ಹರಿಕಥಾಮೃತಸಾರ/ಕಲ್ಪಸಾಧನ ಸಂಧಿ (ಅಪರೋಕ್ಷ ತಾರತಮ್ಯ)

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ

ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ

ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ

ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ//1//


ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ

ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು

ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ

ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು//2//


ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು

ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು

ತನು ಪ್ರತೀಕದಿ ಬಿಂಬನ ಉಪಾಸನವಗೈಯುತ ಇಂದ್ರಿಯಜ ಕರ್ಮ

ಅನವರತ ಹರಿಗೆ ಅರ್ಪಿಸುತ ನಿರ್ಮಮರುಯೆನಿಸುವರು//3//


ಏಳುವಿಧ ಜೀವ ಗಣ ಬಹಳ ಸುರಾಳಿ ಸಂಖ್ಯಾ ನೇಮವುಳ್ಳದು

ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ

ಸ್ಥೂಲ ಕರ್ಮವ ತೊರೆದು ಗುರುಗಳು ಪೇಳಿದ ಅರ್ಥವ ತಿಳಿದು

ತತ್ತತ್ಕಾಲ ಧರ್ಮ ಸಮರ್ಪಿಸುವ ಅವರು ಕರ್ಮ ಯೋಗಿಗಳು//4//


ಹೀನ ಕರ್ಮಗಳಿಂದ ಬಹುವಿಧ ಯೋನಿಯಲಿ ಸಂಚರಿಸಿ ಪ್ರಾಂತಕೆ

ಮಾನುಷತ್ವವನೈದಿ ಸರ್ವೋತ್ತಮನು ಹರಿಯೆಂಬ

ಜ್ಞಾನ ಭಕ್ತಿಗಳಿಂದ ವೇದೋಕ್ತ ಅನುಸಾರ ಸಹಸ್ರಜನ್ಮ

ಅನ್ಯೂನ ಕರ್ಮವ ಮಾಡಿ ಹರಿಗರ್ಪಿಸಿದ ನಂತರದಿ//5//


ಹತ್ತು ಜನ್ಮಗಳಲಿ ಹರಿ ಸರ್ವೋತ್ತಮನು ಸುರಾಸುರ ಗಣಾರ್ಚಿತ

ಚಿತ್ರ ಕರ್ಮ ವಿಶೋಕ ಅನಂತಾನಂತ ರೂಪಾತ್ಮ

ಸತ್ಯ ಸತ್ಸಂಕಲ್ಪ ಜಗದೋತ್ಪತ್ತಿ ಸ್ಥಿತಿಲಯ ಕಾರಣ

ಜರಾಮೃತ್ಯು ವರ್ಜಿತನೆಂದು ಉಪಾಸನೆಗೈದ ತರುವಾಯ//6//


ಮೂರು ಜನ್ಮಗಳಲ್ಲಿ ದೇಹಾಗಾರ ಪಶು ಧನ ಪತ್ನಿ ಮಿತ್ರ

ಕುಮಾರ ಮಾತಾ ಪಿತೃಗಳಲ್ಲಿ ಇಹ ಸ್ನೇಹಗಿಂತ ಅಧಿಕ

ಮಾರಮಣನಲಿ ಬಿಡದೆ ಮಾಡುವ ಸೂರಿಗಳು ಈ ಉಕ್ತ ಜನ್ಮವ ಮೀರಿ

ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು//7//


ದೇವ ಗಾಯಕ ಅಜಾನ ಚಿರಪಿತೃ ದೇವರೆಲ್ಲರು

ಜ್ಞಾನ ಯೋಗಿಗಳು ಆವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ದೇವಿ

