ವಿಜಯದಾಸರ ಸಾಹಿತ್ಯ

ವಿಕಿಸೋರ್ಸ್ದಿಂದ

ಶ್ರೀನಿವಾಸ ಸ್ತೋತ್ರ (ಸುಳಾದಿ) ಧ್ರುವತಾಳ

ಸುಳಿದವನಾರೆನ್ನ ಕಣ್ಣಮುಂದೆ ಪೊಳೆದವನಾರೆನ್ನ ಕಂಗಳಿಗೇ ಥಳಥಳಿಸುವ ಪುತ್ಥಳಿ ಬೊಂಬಿಯಂದದಿ ಎಳೆ ಮಿಂಚಿನಂತೆ ಕಂಗಳು ಥಳಥಳಿಸುವಂತೆ ಸುಳಿಗುರುಳು ಭ್ರಮರಾವಳಿಯಂತೆ ಒಪ್ಪಲು ಗುಲಗುಂಜಿ ಸರ ಶಿರಕೆ ಪೊಳೆವ ಮುಕುಟ ಬಳ್ಳಿ ಗಳುಸುತ್ತಿ ಕಂಡಕಂಡೆಲಿಯ ತುರಾಯವು ಹಲವಾಭರಣ ತಳಲಗಾವಿ ಪೊಂಬಟ್ಟೆ ಶಳೆಗೋಲು ಕೈಯ ಕೊಳಲಧ್ವನಿಗೈಸುತ್ತಾ ಕಳಕಾಯದನೀತ ಗೆಳೆಯ ಗೋವಳಗೆ ಗೆಲ ಸೋಲಾಡಿದನೀತ ಬಲುಮಾಯಾದಾತಾ ಹಲವಂಗ ಯಜ್ಞಾಂಗಕೃತನಾಮ ವಿಜಯ ವಿ ಠ್ಠಲನೀತ ಮೇಲ್ಗಿರಿ ತಿರುವೆಂಗಳಾನೀತ

ಮಟ್ಟತಾಳ

ಮುಗುಳು ಮಲ್ಲಿಗೆ ಸಂಪಿಗೆ ಸುರಹೊನ್ನೆ ಮ ರುಗ ಪಾರಿಜಾತ ಮಿಗೆ ಕೇತಕಿ ಶಾವಂ ತಿಗೆ ಇರುವಂತಿ ಸುರಗಿ ಪಾರಿಭದ್ರಾ ದಿಗಳು ಕುಸುಮ ತುರುಗಿ ತುರುಬಿನಲ್ಲಿ ಮೃಗನಾಭಿ ಫಣಿಗೆ ನಾಮವನಿಟ್ಟು ಮುಗುಳುನಗೆಯಿಂದ ಬಗೆ ಬಗೆ ಒಯ್ಯಾರ ಸೊಗಸು ತೋರುವ ಜಾಣ ನಗಧರ ಸರ್ವ ದ್ರುಗ ವಿಜಯವಿಠ್ಠಲಯುಗಳ ಚರಣ ದಂ ದಿಗೆ ರಭಸಗೈಯೋ

ತ್ರಿವಿಡಿತಾಳ

ಪೂಸಿದಗಲು ಚಂದನ ಶೋಭಿಸುವ ಗಂಧ ಲೇಸಾದ ಕಸ್ತೂರಿ ಪುನಗು ಜವ್ವಾದಿ ಸು ವಾಸನೆಯಿಂದ ಪ್ರಕಾಶದಲ್ಲಿ ಒಪ್ಪೆ ಸೂಸುವ ಕರ್ಪುರದ ಹಳಕು ತಾಂಬೂಲ ಭೂಷಣ ಸಿರಿದೇವಿ ಉರದಲ್ಲಿ ನಲಿದಾಡೆ ನಾಶರಹಿತ ಕಮಲಾಸನ ಜನಕ ಮೋಸ ಪೋಗಲು ತನ್ನ ದಾಸರ ವಿರಹಿತ ಅಶತೃಘ್ನನಾಮ ವಿಜಯವಿಠ್ಠಲ ಎನ್ನ ಮೀಸಲ ದೈವವು ಈ ಸುಲಭದಿಂದ

ಅಟ್ಟತಾಳ

ಚಂದ್ರನುದ್ಭವನಾಗೆ ಚತುರಂಗಲದಷ್ಟು ಸಿಂಧುರಾಜನು ಉಬ್ಬಿ ಮೇಲಕ್ಕೆ ಸೂಸುವ ಇಂದಿರೇಶನು ಎನ್ನ ಹೃದಯಾಂಬುಧಿಯೊಳು ಇಂದು ಸುಳಿದಂತೆ ಪರಿಪೂರ್ಣವಾಗೆ ಇಂದೆನ್ನ ಸಂತೋಷ ಪಿಡಿಯಲಾರವಶ ಅಂಧಕಗೆ ಕಣ್ಣು ಬಂದಂತೆಯಾಯಿತು ಸುಂದರ ಸುವೇಧ ವಿಜಯವಿಠ್ಠಲರೇಯ ಒಂದೊಂದು ಪರಿಯಲ್ಲಿ ನಿಂದು ನಿಂದೊಲಿದಾ

ಆದಿತಾಳ

ಇಂದು ಮಂದಾಕಿನಿಯಲ್ಲಿ ಮಿಂದ ಫಲ ಉಪರಾಗ ಬಂದ ಕಾಲದಲ್ಲಿ ಕೋಶ ತಂದು ದಾನವಿತ್ತು ಸಕಲ ಸಿಂಧುವಿನಲ್ಲಿ ಸ್ನಾನ ಮಾಡಿ ಒಂದುಬಿಡದೆ ಯಾತ್ರೆ ಚರಿಸಿ ಮಂದರಧರನಾ ನಖ ಒಂದು ಕಾಣಲದಕೆ ನೂ ರೊಂದು ಮಡಿ ಫಲವಹುದೆಂದು ವೇದ ಸಾರುತಿದೆ ಎಂದು ಎನ್ನ ಭಾಗ್ಯವೇನೆಂದು ಪೇಳಿಕೊಂಬೆನಯ್ಯ ವಂದಿಸಿ ವರ ಮನಕೆ ನಿಜಬಂಧು ವಿಜಯ ವಿಠ್ಠಲ ಸ ನಂದನಾದಿ ವಂದ್ಯನೀತ ಇಂದು ಕೃತ ಕೃತ್ಯನಾನು

ಜತೆ

ಕಂಡು ಧನ್ಯನಾದೆ ಕಮನೀಯ ಮೂರಿತಿಯ ಮಂಡಲೇಶನಯ್ಯಾ ವಿಜಯ ವಿಠ್ಠಲದೇವನ