ಹರಿಕಥಾಮೃತಸಾರ/ಕಲ್ಪಸಾಧನ ಸಂಧಿ (ಅಪರೋಕ್ಷ ತಾರತಮ್ಯ)

ವಿಕಿಸೋರ್ಸ್ದಿಂದ

ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ

ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ

ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ

ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ//1//


ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ

ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು

ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ

ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು//2//


ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು

ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು

ತನು ಪ್ರತೀಕದಿ ಬಿಂಬನ ಉಪಾಸನವಗೈಯುತ ಇಂದ್ರಿಯಜ ಕರ್ಮ

ಅನವರತ ಹರಿಗೆ ಅರ್ಪಿಸುತ ನಿರ್ಮಮರುಯೆನಿಸುವರು//3//


ಏಳುವಿಧ ಜೀವ ಗಣ ಬಹಳ ಸುರಾಳಿ ಸಂಖ್ಯಾ ನೇಮವುಳ್ಳದು

ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ

ಸ್ಥೂಲ ಕರ್ಮವ ತೊರೆದು ಗುರುಗಳು ಪೇಳಿದ ಅರ್ಥವ ತಿಳಿದು

ತತ್ತತ್ಕಾಲ ಧರ್ಮ ಸಮರ್ಪಿಸುವ ಅವರು ಕರ್ಮ ಯೋಗಿಗಳು//4//


ಹೀನ ಕರ್ಮಗಳಿಂದ ಬಹುವಿಧ ಯೋನಿಯಲಿ ಸಂಚರಿಸಿ ಪ್ರಾಂತಕೆ

ಮಾನುಷತ್ವವನೈದಿ ಸರ್ವೋತ್ತಮನು ಹರಿಯೆಂಬ

ಜ್ಞಾನ ಭಕ್ತಿಗಳಿಂದ ವೇದೋಕ್ತ ಅನುಸಾರ ಸಹಸ್ರಜನ್ಮ

ಅನ್ಯೂನ ಕರ್ಮವ ಮಾಡಿ ಹರಿಗರ್ಪಿಸಿದ ನಂತರದಿ//5//


ಹತ್ತು ಜನ್ಮಗಳಲಿ ಹರಿ ಸರ್ವೋತ್ತಮನು ಸುರಾಸುರ ಗಣಾರ್ಚಿತ

ಚಿತ್ರ ಕರ್ಮ ವಿಶೋಕ ಅನಂತಾನಂತ ರೂಪಾತ್ಮ

ಸತ್ಯ ಸತ್ಸಂಕಲ್ಪ ಜಗದೋತ್ಪತ್ತಿ ಸ್ಥಿತಿಲಯ ಕಾರಣ

ಜರಾಮೃತ್ಯು ವರ್ಜಿತನೆಂದು ಉಪಾಸನೆಗೈದ ತರುವಾಯ//6//


ಮೂರು ಜನ್ಮಗಳಲ್ಲಿ ದೇಹಾಗಾರ ಪಶು ಧನ ಪತ್ನಿ ಮಿತ್ರ

ಕುಮಾರ ಮಾತಾ ಪಿತೃಗಳಲ್ಲಿ ಇಹ ಸ್ನೇಹಗಿಂತ ಅಧಿಕ

ಮಾರಮಣನಲಿ ಬಿಡದೆ ಮಾಡುವ ಸೂರಿಗಳು ಈ ಉಕ್ತ ಜನ್ಮವ ಮೀರಿ

ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು//7//


ದೇವ ಗಾಯಕ ಅಜಾನ ಚಿರಪಿತೃ ದೇವರೆಲ್ಲರು