ಬುಧಸನಕಾದಿಗಳು ಮೇಘಾವಳಿ ಪರ್ಜನ್ಯ ಸಾಂಶರು

ಈ ಉಭಯ ಗಣದೊಳಗಿವರು ವಿಜ್ಞಾನ ಯೋಗಿಗಳು//8//


ಭರತ ಖಂಡದಿ ನೂರು ಜನ್ಮವ ಧರಿಸಿ ನಿಷ್ಕಾಮಕ ಸುಕರ್ಮ ಆಚರಿಸಿದ ಅನಂತರದಿ

ದಶ ಸಹಸ್ರ ಜನ್ಮದಲಿ ಉರುತರ ಜ್ಞಾನವನು

ಮೂರೈದು ಎರಡು ದಶ ದೇಹದಲಿ ಭಕ್ತಿಯ

ನಿರವಧಿಕನಲಿ ಮಾಡಿ ಕಾಂಬರು ಬಿಂಬ ರೂಪವನು//9//


ಸಾಧನಾತ್ಪೂರ್ವದಲಿ ಇವರಿಗೆ ಅನಾದಿ ಕಾಲ ಅಪರೋಕ್ಷವಿಲ್ಲ

ನಿಷೇಧ ಕರ್ಮಗಳಿಲ್ಲ ನರಕ ಪ್ರಾಪ್ತಿ ಮೊದಲಿಲ್ಲ

ವೇದ ಶಾಸ್ತ್ರಗಳಲ್ಲಿಪ್ಪ ವಿರೋಧ ವಾಕ್ಯವ ಪರಿಹರಿಸಿ

ಮಧುಸೂದನನೆ ಸರ್ವೋತ್ತಮೋತ್ತಮನು ಎಂದು ತುತಿಸುವರು//10//


ಸತ್ಯಲೋಕಾಧಿಪನ ವಿಡಿದು ಶತಸ್ಥ ದೇವಗಣ ಅಂತ ಎಲ್ಲರು

ಭಕ್ತಿ ಯೋಗಿಗಳೆಂದು ಕರೆಸುವರು ಆವ ಕಾಲದಲಿ

ಭಕ್ತಿ ಯೋಗ್ಯರ ಮಧ್ಯದಲಿ ಸದ್ಭಕ್ತಿ ವಿಜ್ಞಾನಾದಿ ಗುಣದಿಂದ ಉತ್ತಮ

ಉತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ//11//


ಋಜುಗಣಕೆ ಭಕ್ತಿ ಆದಿ ಗುಣ ಸಹಜವು ಎನಿಸುವವು

ಕ್ರಮದಿ ವೃದ್ಧಿ ಅಬ್ಜಜ ಪದವಿ ಪರ್ಯಂತ ಬಿಂಬ ಉಪಾಸನವು ಅಧಿಕ

ವೃಜಿನ ವರ್ಜಿತ ಎಲ್ಲರೊಳು ತ್ರಿಗುಣಜ ವಿಕಾರಗಳಿಲ್ಲವು ಎಂದಿಗು

ದ್ವಿಜಫಣಿಪ ಮೃಡ ಶಕ್ರ ಮೊದಲಾದ ಅವರೊಳು ಇರುತಿಹವು//12//


ಸಾಧನಾತ್ಪೂರ್ವದಲಿ ಈ ಋಜ್ವಾದಿ ಸಾತ್ವಿಕರು ಎನಿಪ ಸುರಗಣ

ಅನಾದಿ ಸಾಮಾನ್ಯ ಅಪರೋಕ್ಷಿಗಳೆಂದು ಕರೆಸುವರು

ಸಾಧನೋತ್ತರ ಸ್ವಸ್ವ ಬಿಂಬ ಉಪಾಧಿ ರಹಿತ ಆದಿತ್ಯನಂದದಿ

ಸಾದರದಿ ನೋಡುವರು ಅಧಿಕಾರ ಅನುಸಾರದಲಿ//13//


ಛಿನ್ನ ಭಕ್ತರು ಎನಿಸುತಿಹರು ಸುಪರ್ಣ ಶೇಷಾದಿ ಅಮರರರೆಲ್ಲ

ಅಚ್ಚಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ಸೊನ್ನೊಡಲ ವಾಗ್ದೇವಿಯರು

ಪಣೆಗಣ್ಣ ಮೊದಲಾದ ಅವರೊಳಗೆ ತತ್ತನ್ನಿಯಾಮಕರಾಗಿ

ವ್ಯಾಪಾರವನು ಮಾಡುವರು//14//


ಹೀನ ಸತ್ಕರ್ಮಗಳು ಎರಡು ಪವಮಾನ ದೇವನು ಮಾಳ್ಪನು

ಇದಕೆ ಅನುಮಾನವಿಲ್ಲ ಎಂದು ಎನುತ ದೃಢ ಭಕ್ತಿಯಲಿ ಭಜಿಪರ್ಗೆ

ಪ್ರಾಣಪತಿ ಸಂಪ್ರೀತನಾಗಿ ಕುಯೋನಿಗಳ ಕೊಡ

ಎಲ್ಲ ಕರ್ಮಗಳು ಆನೆ ಮಾಡುವೆನೆಂಬ ಮನುಜರ ನರಕಕೆ ಐದಿಸುವ//15//


ದೇವರ್ಷಿ ಪಿತೃಪ ನರರೆನಿಸುವ ಐವರೊಳು ನೆಲೆಸಿದ್ದು

ಅವರ ಸ್ವಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ

