ಪುಟ:Kannadigara Karma Kathe.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೪

ಕನ್ನಡಿಗರ ಕರ್ಮಕಥೆ

ಪಾದವಂದನ ಮಾಡಿ ಆತನಿಗೆ ಅರಸುತನದ ಮರ್ಯಾದೆಯನ್ನು ನಡೆಸುತ್ತಿದ್ದನು. ಈ ಕಾರಣದಿಂದ ಸದಾಶಿವರಾಜನ ಪಕ್ಷದವರು ರಾಮರಾಜನ ವೈರಿಗಳಾಗಿದ್ದರು. ಕೆಲವರು ರಾಮರಾಜನ ಉದ್ಧಟತನಕ್ಕಾಗಿ ಆತನನ್ನೂ, ಆತನ ಇಬ್ಬರು ಬಂಧುಗಳನ್ನೂ ಅಂದರೆ ತಿರುಮಲ-ವೆಂಕಟಾದ್ರಿಗಳನ್ನೂ ದ್ವೇಷಿಸುತ್ತಿದ್ದರು. ಕೆಲವರು ರಣಮಸ್ತಖಾನನನ್ನು ಹಿಂದುಮುಂದಿನ ವಿಚಾರವಿಲ್ಲದೆ ರಾಮರಾಜನು ಏರಿಸುತ್ತ ನಡೆದದ್ದನ್ನು ನೋಡಿ, ಮಾತ್ಸರ್ಯ ತಾಳಿ ದ್ವೇಷಿಗಳಾಗಿದ್ದರು; ಆದರೆ ನಾಲ್ವರು ಮುಸಲ್ಮಾನ ಬಾದಶಹರು ಒಟ್ಟುಗೂಡಿ ತಮ್ಮ ಮೇಲೆ ಸಾಗಿಬರುವದನ್ನು ನೋಡಿ ವಿಜಯನಗರದವರು ತಮ್ಮೊಳಗಿನ ಅಂತಃಕಲಹಗಳನ್ನು ಮರೆತರು. ಅವರು ಮುಸಲ್ಮಾನರ ಮೇಲೆ ಮುಗಿಬಿದ್ದು ಹೋಗಿ, ಅವರನ್ನು ದಿಕ್ಕಾಪಾಲಾಗಿ ಯಾವಾಗ ಓಡಿಸೇವೆಂದು ಸ್ಪೂರ್ತಿಗೊಳ್ಳಹತ್ತಿದರು. ಈ ಸಂಬಂಧದಿಂದ ರಣಮಸ್ತಖಾನನ ಉತ್ಕಂಠೆಯನ್ನೂ, ಈರ್ಷೆಯನ್ನೂ ವರ್ಣಿಸುವದಂತು ತೀರ ಅಸಾಧ್ಯವಾಗಿತ್ತು. ಆತನು ವಿಜಯನಗರ ರಾಜ್ಯದ ಅಭಿಮಾನವನ್ನು ವಹಿಸುವಾಗ ತಾನು ಮುಸಲ್ಮಾನ ಜಾತಿಯವನೆಂಬದನ್ನು ಸಹ ಮರೆಯುವಂತೆ ತೋರುತ್ತಿತ್ತು. ಆತನು ಜನರಿಗೆ-ನಾನು ವಿಜಯನಗರದ ರಾಯರನ್ನು ಕೂಡಿದ್ದರಿಂದ, ಸ್ವಜನದ್ರೋಹಿಯೂ, ಸ್ವಾಮಿ ದ್ರೋಹಿಯೂ ಆದೆನೆಂದು ಜನರು ಅನ್ನಬಹುದು; ಆದರೆ ನಾನು ಅಂಥ ದ್ರೋಹವನ್ನೇನೂ ಮಾಡಿರುವದಿಲ್ಲೆಂದು ಸ್ಪಷ್ಟವಾಗಿ ಹೇಳುವೆನು. ವಿಜಾಪುರದ ಬಾದಶಹರ ಹಿತವನ್ನು ನಾನೇ ಮನಮುಟ್ಟಿ ಸಾಧಿಸುತ್ತಿರಲು, ಬಾದಶಹರು ನಿಷ್ಕಾರಣವಾಗಿ ನನ್ನನ್ನು ಅಪಮಾನಗೊಳಿಸಿದರು. ಅದರ ಸೇಡು ತೀರಿಸುವದಕ್ಕಾಗಿ, ನಾನು ಹೇಳಿಕೇಳಿ ರಾಯರನ್ನು ಕೂಡಿಕೊಂಡಿದ್ದೇನೆ. ಬಹುಜನ ಮುಸಲ್ಮಾನರು ಹಿಂದು ಜನರ ದಂಡಿನಲ್ಲಿರುವರಷ್ಟೇ? ಅವರಲ್ಲಿ ನಾನೊಬ್ಬನು. ಆದರೆ ಬಾದಶಹರಿಂದಾದ ಅಪಮಾನದಿಂದ ಬಾದಶಹರ ಮೇಲೆ ರೊಚ್ಚಿಗೆದ್ದು ನಾನು ಒಳಗಿಂದೊಳಗೆ ರಾಮರಾಜರಿಗೆ ಸಹಾಯ ಮಾಡಿದರೆ, ಸ್ವಾಮಿದ್ರೋಹವು ನನ್ನ ಪಾಲಿಗೆ ಬರುತ್ತಿತ್ತು. ಹಾಗೇನು ನಾನು ಮಾಡಿರುವುದಿಲ್ಲ. ನಾನು ಇತ್ತ ಬಂದದ್ದರಿಂದ ಮುಸಲ್ಮಾನ ಬಾದಶಹರ ಹಾನಿಯು ಎಷ್ಟರಮಟ್ಟಿಗೆ ಆಗಿರುತ್ತದೆಂಬದನ್ನು ಮಹಾರಾಜರು ಯುದ್ದದಲ್ಲಿಯ ನನ್ನ ಪರಾಕ್ರಮವನ್ನು ನೋಡಿ ತರ್ಕಿಸಬಹುದು, ಎಂದು ನುಡಿಯುತ್ತಿದ್ದನು. ಅದನ್ನು ಕೇಳಿ ರಾಮರಾಜನು- “ರಕ್ತಸಂಬಂಧವಿದ್ದ ಕಡೆಗೆ ಮನಸ್ಸು ಒಲಿಯತಕ್ಕದ್ದು” ಎಂದು ತರ್ಕಿಸಿ, ಕೌತುಕಪಡುತ್ತಿದ್ದನು. ಕೌತುಕದ ಭರದಲ್ಲಿ ಆತನು ಏಕಾಂತದಲ್ಲಿ ರಣಮಸ್ತಖಾನನನ್ನು ಅಪ್ಪಿಕೊಂಡು ತಮ್ಮಾ,