ಪುಟ:Kannadigara Karma Kathe.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೦

ಕನ್ನಡಿಗರ ಕರ್ಮಕಥೆ

ಮಾರ್ಜೀನೆ-ಸುಮ್ಮನೆ ಯಾಕೆ ನನ್ನನ್ನು ಕೇಳುತ್ತೀರಿ ? ನನಗೆ ಏನೂ ಗೊತ್ತಿಲ್ಲ; ಮತ್ತು ನೀವು ಏನು ಕೇಳುತ್ತೀರೆಂಬದೂ ನನಗೆ ತಿಳಿಯಲೊಲ್ಲದು.

ರಾಮರಾಜ-ಹೀಗೆ ಹೇಳುವದಕ್ಕಿಂತ “ನಾನೂ ಏನೂ ಹೇಳುವದಿಲ್ಲವೆಂದು" ಸ್ಪಷ್ಟ ಹೇಳಬಾರದೆ ?

ಮಾರ್ಜೀನೆ-ನನಗೆ ಏನೂ ಗೊತ್ತಿಲ್ಲದ ಬಳಿಕ ನಾನು ಹೇಳಲಾದರೂ ಏನು ? ನಾವು ನಿಮಗೆ ಯಾರ ಹಾಗೆ ಕಾಣುತ್ತೇವೆ ? ನಮ್ಮನ್ನು ನೀವು ಯಾರೆಂದು ತಿಳಿದಿರುತ್ತೀರಿ ? ನಮ್ಮ ಮಾಸಾಹೇಬರನ್ನು ನೀವು ಯಾರೆಂದು ಭಾವಿಸಿರುತ್ತೀರಿ ? ನಮ್ಮ ಮಾಸಾಹೇಬರು ಒಬ್ಬ ಬಡ ವಿಧವೆಯು, ಪತಿಯು ಮರಣ ಹೊಂದಿದ ಬಳಿಕ, ಪಾಪ ! ಅಲ್ಲಾನ ಧ್ಯಾನ ಮಾಡುತ್ತ ಅವರು ಕಾಲಹರಣ ಮಾಡುತ್ತಿರುವರು. ಉತ್ತರ ಹಿಂದುಸ್ತಾನದ ಕಡೆಗಿದ್ದವರು, ಈಗ ದಕ್ಷಿಣ ಹಿಂದುಸ್ತಾನದ ಕಡೆಗೆ ಬಂದಿರುತ್ತಾರೆ. ಅವರು ತಮ್ಮ ಮಗನ ಮೂರ್ಖತನದಿಂದ ಹೀಗೆ ಸಂಕಟಕ್ಕೆ ಗುರಿಯಾಗಿರುತ್ತಾರೆ.

ಇದನ್ನು ಕೇಳಿ ರಾಮರಾಜನಿಗೆ ಏನೂ ತೋಚದಾಯಿತು. ಆತನು ಲೈಲಿಗೆ ನೀನು ನನಗೆ ನಮ್ಮ ಮೆಹೆರಜಾನಳ ಭೆಟ್ಟಿಯನ್ನು ಮಾಡಿಸಿಬಿಡು. ನಾನು ಆಕೆಯನ್ನೇ ಕೇಳುವೆನು, ಎಂದು ಹೇಳಿದನು. ಇದನ್ನು ಕೇಳಿ ಮಾರ್ಜೀನೆಯು ಏನೂ ತೋಚದೆ ಸುಮ್ಮನೆ ನಿಂತುಕೊಂಡಳು. ಆಮೇಲೆ ಆಕೆಯು ರಾಮರಾಜನಿಗೆ ನಿಮ್ಮ ಮೆಹೆರಜಾನಳು ! ನಿಮ್ಮ ಮೆಹೆರಜಾನ ಯಾರೆಂಬುದೇ ನನಗೆ ಗೊತ್ತಾಗಲೊಲ್ಲದು; ಅಂದಬಳಿಕ ನಾನು ಆಕೆಯ ಬಳಿಗೆ ನಿಮ್ಮನ್ನು ಹ್ಯಾಗೆ ಕರಕೊಂಡು ಹೋಗಲಿ ? ಅನ್ನಲು, ರಾಮರಾಜನು ಈಕೆಯು ಒಳ್ಳೆಯ ಮಾತಿನಿಂದ ಹಾದಿಗೆ ಬರುವಹಾಗೆ ಕಾಣುವದಿಲ್ಲ, ಸ್ವಲ್ಪ ಗುಡುಗು ಹಾಕಿ ನೋಡೋಣವೆಂದು

ರಾಮರಾಜ-ನೀನು ಯಾರ ಸಂಗಡ ಈ ಹುಡಗಾಟಿಕೆಯನ್ನು ಮಾಡುತ್ತೀಯೆಂಬುದು ನಿನಗೆ ಗೊತ್ತಿರುವದಷ್ಟೆ ?

ಲೈಲಿ-ಇಲ್ಲ, ನನಗೆ ಯಾವದೂ ಗೊತ್ತಿಲ್ಲ. ನೀವು ಯಾರೆಂಬದನ್ನು ನಾನರಿಯೆ.

ರಾಮರಾಜ-ನಿನ್ನ ನೂರು ವರ್ಷಗಳು ತುಂಬಿದವೆಂದು ತಿಳಿದುಕೋ.

ಲೈಲಿ-ನಿಜವಾಗಿಯೇ ನನ್ನ ನೂರು ವರ್ಷಗಳು ತುಂಬಿದ್ದರೆ, ಪರವರದಿಗಾರ ಖುದಾನು ನನ್ನನ್ನು ಅನುಗ್ರಹಿಸಿದನೆಂದಲೇ ನಾನು ತಿಳಿಯುವೆನು. ನನಗಂತು ನನ್ನ ಜೀವವು ಬೇಡಾಗಿರುತ್ತದೆ.