ಪುಟ:ಕ್ರಾಂತಿ ಕಲ್ಯಾಣ.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೩೨೨

ಕ್ರಾಂತಿ ಕಲ್ಯಾಣ

ತಿಳಿದರೆ ನನ್ನನ್ನು ಸೆರೆ ಹಿಡಿಯಲು ಪ್ರಯತ್ನಿಸಬಹುದು. ನಾನು ಕಲ್ಯಾಣಕ್ಕೆ ಬಂದಿರುವ ವಿಚಾರ ರಹಸ್ಯವಾಗಿರಬೇಕು,” ಎಂದನು.

ಅಗ್ಗಳನು ಹೇಳಿದನು : “ನಾವು ಜಗದೇಕಮಲ್ಲರಸರಿಗೆ ರಾಣಿಯ ಸಂದೇಶ ಮುಟ್ಟಿಸಿ ಅವರ ಸಲಹೆಯಂತೆ ನಡೆಯಬೇಕಾಗುವುದು. ಸಂದೇಶವನ್ನು ಹೇಗೆ ಮುಟ್ಟಿಸುವುದು ಎಂಬುದೇ ಈಗ ನಮಗೆ ಬಂದಿರುವ ತೊಂದರೆ.”

ಬ್ರಹ್ಮಶಿವ ನಕ್ಕು “ತೊಂದರೆಯೇನಿದೆ? ಸಂದೇಶದ ಓಲೆ ನನಗೆ ಕೊಟ್ಟರೆ ಇಂದೇ ತಲುಪಿಸುತ್ತೇನೆ,” ಎಂದನು.

ಅಗ್ಗಳನೆಂದನು, “ಅದು ನೀವು ಭಾವಿಸುವಷ್ಟು ಸುಲಭವಾದ ಕಾರ್ಯವಲ್ಲ, ಪಂಡಿತರೆ, ರಾಣಿಯವರು ಓಲೆ ಬರೆದಿಲ್ಲ. ಸಂದೇಶದ ನುಡಿಗಳು ರಾಣಿಯ ದೂತನಿಗೆ ಮಾತ್ರ ತಿಳಿದಿದೆ. ಅವನನ್ನು ರಾಜಗೃಹಕ್ಕೆ ಕರೆದುಕೊಂಡು ಹೋಗಿ ಜಗದೇಕಮಲ್ಲರಸರ ಮುಂದೆ ನಿಲ್ಲಿಸುವುದೊಂದೇ ನಾವು ಮಾಡಬೇಕಾದ ಕಾರ್ಯ”.

ಬ್ರಹ್ಮಶಿವನು ತಲೆಯಾಡಿಸಿ, “ಸದ್ಯದಲ್ಲಿ ಅದು ಆಗದ ಕಾರ್ಯ. ಕರ್ಣ ದೇವರಸರು ಹಿಂದಿರುಗಿದ ಮೇಲೆ ರಾಜಗೃಹದ ಕಾವಲನ್ನು ಬಲಪಡಿಸಿದ್ದಾರೆ. ಅನುಮತಿ ಪತ್ರವಿಲ್ಲದೆ ಈಗ ಯಾರನ್ನೂ ಒಳಗೆ ಬಿಡುವುದಿಲ್ಲ,” ಎಂದನು.

ಅಗ್ಗಳನು ಯೋಚಿಸಿ ಹೇಳಿದನು : ನಿಮ್ಮ ಅನುಮತಿ ಪತ್ರವನ್ನು ರಾಣಿಯ ದೂತನಿಗೆ ಕೊಟ್ಟರಾಯಿತು.”

ಬ್ರಹ್ಮಶಿವನ ಕುಚೋದ್ಯ ಕುಡಿಯಿಟ್ಟಿತು. “ಅನುಮತಿ ಪತ್ರದೊಡನೆ ನನ್ನ ಕಪನಿ, ಮುಂಡಾಸು, ಜೋಳಿಗೆ ಇವನ್ನೆಲ್ಲ ನಿಮ್ಮ ಆ ದೂತನಿಗೆ ಕೊಡಬೇಕಾಗುವುದು. ಇವನ್ನೆಲ್ಲ ಧರಿಸಿ ಕಾವಲುಗಾರರ ಮುಂದೆ ಹರೀಶರುದ್ರನ ನಟನೆ ಮಾಡುವ ಸಾಮರ್ಥ್ಯವಿದೆಯೆ ಅವನಿಗೆ?” ಎಂದು ಕಟಕಿಯಾಡಿದನು.

“ನೀವು ದೂತನ ಉಡುಪನ್ನು ಧರಿಸಲು ಒಪ್ಪುವುದಾದರೆ ನನ್ನ ಅಡ್ಡಿಯಿಲ್ಲ.” ಎಂದು ಗಂಭೀರವಾಗಿ ಉತ್ತರಿಸಿದನು ಅಗ್ಗಳ.

ಅಭಿಮಾನದಿಂದ ಎದೆತಟ್ಟಿ ಬ್ರಹ್ಮಶಿವ ಹೇಳಿದನು : “ನಾನು ಕಾರ್ಯವಾಸಿ. ನಾನು ಎರಡು ಸಾರಿ ಮತಾಂತರವಾಗಿದ್ದೇನೆ. ಅನೇಕ ಸಾರಿ ವೇಷ ಬದಲಾಯಿಸಿದ್ದೇನೆ. ಹತ್ತು ಹೆತ್ತವಳಿಗೆ ಒಂದು ಹೆಚ್ಚೇನು ಕಡಿಮೆಯೇನು? ಕರೆಯಿರಿ ರಾಣಿಯ ದೂತನನ್ನು.”

ಕೊಂಚ ಹೊತ್ತಿನ ಮೇಲೆ ಉಷಾವತಿಯನ್ನು ಕರೆತಂದು ಅಗ್ಗಳನು, “ಇವರೇ ರಾಣಿಯ ದೂತರು,” ಎಂದು ಹೇಳಿದಾಗ ಬ್ರಹ್ಮಶಿವನು ತಬ್ಬಿಬ್ಬಾದನು.

ಜೂಜಾಟದಲ್ಲಿ ವಂಚಿಸಲ್ಪಟ್ಟವನಂತೆ ಕೈಯೆತ್ತಿ ಬೊಬ್ಬಿಟ್ಟು ನಟನೆಮಾಡಿ,