ಭಾವಿ ಬ್ರಹ್ಮನು ಕೂರ್ಮ ರೂಪದಿ ಈ ವಿರಿಂಚಿ ಅಂಡವನು ಬೆನ್ನಿಲಿ ತಾ ವಹಿಸಿ

ಲೋಕಗಳ ಪೊರೆವನು ದ್ವಿತೀಯ ರೂಪದಲಿ//16//


ಗುಪ್ತನಾಗಿದ್ದು ಅನಿಲ ದೇವ ದ್ವಿಸಪ್ತ ಲೋಕದ ಜೀವರೊಳಗೆ

ತ್ರಿಸಪ್ತ ಸಾವಿರದ ಆರುನೂರು ಶ್ವಾಸ ಜಪಗಳನು

ಸುಪ್ತಿಸ್ವಪ್ನದಿ ಜಾಗ್ರತಿಗಳಲಿ ಆಪ್ತನಂದದಿ ಮಾಡಿ ಮಾಡಿಸಿ

ಕ್ಲುಪ್ತ ಭೋಗಗಳೀವ ಪ್ರಾಂತಕೆ ತೃತೀಯ ರೂಪದಲಿ//17//


ಶುದ್ಧ ಸತ್ವಾತ್ಮಕ ಶರೀರದೊಳಿದ್ದ ಕಾಲಕು ಲಿಂಗದೇಹವು ಬದ್ಧವಾಗದು

ದಗ್ಧ ಪಟದೋಪಾದಿ ಇರುತಿಹುದು

ಸಿದ್ಧ ಸಾಧನ ಸರ್ವರೊಳಗೆ ಅನವದ್ಯನು ಎನಿಸುವ

ಗರುಡ ಶೇಷ ಕಪರ್ದಿ ಮೊದಲಾದ ಅಮರರೆಲ್ಲರು ದಾಸರೆನಿಸುವರು//18//


ಗಣದೊಳಗೆ ತಾನಿದ್ದು ಋಜುವೆಂದು ಎನಿಸಿಕೊಂಬನು

ಕಲ್ಪ ಶತ ಸಾಧನವಗೈದ ಅನಂತರದಿ ತಾ ಕಲ್ಕಿಯೆನಿಸುವನು

ದ್ವಿನವಾಶೀತಿಯ ಪ್ರಾಂತ ಭಾಗದಿ ಅನಿಲ ಹನುಮದ್ಭೀಮ ರೂಪದಿ

ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು//19//


ವಿಶ್ವವ್ಯಾಪಕ ಹರಿಗೆ ತಾ ಸಾದೃಶ್ಯ ರೂಪವ ಧರಿಸಿ

ಬ್ರಹ್ಮ ಸರಸ್ವತೀ ಭಾರತಿಗಳಿಂದ ಒಡಗೂಡಿ ಪವಮಾನ

ಶಾಶ್ವತ ಸುಭಕ್ತಿಯಲಿ ಸುಜ್ಞಾನ ಸ್ವರೂಪನ ರೂಪಗುಣಗಳ

ಅನಶ್ವರವೆಂದೆನುತ ಪೊಗಳುವ ಶ್ರುತಿಗಳೊಳಗಿದ್ದು//20//


ಖೇಟ ಕುಕ್ಕುಟ ಜಲಟವೆಂಬ ತ್ರಿಕೋಟಿ ರೂಪವ ಧರಿಸಿ

ಸತತ ನಿಶಾಟರನು ಸಂಹರಿಸಿ ಸಲಹುವ ಸರ್ವ ಸತ್ಜನರ

ಕೈಟಭಾರಿಯ ಪುರದ ಪ್ರಥಮ ಕವಾಟವೆನಿಸುವ

ಗರುಡ ಶೇಷ ಲಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ//21//


ಈ ಋಜುಗಳೊಳಗೊಬ್ಬ ಸಾಧನ ನೂರು ಕಲ್ಪದಿ ಮಾಡಿ ಕರೆಸುವ

ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ

ಸೂರಿಗಳು ಸಂಸ್ತುತಿಸಿ ವಂದಿಸೆ ಘೋರದುರಿತಗಳನು ಅಳಿದು ಪೋಪುವು

ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ//22//


ಪಾಹಿ ಕಲ್ಕಿಸುತೇಜದಾಸನೆ ಪಾಹಿ ಧರ್ಮಾಧರ್ಮ ಖಂಡನೆ

ಪಾಹಿ ವರ್ಚಸ್ವೀ ಖಷಣ ನಮೋ ಸಾಧು ಮಹೀಪತಿಯೆ

ಪಾಹಿ ಸದ್ಧರ್ಮಜ್ಞ ಧರ್ಮಜ ಪಾಹಿ ಸಂಪೂರ್ಣ ಶುಚಿ ವೈಕೃತ

ಪಾಹಿ ಅಂಜನ ಸರ್ಷಪನೆ ಖರ್ಪಟ: ಶ್ರದ್ಧಾಹ್ವ//23//


ಪಾಹಿ ಸಂಧ್ಯಾತ ವಿಜ್ಞಾನನೆ ಪಾಹಿ ಮಹ ವಿಜ್ಞಾನ ಕೀರ್ತನ

ಪಾಹಿ ಸಂಕೀರ್ಣಾಖ್ಯ ಕತ್ಥನ ಮಹಾಬುದ್ಧಿ ಜಯಾ

ಪಾಹಿ ಮಾಹತ್ತರ ಸುವೀರ್ಯನೆ ಪಾಹಿಮಾಂ ಮೇಧಾವಿ ಜಯಾಜಯ

