾರಕ್ಕಾಗಿಯೇ ವಿಶಿಷ್ಟವಾದ ಬ್ಯಾಂಕುಗಳಿರುವುದುಂಟು.

ಬ್ಯಾಂಕುಗಳಲ್ಲಿ ನಾನಾ ಬಗೆಗಳಿವೆ. ಅಂದರೆ, ವಾಣಿಜ್ಯ ಅಥವಾ ಕೂಡು ಬಂಡವಾಳ ಬ್ಯಾಂಕುಗಳು, ವಿನಿಯೋಜನ ಬ್ಯಾಂಕುಗಳು, ಕೈಗಾರಿಕಾ ಬ್ಯಾಂಕುಗಳು, ಉಳಿತಾಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಇವು ಕೆಲವು ಬಗೆಗಳು. ಪ್ರತಿಯೊಂದು ಬ್ಯಾಂಕಿಗೂ ಅದರದೇ ಆದ ನಿರ್ದಿಷ್ಟ ಕಾರ್ಯಭಾರಗಳಿರುತ್ತವೆ. ಬ್ಯಾಂಕುಗಳು ದೇಶದ ಹಣದ ಪೇಟೆಯ ಮುಖ್ಯ ಅಂಗವಾಗಿವೆ. ಇವುಗಳ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ಹತೋಟಿ ಏರ್ಪಡಿಸುವ ಪ್ರವೃತ್ತಿ ಈಚೆಗೆ ಪ್ರಪಂಚಾದ್ಯಂತ ಕಂಡುಬರುತ್ತಿದೆ. ಅನೇಕ ದೇಶಗಳಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಗಿದೆ. ಅವು ಸರ್ಕಾರದ ಒಡೆತನದಲ್ಲೋ ಸರ್ಕಾರದಿಂದ ಪ್ರವರ್ತಿತವಾಗಿಯೋ ಇರುತ್ತವೆ. ಕೇಂದ್ರೀಯ ಬ್ಯಾಂಕಿನ ಮೂಲಕ ಪರಿಣಾಮಕಾರಿ ವಿತ್ತೀಯ ಹಾಗೂ ಹಣ ನೀತಿಯನ್ನು ರೂಪಿಸಬಯಸುವ ಉದ್ದೇಶದಿಂದ ಸರ್ಕಾರ ಹೀಗೆ ಮಾಡುವುದು ಸಾಮಾನ್ಯವಾಗಿದೆ. (ಸಿ.ಸಿ.ಪಿ.)

ಬ್ಯಾಂಕ್ ದರ : ಸದಸ್ಯ ಬ್ಯಾಂಕುಗಳು ಹಾಗೂ ಪ್ರತ್ಯಯವುಳ್ಳ ಸಂಸ್ಥೆಗಳು ತರುವ ಪ್ರಥಮ ದರ್ಜೆಯ ಹುಂಡಿಗಳ ಮರುವಟಾವಣೆಗೆ ಕೇಂದ್ರೀಯ ಬ್ಯಾಂಕು ವಿಧಿಸುವ ಬಡ್ಡಿಯ ದರ (ಬ್ಯಾಂಕ್ ರೇಟ್). ಇದನ್ನು ವಟ್ಟದ ದರ ಎಂದೂ ಕರೆಯಲಾಗಿದೆ. ಸರ್ಕಾರಿ ಮತ್ತು ಇತರ ಸಾಲಪತ್ರಗಳ ಆಧಾರದ ಮೇಲೆ ಕೇಂದ್ರೀಯ ಬ್ಯಾಂಕು ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿಯ ದರವೂ ಬ್ಯಾಂಕ್ ದರವೇ. ಹಣದ ಪೇಟೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಮತ್ತು ವಟ್ಟದ ಅಂಗಡಿಗಳು ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿಯ ದರವನ್ನು ಪೇಟೆಯ ಬಡ್ಡಿಯ ದರ ಎಂದು ಕರೆಯಲಾಗಿದೆ. ಕೇಂದ್ರೀಯ ಬ್ಯಾಂಕು ಆಪತ್ಕಾಲದಲ್ಲಿ ಸಾಲ ನೀಡುವುದರಿಂದ ಅದು ವಿಧಿಸುವ ಬಡ್ಡಿಯ ದರ ಪೇಟೆಯ ಬಡ್ಡಿಯದರಕ್ಕಿಂತ ಹೆಚ್ಚಾಗಿರುತ್ತದೆ.

ಇಂಗ್ಲೆಂಡ್, ಅಮೆರಿಕ ಮೊದಲಾದ ಮುಂದುವರಿದ ದೇಶಗಳ ಸುವ್ಯವಸ್ಥಿತ ಹಣ ಪೇಟೆಯಲ್ಲಿ ಬ್ಯಾಂಕ್ ದರಕ್ಕೂ ಪೇಟೆ ಬಡ್ಡಿ ದರಕ್ಕೂ ನಿಕಟ ಸಂಬಂಧವಿರುತ್ತದೆ. ಎಲ್ಲ ರೀತಿಯ ಪೇಟೆ ಬಡ್ಡಿ ದರಗಳು ಬ್ಯಾಂಕ್ ದರದ ಚಲನೆಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತಿರುತ್ತವೆ. ಇಂಗ್ಲೆಂಡಿನಲ್ಲಂತೂ ಈ ಸಂಬಂಧ ಸಾಂಪ್ರದಾಯಿಕವಾಗಿ ಬೆಳೆದುಬಂದಿದೆ. ತದ್ವಿರುದ್ಧವಾಗಿ ಭಾರತದಲ್ಲಿ ಹಣದ ಪೇಟೆ ಅಷ್ಟು ವ್ಯವಸ್ಥಿತವಲ್ಲ. ಇಲ್ಲಿ ಈ ಸಂಬಂಧ ಅಷ್ಟೊಂದು ನಿಕಟವಾಗಿರುವುದಿಲ್ಲ. ಬ್ಯಾಂಕ್ ದರ ಮತ್ತು ಪೇಟೆಯ ದರಗಳ ನಡುವೆ ಸಂಬಂಧವೇ ಇರದಿದ್ದ ಪಕ್ಷದಲ್ಲಿ ಬ್ಯಾಂಕ್ ದರವನ್ನು ಉದ್ದರಿ ನಿಯಂತ್ರಣದ ಸಾಧನವಾಗಿ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಂಕ್ ದರವನ್ನು ಉದ್ದರಿ ನಿಯಂತ್ರಣ ಸಾಧನವಾಗಿ 1837ರಲ್ಲಿ ಪ್ರಥಮ ಬಾರಿಗೆ ಪ್ರಯೋಗಿಸಿದ ಸಂಸ್ಥೆ ಬ್ಯಾಂಕ್ ಆಫ್ ಇಂಗ್ಲೆಂಡ್. 1857ರಲ್ಲಿ ಬ್ಯಾಂಕ್ ಆಫ್ ಫ್ರಾನ್ಸ್ ಇದನ್ನು ಅನುಸರಿಸಿತು. ಹೀಗಾಗಿ 19ನೆಯ ಶತಮಾನದ ಮಧ್ಯಭಾಗದ ವೇಳೆಗೆ ಎಲ್ಲೆಡೆಗಳಲ್ಲೂ ಈ ಬಗ್ಗೆ ಚರ್ಚೆ ಪ್ರಾರಂಬವಾಯಿತು. ಕ್ರಮೇಣ ಪ್ರಪಂಚದ ಎಲ್ಲ ಕೇಂದ್ರೀಯ ಬ್ಯಾಂಕುಗಳೂ ಈ ಸಾಧನ ಬಳಸಲಾರಂಬಿಸಿದುವು. ಹೀಗೆ ಉದ್ದರಿ ನಿಯಂತ್ರಣ ಸಾಧನಗಳ ಪೈಕಿ ಬ್ಯಾಂಕ್ ದರ ಪ್ರಾಚೀನವಾದ್ದಾಗಿದೆ.

ಬ್ಯಾಂಕ್ ದರದ ತತ್ತ್ವ : ಸುವ್ಯವಸ್ಥಿತ ಹಣದ ಪೇಟೆಯಲ್ಲಿ ಬ್ಯಾಂಕ್ ದರ ಮತ್ತು ಪೇಟೆ ದರಗಳ ನಡುವೆ ನಿಕಟವಾದ ಸಂಬಂಧವಿದ್ದು ಅವು ಏಕಮುಖವಾಗಿ ಬದಲಾವಣೆ ಹೊಂದುತ್ತವೆ. ಇಂಗ್ಲೆಂಡಿನ ಪಂಚ ಮಹಾ ವಾಣಿಜ್ಯ ಬ್ಯಾಂಕುಗಳು ಠೇವಣಿದಾರರಿಗೆ ನೀಡುವ ಬಡ್ಡಿ ದರವನ್ನು ಬ್ಯಾಂಕ್ ದರಕ್ಕಿಂತ ಶೇಕಡಾ 1ಳಿಯಿಂದ 2ರಷ್ಟು ಕಡಿಮೆ ಇರುವಂತೆ ನಿರ್ಣಯಿಸುತ್ತವೆ. ಕೈಸಾಲದ ಬಡ್ಡಿ ದರ ಠೇವಣಿ ಬಡ್ಡಿ ದರಕ್ಕಿಂತ ಶೇಕಡಾ ಳಿ ದಷ್ಟು ಹೆಚ್ಚಾಗಿರುತ್ತದೆ. ಮುಂಗಡಗಳಿಗೆ ವಿಧಿಸುವ ದರ ಬ್ಯಾಂಕ್ ದರಕ್ಕಿಂತ ಶೇಕಡಾ 1ಳಿಯಷ್ಟು ಹೆಚ್ಚಾಗಿರುತ್ತದೆ. ಹೀಗೆ ಇಂಗ್ಲೆಂಡಿನಲ್ಲಿ ಬ್ಯಾಂಕ್ ದರ ಸಾಲದ ವ್ಯವಸ್ಥೆಯ ಭಾರಮಾಪಕದಂತೆ ಕೆಲಸಮಾಡುತ್ತದೆ. ತಾತ್ವ್ತಿಕವಾಗಿ ಬ್ಯಾಂಕ್ ದರ ವ್ಯತ್ಯಾಸವಾದ ಹಾಗೆ ಇತರ ಸ್ಥಳೀಯ ಬಡ್ಡಿ ದರಗಳೂ ವ್ಯತ್ಯಾಸಗೊಳ್ಳುತ್ತವೆ. ಬ್ಯಾಂಕ್ ದರ ಹೆಚ್ಚಾದರೆ ಇತರ ಬಡ್ಡಿ ದರಗಳೂ ಹೆಚ್ಚಾಗುತ್ತವೆ. ಇಳಿದರೆ ಇತರ ಬಡ್ಡಿ ದರಗಳೂ ಇಳಿಯುತ್ತವೆ. ಈ ದರಗಳ ಏರಿಳಿತಗಳ ಪರಿಣಾಮವಾಗಿ ಸಾಲದ ಹಣದ ಬೇಡಿಕೆ ಪೂರೈಕೆಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ, ಬ್ಯಾಂಕ್ ದರದ ಏರಿಕೆಯ ಪರಿಣಾಮವಾಗಿ ಇತರ ಬಡ್ಡಿ ದರಗಳು ಏರುವುದರಿಂದ ಸಾಲದ ಹಣಕ್ಕೆ ಬೇಡಿಕೆ ಕಡಿಮೆಯಾಗುತ್ತದೆ. ಬ್ಯಾಂಕ್ ದರದ ಇಳಿಕೆಯ ಪರಿಣಾಮವಾಗಿ ಇತರ ಬಡ್ಡಿದರಗಳೂ ಇಳಿಯುವುದರಿಂದ ಸಾಲದ ಹಣಕ್ಕೆ ಬೇಡಿಕೆ ಹೆಚ್ಚಾಗುತ್ತದೆ.

ಉದ್ದರಿಯ ವೆಚ್ಚ ಮತ್ತು ಪರಿಮಾಣ ಇವೆರಡರ ಮೇಲೂ ಬ್ಯಾಂಕ್ ದರ ಪರಿಣಾಮ ಬೀರುತ್ತದೆ. ಹಣದ ಉಬ್ಬರದ ಪರಿಸ್ಥಿತಿಯಲ್ಲಿ, ಎಂದರೆ ಬೆಲೆಗಳು ಒಂದೇ ಸಮವಾಗಿ ಏರುತ್ತಿರುವ ಸನ್ನಿವೇಶದಲ್ಲಿ, ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಬ್ಯಾಂಕ್‍ಗಳು ಒದಗಿಸುವ ಉದ್ದರಿ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ನಿರ್ಧರಿಸುವ ಒಂದು ಅಂಶವಾಗಿರುವುದರಿಂದ ಅದನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿಟ್ಟುಕೊಳ್ಳುವುದರ ಮೂಲಕ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಬ್ಯಾಂಕ್ ತನ್ನ ದರದ ಏರಿಳಿತಗಳಿಗೆ ಕೇಂದ್ರೀಯ ಬ್ಯಾಂಕ್‍ನ ನೀತಿಯನ್ನು ಅನುಸರಿಸುತ್ತಿದೆ. ಬ್ಯಾಂಕ್ ದರ ಹೆಚ್ಚಾದಾಗ ಕೇಂದ್ರೀಯ ಬ್ಯಾಂಕಿನಿಂದ ಪಡೆಯುವ ಸಾಲಕ್ಕೆ ವಾಣಿಜ್ಯ ಬ್ಯಾಂಕುಗಳು ಕೊಡುವ ಬಡ್ಡಿದರ ಹೆಚ್ಚಾಗುತ್ತದೆ; ಮತ್ತು ವಾಣಿಜ್ಯ ಬ್ಯಾಂಕುಗಳು ತಾವು ಕೊಡುವ ಸಾಲದ ಮೇಲಿನ ಬಡ್ಡಿಯ ದರವನ್ನೂ ಹೆಚ್ಚಿಸಬೇಕಾಗುತ್ತದೆ. ಹೀಗೆ ಸಾಲದ ವೆಚ್ಚ, ಎಂದರೆ ಬಡ್ಡಿಯ ದರ, ಹೆಚ್ಚಾಗುವುದರಿಂದ ಸಾಲಕ್ಕೆ ಬೇಡಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ತಗ್ಗಿಸಿದಂತಾಗುತ್ತದೆ. ಹಣದ ಪರಿಮಾಣ ಕಡಿಮೆಯಾದಂತೆ ಬೆಲೆಗಳು ಇಳಿಯತೊಡಗುತ್ತವೆ. ವಾಣಿಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಯ ಸಾಮಥ್ರ್ಯ ಅವು ಕೇಂದ್ರೀಯ ಬ್ಯಾಂಕಿನಿಂದ ಪಡೆಯುವ ಸಾಲದ ಪರಿಮಾಣವನ್ನು ಅವಲಂಬಿಸಿರುವುದರಿಂದ ಬ್ಯಾಂಕ್‍ದರ ಹೆಚ್ಚಾದಾಗ ವಾಣಿಜ್ಯ ಬ್ಯಾಂಕುಗಳಿಂದ ಸಾಲ ದೊರಕುವುದು ಕಡಿಮೆಯಾಗುತ್ತದೆ. ಹೀಗೆ ಬ್ಯಾಂಕ್ ದರದ ಏರಿಕೆಯ ಪರಿಣಾಮವಾಗಿ ಸಾಲದ ವೆಚ್ಚ ಹೆಚ್ಚಾಗಿ ಅದರ ಪರಿಮಾಣ ಕಡಿಮೆಯಾಗುತ್ತದೆ.

ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರೀಯ ಬ್ಯಾಂಕ್ ಚಲಾವಣೆಯಲ್ಲಿರುವ ಹಣದ ಪರಿಮಾಣ ಹೆಚ್ಚಿಸಿ ಬೆಲೆಗಳ ಇಳಿಯುವ ಪ್ರವೃತ್ತಿ ತಡೆಗಟ್ಟಲು ಯತ್ನಿಸಬಹುದು. ವಾಣಿಜ್ಯ ಬ್ಯಾಂಕುಗಳ ಉದ್ದರಿ ಸೃಷ್ಟಿಯ ಸಾಮಥ್ರ್ಯವನ್ನು ತೀವ್ರಗೊಳಿಸುವುದರ ಮೂಲಕ ಚಲಾವಣೆಯ ಹಣದ ಪರಿಮಾಣ ಹೆಚ್ಚಿಸಬಹುದು. ಇದಕ್ಕಾಗಿ ಕೇಂದ್ರೀಯ ಬ್ಯಾಂಕುದರವನ್ನು ಇಳಿಸುವ ನೀತಿ ಅನುಸರಿಸುತ್ತದೆ ಎಂದರೆ ಹಣವನ್ನು ಅಗ್ಗವಾಗಿ ಮಾಡುತ್ತದೆ. ಕೇಂದ್ರೀಯ ಬ್ಯಾಂಕಿನಿಂದ ಪಡೆಯುವ ಸಾಲಕ್ಕೆ ವಾಣಿಜ್ಯ ಬ್ಯಾಂಕುಗಳು ಕೊಡಬೇಕಾದ ಬಡ್ಡಿಯ ದರ ಕಡಿಮೆಯಾಗಿ, ಅವು ಕೊಡುವ ಸಾಲದ ಮೇಲಿನ ಬಡ್ಡಿಯನ್ನೂ ಕಡಿಮೆ ಮಾಡುತ್ತವೆ. ಸಾಲದ ವೆಚ್ಚ ಕಡಿಮೆ ಆಗುವುದರಿಂದ ಸಾಲಕ್ಕೆ ಬೇಡಿಕೆ ಹೆಚ್ಚಿ ವಾಣಿಜ್ಯ ಬ್ಯಾಂಕುಗಳ ಉದ್ದರಿ ಕಾರ್ಯ ತೀವ್ರಗೊಳ್ಳುತ್ತದೆ. ಪರಿಣಾಮವಾಗಿ ಚಲಾವಣೆಯ ಹಣದ ಪರಿಮಾಣ ಅಧಿಕವಾಗಿ ಬೆಲೆಗಳು ಏರತೊಡಗುತ್ತವೆ.

ಬ್ಯಾಂಕ್ ದರದ ಕ್ರಿಯಾವಿಧಾನ : ಬ್ಯಾಂಕ್ ದರದ ಏರಿಕೆ ಇಳಿಕೆಗಳು ಉದ್ದರಿ ಹಣದ ಪರಿಮಾಣ, ಆರ್ಥಿಕ ಚಟುವಟಿಕೆಗಳು ಮತ್ತು ಧಾರಣೆವಾಸಿಗಳ ಮೇಲೆ ಪರಿಣಾಮ ಬೀರುವ ರೀತಿಯ ಬಗ್ಗೆ ಎರಡು ಬಗೆಯ ವಾದಸರಣಿಗಳು ಮಂಡಿತವಾಗಿವೆ. ಒಂದು ಹಾಟ್ರೆಯ ವಾದಸರಣಿ. ಇನ್ನೊಂದು ಕೇನ್ಸನ ವಾದಸರಣಿ.

ಹಾಟ್ರೆಯ ವಾದಸರಣಿ: ಆರ್. ಜಿ. ಹಾಟ್ರೆಯ ಪ್ರಕಾರ ಬ್ಯಾಂಕ್ ದರದ ಬದಲಾವಣೆಗಳು ಪರಿಣಾಮಕಾರಿಯಾಗುವುದು ಅಲ್ಪಾವಧಿ ಬಡ್ಡಿ ದರಗಳಲ್ಲಿ ಉಂಟಾಗುವ ಬದಲಾವಣೆಗಳ ಮೂಲಕ. ಹಣ ಉಬ್ಬರದ ಪರಿಸ್ಥಿತಿಯಲ್ಲಿ ಕೇಂದ್ರೀಯ ಬ್ಯಾಂಕು ತನ್ನ ದರ ಹೆಚ್ಚಿಸಿದಾಗ ಅದಕ್ಕೆ ಅನುಸಾರವಾಗಿ ಅಲ್ಪಾವಧಿ ಬಡ್ಡಿ ದರಗಳು ತತ್ ಕ್ಷಣ ಹೆಚ್ಚಾಗುತ್ತವೆ. ಇದರಿಂದ ಬ್ಯಾಂಕ್ ಸಾಲ ತುಟ್ಟಿಯಾಗುತ್ತದೆ. ವರ್ತಕರು ಬ್ಯಾಂಕ್ ಸಾಲಗಳಿಂದ ವ್ಯವಹಾರ ನಡೆಸುವವರಾಗಿರುತ್ತಾರೆ. ಸಾಲದ ವೆಚ್ಚ ಹೆಚ್ಚಾಗುವುದರಿಂದ ಅವರ ಲಾಭಾಂಶ ಕಡಿಮೆ ಆಗುತ್ತದೆ. ಆದ ಕಾರಣ ಸಾಲ ತೆಗೆದುಕೊಳ್ಳುವುದನ್ನು ಕಡಿಮೆಮಾಡಿ ತಮ್ಮ ವ್ಯವಹಾರಗಳನ್ನು ಮೊಟಕುಗೊಳಿಸುತ್ತಾರೆ. ಸರಕನ್ನು ಆದಷ್ಟು ಬೇಗ ಮಾರಿ ನಗದು ಪಡೆದು ಆದರಿಂದ ಬ್ಯಾಂಕ್ ಸಾಲ ತೀರಿಸುತ್ತಾರೆ. ವರ್ತಕರ ಸರಕು ದಾಸ್ತಾನು ಸಾಮಥ್ರ್ಯ ಕುಗ್ಗಿದಂತೆ ಉತ್ಪಾದಕರಿಗೆ ಸಿದ್ಧ ಸರಕುಗಳಿಗಾಗಿ ಬರುವ ಬೇಡಿಕೆ ಕಡಿಮೆ ಆಗುತ್ತದೆ. ಇದು ಕಡಿಮೆ ಆದಂತೆ ಉತ್ಪಾದನೆಯನ್ನು ಕುಗ್ಗಿಸಬೇಕಾಗುತ್ತದೆ. ಇದರಿಂದ ನಿರುದ್ಯೋಗ ಉದ್ಭವಿಸುತ್ತದೆ. ಪರಿಣಾಮವಾಗಿ ಗ್ರಾಹಕರು ಖರ್ಚುಮಾಡಬಹುದಾದ ವರಮಾನ ಕಡಿಮೆಯಾಗಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆ ಆಗುತ್ತದೆ. ಬೇಡಿಕೆ ಕುಗ್ಗಲಾರಂಭಿಸಿದಂತೆ ಸಗಟು ವರ್ತಕರು ಇರುವ ದಾಸ್ತಾನನ್ನು ಇನ್ನೂ ಕಡಿಮೆ ಮಾಡಿ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಮರುಪಾವತಿ ಮಾಡಲು ಯತ್ನಿಸುತ್ತಾರೆ. ಸಿದ್ಧ ಸರಕುಗಳಿಗೆ ಬೇಡಿಕೆ ಮತ್ತಷ್ಟು ಕಡಿಮೆ ಆಗುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗುವ ಈ ರೀತಿಯ ಶ್ರೇಣಿಕ್ರಿಯೆಯ ಪರಿಣಾಮಗಳಿಂದ ಅಂತಿಮವಾಗಿ ಸಾಮಾನ್ಯ ಬೆಲೆಯ ಮಟ್ಟ ಇಳಿಯತೊಡಗುತ್ತದೆ. ಹೀಗೆ ಹಣದ ಉಬ್ಬರದ ಪರಿಸ್ಥಿತಿ ತಹಬಂದಿಗೆ ಬರುತ್ತದೆ. ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬ್ಯಾಂಕ್ ದರವನ್ನು ಇಳಿಸಿದಾಗ ಮೇಲಿನ ಪರಿಣಾಮಗಳಿಗೆ ವಿರುದ್ಧವಾದವು ಉಂಟಾಗುತ್ತವೆ.

ಹಾಟ್ರೆ ವಾದಸರಣಿಯ ಸಮಂಜಸತೆ ಮುಂದಿನ ಎರಡು ಅಂಶಗಳನ್ನು ಅವಲಂಬಿಸಿದೆ 1 ಬಡ್ಡಿ ದರಗಳು ಸರಕು ದಾಸ್ತಾನಿಗೆ ತಗಲುವ ಒಟ್ಟು ವೆಚ್ಚದ ಮುಖ್ಯ ಭಾಗವಾಗಿದ್ದು ಅವುಗಳಲ್ಲಿ ಉಂಟಾಗುವ ಬದಲಾವಣೆಗಳಿಗೆ ವರ್ತಕರು ಸೂಕ್ಷ್ಮವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆಂದು ವಾದಿಸಲಾಗಿದೆ. ಆದರೆ ವಾಸ್ತವವಾಗಿ ಒಟ್ಟು ದಾಸ್ತಾನು ವೆಚ್ಚದಲ್ಲಿ ಮಳಿಗೆಯ ಬಾಡಿಗೆ, ಕಾವಲಿನ ವೆಚ್ಚ, ವಿಮಾ ಕಂತುಗಳು, ಸಾರಿಗೆ ವೆಚ್ಚ, ಸವಕಳಿ ವೆಚ್ಚ ಮತ್ತು ಇವೆಲ್ಲವಕ್ಕಿಂತ ಮಿಗಿಲಾಗಿ ನಷ್ಟ ಹೊಣೆಗಾರಿಕೆ ಮೊದಲಾದ ವೆಚ್ಚಗಳೆಲ್ಲ ಸೇರಿದ್ದು ಇದರಲ್ಲಿ ಬಡ್ಡಿ ಒಂದು ಚಿಕ್ಕ ಅಂಶ ಮಾತ್ರವಾಗಿರುತ್ತದೆ. ಬಡ್ಡಿಯ ದರಗಳಲ್ಲಿ ಉಂಟಾಗುವ ಸಣ್ಣಪುಟ್ಟ ಬದಲಾವಣೆಗಳಿಗೆಲ್ಲ ವರ್ತಕರು ತಲೆ ಕೆಡಿಸಿಕೊಳ್ಳುವುದಿಲ್ಲ. 2 ದಾಸ್ತಾನು ವೆಚ್ಚಕ್ಕೆ ಅನುಗುಣವಾಗಿ ವರ್ತಕರ ಸರಕು ದಾಸ್ತಾನು ಬೇಡಿಕೆಗೆ ಪುಟಿತತೆ ಇರುತ್ತದೆಂದು ವಾದಿಸಲಾಗಿದೆ. ಈ ಊಹೆ ಸಂಪೂರ್ಣವಾಗಿ ನಿಜವಲ್ಲ. ಏಕೆಂದರೆ ವರ್ತಕರು ಬಡ್ಡಿ ದರಗಳಲ್ಲಿ ಉಂಟಾಗುವ ಬದಲಾವಣೆಗಳಿಗಿಂತ ಹೆಚ್ಚಾಗಿ ಸರಕುಗಳ ಬೇಡಿಕೆಯಲ್ಲಿ ಉಂಟಾಗಬಹುದಾದ ಆಶಾದಾಯಕ ಬದಲಾವಣೆಗಳನ್ನೂ ಆ ಮೂಲಕ ಲಾಭಸಂಪಾದನೆಯ ಸಾಧ್ಯತೆಗಳನ್ನೂ ಎದುರು ನೋಡುತ್ತಿರುತ್ತಾರೆ. ಬೇಡಿಕೆಯಲ್ಲಿ ಆಶಾದಾಯಕ ಬದಲಾವಣೆಗಳು ಉಂಟಾಗುವ ಸೂಚನೆ ಕಂಡುಬಂದಾಗ ಬಡ್ಡಿ ದರಗಳಲ್ಲಿ ಆದ ಅಲ್ಪ ಹೆಚ್ಚಳವನ್ನು ಅವರು ಗಮನಿಸುವುದಿಲ್ಲ. ಹೀಗೆ ಹಾಟ್ರೆಯ ವಾದ ಸಂಪೂರ್ಣವಾಗಿ ವಾಸ್ತವಿಕವಾದುದು ಎನಿಸುವುದಿಲ್ಲ.

2 ಕೇನ್ಸನ ವಾದಸರಣಿ: ಹಾಟ್ರಿಯ ವಾದಸರಣಿಗೆ ಪರ್ಯಾಯವಾದೊಂದು ವಾದಸರಣೆಯನ್ನು ಜಾನ್ ಮೆನಾರ್ಡ್ ಕೇನ್ಸ್ ಮಂಡಿಸಿದ್ದಾನೆ. ಆ ಪ್ರಕಾರ ಬ್ಯಾಂಕ್ ದರದ ಬದಲಾವಣೆಗಳು ಪರಿಣಾಮಕಾರಿಯಾಗುವುದು ದೀರ್ಘಾವಧಿ ಬಡ್ಡಿಯ ದರಗಳಲ್ಲಿ ಉಂಟಾಗುವ ಬದಲಾಣೆಗಳ ಮೂಲಕ ಹಣದ ಉಬ್ಬರದ ಪರಿಸ್ತಿತಿಯಿದ್ದು ಬ್ಯಾಂಕ್ ದರವನ್ನು ಹೆಚ್ಚಿಸಿದಾಗ ಅಲ್ಬಾವಧಿ ಬಡ್ಡಿ ದರಗಳು ತತ್‍ಕ್ಷಣ ಹೆಚ್ಚಾಗÀುತ್ತವೆ ಪರಿಣಾಮವಾಗಿ ಅಧಿಕ ಬಡ್ಡಿ ದರದ ಹೊಸ ಅಲ್ಪವಧಿ ಪ್ರತಿಭೂತಿಗಳ ಹುಟ್ಟುವಳಿ ಸಾಮಥ್ರ್ಯಕ್ಕೆ ಹೋಲಿಸಿದಂತೆ ಅಲ್ಪ ಉತ್ಪಾದನಕಾರವಾಗಿರುವ ಹಳೆಯ ದೀರ್ಘಾವಧಿ ಪ್ರತಿಭೂತಿಗಳ ಬಂಡವಾಳ ಮೌಲ್ಯ ಕಡಿಮೆ ಆಗುತ್ತದೆ. ಇದರಿಂದ ಧೀರ್ಘಾವಧಿವಿನಿಯೋಜನೆಗಳಿಂದ ಅಲ್ಪಾವಧಿ ವಿನಿಯೋಕನೆಗಳ ಕಡೆಗೆ ಬಂಡವಾಳದ ವರ್ಗಾವಣೆಯಾಗಲಾರಂಭವಾಗುತ್ತದೆ. ಹೀಗಾಗಿ ದೀರ್ಘಾವಧಿ ವಿನಿಯೋಜನೆಗಳ ಪರಿಮಾಣ ಕುಗ್ಗುತ್ತದೆ. ಇದನ್ನು ತಡೆಯಲು ದೀರ್ಘಾವಧಿ ಬಡ್ಡಿ ದರಗಳನ್ನು ಕೂಡ ಹೆಚ್ಚಿಸಬೇಕಾಗುತ್ತದೆ. ಬಂಡವಾಳದ ಇಂದು ನಿರ್ದಿಷ್ಟ ಸೀಮಾರಿಕ ಸಾಮಥ್ರ್ಯಕ್ಕೆ ವ್ಯತಿರಿಕ್ತವಾಗಿ ದೀರ್ಘಾವಧಿ ಬಡ್ಡಿ ದರಗಳು ಹೆಚ್ಚಾದಾಗ ಲಾಭೋದ್ದೇಶದ ಉದ್ಯಮಿಗಳ ವಿನಿಯೋಜನೆ ವ್ಯವಹಾರಗಳು ಇಳಿಮುಖವಾಗಲಾರಂಭಿಸುತ್ತವೆ. ಇದರಿಂದ ನಿರುದ್ಯೋಗ ಉದ್ಭವಿಸಿ ಗ್ರಾಹಕರ ವರಮಾನ ಕಡಿಮೆಯಾಗಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆ ಆಗುತ್ತದೆ. ಅಂತಿಮವಾಗಿ, ಏರುತ್ತಿದ್ದ ಬೆಲೆಗಳು ಇಳಿಯತೊಡಗುತ್ತವೆ. ಇದೇ ರೀತಿ ಆರ್ಥಿಕ ಮುಗ್ಗಟಟಿನ ಪರಿಸ್ಥಿತಿಯನ್ನು ಬ್ಯಾಂಕ್ ದರ ಇಳಿಸುವುದರ ಮೂಲಕ ನಿಯಂತ್ರಿಸಬಹುದು. ಬ್ಯಾಂಕ್ ದರ ಇಳಿಸಿದಾಗ ಉಂಟಾಗುವ ಪರಿಣಾಮಗಳು ಮೇಲಿನ ಪರಿಣಾಮಗಳಿಗೆ ವಿರುದ್ಧವಾಗಿರುತ್ತವೆ.

