ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಕ್ಕಳ ಸಾಹಿತ್ಯ

ವಿಕಿಸೋರ್ಸ್ದಿಂದ

ಮಕ್ಕಳ ಸಾಹಿತ್ಯ ಮಕ್ಕಳಿಗಾಗಿಯೇ ಸೃಜಿಸುವ ಸಾಹಿತ್ಯ. ಅದ್ಭುತ, ರಮ್ಯ, ನೀತಿ ಇದರ ಪ್ರಮುಖ ಲಕ್ಷಣಗಳು. ಬಹುತೇಕ ಕಥೆಗಳ ರೂಪದಲ್ಲಿರುತ್ತದೆ. ಇಂಥ ಕಥೆಗಳ ಪಾತ್ರಗಳು ಮನುಷ್ಯರೇ ಆಗಬೇಕೆಂದೇನೂ ಇಲ್ಲ. ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ರೂಪುಗೊಂಡು ಮನುಷ್ಯರಂತೆ ಮಾತನಾಡುತ್ತ ತಮ್ಮ ಪಾತ್ರವನ್ನು ನಿರ್ವಹಿಸುವುವು. ಈ ಲೇಖನವನ್ನು ಪ್ರಪಂಚ ಸಾಹಿತ್ಯ ಹಾಗೂ ಭಾರತೀಯ ಸಾಹಿತ್ಯವೆಂದು ಎರಡು ಭಾಗಗಳಾಗಿ ಮಾಡಲಾಗಿದೆ.

ಪ್ರಪಂಚ ಸಾಹಿತ್ಯ : ಮಕ್ಕಳಿಗಾಗಿಯೇ ಎಂದು ಪ್ರತ್ಯೇಕವಾಗಿ ಸಾಹಿತ್ಯ ರಚಿಸುವ ಕಲ್ಪನೆ ಸಾಹಿತಿಗಳಿಗೆ ಬಂದದ್ದು ಸುಮಾರು ಹದಿನೇಳನೆಯ ಶತಮಾನದ ಅನಂತರ. ಅದಕ್ಕೂ ಹಿಂದೆ ಮಕ್ಕಳಿಗಾಗಿ ರಚಿತವಾಗುತ್ತಿದ್ದ ಸಾಹಿತ್ಯವೆಂದರೆ ಜನಪದ ಒಗಟುಗಳು. ಕಥೆಗಳು, ಶಿಶುಪ್ರಾಸಗಳು, ಜೋಗುಳದ ಹಾಡುಗಳು. ತೀರ ಪ್ರಾಚೀನ ಕಾಲದಲ್ಲಿ ಚಾರಣ ಕವಿಗಳು ಊರಿಂದ ಊರಿಗೆ ಸಂಚರಿಸುತ್ತ ಮಕ್ಕಳಿಗಾಗಿಯೇ ಎಂದು ಕಥನಕವನಗಳನ್ನು ಹಾಡುತ್ತ ಅವರನ್ನು ರಂಜಿಸುತ್ತಿದ್ದುದೂ ಉಂಟು. 12-13ನೆಯ ಶತಮಾನಗಳಲ್ಲಿ ಇಂಥ ಕವಿಗಳು ಜರ್ಮನಿ ದೇಶದಲ್ಲಿ ವಿಪುಲರಾಗಿದ್ದರು. ಅವರು ಸೃಷ್ಟಿಸಿದ ಸಾಹಿತ್ಯದ ಪಾತ್ರಗಳು ರಾಜರಾಣಿ, ಮಾಂತ್ರಿಕ, ರಾಕ್ಷಸ, ವೀರಯೋಧ ಮುಂತಾದವು. ಸಂಸ್ಕøತದಲ್ಲಿ ರಚಿತವಾದ "ಪಂಚತಂತ್ರ" ಈ ಕ್ರಮದಲ್ಲಿ ಪ್ರಾಣಿ ಪಕ್ಷಿಗಳನ್ನು ಪಾತ್ರಗಳಾಗಿ ಒಳಗೊಂಡ ಒಂದು ರಮ್ಯ ಕೃತಿ. ಹಿತೋಪದೇಶವೂ ಇದೇ ಮಾದರಿಯದು.

ಮುದ್ರಣಕಲೆ ಬರುವ ಮುನ್ನ ಯೂರೊಪಿನಲ್ಲಿ ಮಕ್ಕಳಿಗಾಗಿ ಎಂದು ಕೃತಿಗಳನ್ನು ರಚಿಸುವ ಕೆಲವು ಪ್ರಯತ್ನಗಳು ನಡೆದಿದ್ದುವು. ಲ್ಯಾಟಿನ್ ಭಾಷೆಯಲ್ಲಿ ಬೀಡ್ ಎಂಬಾತ ಇಂಥ ಪ್ರಯತ್ನ ಮಾಡಿದ್ದ. ಕ್ಯಾಂಟರ್‍ಬರಿಯ ಆರ್ಚ್‍ಬಿಷಪ್ ಆನ್ ಸೆಲ್ಮೆ ಮಕ್ಕಳಿಗಾಗಿ ಸಾಮಾನ್ಯ ತಿಳಿವಳಿಕೆ ನೀಡುವ ವಿಶ್ವಕೋಶವನ್ನೇ ರಚಿಸಿದ್ದ. ಈಸೋಪನ ಕಥೆಗಳು, ರಾಬಿನ್‍ಹುಡ್‍ನ ಸಾಹಸಗಳು. ಆಲ್‍ಫ್ರಿಕ್ ಮತ್ತು ಆಲ್‍ಕೂಯಿನ್‍ನ ಒಗಟು ಮತ್ತು ಅಭ್ಯಾಸಾಧ್ಯಾಯಗಳು ವಾಗ್ಸಂಪ್ರದಾಯದಲ್ಲಿ ಬಹಳ ಕಾಲ ಪ್ರಚಲಿತವಾಗಿದ್ದುವು. ಇದರೊಂದಿಗೆ ಬಹುತೇಕ ಭಾಷೆಗಳಲ್ಲಿ ಮಕ್ಕಳಿಗೆ ಕಲಿಸುವ ವರ್ಣಮಾಲೆ, ಬಾಲವ್ಯಾಕರಣ, ಬಾಲಶಿಕ್ಷೆಗಳೂ ಇದ್ದುವು. ಇಂಗ್ಲೆಂಡಿನಲ್ಲಿ ಮುದ್ರಣ ವಿಧಾನ ಬಳಕೆಗೆ ಬಂದ ಅನಂತರದ ಮುನ್ನೂರು ವರ್ಷಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿ ಇದ್ದುದು ಈ ಬಗೆಯ ಸಾಹಿತ್ಯವೇ.

ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃತಿಗಳನ್ನು ರಚಿಸುವ ಪ್ರಯತ್ನ ಹದಿನೇಳನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆಯತೊಡಗಿತು. ಮನರಂಜನೆ ಮತ್ತು ನೀತಿ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಟಿ.ಲೈ. ಎಂಬಾತ 'ಎ ಚೈಲ್ಡ್ಸ್ ಡಿಲೈಟ್ ಟುಗೆದರ್ ವಿತ್ ಎನ್ ಇಂಗ್ಲಿಷ್ ಗ್ರಾಮರ್ ಎಂಬುದನ್ನೂ ಜೇಮ್ಸ್ ಜೇನ್‍ವೇ 'ಎ ಟೊಕನ್ ಫಾರ್ ಚಿಲ್ಡ್ರನ್... ದಿ ಎಕ್ಸೆಂಪ್ಲರಿ ಲೈವ್ಸ್ ಅಂಡ್ ಜಾಯ್‍ಫುಲ್ ಡೆತ್ಸ್ ಆಫ್ ಸೆವರಲ್ ಯಂಗ್ ಚಿಲ್ಡ್ರನ್, ರಚಿಸಿದರು (1671). ಜೇನನ ಕೃತಿ ಪಾಪ-ಪುಣ್ಯ, ಒಳಿತು-ಕೆಡಕುಗಳನ್ನೂ ಸೋದಾಹರಣವಾಗಿ ನಿರೂಪಿಸುವ ಸರಳ ಗದ್ಯಕೃತಿ. ಈ ವೇಳೆಗೆ 1686ರಲ್ಲಿ ಬನ್ಯನ್ ಬುಕ್ ಫಾರ್ ಬಾಯ್ಸ್ ಅಂಡ್ ಗಲ್ರ್ಸ್ ಎಂಬ ತನ್ನ ಪದ್ಯ ಕೃತಿಯನ್ನು ಪ್ರಕಟಿಸಿದ (ಇದನ್ನು ಈಚೆಗೆ ಡಿವೈನ್ ಎಮ್‍ಬ್ಲೆಮ್ಸ್ ಎಂದು ಬೇರೆ ಹೆಸರಿನಿಂದ ಕರೆದಿದೆ). ದಿ ಪಿಲ್‍ಗ್ರಿಮ್ಸ್ ಪ್ರೊಗ್ರೆಸ್ ಅನೇಕ ಬಾಲಕರನ್ನು ತಲಪಿದ್ದು ಈ ಅವಧಿಯಲ್ಲೇ. ಈ ಶತಮಾನದಲ್ಲಿ ಅಮೆರಿಕದಲ್ಲಿ ಪ್ರಚಲಿತವಾಗಿದ್ದ ಜಾನ್‍ಕಾಟನ್‍ನ ಸ್ಪಿರಿಚುಯಲ್ ಮಿಲ್ಕ್ ಆಗಲಿ ನ್ಯೂ ಇಂಗ್ಲೆಂಡ್ ಪ್ರೈಮರ್ ಆಗಲಿ ಮಕ್ಕಳ ಶಾಲಾಶಿಕ್ಷಣಕ್ಕೆ ಪೂರಕವಾಗಿದ್ದು, ಸ್ವರ್ಗ-ನರಕ, ಪಾಪ-ಪುಣ್ಯಗಳನ್ನು ತಿಳಿಸುವಂಥದೇ ಆಗಿದ್ದವು.

ಹದಿನೆಂಟನೆಯ ಶತಮಾನದಲ್ಲಿ ರಚಿತವಾದ 'ದಿ ಚೈಲ್ಡ್ಸ್ ವೀಕ್ಸ್ ವರ್ಕ್ (1712), ಐಸಾಕ್ ವಾಟ್‍ನ ಡಿವೈನ್ ಅಂಡ್ ಮಾರಲ್ ಸಾಂಗ್ಸ್ ಫಾರ್ ಚಿಲ್ಡ್ರನ್ (1715) ಕೃತಿಗಳು ಕೂಡ ದೇವರು ಪಾಪ-ಪುಣ್ಯ ಕುರಿತವೇ. ಆದರೆ ವಾಟ್ ತನ್ನ ಕೃತಿಯಲ್ಲಿ ಪ್ರಕಟಿಸಿದ್ದ ಅಪೂರ್ವ ಕಾವ್ಯಕೌಶಲ ಹಾಗೂ ಶಿಶುಸಂವೇದನೆಗಳು ಆತನ ಕೃತಿಯನ್ನು ಅತ್ಯಂತ ಜನಪ್ರಿಯಗೊಳಿಸಿದುವು. 1898ರ ತನಕ ವಾಟ್‍ನ ಈ ಕೃತಿಯ ನೂರಾರು ಆವೃತ್ತಿಗಳು ಹಲವಾರು ವಿನ್ಯಾಸಗಳಲ್ಲಿ ಹೊರಬಂದಿವೆ. ಇದರ ಪದ್ಯರಚನಾ ಕೌಶಲಕ್ಕೆ ಮನಸೋತ ಲೂಯಿ ಕೆರಾಲ್ ತನ್ನ 'ಆಲೀಸ್ ಇನ್ ವಂಡರ್‍ಲ್ಯಾಂಡ್ ಕೃತಿಯಲ್ಲಿ ಇಲ್ಲಿಯ ಎರಡು ಪದ್ಯಾನುಕರಣೆಗಳನ್ನು ತಂದಿದ್ದಾನೆ.

1740ರ ತನಕ ಮಕ್ಕಳಿಗಾಗಿ ಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದವರು ಪುಸ್ತಕ ವ್ಯಾಪಾರಿಗಳು. ಆದರೆ ಮಕ್ಕಳ ಸಾಹಿತ್ಯದ ರಚನೆ, ಪ್ರಕಟನೆ, ಮಾರಾಟ ಇವರಿಗೆ ಸಾಂದರ್ಭಿಕ ಹಾಗೂ ಎರಡನೆಯ ಒಲವಾಗಿತ್ತು. ಇಂಥ ಹೊತ್ತಿನಲ್ಲಿ ಇವೆರೆಡೆ ವಿಶೇಷ ಪ್ರೀತಿ ತೋರಿಸಿ ಈ ಬಗೆಯ ಸಾಹಿತ್ಯ ಹೆಚ್ಚಲು ಕಾರಣನಾದವ ಜಾನ್ ನ್ಯೂಬೆರ್ರಿ. ಮಕ್ಕಳ ಸಾಹಿತ್ಯದ ಚರಿತ್ರೆ ಅಧಿಕೃತವಾಗಿ ಆರಂಭವಾಗುವುದು ಈತನಿಂದಲೇ ಎಂದು ಕೆಲವರು ತಿಳಿದಿದ್ದಾರೆ. ಈತ 1744ರಲ್ಲಿ ಎ ಲಿಟಲ್ ಪ್ರೆಟಿ ಪಾಕೆಟ್ ಬುಕ್ ಎಂಬುದನ್ನು ಮೊದಲಿಗೆ ಪ್ರಕಟಿಸಿದ; 1765ರಲ್ಲಿ ಬಂದ ದಿ ಹಿಸ್ಟರಿ ಆಫ್ ಲಿಟಲ್ ಗುಡಿ ಟೂಶೂಸ್ ಎಂಬ ಈತನ ಪ್ರಕಟಣೆ ತೀರ ಪ್ರಸಿದ್ಧವಾದುದು. ಆಕರ್ಷಕ ವಿನ್ಯಾಸದ ಈ ಪುಸ್ತಕಗಳು ಚಿತ್ರಸಹಿತವಾಗಿದ್ದುದು ಒಂದು ವಿಶೇಷ. ಈ ಕಿರುಪುಸ್ತಕ ಮಾಲಿಕೆಯ ಗುಡಿ-ಟೂ-ಶೂಸ್, ಟಿಮೊತಿ ಟಿಕಲ್ ಪಿಚರ್, ಗೈಲ್ಸ್ ಜಿಂಜರ್ ಬ್ರೆಡ್ ನೆನಪಿನಲ್ಲಿ ಉಳಿಯುವ ಪಾತ್ರಗಳು. ಆದರೆ ಈ ಮಾಲೆಯ ಪುಸ್ತಕಗಳ ರಚಕರಾರು ಎಂಬುದು ಇಂದಿಗೂ ಅe್ಞÁತವಾಗಿಯೇ ಉಳಿದಿದೆ. ನ್ಯೂಬೆರ್ರಿಯ ಈ ಪುಸ್ತಕಗಳ ಪ್ರಕಟಣ ವಿನ್ಯಾಸ, ಮಾರಾಟದ ಆಧಿಕ್ಯಗಳಿಗೆ ಮಾರುಹೋಗಿ ಇದೇ ಮಾದರಿಯಲ್ಲಿ ಜಾನ್ ಮಾರ್ಷಲ್, ಜಾನ್ಸನ್, ವಿಲಿಯಮ್ ಡಾರ್ಟನ್ ಇವರುಗಳು ಹಲವಾರು ಪುಸ್ತಕಗಳನ್ನು ಹೊರತಂದರು. ಮಕ್ಕಳ ಸಾಹಿತ್ಯಕ್ಕೆ ಅಗತ್ಯವಾಗಿದ್ದ ಹೊಸ ಮಾರುಕಟ್ಟೆಯೊಂದನ್ನು ನಿರ್ಮಿಸಿದರು. ಜನಪದರಲ್ಲಿ ಪ್ರಚಲಿತವಾಗಿದ್ದ ರಾಬಿನ್‍ಹುಡ್, ಡಿಕ್ ವಿಟ್ಟಿಂಗ್‍ಟನ್, ಮದರ್ ಹಬ್ಬರ್ಡ್ ಹಾಗೂ ಜ್ಯಾಕ್ ದಿ ಜಯಂಟ್ ಕಿಲ್ಲರ್‍ರ ಐತಿಹ್ಯ, ದಂತಕಥೆ, ಸಾಹಸ, ಸಾಧನೆಗಳನ್ನು ಪುಸ್ತಕ ರೂಪಕ್ಕಿಳಿಸಿ ಮಕ್ಕಳಿಗೆ ರೋಮಾಂಚನವುಂಟು ಮಾಡುವ ಸಾಹಿತ್ಯ ಒದಗಿಸಿದರು. ಡೇನಿಯಲ್ ಡಿಫೊನ ರಾಬಿನ್‍ಸನ್ ಕ್ರೂಸೊ, ಜೊನಾಥನ್ ಸ್ವಿಫ್ಟನ ಗಲಿವರನ ಪ್ರವಾಸಗಳು, ಪ್ಯಾಟ್‍ಲಾಕ್‍ನ ಪೀಟರ್ ವಿಲ್‍ಕಿನ್ಸ್‍ಗಳನ್ನು, ಅರೇಬಿಯನ್ ನೈಟ್ಸ್ ಅನುವಾದವನ್ನು ಈ ಅವಧಿಯಲ್ಲೇ ಮಕ್ಕಳ ಆಸಕ್ತಿಗನುಗುಣವಾಗಿ ಹೊರತರಲಾಯಿತು. ಶಿಶುಪ್ರಾಸದ ಪುಸ್ತಿಕೆಗಳು ಚಿತ್ರೋದಾಹರಣೆ ಗಳಿಸಿರುವ ಹೊತ್ತಗೆಗಳು ಜನಪ್ರಿಯವಾದುದು ಈ ವರ್ಷಗಳಲ್ಲಿಯೇ. ನ್ಯೂಬೆರ್ರಿಯ ಮತ್ತೊಂದು ಸಾಧನೆ ಎಂದರೆ ಮಿಸಸ್ ಟ್ರಿಮರ್, ಲೇಡಿ ಫೆನ್, ಮೇರಿಯಾ ಎಡ್ಗರ್‍ವರ್ತ್, ಡೊರೊಥಿ ಕಿಲ್ನರ್ ರಂಥ ಪ್ರತಿಭಾವಂತ ಬರೆಹಗಾರರನ್ನು ಈ ರಂಗಕ್ಕೆ ಎಳೆದು ತಂದುದು. ಇವರೆಲ್ಲ ನೀತಿಬೋಧೆ ಮತ್ತು ಮನರಂಜನೆಗಳನ್ನು ಬೆರೆಸಿ ಸಾಹಿತ್ಯ ರಚಿಸಿದರು. ಸಾರಾ ಫೀಲ್ಡಿಂಗ್‍ರ ದಿ ಗವರ್ನೆಸ್(1745) ಎಂಬ ಮೊದಲ ಮಕ್ಕಳ ಕಾದಂಬರಿ ರಚಿತವಾದುದು ಈ ಶತಮಾನದಲ್ಲಿ.

ಮಕ್ಕಳಿಗಾಗಿ ಎಂದು ನಿಯತಕಾಲಿಕೆಗಳು ಮೊದಲು ಹೊರಬಂದುದು ಕೂಡ ಈ ಶತಮಾನದಲ್ಲೇ. ಅವುಗಳಲ್ಲಿ ದಿ ಲಿಲ್ಲಿಪುಟಿಯನ್ ಮ್ಯಾಗಜೀನ್ (1751), ದಿ ಮೈನರ್ಸ್ ಪಾಕೆಟ್ ಬುಕ್ (1798? 1815?) ಇಲ್ಲಿ ಉಲ್ಲೇಖನೀಯವಾದುವು.

ಹತ್ತೊಂಬತ್ತನೆಯ ಶತಮಾನದಲ್ಲಿ ಮಕ್ಕಳ ಸಾಹಿತ್ಯದಲ್ಲಿ ಎದ್ದು ಕಾಣಿಸುವ ಸಂಗತಿಯೆಂದರೆ ಬಹುತೇಕ ಪುಸ್ತಕಗಳಲ್ಲಿ ಸಾಮಾನ್ಯವಾಗಿರುತ್ತಿದ್ದ ಚಿತ್ರಗಳು ಹಾಗೂ ಅವುಗಳ ಸಂಖ್ಯೆ. ನ್ಯೂಬೆರ್ರಿಯ ಅನಂತರ ಬಂದ ಜಾನ್ ಹ್ಯಾರಿಸ್ ವರ್ಣಚಿತ್ರಗಳನ್ನು ರಚಿಸಲು ಮಕ್ಕಳನ್ನೇ ನೇಮಿಸಿಕೊಂಡಿದ್ದುಂಟು. ಚಾಲ್ರ್ಸ್ ಲ್ಯಾಂಬ್‍ನ 'ಕಿಂಗ್ ಅಂಡ್ ಕ್ವೀನ್ ಹಾಟ್ರ್ಸ್, (1805) 'ಟೇಲ್ಸ್ ಫ್ರಮ್ ಷೇಕ್ಸ್‍ಪಿಯರ್ (1807) ಅತ್ಯಂತ ಆಕರ್ಷಕ ರೀತಿಯಲ್ಲಿ ವರ್ಣಪುಸ್ತಿಕೆಗಳಾಗಿ ಗಾಡ್ವಿನ್ಸ್ ಅವರಿಂದ ಪ್ರಕಟಗೊಂಡುವು. ಈ ದಿಸೆಯಲ್ಲಿ ಉಲ್ಲೇಖಿಸಬೇಕಾದ ಪುಸ್ತಕವೆಂದರೆ 'ದಿ ಬಟರ್‍ಫ್ಲೈಸ್ ಬಾಲ್ ಎಂಬ ಅತ್ಯಂತ ಸೊಗಸಾದ ವರ್ಣಪುಸ್ತಕ. ಇದರ ಮಧುರಶೈಲಿ, ಸ್ವಾರಸ್ಯ ನಿರೂಪಣೆಗಳಿಗೆ ಮನಸೋತು ಮುಂದಿನ ಅನೇಕರು ಇದನ್ನು ಅನುಕರಿಸಲು ಪ್ರಯತ್ನಿಸಿದ್ದೂ ಉಂಟು. ಗ್ರಿಮ್ ಸಹೋದರರ ಕಿನ್ನರರ ಕಥೆಗಳ ಅನುವಾದ ಇಂಗ್ಲಿಷ್ ಭಾಷೆಗಾಗಿದ್ದೂ ಈ ಅವಧಿಯಲ್ಲೇ. ಇದರ ಆಧಾರದ ಮೇಲೆ ನೂರಾರು ರೋಚಕ ಕಥೆಗಳನ್ನು ಮಕ್ಕಳಿಗಾಗಿ ಸೃಷ್ಟಿಸಲಾಯಿತು. ಶಿಶುಪ್ರಾಸಗಳ ಚೌಕಟ್ಟಿನಿಂದ ಮುಂದುವರಿದು ಮಕ್ಕಳಿಗಾಗಿ ಹೊಸಬಗೆಯ ಪದ್ಯಗಳನ್ನು ಅನೇಕರು ರಚಿಸಿದರು. ಜೇನ್ ಮತ್ತು ಆ್ಯನ್‍ಟೈಲರ್‍ರ ದಿ ಒರಿಜನಲ್ ಪೊಯೆಮ್ಸ್ ಫಾರ್ ಇನ್‍ಫ್ಯಾಂಟ್ ಮೈಂಡ್ಸ್, ರೈಮ್ಸ್ ಫಾರ್ ನರ್ಸರಿ ಉಲ್ಲೇಖಿಸಬೇಕಾದವು.

19ನೆಯ ಶತಮಾನದ ಮಧ್ಯಭಾಗ ಹಾಗೂ ಆನಂತರ ಹಲವಾರು ಮಹತ್ತ್ವ ಪೂರ್ಣ ಮಕ್ಕಳ ಕೃತಿಗಳು ರಚಿತವಾದುವು. ಇವುಗಳಲ್ಲಿ ಅನೇಕ ಸ್ವಂತ ಹಾಗೂ ಸ್ವೋಪಜ್ಞ ನಿದರ್ಶನಕ್ಕೆ ಡಿಕನ್ಸ್‍ನ 'ಕ್ರಿಸ್‍ಮಸ್ ಕೆರೋಲ್ (1843), ಲಿಯರ್‍ನ 'ಬುಕ್ ಆಫ್ ನಾನ್‍ಸೆನ್ಸ್ (1846) ರಸ್ಕಿನ್‍ನ "ಕಿಂಗ್ ಆಫ್ ದಿ ಗೋಲ್ಡನ್ ರಿವರ್" (1851), ಥ್ಯಾಕರೆಯ " ದಿ ರೋಸ್ ಅಂಡ್ ದಿ ರಿಂಗ್" (1885), ಫ್ರಾನ್ಸಿಸ್ ಬ್ರೌನಿಯ "ಗ್ರಾನೀಸ್ ವಂಡರ್‍ಫುಲ್ ಚೇರ್" (1857), ಕಿಂಗ್ಸ್ಲೇಯ "ಹಿರೋಸ್" (1856) ಮತ್ತು "ವಾಟರ್ ಬೇಬೀಸ್" (1863), ಲೂಯಿ ಕೆರಾಲ್‍ನ "ಅಲೀಸ್ ಇನ್ ವಂಡರ್‍ಲ್ಯಾಂಡ್" (1865-66). ಅಮೆರಿಕೆಯಲ್ಲಿ ಕೂಡ ಈ ಶತಮಾನದಲ್ಲೇ ಅತ್ಯುತ್ತಮ ಬಾಲಸಾಹಿತ್ಯ ಕೃತಿಗಳು ರಚಿತವಾದುದು. ವಾಷಿಂಗ್‍ಟನ್ ಇರ್ವಿಂಗ್‍ನ "ರಿಪ್‍ವಾನ್ ವಿಂಕಲ್" ಮತ್ತು "ದಿ ಲೆಜೆಂಡ್ ಆಫ್ ಸ್ಲಿಪಿ ಹಾಲೊ" (1819) ಕ್ಲೀಮೆಂಟ್ ಮೂರ್‍ನ ಪದ್ಯಸಂಗ್ರಹವಾದ "ದಿ ನೈಟ್ ಬಿಫೋರ್ ಕ್ರಿಸ್‍ಮಸ್" (1823), ಹಾಥರ್ನ್‍ರ "ವಂಡರ್ ಬುಕ್" ಮತ್ತು "ಟ್ಯಾಂಗಲ್ ವುಡ್ ಟೇಲ್ಸ್", ಎಚ್.ಬಿ.ಸ್ಟೋಸ್‍ನ "ಅಂಕಲ್ ಟಾಮ್ಸ್ ಕ್ಯಾಬಿನ್" (1852), ಎಲ್.ಎಂ.ಆಲ್ಕಾಟನ್ "ಲಿಟಲ್ ವುಮೆನ್" (1868), ಜನಪ್ರಿಯವೂ ಹಲವಾರು ಆವೃತ್ತಿಗಳನ್ನು ಕಂಡಿರುವಂಥವೂ ಆದ ಕೃತಿಗಳು. ಮಾರ್ಕ್‍ಟ್ವೇನ್‍ನ "ದಿ ಅಡ್ವೆಂಚರ್ಸ್ ಆಫ್ ಟಾಮ್‍ಸಾಯರ್" (1876), "ದಿ ಅಡ್ವೆಂಚರ್ ಆಫ್ ಹಕಲ್ ಬರ್ರಿಫಿನ್" (1844) ಈ ಶತಮಾನದ ಸೀಮಾಕೃತಿಗಳು. ಸಾಹಸ, ಹಾಸ್ಯ, ಹುಡುಗುತನ ಚಲ್ಲು-ಚೆಲುವುಗಳು ಬೆರೆತ ಈ ಕೃತಿಗಳನ್ನು ಸರಿಗಟ್ಟುವಂಥವು ಅಮೆರಿಕನ್ ಸಾಹಿತ್ಯದಲ್ಲಿ ವಿರಳ. ಜೀನ್‍ಇಂಗ್‍ಲೋನ್ "ಮೊಪ್ಸಾ ದಿ ಫೇರಿ" (1869), ಜಾರ್ಜ್ ಮೆಕ್‍ಡೊನಾಲ್ಡ್‍ನ "ಅಟ್ ದಿ ಬ್ಯಾಕ್ ಆಫ್ ದಿ ನಾರ್ತ್ ವಿಂಡ್" (1871), ಮೋಲ್ಸ್‍ವರ್ತಳ "ಕ್ಯಾರಟ್ಸ್" (1876), ಅನ್ನಾಸಿವೆಲ್‍ನ "ಬ್ಯಾಕ್ ಬ್ಯೂಟಿ" (1877) ಮುಂತಾದವು ಬಂದುದು 19ನೆಯ ಶತಮಾನದ 7ನೆಯ ದಶಕದಲ್ಲಿ. ಆ ಶತಕದ ಕೊನೆಯಲ್ಲಿ ಕೆಲವು ಪ್ರಮುಖ ನಿಯತಕಾಲಿಕೆಗಳು ಏಕಕಾಲಿಕವಾಗಿ ಹೊರಬಂದುವು. ಬಾಯ್ಸ್ ಆಫ್ ಇಂಗ್ಲೆಂಡ್ (1866-1906), ಚಾಟರ್ ಬಾಕ್ಸ್ (1866), ಲಿಟಲ್ ಫೋಕ್ಸ್ (1871-86), ದಿ ಬಾಯ್ಸ್ ಓನ್ ಪೇಪರ್ (1879), ಕಾಮಿಕ್ ಕಟ್ಸ್ (1890-), ಟೈನಿ ಟಾಟ್ಸ್ (1899), ಆಂಟ್ ಜ್ಯೂಡೀಸ್ ಮ್ಯಾಗಜೀನ್ (1866-85) ಉಲ್ಲೇಖಿಸಬಹುದಾದ ಕೆಲವು. ಸ್ಟೀವನ್ಸ್‍ನನ ಟ್ರಷರ್ ಐಲೆಂಡ್ ಮತ್ತು ಬ್ಲ್ಯಾಕ್ ಆ್ಯರೊ, ಜೂಲ್ಸ್‍ವರ್ನೆಯ ವೈe್ಞÁನಿಕ ಕಥೆಗಳು ಧಾರವಾಹಿಗಳಾಗಿ ಈ ಪತ್ರಿಕೆಗಳಲ್ಲೇ ಹೊರಬಂದುದು. ಇಂಥ ಹಲವು ಬಗೆಯ ಚಟುವಟಿಕೆಗಳನ್ನು 19ನೆಯ ಶತಮಾನದ ಉತ್ತರಾರ್ಧದಲ್ಲಿ ಗುರುತಿಸಬಹುದಾದ್ದರಿಂದಲೇ ಕೆಲವು ಸಮೀಕ್ಷಕರು ಈ ಅವಧಿಯನ್ನು ಮಕ್ಕಳ ಸಾಹಿತ್ಯದ ಸುವರ್ಣಯುಗ ಎಂದು ಕರೆದಿದ್ದಾರೆ. ಈ ಅವಧಿಯಲ್ಲಿ ಮಕ್ಕಳ ವಿವಿಧ ವಯೋಮಾನಕ್ಕನುಗುಣವಾಗಿಯೂ ಪುಸ್ತಕಗಳು ರಚಿತವಾದುವು. ನಿದರ್ಶನಕ್ಕೆ ಚಿತ್ರಕಥೆ, ಹಾಸ್ಯಕಥೆ, ಕೌಟುಂಬಿಕ ಕಥೆ, ಕಿನ್ನರರ ಕಥೆಗಳಿಂದ ಹಿಡಿದು ರಮ್ಯಾದ್ಭುತ ಸಾಹಸ ಕಾದಂಬರಿ, ವೈe್ಞÁನಿಕ ಕಾದಂಬರಿಗಳವರೆಗೆ ಬಗೆಬಗೆಯ ಕೃತಿಗಳು ಸೃಷ್ಟಿಯಾದುವು.

ಇಪ್ಪತ್ತನೆಯ ಶತಮಾನದಲ್ಲಿ ಕೂಡ ಮಕ್ಕಳ ಸಾಹಿತ್ಯ ಸೃಷ್ಟಿ ವೈವಿಧ್ಯ ವೈಶಿಷ್ಟ್ಯಗಳಿಂದ ಕೂಡಿದೆ. ಈ ಅವಧಿಯಲ್ಲಿ ಮಕ್ಕಳಿಗೆಂದು ರಚಿತವಾದ ಕೃತಿಗಳಲ್ಲಿ ಕಾದಂಬರಿಗಳೇ ಹೆಚ್ಚು. ಜಿ. ಮಾನ್‍ವಿಲ್ಲೆ ಫೆನ್, ಇ.ಇ. ಗ್ರೀನ್ ಮತ್ತು ಬೆಸ್ಸಿ ಮರ್ಚೆಂಟರು ಈ ಪ್ರಕಾರವನ್ನು ಪ್ರತಿನಿಧಿಸುತ್ತಾರೆ. ಇ. ನೆಸ್‍ಬಿಟ್‍ಳ ದಿ ಟ್ರಷರ್ ಸೀಕರ್ಸ್ (1899). ಕಿಪ್ಲಿಂಗ್‍ನ ಮೂರು ಕೃತಿಗಳಾದ ಫಸ್ಟ್‍ಜಂಗಲ್ ಬುಕ್ (1891), ಸ್ಟಾಕಿ ಅಂಡ್ ಕೋ (1899), ಜಸ್ಟ್ ಸೋ ಸ್ಟೋರೀಸ್ (1902), ಬೆಲಕ್‍ನ ಬ್ಯಾಡ್ ಚೈಲ್ಡ್ಸ್ ಬುಕ್ ಆಫ್ ಬೀಸ್ಟ್ಸ್ (1896), ಹೆಲೆನ್ ಬ್ಯಾನರ್ ಮನ್ನನ ಲಿಟಲ್ ಬ್ಯಾಕ್ ಸ್ಯಾಂಬೊ (1899) ಮಕ್ಕಳಸಾಹಿತ್ಯದ ಚಿರಕೃತಿಗಳಾಗಿವೆ. ಇಟಾಲಿಯನ್ ಭಾಷೆಯ ಕಾರ್ಲೊ ಕಲೊಡಿಯ ಪಿನೋಕಿಯೋ (1890 ಅನು: 1911), ವಾಲ್ಟರ್ ಡಿ ಲಾ ಮಾರ್ಲೆಯ ಪಿಕಾಕ್ ಪೈ (1912) ಈ ಕಾಲದ ಮಹತ್ತ್ವಪೂರ್ಣ ಕೃತಿಗಳು. ಆರ್ಥರ್ ರ್ಯಾನ್‍ಸಾಮ್‍ನ ಸ್ವಾಲೋಸ್ ಅಂಡ್ ಅಮೆeóÁನ್ಸ್ ಕೂಡ ಈ ಕಾಲದಲ್ಲೇ ಬಂದದ್ದು. ಪಿನೋಕಿಯೋನಂಥ ಕೃತಿಗಳಲ್ಲಿ ಸಾಹಸಕ್ಕಿಂತ ಭಿನ್ನವಾದ ವಸ್ತು ನಿರೂಪಣೆಗಳಿರುವುದು ಗಮನಾರ್ಹ. ಪ್ರಾಚೀನ ಮಹಾಕಾವ್ಯಗಳ ಪುರಾಣಗಳ, ಐತಿಹ್ಯಗಳ, ಜನಪದಕಥೆಗಳ ಘಟನೆಗಳನ್ನು ಪುನರ್ ನಿರೂಪಿಸುವ ಪ್ರಯತ್ನ ಕೂಡ ಈ ಶತಮಾನದಲ್ಲಿ ಜರಗಿದೆ. ಹೋವಡ್ರ್ಸ್ ಪಿಲೆಯ ಮೆರ್ರಿ ಅಡ್ವೆಂಚರ್ಸ್ ಆಫ್ ರಾಬಿನ್ ಹುಡ್ ಹಾಗೂ ಹ್ಯಾರಿಸ್‍ನ ನೈಟ್ಸ್ ವಿತ್ ಅಂಕಲ್ ರ್ಯಾಮುಸ್ ಇಲ್ಲಿ ಉಲ್ಲೇಖಿಸಬಹುದಾದವು. ಪೀಟರ್ ರಾಬಿಟ್ (1902), ಸ್ಕ್ವಿರಲ್ ನಟ್‍ಕಿನ್‍ಗಳಂಥ (1903) ಪ್ರಾಣಿಕಥೆಗಳ ಸಂಪುಟಗಳೂ ಬಂದಿವೆ.

ಆರ್ಥರ್ ಮೀ ಮಕ್ಕಳಿಗಾಗಿ ಮಾಡಿದ ಬೇರೆ ಬಗೆಯ ಕೆಲಸ ಉಲ್ಲೇಖಿಸಬೇಕಾದದ್ದು. 1908ರಿಂದ 1910ರೊಳಗೆ ದಿ ಚಿಲ್ಡ್ರನ್ಸ್ ಎನ್‍ಸೈಕ್ಲೋಪೀಡಿಯ ಎಂಬ ಎಂಟು ಸಂಪುಟಗಳನ್ನು ಈತನೇ ಯೋಜಿಸಿ ಸಿದ್ಧಪಡಿಸಿ ಪ್ರಕಟಿಸಿದ್ದು ಈ ಶತಮಾನದ ಸಾಹಿತ್ಯಿಕ ಸಾಹಸಗಳಲ್ಲೊಂದು. ಈತ ಮಕ್ಕಳಿಗಾಗಿ ಹೊರಡಿಸುತ್ತಿದ್ದ ಮೈ ಮ್ಯಾಗಜಿûೀನ್ (1915-33). ಚಿಲ್ಡ್ರನ್ಸ್ ನ್ಯೂಸ್ ಪೇಪರ್ (1919-) ತುಂಬ ಭಿನ್ನದೃಷ್ಟಿಕೋನವುಳ್ಳವು. ತುಂಬ ಜನಪ್ರಿಯವಾದ ಇವು ಮಕ್ಕಳ ಅರಿವನ್ನು ವಿಸ್ತರಿಸುವಲ್ಲಿ ನೆರವಾಗಿವೆ. ಆಸ್ಟ್ರೇಲಿಯ ಮತ್ತು ಅಮೆರಿಕಗಳಲ್ಲಿ ಮಕ್ಕಳಿಗಾಗಿ ಕಥಾಸಾಹಿತ್ಯವನ್ನು ರಚಿಸುವುದರೊಂದಿಗೆ ಬೇರೆ ಬೇರೆ ಬಗೆಯ ಉಪಯುಕ್ತ ಸಾಹಿತ್ಯವನ್ನು ಕೂಡ ಒದಗಿಸಲಾಗುತ್ತಿದೆ.

ಮಕ್ಕಳ ಸಾಹಿತ್ಯ ರಚನೆಗೆ ಹಾಗೂ ಅವುಗಳಿಗಾಗಿ ಚಿತ್ರಗಳನ್ನು ರಚಿಸಿಕೊಡುವವರಿಗೆ ಅಮೆರಿಕ ಮತ್ತು ಗ್ರೇಟ್ ಬ್ರಿಟನ್‍ಗಳು ಸುವರ್ಣ ಪದಕಗಳನ್ನು ಕೊಡುವ ಸಂಪ್ರದಾಯ ನಡೆಸಿಕೊಂಡು ಬಂದಿವೆ. ಅಮೆರಿಕೆಯಲ್ಲಿ ಇದಕ್ಕಾಗಿ ಕ್ರಮವಾಗಿ ನ್ಯೂಬೆರ್ರಿ ಮತ್ತು ಕಾಲ್ಡೆಕಾಟ್ ಪದಕಗಳನ್ನೂ ಗ್ರೇಟ್‍ಬ್ರಿಟನ್‍ನಲ್ಲಿ ಕಾರ್ನಿಗಿ ಮತ್ತು ಕೇಟ್ ಗ್ರೀನ್‍ವೇ ಪದಕಗಳನ್ನೂ ಕೊಡಲಾಗುತ್ತಿದೆ. 1953ರಲ್ಲಿ ಮಕ್ಕಳ ಸಾಹಿತ್ಯಕ್ಕೇ ಎಂದು ಒಂದು ಅಂತರರಾಷ್ಟ್ರೀಯ ಮಂಡಲಿ ಸ್ಥಾಪಿತವಾದದ್ದೂ ಉಂಟು. ಈ ಸಂಸ್ಥೆ ಉತ್ತಮ ಶಿಶುಸಾಹಿತ್ಯ ರಚಕರು ಹಾಗೂ ಅವುಗಳಿಗೆ ಚಿತ್ರ ಬರೆದುಕೊಡುವವರಿಗೆ ಹಾನ್ಸ್‍ಕ್ರಿಶ್ಚಿಯನ್ ಆಂಡರ್‍ಸನ್ ಪದಕಗಳನ್ನು ಕೊಡುತ್ತ ಬಂದಿವೆ. ಈ ಕ್ರಿಯಾಶೀಲ ಚಟುವಟಿಕೆಗಳು ಪ್ರಪಂಚಾದ್ಯಂತ ಮಕ್ಕಳ ಸಾಹಿತ್ಯದ ಬಗ್ಗೆ ಇರುವ ಆಸಕ್ತಿ ಮತ್ತು ಶ್ರದ್ಧೆಗಳ ಕುರುಹಾಗಿದೆ.

15ನೆಯ ಶತಮಾನದಲ್ಲಿ ಮುದ್ರಣ ರೂಢಿಗೆ ಬಂದ ಆರಂಭದಲ್ಲಿ ಅಚ್ಚಾದ ಪುಸ್ತಕ ಈಸೋಪನ ನೀತಿಕಥೆಗಳು, ಸ್ವಿಫ್ಟ್ ಬರೆದ ಗಲಿವರನ ಪ್ರವಾಸಗಳು, ಡೆಪೋ ಬರೆದ ರಾಬಿನ್‍ಸನ್ ಕ್ರೋಸೋ ಹಿರಿಯ ಕಿರಿಯರೆಲ್ಲರನ್ನೂ ರಂಜಿಸಿದುವು.

ನಿದ್ರಾಸುಂದರಿ, ಸಿಂಡರೆಲ್ಲಾ ಕಥೆಗಳು ಫ್ರಾನ್ಸಿನಲ್ಲಿ ಜನ್ಮ ತಳೆದವು. ಜರ್ಮನಿಯ ಗ್ರಿಮ್ ಸಹೋದರರು ಮಕ್ಕಳಿಗಾಗಿ ಚಿರಕಾಲ ಬಾಳುವಂಥ ಕಥೆಗಳನ್ನು ರಚಿಸಿದರು.

ಪರ್ಷಿಯನ್ ಭಾಷೆಯ ಸಾವಿರದೊಂದು ರಾತ್ರಿ ಕಥೆಗಳು ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಿಗೂ ಅನುವಾದಗೊಂಡು ಪ್ರಪಂಚಾದ್ಯಂತ ಜನಪ್ರಿಯವಾದುವು. ಅಲಿಬಾಬ ಮತ್ತು ನಲವತ್ತು ಕಳ್ಳರು, ಅಲ್ಲಾವುದ್ದೀನನ ಅದ್ಭುತ ದೀಪ, ಸಿಂದಬಾದ್ ನಾವಿಕ - ಇವೆಲ್ಲ ಈ ಸಂಗ್ರಹದಲ್ಲಿಯ ಕಥೆಗಳು.

ಮಕ್ಕಳ ಸಾಹಿತ್ಯದಲ್ಲಿ ಜಗತ್ಪ್ರಸಿದ್ಧವಾದ ಹೆಸರು ಡೆನ್ಮಾರ್ಕಿನ ಹಾನ್ಸ್ ಕ್ರಿಶ್ಚಿಯನ್ ಆಂಡರ್‍ಸನ್. ಡೆನ್ಮಾರ್ಕಿನ ಗ್ರಾಮೀಣ ಜೀವನದ ಸುಂದರ ಚಿತ್ರಣ ಇವನ ಕಥೆಗಳಲ್ಲಿ ಕಾಣಬಹುದು. ಇವನ ಕಥೆಗಳು ಭೌಗೋಳಿಕ ಎಲ್ಲೆಗಳನ್ನು ದಾಟಿ ಯೂರೊಪಿನ ಸೊತ್ತಾದವು. ಮುಂದೆ ಈತನ ಶೈಲಿಯನ್ನು ಅನುಸರಿಸಿ ಅನೇಕರು ಬರೆದರು. (ಟಿ.ಎನ್.)

ಭಾರತೀಯ ಸಾಹಿತ್ಯ : ಭಾರತೀಯ ಭಾಷೆಗಳಲ್ಲಿ (ಮಕ್ಕಳ ಸಾಹಿತ್ಯ) ಲಭ್ಯವಿರುವ ಜನಪದ ಕಥೆಗಳು ಮತ್ತು ಗೀತೆಗಳು ಅತ್ಯಂತ ಪ್ರಾಚೀನ ರೂಪಗಳು ಎನ್ನಬಹುದು, ಅಳುವ ಕಂದನನ್ನು ಸಮಾಧಾನಪಡಿಸಿ, ಮಲಗಿಸುವಾಗ ಹಾಡುವ ತಾಯಿಯ ಜೋಗುಳ, ಮೊಮ್ಮಕ್ಕಳಿಗೆ ಅಜ್ಜಿಯರು ಹೇಳುತ್ತಿದ್ದ ಅಡುಗೂಲಜ್ಜಿಯ ಕಥೆಗಳು-ಇವು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾದವಲ್ಲ. ಈ ಜೋಗುಳಗಳ ಕವಿತೆ-ಗೀತೆಗಳ ಕರ್ತೃಗಳ ಬಗ್ಗೆ ಏನೂ ತಿಳಿಯದು. ತಲೆತಲಾಂತರದಿಂದ ಇವು ಕಂಠಸ್ಥವಾಗಿ ಸಂರಕ್ಷಿತಗೊಂಡಿವೆ. ಈ ಕಥೆ ಹಾಡುಗಳನ್ನು ಸಂಗ್ರಹಿಸಿ, ಪ್ರಕಟಿಸುವ ಬಗ್ಗೆ ನಡೆದಿರುವ ಮೊದಲ ಪ್ರಯತ್ನಗಳು ಭಾರತೀಯ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯದ ಅಭಿವೃದ್ಧಿಯತ್ತ ಮೊದಲ ಹೆಜ್ಜೆ ಎಂದು ಪರಿಗಣಿಸಬಹುದು.

19ನೆಯ ಶತಮಾನದ ಉತ್ತರಾರ್ಧ ಅಥವಾ 20ನೆಯ ಶತಮಾನದ ಪ್ರಾರಂಭಕಾಲ- ಈ ಸಮಯದಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ಅಭಿವೃದ್ಧಿಪಡಿಸುವ ಜಾಗ್ರತ ಪ್ರಯತ್ನಗಳು ನಡೆದವು. ಪಾಶ್ಚಾತ್ಯ ರಾಷ್ಟ್ರಗಳ ಸಂಬಂಧದಿಂದಾಗಿ ವೈe್ಞÁನಿಕ ರೀತಿಯಲ್ಲಿ ಮಕ್ಕಳ ಸಾಹಿತ್ಯ ರಚಿಸಲು ಭಾರತೀಯ ಲೇಖಕರು ಪ್ರೇರಣೆ, ಪ್ರೋತ್ಸಾಹ ಪಡೆದರು. ಮುದ್ರಣ ಸೌಲಭ್ಯವೂ ನೆರವಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ವಿವಿಧ ಅಕಾಡೆಮಿಗಳು, ಸಂಘ ಸಂಸ್ಥೆಗಳು ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಹೊರಬರುವ ಉತ್ತಮ ಕೃತಿಗಳಿಗೆ ಬಹುಮಾನ, ಪ್ರಶಸ್ತಿ ನೀಡುವ ಬಗ್ಗೆ ಯೋಜನೆಗಳನ್ನು ರೂಪಿಸಿ ಈ ಕೆಲಸಕ್ಕೆ ನೆರವಾಗಿವೆ. ಅಂತರರಾಷ್ಟ್ರೀಯ ಮಕ್ಕಳ ವರ್ಷದಲ್ಲಿ (1978) ಸರ್ಕಾರಿ ಹಾಗೂ ಸಂಸ್ಥೆಗಳ ನಡುವೆ ಪೈಪೋಟಿಯೋ ಎಂಬಂತೆ ಸ್ವಲ್ಪಮಟ್ಟಿಗೆ, ಮಕ್ಕಳಿಗಾಗಿ ಖಾಸಗಿ ಉತ್ತಮ ಸಾಹಿತ್ಯಕೃತಿಗಳು ಪ್ರಕಟವಾದುವು.

ಭಾರತದ ಪ್ರಮುಖ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯದ ಬೆಳೆವಣಿಗೆ, ಪ್ರಗತಿಯ ಬಗ್ಗೆ ಸ್ಥೂಲ ಪರಿಚಯ ಈ ಮುಂದೆ ಕೊಡಲಾಗಿದೆ. ಅಸಾಮಿ : ಜನಪದ ಗೀತೆಗಳು. ನಿಚುಕನಿಗೀತೆ ಎನಿಸಿರುವ ಹಾಡುಗಳು ಮತ್ತು ಶಿಶುಗೀತೆಗಳು ಅಸಾಮಿಯಲ್ಲಿ ಮಕ್ಕಳ ಸಾಹಿತ್ಯದ ಅತ್ಯಂತ ಹಿಂದಿನ ಮಾದರಿಗಳು. ಉದಾಹರಣೆಗೆ ಜೋಗುಳ ಗೀತೆಗಳು ತುಂಟ ಮಗುವಿನ ಮನಸ್ಸಿನಲ್ಲಿ ಅಪರಿಚಿತ ಪ್ರಾಣಿಗಳ ಬಗೆಗೆ ಭಯಮೂಡಿಸಿ ಅದು ನಿದ್ದೆ ಮಾಡುವಂತೆ ಮಾಡುತ್ತವೆ. ನಿಚುಕಾನಿ ಎಂದರೆ ಅಳುವ ಮಗುವನ್ನು ಸಂತೈಸುವುದು ಎಂದರ್ಥ. ಇವು ಅಸಾಮಿಯ ಗ್ರಾಮೀಣ ಜೀವನದ ಗ್ರಾಮೀಣ ನಂಬಿಕೆಗಳು ಹಾಗೂ ಸರಳ ಗ್ರಾಮೀಣ ಬದುಕಿನ ಸೃಜನಾತ್ಮಕ ಮನಸ್ಸನ್ನು ಪ್ರತಿಫಲಿಸುವ ಉತ್ತಮ ಚಿತ್ರ ಮೂಡಿಸುತ್ತವೆ.

ಮಕ್ಕಳ ಆಟದ ಹಾಡುಗಳನ್ನು "ಧಾಯಿನಾಮ" (ದಾಯಿಯರ ಗೀತೆ) ಎನ್ನುತ್ತಾರೆ. ಇವುಗಳಲ್ಲಿ ಮಗುವಿನ ನಿರಂತರ ಕುತೂಹಲವನ್ನು ತಣಿಸುವ ಮತ್ತು ವಾಸ್ತವತೆ ಹಾಗೂ ಕಲ್ಪನೆಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೆದಿರುತ್ತದೆ. ಇಂಥ ಶಿಶುಗೀತೆಗಳು ಎಲ್ಲೋ ಒಂದು ಕಡೆ ಹುಟ್ಟಿದ್ದರೂ ಅವು ಹಲವು ಪ್ರದೇಶಗಳಲ್ಲಿ ಹರಡಿವೆ. ಉದಾಹರಣೆಗೆ "ಓ ಪೂಲ್ ಓ ಪೂಲ್" ಎಂಬ ಗೀತೆ ಅಸಾಮಿಯಲ್ಲಿ ಮಾತ್ರವಲ್ಲದೆ ಒರಿಸ್ಸಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯೂ ಕಂಡುಬರುತ್ತದೆ.

ಆಟದ ಹಾಡುಗಳು, ಒಗಟುಗಳು: ಸಾಮಾನ್ಯವಾಗಿ ಮಕ್ಕಳ ಆಟದ ಹಾಡುಗಳು ಆಯಾ ಪ್ರದೇಶದ ಸ್ವಭಾವಕ್ಕೆ ಅನುಗುಣವಾಗಿರುತ್ತವೆ. ಅವು ಅಷ್ಟೇನೂ ಅರ್ಥಪೂರ್ಣವಾಗಿರುವುದಿಲ್ಲ. ಆದರೆ ಆದಿಪ್ರಾಸ, ಅಂತ್ಯಪ್ರಾಸಗಳಿಂದಾಗಿ ಭಾಗಿಗಳ ಮನಸ್ಸಿಗೆ ಆನಂದ ಉಂಟುಮಾಡುತ್ತವೆ. ಒಗಟುಗಳು (ಸಾತರ) ಸಹ ಮಕ್ಕಳ ಆಟದ ಕ್ಷೇತ್ರದಲ್ಲಿಯೇ ಸೇರುತ್ತವೆ.

ಜನಪದ ಕಥೆಗಳು: ಅಸಾಮಿನ ಜನಪದ ಕಥೆಗಳು ಅಲ್ಲಿಯ ಬುಡಕಟ್ಟುಗಳ ಹಿನ್ನೆಲೆಯನ್ನು ಒಳಗೊಂಡಿವೆ. ಅಸಾಮೀ ಸಂಸ್ಕøತಿಯ ಮೇಲೆ ಪ್ರಭಾವ ಬೀರಿರುವ ಹಲವು ಸಂಸ್ಕøತಿಗಳನ್ನು ಪ್ರತಿನಿಧಿಸುವ ಜನಪದ ಕಥೆಗಳು ಇವೆ. ಸ್ಥಳೀಯವಾಗಿ ಮಾರ್ಪಾಟು ಮಾಡಿಕೊಂಡಿರುವ ಪುರಾಣ ಕಥೆಗಳು ಇವೆ. ಸ್ಥಳೀಯವಾಗಿ ಮಾರ್ಪಾಟು ಮಾಡಿಕೊಂಡಿರುವ ಪುರಾಣಕಥೆಗಳನ್ನು ಹಲವು ಬುಡಕಟ್ಟುಗಳಲ್ಲಿ ಕಾಣಬಹುದು. ಯುಕ್ತವಾಗಿ ಅಳವಡಿಸಿಕೊಂಡಿರುವ ಪಂಚತಂತ್ರ ಕಥೆಗಳು ಮತ್ತು ಜಾತಕ ಕಥೆಗಳು ಅಲ್ಲಿಯ ಜನಪದ ಸಾಹಿತ್ಯದ ಭಾಗವಾಗಿವೆ. ಕೆಲವು ಕಥೆಗಳು ಮಕ್ಕಳಿಗಾಗಿಯೇ ಸೃಷ್ಟಿತವಾದವು. ನೀತಿ ಪಾಠಗಳಿಂದ ಕೂಡಿರುವ "ಹಿತೋಪದೇಶ"ದ ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿವೆ. ಉದಾಹರಣೆಗೆ ಮೊಸಳೆ ಮತ್ತು ಕೋತಿ ಕಥೆ.

ಕೃಷ್ಣ ಕಥೆಗಳು: ಬಾಲಕೃಷ್ಣನ ಜೀವನ ಮತ್ತು ಚಟುವಟಿಕೆಗಳನ್ನು ಆಧರಿಸಿದ ಹಲವಾರು ಕೃತಿಗಳನ್ನು ಸಂತರಾದ ಶಂಕರದೇವ ಮತ್ತು ಮಾಧವದೇವ ತಮ್ಮ ಕೀರ್ತನೆಗಳು "ಬರ್ಗೀತಗಳು" ಮತ್ತು ಕೆಲವು "ಜುಮರಾ"ಗಳಲ್ಲಿ ಚಿತ್ರಿಸಿರುವ ಕೃಷ್ಣನ ಬಾಲ್ಯ ಎಲ್ಲ ದೇಶ, ಕಾಲಗಳ ಮಕ್ಕಳ ಗುಣಲಕ್ಷಣಗಳ ಚಿತ್ರೀಕರಣವಾಗಿದೆ.

ರಾಮಸರಸ್ವತಿಯ 16ನೆಯ ಶತಮಾನ "ಭೀಮ ಚರಿತ" ಮಕ್ಕಳ ಮಹಾಕಾವ್ಯವಾಗಿದ್ದು, ಇಲ್ಲಿಯ ಭೀಮನ ಚಿತ್ರಣ ಅಸಾಮಿ ಗೋಪಾಲಕನ ಮಾದರಿಯನ್ನು ಅನುಸರಿಸಿದೆ.

ಶ್ರೀಧರ ಕಂಡಲಿ ಶಂಕರದೇವನ ಸಮಕಾಲೀನ. ಈತ "ಕಣ್ಖೋವಾ" (ಕಿವಿ ತಿನ್ನುವವನು) ಎಂಬ ನೀಳ್ಗವನ ರಚಿಸಿದ್ದಾನೆ. ಇದರಲ್ಲಿ ಕೃಷ್ಣನ ಬಗ್ಗೆ ಅತ್ಯಂತ ಕಲ್ಪನಾತ್ಮಕ ವಿವರಣೆಯಿದೆ. ರಾಮಸರಸ್ವತಿ ಮತ್ತು ಕಂಡಲಿ- ಈ ಇಬ್ಬರು ಅನಕ್ಷರಸ್ಥ ಗ್ರಾಮೀಣ ಜನರಿಗಾಗಿ ಕೃತಿ ರಚಿಸಿರುವವರಾದರೂ ಮಕ್ಕಳಿಗೆ ಕೂಡ ಅವು ಆಸಕ್ತಿದಾಯಕವಾಗಿವೆ.

ಅರುಣೋದಯ ಕಾಲ: ಜನಪದ ಸಾಹಿತ್ಯದಿಂದ ಮಕ್ಕಳ ಸಾಹಿತ್ಯಕ್ಕೆ ಸ್ಥಿತ್ಯಂತರ ಅಸಾಮಿ ಸಾಹಿತ್ಯದ ಅರುಣೋದಯ ಕಾಲವಾದ 19ನೆಯ ಶತಮಾನದ ಮಧ್ಯೆ ಭಾಗದಿಂದ ಪ್ರಾರಂಭವಾಗುತ್ತದೆ. ಧಾರ್ಮಿಕ ಸೂಚನೆಗಳೊಡಗೂಡಿದ ಸರಳ ಕಥೆಗಳಿರುವ ಸಣ್ಣ ಕೃತಿಗಳನ್ನು ಅಮೆರಿಕನ್ ಬಾಪ್ಟಿಸ್ಟ್ ಮಿಷನರಿಗಳು ಎಲಿಜಾ ಬ್ರೌನ್ ಮತ್ತು ಇತರರು ಕೃತಿರಚನೆ ಮಾಡಿದರು. ಇವು ಅಸಾಮೀ ಮಕ್ಕಳಿಗೆ ಆನಂದದ ಮತ್ತು ಸ್ಫೂರ್ತಿಯ ನೆಲೆಯಾದುವು. ಇವು ದೋಷ ಮುಕ್ತವಾಗಿರುವುದಿಲ್ಲ.

ಆನಂದರಾಮ್ ಧೇಕಿಯಲ್ ಪೂಕನ್ (1830-59) ಮಕ್ಕಳಿಗೆ ಆಧುನಿಕ e್ಞÁನ ಒದಗಿಸುವ ಧ್ಯೇಯದಿಂದ ಅಸಾಮೀಯಾ ಲೋರಾರ್ ಮಿತ್ರ ಎಂಬ ಕೃತಿ ರಚನೆ ಮಾಡಿದರು. ಇದನ್ನು ಇಂಗ್ಲಿಷ್ ವಿಶ್ವಕೋಶವನ್ನು ಆಧರಿಸಿ ರಚಿಸಲಾಗಿದ್ದು ಇದು ಇತಿಹಾಸ, ವಿe್ಞÁನ ಇತ್ಯಾದಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒಳಗೊಂಡಿದೆ. ಮಕ್ಕಳ ಪುಸ್ತಕದ ಅಭಾವದ ಬಗ್ಗೆ ಮನಗಂಡ ಹೇಮಚಂದ್ರ ಬರುವಾ (1835-96) ಅಸಾಮೀ ಬಾಲಸಾಹಿತ್ಯ ಸೃಷ್ಟಿಸಲು ಶ್ರಮಿಸಿದರು. ಇವರ ಅನಂತರ ಲಂಬೋದರ ಬರಾ (1860-92) ಲೋರಾಬೋಧ್ ಮತ್ತು e್ಞÁನಬೋಧ್‍ಗಳನ್ನು ರಚಿಸಿ ಪ್ರಕಟಿಸಿದರು. ನೈತಿಕ ಬೋಧನೆಗಳನ್ನು ಒಳಗೊಂಡ ಬಲದೇವ ಮಹಂತರ (1850-95) ಉಜುಪಾರ್ ಸಹ ಆಗ ತುಂಬ ಜನಪ್ರಿಯವಾಗಿತ್ತು. ಮಕ್ಕಳ ಮನಸ್ಸನ್ನು ಆಕರ್ಷಿಸುವಂತೆ ಇದೇ ಅವಧಿಯಲ್ಲಿ ಕೃತಿರಚನೆ ಮಾಡಿದ ಮತ್ತೊಬ್ಬರೆಂದರೆ ಬೋಲನಾಥ ದಾಸ (1858-1929). ಇವು ಪ್ರಧಾನವಾಗಿ ಪಠ್ಯಪುಸ್ತಕಗಳೇ ಆಗಿದ್ದರೂ ಮಿಷನರಿಗಳು ಈಗಾಗಲೇ ಸೃಷ್ಟಿಸಿದ್ದ ಮಕ್ಕಳ ಸಾಹಿತ್ಯಕ್ಕೆ ಯುಕ್ತ ವಾತಾವರಣ ಕಲ್ಪಿಸಿದುವು.

ರೋಮ್ಯಾಂಟಿಕ್ ಯುಗ: ಅಸಾಮೀ ಸಾಹಿತ್ಯದ ರೊಮ್ಯಾಂಟಿಕ್ ಯುಗ 1889ರಲ್ಲಿ ಪ್ರಾರಂಭವಾಯಿತು. ಈ ಅವಧಿಯಲ್ಲಿ ಸಾಹಿತ್ಯದ ಬೆಳೆವಣಿಗೆಗೆ ಲಕ್ಷ್ಮೀನಾಥ ಬೇಜಬರುವಾ (1868-1938) ಮತ್ತು ಪದ್ಮನಾಥ ಗೋಹೈನ್ ಬರುವಾ (1871-1946) ಇವರ ಕೊಡುಗೆ ಅಮೂಲ್ಯವಾದವು. ಬೇಜ ಬರುವಾರ ಬರ್ಹಿ ಆಯಿರ್ ಸಾಧು (ಅಜ್ಜಿಯ ಕಥೆಗಳು, 1911) ಮತ್ತು ಕಕಾದೇಯುತ ಆರು ನಾತಿಲಾರಾ (ಅಜ್ಜ ಮತ್ತು ಮೊಮ್ಮಗ, 1912) - ಇವು ಅಸಾಮೀ ಕಥೆಗಳ ಸಂಕಲನಗಳು. 1913ರಲ್ಲಿ ಜುನುಕಾ (ಗೆಜ್ಜೆಗಂಟೆ) ಪ್ರಕಟಿಸಿದರು. ಪದ್ಮನಾಥ ಬರುವಾ ಪ್ರಮುಖವಾಗಿ ಶಾಲಾ ಪಠ್ಯಪುಸ್ತಕಗಳ ರಚನೆಯಲ್ಲಿ ನಿರತರಾದರು. ಇದೇ ಅವಧಿಯಲ್ಲಿ ದುರ್ಗಾ ಪ್ರಸಾದ ಮಜೆಂದರ್ ಬರುವಾ (1870-1938) ಮತ್ತು ಪನೀಂದ್ರ ನಾಥ ಗೊಗೊಯ್ (1871-1900) ಸಹ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೃತಿ ರಚನೆ ಮಾಡಿರುವರು.

ಆನಂದ ಚಂದ್ರ ಅಗರವಾಲರ (1870-1940) ಕೋಮಲ ಪಾಠ್ (1900) ಮತ್ತು ಆದಿಪಾಠ್ (1920) ಜನಪ್ರಿಯವಾಗಿವೆ. ಅನೇಕ ಇಂಗ್ಲಿಷ್ ಪದ್ಯಗಳನ್ನು ಹಿತವಾಗಿ ಭಾಷಾಂತರಿಸಿದ್ದು, ಇವು ಭಾಷಾಂತರಗಳು ಎನ್ನುವುದಕ್ಕಿಂತ ಪುನರ್ ಸೃಷ್ಟಿ ಎನ್ನುವಷ್ಟು ಸರಳವಾಗಿವೆ. ಈ ಕ್ಷೇತ್ರಗಳಲ್ಲಿ ಉಳಿದ ಯಶಸ್ವಿ ಲೇಖಕರು ಎಂದರೆ ವೇಣುಧರ ರಾಜಖೋವ (1872-1955), ಮುಹಮದ್ ಸುಲೇಮಾನ್ ಖಾ, ವಿಷಯ ವಿಶ್ವಾಸ್ ಮತ್ತು ರತ್ನೇಶ್ವರ ಮಹಂತ (1864-93).

ಆಧುನಿಕ ಯುಗ: 1920ರಿಂದ ಪ್ರಾರಂಭವಾಗಿ ಭಾರತ ಸ್ವಾತಂತ್ರ್ಯಗಳಿಸುವ ತನಕ ಈ ಯುಗ ವ್ಯಾಪಿಸಿದ್ದು. ಈ ಕಾಲದಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗಿದೆ. ಬನಿಶಾಂತ ಶಕಾತಿಯವರ ಕಥೆಗಳ ಸಂಗ್ರಹ ಪಖಿಲಾ (ಚಿಟ್ಟೆ, 1951) ವೇಣುಧರ ಶರ್ಮರ ರಾಂಗಾಪಟಾ (1949), ಹರಿಪ್ರಸಾದ ಬರುವಾರ ಮೈನಾ (1945), ಮತ್ತು ವೀರೋಚಿತಿಯಾರ್ ದೇಶ್ (1953), ಮಿತ್ರದೇವ ಮಹಂತರ ಜುನ್-ಜುನಿ ಮತ್ತು ಅತುಲಚಂದ್ರ ಹಜಾರಿಶರರ ಶಿಶುಗೀತೆಗಳು ಗಮನಾರ್ಹ ಕೃತಿಗಳು.

ಜಾತಕ ಕಥೆಗಳು, ಹಿತೋಪದೇಶ, ಪಂಚತಂತ್ರ, ಮಹಾಭಾರತ, ರಾಮಾಯಣ, ಭಾಗವತ, ವಿವಿಧ ಪುರಾಣಗಳು ಕಥಾಸರಿತ್ಸಾಗರ ಮತ್ತು ಉಪನಿಷತ್ತುಗಳನ್ನು ಆಧರಿಸಿ ಮಕ್ಕಳ ಮನಸ್ಸಿಗೆ ಆನಂದ ಉಂಟುಮಾಡುವ ಕಥೆಗಳನ್ನೂ ಈ ಕಾಲದ ಹಲವು ಲೇಖಕರು ರಚಿಸಿರುವರು. ಭಾರತದ ಇತರ ಭಾಷೆಗಳಂತೆ ಅಸಾಮಿಯಲ್ಲಿಯೂ ವಿವಿಧ ದೇಶಗಳ ಸುಪ್ರಸಿದ್ಧ ಕಥೆಗಳ ಭಾಷಾಂತರ, ರೂಪಾಂತರ ನಡೆದಿವೆ. ಮಕ್ಕಳ ವಯಸ್ಸಿನ ಮೇಲೆ ಹಿರಿಯ ಚೇತನಗಳ ಜೀವನವೂ ಪ್ರಭಾವಬೀರುವಲ್ಲಿ ಕಮಲೇಶ್ವರ ಚಲಿಹಾ, ಮಹದೇವಶರ್ಮ, ಹರೇಂದ್ರನಾಥಶರ್ಮಾ, ಕಾಶೀನಾಥ ಬರ್ಮನ್, ನಿಲೀಮದತ್ತ ಮತ್ತು ಪ್ರಿಯದಾಸ ತಾಲೂಕುದಾರರ ಪ್ರಯತ್ನಗಳು ಪ್ರಶಂಸಾರ್ಹವಾಗಿವೆ. ಮಹಾನ್ ಚೇತನಗಳ ಜೀವನದ ಬಗ್ಗೆ 1950-75ರ ಅವಧಿಯಲ್ಲಿ ಹಲವಾರು ಪುಸ್ತಿಕೆಗಳು ಬೆಳಕುಕಂಡಿವೆ.

ಕೇಶನಾನಂದ ಗೋಸ್ವಾಮಿ ಅವರ ಕವ ಜಾನಿಲೇ ಕಥಾ (ಹೇಗೆ ವಿವರಿಸಬೇಕೆಂಬುದನ್ನು ತಿಳಿ) ಸಾಮಾನ್ಯ e್ಞÁನದ ಬಗ್ಗೆ ಸುಂದರವಾಗಿ ಪ್ರಕಟಗೊಂಡಿರುವ ಕೃತಿ. ಇದು ಅಸಾಮಿ ಭಾಷೆಯಲ್ಲಿಯ ವಿಶಿಷ್ಟ ಕೃತಿ.

ಮಕ್ಕಳ ಸಾಹಿತ್ಯದಲ್ಲಿ ಇಷ್ಟೆಲ್ಲ ಅಭಿವೃದ್ಧಿಯಾಗಿದ್ದರೂ ಮಕ್ಕಳಿಗಾಗಿ ಕಾದಂಬರಿಗಳು, ವೈe್ಞÁನಿಕ ಕಥೆಗಳು, ನಾಟಕಗಳು ಮತ್ತು ಪ್ರವಾಸಕಥೆಗಳ ಕ್ಷೇತ್ರದಲ್ಲಿ ಅಭಾವ ಇದ್ದೇ ಇದೆ. ಮಗುವಿನ ಕಲ್ಪನೆಯೊಡನೆ ಸಮಸಮನಾಗಿ ಸಾಗುವಂತೆ ಕಾದಂಬರಿ ರಚನೆ ಕಷ್ಟತರವೇ. ಕೆಲವು ಪ್ರಯತ್ನಗಳು ಈ ದಿಸೆಯಲ್ಲಿ ಸಾಗಿವೆ. ನವಕಾಂತ ಬರುವಾರ ಶಿಯಾಲೀ ಪಾಲಿಗಯಿ ರತ್ನಪುರ (ತೋಳ ರತ್ನಪುರಕ್ಕೆ ಹೋಗಿದೆ) ಮತ್ತು ಅಕರರ್ ಜಖಲಾ (ಅಕ್ಷರಗಳ ಶ್ರೇಣಿ) ಮುಖ್ಯವಾಗಿವೆ.

ಮಕ್ಕಳಿಗಾಗಿ ವೈe್ಞÁನಿಕ ವಿಷಯಗಳ ಬಗ್ಗೆ ಜನಪ್ರಿಯ ಕೃತಿಗಳನ್ನು ರಚಿಸಿರುವ ಕೆಲವರಲ್ಲಿ ರೋಹಿಣಿ ಬರುವಾ (ಬಿe್ಞÁನರ್ ಸಾಧು, 1943) ರಘುನಾಥದೇವಾ ಚೌಧುರಿ (ಮಾನವ ಸಭ್ಯತಾ), ಜೋಗೇಂದ್ರನಾಥ ಸೈಕಿಯಾ (ಪತಂಗಾರ್ ಕಥ), ಕಾಲೀನಾಥ ಶರ್ಮ (ಪ್ರಕೃತೀರ್ ಪುತಲಘರ್). ಬಿನೊಯ್ ಕುಮಾರ ತಮುಲಿ (ಮಹಾಕಾಶ ಅಭಿಯಾನ), ಭುವನ ಮೋಹನದಾಸ್ (ಆದಿಮಯುಗಾರ್ ಆದಿಮ ಕಥಾ), ಪ್ರಸನ್ನ ಗೋಸ್ವಾಮಿ (ಪುಲಾರ್ ಸಾಧು), ವಿಶ್ವನಾರಾಯಣ ಶಾಸ್ತ್ರಿ (ನಾಯಿರ್ ಸಾಧು, ಸಾಗರಿಕಾ) ಮುಖ್ಯರು. ಇವರು ತಮ್ಮ ಕೃತಿಗಳಲ್ಲಿ ವಿಷಯಗಳನ್ನು ಕಥಾರೂಪದಲ್ಲಿ ವಿವರಿಸಿರುವುದರಿಂದ ಅವು ಆಕರ್ಷಣೀಯವಾಗಿವೆ.