ಜ್ಞಾನ ಯೋಗಿಗಳು ಆವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ದೇವಿ

ಬುಧಸನಕಾದಿಗಳು ಮೇಘಾವಳಿ ಪರ್ಜನ್ಯ ಸಾಂಶರು

ಈ ಉಭಯ ಗಣದೊಳಗಿವರು ವಿಜ್ಞಾನ ಯೋಗಿಗಳು//8//


ಭರತ ಖಂಡದಿ ನೂರು ಜನ್ಮವ ಧರಿಸಿ ನಿಷ್ಕಾಮಕ ಸುಕರ್ಮ ಆಚರಿಸಿದ ಅನಂತರದಿ

ದಶ ಸಹಸ್ರ ಜನ್ಮದಲಿ ಉರುತರ ಜ್ಞಾನವನು

ಮೂರೈದು ಎರಡು ದಶ ದೇಹದಲಿ ಭಕ್ತಿಯ

ನಿರವಧಿಕನಲಿ ಮಾಡಿ ಕಾಂಬರು ಬಿಂಬ ರೂಪವನು//9//


ಸಾಧನಾತ್ಪೂರ್ವದಲಿ ಇವರಿಗೆ ಅನಾದಿ ಕಾಲ ಅಪರೋಕ್ಷವಿಲ್ಲ

ನಿಷೇಧ ಕರ್ಮಗಳಿಲ್ಲ ನರಕ ಪ್ರಾಪ್ತಿ ಮೊದಲಿಲ್ಲ

ವೇದ ಶಾಸ್ತ್ರಗಳಲ್ಲಿಪ್ಪ ವಿರೋಧ ವಾಕ್ಯವ ಪರಿಹರಿಸಿ

ಮಧುಸೂದನನೆ ಸರ್ವೋತ್ತಮೋತ್ತಮನು ಎಂದು ತುತಿಸುವರು//10//


ಸತ್ಯಲೋಕಾಧಿಪನ ವಿಡಿದು ಶತಸ್ಥ ದೇವಗಣ ಅಂತ ಎಲ್ಲರು

ಭಕ್ತಿ ಯೋಗಿಗಳೆಂದು ಕರೆಸುವರು ಆವ ಕಾಲದಲಿ

ಭಕ್ತಿ ಯೋಗ್ಯರ ಮಧ್ಯದಲಿ ಸದ್ಭಕ್ತಿ ವಿಜ್ಞಾನಾದಿ ಗುಣದಿಂದ ಉತ್ತಮ

ಉತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ//11//


ಋಜುಗಣಕೆ ಭಕ್ತಿ ಆದಿ ಗುಣ ಸಹಜವು ಎನಿಸುವವು

ಕ್ರಮದಿ ವೃದ್ಧಿ ಅಬ್ಜಜ ಪದವಿ ಪರ್ಯಂತ ಬಿಂಬ ಉಪಾಸನವು ಅಧಿಕ

ವೃಜಿನ ವರ್ಜಿತ ಎಲ್ಲರೊಳು ತ್ರಿಗುಣಜ ವಿಕಾರಗಳಿಲ್ಲವು ಎಂದಿಗು

ದ್ವಿಜಫಣಿಪ ಮೃಡ ಶಕ್ರ ಮೊದಲಾದ ಅವರೊಳು ಇರುತಿಹವು//12//


ಸಾಧನಾತ್ಪೂರ್ವದಲಿ ಈ ಋಜ್ವಾದಿ ಸಾತ್ವಿಕರು ಎನಿಪ ಸುರಗಣ

ಅನಾದಿ ಸಾಮಾನ್ಯ ಅಪರೋಕ್ಷಿಗಳೆಂದು ಕರೆಸುವರು

ಸಾಧನೋತ್ತರ ಸ್ವಸ್ವ ಬಿಂಬ ಉಪಾಧಿ ರಹಿತ ಆದಿತ್ಯನಂದದಿ

ಸಾದರದಿ ನೋಡುವರು ಅಧಿಕಾರ ಅನುಸಾರದಲಿ//13//


ಛಿನ್ನ ಭಕ್ತರು ಎನಿಸುತಿಹರು ಸುಪರ್ಣ ಶೇಷಾದಿ ಅಮರರರೆಲ್ಲ

ಅಚ್ಚಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ಸೊನ್ನೊಡಲ ವಾಗ್ದೇವಿಯರು

ಪಣೆಗಣ್ಣ ಮೊದಲಾದ ಅವರೊಳಗೆ ತತ್ತನ್ನಿಯಾಮಕರಾಗಿ

ವ್ಯಾಪಾರವನು ಮಾಡುವರು//14//


ಹೀನ ಸತ್ಕರ್ಮಗಳು ಎರಡು ಪವಮಾನ ದೇವನು ಮಾಳ್ಪನು

ಇದಕೆ ಅನುಮಾನವಿಲ್ಲ ಎಂದು ಎನುತ ದೃಢ ಭಕ್ತಿಯಲಿ ಭಜಿಪರ್ಗೆ

ಪ್ರಾಣಪತಿ ಸಂಪ್ರೀತನಾಗಿ ಕುಯೋನಿಗಳ ಕೊಡ

ಎಲ್ಲ ಕರ್ಮಗಳು ಆನೆ ಮಾಡುವೆನೆಂಬ ಮನುಜರ ನರಕಕೆ ಐದಿಸುವ//15//


ದೇವರ್ಷಿ ಪಿತೃಪ ನರರೆನಿಸುವ ಐವರೊಳು ನೆಲೆಸಿದ್ದು

ಅವರ ಸ್ವಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ

ಭಾವಿ ಬ್ರಹ್ಮನು ಕೂರ್ಮ ರೂಪದಿ ಈ ವಿರಿಂಚಿ ಅಂಡವನು ಬೆನ್ನಿಲಿ ತಾ ವಹಿಸಿ

ಲೋಕಗಳ ಪೊರೆವನು ದ್ವಿತೀಯ ರೂಪದಲಿ//16//


ಗುಪ್ತನಾಗಿದ್ದು ಅನಿಲ ದೇವ ದ್ವಿಸಪ್ತ ಲೋಕದ ಜೀವರೊಳಗೆ

ತ್ರಿಸಪ್ತ ಸಾವಿರದ ಆರುನೂರು ಶ್ವಾಸ ಜಪಗಳನು

ಸುಪ್ತಿಸ್ವಪ್ನದಿ ಜಾಗ್ರತಿಗಳಲಿ ಆಪ್ತನಂದದಿ ಮಾಡಿ ಮಾಡಿಸಿ

ಕ್ಲುಪ್ತ ಭೋಗಗಳೀವ ಪ್ರಾಂತಕೆ ತೃತೀಯ ರೂಪದಲಿ//17//


ಶುದ್ಧ ಸತ್ವಾತ್ಮಕ ಶರೀರದೊಳಿದ್ದ ಕಾಲಕು ಲಿಂಗದೇಹವು ಬದ್ಧವಾಗದು

ದಗ್ಧ ಪಟದೋಪಾದಿ ಇರುತಿಹುದು

ಸಿದ್ಧ ಸಾಧನ ಸರ್ವರೊಳಗೆ ಅನವದ್ಯನು ಎನಿಸುವ

ಗರುಡ ಶೇಷ ಕಪರ್ದಿ ಮೊದಲಾದ ಅಮರರೆಲ್ಲರು ದಾಸರೆನಿಸುವರು//18//


ಗಣದೊಳಗೆ ತಾನಿದ್ದು ಋಜುವೆಂದು ಎನಿಸಿಕೊಂಬನು

ಕಲ್ಪ ಶತ ಸಾಧನವಗೈದ ಅನಂತರದಿ ತಾ ಕಲ್ಕಿಯೆನಿಸುವನು

ದ್ವಿನವಾಶೀತಿಯ ಪ್ರಾಂತ ಭಾಗದಿ ಅನಿಲ ಹನುಮದ್ಭೀಮ ರೂಪದಿ

ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು//19//


ವಿಶ್ವವ್ಯಾಪಕ ಹರಿಗೆ ತಾ ಸಾದೃಶ್ಯ ರೂಪವ ಧರಿಸಿ

ಬ್ರಹ್ಮ ಸರಸ್ವತೀ ಭಾರತಿಗಳಿಂದ ಒಡಗೂಡಿ ಪವಮಾನ

ಶಾಶ್ವತ ಸುಭಕ್ತಿಯಲಿ ಸುಜ್ಞಾನ ಸ್ವರೂಪನ ರೂಪಗುಣಗಳ

ಅನಶ್ವರವೆಂದೆನುತ ಪೊಗಳುವ ಶ್ರುತಿಗಳೊಳಗಿದ್ದು//20//


ಖೇಟ ಕುಕ್ಕುಟ ಜಲಟವೆಂಬ ತ್ರಿಕೋಟಿ ರೂಪವ ಧರಿಸಿ

ಸತತ ನಿಶಾಟರನು ಸಂಹರಿಸಿ ಸಲಹುವ ಸರ್ವ ಸತ್ಜನರ

ಕೈಟಭಾರಿಯ ಪುರದ ಪ್ರಥಮ ಕವಾಟವೆನಿಸುವ

ಗರುಡ ಶೇಷ ಲಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ//21//


ಈ ಋಜುಗಳೊಳಗೊಬ್ಬ ಸಾಧನ ನೂರು ಕಲ್ಪದಿ ಮಾಡಿ ಕರೆಸುವ

ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ

ಸೂರಿಗಳು ಸಂಸ್ತುತಿಸಿ ವಂದಿಸೆ ಘೋರದುರಿತಗಳನು ಅಳಿದು ಪೋಪುವು

ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ//22//


ಪಾಹಿ ಕಲ್ಕಿಸುತೇಜದಾಸನೆ ಪಾಹಿ ಧರ್ಮಾಧರ್ಮ ಖಂಡನೆ

ಪಾಹಿ ವರ್ಚಸ್ವೀ ಖಷಣ ನಮೋ ಸಾಧು ಮಹೀಪತಿಯೆ

ಪಾಹಿ ಸದ್ಧರ್ಮಜ್ಞ ಧರ್ಮಜ ಪಾಹಿ ಸಂಪೂರ್ಣ ಶುಚಿ ವೈಕೃತ

ಪಾಹಿ ಅಂಜನ ಸರ್ಷಪನೆ ಖರ್ಪಟ: ಶ್ರದ್ಧಾಹ್ವ//23//


ಪಾಹಿ ಸಂಧ್ಯಾತ ವಿಜ್ಞಾನನೆ ಪಾಹಿ ಮಹ ವಿಜ್ಞಾನ ಕೀರ್ತನ

ಪಾಹಿ ಸಂಕೀರ್ಣಾಖ್ಯ ಕತ್ಥನ ಮಹಾಬುದ್ಧಿ ಜಯಾ

ಪಾಹಿ ಮಾಹತ್ತರ ಸುವೀರ್ಯನೆ ಪಾಹಿಮಾಂ ಮೇಧಾವಿ ಜಯಾಜಯ