ಹಾಟ್ರೆ ಮತ್ತು ಕೇನ್ಸ್ ವಾದಸರಣಿಗಳು ಮೂಲತಃ ಪರಸ್ಪರ ವಿರುದ್ಧವಾದವಲ್ಲ, ಎಂಬುದು ಗಮನಿಸಬೇಕಾದ ಅಂಶ. ಸರಣಿಗಳು ಭಿನ್ನವಾದರೂ ಇವು ಮೂಲತಃ ಒಂದೇ. ಆರ್ಥಿಕ ಚಟುವಟಿಕೆ ಮತ್ತು ಬೆಲೆಗಳನ್ನು ಉತ್ತೇಜಿಸುವಲ್ಲಿ ಅಲ್ಪಾವಧಿ ಬಡ್ಡಿ ದರಗಳು ಉಂಟುಮಾಡುವ ಪರಿಣಾಮಗಳನ್ನು ಹಾಟ್ರೆ ಎತ್ತಿ ಹಿಡಿದರೆ ದೀರ್ಘಾವಧಿ ಬಡ್ಡಿ ದರಗಳ ಕಡೆಗೆ ಕೇನ್ಸ್ ಗಮನ ಹರಿಸಿದ್ದಾನೆ. ಆಧುನಿಕ ಆರ್ಥಿಕತೆಯ ಎರಡು ಬೇರೆ ಬೇರೆ ರೂಪಗಳನ್ನು ಇವರು ಒತ್ತಿ ಹೇಳಿದ್ದಾರೆ, ಅಷ್ಟೆ. ಆದಕಾರಣ ಆರ್ಥಿಕತೆಯಲ್ಲಿ ಸಾಲದ ಪರಿಮಾಣ, ಆರ್ಥಿಕ ಚಟುವಟಿಕೆಗಳು ಮತ್ತು ಬೆಲೆಗಳು ಇವುಗಳ ಮೇಲೆ ಬ್ಯಾಂಕ್ ದರ ಪ್ರಭಾವ ಬೀರುವ ರೀತಿಯ ಬಗ್ಗೆ ಪರಿಪೂರ್ಣವಾದೊಂದು ವಿವರಣೆ ಬೇಕಾದರೆ ಇವೆರಡೂ ವಾದಸರಣಿಗಳನ್ನು ಒಟ್ಟಿಗೆ ಪರಿಶೀಲಿಸಬೇಕು. ಇವು ಪರಸ್ಪರ ಪೂರಕ.

ಬ್ಯಾಂಕ್ ದರ ಮತ್ತು ಬಾಹ್ಯ ಆರ್ಥಿಕ ಪರಿಸ್ಥಿತಿ : ಬ್ಯಾಂಕ್ ದರ ದೇಶದ ಪಾವತಿಗಳ ಸಿಲ್ಕಿನ ಅಸಮತೋಲವನ್ನು ಸರಿದೂಗಿಸುವ ಸಾಧನವಾಗಿ ಬಳಕೆಯಲ್ಲಿದೆ. ಅಂತಾರಾಷ್ಟ್ರೀಯ ಸುವರ್ಣ ಪ್ರಮಿತಿಯ ಕಾಲದಲ್ಲಿ ದೇಶದ ಸುವರ್ಣ ಸಂಚಿತಿಯ ರಕ್ಷಣೆ ಕೇಂದ್ರೀಯ ಬ್ಯಾಂಕಿನ ಹೊಣೆಗಾರಿಕೆಯಾಗಿರುತ್ತದೆ. ಬ್ಯಾಂಕ್ ದರ ಹೆಚ್ಚಿಸಿ ಅದನ್ನು ಸಾಧಿಸಬಹುದು. ಬ್ಯಾಂಕ್ ದರದ ಹೆಚ್ಚಳದಿಂದ ಪೇಟೆ ಬಡ್ಡಿ ದರಗಳಲ್ಲಿ ಉಂಟಾಗುವ ಏರಿಕೆಯಿಂದ ಎರಡು ರೀತಿಯಲ್ಲಿ ಚಿನ್ನದ ನಿರ್ಗಮನಕ್ಕೆ ತಡೆ ಉಂಟಾಗುತ್ತದೆ. ಮೊದಲನೆಯದಾಗಿ ಪೇಟೆ ಬಡ್ಡಿ ದರಗಳು ಹೆಚ್ಚುವುದರಿಂದ ಬಂಡವಾಳ ಹೂಡುವುದು ಆಕರ್ಷಕವಾಗಿ ಜನರು ದೇಶದಲ್ಲೇ ಬಂಡವಾಳ ಹೂಡಿ ಲಾಭ ಸಂಪಾದಿಸಲಿಚ್ಛಿಸುತ್ತಾರೆ. ಇದರಿಂದ ಬಂಡವಾಳದ ಆಗಮನ ಆರಂಭವಾಗುತ್ತದೆ. ಪರಿಣಾಮವಾಗಿ ಚಿನ್ನದ ನಿರ್ಗಮನ ಕಡಿಮೆಯಾಗಿ ಆಗಮನ ಹೆಚ್ಚಾಗುತ್ತದೆ. ಆ ದೇಶದ ಹಣಕ್ಕೆ ವಿದೇಶಿ ಬೇಡಿಕೆ ಹೆಚ್ಚಾಗುವುದರಿಂದ ವಿದೇಶಿ ವಿನಿಮಯ ದರವೂ ಉತ್ತಮವಾಗುತ್ತದೆ. ಎರಡನೆಯದಾಗಿ ಪೇಟೆಯ ಬಡ್ಡಿ ದರಗಳು ಹೆಚ್ಚುವುದರಿಂದ ವಿನಿಯೋಜನೆ ಮತ್ತು ವ್ಯವಹಾರಗಳು ತುಟ್ಟಿಯಾಗುವುದರ ಪರಿಣಾಮವಾಗಿ ಆರ್ಥಿಕ ವ್ಯವಹಾರಗಳು ಮೊಟಕಾಗಿ ಬೆಲೆಗಳು ಇಳಿಯಲಾರಂಭಿಸುತ್ತವೆ. ಹೀಗೆ ಸಾಮಾನ್ಯ ಬೆಲೆಗಳ ಮಟ್ಟ ಇಳಿಯುವುದರಿಂದ, ಪದಾರ್ಥ ಕೊಳ್ಳಲು ದೇಶೀಯ ಮಾರುಕಟ್ಟೆ ಯೋಗ್ಯವಾಗಿ, ಮಾರಲು ಸರಿಯಲ್ಲವೆನಿಸುತ್ತವೆ. ಇದರಿಂದ ರಫ್ತು ವ್ಯಾಪಾರ ಕುದುರಿ ಆಮದು ಕಡಿಮೆಯಾಗಿ ಸಮತೋಲ ಸ್ಥಿತಿ ಉಂಟಾಗುತ್ತದೆ.

ಬ್ಯಾಂಕ್ ದರದ ನೀತಿಯ ಸಾಫಲ್ಯಕ್ಕೆ ಆವಶ್ಯಕವಾದ ಸ್ಥಿತಿಗತಿಗಳು: ಬ್ಯಾಂಕ್ ದರದ ನೀತಿಯ ಸಾಫಲ್ಯ ಈ ಮುಂದಿನ ಸ್ಥಿತಿಗತಿಗಳನ್ನು ಅವಲಂಬಿಸಿದೆ.

1 ಬ್ಯಾಂಕ್ ದರ ಮತ್ತು ಪೇಟೆ ಬಡ್ಡಿ ದರಗಳ ನಡುವೆ ನಿಕಟ ಹಾಗೂ ನಿಶ್ಚಿತ ಹೊಂದಾಣಿಕೆ ಇದ್ದು ಅವು ಏಕಮುಖವಾಗಿ ಬದಲಾವಣೆ ಹೊಂದಬೇಕು. ಬ್ಯಾಂಕ್ ದರವನ್ನು ಹೆಚ್ಚಿಸಿದಾಗ ಇತರ ಬಡ್ಡಿ ದರಗಳೂ ಹೆಚ್ಚ ಬೇಕು; ಮತ್ತು ಕಡಿಮೆ ಮಾಡಿದಾಗ ಇತರ ಬಡ್ಡಿ ದರಗಳೂ ಕಡಿಮೆ ಆಗಬೇಕು. ಆಗ ಮಾತ್ರ ಬ್ಯಾಂಕ್ ದರದ ಬದಲಾವಣೆಗಳು ನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡುತ್ತವೆ.

2 ದೇಶದ ಆರ್ಥಿಕ ರಚನೆಯಲ್ಲಿ ಪುಟಿತತೆ ಇರಬೇಕು. ಅಂದರೆ ಕೂಲಿ ಮೊದಲಾದ ಉತ್ಪಾದನ ವೆಚ್ಚ ಬೆಲೆಗಳು ನಮ್ಯವಾಗಿದ್ದು ಬ್ಯಾಂಕ್ ದರದ ಬದಲಾವಣೆಗಳ ಪರಿಣಾಮವಾಗಿ ಉದ್ದರಿಯ ಪರಿಮಣದಲ್ಲಿ ಉಂಟಾಗುವ ಬದಲಾವಣೆಗಳಿಗೆ ಬಹು ಬೇಗ ಹೊಂದಿಕೊಳ್ಳಬೇಕು. ಬ್ಯಾಂಕ್ ದರ ಏರಿದಾಗ ಉದ್ದರಿಯ ಗಾತ್ರ ಕಡಿಮೆ ಆಗುವುದರ ಪರಿಣಾಮವಾಗಿ ಬೆಲೆಗಳು ಇಳಿಯಲಾರಂಭಿಸಿದಂತೆ ಉತ್ಪಾದನಾ ವೆಚ್ಚಗಳೂ ಕಡಿಮೆಯಾಗಬೇಕು. ಇದರಿಂದ ಕೈಗಾರಿಕೋದ್ಯಮಿಗಳಿಗೆ ನಷ್ಟ ಸಂಭವಿಸುವುದಿಲ್ಲ. 3 ಬ್ಯಾಂಕ್ ದರದ ಬದಲಾವಣೆಗಳ ಪರಿಣಾಮವಾಗಿ ಉಂಟಾಗುವ ವಿವಿಧ ರೀತಿಯ ಬಡ್ಡಿ ದರಗಳ ಬದಲಾವಣೆಗಳಿಗೆ ಅನುಸಾರವಾಗಿ ಹರಿಯುವ ದೇಶೀಯ ಹಾಗೂ ವಿದೇಶೀಯ ಅಲ್ಪಾವಧಿ ನಿಧಿಗಳನ್ನು ನಿರ್ವಹಿಸಲು ಸುವ್ಯವಸ್ಥಿತವಾದ ಅಲ್ಪಾವಧಿ ನಿಧಿಗಳ ಮಾರುಕಟ್ಟೆ ಇರಬೇಕು. ಅಂಥ ಮಾರು ಕಟ್ಟೆಯಲ್ಲಿ ಬ್ಯಾಂಕ್ ದರದ ಬದಲಾವಣೆಗಳು ಬಲುಬೇಗ ಇಡೀ ಆರ್ಥಿಕತೆಯನ್ನೆಲ್ಲ ವ್ಯಾಪಿಸಿಕೊಂಡು ನಿರೀಕ್ಷಿತ ಫಲ ತರುತ್ತವೆ.

