________________
೧೪೬ ಅರಮನೆ ಬಂಗಾರದ ಕಡಗ ಧರಿಸಿ ಬಂದಿದ್ದ.. ಯಿನ್ನೂ ಬೂದುಕದೀವಿ ಯಂದುಕೊಳುತ ಆ ಮುದೇರೀಲ್ವರು ಅಗೋ ಅಲ್ಲಿ ಬರುತ್ತಿರುವಾಗ್ಗೆ, ಯಪ್ಪಾ ನಾನಿಂಗಿಂಗಳ ಹೋಗಿ ಬರುವೆನು ಯಂದು ಹೇಳುತ ಸಜ್ಜಾಗುತ ಸಜ್ಜಾಗುತ ಜಗಲೂರೆವ್ವ ಬಂದ ಹಿರೀಕರೊಂದಿಗೆ ಹೊರಟು ನಿಂತಳು. ಬರಲೇನವ್ವಾ ಯಂದ ಅಪ್ಪಂಗೆ ನೀನೇನು ಕಾಳಜಿ ಮಾಡೋದು ಬ್ಯಾಡ ಯಂದು ಹೇಳಿ ಹೊರಟೇಬಿಟ್ಟು ಕಣ್ಮರೆಯಾದಳೆಂಬಲ್ಲಿಗೆ... ಮಗನ ಸಮಾನನಾದ ಸೂರನು ವಯ್ಯವಯ್ಯ ಯಂಬ ಭಾಷೆ ಯಲ್ಲೂ, ಚನ್ನವ್ವ ಧರುಮದೇವತೆಯರು ಬೊವ್.. ಬೊವ್ ಯಂಬ ಭಾಷೆಯಲ್ಲೂ ಸುಖ ಪ್ರಯಾಣ ಕೋರಿದರೆಂಬಲ್ಲಿಗೆ.. ಮುತ್ತಯೇರು ಆರತಿ ಬೆಳಗಿದರೆಂಬಲ್ಲಿಗೆ.. ನೂರಾರು ಮಂದಿ ತಮ್ಮ ತಮ್ಮ ಕಣ್ಣುಗಳ ಹನಿಗಳಲ್ಲಿ ಸೂಯ್ಯಾಮನನ್ನು ಪ್ರತಿಫಲಿಸಿದರೆಂಬಲ್ಲಿಗೆ.. ತಂಗಾಳಿ ಸೂಸ್ಯಾಡಿ ತಗುಲಿಕೋತ ಹೋತು ಯಂಬಲ್ಲಿಗೆ.. ಹೊತ್ತಲ್ಲದ ಹೊತ್ತು ಅದಾಗಿತ್ತು. ಜಗಲೂರೆವ್ವನ ಮುಂದಾಳತ್ವದಲ್ಲಿ ಕೂಡ್ಲಿಗಿ ಪಟ್ಟಣ ಯಿದ್ದಂಥ ಬಡಗಣ ದಿಕ್ಕಿನ ಗುಂಟ ಪಯಣ ಹೊಂಟ ನಿಯೋಗದಲ್ಲಿ ಯಾರಾಗಿದ್ದರೆಂದರೆ ಅವರಿವರೇ ಯಿದ್ದರು. ಪಯಣ ಸಾಂಗೋಪಾಂಗವಾಗಿ ಹೊಂಟಕಾಲಕ್ಕೆ ಹುಲಿ ವಾಸಕ್ಕಿದ್ದ ಹುಲಿಗುಡ್ಡ ಅಡ್ಡಬಂತು, ಚಿರತೆ ವಾಸಕ್ಕಿದ್ದ ಚಿರತೆ ಗುಡ್ಡ ಅಡ್ಡಬಂತು, ಅವರೆಡನ್ನೂ ಬೆಸೆದಿದ್ದ ಗಮೊಂಬುವ ಕಾಡು ಅಡ್ಡಡ್ಡಬಂತು. ಜುಳುಜುಳೂ ಅಂತ ಹರಿಯುತಲಿದ್ದ ಹೊನ್ನಮ್ಮ ನಿಯೋಗದ ಅಂಗಾಲುಗಳನು ತಂಗಲು ಮಾಡಿದಳು. ಹಿಂಗು ಪಯಣವು ಯರಡು ರಾತ್ರಿ.. ಯರಡು ಹಗಲು ತಿಂತು.. ಪಾದದಲ್ಲಿ ಪದ್ಮರೇಖೆ, ಅಂಗಯ್ಯಲ್ಲಿ ಧನರೇಖೆ, ಮಸ್ತಕದಲ್ಲಿ ಮಾಣಿಕ್ಯ ರೇಖೆವುಳ್ಳಾಂಥಾಕೆಯೂ, ಮಾ ಪತಿವುರೊತಾ ಸಿರೋಮಣಿಯೂ ಆದ ಜಗಲೂರೆವ್ವನ ನೇತ್ರುತ್ವದಲ್ಲಿ ಹೊಲಮನಿ, ತಾಯಿಮನಿ, ಖಾಲಿಮನಿ, ವಸ್ತಿಮಾಡುವ ಮನಿ, ಗಸ್ತು ತಿರುಗುವ ಮನಿ, ಶಿಸ್ತಿನ ಮನಿ, ಚಿಂತಿಕಾಂತಿಯಮನಿ, ಸಂತಿ ಸೇರುವ ಮನಿ ಯಿಂಥಪ್ಪಿವೇ ಮೊದಲಾದ ಸಾಯಿರಾರು ಮನಿ ಮಾರುಗಳಿಂದ ತುಂಬಿ ತುಳುಕಾಡುತಲಿದ್ದ ಕೂಡ್ಲಿಗಿ ಪಟ್ಟಣವನ್ನು ಪ್ರವೇಶ ಮಾಡಿದಾಗ ಹೊತ್ತು ಯಷ್ಟಾಗಿತ್ತೆಂದರೆ ಅಷ್ಟಾಗಿತ್ತು.. ಮಟ ಮಟ ಮದ್ದಾಣದ ಬಿಸಿಲಲ್ಲಿ ಸಾಣಾ ಮಾಡುತಲಿದ್ದ ರಸ್ತಾಗುಂಟಾ ಅವರು ಹೋಗುತ್ತಿರಬೇಕಾದರೆ ನಿಮ್ಮದ್ಯಾವೂರು? ಯಾಕೆ ಬಂದೀರಿ? ಖನ ಗುರುತು ಯೇನಾರ ಅಯ್ತಾ? ಯಂದು ಸಯೀಕರು ಅಡ್ಡಡ್ಡ ಬಂದವರು ಕುದುರೆಡವು ಯಂಬ ಪಂಚಾಕ್ಷರ