ಪಾಹಿಮಾಂ ರಂತಿಮ್ನಮನು ಮಾಂ ಪಾಹಿ ಮಾಂ ಪಾಹಿ//24//


ಪಾಹಿ ಮೋದ ಪ್ರಮೋದ ಸಂತಸ ಪಾಹಿ ಆನಂದ ಸಂತುಷ್ಟನೆ

ಪಾಹಿಮಾಂ ಚಾರ್ವಾಂಗಚಾರು ಸುಬಾಹುಚಾರು ಪದ

ಪಾಹಿ ಪಾಹಿ ಸುಲೋಚನನೆ ಮಾಂ ಪಾಹಿ ಸಾರಸ್ವತ ಸುವೀರನೆ

ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ//25//


ಪಾಹಿಮಾಂ ಸರ್ವಜಿತ್ ಮಿತ್ರನೆ ಪಾಹಿ ಪಾಪ ವಿನಾಶಕನೆ

ಮಾಂ ಪಾಹಿ ಧರ್ಮವಿನೇತ ಶಾರದ ಓಜ ಸುತಪಸ್ವೀ

ಪಾಹಿಮಾಂ ತೇಜಸ್ವಿ ನಮೋ ಮಾಂ ಪಾಹಿ ದಾನ ಸುಶೀಲ

ನಮೋ ಮಾಂ ಪಾಹಿ ಯಜ್ಞ ಸುಕರ್ತ ಯಜ್ವೀ ಯಾಗ ವರ್ತಕನೆ//26//


ಪಾಹಿ ಪ್ರಾಣ ತ್ರಾಣ ಅಮರ್ಷಿ ಪಾಹಿಮಾಂ ಉಪದೇಷ್ಟ ತಾರಕ

ಪಾಹಿ ಕಾಲ ಕ್ರೀಡನ ಸುಕರ್ತಾ ಸುಕಾಲಜ್ಞ

ಪಾಹಿ ಕಾಲ ಸುಸೂಚಕನೆ ಮಾಂ ಪಾಹಿ ಕಲಿ ಸಂಹರ್ತಕಲಿ

ಮಾಂ ಪಾಹಿ ಕಾಲಿಶಾಮರೇತ ಸದಾರತ ಸುಬಲನೆ//27//


ಪಾಹಿ ಪಾಹಿ ಸಹೋ ಸದಾಕಪಿ ಪಾಹಿ ಗಮ್ಯ ಜ್ಞಾನ ದಶಕುಲ

ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ

ಪಾಹಿಮಾಂ ಮಂತವ್ಯಕವ್ಯನೆ ಪಾಹಿ ದ್ರಷ್ಟವ್ಯನೆ ಸರವ್ಯನೆ

ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ//28//


ಪಾಹಿ ಸೇವ್ಯ ಸುಭವ್ಯ ನಮೋ ಮಾಂ ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ

ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ

ಪಾಹಿ ಮಂ ಲಾತವ್ಯವಾಯುವೆ ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ

ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ//29//


ವಾಮನ ಪುರಾಣದಲಿ ಪೇಳಿದ ಈ ಮಹಾತ್ಮರ ಪರಮ ಮಂಗಳ ನಾಮಗಳ

ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ

ಶ್ರೀ ಮನೋರಮ ಅವರು ಬೇಡಿದ ಕಾಮಿತಾರ್ಥಗಳಿತ್ತು

ತನ್ನ ತ್ರಿಧಾಮದೊಳಗೆ ಅನುದಿನದಲಿಟ್ಟು ಆನಂದ ಪಡಿಸುವನು//30//


ಈ ಸಮೀರಗೆ ನೂರು ಜನ್ಮ ಮಹಾ ಸುಖ ಪ್ರಾರಬ್ಧ ಭೋಗ

ಪ್ರಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು

ಭೂಸುರನ ಒಪ್ಪಿಡಿ ಅವಲಿಗೆ ವಿಶೇಷ ಸೌಖ್ಯವನಿತ್ತ ದಾತನ

ದಾಸವರ್ಯನು ಲೋಕಪತಿಯೆನಿಸುವುದು ಅಚ್ಚರವೆ//31//


ದ್ವಿಶತ ಕಲ್ಪಗಳಲ್ಲಿ ಬಿಡದೆ ಈ ಪೆಸರಿನಿಂದಲಿ ಕರೆಸಿದನು

ತನ್ನೊಶಗ ಅಮರರೊಳಿದ್ದು ಮಾಡುವನು ಅವರ ಸಾಧನವ