ಬ್ಯಾಂಕ್ ದರದ ನೀತಿಯ ನ್ಯೂನತೆಗಳು : ಬ್ಯಾಂಕ್ ದರದ ನೀತಿಯಲ್ಲಿ ಈ ನ್ಯೂನತೆಗಳಿವೆ: 1 ಬ್ಯಾಂಕ್ ದರದ ನೀತಿಯ ಯಶಸ್ಸಿಗೆ ಮೇಲೆ ಹೇಳಿದ ಅನುಕೂಲಕರ ವಾತಾವರಣವಿರಬೇಕು. ಇಂಗ್ಲೆಂಡಿನಲ್ಲಿರುವಂಥ ಸುವ್ಯವಸ್ಥಿತ ಹಣದ ಪೇಟೆಯಲ್ಲಿ ಇಂಥ ವಾತಾವರಣವನ್ನು ನಿರೀಕ್ಷಿಸಬಹುದೇ ಹೊರತು ಭಾರತದಂಥ ಅಭಿವೃದ್ಧಿ ಶೀಲ ದೇಶದ ಹಣದ ಪೇಟೆಯಲ್ಲಿ ಅಲ್ಲ. ಅನಭಿವರ್ಧಿತ ಹಣ ಪೇಟೆಯಲ್ಲಿ ಬ್ಯಾಂಕ್ ದರದ ನೀತಿ ಫಲಕಾರಿಯಾಗುವುದಿಲ್ಲ. ಕಾರ್ಮಿಕರಲ್ಲಿ ಚಳವಳಿಯ ಮನೋಭಾವ, ಉತ್ಪಾದಕರಲ್ಲಿ ಏಕಸ್ವಾಮ್ಯ ಪ್ರವೃತ್ತಿ, ಉತ್ಪಾದನ ವೆಚ್ಚ ಮತ್ತು ಬೆಲೆಗಳ ಅನಮ್ಯತೆ ಇವು ಪ್ರಬಲವಾಗುತ್ತಿರುವ ಈ ದಿನಗಳಲ್ಲಿ ಆರ್ಥಿಕ ವ್ಯವಸ್ಥೆ ಒಂದನೆಯ ಮಹಾಯುದ್ಧಕ್ಕೆ ಹಿಂದೆ ಇದ್ದಷ್ಟು ಸರಳವಾಗಿಲ್ಲ. ಈ ಜಟಿಲ ವಾತಾವರಣದಲ್ಲಿ ಬ್ಯಾಂಕ್ ದರದ ನೀತಿ ಪರಿಣಾಮಕಾರಿಯಾಗುವುದು ಕಷ್ಟ. 2 ಬ್ಯಾಂಕ್ ದರದ ನೀತಿಯ ಪ್ರಕಾರ ಬಡ್ಡಿ ದರಗಳು ಮತ್ತು ಅವುಗಳಲ್ಲಿ ಉಂಟಾಗುವ ಬದಲಾವಣೆಗಳು ಆರ್ಥಿಕ ವ್ಯವಹಾರಗಳ ಮೇಲೆ ನಿರ್ಣಾಯಕ ಪರಿಣಾಮಗಳನ್ನು ಉಂಟುಮಾಡಬೇಕು. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಕೆಲವು ಸಗಟು ವ್ಯವಹಾರಗಳನ್ನು ಬಿಟ್ಟರೆ ಸಹಜ ಉತ್ಪಾದನೆ ಚಟುವಟಿಕೆಗಳು ಬಡ್ಡಿಯ ದರಗಳಲ್ಲಿ ಆಗುವ ಬದಲಾವಣೆಗಳಗಿಂತ ಮಿಗಿಲಾಗಿ ಬೇಡಿಕೆಯಲ್ಲಾಗುವ ಆಶಾದಾಯಕ ಬದಲಾವಣೆಗಳು ಮತ್ತು ಆ ಮೂಲಕ ಉಂಟಾಗುವ ಲಾಭ ಸಂಪಾದನೆಯ ಸಾಧ್ಯತೆ ಇವುಗಳಿಂದ ನಿಯಂತ್ರಿಸಲ್ಪಡುತ್ತದೆ. ಇಂಗ್ಲೆಂಡಿನ ರ್ಯಾಡ್‍ಕ್ಲಿಫ್ ಸಮಿತಿ ಮತ್ತು ಅಮೆರಿಕದ ಹಣ ಮತ್ತು ಉದ್ದರಿ ಸಮಿತಿಗಳು ಕಂಡಂತೆ ವರ್ತಕರು ಬಡ್ಡಿಯ ದರಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ಅಷ್ಟಾಗಿ ಪ್ರಭಾವಿತಗೊಳ್ಳುವುದಿಲ್ಲ ಮತ್ತು ಉತ್ಪಾದನ ವೆಚ್ಚಗಳ ನಿರ್ಣಾಯಕ ಅಂಶಗಳಲ್ಲಿ ಒಂದಾದ ಬಡ್ಡಿಯ ದರಗಳ ಬದಲಾವಣೆಗಳಿಗೆ ಅಷ್ಟೊಂದು ಗಮನ ಕೊಡುವುದಿಲ್ಲ. ಹೀಗೆ ಉದ್ದರಿ ನಿಯಂತ್ರಣ, ಬೆಲೆಗಳ ಹತೋಟಿ ಮತ್ತು ಆರ್ಥಿಕ ವ್ಯವಹಾರಗಳನ್ನು ನಿರ್ದೇಶಿಸುವಲ್ಲಿ ಬ್ಯಾಂಕ್ ದರದ ನೀತಿ ಸಂಪೂರ್ಣವಾಗಿ ಯಶಸ್ವಿಯಾಗಲಾರದು. (3) ಹಣದ ಉಬ್ಬರ ಮತ್ತು ಆರ್ಥಿಕ ಮುಗ್ಗಟ್ಟು ತೆವಳುವ ಹಂತದಲ್ಲಿದ್ದಾಗ ಮಾತ್ರ ಬ್ಯಾಂಕ್ ದರದ ನೀತಿಯನ್ನು ಶಾಸ್ತ್ರೀಯವಾಗಿ ಅನುಸರಿಸಿ ಅವನ್ನು ನಿಯಂತ್ರಿಸಬಹುದು. ಆದರೆ ಅವು ನಾಗಾಲೋಟದ ಘಟ್ಟ ಮುಟ್ಟಿದಾಗ ಸ್ವಯಂ ಪ್ರಚೋದನ ಗುಣ ಹೊಂದಿರುವ ಅವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. (4) ಬ್ಯಾಂಕ್ ದರದ ನೀತಿ ಅನುಸರಿಸಿ ಹಣದ ಉಬ್ಬರದ ಪರಿಸ್ಥಿತಿಯನ್ನು ತಹಬಂದಿಗೆ ತರುವಷ್ಟು ಸುಲಭವಾಗಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯನ್ನು ಹತೋಟಿಗೆ ತರಲಾಗುವುದಿಲ್ಲ. ಹಣದ ಉಬ್ಬರದ ಪರಿಸ್ಥಿತಿಯಲ್ಲಿ ಬ್ಯಾಂಕ್ ದರವನ್ನು ಹೆಚ್ಚಿಸಿದಾಗ ಪೇಟೆ ಬಡ್ಡಿದರಗಳು ಏರುವುದರಿಂದ ವರ್ತಕರು ಸಾಲ ತೆಗೆದುಕೊಳ್ಳುವುದನ್ನು ಕಡಿಮೆ ಮಾಡುವುದರ ಪರಿಣಾಮವಾಗಿ ಬ್ಯಾಂಕುಗಳ ಉದ್ದರಿ ಸೃಷ್ಟಿಯ ಸಾಮಥ್ರ್ಯ ಕುಗ್ಗಿ ಹಣದ ಉಬ್ಬರದ ಒತ್ತಡಗಳಿಗೆ ಒದೆಗಾಲು ಕೊಟ್ಟಂತಾಗುತ್ತದೆ. ಆದರೆ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಉದ್ದರಿ ವಿಸ್ತರಣೆಗಾಗಿ ಬ್ಯಾಂಕ್ ದರ ಇಳಿಸಿದಾಗ ಕಡಿಮೆ ಬಡ್ಡಿ ದರ ಮತ್ತು ಬೆಲೆಗಳ ಇಳಿತದಿಂದಾಗಿ ಜನರು ಸಾಲ ಪಡೆದು ಬಂಡವಾಳ ಹೂಡಲು ಇಚ್ಚಿಸುವುದಿಲ್ಲ. ಹೀಗಾಗಿ ಪರಿಸ್ಥಿತಿ ಹಿಡಿತಕ್ಕೆ ಬರುವುದು ಕಷ್ಟವಾಗುತ್ತದೆ. (5) ಬ್ಯಾಂಕ್ ದರದ ನೀತಿಯ ಮತ್ತೊಂದು ನ್ಯೂನತೆ ಎಂದರೆ ಆ ದರದ ಬದಲಾವಣೆಗಳ ಆಂತರಿಕ ಮತ್ತು ಬಾಹ್ಯ ಪರಿಣಾಮಗಳು ಪರಸ್ಪರ ವಿರುದ್ದವಾಗಿರುವುದು. ಉದಾಹರಣೆಗೆ ಬ್ಯಾಂಕ್ ದರವನ್ನು ಹೆಚ್ಚಿಸಿದಾಗ ಅಧಿಕ ಬಡ್ಡಿಯ ಆಸೆಯಿಂದ ವಿದೇಶಿ ಅಲ್ಪಾವಧಿ ನಿಧಿಗಳ ಆಗಮನ ಉಂಟಾಗಿ ಬ್ಯಾಂಕ್ ದರದ ಏರಿಕೆಯ ನಿಯಂತ್ರಣಾತ್ಮಕ ಪರಿಣಾಮಗಳು ನಿಷ್ಕ್ರಿಯವಾಗುತ್ತವೆ. (6) ಕೊನೆಯದಾಗಿ ಬ್ಯಾಂಕ್ ದರದ ನೀತಿ ಸ್ವಭಾವತಃ ಭೇದರಹಿತವಾಗಿದ್ದು ಉತ್ಪಾದಕ ಅನುತ್ಪಾದಕ ವ್ಯವಹಾರಗಳ ಮೇಲೆ ಒಂದೇ ರೀತಿಯ ಪರಿಣಾಮ ಬೀರುತ್ತದೆ. ಉದಾಹರಣೆಗಾಗಿ ಅನುತ್ಪಾದಕ ಸಟ್ಟಾ ವ್ಯವಹಾರಗಳನ್ನು ತಡೆಗಟ್ಟಲು ಬ್ಯಾಂಕ್ ದರ ಹೆಚ್ಚಿಸಿದಾಗ ನೈಜ ಉತ್ಪಾದಕ ವ್ಯವಹಾರಗಳೂ ಅಧಿಕ ಬಡ್ಡಿ ದರದ ಬಿಸಿ ಅನುಭವಿಸಬೇಕಾಗುತ್ತದೆ. ಉತ್ಪಾದನೆ ಹೆಚ್ಚಿಸಿ ಅನುಭೋಗ ಸರಕುಗಳ ಪೂರೈಕೆ ತೀವ್ರಗೊಳಿಸದೆ ಕೇವಲ ಸಟ್ಟಾ ವ್ಯವಹಾರಗಳ ನಿಯಂತ್ರಣದಿಂದ ಹಣದ ಉಬ್ಬರದ ಒತ್ತಡಗಳನ್ನು ತಡೆಗಟ್ಟಲಾಗುವುದಿಲ್ಲ. ಆದ್ದರಿಂದ ಸಟ್ಟಾ ವ್ಯವಹಾರಗಳಿಗೆ ಸಾಲ ದೊರಕದಂತೆ ಮಾಡಿ ಅದನ್ನು ಉತ್ಪಾದಕ ಕ್ಷೇತ್ರಗಳ ಕಡೆಗೆ ಹರಿಸುವುದು ಅವಶ್ಯಕ. ಇದು ಬ್ಯಾಂಕ್ ದರದ ನೀತಿಯಿಂದ ಆಗದ ಕಾರ್ಯವಾಗಿದೆ.

ಈ ನ್ಯೂನತೆಗಳ ಜೊತೆಗೆ ಒಂದನೆಯ ಮಹಾಯುದ್ದದ ಅನಂತರದ ದಶಕಗಳಲ್ಲಿ ಪ್ರಪಂಚದ ಹಣಕಾಸಿನ ವ್ಯವಸ್ಥೆ ಬ್ಯಾಂಕ್ ದರದ ನೀತಿಗೆ ಪೂರಕವಾಗಿರುವ ಹಲವಾರು ಮಾರ್ಪಾಡುಗಳಿಗೆ ಒಳಗಾಗಿದೆ. ಆರ್ಥಿಕ ವ್ಯವಸ್ಥೆ ಜಟಿಲವಾಗಿದೆ. ವಾಣಿಜ್ಯ ವ್ಯವಹಾರಗಳಿಗೆ ಹಣ ಒದಗಿಸುವ ವಿಧಾನಗಳಲ್ಲಿ ಗಣನೀಯ ಬದಲಾವಣೆ ಆಗಿದೆ. ಹಣ ಪೂರೈಕೆಯ ಸಾಧನವಾಗಿ ಹುಂಡಿಗಳ ಪ್ರಾಮುಖ್ಯ ಹೆಚ್ಚಾಗುತ್ತಿದೆ. ವ್ಯಾಪಾರೋದ್ಯಮಿಗಳು ಸಂಚಿತ ಲಾಭದ ಪ್ರಯೋಜನ ಪಡೆದು ಸ್ವಯಂ ಹಣ ಪೂರೈಕೆಯ ಪದ್ದತಿ ರೂಢಿಸಿಕೊಂಡಿದ್ದಾರೆ. ಕೇಂದ್ರೀಯ ಬ್ಯಾಂಕಿಗೆ ಮರುವಟಾವಣೆಗಾಗಿ ತರುತ್ತಿದ್ದ ಪ್ರಥಮ ದರ್ಜೆಯ ಹುಂಡಿಗಳ ಪರಿಮಾಣ ಕಡಿಮೆಯಾಗುತ್ತಿದೆ. ಬಹಿರಂಗ ಪೇಟೆಯ ವ್ಯವಹಾರಗಳು. ಬ್ಯಾಂಕುಗಳ ನಗದು ಸಂಚಿತಿಯ ಪ್ರಮಾಣ ಹೆಚ್ಚು ಕಡಿಮೆಮಾಡುವ ನೀತಿ, ನೇರ ಕಾರ್ಯಕ್ರಮ, ಉದ್ದರಿಯ ಪಡಿತರ-ಈ ಮುಂತಾದ ಉದ್ದರಿ ನಿಯಂತ್ರಣ ತಂತ್ರಗಳು ಬ್ಯಾಂಕ್ ದರದ ನೀತಿಗಿಂತ ಹೆಚ್ಚು ಪರಿಣಾಮಕಾರಿಯಾದವೆಂದು ಕಂಡುಬಂದಿದೆ. 1930ರ ದಶಕದ ಮಹಾ ಆರ್ಥಿಕ ಮುಗ್ಗಟ್ಟಿನ ತರುವಾಯ ಅನೇಕ ದೇಶಗಳು ಅಗ್ಗದ ಹಣಕಾಸು ನೀತಿ ಮತ್ತು ಪರಿಹಾರಕ ಖರ್ಚು ಕಾರ್ಯನೀತಿಗಳನ್ನು ಅನುಸರಿಸಲಾರಂಭಿಸಿವೆ. ಈ ಮಾರ್ಪಾಡುಗಳ ಪರಿಣಾಮವಾಗಿ ಬ್ಯಾಂಕ್ ದರದ ನೀತಿಯ ಪ್ರಭಾವ ಮಂಕಾಗುತ್ತಿದೆ. ಅದನ್ನು ಪರಿಣಾಮಕಾರಿಯಾಗಿಸುವುದರಲ್ಲಿ ಕೇಂದ್ರೀಯ ಬ್ಯಾಂಕು ಸೋಲು ಅನುಭವಿಸುತ್ತದೆ.

ಎಷ್ಟೇ ಆಡಚಣೆಗಳಿದ್ದರೂ ರ್ಯಾಡ್ ಕ್ಲಿಫ್ ಸಮಿತಿಯ ಅಭಿಪ್ರಾಯದಂತೆ ಬ್ಯಾಂಕ್ ದರದ ನೀತಿ ಸಂಪೂರ್ಣವಾಗಿ ಅಪ್ರಯೋಜಕ ಎನ್ನಲಾಗುವುದಿಲ್ಲ. ಒಂದು ಸ್ವತಂತ್ರನೀತಿಯಾಗಿ ಅದು ನಿರೀಕ್ಷಿತ ಫಲ ತರದಿರಬಹುದು. ಆದರೆ ಇತರ ತಂತ್ರಗಳೊಡನೆ ಸಂಯೋಜಿಸಿ ಪ್ರಯೋಗಿಸಿದಾಗ ತನ್ನ ಸಾಂಕೇತಿಕ ಪ್ರಾಮುಖ್ಯ ಉಳಿಸಿಕೊಳ್ಳುತ್ತದೆ. ಇದನ್ನು ಅರಿತೇ ಈಚಿನ ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಉದ್ದರಿ ನಿಯಂತ್ರಣ ತಂತ್ರಗಳ ಕೂಟ ಪ್ರಯೋಗಕ್ಕೆ ಹೆಚ್ಚು ಗಮನಕೊಡುತ್ತಿವೆ. ಹೊಸ ತಂತ್ರಗಳೊಡನೆ ಸಾಂಪ್ರದಾಯಿಕ ತಂತ್ರಗಳನ್ನು ಸಂಯೋಜಿಸಿ ಪ್ರಯೋಗಿಸುತ್ತಿವೆ. (ಕೆ.ಜಿ.ಒ)

ಬ್ಯಾಂಕ್ ಡ್ರಾಫ್ಟ್ : ಬ್ಯಾಂಕ್ ವ್ಯವಹಾರಗಳಲ್ಲಿ ಚೆಕ್ಕಿನಂತೆ ಬಳಕೆಯಲ್ಲಿರುವ ಇನ್ನೊಂದು ಉದ್ದರಿಪತ್ರ. ಬ್ಯಾಂಕಿನ ಮೂಲಕ ನಿಗದಿತ ಹಣ ಸಂದಾಯಕ್ಕೆ ಬಳಸುವ ಒಂದು ಗೊತ್ತಾದ ವಿಧಾನ: ಪತ್ರ, ಇಂಗ್ಲೆಂಡಿನಲ್ಲಿ ಚೆಕ್ಕು ಮೊತ್ತ ಮೊದಲು ಪ್ರಚಾರಕ್ಕೆ ಬಂದಕಾಲದಲ್ಲಿ ಚೆಕ್ಕನ್ನೇ ಡ್ರಾಫ್ಟ್ ಎಂದು ಕರೆಯುತ್ತಿದ್ದುದ್ದುಂಟು. ಆ ಕಾಲದಲ್ಲಿ ಚೆಕ್ಕು ಪತ್ರದಲ್ಲಿ ಎರಡು ಭಾಗಗಳಿರುತ್ತಿದ್ದುವು. ಬ್ಯಾಂಕು ಈ ಎರಡು ಭಾಗಗಳಲ್ಲಿ ಒಂದನ್ನು ತನ್ನ ಗ್ರಾಹಕನಿಗೆ ಕೊಡುತ್ತಿತ್ತು. ಇನ್ನೊಂದು ಭಾಗದಲ್ಲಿ ಗ್ರಾಹಕನಿಗೆ ಕೊಟ್ಟ ಡ್ರಾಫ್ಟಿನ ವಿವರಗಳನ್ನು ಬರೆದು. ಅದನ್ನು ಬ್ಯಾಂಕೇ ಇಟ್ಟುಕೊಳ್ಳುತ್ತಿತ್ತು. ಹೀಗೆ ಬ್ಯಾಂಕು ಉಳಿಸಿಕೊಳ್ಳುತ್ತಿದ್ದ ಭಾಗವೇ ಚೆಕ್ಕು. ಗ್ರಾಹಕನ ಕೈಗೆ ಹೋದದ್ದೇ ಡ್ರಾಫ್ಟ್. ಡ್ರಾಫ್ಟನ್ನು ಯಾರಾದರೂ ತಿದ್ದಿ ಮೋಸ ಮಾಡಲು ಸಾಧ್ಯವಾಗದಂತೆ ಅದರ ವಿವರಗಳನ್ನು ತಾಳೆ ನೋಡಲು (ಚೆಕ್) ಬ್ಯಾಂಕು ಬರೆದಿಟ್ಟುಕೊಳ್ಳುತ್ತಿದ್ದ ಭಾಗವೇ ಮುಂದೆ ಡ್ರಾಫ್ಟ್ ರೂಪ ತಾಳಿತು. ಹಾಗೆ ಆ ಡ್ರಾಫ್ಟು ಚೆಕ್ಕಾಯಿತು. ಬ್ಯಾಂಕಿನ ಗ್ರಾಹಕರು ತಮ್ಮ ಬ್ಯಾಂಕಿನ ಮೇಲೆ ನೀಡುತ್ತಿದ್ದ ಧನಾದೇಶಗಳೇ ಚೆಕ್ಕುಗಳೆಂದು ಬಳಕೆಗೆಬಂತು. ಮುಂದೆ ಡ್ರಾಫ್ಟ್ ಎಂಬ ಹೆಸರೂ ಕೂಡ ಬ್ಯಾಂಕ್ ವ್ಯವಹಾರದಲ್ಲಿ ಉಳಿದುಕೊಂಡಿತು. ಬ್ಯಾಂಕುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಣ ರವಾನೆಯನ್ನು ಈ ಬ್ಯಾಂಕ್ ಡ್ರಾಫ್ಟ್ ಮೂಲಕ ಮಾಡುತ್ತವೆ.

