ಪುಟ:ಭಾರತ ದರ್ಶನ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಹಮದ್ ನಗರದ ಕೋಟೆ

೧೫

ಆದ್ದರಿಂದ ನನ್ನ ಮನಸ್ಸಿನ ಸ್ಥಿತಿ ನಾನೇ ಸ್ಪಷ್ಟ ಮಾಡಿಕೊಂಡು ವಿವರಿಸಲು ಸಾಧ್ಯವಿಲ್ಲದ ಕಲಸು ಮೇಲೋಗರವಾಗಿತ್ತು. ನನ್ನ ಮನಸ್ಸಿಗೆ ಎಟುಕದ ಆ ಮೂಲ ಪ್ರಶ್ನೆ ಗಳ ವಿಷಯ ಹೆಚ್ಚು ಯೋಚಿಸುವ ಬದಲು, ನನ್ನ ದೃಷ್ಟಿ ಯನ್ನು ಪ್ರಸ್ತುತ ವಿಷಯದ ಕಡೆಗೆ ನೆಟ್ಟು ತಾತ್ಕಾಲಿಕವಾದ ಸಂಕುಚಿತವೆಂದು ತೋರುವ ಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ್ದೇನು, ಹೇಗೆ, ಎಂದು ಯೋಚಿಸುವುದೇ ನನಗೆ ಸಾಮಾನ್ಯವಾಗಿತ್ತು.

ಅಂತಿಮ ಸತ್ಯ ಏನೇ ಆಗಿರಲಿ, ಸ್ವಲ್ಪವಾಗಿಯೊ, ಪೂರ್ತಿಯಾಗಿಯೊ ಅದು ನಮಗೆ ಎಟುಕಲಿ, ಎಟುಕದಿರಲಿ ಮಾನವಜ್ಞಾನ ಭಾಂಡಾರವನ್ನು ವೃದ್ಧಿಗೊಳಿಸಲು, ಆ ಜ್ಞಾನ ಸ್ವಲ್ಪ ಮಟ್ಟಿಗೆ ಅಥವ ಬಹುಮಟ್ಟಿಗೆ ಆತ್ಮೀಯವಾಗಿರಬಹುದು- ಮತ್ತು ಆ ಜ್ಞಾನವನ್ನು ಮಾನವ ಜೀವನ ಮತ್ತು ಸಾಮಾಜಿಕ ವ್ಯವಸ್ಥೆಯ ಪುರೋಭಿವೃದ್ಧಿ ಮತ್ತು ಉನ್ನತಿಗೆ ಉಪಯೋಗಿಸಿಕೊಳ್ಳಲು ಒಳ್ಳೆಯ ಅಪಾರ ಅವಕಾಶವಿದೆ.

