ಪುಟ:ಭವತೀ ಕಾತ್ಯಾಯನೀ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಯಾಜ್ಞವಲ್ಕ್ಯ ಗುರುಭ್ಯೋನಮಃ

ಭಗವತೀ-ಕಾತ್ಯಾಯನೀ.

೧ನೆಯ ಪ್ರಕರಣ.

ಯೋಗೀಶ್ವರನು |

वंदेऽहं मंगलात्मानं भास्वंतं वेदविप्रहं ॥

याज्ञवल्क्यं मुनिश्रेष्ठं जिष्णुं हरिहरप्रभु ॥

ಪೂರ್ವದಲ್ಲಿ ದೇವರಾತನೆಂಬ ಹೆಸರಿನ ತಪೋಧನನಾದ ಬ್ರಾಹ್ಮಣನೊಬ್ಬನು ಇದ್ದನು. ಆತನು ಪರಮ ಶಿವಭಕ್ತನು , ಅನ್ನದಾನತತ್ಪರನು . ಆತನು ಪುತ್ರೇಚ್ಛೆಯಿಂದ ಕೇದಾರ ಕ್ಷೇತ್ರದಲ್ಲಿ ಘೋರತಪಸ್ಸನ್ನಾಚರಿಸಲು, ಸಾಕ್ಷಾತ್ ಪರಮೇಶ್ವರನೇ ಪುತ್ರರೂಪದಿಂದ ಆತನ ಉದರದಲ್ಲಿ ಜನಿಸಿದನು. ದೇವರಾತನು ಮಗನಿಗೆ ಯಾಜ್ಞವಲ್ಕ್ಯನೆಂದು ಹೆಸರಿಟ್ಟನು. ಪರಮತೇಜಸ್ವಿಯಾದ ಯಾಜ್ಞವಲ್ಕ್ಯನು ಲೋಕಾನಂದಕರನಾಗಿ ಬೆಳೆಯುತ್ತಿರಲು, ದೇವರಾತನು ಯಥಾವಿಧಿ ಆತನ ಮೌಂಜೀಬಂಧನವನ್ನು ಮಾಡಿದನು. ಮೇಖಲಾ, ಕೃಷ್ಣಾ ಜಿನಾದಿ ಬ್ರಹ್ಮಚರ್ಯಲಕ್ಷಣಗಳಿಂದ ಯುಕ್ತನಾಗಿ ಆತನು ವೇದಪ್ರತಿಪಾದಿತವಾದ ಬ್ರಹ್ಮಚರ್ಯವ್ರತವನ್ನು ಆಚರಿಸಹತ್ತಿದನು. ಪಾತಃಸ್ನಾನ, ಸಂಧ್ಯಾವಂದನ, ಅಗ್ನಿಕಾರ್ಯ, ಆಚಾರ್ಯೋಪಾಸನಾದಿ ಕರ್ಮಗಳನ್ನು ಮಾಡುತ್ತ, ಗುರುಕುಲವಾಸದಿಂದ ವೇದಾಧ್ಯಯನವನ್ನು ಮಾಡಹತ್ತಿದನು. ಮೊದಲು ಬಾಷ್ಕಲನೆಂಬ ಋಷಿಯಬಳಿಯಲ್ಲಿ ಆ ಗುರುಸೇವಾತತ್ಪರನ ಋಗ್ವೇದಾಧ್ಯಯನವು ಸಂಪೂರ್ಣವಾಗಿ ಆಯಿತು. ಆಮೇಲೆ ಜೈಮಿನಿಯಬಳಿಯಲ್ಲಿ ಆತನು ಸಾಮವೇದದ ಸಹಸ್ರಶಾಖೆಗಳ, ಹಾಗು ಅಥರ್ವಣವೇದದ ಅಧ್ಯಯನವನ್ನು ಮಾಡಿದನು. ಆ ಮೇಲೆ ಯಜುರ್ವೇದಾಧ್ಯಯನಮಾಡುವ ಉತ್ಸುಕತೆಯಿಂದ ಆ ಮಹಾವಿದ್ಯಾಂಸನಾದ ಯಾಜ್ಞವಲ್ಕ್ಯನು ವೈಶಂಪಾಯನರ ಬಳಿಯಲ್ಲಿ ಬ್ರಹ್ಮಚರ್ಯದಿಂದ ಯಜುರ್ವೇದಾಧ್ಯಯನವನ್ನು ಮಾಡಿದನು. ಶಾಂತಿ, ಇಂದ್ರಿಯನಿಗ್ರಹ, ವಿರಕ್ತಿ, ಸಹನಶೀಲತೆ, ಗುರುಸೇವಾ ತತ್ಪರತೆ, ನಿರಹಂಕಾರಾದಿಗುಣಗಳು ಶ್ರೀ ಯಾಜ್ಞವಲ್ಕ್ಯರಲ್ಲಿ ಮೂರ್ತಿಮತ್ತಾಗಿ ಇದ್ದದ್ದರಿಂದ, ಅಷ್ಟಸಿದ್ದಿಗಳು ಅವರನ್ನು ಸದಾಸೇವಿಸುತ್ತಲಿದ್ದವು. ವೈಶಂಪಾಯನರ ಬಳಿಯಲ್ಲಿ ಮುನ್ನೂರಾಅರವತ್ತು ಜನಶಿಷ್ಯರು ಇದ್ದರು. ಅವರಲ್ಲಿ ಯಾಜವಲ್ಕ್ಯರು ಪರಮತೇಜಸ್ಸಿಗಳಾಗಿ ನಕ್ಷತ್ರಗಳ ಮಧ್ಯದಲ್ಲಿ ಚಂದ್ರನಂತೆ ಒಪ್ಪುತ್ತಲಿದ್ದರು.