ಹರಿಕಥಾಮೃತಸಾರ/ಗುಣತಾರತಮ್ಯ

ವಿಕಿಸೋರ್ಸ್ದಿಂದ

ಶ್ರೀಧರಾ ದುರ್ಗಾ ಮನೋರಮ ವೇಧಮುಖ ಸುಮನಸ ಗಣ ಸಮಾರಾಧಿತ ಪದಾಂಬುಜ

ಜಗದಂತರ್ ಬಹಿರ್ವ್ಯಾಪ್ತ

ಗೋಧರ ಫಣಿಪ ವರಾತಪತ್ರ ನಿಷೇಧ ಶೇಷ ವಿಚಿತ್ರ ಕರ್ಮ

ಸುಬೋಧ ಸುಖಮಯ ಗಾತ್ರ ಪರಮ ಪವಿತ್ರ ಸುಚರಿತ್ರ//1//


ನಿತ್ಯ ನಿರ್ಮಲ ನಿಗಮ ವೇದಯ ಉತ್ಪತ್ತಿ ಸ್ಥಿತಿ ಲಯ ದೂರವರ್ಜಿತ

ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣ ಸೇವ್ಯ

ಸತ್ಯಕಾಮ ಸ=ಶರಣ್ಯ ಶಾಶ್ವತ ಭೃತ್ಯವತ್ಸಲ ಭಯ ನಿವಾರಣ

ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ//2//


ಪರಮ ಪುರುಷನ ರೂಪ ಗುಣವ ಅನುಸರಿಸಿ ಕಾಂಬಳು ಪ್ರವಹದಂದದಿ

ನಿರುಪಮಳು ನಿರ್ದುಷ್ಟ ಸುಖ ಸಂಪೂರ್ಣಳು ಎನಿಸುವಳು

ಹರಿಗೆ ಧಾಮತ್ರಯಳು ಎನಿಸಿ ಆಭರಣ ವಸನ ಆಯುಧಗಳು ಆಗಿದ್ದು

ಅರಿಗಳನು ಸಂಹರಿಸುವಳು ಅಕ್ಷರಳು ಎನಿಸಿಕೊಂಡು//3//


ಈತಗಿಂತ ಅನಂತ ಗುಣದಲಿ ಶ್ರೀ ತರುಣಿ ತಾ ಕಡಿಮೆಯೆನಿಪಳು

ನಿತ್ಯಮುಕ್ತಳು ನಿರ್ವಿಕಾರಳು ತ್ರಿಗುಣ ವರ್ಜಿತಳು

ಧೌತ ಪಾಪ ವಿರಿಂಚಿ ಪವನರ ಮಾತೆಯೆನಿಪ ಮಹಾಲಕುಮಿ

ವಿಖ್ಯಾತಳು ಆಗಿಹಳು ಎಲ್ಲ ಕಾಲದಿ ಶ್ರುತಿ ಪುರಾಣದೊಳು//4//


ಕಮಲ ಸಂಭವ ಪವನರೀರ್ವರು ಸಮರು ಸಮವರ್ತಿಗಳು

ರುದ್ರಾದಿ ಅಮರಗಣ ಸೇವಿತರು ಅಪರಬ್ರಹ್ಮ ನಾಮಕರು

ಯಮಳರಿಗೆ ಮಹಾಲಕ್ಷ್ಮಿ ತಾನುತ್ತಮಳು ಕೋಟಿ ಸಜಾತಿ ಗುಣದಿಂದ

ಅಮಿತ ಸುವಿಜಾತಿ ಅಧಮರು ಎನಿಪರು ಬ್ರಹ್ಮ ವಾಯುಗಳು//5//


ಪತಿಗಳಿಂದ ಸರಸ್ವತೀ ಭಾರತಿಗಳು ಅಧಮರು ನೂರು ಗುಣ ಪರಿಮಿತ ವಿಜಾತಿ ಅವರರು

ಬಲ ಜ್ಞಾನಾದಿ ಗುಣದಿಂದ ಅತಿಶಯರು ವಾಗ್ದೇವಿ ಶ್ರೀ ಭಾರತಿಗೆ

ಪದಪ್ರಯುಕ್ತ ವಿಧಿ ಮಾರುತರವೋಳ್ ಚಿಂತಿಪುದು