ಹಿಂದಿನ ಕಾಲದಲ್ಲಿ, ಸ್ಪಲ್ಪ ಕಡಮೆ ಪ್ರಮಾಣದಲ್ಲಾದರೂ ಈಗಲೂ ಸಹ, ವಿಶ್ವದ ಒಳಗುಟ್ಟಿನ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಪ್ರಯತ್ನದಲ್ಲಿ ಅನೇಕರು ಮಗ್ನರಾಗಿದ್ದಾರೆ. ಇದರಿಂದ ಅವರು ವಿಶ್ವದ ವೈಯಕ್ತಿಕ ಸಾಮಾಜಿಕ ಸಮಸ್ಯೆಗಳಿಂದ ದೂರವಾಗುತ್ತಾರೆ. ವಿಶ್ವದ ಮರ್ಮವನ್ನರಿಯುವ ಪ್ರಯತ್ನದಲ್ಲಿ ವಿಫಲರಾದಾಗ ನಿರಾಶರಾಗುತ್ತಾರೆ, ಕರ್ತವ್ಯ ವಿಮುಖತೆಯಲ್ಲೊ, ಅಲ್ಪ ವಿಷಯಗಳಲ್ಲೊ, ಅಥವ ಯಾವುದಾದರೊಂದು ಅ೦ಧಸಿದ್ಧಾಂತದಲ್ಲಿ ತೃಪ್ತಿ ಪಡೆಯುತ್ತಾರೆ. ನಿವಾರಿಸಲು ಸಾಧ್ಯವಿರುವ ಅನೇಕ ಸಾಮಾಜಿಕ ದೋಷಗಳಿಗೆ, ಪಾಪಕರ್ಮದ ಫಲ, ವ್ಯತ್ಯಾಸ ಪಡಿಸಲಾಗದ ಸ್ವಭಾವಗುಣ, ಸಾಮಾಜಿಕ ವ್ಯವಸ್ಥೆ ಅಥವ ಇಂಡಿಯದಲ್ಲಿ ಪೂರ್ವಜನ್ಮದ ನಿರುಪಾಧಿಕ ಕರ್ಮವಿಶೇಷ ಎಂದು ಆರೋಪಿಸುತ್ತಾರೆ. ಈ ಕಾರಣವಾಗಿ, ವೈಜ್ಞಾನಿಕ ರೀತಿಯಲ್ಲಿ ವಿಚಾರಮಾಡುವ ಪ್ರಯತ್ನ ಸಹ ಮಾಡದೆ ನಮ್ಮಲ್ಲಿ ಅನೇಕರು ವಿಚಾರಶೂನ್ಯತೆಯಲ್ಲಿ, ಕುರುಡು ನಂಬಿಕೆಗಳಲ್ಲಿ, ಅರ್ಥವಿಲ್ಲದ ನ್ಯಾಯಸಮ್ಮತವಲ್ಲದ ಸಾಮಾಜಿಕ ದುರಭಿಪ್ರಾಯ ಮತ್ತು ಪೂರ್ವಾಚಾರಗಳಲ್ಲಿ ಆಸರೆ ಪಡೆಯುತ್ತೇವೆ, ವಿಚಾರದೃಷ್ಟಿಯ ಮತ್ತು ವಿಜ್ಞಾನ ರೀತಿಯ ಯೋಚನೆ ಸಹ ನಮ್ಮನ್ನು ನಿರೀಕ್ಷಿಸಿದಷ್ಟು ದೂರ ಕೊಂಡೊಯ್ಯಲಾರದೆಂಬುದೂ ನಿಜ. ವಿಷಯದ ಪರಿಣಾಮ ಮತ್ತು ನಿರ್ಧಾರದಲ್ಲಿ ಪ್ರಭಾವ ಬೀರುವ ಸಂದರ್ಭಗಳು ಮತ್ತು ಸಂಬಂಧಗಳು ಅಸಂಖ್ಯಾತವಿವೆ, ಅವುಗಳನ್ನೆಲ್ಲ ಗ್ರಹಿಸಲೂ ಸಾಧ್ಯವಿಲ್ಲ. ಆದರೂ ಬಾಹ್ಯವಸ್ತುವಿನ ವಾಸ್ತವಿಕತೆಯನ್ನು ನೋಡಿ, ಪ್ರಯೋಗ ಮತ್ತು ಅಭ್ಯಾಸ ಬಲದಿಂದ ಪ್ರಯತ್ನ ಮತ್ತು ಅದರ ತಪ್ಪುಗಳಿಂದ ಹೆಚ್ಚು ಪರಿಣಾಮಕಾರಿಗಳಾದ ಶಕ್ತಿಗಳನ್ನು ಕಂಡುಹಿಡಿದು ಅಪಾರ ವೈಶಾಲ್ಯದ ಜ್ಞಾನ ಮತ್ತು ಸತ್ಯದ ಕಡೆ ತಡವರಿಸಿ ಹೋಗಲೆತ್ನಿಸಬಹುದು.