ಒಬ್ಬ ವ್ಯಾಪಾರಿ ಪರ ಊರಿನ ಒಬ್ಬ ವ್ಯಾಪಾರಿಗೆ ಡ್ರಾಫ್ಟಿನ ಮೂಲಕ ಹಣ ತಲುಪಿಸಬಹುದು. ಆ ಮೊಬಲಗಿಗೆ ಡ್ರಾಫ್ಟ್ ಪಡೆದು ಕಳುಹಿಸಿಕೊಟ್ಟರೆ ಪಡೆದಾತ ಅದನ್ನು ತನ್ನ ಊರಿನ ಬ್ಯಾಂಕಿಗೆ ಹೋಗಿ ಕೊಟ್ಟು ಡ್ರಾಫ್ಟಿನಲ್ಲಿ ನಮೂದಿಸಿರುವಷ್ಟು ಹಣ ಪಡೆಯಬಹುದು ಹಾಗೆ ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನ ಮೇಲೆ ಅಥವಾ ಅದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಬರೆದ ಧನಾದೇಶವನ್ನೂ ಡ್ರಾಫ್ಟ್ ಎನ್ನುತ್ತಾರೆ. ಡ್ರಾಫ್ಟಿನಲ್ಲಿ ಸೂಚಿಸಿರುವವರಿಗೆ ಅಥವಾ ಇವರ ಆದೇಶಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ಅದರಲ್ಲಿ ಬರೆದಿರುತ್ತದೆ. ಡ್ರಾಫ್ಟ್ ಗಳಲ್ಲಿ ಸೈಟ್ ಡ್ರಾಫ್ಟ್ ಮತ್ತು ಟೈಮ್ ಡ್ರಾಫ್ಟ್ ಎಂಬ ಎರಡು ವಿಧಗಳುಂಟು. ಸೈಟ್ ಡ್ರಾಫ್ಟ್‍ಗಳ ಹಣವನ್ನು ಆಗಲೇ ಒಮ್ಮೆಗೇ ಕೊಡತಕ್ಕದ್ದು. ಟೈಮ್ ಡ್ರಾಫ್ಟ್‍ಗಳ ಹಣವನ್ನು ಆ ಡ್ರಾಫ್ಟಿನ ಮೇಲೆ ಬರೆದಿರುವ ಮುಂದಿನ ನಿಗದಿತ ದಿನಾಂಕದಂದು ಪಾವತಿಮಾಡತಕ್ಕದ್ದು. (ಎಚ್.ಎಸ್.ಕೆ.)

ಬ್ಯಾಂಕು ನೋಟು : ಕಾಗದ ಹಣ. ದೇಶದ ಅಧಿಕೃತ ಬ್ಯಾಂಕು ಗ್ರಾಹಕನಿಗೆ ನೋಟಿನ ಮೇಲೆ ಮುದ್ರಿತವಾಗಿರುವಷ್ಟು ಮೊತ್ತವನ್ನು ಕೇಳಿದಾಗ ಕೊಡುವೆನೆಂಬ ಪ್ರಮಾಣವಚನವನ್ನು ಮುದ್ರಿಸಿ ನಾಣ್ಯಗಳ ಬದಲಿಗೆ ಚಲಾವಣೆಗೆ ಬಿಡುವ ವಿಧಿಬದ್ಧ ಹಣ. ಹಣದ ಇತಿಹಾಸದಲ್ಲಿ ನಾಣ್ಯಗಳ ತರುವಾಯ ಬಂದಮುಖ್ಯ ಬೆಳವಣಿಗೆ ಎಂದರೆ ನೋಟುಗಳ ಉಪಜ್ಞೆ (ಇನ್ ವೆನ್ಷ್ ನ್) ಮತ್ತು ಬಳಕೆ. ಬ್ಯಾಂಕು ನೋಟುಗಳ ವಿಕಾಸವನ್ನು ನಾಲ್ಕು ಮುಖ್ಯ ಹಂತಗಳಲ್ಲಿ ಗುರುತಿಸಲಾಗಿದೆ. ಪ್ರಥಮ ಹಂತದಲ್ಲಿ ಲೋಹದ ನಾಣ್ಯಗಳು ಬಹುಕಾಲ ಬಾಳಿಕೆ ಬರುವಂತಿದ್ದರೂ ಸುಲಭವಾಗಿ ಕಳುವಾಗಬಹುದಾಗಿದ್ದುದರಿಂದ ಹಿಂದಿನ ವ್ಯಾಪಾರಿಗಳು ಊರಿಂದೂರಿಗೆ ಹೋಗುವಾಗ ತಮ್ಮೊಡನೆ ನಿಜವಾದ ಹಣಕ್ಕೆ ಬದಲಾಗಿ ಹಣ ಪಡೆಯುವ ಹಕ್ಕು ಸೂಚಿ ಪತ್ರಗಳಣ್ನು ಒಯ್ಯುವ ವಾಡಿಕೆ ಇತ್ತು. ಆದರೆ ಆ ಪತ್ರಗಳು ಕ್ರಯ-ವಿಕ್ರಯ ವ್ಯವಹಾರದಲ್ಲಿ ಉಪಯೋಗವಾಗುತ್ತಿರಲಿಲ್ಲ; ಸಂಬಂಧಪಟ್ಟ ವ್ಯಕ್ತಿಗೆ ನೀಡಿ ಹಣ ಪಡೆಯುವುದಕ್ಕಷ್ಟೇ ಆಗಿತ್ತು. ಆ ಪತ್ರಗಳ ಮೇಲೆ ಸಂಬಂಧಪಟ್ಟ ವ್ಯಾಪಾರಿಯ ಅಂಕಿತವಿಲ್ಲದೇ ಯಾರೂ ಹಣ ಪಡೆಯಲಾಗುತ್ತಿರಲಿಲ್ಲವಾದ್ದರಿಂದ ಅವು ಕಳುವಾದರೆ ಯಾವ ನಷ್ಟವೂ ಆಗುತ್ತಿರಲಿಲ್ಲ. ಈ ಯೋಗ್ಯತಾಪತ್ರಗಳನ್ನು ಸಾಮಾನ್ಯವಾಗಿ ವ್ಯಾಪಾರಿಯ ಸ್ವಂತ ಊರಿನ ಗಣ್ಯವ್ಯಕ್ತಿ ನೀಡುತ್ತಿದ್ದ. ಪತ್ರದಲ್ಲಿ ನಮೂದಿಸಿರುವಷ್ಟು ಮೊಬಲಗನ್ನು ತನ್ನಲ್ಲಿ ಠೇವಣಿ ಇಟ್ಟಿರುವನೆಂದೂ ಆ ಹಣವನ್ನು ವ್ಯಾಪಾರಿಯ ಅಧಿಕೃತ ಅಪ್ಪಣೆಯ ಮೇರೆಗೆ ಅವನ ಸಾಲಿಗರಿಗೆ ಪಾವತಿಮಾಡುವ ಹಕ್ಕನ್ನು ಪಡೆದಿರುವನೆಂದೂ ಆ ಪತ್ರದಲ್ಲಿ ವ್ಯಾಪಾರಿ ಬರೆದುಕೊಡುತ್ತಿದ್ದ. ಎರಡನೆಯ ಹಂತದಲ್ಲಿ ಕಾಲ ಕ್ರಮೇಣ ಗಣ್ಯವ್ಯಕ್ತಿ ನೀಡುತ್ತಿದ್ದ ಯೋಗ್ಯತಾಪತ್ರದಲ್ಲಿ ಬ್ಯಕ್ತಿಯ ಹೆಸರು ಮತ್ತು ಅವನು ಠೇವಣಿ ಇಟ್ಟ ಮೊಬಲಗನ್ನು ನಮೂದಿಸುವುದಕ್ಕೆ ಬದಲಾಗಿ ಪತ್ರ ತರುವವರಿಗೆ ಎಂಬುದಾಗಿ ಬರೆದು ವ್ಯಕ್ತಿಯೇ ತನಗೆ ಅಗತ್ಯವಿರುವಷ್ಟು ಮೊಬಲಗನ್ನು ಸೂಚಿಸುವ ಪದ್ಧತಿ ಸ್ವಾಭಾವಿಕವಾಗಿ ಬೆಳೆದುಬಂತು. ಯೋಗ್ಯತಾ ಪತ್ರಗಳು ವಚನ ಪತ್ರಗಳಾಗಿ ಹಾಗೇ ಪ್ರವಾಸಿ ಚೆಕ್ಕುಗಳಾಗಿ ಪರಿವರ್ತನೆ ಹೊಂದಿದುವು ಯಾರಲ್ಲಿ ವಚನಪತ್ರ ಇರುತ್ತಿತ್ತೊ ಆತನ ಹಕ್ಕುದಾರನಾಗುತ್ತಿದ್ದ. ವಚನ ಪತ್ರವನ್ನು ಹಾಜರುಪಡಿಸಿ ಪಡೆಯುವುದಷ್ಟೇ ಅಲ್ಲದೆ ನಗದು ಬಾಕಿಯನ್ನೂ ಚುಕ್ತ ಮಾಡಬಹುದಾಗಿತ್ತು. ಅಂದಮೇಲೆ ಚವನಪತ್ರ ಅಥವಾ ಪ್ರವಾಸಿ ಚೆಕ್ಕು ಹಣವೇ ಆದಂತಾಗಿ ಅವನ್ನು ಪೂರ್ಣ ವಿಕಾಸಹೊಂದಿದ ಬ್ಯಾಂಕು ನೋಟುಗಳೆಂದು ಹೇಳಬಹುದಾಯಿತು. ಆದರೆ ವಚನ ಪತ್ರಗಳು ಠೇವಣಿ ಇಟ್ಟ ನಗದು ಹಣಕ್ಕೆ ಪ್ರತಿಯಾದ ರಶೀದಿ ಮಾತ್ರವಾಗಿರುತ್ತಿದ್ದು ಹಣದೋಪಾದಿಯಲ್ಲಿ ಬಳಕೆಯಾಗುತ್ತಿದ್ದುವಾದರೂ ಸರ್ವಸ್ವೀಕೃತ ವಿನಿಮಯ ಮಾಧ್ಯಮವಾಗಿರಲಿಲ್ಲ. ಪತ್ರಗಳನ್ನು ಅಥವಾ ಚೆಕ್ಕನ್ನು ಪಡೆದವನು ಅದನ್ನು ಕೂಡಲೆ ಬ್ಯಾಂಕಿಗೆ ಒಯ್ದು ನಗದು ಹಣ ಪಡೆಯುತ್ತಿದ್ದ. ಈ ವಚನಬದ್ಧ ಪತ್ರಗಳೇ ಇಂದು ಬ್ಯಾಂಕ್ ನೋಟುಗಳಾಗಿ ಅವುಗಳಮೇಲೆ ಅಧಿಕೃತ ಅಧಿಕಾರಿಯ ಅಂಕಿತದ ಜೊತೆಗೆ "ಹೊಂದಿರುವವನು ಕೇಳಿದ ಕೂಡಲೆ ಆ ಮೊತ್ತದ ಹಣ ಕೊಡಲು ವಚನವೀಯುತ್ತೇನೆ" ಎಂಬ ಬರಹದಿಂದ ಕೂಡಿದ್ದು ಚಲಾವಣೆಯಲ್ಲಿವೆ.

ಮೂರನೆಯ ಹಂತದಲ್ಲಿ ಬ್ಯಾಂಕು ನೋಟುಗಳ ಬಳಕೆ ಕ್ರಮೇಣ ಹೆಚ್ಚಾದ ಹಾಗೆ ಅವನ್ನು ಹಣಕ್ಕೆ ಪ್ರತಿಯಾದವು ಎನ್ನುವುದರ ಬದಲು ಅವುಗಳೇ ಹಣ ಎಂಬ ಭಾವನೆ ಉಂಟಾಯಿತು. ನೋಟುಗಳನ್ನು ಪಡೆದವರು ತತ್ ಕ್ಷಣವೇ ನಗದಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಬದಲಾಗಿ ಅವನ್ನೇ ವ್ಯವಹಾರಗಳಲ್ಲಿ ಪರಸ್ಪರ ಕೊಟ್ಟುಕೊಳ್ಳುವುದರೊಂದಿಗೆ ಚಲಾವಣೆಗೆ ತಂದರು. ಇದರಿಂದ ನೋಟುಗಳಿಗೆ ಚಲಾವಣೆ ಮಾನ್ಯತೆ ಲಭ್ಯವಾದಂತಾಯಿತು. ನೋಟುಗಳನ್ನು ಚಲಾವಣೆಗೆ ಬಿಟ್ಟ ಬ್ಯಾಂಕರನ ದೃಷ್ಟಿಯಿಂದ ಈ ಬೆಳವಣಿಗೆ ಅತ್ಯಂತ ಮಹತ್ತ್ವದ್ದು. ಒಬ್ಬರಿಂದೊಬ್ಬರಿಗೆ ಚಲಾವಣೆಯಾಗುವುವು ಎಂದ ಮೇಲೆ ಬಹಳಷ್ಟು ನೋಟುಗಳು ನಗದು ಕೋರಿ ಬ್ಯಾಂಕಿಗೆ ಹಿಂತಿರುಗುವುದಿಲ್ಲ ಎಂಬುದನ್ನೂ ಹಾಗೆ ನಗದಿದಾಗಿ ಬಂದ ನೋಟುಗಳ ಜಾಗದಲ್ಲಿ ಹೊಸ ನೋಟುಗಳನ್ನು ಚಲಾವಣೆಗೆ ಬಿಡಲು ಸಾಧ್ಯ ಎಂಬುದನ್ನೂ ಸಾರ್ವಜನಿಕ ವಿಶ್ವಾಸಗಳಿಸಿದ್ದಂಥ ಬ್ಯಾಂಕುಗಳಿಗೆ ಅನುಭವವಾಯಿತು. ಪರಿಣಾಮವಾಗಿ ಬ್ಯಾಂಕಿನ ಖಜಾನೆಯಲ್ಲಿದ್ದ ನಗದು ಹಣಕ್ಕೆ ಮೀರಿ ನೋಟುಗಳನ್ನು ಚಲಾವಣೆಗೆ ಬಿಡುವುದು ಪ್ರಾರಂಭವಾಯಿತು. ಅಂದರೆ ಒಂದು ಗೊತ್ತಾದ ಮೊತ್ತದ ಠೇವಣೆಯ ಆಧಾರದ ಮೇಲೆ ಅದರ ಹತ್ತು ಪಟ್ಟೋ ಹದಿನೈದು ಪಟ್ಟೋನೋಟುಗಳನ್ನು ಚಲಾವಣೆಗೆ ಬಿಡುವುದು ರೂಢಿಗೆ ಬಂತು. ಒಂದು ಮತ್ತು ಎರಡನೆಯ ಹಂತಗಳಲ್ಲಿ ಬ್ಯಾಂಕು ನೋಟುಗಳು ಹಣ ಎನ್ನಿಸಿಕೊಂಡಿರಲಿಲ್ಲ; ಲೋಹದ ನಾಣ್ಯಕ್ಕೆ ಪ್ರತಿ ನಿಧಿಯಾಗಿ ಕೇವಲ ಅನುಕೂಲ ಪತ್ರವಾಗಿದ್ದುವು. ಒಂದೊಂದು ನೋಟಿಗೂ ಸರಿಸಮವಾದ ಮೊತ್ತದ ಲೋಹದ ನಾಣ್ಯಗಳು ಬ್ಯಾಂಕಿನ ಅಥವಾ ಬ್ಯಾಂಕರನ ಖಜಾನೆಯಲ್ಲಿರುತ್ತಿದ್ದುವು. ಆದ್ದರಿಂದ ನೋಟುಗಳ ಚಲಾವಣೆಯಿಂದ ಹಣದ ಸರಬರಾಯಿ ಅಥವಾ ಒಟ್ಟು ಮೊತ್ತವೇನೂ ಹೆಚ್ಚಾಗುತ್ತಿರಲಿಲ್ಲ. ಆದರೆ ಮೂರನೆಯ ಹಂತದಲ್ಲಿ ಬ್ಯಾಂಕು ನೋಟುಗಳು ಕೇವಲ ಹಣದ ಬದಲಿಯಾಗಿರಲಿಲ್ಲ. ಅವು ಹಣದ ಸರಬರಾಯಿಯನ್ನು ಅಧಿಕ ಪ್ರಮಾಣದಲ್ಲಿ ಹೆಚ್ಚಿಸಿದುವು.