ಮಕ್ಕಳಿಗಾಗಿ ಅಸ್ಸಾಮ್ ವಿe್ಞÁನ ಸಂಸ್ಥೆ ನಾಲ್ಕು ಸಂಪುಟಗಳಲ್ಲಿ ಸಿದ್ಧಪಡಿಸಿರುವ ವಿe್ಞÁನ ವಿಶ್ವಕೋಶ ಸಹ (ಪ್ರಾಥಮಿಕ ವಿe್ಞÁನ ಕೋಶ, ಸಂ. 1, 2; 1969, 1971) ಪ್ರಕಟಗೊಂಡಿವೆ.

ಮಕ್ಕಳಿಗಾಗಿ ಕವನ ಸಂಕಲನಗಳು ಅಷ್ಟಾಗಿ ಬೆಳಕು ಕಂಡಿಲ್ಲ. ಅನಂತದೇವಶರ್ಮರ ಐದು ಸಂಕಲನಗಳು ಈ ಕ್ಷೇತ್ರದಲ್ಲಿ ಗಮನಾರ್ಹವಾಗಿವೆ. ಸುಪ್ರಸಿದ್ಧ ಲೇಖಕರು ಮಕ್ಕಳಿಗಾಗಿಯೇ ರಚಿಸಿರುವ ಹಲವಾರು ಪದ್ಯಗಳು ಹಲವಾರು ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಚದರಿಹೋಗಿವೆ. ಅವುಗಳ ಸಂಕಲನ ಕಾರ್ಯ ಆಗಬೇಕಾಗಿದೆ. ಮಕ್ಕಳ ನಾಟಕಗಳಿಗೆ ಅಪಾರ ಬೇಡಿಕೆಯಿದೆ. ಇದನ್ನು ಸಾಕಷ್ಟು ಪೂರೈಸಲಾಗಿಲ್ಲ. ಕೀರ್ತಿನಾಥ ಬರ್ದೊಲೋಯಿ ಮತ್ತು ಮುಕ್ತಿನಾಥ ಬರ್ದೋಲೋಯಿ - ಇವರ ಗೀತನಾಟಕಗಳು ವಿಶೇಷವಾಗಿ ಗಮನಾರ್ಹವಾಗಿವೆ.

ಪಾರಂಪರಿಕ ಅಸಾಮೀ ಶಿಶುಗೀತೆಗಳನ್ನು ಬೀರೇಂದ್ರನಾಥ ದತ್ತ ಮತ್ತು ವೇಣುಶರ್ಮ ಅಮತರ್ ಮತ 1976ರಲ್ಲಿ ಸಂಕಲಿಸಿರುವರು. ನಿರ್ಮಲ ಪ್ರಭ ಬರ್ದೊಲೋಯಿಯವರ ಅಸಾಮೀಯ ಒಮಲಾ ಗೀತ್ (1978) ಈ ಕ್ಷೇತ್ರದ ಉತ್ತಮ ಕೃತಿ.

ಅಸಾಮೀ ಸಾಹಿತ್ಯದಲ್ಲಿ ಮಕ್ಕಳ ನಿಯತಕಾಲಿಕಗಳ ಅಭಾವ ಇದ್ದೇ ಇದೆ. ಲರಾ-ಬಂಧು 1883ರಲ್ಲಿ ಆರಂಭವಾಯಿತು. ಇದಾದ ಅನಂತರ ಅಕಣ್ (1916-18), ಅರುಣ (1926), ಪಾರಿಜಾತ (1940), ದೀಪಕ್ ಜೊನ್‍ಬಾಯ್ (1962-72) ಮತ್ತು ರಡಲಿ (1972-74) ಇವು ಆಗಿಂದಾಗ್ಗೆ ಪ್ರಕಟಗೊಂಡ ನಿಯತಕಾಲಿಕೆಗಳು. ಇವುಗಳಲ್ಲಿ ಹೆಚ್ಚಿನವು ಐದು ವರ್ಷಕ್ಕೂ ಹೆಚ್ಚು ಕಾಲ ಇರಲಿಲ್ಲ. ಪೊಹರ್ ಮತ್ತು ರಂಗ್, ಪಾಖಿಮೆಲಿ ಇವು ಈ ಕ್ಷೇತ್ರದ ಇತ್ತೀಚಿನ ಕೃತಿಗಳು.

ಅಸಾಮೀ ಮಕ್ಕಳ ಸಾಹಿತ್ಯದಲ್ಲಿ ಸೃಜನಾತ್ಮಕ ಕೃತಿಗಳ ಅಭಾವ ಇದ್ದೇ ಇದೆ. ನೀತಿ ಬೋಧಕ ಕೃತಿಗಳು ಹೆಚ್ಚು ಹೊರಬರುತ್ತಿವೆ. ಅಲ್ಲದೆ ಮಕ್ಕಳ ಮನಸ್ಸನ್ನು ಆಕರ್ಷಿಸುವಂತಾಗಲು ಪುಸ್ತಕಗಳು ಮತ್ತು ನಿಯತಕಾಲಿಕೆಗಳು ವರ್ಣಮಯವಾಗಿ ಆಕರ್ಷಕವಾಗಿ ಮುದ್ರಣಗೊಳ್ಳಬೇಕು. ಈ ದಿಸೆಯಲ್ಲಿ ಸಾಕಷ್ಟು ಗಮನಹರಿಸಬೇಕಾಗಿದೆ.

ಉರ್ದು: ಉರ್ದು ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಖಾಲಿಕ್ ಬಡಿದಿಂದ (ಸೃಷ್ಟಿಕರ್ತ) ಪ್ರಾರಂಭವಾಗುತ್ತದೆ. ಇದನ್ನು ದೆಹಲಿಯ ಅಮೀರ್ ಖುಸ್ರು (1255-1324) ರಚಿಸಿದನೆಂದು ಬಹುಕಾಲ ನಂಬಲಾಗಿತ್ತು. ಇದರ ನಿಜವಾದ ಕರ್ತೃ ಚಕ್ರವರ್ತಿ ಜಹಾಂಗೀರನ ಕಾಲದಲ್ಲಿ ಅಥವಾ ಆ ತರುವಾಯ (17ನೆಯ ಶತಮಾನ) ಇದ್ದ ಖುಸ್ರು ಎಂಬ ಇನ್ನೊಬ್ಬ ವ್ಯಕ್ತಿ ಎಂದೂ ಅನಂತರದ ಸಂಶೋಧನೆಗಳಿಂದ ಹೇಳಲಾಗುತ್ತಿದೆ. ಭಾಷೆಯಲ್ಲಿ ಪದಗಳ ಸ್ಪಷ್ಟವಾದ ಉಚ್ಚಾರಣೆ ಇತ್ಯಾದಿಗಳನ್ನು ಮಕ್ಕಳಿಗೆ ಕಲಿಸಲು ನಿಘಂಟುಗಳನ್ನು (ಉಲೋಘಾತ) ರಚಿಸಿದರು ; ಇವೆಲ್ಲ ಛಂದೋಬದ್ಧ ರಚನೆಗಳಾಗಿದ್ದುವು.

ಉರ್ದು ಭಾಷೆಯಲ್ಲಿ ಮಕ್ಕಳ ಸಾಹಿತಿಗಳ ಪೈಕಿ ಅತ್ಯಂತ ಪ್ರಮುಖ ಎಂದರೆ ನಜೀರ್ ಅಕ್ಬರಾಬಾದಿ (1735-1830) ಎನ್ನಬಹುದು. ಈತ ಮಕ್ಕಳಿಗೆ ವಿಶೇಷ ಆಸಕ್ತಿಯ ವಿಷಯಗಳನ್ನು ಆಯ್ದು ಸರಳ ಭಾಷೆ ಬಳಸಿ ಅವರ ಮನೋಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಿದ್ದ. ಅವು ದೈನಂದಿನ ಅನುಭವಗಳು, ಅವಲೋಕನಗಳು ಮತ್ತು ಮೃದುಮಧುರಭಾವನೆಗಳಿಂದ ತುಂಬಿವೆ. ಋತು, ಹಬ್ಬ, ಉತ್ಸವ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದುವು. ಮಕ್ಕಳಿಗೆ ನೀತಿಬೋಧಕವೂ ವಿಚಾರ ಪ್ರಚೋಧಕವೂ ಆದ ವಿಷಯಗಳನ್ನು ಸ್ವಯಂಬೋಧಿಸಿ ಅನಂತರ ಪದ್ಯಗಳನ್ನು ರಚಿಸುತ್ತಿದ್ದ. ಬಂಜರ ನಾಮಾ, ಆದ್ಮೀ ನಾಮ, ಬರ್ಸಾತ್ ಕಿ ಬಹಾರೇ, ಈದ್ ಹೋಲಿ, ದಿವಾಲಿ, ರೋಟಿಯಾ ಜಾರೇಕೀ ಬಹಾರೇ ಇವೇ ಅವು.

ಬ್ರಿಟಿಷರು ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ಜಾರಿಗೆ ತಂದುದಲ್ಲದೆ (1857) ದೇಶದ ಮೇಲೆ ಅವರ ಸಂಸ್ಕøತಿಯನ್ನೂ ಹೇರಿದರು. ಈ ಸಂಸ್ಕøತಿ ಪೌರಸ್ತ್ಯ ಅಥವಾ ಭಾರತೀಯವಾಗಿದ್ದ ಎಲ್ಲ ಸಂಸ್ಕøತಿಗಳೂ ಕ್ರಮೇಣ ಆತಂಕಕಾರಿಯಾಯಿತು. ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವಗಳ ಪೈಕಿ ಅವರ ಸಾಹಿತ್ಯಕ ಪ್ರಭಾವ ಅತ್ಯಂತ ಪ್ರಬಲವಾದುದೂ ಪರಿಣಾಮಕಾರಿಯಾದುದೂ ಆಗಿತ್ತು. ಜೊತೆಗೆ ಸಂಪರ್ಕದ ಪ್ರಬಲ ಸಾಧನವೂ ಇದೇ ಆಗಿತ್ತು. ಉರ್ದು ಸಾಹಿತಿಗಳಿಂದ ಇದಕ್ಕೆ ಸ್ವಾಗತವೂ ದೊರೆಯಿತು. ಲಾಹೋರಿನ ಅಂಜುಮಾನ್-ಏ ಪಂಜಾಬಿ ಆಶ್ರಯದಲ್ಲಿ (1874) ವ್ಯವಸ್ಥೆಗೊಳಿಸಿದ ಕವಿಗೋಷ್ಠಿ ಹೊಸಶಕೆಯನ್ನು ಪ್ರಾರಂಭಿಸಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ರಚಿಸಲಾದ ನಜ್ಮಿ (ಸಂಕ್ಷಿಪ್ತ ಕವನಗಳು) ಎಂಬ ಹೊಸ ಪ್ರಕಾರವನ್ನು ಆರಂಭಿಸಿತು. ಈ ಗೋಷ್ಠಿಗಳಲ್ಲಿ ಕೆಲವು ವಿಷಯಗಳ ಬಗ್ಗೆ ಪದ್ಯಗಳನ್ನು ಹಾಡಲಾಯಿತು. ಇವುಗಳಲ್ಲಿ ಹಾಲಿ (1837-1914), ಆಜಾದ್ (1833-1910) ಮತ್ತು ಇಸ್ಮಾಯಿಲ್ ಮೀರತಿ (1844-1917) ಇವರ ಕೃತಿಗಳು ಗಮನಾರ್ಹ.

ಇಸ್ಮಾಯಿಲ್ ಮೀರತಿ ವಿಶೇಷತಃ ಮಕ್ಕಳ ಸಾಹಿತಿ. ಈತನ ಸಾಹಿತ್ಯ ಸೃಷ್ಟಿ ಬಲುಪಾಲು ಈ ವರ್ಗಕ್ಕೆ ಸೇರುವುದು. ಈತ ಮಕ್ಕಳಿಗಾಗಿ ಪಠ್ಯಕ್ರಮವೊಂದನ್ನು ರೂಪಿಸಿದ. ಅದನ್ನು ಮೀರಿಸುವ ಪಠ್ಯಕ್ರಮ ಇಂದಿಗೂ ಸೃಷ್ಟಿಯಾಗಿಲ್ಲ. ಸಾಹಿತ್ಯ-ಪಠ್ಯಕ್ರಮ ಇವೆರಡರ ನಡುವೆ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡಿದ್ದ ಮೊಹಮದ್ ಹುಸೇನ್ ಆಜಾದ್ ಸಹ ಮಕ್ಕಳಿಗಾಗಿ ಪಠ್ಯಕ್ರಮವೊಂದನ್ನು ರೂಪಿಸಿದ. ಆದರೆ ಇದು ಇಸ್ಮಾಯಿಲ್ ಮೀರತಿಯದರಷ್ಟು ಜನಪ್ರಿಯವಾಗಲಿಲ್ಲ. ಮಕ್ಕಳ ಮನಶ್ಯಾಸ್ತ್ರದ ಬಗ್ಗೆ ಪೂರ್ಣವಾಗಿ ಮನಗಂಡಿದ್ದ ಮೀರತಿ ಹಲವು ವರ್ಷಗಳ ಕಾಲ ಈ ಬಗ್ಗೆ ಚಿಂತಿಸಿ ಆಸಕ್ತಿದಾಯಕ ವಿಷಯಗಳ ಬಗ್ಗೆ ಮಕ್ಕಳ ಭಾಷೆಯಲ್ಲಿಯೇ ಸಾಹಿತ್ಯ ನಿರ್ಮಾಣ ಮಾಡಿದ. ಹೊಸ ಮಾರ್ಗದರ್ಶಿ ಸೂತ್ರಗಳ ಅನ್ವಯ ಸಿದ್ಧಪಡಿಸಲಾದ ಪಠ್ಯವಸ್ತುವಿನಲ್ಲಿ ತನ್ನ ಕವನಗಳನ್ನು ಸೇರಿಸಿ ದೇಶಾದ್ಯಂತ ಜನಪ್ರಿಯನಾದ. ಪಾನ ಚಕ್ಕಿ, ಹಮಾರಿ ಗಾಯೇ ಛೋಟ ಚುಂಟಿ, ಕವ್ವ, ರೈಲ್, ದಾಲ್ ಕೀ ಫಿರ್ಯಾದ್, ಹವಾ ಚಲಿ, ಮಕ್ಕಿಯಾನ್, ಊಂಟ್, ಷೇರ್, ಬಚ್ಚಾ ಔರ್ ಮಾ ಇತ್ಯಾದಿಗಳನ್ನು ಇಂದಿಗೂ ಆಸಕ್ತಿಯಿಂದ ಮಕ್ಕಳು ಓದುವರು, ಕಂಠಪಾಠ ಮಾಡುವರು. ಈತ ಸರಳರೀತಿಯಲ್ಲಿ ಸಣ್ಣ ಕಥೆಗಳನ್ನು ರಚಿಸಿದ್ದಾನೆ. ಇಸ್ಮಾಯಿಲ್ ಸಂಕಲಿಸಿದ ಬೋಧೆಗಳು ಹಾಗೂ ಪಠ್ಯಪುಸ್ತಕಗಳು ಸುಮಾರು ಐವತ್ತು ವರ್ಷಕಾಲ ಭಾಷಾಕಲಿಕೆಗೆ ಆಕರವಾಗಿದ್ದವು. ಕೆಲವು ಕಡೆ ಅವು ಇಂದಿಗೂ ಬಳಕೆಯಲ್ಲಿವೆ.

ಐತಿಹಾಸಿಕ ಘಟನೆಗಳ ಬಗ್ಗೆ ಮೌಲಾನಾ ಶಿಬ್ಲಿಯ (1857-1912) ಕೆಲವು ಮುಖ್ಯ ಪದ್ಯಗಳಿವೆ. ಇವುಗಳ ಶೈಲಿ ಅನುಪಮ. ಇವು ಮಕ್ಕಳಿಗೆ ಪ್ರಿಯವಾಗಿವೆ. ಮುಹಮದ್ ಇಕ್ಬಾಲ್ (1873-1938) 19ನೆಯ ಶತಮಾನದ ಕಾವ್ಯರಚನೆ ಪ್ರಾರಂಭಿಸಿದ. ಈತ ವಿಶೇಷವಾಗಿ ಮಕ್ಕಳಿಗಾಗಿಯೇ ಬರೆದ. ಏಕ್ ಗಾಯ್ ಔರ್ ಬಕ್ರಿ, ಏಕ್ ಪಹಾಡ್ ಔರ್ ಗಿಲಹರಿ, ಬಚ್ಚೇ ಕಿ ದುವಾ, ಹಮದರ್ದಿ ಮಾಕಾ ಖ್ವಾಬ್ ಮತ್ತು ಪರೆಂದೇಶಿ ಫರ್ಯಾದ್ - ಈ ಆರು ಪದ್ಯಗಳು ಮಕ್ಕಳಿಗೆಂದೇ ರಚಿತವಾದವು. ಇವುಗಳ ಜೊತೆಗೆ ತರಾನ್-ಎ-ಹಿಂದಿ (ಭಾರತಗೀತೆ) ಮತ್ತು ಹಿಂದೂಸ್ಥಾನಿ ಬಚ್ಚಾವೋಂಕ ಕಅಮೀ ಗೀತ್ (ಭಾರತೀಯ ಬಾಲಕರ ರಾಷ್ಟ್ರಗೀತೆ) ಇವರೆಡು ಮಕ್ಕಳಿಗಾಗಿಯೇ ರಚಿತವಾದವು. ಈ ಆರು ಪದ್ಯಗಳೂ ಇಂಗ್ಲಿಷಿನಿಂದ ಭಾಷಾಂತರಗೊಂಡಿರುವುದಾದರೂ ಇವು ಸ್ವಂತ ಕೃತಿಯಂತೆ ಆಕರ್ಷಣೆ ಉಳಿಸಿಕೊಂಡಿವೆ. ಮನಸ್ಸಿಗೆ ಹಿತ ಉಂಟುಮಾಡಿ ನೈತಿಕ ಜಾಗೃತಿ ಮುಡಿಸುತ್ತವೆ. ಬಚ್ಚೇಕಿ ದುವಾ ಉರ್ದು ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾಗಲು ಇದೇ ಕಾರಣ ಎನ್ನಬಹುದು. ಸಾರೇ ಜಹಾಂ ಸೇ ಅಚ್ಚಾ ಹಿಂದೂಸ್ಥಾನ್ ಹಮಾರಾ - ಇದನ್ನು ನಮ್ಮ ರಾಷ್ಟ್ರಗೀತೆಗಳ ಪೈಕಿ ಒಂದಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೇ ಅವಧಿಗೆ ಸೇರಿದ ಮತ್ತೊಂದು ಕವಿತೆ ಏಕ್ ಆರಜು, ಇದು ಇಂಗ್ಲಿಷ್ ಕವನದ ರೂಪಾಂತರ.

ಇಕ್ಬಾಲ್ ತರುವಾಯ ತ್ರಿಲೋಕ್‍ಚಂದ್ ಮಹ್ರೂಮ್ (1887-1968) ಜನಪ್ರಿಯ (ಮಕ್ಕಳ ಸಾಹಿತ್ಯ ಪ್ರಪಂಚದಲ್ಲಿ) ವ್ಯಕ್ತಿಯಾಗಿದ್ದಾರೆ. ಸ್ವತಃ ಉಪಾಧ್ಯಾಯರಾಗಿದ್ದ ಇವರು ಮಕ್ಕಳ ಸಾಹಿತ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿ, ಅಮೂಲ್ಯ ಕೊಡುಗೆ ನೀಡಿರುವರು. ಭಾರತದೇಶ, ಹಿಮಾಲಯ ನದೀನದಗಳು, ಸಮುದ್ರಗಳು, ಪ್ರಾಣಿಪಕ್ಷಿಗಳು- ಇವೆಲ್ಲ ಇವರ ಕವಿತೆಗೆ ಮೆರುಗು ನೀಡುತ್ತವೆ. ಶಾಮ್, ಸವೇರೇ ಉಠ್ನ, ಅಚ್ಚೆಕಾಮ್, ಕಿತಾಬ್, ಬುಲ್‍ಬುಲ್, ಸಫಾಯಿ, ಆದಬ್, ಅಚ್ಚಾಆದ್ಮಿ, ಪೂಲ್, ಬರ್ಸಾತ್ - ಇವರ ಕೆಲವು ಪ್ರಸಿದ್ಧ ಕವನಗಳಿವು.

ಹಫೀಜ್ ಜಲಂಧರಿಗೆ (ಜ. 1900) ಷಾನಾಮಾ-ಎ-ಇಸ್ಲಾಂ ಅಪಾರ ಕೀರ್ತಿಯನ್ನು ದೊರಕಿಸಿತಾದರೂ ಮಕ್ಕಳಿಗಾಗಿ ಬರೆದ ಗೀತೆ, ಕವಿತೆಗಳಿಂದ ಇವರ ಜನಪ್ರಿಯತೆ ಅಧಿಕಗೊಂಡಿದೆ. ಖುದಾ ಸಬ್‍ಕೋ ದೇಖ್ತಾ ಹೈ, ಬೋಲ್ ಮೇರೆ ಮುರ್ಗೇ ಬೋಲ್, ಸೂರಜ್ ಕಾಂಯೇ ಕಾಂಯೇ, ಬಹಾದುರ್ ಕಿಸಾನ್, ಕಿಸಾನ್ ಕ ಲಡಕಾ, ಗರ್ಮೀ ಕಿ ಋತ್ ಬೈಶಾಖೀ ಕ ಮೇಲಾ, ತಾರೋಂ ಕ ಮೆಹಫಿಲ್- ಇವರ ಕೆಲವು ಪ್ರಸಿದ್ಧ ಕವನಗಳಿವು.

ಇಸ್ಮಾಯಿಲ್ ಮೀರತಿಯನ್ನು ಬಿಟ್ಟರೆ ಮಕ್ಕಳಿಗಾಗಿಯೇ ಕೃತಿ ರಚನೆ ಮಾಡಿದವರಲ್ಲಿ ಮುಖ್ಯರೆಂದರೆ ಷಫೀಯುದ್ದೀನ್ ನಯ್ಯರ್ (1903-78). ಮಕ್ಕಳ ಮಾನಸಿಕ, ಕಲ್ಪನಾತ್ಮಕ, ಭಾವನಾತ್ಮಕ ಹಾಗೂ ಸಾಮಾಜಿಕ ಪ್ರೇರಣೆಗಳಿಗೆ ಅನುಗುಣವಾಗಿ ಇವರ ಕೃತಿಗಳು ರಚನೆಗೊಂಡಿವೆ. ಮಕ್ಕಳ ಮನಸ್ಸನ್ನೂ ವಯಸ್ಸನ್ನೂ ಗಮನದಲ್ಲಿಟ್ಟುಕೊಂಡು ಐದರಿಂದ ಎಂಟುವರ್ಷ, ಎಂಟರಿಂದ ಹನ್ನೊಂದು ವರ್ಷ ಮತ್ತು ಹನ್ನೊಂದರಿಂದ ಹದಿನಾಲ್ಕು ವರ್ಷ- ಹೀಗೆ ಮೂರು ವರ್ಗಗಳಾಗಿ ವಿಭಜಿಸಿಕೊಂಡು ತಮ್ಮ ಬರವಣಿಗೆ ನಡೆಸಿದ್ದಾರೆ. ಶುಚಿತ್ವ, ಶ್ರದ್ಧೆ, ಪರಸ್ಪರ ಪ್ರೀತಿ, ಮೈತ್ರಿ, ಜೊತೆಗಾರರ ಬಗ್ಗೆ ಮತ್ತು ಸುತ್ತಮುತ್ತ ಇರುವ ಪಶುಪಕ್ಷಿಗಳ ಬಗ್ಗೆ, ಗಿಡಮರಗಳ ಬಗ್ಗೆ, ಪ್ರಕೃತಿಯ ಬಗ್ಗೆ ಅನುಕಂಪ, ಸಹಾನುಭೂತಿ ಮೊದಲಾದ ಅಂಶಗಳ ಬಗ್ಗೆ ಮಕ್ಕಳ ಗಮನವನ್ನು ಅಪಾರವಾಗಿ ಸೆಳೆದಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಇವರು ರಚಿಸಿರುವ ಗದ್ಯ ಪದ್ಯ ಕೃತಿಗಳ ಸಂಖ್ಯೆ 42ಕ್ಕೂ ಮಿಕ್ಕಿವೆ.

ಮಕ್ಕಳ ಸಾಹಿತ್ಯಕ್ಕೆ ಗಮನಾರ್ಹ ಕಾಣಿಕೆ ಸಲ್ಲಿಸಿರುವವರ ಪೈಕಿ ಹಮೀದುಲ್ಲಾ ಅಫ್ಸರ್ (ಜ. 1898), ನಜೀರ್ ಅನ್ಸಾರಿ, ರಾಜಾ ಮೆಹದಿ ಆಲೀಖಾನ್, ಮೌಲ್ವೀ ಸಿದ್ದೀಕೀ, ಇಂದರ್‍ಜಿತ್ ಲಾಲ್, ಲತೀಫ್ ಫರೂಖಿ, ಮಹ್ರಿ, ಸಿದ್ದೀಕೀ, ಫಯಿಜ್ ಲೂದಿಯಾನ್ವಿ, ಷಫೀಕ್ ಖೊಟ್ಟಿ, ಸೂಫಿ ತಬಸ್ಸಮ್, ಮಾಯಲ್ ಖೈರಾಬಾದಿ ಮತ್ತು ಸಾದತ್ ನಜೀರ್ ಮುಂತಾದವರನ್ನು ಹೆಸರಿಸಬಹುದು.

ಮಕ್ಕಳಿಗಾಗಿ ಉರ್ದು ಗದ್ಯದಲ್ಲಿ ಸಹ ಸಾಕಷ್ಟು ಪ್ರಗತಿಯಾಗಿದೆ. ಇದರಲ್ಲಿ ಸಣ್ಣ ಕಥೆಗಳು ಕಾದಂಬರಿಗಳು, ಲಘು ಪ್ರಹಸನಗಳು ಸೇರಿವೆ. ಹಯಾತುಲ್ಲಾ ಅನ್ಸಾರಿಯ (ಜ. 1911) ಮಿಯಾನ್ ಕೋನ್ ಕೋನ್ ಮತ್ತು ಕಾಲಾದಿಯೋ ಎಂಬ ಮೊದಲಿನ ಎರಡು ಕಥೆಗಳು ಅವಿಸ್ಮರಣೀಯವಾಗಿವೆ. ಇತರ ಸಣ್ಣ ಕಥೆಗಾರರಾದ ಕ್ವರತ್-ಉಲ್-ಐನ್ ಹೈದರ್, ಕೃಷ್ಣಚಂದರ್ (1914-78) ಮತ್ತು ಷನುಕತ್ ತನ್ವೀಯವರು ಇದರ ವ್ಯಾಪ್ತಿಯನ್ನು ವಿಸ್ತರಿಸಿದರು; ರಷೀದ್, ಮಜ್ರಲ್ ಹಕ್, ಷಬ್ನಮ್ ಖಾದ್ರಿ, ಅದರ್ ಪರ್ವೀಜ್ ಮತ್ತು ಮಕ್ಬೂಲ್ ಅಹ್ಮದ್ ಸಿಯೊಹರ್ವಿ-ಸಣ್ಣ ಕಥಾ ಪ್ರಕಾರಕ್ಕೆ ಹೊಸ ಆಯಾಮ ಕಲ್ಪಿಸಿಕೊಟ್ಟರು.

ಈ ವರ್ಗದಲ್ಲಿ ಅಬ್ದುಲ್ ಗಫಾರ್ ಮದೋಲಿ ಮತ್ತು ಮೊಹಮದ್ ಹಸನ್ ನದ್ವೀ ಮಕ್ಕಳ ಸಾಹಿತ್ಯದ ಗುಣಮಟ್ಟವನ್ನು ಉತ್ತಮಪಡಿಸಲು ಶ್ರಮಿಸಿದವರು.

ಉರ್ದು ಭಾಷೆಯ ಕೆಲವು ನಿಯತಕಾಲಿಕೆಗಳು ಈ ಪ್ರಕಾರದ ಬೆಳೆವಣಿಗೆಗೆ ನೀಡಿರುವ ಉತ್ತೇಜನವೂ ಉಲ್ಲೇಖಾರ್ಹ. ಪೂಲ್, ಕಲಿಯಾನ್, ಗುಂಚ, ಟಾಫಿ ಬಚ್ಚೋಂ ಕಿ ದುನಿಯಾ, ಮುಸರತ್, ಚಾಂದ್ ಮುಂತಾದವು ಅನೇಕ ಲೇಖಕರಿಗೆ ಸ್ಫೂರ್ತಿ ನೀಡಿವೆ. ಸಮಕಾಲೀನ ಮಕ್ಕಳ ನಿಯತ ಕಾಲಿಕೆಗಳಲ್ಲಿ ಖಿಲೋನಾ, ಪಾಯಮೇ ತಲೀಂ, ಹಿಲಾಲ್, ನೂರ್ ಮತ್ತು ಬಜ್ಜೋಂ ಕಾ ಆಜ್‍ಕಲ್ ಸೇರಿವೆ.

ಒರಿಯ: ಪ್ರಾಚೀನ ಮತ್ತು ಮಧ್ಯಕಾಲೀನ ಒರಿಯ ಸಾಹಿತ್ಯದಲ್ಲಿ ಮಕ್ಕಳಿಗೆ ಆಸಕ್ತಿಯ ವಸ್ತು ವಿಷಯ ಅಲ್ಲಲ್ಲಿ ಕಂಡುಬರುವುದಾದರೂ ಇವು ಹೆಸರಿಸುವಂಥದ್ದೇನೂ ಅಲ್ಲ ಎನ್ನಬಹುದು. ಈ ಸಾಹಿತ್ಯದ ಪ್ರಾರಂಭಕಾಲದಿಂದಲೂ ಕಿರಿಯರಿಗೆ ಅಕ್ಷರಗಳನ್ನು ಕಲಿಸಲು ಚೌತೀಶಾ ಎಂಬ ಪದ್ಯರೂಪವನ್ನು ಬಳಸಲಾಗುತ್ತಿದೆ. ಯಾವುದಾದರೂ ಕಥಾವಸ್ತುಗಳನ್ನೊಳಗೊಂಡಿದ್ದು, ಪ್ರತಿಯೊಂದು ಸಾಲಿನ ಆದಿ ಅಕ್ಷರ ಒರಿಯಾ ವರ್ಣಮಾಲೆಯ ಒಂದೊಂದು ವ್ಯಂಜನದಿಂದ ಕ್ರಮವಾಗಿ ಆರಂಭವಾಗುತ್ತದೆ (ಕ ದಿಂದ ಕ್ಷ ವರೆಗೆ 34 ವ್ಯಂಜನಗಳಿವೆ). ಒರಿಯಾದ ಪಾರಂಪರಿಕ ಪಠ್ಯಕ್ರಮದಲ್ಲಿ ಕಮಲಲೋಚನ ಚೌತೀಶಾ (ಬಲರಾಮದಾಸ, 16ನೆಯ ಶ.), ಕೇಶವ ಕೋಯಿರಿ (ಮಾರ್ಕಾಂಡದಾಸ, 15ನೆಯ ಶ.), ಮನಬೋಧ ಚೌತೀಶಾ ಮತ್ತು ಕಲಾಕಲೇವರ ಚೌತೀಶಾ (ಭಕ್ತಚರಣದಾಸ, 1743-1828) ಮೊದಲಾದ ಜನಪ್ರಿಯ ಚೌತೀಶಾಗಳನ್ನು ಮಕ್ಕಳಿಗೆ ಬೋಧಿಸಲಾಗುತ್ತಿತ್ತು.

1837ರಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಕಟಕ್‍ನಲ್ಲಿ ಒರಿಯಾದ ಪ್ರಥಮ ಮುದ್ರಣಾಲಯ (ಮಿಷನ್ ಪ್ರೆಸ್) ತೆರೆದರು. ಇದಕ್ಕೆ ಮೊದಲು ಒರಿಯಾ ಕೃತಿಗಳು ಕಲ್ಕತ್ತದ ಸೀರಾಂಪುರದಲ್ಲಿ ಪ್ರಕಟಗೊಳ್ಳುತ್ತಿದ್ದವು. ಅಮೋಸ್ ಸಟ್ಟನ್ ಮತ್ತು ರೆಲೆಸ್ಲಿ ಒರಿಯಾದಲ್ಲಿ ಶ್ಲಾಘನೀಯ ಕಾರ್ಯ ನಡೆಸಿದರು. 19ನೆಯ ಶತಮಾನಾಂತ್ಯದ ವೇಳೆಗೆ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಯಿತು. ಆಗ ಒರಿಯಾ ಸಾಹಿತ್ಯದಲ್ಲಿ ಸಮಗ್ರತೆಯನ್ನು ಸ್ಥಾಪಿಸುವ ಚಳವಳಿ ಪ್ರಾರಂಭಗೊಂಡಿತು. ಆ ಹಂತದಲ್ಲಿ ಮಕ್ಕಳ ಶಿಕ್ಷಣಕ್ಕೆ ಯುಕ್ತವಾದ ಪಠ್ಯಪುಸ್ತಕಗಳ ರಚನೆಗಾಗಿ ಪ್ರಯತ್ನಿಸಿದ ಪ್ರಮುಖರದಲ್ಲಿ ಕೆಲವರೆಂದರೆ ರಾಧಾನಾಥ ರೇ (1848-1908), ಮಧುಸೂದನ ರಾಯ (1853-1912), ಫಕೀರ ಮೋಹನ ಸೇನಾಪತಿ (1843-1919), ಗೋವಿಂದರಾಥ (1843-1918). ಇಂದ ಪರಿಸ್ಥಿತಿಯಲ್ಲಿಯೇ ಒರಿಯಾದಲ್ಲಿ ಮಕ್ಕಳಸಾಹಿತ್ಯ ಪ್ರಾರಂಭಗೊಂಡುದು. ಗೋವಿಂದನಾಥ ಮಕ್ಕಳಿಗಾಗಿ ವರ್ಣಮಾಲೆಯ ಮಾರ್ಗದರ್ಶಿಯಾಗಿ ವರ್ಣ ಬೋಧಕ ರಚಿಸಿದರು. ಇದೇ ಈ ದಿಸೆಯಲ್ಲಿ ಪ್ರಪ್ರಥಮ ಪಠ್ಯಪುಸ್ತಕ. ಇದಾದ ಅನಂತರ ಮಧುಸೂದನ ರಾಯ ಮಕ್ಕಳಿಗೆ ಒರಿಯಾ ವರ್ಣಮಾಲೆ ಪರಿಚಯಿಸಲು ವರ್ಣಬೋಧ ರಚಿಸಿದರು. ಇದು ಜನಪ್ರಿಯವಾಗಿ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಒರಿಯಾ ಮಕ್ಕಳ ಸಾಹಿತ್ಯಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ಮಧುಸೂದನರವರದಾಗಿದೆ. ಇವರ ಕವನಗಳಾದ ಪ್ರಭಾತ, ಸಂಧ್ಯಾ, ಸುಂದರ ಸಂಸಾರ, ಪ್ರಾರ್ಥನಾ, ಗ್ರೀಷ್ಮ ಒರಿಸ್ಸಾದ ಮಕ್ಕಳ ಮನವನ್ನು ಅರಳಿಸಿವೆ. ಇವರ ಇತರ ಕೃತಿಗಳು "ಶಿಶುಗೀತೆ", "ಚಂದಮಾಲಾ", "ಬಾಲಬೋಧ", "ಶಿಶುಬೋಧ" ಇತ್ಯಾದಿ ಆಧುನಿಕ ಒರಿಯಾ ಸಾಹಿತ್ಯದ ಪಿತಾಮಹರಾದ ಫಕೀರ ಮೋಹನರು ತಮ್ಮ ಜೀವನದ ಕಡೆಯ ಭಾಗದಲ್ಲಿ ಮಕ್ಕಳಿಗಾಗಿ ಕೆಲವು ಕಥೆ-ಕವನಗಳನ್ನು ರಚಿಸಿದರು. ಇವರ ಸಮಕಾಲೀನರೇ ಆದ ಗೋಪಾಲಚಂದ್ರ ಪ್ರಹರಾಜ್ (1872-1945) ಸಹ ಮಕ್ಕಳಿಗಾಗಿ ಕಥೆಗಳನ್ನು ಬರೆದರು. 19ನೆಯ ಶತಮಾನದ ಕೊನೆಯ ದಶಕದಲ್ಲಿ ಒರಿಸ್ಸಾದ ಜನಪದ ಕಥೆಗಳನ್ನು ಸಂಗ್ರಹಿಸಿ ಉತ್ಕಲ ಕಹಾನಿ (ಎರಡು ಸಂಪುಟಗಳು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಈ ಕಾಲದ ಕವನಗಳು ಬಲುಮಟ್ಟಿಗೆ ಕುತೂಹಲ ಮೂಡಿಸುವಂಥವೂ ಸರಳವಾದುವೂ ಆಗಿದ್ದುವು. ಗ್ರಾಮೀಣ ಜೀವನದ ಸುಭಗತೆಯನ್ನು ಉಳಿಸಿಕೊಂಡಿದ್ದುವು.

20ನೆಯ ಶತಮಾನದ ಆದಿಯಲ್ಲಿ ಈ ಕ್ಷೇತ್ರದಲ್ಲಿ ಸತತ ಪ್ರಯತ್ನಗಳು ನಡೆದುವು. ಈ ದಿಸೆಯಲ್ಲಿ ನಂದಕಿಶೋರ ಬಾಲ (1875-1928), ಪದ್ಮಚರಣ ಪಟ್ಟನಾಯಕ್ ಉಲ್ಲೇಖನಾರ್ಹವಾಗಿದೆ. ನಾನಾ ಬಾಯ ಗೀತ ಎಂಬ ವಿಶಿಷ್ಟ ಕವನ ಸಂಕಲನವನ್ನು ಪ್ರಕಟಿಸಿದ ನಂದಕಿಶೋರರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಸಲ್ಲಿಸಿರುವರು. ತಮ್ಮ ಗೀತೆ ಕವನಗಳು ಜನಪ್ರಿಯವಾಗುವ ಸಲುವಾಗಿ ಜನಪದಗೀತೆಗಳು ಮತ್ತು ಜನಪದೋಕ್ತಿಗಳ ಭಾಗಗಳನ್ನು ಎಚ್ಚರಿಕೆಯಿಂದ ಬಳಸಿಕೊಂಡಿರುವರು. ಈ ಶತಮಾನದ ಮೊದಲೆರಡು ದಶಕಗಳಲ್ಲಿ ಮಕ್ಕಳ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಸಿರುವವರಲ್ಲಿ ಮುಖ್ಯರು ಮೃತ್ಯುಂಜಯ ರಾಥ (ರಸಾವಳಿ), ಮಧುಸೂದನ ದಾಸ (ಸಚಿತ್ರ ಮಹಾಭಾರತ), ಪದ್ಮಚರಣ ಪಟ್ಟನಾಯಕ್ (ಸೊನಾರ್ ದೇಶ್), ನೀಲಕಂಠದಾಸ್ (1884-1967, ಮಕ್ಕಳ ರಾಮಾಯಣ, ಮಹಾಭಾರತ), ಚಂದ್ರಶೇಖರ ನಂದ (ರಾಮಾಯಣ ಕಥಾ, ನವಶಿಶುಗೀತ), ಬಾಲಕೃಷ್ಣ ಪಟ್ಟನಾಯಕ್ (ಚಾರು ಲವಂಗಲತಾ), ರಾಮಚಂದ್ರ ಆಚಾರ್ಯ (1904-45, ಹಿತಕಥಾ ಮತ್ತು ಎರಡುಭಾಗಗಳಲ್ಲಿ ಶಿಶುಭಕ್ತ). ಇವುಗಳಲ್ಲಿ ಬಹುಮಟ್ಟಿನವು ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಆವೃತ್ತಿಗಳು ಹಾಗೂ ಪುನರ್‍ನಿರೂಪಣೆ, ಮಹಾನ್‍ಜೀವಿಗಳ ಜೀವನಚರಿತ್ರೆ. ಇವು ಮಕ್ಕಳಲ್ಲಿ ನೈತಿಕ ಆದರ್ಶಗಳನ್ನು ಬೆಳೆಸಲು ರಚಿಸಲಾಗಿದ್ದವು.

ಒರಿಸ್ಸಾದ ಪ್ರಥಮ ಮಕ್ಕಳ ಮಾಸಪತ್ರಿಕೆ ಪಂಚಾಮೃತ ಕಟಕ್‍ನಿಂದ 1928ರಲ್ಲಿ ಪ್ರಕಟವಾಗಲಾರಂಭಿಸಿ, ಆರು ವರ್ಷಗಳ ಕಾಲ ಮುಂದುವರಿಯಿತು. ಚಿಂತಾಮಣಿ ಆಚಾರ್ಯ (1891-1957) ಮತ್ತು ಅಗ್ನಿದಾಸ ಇದರ ಸಂಪಾದಕರಾಗಿದ್ದರು. ಇದು ಉತ್ತಮಮಟ್ಟದ ಮಾಸಪತ್ರಿಕೆಯಾಗಿತ್ತು. ಗೋಪಾಲ ಪ್ರಹರಾಜ್, ಗೋದಾವರೀಶ ಮಿಶ್ರ (1886-1956), ದಯಾನಿಧಿ ಮಿಶ್ರ (1891-1955), ಉಪೇಂದ್ರ ತ್ರಿಪಾಠಿ (ಜ. 1903) ಮತ್ತು ರಾಮರಂಜನ ಮೊಹಂತಿ (ಜ. 1905), ಕೃಷ್ಣಚಂದ್ರಕರ (ಜ. 1907) ಮೊದಲಾದ ಪ್ರಸಿದ್ಧ ಲೇಖಕರು ಇದರ ಬರೆಹಗಾರರಾಗಿದ್ದರು. 1931ರಲ್ಲಿ ಜನಪ್ರಿಯ ಒರಿಯ ಮಕ್ಕಳ ನಿಯತಕಾಲಿಕ ಜನ್ಹಮಾಮು (ಚಂದಮಾಮ) ಬೆಳಕಿಗೆ ಬಂದಿತು. ಬಾಲಕೃಷ್ಣಕರ್ ಇತರ ಸಂಪಾದಕರಾಗಿದ್ದರು. ಇದು ಒಂದು ಶತಕದ ಕಾಲ ಪ್ರಕಟಗೊಂಡು, ಮಕ್ಕಳ ಸಾಹಿತ್ಯಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿತು. ಕಥೆ, ಕವನಗಳಲ್ಲದೆ ಈ ಸಚಿತ್ರ ಪತ್ರಿಕೆಯಲ್ಲಿ ಮಕ್ಕಳಿಗೆ ಒಪ್ಪುವ ಒಗಟುಗಳು ಮತ್ತು ಸಮಸ್ಯೆಗಳು. ಸಾಮಾನ್ಯ ಪರಿe್ಞÁನ, ಹಾಸ್ಯ, ವಿe್ಞÁನ ವಿಭಾಗಗಳು ಕೂಡ ಇದ್ದುವು. ಜಾತೀಯ ಕವಿ ವೀರಕಿಶೋರಹಾಸ (1896-1973), ಮೋದೇಶ (ನನ್ನ ದೇಶ-1946) ಎಂಬ ಮಕ್ಕಳ ನಿಯತಕಾಲಿಕೆಯನ್ನು ಸಂಪಾದಿಸಿ ಪ್ರಕಟಿಸಲಾರಂಭಿಸಿದರು. ಇದು ಸಹ ಮಕ್ಕಳ ಸಾಹಿತ್ಯದ ಗುಣಮಟ್ಟವನ್ನು ಉತ್ತಮಪಡಿಸಿತು.

ಸ್ವಾತಂತ್ರ್ಯಾನಂತರ ಒರಿಸ್ಸಾದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ತೀವ್ರ ಆಸಕ್ತಿ ಪ್ರದರ್ಶಿಸಲಾಗಿದೆ. ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳಲ್ಲಿ ಸಾಹಿತ್ಯ ಪ್ರಸಾರಕ್ಕಾಗಿ ಐದು ಮಾಸಪತ್ರಿಕೆಗಳು ಪ್ರಕಟವಾದುವು. ರಾಮಕೃಷ್ಣನಂದ ಸಂಪಾದಿತ ಸನ್ಸಾರ (1951), ಬಿನೋದ ಕಾನುಂಗೋ ಸಂಪಾದಿತ ಶಿಶುಸಂಪಾದ (1954), ರಾಮಪ್ರಸಾದ ಮೋಹಂತಿ ಸಂಪಾದಿತ ಮೀನಾಬಜಾರ್ (1956). ಗೋದಾವರೀಶ ಮಹಾಪಾತ್ರ ಸಂಪಾದಿತ ತೂ ಅನ್ ತೂ ಇ (1957) ಮತ್ತು ಮಹೇಶ್ವರ ಮೊಹಂತಿ ಸಂಪಾದಿತ ಮನಪವನ್ (1962) ಇವು ಮುಖ್ಯವಾದವು. ಮಪವನ್ ಮತ್ತು ಮೀನಾಬಜಾರ್‍ಗಳನ್ನು ಬಿಟ್ಟು ಉಳಿದವು ಈಗ ಪ್ರಕಟಗೊಳ್ಳುತ್ತಿಲ್ಲ. ಮೀನಾ ಬಜಾರ್ ಮತ್ತು ಮೋದೆ ಶ್ (1948) ಆಗೊಮ್ಮೆ ಈಗೊಮ್ಮೆ ಪ್ರಕಟವಾಗುತ್ತಿವೆ. ಮದ್ರಾಸಿನಿಂದ ಪ್ರಕಟಗೊಳ್ಳುತ್ತಿರುವ ಚಂದಮಾಮದ ಒರಿಯ ಆವೃತ್ತಿ ಸುಮಾರು 16 ವರ್ಷಗಳಿಂದ ಒರಿಯ ಮಕ್ಕಳ ಮನಸೆಳೆದಿದೆ. ಇವುಗಳಲ್ಲದೆ ಕೆಲವರು ಉತ್ಸಾಹಿಗಳು ಫೂಲ್‍ಜಾಡಿ, ಬಾಲವಿನೋದ್, ಬಿಲು ಆ ನಾನಾ, ಭಾಗಾ ಮಾಮು, ಶಿಶು ಮೇಳ ಮುಂತಾದ ಮಾಸಪತ್ರಿಕೆಗಳನ್ನು ಪ್ರಕಟಿಸಿದರು. ಈ ದಿಸೆಯಲ್ಲಿ ಒರಿಸ್ಸಾ ಸರ್ಕಾರದಿಂದ ಆಯೋಜನೆಗೊಂಡ ಶಿಶುಸಾಹಿತ್ಯ ಸಮಿತಿ ಶಿಶುಲೇಖ ಎಂಬ ಮಾಸಪತ್ರಿಕೆ ಹೊರತರುತ್ತಿದೆ. ಅನಂತ ಪಟ್ಟನಾಯಕ ಇದರ ಸಂಪಾದಕರು. ವರ್ಣಚಿತ್ರಗಳಿಂದ ಕೂಡಿದ ಈ ಮಾಸಪತ್ರಿಕೆಯ ಶೈಲಿ, ಗುಣಮಟ್ಟ ಉತ್ತಮವಾಗಿದೆ.

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯ ಕೃತಿರಚನೆಗೆ ಕೇಂದ್ರ ಮತ್ತು ರಾಜ್ಯಮಟ್ಟಗಳಲ್ಲಿ ಪ್ರಶಸ್ತಿ ನೀಡುವ ಯೋಜನೆಯೂ ಲೇಖಕರಿಗೆ ಪ್ರೋತ್ಸಾಹಕರವಾಗಿ ಪರಿಣಮಿಸಿದೆ. ಆಕಾಶವಾಣಿಯೂ ಮಕ್ಕಳ ಸಾಹಿತ್ಯ ಬೆಳೆವಣಿಗೆಗೆ ನೆರವಾಗಿದೆ. ಸಮಾಜ, ಪ್ರಜಾತಂತ್ರ, ಮಾತೃಭೂಮಿ ಮತ್ತು ಕಳಿಂಗ (ಈಗ ಪ್ರಕಟವಾಗುತ್ತಿಲ್ಲ) -ಇವು ಸಹ ಮಕ್ಕಳ ಕವನಗಳು, ಕಥೆಗಳು ಹಾಗೂ ಶೈಕ್ಷಣಿಕ ಮೌಲ್ಯದ ಲೇಖನಗಳಿಗೆ ಸ್ಥಳಾವಕಾಶ ಕಲ್ಪಿಸಿವೆ. ಇಷ್ಟೆಲ್ಲ ಇದ್ದರೂ ಸಾಹಿತ್ಯದ ಒಂದು ಪ್ರಕಾರವಾಗಿ ಇನ್ನೂ ಸಾಕಷ್ಟು ಗಮನ ಹರಿದಿಲ್ಲವೆನ್ನಬಹುದು.

ರಾಷ್ಟ್ರಪ್ರೇಮ, ಪೌರಕರ್ತವ್ಯಗಳು, ಸಾಮಾಜಿಕ ಪ್ರಜ್ಞೆ ಹಾಗೂ ಸುಧಾರಣೆ, ವೈe್ಞÁನಿಕ ಅಂಶಗಳು, ಕ್ರೀಡಾಪ್ರೇಮ ಮೊದಲಾದ ಅಂಶಗಳನ್ನು ಕವನಗಳಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಕ್ರೀಡಾ ಗೀತೆಗಳು- ವಿಶೇಷವಾಗಿ ಪಶ್ಚಿಮ ಒರಿಸ್ಸಾದ ಕ್ರೀಡಾಗೀತೆಗಳನ್ನು ಸಂಗ್ರಹಿಸುವ ಪ್ರಯತ್ನ ನಡೆದಿದೆ. ಉಪೇಂದ್ರ ತ್ರಿಪಾಠಿ, ರಾಮಕೃಷ್ಣನಂದ (ಜ. 1906, ಉದಯನಾಥ ಸಾರಂಗಿ (ಜ. 1907), ವೀರ ಕಿಶೋರದಾಸ, ಕುಂಜ ಬಿಹಾರಿ ದಾಸ (ಜ. 1914), ಬಾಣ ಚಂಡೀದಾಸ (ಜ. 1923) ಮತ್ತು ಕಿರಿಯ ಲೇಖಕರಾದ ವಿದ್ಯುತ್ ಪ್ರಹದೇವಿ (1929-77), ರಾಮಪ್ರಸಾದ ಮೊಹಂತಿ (ಜ. 1925), ಜಗನ್ನಾಥ ಮೊಹಂತಿ (ಜ. 1936) ಮತ್ತು ಇತರರು ಮಕ್ಕಳಿಗಾಗಿ ಯೋಗ್ಯ ಕವನಗಳನ್ನು ರಚಿಸಿರುವರು.

ಮಕ್ಕಳ ಸಾಹಿತ್ಯದಲ್ಲಿ ಸೃಜನಾತ್ಮಕ ಲೇಖಕರ ಸಂಖ್ಯೆ ಕಡಿಮೆಯೇ. ಆದರೆ ಇಂಗ್ಲಿಷ್ ಮತ್ತು ಸಂಸ್ಕøತ ಭಾಷೆಯ ಮಹಾಕೃತಿಗಳಿಂದ ಕಥೆಗಳನ್ನು ಅಳವಡಿಸಿಕೊಳ್ಳುವಲ್ಲಿಯೂ ರೂಪಾಂತರಿಸಿಕೊಳ್ಳುವಲ್ಲಿಯೂ ಸೃಜನಾತ್ಮಕತೆ ಮೆರೆದಿರುವರು. ಈ ಕ್ಷೇತ್ರದಲ್ಲಿ ಉಲ್ಲೇಖಾರ್ಹರಾದ ಕೆಲವರೆಂದರೆ ರಾಮಚಂದ್ರ ಆಚಾರ್ಯ, ಕೃಷ್ಣ ಚಂದ್ರಕರ, ಉದಯನಾಥ ಸಾರಂಗಿ, ರಾಮಕೃಷ್ಣನಂದ, ಕುಂಜಬಿಹಾರಿದಾಸ, ಗೋದಾವರೀಶ ಮೊಹಪಾತ್ರ, ಗೋಲಕ್ ಬೆಹಾರಿ ಧಾಲ್ (1921-74), ಜೆ.ಬಿ. ಮೊಹಂತಿ (ಜ. 1925) ಮತ್ತು ಮನೋಜ್ ದಾಸ್ (ಜ. 1934), ಕುಂಜ ಬೆಹಾರಿ ದಾಸ್ ಕಂಠಸ್ಥ ಪರಂಪರೆಯಿಂದ ಅನೇಕ ಒರಿಯ ಜನಪದ ಕಥೆಗಳನ್ನು ಸಂಗ್ರಹಿಸಿರುವರು. ಬೇಟೆಯ ಬಗ್ಗೆ ಕುತೂಹಲಕಾರಿ ಕಥೆಗಳಿಂದ ಗದಾಧರರಾಯ್ ಮಕ್ಕಳಲ್ಲಿ ತೀವ್ರ ಆಸಕ್ತಿ ಕೆರಳಿಸಿರುವರು.

ಈ ತನಕ ವಿವಿಧ ಮಾಲೆಗಳಲ್ಲಿ ಭಾರತದ ಪ್ರಸಿದ್ಧ ಸಂತರು, ವಿe್ಞÁನಿಗಳು ರಾಜತಂತ್ರಜ್ಞರು, ರಾಜರು, ಆಡಳಿತಗಾರರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನದ ಬಗ್ಗೆ ನೂರಕ್ಕೂ ಮಿಕ್ಕು ಜೀವನ ಚರಿತ್ರೆಗಳು ಬೆಳಕು ಕಂಡಿವೆ. ಲಾಲಾ ನಾಗೇಂದ್ರ ಕುಮಾರ ರಾಯ್ (1898-1978), ಉದಯನಾಥ ಸಾರಂಗಿ, ರಾಮಪ್ರಸಾದ್‍ಸಿಂಗ್ (ಜ. 1904), ಶ್ರೀಧರದಾಸ್ (ಜ. 1902) ಮತ್ತು ಬಿನೋದ ಕಾನುಂಗೊ (ಜ. 1912) ಮೊದಲಾದವರು ಮಕ್ಕಳ ಸಾಹಿತ್ಯದಲ್ಲಿ ಜೀವನಚರಿತ್ರೆ ಹಾಗೂ ಸಾಂಸ್ಕøತಿಕ ಅಂಶಗಳಿಗೆ ಸಂಬಂಧಿಸಿದಂತೆ ಮಹತ್ತ್ವದ ಸೇವೆ ಸಲ್ಲಿಸಿರುವರು.

ಪ್ರವಾಸ ಹಾಗೂ ಆವಿಷ್ಕಾರ ಕ್ಷೇತ್ರಗಳಲ್ಲಿ ಮಹತ್ತ್ವದ ಸಾಧನೆ ಸ್ವಾತಂತ್ರ, ಪೂರ್ವದಲ್ಲಿ ಆಗಿರಲಿಲ್ಲ. ಗೋದಾವರೀಶ ಮಿಶ್ರರ ಅಮ ಪದಿಸಾ ಅದಿಸಾ (ನಮ್ಮ ನೆರೆಹೊರೆಯವರು) ಈ ಕ್ಷೇತ್ರದಲ್ಲಿ ಮಾರ್ಗಪ್ರವರ್ತಕ ಕೃತಿಯಾಗಿದೆ. ಅನಂತರದಲ್ಲಿ ಗೋವಿಂದಚಂದ್ರ ಮಿಶ್ರರ ದೇಶ ವಿದೇಶ, ಶತ್ರುಘ್ನನಾಥರ ವಿಲಾಯಿತ್ ಕಥಾ, ಎ. ಸೇನಾಪತಿಯವರ ದೂರ ದೇಸರ ಪಿಲಾಂಶ ಕಥಾ, ಚಿತ್ತರಂಜನ ದಾಸರ ಸಾಗರ ಪಥಾ ಬೆಳಕು ಕಂಡಿವೆ.

ಪ್ರಕೃತಿ, ವಿe್ಞÁನ ಮತ್ತು ಕೈಗಾರಿಕೆಗಳ ಬಗ್ಗೆ ಕೆಲವು ಹೊಸ ಲೇಖಕರು ಕೃತಿರಚನೆ ಮಾಡಿರುವರು. ಬಾಲಕೃಷ್ಣಕರ ಶಿಶು ಸಂಖಾಲಿ (1930ರ ದಶಕದ ಪ್ರಾರಂಭ, ಎರಡು ಸಂಪುಟಗಳು) ಎಂಬ ವಿಶ್ವಕೋಶ ಸಂಕಲನ ಮಾಡಿರುವರು. ವಿಶ್ವನಾಥಕರ (1864-1934) ಮತ್ತು ಲಕ್ಷ್ಮೀಕಾಂತ ಮೊಹಪಾತ್ರ ಕ್ರಮವಾಗಿ ತಮ್ಮ ಪ್ರಾಣಿಜಗತ್ ಮತ್ತು ಚಿಡಿಯಾಖಾನಾ (ಮೃಗಾಲಯ) ಕೃತಿಗಳ ಮೂಲಕ ನಿಸರ್ಗದ ಸೌಂದರ್ಯ ಹಾಗೂ ಆಶ್ಚರ್ಯಗಳನ್ನು ವಿವರಿಸಲು ಪ್ರಯತ್ನಿಸಿದರು. ವೈe್ಞÁನಿಕ ವಿಷಯಗಳನ್ನು ಜನಪ್ರಿಯಗೊಳಿಸುವಲ್ಲಿ ಪ್ರಯತ್ನಿಸಿರುವವರ ಪೈಕಿ ಬಿನೋದ ಕಾನುಂಗೊರವರಿಗೆ ವಿಶೇಷಸ್ಥಾನವಿದೆ. ಮಾನವ ಶರೀರದ ಬಗ್ಗೆ ಹಾಗೂ ನೈಸರ್ಗಿಕ ಘಟನಾದಿಗಳ ಬಗ್ಗೆ ಸರಳ, ಮನಮೋಹಕ ಶೈಲಿಯಲ್ಲಿ ಅನೇಕ ಕೃತಿಗಳನ್ನು ರಚಿಸಿ, ಯಶಸ್ಸು ಪಡೆದಿದ್ದಾರೆ.

ಗೋಕುಲಾನಂದನ ಮೊಹಪಾತ್ರ ಮತ್ತು ಸಂತನುಕುಮಾರ ಆಚಾರ್ಯ ಕ್ರಮವಾಗಿ ಪ್ರಾಕೃತಿಕ ವಿe್ಞÁನಗಳು ಮತ್ತು ಕೀಟ ಪ್ರಪಂಚಗಳ ಬಗ್ಗೆ ಆಸಕ್ತಿದಾಯಕ ಕೃತಿರಚನೆ ಮಾಡಿರುವರು. ದುರ್ಗಾಪ್ರಸಾದ ಪಟ್ಟನಾಯಕ್‍ರ ನಯಿ ಬೊಹಿಲಾ (ಹರಿಯುವ ನದಿ) ಮತ್ತು ಯು. ಸಾರಂಗಿಯವರ ಅಮಗ್ರಹ (ಉಪಗ್ರಹ) ವಿಶೇಷವಾಗಿ ಉಲ್ಲೇಖಾನಾರ್ಹವಾಗಿವೆ.

ಸ್ವಾತಂತ್ರ್ಯಾನಂತರ ವಿಶೇಷವಾಗಿ ಮಕ್ಕಳಿಗಾಗಿ ಕಿರುನಾಟಕಗಳು ಮತ್ತು ಏಕಾಂಕಗಳು ರಚನೆಗೊಂಡವು. 1957ರಲ್ಲಿ ಪುರಿಯ ಸಂಗೀತ ಪರಿಷದದ ಆಶ್ರಯದಲ್ಲಿ ಮಕ್ಕಳ ನಾಟಕಗಳ ಅಭಿನಯಕ್ಕೆ ಪ್ರಯತ್ನ ನಡೆಯಿತು. ಉತ್ತಮ ನಾಟಕಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಈ ವಾರ್ಷಿಕ ಸ್ಪರ್ಧೆ ಕೆಲವು ವರ್ಷಗಳ ಕಾಲ ಕೆಲವು ಉತ್ತಮ ನಾಟಕಗಳು ಅಭಿನಯಿಸಲ್ಪಟ್ಟು ಪ್ರಕಟಗೊಂಡವು.

ಅಮರ ಚಿತ್ರಕಥಾಮಾಲೆ (ಐ.ಬಿ.ಎಚ್. ಪ್ರಕಾಶನ) ಮತ್ತು ನೆಹರು ಬಾಲ ಪುಸ್ತಕಾಲಯ (ಎನ್.ಬಿ.ಟಿ.) - ಕೃತಿಗಳ ಒರಿಯಾ ಭಾಷಾಂತರಗಳಿಂದ ಒರಿಯಾ ಮಕ್ಕಳಿಗೆ ಕೆಲವು ಉತ್ತಮ ಕೃತಿಗಳು ಲಭಿಸಿವೆ. ವರ್ಣರಂಜಿತ ಚಿತ್ರಗಳಿಂದ ಕೂಡಿದ, ಉತ್ತಮವಾಗಿ ಮುದ್ರಣಗೊಂಡಿರುವ ರಷ್ಯದ ಜನಪದ ಕಥೆಗಳ ಒರಿಯಾ ಅನುವಾದಗಳು ಸಹ ಕಳೆದ 10-12 ವರ್ಷಗಳಿಂದ ಲಭಿಸುತ್ತಿವೆ.

ಮಕ್ಕಳಿಗಾಗಿ ಗ್ರಂಥ ಪ್ರಕಟಣೆಯ ಕ್ಷೇತ್ರದಲ್ಲಿ ಗ್ರಂಥ ಮಂದಿರ ಮತ್ತು ಛತ್ರಸಾತಿ ಪ್ರಕಾಶನ ಸಂಸ್ಥೆಯವರ ಸೇವೆ ಅತ್ಯಮೂಲ್ಯವಾಗಿದೆ. ಪ್ರಪಂಚದ ನೂರಕ್ಕೂ ಹೆಚ್ಚು ಮಹಾಕೃತಿಗಳ ಸಂಕ್ಷಿಪ್ತ ಭಾಷಾಂತರಿತ ಆವೃತ್ತಿಗಳನ್ನು ಗ್ರಂಥ ಮಂದಿರ ಒರಿಯಾದಲ್ಲಿ ಪ್ರಕಟಿಸಿದೆ. ಚಾಲ್ರ್ಸ್ ಡಿಕೆನ್ಸ್, ಆಲೆಕ್ಸಾಂಡರ್ ಡ್ಯೂಮಾ, ಆರ್.ಎಲ್. ಸ್ಟೀವನ್‍ಸನ್, ಎಚ್.ಜಿ. ವೇಲ್ಸ್ ಮೊದಲಾದವರ ಕೃತಿಗಳು ಈ ಮಾಲೆಯಲ್ಲಿ ಸೇರಿವೆ. ಒರಿಯದಲ್ಲಿ ಈವರೆಗೆ ಬಂದಿರುವ ಮಕ್ಕಳ ಸಾಹಿತ್ಯವನ್ನು ಪರಿಮಾಣಾತ್ಮಕವಾಗಿ ಹಾಗೂ ಗುಣಾತ್ಮಕವಾಗಿ ಅವಲೋಕಿಸಿದಾಗ ಸ್ವಲ್ಪಮಟ್ಟಿನ ಸಮಾಧಾನವಾಗುವುದಾದರೂ ಆಧುನಿಕ ಪ್ರಪಂಚದ ವಿಸ್ತಾರಗೊಳ್ಳುತ್ತಿರುವ e್ಞÁನದಿಗಂತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಕ್ಕಳಿಗೆ ಒದಗಿಸಿರುವ e್ಞÁನರಾಶಿ ಸಾಲದು ಎನ್ನಬೇಕಾಗುತ್ತದೆ. ಕನ್ನಡ : ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಪ್ರವರ್ತಿಸಿದ ಮೊದಲಿಗರಲ್ಲಿ ದಿನಕರದೇಸಾಯಿ, ಜಿ.ಪಿ. ರಾಜರತ್ನಂ, ಹೊಯ್ಸಳ, ಶಿವರಾಮಕಾರಂತ, ಬೋನಂತ ಕೋಡಿ ಶಂಕರಭಟ್ಟ, ಮಚ್ಚಿ ಮಲೆ ಶಂಕರನಾರಾಯಣರಾವ್ ಮೊದಲಾದವರ ಹೆಸರುಗಳು ಶಾಶ್ವತವಾಗಿ ಉಳಿಯುತ್ತವೆ. ಪ್ರಸಕ್ತ ಶತಮಾನದ ಆರಂಭದಲ್ಲಿ ನವಸತ್ತ್ವದಿಂದ ವಿಕಾಸಗೊಳ್ಳಲು ಆರಂಭವಾದ ಈ ಸಾಹಿತ್ಯ ಪ್ರಕಾರ ಈಗ ಸಮೃದ್ಧವಾಗಿ ಬೆಳೆದು ನಳನಳಿಸುತ್ತಿದೆ.

ಆರಂಭದ ದಿನಗಳ ಬಗೆಗಿನ ವಿವರ ತಿಳಿಯಲು (ನೋಡಿ- ಕನ್ನಡದಲ್ಲಿ-ಮಕ್ಕಳ-ಸಾಹಿತ್ಯ) ಈ ಲೇಖನಕ್ಕೆ ಪೂರಕವಾಗಿ ಪ್ರಸಕ್ತ ಲೇಖನವನ್ನು ಬರೆದಿದೆ.

ಕಳೆದ 145 ವರ್ಷಗಳಲ್ಲಿ ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಪ್ರಕಟಗೊಂಡಿರುವ 4000 ಕೃತಿಗಳ ಪೈಕಿ ಸುಮಾರು 2500 ಕೃತಿಗಳು 1968-78ರ ದಶಕದಲ್ಲಿ ಬೆಳಕು ಕಂಡಂಥವು. ಅಂತಾರಾಷ್ಟ್ರೀಯ ಮಕ್ಕಳ ವರ್ಷದಲ್ಲಿ (1979) ಹೆಚ್ಚಿನ ಸಂಖ್ಯೆಯ ಕೃತಿಗಳು ಹೊರಬಂದಿವೆ. ಆದರೆ ನಾಟಕಗಳ ಸಂಖ್ಯೆ ತುಂಬ ಕಡಿಮೆ. ಪ್ರಸಿದ್ಧ ವ್ಯಕ್ತಿಗಳ ಜೀವನಚರಿತ್ರೆಗಳು, ಪುರಾಣಾದಿಗಳಿಂದ ಆಯ್ದ ಭಾಗಗಳ ಕಥೆಗಳು ಅಧಿಕವಾಗಿವೆ. ಈ ಲೇಖಕರಲ್ಲಿ ಎಲ್.ಜಿ. ಅಮೃತೇಶ್ವರ, ಎನ್. ಪ್ರಹ್ಲಾದರಾವ್ (1920-80), ಪ.ವಿ. ಚಂದ್ರಶೇಖರ (ಜ. 1933), ಅನುಪಮಾ ನಿರಂಜನ (1934) - ಮುಖ್ಯರು. ಸಿದ್ಧಯ್ಯ ಪುರಾಣಿಕರ (ಕಾವ್ಯನಂದ, 1918), "ತುಪ್ಪಾ ರೊಟ್ಟಿಗೇಗೇಗೇ" ಯಲ್ಲಿ ಮಕ್ಕಳಿಗಾಗಿ ಕೆಲವು ಉತ್ತಮ ಕವನಗಳು ಸೇರಿವೆ. ಟಿ.ಎಸ್.ನಾಗರಾಜ ಶೆಟ್ಟಿಯವರ ಶಿಶುಗೀತೆಗಳ ಸಂಗ್ರಹ 'ನವಿಲು ಗರಿಯಲ್ಲಿ (ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ, 1982) ಕಥೆಗಳುಳ್ಳ ಪದ್ಯಗಳು ಇವೆ. ಶಿಶು ಸಂಗಮೇಶ್ವರರ ಸಂಪಾದಕತ್ವದಲ್ಲಿ "ಬಾಲಭಾರತಿ" (1978ರಿಂದ) ಎಂಬ ಮಾಸಪತ್ರಿಕೆ ಪ್ರಕಟವಾಗುತ್ತಿದೆ. ಮಕ್ಕಳಿಗಾಗಿ ಕಥೆಗಳು, ಕವನಗಳು ಮತ್ತಿತರ ಮನೋರಂಜಕ ವಿಷಯಗಳು ಇದರಲ್ಲಿ ಸೇರಿವೆ.

ಸರಳ ಭಾಷೆಯಲ್ಲಿ ಮಕ್ಕಳಿಗೆ ವಿe್ಞÁನ ತಿಳಿಸಲು 1978ರಲ್ಲಿ "ಬಾಲ ವಿe್ಞÁನ" ಎಂಬ ಮಾಸಪತ್ರಿಕೆ ಪ್ರಾರಂಭವಾಗಿದೆ. ಬೆಂಗಳೂರಿನ ಭಾರತೀಯ ವಿe್ಞÁನ ಸಂಸ್ಥೆ. ಕರ್ನಾಟಕದ ರಾಜ್ಯ ವಿe್ಞÁನ ಪರಿಷತ್ತು- ಇವುಗಳ ಆಶ್ರಯದಲ್ಲಿ ಈ ಸಚಿತ್ರ ಮಾಸಪತ್ರಿಕೆ ಹೊರಬರುತ್ತಿದೆ, ಜನಪ್ರಿಯವಾಗಿದೆ. ಜನಸಾಮಾನ್ಯರನ್ನೂ ಕಿರಿಯರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಸುಲಲಿತ ನಿರೂಪಣೆ, ಸಚಿತ್ರವಾದ ಈ ಪುಸ್ತಕಗಳ ಬೆಲೆಯನ್ನು ಸಾಮಾನ್ಯರಿಗೆ ಎಟುಕುವಂತೆ ನಿಗದಿಪಡಿಸಲಾಗಿದೆ. ಇದರ ಪ್ರಕಟಣೆಗಳಲ್ಲಿ ಕೆಲವು (1982ರ ಮಾರ್ಚಿಯಿಂದ 1984ರ ಮಾರ್ಚ್): ಡಿ.ಆರ್. ಬಳೂರಗಿ (ಸೌರಶಕ್ತಿ, ಕಾಂತಗಳು), ಎಚ್.ಆರ್. ಕೃಷ್ಣಮೂರ್ತಿ (ಹಕ್ಕಿಗಳನ್ನು ಗುರುತಿಸು, ಪರಿಸರ ಮಲಿನತೆ), ಸಿ.ಆರ್. ಚಂದ್ರಶೇಖರ್ (ಭಾನಾಮತಿ, ದೇವರು ದೆವ್ವ ಮೈಮೇಲೆ ಬರುವವೆ?) ಮತ್ತು ಜೆ.ಆರ್.ಲಕ್ಷ್ಮಣರಾವ್ (ಅರುವತ್ತು ಪ್ರಶ್ನೆಗಳು).