ಈ ಉದ್ದೇಶದಿಂದ, ಈ ಪರಿಮಿತಿಯಲ್ಲಿ ಇಂದಿನ ವೈಜ್ಞಾನಿಕ ಜ್ಞಾನದ ಸ್ಥಿತಿಗೆ ಅನುಗುಣವಾಗಿ ಕಂಡುದರಿಂದ ಮಾರ್ಕ್ಸನ ವಾದವು ಹೆಚ್ಚು ಸಹಾಯಮಾಡುವಂತೆ ನನಗೆ ತೋರಿತು. ಆದರೆ ಆ ಮಾರ್ಗ ಹಿಡಿದರೂ ಸಹ ಅದರಿಂದ ಉದ್ಭವಿಸುವ ಪರಿಣಾಮಗಳು, ಮತ್ತು ಇಂದಿನ ಮತ್ತು ಹಿಂದಿನ ಘಟನೆಗಳ ಅರ್ಥವಿವರಣೆ ಅಷ್ಟು ಸಮಂಜಸ ತೋರಲಿಲ್ಲ. ಮಾರ್ಕ್ಸನ ಸಮಾಜ ಬೆಳವಣಿಗೆಯ ಸಾಮಾನ್ಯ ವಿವರಣೆಯು ಬಹುಮಟ್ಟಿಗೆ ಸರಿ, ಆದರೂ ಆತನ ಮರುಗಳಿಗೆಯ ಭವಿಷ್ಯದ ದೃಷ್ಟಿಗೆ ಹೊಂದಿಕೊಳ್ಳದಿದ್ದರೂ ಅನೇಕ ಘಟನೆಗಳು ಬಹಳ ದಿನಗಳ ನಂತರ ಸಂಭವಿಸಿದವು. ಲೆನಿನ್ ಮಾರ್ಕ್ಸನ ತತ್ವವನ್ನು ಈ ಕೆಲವು ಅನಂತರದ ಘಟನೆಗಳಿಗೆ ಯಶಸ್ವಿಯಾಗಿ ಅನ್ವಯಿಸಿದನು, ಮತ್ತು ಅಲ್ಲಿಂದೀಚೆಗೆ ಫ್ಯಾಸಿಸಂ, ನಾಜಿಸಂ ವಿಶೇಷ ಘಟನೆಗಳೂ ಮತ್ತು ಅವುಗಳ ಉತ್ಪತ್ತಿಗೆ ಮೂಲಭೂತವಾದ ಅನೇಕ ವಿಷಯಗಳೂ ಬೆಳೆದಿವೆ. ಔದ್ಯೋಗಿಕ ಶಿಕ್ಷಣದ ಅಸಾಧ್ಯ ಬೆಳವಣಿಗೆಗೆ ವಿಜ್ಞಾನದ ಅಪಾರ ಜ್ಞಾನಭಂಡಾರದ ಪ್ರಾಯೋಗಿಕ ಯೋಜನೆ ಇವು ಪ್ರಪಂಚದ ರೂಪವನ್ನೇ ವಿದ್ಯುದ್ವೇಗದಿಂದ ವ್ಯತ್ಯಾಸಗೊಳಿಸುತ್ತಿವೆ; ಹೊಸ ಹೊಸ ಸಮಸ್ಯೆಗಳಿಗೂ ಎಡೆಕೊಡುತ್ತಿವೆ.

ಆದ್ದರಿಂದ ಸಮತಾವಾದದ ಮೂಲತತ್ವಗಳನ್ನು ನಾನು ಅಂಗೀಕರಿಸಿದರೂ, ಅದರ ಅಸಂಖ್ಯಾತವಾದ ಒಳ ವಾದವಿವಾದಗಳ ಗೋಜಿಗೆ ನಾನು ಹೋಗಲಿಲ್ಲ. ನನಗೆ ಸ್ವಲ್ಪವೂ ಉಪಯೋಗಕಾಣದ