ಅಸದುಪಾಸನೆಗೈವ ಕಲ್ಯಾದಿ ಅಸುರಪರ ಸಂಹರಿಸಿ

ತಾ ಪೊಂಬಸಿರ ಪದವೈದಿದನು ಗುರು ಪವಮಾನ ಸತಿಯೊಡನೆ//32//


ಅನಿಮಿಷರ ನಾಮದಲಿ ಕರೆಸುವ ಅನಿಲದೇವನು

ಒಂದು ಕಲ್ಪಕೆ ವನಜ ಸಂಭವನೆನಿಸಿ ಎಂಭತ್ತೇಳೂವರೆ ವರ್ಷ

ಗುಣತ್ರಯ ವರ್ಜಿತನ ಮಂಗಳ ಗುಣ ಕ್ರಿಯಾ ಸುರೂಪಂಗಳ

ಉಪಾಸನವು ಅವ್ಯಕ್ತಾದಿ ಪೃಥ್ವಿ ಅಂತರದಿರುತಿಹುದು//33//


ಮಹಿತ ಋಜುಗಣಕೆ ಒಂದೇ ಪರಮೋತ್ಸಾಹ ವಿವರ್ಜಿತವೆಂಬ ದೋಷವು

ವಿಹಿತವೆ ಸರಿ ಇದನು ಪೇಳ್ದಿರೆ ಮುಕ್ತ ಬ್ರಹ್ಮರಿಗೆ ಬಹುದು ಸಾಮ್ಯವು

ಜ್ಞಾನ ಭಕುತಿಯು ದ್ರುಹಿಣ ಪದ ಪರ್ಯಂತ ವೃದ್ಧಿಯು

ಬಹಿರುಪಾಸನೆ ಉಂಟು ಅನಂತರ ಬಿಂಬ ದರ್ಶನವು//34//


ಜ್ಞಾನರಹಿತ ಭಯತ್ವ ಪೇಳ್ವ ಪುರಾಣ ದೈತ್ಯರ ಮೋಹಕವು

ಚತುರಾನನಗೆ ಕೊಡುವದೆ ಮೋಹಾಜ್ಞಾನ ಭಯ ಶೋಕ

ಭಾನುಮಂಡಲ ಚಲಿಸಿದಂದದಿ ಕಾಣುವುದು ದೃಗ್ ದೋಷದಿಂದಲಿ

ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ//35//


ಕಮಲಸಂಭವ ಸರ್ವರೊಳಗುತ್ತಮನೆನಿಸುವನು ಎಲ್ಲ ಕಾಲದಿ

ವಿಮಲ ಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ

ಸಮಾಭ್ಯಧಿಕ ವಿವರ್ಜಿತನ ಗುಣ ರಮೆಯ ಮುಖದಿಂದರಿತು ನಿತ್ಯದಿ

ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬ ರೂಪವನು//36//


ಜ್ಞಾನ ಭಕ್ತಾದಿ ಅಖಿಳ ಗುಣ ಚತುರಾನನೊಳಗಿಪ್ಪಂತೆ

ಮುಖ್ಯಾ ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ ಕೊರತೆಯಾಗಿ

ನ್ಯೂನ ಋಜು ಗಣ ಜೀವರಲ್ಲಿ ಕ್ರಮೇಣ ವೃದ್ಧಿ ಜ್ಞಾನ ಭಕ್ತಿ

ಸಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಾಧಿಕ//37//


ಸೌರಿ ಸೂರ್ಯನ ತೆರದಿ ಬ್ರಹ್ಮಸಮೀರ ಗಾಯತ್ರೀ ಗಿರಿಗಳೊಳು

ತೋರುವುದು ಅಸ್ಪಷ್ಟ ರೂಪದಿ ಮುಕ್ತಿ ಪರ್ಯಂತ

ವಾರಿಜಾಸನ ವಾಯು ವಾಣೀ ಭಾರತಿಗಳಿಗೆ ಮಹಾ ಪ್ರಳಯದಿ ಬಾರದು

ಅಜ್ಞಾನಾದಿ ದೋಷವು ಹರಿ ಕೃಪಾ ಬಲದಿ//38//


ನೂರು ವರುಷ ಅನಂತರದಲಿ ಸರೋರುಹಾಸನ ತನ್ನ ಕಲ್ಪದಲಿ

ಆರು ಮುಕ್ತಿಯನು ಐದುವರೊ ಅವರವರ ಕರೆದೊಯ್ದು

ಶೌರಿ ಪುರುದೊಳಗಿಪ್ಪ ನದಿಯಲಿ ಕಾರುಣಿಕ ಸುಸ್ನಾನ ನಿಜ ಪರಿವಾರ ಸಹಿತದಿ ಮಾಡಿ

ಹರಿ ಉದರ ಪ್ರವೇಶಿಸುವ//39//


ವಾಸುದೇವನ ಉದರದಲಿ ಪ್ರವೇಶಗೈದ ಅನಂತರದಿ

ನಿರ್ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ

ಮೇಶನಿಂದ ಆಜ್ಞವ ಪಡೆದು ಅನಂತಾಸನ ಸೀತದ್ವೀಪ ಮೋಕ್ಷದಿ ವಾಸವಾಗಿ

ವಿಮುಕ್ತ ದುಃಖರು ಸಂಚರಿಸುತಿಹರು//40//


ಸತ್ವ ಸತ್ವ ಮಹಾ ಸುಸೂಕ್ಷಮು ಸತ್ವ ಸತ್ವಾತ್ಮಕ ಕಳೇವರ

ಸತ್ಯಲೋಕಾಧಿಪನು ಎನಿಪಗೆ ಅತ್ಯಲ್ಪವು ಎರಡು ಗುಣ

ಮುಕ್ತ ಭೋಗ್ಯವಿದಲ್ಲ ಅಜಾಂಡ ಉತ್ಪತ್ತಿ ಕಾರಣವಲ್ಲ

ಹರಿ ಪ್ರೀತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು//41//


ಪಾದ ನ್ಯೂನ ಶತಾಬ್ದ ಪರ್ಯಂತ ಓದಿ ಉಗ್ರತಪ ಅಹ್ವಯದಿ ಲವಣ ಉದಧಿಯೊಳಗೆ

ಕಲ್ಪದಶ ತಪವಿದ್ದ ಅನಂತರದಿ

ಸಾಧಿಸಿದ ಮಹದೇವ ಪದವ ಆರೈದು ನವ ಕಲ್ಪ ಅವಸಾನಕೆ

ಐದುವನು ಶೇಷನ ಪದವ ಪಾರ್ವತಿ ಸಹಿತನಾಗಿ//42//


ಇಂದ್ರ ಮನು ದಶ ಕಲ್ಪಗಳಲಿ ಸುನಂದ ನಾಮದಿ ಶ್ರವಣಗೈದು

ಮುಕುಂದನ ಅಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು

ನೊಂದು ಪೊಗೆಯೊಳು ಕೋಟಿ ವರುಷ ಪುರಂದರನದನುಂಡ ಅನಂತರ

ಪೊಂದಿದನು ನಿಜ ಲೋಕ ಸುರಪತಿ ಕಾಮನಿದರಂತೆ//43//


ಕರೆಸುವರು ಪೂರ್ವದಲಿ ಚಂದ್ರಾರ್ಕರು ಅತಿ ಶಾಂತ ಸುರೂಪ ನಾಮದಿ

ಎರಡೆರೆಡು ಮನು ಕಲ್ಪ ಶ್ರವಣಗೈದು

ಮನು ಕಲ್ಪ ವರ ತಪೋ ಬಲದಿಂದ ಅರ್ವಾಕ್ ಶಿರಗಳಾಗಿ ಈರೈದು ಸಾವಿರ ವರುಷ

ದುಃಖವನೀಗಿ ಕಾಂಬರು ಬಿಂಬ ರೂಪವನು//44//


ಸಾಧನಗಳ ಅಪರೋಕ್ಷ ಅನಂತರ ಐದುವರು ಮೋಕ್ಷವನು

ಶಿವ ಶಕ್ರಾದಿ ದಿವಿಜರು ಉಕ್ತ ಕ್ರಮದಿಂ ಕಲ್ಪ ಸಂಖ್ಯೆಯಲಿ

ಐದಲೆಗೆ ಐವತ್ತು ಉಪೇಂದ್ರ ಸಹೋದರನಿಗಿಪ್ಪತ್ತು

ದ್ವಿನವ ತ್ವಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು//45//


ಪ್ರವಹ ಮರುತಗೆ ಹನ್ನೆರಡು ಸೈಂಧವ ದಿವಾಕರ ಧರ್ಮರಿಗೆ ದಶ

ನವ ಸುಕಲ್ಪವು ಮಿತ್ರರಿಗೆ ಶೇಷ ಶತ ಜನರಿಗೆಂಟು

ಕವಿ ಸನಕ ಸುಸನಂದನ ಸನತ್ಕುವರ ಮುನಿಗಳಿಗೆ ಏಳು

ವರುಅನನ ಯುವತಿ ಪರ್ಜನ್ಯಾದಿ ಪುಷ್ಕರಗೆ ಆರು ಕಲ್ಪದಲಿ//46//


ಐದು ಕರ್ಮಜ ಸುರರಿಗೆ ಆಜಾನಾದಿಗಳಿಗೆ ಎರಡೆರೆಡು ಕಲ್ಪ

ಅರ್ಧಾಧಿಕ ತ್ರಯ ಗೋಪಿಕಾ ಸ್ತ್ರೀಯರಿಗೆ ಪಿತೃ ತ್ರಯವು

ಈ ದಿವೌಕಸ ಮನುಜ ಗಾಯಕರು ಐದುವರು ಎರಡೊಂದು ಕಲ್ಪ

ನರಾಧಿಪರಿಗೆ ಅರೆ ಕಲ್ಪದೊಳಗೆ ಅಪರೋಕ್ಷವು ಇರುತಿಹುದು//47//


ದೀಪಗಳ ಅನುಸರಿಸಿ ದೀಪ್ತಿಯು ವ್ಯಾಪಿಸಿ ಮಹಾತಿಮಿರ ಕಳೆದು

ಪರೋಪಕಾರವ ಮಾಳ್ಪ ತೆರದಂದದಲಿ ಪರಮಾತ್ಮ

