ಸದಸ್ಯ:Ashok

ವಿಕಿಸೋರ್ಸ್ದಿಂದ
                                                                                           ಆಲೂಗಡ್ಡೆ         

ಆಲೂಗಡ್ಡೆಯ ಆಗಮನ ಯಾವಾಗ ಆಯಿತೆಂಬುದು ಸರಿಯಾಗಿ ಹೇಳಲಾಗದಿದ್ದರೂ 17ನೇ ಶತಮಾನದ ಆದಿಯಲ್ಲಿ ಅಂದರೆ ಯುರೋಪ್ ನಲ್ಲಿ ಉಪಯೋಗ ಮಾಡಿದ ಕೇವಲ 40ವರ್ಷಗಳಲ್ಲಿ ಕೆಲವು ಉನ್ನತ ಅಧಿಕಾರಗಳ ಕ್ಷೇತ್ರದಲ್ಲಿ ಇದು ಜನಪ್ರಿಯವಾಗಿತ್ತೆಂದು ಹೇಳಬಹುದು. ಮೊಟ್ಟ ಮೊದಲು ಪೋರ್ಚುಗೀಸರು ಭಾರತಕ್ಕೆ ತಂದಿರಬಹುದು ಎಂದು ಊಹಿಸಲಾಗಿದೆ. ಮಿಲಿಟರಿ ಅಧಿಕಾರಿಗಳು ಮತ್ತು ಇಂಗ್ಲಿಷರು ಈ ಹೊಸ ತರಕಾರಿಯನ್ನು ಹೆಚ್ಚು ಆಸ್ಥೆಯಿಂದ ತಮ್ಮ ಉದ್ಯಾನಗಳಲ್ಲಿ ಬೆಳೆಸುತ್ತಿದ್ದರು. ಇದು ಸಾಧಾರಣ ಮನುಷ್ಯನಿಗೂದೊರಕುವಂತೆ ಮಾಡಿದ ಕೀರ್ತಿ ಮೇಜರ್ ಯಂಗ್ ನದು (19ನೇ ಶತಮಾನ). ಇವನು ಆಗಿನ ಕಾಲಕ್ಕೆ ಉತ್ತಮ ಜಾತಿಯದು ಎನಿಸಿದ್ದ ಆಲೂಗಡ್ಡೆ ಬೀಜಗಳನ್ನು ಡೆಹರಾಡೂನಿನ ಬೆಟ್ಟಗುಡ್ಡಗಳ ನಾಡಿನಲ್ಲಿ ಬೆಳೆಸಲಾರಂಭಿಸಿದ. ಸು. 1839ರ ವೇಳೆಗೆ ಅದು ಭಾರತದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು. ಎಂದನೆಯ ಮತ್ತು ಎರಡನೆಯ ಮಹಾಯುದ್ದದ ಸಮಯದಲ್ಲಿ ಆಹಾರ ಕೊರತೆ ಹೆಚ್ಚು ಕಂಡುಬಂದು ಬೇಗ ಕೆಡದಂಥ, ಕೊಳೆಯದಂಥ ತರಕಾರಿಯ ಆವಶ್ಯಕತೆ ಹೆಚ್ಚಾಗುತ್ತಾ ಬಂತು. ಹೀಗಾಗಿ ಆಲೂಗಡ್ಡೆಯ ಒಳ್ಳೆಯ ಸ್ಥಾನಲಭಿಸಿತು. ಅಂದಿನಿಂದ ಇದು ಬಹುಜನಪ್ರಿಯವಾಗಿ ಇದರ ವಿಸ್ತೃತ ವ್ಯವಸಾಯ ಆರಂಭವಾಯಿತು. ದೇಶದ ಉದ್ದಗಲಕ್ಕೆ ಇದರ ಬೆಳೆ ಹಬ್ಬಿತು. ಅಸ್ಸಾಂ, ನೀಲಗಿರಿ, ಬಿಹಾರ್ ಮುಂತಾದ ಪ್ರದೇಶಗಳಲ್ಲಿ ಹೊಸ ಹೊಸ ಜಾತಿಯ ಬೀಜಗಳನ್ನು ಇಂಗ್ಲೆಂಡ್, ಆಸ್ಟ್ರೇಲಿಯ ದೇಹಗಳಿಂದ ತರಿಸಿಕೊಂಡು ಬೆಳೆಸಲಾರಂಭಿಸಿದರು. ಕೆಲವು ಜಾತಿಗಳು ವಾತಾವರಣದ ವೈಪರೀತ್ಯವನ್ನು ಎದುರಿಸಲಾರದೆ ನಿರೀಕ್ಷೀದ ಫಸಲು ನೀಡಲಿಲ್ಲ. ಇನ್ನುಳಿದವು ತಮ್ಮತನವನ್ನು ಉಳಿಸಿಕೊಂಡು ಸ್ಥಿರವಾದ ಮತ್ತು ಉತ್ತಮ ದರ್ಜೆಯ ಫಸಲು ಕೊಡತೊಡಗಿದವು.