ಪಾಹಿಮಾಂ ರಂತಿಮ್ನಮನು ಮಾಂ ಪಾಹಿ ಮಾಂ ಪಾಹಿ//24//


ಪಾಹಿ ಮೋದ ಪ್ರಮೋದ ಸಂತಸ ಪಾಹಿ ಆನಂದ ಸಂತುಷ್ಟನೆ

ಪಾಹಿಮಾಂ ಚಾರ್ವಾಂಗಚಾರು ಸುಬಾಹುಚಾರು ಪದ

ಪಾಹಿ ಪಾಹಿ ಸುಲೋಚನನೆ ಮಾಂ ಪಾಹಿ ಸಾರಸ್ವತ ಸುವೀರನೆ

ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ//25//


ಪಾಹಿಮಾಂ ಸರ್ವಜಿತ್ ಮಿತ್ರನೆ ಪಾಹಿ ಪಾಪ ವಿನಾಶಕನೆ

ಮಾಂ ಪಾಹಿ ಧರ್ಮವಿನೇತ ಶಾರದ ಓಜ ಸುತಪಸ್ವೀ

ಪಾಹಿಮಾಂ ತೇಜಸ್ವಿ ನಮೋ ಮಾಂ ಪಾಹಿ ದಾನ ಸುಶೀಲ

ನಮೋ ಮಾಂ ಪಾಹಿ ಯಜ್ಞ ಸುಕರ್ತ ಯಜ್ವೀ ಯಾಗ ವರ್ತಕನೆ//26//


ಪಾಹಿ ಪ್ರಾಣ ತ್ರಾಣ ಅಮರ್ಷಿ ಪಾಹಿಮಾಂ ಉಪದೇಷ್ಟ ತಾರಕ

ಪಾಹಿ ಕಾಲ ಕ್ರೀಡನ ಸುಕರ್ತಾ ಸುಕಾಲಜ್ಞ

ಪಾಹಿ ಕಾಲ ಸುಸೂಚಕನೆ ಮಾಂ ಪಾಹಿ ಕಲಿ ಸಂಹರ್ತಕಲಿ

ಮಾಂ ಪಾಹಿ ಕಾಲಿಶಾಮರೇತ ಸದಾರತ ಸುಬಲನೆ//27//


ಪಾಹಿ ಪಾಹಿ ಸಹೋ ಸದಾಕಪಿ ಪಾಹಿ ಗಮ್ಯ ಜ್ಞಾನ ದಶಕುಲ

ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ

ಪಾಹಿಮಾಂ ಮಂತವ್ಯಕವ್ಯನೆ ಪಾಹಿ ದ್ರಷ್ಟವ್ಯನೆ ಸರವ್ಯನೆ

ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ//28//


ಪಾಹಿ ಸೇವ್ಯ ಸುಭವ್ಯ ನಮೋ ಮಾಂ ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ

ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ

ಪಾಹಿ ಮಂ ಲಾತವ್ಯವಾಯುವೆ ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ

ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ//29//


ವಾಮನ ಪುರಾಣದಲಿ ಪೇಳಿದ ಈ ಮಹಾತ್ಮರ ಪರಮ ಮಂಗಳ ನಾಮಗಳ

ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ

ಶ್ರೀ ಮನೋರಮ ಅವರು ಬೇಡಿದ ಕಾಮಿತಾರ್ಥಗಳಿತ್ತು

ತನ್ನ ತ್ರಿಧಾಮದೊಳಗೆ ಅನುದಿನದಲಿಟ್ಟು ಆನಂದ ಪಡಿಸುವನು//30//


ಈ ಸಮೀರಗೆ ನೂರು ಜನ್ಮ ಮಹಾ ಸುಖ ಪ್ರಾರಬ್ಧ ಭೋಗ

ಪ್ರಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು

ಭೂಸುರನ ಒಪ್ಪಿಡಿ ಅವಲಿಗೆ ವಿಶೇಷ ಸೌಖ್ಯವನಿತ್ತ ದಾತನ

ದಾಸವರ್ಯನು ಲೋಕಪತಿಯೆನಿಸುವುದು ಅಚ್ಚರವೆ//31//


ದ್ವಿಶತ ಕಲ್ಪಗಳಲ್ಲಿ ಬಿಡದೆ ಈ ಪೆಸರಿನಿಂದಲಿ ಕರೆಸಿದನು

ತನ್ನೊಶಗ ಅಮರರೊಳಿದ್ದು ಮಾಡುವನು ಅವರ ಸಾಧನವ

