ಮೊದಲ ದಿನ ಮೌನ

ವಿಕಿಸೋರ್ಸ್ದಿಂದ

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ, ಬಿಡಿಹೂವ ಮುಡಿದಂತೆ
ಹತ್ತು ಕಡೆ ಕಣ್ಣು, ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ, ಇಷ್ಟು ನಗು-
ಮೂಗುತಿಯ ಮಿಂಚು ಒಳ-ಹೊರಗೆ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಹರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆ ಹೂ,
ಹೂವಿಗೂ ಜೀವ ಬಂದಂತೆ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ.

ಕವಿ: ಕೆ ಎಸ್ ನರಸಿಂಹಸ್ವಾಮಿ
ಸಂಗೀತ: ಸಿ ಅಶ್ವಥ್
ದ್ವನಿಸುರುಳಿ: ಮೈಸೂರು ಮಲ್ಲಿಗೆ
ಗಾಯಕರು: ರತ್ನಮಾಲಾ ಪ್ರಕಾಶ್