ಸದ್ಭಕ್ತಿಯಲಿ ಕೋವಿದರು//6//


ಖಗಪ ಫಣಿಪತಿ ಮ್ರುಡರು ಸಮ ವಾಣಿಗೆ ಶತಗುಣ ಅವರರು ಮೂವರು

ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ

ನಗಧರನ ಷಣ್ಮ ಹಿಷಿಯರು ಪನ್ನಗ ವಿಭೂಷಣಗೈದು

ಮೇನಕಿ ಮಗಳು ವಾರುಣಿ ಸೌಪರ್ಣಿಗಳಿಗೆ ಅಧಿಕವು ಎರಡು ಗುಣ//7//


ಗರುಡ ಶೇಷ ಮಹೇಷರಿಗೆ ಸೌಪರಣಿ ವಾರುಣಿ ಪಾರ್ವತಿ ಮೂರರು ದಶಾಧಮ

ವಾರುಣಿಗೆ ಕಡಿಮೆ ಎನಿಸುವಳು ಗೌರೀ

ಹರನ ಮಡದಿಗೆ ಹತ್ತು ಗುಣದಲಿ ಸುರಪ ಕಾಮರು ಕಡಿಮೆ

ಇಂದ್ರಗೆ ಕೊರತೆಯೆನಿಸುವ ಮನ್ಮಥನು ಪದದಿಂದಲಿ ಆವಾಗ//8//


ಈರೈದು ಗುಣ ಕಡಿಮೆ ಅಹಂಕಾರಿಕ ಪ್ರಾಣನು ಮನೋಜ ನಗಾರಿಗಳಿಗೆ

ಅನಿರುದ್ಧ ರತಿ ಮನು ದಕ್ಷ ಗುರು ಶಚಿಯು ಆರು ಜನ ಸಮ

ಪ್ರಾಣನಿಂದಲಿ ಹೌರಗ ಎನಿಪರು ಹತ್ತು ಗುಣದಲಿ

ಮಾರಜಾದ್ಯರಿಗೆ ಐದು ಗುಣದಿಂದ ಅಧಮ ಪ್ರವಹಾಖ್ಯ//9//


ಗುಣದ್ವಯದಿಂ ಕಡಿಮೆ ಪ್ರವಹಗೆ ಿನ ಶಶಾಂಕಯಮ ಸ್ವಯಂಭುವ ಮನು ಮಡದಿ ಶತರೂಪ

ನಾಲ್ವರು ಪಾದ ಪಾದಾರ್ಧ ವನಧಿ ನೀಚ

ಪಾದಾರ್ಧ ನಾರದ ಮುನಿಗೆ ಭೃಗು ಅಗ್ನಿ ಪ್ರಸೂತಿಗಳು

ಎನಿಸುವರು ಪಾದಾರ್ಧ ಗುಣದಿಂದ ಅಧಮರಹುದೆಂದು//10//


ಹುತವಹಗೆ ದ್ವಿಗುಣ ಅಧಮರು ವಿಧಿಸುತ ಮರೀಚಾದಿಗಳು

ವೈವಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ ಗುಣಾಧಮನು

ವ್ರತಿವರ ಜಗನ್ಮಿತ್ರ ವರ ನಿರ್ಋತಿ ಪ್ರಾವಹಿ ತಾರರಿಗೆ

ಕಿಂಚಿತ್ ಗುಣ ಅಧಮ ಧನಪ ವಿಶ್ವಕ್ಸೇನರು ಎನಿಸುವರು//11//


ಧನಪ ವಿಶ್ವಕ್ಸೇನ ಗೌರೀ ತನಯರಿಗೆ ಉಕ್ತ ಇತರರು ಸಮರೆನಿಸುವರು

ಎಂಭತ್ತೈದು ಜನ ಶೇಷ ಶತರೆಂದು

ದಿನಪರಾರು ಏಳಧಿಕ ನಾಲ್ವತ್ತನಿಲರು ಏಳು ವಸು