 ಸೊಲೇನಂ ಜಾತಿಯಲ್ಲಿ 1,500ಕ್ಕೂ ಹೆಚ್ಚು ಪ್ರಭೇದಗಳಿವೆ. ಅವುಗಳಲ್ಲಿ ಟ್ಯೂಬೆರೋಸಮ್ ಮೂಖ್ಯವಾದದ್ದು. ಆಲೂಗಡ್ಡೆ ಏಕಋತುವಿನ ಪರ್ಣಸಸಿ. ಎಲೆ ಸಂಯುಕ್ತ ಪತ್ರ, ಅಭಿಮುಖ ಜೋಡಣೇ ನಯವಾದ ಅಂಚು, ಮೊನಚು ಅಥವಾ ಮೊಂಡು ತುದಿ, ಕಾಂಡ ನೇರವಾಗಿದೆ.,ಭೂಮಿಗಿಳಿದ ಕಾಂಡದ ತುದಿಯಲ್ಲಿ ಗೆಡ್ಡೆಯಿರುತ್ತದೆ, ತುತ್ತತುದಿಯಲ್ಲಿ ಹೂಗೊಂಚಲು, ಹೂಗಳು ದ್ವಿಲಿಂಗ ಪುಷ್ಪಗಳು, ಪುಷ್ಪಪಾತ್ರೆ 5, ದಳ 5,ದಳಗಳ ಬಣ್ಣ ಬಿಳಿ, ನೀಲಿ, ಕಡುಗೆಂಪು, ಕೇಸರಗಳು 5, ಅಂಡಾಶಯ 3 ಭಾಗ, ಬಹು ಅಂಡಗಳುಳ್ಳ ಅಂಡಾಶಯ, ಫಲ ಬೆರಿ ಮಾದರಿಯದು.
ಪುಲ್ ವ, ಅಪ್-ಟು-ಡೇಟ್, ಪ್ರೆಸಿಡೆಂಟ್, ಗ್ರೇಟ್ ಸ್ಕಾಟ್, ಕುಪ್ರಿ ಕುಂದನ್, ಹೈಬ್ರಿಡ್ 12,ಹೈಬ್ರಿಡ್ 13,ಸಾತೊ, ಮೆಜಸ್ಟಿಕ್. ಇಟ್ಯಾಲಿಯನ್ ವೈಟ್ ರೌಂಡ್, ಲೇಟ್ ಜರ್ಮನ್ - ಇವು ಆಲೂಗಡ್ಡೆಯ ಬೇರೆ ಬೇರೆ ತಳಿಗಳು.
ಆಲೂಗಡ್ಡೆ ಸುಮಾರು 30-45 ಸೆಂಮೀ.ವರೆಗೆ ಬೆಳೆಯುವ ಸಣ್ಣ ಸಸ್ಯ. ಅದರ ಬೇರುಗಳು ನಾರಿನಂತಿವೆ. ಇವು ಭೂಮಿಯಲ್ಲಿ ಹೆಚ್ಚು ಆಳ ಹೋಗುವುದಿಲ್ಲ. ತೇವವಿರುವ ಭೂಮಿಯಲ್ಲಿ ಸು. 20 ಸೆಂಮೀ.ವರೆಗೊ ಹೋಗಬಹುದು. ಸಾಧಾರಣವಾಗಿ ಈ ಸಸ್ಯದಲ್ಲಿ ಕಾಯಿ ಬಿಡುವುದಿಲ್ಲ. ಸರಿಯಾದ ವಾತಾವರಣವಿದ್ದಾಗ ಕಾಯಿ ಬಿಡುತ್ತದೆ.