17 ಮತ್ತು 18ನೆಯ ಶತಮಾನಗಳು ಬ್ಯಾಂಕು ನೋಟುಗಳು ಕೋಶಾವಸ್ಥೆಯಿಂದ ಹೊರಬಿದ್ದ ಅವಧಿಯೆನಿಸಿದುವು. ಪ್ರಾರಂಭದಲ್ಲಿ ನೋಟುಗಳನ್ನು ಚಲಾವಣೆಗೆ ಬಿಡುವ ಅವಕಾಶವನ್ನು ಬ್ಯಾಂಕುಗಳು ದುರುಪಯೋಗಪಡಿಸಿಕೊಂಡವು ಹಾಗೂ ಅವು ಜನಾದರಣೀಯ ಆಗಲಿಲ್ಲ. ಬ್ಯಾಂಕುಗಳು ತಮ್ಮಲ್ಲಿರುವ ನಗದು ಹಣಕ್ಕೆ ಮೀರಿ ನೋಟುಗಳನ್ನು ಚಲಾವಣೆಗೆ ತರುತ್ತಿವೆ ಎಂಬುದು ಪ್ರಚಾರವಾದಾಗ ಕೆಲವು ಬ್ಯಾಂಕುಗಳು ಕದ ಮುಚ್ಚಬೇಕಾಯಿತು. ನೋಟುಗಳನ್ನು ನಗದೀಕರಿಸಲು ತೊಂದರೆಯಿಲ್ಲದಿರುವತನಕ ಸಾಮಾನ್ಯವಾಗಿ ಬಹುಪಾಲು ನೋಟುಗಳು ನಗದು ಕೋರಿ ಬ್ಯಾಂಕಿಗೆ ಬರುವುದಿಲ್ಲ. ಆದರೆ ಯಾವುದೇ ಬ್ಯಾಂಕು ನೋಟುಗಳನ್ನು ನಗದಾಗಿ ಪರಿವರ್ತಿಸಿ ಕೊಡಲು ಕೊಂಚ ಅಶಕ್ತವಾದರೂ ನೋಟು ಹೊಂದಿರುವವರು ಗಾಬರಿಗೊಂಡು ನಗದು ಹಣಕ್ಕಾಗಿ ಬ್ಯಾಂಕಿಗೆ ಬರುವುದು ಸ್ವಾಭಾವಿಕ. ಕೆಲವು ಬ್ಯಾಂಕುಗಳು ಮೀಸಲು ನಗದಿನ ಮಿತಿಯನ್ನೂ ಮೀರಿ ನೋಟುಗಳನ್ನು ಚಲಾವಣೆಗೆ ತಂದವು. ಇದರಿಂದ ಬ್ಯಾಂಕುಗಳ ಪ್ರಾಮಾಣಿಕತೆ ಮತ್ತು ನಗದೀಕರಣ ಸಾಮಥ್ರ್ಯದ ಬಗೆಗೆ ಖಚಿತ ಅಭಿಪ್ರಾಯ ಹೊಂದಿರದಿದ್ದ ನೋಟುದಾರರು ನಗದು ಪಡೆಯಲು ಆಯಾ ಬ್ಯಾಂಕಿಗೆ ನುಗ್ಗಲಾರಂಭಿಸಿದರು. ನಗದಿಗಾಗಿ ನೂಕುನುಗ್ಗಲು ಹೆಚ್ಚಾದಂತೆ ಬ್ಯಾಂಕುಗಳ ನಗದೀಕರಣ ಸಾಮಥ್ರ್ಯ ಕುಗ್ಗಿತು. ಬ್ಯಾಂಕು ನೋಟುಗಳ ಹತೋಟಿರಹಿತ ಚಲಾವಣೆ ದೇಶದ ಆರ್ಥಿಕ ರಚನೆಗೆ ಅಪಾಯಕಾರಿ ಎಂಬುದು ಆಗಿನ ರಾಜಕಾರಣಿಗಳಿಗೆ ತಿಳಿದಿತ್ತು. ತಮ್ಮಲ್ಲಿ ಠೇವಣಿ ಇರುವ ನಗದು ಹಣಕ್ಕೆ ಮೀರಿ ನೋಟುಗಳನ್ನು ಹೊರಡಿಸುವುದು ಅಪಾಯಕಾರಿ ಎಂದು ಬ್ಯಾಂಕುಗಳಿಗೂ ಅರಿವಿತ್ತು. ಒಟ್ಟಿನಲ್ಲಿ ನೋಟುಗಳ ಪ್ರಮಾಣವನ್ನು ಬ್ಯಾಂಕಿನ ಖಜಾನೆಯಲ್ಲಿದ್ದ ನಗದಿಗೆ ಮಿತಿಗೊಳಿಸುವುದು ರೂಢಿಗೆ ಬಂತು. ಅಲ್ಲದೆ ನೋಟುಗಳನ್ನು ಹೊರಡಿಸುವ ಸ್ವಾಮ್ಯವನ್ನು ಸರ್ಕಾರದ ಹತೋಟಿಯಲ್ಲಿರುವ ಬ್ಯಾಂಕುಗಳಿಗೆ ವಹಿಸಿಕೊಡಲಾಯಿತು. ಬ್ರಿಟಿಷರ ಕಾಲದ ಭಾರತದಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಈ ಆಧಿಕಾರವಿತ್ತು. 19ನೆಯ ಶತಮಾನದಲ್ಲಿ ಪ್ರಾರಂಭವಾದ ಕೇಂದ್ರೀಯ ಬ್ಯಾಂಕಿನ ಬೆಳವಣಿಗೆ ಯಿಂದ ನೋಟು ಚಲಾವಣಾ ವಿಧಿ-ವಿಧಾನಗಳಿಗೆ ವೈಜ್ಞಾನಿಕ ರೂಪ ಪ್ರಾಪ್ತವಾಯಿತು. ಏಕರೂಪತೆ, ಸ್ಧಿತಿಸ್ಥಾಪಕತ್ವ ಮತ್ತು ಸುರಕ್ಷತೆಗಳ ದೃಷ್ಟಿಯಿಂದ ಕೇಂದ್ರೀಯ ಬ್ಯಾಂಕುಗಳು ನೋಟು ಮುದ್ರಣ ಸ್ವಾಮ್ಯ ಪಡೆದುವು. 1833ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಪ್ರಪಂಚದ ಪ್ರಥಮ ಕೇಂದ್ರೀಯ ಬ್ಯಾಂಕು, ತಾನು ಹೊರಡಿಸುವ ನೋಟುಗಳು ಶಾಸಬದ್ಧ ಹಣ ಎಂಬುದಾಗಿ ಘೋಷಿಸಿತು. ಹಾಗೂ ಯಾರೇ ಅಗಲಿ ಆ ನೋಟುಗಳನ್ನು ಅಧಿಕೃತವಾಗಿ ಋಣಪರಿಹಾರ ಸಾಧನವಾಗಿ, ವಿನಿಮಯ ಮಾಧ್ಯಮವಾಗಿ ಉಪಯೋಗಿಸಬಹುದೆಂದು ಹೇಳಿದಂತಾಯಿತು. ಕೇವಲ ರೂಢಿಯಲ್ಲಿ ಹಣ ಎನ್ನಿಸಿಕೊಂಡದ್ದು ಅಧಿಕೃತ ಹಣವಾಯಿತು. ನೋಟುಗಳಿಗೆ ಉನ್ನತವಾದ ಅಂತಸ್ತು ಪ್ರಾಪ್ತವಾಯಿತು. ಆದರೂ ಹುಟ್ಟನಿಂದ ಬಂದ ಕೆಲವು ಅಂಶಗಳು ಈಗಲೂ ಅವುಗಳಿಗೆ ಅಂಟಿಕೊಂಡಿವೆ. ಕೇಳಿದ ಕೂಡಲೆ ಚಿನ್ನದ ನಾಣ್ಯಕ್ಕೆ ಪರಿವರ್ತನೆಯಾಗದ ನೋಟುಗಳನ್ನು ಹಣವೆಂದು ಪರಿಗಣಿಸುತ್ತಿರಲಿಲ್ಲ. ಯುದ್ಧಗಳ ಪರಿಣಾಮವಾಗಿ ಉದ್ಭವಿಸಿದ ಹಣದುಬ್ಬರ ಕಾಗದ ಹಣ ಸುಭದ್ರವಾಗಿರಬೇಕಾದರೆ ಎಲ್ಲ ಕಾಲದಲ್ಲಿಯೂ ಚಿನ್ನಕ್ಕೆ ಪರಿವರ್ತನೆಯಾಗುವ ಅವಕಾಶವಿರಬೇಕೆಂಬ ಸಾಮಾನ್ಯ ನಿಯಮವನ್ನು ದೃಢಪಡಿಸಿತು. ಇದರಿಂದ ಪರಿವರ್ತನೆಯ ಮೂಲತತ್ತ್ವ ಮತ್ತಷ್ಟು ಸ್ಥಿರವಾಯಿತು. ಆದಾಗ್ಯೂ ಚಿನ್ನದ ನಾಣ್ಯಗಳನ್ನು ಕರಗಿಸಿ ಗಟ್ಟಿಮಾಡುವುದನ್ನೂ ಅದನ್ನು ರಫ್ತುಮಾಡುವುದನ್ನೂ ನಿಷೇಧಿಸಲಾಗಿತ್ತಾದ್ದರಿಂದ ನೋಟುಗಳನ್ನು ಚಿನ್ನದ ನಾಣ್ಯಗಳಿಗೆ ಪರಿವರ್ತಿಸಿಕೊಳ್ಳುವುದು ಆಕರ್ಷಕವೆನಿಸಲಿಲ್ಲ. 1925ರಲ್ಲಿ ನಾಣ್ಯ ಪರಿವರ್ತನೆ ಪುನರ್ ಸ್ಥಾಪಿತವಾಯಿತಾದರೂ ಆ ವೇಳೆಗಾಗಲೇ ನೋಟುಗಳ ಬಗ್ಗೆ ಹಿಂದೆ ಇದ್ಧ ಅವಿಶ್ವಾಸ ಮಾಯವಾಗ ತೊಡಗಿತ್ತು. ಏಕೆಂದರೆ, ಹೊಸ ಮಸೂದೆಯ ಪ್ರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್ ಪ್ರತಿಯೊಂದು ನೋಟಿಗೂ ಚಿನ್ನದ ಸವರನ್ನು ಕೊಡಬೇಕೆಂಬ ನಿಯಮವಿರಲಿಲ್ಲ. ಜನಸಾಮಾನ್ಯರು ಆ ಬಗ್ಗೆ ಆಲೋಚಿಸುತ್ತಲೂ ಇರಲಿಲ್ಲ. 1931ರಲ್ಲಿ ಸುವರ್ಣಪ್ರಮಿತಿಯನ್ನು ಅಂತಿಮವಾಗಿ ಕೈಬಿಟ್ಟಾಗ ಪರಿವರ್ತನೀಯ ನೋಟುಗಳ ಇತಿಹಾಸ ಮುಕ್ತಾಯವಾದಂತಾಯಿತು. ಅಲ್ಲಿಂದೀಚೆಗೆ ಬ್ಯಾಂಕ್ ನೋಟುಗಳು ಅಪರಿವರ್ತನೀಯ ನೋಟುಗಳಾಗಿಯೇ ಸಾಗಿಬಂದಿವೆ. ನೋಟುಗಳ ಮೇಲೆ ಈಗಲೂ ಕಾಣಬರುವ 'ಕೊಡುವ ವಚನವೀಯತ್ತೇನೆ ಎಂಬ ಒಕ್ಕಣೆ ಕೇವಲ ಹಣ ವಿನಿಮಯ ಭದ್ರತೆಗಾಗಿ ಎನ್ನಬಹುದಾಗಿದೆ. ಕೇಂದ್ರ ಬ್ಯಾಂಕು ಚಲಾವಣೆಗೆ ಕೊಡುವ ನೋಟುಗಳು ಇಂದು ಹಣವಾಗಿ ಸರ್ವಸ್ವೀಕೃತವಾಗಿವೆ. ಬ್ಯಾಂಕು ನೋಟುಗಳ ಇತಿಹಾಸದಲ್ಲಿ ಇದು ನಾಲ್ಕನೆಯ ಹಾಗೂ ಕೊನೆಯ ಹಂತವಾಗಿದೆ. ಈ ಹಂತ ತಲುಪಿದಮೇಲೆ ಹಣವಾಗಿ ಹೊಂದಬಹುದಾದ ಏಕೈಕರೂಪ ಎಂದು ಭಾವಿಸಿದ್ದ ಚಿನ್ನದ ನಾಣ್ಯ ಹಾಗೂ ಅದರ ಜೋಡಿ ನಾಣ್ಯಗಳು ಅದೃಶ್ಯವಾದುವು. ಕಾಗದದ ನೋಟುಗಳು ಮತ್ತು ಸಹಾಯಕ ಘಟಕಗಳಾದ ಚಿಲ್ಲರೆ ನಾಣ್ಯಗಳ ಹೊರತು ಯಾವ ರಾಷ್ಟ್ರವೂ ಇಂದು ಲೋಹದ ನಾಣ್ಯ ಪದ್ಧತಿಯನ್ನು ಅನುಸರಿಸುತ್ತಿಲ್ಲ. (ನೋಡಿ- ನೋಟು-ನೀಡಿಕೆ) (ಕೆ.ಜಿಒ.)

ಬ್ಯಾಂಕ್ ಸಿಲ್ಕು : ಬ್ಯಾಂಕಿನ ಖಾತೆದಾರರ ಲೆಕ್ಕದಲ್ಲಿ ಉಳಿದಿರುವ ಹಣದ ಮೊತ್ತ. ಖಾತೆದಾರನ ಲೆಕ್ಕದಲ್ಲಿ ಖರ್ಚಿಗಿಂತ ಜಮಾ ಹೆಚ್ಚಿದರೆ ಲೇಣಿಸಿಲ್ಕು ಎಂದೂ ವಿಲೋಮವಾಗಿ, ದೇಣಿ ಸಿಲ್ಕು ಎಂದು ಹೇಳುತ್ತೇವೆ. ಚೆಕ್ಕಿನ ಮುಖಾಂತರ ವ್ಯವಹರಿಸುವ ಬ್ಯಾಂಕಿನ ಲೇಣಿ ಮತ್ತು ದೇಣಿಗಳ ವ್ಯತ್ಯಾಸದ ಲೆಕ್ಕವನ್ನು ಬ್ಯಾಂಕ್ ಸಿಲ್ಕು ಸೂಚಿಸುತ್ತದೆ. ಲೇಣಿಗಳು ದೇಣೆಗಳಿಗಿಂತ ಹೆಚ್ಚಿದ್ದರೆ ಲೇಣಿ ಸಿಲ್ಕು, ದೇಣಿಗಳು ಲೇಣಿಗಳಿಗಿಂತ ಹೆಚ್ಚಿದ್ದರೆ ದೇಣಿಸಿಲ್ಕು ಬ್ಯಾಂಕಿನ ಲೆಕ್ಕದಲ್ಲಿರುತ್ತದೆ. ಹಾಗೆಯೇ ಈ ಸಿಲ್ಕುಗಳು ಬ್ಯಾಂಕುಗಳು ತಮ್ಮ ಠೇವಣಿಗಳನ್ನು ಇತರ ಬ್ಯಾಂಕುಗಳಲ್ಲಿ ಇಟ್ಟಿರುವ ಮೊತ್ತ ಸೂಚಕವೂ ಆಗಬಹುದು.