ರುದ್ರರೀರೈದು ಅನಿತು ವಿಶ್ವೇ ದೇವ ಋಭು ಅಶ್ವಿನೀ ಪಿತೃ ಧರಣೀ//12//


ಇವರಿಗಿಂತಲಿ ಕೊರತೆಯೆನಿಪರು ಚ್ಯವನ ಸನಕಾದಿಗಳು

ಪಾವಕ ಕವಿ ಉಚಿಥ್ಥ್ಯ ಜಯಂತ ಕಶ್ಯಪ ಮನುಗಳು ಎಕದಶ

ಧ್ರುವ ನಹುಷ ಶಶಿಬಿಂದು ಹೈಹಯ ದೌಷ್ಯಂತಿ ವಿರೋಚನನ ನಿಜ ಕುವರ

ಬಲಿ ಮೊದಲಾದ ಸಪ್ತ ಇಂದ್ರರು ಕಕುತ್ಸ್ಥ ಗಯ//13//


ಪೃಥು ಭರತ ಮಾಂಧಾತ ಪ್ರಿಯವ್ರತ ಮರುತ ಪ್ರಹ್ಲಾದ ಸುಪರೀಕ್ಷಿತ

ಹರಿಶ್ಚಂದ್ರ ಅಂಬರೀಷ ಉತ್ತನಪಾದ ಮುಖ

ಶತ ಸುಪುಣ್ಯ ಶ್ಲೋಕರು ಗದಾ ಭ್ರುತಗೆ ಅಧಿಷ್ಠಾನರು

ಸುಪ್ರಿಯವ್ರತಗೆ ದ್ವಿಗುಣ ಅಧಮರು ಕರ್ಮಜರು ಎಂದು ಕರೆಸುವರು//14//


ನಳಿನಿ ಸಂಜ್ಞಾ ರೋಹಿಣೀ ಶ್ಯಾಮಲ ವಿರಾಟ್ ಪರ್ಜನ್ಯರು ಅಧಮರು

ಯಲರು ಮಿತ್ರನ ಮಡದಿ ದ್ವಿಗುಣ ಅಧಮಳು ಬಾಂಬೊಳಗೆ

ಜಲ ಮಯ ಬುಧ ಅಧಮನು ದ್ವಿಗುಣದಿ ಕೆಳಗೆನಿಸುವಳು ಉಷಾ

ಶನೈಶ್ಚರಳಿಗೆ ಈರು ಗುಣಾಧಮರು ಉಷಾ ದೇವಿ ದ್ಯಸಿಯಿಂದಾ//15//


ಎರಡು ಗುಣ ಕರ್ಮಾಧಿಪತಿ ಪುಷ್ಕರ ಕಡಿಮೆ

ಆಜಾನು ದಿವಿಜರು ಚಿರ ಪಿತೃಗಳಿಂದ ಉತ್ತಮರು ಕಿಂಕರರು ಪುಷ್ಕರಗೆ

ಸುರಪನಾಲಯ ಗಾಯಕ ಉತ್ತಮ ಎರಡೈದು ಗುಣದಿಂದಾಧಮ

ತುಂಬುರಗೆ ಸಮ ನೂರುಕೋಟಿ ಋಷಿಗಳು ನೂರುಜನರುಳಿದು//16//


ಅವರವರ ಪತ್ನಿಯರು ಅಪ್ಸರ ಯುವತಿಯರು ಸಮ

ಉತ್ತಮರನುಳಿದು ಅವರರೆನಿಪರು ಮನುಜ ಗಂಧರ್ವರು ದ್ವಿಷಡ್ಗುಣದಿ

ಕುವಲಯಾಧಿಪರು ಈರು ಐದು ಗುಣ ಅವನಿಪ ಸ್ತ್ರೀಯರು

ದಶೋತ್ತರ ನವತಿ ಗುಣದಿಂದ ಅಧಮರು ಎನಿಪರು ಮಾನುಷೋತ್ತಮರು//17//


ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರು

ರಜಸ್ಸತ್ವ ಅಧಿಕಾರಿಗಳು ಭಗವದ್ಭಕ್ತರು ಎನಿಸುವರು

ನಿತ್ಯ ಬದ್ಧರು ರಜೋರಜರು ಉತ್ಪತ್ತಿ ಭೂಸ್ವರ್ಗದೊಳು