ಗೆಡ್ಡೆ ಕಾಂಡದ ಕವಲಿನ ತುದಿಯಲ್ಲಿ ಕಾಣಬಹುದು. ಒಂದು ಗಿಡದಲ್ಲಿ ಇಂಥ ಕಾಂಡದ ಕವಲುಗಳ ತುದಿಗಳು ಹಲವಾರು ಇರುತ್ತವೆ. ಸ್ಟೋಲಾನ್ ಎಂದು ಇವುಗಳ ಹೆಸರು. ಗೆಡ್ಡೆ ಸಾಮಾನ್ಯವಾಗಿ ಚಿಕ್ಕದಾಗಿದ್ದು ದಪ್ಪವಾಗಿರುತ್ತದೆ. ಸಂಪೂರ್ಣವಾಗಿ ಬಲಿತ ಗೆಡ್ಡೆಯ ಮೇಲೆ ಹಲವಾರು ಸಣ್ಣ ಸಣ್ಣ ಕುಳಿಗಳಂತ್ತಿರುವ ಕಣ್ಣುಗಳನ್ನು ಕಾಣಬಹುದು. ಈ ಕಣ್ಣುಗಳ ಭಾಗವನ್ನು ಕತ್ತರಿಸಿ ಭೂಮಿಯಲ್ಲಿ ನೆಡಬಹುದು. ನಿರ್ಲಿಂಗರೀತಿಯಲ್ಲಿ ಸಸ್ಯವನ್ನು ಈ ರೀತಿ ವೃದ್ದಿಸಬಹುದು. ಹಾಗೆ ವೃದ್ದಿಗೊಂಡ ಗಿಡಗಳಲ್ಲಿ ಮತ್ತೆ ಗೆಡ್ಡೆಗಳು ಬೆಳೆದು ಪೀಳಿಗೆಯನ್ನು ಮುಂದುವರಿಸುತ್ತವೆ. ಸುಮಾರು ಎರಡು ತಿಂಗಳಲ್ಲಿ ಗಿಡ ಒಳ್ಳೆಯ ಆಕಾರದ ಗೆಡ್ಡೆಗಳನ್ನು ಕೊಡುವುದು.
ಆಲೂಗೆಡ್ಡೆಯ ಬೆಳೆಗೆ ಭೂಮಿಯಲ್ಲಿರುವ ಶೈತ್ಯಾಂತ ಮತ್ತು ಹವಾಗುಣ ಬಹಳ ಮೂಖ್ಯ. ಬೆಳೆದ ಭವಿಷ್ಯವನ್ನೇ ಹವಾಗುಣ ನಿರ್ಧರಿಸುತ್ತದೆ. ಸಾಮಾನ್ಯವಾಗಿ ಆಲೂಗಡ್ಡೆ ತಂಪು ಹವೆಯಿರುವ ಮತ್ತು ತೇವವಿರುವ ಪ್ರದೇಶದಲ್ಲಿ ಬೆಳೆಯುತ್ತಾದೆ ಹೆಚ್ಚಾಗಿ ಸಿಮ್ಮು, ಡಾರ್ಜಿಲಿಂಗ್, ನೈನಿತಾಲ್, ರಾಂಚಿ, ಮಹಾಬಲೇಶ್ವರ, ನೀಲಗಿರಿ ಪ್ರದೇಶಗಳಲ್ಲಿ 800'-2000' ಮೀ. ಎತ್ತರದಲ್ಲೂ ಇದ್ನ್ನು ಬೆಳೆಸುತ್ತಾರೆ. ಬಯಲು ಪ್ರದೇಶದಲ್ಲಿ ಚಳಿಗಾಲದ ಬೆಳೆಯಾಗಿ ಕೂಡ ಇದರ ಕೃಷಿ ನಡೆಯುತ್ತದೆ.