ಅಸದುಪಾಸನೆಗೈವ ಕಲ್ಯಾದಿ ಅಸುರಪರ ಸಂಹರಿಸಿ

ತಾ ಪೊಂಬಸಿರ ಪದವೈದಿದನು ಗುರು ಪವಮಾನ ಸತಿಯೊಡನೆ//32//


ಅನಿಮಿಷರ ನಾಮದಲಿ ಕರೆಸುವ ಅನಿಲದೇವನು

ಒಂದು ಕಲ್ಪಕೆ ವನಜ ಸಂಭವನೆನಿಸಿ ಎಂಭತ್ತೇಳೂವರೆ ವರ್ಷ

ಗುಣತ್ರಯ ವರ್ಜಿತನ ಮಂಗಳ ಗುಣ ಕ್ರಿಯಾ ಸುರೂಪಂಗಳ

ಉಪಾಸನವು ಅವ್ಯಕ್ತಾದಿ ಪೃಥ್ವಿ ಅಂತರದಿರುತಿಹುದು//33//


ಮಹಿತ ಋಜುಗಣಕೆ ಒಂದೇ ಪರಮೋತ್ಸಾಹ ವಿವರ್ಜಿತವೆಂಬ ದೋಷವು

ವಿಹಿತವೆ ಸರಿ ಇದನು ಪೇಳ್ದಿರೆ ಮುಕ್ತ ಬ್ರಹ್ಮರಿಗೆ ಬಹುದು ಸಾಮ್ಯವು

ಜ್ಞಾನ ಭಕುತಿಯು ದ್ರುಹಿಣ ಪದ ಪರ್ಯಂತ ವೃದ್ಧಿಯು

ಬಹಿರುಪಾಸನೆ ಉಂಟು ಅನಂತರ ಬಿಂಬ ದರ್ಶನವು//34//


ಜ್ಞಾನರಹಿತ ಭಯತ್ವ ಪೇಳ್ವ ಪುರಾಣ ದೈತ್ಯರ ಮೋಹಕವು

ಚತುರಾನನಗೆ ಕೊಡುವದೆ ಮೋಹಾಜ್ಞಾನ ಭಯ ಶೋಕ

ಭಾನುಮಂಡಲ ಚಲಿಸಿದಂದದಿ ಕಾಣುವುದು ದೃಗ್ ದೋಷದಿಂದಲಿ

ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ//35//


ಕಮಲಸಂಭವ ಸರ್ವರೊಳಗುತ್ತಮನೆನಿಸುವನು ಎಲ್ಲ ಕಾಲದಿ

ವಿಮಲ ಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ

ಸಮಾಭ್ಯಧಿಕ ವಿವರ್ಜಿತನ ಗುಣ ರಮೆಯ ಮುಖದಿಂದರಿತು ನಿತ್ಯದಿ

ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬ ರೂಪವನು//36//


ಜ್ಞಾನ ಭಕ್ತಾದಿ ಅಖಿಳ ಗುಣ ಚತುರಾನನೊಳಗಿಪ್ಪಂತೆ

ಮುಖ್ಯಾ ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ ಕೊರತೆಯಾಗಿ

ನ್ಯೂನ ಋಜು ಗಣ ಜೀವರಲ್ಲಿ ಕ್ರಮೇಣ ವೃದ್ಧಿ ಜ್ಞಾನ ಭಕ್ತಿ

ಸಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಾಧಿಕ//37//


ಸೌರಿ ಸೂರ್ಯನ ತೆರದಿ ಬ್ರಹ್ಮಸಮೀರ ಗಾಯತ್ರೀ ಗಿರಿಗಳೊಳು

ತೋರುವುದು ಅಸ್ಪಷ್ಟ ರೂಪದಿ ಮುಕ್ತಿ ಪರ್ಯಂತ

ವಾರಿಜಾಸನ ವಾಯು ವಾಣೀ ಭಾರತಿಗಳಿಗೆ ಮಹಾ ಪ್ರಳಯದಿ ಬಾರದು

ಅಜ್ಞಾನಾದಿ ದೋಷವು ಹರಿ ಕೃಪಾ ಬಲದಿ//38//


ನೂರು ವರುಷ ಅನಂತರದಲಿ ಸರೋರುಹಾಸನ ತನ್ನ ಕಲ್ಪದಲಿ

ಆರು ಮುಕ್ತಿಯನು ಐದುವರೊ ಅವರವರ ಕರೆದೊಯ್ದು

ಶೌರಿ ಪುರುದೊಳಗಿಪ್ಪ ನದಿಯಲಿ ಕಾರುಣಿಕ ಸುಸ್ನಾನ ನಿಜ ಪರಿವಾರ ಸಹಿತದಿ ಮಾಡಿ

ಹರಿ ಉದರ ಪ್ರವೇಶಿಸುವ//39//


ವಾಸುದೇವನ ಉದರದಲಿ ಪ್ರವೇಶಗೈದ ಅನಂತರದಿ

ನಿರ್ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ

ಮೇಶನಿಂದ ಆಜ್ಞವ ಪಡೆದು ಅನಂತಾಸನ ಸೀತದ್ವೀಪ ಮೋಕ್ಷದಿ ವಾಸವಾಗಿ

ವಿಮುಕ್ತ ದುಃಖರು ಸಂಚರಿಸುತಿಹರು//40//


ಸತ್ವ ಸತ್ವ ಮಹಾ ಸುಸೂಕ್ಷಮು ಸತ್ವ ಸತ್ವಾತ್ಮಕ ಕಳೇವರ

ಸತ್ಯಲೋಕಾಧಿಪನು ಎನಿಪಗೆ ಅತ್ಯಲ್ಪವು ಎರಡು ಗುಣ

ಮುಕ್ತ ಭೋಗ್ಯವಿದಲ್ಲ ಅಜಾಂಡ ಉತ್ಪತ್ತಿ ಕಾರಣವಲ್ಲ

ಹರಿ ಪ್ರೀತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು//41//


ಪಾದ ನ್ಯೂನ ಶತಾಬ್ದ ಪರ್ಯಂತ ಓದಿ ಉಗ್ರತಪ ಅಹ್ವಯದಿ ಲವಣ ಉದಧಿಯೊಳಗೆ

ಕಲ್ಪದಶ ತಪವಿದ್ದ ಅನಂತರದಿ

ಸಾಧಿಸಿದ ಮಹದೇವ ಪದವ ಆರೈದು ನವ ಕಲ್ಪ ಅವಸಾನಕೆ

ಐದುವನು ಶೇಷನ ಪದವ ಪಾರ್ವತಿ ಸಹಿತನಾಗಿ//42//


ಇಂದ್ರ ಮನು ದಶ ಕಲ್ಪಗಳಲಿ ಸುನಂದ ನಾಮದಿ ಶ್ರವಣಗೈದು

ಮುಕುಂದನ ಅಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು

ನೊಂದು ಪೊಗೆಯೊಳು ಕೋಟಿ ವರುಷ ಪುರಂದರನದನುಂಡ ಅನಂತರ

ಪೊಂದಿದನು ನಿಜ ಲೋಕ ಸುರಪತಿ ಕಾಮನಿದರಂತೆ//43//


ಕರೆಸುವರು ಪೂರ್ವದಲಿ ಚಂದ್ರಾರ್ಕರು ಅತಿ ಶಾಂತ ಸುರೂಪ ನಾಮದಿ

ಎರಡೆರೆಡು ಮನು ಕಲ್ಪ ಶ್ರವಣಗೈದು

ಮನು ಕಲ್ಪ ವರ ತಪೋ ಬಲದಿಂದ ಅರ್ವಾಕ್ ಶಿರಗಳಾಗಿ ಈರೈದು ಸಾವಿರ ವರುಷ

ದುಃಖವನೀಗಿ ಕಾಂಬರು ಬಿಂಬ ರೂಪವನು//44//


ಸಾಧನಗಳ ಅಪರೋಕ್ಷ ಅನಂತರ ಐದುವರು ಮೋಕ್ಷವನು

ಶಿವ ಶಕ್ರಾದಿ ದಿವಿಜರು ಉಕ್ತ ಕ್ರಮದಿಂ ಕಲ್ಪ ಸಂಖ್ಯೆಯಲಿ

ಐದಲೆಗೆ ಐವತ್ತು ಉಪೇಂದ್ರ ಸಹೋದರನಿಗಿಪ್ಪತ್ತು

ದ್ವಿನವ ತ್ವಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು//45//


ಪ್ರವಹ ಮರುತಗೆ ಹನ್ನೆರಡು ಸೈಂಧವ ದಿವಾಕರ ಧರ್ಮರಿಗೆ ದಶ

ನವ ಸುಕಲ್ಪವು ಮಿತ್ರರಿಗೆ ಶೇಷ ಶತ ಜನರಿಗೆಂಟು

ಕವಿ ಸನಕ ಸುಸನಂದನ ಸನತ್ಕುವರ ಮುನಿಗಳಿಗೆ ಏಳು

ವರುಅನನ ಯುವತಿ ಪರ್ಜನ್ಯಾದಿ ಪುಷ್ಕರಗೆ ಆರು ಕಲ್ಪದಲಿ//46//


ಐದು ಕರ್ಮಜ ಸುರರಿಗೆ ಆಜಾನಾದಿಗಳಿಗೆ ಎರಡೆರೆಡು ಕಲ್ಪ

ಅರ್ಧಾಧಿಕ ತ್ರಯ ಗೋಪಿಕಾ ಸ್ತ್ರೀಯರಿಗೆ ಪಿತೃ ತ್ರಯವು

ಈ ದಿವೌಕಸ ಮನುಜ ಗಾಯಕರು ಐದುವರು ಎರಡೊಂದು ಕಲ್ಪ

ನರಾಧಿಪರಿಗೆ ಅರೆ ಕಲ್ಪದೊಳಗೆ ಅಪರೋಕ್ಷವು ಇರುತಿಹುದು//47//


ದೀಪಗಳ ಅನುಸರಿಸಿ ದೀಪ್ತಿಯು ವ್ಯಾಪಿಸಿ ಮಹಾತಿಮಿರ ಕಳೆದು

ಪರೋಪಕಾರವ ಮಾಳ್ಪ ತೆರದಂದದಲಿ ಪರಮಾತ್ಮ

