ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೪೧

ಸಮಾಧಾನ ಹೇಳಿದನು. ಇದು ಯಾವುದೂ ಒಪ್ಪಿಗೆಯಾಗಲಿಲ್ಲ: ಆದ್ದರಿಂದ ದೇವರಮುಂದೆ ಚೀಟಿಹಾಕಿ ನೋಡಬೇಕೆಂದು ನಿರ್ಧರ ವಾಯಿತು. ಇದರಲ್ಲಿಯೂ ರಾಮಕುಮಾರನಿಗೇ ಅನುಕೂಲವಾಗಿ ಬರಲು ಪರಮಹಂಸರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಯಿತು.

ಆದರೆ ಇನ್ನೊಂದು ವಿಷಯದಲ್ಲಿ ಪುನಃ ಯೋಚನೆಗಾರಂಭ ವಾಯಿತು. ಅರ್ಚಕನ ಕೆಲಸವನ್ನು ವಹಿಸುವುದಕ್ಕೆ ಆಕ್ಷೇಪಣೆ ಮಾಡಿದವರು ಅಲ್ಲಿ ಊಟಮಾಡುವುದಕ್ಕೆ ಒಪ್ಪುವುದು ನಿಜವೆ! ರಾಮಕುಮಾರನು “ ಇದುದೇವಾಲಯ, ಗಂಗಾಜಲದಲ್ಲಿ ಮಾಡಿದ ಪದಾರ್ಥಗಳು, ಅದರ ಮೇಲೆ ಜಗದಂಬೆಗೆ ನೈವೇದ್ಯವಾದುವು: ಇದನ್ನು ಊಟಮಾಡುವುದರಿಂದ ಯಾವದೋಷವೂ ಬರುವುದಿಲ್ಲ" ಎಂದು ಮುಂತಾಗಿ ಎಷ್ಟೆಷ್ಟೋ ಸಮಾಧಾನಗಳನ್ನು ಹೇಳಿದನು.ಆದರೆ ಅವರ ಮನಸ್ಸಿಗೆ ಇವೊಂದೂ ಸರಿತೋರದೆ ಸ್ವಯಂಪಾಕ ವನ್ನು ತೆಗೆದುಕೊಂಡು ಹೋಗಿ ಗಂಗೆಯಹತ್ತಿರ ತಾವೇ ಅಡಿಗೆಮಾಡಿ ಕೊಂಡು ಊಟಮಾಡಿಬಿಟ್ಟರು.

ಕಾಳಿಕಾದೇವಿಯ ಪ್ರತಿಷ್ಟೆಯಾದಮೇಲೆ ಒಂದು ತಿಂಗಳ ವರೆಗೂ ಪರಮಹಂಸರು ಏನುಮಾಡಬೇಕೆಂಬುದನ್ನು ತಿಳಿಯದೆ ದಕ್ಷಿಣೇಶ್ವರದಲ್ಲಿ ಕಾಲಯಾಪನೆ ಮಾಡುತ್ತಿದ್ದರು. ಮಧುರಾ ನಾಥನು ಅವರನ್ನು ಯಾವುದಾದರೂ ಒಂದು ಕೆಲಸಕ್ಕೆ ಸೇರಿಸಬೇ ಕೆಂದು ಸಂಕಲ್ಪ ಮಾಡಿ ತನ್ನ ಉದ್ದೇಶವನ್ನು ರಾಮಕುಮಾರನಿಗೆ ತಿಳಿಸಿದನು. ರಾಮಕುಮಾರನು ವಿಚಾರಮಾಡಿ ಅವರು ಒಪ್ಪುವುದಿಲ್ಲ ವೆಂದು ಹೇಳಿಬಿಟ್ಟನು. ಮಧುರಾನಾಥನು ಮಾತ್ರ ತನ್ನ ಸಂಕಲ್ಪ ವನ್ನು ಬಿಡದೆ ಸಮಯವನ್ನು ಕಾಯುತ್ತಿದ್ದನು. ಆದರೆ ಅವನ ಉದ್ದೇಶವು ಗೊತ್ತಾದಂದಿನಿಂದ ಪರಮಹಂಸರು ಅವನಕಣ್ಣಿಗೆ ಬೀಳದಹಾಗೆ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದರು. ಏಕೆಂದರೆ, ಮಧುರಾನಾಥನು ಏನೋ ಉಪಕಾರ ಮಾಡುತ್ತೇನೆಂದು ತಿಳಿದು, ಒಂದು ನೌಕರಿ ಕೊಡುವುದಕ್ಕೆ ಬಂದರೆ ಬೇಡವೆಂದುಹೇಳಿ ಅವನ ಮನಸ್ಸನ್ನು ನೋಯಿಸುವುದು ಅವರಿಗೆ ಚೆನ್ನಾಗಿ ತೋರಲಿಲ್ಲ.