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಹಲವು ಸಂಘ ಸಂಸ್ಥೆಗಳ ಪೈಕಿ ಐಬಿಎಚ್ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಪರಿಷತ್‍ಗಳ ಸೇವೆಯನ್ನು ಇಲ್ಲಿ ಉಲ್ಲೇಖಿಸಬಹುದು. ಅಂತಾರಾಷ್ಟ್ರೀಯ ಪುಸ್ತಕ ವರ್ಷದ (1972) ನವೆಂಬರ್‍ನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಎಲ್.ಎಸ್. ಶೇಷಗಿರಿಯವರ ಸಂಪಾದಕತ್ವದಲ್ಲಿ ಭಾರತ-ಭಾರತಿ ಪುಸ್ತಕ ಸಂಪದದ ಮೊದಲ ಕಂತಿನ ಹತ್ತು ಪುಸ್ತಕಗಳನ್ನು ಬಿಡುಗಡೆ ಮಾಡಿತು. 1981ರ ಜನವರಿಯಲ್ಲಿ ಕೊನೆಯ ಕಂತಿನ ಹತ್ತು ಕೃತಿಗಳು ಬಿಡುಗಡೆಗೊಂಡವು. 288 ಲೇಖಕರ 510 ಕಿರುಕೃತಿಗಳ ಈ ಮಾಲೆಯ ಒಟ್ಟು ಪುಟಗಳ ಸಂಖ್ಯೆ 21,400. ಈ ಮಾಲೆಯಲ್ಲಿ ಬಂದಿರುವ ಕೆಲವು ಪುಸ್ತಕಗಳ ತೆಲುಗು, ತಮಿಳು ಅವತರಣಿಕೆಗಳನ್ನು ಮದರಾಸಿನ ವಿವೇಕಾನಂದ ಕೇಂದ್ರ ಹೊರತರುವ ಯೋಜನೆ ಹಾಕಿಕೊಂಡಿದೆ. ಇದರ ಕೆಲವು ಪುಸ್ತಕಗಳ ಇಂಗ್ಲಿಷ್, ಹಿಂದಿ ಆವೃತ್ತಿಗಳೂ ಹೊರಬಂದಿವೆ. ಪುರಾಣಕಾಲದ ಪುಣ್ಯಪುರುಷರಿಂದ ಆಧುನಿಕ ಕ್ರಾಂತಿಕಾರಿಗಳವರೆಗೆ ಎಲ್ಲ ರಂಗದ ಮುಂದಾಳುಗಳ ಚರಿತ್ರೆ ಇಲ್ಲಿದೆ. ದಪ್ಪ ಅಕ್ಷರಗಳಲ್ಲಿ ಮುದ್ರಣ ಸಚಿತ್ರವಾಗಿರುವ ಸಾಧ್ಯವಾದಷ್ಟು ತಿಳಿಯಾದ ಭಾಷೆಯೇ ರಾಷ್ಟ್ರೋತ್ಥಾನ ಪರಿಷತ್ತಿನ ಈ ಕಿರುಕೃತಿಗಳು ಮಕ್ಕಳಿಗೆಂದೆ ಮೀಸಲಾದುವಾದರೆ ಅದಕ್ಕೆ ಪೂರಕವಾಗಿ ಐಬಿಎಚ್ ಪ್ರಕಾಶನ ಕಾರ್ಯನಿರ್ವಹಿಸುತ್ತಿದೆ. ಇದು ಕನ್ನಡ ನಾಡು ಮತ್ತು ನುಡಿ ಪರಂಪರೆ ಮಾಲೆಯಲ್ಲಿ 575 ಕೃತಿಗಳನ್ನು ಹೊರತಂದಿದೆ. ಈ ಪರಂಪರೆಯಲ್ಲಿ ಕನ್ನಡದ ಕಡುಗಲಿಗಳು, ಕವಿಪುಂಗವರು ಮೊದಲಾಗಿ ವಿವಿಧ ವಿಭಾಗಗಳಲ್ಲಿ ಹಲವು ಆಕರ್ಷಕ ಕೃತಿಗಳನ್ನು ಪ್ರಕಟಿಸಿದೆ. ಮಕ್ಕಳಿಗಾಗಿ ಕಥೆಗಳ "ಇಕೋ" ಪುಸ್ತಕಮಾಲೆಯಲ್ಲಿ ಹಲವು ಕೃತಿಗಳು ಬಂದಿವೆ. "ಅಮರ ಚಿತ್ರ ಕಥೆ" ಮಾಲೆ ಮಕ್ಕಳ ಮನಸ್ಸನ್ನು ಸೂರೆಗೊಂಡಿದೆ. ವರ್ಣರಂಜಿತ ಚಿತ್ರಗಳು ಆಕರ್ಷಣೀಯವಾಗಿವೆ. "ವಿe್ಞÁನ ನೋಡು ಕಲಿ", "ವಿe್ಞÁನ ಪರಿಚಯ", "ಮೂಲ ವಿe್ಞÁನ ಪಾಠಮಾಲೆ" - ಈ ಮಾಲೆಗಳಲ್ಲಿಯೂ ಕೆಲವು ವಿe್ಞÁನ ಪುಸ್ತಕಗಳು ಪ್ರಕಟವಾಗಿವೆ. "ಇದು ನಮ್ಮ ಭಾರತ" - ಭೂವಿವರಣೆ, ಚರಿತ್ರೆ, ಸಾಮಾನ್ಯ ಎಂಬ ಮೂರು ವಿಭಾಗಗಳಲ್ಲಿ ಐದು ಭಾಗಗಳು ಬಂದಿವೆ (ಅನು : ಎನ್ ಪ್ರಹ್ಲಾದರಾವ್). ಇದು ಮಕ್ಕಳಿಗೆ ಭಾರತದ ಬಗ್ಗೆ ಮಾಹಿತಿ ಒದಗಿಸುತ್ತದೆ. "ವಿe್ಞÁನ ನೋಡು ಕಲಿ" ಮಾಲೆಯಲ್ಲಿ ಪ್ರಕಟಗೊಂಡ ಕೆ.ಎಸ್.ನಿಸಾರ್ ಅಹಮದ್‍ರವರ (1936) "ಹಕ್ಕಿಗಳು" ಎನ್‍ಸಿಈಆರ್‍ಟಿ ಬಹುಮಾನ ಪಡೆದಿದೆ.

ರಾಷ್ಟ್ರೋತ್ಥಾನ ಪರಿಷತ್ ಅನುಪಮಾ ನಿರಂಜನರ "ದಿನಕ್ಕೊಂದು ಕತೆ (1972) ಪ್ರಕಟಿಸಿದೆ. ಇದು 365 ಪುಟ್ಟ ಕಥೆಗಳ ಸಂಗ್ರಹ. ಕಥೆಗಳ ಭಾಷೆ ಸರಳ, ಅಲ್ಲಲ್ಲಿ ಸುಂದರವಾದ ವರ್ಣಚಿತ್ರಗಳು ಇವೆ. ನಮ್ಮ ದೇಶದ ಪುರಾಣ, ಇತಿಹಾಸ, ಪಂಚತಂತ್ರದಿಂದ ಆಯ್ದ ಕಥೆಗಳು; ಗ್ರೀಸ್, ಯೂರೊಪ್ ದೇಶದ ಕಥೆಗಳು: ಪಶ್ಚಿಮ ರಾಷ್ಟ್ರದ ಕಥೆಗಳು ಇದರಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ, ಹದಿಹರೆಯದವರಿಗಾಗಿ ಪ್ರಜಾಪ್ರಭುತ್ವದ ಅರ್ಥ ಹಾಗೂ ಕಾರ್ಯವನ್ನು ವಿವರಿಸುವ "ನಾಳಿನ ನಾಡ ಶಿಲ್ಪಿಗೆ" (1979, ಎಲ್.ಎಸ್. ಶೇಷಗಿರಿರಾವ್) ಎಂಬ ಕೃತಿಯನ್ನು ಹೊರತಂದಿತು. "ನನ್ನ ಏಳ್ಗೆಗೆ ನಾನೇ ಶಿಲ್ಪಿ" ಎಂಬ ಕೃತಿಯನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಪ್ರಕಟಿಸಿದ್ದು, ಇದು ಉತ್ತಮ ಪ್ರಯತ್ನವಾಗಿದೆ. ಪಾಂಡುರಂಗರಾವ್‍ರ "ಎಳೆಯರ ಭಾರತ" (1974) ಮಕ್ಕಳಿಗಾಗಿ ಮಹಾಭಾರತದ ಕಥಾವಾಹಿನಿಯನ್ನು ಪರಿಚಯಿಸುವ ಪ್ರಯತ್ನವಾಗಿದೆ; ಮುಖ್ಯ ವಿಷಯಗಳು ಲೋಪವಾಗದಂತೆ ಪ್ರಸಂಗಗಳನ್ನು ಸಂಗ್ರಹಿಸಿ ತಿಳಿಸಲಾಗಿದೆ. ಬೆಂಗಳೂರು ಮಲ್ಲೇಶ್ವರ ಗಾಂಧಿ ಸಾಹಿತ್ಯ ಸಂಘ ಸಿದ್ಧವನಹಳ್ಳಿ ಕೃಷ್ಣಶರ್ಮರ "ಬಾಲ ರಾಮಾಯಣ"ವನ್ನು ಪ್ರಕಟಿಸಿದೆ (1978). ರಾಮಾಯಣದ ಕಥೆಯನ್ನು ಎಳೆಯರಿಗೆ ಸರಳವಾಗಿ, ಆಕರ್ಷಕವಾಗಿ ಹೇಳಲಾಗಿದೆ. ಬಾಲಚಂದ್ರ ಘಣೇಕರರ "ಸಚಿತ್ರ ಮಕ್ಕಳ ರಾಮಾಯಣ" (ಮರು ಮುದ್ರಣ 1984) ಮಕ್ಕಳಿಗೆ ಸ್ವಾರಸ್ಯವಾಗಿ ರಾಮಾಯಣದ ಕಥೆಯನ್ನು ನಿರೂಪಿಸುತ್ತದೆ. ಅಮ್ಮೆಂಬಳ ಶಂಕರ ನಾರಾಯಣ ಪಾವಡ ರಾಮಾಯಣದ ಸಂಕ್ಷಿಪ್ತ ಪರಿಚಯವನ್ನು "ಕಿಶೋರ ರಾಮಾಯಣ"ದಲ್ಲಿ ಮಾಡಿಕೊಟ್ಟಿದ್ದಾರೆ (1984).

ಅಂತಾರಾಷ್ಟ್ರೀಯ ಮಕ್ಕಳ ವರ್ಷದಲ್ಲಿ (1979) ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ 100 ಕೃತಿಗಳನ್ನು ಪ್ರಕಟಿಸಿದೆ.

ಕಾವ್ಯಾಲಯ ಪ್ರಕಾಶನ ಹರ್ಷಕೋಶ ಎಂಬ ಹೊಸಮಾಲೆಯನ್ನು 1984ರಲ್ಲಿ ಪ್ರಾರಂಭಿಸಿದೆ. ಯಾತ್ರ ಅವರು ರಚಿಸಿರುವ ಮನುಷ್ಯ ಜಾತಿಗಳು 1; ಭೂನಿಧಿ; ಬಾಣಬಿರುಸುಗಳು ಮತ್ತು ಮಹಿಷ ಮಂಡಲ ಎಂಬ ಸಚಿತ್ರವಾದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಕರ್ನಾಟಕದ ವಯಸ್ಕರ ಶಿಕ್ಷಣ ಸಮಿತಿ, ಮೈಸೂರು, ಧಾರವಾಡದ ಸಮಾಜ ಪುಸ್ತಕಾಲಯ, ರಾಮಾಶ್ರಯ ಬುಕ್ ಡಿಪೊ ಮತ್ತು ಮೈಸೂರು, ಬೆಂಗಳೂರಿನ ಕೆಲವು ಪ್ರಕಾಶನಗಳು ಮಕ್ಕಳ ಪುಸ್ತಕಗಳನ್ನು ಅಧಿಕ ಸಂಖ್ಯೆಯಲ್ಲಿ ಪ್ರಕಟಿಸಿವೆ.

ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ (1983) ಪ್ರಕಟಗೊಂಡ ಪುಸ್ತಕಮಾಲೆಯಲ್ಲಿ ಮಕ್ಕಳ ಸಾಹಿತ್ಯ (ಸಂ: ಎಂ.ವಿ. ಸೀತಾರಾಮಯ್ಯ) ಉತ್ತಮ ಸಂಕಲನವಾಗಿದೆ. ಹೊಯ್ಸಳ, ರಾಜರತ್ನಂ, ಜಿ. ವರದರಾಜರಾವ್ ಮೊದಲಾದ ಹಿರಿಯ ಬರಹಗಾರರ ಕಥೆ ಕವನಗಳ ಈ ಸಂಕಲನ ಸಚಿತ್ರವಾಗಿ ಪ್ರಕಟಗೊಂಡಿದೆ.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ e್ಞÁನ ದಿಗಂತವನ್ನು ವಿಸ್ತರಿಸುವಲ್ಲಿ ಎರಡು ಪ್ರಯತ್ನಗಳು ಗಮನಾರ್ಹವಾಗಿವೆ. ಶಿವರಾಮಕಾರಂತರ ವಿe್ಞÁನ ಪ್ರಪಂಚ (1959-64; ಈ ಜಗತ್ತು, ಜೀವಜಗತ್ತು, ವಸ್ತುಚೈತನ್ಯ ಮತ್ತು ವಿe್ಞÁನ ಸಾಧನ ಎಂಬ ನಾಲ್ಕು ಸಂಪುಟಗಳು) ಮಕ್ಕಳಿಗೆ ವಿe್ಞÁನದ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಇದರ ಇತಿ-ಮಿತಿಗಳು ಏನೇ ಇದ್ದರೂ ಕನ್ನಡದಲ್ಲಿ ವೈe್ಞÁನಿಕ ಬರೆವಣಿಗೆ ಅಷ್ಟಾಗಿ ಬೆಳೆಯದಿದ್ದ ಕಾಲದಲ್ಲಿ ನಡೆಸಿದ ಈ ಏಕವ್ಯಕ್ತಿ ಸಾಹಸ ಸ್ತುತ್ಯರ್ಹ. ಇದರ ಎರಡನೆಯ ಮುದ್ರಣವನ್ನು ಭಾಗ I 1979; ಭಾಗ II, 1980 ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಧನದ ನೆರವಿನಿಂದ ಸುಲಭ ಬೆಲೆ ಆವೃತ್ತಿಯಾಗಿ ಐಬಿಎಚ್ ಪ್ರಕಾಶನದವರು ಹೊರತಂದಿದ್ದಾರೆ. "e್ಞÁನಗಂಗೋತ್ರಿ" (1969-74) ಏಳು ಸಂಪುಟಗಳ ಕಿರಿಯರ ವಿಶ್ವಕೋಶವಾಗಿದೆ. ಕರ್ನಾಟಕ ಸರ್ಕಾರದ ನೆರವಿನಿಂದ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ಹೊರತಂದಿದೆ. ಆಕರ್ಷಕ ಚಿತ್ರಗಳು, ಉತ್ತಮ ಮುದ್ರಣ ಇದರ ವೈಶಿಷ್ಟ್ಯವಾಗಿದೆ. ಭಾಷೆ ಸರಳವಾಗಿದೆ.

ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ಚಿಲ್ಡ್ರನ್ಸ್ ಟ್ರಸ್ಟ್ ಈ ಎರಡು ಸಂಸ್ಥೆಗಳು ಮಕ್ಕಳಿಗಾಗಿ ಪುಸ್ತಕಗಳನ್ನು ಹೊರ ತರುವಲ್ಲಿ ನಿರತವಾಗಿವೆ. ನ್ಯಾಷನಲ್ ಬುಕ್ ಟ್ರಸ್ಟ್, ನೆಹರು ಬಾಲ ಪುಸ್ತಕಾಲಯ ಮಾಲೆಯಲ್ಲಿ ದೇಶದ ಎಲ್ಲ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಸರಳ ನಿರೂಪಣೆ, ಸುಲಭ ಬೆಲೆ, ಆಕರ್ಷಕ ಚಿತ್ರಗಳು ಈ ಮಾಲೆಯ ಪುಸ್ತಕಗಳ ವೈಶಿಷ್ಟ್ಯಗಳು. ಈ ಮಾಲೆಯಲ್ಲಿ ಇಂಗ್ಲಿಷ್‍ನಲ್ಲಿ 66 ಪ್ರಕಟಣೆಗಳು ಬೆಳಕು ಕಂಡಿದ್ದು ಅವು ಭಾರತೀಯ ಇತರ ಭಾಷೆಗಳಿಗೆ ಅನುವಾದಗೊಂಡಿರುವ ಸಂಖ್ಯೆ ಹೀಗಿದೆ: ಹಿಂದಿ (55); ಅಸಾಮಿ (31); ಬಂಗಾಳೀ (27), ಗುಜರಾತಿ (29); ಕನ್ನಡ (26); ಮಲಯಾಳಮ್ (14); ಮರಾಠೀ (41); ಒರಿಯ (37); ಪಂಜಾಬಿ (33); ತಮಿಳು (29); ತೆಲುಗು (42); ಉರ್ದು (45).

ಮಕ್ಕಳಿಗೆ ಪುಸ್ತಕಗಳನ್ನು ಹೊರತರುವಲ್ಲಿ ಪ್ರಥಮ ಸ್ಥಾನದಲ್ಲಿರುವ ರಷ್ಯ ಕನ್ನಡದಲ್ಲಿಯೂ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಮಾಷಳ ಹಾಸಿಗೆ, ಮೂರು ಕರಡಿಗಳು ಮತ್ತು ಕಲ್ಲು ಕುಟ್ಟಿಗ, ಕೊಂಬಿನ ಕುರಿ ಈ ಮಾಲೆಯಲ್ಲಿ ಪ್ರಕಟಿಸಲಾಗಿರುವ ಪುಸ್ತಕಗಳು. ಇವನ್ನು ರಷ್ಯದಲ್ಲಿಯೇ ಆಕರ್ಷಕವಾಗಿ ಲಕ್ಷಗಟ್ಟಲೆ ಮುದ್ರಿಸಿ ಸುಲಭ ಬೆಲೆಗೆ ಮಾರಲು ಇಲ್ಲಿಗೆ ರವಾನಿಸಿರುವರು.

ಕನ್ನಡ ಪತ್ರಿಕೆಗಳು, ನಿಯತಕಾಲಿಕೆಗಳು ಮಕ್ಕಳ ಸಾಹಿತ್ಯ ಬೆಳೆಯಲು ತನ್ನದೇ ಆದ ಕೊಡುಗೆ ನೀಡಿವೆ. ನಾಡಿನ ಪ್ರಸಿದ್ಧ ದೈನಿಕಗಳಾದ ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ತಮ್ಮ ಸಾಪ್ತಾಹಿಕ ಪುರವಣಿಗಳಲ್ಲಿ, ಸಾಪ್ತಾಹಿಕಗಳಾದ ಸುಧಾ, ತರಂಗ, ಪ್ರಜಾಮತ ಮೊದಲಾದವು, ಮಯೂರ ಮಾಸಪತ್ರಿಕೆ- ಇವು ಮಕ್ಕಳಿಗಾಗಿ ಅಂಕಣಗಳನ್ನು ಮೀಸಲಿರಿಸಿವೆ. ಚಂದಮಾಮ, ಬೊಂಬೆಮನೆ, ಬಾಲಮಿತ್ರ, ಪುಟಾಣಿ - ಇವು ಮಕ್ಕಳಿಗಾಗಿಯೇ ಮೀಸಲಾಗಿರುವ ಕೆಲವು ಮಾಸಪತ್ರಿಕೆಗಳು.

ಕಾಶ್ಮೀರಿ: ಕಾಶ್ಮೀರಿ ಮಾತನಾಡುವ ಮಕ್ಕಳು ತಮ್ಮ ಕೋಮ ಪ್ರಜ್ಞೆಯನ್ನು ತಾಯ್ನುಡಿಯಲ್ಲಿ ರಚಿತವಾದ ಸೂಕ್ತ ಸಾಹಿತ್ಯದ ಮೂಲಕ ಕಲ್ಪನಾತ್ಮಕವಾಗಿ, ಅನುಭವಾತ್ಮಕವಾಗಿ ಹಾಗೂ ಸಾಂಸ್ಕøತಿಕವಾಗಿ ಪಾಲಿಸಿ, ಪೋಷಿಸುವ ಸೌಲಭ್ಯವನ್ನು ಇನ್ನೂ ಅಷ್ಟಾಗಿ ಪಡೆದಿಲ್ಲ. ಈ ತೀವ್ರ ಸಮಸ್ಯೆಯತ್ತ ಕಾಶ್ಮೀರಿ ಲೇಖಕರು ಅಷ್ಟಾಗಿ ಗಮನ ಹರಿಸದಿರುವುದೇ ಕಾಶ್ಮೀರಿಯಲ್ಲಿ ಮಕ್ಕಳ ಸಾಹಿತ್ಯದ ಅಭಾವಕ್ಕೆ ಕಾರಣ ಎನ್ನಬಹುದು.

ಭಾರತದ ಇತರ ಭಾಷೆಗಳಂತೆ ಕಾಶ್ಮೀರಿಯಲ್ಲಿಯೂ ಜನಪದ ಸಾಹಿತ್ಯ ಸಮೃದ್ಧವಾಗಿದೆ. ಬಾಲ್ಯದಲ್ಲಿ ಇದರ ಬನಿಯನ್ನು ಕಾಶ್ಮೀರಿ ಮಕ್ಕಳು ಸವಿಯುವರು. ಮಕ್ಕಳ ಜನಪದ ಸಾಹಿತ್ಯದಲ್ಲಿಯೂ ವಿವಿಧ ಮಟ್ಟಗಳಿರುವುದು ಸ್ಪಷ್ಟವೇ ಆಗಿದೆ. ಯಾವ ಮಗುತಾನೆ ಹಾಡುಗಳನ್ನು, ಮಾನವ ಗುಣಗಳು ಹಾಗೂ ಅಭಿಲಾಷೆಗಳಿಂದ ಕೂಡಿದ ಪ್ರಾಣಿ-ಪಕ್ಷಿಗಳ ಕಥೆಗಳನ್ನು, ರಾಜಕುಮಾರರ ವೀರ ಕಥೆಗಳನ್ನು, ವೃದ್ಧರ ವಿಚಿತ್ರ ವರ್ತನೆ ಕಥೆಗಳನ್ನು ಇಷ್ಟಪಡುವುದಿಲ್ಲ? ಗಾದೆ ಒಗಟುಗಳೂ ಅವರಿಗೆ ಪ್ರಿಯವಾದವೇ. ಈ ದಿಸೆಯಲ್ಲಿ ಕಾಶ್ಮೀರಿಯಲ್ಲಿ ಬಂದಿರುವ ಅಂಥ ಜನಪದ ಕಥೆಗಳ ಸಂಕಲನಗಳು: ದೇಶ್ ವಿದೇಶಿ ಲೋಕಕಥಾ, ಭಾರತಾಚಿ ಲೋಕಕಥಾ (ಇವೆರಡನ್ನು ಪ್ರಕಟಣ ವಿಭಾಗ ಪ್ರಕಟಿಸಿದೆ) ಮತ್ತು ಪೂಷಿಥಾರ್ (ಹೂವಿನ ಪೊದೆ, ಸಂಪಾದಕ: ನೂರ್ ಮೊಹಮದ್ ರೋಷನ್).

1947ರ ತರುವಾಯ ಶಾಲಾಹಂತದಲ್ಲಿ ಕಾಶ್ಮೀರಿ ಶಿಕ್ಷಣ ಮಾಧ್ಯಮವಾಯಿತು. ಆಗ ಮಕ್ಕಳಿಗಾಗಿ ಗೀತರಚನೆ ಹಾಗೂ ಕಥೆ ಬರೆಯುವ ಆಸಕ್ತಿಯನ್ನು ಕಾಶ್ಮೀರಿ ಕವಿಗಳು, ಕಥೆಗಾರರು ಪ್ರದರ್ಶಿಸಲಾರಂಭಿಸಿದರು. ಅವು ಹಲವು ಪಠ್ಯ ಪುಸ್ತಕಗಳಲ್ಲೂ ಸೇರಿದುವು. ಮಕ್ಕಳಿಗೆ ಹರ್ಷೋಲ್ಲಾಸ ಉಂಟುಮಾಡಿದವು ಕೆಲವು ಮಾತ್ರ. ಗುಲಾಮ್ ಅಹಮ್ಮದ್ ಮಹ್ಜೂರ್ (1885-1952), ಮಿರ್ಜಾ ಗುಲಾಮ್ ಹಸನ್ ಬೆಜ್ ಅರೀಫ್ (ಜ. 1910), ನಂದಲಾಲ್ ಅಂಬರದರ್ (ಜ. 1916), ಫಜೀಲ್ ಕಾಶ್ಮೀರಿ (ಜ. 1915) ಮತ್ತು ದೀನನಾಥ್ ನದೀಮ್ (ಜ. 1915) - ಇವರು ಜನಪ್ರಿಯವಾದ ಕೆಲವು ಕವನಗಳನ್ನು ರಚಿಸಿದರು.

1953ರ ರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಕಾಶ್ಮೀರಿ ಭಾಷೆ ರಾಜಕಾರಣಿಗಳ ತರಾತುರಿಯ ತೀರ್ಮಾನದ ಆಘಾತಕ್ಕೆ ಸಿಲುಕಿ, ಮತ್ತೊಮ್ಮೆ ಶೈಕ್ಷಣಿಕ ಸಂಸ್ಥೆಗಳಿಂದ ದೂರ ಸರಿಯಿತು. ಮತ್ತೆ ಮಕ್ಕಳ ಸಾಹಿತ್ಯ ಮೂಲೆ ಗುಂಪಾಯಿತು. ರಾಜಕೀಯ ಉದ್ದೇಶಪೂರಿತವಾದ ಕೆಲವು ಭಾಗಗಳನ್ನು ಬಿಟ್ಟರೆ ಐವತ್ತರ ದಶಕದಲ್ಲಿ ಉಲ್ಲೇಖಾರ್ಹ ಸಾಹಿತ್ಯ ಮೂಡಿಬರಲಿಲ್ಲ. ದೀನ ನಾಥ್ ನದೀಮ್ 1954ರಲ್ಲಿ ನೀಕೀ ತು ಬಡಿ (ಒಳ್ಳೆಯದು ಮತ್ತು ಕೆಟ್ಟದ್ದು) ಎಂಬ ಗೀತ ನಾಟಕ ರಚಿಸಿದರು; ಇದು ಸ್ವಲ್ಪಮಟ್ಟಿಗೆ ಜನಪ್ರಿಯವಾಯಿತು. ಮಕ್ಕಳಿಗಾಗಿ ರಚಿಸಲಾದ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ನೀಡಲು ಶಿಕ್ಷಣ ಇಲಾಖೆ 1959ರಲ್ಲಿ ತೀರ್ಮಾನಿಸಿತು. ಇದರ ಪರಿಣಾಮ ಉತ್ತಮವಾಗಿತ್ತು. ನಜೀ ಮುನಾವರ್ (ಜ. 1938) ಮತ್ತು ಎ.ಕೆ.ರಹ್ಬರ್ (ಜ. 1933) ಮೊಖ್ತಾಹಾರ್ (ಮುತ್ತಿನಹಾರ) ಎಂಬ ಏಳು ಕಿರು ಕಥೆಗಳ ಸಂಕಲನ ಹೊರತಂದರು. ಇದರ ಮುದ್ರಣ ಉತ್ತಮವಾಗಿರಲಿಲ್ಲ; ನಜೀ ಮುನಾವರರ ಗೀತೆಗಳ ಪ್ರಥಮ ಸಂಕಲನ ಷುರೇನ್ ಹುಂದಿ ಬಾತ್ (ಮಕ್ಕಳ ಗೀತೆಗಳು) 1961ರಲ್ಲಿ ಪ್ರಕಟಗೊಂಡಿತು. ಇದರಲ್ಲಿ ಉತ್ತಮವಾದ 13 ಹಾಡುಗಳಿವೆ. ನಜೀ ಮಕ್ಕಳ ಮನಮುಟ್ಟುವಂತೆ ತುಂಬ ಸರಳವಾಗಿ ಬರೆಯಲು ಪ್ರಯತ್ನಿಸಿ ಯಶಸ್ವಿಯೂ ಆದರು; ಮಕ್ಕಳ ಕವಿ ಎಂದು ಮಾನ್ಯತೆಯನ್ನೂ ಪಡೆದರು.

ಶಂಭುನಾಥ್ ಭಟ್ ಹಲೀಂ (ಜ. 1921) ಬಾಲುಯಾರ್ (ಬಾಲ್ಯದ ಗೆಳೆಯ, 1960) ಎಂಬ ಕಥಾಸಂಕಲನ ಪ್ರಕಟಿಸಿದರು. ಇದಕ್ಕೆ ಶಿಕ್ಷಣ ಸಚಿವಾಲಯದ ಬಹುಮಾನ ಲಭಿಸಿತು. ಆರು ಕಥೆಗಳು ಸಚಿತ್ರವಾದವಾಗಿದ್ದು, ಆಸಕ್ತಿದಾಯಕವಾಗಿದ್ದುವು. ಇದು ತುಂಬ ಜನಪ್ರಿಯವಾಯಿತು. ಫಜಿಲ್ ಕಾಶ್ಮೀರೀ ಷಾಮು-ಏ-ವತನ್ (ರಾಷ್ಟ್ರದ ಜ್ಯೋತಿ, 1964) ಎಂಬ ನೀತಿಬೋಧಕ ಕವಿತೆಗಳ ಸಂಗ್ರಹ ಪ್ರಕಟಿಸಿದರು. ಇವುಗಳ ಭಾಷೆ ಸರಳವೂ ಪರಿಣಾಮಕಾರಿಯಾದುದೂ ಆಗಿದ್ದು, ಬಾಲಭಾಷೆಗೆ ತುಂಬ ನಿಕಟವಾಗಿತ್ತು. ಲೀಲಾಮಜುಂದಾರ್ ಟಾಗೂರರ ಬಗ್ಗೆ ರಚಿಸಿದ್ದ ಇಂಗ್ಲಿಷ್ ಕೃತಿ ಅವರ್ ಪೊಯೆಟ್ ಕೃತಿಯನ್ನು ಬನ್ಸೀ ನಿರ್ದೋಷ್ (ಜ. 1930) "ಕೌಮುಕ್ ಷಾಯಿರ್" ಎಂಬ ಹೆಸರಿನಲ್ಲಿ ಹೊರ ತಂದರು. ಶಿಕ್ಷಣ ಇಲಾಖೆಯಿಂದ ಬಹುಮಾನ ಪಡೆದ ಎರಡನೆಯ ಕೃತಿ ವಿಷಂಬರ್ ನಾಥ್ ಕೌಲ್‍ರ ಛಂಚಿಪಟ್ (ಮರದ ಬೊಂಬೆ, 1969). ಇದು ಮಕ್ಕಳ ಕಥಾ ಸಂಕಲನ. ಜನತೆಯ ಪ್ರಶಂಸೆಗೆ ಪಾತ್ರವಾದ ಮತ್ತೊಂದು ಕೃತಿ ಶಂಕರನಾಥಕೌಲ್‍ರ ಮತ್ರ್ಸ ಪಿಪಿನ್ ತು ಸೋನುಸುಂದ್‍ತೂಲ್ (ಬುಗುರಿ ಮತ್ತು ಚಿನ್ನದ ಮೊಟ್ಟೆ, 1965). ಇದರ ಭಾಷೆ ಮತ್ತು ಶೈಲಿ ಮಕ್ಕಳಿಗಾಗಿ ಬರೆಯಬಲ್ಲ ಕೌಲ್‍ರ ವಿಶೇಷ ಕೌಶಲಕ್ಕೆ ಸಾಕ್ಷಿ. ವರ್ಣರಂಜಿತ ಸಚಿತ್ರ ಮುದ್ರಣ ಈ ಕೃತಿಯ ವಿಶೇಷ. ಕೆಲವು ಭಾಷಾಂತರಗಳು ಕಾಶ್ಮೀರ ಕಣಿವೆಯ ಹೊರಗೆ ಪ್ರಕಟವಾಗಿವೆ. ಭೋಲ ಭಟ್ಟಾಚಾರ್ಯರ ಖೋಟ್ಹಾ ನಂದುಬೋನ್ ಸೊನ್‍ದೇಶ್ ಅನ್ನು (ನಮ್ಮ ದೇಶ ಎಷ್ಟು ಸುಂದರ, 1970) ನಿರ್ಮಲಾದೇವಿ ಭಾಷಾಂತರಿಸಿರುವರು. ಶಂಕರಾಚಾರ್ಯ (1970), ಗೋದಾವರಿ (1970) ಮತ್ತು ಜಾಲ್ಕಾರಿ (1970) ದೆಹಲಿಯ ಸಸ್ತ ಸಾಹಿತ್ಯ ಮಂಡಲ ಪ್ರಕಟಿಸಿದೆ. ದೆಹಲಿಯ ಸರ್ವೋದಯ ಪ್ರಕಾಶನ ರುತ್ ಷೆಹ್ರೀ (ಒಳ್ಳೆಯ ಪೌರ, 1971) ಎಂಬ ಭಾಷಾಂತರಿತ ಕೃತಿಯನ್ನು ಪ್ರಕಟಿಸಿದೆ.

ನಾಜೀ ಮುನಾವರ್ ಮಕ್ಕಳಿಗಾಗಿ ಬರೆಯುತ್ತಿರುವ ಏಕೈಕ ಲೇಖಕರಾಗಿದ್ದು, ಈ ಕ್ಷೇತ್ರದಲ್ಲಿ ಅವರ ಕೊಡುಗೆ ಅದ್ವಿತೀಯವಾಗಿದೆ. ಇವರ ಎರಡನೆಯ ಸಂಕಲನ ಷುರ್ಕಿ ಹುಂದಿ ಬಾತ್ (ಮಕ್ಕಳ ಹಾಡುಗಳು, 1972); ಬಾತು ಕಥು (ಕಥನ ಕವನಗಳು, 1974). ಇದು ಈಸೋಪನ ನೀತಿಕಥೆಗಳ ರೂಪಾಂತವಾಗಿದೆ. ಮಕ್ಕಳಿಗೆ ಆಸಕ್ತಿಯುಂಟುಮಾಡುವ ಕಥೆಗಳನ್ನು ಆಯ್ದುಕೊಳ್ಳುವ ಬಗ್ಗೆ ಇವರು ಎಚ್ಚರವಹಿಸಿರುವರು. ಸ್ವತಃ ಉಪಾಧ್ಯಾಯರಾಗಿರುವ ಇವರು ಮಕ್ಕಳ ಮಾನಸಿಕ ಅಗತ್ಯಗಳನ್ನು ಸುಲಭವಾಗಿ ಗ್ರಹಿಸಿರುವರು. ಮಕ್ಕಳಿಗಾಗಿ ಇಕ್ಬಾಲ್ ಬರೆದ ಕೆಲವು ಪ್ರಸಿದ್ಧ ಪದ್ಯಗಳನ್ನು ಈಚೆಗೆ ನಾಜೀ ಕಾಶ್ಮೀರಿಗೆ ಅನುವಾದಿಸಿರುವರು. ಇದು ಬಜ್-ಎ-ಇಕ್ಬಾಲ್ ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ಇದನ್ನು ಜಮ್ಮು-ಕಾಶ್ಮೀರದ ಇಕ್ಬಾಲ್ ಶತಮಾನೋತ್ಸವ ಸಮಿತಿ ಪ್ರಕಟಿಸಿದೆ.

ಎಸ್.ಎಲ್. ಸಾಧುರವರು ಪಂಚತಂತ್ರದ ಕೆಲವು ಕಥೆಗಳನ್ನು ಮಕ್ಕಳಿಗಾಗಿ ಅಳವಡಿಸಿಕೊಂಡು, ಅದೇ ಹೆಸರಿನಲ್ಲಿ ಪ್ರಕಟಿಸಿರುವರು. ಇದರ ಭಾಷೆ ಸರಳವಾಗಿಲ್ಲದಿರುವುದರಿಂದ ಇದು ಅಷ್ಟಾಗಿ ಜನಪ್ರಿಯವಾಗಿಲ್ಲ.

ಕಾಶ್ಮೀರಿಯ ಎರಡು ಕೃತಿಗಳನ್ನು ಮಾಸ್ಕೋದ ವಿದೇಶಿ ಭಾಷೆಗಳ ಪ್ರಕಟಣ ವಿಭಾಗ ಪ್ರಕಟಿಸಿದೆ. ಪೂತ್ ದ್ರಾವ್ ಕಿಡ್ಗುನ್ ಫಿಡ್ಕುನ್ (ಕೋಳಿ ಕಿಡ್ಕುನ್ ಫಿಡ್ಕುನ್‍ಗೆ ಹೊರಟಿತು, 1978)- ಇವುಗಳ ಪೈಕಿ ಒಂದು.

ಗುಲಾಮ್ ನಬಿ ಆತಿಷ್‍ರ ಕವನಗಳ ಸಂಕಲನ ಕಯೆಂಟ್ಷ ಮಯೆಂಟ್ಷ (1980) ಸಹಿ (ಸ್ವಲ್ಪ ಸ್ವಲ್ಪ) ಎಂಬ ಈಚಿನ ಕೃತಿಯನ್ನು ಉಲ್ಲೇಖಿಸಬಹುದಾಗಿದೆ.

ಶ್ರೀನಗರದ ಆಕಾಶವಾಣಿ ಕೇಂದ್ರ ಪ್ರತಿವಾರ ಮಕ್ಕಳ ಕಾರ್ಯಕ್ರಮ ನಡೆಸುತ್ತಿದೆ. ಇದರಿಂದಾಗಿಯೂ ಮಕ್ಕಳ ಸಾಹಿತ್ಯದ ರಚನೆಯಾಗುತ್ತಿದೆ. ಈ ದಿಸೆಯಲ್ಲಿ ಕ್ರಮವಾಗಿ ಅಕ್ತಿರ್-ಮೊಹಿ-ಉದ್ ದಿನ್ ಮತ್ತು ಪುಷ್ಕರ್ ಭಾನ್‍ರ ಕಥೆಗಳು ಮತ್ತು ಕವಿತೆಗಳು ವಿಶೇಷವಾಗಿ ಉಲ್ಲೇಖಾರ್ಹವಾಗಿವೆ. ಪಂಚತಂತ್ರ, ಗ್ರಿಮ್‍ರ ಕಿನ್ನರ ಕಥೆಗಳು ಮತ್ತು ಕ್ರಿಶ್ಚಿಯನ್ ಅಂಡರ್‍ಸನ್‍ರ ಕಥೆಗಳನ್ನು ಮಕ್ಕಳ ಕಾರ್ಯಕ್ರಮಕ್ಕಾಗಿ ಅಳವಡಿಸಲಾಗಿದೆ.

ಕೊಂಕಣಿ: ಇದರ ಜನಪದ ಸಾಹಿತ್ಯದಲ್ಲಿ ಸ್ವಲ್ಪಮಟ್ಟಿನ ಮಕ್ಕಳ ಸಾಹಿತ್ಯ ಕಂಡುಬರುತ್ತದೆ. ಮಕ್ಕಳಿಗಾಗಿಯೇ ಇರುವ ಕೆಲವು ಜನಪದ ಗೀತೆಗಳು ಮತ್ತು ಜನಪದ ಕಥೆಗಳೂ ಇವೆ. ಜನಪದ ಶಿಶುಗೀತೆಗಳ ಪೈಕಿ ಹೆಚ್ಚಿನವು ಮಕ್ಕಳು ಸುಲಭವಾಗಿ ಆಕರ್ಷಿತರಾಗುವ ಪ್ರಕೃತಿಯ ವಸ್ತುಗಳಿಗೆ ಸಂಬಂಧಿಸಿದವಾಗಿವೆ.

ಮಕ್ಕಳ ಪ್ರಥಮ ಪುಸ್ತಕ 1889ರಲ್ಲಿ ಪ್ರಕಟಗೊಂಡಿತು. ಇದನ್ನು ಥಾಮಸ್ ಮೊರಾಬ (1842-1904) ಪ್ರಕಟಿಸಿದ. ಅನಂತರ ಎಸ್.ಜೆ.ಡಿ' ಸೌಜರ ಕೃತಿ 1896ರಲ್ಲಿ ಪ್ರಕಟಗೊಂಡಿತು. ಮಕ್ಕಳಿಗಾಗಿ ಶೆಣೈ ಗೊಯೆಂಬಾಬ್ 'ಬುರ್ಗಿ ಯಾಲೋ ಇಷ್ಟ್ ಎಂಬ ಕೃತಿ ಪ್ರಕಟಿಸಿದರು. ಗೋವಾದ ಕೊಂಕಣಿ ಭಾಷಾ ಮಂಡಳ ಪ್ರಾಥಮಿಕ ಶಾಲೆಗಳಲ್ಲಿ ಬಳಕೆಗಾಗಿ ಪುಸ್ತಕಗಳನ್ನು ಪ್ರಕಟಿಸಿದೆ. ಶೆಣೈ ಗೊಯೆಂಬಾಬ್‍ರಲ್ಲದೆ ಗೋದೂಬಾಯಿ ಕೇಲ್ಕರ್, ಫಾ. ಅಲ್ವಾರೋರೆನಾಟೋ ಮೆಂಡಸ್, ಕಮಲಾಬಾಯಿ ರಾಯಿ ಮೊದಲಾದವರು ಮಕ್ಕಳಿಗಾಗಿ ಸಣ್ಣ ಕಥೆಗಳನ್ನು ರಚಿಸಿರುವರು. ಇವುಗಳ ಪೈಕಿ ಕೆಲವು ಕನ್ನಡ ಲಿಪಿಯಲ್ಲಿ ಇವೆ. 'ಗುಂಚೇ ಕಟ್ಟರಿ ಗೂಂ' ಎಂಬುದು ಎ.ಎನ್. ಮ್ಹಾಂಬ್ರೋರವರ ಮಕ್ಕಳ ಕಿರುಗೀತೆಗಳ ಸಂಕಲನ ಗೋವಾದ ಆರ್.ವಿ.ಪಂಡಿತ್ 'ಗೋಡ್ ಗೋಡ್ ಕನಿಯೋ (ಸಿಹಿ ಸಿಹಿ ಕಥೆಗಳು) ಮತ್ತು 'ಬುಗ್ರ್ಯಾಲೋ ಕನಿಯೋ, (ಮಕ್ಕಳ ಕಥೆಗಳು) - ಇವನ್ನು ಪ್ರಕಟಿಸಿರುವರು. ಮಕ್ಕಳ ಪುಸ್ತಕದಲ್ಲಿ ಸೇರಿರುವ ಇತರ ಪುಸ್ತಕಗಳೆಂದರೆ: ಶ್ಯಾಮ ವರೆಕರರ "ಕುಂಡ ಕುರ್ಕುರ (ಜನಪದ ಕಥೆ)", ಶಾಂತಾರಾಮ್ ಹೆದೋರ "ಮಾಡ್ಲೋಪೂಟ್" ಎಂಬ ಏಕಾಂಗ ನಾಟಕ, ಲಕ್ಷ್ಮಣರಾವ್ ಸರ್ದೇಸಾಯಿಯವರ ರಾಗ್ಯಾಲೀ ವಾಘಾ ಬೋವಂಡೀ, ಮನೋಹರಮ್ ಸರ್ದೇಸಾಯಿಯವರ ಕಥನಗೀತ ಬಂಗಾರ ಕುರಾಡ್ (ಬಂಗಾರದ ಕೊಡಲಿ) ಮತ್ತು ರವೀಂದ್ರ ಕೇಲೇಕರರ "ರಾಜಾರಾಣಿ".

ಕೇರಳದಲ್ಲಿ ಬಿ. ದಾಮೋದರ ಮಲ್ಯ (1897-1979) ಮಲಯಾಳಮ್ ಲಿಪಿಯಲ್ಲಿ ಕೊಂಕಣಿಯಲ್ಲಿಯ ಕಥೆಗಳನ್ನು ಮತ್ತು ನೀತಿಕಥೆಗಳನ್ನು ರಚಿಸಿರುವರು: ಪುರಾಣ ಕಥೆಗಳ ಪುನಾರಚನೆ ಮಾಡಿರುವರು.

ಗುಜರಾತಿ : ಮಧ್ಯಕಾಲೀನ ಗುಜರಾತಿ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಹೆಚ್ಚಾಗಿ ಇಲ್ಲ. ಮಕ್ಕಳಿಗೆ ಹರ್ಷ ಉಂಟುಮಾಡುವಂಥ ಕಥೆ ಗೀತೆಗಳು ಇರುವುವಾದರೂ ಅವು ವಿಶೇಷವಾಗಿ ಮಕ್ಕಳಿಗಾಗಿಯೇ ರಚಿತವಾದವಲ್ಲ.

ಪಾತಾಳದಲ್ಲಿ ನಾಗನನ್ನು ಸಂಹರಿಸಲು ಮಗುವಾಗಿ ಶ್ರೀಕೃಷ್ಣ ಹೋಗುವ ನಾಗದಮನ ಎಂಬ ನರಸಿಂಹಮೆಹ್ತನ (1416-80) ಕೃತಿಯಿದೆ. ಇದು ಹಿರಿಯರಿಗೆ ಮತ್ತು ಮಕ್ಕಳಿಗೆ ಪ್ರಿಯವಾಗಿದೆ. ಪ್ರೇಮಾನಂದನ (1636-1734) ಮಾಮೇರುನ್ ಮಕ್ಕಳನ್ನು ರಂಜಿಸುವ ಮತ್ತೊಂದು ಕೃತಿ. 19ನೆಯ ಶತಮಾನದಲ್ಲಿ ಹಿತೋಪದೇಶ ಅಥವಾ ಈಸೋಪನ ಕಥೆಗಳು ಅಥವಾ ಪಂಚತಂತ್ರದಂಥ ಒಂದೇ ಒಂದು ಕೃತಿ ಗುಜರಾತಿಯಲ್ಲಿ ಬೆಳಕು ಕಾಣಲಿಲ್ಲ.

ಗುಜರಾತಿಯಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿದೆ. ಮಧ್ಯಯುಗದಲ್ಲಿ ಮಕ್ಕಳ ಸಾಹಿತ್ಯದ ಕೊರತೆಯನ್ನು ಇದು ಸ್ವಲ್ಪಮಟ್ಟಿಗೆ ನೀಗಿತ್ತು. ವಿದ್ಯಾಪ್ರಸಾರ ಅಷ್ಟಾಗಿ ಇರಲಿಲ್ಲ. ಹಾಗಾಗಿ ಅನಕ್ಷರಸ್ಥ ತಾಯಂದಿರು, ಅಜ್ಜಿಯರು ತಮ್ಮ ಮಕ್ಕಳಿಗಾಗಿ ಜೋಗುಳಗಳು, ಲಾವಣಿಗಳು, ಹಾಡುಗಳು, ಶಿಶುಗೀತೆಗಳು ಮೊದಲಾದವನ್ನು ಹಾಡುತ್ತಿದ್ದರು. ಇದು ಮಕ್ಕಳಿಗೆ ಜೀವನಶಿಕ್ಷಣ ಒದಗಿಸುತ್ತಿತ್ತು. ಇಂಥ ಅನೇಕ ಹಾಡುಗಳಲ್ಲಿ, ಪಂಚತಂತ್ರದಲ್ಲಿ ಬರುವಂತೆ ಪ್ರಾಣಿ ಪಕ್ಷಿಗಳ ಕಥೆಗಳು ಬಂದು ಮಕ್ಕಳ ಮನಸ್ಸನ್ನು ಸೂರೆಗೊಂಡಿವೆ.

ಮಧ್ಯಯುಗದ ಅನಂತರ ಸುಧಾರಣಾ ಯುಗ ಕಾಲಿಟ್ಟಿತು. ದಲಪತ್ರಾಮ್ ದಯಾಭಾಯಿ (1820-98) ಮತ್ತು ನರ್ಮದಾಶಂಕರ ಲಾಲಶಂಕರ (1833-86) ಮಹತ್ತ್ವದ್ದಲ್ಲ; ದಲಪತ್ರಾಮ್ ನೀತಿಬೋಧಕರಾದರೂ ಹಾಸ್ಯಭರಿತವಾದ ಅನೇಕ ಲಾವಣಿಗಳು ಹಾಗೂ ಕವಿತೆಗಳನ್ನು ಮಕ್ಕಳಿಗಾಗಿ ರಚಿಸಿದರು. ಕವಿ-ವಿಮರ್ಶಕ ನವಲರಾಮ ಲಕ್ಷ್ಮೀಶಂಕರ ಪಾಂಡ್ಯ (1836-88) ಬಕರಿ ಬೈನೋ ಬಿಲಾದೊ (ಮೇಕೆಮರಿ ಮದುವೆ) ಎಂಬ ಪದ್ಯ ಕೃತಿ ರಚಿಸಿದರು. ನವಲರಾಮ ಶಿಶುವಿಹಾರವನ್ನು ಈ ಪದ್ಯದಲ್ಲಿ ಎಷ್ಟರಮಟ್ಟಿಗೆ ಗೇಲಿ ಮಾಡಿದ್ದರೆಂದರೆ ಶಿಶುವಿವಾಹಗಳು ಪ್ರಮುಖವಾಗಿದ್ದ ಆ ಕಾಲದಲ್ಲಿ ಇದು ಸಾಕಷ್ಟು ಪ್ರಭಾವಬೀರಿತು. ಈ ಯುಗದಲ್ಲಿ ಮಕ್ಕಳ ಸಾಹಿತ್ಯಕ್ಷೇತ್ರಕ್ಕೆ ಉತ್ತಮ ಕೊಡುಗೆ ಬಂದಿತಾದರೂ ಅನೇಕ ದೃಷ್ಟಿ, ಸಾಧನೆಗಳಿಂದ ವಿಶಿಷ್ಟವಾದ ಮುಂದಿನ ಪಂಡಿತಯುಗ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಏನನ್ನೂ ನೀಡಲಿಲ್ಲ ಎನ್ನಬೇಕಾಗುತ್ತದೆ. ನರಸಿಂಹರಾಯ ದಿವೇತಿಯ (1859-1937) ಒಂದೆರಡು ಕೃತಿಗಳನ್ನು ರಚಿಸಿದರು.

ರಾಷ್ಟ್ರದ ರಾಜಕೀಯ ಕ್ಷೇತ್ರದ ಮೇಲೆ ಅಪಾರ ಪ್ರಭಾವ-ಪರಿಣಾಮ ಬೀರಿದವರು ಮಹಾತ್ಮ ಗಾಂಧಿ. ಗಾಂಧಿಯುಗ 1915ರಲ್ಲಿ ಪ್ರಾರಂಭವಾಯಿತು. ಇದು ಅತ್ಯಂತ ಕುತೂಹಲಕಾರಿ ಯುಗ. ಈ ಕ್ಷೇತ್ರಕ್ಕೆ ಗಾಂಧೀಜಿಯವರ ಕೊಡುಗೆ ವಿಪುಲವೂ ಪ್ರಮುಖವೂ ಆಗಿದೆ. ಮಕ್ಕಳ ಶಿಕ್ಷಣ ಹಾಗೂ ಸಾಹಿತ್ಯದ ಸಮಸ್ಯೆಗಳ ಬಗ್ಗೆ ಶಿಕ್ಷಣತಜ್ಞರ ಗಮನ ಸೆಳೆದವರು ಇವರು. ಗಾಂಧೀಜಿಯವರಿಂದ ಸ್ಫೂರ್ತಿಪಡೆದ, ತಾವೇ ಮಕ್ಕಳ ಪ್ರೇಮಿಗಳೂ ಆಗಿದ್ದ ಗೀಜುಭಾಯ್ ಬದೇಖ (1885-1939) ವಕೀಲರಾಗಿದ್ದು ಆಫ್ರಿಕಕ್ಕೆ ವೃತ್ತಿಗಾಗಿ ತೆರಳಿ, ಮರಳಿ ಬಂದಿದ್ದರು. ಇವರು ನಾನ್‍ಭಾಯ್‍ಭಟ್ ಮತ್ತು ಹರಭರ್ ತ್ರಿವೇದಿ ಎಂಬ ಇಬ್ಬರು ಶ್ರೇಷ್ಠ ಶಿಕ್ಷಣತಜ್ಞರ ಜೊತೆಗೂಡಿ ಮಕ್ಕಳ ಶಿಕ್ಷಣಕ್ಕಾಗಿ ದಕ್ಷಿಣಾಮೂರ್ತಿಭವನ ಎಂಬ ಸಂಸ್ಥೆ ಪ್ರಾರಂಭಿಸಿದರು. ಗೀಜು ಭಾಯ್ ಬದೇಖರ ಸಹಕಾರ್ಯಕರ್ತೆ ತಾರಾಬೆನ್ ಮೋಡಕ್‍ರು ಸೇರಿದಂತೆ ಇವರು ಮಕ್ಕಳ ಶಿಕ್ಷಣ ಕ್ರಮವನ್ನು ಬದಲಾಯಿಸಿದುದಷ್ಟೇ ಅಲ್ಲದೆ ಮಕ್ಕಳಿಗಾಗಿ ಬರೆಯುವ ರೀತಿಯನ್ನೂ ಬದಲಾಯಿಸಿದರು. ದಕ್ಷಿಣಾಮೂರ್ತಿ ಭವನವನ್ನು ಮಕ್ಕಳಸ್ವರ್ಗ ಎಂದು ಕರೆದುದು ಯುಕ್ತವೇ ಆಗಿತ್ತು. ಗೀಜು ಭಾಯ್‍ರವರು ಏಕಾಕಿಯಾಗಿ ಹಾಗೂ ತಾರಾಬೆನ್ ಮೋಡಕ್‍ರ ಜೊತೆಗೂಡಿ ಗೀತೆಗಳು, ಜೋಗುಳಗಳು, ಒಗಟು ಗಾದೆಗಳು, ಕವಿತೆ ಕಥೆಗಳು, ನಾಟಕಗಳನ್ನು ರಚಿಸಿದರು. ಗೀಜುಭಾಯಿಯವರ ಅತ್ಯಂತ ಜನಪ್ರಿಯ ಕಥೆಗಳ ಪೈಕಿ ಒಂದು ತಾಧುನ್ ತಬಕಲುನ್ (ಮಂಜಿನಷ್ಟು ತಣ್ಣಗಿರುವ ಮಳೆನೀರು). ಗೀಜು ಭಾಯಿಯವರ ಇತರ ಪ್ರಸಿದ್ಧ ಕೃತಿಗಳು; ಸಾತ್ ಪುಂಚ್‍ಹಾದಿಯೋ ಉಂದರ್ (ಏಳು ಬಾಲಗಳ ಇಲಿ), ರಾಜಾ ಸುಪದ್‍ಕನ್ನೋ (ಮೊರದಂಥ ಕಿವಿಗಳುಳ್ಳ ರಾಜ) ಮತ್ತು ಸಸಭಾಯಿ ಸಂಕಲಿಯ (ಸಂಕಲಿಯ ಮೊಲ). ಇವರು ಅನೇಕ ನಾಟಕಗಳನ್ನು ರಚಿಸಿ ಅವುಗಳಲ್ಲಿ ಪಾತ್ರವಹಿಸಿದ್ದರು. ನಾನಾಭಾಯಿಭಟ್ ಮಹಾಭಾರತದ ವೀರರ ಬಗ್ಗೆ ಮಹಾಭಾರತ್ ನಾನ್ ಪತ್ತೋ ಎಂಬ ಮಾಲೆಯಲ್ಲಿ ಬರೆದರು. ಇದಕ್ಕೆ ಸಮಾನವಾದದು ಈ ತನಕ ಮತ್ತೊಂದು ಬಂದಿಲ್ಲ.

ದಕ್ಷಿಣಾಮೂರ್ತಿಭವನ ಪ್ರಕಟಿಸಿದ ಬಾಲ ಸಾಹಿತ್ಯ ಮಾಲೆಯಲ್ಲಿ 80 ಕಿರುಕೃತಿಗಳು ಮತ್ತು ಬಾಲಸಾಹಿತ್ಯಗುಚ್ಛದಲ್ಲಿ 25 ಕೃತಿಗಳು ಪ್ರಕಟವಾಗಿವೆ. ಈ ಮಾಲೆಯಲ್ಲಿಯ ಕೃತಿಗಳೆಲ್ಲವನ್ನೂ ಈ ಸಂಸ್ಥೆಯೊಡನೆ ಸಂಪರ್ಕ ಪಡೆದಿದ್ದವರು ಹಾಗೂ ಮೂಲಶಂಕರ ಭಟ್ ಮತ್ತು ಅವರ ಸಹೋದ್ಯೋಗಿಗಳು ರಚಿಸಿದರು. ಮೂಲಶಂಕರಭಟ್‍ರ ಪಾತಾಳಪ್ರವೇಶ ಮಕ್ಕಳಿಗೆ ಅತ್ಯಂತ ಪ್ರಿಯವಾದ ಕೃತಿ. ಮಕ್ಕಳಿಗಾಗಿ ಜೂಲ್ಸ್ ವರ್ನೆಯ ಸಾಹಸಕಥೆಗಳಲ್ಲಿ ಕೆಲವನ್ನು ಭಾಷಾಂತರಿಸಿರುವರು.

ಈ ಸಂಸ್ಥೆಯ ಪ್ರಕಟಣೆಗಳಿಂದ ಸ್ಫೂರ್ತಿ ಪಡೆದ ಕವಿ ಝವೇರಚಂದ ಮೇಘಾನೀ (1900-50) ನಾನಾ ತಯಿ ನೇ (ನಾವು ಮಕ್ಕಳಿಗಾಗಿಯೇ ಇರೋಣ) ಎಂಬ ಸುಂದರ ಗೀತೆಗಳ ಸಂಕಲನ ಪ್ರಕಟಿಸಿದರು. ಚಾರಣಕನ್ಯ (ಚಾರಣ ಹುಡುಗಿ) ಶ್ರೇಷ್ಠ ಮಟ್ಟದ ಕವಿತೆ. ಇದು 12 ವರ್ಷದ ಬಾಲೆ ಗಿರ್ ಅರಣ್ಯದ ಸಿಂಹದೊಡನೆ ಯಶಸ್ವಿಯಾಗಿ ಹೋರಾಡಿದ ಕಥೆ. ಇವರು ಶಿವಾಜಿಯ ಬಗ್ಗೆ ರಚಿಸಿದ ಜೋಗುಳ ಇಂದಿಗೂ ಜನಪ್ರಿಯವಾಗಿದೆ. ಮನುಭಾಯಿ ಜೋಧಾನಿ ಗ್ರಾಮೀಣ ಕುಶಲಕರ್ಮಿಗಳ ಹಲವಾರು ಚಿತ್ರಣಗಳನ್ನು ನೀಡಿರುವರಲ್ಲದೆ ಮಕ್ಕಳ ಸಾಹಿತ್ಯದ ಅನೇಕ ಕೃತಿಗಳಿಗೆ ಸಂಪಾದಕರೂ ಆಗಿರುವರು.

ಕವಿ ಸುಂದರಮ್ (ತ್ರಿಭುವನದಾಸ್ ಲುಹರ್‍ರವರ ಕಾವ್ಯನಾಮ, ಜ. 1908) ಮಕ್ಕಳಿಗಾಗಿ ಹೆಚ್ಚಾಗಿ ರಚಿಸಿರದಿದ್ದರು ರಂಗವಾಡಲಿಯಾನ್ (ಓ, ವರ್ಣಮಯ ಮೇಘಗಳೇ) ಎಂಬ ಮಕ್ಕಳ ಕವನಗಳ ಸಂಕಲನ ಪ್ರಕಟಿಸಿ ಸುಪ್ರಸಿದ್ಧರಾಗಿರುವರು. ಈ ಸಂಕಲನದಲ್ಲಿಯ ಅನೇಕ ಹಾಡುಗಳನ್ನು ಮಕ್ಕಳು ಇಂದಿಗೂ ಹಾಡುತ್ತಿರುವರು. ಕವಿ ದುರ್ಗೇಶ ಶುಕ್ಲ (ಜ. 1907) ಮಕ್ಕಳಿಗಾಗಿ ಕೆಲವು ಉತ್ತಮ ನಾಟಕ ಹಾಗೂ ಕವಿತೆಗಳನ್ನು ರಚಿಸಿರುವರು.

ಈ ಕ್ಷೇತ್ರದಲ್ಲಿ ಹೆಸರು ಮಾಡಿರುವವರು ಎಂದರೆ ಜುಗುತರಾಮ ದವೆಯವರು. ಇವರು ದಕ್ಷಿಣ ಗುಜರಾತಿನಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪಿಸಿದರು. ಬಾಲಕೊನಾ ಬಾಪು (ಮಕ್ಕಳಿಗಾಗಿ ಬಾಪು, 1934) ಎಂಬ ಮಹಾತ್ಮಗಾಂಧಿಯವರ ಜೀವನಚರಿತ್ರೆ ರಚಿಸಿದ್ದಾರೆ. ಇದು ಹಲವು ಮುದ್ರಣಗಳನ್ನು ಕಂಡಿದೆ.

ದಕ್ಷಿಣ ಗುಜರಾತಿನವರಾದ ಹರಿಪ್ರಸಾದ ವ್ಯಾಸ (1916-80) ತಮ್ಮ ಹಾಸ್ಯ ಚತುರೋಕ್ತಿಗಳಿಗೆ ಪ್ರಸಿದ್ಧರು. ಅವರ ಬಕೊರ್ ಪಟೇಲ್ ಮತ್ತು ಷಕರಿ ಪಲಾಲಾನಿ (ಎರಡೂ ಅಂಕಿತನಾಮಗಳು) ಮಕ್ಕಳಿಗೆ ಅತ್ಯಂತ ಪ್ರಿಯವಾದ ಕಥೆಗಳಾಗಿವೆ. ಪಸಾಕಾಕಾ ಭೋಲಾವಾಶಂಕರ, ಹತಿಶಂಕರ್ ಮತ್ತು ಲಂಬೋದರ ಶರ್ಮಾ ಇವರ ಇತರ ಕೃತಿಗಳು. ಇದೇ ಕಾಲಕ್ಕೆ ಸೇರಿದ ಮತ್ತೊಬ್ಬರು ಪಾಂಡ್ಯ. ಇವರು ಹದಿನೈದು ವರ್ಷದವರಿದ್ದಾಗ ರಚಿಸಿದ ಮಕನಿಯೋ (ಅಂಕಿತನಾಮ) ಗಲಿಯರ ಬಹುಮಾನ ಪಡೆಯಿತು. ಪೂಲ್, ತಾರ, ಸರಣನ್ (ಪುಷ್ಪಗಳು, ತಾರೆಗಳು, ಕಿರುದೊರೆಗಳು) ಎಂಬ ಕವನ ಸಂಕಲನ 1979ರಲ್ಲಿ ಸಂಸ್ಕಾರ ಪ್ರಶಸ್ತಿ ಗಳಿಸಿತು. 1980ರಲ್ಲಿ ಬಾಲಕ್, ಮಾರಿ ದುನಿಯಾ (ಒಂದು ಮಗು ಓ. ನನ್ನ ಪ್ರಪಂಚ), ಎಂಬ ಕೃತಿ ಪ್ರಕಟಿಸಿದರು.

ರಮಣಲಾಲ ಸೊನಿ (ಜ. 1910) ಗದ್ಯ ಪದ್ಯಗಳೆರಡರಲ್ಲೂ ಮಕ್ಕಳಿಗಾಗಿ ಬರೆದಿರುವರು. ಐದು ದಶಕಗಳ ಸಾಹಿತ್ಯ ಸೇವೆಯಲ್ಲಿ ಮಕ್ಕಳಿಗಾಗಿ ಇವರು ಕೃತಿರಚನೆ ಮಾಡದಿರುವ ಸಾಹಿತ್ಯ ಪ್ರಕಾರವೇ ಇಲ್ಲ ಎನ್ನಬಹುದು. ಬಾಲಕೊ ನಾ ಗೀತೊ (ಮಕ್ಕಳಿಗಾಗಿ ಹಾಡುಗಳು, ಪಗಲೆನ್ (ಸಂ. 1-4, ಹೆಜ್ಜೆ ಗುರುತುಗಳು), ಮಗೊದಿನೊ ಪಿಪೂದಿವಲೊ (ಬ್ರೌನಿಂಗ್‍ನ ಪೈಡ್‍ಪೈಪರ್‍ನಂತೆ; ಮಗೊಡಿಯ ಕಿಂದರಿ ಜೋಗಿ), ಕಾಶಿನೋಪಂಡಿತ್ (ಕಾಶಿಯ ಪಂಡಿತ) ಮತ್ತು ಇನ್ನೂ ಅನೇಕ ಗೀತೆ ಕವನ ಸಂಕಲನಗಳಿವೆ. ರಮಣಲಾಲ ಸೊನಿಯನ ಬಾಲಕಾವ್ಯೋ ಎಂಬ ಕವನ ಸಂಕಲನ 1979ರಲ್ಲಿ ಪ್ರಕಟಗೊಂಡಿದೆ. ಗೀಜು ಭಾಯಿಯವರಂತೆ ಇವರೂ ತಮ್ಮ ವಸ್ತುವಿಷಯಗಳಾಗಿ ಪ್ರಾಣಿ ಪಕ್ಷಿ ಕೀಟಾದಿಗಳನ್ನು ಬಳಸಿಕೊಂಡಿರುವರು. ರವಿ, ಚಂದ್ರ, ತಾರೆ, ಸಾಗರ, ತರಂಗ, ನದೀನದಗಳ ಬಗ್ಗೆ ಹಾಡಿರುವರು. ಗುಜರಾತಿನ ಜನಪ್ರಿಯ ಜನಪದ ಕಥೆ ದಲತರವದಿಯನ್ನೂ ಆಧರಿಸಿ ಲಾವಣಿ ರಚಿಸಿರುವರು. ಆದರೆ ಪಗಲೇನ್ (ಸಂ 2) ರಲ್ಲಿ ಇರುವ ಸಿನ್ಹ್ ನಿ ಪರೋನದತ್ (ಸಿಂಹ ಮತ್ತು ಕರಡಿ) ಎಂಬ ಅವರ ಸ್ವಂತ ಲಾವಣಿ ಶಾಲಾ ಮಕ್ಕಳಿಗೆ ಅತ್ಯಂತ ಪ್ರಿಯವಾಗಿದೆ. ಸೊನಿಯವರ ಬಾಲ ಜಾಗರಣ (ಶಿಶುಗೀತೆಗಳು) ಮತ್ತು ಬಾಲನಾಟಕೋ ಇತರ ಜನಪ್ರಿಯ ಕೃತಿಗಳು. ಪಂಚತಂತ್ರ ಮತ್ತು ಹಿತೋಪದೇಶದ ಕಥೆಗಳಷ್ಟೇ ಇವರ ಕಥೆಗಳು ಜನಪ್ರಿಯವಾಗಿವೆ. ಗುಜರಾತಿನ ಮಕ್ಕಳ ಸಾಹಿತ್ಯದ ಪ್ರಮುಖರಲ್ಲಿ ಮತ್ತೊಬ್ಬರು ತ್ರಿಭುವನ ವ್ಯಾಸ. ಇವರ ಕೃತಿ ನವನ್ ಬಾಲ ಗೀತೋ (ಮಕ್ಕಳ ನವಗೀತೆಗಳು). ಕನ್ನಡದ "ಅಜ್ಜನ ಕೋಲಿದು ನನ್ನಯ ಕುದುರೆ"ಯನ್ನು ಹೋಲುವ ದಾದಾ ನೊ ದಂಗೊರೊ ಲಿದ್ದೋ ಎಂಬ ಇವರ ಗೀತೆ ಮಕ್ಕಳಿಗೆ ತುಂಬ ಪ್ರಿಯವಾಗಿದೆ.

ಮುಕುಲ್‍ಭಾಯ್ ಕಲರ್ತಿ, ನಟ್ವರಲಾಲ್ ಮಲವಿ, ರಮಣಲಾಲ್ ಷಾ, ಸೋಮಭಾಯಿ ಭರ್ಸರ್, ಬಾಲಮುಕುಂದದವೆ ವೇಣೀಭಾಯಿ ಪುರೋಹಿತ್, ಸೋಮಭಾಯಿ ಪಟೇಲ್, ನಾಗರದಾಸ್ ಪಟೇಲ್, ನಂಜುಕಲಾಲ್ ಚೋಕಾಶಿ, ಅಮೃತಲಾಲ್ ಪಡಿಯರ್, ಮಾಧವಜೀ ಪಟೇಲ್, ಕೇಶವಪ್ರಸಾದ ದೇಸಾಯಿ ದಯಾಲಜಿ ಗಣಚೋಡ್, ಜೀವರಾಯ್ ಜೋಷಿ ಮತ್ತು ಭರತ್‍ರಾಮ್ ಮೆಹ್ತ ಮಕ್ಕಳ ಸಾಹಿತ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಇತರರು.

ಸ್ವಾತಂತ್ರ್ಯಾನಂತರ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯ ಲೇಖಕರು ಹೊಸ ವಸ್ತುಗಳನ್ನು ಅರಸಲಾರಂಭಿಸಿದರು. ಅನೇಕವೇಳೆ ವೈe್ಞÁನಿಕ ವಸ್ತುವೇ ಪ್ರಧಾನವಾಗಿರುತ್ತಿತ್ತು. ಇದು ಮಕ್ಕಳಿಗೆ ಹೆಚ್ಚು ಪ್ರಿಯವಾಯಿತು. ಮನುಭಾಯಿ ಜೋಧಾನಿ, ಪಾದರ್ನಿ ವನಸ್ಪತಿ (ಪಟ್ಟಣದ ಸುತ್ತಮುತ್ತಣ ಸಸ್ಯಗಳು), ಅಂಗಣಾನಿ ವನಸ್ಪತಿ (ಅಂಗಳದಲ್ಲಿಯ ಸಸ್ಯಗಳು) ಮತ್ತು ವನವಗದಾನಾಸ್ಪಂಖಿಯೋ (ಅರಣ್ಯ ಪಕ್ಷಿಗಳು) ಇವನ್ನು ರಚಿಸಿದರು. ಮಾಧವ ಚೌಧರಿ ಔಷಧ ವಿಷಯಗಳ ಬಗ್ಗೆ ಮಕ್ಕಳಿಗೆ ಬೋಧಿಸಲು ಗಾಮದನಿ ವನಸ್ಪತಿ (ಗ್ರಾಮದ ಗಿಡಮೂಲಿಕೆಗಳು) ರಚಿಸಿದರು. ಪುಷ್ಕರ್ ಚಂದರವಕರ ವನ್ಯಜೀವಿಗಳ ಬಗ್ಗೆ ಕೆಲವು ಕಥೆಗಳನ್ನು ಬರೆದಿರುವರು.

ಗುಜರಾತ್ ವಿಶ್ವವಿದ್ಯಾಲಯದ ಉಷಾಜೋಷಿ ಮಕ್ಕಳಿಗಾಗಿ ಸಿ.ವಿ.ರಾಮನ್, ಹೋಮಿ ಭಾಭಾ, ವಿಕ್ರಮ್ ಸಾರಾಭಾಯ್‍ರ ಜೀವನಚರಿತ್ರೆಗಳನ್ನು ರಚಿಸಿರುವರು. ಜೀವನಚರಿತ್ರೆಗಳನ್ನು ರಚಿಸಿರುವವರಲ್ಲಿ ಧನ್ವಂತ್ ಓಜಾರೆಗೆ ಅಗ್ರಸ್ಥಾನ ಸಲ್ಲಬೇಕು. ಗುಜರಾತಿನ ನೂರಕ್ಕೂ ಹೆಚ್ಚು ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓಜಾ ಹೊರತಂದಿರುವರು. ಪ್ರಮುಖ ಕವಿ ಸುರೇಶ ದಲಾಲ್ ಜನಪ್ರಿಯವಾಗಿರುವ ಹಲವಾರು ಮಕ್ಕಳ ಕವಿತೆಗಳನ್ನು ರಚಿಸಿರುವರು. ದಲಾಲರ ಕವಿತೆಗಳು ಸಂಗೀತ ಬದ್ದವಾಗಿದ್ದು, ಕೆಲವು ನೃತ್ಯಗೀತೆಗಳೂ ಆಗಿವೆ.

