ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಸಿಷ್ಠ

ವಿಕಿಸೋರ್ಸ್ದಿಂದ

ವಸಿಷ್ಠ - ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಕಶ್ಯಪನಿಗೆ ಅದಿತಿಯಲ್ಲಿ ಮಿತ್ರಾ ವರುಣರೆಂಬ ಅವಳಿ ಮಕ್ಕಳು ಹುಟ್ಟಿದರು. ಇವರಿಬ್ಬರು ಒಮ್ಮೆ ಮಾಡಿದ ಯಜ್ಞಕ್ಕೆ ದೇವತೆಗಳು, ಗಂಧರ್ವರು, ಪಿತೃಗಳಲ್ಲದೆ, ಅಪ್ಸರೆಯರಲ್ಲೆಲ್ಲ ಹೆಚ್ಚು ಸುಂದರಿಯಾದ ಊರ್ವಶಿಯೂ ಬಂದಳು. ದೀಕ್ಷಾಬದ್ಧರಾಗಿದ್ದ ಇವರಿಬ್ಬರ ದೃಷ್ಟಿ ಊರ್ವಶಿಯ ಮೇಲೆ ಬಿತ್ತು. ಇಬ್ಬರೂ ವಿಕಾರ ವಶರಾದರು. ಅಖಂಡನಿಷ್ಠೆಯಿಂದ ಪಾಲಿಸಿದ್ದ ಇವರ ಬ್ರಹ್ಮಚರ್ಯ ಸಡಿಲವಾಯಿತು. ಇಬ್ಬರಿಗೂ ವೀರ್ಯಸ್ಖಲನವಾಗಿ ಅದನ್ನು ಒಂದು ಕುಂಭದಲ್ಲಿಟ್ಟರು. ಅದರಲ್ಲಿ ಇಬ್ಬರು ಮಕ್ಕಳು ಜನಿಸಿದರು. ಮೊದಲನೆಯ ಮಗು ಅಗಸ್ತ್ಯ. ಆಮೇಲೆ ಕುಂಭದಲ್ಲಿದ್ದ ನೀರನ್ನು ಸರೋವರದಲ್ಲಿ ಚೆಲ್ಲಿದಾಗ ಅದರಲ್ಲಿದ್ದ ಎರಡನೆಯ ಮಗು ಸರೋವರದಲ್ಲಿ ತೇಲುತ್ತ ಬಂದು ಒಂದು ಕಮಲ ದಳದ ಮೇಲೆ ಕುಳಿತಿತು. ಇದು ವಿಶಿಷ್ಟರೀತಿಯಲ್ಲಿ ಜನಿಸಿದ್ದರಿಂದ ಇದಕ್ಕೆ ವಸಿಷ್ಠನೆಂದು ಹೆಸರಾಯಿತು. ಅಗಸ್ತ್ಯ ಹುಟ್ಟಿದ ಕೂಡಲೆ ಮಿತ್ರನಿಗೆ ನಾನು ನಿನ್ನ ವೀರ್ಯದಿಂದ ಹುಟ್ಟಿದವನಲ್ಲ ಎಂದುದರಿಂದ ವಸಿಷ್ಠ ಮಿತ್ರನ ಮಗನೆಂದಾಯಿತು. ಅರುಂಧತಿ ಈತನ ಪತ್ನಿ. ಇವರಿಬ್ಬರ ಮಗ ಶಕ್ತಿ. ಶಕ್ತಿಯ ಪತ್ನಿ ಅದೃಶ್ಯಂತಿ. ಇವರ ಮಗ ಪರಾಶರ. ಪರಾಶರನಿಗೆ ಮತ್ಸ್ಯಗಂಧಿಯಲ್ಲಿ ಜನಿಸಿದವ ವೇದವ್ಯಾಸ. ವಸಿಷ್ಠ ಯಜ್ಞದಲ್ಲಿ ತೊಡಗಿದ್ದಾಗ, ಜರೂಥನೆಂಬ ರಾಕ್ಷಸ ಅದನ್ನು ಕೆಡಿಸಲು ಯತ್ನಿಸಿದಾಗ ವಸಿಷ್ಠ ಅಗ್ನಿಯ ಸಹಾಯದಿಂದ ಅವನನ್ನು ಕೊಲ್ಲಿಸಿದ. ಕಾರ್ತವೀರ್ಯಾರ್ಜುನ ವಸಿಷ್ಠನ ಆಶ್ರಮ ದಹಿಸಿದ್ದರಿಂದ ವಸಿಷ್ಠ ಅವನಿಗೆ ಶಾಪ ಕೊಟ್ಟ. ಋಷಿಗಳು ಭಿನ್ನಜಾತಿ ಸ್ತ್ರೀಯರಲ್ಲಿ ಜನಿಸಿದರೂ ಅವರ ತಪಸ್ಸು ಮತ್ತು ವಿದ್ಯೆಗಳೇ ಅವರ ಮಹಿಮೆಗೆ ಕಾರಣ ಎಂದು ವಸಿಷ್ಠ ಕರಾಳಜನಕನೊಂದಿಗೆ ನಡೆದ ಸಂವಾದದಲ್ಲಿ ವಾದಿಸಿದ. ವಸಿಷ್ಠ ತನ್ನ ತೇಜಸ್ಸಿನಿಂದ ರಾಕ್ಷಸರನ್ನು ನಿಗ್ರಹಿಸಿ ಇಂದ್ರನನ್ನು ಕಾಪಾಡಿದ. ಗೋಮಹಿಮೆಯ ವಿಷಯವಾಗಿ ಕಲ್ಮಾಷಪಾದನ ಸಂಗಡ ವಸಿಷ್ಠ ಸಂವಾದ ನಡೆಸಿದ. ವಸಿಷ್ಠನ ಬಳಿ ಇದ್ದ ನಂದಿನಿಧೇನುವನ್ನು ಪಡೆಯಲಾರದೆ ವಿಶ್ವಾಮಿತ್ರ ವಸಿಷ್ಠನನ್ನು ದ್ವೇಷಿಸುವುದರೊಂದಿಗೆ ಬ್ರಹ್ಮರ್ಷಿಯಾಗಲು ಘೋರತಪಸ್ಸನ್ನು ಮಾಡಿ ವಸಿಷ್ಠನ ಅನುಗ್ರಹದಿಂದಲೇ ಬ್ರಹ್ಮರ್ಷಿಯಾದ(ಮಹಾಭಾರತ). ನೃಗ ಮಹಾರಾಜನೂ ವಸಿಷ್ಠನೂ ಒಬ್ಬರಿಗೊಬ್ಬರು ಶಾಪಕೊಟ್ಟರೆಂದು ರಾಮಾಯಣದಲ್ಲಿದೆ. ಆಪವನಾಮಕ ಪ್ರಜಾಪತಿಗಳಾದ ಬ್ರಹ್ಮದೇವ ಒಬ್ಬ ಸುಂದರ ಸ್ತ್ರೀಯನ್ನು ಸೃಷ್ಟಿ ಮಾಡಿದ. ಈಕೆ ಮಹಾತಪಸ್ವಿನಿ. ವಸಿಷ್ಠರು ಈಕೆಯನ್ನು ಪತ್ನಿಯಾಗಿ ಸ್ವೀಕರಿಸಿದರು. ಇವರಲ್ಲಿ ಇವಳಿಗೆ ವೀರನೆಂಬ ಮಗ ಹುಟ್ಟಿದ(ಹರಿವಂಶ). ಆತ ಕರ್ದಮ ಮುನಿಯ ಏಳನೆಯ ಮಗಳಾದ ಊರ್ಜಾದೇವಿಯನ್ನು ಮದುವೆಯಾಗಿ ಚಿತ್ರಕೇತು, ಸುರೋಚಿ, ವಿರಜ, ಮಿತ್ರ, ಉಲ್ಬಣ, ವಸುಭೃಧ್ಯಾನ, ದ್ಯುಮಂತರೆಂಬ ಏಳು ಮಕ್ಕಳನ್ನು ಪಡೆದ(ಭಾಗವತ). ಹರಿಶ್ಚಂದ್ರನ ಸತ್ಯಸಂಧತೆಯ ಬಗ್ಗೆ ವಿಶ್ವಾಮಿತ್ರನೊಡನೆ ವಾಗ್ವಾದ ನಡೆಸಿ ಕಡೆಗೆ ವಸಿಷ್ಠನೇ ಗೆದ್ದನೆಂದು ದೇವೀ ಭಾಗವತದಿಂದ ತಿಳಿದುಬರುತ್ತದೆ. (ಕೆ.ವೈ.ಎಸ್.)