ಕರ್ನಾಟಕ ರಾಜ್ಯದಲ್ಲಿ ಆಲೂಗಡ್ಡೆಯ ಬೆಳೆಯನ್ನು ಮೂರು ಕಾಲದ ಬೆಳೆಯಾಗಿ ವಿಭಾಗಿಸಬಹುದು. 1. ಮಳೆಗಾಲದ ಬೆಳೆ 2. ಚಳಿಗಾಲದ ಬೆಳೆ 3. ಬೇಸಗೆ ಬೆಳೆ. ಎಲ್ಲ ಋತುಗಳಲ್ಲಿಯೂ ಕರ್ನಾಟಕ ರಾಜ್ಯದಲ್ಲಿ ಆಲೂಗಡ್ಡೆ ಬೆಳೆಸಬಹುದಾದರೂ ಚಳಿಗಾಲದ ಬೆಳೆ ಫಸಲು ದೃಷ್ಟಿಯಿಂದ ಅತ್ಯುತ್ತಮ.
ಮಳೆಗಾಲದ ಬೆಳೆ: ಬೇಸಗೆಯಲ್ಲಿ ಆಳವಾಗಿ ಅಗತೆ ಮಾಡಿ ಮುಂಗಾರು ಮಳೆ ಪ್ರಾರಂಭವಾದ ತತ್ ಕ್ಷಣ ಆಲೂಗಡ್ಡೆ ಬೆಳೆ ಹಾಕುತ್ತಾರೆ. ಇದು ಮಳೆಯನ್ನೇ ಆಶ್ರಯಿಸಿ ಬೆಳೆಯುತ್ತದೆ. ನೀರಾವರಿಯಿಂದಲೂ ಬೆಳೆ ತೆಗೆಯುತ್ತಾರೆ. ರಾಗಿ ಬೆಳೆಯುವ ಹೊಲಗಳಲ್ಲಿ ಆಲೂಗಡ್ಡೆಯನ್ನು ಹಾಕಿ, ಬೆಳೆ ತೆಗೆದ ತತ್ ಕ್ಷಣ ರಾಗಿಪೈರು ನಾಟಿ ಮಾಡುತ್ತಾರೆ. ಬೆಳೆಯ ಅವಧಿ ಜಾತಿಗಳನ್ನು ಅನುಸರಿಸುತ್ತದೆ.
 ಚಳಿಗಾಲದ ಬೆಳೆ: ಕರ್ನಾಟಕ ರಾಜ್ಯದಲ್ಲಿ ವರ್ಷದ ಬಹುಭಾಗದ ಉತ್ಪಾದನೆಚಳಿಗಾಲದ್ದು. ರಾತ್ರಿಯ ತಂಪಾದ ಹವಾಗುಣ ಬೆಳೆಗೆ ಉತ್ತೇಜನಕಾರಿ. ಈ ಬೆಳೆಯನ್ನು ನೀರಾವರಿ ಆಶ್ರಯದಿಂದ ತೆಗೆಯುತ್ತಾರೆ.
 ಬೇಸಗೆ ಬೆಳೆ: ಬೇಸಗೆ ಬೆಳೆಯನ್ನು ಬಿತ್ತನೆಗಾಗಿ ಬೆಳೆಸುತ್ತಾರೆ.ಬೆಳೆ ಬಲು ಕಡಿಮೆ. ಇದಕ್ಕೆ ಯಥೇಚ್ಚವಾಗಿ ನೀರಾವರಿಯ ಆಶ್ರಯ ಬೇಕು.