ಮಕ್ಕಳಿಗಾಗಿ ರಚಿಸಲಾಗಿರುವ ನಾಟಕಗಳಲ್ಲಿ ಜನಪ್ರಿಯವಾಗಿರುವ ಕೃಷ್ಣಲಾಲರ (1911-60) ವದಲೊ (ಆಲದಮರ), ಸೂಣಪರಿ (ಸ್ವರ್ಣಕಿನ್ನರಿ) ಮತ್ತು ಇತರ ಮೂರು ನಾಟಕಗಳು ಇವೆ. ಸುಪ್ರಸಿದ್ಧ ನಾಟಕಕಾರ ನಟ ಮತ್ತು ರಂಗವಿಮರ್ಶಕ ಸಿ.ಸಿ. ಮೆಹ್ತ (ಜ. 1901) ಎಲ್ವಲ್-ಎಲ್ವಲ (ನೀರಸ) ಮತ್ತು ರಾಮಕುದನಿ ದುಕಾನ್ (ಬೊಂಬೆ ಅಂಗಡಿ) ಎಂಬ ನಾಟಕಗಳನ್ನು ಬರೆದಿರುವರು. ರಾಮಕುದನಿ ದುಕಾನ್ ಹಲವು ಸಲ ರಂಗಪ್ರಯೋಗಗೊಂಡಿದೆ. ಚಂದರವಕರ್ ಮಾಹಿನ ಒವರೇ (ಮಾಹೀ ನದಿಯ ದಡದ ಮೇಲೆ) ಎಂಬ ನಾಲ್ಕು ಏಕಾಂಕಗಳ ಸಂಗ್ರಹ ತಂದಿರುವರು. ಯಶವಂತ ಪಾಂಡ್ಯರ (1906-55) ಬಾಲನಾಟಕೋ ಸಹ ಪ್ರಸಿದ್ಧವಾಗಿದೆ. ಪ್ರಸಿದ್ಧ ಏಕಾಂಕ ನಾಟಕಕಾರ ಜಯಂತ ದಲಾಲ ವಿಶೇಷವಾಗಿ ಮಕ್ಕಳಿಗೆ ಹಲವು ನಾಟಕಗಳನ್ನು ರಚಿಸಿರುವರು. ರಂಗಲೀಲಾ ದಲಾಲ ವಿಶೇಷವಾಗಿ ಮಕ್ಕಳಿಗೆ ಹಲವು ನಾಟಕಗಳನ್ನು ರಚಿಸಿರುವರು. ರಂಗಲೀಲಾ ಅವುಗಳ ಪೈಕಿ ಒಂದು. ಶ್ರೇಯಸ್ ಮತ್ತು ಶಾರದಾ ಎಂಬ ಸಂಸ್ಥೆ - ಇವು ಪ್ರತಿವರ್ಷ ನಾಟಕಗಳನ್ನು ಆಡಿಸುವುವು.

ಸಂಸ್ಕøತ, ಇಂಗ್ಲಿಷ್, ಜರ್ಮನ್ ಮತ್ತು ರಷ್ಯನ್‍ನಿಂದಲೂ ಮಕ್ಕಳ ಸಾಹಿತ್ಯ ಕೃತಿಗಳು ಗುಜರಾತಿಗೆ ಭಾಷಾಂತರಗೊಂಡಿವೆ. ಆದರೆ ಗುಜರಾತಿಯ ಮಕ್ಕಳ ಸಾಹಿತ್ಯದಲ್ಲಿ ಸಾಹಸಕಥೆಗಳ ಹಾಗೂ ಪ್ರವಾಸ ಸಾಹಿತ್ಯದ ಕೊರತೆ ಇದ್ದೇ ಇದೆ.

ಈ ಶತಮಾನದ ಆದಿಭಾಗದಲ್ಲಿ ಮಕ್ಕಳ ಕಥೆಕವಿತೆಗಳಿಗೆ ಒಂದೆರಡು ಪುಟಗಳನ್ನು ಮೀಸಲಿಟ್ಟಿದ್ದ ಕೆಲವು ವಾರಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಇದ್ದರೂ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಪತ್ರಿಕೆ ಗುಜರಾತಿಯಲ್ಲಿ ಇರಲಿಲ್ಲ. ಮುಂಬಯಿಯ ಸಾಪ್ತಾಹಿಕ ಗುಜರಾತಿ ಮುಂಬಯಿಯ ದೈನಿಕಗಳಾದ ಮುಂಬಯಿ ಸಮಾಚಾರ್ ಹಾಗೂ ವಂದೇಮಾತರಮ್, ಅಹಮದಾಬಾದಿನ ಗುಜರಾತ್ ಸಮಾಚಾರ್ ಮಕ್ಕಳಿಗಾಗಿ ತಮ್ಮ ಸಾಪ್ತಾಹಿಕ ಪುರವಣಿಯಲ್ಲಿ ಕೆಲವು ಅಂಕಣಗಳನ್ನು ಮೀಸಲಿಟ್ಟಿದ್ದುವು. ಗುಜರಾತಿ ಸಾಹಿತ್ಯ ಕ್ಷೇತ್ರಕ್ಕೆ ಗೀಜುಭಾಯಿ ಪದಾರ್ಪಣ ಮಾಡಿದ ತರುವಾಯ ಬಾಲಮಿತ್ರ, ಬಾಲ ಜೀವನ (ರಮಣ್‍ಲಾಲ್‍ಷಾ, ಜ. 1910 ಮಾಸಪತ್ರಿಕೆ, ಬರೋಡ), ಗಾಂಡೀವ (ಸೂರತ್) ಪ್ರಕಟಗೊಳ್ಳಲಾರಂಭಿಸಿ ಪ್ರಕಟಗೊಂಡಿತು. ಮಹಾಪುರುಷರ ಜೀವನ, ಸಾಹಸಗಳು, ಪ್ರಾಣಿಕಥೆಗಳು ಹಾಗೂ ಹಾಡುಗಳಿಂದ ಅದು ಕೂಡಿದ್ದು, ಒಳ್ಳೆಯ ಮುದ್ರಣ, ಉತ್ತಮ ಚಿತ್ರಗಳಿಂದ ಜನಪ್ರಿಯವಾಯಿತು. ಸ್ತ್ರೀಬೋಧ ಮತ್ತು ಗುಣಸುಂದರಿ ಮಹಿಳಾ ನಿಯತ ಕಾಲಿಕೆಗಳಾಗಿದ್ದು, ಮಕ್ಕಳಿಗಾಗಿ ಕೆಲವು ಪುಟಗಳನ್ನು ಮೀಸಲಿಟ್ಟಿದ್ದುವು. ಸ್ತ್ರೀಜೀವನ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಬಾಲಸಂದೇಶ, ಜಗಮಗ (ಸ್ಥಾಪನೆ 1950) ಮತ್ತು ಪುಲ್‍ವಾಡಿ (ಸ್ಥಾಪನೆ 1960) ಎಂಬ ಮೂರು ಜನಪ್ರಿಯ ಸಾಪ್ತಾಹಿಕಗಳು ಪ್ರಕಟಗೊಳ್ಳುತ್ತಿವೆ. ಮದ್ರಾಸಿನ ಚಂದಮಾಮ 1940ರ ದಶಕದ ಅಂತ್ಯದಲ್ಲಿ ತನ್ನ ಗುಜರಾತಿ ಆವೃತ್ತಿ ಹೊರತಂದಿತು. ದೆಹಲಿಯ ಚಂಪಕ 1965ರಲ್ಲಿ ತನ್ನ ಗುಜರಾತಿ ಆವೃತ್ತಿ ತರಲಾರಂಭಿಸಿತು.

ಡೋಗ್ರಿ : ಈ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ಕಂಡುಬರುವುದಿಲ್ಲ. ಶ್ಯಾಮಲಾಲಶರ್ಮ ಸಾಕಷ್ಟು ಹಿಂದೆಯೇ ಭಾಗವತ ಮತ್ತು ಬೇತಾಳ ಪಂಚವಿಂಶತಿ ಕಥೆಗಳ ಅನುವಾದ ಮಾಡಿದರು. ಆದರೆ ಮಕ್ಕಳಿಗಾಗಿ ಡೋಗ್ರಿಯಲ್ಲಿ ಮೂಲಕಥೆಗಳನ್ನು ರಚಿಸಿಲಿಲ್ಲ. ನರೇಂದ್ರ ಖಜುರಿಯ ಮಕ್ಕಳಿಗಾಗಿ ಹಲವು ಏಕಾಂಕಗಳನ್ನು ರಚನೆ ಮಾಡಿರುವರು. ಇವನ್ನು "ಉಸ್ ಭಾಗ್ ಜಗಾನೇ ಅಲೇ ಆನ್" ಎಂಬ ಶೀರ್ಷಿಕೆಯಲ್ಲಿ ಸಂಕಲನ ಮಾಡಲಾಗಿದೆ. ಮಕ್ಕಳಿಗಾಗಿ ರೋಚಕ್ ಕಹಾನೀಯಾ (1962) ಎಂಬ ಸಣ್ಣ ಕಥೆಗಳ ಸಂಕಲನ ಸಹ ಪ್ರಕಟಿಸಿರುವರು. ಓಂ ಗೋಸ್ವಾಮಿ "ಡೋಗ್ರಿ ಬಾಲ ಏಕಾಂಕಿ" (1974) ಎಂಬ ಏಕಾಂಕಗಳ ಸಂಕಲನ ಹೊರ ತಂದಿರುವರು. "ಡೋಗ್ರಿ ಷಿರಾಜಾ"ದ (1979) ವಿಶೇಷಾಂಕ ಮಕ್ಕಳಿಗಾಗಿ ಜನಪದ ಗೀತೆಗಳು, ಕವಿತೆಗಳು, ಏಕಾಂಕ ನಾಟಕಗಳು, ಸಣ್ಣಕತೆಗಳು ಮತ್ತು ಪ್ರಹಸನಗಳನ್ನೊಳಗೊಂಡಿದೆ. ಡೋಗ್ರಿ ಸಂಸ್ಥೆ 1979ರಲ್ಲಿ ಮಕ್ಕಳಿಗಾಗಿ ಮಹಾಕಾವ್ಯಗಳ-ಫಿರ್ದೂಸಿಯ "ಷಾನಾಮಾ" (ಪರ್ಷಿಯನ್), ಹೋಮರನ "ದಿ ಇಲಿಯದ್" (ಗ್ರೀಕ್) ಮತ್ತು ವಾರಿಸ್‍ಷಾನ "ಹೀರ" (ಪಂಜಾಬಿ)-ಭಾಷಾಂತರವನ್ನು ಪ್ರಕಟಿಸಿದೆ. ಭಾಷಾಂತರವನ್ನು ರಾಮನಾಥಶಾಸ್ತ್ರಿ ಎಂಬಾತ ಮಾಡಿದ್ದಾರೆ.

ತಮಿಳು : ಈ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಕ್ರಿ.ಪೂ. 3ನೆಯ ಶತಮಾನದ ತೊಲ್ಕಾಪ್ಪಿಯಮ್‍ನಲ್ಲಿಯೇ ಕಂಡುಬರುತ್ತದೆ. ಅದರಲ್ಲಿ ಬರುವ ಪಿಚ್ಚಿಗಳು (ಒಗಟು) ಮಕ್ಕಳ ಸಾಹಿತ್ಯ ವರ್ಗಕ್ಕೆ ಸೇರಬಹುದಾದವು. ಅನಂತರದವು ಜನಪದ ಗೀತೆಗಳು. ಇಂಥ ಗೀತೆಗಳಲ್ಲಿ ಅತ್ಯುತ್ತಮವಾದವನ್ನು ಪ್ರಸಕ್ತ ಶತಮಾನದಲ್ಲಿ ಆಯ್ದು, ಸಂಗ್ರಹಿಸಿ, ಸಂಕಲಿಸಲಾಗಿದೆ. ಪ್ರಪ್ರಥಮವಾಗಿ ಇವನ್ನು ಕುಳಂದೈಗಳುಕ್ಕಾನ ನಾಡೋಡಿಪ ಪಾಡಿಲ್‍ಗಳ್ ಎಂಬ ಹೆಸರಿನಲ್ಲಿ ಆರ್. ಅಯ್ಯಾಸ್ವಾಮಿ ಪ್ರಕಟಿಸಿದರು. ಹಾಡಿನ ರೂಪದಲ್ಲಿ ನೀತಿಯನ್ನು ಸೂಚಿಸುವ ಕ್ರಮವೂ ಅಸ್ತಿತ್ವದಲ್ಲಿತ್ತು. 12ನೆಯ ಶತಮಾನದ ಅವ್ವಯ್ಯಾರ್ (ಆತಿ ಚೂಡಿ), 16ನೆಯ ಶತಮಾನದವರಾದ ಅತಿ ವೀರರುಮಪಾಂಡ್ಯನ್ (ವೆಟ್ರಿ ವೇರ್ಗೆ) ಮತ್ತು ಉಲಗನಾಥರ್ (ಉಲಗ ನೀತಿ) ಇವರ ಕೃತಿಗಳಲ್ಲಿ ನೀತಿಬೋಧಕ ಅಂಶಗಳಿದ್ದು, ಇವು ಸರ್ವರಿಗೂ ಅನ್ವಯವಾಗುತ್ತವೆ. ಇವನ್ನು ಮಕ್ಕಳಿಗೆ ಹೇಳಿಕೊಡುವ ಅಭ್ಯಾಸ ಸಾಗಿಬಂದಿದೆ. ಮಧ್ಯಕಾಲೀನ ಯುಗದಲ್ಲಿ ಮಕ್ಕಳ ಸಾಹಿತ್ಯದ ಕೆಲವು ತುಣುಕುಗಳು ಕಂಡುಬಂದುವಾದರೂ ವಾಸ್ತವವಾಗಿ ಮಕ್ಕಳ ಸಾಹಿತ್ಯ ಆರಂಭವಾದುದು ಸುಬ್ರಹ್ಮಣ್ಯ ಭಾರತಿ, ಕವಿಮಣಿ ದೇಶಿಕ ವಿನಾಯಕಮ್ ಪಿಳ್ಳೈ ಮತ್ತು ಭಾರತಿ ದಾಸನ್‍ರ ಆಗಮನದಿಂದಲೇ.

ಸುಬ್ರಮಣ್ಯ ಭಾರತಿ (1882-1921) ತಮ್ಮ ಪಾಪ್ಪ ಪಾಟ್ಟು ಎಂಬ ಉತ್ತಮ ಕವನದಲ್ಲಿ ಮಕ್ಕಳಿಗೆ ನೀತಿಯ ಬಗ್ಗೆ ಸೂಚಿಸಿರುವರು. ಇವರು ಈ ಕೃತಿಯನ್ನು e್ಞÁನಭಾನುವಿನಲ್ಲಿ 1915ರಲ್ಲಿ ಪ್ರಕಟಿಸಿದರು. ಇದು ಸರಳವಾಗಿದೆಯಾದರೂ ಅವ್ವಯ್ಯಾರ್ ಕೃತಿಗಳಂತೆ ನೀತಿಬೋಧಕವಾಗಿದೆ. ಮಕ್ಕಳು ಹಾಡಲು ಅನುಕೂಲವಾಗುವಂತೆ ಕವಿಮಣಿ ದೇಶಿಕ ವಿನಾಯಕಮ್ ಪಿಳ್ಳೈ (1876-1954) 1901ರಷ್ಟು ಹಿಂದೆಯೇ ಪದ್ಯಗಳನ್ನು ಬರೆದರು. ಈ ಶತಮಾನದಲ್ಲಿ ಮಕ್ಕಳಿಗಾಗಿ ರಚಿಸಲಾಗಿರುವ ಅಸಂಖ್ಯಾತ ಕವಿತೆಗಳಲ್ಲಿ ಕವಿಮಣಿಯವರ ಪಶುವುಮ್ ಕನ್ರುಮ್ ಪ್ರಮುಖವಾದುದು. ಮಕ್ಕಳ ಸಾಹಿತ್ಯದಲ್ಲಿ ಕಥನಗೀತೆಗಳಿಗೆ ಜೀವದುಂಬಿದ ಕವಿ ಕವಿಮಣಿ. ಇಂಗ್ಲಿಷಿನಿಂದ ತಮಿಳಿಗೆ ಹಲವಾರು ಪದ್ಯಗಳನ್ನು ಭಾಷಾಂತರಿಸಿದವರಲ್ಲಿ ಕವಿಮಣಿಗೇ ಅಗ್ರಸ್ಥಾನ. ಇವರ ಸಂಕಲಿತ ಕವನಸಂಗ್ರಹ ಇಳಮ್ ತೆನ್ರಾಲ್ (ತೆಂಕಣ ಮಂದಮಾರುತ) 1941ರಲ್ಲಿ ಪ್ರಕಟಗೊಂಡಿತು. ಭಾರತೀಯವರ ಶಿಷ್ಯ ಭಾರತಿದಾಸನ್ (1891-1964) ಮಕ್ಕಳಿಗೆ ಕೀರ್ತನೆಗಳನ್ನು ನೀಡಿದರು. ಇವನ್ನು ಇಶೈ-ಅಮುದು ಭಾಗಗಳ I ಮತ್ತು II ಮಾದರಿಯಾಗಿ ನೀಡಲಾಗಿದೆ. 134 ಕವಿತೆಗಳ ಇಳೈe್ಞÁರ್ ಇಳಕ್ಕಿಯಮ್ (ಯುವ ಸಾಹಿತ್ಯ) ಪ್ರಕಟಿಸಿದರು. ಇವರ ರಚನೆಗಳು ಸಂಸ್ಕøತ ಪದಗಳಿಂದ ಮುಕ್ತವಾಗಿವೆ.


ಮಕ್ಕಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಲೆಂದೇ ರಚಿಸಿದ ಕೆಲವು ಪದ್ಯಗಳಿಂದ ಕೆಲವು ಕವಿಗಳು ಪ್ರಖ್ಯಾತರಾದರು. ಸಿ.ಆರ್. ನಮಶ್ಯಿವಾಯ ಮುದಲಿಯಾರ್ (1876-1936), ಮಣಿ ತಿರುನಾವಕ್ಕರಸು, ಮಯಿಲೈ ಶಿವಮುತ್ತು (1892-1968) ಇಂಥವರಲ್ಲಿ ಕೆಲವರು. ಶಾಲಾ ಪುಸ್ತಕಗಳಲ್ಲಿ ಮಕ್ಕಳಿಗಾಗಿ ಹೊಸ ಕಥನ ಕವಿತೆಗಳನ್ನು ಸೇರಿಸಿದವರಲ್ಲಿ ನಮಶ್ಯಿವಾಯ ಮುದಲಿಯಾರ್ ಮೊದಲಿಗರು. ಅವರ ಕಿರುಕವನಗಳು ಸರಳವೂ ಮನೋಹರವೂ ಆಗಿದ್ದುವು. "ಅಪ್ಪಾ ವೈಪೋಲ್ ನಾನ್ ಆನಾಲ್..." ಮತ್ತು "ಪಿಟ್ಟು"- ಇವು ಶಿವಮುತ್ತುರವರ ರಚನೆಗಳ ಪೈಕಿ ಪ್ರಸಿದ್ಧವಾದವು. ಇವರು ಮಕ್ಕಳಿಗಾಗಿ ಕಥೆಗಳನ್ನೂ ಬರೆದಿರುವರು.

ಮಕ್ಕಳಿಗಾಗಿಯೇ ಕವಿತೆಗಳನ್ನು ರಚಿಸುವ ವಳ್ಳಿಯಪ್ಪ (ಜ. 1922) ಕುಳಂದೈ ಕವಿಙ್ಗರ್ ಎಂದು ಪ್ರಖ್ಯಾತರಾಗಿರುವರು. ಮಲರಮ್ ಉಳ್ಳಮ್ (ಅರಳುವ ಹೃದಯ, ಭಾಗ 1) ತುಂಬ ಮಾರಾಟವಾದ ಕೃತಿ. ವಳ್ಳಿಯಪ್ಪನವರ ಸುಪ್ರಸಿದ್ಧ ಕವನಗಳಾದ ವಟ್ಟಮಾನಕತಟ್ಟು (ವೃತ್ತಾಕಾರದ ತಟ್ಟೆ) ಮತ್ತು ಕಣ್ಣನ್ ಎಂಗಳ್ ಕಣ್ಣನ್ ಇವನ್ನು ಅರಿಯಲು ತಮಿಳು ಮಕ್ಕಳಿಲ್ಲ. ಈಸೋಪ್ಸ್ ಫೇಬಲ್ಸ್‍ಗಳನ್ನು ಭಾಷಾಂತರಿಸಿ, ಮಕ್ಕಳಿಗಾಗಿ ಪದ್ಯರೂಪದಲ್ಲಿ ತಂದರು. ಗಾಂಧೀಜಿಯವರ ಜೀವನದ ಬಗ್ಗೆ ಬರೆದಿರುವ ಇವರ ಕವನ ಪ್ರಸಿದ್ಧವಾಗಿದೆ. ಕಾದಂಬರಿ ಮತ್ತು ಜೀವನಚರಿತ್ರೆಗಳನ್ನೂ ರಚಿಸಿರುವರು.

ವಾನುಲಿ ಅಣ್ಣ ಎಂದೇ ಖ್ಯಾತರಾಗಿರುವ ಆರ್. ಅಯ್ಯಾಸಾಮಿ (1912-80) ಬಲು ದೀರ್ಘಕಾಲ ಮದರಾಸು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿದ್ದರು. ಮಕ್ಕಳಿಗಾಗಿ ಪದ್ಯಗಳನ್ನು ಬರೆದರು. ತಮ್ಮ ಖ್ಯಾತ ಕೃತಿ ಇದಯ ಚುವಡಿಯಲ್ಲಿಯೂ (1975) ಮಕ್ಕಳಿಗಾಗಿ 30 ಪದ್ಯಗಳನ್ನು ಸೇರಿಸಿರುವರು. ಅಯ್ಯಾಸಾಮಿ ವಿರಚಿತ ಬಾಲ ರಾಮಾಯಣಮ್ ತಮಿಳಿನ ಮಕ್ಕಳ ಸಾಹಿತ್ಯದಲ್ಲಿ ಪ್ರಥಮ ಮಹಾಕಾವ್ಯ. ಇದು ಸಾಹಿತ್ಯ ಬಾನುಲಿ ಪ್ರಸಾರ ಹಾಗೂ ರಂಗಕ್ಷೇತ್ರಗಳಲ್ಲಿ ಅಪೂರ್ವ ಯಶಸ್ಸುಗಳಿಸಿದೆ. ಇದಲ್ಲದೆ ಅವರು ಸಿರುವರ್ ಶಿಲಂಬು ಮತ್ತು ಮೋಹನ ಗಾಂಧಿ ಎಂಬ ಮಹಾಕೃತಿಗಳನ್ನು ಮಕ್ಕಳಿಗಾಗಿ ರಚಿಸಿರುವರು. ಮಕ್ಕಳಿಗಾಗಿ ಬರೆಯುವ ನೂರಾರು ಕವಿಗಳಿದ್ದಾರೆ. ಈ ತನಕ ಮಕ್ಕಳಿಗಾಗಿ ಸುಮಾರು 300 ಕವನ ಸಂಕಲನಗಳು ಪ್ರಕಟವಾಗಿವೆ. ಕೆಲವು ಹೊಸ ರೀತಿಯವಾಗಿವೆ. ರಾಜಮ್ ಸೀತಾರಾಮನ್‍ರ ಬಾಲರ್ ಇಯರ್‍ಕೈ ಪಾಡಲ್ ನಲ್ಲಿ (ಮಕ್ಕಳಿಗೆ ಪ್ರಕೃತಿ ಗೀತೆಗಳು) ಚಿತ್ರಗಳ ಬದಲಿಗೆ ಛಾಯಚಿತ್ರಗಳ ಸಂಕಲನವೇ ಇದೆ. ವಿ.ಅರ್.ಶಿವe್ಞÁನ ಪಿಳ್ಳೈಯವರ ಕುಳುಂದೈಹಳುಕ್ಕು ಅಣ್ಣ (ಮಕ್ಕಳಿಗಾಗಿ ಅಣ್ಣರ ಪದ್ಯಗಳು)- ಸಿ.ಎನ್.ಆಣ್ಣಾದೊರೈಯವರ ಬಗ್ಗೆ ಪದ್ಯಗಳನ್ನೊಳಗೊಂಡಿದೆ. ಸೋಮಸುಂದರಮ್‍ರವರ ಸಿರುವರುಕ್ಕು ವಿe್ಞÁನಮ್ (ಕಿರಿಯವರಿಗಾಗಿ ವಿe್ಞÁನ) ವೈe್ಞÁನಿಕ ಆವಿಷ್ಕಾರಗಳನ್ನು ಕುರಿತು ಕವಿತೆಗಳನ್ನು ಒಳಗೊಂಡಿದೆ. ಪಿರೈ ಅಣಿವೋನ್ ಅರಿವು ಕೇಳಿವಿಹಳ್ (ಕ್ವಿಜ್) ವಿe್ಞÁನ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಒಳಗೊಂಡ ಕವಿತಾಸಂಕಲನವಾಗಿದೆ. ಪಿ.ವಿ.ಮುತ್ತುಕೃಷ್ಣನ್‍ರ ಸಿರುವರ್ ಉಲಗಮ್ (ಮಕ್ಕಳ ಪ್ರಪಂಚ) ದೇಶ ವಿದೇಶಗಳ ಮಕ್ಕಳ ಜೀವನದ ಬಗ್ಗೆ ಕವಿತೆಗಳನ್ನು ಒಳಗೊಂಡಿದೆ. ಕೆ.ಎಸ್.ಲಕ್ಷ್ಮಣನ್‍ರ ಎರಡು ಸಂಕಲನಗಳು: ಪಾಪಾವುಕ್ಕು ಮಿರುಂಗಗಳ್ (ಮಕ್ಕಳಿಗಾಗಿ ಪ್ರಾಣಿಗಳು) ಮತ್ತು ಪಾಪಾವುಕ್ಕು ಪರ್‍ವೈಗಳ್ (ಮಕ್ಕಳಿಗಾಗಿ ಪಕ್ಷಿಗಳು) ಕೆ.ಸುಧಾರವರ ಬಾಲರ್ ಪಾಡಲ್‍ನಲ್ಲಿ ಷೇಕ್‍ಸ್ಪಿಯರ್, ಇಂಗರ್ಸಾಲ್, ಪುಷ್ಕಿನ್ ಮೊದಲಾದ ಐವತ್ತೈದು ಶ್ರೇಷ್ಠರ ಜೀವನಚರಿತ್ರೆ ಇದೆ. ಮತಿ ಓಳಿಯ ಇಳಮ್ ತಳಿರ್ಗಳ್ (1979, ಚಿಗುರು ರೆಂಬೆಗಳು) ಗಿಡಮರಗಳ ಎಲೆಗಳ ಬಗ್ಗೆ ವಿವರಿಸುತ್ತದೆ. ಷಣ್ಮುಖ ಸುಬ್ಬಯ್ಯ ಅವರ ಕಣ್ಣನ್ ಎನ್ ತಂಬಿ ನವ್ಯ ಕವಿತಾ ಸಂಕಲನವಾಗಿದೆ. ಪೆರಿಯಸಾಮಿ ತೂರಾನ್ ತನಿಗೈ ಉಲಗನಾಥನ್ ತಮಿಳ್ ಓಳಿ, ನಾಗಮುತ್ತಯ್ಯ, ಪೂವಣ್ಣನ್, ತಂಬಿ ಶ್ರೀನಿವಾಸನ್ ಈ ಕ್ಷೇತ್ರದ ಇತರ ಪ್ರಮುಖರು.

ಮಕ್ಕಳಿಗಾಗಿ ಪ್ರಪ್ರಥಮವಾಗಿ ಸಂಗ್ರಹಿಸಿ, ಪ್ರಕಟಿಸಿದ ಕಾವ್ಯಮಂಜರಿ ಶ್ರೀಲಂಕಾದಿಂದ ಬಂತು. 12 ಜನ ಕವಿಗಳು ರಚಿಸಿದ 74 ಕವನಗಳ ಸಂಕಲನ ಪಿಳ್ಳೈಪಾಟ್ಟು 1935ರಲ್ಲಿ ಪ್ರಕಟಗೊಂಡಿತು. ಪೂವಣ್ಣನ್ ಮತ್ತು ಅಯ್ಯಸ್ವಾಮಿ ಮಕ್ಕಳಿಗಾಗಿ ಮೊದಲಬಾರಿಗೆ ಕಾವ್ಯಮಂಜರಿಯನ್ನು ಸಂಕಲಿಸಿ ಮುತ್ತು ಕವಿಯಲ್- (ಮುತ್ತಿನ ರಾಶಿ) 1870ರಲ್ಲಿ ಪ್ರಕಟಿಸಿದರು. ಅನಂತರದಲ್ಲಿ ವಳ್ಳಿಯಪ್ಪ ಕುಳಂದೈಗಳುಕ್ಕು ಕದೈಪಾಡಲ್ಗಳ್ ಅನ್ನು (ಮಕ್ಕಳಿಗಾಗಿ ಕಥನ ಕವನಗಳು) 1978ರಲ್ಲಿ ಪ್ರಕಟಿಸಿದ್ದಾರೆ.

ತಮಿಳುನಾಡಿನಲ್ಲಿ ಈ ತನಕ ಮಕ್ಕಳಿಗಾಗಿ ಪ್ರಕಟಗೊಂಡಿರುವ ಕೃತಿಗಳ ಪೈಕಿ ಕಥೆಗಳದೇ ಸಿಂಹಪಾಲು. ಜನಪದದಲ್ಲಿ ಮಕ್ಕಳಿಗಾಗಿ ಕಥೆಗಳಿವೆ. ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ಕಥೆ ಹೇಳುವ ಪರಿಪಾಠ ಇದ್ದೇ ಇದೆ. ಆದ್ದರಿಂದಲೇ ಇವನ್ನು ಪಾಟ್ಟಿ ಕಥೈ ಎಂದು ಕರೆಯುವರು. ವೀರಮಾಮುನಿವರ್ (1680-1746) ಅವಿವೇಕ ಪರಮಾರ್ಥ ಗುರುಕಥೈ ಬರೆದರು (ಇದು ಕನ್ನಡದ ಗಾಂಪರೊಡೆಯರ ಕಥೆಯನ್ನು ಹೋಲುವಂತಿದೆ). ಇದರಲ್ಲಿಯ ಹಾಸ್ಯ ಮಕ್ಕಳಿಗೆ ಪ್ರಿಯವಾಗಿದೆ.

ಮಕ್ಕಳಿಗಾಗಿ ಸಣ್ಣಕಥೆಗಳ ಕ್ಷೇತ್ರದಲ್ಲಿ ಸಿ.ಆರ್. ನಮಶ್ಶಿವಾಯ ಮುದಲಿಯಾರರ ಮಾರ್ಗದರ್ಶಕದಲ್ಲಿ ಕುಮಾರಸ್ವಾಮಿ ನಾಯ್ಡು ಅಂಡ್ ಸನ್ಸ್‍ರವರ ಸೇವೆ ಅಮೂಲ್ಯವಾದುದು. ಜನಪದವನ್ನು ಮಕ್ಕಳಿಗಾಗಿ ಪುನರ್ ನಿರೂಪಿಸಿದ ಗಣ್ಯರು ಹಲವರು. ವೈ. ಗೋವಿಂದನ್ ಜನಪದ ಕಥೆಗಳನ್ನು ಆರಿಸಿಕೊಂಡು ಮಕ್ಕಳ ನಿಯತಕಾಲಿಕೆ ಅನಿಲ್‍ನಲ್ಲಿ ಪುನರ್‍ನಿರೂಪಿಸಿದರು. ಪಿ.ಆರ್.ರಾಜಚೂಡಾಮಣಿ ಜನಪದ ಕಥೆಗಳನ್ನು ಬರೆದುದಲ್ಲದೆ, ಇಂಗ್ಲಿಷಿನಿಂದ ಕೆಲವನ್ನು ಅನುವಾದಿಸಿ ನಿಯತಕಾಲಿಕೆಗಳು ಹಾಗೂ ಕಿರುಹೊತ್ತಗೆಗಳಲ್ಲಿ ಪ್ರಕಟಿಸಿದರು ಕೂಡ. ಹಾಡು, ಕಥೆ ಸಮೃದ್ಧವಾಗಿರುವ ಇವುಗಳ ಪೈಕಿ ಎನ್ ಪೆಯರ್ ಎನ್ನ? ತುಂಬ ಪ್ರಸಿದ್ಧವಾಗಿದೆ. ಆಂಡರ್ಸನ್ನರ ಮತ್ತು ಗ್ರಿಮ್‍ರ ಅದ್ಭುತ ಕಥೆಗಳು ತಮಿಳಿಗೆ ಭಾಷಾಂತರಗೊಂಡಿವೆ. ಇವುಗಳಲ್ಲಿ ವಿಶೇಷವಾಗಿ ಉಲ್ಲೇಖಾರ್ಹವಾದವು. ಟಿ.ಜೆ. ರಂಗನಾಥನ್‍ರ (1901-74) ರೋಜಾಪೆಣ್ ಪಿ. ತೂರಾನ್‍ರ (ಜ. 1908) ಓಲೈಕ್ಕಿಳಿ, ಪಿ. ರಾಮಸ್ವಾಮಿಯವರ ಅನ್ನಪರವೈಗಳ್ (ಹಂಸಗಳು), ತಂಬಿ ಶ್ರೀನಿವಾಸನ್‍ರ ಎಟ್ಟು ದಿಕ್ಕು ಕಥೈಗಳ್ (ಅಷ್ಟ ದಿಕ್ಕುಗಳ ಕಥೆಗಳು), ವಂದು ಮಾಮರ ಉಲಗ ಕಥೈಗಳ್, ಕಲ್ವಿ ಗೋಪಾಲಕೃಷ್ಣರ ಬಾಲರ್ ಕಥೈಕಳಂಜಿಯಮ್ (ಮಕ್ಕಳಿಗಾಗಿ ಕಥಾನಿಧಿ), ಪಿ. ತೂರಾನ್‍ರ ಮಾಯಕ್ಕಳನ್ ಬನಿಯನ್‍ನ ಪಿಲಿಗ್ರಿಮ್ಸ್ ಪ್ರೊಗ್ರೆಸ್ ಮಾದರಿಯಲ್ಲಿದೆ. ಇದನ್ನು ಆಕಾಶವಾಣಿ ಮಕ್ಕಳಿಗಾಗಿ ಪ್ರಸಾರಮಾಡಿದೆ. ಮಕ್ಕಳ ಐತಿಹಾಸಿಕ ಕಾದಂಬರಿ ಕ್ಷೇತ್ರದಲ್ಲಿ ರೇವತಿಯವರಿಗೆ ಅಗ್ರಸ್ಥಾನ ಸಲ್ಲುತ್ತದೆ. ಗೂಢಚಾರರ ಕಥೆಗಳೆಂದರೆ ಮಕ್ಕಳಿಗೆ ಬಲುಪ್ರಿಯ. ಜ್ಯೋತಿರ್ಲತ ಗಿರಿಜಾರವರ ವನಜಾವಿನ್ ಅಣ್ಣನ್, ಮನ ಅರಂಗಸಾಮಿಯವರ ಸಿ.ಐ.ಡಿ. ಸಿರುವರ್ಗಳ್ ಮತ್ತು ತುಮಿಲನರ ಸಿ.ಐ.ಡಿ. ಸಿರುವರ್ಗಳ್ (ಗುಪ್ತಚಾರ ಮಕ್ಕಳು) ಉಲ್ಲೇಖಾರ್ಹ ಕೃತಿಗಳು. ಮಕ್ಕಳಿಗಾಗಿ ರಚಿತವಾಗಿರುವ ಪ್ರಮುಖ ಕಾದಂಬರಿಗಳು: ಅಲ್‍ವಳ್ಳಿಯಪ್ಪನವರ ಬರ್ಮಾರಮಣಿ, ಎನ್.ಸಿ. ದೈವಶಿಖಾಮಣಿಯವರ ಪರಮನ್ ಅರುಳ್, ಜೆ. ಯತಿರಾಜನ್‍ರ ನೀಲಮಲೈ ಮೇಲೆ, ಭುವನೈ ಕಲೈ ಚೆಲಿಯನ್‍ರ ನಟೆ ಶನ್ ಎನ್‍ನನ್ಬನ್, ಕೆ. ಜಯಲಕ್ಷ್ಮಿಯವರ ಅನ್ಬಿನ್ ವಲಿಮೈ, ಪೂವೈ ಅಮುದನ್‍ರ ಬಾಲಚಂದ್ರು.

ಮಕ್ಕಳಿಗಾಗಿ ಲೇಖಕರ ಸಂಘ ಹಾಗೂ ನಿಯತಕಾಲಿಕೆ, ಕಣ್ಣನ್ ವ್ಯವಸ್ಥೆಗೊಳಿಸಿದ "ಕಾದಂಬರಿ ಸ್ಪರ್ಧೆ" ಈ ಕ್ಷೇತ್ರಕ್ಕೆ ಹಲವು ಉದಯೋನ್ಮುಖ ಲೇಖಕರನ್ನು ಆಕರ್ಷಿಸಿತು. ದೇಶದ ಇತರ ಭಾಷೆಗಳಂತೆ ತಮಿಳಿನಲ್ಲಿಯೂ ಮಕ್ಕಳಿಗಾಗಿ ಇಂಗ್ಲಿಷಿನಿಂದ ಕಥೆಗಳನ್ನು ಭಾಷಾಂತರಿಸುವ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಟಿ.ಜೆ. ರಂಗನಾಥನ್ ಆಲಿಸ್ ಇನ್ ವಂಡರ್‍ಲ್ಯಾಂಡ್ ಅನ್ನು ತಮಿಳಿನಲ್ಲಿ ಅಲಮುವಿನ್ ಅದಿಸಯ ಉಲಗಮ್ ಎಂಬ ಹೆಸರಿನಲ್ಲಿ ಭಾಷಾಂತರಿಸುವರು. ಅಡ್ವೆಂಚರ್ಸ್ ಆಫ್ ಪಿನೋಕಿಯೊವನ್ನು ನಾಗಮುತ್ತಯ್ಯ ಮರಪಾಚ್ಚಿಯೆನ್ ಕದೈ (ಬೊಂಬೆಯ ಕಥೆ) ಎಂದು ಭಾಷಾಂತರಿಸಿರುವರು. ವಿದೇಶೀ ಭಾಷೆಗಳ ಸುಪ್ರಸಿದ್ಧ ಕಾದಂಬರಿಗಳು ತಮಿಳಿನಲ್ಲಿ ಅನುವಾದಗೊಳ್ಳುತ್ತಿವೆ. ಮಕ್ಕಳಿಗಾಗಿ ರಚಿಸುವ ಕಾದಂಬರಿಗಳಿಗೆ ಹೆಚ್ಚು ಪ್ರೋತ್ಸಾಹವಿದೆ.

ಮಕ್ಕಳ ನಾಟಕಗಳ ಉಗಮ ಶಾಲೆಗಳಲ್ಲಿ; ಅವೇ ಇವಕ್ಕೆ ಪ್ರಧಾನ ಪೋಷಣೆ ನೀಡುವ ಸಂಸ್ಥೆಗಳು. ಶಾಲಾ ವಾರ್ಷಿಕೋತ್ಸವಗಳು ಮತ್ತು ಇತರ ಸಾಂಸ್ಕøತಿಕ ಕಾರ್ಯಕ್ರಮಗಳು ನಾಟಕ ಪ್ರದರ್ಶನಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿದ್ದುವು. ಮೊದಲಿಗೆ ಪೌರಾಣಿಕ ವಿಷಯಗಳ ನಾಟಕಗಳಿಗೆ ಪ್ರಾಧಾನ್ಯವಿತ್ತು. ಈಚೆಗೆ ಆಧುನಿಕ ವಿಷಯಗಳನ್ನು ಆಧರಿಸಿದ ಆಧುನಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಶಾಲಾ ಉಪಾಧ್ಯಾಯರಾದ ಶಾಂತಲಕ್ಷ್ಮಿ ಮತ್ತು ಕೆ.ಎಂ. ಭಕ್ತವತ್ಸಲಮ್ ಮಕ್ಕಳಿಗಾಗಿ ಉತ್ತಮ ನಾಟಕಗಳನ್ನು ರಚಿಸಿದ್ದಾರೆ. ಶಾಂತಲಕ್ಷ್ಮಿಯವರ ಪಿಚ್ಚೈಕಾರರಾಜ ಎಂಬ ನಾಟಕದಲ್ಲಿ ಗೀತನರ್ತನಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಭಕ್ತವತ್ಸಲಮ್‍ರ ನಾಟಕಗಳಲ್ಲಿ (ರಾಣಿ ಮಂಗಮ್ಮ; ಅಶೋಕನ್) ಸಂಭಾಷಣೆಗೆ ಪ್ರಾಧಾನ್ಯ ನೀಡಲಾಗಿದೆ.

ಮದರಾಸು ಮತ್ತು ತಿರುಚಿ ಆಕಾಶವಾಣಿ ಕೇಂದ್ರಗಳು ಮಕ್ಕಳ ನಾಟಕಗಳಿಗೆ ಪ್ರಾಧಾನ್ಯ ನೀಡಿದುವು. ಮದರಾಸು ಆಕಾಶವಾಣಿಯ ಆರ್. ಅಯ್ಯಸ್ವಾಮಿ ಮಕ್ಕಳಿಗಾಗಿ ಉತ್ತಮ ನಾಟಕಗಳ ಪ್ರಸಾರ ಮಾಡುತ್ತಿದ್ದರು. ಮದರಾಸಿನಲ್ಲಿ ಮಕ್ಕಳ ನಾಟಕ ಪ್ರಸಾರಕ್ಕಾಗಿ ಕೃತಿರಚನೆ ಮಾಡಿದವರಲ್ಲಿ ಕೂತ್ತಪ್ಪಿರಾನ್, ತನಿಗೈ ಉಲಗನಾಥನ್, ಸೌಂದರ್ (ಎಸ್. ಸೌಂದರ್‍ರಾಜನ್), ಜಿ. ಕಾರ್ತಿಕೇಯನ್ ವಿಶೇಷವಾಗಿ ಉಲ್ಲೇಖಾರ್ಹರು. ಕೂತ್ತಪ್ಪಿರಾನ್ ಮಕ್ಕಳಿಗಾಗಿ 200ಕ್ಕೂ ಹೆಚ್ಚಿನ ನಾಟಕಗಳನ್ನು ರಚಿಸಿರುವರು. ಸುರುಕ್ಕು ಪೈ ಮತ್ತು ಸ್ವಪ್ನ ಕುಳಂದೈ (ಕನಸಿನ ಮಕ್ಕಳು) ಈ ಎರಡು ನಾಟಕಗಳು ಮದರಾಸು ಆಕಾಶವಾಣಿಯಲ್ಲಿ ಮಾಲೆಯಾಗಿ ಪ್ರಸಾರಗೊಂಡವು. ತನಿಗೈ ಉಲಗನಾಥನ್ ಮಕ್ಕಳಿಗಾಗಿ ನಾಟಕಗಳನ್ನು ಬರೆಯುವುದಷ್ಟರಿಂದಲೇ ತೃಪ್ತರಾಗದೆ, ಅವುಗಳ ರಂಗಪ್ರಯೋಗಕ್ಕೂ ನೆರವಾಗಿರುವರು. ಸಿರುವರ್ ನಾಟಕವಿರುಂದು ಮತ್ತು ವಳನಾಡುಮ್ ಇಳಮ್ ಕನ್ರುಮ್ ಇವೆರಡು ಅವರು ಪ್ರಕಟಿಸಿರುವ ಮಕ್ಕಳ ನಾಟಕ ಸಂಗ್ರಹಗಳು, ಎಲಿ ವೇಟ್ಟೈ ನಾಟಕಕ್ಕೆ ಅವರಿಗೆ ದಿ ಪೈಡ್ ಪೈಪರ್ ಆಫ್ ಹ್ಯಾಮಿಲನ್ ಸ್ಫೂರ್ತಿ ನೀಡಿದೆ. ಪೂವಣ್ಣನ್ (ಜ. 1932) ಊನ್ದುಕೋಲ್ ಮತ್ತು ಅನ್ಬಿನ್ ನಿಲಯಮ್ ಮುಂತಾದ ನೂರಕ್ಕೂ ಹೆಚ್ಚು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿರುವರು. ವೆಟ್ಟಿ ಎಂಗಳ್ ಕೈಯಿಲೇ ಮತ್ತು ನೌಂಗಳ್ ನಲ್ಲವರ್ಗಳ್ ಮೊದಲಾದ ನಾಟಕಗಳನ್ನು ರಚಿಸಿ, ಪ್ರಕಟಿಸಿರುವ ಆಲಂದೂರು ಮೋಹನರಂಗಮ್ ಉತ್ತಮವಾದ ಮಕ್ಕಳ ನಾಟಕಕಾರರು. ಇವರ ಪೊಯ್ಯೇ ನೀ ಪೋಯ್ವಿಡು ಗೀತನಾಟಕ.

ಮಕ್ಕಳಿಗಾಗಿ ಮೂರುಗಂಟೆಗಳ ಪೂರ್ಣಾವಧಿ ನಾಟಕವನ್ನು ಮೊತ್ತಮೊದಲ ಬಾರಿಗೆ ರಚಿಸಿ, ಪ್ರಕಟಿಸಿದವರು ತಿರುಚಿ ಭರತನ್. ಅವರ ನಾಟಕಗಳಾದ ಅಪ್ಪಾವಿನ್ ಆಸೈ ಮತ್ತು ಪಲಾಪ್ಪಳಮ್ (ಹಲಸಿನಹಣ್ಣು) ಇವನ್ನು ಟಿ.ಕೆ.ಎಸ್. ಸೋದರರು 1965 ಮತ್ತು 1967ರಲ್ಲಿ ತಮಿಳುನಾಡಿನಾದ್ಯಂತ ಪ್ರದರ್ಶಿಸಿದರು. ತಂಬಿ ಶ್ರೀನಿವಾಸನ್‍ರವರ ತಂಗ ಕುಳೆಂದೈಗಳ್ (ಒಳ್ಳೆಯ ಮಕ್ಕಳು, 1959) ಎಂಬ ನಾಟಕಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಮಕ್ಕಳ ಲೇಖಕರ ಸಂಘ 1955ರಲ್ಲಿ ಮಕ್ಕಳಿಗಾಗಿ ನಾಟಕ ರಚನೆಗೆ ಸ್ಪರ್ಧೆ ಏರ್ಪಡಿಸಿತು. ಪೂವಣ್ಣನ್‍ರವರ ಉಪ್ಪಿಲ್ಲಾದ ಪಣ್ಣಮ್ ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇದೇ ಸಂಘ ಏರ್ಪಡಿಸಿದ ಮಕ್ಕಳ ನಾಟಕೋತ್ಸವದಲ್ಲಿ ಆರು ನಾಟಕಗಳು ಪ್ರದರ್ಶನಗೊಂಡವು (1955). ಕೊತ್ತಪ್ಪಿರಾವ್‍ನ ಅಣ್ಣೈ ಶೊಲ್ ಅಮೃತಮ್ ಬಹುಮಾನ ಪಡೆಯಿತು. ಮೂರು ವರ್ಷಗಳಿಗೊಮ್ಮೆ ಇಂಥ ಸ್ಪರ್ಧೆಯನ್ನು ಈ ಸಂಘ ಏರ್ಪಡಿಸುತ್ತಿದೆ. 1975ರಲ್ಲಿ ಪ್ರಾರಂಭಗೊಂಡ ಮದ್ರಾಸು ದೂರದರ್ಶನ ಕೇಂದ್ರ "ಕಣ್ಮಣಿಪೂಂಗಾ" ಕಾರ್ಯಕ್ರಮದಲ್ಲಿ ಪ್ರಸಾರ ಮಾಡುವುದರ ಮೂಲಕ ನಾಟಕ ರಚನೆಗೆ ಪ್ರೋತ್ಸಾಹ ನೀಡುತ್ತಿದೆ.

ಸುಮಾರು 1887ರಲ್ಲಿ ಮದ್ರಾಸಿನ ಶಾಲಾಸಂಘಗಳ ಸಂಘ ಮಕ್ಕಳ ಸಾಮಾನ್ಯ e್ಞÁನ ಉತ್ತಮಪಡಿಸಲು ಹಲವಾರು ಪುಸ್ತಕಗಳನ್ನು ಪ್ರಕಟಿಸಿತು. ಒರುಯಾನೈಯಿನ್ ಸರಿತ್ತಿರಮ್, ಮರತ್ತಿನ್ ಫಳಂ ಏನ್ ಕೀಳೆ ವಿಳು ಹಿರಿದು ಇವು ಸುಪ್ರಸಿದ್ಧ ಕೃತಿಗಳ ಪೈಕಿ ಕೆಲವು. ಮಕ್ಕಳ ಕಲ್ಪನೆಯನ್ನು ಗರಿಗೆದರಿಸುವ ಹಲವು ಚಿತ್ರಗಳು ಇವುಗಳಲ್ಲಿ ಸೇರಿದ್ದುವು. ಇದಾದ ಅನಂತರ ಬಲು ಸಮಯದತನಕ ಈ ಕ್ಷೇತ್ರ ಮಕ್ಕಳಿಗಾಗಿ ಪುಸ್ತಕ ಪ್ರಕಟಣೆಯ ದೃಷ್ಟಿಯಿಂದ ಅಷ್ಟೇನೂ ಉತ್ತಮವಾಗಿರಲಿಲ್ಲ. 1950ರ ತರುವಾಯ ಮಕ್ಕಳಿಗಾಗಿ ಸಾಮಾನ್ಯ e್ಞÁನದ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರಕಟಗೊಂಡುವು. ರಸಾಯನವಿe್ಞÁನ, ಭೌತವಿe್ಞÁನ, ಮನೋವಿe್ಞÁನ, ಪ್ರಾಣಿವಿe್ಞÁನ, ಸಸ್ಯವಿe್ಞÁನ, ಖಗೋಳವಿe್ಞÁನ, ಪ್ರವಾಸಸಾಹಿತ್ಯ, ಭೂಗೋಳ ಹೀಗೆ ವಿವಿಧ ವಿಷಯಗಳ ಬಗ್ಗೆ ಪಿ.ಎನ್.ಅಪ್ಪುಸ್ವಾಮಿ ಅಯ್ಯರ್, ನಾಗಮುತ್ತಯ್ಯ, ಅಳವಳ್ಳಿಯಪ್ಪ ಮತ್ತು ಇತರ ಅನೇಕರು ಕೃತಿರಚನೆ ಮಾಡಿದರು. ಸಾಮಾನ್ಯe್ಞÁನದ ಬಗ್ಗೆ ಕೃತಿರಚನೆಯಲ್ಲಿ ಕಲ್ವಿ ಗೋಪಾಲಕೃಷ್ಣನ್ ಮತ್ತು ಎನ್.ಕೆ. ವೇಲನ್ ಖ್ಯಾತನಾಮರು. ಇವರು ಹಲವು ಪ್ರಶಸ್ತಿಗಳನ್ನು ಪಡೆದಿರುವರು.

ಮಹಾಪುರುಷರ ಜೀವನಚರಿತ್ರೆಗಳು ಮಕ್ಕಳಿಗೆ ಸ್ಫೂರ್ತಿ, ಆದರ್ಶಗಳನ್ನು ನೀಡುವುವು. ಹಾಗಾಗಿ ಮಹಾನ್ ಯೋಧ, ವೀರಾಗ್ರಣಿ, ವಿe್ಞÁನಿ, ಸಾಹಿತಿ, ರಾಷ್ಟ್ರಪ್ರೇಮಿ ಮೊದಲಾದವರ ಜೀವನಚರಿತ್ರೆಗಳ ರಚನೆ ಅಗತ್ಯ; ಅನಿವಾರ್ಯ. ಪಿ.ತೂರನ್‍ರವರ ಸಂಪಾದಕತ್ವದಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಗೊಂಡಿರುವ ಕುಳಂದೈಗಳ್ ಕಲೈಕ್ ಕಳಂಜಿಯಮ್ (ಮಕ್ಕಳ ವಿಶ್ವಕೋಶ) ವರ್ಣರಂಜಿತ ಚಿತ್ರಗಳಿಂದ ಕೂಡಿದ್ದು, ಈ ಕ್ಷೇತ್ರದಲ್ಲಿ ಅತ್ಯಮೂಲ್ಯ ಕೃತಿಯಾಗಿದೆ. ತಮಿಳು ಅಭಿವೃದ್ಧಿ ಅಕಾಡೆಮಿಯ ಅಧ್ಯಕ್ಷ ಟಿ. ಸಿ. ಅವಿನಾಶಲಿಂಗಮ್ ಸಹ ಈ ಪ್ರಕಟಣೆಯ ಕೀರ್ತಿಗೆ ಪಾಲುದಾರರು. ಮಕ್ಕಳಿಗಾಗಿ ಇಂಥ ವಿಶ್ವಕೋಶವನ್ನು ದಕ್ಷಿಣಭಾರತದಲ್ಲಿ ಹೊರತಂದ ಖ್ಯಾತಿ ತಮಿಳುನಾಡಿನದಾಗಿದೆ.

ಮಕ್ಕಳಿಗಾಗಿ ಪ್ರಪ್ರಥಮ ನಿಯತಕಾಲಿಕೆ ಬಾಲದೀಪಿಕೈಯನ್ನು ನಾಗರಕೋಯಿಲಿನ ಕ್ರಿಶ್ಚಿಯನ್ ಸೊಸೈಟಿ 1840ರಲ್ಲಿ ಪ್ರಾರಂಭಿಸಿತು. ಈ ತ್ರೈಮಾಸಿಕ 13 ವರ್ಷಗಳ ತನಕ ಪ್ರಕಟಗೊಂಡಿತು. ಇದಾದ ಬಳಿಕ ಮಕ್ಕಳಿಗಾಗಿ ಹಲವು ನಿಯತಕಾಲಿಕೆಗಳು ಪ್ರಕಟವಾಗಲಾರಂಭಿಸಿದುವು. 1891ರಲ್ಲಿ ಸಿ.ವಿ.ವಿಶ್ವನಾಥ ಅಯ್ಯರ್ ಮಕ್ಕಳಿಗಾಗಿ ತಮ್ಮ ನಿಯತಕಾಲಿಕ ವಿವೇಕಚಿಂತಾಮಣಿಯಲ್ಲಿ ಕಥೆ ಕವಿತೆಗಳನ್ನು ಪ್ರಕಟಿಸುತ್ತಿದ್ದರು. ಅಂತರದಲ್ಲಿ, ಜನಪ್ರಿಯ ನಿಯತಕಾಲಿಕೆಗಳಾದ ತಮಿಳರ್ ನೇಷನ್, ಕಲೈಮಗಳ್, ಆನಂದ ವಿಕಟನ್, ಕಲ್ಕಿ ಮೊದಲಾದವು ಮಕ್ಕಳ ಅಂಕಣಗಳನ್ನು ಪ್ರಕಟಿಸುತ್ತಿದ್ದುವು. ಸುಬ್ರಮಣ್ಯ ಭಾರತೀಯವರು ಪ್ರಾರಂಭಿಸಿದ ಬಾಲವಿನೋದಿನಿ 15 ವರ್ಷಗಳ ಕಾಲ ಪ್ರಕಟಗೊಂಡಿತು. ಮುತ್ತುನಾರಾಯಣ್ 1942ರಲ್ಲಿ ಪಾಪ್ಪ ಮಲರ್ ಪ್ರಾರಂಭಿಸಿ, ಹಿರಿಯ ಕಿರಿಯ ಲೇಖಕರು ಮಕ್ಕಳಿಗಾಗಿ ಬರೆಯಲು ಪ್ರೋತ್ಸಾಹಿಸಿದರು. 1944ರಲ್ಲಿ ವಿ.ಎಸ್. ನಟೇಶನ ಮತ್ತು ರಾಮತ್ಯಾಗರಾಜನ್ ಕ್ರಮವಾಗಿ ಬಾಲರ್ ಮಲರ್ ಮತ್ತು ಪಾಪ್ಪಾ ಪ್ರಾರಂಭಿಸಿದರು. ಈ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ಕಥೆಕವಿತೆಗಳು ಕೃತಿರೂಪದಲ್ಲಿ ಹೊರಬಂದಿವೆ. ಮಕ್ಕಳಿಗಾಗಿ ಪ್ರಥಮ ಸಾಪ್ತಾಹಿಕ ಅನಿಲ್ (1947) ಪ್ರಕಟವಾಯಿತು. ವೈ. ಗೋವಿಂದನ್ ಇದರ ಸಂಪಾದಕರಾಗಿದ್ದರು. ಇದು ಹೆಚ್ಚು ಕಾಲ ಪ್ರಕಟವಾಗಲಿಲ್ಲ. ಮತ್ತೆ ಭುವನೇಂದ್ರನ್ 1972ರಲ್ಲಿ ಇದೇ ಹೆಸರಿನ ಪಾಕ್ಷಿಕ ಪ್ರಾರಂಭಿಸಿದರು. ಈ ಅವಧಿಯಲ್ಲಿ ಹಲವು ನಿಯತಕಾಲಿಕೆಗಳು ಮಕ್ಕಳಿಗಾಗಿ ಪ್ರಕಟಗೊಂಡರೂ ಅವು ಹೆಚ್ಚು ಕಾಲ ಇರಲಿಲ್ಲ. ಕಲ್ಕಿಯ ಆಡಳಿತವರ್ಗ 1972ರಲ್ಲಿ ಗೋಕುಲಮ್ ಪಾಕ್ಷಿಕ ಪ್ರಾರಂಭಿಸಿತು. ಇದು ಉತ್ತಮವಾದ ಗುಣಮಟ್ಟ ಕಾಪಾಡಿಕೊಂಡಿತ್ತು. ಆದರೆ ಹಣದ ಅಭಾವದಿಂದಾಗಿ ಪ್ರಕಟಣೆ ನಿಂತುದು ದುರದೃಷ್ಟಕರವೇ. ಬೊಮ್ಮೈ ಇಲ್ಲಲು ತೆಲುಗು ನಿಯತಕಾಲಿಕದ ತಮಿಳು ರೂಪ ಬೊಮ್ಮೈ ವೀಡು 1975ರಲ್ಲಿ ಪ್ರಾರಂಭಗೊಂಡಿತು. ಇದು ಜನಪ್ರಿಯ ನಿಯತಕಾಲಿಕವಾಗಿದೆ. ಸದ್ಯಪ್ರಕಟಗೊಳ್ಳುತ್ತಿರುವ ಅಂಬುಲಿ ಮಾಮ (1947-ಸ್ಥಾಪಕರು : ಚಕ್ರಪಾಣಿ, ನಾಗಿರೆಡ್ಡಿ) ಬಾಲಮಿತ್ರನ್, ಬೊಮ್ಮೈವೀಡು ಮತ್ತು ರತ್ನಮಾಲಾ ಮುಂತಾದವು ಜಾನಪದ ಮೊದಲಾದ ವಿಷಯಗಳ ಬಗ್ಗೆ ಗಮನಹರಿಸುತ್ತಿವೆ.

ಈ ತನಕ ಮಕ್ಕಳಿಗಾಗಿ ತಮಿಳಿನಲ್ಲಿ 2000ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.

ತೆಲುಗು : ಸುಮಾರು ನೂರು ವರ್ಷಗಳ ಹಿಂದಿನತನಕ ತೆಲುಗಿನಲ್ಲಿ ಮಕ್ಕಳ ಸಾಹಿತ್ಯ ಅಷ್ಟಾಗಿ ಇರಲಿಲ್ಲ. 19ನೆಯ ಶತಮಾನದ ಕೊನೆಯ ದಶಕದಲ್ಲಿ ಈ ಸಾಹಿತ್ಯ ಪ್ರಕಾರ ಅಭಿವೃದ್ಧಿಗೊಳ್ಳಲಾರಂಭಿಸಿತು. ಪಾರಂಪರಿಕವಾಗಿ ಮಕ್ಕಳಿಗೆ ಅಕ್ಷರಾಭ್ಯಾಸವಾದನಂತರ ಪೋತನನ (1450-1510) ಭಾಗವತದಿಂದ ರುಕ್ಮಿಣೀ ಕಲ್ಯಾಣಮು, ಪ್ರಹ್ಲಾದ ಚರಿತಮು, ಗಜೇಂದ್ರಮೋಕ್ಷಮು, ಶತ್ರುಗಳನ್ನು ಓದುವಂತೆ ಪ್ರೋತ್ಸಾಹಿಸುತ್ತಿದ್ದರು. ಇವುಗಳ ಸತತ ಅಭ್ಯಾಸದಿಂದ ಶ್ರದ್ಧೆನಿಷ್ಠೆಗಳು ಮೂಡುತ್ತಿದ್ದವು. ಇವನ್ನು ಮಕ್ಕಳಿಗೆ ಕಂಠಪಾಠ ಮಾಡಿಸುತ್ತಿದ್ದರು.

ಮಕ್ಕಳಿಗಾಗಿ ಸಾಹಿತ್ಯ ರಚನೆಯ ಮೊತ್ತಮೊದಲ ಪ್ರಯತ್ನಗಳ ಪೈಕಿ ಪಂಡಿತ ಸೀತಾರಾಮಶಾಸ್ತ್ರಿಯವರದು (ಹತ್ತೊಂಬತ್ತನೆಯ ಶತಮಾನ) ಮುಖ್ಯವಾಗಿದೆ. ಅವರ ಪೆದ್ದಬಾಲಶಿಕ್ಷ (1846) ಮಕ್ಕಳ ಕಲಿಕೆಗೆ ಸಂಗ್ರಹ ಕೃತಿಯಾಗಿತ್ತು. ಆಂಧ್ರಪ್ರದೇಶದ ಶಾಲೆಗಳಲ್ಲಿ ಹಲವು ವರ್ಷಗಳ ಕಾಲ ಇದನ್ನು ಬೋಧಿಸುತ್ತಿದ್ದರು. ವಿದ್ಯಾರ್ಥಿಗಳ ಹಲವು ಪೀಳಿಗೆಗಳ ಮೇಲೆ ಇದು ತನ್ನ ಪ್ರಭಾವ ಬೀರಿದೆ. ಸಾಹಿತ್ಯದ ಹಲವು ಪ್ರಕಾರಗಳ ಪ್ರವರ್ತಕ ಕಂದುಕೂರಿ ವೀರೇಶಲಿಂಗಮ್ (1847-1919) ಮಾಹಿತಿಪೂರ್ಣವಾದ ಹಾಗೂ ಬೋಧಪ್ರದ ಕಿರುಹೊತ್ತಗೆಗಳನ್ನೂ ಪುಸ್ತಕಗಳನ್ನೂ ರಚಿಸಿದುದಷ್ಟೆ ಅಲ್ಲದೆ ಈ ಸೋಪನ ನೀತಿಕಥೆಗಳನ್ನು ನೀತಿ ಕಥಾಮಂಜರಿ ಎಂಬ ಹೆಸರಿನಲ್ಲಿ ಅನುವಾದಿಸಿದರು. ಇವು ಮಕ್ಕಳಿಗೆ ಆನಂದದಾಯಕವಾಗಿದ್ದುವು. ಮುಂದೆ ಪುರಾಣಗಳಿಂದ, ಪರಂಪರೆಗಳಿಂದ ಆಯ್ದುಕೊಂಡು ವಾವಿಲಾಕೋಲನು ಸುಬ್ಬಾರಾವ್ (1863-1936) ಆರ್ಯ ಕಥಾನೀತಿ ಎಂಬ ಶೀರ್ಷಿಕೆಯಲ್ಲಿ ಕಥಾಮಾಲಿಕೆಯನ್ನು ತಂದರು ವಿಲಿಯಮ್ ಕಾಬೆಟ್ ರಚಿಸಿದ ಅಡ್ವೈಸ್ ಟು ಯಂಗ್ ಮೆನ್ ಆಧರಿಸಿ ಕುಮಾರ ಹಿತಚರ್ಯಾ (1941) ಮತ್ತು ಕುಮಾರೀ ಹಿತಚರ್ಯಾ ಎಂಬ ಕೃತಿಗಳನ್ನು ಪ್ರಕಟಿಸಿದರು. ಈ ಕೃತಿಗಳೆಲ್ಲ ಸರಳವಾದ ಆದರೆ ಸಂಪೂರ್ಣವಾಗಿ ವ್ಯಾಕರಣಬದ್ಧ ಶೈಲಿಯಲ್ಲಿ ರಚಿತವಾಗಿದ್ದವು. ಇವು ಮಕ್ಕಳಲ್ಲಿ ನೈತಿಕಪ್ರಜ್ಞೆ ಮೂಡಿಸುವ ಧ್ಯೇಯದಿಂದ ಕೂಡಿದ್ದವೇ ವಿನಾ ಅವರಲ್ಲಿ ಕಲ್ಪನೆಯನ್ನು ಗರಿಗೆದರಿಸುವಲ್ಲಿ ಅಷ್ಟಾಗಿ ಸಫಲವಾಗಿರಲಿಲ್ಲ.

ಆಧುನಿಕ ರೀತಿಯ ಮಕ್ಕಳ ಸಾಹಿತ್ಯ ಪ್ರಾರಂಭಿಸಿದವರು. ಜಿ.ವಿ. ಸೀತಾಪತಿ (1885-1969) ಎನ್ನಬಹುದು. ಇವರು 1907ರಲ್ಲಿ ಚಿಲಕಮ್ಮ ಪೆಳ್ಳಿ (ಗಿಣಿಯ ಮದುವೆ) ಮತ್ತು ರೈಲುಬಂಡಿ ಎಂಬ ಕೃತಿಗಳನ್ನು ಪ್ರಕಟಿಸಿದರು. ನಾಣ್ಯ, ಮಾವಿನಹಣ್ಣು, ಕೃಷ್ಣ, ಪ್ರಹ್ಲಾದ ಇಂಥ ವಿಷಯಗಳ ಬಗ್ಗೆ ಮಕ್ಕಳಿಗಾಗಿಯೇ ಸುಲಭಗ್ರಾಹ್ಯವಾದ ರೀತಿಯಲ್ಲಿ ಕಥೆಗಳನ್ನು ಬರೆದರು. ಮಕ್ಕಳಿಗಾಗಿ ಕಥೆ ಕವಿತೆಗಳ ರಚನೆಯಲ್ಲಿ ಸಾಧನೆ ಮಾಡಿದ ಚಿಂತಾದೀಕ್ಷಿತಲು (1891-1960) ಗೌರವ ಭಾಜನರಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿಯ ಅಪಾರ ಅನುಭವದಿಂದಾಗಿ ತಮ್ಮ ಕೃತಿಗಳಲ್ಲಿ ಸಂತಸ ಮತ್ತು ಉದ್ದೇಶಸಾಧನೆಯ ಮಿಲನ ಅವರಿಗೆ ಸಾಧ್ಯವಾಯಿತು. ಹನುಮಂತುನಿ ತೋಕ (ಹನುಮಂತನ ಬಾಲ 1955) ಎಂಬ ಹಾಸ್ಯ ಕಥೆಯನ್ನು ಲಾವಣಿ ರೀತಿಯಲ್ಲಿ ರಚಿಸಿದರು. "ಆಲಿಸ್ ಇನ್ ವಂಡರ್‍ಲ್ಯಾಂಡ್" ನಿಂದ ಸ್ಫೂರ್ತಿಗೊಂಡು "ಲೀಲಾಸುಂದರಿ" ಎಂಬ ನೀಳ್ಗತೆಯನ್ನು ಆಕರ್ಷಕ ಶೈಲಿಯಲ್ಲಿ ರಚಿಸಿದರು. ವೀರೇಶಲಿಂಗಮ್‍ರ ಕ್ರಮದಿಂದ ಪ್ರೇರಿತರಾಗಿ ಲೀಲಾವಾಚಕಗಳು ಎಂಬ ಕೃತಿಮಾಲೆ ತಂದರು. ಇವುಗಳಲ್ಲಿ e್ಞÁನ, ಆನಂದ ಹಾಗೂ ಕಲ್ಪನೆಗಳು ಸಮಾವೇಶಗೊಂಡ ಆಸಕ್ತಿದಾಯಕ ವಿಷಯಗಳಿದ್ದುವು. ವೀರೇಶಲಿಂಗಮ್‍ನ ಮಾದರಿಯನ್ನೇ ನಿಕಟವಾಗಿ ಅನುಸರಿಸಿ ವೇಟೂರಿ ಶಿವರಾಮಶಾಸ್ತ್ರಿ (1892-1967) ವಿe್ಞÁನಕಥುಲು ಎಂಬ ಶೀರ್ಷಿಕೆಯಲ್ಲಿ ಕಥೆಗಳನ್ನು ಅನುವಾದಿಸಿ ಪ್ರಕಟಿಸಿದರು. ಪ್ರತಿ ಕಥೆಯ ಕೊನೆಯಲ್ಲಿ ಒಂದು ದ್ವಿಪದಿಯಲ್ಲಿ ಕಥೆಯ ನೀತಿಯನ್ನು ಸೂಚಿಸಲಾಗಿದೆ. ಗುರುಜಾಡ ಅಪ್ಪಾರಾವ್ (1861-1915) ಜನಪದ ಗೀತೆಗಳಿಂದ ಆಯ್ದುಕೊಂಡು ಪೂರ್ಣಮ್ಮ ಮತ್ತು ಕನ್ಯಕಾರ- ಇವರ ಮನ ಕರಗಿಸುವ ಕಥೆಯನ್ನು ಶ್ಲೋಕದಲ್ಲಿ ಮುತ್ಯಾಲ ಸರಮ್ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇದು ಹೃದಯಸ್ಫರ್ಶಿಯಾದ ಕಥೆ.

ಜೋಡಿ ಕವಿಗಳಾದ ವೆಂಕಟ ಪಾರ್ವತೀಶ್ವರ ಕವುಲು (ವೆಂಕಟರಾವ್, 1880-1972 ಮತ್ತು ಪಾರ್ವತೀಶಮ್ 1882-1955) ಬಾಲ ಗೀತಾವಳಿ ಎಂಬ ಶೀರ್ಷಿಕೆಯಲ್ಲಿ (1939, 1940) ಪದ್ಯ ಕೃತಿಗಳನ್ನು ರಚಿಸಿದರು. ಮಕ್ಕಳಿಗೆ ಸುಲಭಗ್ರಾಹ್ಯವಾಗುವಂತೆ ರಾಮಾಯಣ, ಭಾರತ, ಭಾಗವತಗಳ ಸರಳ ರೂಪಗಳನ್ನು ತಂದರು.

ನಾಳಂ ಕೃಷ್ಣರಾವು (1881-1961) ಮಕ್ಕಳಿಗಾಗಿ ಸರಳ ಕವನಗಳನ್ನು ರಚಿಸಿದರು. ಈ ಕೃತಿಗಳ ಶೀರ್ಷಿಕೆಗಳು ಅವುಗಳ ವಸ್ತುವಿಷಯದಷ್ಟೇ ಆಕರ್ಷಕವಾಗಿರುವುದು ವಿಶೇಷ. ತೇನು ಚಿನುಕುಲು (ಜೇನಹನಿಗಳು), ಮಿಗಡ ತರಕಲು (ಕೆನೆಯ ತುಣುಕುಗಳು), ಪಾಪಾಯಿ (ಕಂದ) ಮುದ್ದು (ಮುತ್ತು) ಮತ್ತು ವೆನ್ನ ಮುದ್ದಲು (ಬೆಣ್ಣೆ ಮುದ್ದೆಗಳು). ಇವೆಲ್ಲ 1935ರಲ್ಲಿ ಪ್ರಕಟಗೊಂಡವು. ಮೊದಲು ಮಕ್ಕಳ ಮನಸ್ಸಿಗೆ ಆನಂದವುಂಟುಮಾಡಿ, ಅನಂತರ ಬೋಧಿಸುವುದು ಇವರ ಉದ್ದೇಶ.

ಮಕ್ಕಳ ಸೃಜನಾತ್ಮಕ ಶಕ್ತಿ ಮತ್ತು ಉತ್ಸಾಹಗಳನ್ನು ಕುಂಠಿಸುವ ಪಾರಂಪರ ಶಿಕ್ಷಣ ವಿಧಾನದ ದೋಷಗಳನ್ನು ಎತ್ತಿ ತೋರಿಸಿದವರೆಂದರೆ ಗುಡಿಪಾಟಿ ವೆಂಕಟಾಚಲಮ್ (1894-1979). ಮಕ್ಕಳ ಸಹಜಪ್ರವೃತ್ತಿಯನ್ನು ಹತ್ತಿಕ್ಕುವುದು ಕೊಲೆಯಂಥ ಅಪರಾಧ ಎಂಬುದು ಇವರ ನಂಬಿಕೆ. ಬಿಡ್ಡಲ ಶಿಕ್ಷಣ ಮತ್ತು ಮ್ಯೂಸಿಂಗ್ಸ್ (3 ಸಂಪುಟಗಳು) - ಇವು ಇವರ ಕೃತಿಗಳು.