ಆ ಪಯೋಜಾಸನನೊಳಗಿದ್ದು ಸ್ವರೂಪ ಶಕ್ತಿಯ ವ್ಯಕ್ತಿಗೈಸುತ

ತಾ ಪೊಳೆವನು ಅವರಂತೆ ಚೇಷ್ಟೆಯ ಮಾಡಿ ಮಾಡಿಸುವ//48//


ಸ್ವೋದರಸ್ಥಿತ ಪ್ರಾಣ ರುದ್ರ ಇಂದ್ರಾದಿ ಸುರರಿಗೆ ದೇಹಗಳ ಕೊಟ್ಟು

ಆದರದಿ ಅವರವರ ಸೇವೆಯ ಕೊಂಬನು ಅನವರತ

ಮೋದ ಬೋಧ ದಯಾಬ್ಧಿ ತನ್ನವರಾಧಿ ರೋಗವ ಕಳೆದು

ಮಹಾದಪರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ//49//


ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ ಸ್ಥಿತಿ ಲಯವ ಮಾಡುತಲೆ ಮೋದಿಪ

ಚತುರಮುಖ ಪವಮಾನರ ಅನ್ನವ ಮಾಡಿ ಭುಂಜಿಸುವ

ಘೃತವೆ ಮೃತ್ಯುಂಜಯನೆನಿಪ ದೇವತೆಗಳೆಲ್ಲ ಉಪಸೇಚನರು

ಶ್ರೀಪತಿಗೆ ಮೂರ್ಜಗವೆಲ್ಲ ಓದನ ಅತಿಥಿಯೆನಿಸಿಕೊಂಬ//50//


ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಲಿ

ನಿರ್ಭಯನು ತಾನುಂಡು ಉಣಿಸುವನು ಸರ್ವ ಜೀವರಿಗೆ

ನಿರ್ಬಲಾತಿ ಪರಮಾಣು ಜೀವಗೆ ಅಬ್ಬುವದೆ ಸ್ಥೂಲಾನ್ನ ಭೋಜನ

ಅರ್ಭಕರು ಪೇಳುವರು ಕೋವಿದರು ಇದನ ಒಡಂಬಡರು//51//


ಅಪಚಯಗಳಿಲ್ಲ ಉಂಡುದುದರಿಂದ ಉಪಚಯಗಳಿಲ್ಲ

ಅಮರಗಣದೊಳಗೆ ಉಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ

ಅಪರಿಮಿತ ಸನ್ಮಹಿಮ ಭಕ್ತರ ಅಪುನರಾವರ್ತರನು ಮಾಡುವ

ಕೃಪಣ ವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ//52//


ಬಿತ್ತಿ ಬೀಜವು ಭೂಮಿಯೊಳು ನೀರೆತ್ತಿ ಬೆಳೆಸಿದ ಬೆಳಸು ಪ್ರಾಂತಕೆ

ಕಿತ್ತಿ ಮೆಲುವಂದದಲಿ ಲಕ್ಷ್ಮೀ ರಮಣ ಲೋಕಗಳ ಮತ್ತೆ ಜೀವರ

ಕರ್ಮ ಕಾಲೋತ್ಪತ್ತಿ ಸ್ಥಿತಿ ಲಯ ಮಾಡುತಲಿ

ಸಮವರ್ತಿಯೆನಿಸುವ ಖೇದ ಮೋದಗಳು ಇಲ್ಲ ಅನವರತ//53//


ಶ್ವಸನ ರುದ್ರ ಇಂದ್ರ ಪ್ರಮುಖ ಸುಮನಸರೊಳಿದ್ದರು

ಕ್ಷುತ್ಪಿಪಾಸಗಳು ವಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ

ಅಸುರ ಪ್ರೇತ ಪಿಶಾಚಿಗಳ ಭಾದಿಸುತಲಿಪ್ಪವು

ದಿನದಿನದಿ ಮಾನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು//54//


ವಾಸುದೇವಗೆ ಸ್ವಪ್ನಸುಪ್ತಿಪಿಪಾಸ ಕ್ಷುತ್ ಭಯ ಶೋಕ ಮೋಹ ಆಯಾಸ ಅಪಸ್ಮೃತಿ

ಮಾತ್ಸರ್ಯ ಮದ ಪುಣ್ಯ ಪಾಪಾದಿ ದೋಷ ವರ್ಜಿತನೆಂದು

ಬ್ರಹ್ಮ ಸದಾಶಿವಾದಿ ಸಮಸ್ತ ದಿವಿಜರು ಉಪಾಸನೆಯಗೈದು

ಎಲ್ಲ ಕಾಲದಿ ಮುಕ್ತರಾಗಿಹರು//55//


ಪರಮ ಸೂಕ್ಷ್ಮ ಕ್ಷಣವು ಐದು ತ್ರುಟಿ ಕರೆಸುವದು ಐವತ್ತು ತ್ರುಟಿ ಲವ

ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರ

ಯುಗ ಗುರು ದಶ ಪ್ರಾಣರು ಪಳ ಹನ್ನೆರಡು ಬಾಣವು

ಘಟಿಕ ತ್ರಿಂಶತಿ ಇರುಳು ಹಗಲು ಅರವತ್ತು ಘಟಿಕಗಳು ಅಹೊರಾತ್ರಿಗಳು//56//


ಈ ದಿವಾರಾತ್ರಿಗಳು ಎರಡು ಹದಿನೈದು ಪಕ್ಷಗಳು

ಎರಡು ಮಾಸಗಳು ಆದಪವು ಮಾಸ ದ್ವಯವೆ ಋತು ಋತುತ್ರಯಗಳು ಅಯನ

ಐದುವದು ಅಯನದ್ವಯಾಬ್ದ ಕೃತಾದಿ ಯುಗಗಳು

ದೇವ ಮಾನದಿ ದ್ವಾದಶ ಸಹಸ್ರ ವರುಷಗಳು ಅದನು ಪೇಳುವೆನು//57//


ಚತುರ ಸಾವಿರದ ಎಂಟು ನೂರಿವು ಕೃತ ಯುಗಕೆ

ಸಹಸ್ರ ಸಲೆ ಷಟ್ ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು

ದಿತಿಜಪತಿ ಕಲಿಯುಗಕೆ ಸಾವಿರ ಶತ ದ್ವಯಗಳು ಕೂಡಿ

ಈ ದೇವತೆಗಳಿಗೆ ಹನ್ನೆರಡು ಸಾವಿರ ವಿಹವು ವರ್ಷಗಳು//58//


ಪ್ರಥಮ ಯುಗಕೆ ಏಳಧಿಕ ಅರೆ ವಿಂಶತಿ ಸುಲಕ್ಷಾಷ್ಟೋತ್ತರ

ಸುವಿಂಶತಿ ಸಹಸ್ರ ಮನುಷ್ಯ ಮಾನಾಬ್ದಗಳು

ಷಣ್ಣವತಿ ಮಿತ ಸಹಸ್ರದ ಲಕ್ಷ ದ್ವಾದಶ ದ್ವಿತೀಯ

ತೃತೀಯಕೆ ಎಂಟು ಲಕ್ಷದ ಚತುರ ಷಷ್ಠಿ ಸಹಸ್ರ ಕಾಲಿಗೆ ಇದರರ್ಧ ಚಿಂತಿಪುದು//59//


ಮೂರಧಿಕ ನಾಲ್ವತ್ತು ಲಕ್ಷದ ಆರು ಮೂರೆರೆಡಧಿಕ ಸಾವಿರ

ಈರೆರೆಡು ಯುಗ ವರುಷ ಸಂಖ್ಯೆಗೈಯಲು ಇನಿತಿಹುದೊ

ಸೂರಿ ಪೆಚ್ಚಿಸೆ ಸಾವಿರದ ನಾನೂರು ಮೂವತ್ತೆರೆಡು ಕೋಟಿ

ಸರೋರುಹಾಸನಗೆ ಇದು ದಿವಸವು ಎಂಬರು ವಿಪಶ್ಚಿತರು//60//


ಶತಧೃತಿಗೆ ಈ ದಿವಸಗಳು ತ್ರಿಂಶತಿಯು ಮಾಸ ದ್ವಾದಶಾಬ್ದವು

ಶತವು ಎರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿ ಲಯವು

ಶೃತಿ ಸ್ಮೃತಿಗಳು ಪೇಳುತಿಹವು ಅಚ್ಯುತಗೆ ನಿಮಿಷವಿದೆಂದು

ಸುಖ ಶಾಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು//61//


ಆದಿ ಮಧ್ಯಾಂತರಗಳಿಲ್ಲದ ಮಾಧವಗಿದು ಉಪಚಾರವೆಂದು

ಋಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ

ಮೋದಮಯನ ಅನುಗ್ರಹವ ಸಂಪಾದಿಸಿ ರಮಾ ಬ್ರಹ್ಮ ರುದ್ರ ಇಂದ್ರಾದಿಗಳು

ತಮ್ಮ ತಮ್ಮ ಪದವಿಯನು ಐದಿ ಸುಖಿಸುವರು//62//


ಈ ಕಥಾಮೃತ ಪಾನ ಸುಖ ಸುವಿವೇಕಿಗಳಿಗಲ್ಲದಲೆ

ವೈಷಿಕ ವ್ಯಾಕುಲ ಕುಚಿತ್ತರಿಗೆ ದೊರೆವುದಾವ ಕಾಲದಲಿ

ಲೋಕ ವಾರ್ತೆಯ ಬಿಟ್ಟು ಇದನವಲೋಕಿಸುತ ಮೋದಿಪರಿಗೊಲಿದು

ಕೃಪಾಕರ ಜಗನ್ನಾಥ ವಿಠಲ ಪೊರೆವನು ಅನುದಿನದಿ//63//