 ಬಿತ್ತನೆ: ಆಲೂಗಡ್ಡೆ ಬೇಸಾಯ ಹೆಚ್ಚು ಖರ್ಚಿನದು. ಗೆಡ್ಡೆಯ ಮೇಲಿರುವ 2-3 ಕಣ್ಣುಗಳನ್ನು ಕತ್ತರಿಸಿ ನೆಡುವುದು ರೂಢಿಯ ಬೇಸಾಯಕ್ರಮ. ಗೆಡ್ಡೆ ಗಾತ್ರದಲ್ಲಿ ಸಣ್ಣವಾಗಿದ್ದರೆ ಕತ್ತರಿಸದೆ ಒಳ್ಳೆಯದು. ದಪ್ಪವಾಗಿರುವ ಗೆಡ್ಡೆಗಳನ್ನು ಬಿತ್ತನೆ ಮಾಡಿದರೆ ಫಸಲು ಕಡಿಮೆಯಾಗುತ್ತದೆ. ಬಿತ್ತನೆ ಗೆಡ್ಡೆ ತನ್ನ ಹಿಂದಿನ ಪೀಳಿಗೆಯ ಎಲ್ಲ ಶ್ರೇಷ್ಠ ಗುಣಗಳನ್ನೂ ಹೊಂದಿರಬೇಕು.3.5-4 ಸೆಂಮೀ ಮಧ್ಯಗಾತ್ರದವು ಬಿತ್ತನೆಗೆ ಯೋಗ್ಯ. ರೋಗ ಅಥವಾ ಕೀಟಪೀಡಿತ ಗೆಡ್ಡೆ, ಒಳಭಾಗದಲ್ಲಿ ಮಚ್ಚೆಗಳಿರುವ ಗೆಡ್ಡೆ, ಕಣ್ಣುಗಳಲ್ಲಿ ಸರಿಯಾಗಿ ಮೊಳಕೆ ಬಾರದೆ ಇದ್ದ ಗೆಡ್ಡೆ ಇವುಗಳನ್ನು ಬಿತ್ತಬಾರದು. ಉತ್ತಮಫಸಲು ಮತ್ತು ಪೀಳಿಗೆ ಅಭಿವೃದ್ಧಿ ದೃಷ್ಟಿಯಿಂದ ಈ ಎಚ್ಚರಿಕೆ ಅತ್ಯಗತ್ಯ. ಆಲೂಗಡ್ಡೆ ಅಗೆದು ತೆಗೆದು ಮೂರು ತಿಂಗಳು ನಿದ್ರಾವಸ್ಥೆ ಕಳೆದ ಮೇಲೆ ಮಾತ್ರ ಮೊಳೆಯಬಲ್ಲವು. ಬೀಜ ಪ್ರಮಾಣ ಸಾಮಾನ್ಯವಾಗಿ ಎಕರೆಗೆ 400-700ಕೆ.ಜಿ. ಈ ಪ್ರಮಾಣ ಆಲೂಗಡ್ಡೆಯ ಪೀಳಿಗೆಯನ್ನು ಅನುಸರಿಸಿ ವ್ಯತ್ಯಾಸವಾಗ ಬಹುದು.
   ಬೆಳೆಯ ಆವರ್ತ (ರೊಟೇಷನ್ ಆಫ್ ಕ್ರಾಪ್ಸ್) : ಮಣ್ಣಿನ ಸಾರ ಮತ್ತು ಫಸಲಿನ ದೃಷ್ಟಿಯಿಂದ ವರ್ಷದ ಎಲ್ಲ ಕಾಲದಲ್ಲೂ ಆಲೂಗಡ್ಡೆ ಬೆಳೆಯುವುದು ಒಳ್ಳೆಯದಲ್ಲ. ಆದ್ದರಿಂದ ಆಲೂಗಡ್ಡೆ-ರಾಗಿ, ಆಲೂಗಡ್ಡೆ-ಹುರುಳಿ ಈ ಕ್ರಮದಲ್ಲಿ ಮಳೆಯನ್ನು ಆಶ್ರಯಿಸುವ ಬೆಳೆಗೆ ಪರ್ಯಾಯವಾಗಿಯೂ ನೀರಾವರಿ ಆಲೂಗಡ್ಡೆಯನ್ನು ಹುರುಳಿಕಾಯಿ, ಕೋಸು, ಮೂಲಂಗಿ, ಬೆಂಡೆಕಾಯಿ, ಸೌತೆಕಾಯಿ, ನವಿಲುಕೋಸು, ಬೀಟ್ ರೂಟ್, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳೊಡನೆ ಪರ್ಯಾಯವಾಗಿಯೂ ಬೆಳೆಸುವುದು ರೂಢಿಯಲ್ಲಿದೆ.
"https://kn.wikisource.org/w/index.php?title=ಸದಸ್ಯ:Ashok&oldid=8876" ಇಂದ ಪಡೆಯಲ್ಪಟ್ಟಿದೆ