ಆ ಪಯೋಜಾಸನನೊಳಗಿದ್ದು ಸ್ವರೂಪ ಶಕ್ತಿಯ ವ್ಯಕ್ತಿಗೈಸುತ

ತಾ ಪೊಳೆವನು ಅವರಂತೆ ಚೇಷ್ಟೆಯ ಮಾಡಿ ಮಾಡಿಸುವ//48//


ಸ್ವೋದರಸ್ಥಿತ ಪ್ರಾಣ ರುದ್ರ ಇಂದ್ರಾದಿ ಸುರರಿಗೆ ದೇಹಗಳ ಕೊಟ್ಟು

ಆದರದಿ ಅವರವರ ಸೇವೆಯ ಕೊಂಬನು ಅನವರತ

ಮೋದ ಬೋಧ ದಯಾಬ್ಧಿ ತನ್ನವರಾಧಿ ರೋಗವ ಕಳೆದು

ಮಹಾದಪರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ//49//


ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ ಸ್ಥಿತಿ ಲಯವ ಮಾಡುತಲೆ ಮೋದಿಪ

ಚತುರಮುಖ ಪವಮಾನರ ಅನ್ನವ ಮಾಡಿ ಭುಂಜಿಸುವ

ಘೃತವೆ ಮೃತ್ಯುಂಜಯನೆನಿಪ ದೇವತೆಗಳೆಲ್ಲ ಉಪಸೇಚನರು

ಶ್ರೀಪತಿಗೆ ಮೂರ್ಜಗವೆಲ್ಲ ಓದನ ಅತಿಥಿಯೆನಿಸಿಕೊಂಬ//50//


ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಲಿ

ನಿರ್ಭಯನು ತಾನುಂಡು ಉಣಿಸುವನು ಸರ್ವ ಜೀವರಿಗೆ

ನಿರ್ಬಲಾತಿ ಪರಮಾಣು ಜೀವಗೆ ಅಬ್ಬುವದೆ ಸ್ಥೂಲಾನ್ನ ಭೋಜನ

ಅರ್ಭಕರು ಪೇಳುವರು ಕೋವಿದರು ಇದನ ಒಡಂಬಡರು//51//


ಅಪಚಯಗಳಿಲ್ಲ ಉಂಡುದುದರಿಂದ ಉಪಚಯಗಳಿಲ್ಲ

ಅಮರಗಣದೊಳಗೆ ಉಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ

ಅಪರಿಮಿತ ಸನ್ಮಹಿಮ ಭಕ್ತರ ಅಪುನರಾವರ್ತರನು ಮಾಡುವ

ಕೃಪಣ ವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ//52//


ಬಿತ್ತಿ ಬೀಜವು ಭೂಮಿಯೊಳು ನೀರೆತ್ತಿ ಬೆಳೆಸಿದ ಬೆಳಸು ಪ್ರಾಂತಕೆ

ಕಿತ್ತಿ ಮೆಲುವಂದದಲಿ ಲಕ್ಷ್ಮೀ ರಮಣ ಲೋಕಗಳ ಮತ್ತೆ ಜೀವರ

ಕರ್ಮ ಕಾಲೋತ್ಪತ್ತಿ ಸ್ಥಿತಿ ಲಯ ಮಾಡುತಲಿ

ಸಮವರ್ತಿಯೆನಿಸುವ ಖೇದ ಮೋದಗಳು ಇಲ್ಲ ಅನವರತ//53//


ಶ್ವಸನ ರುದ್ರ ಇಂದ್ರ ಪ್ರಮುಖ ಸುಮನಸರೊಳಿದ್ದರು

ಕ್ಷುತ್ಪಿಪಾಸಗಳು ವಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ

ಅಸುರ ಪ್ರೇತ ಪಿಶಾಚಿಗಳ ಭಾದಿಸುತಲಿಪ್ಪವು

ದಿನದಿನದಿ ಮಾನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು//54//


ವಾಸುದೇವಗೆ ಸ್ವಪ್ನಸುಪ್ತಿಪಿಪಾಸ ಕ್ಷುತ್ ಭಯ ಶೋಕ ಮೋಹ ಆಯಾಸ ಅಪಸ್ಮೃತಿ

ಮಾತ್ಸರ್ಯ ಮದ ಪುಣ್ಯ ಪಾಪಾದಿ ದೋಷ ವರ್ಜಿತನೆಂದು

ಬ್ರಹ್ಮ ಸದಾಶಿವಾದಿ ಸಮಸ್ತ ದಿವಿಜರು ಉಪಾಸನೆಯಗೈದು

ಎಲ್ಲ ಕಾಲದಿ ಮುಕ್ತರಾಗಿಹರು//55//


ಪರಮ ಸೂಕ್ಷ್ಮ ಕ್ಷಣವು ಐದು ತ್ರುಟಿ ಕರೆಸುವದು ಐವತ್ತು ತ್ರುಟಿ ಲವ

ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರ

ಯುಗ ಗುರು ದಶ ಪ್ರಾಣರು ಪಳ ಹನ್ನೆರಡು ಬಾಣವು

ಘಟಿಕ ತ್ರಿಂಶತಿ ಇರುಳು ಹಗಲು ಅರವತ್ತು ಘಟಿಕಗಳು ಅಹೊರಾತ್ರಿಗಳು//56//


ಈ ದಿವಾರಾತ್ರಿಗಳು ಎರಡು ಹದಿನೈದು ಪಕ್ಷಗಳು

ಎರಡು ಮಾಸಗಳು ಆದಪವು ಮಾಸ ದ್ವಯವೆ ಋತು ಋತುತ್ರಯಗಳು ಅಯನ

ಐದುವದು ಅಯನದ್ವಯಾಬ್ದ ಕೃತಾದಿ ಯುಗಗಳು

ದೇವ ಮಾನದಿ ದ್ವಾದಶ ಸಹಸ್ರ ವರುಷಗಳು ಅದನು ಪೇಳುವೆನು//57//


ಚತುರ ಸಾವಿರದ ಎಂಟು ನೂರಿವು ಕೃತ ಯುಗಕೆ

ಸಹಸ್ರ ಸಲೆ ಷಟ್ ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು

ದಿತಿಜಪತಿ ಕಲಿಯುಗಕೆ ಸಾವಿರ ಶತ ದ್ವಯಗಳು ಕೂಡಿ

ಈ ದೇವತೆಗಳಿಗೆ ಹನ್ನೆರಡು ಸಾವಿರ ವಿಹವು ವರ್ಷಗಳು//58//


ಪ್ರಥಮ ಯುಗಕೆ ಏಳಧಿಕ ಅರೆ ವಿಂಶತಿ ಸುಲಕ್ಷಾಷ್ಟೋತ್ತರ

ಸುವಿಂಶತಿ ಸಹಸ್ರ ಮನುಷ್ಯ ಮಾನಾಬ್ದಗಳು

ಷಣ್ಣವತಿ ಮಿತ ಸಹಸ್ರದ ಲಕ್ಷ ದ್ವಾದಶ ದ್ವಿತೀಯ

ತೃತೀಯಕೆ ಎಂಟು ಲಕ್ಷದ ಚತುರ ಷಷ್ಠಿ ಸಹಸ್ರ ಕಾಲಿಗೆ ಇದರರ್ಧ ಚಿಂತಿಪುದು//59//


ಮೂರಧಿಕ ನಾಲ್ವತ್ತು ಲಕ್ಷದ ಆರು ಮೂರೆರೆಡಧಿಕ ಸಾವಿರ

ಈರೆರೆಡು ಯುಗ ವರುಷ ಸಂಖ್ಯೆಗೈಯಲು ಇನಿತಿಹುದೊ

ಸೂರಿ ಪೆಚ್ಚಿಸೆ ಸಾವಿರದ ನಾನೂರು ಮೂವತ್ತೆರೆಡು ಕೋಟಿ

ಸರೋರುಹಾಸನಗೆ ಇದು ದಿವಸವು ಎಂಬರು ವಿಪಶ್ಚಿತರು//60//


ಶತಧೃತಿಗೆ ಈ ದಿವಸಗಳು ತ್ರಿಂಶತಿಯು ಮಾಸ ದ್ವಾದಶಾಬ್ದವು

ಶತವು ಎರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿ ಲಯವು

ಶೃತಿ ಸ್ಮೃತಿಗಳು ಪೇಳುತಿಹವು ಅಚ್ಯುತಗೆ ನಿಮಿಷವಿದೆಂದು

ಸುಖ ಶಾಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು//61//


ಆದಿ ಮಧ್ಯಾಂತರಗಳಿಲ್ಲದ ಮಾಧವಗಿದು ಉಪಚಾರವೆಂದು

ಋಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ

ಮೋದಮಯನ ಅನುಗ್ರಹವ ಸಂಪಾದಿಸಿ ರಮಾ ಬ್ರಹ್ಮ ರುದ್ರ ಇಂದ್ರಾದಿಗಳು

ತಮ್ಮ ತಮ್ಮ ಪದವಿಯನು ಐದಿ ಸುಖಿಸುವರು//62//


ಈ ಕಥಾಮೃತ ಪಾನ ಸುಖ ಸುವಿವೇಕಿಗಳಿಗಲ್ಲದಲೆ

ವೈಷಿಕ ವ್ಯಾಕುಲ ಕುಚಿತ್ತರಿಗೆ ದೊರೆವುದಾವ ಕಾಲದಲಿ

ಲೋಕ ವಾರ್ತೆಯ ಬಿಟ್ಟು ಇದನವಲೋಕಿಸುತ ಮೋದಿಪರಿಗೊಲಿದು

ಕೃಪಾಕರ ಜಗನ್ನಾಥ ವಿಠಲ ಪೊರೆವನು ಅನುದಿನದಿ//63//