ಬ್ಯಾಂಕಿನ ಒಪ್ಪಿಗೆ : ಗ್ರಾಹಕರ ಬೇಡಿಕೆಯನ್ನು ಮನ್ನಿಸುವುದು. ಅಂದರೆ ಖಾತೆದಾರರ ಹುಂಡಿಗಳನ್ನು ಅಥವಾ ಚೆಕ್ಕುಗಳನ್ನು ಒಪ್ಪಿ ಅದಕ್ಕೆ ಹಣ ನೀಡುವುದು. ಇದರ ಪ್ರಕಾರ ಬ್ಯಾಂಕಿನ ಖಾತೇದಾರರಾಗಲಿ ಪಾಲುಗಾರಿಕೆ ಅಥವಾ ಕೂಡು ಬಂಡವಾಳ ಸಂಸ್ಥೆಗಳಾಗಲಿ, ಬ್ಯಾಂಕಿನಿಂದ ಆರ್ಥಿಕ ನೆರವು ಪಡೆಯುವುದು ಸಾಧ್ಯ. ವಿದೇಶದಿಂದ ಸರಕನ್ನು ಆಮದು ಮಾಡಿಕೊಂಡವನು ತನ್ನ ಬ್ಯಾಂಕಿನೊಡನೆ ಒಪ್ಪಂದ ಮಾಡಿಕೊಂಡು ಮಾರಾಟಗಾರನಿಗೆ ಅಥವಾ ರಫ್ತು ಮಾಡಿದಾತನಿಗೆ ಕೊಡಬೇಕಾದ ಹಣಕ್ಕೆ ಹುಂಡಿಪತ್ರ ಬರೆಯಲು ಅವಕಾಶ ಮಾಡಿಕೊಡುತ್ತಾನೆ. ಬ್ಯಾಂಕು ಆ ಪತ್ರಕ್ಕೆ ಅಥವಾ ಹುಂಡಿಗೆ ತನ್ನ ಒಪ್ಪಿಗೆ ಸೂಚಿಸಲು ಪತ್ರದ ಮೇಲೆ ಒಪ್ಪಿದೆ ಎಂದು ಬರೆದು. ಹಣ ಸಂದಾಯವಾಗುವ ದಿನಾಂಕ, ಸ್ಥಳ ಇವನ್ನು ನಮೂದಿಸುತ್ತದೆ. ಬ್ಯಾಂಕಿನ ಒಪ್ಪಿಗೆಯನ್ನು ಪಡೆದ ಆ ಹುಂಡಿ ರಫ್ತು ವ್ಯಾಪಾರಿಯ ಕೈ ಸೇರುತ್ತದೆ. ಆತ ಹುಂಡಿಯ ಹಣ ಸಂದಾಯವಾಗುವ ವಾಯಿದೆಯ ದಿನದವರೆಗೂ ಹುಂಡಿಯನ್ನು ಕೈಯಲ್ಲಿಟ್ಟುಕೊಳ್ಳಬಹುದು. ಹಾಗಿಲ್ಲದೆ ಹಣದ ತುರ್ತು ಆವಶ್ಯ ಕತೆಯಿದ್ದರೆ, ಆ ಹುಂಡಿಯನ್ನು ವಟ್ಟಮಾಡಿ ಹಣ ಪಡೆಯಬಹುದು. ಒಟ್ಟಿನಲ್ಲಿ ಹೇಳಬಹುದಾದರೆ ಬ್ಯಾಂಕಿನ ಈ ಒಪ್ಪಿಗೆ ಕ್ರಮದಿಂದ ವಿದೇಶೀ ವ್ಯಾಪಾರ ಕುದುರಲು ಸಹಾಯವಾಗುತ್ತದೆ. ಏಕೆಂದರೆ ಆರ್ಥಿಕವಾಗಿ ಬಲವಾಗಿರುವ, ಮತ್ತು ಹೆಸರುಗಳಿಸಿರುವ ಒಂದು ಬ್ಯಾಂಕ್ ತನ್ನ ವಿಶ್ವಾಸಾರ್ಹತೆಯನ್ನು ತನ್ನ ಖಾತೆದಾರ ತನ್ನ ವ್ಯಾಪಾರಕ್ಕೆ ಸಹಾಯಕವಾಗುವಂತೆ ಬಳಸಿಕೊಳ್ಳಲು ಅನುಮತಿ ನೀಡುತ್ತದೆ. ಹುಂಡಿಗೆ ಒಪ್ಪಿಗೆ ಕೊಡುವ ಬ್ಯಾಂಕ್ ತನ್ನ ಖಾತೆದಾರ ಆ ಪತ್ರದ ಹಣವನ್ನು ಪತ್ರದ ವಾಯಿದೆ ಕಾಲಕ್ಕೆ ಮುಂಚೆಯೇ ಜಮಾ ಮಾಡುವಂತೆ ನಿಗದಿಮಾಡುತ್ತದೆ. (ಪಿ.ಎಸ್.ಎನ್.)

ಬ್ಯಾಂಕು-ಗ್ರಾಹಕ ಸಂಬಂಧ : ಬ್ಯಾಂಕರನಿಗೂ (ಬ್ಯಾಂಕಿಂಗ್ ವ್ಯವಹಾರ ಮಾಡುವವನು) ಗ್ರಾಹಕನಿಗೂ ಇರುವ ಸಾಮಾನ್ಯ ಸಂಬಂಧ ಮೂಲತಃ ಋಣಿಗೂ (ದೇಣಿದಾರ) ಸಾಲಿಗನಿಗೂ (ಲೇಣಿದಾರ) ನಡುವೆ ಇರುವಂಥದು ಎಂದು ಸರ್‍ಜೆನ್ ಪೇಜೆಟ್ ಹೇಳುತ್ತಾನೆ. ಇವರಿಬ್ಬರಲ್ಲಿ ಯಾರು ಋಣಿ ಯಾರು ಸಾಲಿಗ ಎಂಬುದು ಗ್ರಾಹಕನ ಖಾತೆಯ ತತ್ಕಾಲೀನ ಸ್ಥಿತಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಬ್ಯಾಂಕಿನಲ್ಲಿ ಗ್ರಾಹಕ ಹಣವನ್ನು ಠೇವಣಿ ಮಾಡಿದಾಗ ಬ್ಯಾಂಕು ಅದನ್ನು ಅವನ ಪರವಾಗಿ ಭದ್ರಕೋಣೆಯಲ್ಲಿ ಬೀಗಹಾಕಿ ಇಡುವ ಬದಲು ಅವನು ಆ ಹಣಕ್ಕೆ ಗ್ರಾಹಕನ ಋಣಿಯಾಗುತ್ತಾನೆ. ಏಂದರೆ ಅದನ್ನು ಋಣವೆಂದು ಪರಿಗಣಿಸುತ್ತಾನೆ. ಬ್ಯಾಂಕರಿನಲ್ಲಿ ಠೇವಣಿಯಾಗಿ ಇಡಲಾದ ಹಣ ಅವನದೇ ಸ್ವತ್ತಾಗುತ್ತದೆ. ಅದನ್ನು ವಿನಿಯೋಗಿಸಲು ಅವನು ಸಂಪೂರ್ಣವಾಗಿ ಹಕ್ಕುಗಳ್ಳವನಾಗುತ್ತಾನೆ. ನ್ಯಾಸದ ಹಣದವಿನಾ ಉಳಿದ ಯಾವುದೇ ಹಣವನ್ನು ಅವನು ತನ್ನ ಗ್ರಾಹಕನಿಂದ ಅಥವಾ ಗ್ರಾಹಕನ ಸಲುವಾಗಿ ಪಡೆದರೂ ತನ್ನ ಗ್ರಾಹಕನಿಗೆ ಅವನು ಋಣಿಯಾಗುವಂತೆ ಮಾಡುತ್ತದೆ. ಜೊತೆಗೆ, ತನ್ನ ಗ್ರಾಹಕನ ಲೆಕ್ಕದಲ್ಲಿರುವ ಸಿಲ್ಕಿನ ಮೇಲೆ ಆ ಗ್ರಾಹಕ ಲೇಖಿಸುವ ಚೆಕ್ಕುಗಳನ್ನು, ಆ ಸಿಲ್ಕಿನ ಮೊಬಲಗು ಸಾಕಷ್ಟು ಇದ್ದು ಅದು ಲಭ್ಯವಿರುವವರೆಗೆ ಪಾವತಿಮಾಡಲು ಬ್ಯಾಂಕರ್ ಬಾಧ್ಯನಾಗುತ್ತಾನೆ. ಆದರೆ ಬ್ಯಾಂಕರ್ ತನ್ನ ಗ್ರಾಹಕನಿಗೆ ಸಲ್ಲಿಸಬೇಕಾಗಿರುವ ಋಣಕ್ಕೂ ಸಾಮಾನ್ಯ ವಾಣಿಜ್ಯಕ ಋಣಗಳಿಗೂ ಒಂದು ಮುಖ್ಯ ವಿಚಾರದಲ್ಲಿ ವ್ಯತ್ಯಾಸ ಇರುತ್ತದೆ. ಸಾಮಾನ್ಯ ಋಣವನ್ನು ಪಾವತಿಮಾಡಬೇಕೆಂದು ಋಣಿಯನ್ನು ಸಾಲಿಗೆ ಕೇಳಬೇಕಾದುದಿಲ್ಲ. ಆದರೆ ಗ್ರಾಹಕ ಹಣವನ್ನು ಪಾವತಿ ಮಾಡಬೇಕೆಂದು ಕೋರುವವರೆಗೂ ಬ್ಯಾಂಕರ್ ಪಾವತಿ ಮಾಡಬೇಕಾದುದಿಲ್ಲವಷ್ಟೆ ಅಲ್ಲ, ಅದನ್ನು ಪಾವತಿ ಮಾಡಕೂಡದು. ಬ್ಯಾಂಕರು ಹಣ ಪಾವತಿ ಮಾಡದಿರುವುದು ಗೊತ್ತಿಲ್ಲದೆ, ಗ್ರಾಹಕ ಆ ಖಾತೆಯ ಮೇಲೆ ಚೆಕ್ಕುಗಳನ್ನು ಪಾವತಿ ಮಾಡಿದ್ಧ ಪಕ್ಷದಲ್ಲಿ ಸಿಲ್ಕು ಇಲ್ಲವೆಂಬ ಕಾರಣದಿಂದ ಬ್ಯಾಂಕರು ಅದನ್ನು ಅನಾಧರಿಸಬೇಕಾಗುತ್ತದೆ. ಇದರಿಂದ ಗ್ರಾಹಕನ ಪ್ರತ್ಯಯಕ್ಕೆ ಧಕ್ಕೆ ಉಂಟಾಗುತ್ತದೆ. ಗ್ರಾಹಕನ ಕೋರಿಕೆಯ ವಿನಾ ಅವನ ಖಾತೆಯನ್ನು ಮುಚ್ಚಲು ಅಥವಾ ಅವನ ಠೇವಣಿಯ ಹಣವನ್ನು ಹಿಂದಿರುಗಿಸಲು ಬ್ಯಾಂಕರನಿಗೆ ಸಾಮಾನ್ಯವಾಗಿ ಅಧಿಕಾರ ಇರುವುದಿಲ್ಲ. ಆದರೆ ಬ್ಯಾಂಕರಿನಲ್ಲಿ ಭದ್ರತೆಗಾಗಿ ಇಡಲಾಗುವ ಪ್ರತಿಭೂತಿಗಳು ಅಥವಾ ಅಮೂಲ್ಯ ವಸ್ತುಗಳಿಗೆ ಸಂಬಂಧಿಸಿದಂತೆ ಆತ ಋಣಿಯೆನಿಸುವುದಿಲ್ಲ. ಅವನು ನ್ಯಾಸಧಾರಿಯಾಗುತ್ತಾನೆ. ಬ್ಯಾಂಕು ತನ್ನ ಗ್ರಾಹಕನ ಪರವಾಗಿ ಪ್ರತಿ ಭೂತಿಗಳನ್ನು ಕೊಳ್ಳುವಾಗ ಅಥವಾ ಮಾರುವಾಗ ಅವನ ಅಭಿಕರ್ತನಾಗುತ್ತಾನೆ. ಅಲ್ಲದೆ ನ್ಯಾಸಧಾರಿ, ಅಟರ್ನೀ, ನಿರ್ವಾಹಕ, ಸಂಪರ್ಕ ಅಥವಾ ಪ್ರತಿನಿಧಿ ಮುಂತಾದ ಅಭಿಕರಣ ಸ್ಥಾನಗಳಲ್ಲೂ ಅವನು ವರ್ತಿಸಬಹುದು.

ಮೇಲೆ ಹೇಳಿದ ಬ್ಯಾಂಕು-ಗ್ರಾಹಕ ಸಂಬಂಧವಲ್ಲದೆ ಬ್ಯಾಂಕರನಿಗೆ ಕೆಲವೊಂದು ಶಾಸನಬದ್ಧ ಹೊಣೆಗಳೂ ಇವೆ. ಅವುಗಳಲ್ಲಿ ಚೆಕ್ಕುಗಳನ್ನು ಗೌರವಿಸುವುದು ಕೂಡಸೇರಿದೆ. ಚಾಲ್ತಿ ಖಾತೆಯನ್ನು ತೆರೆಯುವುದರ ಮೂಲಕ ಬ್ಯಾಂಕರನು ಗ್ರಾಹಕನ ಖಾತೆಯಲ್ಲಿ ಹಣವಿರುವವರೆಗೆ ಮತ್ತು ಆಯಾ ವಿಭಾಗದ ವ್ಯವಹಾರ ನಿಬಂಧನೆಗೊಳಪಟ್ಟು ಚೆಕ್ಕುಗಳನ್ನು ಕೊಟ್ಟ ದಿನದಿಂದ ಮೂರು ಅಥವಾ ಆರು ತಿಂಗಳೊಳಗಾಗಿ ಅವನ್ನು ಗೌರವಿಸಲು ಬದ್ಧನಿರುತ್ತಾನೆ. ಆದರೆ, ಆ ಗ್ರಾಹಕನ ಖಾತೆಯ ವಿರುದ್ಧ ನ್ಯಾಯಾಲಯದ ಯಾವುದೇ ಪ್ರಕಾರದ ಪ್ರತಿಬಂಧಾಜ್ಞೆ ಇರಕೂಡದು.

ಬ್ಯಾಂಕರನ ಸಾಮಾನ್ಯ ಧಾರಣಾಧಿಕಾರದ ತದ್ವಿರುದ್ಧ ಒಪ್ಪಂದವಿದ್ದ ಹೊರತು ಖಾತೆಗಳ ಸಾಮಾನ್ಯಸಮತೋಲನವನ್ನು ಕಾಯ್ದುಕೊಳ್ಲುವ ಸಲುವಾಗಿ ತನ್ನಲ್ಲಿರಿಸಿದ ಯಾವುದೇ ವಸ್ತುಗಳನ್ನಾಗಲಿ ಅಥವಾ ಭದ್ರತಾ ಪತ್ರಗಳನ್ನಾಗಲೀ ಜಾಮೀನಾಗಿ ಇಟ್ಟುಕೊಳ್ಳಬಹುದು. ಭಾರತೀಯ ಕಾಯಿದೆ ಬ್ಯಾಂಕರ್ ಮತ್ತು ಗ್ರಾಹಕರ ನಡುವಿನ ವ್ಯವಹಾರದಲ್ಲಿ ಬ್ಯಾಂಕರನ ವಶಕ್ಕೆ ಬರುವ ಎಲ್ಲ ಜಾಮೀನು ಪತ್ರಗಳ ಸಂಬಂಧದಲ್ಲಿ ಈ ಧಾರಣಾಧಿಕಾರವನ್ನು ಚಲಾಯಿಸಲು ಅನುಮತಿ ಕೊಡುವುದಲ್ಲದೆ. ಈ ಧಾರಣಾಧಿಕಾರದ ವಿರುದ್ಧ ಸ್ವಪಷ್ಟವಾದಕರಾರು ಇದ್ದಹೊರತು, ಆದು ವಸ್ತುಗಳಿಗೂ ಅನ್ವಯಿಸುವಂತೆ ಪ್ರವರ್ತಿಸುತ್ತದೆ. ಇಂಥ ಧಾರಣಾಧಿಕಾರ ಹೊಂದಿರಲು ಏನೊಂದೂ ಒಪ್ಪಂದವಾಗಿರಬೇಕಾಗಿಲ್ಲ. ಆದರೆ ಸುರಕ್ಷಿತತೆಗಾಗಿ ಇರಿಸಲಾದ ಜಾಮೀನು ಪತ್ರಗಳ ಮೇಲೆ ಅಥವಾ ವಸ್ತುಗಳ ಮೇಲೆ ಅಥವಾ ವಿಶಿಷ್ಟ ಉದ್ಧೇಶಕ್ಕಾಗಿ ಇರಿಸಲಾದ ಹುಂಡಿಗಳ ಮೇಲೆ ಬ್ಯಾಂಕರನಿಗೆ ಧಾರಣಾಧಿಕಾರವಿರುವುದಿಲ್ಲ. ಕೆಲವು ಸಂದರ್ಭಗಳಲಿ ಬ್ಯಾಂಕರನು ಹಣ ಶೇಖರಣಾ ಕರ್ತನಾಗಿ ವರ್ತಿಸುವುದರಿಂದ ಹಣ ಶೇಖರಿಸುವುದರ ಸಲುವಾಗಿ ಠೇವಣಿಮಾಡಲಾದ ಬಾಂಡುಗಳು ಮತ್ತು ಕೂಪನ್ನುಗಳಿಗೆ ಈ ಧಾರಣಾಧಿಕಾರ ಅನ್ವಯಿಸುತ್ತದೆ.