ನರಕದಿ ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು//18//


ತಮಸ್ಸಾತ್ವಿಕರು ಎನಿಸಿಕೊಂಬರು ಅಮಿತನ ಆಖ್ಯಾತ ಅಸುರರ ಗಣ

ತಮೋ ರಾಜಸರು ಎನಿಸಿಕೊಂಬರು ದೈತ್ಯ ಸಮುದಾಯ

ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣ ಪೂರ್ಣ

ಸರ್ವಾಧಮರೊಳು ಅಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ//19//


ಇವನ ಪೋಲುವ ಪಾಪಿ ಜೀವರು ಭುವನ ಮೂವರೊಳಿಲ್ಲ ನೋಡಲು

ನವ ವಿಧ ದ್ವೇಷಗಳಿಗೆ ಆಕಾರನು ಎನಿಸಿಕೊಳುತಿಪ್ಪ

ಬವರದೊಳು ಬಂಗಾರದೊಳು ನಟ ಯುವತಿ ದ್ಯೂತಾ ಪೇಯ ಮೃಷದೊಳು

ಕವಿಸಿ ಮೋಹದಿ ಕೆಡಿಸುವನುಯೆಂದರಿದು ತ್ಯಜಿಸುವದು//20//


ತ್ರಿವಿಧ ಜೀವ ಪ್ರತತಿಗಳ ಸಗ್ಗ ಆವೊಳೆಯಾಣ್ಮ ಆಲಯನು ನಿರ್ಮಿಸಿ

ಯುವತಿಯರೊಡಗೂಡಿ ಕ್ರೀಡಿಸುವನು ಕೃಪಾಸಾಂದ್ರ

ದಿವಿಜ ದಾನವ ತಾರತಮ್ಯದ ವಿವರ ತಿಳಿವ ಮಹಾತ್ಮರಿಗೆ

ಬಾನ್ನವಿರ ಸಖ ತಾನೊಲಿದು ಉದ್ಧರಿಸುವನು ದಯದಿಂದ//21//


ದೇವ ದೈತ್ಯರ ತಾರತಮ್ಯವು ಪಾವಮಾನಿ ಮತಾನುಗರಿಗೆ ಇದು ಕೇವಲ ಅವಶ್ಯಕವು

ತಿಳಿವುದು ಸರ್ವ ಕಾಲದಲಿ

ದಾವಶಿಖಿ ಪಾಪಾಟವಿಗೆ ನವ ನಾವೆಯೆನಿಪುದು ಭವ ಸಮುದ್ರಕೆ

ಪಾವಟಿಗೆ ವೈಕುಂಠ ಲೋಕಕೆ ಇದೆಂದು ಕರೆಸುವುದು//22//


ತಾರತಮ್ಯ ಜ್ಞಾನ ಮುಕ್ತಿ ದ್ವಾರವು ಎನಿಪುದು ಭಕ್ತ ಜನರಿಗೆ ತೋರಿ ಪೇಳಿ

ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು

ಕ್ರೂರ ಮಾನವರಿಗಿದು ಕರ್ಣ ಕಟೋರವು ಎನಿಪುದು

ನಿತ್ಯದಲಿ ಅಧಿಕಾರಿಗಳಿಗಿದನ ಅರುಪುವುದು ದುಸ್ತರ್ಕಿಗಳ ಬಿಟ್ಟು//23//


ಹರಿಸಿರಿವಿರಿಂಚಿ ಈರಭಾರತಿ ಗರುಡ ಫಣಿ ಪತಿ ಷಣ್ಮಹಿಷಿಯರು

ಗಿರಿಜನಾಕ ಈಶ ಸ್ಮರ ಪ್ರಾಣ ಅನಿರುದ್ಧ ಶಚೀದೇವೀ