ವಾರಪತ್ರಿಕೆಗಳು ಮಕ್ಕಳ ಸಾಹಿತ್ಯ ಒಂದು ಭಾಗವನ್ನು ಮೀಸಲಿಟ್ಟು ಪ್ರೋತ್ಸಾಹ ನೀಡುತ್ತಿವೆ. ಮಕ್ಕಳ ಸಾಹಿತ್ಯಕ್ಕೆಂದೇ ಮೀಸಲಾದ ನಿಯತಕಾಲಿಕೆಗಳು ಯುದ್ಧಾನಂತರದ ಅವಧಿಯಲ್ಲಿ ಬರಲಾರಂಭಿಸಿದವು. ಬಾಲ, ಬಾಲಮಿತ್ರ, ಬೊಮ್ಮರಿಲ್ಲು ಮತ್ತು ಚಂದಮಾಮ ಇವು ಮಕ್ಕಳಿಗೆ ಸಂತೋಷ ಉಂಟುಮಾಡುವ ಮಾಹಿತಿ ಒದಗಿಸುತ್ತಿವೆ. ಮಕ್ಕಳ ಅತ್ಯಂತ ಜನಪ್ರಿಯ ಮಾಸಪತ್ರಿಕೆ ಚಂದಮಾಮ ಎರಡನೆಯ ಮಹಾಯುದ್ಧಾನಂತರ ಮೊದಲು ತೆಲುಗಿನಲ್ಲಿ ಪ್ರಾರಂಭಗೊಂಡಿತು. ವರ್ಣರಂಜಿತ ಚಿತ್ರಗಳ ಮುದ್ರಣದಿಂದಾಗಿ ಇದು ಇತರರಿಗೆ ಮಾದರಿಯಾಗಿದೆ. ತಮಿಳು, ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಸಂಸ್ಕøತ ಮತ್ತು ಇತರ ಭಾಷೆಗಳಲ್ಲಿಯೂ ಪ್ರಕಟವಾಗುತ್ತಿದೆ. ಪ್ರಾರಂಭದಿಂದಲೂ ಚಕ್ರಪಾಣಿ ಮತ್ತು ಕೊಡವಟಿಗಂಟಿ ಕುಟುಂಬರಾವು ಇದರ ಪ್ರಗತಿಗಾಗಿ ಶ್ರಮಿಸಿರುವರು. ಈಚೆಗೆ ಚಂಪಕ, ನಂದನ, ಭುಜ್ಜಾಯಿ, ಬಾಲಭಾರತಿ ಮತ್ತು ಪ್ರಮೋದ ಪ್ರಾರಂಭವಾಗಿವೆ. 3ರಿಂದ 7, 7ರಿಂದ 14 ಈ ಎರಡು ವಯೋವರ್ಗಗಳ ಮಕ್ಕಳಿಗಾಗಿ ರಚಿತವಾದ ಉತ್ತಮ ಕೃತಿಗಳಿಗೆ ವಾರ್ಷಿಕ ಬಹುಮಾನಗಳನ್ನು ನೀಡುವುದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ. ಕೇಂದ್ರ ಸರ್ಕಾರ ರಾಜಮಹೇಂದ್ರಿ (1956), ಹೈದರಾಬಾದುಗಳಲ್ಲಿ (1958 ಮತ್ತು 1961) ಕಾರ್ಯಗಾರಗಳನ್ನು ವ್ಯವಸ್ಥೆ ಮಾಡುವುದರ ಮೂಲಕ ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ಮಕ್ಕಳಿಗೆ ಉತ್ತಮ ಪಠ್ಯಸಾಮಗ್ರಿಯನ್ನು ಒದಗಿಸುವಲ್ಲಿ ಲೇಖಕರಿಗೆ ಪ್ರೋತ್ಸಾಹ, ಮಾರ್ಗದರ್ಶನಗಳ ಮೂಲಕ ಈ ಕಾರ್ಯಾಗಾರಗಳು ಉತ್ತಮ ಸೇವೆಸಲ್ಲಿಸಿವೆ.

ಈಚೆಗೆ ಮಕ್ಕಳ ಸಾಹಿತ್ಯದ ಸ್ವರೂಪ ಬದಲಾಗಿದೆ. ಅಂತೆಯೇ ಅದರ ವ್ಯಾಪ್ತಿ ಕೂಡ ವಿಸ್ತರಿಸಿದೆ. ಕವಿತೆಗಳು, ಕಥೆಗಳು ಇವೇ ಮಕ್ಕಳ ಸಾಹಿತ್ಯ ಎಂದು ಮೊದಲಿಗೆ ಭಾವಿಸಿದ್ದರು; ಕಾಲ ಕ್ರಮೇಣ ವಿe್ಞÁನ, ಇತಿಹಾಸ, ಭೂಗೋಳ ಮತ್ತು ತತ್ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಆಕರ್ಷಕವಾಗಿ ಮನಮುಟ್ಟುವ ರೀತಿಯಲ್ಲಿ ತಿಳಿಸಬೇಕು ಎಂಬುದನ್ನು ಮನಗಂಡರು. ವಸಂತರಾವ್ ವೆಂಕಟರಾವ್, ನಂದೂರಿ ರಾಮಮೋಹನರಾವ್ ಮತ್ತು ವೇಣರಾಜು ಭಾನುಮೂರ್ತಿ ಇವರು ವೈe್ಞÁನಿಕ ವಿಷಯಗಳ ಬಗ್ಗೆ ಮಕ್ಕಳಿಗಾಗಿ ಆಕರ್ಷಕಶೈಲಿಯಲ್ಲಿ ಕೃತಿ ರಚನೆ ಮಾಡಿರುವರು. ರೇಡಿಯೊ, ವಿದ್ಯುಚ್ಛಕ್ತಿ, ಖಗೋಳ ವಿe್ಞÁನ, ಆರೋಗ್ಯ, ಚಂದ್ರಮಂಡಲಕ್ಕೆ ಯಾನ, ಆಕಾಶದ ಅದ್ಭುತಗಳು, ಎಲೆಕ್ಟ್ರಾನುಗಳ ಅದ್ಭುತ ಪ್ರಪಂಚ ಇವುಗಳ ಬಗ್ಗೆ ಕೃತಿರಚನೆಗಳಾಗಿವೆ.

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ನ್ಯಾಯಪಾಟಿ ರಾಘವರಾವ್ ಮತ್ತು ಶ್ರೀಮತಿ ನ್ಯಾಯಪಾಟಿ ಕಾಮೇಶ್ವರಿ ಇವರ ಸೇವೆ ಅಪಾರವಾದುದು. ಇವರು ಸುಮಾರು ಮೂರು ದಶಕಗಳ ಕಾಲ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಡೆಸಿಕೊಂಡುಬಂದರು. ಹಲವಾರು ನಾಟಕಗಳು, ಪ್ರಹಸನಗಳು ಮತ್ತು ಹಾಡುಗಳನ್ನು (ಕವಿತೆ) ಬರೆದು, ಪ್ರಸಾರ ಮಾಡಿದರು. ಹಾಸ್ಯಲೇಖಕ ಮುಲ್ಲಪುಡಿ ವೆಂಕಟರಮಣರ "ಬುಡುಗು" (ಚಿಕ್ಕವನು) ಮಕ್ಕಳನ್ನು ತನ್ನ ತುಂಟ ಚೇಷ್ಟೆಗಳಿಂದ ಆಕರ್ಷಿಸಿಬಿಟ್ಟಿರುವನು.

ಕವಿರಾವ್ ಮತ್ತು ಬಿ.ವಿ. ನರಸಿಂಹರಾವ್ ಈ ಇಬ್ಬರು ಕವಿಗಳು ಮಕ್ಕಳ ಆನಂದ, ಉಲ್ಲಾಸಗಳಿಗಾಗಿ ಕಥೆಕವಿತೆಗಳನ್ನು ಬರೆಯುವಲ್ಲಿ ಸಿದ್ಧಿಪಡೆದಿದ್ದಾರೆ. ನೆಲವಂಕ ಎಂಬ ಹೆಸರಿನಲ್ಲಿ ಸರಳವಾಗಿ ಅನುವಾದಿಸಿರುವರು. ಇದು ಮಕ್ಕಳ ಸಾಹಿತ್ಯಕ್ಷೇತ್ರದ ಅಮೂಲ್ಯಕೃತಿ ಎನ್ನಬಹುದು. ಬಿ.ವಿ.ನರಸಿಂಹರಾವ್ (ಜ. 1913) ಮಗುವಿನ ಮುಗ್ಧತೆಯತ್ತ ಸಾಗಬೇಕು ಎನ್ನುವ ಪಂಥದವರು. ಯುವಪ್ರಜ್ಞೆಯ ವಿಚಲಿತತೆಯಿಂದಾಗಿ ಜನತೆ ಸತ್ಯ, ಶಿವ, ಸೌಂದರ್ಯದಿಂದ ದೂರ ದೂರ ಸಾಗುತ್ತಿದೆ ಎನ್ನುತ್ತಾರೆ.

ಮಕ್ಕಳ ಸಾಹಿತ್ಯ ರಚಿಸುತ್ತಿರುವವರು ಜಾತಿ, ಮತ, ಧರ್ಮ, ದೈವ ಇತ್ಯಾದಿಗಳ ಬಗ್ಗೆ ಪುರಾಣಕಥೆಗಳಲ್ಲಿರುವುದನ್ನು ಮಕ್ಕಳಿಗೆ ತಿಳಿಸಬೇಕೇ ಎಂಬ ಸಂದಿಗ್ಧದಲ್ಲಿ ಸಿಲುಕಿರುವರು. ತಂತ್ರವಿದ್ಯೆಯಲ್ಲಿಯ ತೀವ್ರ ಪ್ರಗತಿಯಿಂದಾಗಿ ಈಗ ಪ್ರಪಂಚದ ಜನತೆ ತಮ್ಮ ಅನುಭವಗಳನ್ನು ಸುಲಭವಾಗಿ ಶೀಘ್ರವಾಗಿ ಇತರರೊಡನೆ ಹಂಚಿಕೊಳ್ಳಬಲ್ಲವರಾಗಿದ್ದಾರೆ. ವಿದೇಶೀ ಭಾಷೆಗಳಲ್ಲಿ ಮಕ್ಕಳಿಗಾಗಿ ರಚಿತವಾಗಿರುವ ಕೃತಿಗಳು ಇಂದು ಸುಲಭವಾಗಿ ತೆಲುಗಿಗೆ ಭಾಷಾಂತರಗೊಳ್ಳುತ್ತಿವೆ.

ಪಂಜಾಬಿ: ಮಹಾಕಾವ್ಯಗಳಿಂದ ತೆಗೆದುಕೊಳ್ಳಲಾದ ಕಥೆಗಳು ಮತ್ತು ಜನಪದ ಕಥೆಗಳು ಪಂಜಾಬಿ ಮಕ್ಕಳ ಸಾಹಿತ್ಯದಲ್ಲಿ ಮೊದಲಿಗೆ ಪ್ರಧಾನವಾಗಿದ್ದುವು. ಸ್ಥಳೀಯ ಪಾಠಶಾಲೆಗಳು ಮತ್ತು ಮಕ್ತಬ್‍ಗಳಲ್ಲಿ ಮಕ್ಕಳಿಗೆ ಗಣಿತಬೋಧನೆ ಹಾಗೂ ಧಾರ್ಮಿಕ ಗ್ರಂಥಗಳ ಪಠನ ವ್ಯಾಖ್ಯಾನಗಳನ್ನು ಕಲಿಸಲಾಗುತ್ತಿತ್ತು. ಮಕ್ಕಳ ಮನಸ್ಸಿಗೆ ಆಯಾಸ ಬೇಸರವಾಗುವಂತೆ ಆಟದ ಮೂಲಕ ಕಲಿಕೆ ಅಷ್ಟಾಗಿ ತಿಳಿದಿರಲೇ ಇಲ್ಲ. ರಾಮಾಯಣ, ಮಹಾಭಾರತ, ಪಂಚತಂತ್ರ, ಹಿತೋಪದೇಶದ ಕಥೆಗಳು, ಗುರುನಾನಕನ ಸಾಖಿಗಳು (17-18ನೆಯ ಶತಮಾನ), ಮಹಾರಾಜ ರಣಜಿತ್‍ಸಿಂಗ್‍ನ ಆಳ್ವಿಕೆಯ ಘಟನಾದಿಗಳನ್ನು ಕಿರಿಯರಿಗೆ ಮತ್ತೆ ಮತ್ತೆ ಹೇಳಲಾಗುತ್ತಿತ್ತು. ಮಕ್ಕಳಿಗೆಂದೇ ವಸ್ತು, ವಿಷಯ, ರೀತಿಗಳಲ್ಲಿ ಯುಕ್ತವಾದ ಸಮಗ್ರ ಸಾಹಿತ್ಯ ರೂಪುಗೊಳ್ಳಲಿಲ್ಲ.

ಪಂಜಾಬಿನಲ್ಲಿ 1849ರ ವೇಳೆಗೆ ಬ್ರಿಟಿಷರ ಆಳ್ವಿಕೆ ಸ್ಥಾಪಿತವಾಯಿತು. 1856ರಲ್ಲಿ ಶಿಕ್ಷಣ ಇಲಾಖೆಯ ಸ್ಥಾಪನೆಯಾಗಿ ಆಡಳಿತ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಗಳಾದುವು. ಶಾಲೆಗಳನ್ನು ತೆರೆಯಲಾಯಿತು. ಏಕರೂಪ ಪಠ್ಯಕ್ರಮ ಜಾರಿಗೆ ಬಂದಿತು. ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ರಚಿಸಲು ಶಿಕ್ಷಣ ಇಲಾಖೆಯಲ್ಲಿ ಪಠ್ಯಪುಸ್ತಕ ಸಮಿತಿಗಳನ್ನು ಸ್ಥಾಪಿಸಲಾಯಿತು.

ಶಾಲೆಗಳಲ್ಲಿ ನಿಗದಿಪಡಿಸಬೇಕಾದ ಪಠ್ಯಪುಸ್ತಕಗಳಲ್ಲಿ ನೇರ ಹಾಗೂ ಸರಳಶೈಲಿಯನ್ನು ಅಳವಡಿಸಿಕೊಳ್ಳಬೇಕೆಂಬುದರ ಅಗತ್ಯ ಮನಗಂಡ ಪಂಜಾಬಿ ಧೀಮಂತರಲ್ಲಿ ಬಿಹಾರಿಲಾಲ್ ಪುರಿ (1830-85) ಅಗ್ರಗಣ್ಯರು. ಇವರು ಹಿಂದಿ ಮತ್ತು ಪಂಜಾಬಿಗಳಲ್ಲಿ ಹಲವಾರು ಪುಸ್ತಕಗಳಲ್ಲಿ ರಚಿಸಿದರು. ಪೌರಾಣಿಕ ವೀರರನ್ನು ಉಜ್ಜ್ವಲವಾಗಿ ಚಿತ್ರಿಸಿದರು. ಕಲ್ಪನಾತ್ಮಕ ಕಥೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕತೆಯ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು. ಚರಿತ್ರಾವಲಿ ಭಾರತೀಯ ನಾರಿಯರನ್ನು ವಿವರಿಸಿದ ಕಿರುಕೃತಿ, ವಿದ್ಯಾ ರತ್ನಾಕರ, ಬುದ್ಧಿ ಡಿ ವಾಡಿಯಾಯೀ, ಧನ್ ಡಿ ವಾಡಿಯೀ, ವಿದ್ಯಾ ಡಿ ಮಹಮಾ ಇವು ಅವರ ಕೃತಿಗಳಲ್ಲಿ ಕೆಲವು. ಇವು ಮಕ್ಕಳ ಮನಸ್ಸಿಗೆ ಬೋಧಪ್ರದವಾಗಿದ್ದು ಶಾಲೆಗೆ ಸೀಮಿತವಾಗಿದ್ದುವು. ಪಂಜಾಬಿನ ಅಧಿಕೃತಭಾಷೆಯಾಗಿದ್ದ ಉರ್ದು ವಿದ್ಯಾವಂತ ವರ್ಗದವರಲ್ಲಿ ಹೆಚ್ಚಿನ ಗಮನಸೆಳೆಯಿತು. ಈ ಶತಮಾನದ ಪ್ರಾರಂಭದಲ್ಲಿ "ಆರ್ಯ ಸಮಾಜ", "ಸಿಂಗ್ ಸಭಾ", "ಸನಾತನ ಧರ್ಮಸಭಾ" ಮತ್ತು "ಅಹಮದೀಯ" ಮೊದಲಾದ ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಜಾಗೃತಿ ಚಳವಳಿಗಳು ಇಡೀ ಸಾಹಿತ್ಯಕ ಚಟುವಟಿಕೆಗಳನ್ನು ಮಸುಕುಗೊಳಿಸಿದ್ದುವು. ಈ ಅವಧಿಯಲ್ಲಿ ಹೊರಬಂದ ಸಾಹಿತ್ಯ ಧಾರ್ಮಿಕ ಇಲ್ಲವೇ ರಾಜಕೀಯದಿಂದ ಕೂಡಿದುದಾಗಿತ್ತು.

ಈ ಅವಧಿಯಲ್ಲಿ ಭಾಯಿ ಮೋಹನ ಸಿಂಗ್ ವೈದ್ (1881-1936) 1906ರ ಪ್ರಾರಂಭದಲ್ಲಿ ಆರಂಭಿಸಿದ ತಮ್ಮ ನಿಯತಕಾಲಿಕೆ ದುಃಖ ನಿವಾರಣದಲ್ಲಿ ಮಕ್ಕಳಿಗಾಗಿ ಅಂಕಣ ತೆರೆದರು. ಅದೇ ವರ್ಷ ಅವರು ಪ್ರಾರಂಭಿಸಿದ ಸ್ವದೇಶೀ ಭಾಷಾ ಪ್ರಚಾರ ಲರೀ ಎಂಬ ಶೀರ್ಷಿಕೆಯಲ್ಲಿ ಮಕ್ಕಳಿಗೆ ರೀತಿನೀತಿಗಳ ಬಗ್ಗೆ ಬೋಧಿಸುವ ಕಿರುಹೊತ್ತಗೆಗಳನ್ನು ಪ್ರಕಟಿಸಿದರು. 1877-78ರಲ್ಲಿ ಪಂಜಾಬ್ ರಿಲಿಜಿಯಸ್ ಬುಕ್ಸ್ ಸೊಸೈಟಿ, ಲೂದಿಯಾನ ಮಿಷನ್ ಪ್ರೆಸ್‍ರವರು ಸರಳ ಮಲ್ವಾಯಿ ಉಪಭಾಷೆಯಲ್ಲಿ ಪ್ರಕಟಿಸಿದ್ದ ಬೈಬಲ್ ಡಿಯಾನ್ ಮೂರ್ತಾನ್ ತೆ ಕಹಾನಿಯಾಗೆ (ಬೈಬಲಿನ ಪ್ರಸಂಗಗಳು ಮತ್ತು ಕಥೆಗಳು) ಪ್ರತಿಕ್ರಿಯೆಯಿಂದಾಗಿ ಇವು ಪ್ರಕಟಗೊಂಡಿದ್ದುವು.

ಪಾಶ್ಚಾತ್ಯ ಮಕ್ಕಳ ನಿಯತಕಾಲಿಕೆಗಳ ಮಾದರಿಯಲ್ಲಿ ಪಂಜಾಬಿನಲ್ಲಿಯೂ ನಿಯತಕಾಲಿಕೆಗಳು ಬದಲಾರಂಭಿಸಿದುವು. ಅಲ್ಲದೆ ಉರ್ದುವಿನ ಬಚ್ಚೋಂಕಾ ಅಖ್ಬಾರ್ (ಲಾಹೋರ್, 1879) ಮತ್ತು ಫೂಲ್ (1891) ಎಂಬ ಮಕ್ಕಳ ನಿಯತಕಾಲಿಕೆಗಳೂ ತಮ್ಮ ಪ್ರಭಾವ ಬೀರಿದುವು; ಮಾರ್ಗಪ್ರವರ್ತಕವೂ ಆದುವು. ಹಾಗಾಗಿ ಪಂಜಾಬಿಯ ಸುಪ್ರಸಿದ್ಧ ಕವಿ ಮೋಹನ ಸಿಂಗ್ (1905-78) ತಮ್ಮ ಪ್ರಖ್ಯಾತ ನಿಯತಕಾಲಿಕೆ ಪಂಜ್ ದರ್ಯಾದಲ್ಲಿ (1939) ಕಿರಿಯರಿಗಾಗಿ ಕೆಲವು ಪುಟಗಳನ್ನು ಮೀಸಲಿಟ್ಟರು.

1947ರಲ್ಲಿ ಪಂಜಾಬಿನ ವಿಭಜನೆಯ ಅನಂತರ ಭಾಷಾಪ್ರೇಮಿಗಳಲ್ಲಿ ಹೊಸ ಹುರುಪು ಮೂಡಿತು; ಪಂಜಾಬಿ ಭಾಷೆಯ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಗಮನ ಹರಿಯಿತು. ಪ್ರೀತ್‍ಲಾರಿ ಪ್ರಕಟಣ ಸಂಘ ಜನಪ್ರಿಯ ಪತ್ರಿಕೋದ್ಯಮಿ ಹಾಗೂ ಲೇಖಕ ಗುರುಭಕ್ಷಸಿಂಗ್ ಪ್ರೀತ್‍ಲಾರಿ (1895-1977) ಮತ್ತು ಅವರ ಪುತ್ರ ಲೇಖಕ ನವತೇಜಸಿಂಗ್‍ರ (1925-81) ಮೇಲುಸ್ತುವಾರಿಯಲ್ಲಿ ಪ್ರಕಟವಾದ ಬಾಲಸಂದೇಶ ಸಾಕಷ್ಟು ಜನಪ್ರಿಯವಾಯಿತು. ಜೀವನ್ ಸಿಂಗ್‍ರ ಮಾಸಪತ್ರಿಕೆ ಬಾಲ ದರ್ಬಾರ್ (1951, ಈಗ ಪ್ರಕಟವಾಗುತ್ತಿಲ್ಲ) ಸಹ ಜನಪ್ರಿಯವಾಗಿತ್ತು. ಇವನ್ನು ಮೊದಲಿಗೆ ಪಂಜಾಬಿ ಕವಿ ಅಜೆಯಿಬ್ ಚಿತ್ರಕಾರ (ಜ. 1929), ಅನಂತರ ಹಜರಾಸಿಂಗ್ (ಜ. 1931) ಪ್ರಕಟಿಸುತ್ತಿದ್ದರು.

ಚೂಂಚನಾ, ಬಾಲಜಗತ್, ಬಾಲಸನ್ಸಾರ, ಅಮರ ಕಹಾನಿಯಾ ಮತ್ತು ಇತರ ಕೆಲವು ನಿಯತಕಾಲಿಕೆಗಳು ಪ್ರಕಟಗೊಳ್ಳಲಾರಂಭಿಸಿದುವು; ಇವು ಹೆಚ್ಚುಕಾಲ ಉಳಿಯಲಿಲ್ಲ. ಚಂದಮಾಮ ಮತ್ತು ಚಂಪಕ ಮೊದಲಾದ ಜನಪ್ರಿಯ ಹಿಂದಿ ನಿಯತಕಾಲಿಕೆಗಳ ಪಂಜಾಬಿ ಆವೃತ್ತಿಗಳು ಹಾಗೂ ಟಾರ್ಜಾನ್ ಮತ್ತು ಬೇತಾಳ ಕಥೆಗಳ ಪಂಜಾಬಿ ಭಾಷಾಂತರಗಳ ಪ್ರಾಬಲ್ಯವೇ ಅವು ನಿಲ್ಲಲು ಕಾರಣವಾಯಿತು. ಈ ನಿಯತಕಾಲಿಕೆಗಳಲ್ಲಿ ಮಕ್ಕಳಿಗಾಗಿ ಕಿನ್ನರಕಥೆಗಳು, ಕಲ್ಪನಾತ್ಮಕ ಕಥೆಗಳು ಪ್ರಾಣಿಕಥೆಗಳು, ಚುಟುಕಗಳು ಹಾಗೂ ಸಾಮಾನ್ಯ ಪರಿe್ಞÁನ ವಿಷಯಗಳು ಇರುತ್ತಿದ್ದುವು.

ಅನೇಕ ಲೇಖಕರು ಗದ್ಯ ಹಾಗೂ ಪದ್ಯಗಳಲ್ಲಿ ಮಕ್ಕಳಿಗಾಗಿ ಕೃತಿರಚನೆ ಮಾಡಿರುವರು. ಧನವಂತ್‍ಸಿಂಗ್ ಸೀತಲ್ (1907-80) ಸಿಖ್ ಗುರುಗಳ ಜೀವನಕಥೆಗಳನ್ನು ಗದ್ಯ-ಪದ್ಯಗಳೆರಡರಲ್ಲೂ ರಚಿಸಿರುವರು. ಮಕ್ಕಳು ಇವರ ಕಿರು ಹಾಗೂ ನೀಳ್ಗವನಗಳನ್ನು ಉತ್ಸಾಹದಿಂದ ಪಠಿಸುತ್ತಾರೆ. ಸುಮಾರು 50 ಪುಸ್ತಕಗಳಲ್ಲಿ ಧನವಂತ್‍ಸಿಂಗ್ ಐತಿಹಾಸಿಕ ಪ್ರೇರಣೆ ನೀಡಿ ಗತಕಾಲದ ವೀರಪರಂಪರೆ ಮತ್ತೆ ಮರುಕಳಿಸುವಂತೆ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸೋಹನ್ ಸಿಂಗ್ ಸೀತಲ್ (ಜ. 1909) ಸಹ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವರು.

ಪ್ರೀತನಗರದ ಜಗದೀಶ ಸಿಂಗ್ (ಜ. 1914) ಕೆಲವು ಮನಶ್ಯಾಸ್ತ್ರೀಯ ಕಥೆಗಳು ಹಾಗೂ ವಿe್ಞÁನ ವಿಷಯಗಳಿಗೆ ಸಂಬಂಧಿಸಿದ ಕೆಲವು ಪ್ರಬಂಧಗಳನ್ನು ರಚಿಸಿದ್ದಾರೆ. e್ಞÁನಪೀಠ ಪ್ರಶಸ್ತಿ ವಿಜೇತೆ ಪಂಜಾಬಿ ಕವಯತ್ರಿ ಅಮೃತಾ ಪ್ರೀತಮ್ (1919) ಮಕ್ಕಳಿಗಾಗಿ ಸುಮಾರು 25 ಕೃತಿ ರಚನೆ ಮಾಡಿರುವರು. ಈಕೆಯ ಕೃತಿಗಳು ಮನೋರಂಜಕವಾಗಿರುವುವು. ಗ್ಯಾನಿ ಲಾಲ್ ಸಿಂಗ್ (ಜ. 1903) ಕಥೆ ಪುಸ್ತಕಗಳು, ಗುರುಗಳ ಜೀವನಾಚರಿತ್ರೆಗಳು, ಇತಿಹಾಸ ಮತ್ತು ವಿe್ಞÁನ ಕೃತಿರಚನೆ ಮಾಡಿದ್ದಾರೆ. ನಿವೃತ್ತ ಗ್ರಂಥಪಾಲ ಗುರುಬಚನ್ ಸಿಂಗ್ ವಿe್ಞÁನದಲ್ಲಿ ಲೋನ್ ಡಿ ಕಹಾನಿ (ಉಪ್ಪಿನ ಕಥೆ), ಪಾನಿ ಡಿ ಕಹಾನಿ, ಪೂಲನ್ ಡಿ ಕಹಾನಿ ಮೊದಲಾದ ಪ್ರಶಸ್ತಿ ವಿಜೇತ ಕೃತಿಗಳನ್ನು ಹಾಗೂ ಆಸಕ್ತಿದಾಯಕ ಮತ್ತು ಬೋಧಪ್ರದವಾದ ಹಲವು ಕಿರುಹೊತ್ತಗೆಗಳನ್ನು ಹೊರತಂದಿದ್ದಾರೆ.

ಆಧುನಿಕ ಸಾಹಿತ್ಯ ಅಕಾಡೆಮಿ (ಅಮೃತಸರದಲ್ಲಿ ಸ್ಥಾಪನೆ 1950) ಎಂಬ ಸಂಸ್ಥೆಯ ಆಶ್ರಯದಲ್ಲಿ ಲೇಖಕರ ಒಂದು ತಂಡ ಮಕ್ಕಳ ಸಾಹಿತ್ಯ ಮತ್ತು ಕಲೆಗಾಗಿ ಪ್ರಯತ್ನ ನಡೆಸಿದೆ. ವಿe್ಞÁನ, ಇತಿಹಾಸ, ಭೂಗೋಳ, ಜನಪದ ಕಥೆಗಳು, ಪ್ರಪಂಚದ ಮಹಾಕೃತಿಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ಕಥೆಗಳು, ಪ್ರಪಂಚದ ಮಹಾಕೃತಿಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ಉತ್ತಮ ಚಿತ್ರಗಳಿಂದ ಕೂಡಿದ ಕೃತಿ ರಚನೆಯತ್ತ ವಿಶೇಷ ಪ್ರಯತ್ನ ನಡೆದಿದೆ. ಅಕಾಡೆಮಿ ಈ ತನಕ 500ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಸಿಖ್ ಗುರುಗಳ ಜೀವನದ ಬಗ್ಗೆ ಕೃತಿಗಳನ್ನು ಹೊರತರಲು ವಿಶೇಷವಾಗಿ ಶ್ರಮಿಸಿದೆ. ಗುರುನಾನಕದೇವ, ಗುರು ತೇಜಬಹದೂರರ ಚಿತ್ರಗಳನ್ನು ವಿಶೇಷವಾಗಿ ಒಳಗೊಂಡಿರುವ ಜೀವನಚರಿತ್ರೆಗಳ ಎರಡು ಸಮಗ್ರ ಸಂಪುಟಗಳನ್ನು ಪ್ರಕಟಿಸಿದೆ. ಸರಳ, ಆಕರ್ಷಕ ಶೈಲಿಯಲ್ಲಿ ರಚಿತವಾಗಿರುವ ಇವು ಮಕ್ಕಳ ಮಾನಸಿಕ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಅವರಿಗೆ ಮನರಂಜನೆ ನೀಡಿ ಬೋಧಪ್ರದವೂ ಎನಿಸಿವೆ. ಜೀವನ್ ಗುರು ಗೋಬಿಂದಸಿಂಗ್, ಮಹಾನ್ ಸಿಖ್ ಯೋಧೇ, ಪೌಡಿಯಾನ್ ಡ ಜೀವನ (ಸಸ್ಯಗಳ ಜೀವನ), ಜುರಮ್ ತೇ ಅಸಿನ್ (ನಾವು ಮತ್ತು ಅಪರಾಧಗಳು) ಈ ಕೃತಿಗಳು ಬಹುಮಾನ ಗಳಿಸಿವೆ. ಅಕಾಡೆಮಿಯ ಕಾರ್ಯಕರ್ತರ ಪೈಕಿ ಒಬ್ಬರಾದ ಷಂಷೇರ್ ಸಿಂಗ್ (ಜ. 1917) ಇಂಗ್ಲಿಷ್ ಹಾಗೂ ಪಂಜಾಬಿ ಸಾಹಿತ್ಯಗಳಲ್ಲಿ ವಿದ್ವಾಂಸರಾಗಿದ್ದು, ಇದರ ಕಾರ್ಯದ ಚಾಲಕಶಕ್ತಿಯಾಗಿರುವರು. ಪ್ರಕಟಣೆಗಳ ನಿರ್ದೇಶಕರಾಗಿ 50ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದಾರೆ; ಹಲವಕ್ಕೆ ಬಹುಮಾನ ಲಭಿಸಿವೆ. ಪ್ರಸಿದ್ಧ ಸಿತಾರ್ ವಾದಕ ನರೀಂದರ್ ಸಿಂಗ್ (ಜ. 1919) ಅಕಾಡೆಮಿಯ ಕಾರ್ಯನಿರ್ವಾಹಕ ನಿರ್ದೇಶಕರ ಪೈಕಿ ಒಬ್ಬರಾಗಿದ್ದು, ಮಾರಾಟ ವಿಭಾಗದ ಮೇಲ್ವಿಚಾರಣೆ ಇವರದಾಗಿದೆ. ಇವರು ಭಾರತೀಯ ಸಂಗೀತ, ಸಿಖ್ ಧರ್ಮ ಹಾಗೂ ಜನಪದ ಕತೆಗಳ ಬಗ್ಗೆ ಹಲವು ಕೃತಿರಚನೆ ಮಾಡಿರುವರು. ಪಂಜಾಬಿ ವಿಶ್ವವಿದ್ಯಾಲಯದ ಅಂಚೆ ಶಿಕ್ಷಣದ ನಿವೃತ್ತ ಸಹಾಯಕ ಕುಲಸಚಿವ ಕರ್ನಲ್ ದಲೀಪ್ ಸಿಂಗ್ ಆರೇಳು ಕೃತಿಗಳನ್ನು ರಚಿಸಿದ್ದು ಅಕಾಡೆಮಿ ಇವನ್ನು ಪ್ರಕಟಿಸಿದೆ ಸುರ್ಜೀತ್ ಕೌರ್ (ಜ. 1940) ಎಂಬವರ ಕೃತಿ ಜಂಗ್‍ನಾಮಾ ಷಾ ಮುಹಮ್ಮದ್ ಮಕ್ಕಳಿಗೆ ತುಂಬ ಪ್ರಿಯವಾಗಿದೆ. ಪಂಜಾಬೀ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಸಚಿವ ಬಲವಂತ್‍ಸಿಂಗ್ (ಜ. 1923) ಮಕ್ಕಳಿಗಾಗಿ ಇತಿಹಾಸ, ವಿe್ಞÁನ ಮತ್ತು ಖಗೋಳ ವಿe್ಞÁನಿಗಳಲ್ಲಿ ಸುಮಾರು ಹನ್ನೆರಡು ಕೃತಿರಚನೆ ಮಾಡಿದ್ದಾರೆ.

ಪಂಜಾಬಿನ ಸುಪ್ರಸಿದ್ಧ ಚಿತ್ರಕಾರ್ತಿ ಪೂಲಾರಾಣಿ (ಜ. 1929) ಗುರುನಾನಕರ ಜೀವನವನ್ನು ಚಿತ್ರಗಳ ಮೂಲಕ ರಚಿಸಿದ್ದು, ಇದು ಗುರುನಾನಕರ ಪಂಚಶತಮಾನೋತ್ಸವದ ಸಮಯದಲ್ಲಿ ಪ್ರಕಟವಾದ ಆರು ಅತ್ಯುತ್ತಮ ಕೃತಿಗಳ ಪೈಕಿ ಒಂದು ಎಂದು ಪರಿಗಣಿತವಾಗಿದೆ. ಈಕೆ ಮನೂಖ್ ಡಿ ಕಹಾನಿ (ಮಾನವನ ಕಥೆ) ಎಂಬ ಕೃತಿಯನ್ನೂ ರಚಿಸಿರುವರು.

ಉತ್ತಮ ಕೃತಿರಚನೆ, ಸಚಿತ್ರ ಮುದ್ರಣ, ಸುಲಭ ಬೆಲೆ ಇವು ಅಕಾಡೆಮಿಯ ಸಾಧನೆ.

ಪಂಜಾಬ್ ವಿಶ್ವವಿದ್ಯಾನಿಲಯದ ಭಾಷಾವಿಭಾಗ ಸುಮಾರು ಎಪ್ಪತ್ತೈದು ಕೃತಿಗಳನ್ನು ಪ್ರಕಟಿಸಿದೆ. ವಿe್ಞÁನ ಜೀವನಚರಿತ್ರೆ, ಪ್ರವಾಸ, ನಗರ, ಕ್ರೀಡೆ ಮತ್ತು ಸಾಮಾನ್ಯe್ಞÁನ ಹಾಗೂ ಸಚಿತ್ರ ನಿಘಂಟು ಇವುಗಳಿಗೆ ಸಂಬಂಧಿಸಿದ ಕೃತಿಗಳಿವೆ.

ಮಕ್ಕಳಿಗೆ ಮನರಂಜನೆ ಒದಗಿಸುವ, ಅವರ e್ಞÁನವನ್ನು ಅಧಿಕಗೊಳಿಸುವ ಸೃಜನಾತ್ಮಕ ಸಾಹಿತ್ಯದ ಬಗ್ಗೆ ಹೊಸ ಜಾಗೃತಿ ಮೂಡಿದೆ. ಇಲ್ಲಿಯತನಕ ಕೆಲವು ಅಪವಾದಗಳನ್ನು ಹೊರತುಪಡಿಸಿ ಪಂಜಾಬಿನಲ್ಲಿಯ ಮಕ್ಕಳ ಸಾಹಿತ್ಯ ಬಹುಜನರ ಕೈಗೆ ಎಟುಕದ ವಸ್ತುವಾಗಿ ಪರಿಣಮಿಸಿದೆ. ಎಲ್ಲಿಯ ತನಕ ಲೇಖಕರು ಮಕ್ಕಳ ಮನಸ್ಸನ್ನು ಅರಿತು, ಅವರ ಮಟ್ಟಕ್ಕೆ ಅನುಗುಣವಾಗಿ ಕೃತಿರಚನೆ ಮಾಡಲಾರರೊ ಅಲ್ಲಿಯತನಕ ಪ್ರತಿಫಲ, ಪರಿಣಾಮ ಅಷ್ಟಾಗಿ ಇರುವುದಿಲ್ಲವೆನ್ನಬೇಕಾಗಿದೆ.

ಬಂಗಾಳೀ: ಬಂಗಾಳಿಯಲ್ಲಿ ಮೊತ್ತಮೊದಲ ಶಿಶುಕೃತಿ ಪ್ರಕಟವಾದದ್ದು 1818ರಲ್ಲಿ ಎನ್ನಬಹುದು. ಇದರ ಸಂಪಾದಕ ಜಾನ್‍ಕ್ಲಾರ್ಕ್ ಮಾರ್ಷಮನ್. ಪ್ರಕಾಶಕರು: ಬಾಪ್ಟಿಸ್ಟ್‍ಮಿಷನ್, ಸಿರಾಂಪುರ. ಇದು ಸರಳವಾದ ಬಂಗಾಳಿಯಲ್ಲಿದ್ದು ಇಂಗ್ಲಿಷ್ ಮೂಲದ ಲಘುಪ್ರಬಂಧಗಳ ಭಾಷಾಂತರವಾಗಿತ್ತು. ಶಾಲೆಗಳಲ್ಲಿ ಬಳಸಲು ಬಂಗಾಳೀ ಪುಸ್ತಕಗಳು ಇರಲಿಲ್ಲವಾದುದರಿಂದ ಈ ಕೃತಿ ಅಪಾರ ಮೆಚ್ಚುಗೆ ಪಡೆಯಿತು.

ಬಂಗಾಲದಲ್ಲಿ ಪಾಶ್ಚಾತ್ಯ ಶಿಕ್ಷಣ ಪದ್ದತಿ ಜಾರಿಗೆ ತಂದವರು ಸಮಾಜಸುಧಾರಕ ರಾಜ ರಾಮ ಮೋಹನ್ ರಾಯ್ (1772-1833). ಇವರು ಗ್ರಾಮೀನ ಶಾಲೆಗಳಲ್ಲಿ ಬೋಧಿಸುತ್ತಿದ್ದ ಸಂಸ್ಕøತಾಧ್ಯಯನದ ಬದಲಿಗೆ ಇತಿಹಾಸ, ಭೂಗೋಳ, ವಿe್ಞÁನ ಹಾಗೂ ಆಂಗ್ಲಭಾಷೆಗಳನ್ನು ಬೋಧಿಸುವ ಹಲವು ಆಧುನಿಕ ಶಾಲೆಗಳನ್ನು ತೆರೆಯಲು ನೆರವಾದರು. ಇವರು ಬಂಗಾಳೀ ಬರೆವಣಿಗೆ ಸರಳಗೊಳಿಸಿದರು. ಸರಳ ವ್ಯಾಕರಣ ಸಿದ್ಧಪಡಿಸಿದರು. ಅನೇಕ ಉಪನಿಷತ್ತುಗಳನ್ನು ಸುಲಭಗ್ರಾಹ್ಯ ಬಂಗಾಳಿಗೆ ಭಾಷಾಂತರಿಸಿದರು. ಮಕ್ಕಳಿಗೆ ಮೂಲಭೂತವಾದ ಬಂಗಾಳೀ ಸಾಹಿತ್ಯ ಉದಯಿಸಲು ದಾರಿಮಾಡಿದರು. ರಾಮಮೋಹನರ ಅನಂತರ ಈ ಕ್ಷೇತ್ರಕ್ಕೆ ಬಂದವರು ಈಶ್ವರಚಂದ್ರ ವಿದ್ಯಾಸಾಗರರು (1820-91). ಇವರು ಶಿಕ್ಷಣ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಇವರನ್ನು ಬಂಗಾಳೀ ಮಕ್ಕಳ ಪಿತಾಮಹ ಎಂದು ಕರೆಯಬಹುದು. ಇವರು ಹಿಂದಿಯ ಬೇತಾಳ ಪೈಚಿಶೀಯನ್ನು ಆಧರಿಸಿ ಬೇತಾಳ ಪಂಚಬಿಂಶತಿ ಎಂಬ ಬಂಗಾಳೀ ಆವೃತ್ತಿ ಸಿದ್ಧಪಡಿಸಿದಾಗ (1847) ವಿದ್ಯಾಸಾಗರ ಯುಗ ಪ್ರಾರಂಭಗೊಂಡಿತು ಎನ್ನಬಹುದು. ಇವರು ಬಂಗಾಳೀ ವ್ಯಾಕರಣ ಬರೆದರು. ಬಂಗಾಳೀ ಭಾಷೆ ಸಂಸ್ಕøತ ಮೂಲದಿಂದ ಬಂದಿದ್ದರೂ ಅದಕ್ಕೆ ಇನ್ನು ಸಂಸ್ಕøತದ ಬೆಂಬಲ ಬೇಕಿಲ್ಲ ಎಂದು ಸಮರ್ಥಿಸಿದರು. ಇವರು ತಮ್ಮ ಕಥೆಗಳ ಸಂಕಲನ ಅಖ್ಯಾನಮಂಜರೀ (1863) ಮತ್ತು ಶಕುಂತಲಾ (1854)- ಇವುಗಳಲ್ಲಿ ಬಳಸಿರುವ ಭಾಷೆ ಈ ಅಂಶವನ್ನು ಸಮರ್ಥಿಸುತ್ತದೆ. ಮಕ್ಕಳ ಅಕ್ಷರ ಮತ್ತು ಕಾಗುಣಿತ ಪರಿಚಯ ಮಾಡಿಸಲು ವರ್ಣಪರಿಚಯ (1855) ಎಂಬ ಕೃತಿಯನ್ನು (ಎರಡು ಭಾಗಗಳು) ಪ್ರಕಟಿಸಿದರು. ಮೂರು ಭಾಗಗಳಲ್ಲಿ ಪ್ರಕಟಗೊಂಡ ಆಖ್ಯಾನಮಂಜರೀ ವಿದೇಶೀ ನೈಜಕಥೆಗಳ ಸಂಕಲನವಾಗಿದೆ. ಇವರ ಬೋಧೋದಯ (1851) ಮಾಲೆ ಮತ್ತು ಇತರ ಕೃತಿಗಳನ್ನು ಇಂದಿಗೂ ಅಭ್ಯಸಿಸಲಾಗುತ್ತಿದೆ. ಶಿಕ್ಷಣತಜ್ಞ ಪಂಡಿತ ಮದನಮೋಹನ ತರ್ಕಾಲಂಕಾರ (1811-58) ಈಶ್ವರಚಂದ್ರರ ಅನುಯಾಯಿಗಳ ಪೈಕಿ ಒಬ್ಬರು. ಇವರ ಶಿಶುಶಿಕ್ಷ (ಮೂರು ಭಾಗಗಳಲ್ಲಿ) 1849ರಲ್ಲಿ ಪ್ರಕಟಗೊಂಡಿತು. ಇದರಲ್ಲಿಯ ಪಖೀ ಸಬ್ ಕೊರೆ ರಬ (ಎಲ್ಲ ಪಕ್ಷಿಗಳೂ ಚಿಲಿಪಿಲಿಗುಟ್ಟುವುವು) ಎಂಬ ಪದ್ಯ ಇಂದಿಗೂ ಪ್ರಸಿದ್ಧವಾಗಿದೆ.

ಮಕ್ಕಳ ನಿಯತಕಾಲಿಕೆಗಳು ಭಾರತದ ಇತರ ಎಲ್ಲ ಸಾಹಿತ್ಯಗಳಂತೆ ಬಂಗಾಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ. ಬಂಗಾಲದಲ್ಲಿ ನಿಯತಕಾಲಿಕೆಗಳಿಗೆ ಸುದೀರ್ಘ ಇತಿಹಾಸವಿದೆ. ಕಲ್ಕತ್ತ ಸ್ಕೂಲ್ ಬುಕ್ ಸೊಸೈಟಿ (ಸ್ಥಾಪನೆ 1817) 1822ರಲ್ಲಿ ಪಶ್ವಾವಲಿ ಎಂಬ ಪ್ರಾಣಿಜೀವನಕ್ಕೆ ಸೀಮಿತವಾಗಿದ್ದ ನಿಯತಕಾಲಿಕೆ ಪ್ರಕಟಿಸಿತು. ಇದು ನಿಯತವಾಗಿ ಬರುತ್ತಿರಲಿಲ್ಲ. ಮರದ ಪಡಿಯಚ್ಚುಗಳಿಂದ ಮುದ್ರಿಸಲಾದ ಚಿತ್ರಗಳನ್ನು ಅನಂತರ ಸೇರಿಸಲಾಯಿತು. ಇಂಗ್ಲಿಷಿನಿಂದ ಭಾಷಾಂತರಗೊಳ್ಳುತ್ತಿದ್ದ ಈ ಲೇಖನಗಳು ನಿಜವಾಗಿಯೂ ಉತ್ತಮವಾಗಿದ್ದುವು. 1878ರಲ್ಲಿ ಬಾಲಕಬಂಧು ಪ್ರಕಟವಾಗಲಾರಂಭಿಸಿತು. ಇದರಲ್ಲಿ ಕಿರಿಯ ಓದುಗರ ಬರಹಗಳು ಸೇರಿದ್ದುವು. ಅದರಿಂದ ಯುವಲೇಖಕರಿಗೆ ಪ್ರೋತ್ಸಾಹ ದೊರೆಯಿತು. ಸಖಾದಲ್ಲಿ (1833) ಸಮಕಾಲೀನ ಘಟನೆಗಳ ಬಗ್ಗೆ ಮೂಲ ಲೇಖನಗಳು ಪ್ರಕಟಗೊಂಡವು. ಮಕ್ಕಳ ಪ್ರಥಮ ಧಾರಾವಾಹಿ ಭೀಮರ್‍ಕಪಾಲ್ ಇದರಲ್ಲಿ ಬೆಳಕು ಕಂಡಿತು. ಕಲ್ಕತ್ತೆಯ ಜೊರಾಸಂಕೊದ ಟಾಗೂರರು ಬಾಲಕ್ ಅನ್ನು ಪ್ರಕಟಿಸಿದರು (1885). ಇದರ ಸಾಹಿತ್ಯಕ ಮಟ್ಟ ಉತ್ತಮವಾಗಿತ್ತು. ರವೀಂದ್ರನಾಥರು ಮತ್ತು ಅವರ ಸೋದರ ಸೋದರಿಯರು ಹಾಗೂ ಮಿತ್ರರು ಇದರ ಲೇಖಕ ವರ್ಗದಲ್ಲಿ ಸೇರಿದ್ದರು. ರವೀಂದ್ರರ ಅಕ್ಕ ಸ್ವರ್ಣಕುಮಾರಿದೇವಿ (1855-1932) ಹಾಗೂ ಸಂಬಂಧಿ e್ಞÁನ ನಂದಿನಿದೇವಿ ಮಕ್ಕಳಿಗಾಗಿ ಹಲವು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಬಂಗಾಳಿಯ ಪ್ರಥಮ ರೋಮಾಂಚಕಾರಿ ಕಥನ ತಗಿಯು (ಕೇದಾರನಾಥ ಬಂದ್ಯೋಪಾಧ್ಯಾಯ, 1863-1949) ಬಾಲಕ್‍ನಲ್ಲಿ ಮೊದಲು ಪ್ರಕಟಗೊಂಡಿತು.

ಚಿತ್ರಗಳು, ಕಥೆಗಳು, ವೈe್ಞÁನಿಕ ಲೇಖನಗಳು, ಮಹಾಪುರುಷರ ಜೀವನಗಳು, ವಿದೇಶ ಪ್ರವಾಸ ಹಾಗೂ ಪುರಾತತ್ವ ಶಾಸ್ತ್ರವೂ ಸೇರಿದಂತೆ ಇದ್ದ ಸಾಥಿ 1893ರಲ್ಲಿ ಪ್ರಕಟಗೊಂಡಿತು. 20ನೆಯ ಶತಮಾನದ ಮೊದಲ ಭಾಗದ ಪ್ರವರ್ತಕರಾದ ಜೋಗೀಂದ್ರನಾಥ ಸರ್ಕಾರ್ (1866-1937) ಮತ್ತು ಉಪೇಂದ್ರಕಿಶೋರ ರಾಯ್‍ಚೌಧುರಿ (1863-1915) ಸಾರ್ವಜನಿಕರ ಗಮನಕ್ಕೆ ಬಂದರು. ರಾಯ್‍ಚೌಧುರಿಯವರ ಮೊತ್ತಮೊದಲ ನಾಟಕ ಬೇಜಾರಾಂ ಕೇನಾರಾಂ ಇದರಲ್ಲಿ ಪ್ರಕಟವಾಯಿತು. ಜೋಗೀಂದ್ರನಾಥರ ಹಾಸ್ಯಮಯ ಕವಿತೆಗಳು ಹಾಗೂ ಕಥೆಗಳು ಪ್ರಕಟಗೊಂಡವು. ಈ ವೇಳೆಗೆ ಮಕ್ಕಳ ಲೇಖಕರು ಉತ್ತಮ ವಿಷಯಗಳನ್ನು ಹಾಸ್ಯಮಯವಾಗಿ ಸಮಾವೇಶಗೊಳಿಸುವ ಮರ್ಮ ಅರಿತಿದ್ದರು.

ರವೀಂದ್ರನಾಥ ಟಾಗೂರ್, ರಮಾನಂದ ಚಟರ್ಜಿ (1865-1943), ಬಿಪಿನ್‍ಚಂದ್ರಪಾಲ್ (1858-1932), ಶಿವನಾಥಶಾಸ್ತ್ರಿ (1847-1919) ಮತ್ತು ಸರ್ ಜಗದೀಶಬೋಸ್ (1859-1937) ಇವರಿಂದ ಪ್ರೋತ್ಸಾಹಿತವಾದ ಮುಕುಲ್ (1895) ಬೆಳಕಿಗೆ ಬಂದಿತು. 1913ರಲ್ಲಿ ಉಪೇಂದ್ರ ಕಿಶೋರ್ ರಾಯ್‍ಚೌಧುರಿ ಸಂದೇಶ್ ಎಂಬ ಮಾಸಪತ್ರಿಕೆ ಪ್ರಕಟಿಸಲಾರಂಭಿಸಿದರು. ಇದರ ಗುಣಮಟ್ಟವನ್ನು ಇಂದಿಗೂ ಮೀರಲಾಗಿಲ್ಲ. ಉತ್ತಮ ಕಥೆಕವನಗಳ ಜೊತೆಗೆ ಪ್ರತಿ ತಿಂಗಳೂ ರಾಮಾಯಣ, ಮಹಾಭಾರತ, ಪುರಾಣಗಳು, ನೀತಿಕಥೆಗಳು, ಜನಪದಕಥೆಗಳು ಮುಂತಾದವನ್ನು ಪ್ರಕಟಿಸುತ್ತಿದ್ದರು. ಇವುಗಳ ಜೊತೆಗೆ ಕಿರುನಾಟಕಗಳು, ಜೀವನಚರಿತ್ರೆಗಳು, ಸ್ವೆನ್ ಹೆಡಿನ್ನನ ಪ್ರವಾಸಗಳು, ನಿಜಜೀವನದ ಸಾಹಸಕಥೆಗಳು, ಹಾಡುಗಳು, ಕವಿತೆಗಳು, ಪ್ರಕಟವಾಗುತ್ತಿದ್ದುವು. ಸಂದೇಶ್‍ಗೆ ಉಪೇಂದ್ರಕಿಶೋರರ ಮೊಮ್ಮಗ ಸತ್ಯಜಿತ್ ರೇ ಪುನಶ್ಚೈತನ್ಯ ನೀಡಿದರು. ಇದು ನಿಯತಕಾಲಿಕೆಗಳು ನಡೆದುಬಂದ ಸಂಕ್ಷಿಪ್ತದಾರಿ.

ಅಂದಿನ ದಿನಗಳಲ್ಲಿ ಮಕ್ಕಳ ಪುಸ್ತಕಗಳಿಂದ ಲಾಭಗಳಿಸುವಂತಿಲ್ಲ; ಆ ಯೋಚನೆ ಸಹ ಸುಳಿಯುವಂತಿರಲಿಲ್ಲ. ಕಲ್ಕತೆಯ ಮಧ್ಯಮದರ್ಜೆಯ ಕುಟುಂಬದಲ್ಲಿ ಜನಿಸಿದ ಜೋಗೀಂದ್ರನಾಥ ಸರ್ಕಾರ್, 19ನೆಯ ಶತಮಾನದ ಕೊನೆಯ ದಶಕದಲ್ಲಿ ಸಿಟಿ ಬುಕ್ ಸೊಸೈಟಿ ಎಂಬ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ, ಇಡೀ ಜೀವನವನ್ನು ಮಕ್ಕಳ ಪುಸ್ತಕ ಪ್ರಕಟಣೆಗಾಗಿ ಮೀಸಲಿಟ್ಟರು. ಮಕ್ಕಳಿಗಾಗಿ ಕಡಿಮೆ ಬೆಲೆಯ ಆಕರ್ಷಕವಾದ ಹಲವು ಪುಸ್ತಕಗಳನ್ನು ಪ್ರಕಟಿಸಿದರು. ಈ ಪುಸ್ತಕಗಳ ಪೈಕಿ ಮೊದಲನೆಯದು ಹಾಷಿ ಓ ಖೇಲಾ (ನಗು ಮತ್ತು ಆಟ) 1891ರಲ್ಲಿ ಪ್ರಕಟಗೊಂಡು, ಕೋಲಾಹಲವನ್ನೇ ಉಂಟುಮಾಡಿತು. ಮಕ್ಕಳ ಸಾಹಿತ್ಯದಲ್ಲಿ ದೇಶಕಾಲಗಳ ಪರಿಮಿತಿ ಇರಕೂಡದು ಎಂಬುದನ್ನು ಇದು ಪ್ರದರ್ಶಿಸಿತು.

ಟಾಗೂರರ ಕುಟುಂಬ ವರ್ಗದವರ ಕೊಡುಗೆಯೂ ಗಣನೀಯವಾಗಿದೆ. ಇವರ ಪೈಕಿ ಅಗ್ರಸ್ಥಾನ ರವೀಂದ್ರನಾಥ ಟಾಗೂರರಿಗೆ ಸಲ್ಲುತ್ತದೆ. ಇವರು ಆದರ್ಶ ಗುರುವಾಗಿದ್ದರು. ಇವರ ಶಿಶುಗೀತೆಗಳು ಹೆಚ್ಚಾಗಿ ಶಿಶು (1903) ಮತ್ತು ಶಿಶುಭೋಲಾನಾಥ (1922, ಎರಡು ಭಾಗಗಳು) ಇವುಗಳಲ್ಲಿ ಸಂಗ್ರಹಗೊಂಡಿವೆ. ಹಾಸ್ಯಕೌತುಕ (1907) ಮತ್ತು ಶೇ ಯಲ್ಲಿ (1937) ಇರುವ ಗದ್ಯಚಿತ್ರಗಳು ಅದ್ಭುತವಾಗಿವೆ. ಹಾಸ್ಯ ವ್ಯಂಗ್ಯಭರಿತವಾದ ಕೆಲವು ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಲಕ್ಷ್ಮೀರ ಪರೀಕ್ಷಾ ಉಲ್ಲೇಖಾರ್ಹವಾಗಿದೆ. ಅಂಧನಿಯಮಗಳ ವಿರುದ್ಧ ಪ್ರತಿಭಟಿಸುವ ಅಚಲಾಯತನ (1911) ಅತ್ಯಂತ ಗಮರ್ನಾಹ ಕೃತಿ. ಇವು ಇವರ ಕೊಡುಗೆಯ ಬಗ್ಗೆ ಆಂಶಿಕನೋಟ ಅಷ್ಟೆ.

ಅಬನೀಂದ್ರನಾಥ ಟಾಗೂರ್ (1871-1951) ಮಹಾನ್ ಕಲಾಕಾರರು, ಪ್ರತಿಭಾಶಾಲಿಗಳು. 1895ರಲ್ಲಿ ಶಕುಂತಲಾ ರಚಿಸಿದರು, ಖೀರೇರ್ ಪುತಲ್ 1896ರಲ್ಲಿ ಪ್ರಕಟಗೊಂಡಿತು. ರೊಸ್ಟಾಂದ್‍ನ ಫ್ರೆಂಚ್ ಭಾಷೆಯ ಟಾಮ್ ತಂಬ್‍ನ ರೂಪಾಂತರ ಬುದೋ ಆಂಗ್ಲಾ (ಹೆಬ್ಬೆಟ್ಟುಗಾತ್ರದ ಹುಡುಗ, 1914 ರಾಜಕಾಹಿನಿ ರಾಜರ ಕಥೆಗಳು, 1909-31) ಮುಂತಾದವು ಪ್ರಕಟಗೊಂಡವು.

ಸುಕುಮಾರ ರಾಯ್ (1887-1923) ಅಲ್ಪಾಯುವಾದರೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಪ್ರಭಾವ ಬೀರಿರುವರು. ಇವರು ಅನೇಕ ಹಾಸ್ಯ ಕವಿತೆಗಳನ್ನು ರಚಿಸಿದರು. ಇವರ ನಾಟಕಗಳು ವಿಶಿಷ್ಟವಾಗಿವೆ. ಅಬೊಲ್ ತಬೊಲ್, ಹ-ಜ-ಬ-ರ-ಲ ಪಾಗ್ಲಾದಾಶು ಮತ್ತು ಇತರ ಕಥೆಕವಿತೆಗಳು ಹಾಸ್ಯದ ದೃಷ್ಟಿಯಿಂದ ಕೂಡಿವೆ. ಇವರು ಸ್ವಲ್ಪಕಾಲ ಸಂದೇಶದ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಇವರ ಅಕ್ಕ ಸುಖಲತರಾವ್ (1886-1969) ಪಾಶ್ಚಾತ್ಯ ಕಿನ್ನರ ಕಥೆಗಳ ರೂಪಾಂತರಗಳಾದ ಗಲ್ಪರ್‍ಬೋಯ್ (ಕಥೆಪುಸ್ತಕ, 1914) ಮತ್ತು ಆರೋ ಗಲ್ಪಗಳನ್ನು (ಮತ್ತಷ್ಟು ಕಥೆಗಳು, 1915) ಪ್ರಕಟಿಸಿದರು.

ಕುಲದರಂಜನ್ (1878-1950) ಉಪೇಂದ್ರಕಿಶೋರರ ತಮ್ಮ. ಇವರು ಬೇತಾಳ ಪಂಚಬಿಂಶತಿ ಮತ್ತು ಬತ್ತೀಷ್ ಸಿಂಹಾಸನ್‍ಗಳ ಮಕ್ಕಳ ಆವೃತ್ತಿ ಹಾಗೂ ಇಲಿಯಡ್, ಒಡಿಸ್ಸಿ, ಷೆರ್ಲಾಕ್ ಹೋಮ್ಸ್ ಕಥೆಗಳೂ ದಿ ಲಾಸ್ಟ್‍ವಲ್ರ್ಡ್ ಮೊದಲಾದವುಗಳ ಅನುವಾದಗಳಿಗಾಗಿ ಇಂದಿಗೂ ಖ್ಯಾತರಾಗಿದ್ದಾರೆ. ಇವರ ಮತ್ತೊಬ್ಬ ಸೋದರ ಪ್ರಮದ ರಂಜನರಾಯ್, ಬರ್ಮಾ ಹಾಗೂ ಸಯಾಮಿನ ದುರ್ಗಮ ಅರಣ್ಯಗಳಲ್ಲಿಯ ತಮ್ಮ ಅನುಭವಗಳನ್ನು ಬೋನರ್ ಖಬರ್‍ನಲ್ಲಿ (ಕಾಡಿನ ವರದಿಗಳು) ಹಾಸ್ಯಮಯವಾಗಿ ವಿವರಿಸಿದ್ದಾರೆ. ಹೇಮೇಂದ್ರ ಕುಮಾರ ರಾಯ್ (1888-1963) ಅನೇಕ ಸಾಹಸಕಥೆಗಳನ್ನು ರಚಿಸಿದ್ದಾರೆ. ಇವಾವುವೂ ನಿಜಜೀವನದವಲ್ಲ; ಆದರೂ ಇವು ತುಂಬ ಜನಪ್ರಿಯವಾಗಿವೆ. ಇವರು ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವರು. ನಾಟಕಗಳ ಸಂಖ್ಯೆ ಕಡಿಮೆ. ಹೆಚ್ಚಿನ ಪ್ರಕಟಣ ಸಂಸ್ಥೆಗಳು ಪ್ರಕಟಿಸುತ್ತಿರುವ ಮಕ್ಕಳ ಪುಸ್ತಕಗಳ ಗುಣಮಟ್ಟ ಅಷ್ಟೇನೂ ಉತ್ತಮವಾಗಿಲ್ಲ.

ಬಂಗಾಳೀ ಮಕ್ಕಳ ಸಾಹಿತ್ಯದಲ್ಲಿ ಪಾಶ್ಚಾತ್ಯ ಕೃತಿಗಳ ಹಲವಾರು ಭಾಷಾಂತರಗಳು ಮತ್ತು ರೂಪಾಂತರಗಳಿವೆ. ಭಾಷಾಂತರ ಮತ್ತು ರೂಪಾಂತರದ ಗುಣಮಟ್ಟ ಒಂದೇ ಸಮನಾಗಿಲ್ಲ. ಮೊದಲಿನ ಅನುವಾದಗಳ ಪೈಕಿ ಮಧುಸೂದನ ಮುಖ್ಯೋಪಾಧ್ಯಾಯರ ಹ್ಯಾನ್ಸ್ ಕ್ರಿಶ್ಚಿಯನ್ ಆ್ಯಂಡರ್‍ಸನ್‍ನ 'ಅಗ್ಲಿ ಡಕ್ಲಿಂಗ್ ಮತ್ತು ಇನ್ನೊಂದು ಕಥೆ ಸೇರಿವೆ. ಇದರ ಬಂಗಾಳೀ ಶೀರ್ಷಿಕೆ ಕುತ್ಸೀತ್ ಹ್ಯಾನ್ಸ್‍ಶಾಬಕ್ ಓ ಖರ್ಬಾಕಾರರ್ ಬಿಬರಣ್ (1857). ಶಿವನಾಥಶಾಸ್ತ್ರಿ, ಜೋಗೀಂದ್ರನಾಥಸರ್ಕಾರ್ ಮತ್ತು ಮಣೀಂದ್ರಲಾಲ್ ಬಸು-ಇವರು ಆ್ಯಂಡರ್‍ಸನ್‍ನ ಕೃತಿಗಳ ಅನುವಾದ ಮಾಡಿದರು. ಬುದ್ಧದೇವ ಬೋಸ್ (1908-74) ಆಸ್ಕರ್ ವೈಲ್ಡ್‍ನ ಕೃತಿಗಳನ್ನು ಅನುವಾದಿಸಿ ಹಾಯುಯಿ (1944), ಸುಖೀರಾಜಪುತ್ರ (1956) ಮತ್ತು ಸ್ವಾರ್ಥಪರದೈತ್ಯ (1956) ಇವನ್ನು ಪ್ರಕಟಿಸಿದರು. ಪಾಶ್ಚಾತ್ಯ ಕೃತಿಗಳಿನೇಕವನ್ನು ಭಾಷಾಂತರಿಸಿದ ಮತ್ತೊಬ್ಬರೆಂದರೆ ಮನವೇಂದ್ರ ವಂದ್ಯೋಪಾಧ್ಯಾರು ಇವರು ಆಫ್ರಿಕಾ ಮತ್ತು ವೆಸ್ಟ್‍ಇಂಡೀಸ್‍ಗಳ ಕಥೆಕವಿತೆಗಳ ಭಾಷಾಂತರಗಳೊಡನೆ ಹರಬೊಲಾ (1976) ಎಂಬ ಕೃತಿಯನ್ನೂ ಸಂಕಲಿಸಿರುವರು. ಶೌರೀಂದ್ರಮೋಹನ ಮುಖ್ಯೋಪಾಧ್ಯಾಯ, ನೃಪೇಂದ್ರ ಕೃಷ್ಣ ಚಟರ್ಜಿ, ಕಾಮಾಕ್ಷೀಪ್ರಸಾದ್ ಚಟರ್ಜಿ ಇವರೂ ಹಲವಾರು ಕೃತಿಗಳನ್ನು ಬಂಗಾಳಿಗೆ ಭಾಷಾಂತರಿಸಿರುವರು.

ಮೊದಲು ನೈಜಸಾಹಸದ ಹಾಗೂ ವಿe್ಞÁನದ ವಿಷಯಗಳನ್ನಾಧರಿಸಿದ ಕಥೆಗಳು ಬಂದುವು. ಇವು ಹೆಚ್ಚು ಜನಪ್ರಿಯವಾಗಿದ್ದುವು. ಅನಂತರದಲ್ಲಿ ಅದ್ಭುತಕಥೆಗಳು, ವಿಚಿತ್ರಕಥೆಗಳು (ಇಪ್ಪತ್ತರ ದಶಕದಲ್ಲಿ) ಬಂದುವು. ಹೇಮೇಂದ್ರ ಕುಮಾರರಾಯ್, ತರುವಾಯ ಸತ್ಯಜಿತ್ ರೇ ಮೊದಲಾದವರು ಈ ಬಗೆಯ ಕಥೆಗಳನ್ನು ಬರೆದರು. ಪ್ರೊ. ಷೌಕೂಸ್ ಡೈರಿ, ಏಕ್ ಡಜನ್ ಗಲ್ಪ (ಒಂದು ಡಜನ್ ಕಥೆಗಳು) ಇತ್ಯಾದಿ ಸತ್ಯಜಿತ್ ರೇ ಅವರ ಕೃತಿಗಳು. ಪ್ರೇಮೇಂದ್ರ ಮಿತ್ರರ ಕುಹಕರ್ ದೇಶ್, ಡ್ರಾಗನ್ನೊರ್ ನಿಶ್ವಾಸ್ ಅಪೂರಂತ ಘನಡ ಮೊದಲಾದವು ವೈe್ಞÁನಿಕ ಆಧಾರವಿದ್ದು ಬೋಧಪ್ರದವೂ ಮನೋರಂಜನಕವೂ ಆಗಿವೆ. ಕಿರಿಯರಾದ ಅಜೇಯರಾಯ್ ಕಾಲ್ಪನಿಕ ಮತ್ತು ಯುಕ್ತಿಯ ಹಲವು ಉತ್ತಮ ಕಥೆಗಳನ್ನು ಬರೆದಿರುವರು. ಉದಾಹರಣೆಗೆ ಅಮೆಜಾನೋರ್ ಗಹನೇ, ಡಾಕ್ಟರ್ ಕುಟೀರ ರಹಸ್ಯ, ಫೆರೊಮೊನ್ ಮತ್ತು ಮುಂಗು. ಬಿಭೂತಿ ಭೂಷಣ ವಂದ್ಯೋಪಾಧ್ಯಾಯರ ಚಂದರ್‍ಪಹರದಿಂದ (ಚಂದ್ರಪರ್ವತಗಳು) ಪ್ರಾರಂಭಗೊಂಡ ಧೈರ್ಯ ಸಾಹಸಗಳ ಆದರ್ಶವನ್ನನುಸರಿಸಿ ಶಿಶಿರ ಮಜುಂದಾರ್ ತೂಫಾನ್‍ದರ್ಯರ್ ಪರನ ಮಝೀ (ಚಂಡಮಾರುತ ಸಾಗರದ ಮೀನುಗಾರ) ಮತ್ತು ಸಿಂಧು ತಲೇರ್ ಸಂಧನೇ (ಪಾತಾಳ ನಿಧಿಯ ಅನ್ವೇಷಣೆಯಲ್ಲಿ) ರಚಿಸಿರುವರು.

ಕಲ್ಪನೆ ಹಾಗೂ ವಿಚಿತ್ರವಾದ ಭೂತಕಥೆಗಳನ್ನು ಅಬನೀಂದ್ರನಾಥ, ಮಣಿಲಾಲ ಗಂಗೋಪಾಧ್ಯಾಯ ಮೊದಲಾದವರು ಬರೆಯುತ್ತಿದ್ದರು. ಈಗ ಸತ್ಯಜಿತ್ ರೇ, ಪ್ರೇಮೇಂದ್ರಮಿತ್ರ, ಲೀಲಾ ಮಜುಂದಾರ್ ಮತ್ತಿತರರು ಈ ಹಾದಿಯಲ್ಲಿ ಸಾಗಿದ್ದಾರೆ. ದಕ್ಷಿಣಾರಂಜನ್, ತ್ರೈಲೋಕ್ಯನಾಥ್, ಸೀತಾ ಮತ್ತು ಶಾಂತಾದೇವಿಯವರ ಜನಪದಕಥೆಗಳು ಪ್ರಕಟಗೊಂಡ ಬಳಿಕ ಈ ಕ್ಷೇತ್ರ ಈಗ ವಿಸ್ತರಿಸಿದೆ. ಲಾಲ್ ಬೆಹಾರಿ ಡೇಯವರ ಪೋಕ್ ಟೇಲ್ಸ್ ಆಫ್ ಬೆಂಗಾಲ್ ಬಂಗಾಳಿಗೆ ಭಾಷಾಂತರಗೊಂಡಿದೆ. ಗೌರೀ ಧರ್ಮಪಾಲರ ಮಲ್ಯಷ್ರಿರ್ ಪಂಚತಂತ್ರ ಎಂಬ ಪ್ರಾಚೀನ ಕೃತಿಗಳ ಸಂಕ್ಷಿಪ್ತ ಆವೃತ್ತಿ ಮನೋರಂಜಕವಾಗಿವೆ. ಇವೆಲ್ಲ ತುಂಬ ಜನಪ್ರಿಯವಾಗಿದ್ದುವು.