ಗ್ರಾಹಕರು ಖಾತೆಯ ವಿಷಯವನ್ನು ರಹಸ್ಯವಾಗಿಡುವುದು ಬ್ಯಾಂಕರನ ಹೊಣೆ. ಗ್ರಾಹಕರ ಗೌರವಕ್ಕೆ ಚ್ಯುತಿ ತರತಕ್ಕ ಅವರ ಖಾತೆಯ ಯಾವೊಂದು ವಿಷಯವನ್ನೂ ಬೇರೊಬ್ಬರಿಗೆ ತಿಳಿಯತಕ್ಕದಲ್ಲ. ಆದರೆ ನ್ಯಾಯಾಲಯ ಆಜ್ಞೆ ಮಾಡಿದಾಗ ಅಥವಾ ನ್ಯಾಯಾಲಯದಿಂದ ಖಾತೆದಾರನ ವಿರುದ್ಧ ಸಾಲಗಾರ ಅಪ್ಪಣೆ ಪಡೆದಿರುವಾಗ ಮತ್ತೊಬ್ಬ ಬ್ಯಾಂಕರನಿಗೆ ಮಾಹಿತಿ ಬೇಕಾದಾಗ ಖಾತೆದಾರನ ಜಾಮೀನದಾರರು ಹಣಕಾಸಿನ ಸ್ಥಿತಿಗತಿ ಕುರಿತು ವಿಚಾರಿಸಿದಾಗ, ರಾಜ್ಯಕ್ಕೆ ಅಪಾಯ ಅಥವಾ ದ್ರೋಹ ಒದಗಿದಾಗ ಸರ್ಕಾರಿ ಕರ್ತವ್ಯರೂಪವಾಗಿ ವಿಚಾರಿಸಿದಾಗ ಮತ್ತು ಬ್ಯಾಂಕರನು ತನ್ನ ಸ್ವಂತದ ಹಿತ ಸಂಬಂಧಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಖಾತೆದಾರನ ವಿಷಯ ಬಹಿರಂಗ ಪಡಿಸಬಹುದು. ತನ್ನ ಗ್ರಾಹಕರ ಹಣಕಾಸಿನ ಸ್ಥಿತಿಗತಿಯ ವಿವರ ಕೇಳಿದಾಗ ಬ್ಯಾಂಕರ್ ವಸ್ತುಸ್ಥಿತಿಯನ್ನು ಮಾತ್ರ ತಿಳಿಯಪಡಿಸಬೇಕೆ ಹೊರತು ವದಂತಿಗಳಿಗೆ ಎಡೆಕೊಡಕೂಡದು ಅಥವಾ ಖಾತೆದಾರರ ಹಣಕಾಸಿನ ಸ್ಥಿತಿಗತಿ ಕುರಿತು ಟೀಕೆ ಮಾಡಕೂಡದು. ಗ್ರಾಹಕ ಫಲ ಹತವಾದ ಖಾತೆ ಇಟ್ಟುಕೊಂಡಿರಬಹುದು ಮತ್ತು ಈ ನಿಮಿತ್ತವಾಗಿ ಬೇರೆಡೆಗೆ ಉಚಿತವಾಗಿ ಹಣ ಕಳಿಸುವ ಮತ್ತು ಚೆಕ್ಕುಗಳ ಹಣ ಪಡೆಯುವ ಪ್ರಯೋಜನ ಹೊಂದಬಹುದು. ಬ್ಯಾಂಕರ್ ಅದಕ್ಕೆ ತಗಲುವ ವೆಚ್ಚಗಳನ್ನು ಖಾತೆದಾರರಿಂದ ಪಡೆಯುವ ಅಧಿಕಾರ ಹೊಂದಿರುವನು. ಭಾರತದ ಕಾಲಪರಿಮಿತಿ ಅಧಿನಿಯಮ (1908) 60ನೆಯ ಅನುಚ್ಛೇದದ ಪ್ರಕಾರ ಖಾತೆದಾರರು ಕಹಣ ಸಂದಾಯಕ್ಕಾಗಿ ಕೇಳಿಕೆ ಸಲ್ಲಿಸುವ ತನಕ ಕಾಲ ಪರಿಮಿತಿಯ ಅವಧಿ ಬ್ಯಾಂಕಿಂಗ್ ಕಂಪನಿಗಳ 1949ರ ಆಧಿನಿಯಮದ 26ನೆಯ ಕಲಮಿನ ಉಪಬಂಧಗಳ ಮೇರೆಗೆ ಹತ್ತು ವರ್ಷಗಳ ಲಾಗಾಯ್ತು ತಟಸ್ಥ್ಯವಿರುವ ಖಾತೆಗಳ ವಾರ್ಷಿಕ ಪಟ್ಟಿಯನ್ನು ಪ್ರಕಟಿಸಬೇಕು.

ಇಬ್ಬರು ಅಥವಾ ಹೆಚ್ಚು ಮಂದಿ ಗ್ರಾಹಕರು ಸೇರಿ ಒಂದು ಸಂಯುಕ್ತ ಖಾತೆ ತೆರೆಯಬಹುದು. ಸಂಯುಕ್ತ ಖಾತೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರ ಹಿತಸಂಬಂಧ ಅಥವಾ ಅಧಿಕಾರಕ್ಕೆ ಒಳಪಟ್ಟಿದ್ದು. ಇದನ್ನು ಸಂಯುಕ್ತ ಠೇವಣೆ ಖಾತೆಯೆಂದೂ ಕರೆಯುವುದುಂಟು. ಅನೇಕ ಒಡೆಯರು ಪರಸ್ಪರ ತಮ್ಮ ಹೆಸರಿನ ಮಧ್ಯದಲ್ಲಿ 'ಮತ್ತು ಎಂಬ ಶಬ್ದವನ್ನು ಸೇರಿಸಿಕೊಂಡು ಈ ಖಾತೆಯ ಕೆಳಗೆ ವ್ಯವಹರಿಸುತ್ತಾರೆ. ಇದನ್ನು ಅವರೆಲ್ಲರ ಸಂಯುಕ್ತ ಆಸ್ತಿ. ಹಣಹಿಂತೆಗೆದುಕೊಳ್ಳುವಾಗ ಚೆಕ್ಕಿಗೆ ಸಹಿಹಾಕುವ ವಿಷಯ ಬ್ಯಾಂಕಿನ ಹಾಗೂ ಸಂಯುಕ್ತ ಠೇವಣಿದಾರರ ಪರಸ್ಪರ ಒಪ್ಪಂದಕ್ಕೆ ಅನುಗುಣವಾಗಿರುವುದು. ಈ ಬಗೆಯ ಖಾತೆಗಳನ್ನು ಸಾಮಾನ್ಯವಾಗಿ ಪತಿ-ಪತ್ನಿ ತಮ್ಮ ಅನುಕೂಲಕ್ಕಾಗಿ ತೆಗೆಯತ್ತಾರೆ. ಸಂಯುಕ್ತ ಖಾತೆಯಲ್ಲಿ ಚೆಕ್ಕು ಬರೆಯುವ ಬಗ್ಗೆ ಸ್ಪಷ್ಟ ಸೂಚನೆ ಕೊಡುವುದು ಅಗತ್ಯ. ಸಂಯುಕ್ತ ಖಾತೆಯನ್ನು ಯಾರ ಹೆಸರಿನಲ್ಲಿ ತೆರೆಯಬೇಕಾಗಿದೆಯೋ ಅಂಥ ಇಬ್ಬರು ವ್ಯಕ್ತಿಗಳ ಅಥವಾ ಅವರಲ್ಲೊಬ್ಬರ ಅಥವಾ ಎಲ್ಲರ ಅಥವಾ ಕೆಲವರ ಹೆಸರಿನಲ್ಲಿ ಚೆಕ್ಕು ಬರೆಯಲಾಗುವುದೆಂಬುದನ್ನು ಬ್ಯಾಂಕರ್‍ಗೆ ತಿಳಿಯಪಡಿಸತಕ್ಕದ್ದು ಸಂಯುಕ್ತ ಖಾತೆಯಲ್ಲಿ ಒಬ್ಬನಿಗೆ ಅಥವಾ ಅದಕ್ಕೂ ಹೆಚ್ಚು ಜನರಿಗೆ ಸಂಯುಕ್ತ ಖಾತೆಯಿಂದ ಹಣ ಹಿಂತೆಗೆಯಲು ಕೊಟ್ಟ ಅಧಿಕಾರ ವ್ಯಕ್ತಿಯ ನಿಧನದಿಂದ ಅಥವಾ ಅವನು ದಿವಾಳಿಯಾದರೆ, ಅಥವಾ ಬುದ್ಧಿ ಭ್ರಮಿತನಾದರೆ ತಾನಾಗಿಯೆ ಕೊನೆಗೊಳ್ಳುವುದು.

ಬ್ಯಾಂಕಿನ ಗ್ರಾಹಕರು ಉತ್ತರಾಧಿಕಾತ್ವವನ್ನು ತಿಳಿಸುವುದು ಸಹಜ. ಆದರೆ ಬ್ಯಾಂಕರ್‍ಗೆ ಸೂಚನೆಗಳನ್ನು ಕೊಡಲೇಬೇಕೆಂಬುದು ಅಗತ್ಯವಿಲ್ಲದಿದ್ದರೂ ಸಂಯುಕ್ತ ಖಾತೆಯ ವ್ಯವಹಾರಿಗಳಲೊಬ್ಬರ ಮರಣ ಸಂಭವಿಸಿದಲ್ಲಿ ಮುಂದಿನ ಏರ್ಪಾಟು ಏನೆಂಬುದರ ಬಗ್ಗೆ ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವುದು ಅಪೇಕ್ಷಣೀಯ. ಸಾಮಾನ್ಯವಾಗಿ ಸಮುಂಕ್ತ ಖಾತೆದಾರರಲ್ಲೊಬ್ಬರು ಮೃತರಾದರೆ ಉಳಿದವರು ಪೂರ್ತಿಮೊಬಲಗಿಗೆ ಬಾದ್ಯಸ್ಥರಾಗುತ್ತಾರೆ. ಇಂಥ ಸಮಯದಲ್ಲಿ ಖಾತೆದಾರರ ಖಾತೆಯನ್ನು ಅಲ್ಲಿಗೆ ನಿಲ್ಲಿಸುವುದು ಉಚಿತ ಮತ್ತು ಚೆಕ್ಕಿನ ಮೂಲಕ ಉಳಿದವರ ಹೆಸರಿನಲ್ಲಿ ಆ ಖಾತೆಯನ್ನು ವರ್ಗಾಹಿಸಿಕೊಳ್ಳುವುದು ವಿಹಿತ. ಸಂಯುಕ್ತ ಖಾತೆಯಧಾರಕರೆಲ್ಲರೂ ಮೃತಪಟ್ಟಲ್ಲಿ ಖಾತೆಯ ಹಣ ಮೃತಪಟ್ಟವರ ಶಾಸನಬದ್ಧ ಪ್ರತಿನಿಧಿಗೆ ಸಂದಾಯವಾಗುತಕ್ಕದ್ದು.

ಚೆಕ್ಕಿನ ಮೂಲಕ ಹಣ ಪಡೆದುಕೊಳ್ಳಲು ಅಧಿಕಾರ ಹೊಂದಿರುವ ಬ್ಯಾಂಕಿನ ಗ್ರಾಹಕರು ತಮ್ಮ ಖಾತೆಯಲ್ಲಿರುವ ಮೊಬಲಗಿಂತ ಹೆಚ್ಚು ಹಣ ಪಡೆದುಕೊಳ್ಳಲು ಕೂಡ ಅಧಿಕಾರಹೊಂದಿರುತ್ತಾರೆಯೆ ಎಂಬುದರ ಬಗ್ಗೆ ಸೂಚನೆಗಳು ಸ್ಪಷ್ಟವಾಗಿರತಕ್ಕದ್ದು. ಸಂಯುಕ್ತ ಖಾತೆಯಲ್ಲಿ ಸಾಲ ಪಡೆಯಲು ಅಧಿಕಾರ ಹೊಂದಿರುವ ಸಂದರ್ಭದಲ್ಲಿ ಎಲ್ಲರು ಪ್ರತ್ಯೇಕವಾಗಿ ಹೊಣೆಗಾರರಾಗಿರುವುದು ಮುಖ್ಯ. ಸಂಯುಕ್ತ ಖಾತೆ ತೆರೆದ ಮಾತ್ರಕ್ಕೆ ಪ್ರತಿಯೊಬ್ಬನೂ ಬೇರೊಬ್ಬರ ಸಾಲಕೊಳ್ಳುವ ಅರ್ಹತೆಯ ಮೇಲೆ ತನ್ನ ಸಾಲದ ಭಾರ ಹೊರಿಸತಕ್ಕದ್ದಲ್ಲ. ಹೆಚ್ಚು ಹಣ ಪಡೆದುಕೊಳ್ಳುವ ಸೌಲಭ್ಯ ಕೇಳುವ ಸಂದರ್ಭದಲ್ಲಿ ಖಾತೆಯ ಎಲ್ಲ ಧಾರಕರೂ ಆ ಕೇಳಿಕೆಗೆ ಸಮ್ಮತಿಸಿರುವಂತೆ ಎಂಬುದನ್ನು ಬ್ಯಾಂಕರನು ಖಚಿತಪಡಿಸಿಕೊಳ್ಳುವುದು ಅತ್ಯಾವಶ್ಯಕ. ಸಾಲ ಪಡೆದುಕೊಳ್ಳಲು ಜವಾಬ್ದಾರರಾಗಿರುವ ವ್ಯಕ್ತಿಗಳು ಮಾತ್ರ ಪಡೆದುಕೊಂಡ ಹಣವನ್ನು ಮರುಸಂದಾಯ ಮಾಡಲು ಹೊಣೆಗಾರರಾಗಿರತಕ್ಕದ್ದು. ಸಂಯುಕ್ತ ಖಾತೆಯಲ್ಲಿ ರಕ್ಷಣೆಗಾಗಿ ಇರಿಸಲಾದ ಭದ್ರತಾಪತ್ರ ಇತ್ಯಾದಿಗಳನ್ನು ಹಿಂದಕ್ಕೆ ಪಡೆಯುವ ವಿಷಯದಲ್ಲಿ ಕೂಡ ಆ ಆಧಿಕಾರ ಅನ್ವಯಿಸುವುದೋ ಇಲ್ಲವೋ ಎಂಬುದರ ಬಗ್ಗೆ ಸೂಚನೆಗಳು ಸ್ಪಷ್ಟವಾಗಿರತಕ್ಕುದು. ಬ್ಯಾಂಕಿನ ಪುಸ್ತಕಗಳಲ್ಲಿ ಮತ್ತು ಅಂಥ ಖಾತೆಗೆ ಬರೆಯಲಾಗುವ ಪ್ರತಿಯೊಂದು ಚೆಕ್ಕಿನ ಮೇಲೆ ಆ ಖಾತೆಯಲ್ಲಿ ಪಡೆದುಕೊಳ್ಳಲು ಬಾದ್ಯತೆಯಿರುವ ಪೂರ್ತಿ ಮೊತ್ತವ್ನು ನಮೂದಿಸಿರಬೇಕು. ಇದೆಲ್ಲವನ್ನೂ ಗ್ರಾಹಕರ ಪೂರ್ಣ ರಕ್ಷಣೆಗಾಗಿ ಬ್ಯಾಂಕರ್ ಆದವರು ಅನುಸರಿಸಬೇಕು. (ಸಿ.ಸಿ.ಪಿ.)