ಗುರು ರತೀ ಮನು ದಕ್ಷ ಪ್ರವಹಾ ಮರುತ ಮಾನವಿ ಯಮ ಶಶಿ ದಿವಾಕರ

ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ//24//


ವ್ರತತಿಜಾಸನ ಪುತ್ರರೆನಿಸುವ ವ್ರತಿವರ ಮರೀಚಿ ಅತ್ರಿ

ವೈವಸ್ವತನು ತಾರಾ ಮಿತ್ರ ನಿರ್ಋತಿ ಪ್ರವಹ ಮಾರುತನ ಸತಿ

ಧನ ಈಶ ಅಶ್ವಿನಿಗಳ ಈರ್ಗಣಪತಿಯು ವಿಶ್ವಕ್ಸೇನ ಶೇಷನು ಶತರು

ಮನುಗಳು ಉಚಿಥ್ಯ ಛಾವಣ ಮುನಿಗಳಿಗೆ ನಮಿಪೆ//25//


ಶತ ಸುಪುಣ್ಯ ಶ್ಲೋಕರು ಎನಿಸುವ ಕ್ಷಿತಿಪರಿಗೆ ನಮಿಸುವೆನು

ಬಾಗೀರಥಿ ವಿರಾಟ್ ಪರ್ಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾಹುತ ವಹನ ಮಹಿಳಾ

ಬುಧ ಉಷಾ ಕ್ಷಿತಿ ಶನೈಶ್ಚರ ಪುಷ್ಕರರಿಗೆ

ಆನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು//26//


ನೂರಧಿಕವು ಆಗಿಪ್ಪ ಮತ್ತೆ ಹದಿನಾರು ಸಾವಿರ ನಂದ ಗೋಪ ಕುಮಾರನ

ಅರ್ಧಾಂಗಿಯರು ಅಗಸ್ತ್ಯ ಆದೇ ಮುನೀಶ್ವರರು

ಊರ್ವಶೀ ಮೊದಲಾದ ಅಪ್ಸರ ನಾರಿಯರು ಶತ ತುಂಬುರರು

ಕಂಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ//27//


ಪಾವನರು ಶುಚಿ ಶುದ್ಧ ನಾಮಕ ದೇವತೆಗಳು ಆಜಾನ ಚಿರ ಪಿತೃ

ದೇವ ನರ ಗಂಧರ್ವರು ಅವನಿಪ ಮಾನುಷೋತ್ತಮರು

ಈ ವಸುಮತಿಯೊಳು ಉಳ್ಳ ವೈಷ್ಣವರ ಅವಳಿಯೊಳು ಇಹನೆಂದು

ನಿತ್ಯಡಿ ಸೇವಿಪುದು ಸಂತೋಷದಿಂ ಸರ್ವ ಪ್ರಕಾರದಲಿ//28//


ಮಾನುಷೋತ್ತಮರನ ವಿಡಿದು ಚತುರಾನನ ಅಂತ ಶತ ಉತ್ತಮತ್ವ

ಕ್ರಮೇಣ ಚಿಂತಿಪ ಭಕ್ತರಿಗೆ ಚತುರ ವಿಧ ಪುರುಷಾರ್ಥ

ಶ್ರೀನಿಧಿ ಜಗನ್ನಾಥ ವಿಠಲ ತಾನೇ ಒಲಿದು ಈವನು

ನಿರಂತರ ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ//29//