ಪ್ರವಾಸ ಕಥನಗಳು ಬಂಗಾಳೀ ಮಕ್ಕಳ ಸಾಹಿತ್ಯದಲ್ಲಿ ವಿಶಿಷ್ಠಸ್ಥಾನ ಪಡೆದಿವೆ. ಮೋಹನಲಾಲ್ ಗಂಗೋಪಾಧ್ಯಾಯ, ಸುಬೋಧ ಚಕ್ರವರ್ತಿ (ಭಾರತಯಾತ್ರೆ ಹಲವು ಸಂಪುಟಗಳು) ಉಲ್ಲೇಖಾರ್ಹರು. ಉತ್ತಮ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಉದಾಹರಣೆಗೆ ಬಿಭೂತಿಭೂಷಣ ಮುಖ್ಯೋಪಾಧ್ಯಾಯರ ಮೊರಿಯೊ ಜರ ರೊಯಿಲೊ ಬೆಂಚೇ (ಮರಣಾನಂತರ ಇರುವವರು), ಮಹಾಶ್ವೇತಾದೇವಿಯವರ ಝಾನ್ಸಿರ್‍ರಾಣಿ, ಲೀಲಾ ಮಜುಂದಾರರ ಉಪೇಂದ್ರಕಿಶೋರ್ ಮತ್ತು ಐ-ಜ-ದೇಖಾ (ನಾ ಕಂಡಂತೆ-ಟಾಗೂರ್). ಧೀರೇಂದ್ರಲಾಲ್ ಧರ್ ಐತಿಹಾಸಿಕ ವಿಷಯಗಳ ಬಗ್ಗೆ ಹಲವಾರು ನಾಟಕಗಳನ್ನು ಹಾಗೂ ಇಂದಿನ ಬಾಲಜೀವನದ ಅವಿಸ್ಮರಣೀಯ ದಾಖಲೆ ಮಹಾನಗರಿರ್ ಪಥೆನ್ನು (ನಗರದ ಹಾದಿಗಳಲ್ಲಿ) ಬರೆದಿರುವರು, ಕ್ರೀಡಾ ಕಥೆಗಳು ಪ್ರಕಟಗೊಂಡಿವೆ.

ವಿವಿಧ ವೈe್ಞÁನಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಕಲಾ ವಿಷಯಗಳ ಬಗ್ಗೆ ಬೋಧೋದಯ ಮಾಲೆಯ ಕಿರುಹೊತ್ತಗೆಗಳು ಮಕ್ಕಳಿಗೆ ವರಪ್ರದವಾಗಿವೆ. ಪಳೆಯುಳಿಕೆಗಳು, ಪ್ರಾಚೀನ ಪ್ರವಾಸಿಗಳು, ಪರಿಸರ ವಿe್ಞÁನ, ನದಿಗಳು ಇತ್ಯಾದಿ ವಿಷಯಗಳ ಬಗ್ಗೆ ತಜ್ಞರು ಕೃತಿರಚನೆ ಮಾಡಿರುವರು. ಧೀರೇಂದ್ರಧರ್‍ರ ಐತಿಹಾಸಿಕ ನಾಟಕಗಳು ಹಾಗೂ ಲೀಲಾ ಮಜುಂದಾರರ ಕೆಲವು ನಾಟಕಗಳಿರುವುದಾದರೂ ಪಶ್ಚಿಮ ಬಂಗಾಲದಲ್ಲಿಯ ಮಕ್ಕಳ ಸಾಹಿತ್ಯದ ನಾಟಕಕ್ಷೇತ್ರ ಬಡವಾಗಿಯೇ ಉಳಿದಿವೆ. ವಿಧಾಯಕ ಭಟ್ಟಾಚಾರ್ಯರ ಹಾಸ್ಯ ಪ್ರಧಾನ ನಾಟಕಗಳು ಮಕ್ಕಳಿಗೆ ತುಂಬ ಆನಂದ ನೀಡುತ್ತವೆ. ಪ್ರತಿವರ್ಷ ನೂರಾರು ಕವಿತಾಸಂಕಲನಗಳು ಪ್ರಕಟವಾಗುತ್ತಿವೆ. ಇವುಗಳಲ್ಲಿ ಆನಂದ ಶಂಕರ ರೇಯವರ ಉರ್ಹಿಕಿ ಧನೇರ್ ಮುರ್ಖಿ ಹೊಯಿ ರೇ ಬಾಬುಯಿ ಹೊಯಿ ಮತ್ತು ಅಮಿತಾಭ್ ಚೌಧುರಿಯವರ ಕವನ ಕೃತಿಗಳು ಅತ್ಯಂತ ಆಕರ್ಷಕವಾಗಿವೆ. ದಾಸಗುಪ್ತರ ನೀಳ್ಗವನ ಶ್ಯಾಮಲ ದಿಘೇರ್ ಈಶಾನ ಕೊನೆ ಅತ್ಯುತ್ತಮವಾಗಿದೆ.

ರೇವಂತ ಗೋಸ್ವಾಮಿಯವರ ಕಿರುಕಾದಂಬರಿ ಆರು ಮಿತುರ್ ಕಥಾ, ವಿe್ಞÁನಿ ಗೋಪಾಲಚಂದ್ರ ಭಟ್ಟಾಚಾರ್ಯರ ಮಕರ್ಸ (ಜೇಡಗಳು, ನೈಸರ್ಗಿಕ ಇತಿಹಾಸದ ಬಗ್ಗೆ ಕೃತಿಗಳು) ಓದುಗನಿಗೆ ವಿಶಿಷ್ಟ ಅನುಭವನೀಡುತ್ತವೆ. ಬೇಟೆ ಕಥೆಗಳು, ವನ್ಯಜೀವಿ ಕಥೆಗಳು ಇತ್ಯಾದಿ ನಿಯತಕಾಲಿಕೆಗಳಲ್ಲಿ ಬಂದಿದ್ದರೂ ಕೃತಿರೂಪದಲ್ಲಿ ಬಂದಿಲ್ಲ.

ಆಧುನಿಕ ಮಕ್ಕಳ ನಿಯತಕಾಲಿಕೆಗಳ ಬಗ್ಗೆ ಹೇಳುವುದಾದಲ್ಲಿ ಸಂದೇಶ್ ಪ್ರಕಟಗೊಳ್ಳುವುದಕ್ಕೆ ಮೊದಲು ಮತ್ತು ಅನಂತರ ಬಂದವಲ್ಲಿ ಉಲ್ಲೇಖಾರ್ಹವಾದವು: ಕ್ರಿಶ್ಚಿಯನ್ ವರ್ನಾಕ್ಯುಲರ್ ಸೊಸೈಟಿಯ ಸತ್ಯಪ್ರದೀಪ (1860), ಮತ್ತೊಂದು ಕ್ರೈಸ್ತ ಸಂಸ್ಥೆಯ ಜ್ಯೋತಿರಂಗನ (1869), ಶಿಶು ಮತ್ತು ಧ್ರುವ (ಎರಡೂ 1913ರಲ್ಲಿ), ಸುಧೀರಚಂದ್ರ ಸರ್ಕಾರ್ ಸಂಪಾದಿತ ಮೌಚಾಕ್ (1922)- ಇದರಲ್ಲಿ ಖೋಕಾ ಖುಕು (1924); ಮನೋರಂಜನ್ ಭಟ್ಟಾಚಾರ್ಯ ಸಂಪಾದಿತ ರಾಮಧನು, ರಂಗಮಶಾಲಾ ಮತ್ತು ಪಾಠಶಾಲಾ (ನರೇಂದ್ರದೇವ ಸಂಪಾದಿತ). ಇವುಗಳ ಪೈಕಿ ಹೆಚ್ಚಿನವು ಈಗ ಪ್ರಕಟವಾಗುತ್ತಿಲ್ಲ, ಮತ್ತೆ ಕೆಲವು ಬರಲಾರಂಭಿಸಿವೆ. ಮಧ್ಯ ವಯಸ್ಕರಲ್ಲಿ ಅನೇಕರು ಹಿಂದೆ ಪ್ರಕಟಗೊಳ್ಳುತ್ತಿದ್ದ ಉತ್ತಮ ನಿಯತಕಾಲಿಕೆಗಳ ಬಗ್ಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುವರು.

ಕ್ಷಿತೀಂದ್ರನಾರಾಯಣ ಭಟ್ಟಾಚಾರ್ಯ ಮತ್ತು ಪೂರ್ಣಚಂದ್ರ ಚಕ್ರವರ್ತಿ ಸಂಪಾದಿಸಿರುವ "ಚೋಟಾದರ್ ವಿಶ್ವಕೋಶ" (1966-ಐದು ಸಂಪುಟಗಳು) ಬಂಗಾಳಿ ಮಕ್ಕಳ ಅಮೂಲ್ಯ ಕೃತಿಯಾಗಿದೆ. e್ಞÁನಪೀಠ ಪ್ರಶಸ್ತಿ ವಿಜೇತೆ ಆಶಾಪೂರ್ಣದೇವಿ ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ವಿಶಿಷ್ಟವಾದುದಾಗಿದೆ.

ಮರಾಠಿ : ಈ ಭಾಷೆಯಲ್ಲಿ ಮಕ್ಕಳ ಸಾಹಿತ್ಯದ ಇತಿಹಾಸ ಕೇವಲ ಒಂದು ಶತಮಾನದ್ದು ಎನ್ನಬಹುದು. ಮಕ್ಕಳು, ಅವರ ಆಟ ಪಾಠಗಳು, ತಾಯಿಯ ಮಮತೆ, ಗೋಕುಲದ ತುಂಟಬಾಲಕ ಶ್ರೀ ಕೃಷ್ಣ ಹಾಗೂ ಅವನ ಬಾಲಲೀಲೆಗಳು ಇವುಗಳ ಬಗ್ಗೆ ಮರಾಠಿಯ ಹಿಂದಿನ ಕವಿಗಳು ಬರೆದಿರುವುದುಂಟು. ಆದರೆ ಇವೆಲ್ಲ ಮಕ್ಕಳ ಬಗ್ಗೆ ಬರೆದಂಥವೇ ವಿನಾ ಮಕ್ಕಳಿಗಾಗಿ ಬರೆದುವಲ್ಲ ! ಏಕನಾಥರ 16ನೆಯ ಶತಮಾನದ ಬಾರೂದಗಳಲ್ಲಿ ಕಥಾಂಶ ಹಾಗೂ ಮಕ್ಕಳಿಗೆ ಪ್ರಿಯವಾಗುವ ಲಯವಿರುವುದಾದರೂ ಅವು ಮಕ್ಕಳ ಅರಿವಿನ ಶಕ್ತಿಯನ್ನು ಮೀರಿದವಾಗಿವೆ.

ಒಂದು ರೀತಿಯಲ್ಲಿ, ಈ ಸಾಹಿತ್ಯವನ್ನು ಪಾಶ್ಚಾತ್ಯರಿಂದ ಅಳವಡಿಸಿಕೊಳ್ಳಲಾಗಿದೆ ಎನ್ನಬಹುದು. ಮರಾಠಿಯಲ್ಲಿ ವಿನಾಯಕ ಕೊಂಡದೇವ ಓಕ (1840-1914) 1881ರಲ್ಲಿ ಬಾಲಬೋಧೆ ಎಂಬ ನಿಯತಕಾಲಿಕೆಯ ಪ್ರಕಟಣೆಯನ್ನು ಆರಂಭಿಸಿದರು. ಇದು ಮಕ್ಕಳ ಸಾಹಿತ್ಯವನ್ನು ಪ್ರಾರಂಭಿಸಿತು ಎನ್ನಬಹುದು. ಇದಕ್ಕೆ ಹಿಂದೆ ಎಲ್ಲೋ ಕೆಲವು ಕೃತಿಗಳು ಪ್ರಕಟವಾಗಿದ್ದಿರಬಹುದು. ಸದಾಶಿವ ಕಾಶೀನಾಥ ಛತ್ರೆಯವರ ಈಸೋಪನ ನೀತಿಕಥೆಗಳು ಮತ್ತು ಬಾಕ್ರ್ವಿನ್‍ನ ಸುಪ್ರಸಿದ್ಧ ಚಿಲ್ಡ್ರೆನ್ಸ್ ಫ್ರೆಂಡ್ಸ್‍ನ ಭಾಷಾಂತರ ಬಾಲಮಿತ್ರ ಇವು ಉಲ್ಲೇಖಾರ್ಹ ಕೃತಿಗಳು.

ಓಕರ ಬಾಲಬೋಧೆ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಪ್ರಕಟಗೊಂಡಿತು. ತಾವೇ ಎಲ್ಲವನ್ನೂ ಬರೆಯುತ್ತಿದ್ದು, ಒಂದೇ ಧಾಟಿ ಇದ್ದುದರಿಂದ ಕ್ರಮೇಣ ಓದುಗರ ಆಕರ್ಷಣೆ ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿಯೇ ವಿ.ಜಿ. ಆಪ್ಪೆ (1871-1930) ಆನಂದ ಎಂಬ ಮಾಸ ಪತ್ರಿಕೆಯನ್ನು 1906ರಲ್ಲಿ ಪ್ರಾರಂಭಿಸಿದರು. ಇದು ಮರಾಠಿ ಮಕ್ಕಳ ಸಾಹಿತ್ಯದಲ್ಲಿ ಪ್ರಮುಖ ಮೈಲಿಗಲ್ಲು. ಮೂರು ದಶಕಗಳ ಕಾಲ ಆನಂದ ಮಹಾರಾಷ್ಟ್ರದ ಮಕ್ಕಳನ್ನು ತನ್ನ ಕಥೆಗಳು, ಕವನಗಳು ಮೊದಲಾದವುಗಳಿಂದ ರಂಜಿಸಿತು. ಹಲವು ಲೇಖಕರು ಸಾಹಿತ್ಯಕ್ಷೇತ್ರ ಪ್ರವೇಶಿಸಲು ಆನಂದ ನೆರವಾಯಿತು. ಆನಂದದ ಜೊತೆಗೆ ಬರುತ್ತಿದ್ದ ಇತರ ಉತ್ತಮ ಮಕ್ಕಳ ನಿಯತಕಾಲಿಕೆಗಳೆಂದರೆ ಶಾಲಾಪತ್ರಕ (ಚಿತ್ರ ಶಾಲಾ ಪ್ರೆಸ್, ಪುಣೆ), ಬಾಲೋದ್ಯಾನ (ಪುಣೆ), ಬಾಲಬೋಧ ಮೇವಾ (ನಾಸಿಕ್), ಕೇಳ್‍ಗಾಡೀ (ಮುಂಬಯಿ), ಮುಲಾಂಚೇ ಮಾಸಕ್ (ನಾಗಪುರ) ಇವನ್ನು ಇಂದಿಗೂ e್ಞÁಪಿಸಿಕೊಳ್ಳಲಾಗುತ್ತಿದೆ.

ಪುಸ್ತಕಗಳ ಪಾತ್ರದ ಬಗ್ಗೆ ಸುಶಿಕ್ಷಿತ ತಂದೆ ತಾಯಿಯರಿಗೂ ಅರಿವಿಲ್ಲದ್ದರಿಂದ ಮಕ್ಕಳ ಪುಸ್ತಕಗಳು ಆ ಕಾಲಕ್ಕೆ ವಿರಳವೇ ಆಗಿದ್ದುವು. 1930ರ ತನಕ ಮಕ್ಕಳಿಗಾಗಿ ಅಷ್ಟಾಗಿ ಒಳ್ಳೆಯ ಕೃತಿಗಳು ಬೆಳಕು ಕಾಣಲಿಲ್ಲ. ವಿ.ಜಿ. ಅಪ್ಪೆ ತಮ್ಮ ಆನಂದದಲ್ಲ ಪ್ರಕಟಿಸಿದ ಬಾಲರಾಮಾಯಣ, ಬಾಲಭಾರತ ಮತ್ತು ಬಾಲಭಾಗವತ ಅತ್ಯಂತ ಜನಪ್ರಿಯವಾಗಿದ್ದುವು. ಆ ಕಾಲದ ಲೇಖಕರು ಮೂಲ ಕೃತಿಗಳ ರಚನೆಗಿಂತ ಪ್ರಾಚೀನ ಮಹಾಕೃತಿಗಳ ಮಕ್ಕಳ ಆವೃತ್ತಿಯನ್ನು ಹೊರತರುವತ್ತ ಗಮನ ಹರಿಸಿದರು. ಈಸೋಪನ ನೀತಿಕಥೆಗಳ ಹಲವು ಆವೃತ್ತಿಗಳು ಪ್ರಕಟವಾದುವು. ಇವುಗಳ ಪೈಕಿ ಕವಿ ನಾಟಕಕಾರ ಆರ್.ಜಿ. ಗಡ್ಕರಿಯವರ (1885-1919) ಚಿಮುಕಲೀ ಈಸಾಪನೀತೀ (ಕಿರಿಯರ ಈಸೋಪಾನ ಕಥೆಗಳು) ಮಕ್ಕಳ ಜನಪ್ರಿಯ ಕೃತಿಯಾಗಿತ್ತು. ಬಿ.ಎಂ. ಅಂಬೇಡ್ಕರರ ಹಿತೋಪದೇಶ, ಡಿ.ಎನ್. ತಿಲಕರ ಜಾತಕ ಕಥಾ ಮೊದಲಾದವು ಪ್ರಕಟಗೊಂಡವು. ವಿ.ಜಿ. ಆಪ್ಪೆ ಮರಾಠಿ ಮಕ್ಕಳಿಗೆ ಅದ್ಭುತ ಕಥೆಗಳನ್ನು ಪ್ರಕಟಿಸಿದರು; ಅಂಥ ಕಥೆಗಳ ಸಂಕಲನ ಚಿತ್ತರಂಜನ (1929) ಈ ಬಗೆಯದರಲ್ಲಿ ಮೊತ್ತಮೊದಲ ಕೃತಿ. ಇವರನ್ನನುಸರಿಸಿ ಎನ್.ಜಿ. ಲಿಮಯೆ ಮತ್ತು ಎಸ್.ಬಿ. ಹುಡಲೀಕರ್ ಕೆಲವು ಅದ್ಭುತ ಕಥೆಗಳನ್ನು ಬರೆದರು.

ಪಿ.ಕೆ. ಆತ್ರೆ (1898-1969) ನವಯುಗ ವಾಚನಮಾಲಾ ಎಂಬ ಶೀರ್ಷಿಕೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಮಕ್ಕಳಿಗೆ ಭಾಷಾಪಠ್ಯಪುಸ್ತಕಗಳನ್ನು 1933ರಲ್ಲಿ ಪ್ರಕಟಿಸಿದರು. ಇದು ಮಾರ್ಗಪ್ರವರ್ತಕವಾಯಿತು. ಸರ್ಕಾರ ಪ್ರಕಟಿಸುತ್ತಿದ್ದ ಪಠ್ಯಪುಸ್ತಕಗಳು ನೀರಸವೂ ಅನಾಕರ್ಷಣೀಯವೂ ಆಗಿದ್ದುವು. ಇದರಿಂದ ಮಕ್ಕಳಿಗೆ ಬೇಸರವುಂಟಾಗುತ್ತಿತ್ತು. ಸ್ವತಃ ಅನುಭವಿ ಉಪಾಧ್ಯಾಯರೂ ವಿಶಾಲ ಮನೋಭಾವದ ಶಿಕ್ಷಣ ತಜ್ಞರೂ ಲೇಖಕರೂ ಆಗಿದ್ದರು ಆತ್ರೆ. ಇವರ ಕೃತಿಗಳಲ್ಲಿ ಭಾಷೆ ಸರಳ, ನೇರ ಹಾಗೂ ಆಕರ್ಷಣೀಯವಾಗಿತ್ತು. ಸಾಹಿತ್ಯ ಮತ್ತು ಕಲಿಕೆಯ ಬಗ್ಗೆ ಮಕ್ಕಳಲ್ಲಿ ಒಲವು ಮೂಡಬೇಕೆಂದು ಅವರ ಧ್ಯೇಯ. ಇದರಲ್ಲಿ ಅವರು ಸಫಲರಾದರು. ಮಹಾರಾಷ್ಟ್ರದ ಬಲುಪಾಲು ಶಾಲೆಗಳಲ್ಲಿ 1967ರ ತನಕ ಅವರ "ನವಯುಗ" ಪುಸ್ತಕಗಳನ್ನು ಗೊತ್ತುಪಡಿಸಲಾಗಿತ್ತು. ಅನಂತರ ರಾಜ್ಯ ಸರ್ಕಾರ ಪಠ್ಯಪುಸ್ತಕ ಪ್ರಕಟಣೆಯ ರಾಷ್ಟ್ರೀಕರಣ ಮಾಡಿತು.

ಮಕ್ಕಳ ಸಾಹಿತ್ಯಕ್ಕೆ ಇದೇ ಅವಧಿಯಲ್ಲಿ ಇನ್ನಷ್ಟು ಚಾಲನೆ ನೀಡಿದ ಮತ್ತೊಬ್ಬರು ಪಿ.ಎಸ್.ಸಾನೆ (1899-1950). "ಸಾನೇ ಗುರೂಜಿ" ಎಂದೇ ಇವರು ಪ್ರಖ್ಯಾತರಾಗಿರುವರು. 1930ರ ತರುವಾಯದಲ್ಲಿ ರಾಷ್ಟ್ರದಲ್ಲಿ ದೇಶಭಕ್ತಿ ತುಂಬಿ ತುಳುಕುತ್ತಿತ್ತು. ಮಹಾತ್ಮಗಾಂಧಿ ಆದರ್ಶನಾಯಕರಾಗಿದ್ದರು. ಆ ಸಮಯದ ಯುವಜನತೆಯ ಆಶೋತ್ತರಗಳ ಪ್ರತಿಪಾದಕರಾಗಿದ್ದವರು ಸಾನೇ ಗುರೂಜಿ. ಅವರು ನಾಸಿಕ್ ಜೇಲಿನಲ್ಲಿದ್ದಾಗ ಶ್ಯಾಮಚೀ ಆಯಿ (ಶ್ಯಾಮನ ತಾಯಿ, 1935) ಬರೆದರು. ಇದು ಆತ್ಮಕಥನ ರೂಪದ್ದಾಗಿರುವುದರ ಬಗ್ಗೆ ಸಂದೇಹವೇ ಇಲ್ಲ. ಇದನ್ನು 1953ರಲ್ಲಿ ಆತ್ರೆ ಚಲನಚಿತ್ರ ಮಾಡಿದರು. ದೇಶದಲ್ಲಿ ತೆಗೆದ ಅತ್ಯುತ್ತಮ ಚಿತ್ರಕ್ಕಾಗಿ ಪ್ರಪ್ರಥಮವಾಗಿ ರಾಷ್ಟ್ರಪತಿ ಚಿನ್ನದ ಪದಕವನ್ನೂ ಇದು ಪಡೆಯಿತು. ಇದರ ಜೊತೆಗೆ ಶ್ಯಾಮ ಮತ್ತು ಶ್ಯಾಮಚೀ ಪತ್ರೀ ಇವು ಸೇರಿ ಶ್ಯಾಮನಕಥೆಯ ಕೃತಿತ್ರಯಗಳಾದುವು. ಸಾನೇ ಗುರೂಜಿ ಅನುವಾದಗಳು ಹಾಗೂ ಮೂಲಕೃತಿಗಳು ಸೇರಿದಂತೆ ವಿವಿಧ ವಯೋವರ್ಗಗಳ ಮಕ್ಕಳಿಗಾಗಿ ಕಥೆಗಳು, ಕವನಗಳು, ಪ್ರಬಂಧಗಳು, ಜೀವನಚರಿತ್ರೆಗಳನ್ನು ರಚಿಸಿದರು. ಶ್ಯಾಮನ ಕಥೆಯ ಜೊತೆಗೆ ಜನಪ್ರಿಯವಾಗಿರುವ ಇತರ ಕೃತಿಗಳು: ಗೋಡಗೋಡ ಗೋಶ್ಚೀ (ಮಧುರ ಮಧುರ ಕಥೆಗಳ) ದಡ್ಟದ್ನಾರೀ ಮೂಲೇ (ಹೋರಾಡುವ ಮಕ್ಕಳು). ಸಾನೇ ಗುರೂಜಿ ಸೃಷ್ಟಿಸಿದ ಮಕ್ಕಳ ಪ್ರಪಂಚ ಆದರ್ಶ ಪ್ರಪಂಚವಾಗಿತ್ತು. ಇದು ಮಕ್ಕಳ ಕನಸಿನ ಪ್ರಪಂಚಕ್ಕೆ ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದಲೇ ಸ್ವಾತಂತ್ರ್ಯಾನಂತರ ಅವರ ಕೃತಿಗಳು ಕಿರಿಯರಿಗೆ ಅಷ್ಟಾಗಿ ಆಕರ್ಷಣೀಯವಾಗಿಲ್ಲ. ಆದರೂ ಮರಾಠೀ ಮಕ್ಕಳ ಸಾಹಿತ್ಯ ಪ್ರಪಂಚದಲ್ಲಿ ಅವರಿಗೆ ವಿಶಿಷ್ಟಸ್ಥಾನವಿದೆ. ಸಾನೇ ಗುರೂಜಿಯವರ ಅನಂತರ ಎನ್.ಡಿ. ತಮ್ಹಣಕರರ (1893-1961) ಗೋತ್ಯಾ (1940-43, 3 ಭಾಗಗಳು) ಪ್ರಕಟಗೊಂಡಿತು. ಗೋತ್ಯಾ ಅಂತರಂಗದಲ್ಲಿ ಒಳ್ಳೆಯವನಾದರೂ ತುಂಟ ಹುಡುಗ, ಸಾಹಸಪ್ರಿಯ, ಬಾಲಕರು ತಮ್ಮ ಪ್ರತಿರೂಪ ಅವನಲ್ಲಿ ಕಾಣುತ್ತಿದ್ದರು. ಇದರ ಹಲವಾರು ಆವೃತ್ತಿಗಳು ಹೊರಬಂದಿವೆ. ಎಸ್.ಎಸ್.ಖನವೇಲ್ಕರರ ಚಂದೂ (1943) ವಿ.ವಿ. ಬೋಕಿಲರ ವಸಂತ (1950) ಮತ್ತು ರಾಜ ಮಂಗಳ ವೇಡೇಕರರ ಮುಕ್ಯಾ (1969) ಇವು ಮಕ್ಕಳಿಗೆ ಪ್ರಿಯವಾದ ಕೃತಿಗಳಾಗಿವೆ.

ಸ್ವಾತಂತ್ರ್ಯಾನಂತರ ಮಕ್ಕಳ ಸಾಹಿತ್ಯಕ್ಕೆ ಯುಕ್ತ ವಾತಾವರಣ ಸೃಷ್ಟಿಯಾಯಿತು. ಪ್ರತಿವರ್ಷ ಮರಾಠಿಯಲ್ಲಿ ಪ್ರಕಟಗೊಳ್ಳುವ ಕೃತಿಗಳಲ್ಲಿ ಶೇಕಡಾ 51ಭಾಗ ಮಕ್ಕಳ ಸಾಹಿತ್ಯವಾಗಿದೆ. ಲೇಖಕರ ಪೈಕಿ ಮುಖ್ಯರು; ಬಿ.ಆರ್. ಭಾಗವತ್, ಲೀಲಾವತಿ ಭಾಗವತ್, ವಿ.ಎಸ್. ಗಾಂವಕರ್, ಆಶಾ ಗಾಂವಕರ್, ಶರದ್‍ಚಂದ್ರ ಟೆಂಗೂ, ರಾಜಾ ಮಂಗಳವೇಡೇಕರ್, ಸುಧಾಕರ್ ಪ್ರಭು ಮೊದಲಾದವರು. ವಿವಿಧ ವಯೋವರ್ಗಗಳ ಮಕ್ಕಳಿಗೆ ಶಿಶುಗೀತೆಗಳು, ಕಿರು ಕಾದಂಬರಿಗಳು, ಕಥೆಗಳು, ಅದ್ಭುತ ಕಥೆಗಳು ಐತಿಹಾಸಿಕ ಕಥೆಗಳು, ಪ್ರಪಂಚದ ಶ್ರೇಷ್ಠವ್ಯಕ್ತಿಗಳ ಜೀವನ ಚರಿತ್ರೆಗಳು ಲಭ್ಯವಾಗಿವೆ. ಡಾನ್ ಕ್ವಿಕ್ಸೋಟ್, ರಾಬಿನ್‍ಸನ್ ಕ್ರೂಸೋ, ಗಲಿವರ್ಸ್ ಟ್ರಾವೆಲ್ಸ್, ಟಾಮ್‍ಸಾಯರ್, ಆಕಲ್‍ಬರಿಫಿನ್ ಮೊದಲಾದ ಪಾಶ್ಚಾತ್ಯ ಮಹಾಕೃತಿಗಳು ಕಿರಿಯರಿಗೆ ಲಭ್ಯವಾಗಿವೆ. ಈ ಸಂದರ್ಭದಲ್ಲಿ ಬಿ. ಆರ್. ಭಾಗವತ್ (ಜ. 1910) ವಿಶೇಷವಾಗಿ ಉಲ್ಲೇಖಾರ್ಹರು. ಲೂಯಿಸ್ ಕೆರಾಲ್‍ನ ಆಲಿಸ್ ಅಂಡ್ವೆಚರ್ಸ್ ಇನ್ ವಂಡರ್ ಲ್ಯಾಂಡ್ ಮತ್ತು ಜೂಲ್ಸ್ ವರ್ನೆಯ ಸಾಹಸ ಕಥೆಗಳನ್ನು ಸಮರ್ಥವಾಗಿ ಅಳವಡಿಸಿರುವರು. ಸುಮತಿ ಪಾಯಗಾಂವ ಕರ್ ಹ್ಯಾನ್ಸ್ ಆಂಡರ್ಸನ್‍ನ ವಂಡರ್‍ಪುಲ್ ಸ್ಟೋರೀಸ್ ಫಾರ್ ಚಿಲ್ಡ್ರನ್ ಅನ್ನು ಹ್ಯಾನ್ಸ್ ಅಂಡರ್ ಸೇಂಚ್ಯಾ ಪರಿಕಥಾ (ಭಾಗಗಳು 1-6) ಎಂಬ ಹೆಸರಿನಲ್ಲಿ ಉತ್ತಮವಾಗಿ ಭಾಷಾಂತರಿಸಿರುವರು. ಮಹಾದೇವಶಾಸ್ತ್ರಿ ಜೋಷಿ (ಜ. 1906). ದುರ್ಗಾಭಾಗವತ್ (ಜ. 1910) ವಾಮನ್ (ಜ. 1914) ಮತ್ತು ಸರೋಜಿನಿ ಬಬರ್ (ಜ. 1920) ಈ ದಿಸೆಯಲ್ಲಿ ದುಡಿದಿರುವ ಇತರ ಲೇಖಕರು. ಭಾರತದ ಇತರ ಭಾಷೆಗಳ ಜನಪದ ಕಥೆಗಳನ್ನು ಮರಾಠಿಗೆ ಭಾಷಾಂತರಿಸುವ ಯೋಜನೆ ಸ್ತುತ್ಯಾರ್ಹವಾಗಿದೆ. ಗಾಂಧೀಜಿಯವರ ಜೀವನ ಚರಿತೆಯನ್ನು ಪಿ.ಎಲ್.ದೇಶಪಾಂಡೆ (ಜ. 1919) ಮಕ್ಕಳಿಗಾಗಿಯೇ ರಚಿಸಿದ್ದು, ಶೈಲಿ ಹಾಗೂ ರೀತಿಗಳಲ್ಲಿ ಅಪೂರ್ವವಾದುದಾಗಿದೆ. ಈ ಕೃತಿ ಆಕರ್ಷಿಣೀಯವಾಗಲು ಕಲಾಕಾರ ಎಂ.ಆರ್. ಅಚರೇಕರ್‍ರ ವಿಪುಲ ಚಿತ್ರಗಳೂ ಕಾರಣವಾಗಿವೆ.

ವೈe್ಞÁನಿಕ ವಿಷಯಗಳ ಬಗ್ಗೆ ಮಕ್ಕಳಿಗಾಗಿ ಬರೆದವರಲ್ಲಿ ರಾನಡೆ (ಜ. 1892) ಮೊದಲಿಗರು ಎನ್ನಬಹುದು. ಇವರು ಪ್ರಾಣಿಪ್ರಪಂಚದ ವಿಸ್ಮಯಗಳನ್ನು ಮಕ್ಕಳಿಗೆ ತೆರೆದಿಟ್ಟರು. ಟಿಂಬು ನಾನ್ಚ ರೇಡಿಯೊ ಆನಿ ಇತರ ಗೋಷ್ಠಿ (1944, ಟಿಂಬು ನಾನರ ರೇಡಿಯೋ ಮತ್ತು ಇತರ ಕಥೆಗಳು) ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಇತರರೆಂದರೆ ಭಾಲ್ಭಾ ಕೇಲ್ಕರ್, ಸಿ.ಎಸ್.ಕರ್ವೆ, ಪಿ.ಎನ್.ಜೋಷಿ, ಜೆ.ಎನ್.ಕರ್ವೆ, ಎನ್.ವಿ.ಕೋಗೆಕರ್ ಮತ್ತು ಆರ್.ವಿ. ಸೋಹೊನಿ.

ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ಮಕ್ಕಳ ಪುಸ್ತಕ ಪ್ರಕಟಣೆಯ ಮುಂಚೂಣಿಯಲ್ಲಿರುವ ಮುಂಬಯಿಯ ಕೇಶವ ಭಿಕಜಿ ಧವಳೇ ಉದ್ದಕ್ಕೂ ಉತ್ತಮ ಮಟ್ಟದ ಪ್ರಕಾಶನ ಕಾರ್ಯ ನಡೆಸಿಕೊಂಡು ಬಂದಿರುವರು. ಈ ಕ್ಷೇತ್ರದಲ್ಲಿ ಇನ್ನಿತರ ಪ್ರಮುಖರು: ವೋರಾ ಪಬ್ಲಿಷಿಂಗ್ ಕಂಪೆನಿ, ಮತ್ತು ಕುಲಕರ್ಣಿ ಹಾಗೂ ಅರ್ಗಡೆ, ಪ್ರಮುಖ ಪ್ರಕಾಶನ ಸಂಸ್ಥಿಗಳಾದ ಮೌಜ್ ಪ್ರಕಾಶನ, ಪಾಪ್ಯುಲರ್ ಪ್ರಕಾಶನ, ವೀನಸ್ ಪ್ರಕಾಶನ ಮತ್ತು ಮೆಜೆಸ್ಟಿಕ್ ಬುಕ್‍ಸ್ಟಾಲ್ ಸಹ ಮಕ್ಕಳ ಸಾಹಿತ್ಯದ ಬಗ್ಗೆ ತೀವ್ರ ಆಸಕ್ತಿವಹಿಸಿವೆ. ಮುಂಬಯಿಯ ಪ್ರಕಾಶಕರಿಗಾಗಿ ಚಿತ್ರಗಳನ್ನು ರಚಿಸಿರುವ ಡಿ.ಜಿ. ಗೋಡ್ಸೆ, ಪ್ರಭಾಕರ ಗೋರೆ, ವಸಂತ ಸರವಟೆ, ಪದ್ಮ ಸಹಸ್ರಬುದ್ಧೆ, ವಿ.ಎಂ.ಸಾತೆ ಮತ್ತು ರಾಮ್ ವಾಯರ್‍ಕರ್ ಇವರ ಸೇವೆ ಗಮನಾರ್ಹವಾಗಿದೆ.

ಪ್ರಮುಖ ಮರಾಠಿ ಕವಿಗಳನೇಕರು ಮಕ್ಕಳಿಗಾಗಿಯೂ ಕವನಗಳನ್ನು ಬರೆದಿರುವರು. ಉದಾಹರಣೆಗೆ ಬಾಲಕವಿ, ದತ್ತ (ಡಿ.ಕೆ. ಘಟೆ) ಮತ್ತು ಬಿ.ಆರ್. ತಾಂಬೆ, ಬಾಲಕವಿಯ ಪೂಲ್‍ರಾಣೀ, ದತ್ತದ ಬಾಹುಲಿಚೇ ಗಾನೇ (ಬೊಂಬೆಯ ಹಾಡು), ಬಿ.ಆರ್.ತಾಂಬೆಯವರ ಆತಾ ಗತ್ತೀ ಸಿಪೂ ದಾದಾಶೀ ಮೊದಲಾದವು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಇವುಗಳ ಸಂಖ್ಯೆ ತುಂಬ ಕಡಿಮೆ. ಶಿಶುಗೀತೆಗಳ (1942) ಇಡೀ ಸಂಕಲನವನ್ನು ಪ್ರಕಟಿಸಿದ ಮೊದಲ ಕವಿ ವಿ.ಜಿ. ಮಾಯದೇವ (1894-1969). ಮಕ್ಕಳು ಅಭಿನಯಪೂರ್ಣವಾಗಿ ಹಾಡಲೆಂದು ಇವು ರಚಿತವಾಗಿವೆ. ಬಾಲಕವಿ ಅಥವಾ ತಾಂಬೆಯರ ಕೃತಿಗಳಲ್ಲಿ ಕಾಣುವ ಕಲ್ಪನೆಯ ಗುಣಮಟ್ಟ ಮಾಯದೇವರಲ್ಲಿಲ್ಲ. ಸರಳ ದೇವಧರ ಇವರ ಮಾರ್ಗವನ್ನು ಅನುಸರಿಸಿದರು. ಭಾರತ ಸರ್ಕಾರ ಐವತ್ತರ ದಶಕದ ಮಧ್ಯಭಾಗದಲ್ಲಿ ಕವಿತೆಗಳಿಗಾಗಿ ಬಹುಮಾನ ನೀಡುವ ಯೋಜನೆ ಜಾರಿಗೆ ತಂದುದರಿಂದ ಉತ್ತಮ ಚಾಲನೆ ದೊರೆಯಿತು. ಲೀಲಾವತೀ ಭಾಗವತ್ (ಜ. 1921) ಪ್ರಥಮ ಪುರಸ್ಕರ್ತೆ (1956-57). ಮಕ್ಕಳ ಕಾವ್ಯಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿರುವ ಪ್ರಮುಖರಲ್ಲಿ ಕೆಲವರು : ವಿಂದಾ ಕರಂಡೀಕರ್, ಶಾಂತಾ ಶೇಲಕೆ, ಮಂಗೇಶ ಪಡಗಾಂವಕರ್, ಸದಾನಂದ ರೇಗೆ, ಸರೀತಾ ಪದಕಿ, ಶೆರೀಷ್ ಪೈ ಇವರೆಲ್ಲ ಸಮಕಾಲೀನ ಕಾವ್ಯಕ್ಷೇತ್ರದ ಖ್ಯಾತನಾಮರೂ ಆಗಿರುವರು. ವಿವಿಧ ವಯೋವರ್ಗದ ಮಕ್ಕಳಿಗಾಗಿ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದುವು. ವಿಂದಾ ಕರಂಡೀಕರ್‍ರ (ಜ. 1918) ರಾಣೀಚಾ ಬಾಗ್ (1963) ಮತ್ತು ಎಂಚ್ಯಾ ದೇಶಾತ್ (1964) ಈ ಕ್ಷೇತ್ರದ ಅತ್ಯುತ್ತಮ ಕೃತಿಗಳು. ಮಂಗೇಶರ ಭೋಲಾನಾಥ್ ಮತ್ತು ಚಾಂದೋಬಾ ಭಾಗಾಲಾಸ್ ಕಾ ? ಇವು ಸಹ ಉಲ್ಲೇಖನೀಯ ಕೃತಿಗಳಾಗಿವೆ.

ಮಕ್ಕಳ ರಂಗಕ್ಷೇತ್ರಕ್ಕೆ ರತ್ನಾಕರ ಮತಕರೀ (ಜ. 1938) ಮತ್ತು ಸುಧಾಕರ ಮರಕರರ ಸೇವೆ ಪ್ರಶಂಸನೀಯವಾಗಿದೆ. ಸುಪ್ರಸಿದ್ಧ ನಾಟಕಕಾರರಾದ ಪಿ.ಎಲ್. ದೇಶಪಾಂಡೆ ಮತ್ತು ವಿಜಯ ತೆಂಡೂಲಕರ (ಜ. 1928) ಇವರು ಉತ್ತಮವಾದ ಕೆಲವು ಮಕ್ಕಳ ನಾಟಕಗಳನ್ನು ರಚಿಸಿರುವರು.

ಸ್ಥೂಲವಾಗಿ ಹೇಳುವುದಾದರೆ ಮರಾಠಿಯಲ್ಲಿ ಮಕ್ಕಳ ಸಾಹಿತ್ಯ ತನ್ನದೇ ಆದ ಸ್ಥಾನಗಳಿಸಿಕೊಂಡಿದೆ. ಈಚಿನತನಕ ಮರಾಠಿ ಮಕ್ಕಳು, ರಾಮಾಯಣ, ಮಹಾಭಾರತ, ಪುರಾಣಗಳು ಮತ್ತು ಮರಾಠಿ ಸಾಹಿತ್ಯದ ಬಗ್ಗೆ ಹೆಚ್ಚಿನ ಕಥೆಗಳನ್ನು ಓದುತ್ತಿದ್ದರು. ಈಗ ಅವರ ಮನೋವೃತ್ತಿಗೆ, ಅಭಿರುಚಿಗೆ ತಕ್ಕ ಸಾಹಿತ್ಯ ಸೃಜನೆಯಾಗಬೇಕಾಗಿದೆ.

ಮಲಯಾಳಮ್ : ಸ್ಥೂಲವಾಗಿ ಹೇಳುವುದಾದರೆ ಮಕ್ಕಳ ಸಾಹಿತ್ಯ 19ನೆಯ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳಲ್ಲಿ ಪ್ರಾರಂಭವಾಗಿ, ಸುಮಾರು ಒಂದು ಶತಮಾನದ ಬೆಳೆವಣಿಗೆಯನ್ನು ಕಂಡಿದೆ ಎನ್ನಬಹುದು. ಬ್ರಿಟಿಷರ ಸಂಪರ್ಕದಿಂದಾಗಿ ಇಂಗ್ಲಿಷ್ ಶಿಕ್ಷಣ ವಿಸ್ತರಣೆಯೊಡನೆಯೇ ಇದು ಸಾಗಿತು. ನಿಗದಿಯಾದ ಪಠ್ಯಕ್ರಮಕ್ಕೆ ಅನುಗುಣವಾಗಿ ವಿವಿಧ ವಿಷಯಗಳ ಬಗ್ಗೆ ವಿವಿಧ ವಯೋವರ್ಗಗಳವರಿಗಾಗಿ ಉತ್ತಮ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಬೇಕಾಯಿತು. 1867ರಲ್ಲಿ ಈ ಉದ್ದೇಶಕ್ಕಾಗಿ ತಿರುವನಂತಪುರದಲ್ಲಿ ಕೇರಳವರ್ಮವಲಿಯ ಕೋಯಿ ತಂಬುರಾನನ (1845-1914) ಅಧ್ಯಕ್ಷತೆಯಲ್ಲಿ ಪಠ್ಯಸಮಿತಿ ರಚನೆಗೊಂಡಿತು. ಸರಳ ಭಾಷೆಯಲ್ಲಿ ಪ್ರಾಥಮಿಕ ಹಂತದಿಂದ ದ್ವಿತೀಯಕ ಹಂತದ ಎಲ್ಲ ತರಗತಿಗಳ ಮಕ್ಕಳಿಗೆ ಉತ್ತಮ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು. ಆಧುನಿಕ e್ಞÁನ ಪ್ರಸರಣಕ್ಕೆ ಮಲಯಾಳಮ್ ಭಾಷೆಯನ್ನು ಯುಕ್ತ ಸಾಧನವಾಗಿಸುವುದು ಈ ಎರಡು ಧ್ಯೇಯಗಳು ಅವರಿಗಿದ್ದುವು. ಕೆಳಗಿನ ತರಗತಿಗಳಿಗೆ ಪ್ರಾಥಮಿಕ ಬೋಧೆಗಳೇ ಅಲ್ಲದೆ ಬ್ರಿಟಿಷ್ ಇತಿಹಾಸ, ಭಾರತೀಯ ಇತಿಹಾಸ ಮತ್ತು ತಿರುವಾಂಕೂರು ಇತಿಹಾಸ. ಅರ್ಥಶಾಸ್ತ್ರದ ಮೂಲತತ್ತ್ವದ ಬಗ್ಗೆ ಕೃತಿಗಳು ಹೊರಬಂದವು. ಭೂಗೋಳ, ಗಣಿತ, ರೇಖಾಗಣಿತ ಮೊದಲಾದವುಗಳ ಬಗ್ಗೆಯೂ ಸಮರ್ಥ ವ್ಯಕ್ತಿಗಳು ಪುಸ್ತಕಗಳನ್ನು ಬರೆದರು. ಒಂದು ದೃಷ್ಟಿಯಲ್ಲಿ ಇವೆಲ್ಲ ಪಠ್ಯಕ್ರಮವನ್ನಾಧರಿಸಿದ್ದುದರಿಂದ ಮಕ್ಕಳ ಸಾಹಿತ್ಯ ಎಂದು ಅಷ್ಟಾಗಿ ಪರಿಗಣಿಸಲಾಗದಿದ್ದರೂ ಮಹಚ್ಚರಿತ ಸಂಗ್ರಹಮ್ ಅಥವಾ ಸರ್ನಾರ್ಗಪ್ರದೀಪಂಗಳ (1888) ಬಗ್ಗೆ ಈ ಮಾತು ಹೇಳಲಾಗುವುದಿಲ್ಲ. ಮಹಚ್ಚರಿತ್ರ ಸಂಗ್ರಹಮ್ 107 ಸಂಕ್ಷಿಪ್ತ ಜೀವನಚರಿತ್ರೆಗಳ ಸಂಕಲನವಾಗಿದ್ದು, 40ನ್ನು ಕೇರಳವರ್ಮರೇ ರಚಿಸಿದ್ದರು. ಅಲೆಕ್ಸಾಂಡರ್, ಆರ್ಕಿಮಿಡೀಸ್, ಅರಿಸ್ಟಾಟಲ್ ಮೊದಲಾದ ಶ್ರೇಷ್ಠ ಪುರುಷರ ಜೀವನಚರಿತ್ರೆಗಳು ಇದರಲ್ಲಿ ಸೇರಿವೆ. ವಿವಿಧ ಲೇಖಕರ ಲೇಖನಗಳನ್ನು ಪರಿಷ್ಕರಿಸಿ, ಗುಣಮಟ್ಟ ಕಾಪಾಡಲು ಕೇರಳವರ್ಮ ಶ್ರಮಿಸಿದರು. ಸದ್ವರ್ತನೆಯ ಬಗ್ಗೆ ತತ್ತ್ವಗಳನ್ನು ಕ್ರೋಡೀಕರಿಸಿದ 47 ಲಘು ಪ್ರಬಂಧಗಳಿರುವ ಕೃತಿ ಸನ್ಮಾರ್ಗ ಪ್ರದೀಪ. ಇದು ಕೇರಳವರ್ಮರೇ ರಚಿಸಿರುವ ಸನ್ಮಾರ್ಗ ಸಂಗ್ರಹಮ್ (1889). ಸನ್ಮಾರ್ಗ ವಿವರಣಮ್, ಯುವಕ್ಕನ್ಮರೋಟುಳ್ಳ ಉಪದೇಶಜ್ಞಶ್- ಈ ಮೂರು ಕೃತಿಗಳಿಗೆ ಜೊತೆಯ ಸಂಪುಟವಾಗಿದೆ. ವಿe್ಞÁನಮಂಜರಿ (1888) ಜನಪ್ರಿಯ ವಿe್ಞÁನ ಹಾಗೂ ಆಧುನಿಕ e್ಞÁನವಲಯದ ವಿಷಯಗಳ ಬಗ್ಗೆ ಸರಳಗದ್ಯದಲ್ಲಿ ರಚಿಸಿದ ಕೃತಿ.

ಈ ಯೋಜನೆಯಿಂದ ಸಾಕಷ್ಟು ಯಶಸ್ಸು ಲಭಿಸಿತು. ಇದಕ್ಕೆ ಕೇರಳವರ್ಮರು ರಾಜಮನೆತನದಲ್ಲಿ ಹಾಗೂ ಸಾಹಿತ್ಯಕ್ಷೇತ್ರದಲ್ಲಿ ಪಡೆದಿದ್ದ ಸ್ಥಾನವೇ ಬಲುಮಟ್ಟಿಗೆ ಕಾರಣವಾಗಿತ್ತು. ಆದರೆ ಇದೊಂದೇ ಪ್ರಯತ್ನವಾಗಿರಲಿಲ್ಲ. ಇದಕ್ಕೂ ಮೊದಲೇ ಅಲ್ಲಲ್ಲಿ ಪ್ರಯತ್ನಗಳು ನಡೆದಿದ್ದವು. ಉದಾಹರಣೆಗೆ 1824ರಲ್ಲಿ ಪ್ರಕಟಿಸಲಾಗಿರುವುದು ಎನ್ನಲಾದ ಚಿರುಪೈತಙ್ಞಳು ಉಪಕಾರಾರ್ಧಮ್ ಇಂಗ್ಲಿಷಿಲ್‍ನಿನ್ನು ಪರಿಭಾಷಪ್ಪೆಟುತ್ತಿಯ ಕಥೆಗಳ್ (ಚಿಕ್ಕಮಕ್ಕಳ ಉಪಯೋಗಕ್ಕಾಗಿ ಇಂಗ್ಲಿಷಿನಿಂದ ಭಾಷಾಂತರಿಸಿದ ಕಥೆಗಳು) ಎಂಬ ಕೃತಿಯ ಲಭ್ಯವಿರುವ ಏಕೈಕ ಪ್ರತಿ ಬ್ರಿಟಿಷ್ ಮ್ಯೂಸಿಯಮ್ಮಿನಲ್ಲಿದೆ. ಇದರ ಮೂಲ ಲೇಖಕ ಹಾಗೂ ಭಾಷಾಂತರಕಾರರ ಬಗ್ಗೆ ತಿಳಿದಿಲ್ಲ. ಇದು ಕ್ರೈಸ್ತಧರ್ಮದ ಸದ್ಗುಣಗಳನ್ನು ಸ್ತುತಿಸುವ ಎಂಟು ಸಣ್ಣ ಕಥೆಗಳ ಸಂಕಲನವಾಗಿದೆ. ಇದೇ ವರ್ಗದ ಮತ್ತೊಂದು ಕೃತಿ ಬಾಲ ನಿಕ್ಷೇಪಮ್ (1860) ಮನ್ನಾನಮ್ಮಿನ ಸೇಂಟ್ ಜೋಸೆಫ್ಸ್ ಪ್ರೆಸ್‍ನಿಂದ ಪ್ರಕಟಗೊಂಡಿದೆ. ಹಳೆಯ ಒಡಂಬಡಿಕೆಯ ಕಥೆಗಳನ್ನು ಗೀತರೂಪದಲ್ಲಿ ಬಾಲಬೋಧಿನಿ (1887) ಎಂಬ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಇದು ಕೊಟ್ಟಾಯಮ್‍ನಲ್ಲಿ ಪ್ರಕಟವಾಗಿದೆ. ಇದೇ ಅವಧಿಯಲ್ಲಿ, ಪಂಡಿತನೂ ವೈಯಾಕರಣಿಯೂ ಆದ ಮೈಕೋಮ್ ಪಾಚು ಮೂತತ್ ಅವರು ಬಾಲಭೂಷಣಮ್ (1868) ಎಂಬ ಕೃತಿ ಪ್ರಕಟಿಸಿದರು. ಸತ್ಯ, ಅನುಕಂಪ, ಕಲಿಕೆ, ದೈವಭಕ್ತಿ, ಸದ್ಗುಣಗಳ ಪ್ರಶಂಸೆ, ಶುಚಿತ್ವ ಹಾಗೂ ಒಳ್ಳೆಯ ಅಭ್ಯಾಸಗಳ ಬಗ್ಗೆ ವಿವರಿಸಲಾಗಿದೆ.

ಪುರಾಣಗಳು ಮತ್ತು ಇತರ ಮೂಲಗಳ ಕಥೆಗಳನ್ನು ಮಕ್ಕಳಿಗಾಗಿ ಪುನರ್ ನಿರೂಪಿಸುವ ಕಾರ್ಯ ಸಹ 19ನೆಯ ಶತಮಾನದ ಕೊನೆಯ ವೇಳೆಗೆ ಮಲಯಾಳಮ್‍ನಲ್ಲಿ ನಡೆಯಿತು. ಮದ್ರಾಸು ಸರ್ಕಾರ ಪ್ರಾರಂಭಿಸಿದ ಪ್ರಕಟಣಾ ಕಾರ್ಯಕ್ರಮದ ಅಂಗವಾಗಿ ತೋಬಿಯಾಸ್ ಜûಕರಿಯಾಸ್ ಸಿನ್ಟಾದಿಂಡೆ ಕಪ್ಪಲೋಟ್ಟಮ್ ಅನ್ನು (1880, ಸಿಂದಬಾದ ನಾವಿಕನ ಯಾನಗಳು) ರಚಿಸಿದರು ಮಕ್ಕಳ ಕೃತಿ ರಚನೆಗೆ ಪ್ರಸಿದ್ಧವಾದ ಟಿ.ಸಿ. ಕಲ್ಯಾಣಿ ಅಮ್ಮ ಈಸೋಪನ 56 ನೀತಿಕಥೆಗಳನ್ನು ಸಂಗ್ರಹಿಸಿ ಈಸೋಪ್ಪಿಂಡೆ ಕಥಕಳ್ ಎಂಬ ಶೀರ್ಷಿಕೆಯಲ್ಲಿ (1897) ಪ್ರಕಟಿಸಿದರು. ಕೊಟ್ಟಾರತ್ತಿಲ್ ಶಂಕುಣ್ಣಿ (1855-1937) ವಿಶ್ವಾಮಿತ್ರ ಚರಿತ್ರಮ್ (1899) ಪ್ರಕಟಿಸಿದರು.

ಕುಮಾರನ್ ಆಶಾನ್ (1873-1924) ಮಕ್ಕಳಿಗಾಗಿ ಬರೆದ ಕೆಲವು ಕವಿತೆಗಳನ್ನು ತಮ್ಮ ಕವನಸಂಕಲನ ಪುಷ್ಪವಾಟಿಯಲ್ಲಿ (1922) ಸಂಗ್ರಹಿಸಿರುವರು. ಅಶಾನ್ "ವಾಲ್ಮೀಕಿ ರಾಮಾಯಣ"ವನ್ನು ಆಧರಿಸಿ ಬಾಲರಾಮಾಯಣಮ್ (1916) ಎಂಬ ರೂಪಾಂತರ ಕೃತಿ ರಚಿಸಿರುವರು. ಕೋಚನುಜನ್ ಮೂಸತ್ ಮೂಲ ಮಲಯಾಳಮ್ಮಿನಲ್ಲಿ ಬಾಲರಾಮಾಯಣ ಎಂಬ ಶೀರ್ಷಿಕೆಯಲ್ಲಿ ರಾಮಾಯಣದ ರೂಪಾಂತರವನ್ನು 1909ರಲ್ಲೇ ಪ್ರಕಟಿಸಿದರು. ಅಂಬಲಪ್ಪುಳ ರಾಮಕೃಷ್ಣ ಶಾಸ್ತ್ರಿ ರಾಮಾಯಣ ಸಂಗ್ರಹಮ್ (1916) ಮತ್ತು ಅಟ್ಟೂರು ಕೃಷ್ಣ ಪಿಸರೋಟಿ ಲಘುರಾಮಾಯಣಮ್ (1918) ಪ್ರಕಟಿಸಿದ್ದರು. ಕವಿಯೂರು ವೆಂಕಟಾಚಲಮ್ ಅಯ್ಯರ್ 1922ರಲ್ಲಿ ಬಾಲಭಾರತಮ್‍ನಲ್ಲಿ ಮಹಾಭಾರತದ ಕಥೆಯನ್ನು ಪುನರ್ ನಿರೂಪಿಸಿದ್ದರು. ಈ ಕೃತಿಗಳು ಏಕರೂಪದ ಗುಣಮಟ್ಟದವಲ್ಲವಾದರೂ ಮಕ್ಕಳಿಗೆ ಪೌರಾಣಿಕ ಪರಂಪರೆ ಪರಿಚಯಿಸುವ ಶ್ರೇಷ್ಠ ಉದ್ದೇಶದಿಂದ ಕೂಡಿದ್ದವು.

ಕುಮಾರನ್ ಆಶಾನ್ ಮಾತ್ರವಲ್ಲದೆ ಕೆ.ಸಿ.ಕೇಶವ ಪಿಳ್ಳೈ (1868-1913) ಮತ್ತು ಪಂತಳಮ್ ಕೇರಳ ವರ್ಮ (1879-1919)- ಈ ಇಬ್ಬರು ಮಹಾಕವಿಗಳು ಈ ಶತಮಾನದ ಮೊದಲ ದಶಕಗಳಲ್ಲಿ ಮಕ್ಕಳ ಸಾಹಿತ್ಯಕ್ಕೇ ತಮ್ಮದೇ ಆದ ಕಾಣಿಕೆ ನೀಡಿರುವರು. ಕೇಶಲ ಪಿಳ್ಳೈ 1900ರಲ್ಲಿ 100 ಕವನಗಳ ಸಂಕಲನ ನೀತಿವಾಕ್ಯಙ್ಞಳ್ ಪ್ರಕಟಿಸಿದರು. ಇದು ಬಲು ಮಟ್ಟಿಗೆ ಉಪದೇಶಾತ್ಮಕ ಹಾಗೂ ಮಾಧ್ಯಮಿಕ ಶಾಲಾ ತರಗತಿಗಳಿಗೆ ಪಠ್ಯಪುಸ್ತಕವಾಗಿತ್ತು. ಅಭಿನಯಗಾನ ಮಾಲಿಕಾ (1911) ಎಂಬ ಅಭಿನಯ ಗೀತೆಗಳ ಸಂಕಲನವನ್ನು ಹೊರತಂದರು. 'ಕವನ ಕೌಮುದಿ ಎಂಬ ಕಾವ್ಯ ನಿಯತಕಾಲಿಕೆಯ ಸ್ಥಾಪಕ ಪಂತಳಮ್ ಕೇರಳವರ್ಮ ಮಕ್ಕಳಿಗಾಗಿ ಹಲವು ಪಠ್ಯಗಳನ್ನು ರಚಿಸಿದರು. ಅವರ ಕವನಗಳ ವಸ್ತು ಚಂದ್ರ, ಗಿಣಿ, ಆನೆ, ಗಡಿಯಾರ, ತಾರೆಗಳು ಮೊದಲಾದ ಮಕ್ಕಳಿಗೆ ಚಿರಪರಿಚಿತವಾದುದೇ ಆಗಿದ್ದು. ಅದರ ಶೈಲಿ ತುಂಬ ಆತ್ಮೀಯತೆ ಮೂಡಿಸುವುದಾಗಿತ್ತು. ಇವುಗಳಲ್ಲಿ ಅನೇಕವು ಹಲವು ವರ್ಷಗಳ ಕಾಲ ಶಾಲಾಪಠ್ಯಪುಸ್ತಕಗಳಲ್ಲಿ ಸೇರಿದ್ದುವು.

20ನೆಯ ಶತಮಾನದ ಮೊದಲ ಮೂರು ದಶಕಗಳಲ್ಲಿ ವಿಶೇಷವಾಗಿ ಶಾಲಾ ಮಕ್ಕಳಿಗೆಂದೇ ಉದ್ದೇಶಿತವಾಗಿದ್ದ ಹಲವು ಕವನಸಂಕಲನಗಳು ಸಿದ್ಧಗೊಂಡವು. ಇವುಗಳ ಪೈಕಿ ವಿಶೇಷವಾಗಿ ಮೂರು ಉಲ್ಲೇಖನಾರ್ಹವಾಗಿವೆ. (1) ಪದ್ಯ ಪಾಠಾವಲಿ (7 ಸಂಪುಟಗಳು, 1910-12); ಸಂ: ಕೇರಳವರ್ಮವಲಿಯ ಕೋಯಿ ತಂಬುರಾನ್; (2) ಪದ್ಯಮಾಲಿಕ (7 ಸಂಪುಟಗಳು, 1916) ಸಂ: ಪಂತಳಮ್ ಕೇರಳವರ್ಮ ಮತ್ತು ಎಮ್. ರಾಜರಾಜವರ್ಮ: (3) ಪದ್ಯಮಂಜರಿ (7 ಸಂಪುಟಗಳು, 1915-3) ಸಂ: ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ (1877-1949). ಈ ಪ್ರಕಟಣೆಗಳಲ್ಲಿ ಹಲವು ವಿಷಯಗಳು ಸೇರಿದ್ದರೂ ಇವು ಬಾಲಕ ಬಾಲಕಿಯರಿಗೆ ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯದಲ್ಲಿ ಸಹಾಯಕವಾಗಿವೆ.

ಮುಂದಿನ ದಶಕದಲ್ಲಿ ಕವಿ ಉಳ್ಳೂರು ದೀಪಾವಲಿ (1934) ಎಂಬ 500 ಪದ್ಯಗಳ ಸಂಕಲನ ತಂದರು. ಮಕ್ಕಳ ಆಸಕ್ತಿ ಕೆರಳಿಸುವಲ್ಲಿ ಇದು ಅಷ್ಟಾಗಿ ಸಫಲವಾಗಲಿಲ್ಲ. e್ಞÁನಪೀಠ ಪ್ರಶಸ್ತಿ ವಿಜೇತ ಜಿ. ಶಂಕರ ಕುರುಪ್ (1901-78) ಮಕ್ಕಳಿಗೆಂದೇ ರಚಿಸಿರುವ ಸುಂದರ ಕವಿತೆಗಳನ್ನೊಳಗೊಂಡ ಇಳಂಚುಂಟುಗಳ್ (1954), ಓಲಪ್ಪೀಪ್ಪಿ (1958), ಕಾಟ್ಟೇ ವಾ ಕಟಲೇ ವಾ (1969) ಎಂಬ ಮೂರು ಸಂಕಲನಗಳನ್ನು ಪ್ರಕಟಿಸಿರುವರು. ಅನೇಕ ಕವಿಗಳು ಕುರುಪ್‍ರಿಂದ ಸ್ಫೂರ್ತಿ ಪಡೆದಿದ್ದಾರೆ. 1950-80ರ ಅವಧಿಯಲ್ಲಿ ಸುಪ್ರಸಿದ್ಧ ಕವಿಗಳು. ಅಷ್ಟೇನೂ ಪ್ರಸಿದ್ಧರಲ್ಲದವರೂ ಹಲವು ಕವನ ಸಂಕಲನಗಳನ್ನು ಹೊರತಂದಿರುವರು. ಅವರೆಲ್ಲರ ವಸ್ತು ವಿಷಯ, ಅವರು ಬಳಸಿಕೊಂಡಿರುವ ಶೈಲಿ-ಇವು ಸಾಮಾನ್ಯವಾಗಿ ಮಕ್ಕಳ ಅಗತ್ಯಗಳಿಗನುಗುಣವಾಗಿವೆ. ವೈಲೋಪಿಳ್ಳಿ ಶ್ರೀಧರ ಮೆನನ್ 10-16ರ ವಯೋವರ್ಗಕ್ಕೆಂದು ರಚಿಸಿದ ತಮ್ಮ ಹದಿನಾರು ಪದ್ಯಗಳನ್ನು ಕುನ್ನಿಮಣಿಗಳ್ (1954) ಎಂಬ ಸಂಕಲನದಲ್ಲಿ ಪ್ರಕಟಿಸಿರುವರು. ಮಕ್ಕಳ ಕವನ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ನೆರವಾಗಿರುವ ಇತರ ಮುಖ್ಯ ಕವಿಗಳು ಮತ್ತು ಅವರ ಕೃತಿಗಳು: ಪಿ. ಕುಂಜಿರಾಮನ್ ನಾಯರ್‍ಬಾಲಾಮೃತಮ್ (1933): ಪಾಲ ನಾರಾಯಣನ್ ನಾಯರ್, ಓಮಾನ ಪ್ಪೈತಲ್ (1961): ಅಕ್ಕಿತ್ತಮ್ ಅಚ್ಯುತನ್ ನಂಬೂದಿರಿ, ಒರುಕುಲ ಮುಂತಿರಿಙ್ಜ (1959); ನಾಲಾಕಲ್ ಕೃಷ್ಣನ್ ಪಿಳ್ಳೈ ಪೂಕ್ಕೂಟ (1955). ಮನಮುಟ್ಟುವಂತೆ ಕವನ ರಚಿಸುವಲ್ಲಿ ಸಿದ್ಧಹಸ್ತರಾದ ಕುಂಜುಣ್ಣಿ ಎಂಬವರು ಕುಂಜುಣ್ಣಿಯುಡೇ ಕವಿತಗಳ್ (1969) ಮತ್ತು ಪದಿನಾಙುಮ್ (1966) ಎಂಬ ಎರಡು ಸಂಕಲನಗಳನ್ನು ಪ್ರಕಟಿಸಿರುವರು. ಓ.ಎನ್.ವಿ. ಕುರುಪ್ 1980ರಲ್ಲಿ ವಳಪ್ಪೊಟ್ಟುಕಳ್ ಪ್ರಕಟಿಸಿದ ಕೃತಿ ಈ ಕ್ಷೇತ್ರಕ್ಕೆ ಸ್ವಾಗತಾರ್ಹ ಸೇರ್ಪಡೆ.

ಗದ್ಯ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ನಡೆದಿದೆ. ಮಹಾಕಾವ್ಯಗಳಿಂದ ಹಿಡಿದು ಪುರಾಣ, ಐತಿಹ್ಯ, ಜಾನಪದ, ಇತಿಹಾಸ, ಧರ್ಮಮೊದಲಾದುವೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಷೇಕ್‍ಸ್ಪಿಯರ್, ಚಾಸರ್ ಟೆನಿಸನ್, ಅರೇಬಿಯನ್ ನೈಟ್ಸ್ ಕಥೆಗಳು, ಗ್ರಿಮ್ ಕಿನ್ನರ ಕಥೆಗಳು, ಈಸೋಪನ ನೀತಿಕಥೆಗಳು ಗಲಿವರನ ಪ್ರವಾಸಕಥೆಗಳು, ಟಾಲ್‍ಸ್ಟಾಯ್ ಕಥೆಗಳು, ವಿಕ್ಟರ್ ಹ್ಯೂಗೋ, ಚಾಲ್ರ್ಸ್ ಡಿಕನ್ಸ್ ಇತ್ಯಾದಿ ಪಾಶ್ಚಾತ್ಯ ಲೇಖಕರ ಕಥೆಗಳು ಮಲಯಾಳಮ್ ಮಕ್ಕಳ ಸಾಹಿತ್ಯ ಕ್ಷೇತ್ರ ಪ್ರವೇಶಿಸಿ, ಜನಪ್ರಿಯತೆ ಗಳಿಸಿರುವುವು.

ರಾಮಾಯಣ, ಮಹಾಭಾರತ, ಮಹಾಕಾವ್ಯಗಳು, ನಾಟಕಗಳು ಮತ್ತು ಹಿತೋಪದೇಶ, ಪಂಚತಂತ್ರದಂಥ ಕೃತಿಗಳು ಲೇಖಕರಿಗೆ ಸ್ಫೂರ್ತಿಯನ್ನೊದಗಿಸಿವೆ; ಸಾಹಿತ್ಯಸೃಷ್ಟಿಗೆ ಆಕರವಾಗಿ ಪರಿಣಮಿಸಿವೆ. ಓದುಗನಿಗೆ-ಸಾಮಾನ್ಯವಾಗಿ ಮಕ್ಕಳಿಗೆ ಇದು ಆಕರ್ಷಕವಾಗಿಯೂ ಇರುತ್ತದೆ. ಮಹಾಕಾವ್ಯದ ಹಾಗೂ ಪೌರಾಣಿಕ ವಸ್ತು ವಿಷಯಗಳ ಬಗ್ಗೆ ಕೃತಿರಚನೆ ಮಾಡಿರುವ ಲೇಖಕರು ಮತ್ತು ಅವರ ಕೃತಿಗಳಲ್ಲಿ ಕೆಲವನ್ನು ಇಲ್ಲಿ ಹೇಳಲಾಗಿದೆ: ಎ. ರಾಮ ಪೈಯವರ ಬಾಲಭಾರತಮ್ (1915), ಆರ್. ಈಶ್ವರ ಪಿಳ್ಳೈಯರವರ ಶ್ರೀರಾಮನ್ (1916), ಪಿ.ಎಸ್.ಸುಬ್ಬರಾಮ ಪಟ್ಟರ್ ಪುರಾಣಕಥೆಗಳ್ (1922), ಪಿ.ಅನಂತನ್ ಪಿಳ್ಳೈಯವರ ಭೀಷ್ಮರ್ (1924), ಕನ್ನಂಪ್ರ ಕುಂಜುನ್ನಿನಾಯರರ ವಿದುರರ್ (1924), ಚೆಲನಾಟ್ ಅಚ್ಯುತ ಮೆನನ್‍ರ ಪುರಾಣಮಂಜರಿ (1924), ಮೂರ್ಕೋತ್ ಕುಮಾರನ್‍ರ ಭಾರತ ಕಥಾ ಸಂಗ್ರಹಮ್ (1932). ಕಾವ್ಯ, ನಾಟಕಗಳಿಂದ ವಸ್ತು ತೆಗೆದುಕೊಂಡು ರಚಿಸಿರುವ ಕೆಲವು ಕರ್ತೃಗಳು ಮತ್ತು ಅವರ ಕೃತಿಗಳು: ಟಿ.ಸಿ.ಕಲ್ಯಾಣಿ ಅಮ್ಮನವರ ಕಾದಂಬರೀ ಕಥಾಸಂಗ್ರಹ (1920), ಚೆಂಕುಳತ್ತ್ ಚೆರಿಯ ಕುಂಜಿರಾಮ ಮೆನನರ ರಘುವಂಶ ಚರಿತಮ್ (1931), ಮೂರ್ಕೋತ್ ಕುಮಾರನ್‍ರ ಶಾಕುಂತಳಮ್ (1910): ಪಿ. ಕುಂಜಿರಾಮನ್ ನಾಯರರ ನಾಗಾನಂದಮ್ (1931). ಹಿತೋಪದೇಶ ಹಾಗೂ ಪಂಚತಂತ್ರಗಳನ್ನು ಆಧರಿಸಿರುವುವು: ಎಂ.ಆರ್. ವೇಲುಪಿಳ್ಳೈ ಶಾಸ್ತ್ರಿಯವರ ಹಿತೋಪದೇಶ ಕಥೆಗಳ್ (1937) ಮತ್ತು ಕೃಷ್ಣ ಪಿಳ್ಳೈಯವರ ಪಂಚತಂತ್ರ ಕಥೆಗಳ್ (1935). ಪಿ.ಎಮ್. ಕುಮಾರನ್ ನಾಯರ್ ಮಹಾಭಾರತವನ್ನು ಆಧರಿಸಿ ಭಾರತ ಕಥಾಪತ್ರಮಾಲಾ ಮತ್ತು ಸಂಸ್ಕøತ ಸಾಹಿತ್ಯದ ಪ್ರಮುಖ ಘಟ್ಟಗಳನ್ನಾಧರಿಸಿ ಸಂಸ್ಕøತ ಸಾಹಿತ್ಯಮಾಲೆ ಎಂಬ ಎರಡು ಮಾಲೆಗಳನ್ನು ಪ್ರಾರಂಭಿಸಿ. ಪ್ರತಿಮಾಲೆಯಲ್ಲಿ ಹನ್ನೆರಡು ಕೃತಿಗಳನ್ನು ಪ್ರಕಟಿಸಿರುವರು.

ಈಚೆಗೆ ಮಹಾಕಾವ್ಯಗಳ ಪುನರ್ ನಿರೂಪಣಾ ಕಾರ್ಯದಲ್ಲಿ ಅತ್ಯಂತ ಪ್ರಮುಖ ಕಾರ್ಯ "ಮಾಲಿ" (ವಿ. ಮಾಧವನ್ ನಾಯರ್) ಎಂಬವರದು. ಮೂರು ಮಹಾಕಾವ್ಯಗಳನ್ನು ಆಧರಿಸಿ ಮಾಲಿ ರಾಮಾಯಣಮ್ (1962), ಮಾಲಿ ಭಾರತಮ್ (1964), ಮಾಲಿ ಭಾಗವತಮ್ (1968) ಕೃತಿಗಳನ್ನು ರೂಪಿಸಿರುವರು. ಅವನ ಕಥೆ ಶೈಲಿ ತುಂಬ ಭಿನ್ನವಾದುದು. ಸುತ್ತಮಕ್ಕಳನ್ನು ಕೂರಿಸಿಕೊಂಡು, ಯಾವುದೇ ರೀತಿಯ ಆಡಂಬರವಿಲ್ಲದೆ, ಮಕ್ಕಳ ಮಾತುಗಳಲ್ಲಿಯೇ ಹೇಳುವಂತೆ ತೋರುತ್ತದೆ. ಅವರ ಬಾಲಕಥಾಮಾಲಿಕಾ (1977) ಟ್ಯೂಟಾನಿಕ್, ಕೆಲ್ಟಿಕ್, ಈಜಿಪ್ಟ್ ಹಾಗೂ ಮೆಕ್ಸಿಕೋ ಮತ್ತು ಇತರ ಆಕರಗಳ ಕಥಾಸಂಗ್ರಹ.

ಮಕ್ಕಳಿಗಾಗಿ ಕಥನನಿರೂಪಣೆಯಲ್ಲಿ ಇತಿಹಾಸ ಸಹ ಗಮನಾರ್ಹ ಕೊಡುಗೆ ನೀಡಿದೆ. ಭಾರತದ ರಾಷ್ಟ್ರೀಯ ಇತಿಹಾಸಕ್ಕಿಂತಲೂ ಹಳೆಯ ತಿರುವಾಂಕೂರಿನ ರಾಜ್ಯಕ್ಕೆ ಸಂಬಂಧಿಸಿದ ಪ್ರಾದೇಶಿಕ ಇತಿಹಾಸ ಅಂಥ ಕೃತಿಗಳ ವಸ್ತುವಿಷಯ. ಕೆ. ಪರಮ ಪಿಳ್ಳೈಯವರ ಚರಿತ್ರಕಥಗಳ್ (1910), ನಂದ್ಯಾರುವೀಟ್ಟಲ್ ಪರಮೇಶ್ವರನ್ ಪಿಳ್ಳೈಯವರ ತಿರುವಿಟಾಮ್ಕೂರು ಚರಿತ್ರ ಕಥಗಳ್(1913) ಮತ್ತು ಸಿ.ಪಿ.ಗೋವಿಂದ ಪಿಳ್ಳೈಯವರ ಇದೇ ಹೆಸರಿನ ಕೃತಿ (1914) - ಈ ವರ್ಗದಲ್ಲಿ ಪ್ರಮುಖವಾದುವಲ್ಲಿ ಕೆಲವು. ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಆರ್. ನಾರಾಯಣ ಪಣಿಕ್ಕರ್ ಆರ್ಯಚರಿತಮ್ (1918) ಮತ್ತು ಜೋಸೆಫ್ ಇಮ್ಮಟ್ಟಿ ಮ್ಯಾಥ್ಯುರ ಧೀರೋದಾತ್ತ ಕಥೆಗಳ್ (1928) ಪ್ರಕಟಗೊಂಡಿವೆ. ಧಾರ್ಮಿಕ ನಿಲುವಿನ ಕೆಲವು ಕೃತಿಗಳೂ ಬೆಳಕಿಗೆ ಬಂದಿವೆ.

ಮಕ್ಕಳ ಕಥಾಸಾಹಿತ್ಯದತ್ತ ಗಮನಹರಿಸಿದಾಗ ಈ ಕ್ಷೇತ್ರದಲ್ಲಿ 1940ರಿಂದ ಹೆಚ್ಚಿನ ಚಟುವಟಿಕೆ ಕಂಡುಬರುತ್ತಿದೆ. ಮಕ್ಕಳಿಗಾಗಿಯೇ ಕಥೆಗಳನ್ನು ಕೆಲವೊಮ್ಮೆ ಬರೆಯಲು ಪ್ರಯತ್ನಿಸಿದ ಶ್ರೇಷ್ಠ ಲೇಖಕರು: ಈ.ವಿ. ಕೃಷ್ಣ ಪಿಳ್ಳೈ (ಬಾಲಲೀಲಾ, 1932; ಭಾಸ್ಕರನ್, 1933), ಕೈನಿಕ್ಕರ್ ಕುಮಾರಪಿಳ್ಳೈ ಬಾಲಹೃದಯಂ 1934) ಮತ್ತು ಜಿ. ಶಂಕರ ಕುರುಪ್ (ಕಥಾ ಕೌತುಮ್, 1950). ಇವರು ನೀತಿ ನಿರೂಪಣೆಯ ಏಕತಾನತೆಯನ್ನು ಸ್ವಲ್ಪಮಟ್ಟಿಗೆ ಮೀರಿ ನಿಂತವರು. ಆಧುನಿಕ ಲೇಖಕರಲ್ಲಿ ಗಮನಾರ್ಹ ಕೊಡುಗೆ ಕಾರೂರು ನೀಲಕಂಠ ಪಿಳ್ಳೈಯವರದಾಗಿದೆ (ಮ. 1975). ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಅವರ ಭಾಷಾ ಅನುಭವ ಹಾಗೂ ಸಣ್ಣ ಕಥೆಗಾರರಾಗಿ ಕೌಶಲ- ಇವು ಅವರ ಯಶಸ್ಸಿಗೆ ಪೂರಕಾಂಶಗಳಾದುವು. ಇವರು ಸುಮಾರು ಹತ್ತು ಕೃತಿಗಳನ್ನು ಪ್ರಕಟಿಸಿದರು. ಪ್ರತಿಯೊಂದೂ ಮಕ್ಕಳ ಸೂಕ್ಷ್ಮ ಮನಸ್ಸಿಗೆ ಹಿಡಿಯುವಂಥ ವಿಶಿಷ್ಟ ರೀತಿಯದು. ಕೇರಳ ಸಾಹಿತ್ಯ ಅಕಾಡೆಮಿ ಮತ್ತು ಭಾರತ ಸರ್ಕಾರಗಳಿಂದ ಪ್ರಶಸ್ತಿ ವಿಜೇತ ಕೃತಿ ಮಾವಟಿಗ ಚಾತು (ಅಙಕ್ಕಾರನ್, 1959). ಇದರಲ್ಲಿ ನೈತಿಕ ಅಂಶದ ಜೊತೆಗೆ ಸಾಹಸ, ಆಶ್ಚರ್ಯ, ವೀರತ್ವದ ಅಂಶಗಳೂ ಸೇರಿವೆ. ಕಾರೂರು ಕಥೆಯನ್ನು ನೇರವಾಗಿ, ಸರಳವಾಗಿ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿರುವರು. ಇವರ ಸಮಕಾಲೀನರ ಪೈಕಿ ಉರುಬ್ 1967; ಮಲ್ಲನುಮ್ ಮರಣಮ್ 1966, ಅಪ್ಪು ವಿಂಡೆ ಲೋಕಮ್ 1967, ಮತ್ತು ಲಲಿತಾಂಬಿಕಾ ಅಂತಾರ್ಜನಮ್ (ಗೋಸಾಯಿ ಪರಙ ಕಥಾ, 1964) ಇವರನ್ನು ಅನುಸರಿಸಲು ಯತ್ನಿಸಿರುವರಾದರೂ ಸತತವಾಗಿ ಸಫಲವಾಗಿ ಇವರಂತೆ ಕೃತಿರಚನೆ ಮಾಡಲಾಗಿಲ್ಲ.

ಮುಂದಿನ ತಲೆಮಾರಿನ ಲೇಖಕರಲ್ಲಿ ಮಾಲಿ, ಕಿಟ್ಟುಣ್ಣಿ, ಕುಂಜುಣ್ಣಿ, ನರೇಂದ್ರನಾಥ ಮತ್ತು ಸುಮಂಗಲ ವಿಶೇಷವಾಗಿ ಉಲ್ಲೇಖಾರ್ಹರಾಗಿರುವರು. ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ಪಿ. ನರೇಂದ್ರನಾಥ್ ಅಗ್ರಸ್ಥಾನದಲ್ಲಿರುವರು; 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವರು. ಮಕ್ಕಳಿಗಾಗಿಯೇ ರಚಿತವಾದ ಕಥೆಗಳಲ್ಲಿ ತುಂಬ ವಿಶಿಷ್ಟವಾದವು: ಎಂ.ಟಿ. ವಾಸುದೇವನ್ ನಾಯರರ ಮಾಣಿಕ್ಕಕ್ಕಲ್ಲು, ಸಮಂಗಲ: ಲೀಲಾನಂಬುದಿರಿಪಾಡ್ ಅವರ ಮಿಠ್ಠಾಯಿ ಪೊಟ್ಟ (1978) ಮತ್ತು ಕಡವ ನಾಟ್ಟು ಕುಟ್ಟಿಕೃಷ್ಣನ್‍ರ ವಯನಾಟಿಂಡೆ (ಓವಂನ, 1968), ಕಥಾಸಾಹಿತ್ಯ-ಅದು ಮೂಲವಾಗಿರಲಿ, ಪುನರ್ ನಿರೂಪಣೆಯಾಗಿರಲಿ-ಮಲಯಾಳಮ್ ಮಕ್ಕಳ ಸಾಹಿತ್ಯದ ಪ್ರಧಾನ ಭಾಗವಾಗುತ್ತದೆ. ಈತನಕ ಪ್ರಕಟವಾಗಿರುವ ಕೃತಿಗಳ ಪೈಕಿ ಶೇಕಡಾ 60ಕ್ಕೂ ಹೆಚ್ಚು ಭಾಗ ಈ ವರ್ಗಕ್ಕೆ ಸೇರಿವೆ ಎನ್ನಬಹುದು.

ನಾಟಕಗಳು ಅಷ್ಟಾಗಿ ಇದ್ದಂತೆ ಕಾಣುವುದಿಲ್ಲ. ಎಲ್ಲೋ ಕೆಲವು ಏಕಾಂಕ ನಾಟಕಗಳು. ಕಿರುನಾಟಕಗಳನ್ನು ಬಿಟ್ಟರೆ-ಇವುಗಳಲ್ಲಿ ಬಹುಪಾಲು ಶಾಲಾ ವಾರ್ಷಿಕೋತ್ಸವಾದಿಗಳಲ್ಲಿ ಆಡಲು ರಚಿತವಾದವು- ಮಕ್ಕಳಿಗಾಗಿ ನಾಟಕ ರಚನೆಗೆ ಗಂಭೀರವಾಗಿ ಕೈಹಾಕಿದಂತೆ ತೋರುವುದಿಲ್ಲ. ಮಕ್ಕಳ ರಂಗಮಂದಿರದ ಅಭಾವವೇ ನಡೆಯುತ್ತಿವೆ. ಕೈನಿಕ್ಕರ ಕುಮಾರ ಪಿಳ್ಳೈಯವರ ವೇಲಕ್ಕಾರತ್ತಿ, ತಿಕೋಡಿಯನರ ಮಳವಿಲ್ಲಿಂಡೆ ನಾಟ್ಟಿಲ್, ಅಕ್ಕಿತ್ತಮ್‍ರ ಈ ಏಟಾತ್ತಿ ನೂಣಯೇ ಪರೆಯೂ (1957), ತಾಯಾಟ್ಟು ಶಂಕರನ್ ರವರ ವನಭೋಜನಮ್ (1955) ಪ್ರಶಂಸೆಗೆ ಪಾತ್ರವಾಗಿವೆ. ಕಲ್ಲಿಕೋಟೆ ವಿಶ್ವವಿದ್ಯಾಲಯದ ನಾಟಕ ವಿಭಾಗದ ಜಿ. ಶಂಕರ ಪಿಳ್ಳೈ ಪುಷ್ಪಕಿರೀಟಮ್ (1968), ಗುರುದಕ್ಷಿಣ ಮತ್ತು ಮದ್ದಳಮ್ (1963) ಎಂಬ ಮಕ್ಕಳ ಮೂರು ನಾಟಕಗಳನ್ನು ಬರೆದಿರುವರು. ಇವು ಉತ್ತಮ ನಾಟಕಗಳಾಗಿವೆ.

ಜೀವನ ಚರಿತ್ರೆ, ಧಾರ್ಮಿಕ ಹಾಗೂ ವೈe್ಞÁನಿಕ ಬರವಣಿಗೆ ಸೇರಿದಂತೆ ಗದ್ಯ ಸಾಹಿತ್ಯ ಸಾಕಷ್ಟಿದೆ. ಮೂಲತಃ ನೀತಿಬೋಧಕವಾಗಿದ್ದು ಮಕ್ಕಳ ಮನಸ್ಸಿನಲ್ಲಿ ಮೂಲಭೂತ ಮಾನವೀಯ ಮೌಲ್ಯಗಳ ಬಗ್ಗೆ ಸನ್ನಡತೆ, ಉತ್ತಮ ಜೀವನದ ಬಗ್ಗೆ ತಿಳಿಸುವ ಪ್ರಯತ್ನಗಳು ಸಾಗಿವೆ. ಆರ್. ಈಶ್ವರನ್ ಪಿಳ್ಳೈ (ಉತ್ಕರ್ಷಸೋಪಾನಮ್, 1918). ಕೆ.ಆರ್. ಕೃಷ್ಣಪಿಳ್ಳೈಯವರ ಪರಿಶ್ರಮಶೀಲಮ್ (1949). ಕೆ.ಪಿ. ಕೇಶವ ಮೆನನ್ (ಪ್ರಭಾತ ದೀಪಮ್, 1960). ಜಿ.ರಾಮನ್ ಮೆನನ್ (ಕುಟ್ಟಿಗಳ್ಕಾಯೂಳ್ಳ ಸನ್ಮಾರ್ಗಪಥಙ್ಗಳ್, 1911) ಮತ್ತು ಇತರ ಕೆಲವರ ಕೃತಿಗಳು ಆ ಧ್ಯೇಯ ಸಾಧಿಸಿವೆ. ಬುದ್ಧ, ಕ್ರಿಸ್ತ ಮೊದಲಾದ ಆಧ್ಯಾತ್ಮಿಕ ಮುಖಂಡರು ಗಾಂಧಿ, ನೆಹರು, ಟಾಗೂರ್, ವಿವೇಕಾನಂದ ಮೊದಲಾದ ರಾಷ್ಟ್ರನೇತಾರರ ಬಗ್ಗೆ ಹಲವು ಕೃತಿಗಳು ಬೆಳಕು ಕಂಡಿವೆ. ಕೇರಳ ಸರ್ಕಾರದ ರಾಜ್ಯ ಶಿಕ್ಷಣ ಸಂಸ್ಥೆ ಕಿರಿಯ ಓದುಗರಲ್ಲಿ ವೈe್ಞÁನಿಕ ಮನೋಭಾವ ಮೂಡಿಸುವತ್ತ ವ್ಯವಸ್ಥಿತ ಪ್ರಯತ್ನ ನಡೆಸಿದೆ. ಶಾಸ್ತ್ರ ಗ್ರಂಥಾವಲಿ ಎಂಬ ಮಾಲೆಯಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದೆ. ಭೌತವಿe್ಞÁನ, ಪರಮಾಣುಶಕ್ತಿ, ತಳಿವಿe್ಞÁನ, ಜೈವಿಕವಿಕಾಸ, ರೇಡಿಯೋ ಮತ್ತು ದೂರದರ್ಶನ ಹಾಗೂ ಅಂಥ ಇತರ ತಾಂತ್ರಿಕ ಕ್ಷೇತ್ರಗಳ ವಿಷಯಗಳ ಬಗ್ಗೆ ಕೃತಿಗಳು ಈ ಮಾಲೆಯಲ್ಲಿ ಪ್ರಕಟವಾಗಿವೆ. ವಿe್ಞÁನ ಬೋಧಕರೇ ರಚಿಸಿರುವ ಈ ಕೃತಿಗಳಲ್ಲಿ ಉತ್ತಮ ಚಿತ್ರಗಳಿವೆ. ಶಾಲಾ ಗ್ರಂಥಾಲಯಗಳ ಮೂಲಕ ವ್ಯಾಪಕವಾಗಿ ಇವುಗಳ ಪ್ರಸಾರಮಾಡಲಾಗಿದೆ.

"ಶಾಸ್ತ್ರ ಸಾಹಿತ್ಯ ಪರಿಷದ್" ಮತ್ತು ಸ್ಟೆಪ್ಸ್ ((SಖಿಇPS) ವೈe್ಞÁನಿಕ, ತಾಂತ್ರಿಕ, ಶೈಕ್ಷಣಿಕ ಪ್ರಕಟಣ ಸಂಸ್ಥೆ) ಸಹ ಗಣನೀಯ ಸೇವೆ ಸಲ್ಲಿಸಿವೆ. ಈ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ವೈಯಕ್ತಿಕ ಲೇಖಕರಲ್ಲಿ ಕೆಲವರು: ಕೆ. ಭಾಸ್ಕರನ್ ನಾಯರ್ (ಪ್ರಕೃತಿ ಪಾಠಜ್ಗಳ್, 1950; ಶಾಸ್ತ್ರ ಪಾಠಾಮಾಲಿ, 1954; ಅಟ್ಟ ಆಕಾಶತ್ತೇಕ್ಕು, 1979), ಪಿ.ಟಿ. ಭಾಸ್ಕರನ್ ಪಣಿಕ್ಕರ್ (ಕುಟ್ಟಿಕಳುಡೆ ನಕ್ಷತ್ರಶಾಸ್ತ್ರಮ್, 1965; ಮನುಷ್ಯನ್ ಚಂದ್ರನಿಲ್, 1969) ಮತ್ತು ಟಿ. ಆರ್. ಶಂಕುಣ್ಣಿ (ವೆಳಿಚ್ಚತ್ತಿಂಡೇ ಕಥ, 1976 ; ವೆಳ್ಳಿತ್ತಿಂಡೆ ಕಥ, ಪೆನಿಸಿಲ್ಲಿಂಡೇ ಕಥ, 1977).

ಮಕ್ಕಳ ಸಾಹಿತ್ಯದ ಪ್ರಾಮುಖ್ಯದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನವನ್ನು ಮ್ಯಾಥ್ಯು ಎಮ್. ಕುಜಿûವೇಲಿ (1905-74) ನಡೆಸಿದರು. ಇವರು 1941ರಲ್ಲಿ ಬಾಲನ್ ಪಬ್ಲಿಕೇಷನ್ಸ್ ಪ್ರಾರಂಭಿಸಿ 300ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದರು. ಕಿರಿಯರಿಗಾಗಿ ಉತ್ತಮ ಕೃತಿಗಳ ಅಗತ್ಯ ಹಾಗೂ ಅದರ ಸಮಸ್ಯೆಗಳ ಬಗ್ಗೆ ಶಿಕ್ಷಣತಜ್ಞರಾದ ಅವರಿಗೆ ಅರಿವಿತ್ತು. ತಾವೇ 60 ಕೃತಿರಚನೆ ಮಾಡಿದರು; ಇತರರ ಕೈಯಲ್ಲೂ ಕೃತಿರಚನೆ ಮಾಡಿಸಿದರು. ಇದರ ಯಶಸ್ಸಿನಿಂದ ಪ್ರೇರಿತರಾದ ಕುಜಿûವೇಲಿ ಬಾಲನ್ ಎಂಬ ಜನಪ್ರಿಯ ವಿಶ್ವಕೋಶ ಪ್ರಕಟಿಸಲು ಸಾಧ್ಯವಾಯಿತು. ಈ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಕಿರಿಯರಲ್ಲಿ ಕೆಲವರೆಂದರೆ: ವಿ.ಪಿ.ಮುಹ್ಮದ್ ಶಾನ್ ಕುನ್ನಪ್ಪಳ್ಳಿ, ಎಲ್.ಐ. ಜಸ್ಟಿನ್ ರಾಯ್, ಎಸ್. ಶಿವದಾಸ್, ಕುಮಾರಪುರಮ್ ದೇವದಾಸ, ಎನ್.ಕೆ.ದೇಶಮ್, ಕರಿಂಪುಳ ರಾಮಚಂದ್ರನ್, ಯು.ಶಂಕರನಾರಾಯಣನ್ ಮತ್ತು ಟಿ.ಎಮ್. ಪುರಮಾನ್ನೂರ್.

ಮಕ್ಕಳ ಸಾಹಿತ್ಯಕ್ಕಾಗಿಯೇ ಮೀಸಲಾಗಿರುವ ಹನ್ನೆರಡು ನಿಯತಕಾಲಿಕೆಗಳಿವೆ. ಕೊಟ್ಟಾಯಮಿನಿಂದ ಮಲಯಾಳ ಮನೋರಮ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ ಬಾಲರಮ, ಬಾಲಯುಗಮ್, ಕುಟ್ಟಿಕಳುಡೆ ದೀಪಿಕಾ ಮತ್ತು ಪೂಂಪಾಟ್ಟ- ಈ ಕ್ಷೇತ್ರದಲ್ಲಿ ಮುಖ್ಯವಾದುವು.

ಪ್ರಭಾತ್ ಬುಕ್ ಹೌಸ್‍ನವರು ಪ್ರಕಟಿಸಿರುವ ಆಕರಗ್ರಂಥ ಬಾಲವಿe್ಞÁನ ಕೋಶಮ್ (1978) ಉತ್ತಮವಾದುದು. ಮಲಯಾಳಮಿನಲ್ಲಿ ಇದೇ ಮೊದಲನೆಯದು.

1960ರಿಂದ ಮಲಯಾಳಮ್ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಉತ್ಸಾಹ ಪ್ರವೃತ್ತಿ ತಲೆದೋರಿದೆ. ತತ್ಪರಿಣಾಮವಾಗಿ ಉತ್ತಮ, ಮಧ್ಯಮದರ್ಜೆಯ ಹಾಗೂ ಕಳಪೆ ಕೃತಿಗಳು ಹೊರಬಂದಿವೆ. ಹಾಗಾಗಿ ಮಕ್ಕಳಿಗಾಗಿ ಕೃತಿ ರಚನೆಯ ಬಗ್ಗೆ ಲೇಖಕರು ಗಂಭೀರವಾಗಿ ಆಲೋಚಿಸುವ ಸ್ಥಿತಿ ತಲೆದೋರಿತು. ಮಲಯಾಳ ಮನೋರಮ ಪಬ್ಲಿಕೇಷನ್ಸ್‍ರವರು ಸ್ಥಾಪಿಸಿದ್ದ ಸುಪ್ರಸಿದ್ಧ ಮಕ್ಕಳ ಸಂಸ್ಥೆ "ಕೇರಳ ಬಾಲಜನಸಹಾಯಮ್" ನೊಡನೆ ನಿಕಟವಾಗಿ ಸಂಪರ್ಕ ಪಡೆದಿದ್ದ ಪಾಲ ಕೆ.ಎಮ್. ಮ್ಯಾಥ್ಯು ಈ ಸಮಸ್ಯೆಯ ಬಗ್ಗೆ ತೀವ್ರವಾಗಿ ಗಮನಹರಿಸಿದರು. "ಬಾಲಸಾಹಿತ್ಯ ರಚನ" (1979) ಎಂಬ ಕೃತಿ ರಚಿಸಿದರು. ಇದರಲ್ಲಿ ಮಕ್ಕಳಿಗಾಗಿ ಕೃತಿರಚನೆಯ ತತ್ತ್ವ, ಸಿದ್ಧಾಂತ ಮತ್ತು ತಂತ್ರಗಳ ಬಗ್ಗೆ ಪರಿಶೀಲಿಸಿರುವರು. ಮತ್ತೊಂದು ಮುಖ್ಯ ಬೆಳೆವಣಿಗೆ ಎಂದರೆ ಮಕ್ಕಳ ಸಾಹಿತ್ಯದ ಬಗ್ಗೆ ಸತ್ತ್ವಪೂರ್ಣ ಹಾಗೂ ಕ್ರಿಯಾಶೀಲ ಚಳವಳಿಯನ್ನು ಬೆಳೆಸುವ ಸ್ಪಷ್ಟ ಉದ್ದೇಶದಿಂದ "ಬಾಲಸಾಹಿತ್ಯ ಪರಿಷದ್" ಎಂಬ ಶಿಶುಸಾಹಿತ್ಯ ಲೇಖಕರ ಸಂಸ್ಥೆಯನ್ನು ಅಖಿಲ ಕೇರಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ. ಕೊಟ್ಟಾಯಮಿನಲ್ಲಿ ಡಿ.ಸಿ. ಕಿಜಕ್ಕೇ ಮುರಿ ಮತ್ತು ಸಂಗಡಿಗರು "ಚಿಲ್ಡ್ರೆನ್ಸ್ ಬುಕ್ ಟ್ರಸ್ಟ್" ಸ್ಥಾಪಿಸಿರುವರು (1980). ಶ್ರೇಷ್ಠ ವ್ಯಕ್ತಿಗಳ 500 ಲಘು ಜೀವನಚರಿತ್ರೆಗಳನ್ನು ಒಳಗೊಂಡ 144 ಕೃತಿಗಳು ಪ್ರಕಟಣೆಯ ಕಾರ್ಯಯೋಜನೆ ಇದಕ್ಕಿದೆ.

ರಾಜಾಸ್ಥಾನಿ : ಈ ಭಾಷೆಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಜೋಗುಳಗಳು, ಹಾಡುಗಳು ಮತ್ತು ಕಥೆಗಳು ಜನಪದ ಸಾಹಿತ್ಯದಲ್ಲಿ ಲಭಿಸುವುದಾದರೂ ಉತ್ಸಾಹೀ ಲೇಖಕ ಬಿ.ಎಲ್. ಮಾಳೀ "ಜಂಜಾಣಿಯೊ" ಎಂಬ ನಿಯತಕಾಲಿಕೆಯನ್ನು ಹೊರತರುವತನಕ ಈ ಕ್ಷೇತ್ರದಲ್ಲಿ ಏನೂ ಇರಲಿಲ್ಲವೆಂದೇ ಹೇಳಬಹುದು. ಇವರು ಕೆಲವು ಮಕ್ಕಳ ಕಥೆಗಳ ಹಾಗೂ ಗೀತೆಗಳ ಸಂಕಲನಗಳನ್ನು ಪ್ರಕಟಿಸಿರುವರು. "ಹೂಂಕಾರೋದೊ ಸಾ" ಎಂಬುದು ಎಲ್.ಕೆ. ಚುಂಡಾವತ್‍ರ ಜನಪದ ಕಥೆಗಳ ಸಂಗ್ರಹ. ಚಂದ್ರಸಿಂಗ್ ಕೆಲವು ಆಧುನಿಕ ಜೋಗುಳಗಳನ್ನು ರಚಿಸಿದ್ದು ಅವನ್ನು ಬಾಳ್ಸಾದ್‍ನಲ್ಲಿ ಸೇರಿಸಿರುವರು. ಬಿ.ಎಲ್. ಭ್ರಮರ್‍ರವರು "ಭೋರ್ ರಾ ಪಗಲಿಯಾ" ಎಂಬ ಕಾದಂಬರಿಯನ್ನು ಪ್ರಕಟಿಸಿರುವರು; ಇದು ನಿಜವಾದ ಅರ್ಥದಲ್ಲಿ ಮಕ್ಕಳ ಕಾದಂಬರಿಯಾಗಲಾರದು. ಈ ಕ್ಷೇತ್ರದಲ್ಲಿ ರಾಜಸ್ಥಾನಿ ಲೇಖಕರಿಗೆ ಮಕ್ಕಳ ಸಾಹಿತ್ಯ ರಚಿಸಲು ಪೂರ್ಣ ತರಬೇತಿ ಅವಶ್ಯಕ ಎನಿಸುತ್ತದೆ. ಸಂಸ್ಕøತ : ಪ್ರಾಚೀನ ಭಾರತದಲ್ಲಿ ಅದ್ಭುತ ಕಥೆಗಳು, ಕಲ್ಪನಾಕಥೆಗಳು ಮತ್ತು ತತ್ಸಂಬಂಧಿತ ಸಾಹಿತ್ಯ ಕಿರಿಯರ ಮನರಂಜನೆ ಹಾಗೂ ನೀತಿಬೋಧನೆಯ ಪ್ರಮುಕ ಧ್ಯೇಯ ಪಡೆದಿದ್ದುದರಿಂದ ಅವು ಮಕ್ಕಳ ಸಾಹಿತ್ಯದ ಪಾತ್ರ ವಹಿಸಿದೆ. ಪ್ರತಿಯೊಂದು ಕಲ್ಪಿತ ಕಥೆ ಯಾವುದಾದರೂ ಪ್ರಾಪಂಚಿಕ ಸತ್ಯಾಂಶವನ್ನು ನಿದರ್ಶಿಸುವ ಅಥವಾ ವ್ಯಕ್ತಿಯ ವರ್ತನೆಯ ಬಗ್ಗೆ ತಿಳಿಸಿರುವ ಧ್ಯೇಯದಿಂದ ಕೂಡಿದೆ.

ಈ ಸಾಹಿತ್ಯ ಪ್ರಕಾರದಲ್ಲಿ ಸಾಮಾನ್ಯವಾಗಿ ಸರಳ ಗದ್ಯವಿದ್ದು, ಮಧ್ಯೆ ಮಧ್ಯೆ ನೀತಿಬೋಧಕ ಶ್ಲೋಕ, ಉಕ್ತಿಗಳಿರುತ್ತವೆ. ಅನೇಕ ವೇಳೆ ಪ್ರಧಾನಕಥೆಯಲ್ಲಿ ಹಲವು ಉಪಕಥೆಗಳು ನುಸುಳಿರುತ್ತವೆ. ಕೆಲವೊಮ್ಮೆ ಉಪಕಥೆಗಳಲ್ಲಿ ಮತ್ತಷ್ಟು ಉಪಾಖ್ಯಾನಗಳೂ ಇರುತ್ತವೆ.

ಮಕ್ಕಳ ಸಾಹಿತ್ಯದ ಪ್ರಾಚೀನ ಕೃತಿ ಎಂದರೆ ಪಂಚತಂತ್ರ. ಇದರಲ್ಲಿ ಸುಹೃದ್ ಭೇದ, ಮಿತ್ರಲಾಭ (ಸಂಧಿ), ಕಾಕೋಲೂಕಿಯಾಮ್ (ವಿಗ್ರಹ), ಲಬ್ಧ ಪ್ರಣಾಶ, ಅಪರೀಕ್ಷಿತಕಾರಕ ಎಂಬ ಐದು ಭಾಗಗಳಿವೆ. ಮಹಿಲಾರೋಪ್ಯದ ದೊರೆ ಅಮರಶಕ್ತಿಯ ನಾಲ್ವರು ದಡ್ಡ ಪುತ್ರರಿಗೆ ರಾಜಕೀಯ ಹಾಗೂ ಪ್ರಾಪಂಚಿಕ ಬುದ್ಧವಂತಿಕೆ ದೊರಕಿಸಿಕೊಡಲು ವಿಷ್ಣುಶರ್ಮ ಎಂಬ ಬ್ರಾಹ್ಮಣ ಇದನ್ನು ರಚಿಸಿದನೆಂದು ಹೇಳಲಾಗಿದೆ. ಕಥೆಯ ಪಾತ್ರಗಳಲ್ಲಿ ಪಶುಪಕ್ಷಿಗಳು. ಮನುಷ್ಯರು ದೇವತೆಗಳು, ಸಾಧು ಸಂತರು, ವೀರರು ಎಲ್ಲ ಬರುವರು. ಭಾರತದಲ್ಲಿ ಮತ್ತು ಹೊರದೇಶಗಳಲ್ಲಿ ಪಂಚತಂತ್ರದ ಹಲವಾರು ಭಾಷಾಂತರ ರೂಪಾಂತರಗಳು ಹಿಂದಿನಿಂದಲೂ ನಡೆದಿವೆ. ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಪ್ರಸರಣ ಸಂಖ್ಯೆಯ ದೃಷ್ಟಿಯಿಂದ ಪಂಚತಂತ್ರ ಎರಡನೆಯ ಸ್ಥಾನದಲ್ಲಿದೆ ಎನ್ನಲಾಗಿದೆ. ಪಂಚತಂತ್ರದ ಕೆಲವು ಭಾರತೀಯ ರೂಪಾಂತರಗಳು ಅವುಗಳಲ್ಲಾಗಿರುವ ಸೇರ್ಪಡೆಗಳು, ಮಾರ್ಪಾಟುಗಳಿಂದ ಕುತೂಹಲಕಾರಿಯಾಗಿವೆ. ಶ್ವೇತಾಂಬರ ಜೈನಯತಿ ಪೂರ್ಣಭದ್ರ (1199) ಜೈನಮತ ಪರವಾಗಿ 29 ಹೊಸಕಥೆಗಳನ್ನು ಸೇರಿಸಿ ಪರಿಷ್ಕøತ ಆವೃತ್ತಿಯನ್ನು ರಚಿಸಿದ. ಪ್ರಾಣಿಗಳ ಕೃತಜ್ಞತೆ, ಮನುಷ್ಯರ ಕೃತಘ್ನತೆಯನ್ನು ಒಳಗೊಂಡ ನಿದರ್ಶನವೂ ಇದರಲ್ಲಿ ಸೇರಿದೆ. ಈ ಕೃತಿಯ ಉಪಲಬ್ಧವಿದ್ದ ಹಲವು ಜೈನ ಆವೃತ್ತಿಗಳನ್ನು ಆಧರಿಸಿ ಮತ್ತೊಬ್ಬ ಜೈನ ವಿದ್ವಾಂಸ ಮೇಘವಿಜಯ (1600) ಪಂಚಾಖ್ಯಾನೋದ್ಧಾರ ರಚಿಸಿದ. ತಂತ್ರಾಖ್ಯಾನ ಅಥವಾ ತಂತ್ರಾಖ್ಯಾಯಿಕಾ- ಇದು ಪಂಚತಂತ್ರದ ಕಾಶ್ಮೀರಿ ರೂಪ. ಒಂದು ಗದ್ಯ ರೂಪದಲ್ಲಿ ಮತ್ತೊಂದು ಕಾವ್ಯರೂಪದಲ್ಲಿ ಲಭಿಸಿವೆ. ದಕ್ಷಿಣ ಭಾರತದಲ್ಲಿ ಇದರ ಸಂಕ್ಷಿಪ್ತ ಆವೃತ್ತಿ ಲಭ್ಯವಿದೆ; ನೇಪಾಳದಲ್ಲಿ ಅಲ್ಪಸ್ವಲ್ಪ ಮಾರ್ಪಾಟುಗಳೊಡನೆ ಇಂಥದೇ ಆವೃತ್ತಿ ಕಂಡು ಬಂದಿದೆ. ಅನಂತಘಟ್ಟ ಪಂಚೋಪಾಖ್ಯಾನಸಂಗ್ರಹ ಅಥವಾ ಕಥಾಮೃತನಿಧಿಯಲ್ಲಿ ಮೂಲವನ್ನು ಕಥನರೂಪದಲ್ಲಿ ಸಂಗ್ರಹಿಸಿದ್ದಾನೆ.

ಪಂಚತಂತ್ರದ ಅತ್ಯಂತ ಮುಖ್ಯ ರೂಪಾಂತರ ಎಂದರೆ ನಾರಾಯಣನ ಹಿತೋಪದೇಶ. ಒಂದು ರೀತಿಯಲ್ಲಿ ಜನಪ್ರಿಯತೆಯಲ್ಲಿ ಮೂಲದೊಡನೆ ಸ್ಪರ್ಧಿಸಿದೆ. ಮೂಲದ ನೆಲೆಗಟ್ಟನ್ನು ಹಾಗೆಯೇ ಉಳಿಸಿಕೊಂಡು ನಾರಾಯಣ ಹಲವಾರು ಕಥೆಗಳನ್ನು ಕೌಶಲದಿಂದ ವ್ಯವಸ್ಥೆಗೊಳಿಸಿ ಮತ್ತಷ್ಟು ಸೂತ್ರಗಳನ್ನು ಸೇರಿಸಿ, ಹೆಚ್ಚು ಬೋಧಪ್ರದವಾಗಿ ಮಾಡಿದ್ದಾನೆ. ಸಂಸ್ಕøತದಲ್ಲಿ ಹಲವು ಕಥಾಸಂಕಲನಗಳಿವೆ. ಇವು ಕಿರಿಯರು-ಹಿರಿಯರು-ಹೀಗೆ ಎಲ್ಲರನ್ನೂ ದೃಷ್ಟಿಯಲ್ಲಿಟ್ಟುಕೊಂಡಿವೆ. ಇವನ್ನು ಮಕ್ಕಳ ಸಾಹಿತ್ಯದ ವ್ಯಾಪ್ತಿಯಲ್ಲಿ-ಈ ಬಗ್ಗೆ ಪ್ರಸಕ್ತ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ವಸ್ತು ಹಾಗೂ ನಿರೂಪಣಾ ದೃಷ್ಟಿಯಿಂದ ಇವು ಕಟ್ಟುನಿಟ್ಟಾಗಿ ಬರದಿದ್ದರೂ-ಗಮನಿಸಬಹುದಾಗಿದೆ.

ಬೇತಾಳಪಂಚವಿಂಶತಿ: ಬೇತಾಳವೊಂದು ದೊರೆ ವಿಕ್ರಮನಿಗೆ ವಿವರಿಸಿದ ಚಾತುರ್ಯದ 25 ಕಥೆಗಳನ್ನು ಒಳಗೊಂಡಿದೆ. ವಿಕ್ರಮ ಸಂನ್ಯಾಸಿಯ ಅಣತಿಯ ಮೇರೆಗೆ, ಮರದಲ್ಲಿ ನೇತಾಡುತ್ತಿದ್ದ ಶವ ಹೊತ್ತು ಒಂದೇ ಒಂದು ಮಾತೂ ಆಡದೆ ರುದ್ರಭೂಮಿಗೆ ಸಾಗಿಸಲು ಒಪ್ಪಿದ. ಹಾಗೆ ಅವನು ತನ್ನ ಭುಜದ ಮೇಲೆ ಬೇತಾಳವನ್ನು ಹೊತ್ತುಕೊಂಡು ಹೋಗುತ್ತಿರುವಾಗ ಅದು ಕಥೆ ಹೇಳಲಾರಂಭಿಸಿ, ಆ ಕಥೆಯಲ್ಲಿ ಕಾಣಿಸುವ ವಿಚಿತ್ರ ಸಮಸ್ಯೆಯ ಬಗ್ಗೆ ರಾಜನ ಅಭಿಪ್ರಾಯ ಕೇಳುತ್ತದೆ. ರಾಜ ಅಜಾಗರೂಕತೆಯಿಂದ ಉತ್ತರಿಸಿದಾಗ ಬೇತಾಳ ಮರದ ಮೇಲಕ್ಕೆ ಹಾರಿಹೋಗುತ್ತದೆ. ರಾಜ ಅದನ್ನು ಮತ್ತೆ ಕೆಳಕ್ಕೆ ತರಬೇಕಾಗುತ್ತದೆ. ಅದು ಮತ್ತೊಂದು ಕಥೆ ಹೇಳುತ್ತದೆ. ಈ ಪ್ರಕ್ರಿಯೆ 25 ಸಲ ಪುನರಾವರ್ತಿತಗೊಳ್ಳುತ್ತದೆ.

ಸಿಂಹಾಸನದ್ವಾತ್ರಿಂಶಿಕಾ ಅಥವಾ ವಿಕ್ರಮಾರ್ಕಚರಿತ ಎಂಬ ಮತ್ತೊಂದು ಸಂಕಲನದಲ್ಲಿ ಭೋಜರಾಜ ಪ್ರಾಚೀನ ದೊರೆ ವಿಕ್ರಮನ ಸಿಂಹಾಸನದ 32 ಮೆಟ್ಟಲುಗಳನ್ನು ಇಳಿಯಲು ಯತ್ನಿಸಿದಾಗ ಪ್ರತಿಯೊಂದು ಮೆಟ್ಟಲಲ್ಲೂ ರಾಜನನ್ನು ಜೀವಂತಗೊಂಡ ಶಿಲಾಕನ್ಯೆಯರು ತಡೆದು, ಒಂದೊಂದು ಕಥೆ ಹೇಳುವರು. ಈ ಕೃತಿ ಬೇರೆ ಬೇರೆ ಪ್ರಾಂತಗಳಲ್ಲಿ ಆಯಾ ಪ್ರಾಂತೀಯ ಆವೃತ್ತಿಗಳಾಗಿಯೂ ಪರಿಚಿತವಾಗಿದ್ದು ಇದನ್ನು ಕಾಳಿದಾಸ, ರಾಮಚಂದ್ರ, ದಿವಾಕರ ಮತ್ತು ಕ್ಷೇಮೇಂದ್ರ (ಜೈನಸಂನ್ಯಾಸಿ 14ನೆಯ ಶತಮಾನ) ರಚಿಸಿದರೆಂಬ ಬೇರೆ ಬೇರೆ ಅಭಿಪ್ರಾಯಗಳಿವೆ. ಇವಲ್ಲದೇ ಮೂಲಕಥೆಯಲ್ಲಿ ದೊರೆ ವಿಕ್ರಮ ಇರುವಂತೆ ವಿಕ್ರಮಸೇನಚರಿತ, ವಿಕ್ರಮೋದಯ ಮತ್ತು ಪ್ರಚಂಡಚ್ಛತ್ರ ಪ್ರಬಂಧ ಇತ್ಯಾದಿ ಹಲವಾರು ಕಥೆಗಳೂ ಇವೆ. ಮೇರುತುಂಗನ ಪ್ರಬಂಧ ಚಿಂತಾಮಣಿ (1306) ಮತ್ತು ರಾಜಶೇಖರನ ಪ್ರಬಂಧಕೋಶ-(1348)- ಇವುಗಳಲ್ಲಿ ಅರೆ-ಐತಿಹಾಸಿಕ ಎನಿಸುವ ಹಲವಾರು ನೀತಿಬೋಧಕ ಆಖ್ಯಾನಗಳಿವೆ. ಜೈನರ ಅರವತ್ತುಮೂರು ಪುರಾಣಪುರುಷರ ಬಗ್ಗೆ ಹೇಮಚಂದ್ರನ ತ್ರಿಷಷ್ಠಿ ಶಲಾಕಾ ಪುರುಷ ಚರಿತ ಇದೆ. ತಥಾಗಚ್ಛದ ಸೋಮಚಂದ್ರವಿರಚಿತ ಕಥಾಮಹೋದಧಿ (1448) 126 ಜೈನಕಥೆಗಳನ್ನೊಳಗೊಂಡಿದೆ. ಪ್ರದ್ಯುಮ್ನಸೂರಿ ಪರಿಷ್ಕøತ ಪ್ರಭಾಚಂದ್ರನ ಪ್ರಭಾವಚರಿತ (ಸು. 1250) 22 ಅಧ್ಯಾಯಗಳನ್ನು ಒಳಗೊಂಡಿದೆ.

ಮಧ್ಯಯುಗಕ್ಕೆ ಬಂದಲ್ಲಿ ಕೃತಿಗಳು ಶೈಲಿ ಮತ್ತು ನಿರೂಪಣಾ ವಿಧಾನದಲ್ಲಿ ಹಿಂದಿನವನ್ನೇ ಅನುಸರಿಸಿರುವುದಾದರೂ ವಸ್ತುವಿಷಯಗಳಲ್ಲಿ ವೈವಿಧ್ಯವಿದೆ. ಜಗನ್ನಾಥಮಿಶ್ರನ (17ನೆಯ ಶತಮಾನ) ಕಥಾಪ್ರಕಾಶ ವಿವಿಧ ಆಕರಗಳಿಂದ ಸಂಗ್ರಹಿಸಿದ ಕಥೆಗಳು ಮತ್ತು ಪ್ರಕರಣಗಳ ಸಂಕಲನವಾಗಿದೆ. ಅe್ಞÁತಕರ್ತೃಕ ಕಥಾಕೋಶವು ದಯೆ, ಕೋಪ, ದುರಾಸೆ ಇತ್ಯಾದಿಗಳ ಫಲಶ್ರುತಿಯನ್ನೊಳಗೊಂಡ 27 ನೀತಿಕಥೆಗಳ ಸಂಕಲನವಾಗಿದೆ. ಕವಿಕುಂಜರನ ರಾಜಶೇಖರಚರಿತ ಅಥವಾ ಸಭಾರಂಜನಪ್ರಬಂಧ ಸಂಕ್ಷಿಪ್ತ ಘಟನಾನಿರೂಪಣಾದಿಗಳಿಂದ ಸದ್ವರ್ತನೆಯನ್ನು ಬೋಧಿಸುವ ಕಾವ್ಯವಾಗಿದೆ. ಮಹಾಕಾವ್ಯಕಥೆಗಳನ್ನು ಸರಳಭಾಷೆಯಲ್ಲಿ ಪರಿಷ್ಕರಿಸುವುದೆ (ಶ್ರೀರಾಮೋದಂತ ಮತ್ತು ಶ್ರೀಕೃಷ್ಣೋದಂತ ಇವು ಕೇರಳದಲ್ಲಿ ವಿಶೇಷವಾಗಿ ಜನಪ್ರಿಯವಾಗಿವೆ) ಈ ಕಾಲದ ವೈಶಿಷ್ಟ್ಯವಾಗಿತ್ತು.

ಆಧುನಿಕ ಯುಗದಲ್ಲಿ ಇಂಗ್ಲಿಷ್ ಮತ್ತು ಇತರ ಭಾಷೆಗಳಿಂದ ಭಾಷಾಂತರಗಳು ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಪ್ರಧಾನವಾಗಿವೆ. ಈಸೋಪ್ಸ್ ಫೇಬಲ್ಸ್ ಅನ್ನು ನಾರಾಯಣ ಬಾಲಕೃಷ್ಣ "ಈಸಬ-ನೀತಕಥಾ" ಎಂಬ ಹೆಸರಿನಲ್ಲಿ ಭಾಷಾಂತರಿಸಿರುವರು. ಹಳೆಯ ಒಡಂಬಡಿಕೆಯ ಸಾಲೊಮನ್‍ನ ಕಥೆಯನ್ನು ಕಲ್ಯಾಣಮಲ್ಲಸುಲೇಮತ ಚರಿತ ಎಂದು ರೂಪಾಂತರಿಸಿರುವರು. ಜಿ.ಕೆ.ಗೋಕಾಕ ಅಲಿಬಾಬ ಮತ್ತು ನಲವತ್ತು ಕಳ್ಳರನ್ನು ಸಂಸ್ಕøತಕ್ಕೆ ರೂಪಾಂತರಿಸಿರುವರು. ಅಲಾವುದ್ದೀನ್ ಮತ್ತು ಅದ್ಭುತದೀಪವೂ ಸೇರಿದಂತೆ ಅರೇಬಿಯನ್ ನೈಟ್ಸ್ ಅನ್ನು ಮಕ್ಕಳಿಗೆ ಬೋಧಪ್ರದವಾದ ಅಪ್ಪಾಶಾಸ್ತ್ರಿ ರಾಸಿವಡೇಕರ್ ಕಥಾಕಲ್ಪದ್ರುಮ್ (ಮುಂಬಯಿ (1900) ಎಂಬ ಹೆಸರಿನಲ್ಲಿ ಭಾಷಾಂತರಿಸಿರುವರು. ಭಾರತದ ಪ್ರಾದೇಶಿಕ ಭಾಷೆಗಳಿಂದ ಸಂಸ್ಕøತಕ್ಕೆ ಬಂದಿರುವ ಮಕ್ಕಳ ಸಾಹಿತ್ಯದ ಪೈಕಿ ಕೆಲವು: ಮೈಸೂರಿನ ಎಸ್. ವೆಂಕಟರಾಮಶಾಸ್ತ್ರಿಯವರ ಕಥಾಶತಕ (1898). ಶೇಷಸೂರಿಯವರ ಸಂಸ್ಕøತದ 400 ಗಾದೆಗಳು (ಮೈಸೂರು 1949). ಇದರಲ್ಲಿ ಪ್ರಧಾನವಾಗಿ ದಕ್ಷಿಣ ಭಾರತದವೇ ಇವೆ. ಮಕ್ಕಳಿಗಾಗಿ ತಮಿಳು ಕವಿಯಿತ್ರಿ ಅವ್ವೈಯಾರ್ ಸೂಕ್ತಿಗಳನ್ನು ವೈ. ಮಹಾಲಿಂಗಶಾಸ್ತ್ರಿ, ದ್ರಾವಿಡಾಚಾರ್ಯ ಸುಭಾಷಿತ ಸಪ್ತತಿ (1952) ಎಂಬ ಹೆಸರಿನಲ್ಲಿ ಸಂಕಲಿಸಿರುವರು. ಇದೇ ಲೇಖಕರು ಇಂಗ್ಲಿಷಿನಿಂದ ಕೆಲವು ಗೀತ ಕವಿತಗಳು ಹಾಗೂ ಭಾಷಾಂತರಗಳು ಸೇರಿದಂತೆ ಐವತ್ತು ಲಘು ಭಾವಗೀತೆಗಳನ್ನೊಳಗೊಂಡ ಕಿಂಕಿಣಿಮಾಲಾ (ಮದ್ರಾಸು, 1934) ಎಂಬ ಸಂಕಲನವನ್ನು ಹೊರತಂದಿರುವರು. ತಿಪ್ಪರಾಜಪುರಮ್ ಎಸ್. ವೈದ್ಯನಾಥ ಶಾಸ್ತ್ರಿಗಳು (1986) ತಮಿಳಿನ ಎರಡು ಮಹಾಕೃತಿಗಳಾದ ಆಟ್ಟಿಚ್ಚುಡಿ ಮತ್ತು ಕೊನ್ರೈವೆಂದನ್ ಇವನ್ನು ನೀತಿಬಂಧ ಎಂಬ ಹೆಸರಿನಲ್ಲಿ ಮಕ್ಕಳಿಗಾಗಿ ಹೊರತಂದಿರುವರು.

ವಿಶೇಷವಾಗಿ ಬೋಧನವೃತ್ತಿಯಲ್ಲಿರುವ ಕೆಲವು ಲೇಖಕರು ಸಂಸ್ಕøತದ ಮಹಾಕೃತಿಗಳನ್ನು ಸರಳವಾಗಿ ವಿವರಿಸುವ ಪ್ರಯತ್ನ ನಡೆಸಿರುವರು ಎಂ.ಎಂ.ಟಿ. ಲಕ್ಷ್ಮಣ ಸೂರಿಯವರ "ಭಾರತ ಸಂಗ್ರಹ" ಮತ್ತು ವೈ. ಮಹಾಲಿಂಗಶಾಸ್ತ್ರಿಗಳ "ಲಘುರಾಮಚರಿತ" ಈ ದಿಶೆಯಲ್ಲಿ ಸ್ತುತ್ಯರ್ಹ ಪ್ರಯತ್ನಗಳಾಗಿವೆ. ಸಂಸ್ಕøತ ನಿಯತಕಾಲಿಕೆಗಳ ಪೈಕಿ ಕೆಲವು ಬಾಲ ಸಾಹಿತ್ಯಕ್ಕಾಗಿ ವಿಭಾಗಗಳನ್ನು ಇರಿಸಿವೆ.

"ಚಂದಮಾಮ" ಮಾಸಿಕ (82 ಏಪ್ರಿಲ್) ತನ್ನ ಸಂಸ್ಕøತ ಆವೃತ್ತಿಯನ್ನು ಪ್ರಾರಂಭಿಸಿದೆ.

ಸಿಂಧಿ: ಈ ಭಾಷೆಗೆ 1850ರ ತನಕ ತನ್ನದೇ ಆದ ಶಿಷ್ಟ ಲಿಪಿ ಇಲ್ಲದಿದ್ದುದರಿಂದ ಅದಕ್ಕೂ ಹಿಂದಿನ ಮಕ್ಕಳ ಸಾಹಿತ್ಯದ ಲಿಖಿತ ದಾಖಲೆ ಲಭಿಸುವುದಿಲ್ಲ.

ಮಕ್ಕಳಿಗಾಗಿಯೇ ಸಿಂಧಿಯಲ್ಲಿ ಪ್ರಕಟವಾದ ಮೊದಲಕೃತಿ ಎಂದರೆ ಮುಫಿದುಲ್ ಸಬಿಯಾನ್ (ಕಿರಿಯರಿಗೆ ಮಾರ್ಗದರ್ಶಿ, 1861). ಇದು ಮಿರಾನ್ ಮುಹಮದ್ ಷಾನ ಮುಂತಾ ಖಬತ್-ಏ ಹಿಂದೀಯ ಭಾಷಾಂತರ.

ಮುಂಬಯಿ ಪ್ರಾಂತದ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗಾಗಿ ಹಲವಾರು ಪ್ರಾಥಮಿಕ ಪಠ್ಯ ಪುಸ್ತಕಗಳನ್ನು ಹೊರತಂದಿತು. ಇವುಗಳ ಪೈಕಿ ಮುಖ್ಯವಾದವು: ನಂದೀರಾಮ ಮೀರಾನಿ ಸಿದ್ಧಪಡಿಸಿದ ಬಾಬ್ನಾಮೊ (1853), ಉಧಾರಾಮ್ ತಾನ್ವರದಾಸರ ಪಹಿರಿಯೋಲ್ ಐನ್ ಬಿಯೊನ್ ಸಿಂಧೀ ಕಿತಾಬ್ (1853) (ಸಿಂಧಿಯ ಪ್ರಥಮ ಮತ್ತು ದ್ವಿತೀಯ ಪುಸ್ತಕಗಳು) ಪ್ರಿಭದಾಸ್ ಆನಂದರಾಮ್‍ರ ಟಿಯೋನ್ ಐನ್ ಜೋತೋಂದರ್ಸೀ, ಕಿತಾಬ್ (ತೃತೀಯ ಮತ್ತು ಚತುರ್ಥ ಪುಸ್ತಕಗಳು, 1857).

ಆಗ ಸಿಂಧ್‍ನಲ್ಲಿ ಅಸಿಸ್ಟೆಂಟ್ ಕಮೀಷನರಾಗಿದ್ದ ಎಲ್ಲಿಸ್ ಮತ್ತು ನಂದಿರಾಮ ಮಿರಾನಿ ಈಸೋಪ್ಸ್ ಫೇಬಲ್ಸ್‍ಗಳನ್ನು ಸಿಂಧಿಗೆ ಭಾಷಾಂತರಿಸಿದರು (1854). ಮಕ್ಕಳಿಗಾಗಿ 1860ರಲ್ಲಿ ಬರೆಯಲಾದ ವಹೇ ಐನ್ ವಿಲ್ಹೇ ಜೀಆಖಾಣೀ ಎಂಬ ಕಥೆಯನ್ನು ಟೋಟೀನಾಮೋಗೆ ಸೇರಿಸಲಾಯಿತು. 19ನೆಯ ಶತಮಾನದ ಮತ್ತೊಬ್ಬ ಪ್ರಸಿದ್ಧ ಲೇಖಕ ಕೇವಲರಾಮ್ ಸಲಾಮತ್ರಾಯ್ ಸುಖ್ರೀ (ಬಳುವಳಿ) ಮತ್ತು ಗುಲ್(ಪುಷ್ಪ) ರಚಿಸಿದರು. ಇವುಗಳಲ್ಲಿ ಮಕ್ಕಳ ಮನರಂಜನೆ ಹಾಗೂ ಬೋಧನೆಗೆಂದು ರಚಿತವಾದ ಕಥೆಗಳಿವೆ. ಇವು 19ನೆಯ ಶತಮಾನದ ಕೊನೆಯ ವೇಳೆಗೆ ಪ್ರಕಟಗೊಂಡವು.

ಮೊದಲಿನ ಲೇಖಕರ ಪೈಕಿ ಕೌರೋಮಲ್ ಚಂದನಮಲ್ (1845-1916) ಮಕ್ಕಳ ಕೃತಿ ರಚನೆ ಮಾಡಿದರು. 1891ರಲ್ಲಿ ಬಾರಾಣಗೀತ್ (ಮಕ್ಕಳ ಗೀತೆಗಳು) ಮತ್ತು ಬಾರಾಣಿಯೂನ್ ಆಖಾಣಿಯೂನ್ (ಮಕ್ಕಳ ಕಥೆಗಳು) ಇವನ್ನು ಹೊರತಂದರು. ಖಲೀಜ್ ಬೇಗ್ ಮಿರ್ಜಾ (1853-1929) ಬಾರಾಣಾ ಸಾಯಿರ್ (ಶಿಶುಗೀತೆಗಳು, 1870) ಎಂಬ ಶೀರ್ಷಿಕೆಯಲ್ಲಿ ಮಕ್ಕಳಿಗಾಗಿ ಕವಿತೆಗಳನ್ನು ಪ್ರಕಟಿಸಿದರು. ಇದೇ ಲೇಖಕರು ಅನಂತರದಲ್ಲಿ ಮಕ್ಕಳಿಗಾಗಿ ರಚಿಸಿದ ಕೃತಿಗಳಲ್ಲಿ ಕೆಲವೆಂದರೆ ನೀಲೋಪಖಿ (ನೀಲಪಕ್ಷಿ), ಲಬಾಖಾನ್, ದರ್ಜೀ, (ಲಬಖಾನ್ ದರ್ಜಿ), ತಿಲ್ಸಿಮೀ ಗುಡಿ (ಮಾಯಾ ಗೊಂಬೆ), ಬಜಾರಾ ಭೌರ್ (ಇಬ್ಬರು ಅವಳಿ ಸೋದರರು), ಷಹ್ಜಾದೀ ಕದಂಬರ್ಗ್ (ರಾಜಕುಮಾರಿ ಕದಂಬರ್ಗ್) ಮತ್ತು ಷಹ್ಜಾದೋ ಜಿಂಕುಷ್ (ಅಸುರ ಹಂತಕ ರಾಜಕುಮಾರ).

ಪರ್ಮಾನಂದ ಮೇವಾರಾಮ್ (1865-1938) ಮನರಂಜಕ ಕಥೆಗಳಿಂದ ಕೂಡಿದ ದಿಲ್ ಬಹಾರ್ (ನಾಲ್ಕು ಭಾಗಗಳು) ಕೃತಿಯನ್ನು ಪ್ರಕಟಿಸಿದರು. ದಯಾರಾಮ್ ಗಿಡುಮಲ್ ಅವರು ಗುಲಿ ಏನ್ ಸಿತಾ (ತಾಯಿ-ಮಗಳು) ಮತ್ತು ಸಾಧು ಹೀರಾನಂದ ಹೀರಾನ್ ಜೂನ್ ಕಣ್ಯೂನ್ ಎಂಬ ಸಣ್ಣ ಕಥಾ ಸಂಕಲವನ್ನೂ ಪ್ರಕಟಿಸಿದರು. ಭೇರುಮಲ್ ಮೆಹರಚಂದ್ ಗೀತೆಗಳನ್ನು ರಚಿಸಿದರು. ಸಿಂಧಿ ಮಕ್ಕಳ ಸಾಹಿತ್ಯದಲ್ಲಿ ದಾದಾ ಶೇವಕ್ ಭೋಜರಾಜ ಮೋಟ್ವಾನಿ (ಜ. 1906) ಅವರು 1925ರಲ್ಲಿ ಬಾಲ್ಕನ್‍ಜಿಬಾಠೀ ಎಂಬ ಮಕ್ಕಳ ಸಂಘ ಸ್ಥಾಪಿಸಿದರು. ಮಕ್ಕಳಿಗಾಗಿ ಗುಲಿಸ್ಥಾನ್ (ನಂದನವನ) ಎಂಬ ನಿಯತಕಾಲಿಕೆ ಪ್ರಾರಂಭಿಸುವುದರ ಮೂಲಕ ಮಕ್ಕಳು ಮನರಂಜಕ ಹಾಗೂ ಬೋಧಪ್ರದ ಕಥೆಗಳು, ಶಿಶುಗೀತೆಗಳು, ನಗೆ ಹನಿಗಳು, ಒಗಟುಗಳು, ಕಿನ್ನರ ಕಥೆಗಳು ಮೊದಲಾದವನ್ನು ಓದುವಂತೆ ಮಾಡಿದರು.

ಅಮರಲಾಲ್ ಹಿಂಗೋರಾನಿ ಪುಲ್ವಾರೀ (ಉದ್ಯಾನ) ಎಂಬ ಮಕ್ಕಳ ನಿಯತಕಾಲಿಕೆ ಪ್ರಕಟಿಸಿದರು. ಇದು ಹೆಚ್ಚುಕಾಲ ಉಳಿಯಲಿಲ್ಲ. ದೇಶದ ವಿಭಜನೆಯ ಅನಂತರ ಈ ನಿಯತಕಾಲಿಕೆಗಳ ಪ್ರಕಟಣೆ ನಿಂತುಹೋಯಿತು.

ಇವುಗಳ ಜೊತೆಗೆ, ಮೇಲಾರಾಮ್ ವಾಸ್ವಾನಿ (ಜ. 1901) ಸಂಪಾದಕತ್ವದಲ್ಲಿ ಗುಲ್‍ಫೂಲ್ ಎಂಬ ಮಾಸಿಕ ಬರಲಾರಂಭಿಸಿತು. ಗುಲಿಸ್ಥಾನದಂತೆ ಇದು ಸಹ ಸಿಂಧಿಯಲ್ಲಿ ಮಕ್ಕಳಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿತು. ಇದರ ಹಿನ್ನೆಲೆಯಲ್ಲಿದ್ದ ಸ್ಫೂರ್ತಿಶಕ್ತಿ ಫತಾ ಚಂದ ವಾಸ್ವಾನಿ (ಜ. 1894). ಈತ ಸರ್ಕಾರಿ ಸೇವೆಯಲ್ಲಿದ್ದರು. ವಾಸ್ವಾನಿ ಸೋದರರು ಭಾರತದ ಶ್ರೇಷ್ಠ ಕಾವ್ಯಗಳ ಸರಳೀಕೃತ ಮತ್ತು ಸಂಕ್ಷಿಪ್ತ ರೂಪದಲ್ಲಿ ಬಾಲ ರಾಮಾಯಣ್ (1946) ಬಾಲ ಮಹಾಭಾರತ್ ಮತ್ತು ಬಾಲ ಶ್ರೀಕೃಷ್ಣ ಇವನ್ನೂ ಪ್ರಕಟಿಸಿದರು. ಕಿಷನ್‍ಚಂದ್, ಬೇವಾಸ್ (1885-1947) ಮತ್ತು ಹರಿ "ದಿಲ್ಗಿರ್" (ಜ. 1916) ಗುಲ್‍ಫೂಲ್‍ನಲ್ಲಿ ಮಕ್ಕಳಿಗಾಗಿ ತಮ್ಮ ಕವನಗಳನ್ನು ಪ್ರಕಟಿಸುತ್ತಿದ್ದರು. ಈ ಶಿಶುಗೀತೆಗಳು ಮೌಜೀಗೀತ್ ಎಂಬ ಸಂಕಲನದಲ್ಲಿ ಪ್ರಕಟವಾದವು. ಜೇತಾನಂದ ನಗ್ರಾನಿ ಮಕ್ಕಳಿಗಾಗಿ ಹಾಸ್ಯಭರಿತ ನಾಟಕಗಳನ್ನು ರಚಿಸಿದರು. ಚಂದೂಲಾಲ್ ಪೂಲ್ ಮಾಲಾ ಎಂಬ ಹೊಸ ಮಾಸಪತ್ರಿಕೆಯನ್ನು ಲರ್ಕಾನಾದಿಂದ, ಭಗವಾನ್ ಸದರಂಗಾನ್ ಬಾಲಕ್ ಎಂಬ ನಿಯತಕಾಲಿಕೆ ಪ್ರಕಟಿಸಲಾರಂಭಿಸಿದರು. ಸ್ಥೂಲವಾಗಿ ಇದು ವಿಭಜನಾಪೂರ್ವದಲ್ಲಿಯ ಸಿಂಧಿ ಮಕ್ಕಳ ಸಾಹಿತ್ಯದ ಪರಿಶೀಲನೆ.

ವಿಭಜನಾನಂತರ ಸ್ವಲ್ಪ ಸಮಯದ ತರುವಾಯ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ವಿಶೇಷವಾಗಿ ಸಿಂಧಿ ಮಾಧ್ಯಮದ ಶಾಲೆಗಳು ಪ್ರಾರಂಭವಾದುವು. ಗುಲಿಸ್ಥಾನ್ ಅನ್ನು ಭಗವಾನ್ ಸುಖ್ರಾನಿ ಪುನಃ ಪ್ರಾರಂಭಿಸಿದರು. ಪ್ರಿಭದಾಸ್ ಬ್ರಹ್ಮಚಾರಿ ಮತ್ತು ದೀಪಚಂದ್ ತ್ರಿಲೋಕ್ ಚಂದ್ ಅಜ್ಮೀರದಿಂದ ದೇವನಾಗರಿ ಮತ್ತು ಅರ್ಯಾಬಿಕ್ ಲಿಪಿಗಳಲ್ಲಿ ಮಕ್ಕಳಿಗಾಗಿ ಪುಲ್ವಾರಿ ಎಂಬ ಮಾಸಿಕ ಪ್ರಾರಂಭಿಸಿದರು. ದೇವನಾಗರಿ ಲಿಪಿಯಲ್ಲಿ ಚಂದಮಾಮದ ಸಿಂಧಿ ಆವೃತ್ತಿ ಪ್ರಾರಂಭಗೊಂಡಿತು. ಇದು ಬಲುಕಾಲ ಪ್ರಕಟವಾಗಲಿಲ್ಲ. ವಿಷ್ಣುಶರ್ಮನ ಸಂಸ್ಕøತ ಪಂಚತಂತ್ರವನ್ನು ಸಿಂಧಿಯಲ್ಲಿ ಪ್ರಕಟಿಸಿದರು. ಮಕ್ಕಳ ಮಾನಸಿಕ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ವಿಷಯಗಳ ಬಗ್ಗೆ ಕವನಗಳನ್ನು ರಚಿಸಿದವರಲ್ಲಿ ಮುಖ್ಯರು: ಪರಶುರಾಮ ಜಿಯಾ, ಮೋತಿ ಪ್ರಕಾಶ್, ಗೋವರ್ಧನ ಭಾರತಿ, ದಯಾಲ್ ಆಶಾ (ಜ. 1929), ಅರ್ಜುನ ನಿಕಾಯಲ್ (ಜ. 1919), ಕನಯಲಾಲ್ ಕನ್ (ಜ. 1920), ಅಪ್ತಿ ಟೇಕ್‍ಚಂದ್ ಮಸ್ತ್ (ಜ. 1938), ರೋಚೋ ಮೋಹನಿ ಖುವಾಬಿ (ಜ. 1926), ಕಿಮಿತ್ ಕಮಲ್ ಸೋಮುಮಲ್ ಮತ್ತು ಗೋವರ್ಧನ ದಯಾಳ್-ಹಲವಾರು ಕಥೆ ಇತ್ಯಾದಿಗಳನ್ನು ರಚಿಸಿದರು.

ಸಾಧು ಟಿ. ಎಲ್. ವಾಸ್ವಾನಿಯವರ ಸಾಹಿತ್ಯ ಮಕ್ಕಳ ಗುಣಶೀಲ ರೂಪಿಸುವಲ್ಲಿ ನೆರವಾಗಿದೆ. ಹುಂದ್ರಾಜ್ ಬಲ್ವಾನಿ ಅಹಮದಾಬಾದಿನಿಂದ ಮಕ್ಕಳ ಮಾಸಪತ್ರಿಕೆ ಗುಲಿಸ್ಥಾನ್ ಪ್ರಕಟಿಸುತ್ತಿರುವರು. ಹಿಂದ್‍ವಾಸೀ ಸಿಂಧಿ ವೀಕ್ಲಿಯಲ್ಲಿ (ಮುಂಬಯಿ) ಮತ್ತು ಸಂಗೀತ (ಬರೋಡ) ಎಂಬ ಸಾಹಿತ್ಯಕ ಮಾಸಪತ್ರಿಕೆಯಲ್ಲಿ ಮಕ್ಕಳಿಗಾಗಿ ಪ್ರಾರಂಭಿಸಲಾದ ವಿಶೇಷ ಅಂಕಣ ಸಹ ಉಲ್ಲೇಖಾರ್ಹವಾಗಿದೆ. ಜೇತಾನಂದ ಲಾಲ್ವಾನಿ ಸಚಿತ್ರ ಮಾಸಪತ್ರಿಕೆ ಪೂಲಿಸ್ಥಾನ್ ಪ್ರಾರಂಭಿಸಿದರು.

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಪರಶುರಾಮ ಜಿಯಾರ ಕೃತಿ ಬಾಗ್ ಬಹಾರ್‍ಗೆ (ವಸಂತೋದ್ಯಾನ, 1963) ಮರಣೋತ್ತರ ಪ್ರಶಸ್ತಿ ಲಭಿಸಿದೆ. ಗೋವರ್ಧನ ಭಾರತಿಗೆ ಲಾಟ್ಯೂನ್ (ಮಧುರಗೀತೆಗಳು, 1958) ಮತ್ತು ಸಣ್ಣ ಕಥೆಗಳ ಸಂಕಲನ ನಾಯಿನ್ ಬಸ್ತೀ (ನವನಿವಾಸ, 1963) ಈ ಎರಡು ಕೃತಿಗಳಿಗೆ ಪ್ರಶಸ್ತಿ ಲಭಿಸಿವೆ.

ಜೆ.ಕೆ. ಗೋಗಿಯಾರ (ಕಾವ್ಯನಾಮ ಜ್ಯೋತ್ ಜ. 1928) ದಾದಿಯಾ ಜೂನ್ ಆಖಾಣಿಯೂನ್‍ಗೆ (ಅಜ್ಜಿಯ ಕಥೆಗಳು, 1960) ಪ್ರಶಸ್ತಿ ಲಭಿಸಿದೆ. ಇವರ ಕಥೆಗಳು ಮನರಂಜನೆ ಮತ್ತು ಬೋಧಪ್ರದವಾಗಿವೆ. ದೀಪಚಂದ ತ್ರಿಲೋಕ ಚಂದರಿಗೆ (ಜ. 1909) ಜವಾಹರ ದರ್ಶನ (ಸಚಿತ್ರ, ಜವಹರಲಾಲನೆಹರೂ ಜೀವನಚರಿತ್ರೆ) ಕೃತಿಗೆ ಪ್ರಶಸ್ತಿ ಲಭಿಸಿದೆ. ಅದೇ ರೀತಿಯಲ್ಲಿ ಬಾಪೂದರ್ಶನ ಸಚಿತ್ರ (ಮಹಾತ್ಮಾ ಗಾಂಧಿಯವರ ಜೀವನದ ಕೆಲವು ಘಟನೆಗಳು) ಸಹ ಬಹುಮಾನ ಪಡೆದಿದೆ.

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ವಿಜೇತ ಕೃತಿಗಳು: ಫತಾ ಚಂದ ವಾಸ್ವಾನಿಯ ಭಾರತ ದರ್ಶನ, ಕೌರೋಮಲ್ ಖಲಾನಿಯವರ ಚಚ್ಚಿತ (ನಗೆ ಹನಿಗಳು), ಹಿಕ್ರೋ ಹೋ ರಾಜ (ಒಬ್ಬ ರಾಜನಿದ್ದ) ಮತ್ತು ಲಕಮನ್ ಬಂಬಾಣಿಯವರ ಮುರಕಂದರ್ ಮುಖ್ರಿಯೂನ್ (ಅರಳುವ ಮೊಗ್ಗುಗಳು).

ಬಹುಮಾನಿತ ಕೃತಿಗಳಲ್ಲಿ ಮುಖ್ಯವಾದವು: ದಯಾಲ್ ಆಶಾರವರ (1936) ಮಹ್ಕುಂದರ್ ಮುಖ್ರಿಯೂನ್ (ಸುವಾಸನೆಯ ಮೊಗ್ಗುಗಳು, 1974) ಮತ್ತು ದಾದ ದರ್ಶನ್ (ಮಹಾನ್ ಸಮಾಜ ಸುಧಾರಕ ಸಾಧು ಟಿ.ಎಲ್. ವಾಸ್ವಾನಿಯವರ ಜೀವನದ ಬಗ್ಗೆ) ಮೋತಿ ಪ್ರಕಾಶರ ಗುಲ್ರನ್ ಜಾಗೀತ್ (ಶಿಶು ಗೀತೆಗಳು).

ಮಕ್ಕಳಿಗಾಗಿ ಬರೆದ ಕಾದಂಬರಿ ಮೋಹನ ಕಲ್ಪನರ (ಜ. 1930) ಸುಗರ್ಜಿ ಗೊತಾ (ಸ್ವರ್ಗಾನ್ವೇಷಣೆ). ಆಧುನಿಕ ಯುಗಕ್ಕೆ ವಿe್ಞÁನದ ಕೊಡುಗೆಗೆ ಸಂಬಂಧಿಸಿದ ವಿe್ಞÁನ ಜ್ಯೋತಿಗೆ ಬಹುಮಾನ ನೀಡಲಾಗಿದೆ. ಇದು ಜನಪ್ರಿಯ ಕೃತಿ. ಸಿಂಧಿಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೊಂದ್ರಾಜ್ ಬಾಯಿವಾಣ್ (1946) ಕೊಡುಗೆ ಸಹ ಗಮನಾರ್ಹವಾಗಿದೆ. ಗುಲಿಸ್ಥಾನ್ ಸಂಪಾದಕ ಕಾರ್ಯದ ಜೊತೆಗೆ ಮಕ್ಕಳಿಗಾಗಿ ಸಿಂಧಿಯಲ್ಲಿ 13 ಕೃತಿಗಳನ್ನು ರಚಿಸಿರುವರು. ತಾರನ್ ಭರೀ ರಾತ್ (ತಾರಾಮಯರಾತ್ರಿ) ಮತ್ತು ಬಾಲಗೀತ (ಮಕ್ಕಳ ಹಾಡುಗಳು) ಇದರಲ್ಲಿ ಸೇರಿವೆ.

ವಿಪಿನ್‍ರದಾಸ್ ಅಸ್ರಾಣಿಯ (ಜ. 1924) ಸಿಯಾಣೋ ಬೀರ್ಬಲ್ ಐನ್ ಟಾಹಿಕೇಂಜೀ ತಿಜೋಡಿಯಲ್ಲಿ (ಚತುರ ಬೀರಬಲ್ ಮತ್ತು ನಗೆಗಡಲು) ಹಲವಾರು ಹಾಸ್ಯ ಘಟನೆಗಳಿವೆ. ನೇವಂದ್ರಾಮ್ ಆಪ್ತಿಯ ಶಾಲು ಐನ್ ಬಾಲು, ಮನೋಹರ್ ಅಜೀಜ್‍ರ (ಜ. 1937) ಝರ್ಮಿರ್ (ತಾರೆಗಳ ಪ್ರಕಾಶ), ಕನ್ಯಾಲಾಲ್ ಟಿ ಕಿರ್ಪಾಲಾಣಿಯವರ ರೋಷನ್ ಮುನರ್ (ಉಜ್ಜ್ವಲ ಗೋಪುರ, 1976), ಜಗದೀಶ್ ಲಚ್ಚಾನಿಯವರ ಸಣ್ಣಕಥಾ ಸಂಕಲನ ಝರ್ಕಿಯ ಲಾಹೋ ಟರ್ಟೋ (1979, ಗುಬ್ಬಚ್ಚಿಗೆ ಸಿಕ್ಕಿದ ಕಾಸು) ಇವು ಉಲ್ಲೇಖಾರ್ಹವಾಗಿವೆ.

ಸಿಂಧಿಯಲ್ಲಿ ಉತ್ತಮ ಪಠ್ಯಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಮಹಾರಾಷ್ಟ್ರ ಸರ್ಕಾರ ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಪ್ರದರ್ಶಿಸಿದೆ.

ಮಕ್ಕಳಿಗಾಗಿ ಪ್ರಕಟವಾಗುತ್ತಿರುವ ಸಿಂಧಿ ಪುಸ್ತಕಗಳಲ್ಲಿಯ ಮುದ್ರಣದ ಗುಣಮಟ್ಟ ಹಾಗೂ ಚಿತ್ರಗಳ ಮಟ್ಟ ನಿರೀಕ್ಷಿತ ಹಂತ ತಲುಪಿಲ್ಲ. ವಿe್ಞÁನ, ತಂತ್ರe್ಞÁನ, ಕಲೆಯ ಕ್ಷೇತ್ರಗಳಲ್ಲಿ ಸಾಮಾನ್ಯ e್ಞÁನ ಒದಗಿಸುವಂಥ ಪುಸ್ತಕಗಳು ಅಷ್ಟಾಗಿ ಇಲ್ಲ. ಸಿಂಧಿಯಲ್ಲಿ ಮಕ್ಕಳಿಗಾಗಿ ಸಚಿತ್ರ ವಿಶ್ವಕೋಶವೂ ಇಲ್ಲ.

ಹಿಂದಿ : ಈ ಭಾಷೆಯಲ್ಲಿ ಮಕ್ಕಳ ಸಾಹಿತ್ಯದ ಮೂಲ ಸೂರದಾಸರ ಕಾವ್ಯ ಎಂಬುದು ಕೆಲವು ವಿದ್ವಾಂಸರ ಅಭಿಮತ. ಆದರೆ ಸೂರದಾಸರ ರಚನೆಗಳು ಮಕ್ಕಳಿಗಾಗಿ ರಚಿತವಾಗಿಲ್ಲ. ಅವುಗಳ ಭಾಷೆ, ಶೈಲಿ ಮತ್ತು ಅಭಿವ್ಯಕ್ತಿಯ ರೀತಿ- ಇವು ಮಗುವಿನ ಗ್ರಹಣಶಕ್ತಿಗೆ ಮೀರಿದುದಾಗಿವೆ. ಆದ್ದರಿಂದ ಈ ಅಭಿಮತವನ್ನು ಅಷ್ಟಾಗಿ ಒಪ್ಪಲಾಗುವುದಿಲ್ಲ. ಹಿಂದಿ ಗದ್ಯ ಸಾಹಿತ್ಯ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಭಿವೃದ್ಧಿಗೊಂಡಂತೆ ಮಕ್ಕಳ ಸಾಹಿತ್ಯವೂ ರೂಪುಗೊಳ್ಳಲಾರಂಭಿಸಿತು. ಕ್ರೈಸ್ತ ವಿಷನರಿಗಳು, ಕಲ್ಕತ್ತೆಯ ಪೋರ್ಟ್ ವಿಲಿಯಮ್ ಕಾಲೇಜಿನಂಥ ಶಿಕ್ಷಣ ಸಂಸ್ಥೆಗಳು, ಆಗ್ರಾದ ಸ್ಕೂಲ್ ಬುಕ್ ಸೊಸೈಟಿಯಂಥ ಇತರ ಸಂಸ್ಥೆಗಳು ಮಕ್ಕಳಿಗಾಗಿ ಶಾಲಾಪುಸ್ತಕಗಳನ್ನು ಪ್ರಕಟಿಸುತ್ತಿದ್ದುವು. ಇವು ವಾಸ್ತವವಾಗಿ ಮಕ್ಕಳ ಸಾಹಿತ್ಯ ಎಂದು ಹಣೆಪಟ್ಟಿಯನ್ನು ಹೊರಲು ಯೋಗ್ಯವಲ್ಲವಾದರೂ ಮುಂದೆ ವಿಶೇಷ ಫಲನೀಡಿದ ವೃಕ್ಷ ಮೂಲಬೀಜದಂತಿದ್ದವು- ಲಲ್ಲೂ ಲಾಲ್ ಸಿಂಹಾಸನ ಬತ್ತೀಶೀ (1799), ಬೈತಾಲ ಪಚ್ಚೀಶೀ (1799), ಶಾಕುಂತಲಾ ನಾಟಕ ಮತ್ತು ಮಾಧೋನಲಗಳನ್ನು (1798) ಪ್ರಕಟಿಸಿದರು. ಹಿತೋಪದೇಶದ ಕಥೆಗಳನ್ನು ರಾಜನೀತಿ (1812) ಎಂಬ ಹೆಸರಿನಲ್ಲಿ ಅನುವಾದಿಸಿದರು. ಪಂಡಿತ ಬದರಿಲಾಲರು ಹಿತೋಪದೇಶದ ಕಥೆಗಳನ್ನು ಅನುವಾದಿಸಿದರು (1851). ಇವರೇ ರಾಬಿನ್ಸನ್ ಕ್ರೂಸೋವನ್ನು ಅನುವಾದಿಸಿ ಅದನ್ನು 1860ರಲ್ಲಿ ರೋಮನ್ ಲಿಪಿಗೆ ಲಿಪ್ಯಂತರ ಮಾಡಿದರು. 1861ರಲ್ಲಿ ಸಹಸ್ರರಾತ್ರಿ ಸಂಕ್ಷೇಪವನ್ನು ಬಂಗಾಳಿಯಿಂದ ಹಿಂದಿಗೆ ಅನುವಾದಿಸಿದರು. ರಾಜಾಶಿವಪ್ರಸಾದ್ (ಸಿತಾರೇ ಹಿಂದ್) ಮಕ್ಕಳಿಗಾಗಿ ಹಲವು ಕೃತಿಗಳನ್ನು ರಚಿಸಿದರು. ರಾಜಾ ಭೋಜ ಕಾ ಸಪ್ನಾ, ಬಾಲಬೋಧ ಆಲಸಿಯೋಂ ಕಾ ಕೋಡಾ ಮತ್ತು ಬಚ್ಚೊಂಕಾ ಇನಾಮ್- ಅವುಗಳ ಪೈಕಿ ಕೆಲವು. ಇಂಗ್ಲಿಷಿನ ರಾಬಿನ್ಸನ್ ಕ್ರೂಸೋ, ಸಿಂದಬಾದ್ ದಿ ಸೈಲರ್ ಮತ್ತು ಗಲಿವರ್ಸ್ ಟ್ರಾವೆಲ್ಸ್ ಇವು ಸಹ ಮಕ್ಕಳಿಗಾಗಿ ಕೃತಿರಚಿಸಲು ಅನೇಕ ಹಿಂದಿ ಲೇಖಕರಿಗೆ ಸ್ಫೂರ್ತಿ ನೀಡಿದುವು.

ಭಾರತೇಂದು ಹರಿಶ್ಚಂದ್ರ (1850-85) ಅವರನ್ನು ಆಧುನಿಕ ಹಿಂದಿ ಸಾಹಿತ್ಯದ ಜನಕರೆಂದು ಪರಿಗಣಿಸಲಾಗಿದೆ. ಅವರು ಹಿಂದೀ ಗದ್ಯಶೈಲಿಯಲ್ಲಿ ಮಾತ್ರವೇ ಅಲ್ಲದೆ ಅದರ ವಸ್ತುವಿಷಯದಲ್ಲಿಯೂ ಕ್ರಾಂತಿ ಉಂಟುಮಾಡಿದರು. 1874ರ ಜೂನ್‍ನಲ್ಲಿ ಬಾಲಾಬೋಧಿನೀ ಎಂಬ ನಿಯತಕಾಲಿಕೆಯನ್ನು ಮಹಿಳೆಯರಿಗಾಗಿ ಪ್ರಕಟಿಸಿದರು. ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮ ಸ್ವತಂತ್ರ ಪ್ರಯತ್ನ ಇದು ಎಂಬುದು ಹಿಂದಿಯ ಅನೇಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಥಮ ಸ್ವತಂತ್ರ ಪ್ರಯತ್ನ ಇದು ಎಂಬುದು ಹಿಂದಿಯ ಅನೇಕ ವಿಮರ್ಶಕರ ಅಭಿಪ್ರಾಯ. ಇದರಿಂದ ಸ್ಫೂರ್ತಿಗೊಂಡು ಕಾಶೀಪತ್ರಿಕಾ (1876), ಬಾಲ ಹಿತಕರ (1891) ಮತ್ತು ವಿದ್ಯಾಪ್ರಕಾಶ ಮೊದಲಾದ ನಿಯತಕಾಲಿಕೆಗಳು ಪ್ರಕಟವಾದುವು. ಆದರೆ ಇವು ಬಹುಕಾಲ ಉಳಿಯಲಿಲ್ಲ. ಭಾರತೇಂದು ಲೇಖಕರಿಗೆ ನೀಡಿದ ಪ್ರೋತ್ಸಾಹದಿಂದ ಬಹುಕಾಲ ಉಳಿಯಲಿಲ್ಲ. ಭಾರತೇಂದು ಲೇಖಕರಿಗೆ ನೀಡಿದ ಪ್ರೋತ್ಸಾಹದಿಂದ ಹಲವಾರು ನಾಟಕಗಳು ರಚನೆಯಾದುವು. ಅವುಗಳ ಪೈಕಿ ಸತ್ಯಹರಿಶ್ಚಂದ್ರ, ಅಂಧೇರ್ ನಗರೀ, ಪ್ರಹ್ಲಾದ ಚರಿತ್ರೆ ಮಕ್ಕಳಿಗೆ ಹೆಚ್ಚು ಪ್ರಿಯವಾದವು. ಇವು ಮಕ್ಕಳಿಗಾಗಿ ರಚಿತವಾದವಲ್ಲ, ಆದರೆ ಮಕ್ಕಳ ಕಲ್ಪನೆಯನ್ನು ಕೆರಳಿಸಿ, ಅವರಲ್ಲಿ ದೇಶಭಕ್ತಿ, ಕರ್ತವ್ಯನಿಷ್ಠೆ, ಸತ್ಯಶೀಲತೆ ಹಾಗೂ ಹಿರಿಯರ ಬಗ್ಗೆ ಗೌರವ ಭಾವನೆ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾದುವು. ಭಾರತೇಂದು ಜೊತೆಗೆ ಪ್ರತಾಪ ನಾರಾಯಣ ಮಿಶ್ರ (1856-94), ಬದ್ರೀನಾರಾಯಣ ಚೌಧುರೀ "ಪ್ರೇಮಘನ" ಹಲವಾರು ಪದ್ಯಗಳನ್ನು ಬರೆದರು. ದೇಶಭಕ್ತಿ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಉದ್ದಾರವೇ ಈ ಪದ್ಯಗಳ ಮೂಲವಾಗಿತ್ತು. ಇವು ಸಹ ಮಕ್ಕಳಿಗಾಗಿ ರಚಿತವಾದುವಲ್ಲ, ಆದರೆ ಮಕ್ಕಳ ಮನಸ್ಸನ್ನು ಇವು ಸೂರೆಗೊಂಡವು. ಒಂದು ರೀತಿಯಲ್ಲಿ ಭಾರತೇಂದು ಯುಗ ಮಕ್ಕಳ ಸಾಹಿತ್ಯದ ಸ್ಥಿತ್ಯಂತರ ಕಾಲ ಎನ್ನಬಹುದು. ಅದು ಸಂಸ್ಕøತ ಮತ್ತು ಪರ್ಷಿಯನ್‍ಗಳೆರಡರ ಸಾಂಪ್ರದಾಯಿಕ ಮತ್ತು ಸಾಹಿತ್ಯಕ ಪ್ರಭಾವಗಳಿಂದ ಸಂಪೂರ್ಣವಾಗಿ ಮುಕ್ತವಾಗಿರಲಿಲ್ಲ. ಹಾಗಾಗಿ ಈ ಯುಗದಲ್ಲಿ ರಚಿತವಾದ ಅನೇಕ ಕಥೆಗಳ ವಿಷಯ ಪೌರಾಣಿಕ ಮತ್ತು ಐತಿಹಾಸಿಕವಾಗಿತ್ತು. ಅವು ಮಕ್ಕಳಿಗೆ ಮನೋರಂಜಕ ಹಾಗೂ ಬೋಧಪ್ರದವಾಗಿದ್ದುವು. ಕೆಲವು ಇಂಗ್ಲಿಷ್ ಕೃತಿಗಳು ಹಿಂದಿಗೆ ಭಾಷಾಂತರಗೊಂಡವು. ಕಾಶೀನಾಥ ಖತ್ರೀ, ಲ್ಯಾಂಬ್‍ನ ಟೇಲ್ಸ್ ಫ್ರಮ್ ಷೇಕ್‍ಸ್ಪಿಯರ್ ಅನ್ನು ಭಾಷಾಂತರಿಸಿದರು. ಫ್ರೆಡರಿಕ್ ಪಿಂಶಾಟ್ (1836-68) ಬಾಲದೀಪಕ ಮತ್ತು ವಿಕ್ಟೋರಿಯಾ ಚರಿತ ಎಂಬ ಎರಡು ಕೃತಿಗಳನ್ನು ಮಕ್ಕಳಿಗಾಗಿ ಬರೆದರು.

ಮುಂದಿನ ಯುಗವನ್ನು ದ್ವಿವೇದಿಯುಗ (1901-30) ಎಂದು ಕರೆಯಬಹುದಾಗಿದೆ. ಪಠ್ಯಪುಸ್ತಕಗಳು ಮುಖ್ಯವಾಗಿ ಶಾಲೆಗಳಿಗಾಗಿಯೇ ರಚಿತವಾಗಿರುತ್ತಿದ್ದುವು. ಕಥೆಗಳು, ಪ್ರಬಂಧಗಳು, ಪದ್ಯಗಳು, ಒಗಟುಗಳು ಶಾಲಾಪಠ್ಯ ಪುಸ್ತಕಗಳಲ್ಲಿ ಪ್ರಧಾನವಾಗಿದ್ದು, ಭಾರತದ ಪರಂಪರೆಯನ್ನು ಪರಿಚಯಿಸುವುದು ಇವುಗಳ ಉದ್ದೇಶ ಆಗಿತ್ತು. ಭಾಷಾಕಲಿಕೆ, ಮನೋರಂಜನೆ, ನೀತಿಬೋಧೆ - ಇವು ಮುಖ್ಯ ಅಂಶಗಳಾಗಿದ್ದುವು. ನಿಯತಕಾಲಿಕೆಗಳ ಸಂಖ್ಯೆ ಅಧಿಕಗೊಂಡವಾದರೂ ಅವು ಹೆಚ್ಚು ಕಾಲ ಪ್ರಕಟಗೊಳ್ಳಲಿಲ್ಲ. ವಿದ್ಯಾರ್ಥಿ (1914), ಶಿಶು (1915) ಮತ್ತು ಬಾಲಸಖಾ (ಜನವರಿ, 1917) ಇವು ಮುಖ್ಯ ನಿಯತಕಾಲಿಕೆಗಳಲ್ಲಿ ಕೆಲವು. ಇವುಗಳ ಪೈಕಿ ಬಾಲಸಖಾ ಮಾತ್ರ 1968ರ ತನಕ ಪ್ರಕಟವಾಗುತ್ತಿತ್ತು. ಇವು ಕಥೆ ಕವನಗಳ ಜೊತೆಗೆ ವಿe್ಞÁನ ವಿಷಯಗಳ ಬಗ್ಗೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಲೇಖನಗಳನ್ನು ಪ್ರಕಟಪಡಿಸುತ್ತಿದ್ದುವು. ಆಚಾರ್ಯಮಹಾವೀರ ಪ್ರಸಾದ ದ್ವಿವೇದಿಯವರ ಆಶ್ರಯದಲ್ಲಿ ಅಲಹಾಬಾದಿನ ದಿ ಇಂಡಿಯನ್ ಪ್ರೆಸ್ ಬಾಲಸಖಾ ಪ್ರಕಟಿಸುತ್ತಿತ್ತು; ಕಿರಿಯರಿಗಾಗಿ ಸಂಸ್ಕøತ ಮಹಾಕಾವ್ಯಗಳ ಹಿಂದೀ ಆವೃತ್ತಿಗಳನ್ನು ಬಾಲ ಭಾಗವತ, ಬಾಲ ರಾಮಾಯಣ ಮತ್ತು ಬಾಲಮಹಾಭಾರತ - ಪ್ರಕಟಿಸಿತು.

ವಿಶೇಷವಾಗಿ ಮಕ್ಕಳಿಗಾಗಿಯೇ ರಚಿತವಾದ ಪುಸ್ತಕಗಳು ಅನಂತರ ಪ್ರಕಟವಾದುವು. ಬಾಲಮುಕುಂದ ಗುಪ್ತ (1865-1907) ಖೇಲ್ ತಮಾಶಾ ಮತ್ತು ಖಿಲೋನಾ ರಚಿಸಿದರು. ಮಕ್ಕಳಿಗಾಗಿ ಪದ್ಯಗಳನ್ನು ಬರೆದ ಮುಖ್ಯ ಕವಿಗಳು: ಮೈಥಿಲೀ ಶರಣಗುಪ್ತ, ಅಯೋಧ್ಯಾ ಸಿಂಹ ಉಪಾಧ್ಯಾಯ "ಹರಿ ಔಧ್", ಕಾಮತಾ ಪ್ರಸಾದ ಗುರು, ರಾಮ ನರೇಶ ತ್ರಿಪಾಠಿ, ವಿದ್ಯಾಭೂಷಣ "ವಿಭು" ದೇವಿದತ್ತ ಶುಕ್ಲ. ಇವರು ಸೂರ್ಯ, ಚಂದ್ರ, ತಾರೆಗಳು, ಪ್ರಾಣಿ ಪಕ್ಷಿಗಳು, ಕಪಿಗಳು ಇಂಥ ವಿಷಯಗಳ ಬಗ್ಗೆ ಮಕ್ಕಳ ಮನಮೆಚ್ಚುವಂಥ ಕವಿತೆಗಳನ್ನು ರಚಿಸಿದರು. ಮಕ್ಕಳಿಗೆ ಇವು ಮನೋರಂಜನೆ ನೀಡುವುದಾದರೂ ಹೆಚ್ಚಿನ ಒತ್ತು ನೀತಿಬೋಧೆಯ ಕಡೆಗೆ ಇದ್ದಿತು. ರಾಷ್ಟ್ರಪ್ರೇಮ, ಸ್ವಾವಲಂಬನೆ, ಸಹಿಷ್ಣುತೆ ಇವನ್ನು ಬೋಧಿಸುವುದೇ ಅವರ ಧ್ಯೇಯವಾಗಿತ್ತು. ಪಂಚತಂತ್ರ ಹಾಗೂ ಹಿತೋಪದೇಶದ ಅನೇಕ ಕಥೆಗಳನ್ನು ಮಕ್ಕಳಿಗಾಗಿ ಪದ್ಯ ರೂಪದಲ್ಲಿ ಸುಖಾರಾಮ್ ಚೌಬೆ "ಗುಣಾಕರ" ಮತ್ತು ಸುಖದೇವ ಪ್ರಸಾದ ಚೌಬೆ ನಿರೂಪಿಸಿದರು.

ಭಾರತೀಯ ಇತಿಹಾಸದ ಮುಖ್ಯ ವ್ಯಕ್ತಿಗಳ, ಮಧ್ಯಯುಗದ ಸಂತರ ಹಾಗೂ ಆಧುನಿಕ ರಾಜಕೀಯ ನೇತಾರರ ಬಗ್ಗೆ ಬಾಲಸಖಾದ ಸಂಪಾದಕ ಠಾಕೂರ ಶ್ರೀನಾಥ ಸಿಂಹ ಬರೆದರು. ಮಕ್ಕಳಿಗಾಗಿ ಜೀವನ ಚರಿತ್ರೆ ರೂಪಿಸುವ ಇವರ ದಸ್ ಕಥಾಯೇಂ (1929) ಈ ಕ್ಷೇತ್ರದಲ್ಲಿ ಮುಖ್ಯ ಕೃತಿ. ಸರ್ಕಾರದ ವಿವಿಧ ವಿಭಾಗಗಳು ಹಾಗೂ ಸಾರ್ವಜನಿಕ ಸೇವೆಗಳ ದೈನಂದಿನ ಕಾರ್ಯ ಕುರಿತು ಸಾಮಾನ್ಯ ಮಾಹಿತಿ ಒದಗಿಸಲು ಕೆಲವು ಲೇಖಕರು ಪ್ರಯತ್ನಿಸಿದರು. ಕಾಮತಾ ಪ್ರಸಾದ ಗುರು ಕುತೂಹಲ ಕೆರಳಿಸುವ ಆಕರ್ಷಕ ರೀತಿಯಲ್ಲಿ ಅಂಚೆ ಕಚೇರಿಯ ವ್ಯವಸ್ಥೆ ಮತ್ತು ಕಾರ್ಯವನ್ನು ನಿರೂಪಿಸುವ ಲೇಖನಮಾಲೆಯನ್ನು ಬಾಲಸಖಾದಲ್ಲಿ ಪ್ರಕಟಿಸಿದರು. ದೇಶದ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ಬಗ್ಗೆ "ಪೆನ್ನಿ ಸ್ಟೋರೀಸ್" ನಲ್ಲಿ ಪುಸ್ತಕಗಳು ಪ್ರಕಟಗೊಂಡವು. ಮಕ್ಕಳ ಆಸಕ್ತಿಯ ಹಲವು ಇಂಗ್ಲಿಷ್ ಮತ್ತು ಸಂಸ್ಕøತಗಳ ಹಿಂದೀ ಅವತರಣಿಗಳು ಬೆಳಕಿಗೆ ಬಂದವು. ದೇಶದಲ್ಲಿ ಆರ್ಥಿಕ ಹಾಗೂ ರಾಜಕೀಯವಾಗಿ ಹಲವಾರು ಅಡ್ಡಿ ಆತಂಕಗಳಿದ್ದರೂ ದ್ವಿವೇದಿ ಯುಗದಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯುಂಟಾಗಿತ್ತು.

ಸ್ವಾತಂತ್ರ್ಯ ಪೂರ್ವಯುಗದಲ್ಲಿ (1931-46) ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಬಿಸಿ ಏರಿದಂತೆ ಸ್ವದೇಶಿ ಚಳುವಳಿ, ಅಸಹಕಾರ ಆಂದೋಲನ, ಭಾರತ ಬಿಟ್ಟು ತೊಲಗಿ ಚಳವಳಿಗಳಿಂದ ದೇಶದ ಉದ್ದಗಲಕ್ಕೂ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಉತ್ಕಟ ಭಾವನೆಗಳು ಕೆರಳಿದವು. ಎರಡನೆಯ ಮಹಾಯುದ್ಧ(1939-45) ಹಾಗೂ ಅದರ ಪರಿಣಾಮಗಳು ಸಾಂಸ್ಕøತಿಕ ಹಾಗೂ ಸಾಹಿತ್ಯಕ ಮೌಲ್ಯಗಳಲ್ಲ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಮಕ್ಕಳ ಸಾಹಿತ್ಯದ ಪ್ರಾಮುಖ್ಯ ಕುರಿತಂತೆ ಜನಜಾಗೃತರಾದರು. ಸೋಹನ್‍ಲಾಲ ದ್ವಿವೇದಿಯವರ ಶಿಶುಭಾರತ, ಜಬ್ಬಲಪುರದ ಮಿತ್ರಬಂಧು ಕಾರ್ಯಾಲಯದವರು ಪ್ರಕಟಿಸಿದ ಪುಸ್ತಕಗಳು, ಕಾನಪುರದ ಕೃಷ್ಣವಿನಾಯಕ ಫಡ್ಕೆಯವರ ಪ್ರಯತ್ನ ಇವುಗಳಿಂದ ಸತತ ಪ್ರಗತಿಯಾಯಿತು. ಸಮಕಾಲೀನ ಮಕ್ಕಳ ನಿಯತಕಾಲಿಕೆಗಳಾದ ಖಿಲೋನಾ, ಕುಮಾರ, ವಾನರ, ಬಾಲಕ ಮತ್ತು ಕಿಶೋರ ಇವು ಮಕ್ಕಳ ಸಾಹಿತ್ಯದ ಸ್ವತಂತ್ರ ಅಸ್ತಿತ್ವ ಸ್ಥಾಪಿಸುವಲ್ಲಿ ಗಣನೀಯ ಪಾತ್ರವಹಿಸಿದುವು. ಮಕ್ಕಳ ಸಾಹಿತ್ಯದ ಗುರಿ ನೀತಿಬೋಧೆ ಹಾಗೂ ಶೀಲ ಸಂವರ್ಧನೆಯೇ ಆಗಿದ್ದುದರಿಂದ ಈ ಯುಗದಲ್ಲಿ ರಚಿತವಾದ ಕಥೆಗಳು ಪರಿಣಾಮಕಾರಿಯಾದುವೆಂದಾಗಲೀ ಇಲ್ಲವೆ ಮಕ್ಕಳ ಮಾನಸಿಕ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ್ದವೆಂದಾಗಲೀ ಹೇಳಲಾಗುವುದಿಲ್ಲ. ಭಗವತೀ ಪ್ರಸಾದ ವಾಜಪೇಯಿ ಮತ್ತು ಜಹೂರ್ ಭಕ್ಷ್ ಪ್ರಮುಖ ಕಥೆಗಾರರಾಗಿದ್ದರು. ಲಜ್ಜಾ ಶಂಕರ ಝಾರವರು ಪ್ರಖ್ಯಾತರು. ಇವರ ಕಥೆಗಳ ಪಾತ್ರಗಳು ರಾಜ, ರಾಣಿ, ಬೆಕ್ಕು, ನಾಯಿ, ಕರಡಿ ಮೊದಲಾದ ಪಾರಂಪರಿಕ ಪಾತ್ರಗಳೇ ಆದರೂ ಕಥೆಗಳು ವೈಯಕ್ತಿಕ ಅನುಭವದ ರೀತಿಯವೂ ಬಖೈರುಗಳ ಸ್ವರೂಪದವೂ ಆಗಿವೆ. ಮಕ್ಕಳಲ್ಲಿ ಧೈರ್ಯ ಸಾಹಸಗಳನ್ನು ಮೂಡಿಸುವ ಸಲುವಾಗಿ ಜಾನ್ ಜೊಖಿಂಕೀ ಕಹಾನೀಯಾ (1945) ಮೊದಲಾದ ಸಾಹಸಕಥೆಗಳು ಪ್ರಕಟವಾದುವು.

ಈ ಯುಗದಲ್ಲಿ ರಚಿತವಾದ ಕವನಗಳ ಗುರಿ ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸುವುದು ಹಾಗೂ ಅವರಿಗೆ ಗಾಂಧೀತತ್ತ್ವಗಳನ್ನು ಬೋಧಿಸುವುದಾಗಿತ್ತು. ಸೋಹನ್‍ಲಾಲ್ ದ್ವಿವೇದಿಯವರ ಪದ್ಯ ಸಂಕಲನಗಳಾದ ಬಾಂಸುರೀ ಝರನಾ ಬಿಗುಲ್ (ಕಹಳೆ) ತುಂಬ ಜನಪ್ರಿಯವಾಗಿದ್ದುವು. ಇದೇ ಪಂಥಕ್ಕೆ ಸೇರಿದ ಪ್ರಖ್ಯಾತ ಕವಿಗಳ ಪೈಕಿ ಇಬ್ಬರೆಂದರೆ ಮಾಖನ್ ಲಾಲ ಚತುರ್ವೇದಿ ಹಾಗೂ ಮೂಲಚಂದರಾಗಿದ್ದಾರೆ. ಶಿಶುಗೀತೆಗಳ ಸುಪ್ರಸಿದ್ಧ ಸ್ವರ್ಣಸಹೋದರ. ಕಥನಗೀತೆಗಳು ಮಕ್ಕಳ ಆಕರ್ಷಣೆಯ ಮತ್ತೊಂದು ಪ್ರಕಾರವಾಗಿತ್ತು. ರಾಷ್ಟ್ರೀಯತೆ, ಗ್ರಾಮಜೀವನದ ಆಕರ್ಷಣೆಗಳು ಮತ್ತು ನೀತಿಸೂತ್ರಗಳು ಹೀಗೆ ವಸ್ತು ಹಳೆಯದೇ ಆದರೂ ಸೋಹನ್ ಲಾಲ ದ್ವಿವೇದಿ ಹಾಗು ಪದುಮ ಲಾಲ ಪುನ್ನಾಲಾಲ ಬಕ್ಷೀ ಇವರ ಶೈಲಿ ಹಾಗೂ ರೀತಿಯಲ್ಲಿ ನವೀನ ಪ್ರಯೋಗಗಳನ್ನು ಕೈಗೊಂಡರು.

ಗದ್ಯದ ಪ್ರಗತಿ ಸಾಕಷ್ಟಾಗಿರಲಿಲ್ಲ. ಚರ್ಚಿಲ್, ಸ್ಟಾಲಿನ್‍ನಂಥ ರಾಜಕೀಯ ಮುಖಂಡರ ಹಾಗೂ ಟಾಗೂರ್, ಅಲ್ಫ್ರೆಡ್ ನೊಬೆಲ್‍ರಂಥ ಪ್ರಸಿದ್ಧ ಪುರುಷರ ಜೀವನ ಚರಿತ್ರೆಗಳು ಪ್ರಕಟವಾಗಿದ್ದುವು. ಲಲ್ಲೀ ಪ್ರಸಾದರ ಪುರೀ ಯಾತ್ರಾದಂಥ ಪ್ರವಾಸ ಕಥನವೂ ಹೊರ ಬಂದಿತು. ಎಳೆಯರಿಗಾಗಿ ಪ್ರಾಣಿ ವಿe್ಞÁನ, ಭೂವಿe್ಞÁನ, ಸಸ್ಯವಿe್ಞÁನಗಳಲ್ಲಿ ಕೆಲವು ಕೃತಿಗಳು ಪ್ರಕಟಗೊಂಡಿದ್ದುವು. ಪೂರಣ್ ಚಂದ ಶ್ರೀವಾಸ್ತವ ಈ ದಿಸೆಯಲ್ಲಿ ಹೊಸ ಪ್ರಯೋಗ ನಡೆಸಿದರು. ವರ್ಷಮೇಘ ಮತ್ತು ತುಲಸೀಗಳ ಬಗ್ಗೆ ಜೀವನ ಚರಿತ್ರೆಯ ರೂಪದಲ್ಲಿ ಕೃತಿರಚನೆ ಮಾಡಿದರು. ಇಂಗ್ಲಿಷ್, ಬಂಗಾಳಿ ಕಥೆ, ಕವಿತೆಗಳ ಭಾಪಾಂತರಗಳು ನಡೆಯುತ್ತಲೇ ಇದ್ದುವು. ಮಕ್ಕಳ ಸಾಹಿತ್ಯದ ಬಗ್ಗೆ ಹೊಸ ಪ್ರಜ್ಞೆ ಈ ಯುಗದಲ್ಲಿ ಮೂಡಿತು; ಅದರ ಪ್ರಾಮುಖ್ಯ ಮನಗಾಣಲಾಯಿತು. ವಸ್ತುವಿಷಯ ಹಾಗೂ ವಿಷಯ ನಿರೂಪಣೆಯಲ್ಲಿ ಖಚಿತವಾದ ಬದಲವಾಣೆ ಆಗಿತ್ತು. ಭಾರತ 1947ರಲ್ಲಿ ಸ್ವತಂತ್ರವಾಯಿತು. ಅಲ್ಲಿಂದ ಮುಂದಿನ ಯುಗವನ್ನು ಸ್ವಾತಂತ್ರ್ಯೋತ್ತರ ಯುಗ ಎಂದು ಕರೆಯಬಹುದಾಗಿದೆ. ಸ್ವಾತಂತ್ರ್ಯಾನಂತರ ಮಕ್ಕಳ ಸಾಹಿತ್ಯದ ಅಗತ್ಯ ಹೆಚ್ಚಾಗಿ ಕಂಡು ಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಬಂದ ಸಾಹಿತ್ಯದಲ್ಲಿ ಮಗುವಿನ ಆಶೆ ಅಭಿಲಾಷೆಗಳು, ಇಚ್ಛೆ ಅನಿಚ್ಛೆಗಳು ನೈಜರೀತಿಯಲ್ಲಿ ಅಭಿವ್ಯಕ್ತಗೊಂಡಿರಲಿಲ್ಲ. ಲೇಖಕರಿಗೆ ಶಿಶುಮನೋವಿe್ಞÁನದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಅದು ಕೆಲವುಮಟ್ಟಿಗೆ ಅವಾಸ್ತವಿಕವಾಗಿದ್ದು, ಪರಿಚಯವಿರದ ಅe್ಞÁತ, ನಿಗೂಢ ಲೋಕಕ್ಕೆ ಎಳೆಯ ಓದುಗರನ್ನು ಕರೆದೊಯ್ಯುತ್ತಿತ್ತು. ಜೀವನದ ವಾಸ್ತವ ಸಂಗತಿಗಳನ್ನು ಮಕ್ಕಳಿಗೆ ಪರಿಚಯಿಸುವುದು ಅಗತ್ಯ ಎಂಬುದನ್ನು ಮನಗಂಡು ಕೆಲವರು ಈ ಕ್ಷೇತ್ರದಲ್ಲಿ ಕೆಲವು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದರು.

ಯಾವಾಗ ಮಕ್ಕಳ ಸಾಹಿತ್ಯ ಕೃತಿಗಳಿಗೆ ಬೇಡಿಕೆ ಅಧಿಕವಾಯಿತೋ ಆಗ ಮಕ್ಕಳ ಪುಸ್ತಕಗಳನ್ನು ಹೊರತರುವ ವಿವಿಧ ಸಂಘಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಸ್ಪರ್ಧೆ ಉಂಟಾಯಿತು. ಆಕರ್ಷಕವೂ ಉಪಯುಕ್ತವೂ ಆದ ಮಕ್ಕಳ ಪುಸ್ತಕಗಳನ್ನು ಹೊರತಂದ ಸಂಘ ಸಂಸ್ಥೆಗಳ ಪೈಕಿ ಮುಖ್ಯವಾದವು: ರಾಜ್‍ಕಮಲ್, ರಾಜ್‍ಪಾಲ್ ಅಂಡ್ ಸನ್ಸ್, ಆತ್ಮಾರಾಮ್ ಅಂಡ್ ಸನ್ಸ್, ಕಿತಾಬ್ ಮಹಲ್, ಉಮೇಶ ಪ್ರಕಾಶನ, ಚಿಲ್ಡ್ರನ್ಸ್ ಬುಕ್ ಟ್ರಸ್ಟ್, ನ್ಯಾಷನಲ್ ಬುಕ್ ಟ್ರಸ್ಟ್ (ಎನ್.ಬಿ.ಟಿ.) ನೆಹರೂ ಬಾಲ ಪುಸ್ತಕಾಲಯ ಯೋಜನೆಯನ್ವಯ 10-14 ವಯೋವರ್ಗದವರಿಗಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಈ ಮಾಲೆಯ ಪುಸ್ತಕಗಳನ್ನು ದೇಶದ 14 ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಕಟಿಸುವ ಯೋಜನೆಯಿದೆ. ಮಕ್ಕಳಿಗಾಗಿಯೇ ಮೀಸಲಾಗಿರುವ ನಿಯತಕಾಲಿಕೆಗಳೂ ಈ ದಿಸೆಯಲ್ಲಿ ತುಂಬ ಸಹಾಯ ಮಾಡಿವೆ. ನಂದನ, ಪರಾಗ, ಮಿಲಿಂದ, ಬಾಲಜಗತ್, ಬಾಲಭಾರತಿ, ಚಂದಾಮಾಮಾ, (ಮದ್ರಾಸು-1956ರಿಂದ) ರಾಜಾ ಭಯ್ಯಾ ಮತ್ತು ಶೇರ್‍ಸಖಾ- ಇವು ಪ್ರಮುಖ ಮಾಸ ಪತ್ರಿಕೆಗಳು. ಹಿಂದಿಯಲ್ಲಿ ಪ್ರಥಮ ಬಾರಿಗೆ ಮಕ್ಕಳಿಗಾಗಿಯೇ ಬಚ್ಚೋಂಕಾ ಅಖ್‍ಬಾರ್ ಎಂಬ ಸಾಪ್ತಾಹಿಕವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಧರ್ಮಯುಗ ಮತ್ತು ಸಾಪ್ತಾಹಿಕ ಹಿಂದೂಸ್ಥಾನ ಮೊದಲಾದ ಕೆಲವು ಸಾಪ್ತಾಹಿಕಗಳು ಮಕ್ಕಳಿಗಾಗಿ ಅಂಕಣಗಳನ್ನು ಮೀಸಲಿರಿಸಿವೆ. ನವಭಾರತ ಟೈಮ್ಸ್, ಆಜ್, ಭಾರತ ಮತ್ತು ಹಿಂದೂಸ್ಥಾನ ಮುಂತಾದ ದೈನಿಕಗಳು ಭಾನುವಾರಗಳ ತಮ್ಮ ಪುರವಣಿಯಲ್ಲಿ ಕಥೆಗಳು, ಕವಿತೆಗಳು, ಹಾಡುಗಳು, ನಾಟಕಗಳು , ಒಗಟುಗಳು ಇತ್ಯಾದಿಗಳನ್ನು ಮಕ್ಕಳಿಗಾಗಿಯೇ ಪ್ರಕಟಿಸುತ್ತಿವೆ. 1946 ಮತ್ತು 1949ರ ನಡುವಣ ಅವಧಿಯಲ್ಲಿ ಕೈ ಬರೆಹದ ಮಕ್ಕಳ ನಿಯತಕಾಲಿಕೆಯನ್ನು ಪ್ರಕಟಿಸುವ ಪ್ರಯತ್ನ ನಡೆಯಿತಾದರೂ ಅದು ಸಫಲವಾಗಿಲ್ಲ. ಬಾಲಭಾರತೀ, ಶಂಕರ್ಸ್ ವೀಕ್ಲಿ, ಧರ್ಮಯುಗ ಮತ್ತು ಸಾಪ್ತಾಹಿಕ ಹಿಂದೂಸ್ಥಾನ್ ಮೊದಲಾದ ನಿಯತಕಾಲಿಕೆಗಳು ಮಕ್ಕಳಿಗಾಗಿಯೇ ವಿಶೇಷಾಂಕಗಳನ್ನು ಪ್ರಕಟಿಸಿವೆ. ಭಾರತ ಸರ್ಕಾರ ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಮತ್ತು ನ್ಯಾಷನಲ್ ಬುಕ್ ಟ್ರಸ್ಟ್ ಮೂಲಕ ಮಕ್ಕಳ ಸಾಹಿತ್ಯಕ್ಷೇತ್ರದ ಉತ್ತಮ ಲೇಖಕರಿಗೆ ಬಹುಮಾನ ನೀಡುವುದರ ಮೂಲಕ, ಉತ್ತಮ ಸಾಹಿತ್ಯ ಪ್ರಕಟವಾಗಲು ನೆರವಾಗುತ್ತಿದೆ. ಈ ರೀತಿಯಲ್ಲಿ ಮಕ್ಕಳ ಸಾಹಿತ್ಯದ ಬೆಳೆವಣಿಗೆ ಹಾಗೂ ಅದನ್ನು ಶ್ರೀಮಂತಗೊಳಿಸಲು ಸಾರ್ವಜನಿಕ ಹಾಗೂ ಖಾಸಗೀ ಕ್ಷೇತ್ರಗಳೆರಡರಲ್ಲೂ ಪ್ರಯತ್ನಗಳು ನಡೆಯುತ್ತಲಿವೆ.

ಪೌರಾಣಿಕ ಹಾಗೂ ಐತಿಹಾಸಿಕ ನೀತಿ ಕಥೆಗಳ ಪ್ರಕಟಣೆ ನಡೆಯುತ್ತಲೇ ಇದೆ. ವಿಷ್ಣು ಪ್ರಭಾಕರರ ಸರಳ ಪಂಚತಂತ್ರ, ಕಮಲೇಶ ಬಾಲಪಂಚತಂತ್ರ, ಧರಮ್‍ಪಾಲ ಶಾಸ್ತ್ರ ಅವರ ಸರಳ ಹಿತೋಪದೇಶ ಮತ್ತು ಸಾವಿತ್ರೀ ದೇವಿಯವರ ಜಾತಕ ಕಥಾಯೇ ಇವನ್ನು ಉದಾಹರಣೆಗಳಾಗಿ ಹೇಳಬಹುದು. ಇವೆಲ್ಲವನ್ನು ಭಾರತ ಸರ್ಕಾರದ ಪ್ರಕಟಣ ವಿಭಾಗ ಪ್ರಕಟಿಸಿದೆ. ಅದ್ಭುತ ಕಥೆಗಳೆಂದರೆ ಮಕ್ಕಳಿಗೆ ಬಲುಪ್ರಿಯ. ಹರಿಕೃಷ್ಣ ದೇವಸರೆ, ಶಿವಮೂರ್ತಿ ಸಿಂಹ ಮತ್ತು ಶಾರದಾ ಮಿಶ್ರ ಮೊದಲಾದ ಲೇಖಕರು ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿರುವರು. ನಿರಂಕಾರ ದೇವ ಸೇವಕ್ ಕಥನ-ಕವನಗಳನ್ನು ರಚಿಸಿರುವರು. ಇವರ ಪಂಚತಂತ್ರ, ಇಸಪ್ ಕಿ ಗೀತ್-ಕಥಾಯೇಂ ಮತ್ತು ಹಾಫೀಜ್ ಕಾ ಸಪ್ನಾ, ವಿದ್ಯಾಭೂಷಣರ ಗೋಬರ್ ಗಣೇಶ್, ಚಿರಂಜೀತ್‍ರ ಏಕ್ ಥಾ ರಾಜಾ, ಏಕ್ ಥೀ ರಾಣಿ ಇವು ಕಳೆದ ದಶಕದಲ್ಲಿ ಸುಪ್ರಸಿದ್ಧವಾದವು. ಮಕ್ಕಳಿಗಾಗಿ ಪದ್ಯ ರಚಿಸಿದವರ ಪೈಕಿ ರಾಮಧಾರಿ ಸಿಂಹ "ದಿನಕರ", ಚಂದ್ರಪಾಲ ಸಿಂಹ ಯಾದವ 'ಮಯಂಕ ಮತ್ತು ವಿನೋದ ಚಂದ್ರ ಪಾಂಡೇಯ ಪ್ರಖ್ಯಾತರಾಗಿರುವರು.

ಮಕ್ಕಳ ಕಾದಂಬರಿ ಸ್ವಾತಂತ್ರ್ಯೋತ್ತರ ಯುಗದಲ್ಲಿ ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದೆ. ಮನಹರ್ ಚೌಹಾನ್, ಹರಿಕೃಷ್ಣ ದೇವಸರೆ, ಶತ್ರುಘ್ನಲಾಲ ಮತ್ತು ಉಮಾಶಂಕರ್ ಆಸಕ್ತಿ ಹಾಗೂ ಸ್ಫೂರ್ತಿದಾಯಕ ಕಿರು ಕಾದಂಬರಿಗಳನ್ನು ಮಕ್ಕಳಿಗಾಗಿ ರಚಿಸಿರುವರು. ದೆಹಲಿಯ ಉಮೇಶ ಪ್ರಕಾಶನ 'ಕಿಶೋರ ಉಪನ್ಯಾಸ ಮಾಲೆ ಯಲ್ಲಿ ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದೆ. ರತ್ನ ಪ್ರಕಾಶನ 'ಶಿಲ ಮೊತ್ತಮೊದಲಬಾರಿಗೆ ಮಕ್ಕಳಿಗಾಗಿ ಕಾದಂಬರಿಗಳ ಮಾಸಿಕವನ್ನು ಪ್ರಕಟಿಸುವ ಸಾಹಸಕ್ಕೆ ತೊಡಗಿದೆ.

ಮಕ್ಕಳಿಗಾಗಿ ರಂಗಮಂದಿರ ವ್ಯವಸ್ಥೆಯ ಕೊರತೆ ಇರುವುದರಿಂದ, ಒಳ್ಳೆಯ ನಾಟಕಗಳ ಕೊರತೆ ಇರುವುದೂ ಸಹಜವೇ ಆಗಿದೆ. ಕಮಲೇಶ್ವರ, ಅನಿಲಕುಮಾರ, ಶ್ರೀಕೃಷ್ಣ, ಬಾನುಮೆಹ್ತಾ ಮತ್ತು ಪರಿತೋಷ ಗಾರ್ಗೀಯವರು ಸ್ವಲ್ಪಮಟ್ಟಿನ ಪ್ರಯತ್ನಗಳನ್ನು ನಡೆಸಿರುವರು. ಈ ನಾಟಕಗಳ ವಸ್ತು ಹೆಚ್ಚಿನವು ಏಕಾಂಕಗಳು-ಪೌರಾಣಿಕ, ಸಾಹಸ ಮತ್ತು ನೈತಿಕ ವಿಷಯ ಬೋಧನೆಯಾಗಿದೆ. ಆಕಾಶವಾಣಿ, ರಂಗಪ್ರಯೋಗಗಳ ದೃಷ್ಟಿಯಿಂದ ನಾಟಕಗಳ ರಚನೆಯಾಗಿದೆ. ಯೋಗೇಂದ್ರಕುಮಾರ ಲಲ್ಲಾ ಸಂಪಾದಿಸಿರುವ ರಾಷ್ಟ್ರೀಯ ಏಕಾಂಕೀ ಮತ್ತು ಪ್ರತಿನಿಧಿ ಬಾಲ ಏಕಾಂಕೀ ಸಮಾಧಾನಕರ ಪ್ರಕಟಣೆಗಳಾಗಿವೆ. ದಶರಥ ಓಝೂರವರ ಬಾಲ ನಾಟಕ ಮಾಲಾ ಸಹ ಗಮನಾರ್ಹವಾಗಿದೆ.

ಐತಿಹಾಸಿಕ ವ್ಯಕ್ತಿಗಳ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರ ಜೀವನ ಚರಿತ್ರೆಗಳು ಮಕ್ಕಳಿಗೆ ಉಪಯುಕ್ತವಾದುವು. ಸ್ವಾತಂತ್ರ್ಯಪೂರ್ವದಲ್ಲಿ ನಾಯಕ ಪೂಜೆಯ ರೀತಿಯಲ್ಲಿ ಜೀವನ ಚರಿತ್ರೆಗಳ ರಚನೆಯಾಗುತ್ತಿತ್ತು. ಸ್ವಾತಂತ್ರ್ಯಾನಂತರ ಇದರ ವಿಸ್ತಾರ ವ್ಯಾಪಿಸಿದೆ. ಶಿಕ್ಷಣತಜ್ಞರು, ವಿe್ಞÁನಿಗಳು ಮತ್ತು ಸಾಹಿತಿಗಳ ಜೀವನ ಚರಿತ್ರೆಗಳೂ ಬರಲಾರಂಭಿಸಿವೆ. ಪೀಪಲ್ಸ್ ಪಬ್ಲಿಷಿಂಗ್ ಹೌಸ್, ಭಾರತ ಸರ್ಕಾರದ ಪ್ರಕಟಣ ವಿಭಾಗ, ಸಸ್ತಾ ಸಾಹಿತ್ಯಮಂಡಲ ಪ್ರಕಟಿಸಿರುವ ಜೀವನ ಚರಿತ್ರೆಗಳಲ್ಲಿ ಸಂತತುಕಾರಾಮ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಈಶ್ವರ ಚಂದ್ರ ವಿದ್ಯಾಸಾಗರ, ರವೀಂದ್ರನಾಥ ಟಾಗೂರ್, ಜವಾಹರಲಾಲ ನೆಹರು, ರಾಜರ್ಷಿ ಟಂಡನ್, ಖುದೀ ರಾಮ ಬೋಸ್ ಮತ್ತು ತಿಲಕರ ಜೀವನ ಚರಿತ್ರೆಗಳು ಸೇರಿವೆ. ಹರಿಕೃಷ್ಣ ದೇವಸರೆಯವರ ಯೇ ಕಹಾನೀವಾಲೆ ಜೀವನ ಚರಿತ್ರೆ ಬರೆಯುವ ಕ್ಷೇತ್ರದಲ್ಲಿ ಹೊಸ ಪ್ರಯೋಗವಾಗಿದೆ.

ಆಧುನಿಕ ಯುಗ ವಿe್ಞÁನ ಯುಗ. ಎಳೆಯರ ಮನಸ್ಸಿಗೆ ವೈe್ಞÁನಿಕ ತಿಳಿವಳಿಕೆ ನೀಡುವಂಥ ಕಥಾರೂಪದ ಹಲವು ಕೃತಿಗಳು ಬಂದಿವೆ. ಲಲ್ಲಾರವರ ಖೇಲ್ ಖೇಲ್ ಮೇಂ ವಿe್ಞÁನ್, ಸಿಂಧೂರಿ ಗ್ರಹಕೀಯಾತ್ರಾ, ಚಾಂದ್ ಕೀ ಯಾತ್ರಾ, ಸಮುಂದರ್ ಮೇಂ ಸೌ ದಿನ್, ಚಂದ್ರಲೋಕ್ ಕಿ ಸೈರ್, ಪಾನೀ ಬೋಲಾ, ಧರ್ತೀಮಾತಾ, ಅಂತರಿಕ್ಷ ಕೀ ಯಾತ್ರಾ- ಈ ಕ್ಷೇತ್ರದಲ್ಲಿ ಉಪಯುಕ್ತವಾದ, ಆಕರ್ಷಕವಾದುದಲ್ಲಿ ಕೆಲವಾಗಿವೆ. ಭಾರತ ಸರ್ಕಾರದ ಪ್ರಕಟನ ವಿಭಾಗದ e್ಞÁನ ಸರೋವರ (ಎರಡು ಭಾಗಗಳು), ರಾಜಪಾಲ್ ಅಂಡ್ ಸನ್ಸ್‍ರವರ ಸಚಿತ್ರ ವಿಶ್ವಕೋಶ (1967, 10 ಸಂಪುಟಗಳು) ಲಕ್ನೋದ e್ಞÁನಭಾರತೀ- ಇವು ಮಕ್ಕಳಿಗೆ ವೈe್ಞÁನಿಕ ಸಾಹಿತ್ಯವನ್ನು ಒದಗಿಸುವಲ್ಲಿ ಅಮೂಲ್ಯ ಸೇವೆಸಲ್ಲಿಸಿವೆ.

ಹಾಸ್ಯೋಕ್ತಿಗಳು, ಗಾದೆಗಳು, ಒಗಟುಗಳು- ಇವುಗಳ ಪ್ರಾಮುಖ್ಯವನ್ನು ಈಗ ಮನಗಾಣಲಾಗಿದೆ. ಹರಿಕೃಷ್ಣ ದೇವಸರೆ (ಚುಟ್ ಕುಲಾ) ಶ್ರೀಕೃಷ್ಣ (ಪಹೇಲಿಯಮ್) ಮತ್ತು ಶಕುನ ಪ್ರಕಾಶನದವರ (ಬೀರ್‍ಬಲ್ ಕೇ ಚುರ್ಟ್ ಕುಲೆ) ಪ್ರಯತ್ನಗಳು ಯಶಸ್ವಿಯಾಗಿವೆ.

ಕಾಮಿಕ್‍ಗಳು ಹಿಂದಿ ಕ್ಷೇತ್ರವನ್ನು ಪ್ರವೇಶಿಸಿವೆ. ಪ್ರಸಿದ್ಧ ಇಂಗ್ಲಿಷ್ ಕಥೆಗಳ ಕಾಮಿಕ್ಸ್‍ಗಳನ್ನೇ ಟೈಮ್ಸ್ ಆಫ್ ಇಂಡಿಯಾದವರು 'ಇಂದ್ರಜಾಲ್ ಕಾಮಿಕ್ಸ್‍ನಲ್ಲಿ ಪ್ರಕಟಿಸಿದ್ದು ಟಾರ್ಜಾನ್, ಬೇತಾಳ ಮತ್ತು ಮಾಂಡ್ರೇಕ್ ಕಾಮಿಕ್‍ಗಳು ಮಕ್ಕಳಿಗೆ ತುಂಬಾ ಹಿಡಿಸಿವೆ. ಇಂಡಿಯಾ ಬುಕ್ ಹೌಸ್ (ಐ.ಬಿ.ಎಚ್.) ಪೌರಾಣಿಕ ಹಾಗೂ ಧಾರ್ಮಿಕ ಕಥೆಗಳನ್ನು ಆಧರಿಸಿ ಈ ರೀತಿಯ ಪ್ರಕಟಣೆಯನ್ನು ಪ್ರಾರಂಭಿಸಿವೆ. ಆದರೆ ಇವು ಸಾಹಸ, ದರೋಡೆ, ಹಿಂಸಾಚಾರಗಳಿಗೆ ಸಂಬಂಧಿಸಿದ ಕಾಮಿಕ್‍ಗಳಷ್ಟು ಮಕ್ಕಳಿಗೆ ಹಿಡಿಸಿಲ್ಲ. 3-ಡಿ ಕಾಮಿಕ್‍ಗಳು ಇತ್ತೀಚಿನ ಸೇರ್ಪಡೆಯಾಗಿವೆ. ತಾರಾ ಪಾಂಡೇಯ ಸುಭದ್ರಾಕುಮಾರಿ ಚೌಹಾನ್, ಶಾಂತಿ ಅಗರವಾಲ್, ಶಕುಂತಲಾ ಮಿಶ್ರ, ಸುಶೀಲಾ ಕಕ್ಕಡ್, ವಿದ್ಯಾವತೀ ಕೋಕಿಲ, ಶಾಂತಿ ಮೆಹರೋತ್ರ, ಸುಮಿತ್ರಾ ಕುಮಾರೀ ಸಿನ್ಹ ಮತ್ತು ಶಕುಂತಲಾ ಸಿರೋತಿಯಾ- ಇವರು ಪ್ರಮುಖ ಲೇಖಕಿಯರು.

ಮಕ್ಕಳಿಗೆ ಸುಲಭ ಬೆಲೆಯಲ್ಲಿ ಪಾಕೆಟ್ ಪುಸ್ತಕ ಪ್ರಕಟಣೆ ಹಾಗೂ ಬುಕ್-ಬ್ಯಾಂಕ್‍ಗಳ ಸ್ಥಾಪನೆಯಿಂದ ಮಕ್ಕಳ ಸಾಹಿತ್ಯದ ಅಭಿವೃದ್ಧಿಗೆ ಸುಬೋಧ ಪಾಕೆಟ್ ಬುಕ್ಸ್ ಮತ್ತು ಲಕ್ನೋದ e್ಞÁನಭಾರತೀ ನೆರವಾಗಿವೆ.

ಭಾರತೀಯ ಹಾಗೂ ವಿದೇಶೀ ಭಾಷೆಗಳಿಂದ ಹಿಂದಿ ಭಾಷೆಗೆ ಮಕ್ಕಳ ಪುಸ್ತಕಗಳ ಭಾಷಾಂತರ ಅವ್ಯಾಹತವಾಗಿ ಸಾಗುತ್ತಿದೆ. ರಷ್ಯನ್ ಪುಸ್ತಕಗಳ ಹಿಂದಿ ಅನುವಾದಗಳು ಆಕರ್ಷಕವಾಗಿವೆ. ವಿದೇಶಗಳ ಜನಪದ ಸಾಹಿತ್ಯ ವಿಶೇಷವಾಗಿ ಆಕರ್ಷಣೀಯವಾಗಿದೆ. ದೆಹಲಿಯ ಆತ್ಮಾರಾಮ್ ಅಂಡ್ ಸನ್ಸ್‍ರವರು "ಲೋಕಕಥಾಮಾಲ" ದಲ್ಲಿ ಜನಪದ ಕಥೆಗಳನ್ನು ಪ್ರಕಟಿಸಿರುವರು.

ಈಚೆಗೆ ಬಾಲಸಾಹಿತ್ಯ ವಿಕಾಸ ಪರಿಷದ್ ಎಂಬ ಸಣ್ಣ ಸಂಸ್ಥೆ ನವದೆಹಲಿಯಲ್ಲಿ ಬಾಲಪುಸ್ತಕ ಕೇಂದ್ರವನ್ನು ಸ್ಥಾಪಿಸಿದೆ. ಅದು ಮಕ್ಕಳ ಪುಸ್ತಕಗಳನ್ನು ಪ್ರದರ್ಶಿಸುತ್ತಿದೆ. ಮಕ್ಕಳ ಆಸಕ್ತಿ-ಅನಾಸಕ್ತಿಗಳನ್ನು ಗುರುತಿಸಿ, ಅಧ್ಯಯನಮಾಡಿ, ಅವರಿಗಾಗಿ ಕೃತಿರಚನೆ ಮಾಡಿಸುವ ಯತ್ನದಲ್ಲಿ ತೊಡಗಿದೆ. ಅದು ಬಚ್ಚೇ ಔರ್ ಹಮ್ ಎಂಬ ನಿಯತಕಾಲಿಕೆಯನ್ನು ಹೊರತರುತ್ತಿದೆ. ಸಿಂಹಾವಲೋಕನ: ಈವರೆಗೂ ಅವಲೋಕಿಸಿದ ಭಾರತೀಯ ಭಾಷೆಗಳಲ್ಲಿಯ ಮಕ್ಕಳ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಚಿಸುವಾಗ ಈ ಮುಂದಿನ ಕೆಲವು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ಆ ಸಾಹಿತ್ಯದಲ್ಲಿ ಮಕ್ಕಳೇ ಕೇಂದ್ರ ಸ್ಥಾನದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿ ಉಂಟುಮಾಡಬಲ್ಲ ವಿಷಯವನ್ನು ಅರ್ಥವಾಗುವ ಭಾಷೆಯಲ್ಲಿ ಸರಳವಾಗಿ ನಿರೂಪಿಸಬೇಕು. ಶಿಶುಗೀತೆಗಳಲ್ಲಿ ಪ್ರಾಸಾನುಪ್ರಾಸಗಳ ಬಳಕೆ ಮಕ್ಕಳು ಪದ್ಯಗಳನ್ನೂ ಹಾಡುಗಳನ್ನೂ ಸುಲಭವಾಗಿ ಕಂಠಪಾಠ ಮಾಡಲು ಮತ್ತು ಹಾಡಲು ನೆರವಾಗುತ್ತದೆ. ಮಕ್ಕಳು ಮನರಂಜನೆ ಬಯಸುತ್ತವೆ. ಹಾಡು, ಆಟಗಳ ಮೂಲಕ ಇದನ್ನು ಒದಗಿಸಬಹುದು.

ಕಥೆ ಎಂದರೆ ಇಷ್ಟಪಡದ ಮಗು ಇಲ್ಲ. "ಒಂದಾನೊಂದು ಊರಿನಲ್ಲಿ" ಎಂದು ಪ್ರಾರಂಭವಾಗುವ ನೂರಾರು ಕಥೆಗಳು (ಅಡುಗೂಲಜ್ಜಿಯ ಕಥೆಗಳು) ತಲೆತಲಾಂತರದಿಂದ ಸ್ವಾರಸ್ಯ ಕಳೆದುಕೊಳ್ಳದೆ ಉಳಿದುಬಂದಿವೆ. ಕಥೆಯಲ್ಲಿ ಆಕರ್ಷಕವಾದ ಅಂಶ ಕೇವಲ ವಸ್ತುವೇ ಅಲ್ಲ, ತಮ್ಮ ಸುತ್ತ ಮುತ್ತ ಕಾಣುವ ಪಾತ್ರಗಳು ಕಥೆಯಲ್ಲಿ ಮೂಡಿದಾಗ ಮಕ್ಕಳ ಮನಸ್ಸು ಅರಳುತ್ತದೆ. ಮಕ್ಕಳ ಕಲ್ಪನಾ ಪ್ರಪಂಚ ದೊಡ್ಡದು. ಅವರ ಕಲ್ಪನೆಯಲ್ಲಿ ಅವಾಸ್ತವ ವಾಸ್ತವವಾಗಬಲ್ಲದು; ಅಸಾಧ್ಯ ಸಾಧ್ಯವಾಗಬಲ್ಲದು, ಮರ ಮಾತಾಡಬಲ್ಲದು; ವಿರೋಧಾಭಾಸಗಳೂ ಸಾಧ್ಯ; ಜೊತೆಗೆ ಹಾಸ್ಯವೂ ಇದ್ದರೆ ಮಕ್ಕಳಿಗೆ ತುಂಬ ಪ್ರಿಯ ಎನಿಸುತ್ತದೆ. ಅಕ್ಬರ್ ಬೀರಬಲ್ಲರ ಕಥೆಗಳು, ತೆನಾಲಿ ರಾಮನ ಕಥೆಗಳು, ಗಾಂಪರ ಗುಂಪಿನ ಕಥೆಗಳನ್ನು ಮೆಚ್ಚದೆ ಇರುವ ಮಕ್ಕಳು ಯಾರು ? ಸಾಹಸದ ಕಥೆಗಳು ಮಕ್ಕಳ ವನಸ್ಸಿನಲ್ಲಿ ಪರೋಕ್ಷವಾಗಿ ಧೈರ್ಯ ಮೂಡಿಸುವ ಸಾಧನವಾಗಬಲ್ಲವು. ಕಥೆಗಳ ಮೂಲದ ಕಡೆ ಗಮನ ಹರಿಸಿದಾಗ ಬಲುಮಟ್ಟಿನ ಭಾಷೆಗಳಲ್ಲಿ ಜನಪದ ಸಾಹಿತ್ಯ ಕಥೆಗಳೇ ಆಗರವಾಗಿವೆ ಎನ್ನಬಹುದು. ಇಂಗ್ಲಿಷ್ ಭಾಷೆಯಲ್ಲಿರುವ, ಕಥೆಗಳು ಭಾರತೀಯ ಭಾಷೆಗಳಲ್ಲಿ 19ನೆಯ ಶತಮಾನದ ಉತ್ತರಾರ್ಧದಿಂದ ಹೆಚ್ಚಾಗಿ ಭಾಷಾಂತರಗೊಳ್ಳಲಾರಂಭಿಸಿದುವು. ಈ ಕಾರ್ಯ 20ನೆಯ ಶತಮಾನದ ಉದ್ದಕ್ಕೂ ನಡೆದು ಬಂದಿದೆ. ಹ್ಯಾನ್ಸ್ ಆಂಡರ್‍ಸನ್‍ನ ಫೇರಿಟೇಲ್ಸ್, ಅರೇಬಿಯನ್ ನೈಟ್ಸ್ ಕಥೆಗಳು ಇದಕ್ಕೆ ಉದಾಹರಣೆಯಾಗಿವೆ.

ಭಾರತೀಯ ಮಹಾಕಾವ್ಯಗಳಿಂದ ಸ್ಫೂರ್ತಿಪಡೆದು ರಚಿತವಾಗಿರುವ ಬಾಲ ರಾಮಾಯಣಗಳು ಮತ್ತು ಬಾಲಭಾರತಗಳಲ್ಲಿ ಕಥೆಗಳನ್ನು ಘಟನಾವಳಿಗಳ ಅನುಕ್ರಮದಲ್ಲಿ ರಚಿಸವಾಗಿದೆ. ಮಕ್ಕಳ ಮನಸ್ಸೆಲ್ಲ ಕಥೆಯ ಕೊನೆ ಎಂಬುದರತ್ತಲೇ ಇರುತ್ತದೆ. ಮಕ್ಕಳು ಕಥೆ ಓದಿದಾಗ ಇಡೀ ಚಿತ್ರ ಪರಿಣಾಮಕಾರಿಯಾಗಿ ಅವರ ಕಣ್ಣುಮುಂದೆ ಸುಳಿಯುವಂತಿರಬೇಕು. ಕೇವಲ ನೀತಿಬೋಧೆಯಷ್ಟೇ ಅದರ ಗುರಿಯಾಗಿರಬಾರದು; ಆದರ್ಶಗಳ ಬಗ್ಗೆ ಪರೋಕ್ಷಸೂಚನೆ ಇರಬೇಕು. ಪ್ರಕೃತಿಯ (ಅನಂತ) ನಾನಾ ಮುಖಗಳತ್ತ ಮಕ್ಕಳ ಗಮನ ಸೆಳೆಯುವ ಪ್ರಯತ್ನ ಕೆಲವು ಭಾಷೆಗಳಲ್ಲಿ ನಡೆದಿದೆ. ಆದರೆ ಬರೆಹಗಾರರು ಪ್ರಕೃತಿಯನ್ನು ಗಮನಿಸದೆ ಅನ್ಯಮೂಲಗಳಿಂದ ಸಂಗ್ರಹಿಸಿದುದನ್ನು ತುಂಬಲು ಯತ್ನಿಸುವರು. ಇದರಿಂದ ಅನೇಕ ವೇಳೆ ನೀರಸ ವಿವರಣೆ ಹೊರಬಂದು ಮಕ್ಕಳ ಆಸಕ್ತಿ ಅರಳಿಸುವಲ್ಲಿ ವಿಫಲವಾಗುತ್ತವೆ. ಇಂದಿನ ಶಿಕ್ಷಣ ಬಲುಮಟ್ಟಿಗೆ ಪಠ್ಯಪುಸ್ತಕ ಕೇಂದ್ರೀಕೃತವಾಗಿದೆ. ನಿಜವಾದ ಶಿಕ್ಷಣ ಮಕ್ಕಳು ಜೀವನವನ್ನು ಎದುರಿಸಲು ಸಜ್ಜುಗೊಳಿಸುವುದಾಗಬೇಕಾಗಿದೆ. ರಾಷ್ಟ್ರೀಕೃತ ಪಠ್ಯಪುಸ್ತಕಗಳನ್ನು ನೋಡಿದಾಗ ಅಷ್ಟೇನೂ ಉತ್ಸಾಹ ಮೂಡುವಂತಿಲ್ಲ. ಅವು ಕಲ್ಪನಾರಹಿತ, ನೀರಸ ಕೃತಿಗಳು. ಮಕ್ಕಳ ನಿಜವಾದ ಅಗತ್ಯಗಳು ಹಾಗೂ ಅವರ ಸಾಮಥ್ರ್ಯದ ಬಗ್ಗೆ ಅರಿವೇ ಇಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯ ಮಕ್ಕಳ ಪುಸ್ತಕಗಳು ಮಾರ್ಗದರ್ಶಕಗಳಾಗಿವೆ. ಅವನ್ನು ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಆಕರ್ಷಕ ಚಿತ್ರಗಳು, ಛಾಯಾಚಿತ್ರಗಳು ಈ ದಿಸೆಯಲ್ಲಿ ನೆರವಾಗಬಲ್ಲವು.

ಭಾರತದ ವಿವಿಧ ಭಾಷೆಗಳಲ್ಲಿ ಈತನಕ ಬಂದಿರುವ ಮಕ್ಕಳ ಸಾಹಿತ್ಯದ ಸ್ಥೂಲ ಪರಿಚಯ ಆಗಿದೆ. ಭಾರತದ ಆಧುನಿಕ ಭಾಷೆಗಳು ಸಂಸ್ಕøತಕ್ಕೆ ಎಷ್ಟು ಋಣಿಯಾಗಿವೆ ಎಂಬುದನ್ನು ಗಮನಿಸಬಹುದಾಗಿದೆ. ಪಂಚತಂತ್ರ, ಕಥಾಸರಿತ್ಸಾಗರ, ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಕಥೆಗಳು, ಭಾಷಾಂತರಗೊಂಡಿವೆ; ರೂಪಾಂತರಗೊಂಡಿವೆ. ಈಸೋಪನ ಕಥೆಗಳು, ಅರೇಬಿಯನ್ ನೈಟ್ಸ್ ಕಥೆಗಳು ಮೊದಲಾದವು ಅನೇಕ ಭಾಷೆಗಳ ಮಕ್ಕಳಿಗೆ ಕಥಾ ಸಾಹಿತ್ಯವನ್ನು ಒದಗಿಸಿವೆ.

ಜೀವನ ಚರಿತ್ರೆ, ಆತ್ಮಕಥನಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಿ ಅಭಿವೃದ್ಧಿಪಡಿಸುವಲ್ಲಿ ನೆರವಾಗಬಲ್ಲವು. ಸಂತರ, ಐತಿಹಾಸಿಕ ವ್ಯಕ್ತಿಗಳ, ವೀರಯೋಧರ, ದೇಶಭಕ್ತರ, ವಿಜ್ಞಾನಿಗಳ ಜೀವನ ಚರಿತ್ರೆಗಳು ಮಕ್ಕಳ ಜೀವನದ ಮೇಲೆ ಗಾಢ ಪ್ರಭಾವ ಬೀರುವುವು. ಈ ದೃಷ್ಟಿಯಿಂದ ಗಮನಿಸುವುದಾದರೆ ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಕೃತಿಗಳು ಬಂದಿವೆ.

ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನು ಒದಗಿಸುವಂಥ ವಿಶ್ವಕೋಶಗಳು ಮೊದಲಾದವುಗಳತ್ತ ಕೆಲವು ಭಾಷೆಗಳಲ್ಲಿ ಪ್ರಯತ್ನಗಳು ನಡೆದಿವೆಯಾದರೂ ದೇಶದ ಎಲ್ಲ ಭಾಷೆಗಳಿಗೂ ಅನ್ವಯವಾಗುವಂತೆ ಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತವಾಗುವುದು ಅಗತ್ಯವಾಗಿವೆ. (ಎನ್.ಎಸ್.ಎಸ್.ಪಿ.)